Wednesday, August 19, 2026

ಪಿಎಂ ಕೇರ್ಸ್: ಹಣದ ಕೊರತೆಯಲ್ಲ, ಪಾರದರ್ಶಕತೆಯ ಕೊರತೆಯೇ ಪ್ರಶ್ನೆ!

ಸಾವಿರಾರು ಕೋಟಿ ಸಂಗ್ರಹಿಸಿ, ನೂರಾರು ಕೋಟಿ ಖರ್ಚು ಮಾಡದೆ ಉಳಿಸಿಕೊಂಡಿರುವ ನಿಧಿಯ ಲೆಕ್ಕ ಜನರಿಗೆ ಸಂಪೂರ್ಣವಾಗಿ ತಿಳಿಯಬಾರದೇ? ‘ಆಪತ್ಕಾಲದಲ್ಲಿ ನಾಗರಿಕರಿಗೆ ನೆರವಾಗಬೇಕು’ ಎಂಬ ಉದ್ದೇಶದಿಂದ 2020ರಲ್ಲಿ ಸ್ಥಾಪನೆಯಾದ ಪಿಎಂ ಕೇರ್ಸ್ ನಿಧಿ, ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶಾದ್ಯಂತ ಭಾರೀ ಪ್ರಮಾಣದ ದೇಣಿಗೆಗಳನ್ನು ಸಂಗ್ರಹಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿರುವ ಈ ನಿಧಿಗೆ ದೇಶೀಯ ಮಾತ್ರವಲ್ಲದೆ ವಿದೇಶಿ ದೇಣಿಗೆಗಳನ್ನೂ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ನಿಧಿಗೆ ವಿದೇಶಿ ಕೊಡುಗೆ ಸ್ವೀಕರಿಸಲು ಪ್ರತ್ಯೇಕ ಖಾತೆಯೂ ಇದೆ. ಆದರೆ ಈಗ ಮತ್ತೆ ಮುನ್ನೆಲೆಗೆ ಬಂದಿರುವ ಪ್ರಶ್ನೆ ಹಣ ಎಲ್ಲಿದೆ ಎಂಬುದಕ್ಕಿಂತಲೂ ಹಣದ ಬಗ್ಗೆ ಸಂಪೂರ್ಣ ಮಾಹಿತಿ ಜನರಿಗೆ ಯಾಕೆ ಇಲ್ಲ?

ವಿಪತ್ತುಗಳ ಸಂದರ್ಭದಲ್ಲಿ ನಾಗರಿಕರಿಗೆ ನೆರವು ನೀಡುವ ಉದ್ದೇಶದಿಂದ ನಿಧಿಯೊಂದನ್ನು ಸ್ಥಾಪಿಸಲಾಗಿದೆ. ಅದಕ್ಕೆ ವಿದೇಶಗಳಿಂದಲೂ ದೇಣಿಗೆಗಳು ಬರುತ್ತವೆ. ಆದರೆ, ಅದನ್ನು ನಿಗೂಢತೆ ಆವರಿಸಿದೆ. ಜೊತೆಗೆ, ಅದನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದಲೂ ಹೊರಗಿಡಲಾಗಿದೆ. ಆ ಮೂಲಕ ಅದರ ಸಾರ್ವಜನಿಕ ಪರಿಶೀಲನೆಯನ್ನು ತಪ್ಪಿಸಲಾಗಿದೆ ಎಂದು ಪಾರದರ್ಶಕತೆಗಾಗಿ ಹೋರಾಡುತ್ತಿರುವ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.  ಗಮನಿಸಿ, 2024-25ನೇ ಸಾಲಿನ ಲೆಕ್ಕಪರಿಶೋಧನಾ ವಿವರಗಳ ಪ್ರಕಾರ, ಮಾರ್ಚ್ 31, 2025ಕ್ಕೆ ಪಿಎಂ ಕೇರ್ಸ್ ನಿಧಿಯಲ್ಲಿದ್ದ ಮೊತ್ತ ಸುಮಾರು ₹8,452 ಕೋಟಿ. ಅದರಲ್ಲಿ ಸುಮಾರು ₹7,846.65 ಕೋಟಿ ಫಿಕ್ಸೆಡ್ ಡೆಪಾಸಿಟ್ ಗಳಲ್ಲಿತ್ತು. ಇದೇ ಅವಧಿಯಲ್ಲಿ ನಿಧಿಗೆ ಬಂದ ದೇಣಿಗೆಗೆ ಹೋಲಿಸಿದರೆ ಖರ್ಚಾದ ಮೊತ್ತ ಅತ್ಯಂತ ಕಡಿಮೆ. ವರದಿಯಾದ ಅಂಕಿಅಂಶಗಳ ಪ್ರಕಾರ 2024-25ರಲ್ಲಿ ಸುಮಾರು ₹479.97 ಕೋಟಿ ದೇಣಿಗೆ ಬಂದಿದ್ದರೆ, ಖರ್ಚು ಕೇವಲ ₹87.85 ಲಕ್ಷದಷ್ಟಿದೆ. ಇದು ಕಾನೂನುಬಾಹಿರತೆ ಅಥವಾ ಹಣದ ದುರುಪಯೋಗದ ಸಾಕ್ಷಿ ಎಂದು ತಕ್ಷಣ ತೀರ್ಮಾನಿಸಲಾಗುವುದಿಲ್ಲ. ಆದರೆ ಸಾರ್ವಜನಿಕ ಹಣದ ನಿರ್ವಹಣೆಯ ದೃಷ್ಟಿಯಿಂದ ಇದು ಕೇಳಲೇಬೇಕಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. 8,452 ಕೋಟಿ ಇರುವಾಗ ಬಳಕೆ ಇಷ್ಟೊಂದು ಕಡಿಮೆ ಯಾಕೆ? ₹8,452 ಕೋಟಿ ಲಭ್ಯವಿರುವ ಸಂದರ್ಭದಲ್ಲಿ 16.47 ಕೋಟಿ ಖರ್ಚಾಗಿದ್ದರೆ, ಅದು ಸುಮಾರು 0.195% ಮಾತ್ರ. ಅಂದರೆ ಲಭ್ಯವಿದ್ದ ನಿಧಿಯ ಬಹುಪಾಲು ಬಳಕೆಯಾಗದೆ ಉಳಿದಿದೆ. ಸರ್ಕಾರದ ದೃಷ್ಟಿಯಿಂದ ನೋಡಿದರೆ, ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಬಳಸಲು ದೊಡ್ಡ ಪ್ರಮಾಣದ ನಿಧಿಯನ್ನು ಉಳಿಸಿಕೊಂಡಿರುವುದು ಸಮರ್ಥನೀಯವಾಗಬಹುದು. ಆಪತ್ತು ಯಾವಾಗ ಬರುತ್ತದೆ ಎಂದು ಹೇಳಲಾಗುವುದಿಲ್ಲ.

ಭವಿಷ್ಯದ ವಿಪತ್ತುಗಳಿಗೆ ಹಣಕಾಸಿನ ಸಿದ್ಧತೆ ಅಗತ್ಯ. ಆದರೆ ಜನರ ದೃಷ್ಟಿಯಿಂದ ಪ್ರಶ್ನೆ ಬೇರೆಯಾಗಿದೆ. ಈ ಹಣವನ್ನು ಯಾವ ಸಂದರ್ಭಗಳಲ್ಲಿ ಬಳಸಲಾಗುತ್ತದೆ? ಯಾವ ಕಾರಣಕ್ಕೆ ಎಷ್ಟು ಹಣ ಮಂಜೂರಾಗಿದೆ? ಮಂಜೂರಾದ ಹಣದಲ್ಲಿ ಎಷ್ಟು ಖರ್ಚಾಗಿದೆ? ಉಳಿದ ಹಣ ಯಾಕೆ ಖರ್ಚಾಗಿಲ್ಲ? ಯಾವ ಮಾನದಂಡದ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತದೆ? ಈ ಪ್ರಶ್ನೆಗಳಿಗೆ ಸ್ಪಷ್ಟ, ಸುಲಭವಾಗಿ ಪರಿಶೀಲಿಸಬಹುದಾದ ಉತ್ತರಗಳು ಸಾರ್ವಜನಿಕವಾಗಿ ಲಭ್ಯವಾಗಬೇಕು. ನೋಡಿ, ಕೋವಿಡ್ ಮುಗಿದರೂ ನಿಧಿಯ ರಹಸ್ಯ ಮುಗಿದಿಲ್ಲ! ಪಿಎಂ ಕೇರ್ಸ್ ನಿಧಿಯ ದೊಡ್ಡ ಪ್ರಮಾಣದ ವೆಚ್ಚ ಕೋವಿಡ್-19 ಅವಧಿಯಲ್ಲೇ ನಡೆದಿರುವುದು ಗಮನಾರ್ಹ. 2022-23ರಲ್ಲಿ ಸುಮಾರು ₹912.21 ಕೋಟಿ ಸಂಗ್ರಹವಾಗಿದ್ದು, ₹439.38 ಕೋಟಿ ಖರ್ಚಾಗಿತ್ತು ಎಂದು ಲಭ್ಯವಿರುವ ವಿವರಗಳು ಸೂಚಿಸುತ್ತವೆ. ಅದರಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಸುಮಾರು ₹346 ಕೋಟಿ ಹಾಗೂ ಆಮ್ಲಜನಕ ಉತ್ಪಾದನಾ ಘಟಕಗಳಿಗೆ ಸುಮಾರು ₹91.87 ಕೋಟಿ ಬಳಕೆಯಾಗಿತ್ತು. ಅಂದರೆ ತುರ್ತು ಪರಿಸ್ಥಿತಿಯಲ್ಲಿ ನಿಧಿಯನ್ನು ಬಳಸುವ ಮಾದರಿ ಇದೆ ಎಂಬುದು ಸ್ಪಷ್ಟ. ಹಾಗಿದ್ದರೆ 2024-25ರಲ್ಲಿ, ಕೋವಿಡ್‌ನ ತೀವ್ರತೆ ಕಡಿಮೆಯಾದ ನಂತರವೂ, ನಿಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಉಳಿದಿರುವಾಗ ಅದರ ಬಳಕೆಯ ನೀತಿ ಏನು? ಇದು ತುರ್ತು ನಿಧಿಯೇ? ಅಥವಾ ತುರ್ತು ಪರಿಸ್ಥಿತಿ ಬಂದಾಗ ಮಾತ್ರ ಬಳಸುವ ಶಾಶ್ವತ ಸಂಗ್ರಹ ನಿಧಿಯೇ? ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು. ₹324 ಕೋಟಿ ಮರುಪಾವತಿ—ಇದು ಇನ್ನೂ ದೊಡ್ಡ ಪ್ರಶ್ನೆ. ಇದಕ್ಕಿಂತ ಗಂಭೀರವಾಗಿ ಪರಿಶೀಲಿಸಬೇಕಾದ ಅಂಶವೆಂದರೆ ಸುಮಾರು ₹324 ಕೋಟಿ ಮಂಜೂರು ಮಾಡಿ ನಂತರ ಪಿಎಂ ಕೇರ್ಸ್‌ಗೆ ಮರುಪಾವತಿಸಲಾಗಿದೆ ಎಂಬ ವಿಚಾರ. ಹಣವನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿತ್ತು? ಯಾವ ಕಾರಣಕ್ಕಾಗಿ ಅಥವಾ ಇಲಾಖೆಗೆ ನೀಡಲಾಗಿತ್ತು? ಅದು ಯಾಕೆ ಬಳಸಲಾಗಲಿಲ್ಲ? ಯಾವ ಕಾರಣಕ್ಕೆ ಮರುಪಾವತಿಸಲಾಯಿತು? ಮರುಪಾವತಿ ಮಾಡುವ ನಿರ್ಧಾರವನ್ನು ಯಾರು ತೆಗೆದುಕೊಂಡರು? ಹಣ ಬಳಕೆಯಾಗದಿದ್ದರೆ, ಆರಂಭದಲ್ಲಿ ಅದರ ಮಂಜೂರಾತಿಗೆ ಕಾರಣವೇನು? ಇವು ಕೇವಲ ರಾಜಕೀಯ ಪ್ರಶ್ನೆಗಳಲ್ಲ. ಸಾರ್ವಜನಿಕ ಹಣದ ಲೆಕ್ಕಪತ್ರದ ಮೂಲಭೂತ ಪ್ರಶ್ನೆಗಳು.

 ಹೀಗಾಗಿ ಈ ವ್ಯವಹಾರದ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸುವುದು ಪಾರದರ್ಶಕ ಆಡಳಿತದ ಕನಿಷ್ಠ ನಿರೀಕ್ಷೆ. ಇನ್ನು,  ಆಡಿಟ್ ಆಗಿದೆ ಎಂದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಂತೆಯೇ? ಆಡಿಟ್ ಆಗಿರುವುದು ಒಂದು ವಿಷಯ. ಆಡಿಟ್‌ನ ಸಂಪೂರ್ಣ ಮಾಹಿತಿಯನ್ನು ಜನರು ಸುಲಭವಾಗಿ ಪರಿಶೀಲಿಸಬಹುದಾಗಿರುವುದು ಮತ್ತೊಂದು ವಿಷಯ. ಲೆಕ್ಕಪರಿಶೋಧನೆ ಎಂದರೆ ಖಾತೆಗಳ ಪರಿಶೀಲನೆ. ಆದರೆ ಸಾರ್ವಜನಿಕ ಪಾರದರ್ಶಕತೆ ಎಂದರೆ ಹಣ ಎಲ್ಲಿಂದ ಬಂತು, ಯಾರಿಗೆ ಹೋಯಿತು, ಯಾವ ಉದ್ದೇಶಕ್ಕೆ ಹೋಯಿತು, ಎಷ್ಟು ಬಳಕೆಯಾಯಿತು, ಎಷ್ಟು ಹಿಂದಿರುಗಿತು ಎಂಬ ಮಾಹಿತಿಯನ್ನು ನಾಗರಿಕರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಬಹಿರಂಗಪಡಿಸುವುದು. ಈ ಎರಡನ್ನೂ ಒಂದೇ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ. ಇನ್ನು, ಈ ಪಿಎಂ ಕೇರ್ಸ್ ಮಾಹಿತಿ ಹಕ್ಕಿನಿಂದ ಹೊರಗಿರುವುದು ಯಾಕೆ? ಪಿಎಂ ಕೇರ್ಸ್ ಕುರಿತು ವರ್ಷಗಳಿಂದ ಎದ್ದಿರುವ ಪ್ರಮುಖ ಪ್ರಶ್ನೆ ಇದೇ. ನಿಧಿ ತನ್ನನ್ನು ಸಾರ್ವಜನಿಕ ಹಿತದ ಉದ್ದೇಶಕ್ಕಾಗಿ ಸ್ಥಾಪಿತವಾದ ಸಂಸ್ಥೆಯೆಂದು ಪರಿಚಯಿಸುತ್ತದೆ. ಪ್ರಧಾನಮಂತ್ರಿ ಅದರ ಅಧ್ಯಕ್ಷರಾಗಿದ್ದಾರೆ; ಕೇಂದ್ರ ಸಚಿವರು ಟ್ರಸ್ಟಿಗಳಾಗಿದ್ದಾರೆ. ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ವ್ಯವಸ್ಥೆಯೂ ಇದೆ. ದೇಣಿಗೆಗಳಿಗೆ ತೆರಿಗೆ ವಿನಾಯಿತಿ ಮತ್ತು CSR ಮಾನ್ಯತೆಯಂತಹ ಸೌಲಭ್ಯಗಳೂ ದೊರೆಯುತ್ತವೆ. ಹೀಗಿರುವಾಗ ಅದರ ಹಣಕಾಸಿನ ವಿವರಗಳ ಬಗ್ಗೆ ಸಾರ್ವಜನಿಕರು ಪ್ರಶ್ನೆ ಕೇಳಿದಾಗ ಉತ್ತರದಾಯಿತ್ವದ ಗಡಿ ಎಲ್ಲಿ ಮುಗಿಯುತ್ತದೆ? ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ನಿಲುವು ಇದ್ದರೆ, ಅದರ ಕಾರಣವನ್ನು ಜನರಿಗೆ ಇನ್ನಷ್ಟು ಸ್ಪಷ್ಟವಾಗಿ ವಿವರಿಸಬೇಕಲ್ಲವೇ? ಮಾಹಿತಿ ಹಕ್ಕು ಎಂದರೆ ಸರ್ಕಾರದ ವಿರುದ್ಧದ ಆಯುಧವಲ್ಲ. ಅದು ನಾಗರಿಕರ ತೆರಿಗೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಹಣದ ಬಗ್ಗೆ ಮಾಹಿತಿ ಪಡೆಯುವ ಪ್ರಜಾಸತ್ತಾತ್ಮಕ ವ್ಯವಸ್ಥೆ. ಪಿಎಂ ಕೇರ್ಸ್ ಸಾರ್ವಜನಿಕ ನಿಧಿಯಲ್ಲ ಎಂದು ಸರ್ಕಾರ ವಾದಿಸಿದರೆ, ಅದರ ಸ್ವರೂಪ ಮತ್ತು ಸಾರ್ವಜನಿಕ ಸಂಸ್ಥೆಗಳೊಂದಿಗೆ ಅದರ ಸಂಬಂಧದ ಬಗ್ಗೆ ಸಂಪೂರ್ಣ ಸ್ಪಷ್ಟತೆ ನೀಡಬೇಕು. ಸರ್ಕಾರದ ಮುಖೇನ ಅದನ್ನು ಯಾಕೆ ಸ್ಥಾಪಿಸಲಾಯಿತು ? ಸಾರ್ವಜನಿಕ ಹಿತಕ್ಕಾಗಿ ಕಾರ್ಯನಿರ್ವಹಿಸುವ ನಿಧಿಯೆಂದು ಹೇಳಿದರೆ, ಅದೇ ಸಾರ್ವಜನಿಕ ಹಿತಾಸಕ್ತಿಯ ಮಾನದಂಡವನ್ನು ಪಾರದರ್ಶಕತೆಯಲ್ಲೂ ಅನ್ವಯಿಸಬೇಕು. ಇನ್ನು, ವಿದೇಶಿ ದೇಣಿಗೆಗಳಿದ್ದಾಗ ಪಾರದರ್ಶಕತೆ ಇನ್ನಷ್ಟು ಅಗತ್ಯ.  ಪಿಎಂ ಕೇರ್ಸ್‌ಗೆ ವಿದೇಶಿ ದೇಣಿಗೆ ಸ್ವೀಕರಿಸುವ ಅವಕಾಶವಿದೆ ಎಂದು ಸರ್ಕಾರದ ಅಧಿಕೃತ ವೆಬ್‌ಸೈಟ್ ಸ್ಪಷ್ಟಪಡಿಸುತ್ತದೆ. ನೋಡಿ, ಇದರಿಂದ ಮತ್ತೊಂದು ಪ್ರಶ್ನೆ ಹುಟ್ಟುತ್ತದೆ.

ದೇಶದ ನಾಗರಿಕರಿಂದ ಬಂದ ಹಣವಾಗಲಿ, ವಿದೇಶದಿಂದ ಬಂದ ದೇಣಿಗೆಯಾಗಲಿ—ಅದು ಯಾವ ಮೂಲದಿಂದ ಬಂದಿದೆ ಎಂಬುದರ ಬಗ್ಗೆ ಸಾರ್ವಜನಿಕ ಮಟ್ಟದಲ್ಲಿ ಎಷ್ಟು ಮಾಹಿತಿ ಲಭ್ಯ?  ವಿದೇಶಿ ದೇಣಿಗೆಗಳಿಗೆ ಪ್ರತ್ಯೇಕ ಖಾತೆ, ನಿಯಮಗಳು ಮತ್ತು ಲೆಕ್ಕಪರಿಶೋಧನೆಗಳಿದ್ದರೆ, ಆ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪ್ರಕಟಿಸುವುದರಲ್ಲಿ ಸಮಸ್ಯೆ ಏನು? ಪಾರದರ್ಶಕತೆ ಹೆಚ್ಚಿಸಿದರೆ ನಿಧಿಯ ಮೇಲಿನ ಅನುಮಾನ ಕಡಿಮೆಯಾಗುತ್ತದೆ. ಮಾಹಿತಿಯನ್ನು ಸೀಮಿತಗೊಳಿಸಿದಷ್ಟೂ ಅನುಮಾನಕ್ಕೆ ಜಾಗ ಹೆಚ್ಚುತ್ತದೆ. ಇನ್ನು,  ಪಿಎಂ ಕೇರ್ಸ್ ಕುರಿತು ಪ್ರಶ್ನೆ ಕೇಳಿದಾಗಲೆಲ್ಲಾ ಅದನ್ನು ರಾಜಕೀಯ ದಾಳಿ ಎಂದು ತಳ್ಳಿಹಾಕುವ ಪ್ರಯತ್ನ ನಡೆಯಬಾರದು. ಯಾವುದೇ ಸರ್ಕಾರದ ಯಾವುದೇ ನಿಧಿಯ ಬಗ್ಗೆ ಇದೇ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಸರ್ಕಾರ ಕಾಂಗ್ರೆಸ್ ನೇತೃತ್ವದಲ್ಲಿದ್ದರೂ, ಬಿಜೆಪಿ ನೇತೃತ್ವದಲ್ಲಿದ್ದರೂ, ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಾರ್ವಜನಿಕ ಹಿತದ ಹೆಸರಿನಲ್ಲಿ ಸಂಗ್ರಹವಾಗುವ ಹಣದ ಲೆಕ್ಕ ಜನರಿಗೆ ಸಿಗಲೇಬೇಕು. ಹೀಗಾಗಿ ಪ್ರಶ್ನೆ ಪಿಎಂ ಕೇರ್ಸ್ ವಿರುದ್ಧವಲ್ಲ. ಪ್ರಶ್ನೆ ಪಾರದರ್ಶಕತೆಯ ಪರವಾಗಿದೆ. ಇನ್ನು, ಸರ್ಕಾರ ಏನು ಮಾಡಬೇಕು? ಪಿಎಂ ಕೇರ್ಸ್ ಕುರಿತ ವಿವಾದವನ್ನು ಅಂತ್ಯಗೊಳಿಸುವ ಅತ್ಯಂತ ಸರಳ ಮಾರ್ಗವೆಂದರೆ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದು. * ವರ್ಷವಾರು ದೇಣಿಗೆಗಳ ಸಂಪೂರ್ಣ ವಿವರ. * ದೇಶೀಯ ಮತ್ತು ವಿದೇಶಿ ದೇಣಿಗೆಗಳ ಪ್ರತ್ಯೇಕ ವಿವರ. * ಸಂಸ್ಥೆವಾರು/ಯೋಜನೆವಾರು ವೆಚ್ಚ. * ಮಂಜೂರಾದ ಆದರೆ ಬಳಕೆಯಾಗದ ಹಣದ ವಿವರ. * ಮರುಪಾವತಿಯಾದ ₹324 ಕೋಟಿಯ ಸಂಪೂರ್ಣ ಕಾರಣ. * ಫಿಕ್ಸಡ್‌ ಡೆಪಾಸಿಟ್‌ ಗಳ ವಿವರ ಮತ್ತು ಅವುಗಳಿಂದ ಬಂದ ಬಡ್ಡಿ. * ಆಡಿಟ್ ವರದಿಯೊಂದಿಗೆ ಸಂಬಂಧಿಸಿದ ಪ್ರಮುಖ ಟಿಪ್ಪಣಿಗಳು. * ಮುಂದಿನ ವರ್ಷಗಳಲ್ಲಿ ನಿಧಿಯನ್ನು ಬಳಸುವ ಸ್ಪಷ್ಟ ನೀತಿ. ಇವೆಲ್ಲವೂ ಸಾರ್ವಜನಿಕವಾಗಿ ಲಭ್ಯವಾದರೆ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಒಟ್ಟಿನಲ್ಲಿ, ಗಮನಿಸುವುದಾದರೇ, ಪಿಎಂ ಕೇರ್ಸ್‌ನಲ್ಲಿ ₹8,452 ಕೋಟಿ ಉಳಿದಿರುವುದೇ ತಪ್ಪು ಎಂಬ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ತುರ್ತು ನಿಧಿಗೆ ದೊಡ್ಡ ಮೊತ್ತದ ಹಣ ಉಳಿಸಿಕೊಳ್ಳುವುದು ಆಡಳಿತಾತ್ಮಕವಾಗಿ ಸಮರ್ಥನೀಯವಾಗಬಹುದು.

ಆದರೆ ಸಾವಿರಾರು ಕೋಟಿ ರೂಪಾಯಿ ಸಂಗ್ರಹವಾಗಿರುವ, ಪ್ರಧಾನಮಂತ್ರಿಯವರ ನೇತೃತ್ವದ, ವಿದೇಶಿ ದೇಣಿಗೆ ಸ್ವೀಕರಿಸುವ ನಿಧಿಯ ಬಗ್ಗೆ ಸಾರ್ವಜನಿಕರಿಗೆ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕು ಎಂಬ ಬೇಡಿಕೆಯನ್ನು ತಪ್ಪೆಂದು ಹೇಳಲಾಗದು. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಹಣದ ಮೊತ್ತದ ಬಗ್ಗೆ ಮಾತ್ರವಲ್ಲ. ಹಣ ಯಾರದ್ದು? ಯಾವ ಉದ್ದೇಶಕ್ಕೆ ಸಂಗ್ರಹಿಸಲಾಗಿದೆ? ಯಾರಿಗಾಗಿ ಇಡಲಾಗಿದೆ? ಯಾವಾಗ ಬಳಸಲಾಗುತ್ತದೆ? ಯಾರ ನಿರ್ಧಾರದಿಂದ ಬಳಸಲಾಗುತ್ತದೆ? ಮತ್ತು ಮುಖ್ಯವಾಗಿ—ಅದರ ಲೆಕ್ಕವನ್ನು ಜನರು ಯಾವ ಮಟ್ಟಿಗೆ ಪರಿಶೀಲಿಸಬಹುದು?  ಈ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ಸಿಗುವವರೆಗೂ ಪಿಎಂ ಕೇರ್ಸ್ ಕುರಿತ ಚರ್ಚೆ ಮುಂದುವರಿಯುವುದು ಸಹಜ. ಯಾಕೆಂದರೆ ಸಾರ್ವಜನಿಕ ನಂಬಿಕೆಯನ್ನು ಕೇವಲ ಹಣದಿಂದ ಕಟ್ಟಲಾಗುವುದಿಲ್ಲ; ಪಾರದರ್ಶಕತೆಯಿಂದ ಕಟ್ಟಬೇಕು ಎನ್ನುವುದು ಇಲ್ಲಿ ಮುಖ್ಯಾಂಶ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment