Thursday, March 30, 2023

ರಾಹುಲ್‌ ಗಾಂಧಿ : ಅಸಮರ್ಥ ಟು ಸಮರ್ಥ

ರಾಗಾ ಶಕ್ತ ದಾರಿಗೆ ಬಿಜೆಪಿಯದ್ದು ಮಹತ್ತರ ಪಾತ್ರ..!

ಕೇಂದ್ರದಲ್ಲಿ ಸರ್ಕಾರ ಬದಲಾಗಬೇಕು ಎಂಬ ದೊಡ್ಡ ಕೂಗು ಸರ್ಕಾರದ ಹಲವು ಜನವಿರೋಧಿ ನಡೆಯ ಕಾರಣಗಳಿಂದ ಎದ್ದಿದೆ. ಇತ್ತ, ಬದಲಾವಣೆಯಾಗುವುದಾದರೆ ಪರ್ಯಾಯ ನಾಯಕತ್ವ ಯಾರದ್ದು ಎಂಬ ವಿಷಯದಲ್ಲಿ ಒಮ್ಮತ ಮೂಡದೆ ಸಂಭವನೀಯ ರಾಜಕೀಯ ಉದಯೋನ್ಮುಖ ಶಕ್ತಿ ಮೊಳಕೆಯಲ್ಲೇ ಅಪೌಷ್ಠಿಕತೆಯಿಂದ ಸೊರಗಿ ನಿಂತಂತಿದೆ. ೨೦೨೪ರ ಲೋಕಸಭಾ ಚುನಾವಣೆ ಕಳೆದ ಲೋಕಸಭಾ ಚುನಾವಣೆಯಂತಿಲ್ಲ. ಹಲವು ಜನ ಸ್ನೇಹಿ ಅಲ್ಲದ  ರಾಜಕೀಯ ಬೆಳವಣಿಗಳ ಕಾರಣದಿಂದಾಗಿ ಸಾರ್ವಜನಿಕ ವಲಯವೂ ಕೂಡ ಬೇಸತ್ತಿದೆ. ಆದರೂ,  ಬಿಜೆಪಿ ಎಂದಿನಂತೆ ಕೆಲವು ವರ್ಷಗಳಿಂದ ದೇಶದಾದ್ಯಂತ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದ್ದರೇ, ಇತ್ತ ದೇಶದ ದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಅನೇಕ ಏಳು ಬೀಳುಗಳನ್ನು ಕಳೆದ ಕೆಲವು ವರ್ಷಗಳಿಂದ ಕಾಣುತ್ತಿದೆ. ಕಾಂಗ್ರೆಸ್‌ ನ ಆಂತರಿಕ ಸಮಸ್ಯೆಗಳು ಬಯಲಾಗಿದ್ದು ಈ ದೇಶ ಕಂಡಿದೆ. ʼಗಾಂಧಿ ಕುಟುಂಬʼದ ಪಕ್ಷವೆಂಬ ಒಂದು ಹಣೆಪಟ್ಟಿ ರಾಜಕೀಐವಾಗಿ ಕಾಂಗ್ರೆಸ್‌ ನನ್ನು ಬಹಳವಾಗಿ ಕಾಡಿದೆ. ಮೋದಿ ವಿರುದ್ಧದ ಚುನಾವಣಾ ಹೋರಾಟಕ್ಕೆ ಕಾಂಗ್ರೆಸ್‌ ಸತತವಾಗಿ ದೇಶದಾದ್ಯಂತ ಶ್ರಮಿಸುತ್ತಿದ್ದರೂ, ಎಲ್ಲಿಯೂ ಅಷ್ಟಾಗಿ ಫಲಿಸುತ್ತಿಲ್ಲ. ಸೈದ್ಧಾಂತಿಕ ಸಮಾನತೆಯಿರುವ ಪಕ್ಷಗಳೊಂದಿಗಿನ ಮೈತ್ರಿಯೂ ಕಾಂಗ್ರೆಸ್‌ ಗೆ ಕೂಡಿ ಬರುತ್ತಿಲ್ಲ. ಕೆಲವು ಸುತ್ತಿನ ಮಾತುಕತೆಗಳು ಈಗಾಗಲೇ ಪಕ್ಷ ಮಟ್ಟದಲ್ಲಿ ಆಗಿದ್ದರೂ ವೈಯಕ್ತಿಕ ಪ್ರತಿಷ್ಠೆ, ಸೈದ್ಧಾಂತಿಕ ವಿಚಾರಗಳು ಮೈತ್ರಿಗೆ ತಡೆಯೊಡ್ಡುತ್ತಿವೆ. ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳ ಉದ್ದೇಶ ಮೋದಿ ಸರ್ಕಾರವನ್ನು ಕೆಳಗಿಳಿಸುವುದೇ ಆಗಿದ್ದರೂ, ಒಂದು ಸೂಕ್ತವಾದ ನೇತೃತ್ವ ಇಲ್ಲದಾಗಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.  

ಮೈತ್ರಿ ಸುಲಭವಿಲ್ಲ, ಕಾಂಗ್ರೆಸ್‌ ಮನಸ್ಸು ಮಾಡ್ಬೇಕಿತ್ತು ! :  ೧೯೭೭ರ ಒಗ್ಗಟ್ಟು ಈಗ ರಾಜಕೀಯ ಪಕ್ಷಗಳಲ್ಲಿ  ಕಂಡು ಬರುತ್ತಿಲ್ಲ. ಇಂದಿರಾ ಗಾಂಧಿ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬ ದೃಷ್ಟಿಯಿಂದ ಅಂದು ಕೆಲವೇ ಕೆಲವು ಪಕ್ಷಗಳನ್ನು ಹೊರತುಪಡಿಸಿ ಎಲ್ಲಾ ವಿರೋಧ ಪಕ್ಷಗಳು ಮೈತ್ರಿ ಸಾಧಿಸಿ ಜನತಾ ಪಕ್ಷ ಸ್ಥಾಪಿಸಿದ್ದನ್ನು ಈ ದೇಶದ ರಾಜಕೀಯ ಇತಿಹಾಸ ಕಂಡಿದೆ.  ಮೋದಿ ಮತ್ತು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇಂದು ಪ್ರತಿಪಕ್ಷಗಳು ಎದುರಿಸುತ್ತಿರುವ ಏಕೈಕ ಸವಾಲು ಏನೆಂದರೇ, ಎಲ್ಲಾ ಪ್ರಾದೇಶಿಕ ಪಕ್ಷಗಳ ಅಧ್ಯಕ್ಷರ ಅಧಿಕಾರದ ಡಿಮ್ಯಾಂಡ್. ವಿರೋಧ ಪಕ್ಷಗಳಲ್ಲೇ ದೊಡ್ಡದಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ ಗೂ ಕೂಡ ಇದು ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. 

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ದೇಶವನ್ನು ಆಳಿದ ಪಕ್ಷವಾಗಿ ಕಾಂಗ್ರೆಸ್‌ ತನ್ನ ದೌರ್ಬಲ್ಯವನ್ನು ಅರಿತುಕೊಂಡಂತೆ ಕಾಣಿಸುತ್ತಿದೆ. ಕಾಂಗ್ರೆಸ್‌ ಒಂದು ದೇಶದ ದೊಡ್ಡ ವಿರೋಧ ಪಕ್ಷವಾಗಿ ಪ್ರಬಲವಾಗಿ ಬೆಳೆಯಲಿಲ್ಲ ಎಂಬುವುದು ಈ ದೇಶದ ರಾಜಕೀಯದ ದುರಂತಗಳಲ್ಲಿ ಒಂದು. ಕಾಂಗ್ರೆಸ್‌ ಗೆ ದೇಶದಲ್ಲಿ ಹೆಚ್ಚು ಆಡಳಿತ ಮಾಡಿ ಗೊತ್ತಿದೆ ಹೊರತು ವಿರೋಧ ಪಕ್ಷದಲ್ಲಿ ಕೂತು ಆಡಳಿತವನ್ನು ವಿರೋಧಿಸಿದ ಅನುಭವ ಕಡಿಮೆ ಇದೆ. ಹಾಗಾಗಿ ಇದು ಕೂಡ ಕಾಂಗ್ರೆಸ್‌ ನ ಒಂದು ದೌರ್ಬಲ್ಯ. ಹಿಂದೆ ಈ ದೇಶದ ರಾಜಕೀಯದಲ್ಲಿ ಇದ್ದ ಕಾಂಗ್ರೆಸ್‌ ವಿರೋಧಿ ವಾದದಂತೆ ಈಗ ಬಿಜೆಪಿ ವಿರೋಧಿ ವಾದ ಪ್ರಬಲವಾಗಿ ಪ್ರತಿಪಕ್ಷಗಳಲ್ಲಿ ಇಲ್ಲದಿರುವುದು  ಕೂಡ ಪ್ರತಿಪಕ್ಷಗಳ ಮೈತ್ರಿಗೆ ಅಡ್ಡಿಯಾಗುತ್ತಿರುವ ವಿಷಯಗಳಲ್ಲಿ ಒಂದು. 

೨೦೧೯ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿಯೂ ಕೂಡ ಕಾಂಗ್ರೆಸ್ ನ ಚಿಂತನೆಯ ಪ್ರಕ್ರಿಯೆಯಲ್ಲಿ ರಾಜಕೀಯ ಸ್ಪಷ್ಟತೆ ಇರಲಿಲ್ಲ. ವಿರೋಧ ಪಕ್ಷ ಒಡೆದ ಮನೆಯಾಗಿತ್ತು. ಪ್ರತಿಯೊಂದು ಆಡಳಿತ ವಿರೋಧ ಪಕ್ಷಗಳ ಪರಮ ಗುರಿ ಒಂದೇ ಆಗಿದಿದ್ದರೂ ಯುದ್ಧಕ್ಕೆ ಹೊರಟ ಸೈನಿಕರಿಗೆ ಸಮರ್ಥ ಸಾಮ್ರಾಟನ ಕೊರತೆ ಇತ್ತೆಂಬಂತಾಗಿತ್ತು. ಅಂದು ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷಗಿರಿ ರಾಹುಲ್‌ ಗಾಂಧಿ ಅವರಲ್ಲಿತ್ತು. ಅಂದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ ಗಢದಲ್ಲಿ ವಿಧಾನಸಭೆ ಚುನಾವಣೆ ಗೆದ್ದಿದ್ದ ಕಾಂಗ್ರೆಸ್‌ ಗೆ ಮೋದಿ ವಿರುದ್ಧ ಬಲ ಬಂದಂತಾಗಿತ್ತು. ಮೂರು ರಾಜ್ಯಗಳಲ್ಲಿ ಗೆದ್ದ ಕಾರಣಕ್ಕೆ ಮೋದಿಗೆ  ಏಕಮಾತ್ರ ಕಾಂಗ್ರೆಸ್‌ ಪಕ್ಷ ಮಾತ್ರ ಕಠಿಣ ಹೋರಾಟ ನೀಡಬಲ್ಲದು ಎಂದು ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತ ಪಡಿಸಿದ್ದರು. ಆದರೇ, ಅದು ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಳ್ಳಾಯಿತು. 

ಮಮತಾ ಬ್ಯಾನರ್ಜಿ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಬಯಸಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಅರವಿಂದ್ ಕೇಜ್ರಿವಾಲ್ ಜೊತೆಗೆ ನಿತೀಶ್ ಕುಮಾರ್ ಮತ್ತೊಬ್ಬ ಆಕಾಂಕ್ಷಿಯಾಗಿದ್ದರು. ನಾಯಕತ್ವವು ಯಾವುದೇ ವಿಷಯವಲ್ಲ ಅವರಿಗೆ ಅರ್ಥವಾಗುವಂತೆ ಮಾಡುವುದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ನ ಜವಾಬ್ದಾರಿಯಾಗಿತ್ತು. ಆದರೇ, ಕಾಂಗ್ರೆಸ್‌ ಅದಕ್ಕೆ ಮುಂದಾಗಿರಲಿಲ್ಲ. ಈಗ ಪರಿಸ್ಥಿತಿ ಬೇರೆಯೇ ಇದೆ. 

ರಾಹುಲ್‌ ಗಾಂಧಿ : ಅಸಮರ್ಥ ಟು ಸಮರ್ಥ :  ಇತರೆ ವಿರೋಧ ಪಕ್ಷಗಳಲ್ಲದೇ, ಅಂದು ಕಾಂಗ್ರೆಸ್‌ ಕೂಡ ಬಣಗಳಾಗಿ ಒಡೆದು ಹೋಗಿತ್ತು. ಕಾಂಗ್ರೆಸ್‌ ನ ಹಿರಿತಲೆಗಳಿಗೆ ರಾಹುಲ್‌ ನೇತೃತ್ವದ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇರಲಿಲ್ಲ. ರಾಹುಲ್‌ ನಾಯಕತ್ವದ ಕೌಶಲ್ಯದಲ್ಲಿಯೂ ನಂಬಿಕೆ ಇರಲಿಲ್ಲ. ಅಂತಿಮವಾಗಿ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ರಾಜೀನಾಮೆ ನೀಡಿದರು. 

ರಾಹುಲ್‌ ಅಸಮರ್ಥರು ಎಂದು ಬಿಂಬಿಸುವಲ್ಲಿ  ಬಿಜೆಪಿ, ಮೋದಿ ಸರ್ಕಾರದ ಜೊತೆಗೆ ಕಾಂಗ್ರೆಸ್‌ ನಾಯಕರ ಪಾಲೂ ಇದೆ ಎನ್ನುವುದು ಗಮನಾರ್ಹ. ರಾಹುಲ್‌ ಗೆ ಅಕ್ಷರಶಃ ಸ್ವಪಕ್ಷೀಯರೇ ಮುಳುವಾಗಿ ಪರಿಣಮಿಸಿದರು. ಆದರೇ, ರಾಹುಲ್‌ ಗಾಂಧಿ ಈಗ ಮೊದಲಿನ ರಾಹುಲ್‌ ಗಾಂಧಿಯಾಗಿ ಉಳಿದಿಲ್ಲ. ರಾಜಕೀಯವಾಗಿ ತಮ್ಮ ವರ್ಚಸ್ಸನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಂಡಿದ್ದಾರೆ. ಇದು ರಾಹುಲ್‌ ಅಧ್ಯಕ್ಷ ಸ್ಥಾನದಿಂದ ಹೊರಗುಳಿದು ಪಕ್ಷವನ್ನು ಕಟ್ಟಿದಕ್ಕೆ ಉದಾಹರಣೆ. ಯಾರು ಅಸಮರ್ಥರು ಎಂದು ರಾಹುಲ್‌ ಗಾಂಧಿಯವರನ್ನು ಕರೆದಿದ್ದರೋ ಅವರೇ ಇಂದು ಸಮರ್ಥರು ಎಂದು ಹೇಳುವಷ್ಟರ ಮಟ್ಟಿಗೆ ರಾಜಕೀಯವಾಗಿ ಬೆಳೆದು ತೋರಿಸಿದ್ದಾರೆ. ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಂತಹ ಮಹತ್ವಾಕಾಂಕ್ಷೆಯ ಸಾರ್ವಜನಿಕ ಸಂಪರ್ಕ ಯಾತ್ರೆಗೆ ಕೈ ಹಾಕಿದಾಗ ಇಡಿ ದೇಶ ರಾಹುಲ್‌ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸಿತು, ಕೆಲವರು ಈ ಕಲ್ಪನೆಯನ್ನು ಲೇವಡಿ ಮಾಡಿದರು. ರಾಹುಲ್‌ ಯಾತ್ರೆಯನ್ನು ಅತ್ಯಂತ ದೊಡ್ಡ ಮಟ್ಟದ ಜನ ಬೆಂಬಲದೊಂದಿಗೆ ಯಶಸ್ವಿಯಾಗಿ (ಇದು ಚುನಾವಣೆಗೆ ಎಷ್ಟು ಪ್ರಭಾವಿಸಲಿದೆ ಎನ್ನುವುದು ಎರಡನೇ ಹಂತದ ಚರ್ಚೆ) ಪೂರೈಸಿದಾಗ ಯಾರು ನಿರ್ಲಕ್ಷಿಸಿದ್ದರೋ ಅವರು ಬೆರಗಾದರು. 

ಭಾರತ್‌ ಜೋಡೋ ಯಾತ್ರೆ ಕತ್ತಲೆ ಆವರಿಸಿಕೊಂಡಿದ್ದ ಕಾಂಗ್ರೆಸ್‌ ಗೆ ಬೆಳಕಿನ ಕಿರಣವಾಗಿ ಪರಿಣಮಿಸಿತು. ಯಾತ್ರೆಯ ಉದ್ದಕ್ಕೂ ರಾಹುಲ್‌ ಗೆ ದೊರೆತ ಜನ ಬೆಂಬಲದಿಂದಾಗಿ ಟೀಕಾಕಾರರು ಆಘಾತಕ್ಕೊಳಗಾದರು, ಸಹಜವಾಗಿ ಒಂದು ರಾಜಕೀಯ ಪಕ್ಷ ಯಾತ್ರೆಗಾಗಿ ರೋಬೋ ಆಡಿಯನ್ಸ್‌ ನನ್ನು  ಸೃಷ್ಟಿ ಮಾಡಿರಬಹುದು / ನಿರ್ವಹಿಸಿರಬಹುದು, ಆದರೇ, ಯಾತ್ರೆ ಸಾಗಿದಲ್ಲೆಲ್ಲಾ ದೊರೆತ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಕ್ಷದ ನಿರ್ವಹಣೆಯ ಫಲವಾಗಿರುವುದಕ್ಕೆ ಖಂಡಿತ ಸಾಧ್ಯವಿಲ್ಲ. ರಾಹುಲ್‌ ರನ್ನು ನೋಡುವುದಕ್ಕೆ, ಬೆಂಬಲಿಸುವುದಕ್ಕೆ ಜನ ಸ್ವಪ್ರೇರಣೆಯಿಂದ ಬಂದರು. ಇದು ರಾಹುಲ್‌ ರಾಜಕೀಯದಲ್ಲಿ ವೃದ್ಧಿಸಿಕೊಂಡ ವರ್ಚಸ್ಸಿಗೆ ಸಾಕ್ಷಿ. 

ರಾಹುಲ್‌ ಗಾಂಧಿ ಗಂಭೀರ ರಾಜಕಾರಣಿಯಾಗಿ ಈ ಮೂಲಕ ಹೊರಹೊಮ್ಮಿದ್ದಾರೆ. ರಾಜಕೀಯದಲ್ಲಿನ ಕಠಿಣ ಪರಿಶ್ರಮದಿಂದಾಗಿ ಸ್ವತಃ ಅವರು ಇದನ್ನು ಗಳಿಸಿಕೊಂಡಿದ್ದಾರೆ. ರಾಹುಲ್ ಅವರ ಹೊಸ ಇಮೇಜ್ ಅನ್ನು ಮಣ್ಣುಪಾಲು ಮಾಡುವ ಹತಾಶೆಯಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿ ಅವರನ್ನು ದೇಶವಿರೋಧಿ ಎಂದು ಬಣ್ಣಿಸಲು ಹೊರಟಿದೆ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿದೆ. ಯಾತ್ರೆಯು ಅನೇಕ ವಿರೋಧ ಪಕ್ಷದ ನಾಯಕರಿಗೆ ಎದೆಯುರಿ ಹೆಚ್ಚಿಸಿದೆ. ಸಂಸತ್ತಿನಲ್ಲಿ ಬಹುಷಃ ರಾಹುಲ್‌ ಗಾಂಧಿ ಆಡಳಿತ ಪಕ್ಷವನ್ನು ಪ್ರಶ್ನೆ ಮಾಡಿದಷ್ಟು ಯಾರೂ ಪ್ರಶ್ನೆ ಮಾಡಿರಲಿಕ್ಕಿಲ್ಲ, ರಾಹುಲ್‌ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನೆ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಅವರ ಮೈಕ್‌ ಆಫ್‌ ಮಾಡಿದ್ದನ್ನೂ ಈ ದೇಶ ಕಂಡಿದೆ. ವ್ಯವಸ್ಥೆಯ ತಪ್ಪುಗಳಾದಾಗ ಅದನ್ನು ಪ್ರಶ್ನಿಸುವವರನ್ನು ತಡೆದಿದ್ದು, ಕಾನೂನುನನ್ನು ಅಧಿಕಾರಕ್ಕೆ ಬೇಕಾಗಿ ಬಳಸಿಕೊಂಡಿದ್ದು ಈ ದೇಶದ ಜನರಿಗೆ ಗೊತ್ತಿಲ್ಲ ಎಂದಲ್ಲ. ಇದರ ಭಾಗವಾಗಿಯೇ ʼಮೋದಿʼ ಮಾನನಷ್ಟ ಮೊಕದ್ದಮೆಯಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ನೀಡಲಾಗಿದೆ ಎಂಬ ಚರ್ಚೆ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಚುನಾವಣೆಯ ಹೊತ್ತಿನಲ್ಲಿ ಅಧಿಕಾರವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ, ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂಬ ವಿರೋಧಾಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೆ ನೋಡುವುದಾದರೇ, ಇಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ, ಧಾರ್ಮಿಕ ನಾಯಕರು ಎಂದು ಕರೆಸಿಕೊಂಡು ದ್ವೇಷ ಭಾಷಣ ಮಾಡಿದವರು, ಗಲಭೆಗಳಿಗೆ ಕರೆಕೊಟ್ಟವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅಷ್ಟೇಕೆ, ಈ ದೇಶದಲ್ಲಿ ʼಗಾಂಧಿʼ ಎನ್ನುವ ಪದಕ್ಕೆ/ ಸರ್ನೇಮ್‌ ಗೆ ಎಷ್ಟು ಅಪಮಾನ ಮಾಡಿಲ್ಲ ?, ರಾಜೀವ್‌ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದಾಗ, ʼಗಲೀ ಗಲೀ ಮೇ ಶೋರ್‌ ಹೈ, ರಾಜೀವ್‌ ಗಾಂಧಿ ಚೋರ್‌ ಹೈʼ  ಎಂಬುವುದು ಬಿಜೆಪಿಯವರ ಪ್ರಮುಖ ರಾಜಕೀಯ ದ್ವೇಷಪೂರಿತ ಘೋಷಣೆಗಳಲ್ಲಿ ಒಂದಾಗಿತ್ತು. ಸದ್ಯ ಜನಪ್ರತಿನಿಧಿ ಕಾಯ್ದೆ ೧೯೫೧ರ ಪ್ರಕಾರ ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹಗೊಂಡಿದ್ದಾರೆ. ಮುಂದಿನ ಎಂಟು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತಾಗಿದೆ, ಲೋಕಸಭೆ ಸಚಿವಾಲಯ ಅನರ್ಹವೆಂದು ಅಧಿಸೂಚನೆ ಹೊರಡಿಸಿದೆ. ಮೇಲ್ಮನವಿ ಸಲ್ಲಿಕೆಗೂ ಮುನ್ನವೇ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎಬ್ಬಿಸಿದೆ. ಇದು ದೇಶದ ರಾಜಕೀಯ ಇತಿಹಾಸದ ದೊಡ್ಡ ದುರಂತಗಳಲ್ಲಿ ಒಂದು. ಒಂದಂತೂ ಸತ್ಯ, ಮತ್ತೆ ಮತ್ತೆ ರಾಹುಲ್‌ ಓಟಕ್ಕೆ ತಡೆಯೊಡ್ಡಿ ಸಮರ್ಥರು ಎಂದು ಸ್ವತಃ ಬಿಜೆಪಿಯೇ ಸಾಬೀತು ಪಡಿಸುತ್ತಿದೆ. ಕಾಂಗ್ರೆಸ್‌ ಮತ್ತೆ ಪುಟಿದೇಳುವುದಕ್ಕೆ ಪರ್ವ ಕಾಲ, ರಾಹುಲ್‌ ಇನ್ನಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್‌ ಈ ವಿಚಾರವನ್ನು ಹೇಗೆ ಬಳಸಿಕೊಳ್ಳಲಿದೆ, ಕಾನೂನು ಮತ್ತು ರಾಜಕೀಯವಾಗಿ ಹೇಗೆ ಹೋರಾಡಲಿದೆ ಎನ್ನುವುದರ ಮೇಲೆ ಎಲ್ಲಾ ಫಲಿತಾಂಶವೂ ಅಡಗಿದೆ. 

-ಶ್ರೀರಾಜ್‌ ವಕ್ವಾಡಿ 


Thursday, March 23, 2023

2023 : ಲೋಕಲ್‌ ವರ್ಸಸ್‌ ನ್ಯಾಷನಲ್‌ ಫೈಟ್‌



(ಸಾಂದರ್ಭಿಕ ಚಿತ್ರ) 

ಬಿಜೆಪಿಗೆ ಅನಿವಾರ್ಯ । ಕಾಂಗ್ರೆಸ್‌ ಗೆದ್ದರೇ, 'ಜೋಡೋ'ಗೆ ಜೈಕಾರ ..!

ಮೂರು ಈಶಾನ್ಯ ರಾಜ್ಯಗಳ ವಿಧಾನ ಸಭಾ ಚುನಾವಣೆಯ ನಂತರ ಈಗ ಎಲ್ಲರ ಚಿತ್ತ ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ನೆಟ್ಟಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆದ/ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಕಾರಣದಿಂದಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ದೇಶ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ೫.೦೪ ರಷ್ಟಿರುವ ಕರ್ನಾಟಕವು ಲೋಕಸಭೆಗೆ ೨೮ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಅತಿ ಹೆಚ್ಚು ಲೋಕಸಭಾ ಸಂಸದರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯವು ಏಳನೇ ಸ್ಥಾನದಲ್ಲಿರುವುದರಿಂದ  [(ಉತ್ತರ ಪ್ರದೇಶ (೮೦), ಮಹಾರಾಷ್ಟ್ರ (೪೮), ಪಶ್ಚಿಮ ಬಂಗಾಳ (೪೨), ಬಿಹಾರ (೪೦), ತಮಿಳು ನಾಡು (೩೯), ಮಧ್ಯ ಪ್ರದೇಶ (೨೯)] ಕೇಂದ್ರ ಸರ್ಕಾರಕ್ಕೆ ರಾಜ್ಯದ ವಿಧಾನ ಸಭಾ ಚುನಾವಣೆಯು ಅತ್ಯಂತ ಮುಖ್ಯವೂ ಕೂಡ ಹೌದು. 

ಒಂದೆಡೆ ವಿವಿಧ ಯೋಜನೆಗಳ ಉದ್ಘಾಟನೆಯ ನೆಪದಲ್ಲಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ವಿರೋಧ ಪಕ್ಷಗಳ ವಿರುದ್ಧ ಮಾತನಾಡಿ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಚುನಾವಣೆಯ ಹಾದಿಯಲ್ಲಿ ರಾಜ್ಯ ಬಿಜೆಪಿ ಸಂಪೂರ್ಣವಾಗಿ ಕೇಂದ್ರ ನಾಯಕರ ಮೊರೆ ಹೋದಂತೆ ಕಾಣುತ್ತಿದೆ. ಇನ್ನೊಂದೆಡೆ, ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಇನ್ನೂ ತನ್ನ ರಾಷ್ಟ್ರೀಯ ನಾಯಕತ್ವವನ್ನು ವ್ಯಾಪಕವಾಗಿ ಟ್ಯಾಪ್ ಮಾಡಿದಂತೆ ಕಾಣುತ್ತಿಲ್ಲ. ಯಶಸ್ವಿ ಭಾರತ್ ಜೋಡೋ ಯಾತ್ರೆಯ ಹೊರತಾಗಿಯೂ, ರಾಹುಲ್ ಗಾಂಧಿ, ಒಂದೆರಡು ಪತ್ರಿಕಾ ಗೋಷ್ಠಿಗಳನ್ನು ಮಾಡಿದ್ದನ್ನು ಹೊರತಾಗಿ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿಲ್ಲ, ಚುನಾವಣೆಯ ಬಗ್ಗೆಯೂ ಮಾತನಾಡಿಲ್ಲ. ಪ್ರಿಯಾಂಕ ಗಾಂಧಿ ಬಂದು ಕಾಂಗ್ರೆಸ್‌ ನ ಈ ಬಾರಿಯ ಗ್ಯಾರಂಟಿಗಳಲ್ಲಿ ಒಂದಾದ ʼಗೃಹಲಕ್ಷ್ಮಿʼಯನ್ನು ಘೋಷಿಸಿಇ ಹೋಗಿದ್ದು ಬಿಟ್ಟರೇ, ರಾಷ್ಟ್ರ ನಾಯಕರ ಸಾರ್ವಜನಿಕ ಸಭೆ ಕಾಂಗ್ರೆಸ್‌ ನಿಂದ ಆಗಿಲ್ಲ. ಈಗ ರಾಹುಲ್‌ ಗಾಂಧಿ, ಖರ್ಗೆ ಅಲ್ಲೋ ಇಲ್ಲೋ ಎಲ್ಲೋ ಎಂಬಂತೆ ನಿಧಾನಕ್ಕೆ ರಾಜ್ಯಕ್ಕೆ ಚುನಾವಣಾ ಉದ್ದೇಶದಿಂದ ಕಾಲಿಟ್ಟಿದ್ದು, ಯಾವ ರೀತಿಯಲ್ಲಿ ಇವರು ರಾಜ್ಯದ ಜನರನ್ನು ಪ್ರಭಾವಿಸಲಿದ್ದಾರೆ ನೋಡಬೇಕು. ಮತ್ತೊಂದೆಡೆ ಜೆಡಿಎಸ್‌ ಎಂದಿನಂತೆ ತನ್ನ ಬಲ ಇರುವ ಕಡೆಯಲ್ಲಿ ಮಾತ್ರ ಚುನಾವಣಾ ಪ್ರಚಾರದ ಬಿರುಸಿನಲ್ಲಿದೆ. ಹೈಕಮಾಂಡ್‌ ಕೂಡ ಜೆಡಿಎಸ್‌ ಗೆ ಇಲ್ಲೇ ಇದೆ. ಹಿರಿಗೌಡರು ದೈಹಿಕವಾಗಿ ಸುಸ್ತಾಗಿದ್ದಾರೆ. ಕಿರಿಗೌಡ್ರು ದಂಪತಿಗಳು, ಮಗ ನಿಖಿಲ್ ಅಲ್ಲಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಾಗಿ ಒಕ್ಕಲಿಗ ಮತ ಕ್ಷೇತ್ರಗಳನ್ನು ಕೇಂದ್ರವಾಗಿಟ್ಟು ಕಾರ್ಯ ನಿರ್ವಹಿಸುತ್ತಿದೆ. ಇನ್ನು, ಜೆಡಿಎಸ್‌ ನಲ್ಲಿ ಈ ಬಾರಿ ಒಂದಿಷ್ಟು ಆಂತರಿಕ ಒಡಕುಗಳು ಕಾಣಿಸಿಕೊಂಡಂತಿರುವುದು ರಾಜಕೀಯದ ಕುತೂಹಲಕ್ಕೆ ಕಾರಣವಾಗಿದೆ. 

ಇನ್ನು, ಬಿಜೆಪಿ ಮೇಲೆ ಮತದಾರರ ಒಲವು ಕಡಿಮೆಯಾಗಿದೆ. ರಾಜ್ಯ  ಬಿಜೆಪಿಯ ಕೆಲವು ನಾಯಕರ ಹರಕು ಬಾಯಿ, ಗಲಾಟೆ ಎಬ್ಬಿಸುವ ರಾಜಕಾರಣ, ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ.   ರಾಜ್ಯ  ಬಿಜೆಪಿಯ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಬೇಸರವಿದ್ದರೂ ತೋರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ರಾಜ್ಯದ ಕೆಲವು ನಾಯಕರ ಅಸಮಾಧಾನ, ಅಲ್ಲಲ್ಲಿ ರಾಜೀನಾಮೆ ಎಲ್ಲವೂ ಬಿಜೆಪಿಗೆ ಒಳಗೊಳಗೆ ಹತಾಶೆ ಮೂಡಿಸಿದೆ. ಇನ್ನು, ರಾಜ್ಯದಲ್ಲಿ ಬಿಜೆಪಿ ಎಂದಿಗೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಥವಾ ಬೇರೆ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದೆ. ಈ ಪ್ರವೃತ್ತಿಯನ್ನು ಮುರಿಯಬೇಕಾದರೆ ಒಕ್ಕಲಿಗ ಮತ ಕ್ಷೇತ್ರಗಳಲ್ಲಿ ಬಿಜೆಪಿ ಗಟ್ಟಿಯಾಗಿ ಹೆಜ್ಜೆ ಊರಬೇಕಿದೆ. ಒಕ್ಕಲಿಗ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಸೆಳೆಯುವ ಮೂಲಕ ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆಯಾದರೂ.  ಎಸ್‌ ಎಂ ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದಲ್ಲಿ ಬಿಜೆಪಿಗೆ ಹಿತ ಕಾಣುತ್ತಿಲ್ಲ. ಇತ್ತೀಚೆಗೆ ಸುಮಲತಾ ಅಂಬರೀಶ್‌ ಬಿಜೆಪಿಗೆ ಬೆಂಬಲ ಸೂಚಿಸಿದರಾದರೂ ಮಂಡ್ಯದಲ್ಲಿ ಬಿಜೆಪಿಗೆ ಧೈರ್ಯ ಮೂಡಿದಂತೆ ಕಾಣಿಸುತ್ತಿಲ್ಲ.  ಮಂಡ್ಯದ ಜವಾಬ್ದಾರಿ ಹೊರುವುದಕ್ಕೆ ಯಾವ ರಾಜ್ಯ ಬಿಜೆಪಿ ನಾಯಕರು ಮನಸ್ಸು ಮಾಡುತ್ತಿಲ್ಲ ಎನ್ನುವುದು ಮತ್ತೊಂದು ತಲೆಬಿಸಿ. 

ಪದೇ ಪದೇ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮೋದಿ, ಶಾ ಪ್ರತಿ ಕ್ಷೇತ್ರದಲ್ಲಿಯೂ ಹೊಸ ಮುಖಗಳನ್ನು ಗುರುತಿಸುವತ್ತ ಚಿತ್ತ ಹರಿಸಿದಂತೆ ಕಾಣುತ್ತಿದೆ. ಗುಜರಾತ್‌ ಚುನಾವಣೆಗಾಗಿ ಹೆಣೆದ ತಂತ್ರವನ್ನು ಇಲ್ಲಿ ಬಿಜೆಪಿ ಪ್ರಯೋಗಿಸಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ.  ರಾಜ್ಯದಲ್ಲಿ ಹೊಸ ಮುಖಗಳನ್ನು, ಕೆಲಸ ಮಾಡುವ, ಹೊಸ ಚಾರ್ಮ್‌ ಇರುವ ನಾಯಕರನ್ನು ಗುರುತಿಸಿ ರಾಜ್ಯ ನಾಯಕರ ಅಡಿಯಲ್ಲಿ ತಂದು ಮುಂದಿನ ಚುನಾವಣೆಗೆ ಬಳಸಿಕೊಳ್ಳಬಹುದೆಂಬ ಉದ್ದೇಶ ಮೋದಿ, ಶಾ ಅವರದ್ದು ಎಂಬ ಚರ್ಚೆ ರಾಜಕೀಯದಲ್ಲಿ ನಡೆಯುತ್ತಿದೆ. ಗುಜರಾತ್‌ ಗೂ ಕರ್ನಾಟಕ ರಾಜಕೀಯಕ್ಕೂ ಹಲವು ವ್ಯತ್ಯಾಸಗಳಿವೆ. ಇಂದಿಗಲ್ಲದಿದ್ದರೂ ಮುಂದೆ ಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಸಣ್ಣದೊಂದು ದೃಷ್ಟಿ ಹಾಯಿಸಿದಂತಿದೆ. ರಾಜ್ಯದಲ್ಲಿ ಮೋದಿ, ಶಾ ಹೆಣೆಯುತ್ತಿರುವ ಈ ತಂತ್ರವು ಹೊಸದೇನಲ್ಲ. ಇಂದಿರಾಗಾಂಧಿಯವರು ಅಧಿಕಾರದ ಉತ್ತುಂಗದಲ್ಲಿದ್ದಾಗ ಯಾರನ್ನು ಬೇಕಾದರೂ ಕಣಕ್ಕಿಳಿಸಿ ಅವರನ್ನು ಗೆಲ್ಲಿಸಬಹುದಾಗಿತ್ತು ಎಂಬ ರಾಜಕೀಯ ವಾತಾವರಣ ಇದ್ದಾಗ ಈ ತಂತ್ರವನ್ನು ಮೊದಲು ಕಾಂಗ್ರೆಸ್‌ ಕಾರ್ಯರೂಪಕ್ಕೆ ತಂದು ಪ್ರಯೋಗಿಸಿ ಯಶಸ್ಸು ಕಂಡಿತ್ತು. ಆದರೇ, ರಾಜೀವ್ ಗಾಂಧಿ ರಾಜ್ಯ ನಾಯಕತ್ವವನ್ನು ಬೈಪಾಸ್ ಮಾಡದೆ, ಅವಮಾನಿಸುವ ಮೂಲಕ ಈ ಪ್ರಕ್ರಿಯಗೆ ಒಂದು ಹಂತದಲ್ಲಿ ಉಲ್ಟಾ ನಡೆದುಕೊಂಡರು. ಲಿಂಗಾಯತ ನಾಯಕ ವೀರೇಂದ್ರ ಪಾಟೀಲ್ ಅವರಿಗೆ ರಾಜೀವ್ ಗಾಂಧಿ ಮಾಡಿದ್ದರೆನ್ನಲಾದ ಅವಮಾನದಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಕಾಂಗ್ರೆಸ್‌ ಸ್ಥಳೀಯವಾಗಿ ನಾಯಕರನ್ನು ಅಷ್ಟಾಗಿ ಬೆಳೆಸಲೇ ಇಲ್ಲ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು. ಈಗ ಕಾಂಗ್ರೆಸ್‌ ಈ ಹಿಂದೆ ಎಲ್ಲಿ ಎಡವಿತ್ತೋ ಅಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ ಮತ್ತು ಸ್ಥಳೀಯ ನಾಯಕರನ್ನು ಗುರುತಿಸಿ ಯಶಸ್ವಿಯಾಗುತ್ತಿದೆ. 

ರಾಜ್ಯದ ಜನತೆ ಎಂದೂ ಒಂದೇ ಪಕ್ಷವನ್ನು ಮತ್ತೆ ಮತ್ತೆ ಅಧಿಕಾರಕ್ಕಾಗಿ ಆರಿಸಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಅತಂತ್ರವೇ ಹೆಚ್ಚು. ಇನ್ನು, ಬಿಜೆಪಿ ಇದುವರೆಗೆ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿಲ್ಲ. ಬಿಜೆಪಿ ಅಧಿಕಾರ ಮಾಡಿದ್ದಿದ್ದರೇ ಅದು ಆಪರೇಷನ್‌ ಕಮಲದ ಪರಿಣಾಮದಿಂದಾಗಿ, ಇಲ್ಲವೇ ಮೈತ್ರಿಯಿಂದಾಗಿ. ಸದ್ಯ ಕೇಂದ್ರದಲ್ಲಿಯೂ ಬಿಜೆಪಿ, ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇ ಬೇಕು ಎಂಬ ಪಣ ತೊಟ್ಟಿದೆ ಬಿಜೆಪಿ. ಇತ್ತ ಕಾಂಗ್ರೆಸ್‌ ಹೈಕಮಾಂಡ್‌ ಗೆ ಹೊಸ ನೇತೃತ್ವ ಸಿಕ್ಕಿದೆ. ಎಐಸಿಸಿ ಅಧ್ಯಕ್ಷತೆ ಕರ್ನಾಟದ ಮಲ್ಲಿಕಾರ್ಜುನ ಖರ್ಗೆ ಅವರ ಕೈಯಲ್ಲಿದ್ದು, ಖರ್ಗೆ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ಹೇಗಾದರೂ ಮಾಡಿ ತರಲೇ ಬೇಕು ಎಂಬ ಒತ್ತಡವೂ ಕೂಡ ಇದೆ. ಹಾಗಾಗಿಯೇ ಸೀಟ್‌ ಹಂಚಿಕೆಯಲ್ಲಿ ಖರ್ಗೆ ಅಳೆದು ತೂಗಿದ್ದಾರೆ. ರಾಜ್ಯದಲ್ಲಿ ಇಂದಿಗೂ ಇರುವ ಮೋದಿ ಹವಾದ ಎದುರು ಖರ್ಗೆ ಯಾವ ರೀತಿಯ ರಣತಂತ್ರಕ್ಕೆ ರಾಜ್ಯ ನಾಯಕರಿಗೆ ನಿರ್ದೇಶಿಸಿದ್ದಾರೆ/ನಿರ್ದೇಶಿಸಲಿದ್ದಾರೆ ಎನ್ನುವುದು ಕುತೂಹಲ. ಇನ್ನೇನು ಕೆಲ ದಿನಗಳಲ್ಲಿ ಬರಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್‌ ಗೆದ್ದರೇ, ನಿಸ್ಸಂಶಯವಾಗಿ ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಜೈಕಾರ ಸಮರ್ಪತಗೊಳ್ಳುತ್ತದೆ. ಸೋತರೇ, ಅದರ ಸಂಪೂರ್ಣ ಹೊಣೆಗಾರಿಕೆ ಮಲ್ಲಿಕಾರ್ಜುನ್‌ ಖರ್ಗೆ ತಲೆಗೆ ಕಟ್ಟುವುದರಲ್ಲಿ ಅನುಮಾನವೇ ಇಲ್ಲ. ಇದು ಸ್ವತಃ ಖರ್ಗೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಆ ಅಸಹಾಯಕತೆಗೆ ಖರ್ಗೆ ಮುಖಾಮುಖಿಯಾಗಲೇ ಬೇಕಿದೆ. ಇತ್ತ ಜೆಡಿಎಸ್‌ ಅಂತೂ ಸ್ವಂತವಾಗಿ ಅಧಿಕಾರಕ್ಕೆ ಬರುವುದಕ್ಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ. ಅತಂತ್ರವಾದರೇ, ಮತ್ತೆ ಕುಮಾರಸ್ವಾಮಿಯವರಿಗೆ ಮತ್ತೊಂದು ಅವಕಾಶ ಸಿಗಬಹುದು ಹೊರತು ಮತ್ತೇನೂ ಜೆಡಿಎಸ್‌ ನಿಂದ ಆಗುವುದಕ್ಕೆ ಸಾಧ್ಯವಿಲ್ಲ. ಆದರೇ, ಜೆಡಿಎಸ್‌ ಪ್ರಾಬಲ್ಯವಿರುವ ಕಡೆ ಒಂದೆರಡು ಸೀಟ್‌ ಜಾಸ್ತಿ ಬರಬಹುದೇನೋ ಅಷ್ಟೇ.  ಇದನ್ನೂ ಮೀರಿ ಆಶ್ಚರ್ಯಕರ ಬೆಳವಣಿಗೆ ಈ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಆಗುತ್ತದೆ ಎನ್ನುವುದು ದೂರದ ಮಾತು. 

ಇನ್ನು, ಬಿಜೆಪಿ ಕಳೆದ ವಿಧಾನ ಸಭಾ ಚುನಾವಣೆಯನ್ನು ಸಿದ್ದರಾಮಯ್ಯ ವರ್ಸಸ್‌ ಮೋದಿ ಎಂಬಂತೆ ಬಿಂಬಿಸಿ ಕಣಕ್ಕಿಳಿದಿತ್ತು. ಈ ಬಾರಿಯ ಚುನಾವಣೆಯನ್ನು ಮೋದಿ ವರ್ಸಸ್‌ ರಾಹುಲ್‌ ಗಾಂಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿದೆ. ಇತ್ತ ಕಾಂಗ್ರೆಸ್‌ ಪದೇ ಪದೇ ಮೋದಿ, ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕಾರಣದಿಂದಾಗಿ ಈ ಬಾರಿಯ ಚುನಾವಣೆಯನ್ನು ಲೋಕಲ್‌ ವರ್ಸಸ್‌ ನ್ಯಾಷನಲ್‌ ಎಲೆಕ್ಷನ್‌ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ. ಈ ಎರಡೂ ಬದಿಗಳ ರಾಜಕೀಯ ತಂತ್ರಗಾರಿಕೆಗಳ ನಡುವೆ ಪ್ರಸ್ತುತ ಚುನಾವಣಾ ಕಣದಲ್ಲಿ ಯಾವ ನಿರೂಪಣೆ ಗೆಲ್ಲುತ್ತದೆ ಎನ್ನುವುದು ಕಾದು ನೋಡಬೇಕಿದೆ.

-ಶ್ರೀರಾಜ್‌ ವಕ್ವಾಡಿ  


Thursday, March 16, 2023

ಆಡಳಿತ ಪಕ್ಷ ಸೇರಿ ಯಾವ ಪಕ್ಷಕ್ಕೂ ಬಹುಮತದ ದಾರಿ ಸುಲಭವಿಲ್ಲ.!

ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಆಗಿ ಬದಲಾದ ʼಆಪರೇಷನ್‌ ಕಮಲʼ .!

ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ಕಣ ರಾಜಕಾರಣಕ್ಕೆ ತಯಾರಿಯಲ್ಲಿವೆ. ಕೇಂದ್ರದ ಆಡಳಿತದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಸಹಜವಾಗಿ ಚುನಾವಣಾ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವದಲ್ಲಿರುವ ಏಕೈಕ ರಾಜ್ಯವಾಗಿರುವುದರಿಂದ ಕೂಡ ರಾಜ್ಯ ವಿಧಾನ ಸಭಾ ಚುನಾವಣೆ, ಕೇಂದ್ರ ಬಿಜೆಪಿ ಪಾಲಿಗೆ ಇದು ಮಹತ್ತರವಾದದ್ದು ಎನ್ನುವುದು ಇಲ್ಲಿ ಗಮನಾರ್ಹ. 

ರಾಜ್ಯದ ಕಳೆದ ನಾಲ್ಕು ದಶಕಗಳ ರಾಜಕೀಯ ಇತಿಹಾಸವನ್ನು ಗಮನಿಸುವುದಾದರೇ, ರಾಜ್ಯದ ಮತದಾರ ಒಂದೇ ಪಕ್ಷವನ್ನು ಪದೇ ಪದೇ ಆಯ್ಕೆ ಮಾಡಿದ ಉದಾಹರಣೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿಲ್ಲ ಮತ್ತು ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲ. ಇಲ್ಲಿನ ಮತದಾರ ಸತತವಾಗಿ ಒಂದೇ ಪಕ್ಷಕ್ಕೆ ಬಹುಮತವನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಯಾವ ಪಕ್ಷದ ಭದ್ರ ಕೋಟೆಯೂ ಅಲ್ಲ. ಹಾಗಾಗಿ ಲೋಕಸಭೆ ಚುನಾವಣೆಯೂ ಸಮೀಪದಲ್ಲಿರುವುದರಿಂದ ಕೇಂದ್ರದ ಆಡಳಿತ ಪಕ್ಷ ಬಿಜೆಪಿಗೂ ಹಾಗೂ ರಾಜ್ಯದ ಆಡಳಿತ ಪಕ್ಷ ಬಿಜೆಪಿಗೂ ಈ ವಿಧಾನ ಸಭಾ ಚುನಾವಣೆ ಒಂದು ಹಂತದಲ್ಲಿ ನಿರ್ಣಾಯಕ ಚುನಾವಣೆಯಾಗಿರಲಿದೆ. 

ನಿಸ್ಸಂಶಯವಾಗಿ ಆಡಳಿತ ಪಕ್ಷ ಬಿಜೆಪಿ ರಾಜ್ಯವನ್ನು ಉಳಿಸಿಕೊಳ್ಳುವ ಸತತ ಪ್ರಯತ್ನದಲ್ಲಿದೆ. ಇನ್ನೊಂದೆಡೆ ಭ್ರಷ್ಟಾಚಾರ, ಹಗರಣ, ದುರಾಡಳಿತ, ಲೈಂಗಿಕ ಹಗರಣ, ಹಣದುಬ್ಬರ, ಬೆಲೆ ಏರಿಕೆ ಇತ್ಯಾದಿ ವಿಚಾರಗಳಿಂದ ಆಡಳಿತ ಪಕ್ಷದ ಮೇಲೆ ಜನರಲ್ಲಿನ ವಿಶ್ವಾಸ ಕಡಿಮೆಯಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಲಾಭವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹುರುಪಿನಲ್ಲಿವೆ. ಆಡಳಿತ ಪಕ್ಷ ಹೇಗಾದರೂ ಮಾಡಿ ಬಹುಮತದೊಂದಿಗೆ ಈ ಬಾರಿಯ ಚುನಾವಣೆಯಲ್ಲಾದರೂ ಅಧಿಕಾರಕ್ಕೇರಬೇಕೆಂಬ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿವೆ.  

ಅಷ್ಟಾಗಿಯೂ, ಬಹಳ ಪ್ರಮುಖ ವಿಚಾರವೇನೆಂದರೇ, ಇದುವರೆಗೆ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಉದಾಹರಣೆಯೇ ಇಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿಯೂ ಇದು ಬಿಜೆಪಿಯಿಂದ ಸಾಧ್ಯವಾಗಿಲ್ಲ. ಇದುವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೇ, ಅದು ಆಪರೇಷನ್‌ ಕಮಲದ ಮೂಲಕವೇ ಎನ್ನುವುದು ಕೂಡ ಉಲ್ಲೇಖಾರ್ಹ. ವಾಸ್ತವವಾಗಿ ʼಆಪರೇಷನ್‌ ಕಮಲʼ ಈಗ ಬಿಜೆಪಿ ಬಹುಮತ ಗಳಿಸುವಲ್ಲಿ ವಿಫಲವಾದಲ್ಲಿ ಎಲ್ಲಾ ಕಡೆಗಳಲ್ಲಿ ಅದರ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಆಗಿ ಬದಲಾಗಿದೆ. ಈ ತಂತ್ರ ಮೊದಲು ಪ್ರಯೋಗವಾಗಿದ್ದೇ ಕರ್ನಾಟಕದಲ್ಲಿ ಇಲ್ಲಿ ಉಲ್ಲೇಖೀಸಲೇ ಬೇಕಾದ ವಿಷಯ. 

ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆಯನ್ನು ಅನುಭವಿಸುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ೧೯೮೦-೮೩ ರ ಅವಧಿಯ ಗುಂಡೂರಾವ್‌  ನೇತೃತ್ವಕದ ಕಾಂಗ್ರೆಸ್‌ ಸರ್ಕಾರ ಒಂದಿಷ್ಟು ಆಡಳಿತ ವಿರೋಧವನ್ನು ಅನುಭವಿಸಿದ್ದನ್ನು ಹೊರತಾಗಿ ಇಷ್ಟರ ಮಟ್ಟಿಗೆ ಆಡಳಿತ ವಿರೋಧಿ ಅಲೆಯನ್ನು ಅನುಭವಿಸಿದ್ದು ಇದೇ ಸರ್ಕಾರ. ೨೦೧೯ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ರಚಿಸಲಾಯಿತು. ಸರಿ ಸುಮಾರು ಮೂರುವರೆ ವರ್ಷಗಳಿಂದ ಈ ರಾಜ್ಯದ ಜನ ಈ ಸರ್ಕಾರವನ್ನು ಗಮನಿಸಿದ್ದಾರೆ. “ಏನ್‌ ಮಾಡಿದ್ರು ಜನ ಒಪ್ಕೊಳ್ತಾರೆ” ಎಂಬ ವಾತಾವರಣ ಈಗ ಬದಲಾಗಿದೆ. ಅತಿರೇಖದ ಭ್ರಷ್ಟಾಚಾರ, ವ್ಯಾಪಕವಾದ ದ್ವೇಷ ಪ್ರಚಾರ, ಕೋಮು ಹಿಂಸಾಚಾರ, ಕಾನೂನು ಅಮರ್ಥತೆ, ದರ್ಬಲ ಆಡಳಿತ, ಹಗರಣ ಎಲ್ಲವೂ ಆಡಳಿತ ಪಕ್ಷದ ಟ್ರೇಡ್‌ ಮಾರ್ಕ್‌ ಎಂಬಂತಾಗಿರುವುದು ಸತ್ಯ. 

ಹಗರಣಗಳ ಆಡಳತ ಆಡಳಿತ ನಡೆಸಿದ ಸರ್ಕಾರ : ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಗಳಿಸಿದ ಹೊಸ ಹೆಸರು ೪೦% ಸರ್ಕಾರ. ಸರ್ಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಗುತ್ತಿಗೆಗಳಲ್ಲಿ, ಕಾರ್ಪೋರೇಟ್‌ ಸ್ನೇಹಿ ಇತ್ಯಾದಿಗಳಲ್ಲಿ ಈ ಸರ್ಕಾರದ ಅವಧಿಯಲ್ಲಿ ತುಸು ಹೆಚ್ಚೇ ಇತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಬಹಿರಂಗವಾಗಿಯೇ ಬಿಜೆಪಿ ಸರ್ಕಾರವನ್ನು ೪೦% ಸರ್ಕಾರ ಎಂದು ಕರೆದಿದ್ದನ್ನು ಈ ರಾಜ್ಯದ ಜನ ನೋಡಿದ್ದಾರೆ. ಮಾತ್ರವಲ್ಲದೇ ಇನ್ಫೋಸಿಸ್‌ ನ ಮಾಜಿ ಸಿಎಫ್‌ಓ ಮೋಹನ್‌ ದಾಸ್‌ ಪೈ ಈ ಸರ್ಕಾರವನ್ನು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಸಾರ್ವಜನಿಕವಾಗಿ ಹೇಳಿರುವುದನ್ನು ಕೂಡ ಈ ರಾಜ್ಯದ ಜನ ಕಂಡಿದ್ದಾರೆ. ಈ ಅವಧಿಯಲ್ಲಿ ನಡೆದ ಸರಣಿ ಭ್ರಷ್ಟಾಚಾರ ಪ್ರಕರಣಗಳು ಬಿಜೆಪಿ ಸರ್ಕಾರಕ್ಕೆ ೪೦% ಸರ್ಕಾರವೆಂಬ ಹಣೆಪಟ್ಟಿ ತಂದುಕೊಟ್ಟಿದೆ.  

ಪಿ ಎಸ್ ಐ (ಪೊಲೀಸ್ ಸಬ್ ಇನ್ಸ್‌ ಪೆಕ್ಟರ್) ಅಪ ಮಾರ್ಗದ ನೇಮಕಾತಿ ಪ್ರಕರಣ ಈ ಸರ್ಕಾರದ ದೊಡ್ಡ ಭ್ರಷ್ಟಾಚಾರಗಳಲ್ಲೊಂದು. ಇದು ಕರ್ನಾಟಕ ಪೊಲೀಸ್ ನೇಮಕಾತಿ ಸೆಲ್ ಕಳೆದ ವರ್ಷ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ೫೪೫  ಸಬ್ ಇನ್ಸ್‌ ಪೆಕ್ಟರ್‌ ಗಳ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯನ್ನು ನಡೆಸುತ್ತಿದೆ. ಹಗರಣದ ಮಾಸ್ಟರ್ ಮೈಂಡ್ ಆಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ  ಅವರನ್ನು ಬಂಧಿಸಿದ್ದನ್ನು ಈ ರಾಜ್ಯದ ಜನ ನೋಡಿದ್ದಾರೆ. ಲಂಚ ನೀಡಿದ ಅಭ್ಯರ್ಥಿಗಳ ಓ ಎಂ ಆರ್ ಶೀಟ್‌ ಗಳಲ್ಲಿ ಸರಿಯಾದ ಉತ್ತರಗಳನ್ನು ಈ ಪ್ರಕರಣಗಳಲ್ಲಿ ಶಾಮೀಲಾದವರು ಬರೆಯುವುದನ್ನು ಕೂಡ  ಈ ಪ್ರಕರಣ ಒಳಗೊಂಡಿತ್ತು ಎಂಬುವುದು ಇಲ್ಲಿ ಉಲ್ಲೇಖಾರ್ಹ. ಇದುವರೆಗೆ ಒಟ್ಟು ಬಂಧಿತರ ಸಂಖ್ಯೆ ೧೦೦ ದಾಟಿದೆ (ಪೊಲೀಸ್ ಅಧಿಕಾರಿಗಳು, ಅಭ್ಯರ್ಥಿಗಳು, ಮಧ್ಯವರ್ತಿಗಳು). ಎಷ್ಟರ ಮಟ್ಟಿಗೆ ಎಂದರೇ, ಒಂದು ನೇಮಕಾತಿಗೆ ಬರೋಬ್ಬರಿ ೮೫ ಲಕ್ಷದವರೆಗೆ ಲಂಚ ಸ್ವೀಕರಿಸಿದ್ದು ಈ ರಾಜ್ಯದ ಮುಂದೆ ಬಟಾಬಯಲಾಯಿತು.  ರಾಜಕೀಯದ ಕೃಪಾಶೀರ್ವಾದ ಅಥವಾ ಸಹಕಾರವಿಲ್ಲದೆ ಇಂತಹ ದೊಡ್ಡ ಹಗರಣ ನಡೆಯಲು ಸಾಧ್ಯವಿಲ್ಲ. ಆದರೆ, ಈ ನಿಟ್ಟಿನಲ್ಲಿ ಯಾವುದೇ ತನಿಖೆ ನಡೆದಿಲ್ಲ. ಹಗರಣಗಳ ಸರಣಿ - ಬಿಟ್‌ಕಾಯಿನ್ ಹಗರಣ, ಕೋವಿಡ್ ಹಗರಣ, ಮಾರ್ಕ್ಸ್ ಕಾರ್ಡ್ ಹಗರಣ, ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣೆಗಳ ಸಂಘ (ಆರ್‌ ಯು ಪಿ ಎಸ್‌ ಎ = ರೂಪ್ಸಾ), ಬಿಡಿಎ ಹಗರಣ ಮತ್ತು ಶಿಕ್ಷಣ ಇಲಾಖೆಯಲ್ಲಿನ ಹಗರಣವನ್ನು ಬಹಿರಂಗಗೊಂಡಿವೆ. ಇತ್ತೀಚೆಗಿನ  ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನ ಮಗ ಲಂಚ ಸ್ವೀಕಾರ ಮಾಡಿದ್ದು ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದ್ದು ಈಗ ಲೋಕಾಯುಕ್ತ ವಿಚಾರಣೆಯಲ್ಲಿದೆ. ಇಷ್ಟೆಲ್ಲಾ ಆಗಿಯೂ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಳಳುವುದರ ಜೊತೆಗೆ ವಿರೋಧ ಪಕ್ಷದ ಬಗ್ಗೆ ಸುಳ್ಳು ಹಬ್ಬಿಸುವುದನ್ನು ಬಿಟ್ಟಿಲ್ಲ. ಇನ್ನೂ ಜನ ಮೂರ್ಖರೇ ಎಂಬ ಭ್ರಮೆಯಲ್ಲಿಯೇ ಸರ್ಕಾರ ಇದ್ದರೇ, ಅದಕ್ಕಿಂತ ದೊಡ್ಡ ಹಾಸ್ಯ ಪ್ರಸಂಗ ಮತ್ತೊಂದಿರಲಿಕ್ಕಿಲ್ಲ. ಒಟ್ಟಿನಲ್ಲಿ ಹೊಸ ಹಗರಣವಿಲ್ಲದೆ ಸರಿಯಾಗಿ ಒಂದು ವಾರವನ್ನೂ ಈ ಸರ್ಕಾರ ಕಳೆದಿಲ್ಲ.

ಜನರು ಮೂರ್ಖರು ಎಂದುಕೊಳ್ಳುವುದೇ ದೊಡ್ಡ ಮೂರ್ಖತನ :  ಕರ್ನಾಟಕ ಬಿಜೆಪಿ ಮೋದಿ ಹವಾದಲ್ಲಿಯೇ ಈ ಭಾರಿಯ ಚುನಾವಣೆಯನ್ನೂ ಕೂಡ ಗೆದ್ದು ಬಿಡಬಹುದು ಎಂಬ ಭ್ರಮೆಯಲ್ಲಿಯೇ ಇರಬೇಕು. ಅದಕ್ಕಾಗಿಯೇ ಎಂದೂ ಇಲ್ಲದಂತೆ ಪದೇ ಪದೇ ಮೋದಿಯನ್ನು ಚುನಾವಣೆಯ ಈ ಹೊಸ್ತಿಲಲ್ಲಿ ಕರೆಸುತ್ತಿರುವುದು. ಒಂದಿಷ್ಟು ರೋಬೋ ಆಡಿಯನ್ಸ್‌ ಗಳನ್ನು ಸೇರಿಸಬಹುದು, ಮೋದಿ ಬಂದ ಕಾರು ಮುಚ್ಚಿ ಹೋಗುವಷ್ಟು ಹೂ ಚೆಲ್ಲಿ ಸ್ವಾಗತಿಸಬಹುದು, ಮೋದಿ ಇಲ್ಲಿ ಬಂದು ಕನ್ನಡದಲ್ಲಿ ಮಾತಾಡಬಹುದು, ಮೋದಿ ಬಂದ ಕಾರನ್ನು ಹೂವಿನಿಂದ ಮುಚ್ಚುವಷ್ಟರ ಮಟ್ಟಿಗೆ ಹೂಮಳೆ ಸುರಿಸಿದ್ದನ್ನು ವಿಶುವಲ್‌ ಎಫೆಕ್ಟ್‌, ಬ್ಯಾಗ್‌ ಗ್ರೌಂಡ್‌ ಎಫೆಕ್ಟ್‌ ಮೂಲಕ ಎಡಿಟ್‌ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಬೂಸ್ಟ್‌ ಮಾಡಿ ಮನಬಂದಂತೆ ಹಬ್ಬಿಸಬಹುದು ಆದರೇ, ಜನರನ್ನು ಗೆಲ್ಲುವುದಕ್ಕೆ ಜನಸ್ನೇಹಿ ಕಾರ್ಯಗಳಿಲ್ಲದೇ ಇವು ಯಾವುದೂ ಕೂಡ ಕೆಲಸ ಮಾಡುವುದಿಲ್ಲ. ಸೋಶಿಯಲ್‌ ಮೀಡಿಯಾಗಳ ಮೂಲಕ ಈ ಹಿಂದೆ ಜನರ ತಲೆಗೆ ಸುಳ್ಳನ್ನು ಕಂಪ್ಯೂಟ್‌ ಮಾಡಿದರೇ ಆಯ್ತು ಒಂದು ಚುನಾವಣೆಯನ್ನೇ ಗೆಲ್ಲಬಹುದು ಅಂದುಕೊಂಡರೇ ಅದಕ್ಕಿಂತ ದೊಡ್ಡ ದಡ್ಡತನವಿಲ್ಲ. ಇದನ್ನು ಹೊರತಾಗಿ ಹೊಸ ನಾಟಕೀಯ ತಂತ್ರಗಳನ್ನು ರೂಪಿಸದ ಹೊರತು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಕೆಲವು ಮಾಧ್ಯಮಗಳು ಎಷ್ಟೋ ಚುನಾವಣೆಗಳಲ್ಲಿ ಒಂದು ರಾಜಕೀಯ ಪಕ್ಷವನ್ನು ಸೋಲಿಸುವಲ್ಲಿ, ಇನ್ನೊಂದು ಪಕ್ಷವನ್ನು ಗೆಲ್ಲಿಸುವಲ್ಲಿ ಕೆಲಸ ಮಾಡಿದ್ದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಗಳನ್ನು ಹಬ್ಬಿಸುವುದರ ಮುಖೇನ ಸತ್ಯವನ್ನು ಸುಳ್ಳಾಗಿ ಮತ್ತು ಸುಳ್ಳನ್ನು ಸತ್ಯವನ್ನಾಗಿ ಮಾಡಬಹುದು ಎಂಬ ಕನಸಲ್ಲಿಯೇ ರಾಜಕೀಯ ಮಾಡುತ್ತಿದ್ದರೇ, ಅದು ನನಸಾಗುವುದಕ್ಕೆ ಸಾಧ್ಯವಿಲ್ಲ. ಜನರು ಬುದ್ಧಿವಂತರು, ಜನ ಈ ರಾಜಕೀಯದಿಂದ ಬೇಸತ್ತಿದ್ದಾರೆ. ಈ ಚುನಾವಣೆಯ ಗೆಲುವು ಅಷ್ಟು ಸುಲಭವಿಲ್ಲ. ಜನರಿಗೆ ಹೊಸತನ ಬೇಕಿದೆ. ಈ ಗಲಾಟೆ ಗದ್ದಲ ದೊಂಬಿ ರಾಜಕಾರಣದಿಂದ ಜನ ಸುಸ್ತಾಗಿದ್ದಾರೆ ಎನ್ನುವುದಂತೂ ಸತ್ಯ. ಇನ್ನು ಯಾವ ಪಕ್ಷಕ್ಕೂ ಬಹುಮತದ ದಾರಿ ಸುಲಭವಿಲ್ಲ ಎನ್ನುವುದು ಸ್ಪಷ್ಟ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ. ಏನೆಲ್ಲಾ ಆಗುತ್ತದೆ ಎಂದು  ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ  


Thursday, March 9, 2023

ಮ್ಯಾಚ್‌ ವಿನ್ನರ್‌ ಇಲ್ಲದ ಬಿಜೆಪಿ ಮತ್ತು ಬಹುಮತದ ಕನಸು !

ಆಪರೇಷನ್‌ ಕಮಲದ ಮೂಲಕವೇ ಅಧಿಕಾರಕ್ಕೇರಿದ ಬಿಜೆಪಿ ಸಾಗಿ ಬಂದ ದಾರಿ .!  

ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪರಿಗೆ ಸಲ್ಲುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಷಯವನ್ನು ಸ್ವತಃ ಬಿಜೆಪಿ ಮರೆತರೂ, ರಾಜ್ಯದ ಜನ ಮರೆಯುವುದಕ್ಕೆ ಸಾಧ್ಯವಿಲ್ಲ. ಯಡಿಯೂರಪ್ಪ ತಮ್ಮ ರಾಜಕೀಯದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದರೂ, ಉಳಿದವರಂತೆ ಗಲಾಟೆ ಎಬ್ಬಿಸುವ/ಸಿದ ರಾಜಕಾರಣಿ ಅಲ್ಲ.  ಯಡಿಯೂರಪ್ಪ ಅವರ ರಾಜಕೀಯ ಜೀವನವನ್ನು ಅರ್ಥೈಸಿಕೊಂಡವರಿಗೆ ಅವರೊಬ್ಬ ಛಲವಾದಿ, ವಿಶಿಷ್ಟ ಕುತೂಹಲ ಗಣಿಯ ರಾಜಕರಾಣಿ ಎಂಬುವುದು ಅರ್ಥವಾಗುತ್ತದೆ. ಮೈತ್ರಿಯೋ, ವಾಮ ಮಾರ್ಗವೋ ಅಥವಾ ರಾಜಕೀಯ ವ್ಯಾಪಾರವೋ ಅದು ರಾಜಕೀಯದ ಎರಡನೇ ಹಂತದ ಚರ್ಚೆ. ಹೇಳ ಹೆಸರಿಲ್ಲದ ಪಕ್ಷವನ್ನು ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ತನ್ನ ಸಮುದಾಯದ ಪ್ರಬಲ ಬೆಂಬಲದೊಂದಿಗೆ, ಹೋರಾಟದೊಂದಿಗೆ ಅಧಿಕಾರಕ್ಕೆ ತಂದಿದ್ದಕ್ಕೆ ಸಿದ್ಧಾಂತವನ್ನು ಮೀರಿ ಮೆಚ್ಚಲೇ ಬೇಕು. 

ಸದ್ಯ ಚುನಾವಣಾ ರಾಜಕೀಯದಿಂದ ಹೊರಗುಳಿಯಲಿರುವ ಯಡಿಯೂರಪ್ಪ ಮುಂದಿನ ವಿಧಾನ ಸಭಾ ಚುನಾವಣೆಗೆ ಹೇಗೆ ಕಣದಿಂದ ಹೊರಗುಳಿದು ಪ್ರಭಾವ ಬೀರಲಿದ್ದಾರೆ ಎನ್ನುವುದು ರಾಜ್ಯ ರಾಜಕಾರಣದ ಕುತೂಹಲ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದ ನಂತರ ಬಿಜೆಪಿ ಲಿಂಗಾಯತ ಮತಗಳಿಗೆ ಹೆದರಿದ್ದಂತೂ ಅಕ್ಷರಶಃ ಸತ್ಯ. ಹಾಗಾಗಿಯೇ ಮತ್ತೆ ಮತ್ತೆ ಯಡಿಯೂರಪ್ಪರನ್ನು ಎಂದೂ ಇಲ್ಲದಂತೆ ಚುನಾವಣೆಗಾಗಿ ಯುಗ ಪುರುಷನಂತೆ ಮೋದಿ ಸೇರಿ ಎಲ್ಲರೂ ಹೊಗಳುತ್ತಿರುವುದು, ಲಿಂಗಾಯತ ದಾಳವನ್ನು ಪ್ರಯೋಗಿಸುತ್ತಿರುವುದು ಬಿಜೆಪಿಯ ಅಸಹಾಯಕೆತಯನ್ನು ಎತ್ತಿ ತೋರಿಸುತ್ತಿದೆ. ಇನ್ನು, ಸ್ವತಃ ಲಿಂಗಾಯತ ಸಮುದಾಯದಿಂದ ಬಂದ ಒಬ್ಬ ನಾಯಕನನ್ನು ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿ ಮುಖ್ಯಮಂತ್ರಿ ಸ್ಥಾನದಿಂದ ಏಕಾಏಕಿ ಕೆಳಗಿಸಿದ ಬಿಜೆಪಿ ಹೈಕಮಾಂಡ್‌ ಕರ್ನಾಟಕದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಈಗ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ರಾಜಕೀಯ ಜೀವನ ಮುಗಿಸಿದ್ದು ಕಾಂಗ್ರೆಸ್‌ ಎಂದು ಹೇಳುವ ಮೂಲಕ ಮತ್ತೆ ಮತ್ತೆ ಚುನಾವಣಾ ಫಲಿತಾಂಶದ ನಿರ್ಣಾಯಕ ಸಮುದಾಯ ಎಂದೇ ಕರೆಸಿಕೊಳ್ಳುವ ಲಿಂಗಾಯತ ಮತಗಳನ್ನು ಓಲೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವುದನ್ನು ಗಮನಿಸಿದರೇ, ಇದೊಂದು ಬಿಜೆಪಿ ವಿರಚಿತ ರಾಜಕೀಯದ ಹೊಸ ಹಾಸ್ಯ ಪ್ರಸಂಗವೇ ಎಂಬಂತೆ ಕಾಣಿಸುತ್ತಿದೆ. ಇದು ಬಿಜೆಪಿಗೆ ಯಡಿಯೂರಪ್ಪರ ರಾಜಕೀಯದ ಇರುವಿಕೆಯ ಮಹತ್ವವನ್ನು ತಡವಾಗಿಯಾದರೂ  ತೋರಿಸಿಕೊಟ್ಟಂತಿದೆ ಎಂಬುವುದು ಪದಶಃ ಸತ್ಯ.  

೨೦೦೬ರಲ್ಲಿ ಅಚ್ಚರಿ ಮೂಡಿಸಿದ್ದರು ಯಡಿಯೂರಪ್ಪ.. ! :  ಅದು ೨೦೦೪ರ ವಿಧಾನಸಭಾ ಚುನಾವಣೆಯ ಸಂದರ್ಭ. ಅಂದು ಆಡಳಿತದಲ್ಲಿದ್ದ ಪಕ್ಷದ ಮೇಲೆ ಜನರ ಒಲವಿರಲಿಲ್ಲ. ವಿರೋಧ ಪಕ್ಷ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿತ್ತು. ಅಂದು ಯಡಿಯೂರಪ್ಪ ಹಾಗೂ ದಿವಂಗತ ಅನಂತ ಕುಮಾರ್‌ ಜೋಡಿ ರಾಜ್ಯದಲ್ಲಿ ಕಮಲ ಅರಳಿಸುವ ಕನಸು ಕಂಡಿದ್ದರು. ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ಮಾತುಗಳೇ ರಾಜಕೀಯ ಪಡಸಾಲೆಯಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದವು. ಆದರೇ, ಜೆಡಿಎಸ್‌ ಅಂದು ಗಳಿಸಿದ್ದ ೫೮ ಕ್ಷೇತ್ರಗಳು ಯಡಿಯೂರಪ್ಪ, ಅನಂತಕುಮಾರ್‌ ಜೋಡಿ ಕನಸನ್ನು ಭಗ್ನ ಗೊಳಿಸಿತ್ತು. ಬಿಜೆಪಿ ೭೯ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್‌ ೬೫ ಸ್ಥಾನಕ್ಕಿಳಿದು ತೀವ್ರ ಮುಖಭಂಗಕ್ಕೊಳಗಾಯ್ತು. ಫಲಿತಾಂಶದಲ್ಲಿ ದೊಡ್ಡ ಪಕ್ಷವೆಂದು ಬಿಜೆಪಿ ಹೊರಹೊಮ್ಮಿದರೂ ಕೂಡ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಯಡಿಯೂರಪ್ಪರ ತಂಡವನ್ನು ವಿರೋಧಪಕ್ಷದಲ್ಲಿ ಕುಳ್ಳಿರಿಸಿತ್ತು. ದೇವೇಗೌಡರ ಕೃಪಾಶೀರ್ವಾದದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಧರಂಸಿಂಗ್‌ ಆಯ್ಕೆಯಾದರು. ಯಡಿಯೂರಪ್ಪ ಸುಮ್ಮನಾಗಲಿಲ್ಲ. ಕುಮಾರ ಸ್ವಾಮಿಯರನ್ನು ಮೈಂಡ್‌ ವಾಶ್‌ ಮಾಡಿ, ಹಿರಿಗೌಡರಿಗಿಂತ ನಿಮ್ಮ ಮಾತಿಗೆ ಶಾಸಕರು ತಲೆತೂಗಬಲ್ಲರು ಎಂದು ತಿಳಿಸಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಮುರಿಯುವಲ್ಲಿ ಯಡಿಯೂರಪ್ಪ ತಂತ್ರಗಾರಿಕೆ ಹೂಡಿದ್ದರು. ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಕುಮಾರಸ್ವಾಮಿಯವರನ್ನು ಮನವೊಲಿಸಿ, ಯಾವ ಗೌಡರ ಪಕ್ಷ ಬಿಜೆಪಿಯನ್ನು ಕೋಮುವಾದಿ ಪಕ್ಷವೆಂದು ತೆಗಳುತ್ತಿತ್ತೋ ಅದೇ ಪಕ್ಷದೊಂದಿಗೆ ಮೈತ್ರಿ ಕುದಿರಿಸಿದ್ದರು ಯಡಿಯೂರಪ್ಪ. ಆ ಮೂಲಕ ಬಿಜೆಪಿಯನ್ನು ಮೊಟ್ಟ ಮೊದಲ ಭಾರಿಗೆ ಅಧಿಕಾರದ ಸ್ಥಾನದಲ್ಲಿ ಕೂರಿಸಿದ್ದರು. 

ಧರಂ ಸಿಂಗ್‌ ನೇತೃತ್ವದ ಸರ್ಕಾರ ಪತನವಾಯ್ತು. ಕುಮಾರ ಸ್ವಾಮಿಯೊಂದಿಗೆ ಬಂದ ಜೆಡಿಎಸ್‌ ನ ೪೬ ಶಾಸಕರು ಹಾಗೂ ಬಿಜೆಪಿಯ ೭೯ ಶಾಸಕರು ಸೇರಿ ಬಿಜೆಪಿ ಜೆಡಿಎಸ್‌ ಮೈತ್ರಿಗೆ ಕುಮಾರ ಸ್ವಾಮಿ, ಯಡಿಯೂರಪ್ಪ ಕಾರಣರಾದರು. ೨೦ : ೨೦ ಸರ್ಕಾರದಲ್ಲಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರೇ, ಯಡಿಯೂರಪ್ಪ ಹಣಕಾಸು ಖಾತೆಯೊಂದಿಗೆ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು. ನಂತರ ಮೈತ್ರಿಯ ಒಪ್ಪಂದದಂತೆ ೧೨.೧೧.೨೦೦೭ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮೂಲಕ ದಕ್ಷಿಣ ಭಾರತದಲ್ಲಿಯೇ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು.  ಜೆಡಿಎಸ್‌ ಬಿಜೆಪಿ ಮೈತ್ರಿ ನೋಡಿ ಇಡೀ ದೇಶದ ರಾಜಕೀಯ ವಲಯವೇ ಅಚ್ಚರಿಗೊಳಗಾಯ್ತು. ಇನ್ನು, ಈವರೆಗೆ ಸಾಮಾನ್ಯ ಒಬ್ಬ ಹೋರಾಟದ ಹಿನ್ನೆಲೆಯಿಂದ ಬಂದ ನಾಯಕ ಎಂದು ಬಿಂಬಿತಗೊಂಡಿದ್ದ ಯಡಿಯೂರಪ್ಪ, ಈ ರಾಜಕೀಯ ಕ್ರಾಂತಿಯಿಂದ ದೇಶಮಟ್ಟದಲ್ಲಿ ಒಬ್ಬ ರಾಜಕೀಯ ಚಾಣಾಕ್ಷನಾಗಿ ಗುರುತಿಸಿಕೊಂಡರು. ಅಲ್ಲಿಂದ ದಕ್ಷಿಣ ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಬಿಜೆಪಿ ಹೆಸರು ಹೆಚ್ಚು ಜನಜನಿತವಾಗುವುದಕ್ಕೆ ಪ್ರಾರಂಭವಾಯಿತು. 

೨೦೦೮ : ರಾಜ್ಯ ರಾಜಕಾರಣದ ಬದಲಾದ ದೆಸೆ :  ೨೦೦೬ರ ಹೋರಾಟ ಅನೇಕ ಏರಿಳಿತವನ್ನು ಕಾಣುವಂತೆ ಮಾಡಿತು. ೨೦೦೮ರ ವಿಧಾನ ಸಭಾ ಚುನಾವಣೆಯಲ್ಲಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ, ೧೧೦ ಸ್ಥಾನಗಳನ್ನು ಗೆದ್ದು ಕೇವಲ ಮೂರು ಸ್ಥಾನಗಳ ಕೊರತೆಯಿಂದ ಅಧಿಕಾರದಿಂದ ದೂರ ಉಳಿಯುವಂತಾಯಿತು. ಮತ್ತೆ ಸುಮ್ಮನಾಗದ ಯಡಿಯೂರಪ್ಪ ಪಕ್ಷೇತರ ಶಾಸಕರನ್ನು, ಕಾಂಗ್ರೆಸ್‌ ಜೆಡಿಎಸ್‌ ಶಾಸಕರ ಮನಸೆಳೆದು ಆಪರೇಷನ್‌ ಕಮಲ ಮಾಡಿದ್ರು, ೧೬ ಉಪಚುನಾವಣೆಯಲ್ಲಿ ತನ್ನನ್ನು ನಂಬಿ ಬಂದವರನ್ನು ಗೆಲ್ಲಿಸಿದರು. ಈ ಮೂಲಕ ಉಪ ಚುನಾವಣೆಯಲ್ಲೂ ಗೆಲುವು ತಂದುಕೊಡುವ ಚಾಣಾಕ್ಷನಾಗಿ ಗುರುತಿಸಿಕೊಂಡರು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಗಳಾದರು. 

ಇನ್ನು, ಯಡಿಯೂರಪ್ಪ ಹಾಗೂ ಬಿಜೆಪಿ ಆಡಳಿತದ ಮೇಲೆ ಸಾರ್ವಜನಿಕ ವಲಯದಿಂದ ಕಟುಟೀಕೆ ಕೇಳಲಾರಂಭಿಸಿತ್ತು. ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ಲೈಂಗಿಕ ಹಗರಣ ಮೊದಲಾದ ಆರೋಪಗಳಿಂದ ಬಿಜೆಪಿಯ ವರ್ಚಸ್ಸು ನೆಲಕಚ್ಚಿತ್ತು. ೨೦೦೮ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಹೆಮ್ಮೆ ಪಟ್ಟಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು, ಕರ್ನಾಟಕದ ಹೆಸರು ಹೇಳಿದರೇ, ಉದಾಸೀನದಂತೆ ನೋಡುವಂತಹ ವಾತಾವರಣ ಸೃಷ್ಟಿ ಆಯ್ತು. 

ಮೂರು ಮುಖ್ಯಮಂತ್ರಿಗಳ ಸರ್ಕಾರ :  ಬಿಜೆಪಿ ಸರ್ಕಾರದ ಆರಂಭದಲ್ಲಿ ಮೂರು ವರ್ಷ ಎರಡು ತಿಂಗಳು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತು ೩೧. ೦೭. ೨೦೧೧ರಲ್ಲಿ ರಾಜೀನಾಮೆ ನೀಡಿ, ಸೆರೆಮನೆಗೆ ಹೋಗುವಂತಾಯಿತು. ಬಳಿಕ ಮುಖ್ಯಮಂತ್ರಿಯಾದ ಡಿ. ವಿ. ಸದಾನಂದ ಗೌಡ ೧೧ ತಿಂಗಳು ೫ ದಿನ ಆಡಳಿತ ನಡೆಸಿ ಜಗದೀಶ್ ಶೆಟ್ಟರ್‌ ಗೆ ಜಾಗ  ಬಿಟ್ಟುಕೊಟ್ಟರು. ಇದು ಬಿಜೆಪಿ ಮೇಲೆ ಸಾರ್ವಜನಿಕ ವಲಯದಲ್ಲಿ ಸಿಟ್ಟೆಬ್ಬಿಸಿತ್ತು.     

ಈ ಸ್ಥಿತಿ ರಾಜ್ಯ ರಾಜಕಾರಣದಲ್ಲಿ ಮೊದಲಾದದ್ದಲ್ಲ ಎನ್ನುವುದು ಗಮನಾರ್ಹ. ೧೯೮೯ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಒಳಜಗಳ ಹಾಗೂ ಹಗರಣಗಳಿಂದ ಮೂರು ಮುಖ್ಯಮಂತ್ರಿಗಳನ್ನು ಕಂಡಿತ್ತು. ೧೯೮೯ರಲ್ಲಿ ವೀರೇಂದ್ರ ಪಾಟೀಲ ಸರಕಾರ ರಚಿಸಿದರು. ಹನ್ನೊಂದು ತಿಂಗಳಿಗೇ ಅವರನ್ನು ಬದಲಾಯಿಸಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾದರು. ಉತ್ತಮವಾಗಿಯೇ ಆಡಳಿತ ನಡೆಸುತ್ತಿದ್ದ ಪಾಟೀಲರನ್ನು ಕೆಳಗಿಳಿಸಲು ಆನಾರೋಗ್ಯ ನೆಪ ಮಾಡಲಾಗಿತ್ತು ಎಂಬ ಚರ್ಚೆಗಳಾಗಿತ್ತು. ನಂತರ ಮುಖ್ಯಮಂತ್ರಿಯಾದ ಬಂಗಾರಪ್ಪನವರು ಕ್ಲಾಸಿಕ್ ಕಂಪ್ಯೂಟರ್ ಹಗರಣದಿಂದಾಗಿ ಎರಡು ವರ್ಷದಲ್ಲಿ ಅಧಿಕಾರ ಕಳೆದುಕೊಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಇನ್ನು, ೨೦೧೩ ರಲ್ಲಿ ಬಿಜೆಪಿಯೊಂದಿಗಿನ ಭಿನ್ನಮತದಿಂದಾಗಿ ಯಡಿಯೂರಪ್ಪ ಕೆಜೆಪಿ ಕಟ್ಟಿದ್ರು. ಈ ಕಾರಣದಿಂದಾಗಿ ಬಿಜೆಪಿ ೪೦ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ೧೨೨ ಶಾಸಕರ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಸರ್ಕಾರದಲ್ಲಿನ  ಹಗರಣ, ಪಕ್ಷ ತೊರೆದ ಯಡಿಯೂರಪ್ಪರ ನಿರ್ಧಾರ ಬಿಜೆಪಿಗೆ ಮರ್ಮಾಘಾತವನ್ನೇ ನೀಡಿತ್ತು. ೨೦೧೮ರಲ್ಲಿ ಬಿಜೆಪಿ ೧೦೪ ಸ್ಥಾನಗಳು ಗಳಿಸಿದ್ದರೂ ೨೦೦೪ ರ ರಾಜಕೀಯ ಮತ್ತೆ ಮರುಕಳಿಸಿತ್ತು. ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯ್ತು. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲಿ ಅಧಿಕಾರದ ಆಸೆ ಬಿಟ್ಟು ಕೂತಿತ್ತು. ಯಡಿಯೂರಪ್ಪ ಸೋಲೊಪ್ಪಲಿಲ್ಲ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೨೮ ಲೋಕಸಭಾ ಕ್ಷೇತ್ರದಲ್ಲಿ ೨೫ ಸ್ಥಾನ ಬಿಜೆಪಿ ಗೆಲ್ಲುವಂತೆ ಮಾಡುವಲ್ಲಿ ಯಡಿಯೂರಪ್ಪ ಪಾತ್ರ ದೊಡ್ದದು. ಮೋದಿ ಹವಾ ಯಡಿಯೂರಪ್ಪರ ಮರ್ಯಾದೆ ಉಳಿಸಿತ್ತು. ಹೈಕಮಾಂಡ್‌ ಗೆ ಯಡಿಯೂರಪ್ಪರ ಮೇಲೆ ಹೊಸ ಭರವಸೆ ಹುಟ್ಟಿತು. ಯಡಿಯೂರಪ್ಪ ಕೇಳಿದ್ದಕ್ಕೆಲಾ ಅಸ್ತು ಎಂದಿತು. ೨೦೧೯ರ ಜುಲೈ ೨೬ರಂದು ಯಡಿಯೂರಪ್ಪ ಮತ್ತೆ ಅಚ್ಚರಿ ಹುಟ್ಟಿಸಿದ್ದರು ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರದ ೧೭ ಶಾಸಕರನ್ನು ಓಲೈಸಿ ಮೈತ್ರಿ ತೊರೆಯುವಂತೆ ಮಾಡಿದರು. ಉಪಚುನಾವಣೆಯಲ್ಲಿ ೧೫ ಶಾಸಕರನ್ನು ಗೆಲ್ಲಿಸಿ ಸರ್ಕಾರ ರಚಿಸಿ ತನ್ನನ್ನ ನಂಬಿ ಬಂದ ೧೧ ಮಂದಿ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿದರು. 

ಇದಾದ ಮೇಲೆ ನಡೆದ ರಾಜಕೀಯ ಹೈಡ್ರಾಮ ಗೊತ್ತಿರುವ ವಿಷಯ. ಯಡಿಯೂರಪ್ಪ ಪದತ್ಯಾಗ, ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಚ್ಚರಿಯ ಆಯ್ಕೆ, ಮತ್ತೆ ಭ್ರಷ್ಟಾಚಾರ, ಹಗರಣ, ಲೈಂಗಿಕ ಆರೋಪ. ಇಷ್ಟಾಗಿಯೂ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂಬ ಭರವಸೆಯಲ್ಲಿದೆ. ಇತ್ತ ಯಡಿಯೂರಪ್ಪ ಚುನಾವಣಾ ಕಣದಲ್ಲಿಲ್ಲ. ಬಿಜೆಪಿಯಲ್ಲಿ ಬಾಯಿ ತೆರೆದರೇ, ಗಲಾಟೆ ಎಬ್ಬಿಸುವ ಹರಕು ಬಾಯಿಯ ನಾಯಕರುಗಳಿದ್ದಾರೆ ಹೊರತಾಗಿ ಯಡಿಯೂರಪ್ಪರಂತೆ ಮೈತ್ರಿ ಕುದುರಿಸುವ ಚಾಣಾಕ್ಷತನ ಇರುವವರೂ ಇಲ್ಲ. ಇನ್ನು, ಈಗಾಗಲೇ, ಯಡಿಯೂರಪ್ಪ ಚುನಾವಣಾ ಕಣದಲ್ಲಿರುವಾಗಲೇ  ಬಿಜೆಪಿಗೆ ಬಹುಮತ ಬಂದಿಲ್ಲ. ಇನ್ನು ಬಂದೀತೇ..? ಎಂಬ ಚರ್ಚೆಯೂ ರಾಜಕೀಯ ಪಡಸಾಲೆಯಲ್ಲಿ ಎದ್ದಿದ್ದು, ಅಧಿಕಾರಕ್ಕಾಗಿ ಬಿಜೆಪಿ ಏನು ರಾಜಕೀಯ ಮಾಡಲಿದೆ ಎನ್ನುವುದು ಸದ್ಯದ ಕುತೂಹಲ. 

-ಶ್ರೀರಾಜ್‌ ವಕ್ವಾಡಿ  

 


Monday, March 6, 2023

19.20.21 : ಬದುಕುಳಿಯುವುದಕ್ಕೆ ಪ್ರಯತ್ನಿಸುವ ಉಸಿರನ್ನು ಹೊಸಕುವ ಕಥೆ

“19.20.21” ಸಿನೆಮಾ, ಈ ಸಮಾಜದ ವ್ಯವಸ್ಥೆಯ ಭಂಜನೆ, ನೆತ್ತರು, ಮೌನ, ಅಸಹಾಯಕತೆ, ಅಧಿಕಾರ ದರ್ಪ, ಆರೋಪ, ಅನ್ಯಾಯಗಳ ರಾಕ್ಷಸೀಯತೆ, ಗದ್ಗದಿತ ಧ್ವನಿ, ನೈರಾಶ್ಯದ ನಡುವಿನ ಆಶಾವಾದವನ್ನು ಈ ಸಮಾಜದ ಮುಖಕ್ಕೆ ರಾಚುವಂತೆ ತೋರಿಸಿದೆ. 

ಸಂವಿಧಾನದ ಅಡಿಯಲ್ಲಿ ಸ್ವಾತಂತ್ರ್ಯ ಸ್ವೀಕಾರದ ದೊಡ್ಡ ಭ್ರಮೆಯಲ್ಲಿಯೇ ಈ ಸಮಾಜದ ಘಾತುಕ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ಸಮಾಜ ಮಾಡಿಕೊಳ್ಳಲೇ ಬೇಕಾದ ಒಂದು ಗಂಭೀರ ಆತ್ಮಾವಲೋಕಕ್ಕೆ ಈ ಸಿನೆಮಾ ದೂಡುತ್ತದೆ. ಕಥೆಯನ್ನು ದೃಶ್ಯ ರೂಪಕ್ಕೆ ತರುವ ಹೊತ್ತಿಗೆ ಕೆಲವೆಡೆ ಸಿನೆಮಾ ತಂಡ ಒಂದಿಷ್ಟು ತುಸು ಹೆಚ್ಚೇ ವೈಭವೀಕರಿಸಿರಬಹುದು ಎಂದು ನೋಡುಗರಿಗೆ ಅನ್ನಿಸಿದರೂ ಕೂಡ ಈ ಸಮಾಜ ಶೋಷಿತ ವರ್ಗಗಳ ಧ್ವನಿ ಅಡಗಿಸುವ ಪ್ರಯತ್ನದಲ್ಲಿಯೇ ಇಂದಿಗೂ ಇದೆ ಎನ್ನುವುದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. 

ಶೋಷಿತ ಮಲೆಕುಡಿಯ ಸಮುದಾಯ ಒಂದೆಡೆಯಾದರೇ, ಇನ್ನೊಂದೆಡೆ ಆ ನೋವಿಗೆ ಧ್ವನಿಯಾಗುವ ಪಾತ್ರಗಳು ಚಿತ್ರದುದ್ದಕ್ಕೂ ಈ ಸಮಾಜದ ಬಗ್ಗೆ ಚಿಂತನೆಗೊಡ್ಡುತ್ತವೆ. ಈ ಸಮುದಾಯದ ನತದೃಷ್ಟ ಬದುಕಿನ ಸಂಕಷ್ಟ ಪುಟಗಳಿಗೆ ಈ ಸಿನೆಮಾ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದೆ. ಸಿನೆಮಾದ ಮೊದಲರ್ಧದಲ್ಲಿ ನಕ್ಸಲ್‌ ನಿಗ್ರಹ ದಳದವರು ಈ ಅಮಾಯಕ ಜನಾಂಗದವರ ಮೇಲೆ ಕಾನೂನು ಹೇರುವ ಧೋರಣೆ, ನೀಡುವ ಅಮಾನುಷ ಹಿಂಸೆ, ಅಧಿಕಾರ ವರ್ಗದವರು ನುಂಗುಬಾಕತನ, ವಾಸ್ತವದ ಅಸಹಾಯಕತೆ, ಬದುಕಿ ಉಳಿಯುವುದಕ್ಕೆ ಪ್ರಯತ್ನಿಸುವ ಇಂತಹ ಬುಡಕಟ್ಟು ಜನಾಂಗಗಳ ಉಸಿರನ್ನು ಹೊಸಕಿ ಹಾಕುವ ಕಾನೂನಿನ, ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯತೆ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗಳ ಬಗೆಗೆ ಹಾಗೂ ಆದಿವಾಸಿಗಳ ಬಗ್ಗೆ ನಮ್ಮ ಈವರೆಗಿನ ತಿಳುವಳಿಕೆಯನ್ನು ತಿರುಗಿ ನೋಡುವಂತೆ ಮಾಡುತ್ತದೆ.   

ಈ ನೆಲದ ಕೆಲವು ಕಾನೂನುಗಳು ಅರಣ್ಯವಾಸಿಗಳ ಹಕ್ಕುಗಳನ್ನೇ ಅಪಾಯಕ್ಕೀಡು ಮಾಡಿವೆ, ಅರಣ್ಯವಾಸಿಗಳನ್ನು ಅವರ ಪಾರಂಪರಿಕ ಜೀವನ ಪದ್ಧತಿ ಹಾಗೂ ತಲೆತಲೆಮಾರುಗಳಿಂದ ಬದುಕಿ ಬಂದಿರುವ ವಾಸಸ್ಥಾನಗಳಿಂದ ಒಕ್ಕಲೆಬ್ಬಿಸುವ ಆದೇಶಗಳು ನೂರಾರು ಕುಟುಂಬಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿರುವುದನ್ನು ಈ ದೇಶದ ಉದ್ದಗಲಕ್ಕೂ ಕಂಡಿದ್ದೇವೆ. ಇಂತಹ ಜನಾಂಗಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೀವನಪೂರ್ತಿ ಸಂಕಷ್ಟದಲ್ಲಿಯೇ ಬದುಕುವ ಹಾಗೆ ಈ ವ್ಯವಸ್ಥೆಯ ಅಧಿಕಾರಿ ವರ್ಗ ಮಾಡಿದೆ ಎನ್ನುವುದನ್ನು ಕೂಡ ಈ ಸಿನೆಮಾ ಮಾರ್ಮಿಕವಾಗಿ ತೋರಿಸಿಕೊಟ್ಟಿದೆ.  

ಸಿನೆಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೀರ್ಘ ಮೌನ ಹಾಗೂ ಸೂಕ್ಷ್ಮ ಸಂವೇದನೆಗೆ ಒಳಪಡಿಸುವ ಈ ಸಿನೆಮಾ ಇಂತಹ ಕೆಳಸ್ತರದಲ್ಲಿರುವ ಸಮುದಾಯಗಳ ಬಗ್ಗೆ ಒಂದು ಗಂಭೀರ ಚಿಂತನೆಯತ್ತ ಚಿತ್ತ ಹರಿಸುತ್ತದೆ. ಸ್ಥಳೀಯ ರಾಜಕೀಯ ಹಾಗೂ ನಕ್ಸಲ್‌ ರಾಜಕೀಯಗಳ ನಡುವಿನ ಸಂಘರ್ಷದಲ್ಲಿ ಸಿಲುಕುವ ಒಂದು ಅಮಾಯಕ ಸಮುದಾಯ ಹಾಗೂ ಅದು ಕಾಣುವ ಹಿಂಸೆ ನಿಜಕ್ಕೂ ಅಸಹನೀಯ. ದ್ವಿತಿಯಾರ್ಧದಲ್ಲಿ ಕೈಗೆ ಕೊಳ ಹಾಕಿ ಮಂಜುವಿನಿಂದ ಪರೀಕ್ಷೆ ಬರೆಸುವ ದೃಶ್ಯದಿಂದ ಹಿಡಿದು, ಸತ್ಯವನ್ನು ಸುಳ್ಳು ಮಾಡುವುದಕ್ಕೆ ಪೋಲಿಸರು ಹೆಣೆಯುವ ತಂತ್ರ, ಕಾನೂನಿನ ತಡೆ, ಕಾನೂನಿನ ಹೋರಾಟ ಸೇರಿ ಬಹುತೇಕ ಎಲ್ಲಾ ದೃಶ್ಯಗಳೂ ಎದೆಯೊಳಗೆ ಕಿಚ್ಚೆಬ್ಬಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ವಕೀಲ ಸುರೇಶ್‌ ಹೆಗ್ಡೆಯ(ಬಾಲಾಜಿ ಮನೋಹರ್)  ವೃತ್ತಿನಿಷ್ಠೆ, ಪತ್ರಕರ್ತ ವಿಜಯ್‌ ನ (ವೆಂಕಟೇಶ್‌ ಪ್ರಸಾದ್)  ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಹೋರಾಟಗಾರ ರಫೀಯ (ರಾಜೇಶ್‌ ನಟರಂಗ) ಸ್ಥಿತಪ್ರಜ್ಞೆಯೊಳಗೆ ನೋಡುಗನೊಬ್ಬ ಒಂದಾಗುವಂತೆ ಮಾಡುತ್ತದೆ. ಪಾತ್ರಧಾರಿಗಳು ಹಾಗೂ ಸತ್ಯ ಘಟನೆಯ ಈ ಮೂರು ಪಾತ್ರಗಳು ಕೂಡ ಇಂತಹ ಅವ್ಯವಸ್ಥೆಯ ಸಮಾಜದೊಳಗೆ ಅಚ್ಚರಿಯೊಂದಿಗೆ ಮನಸ್ಸಿನಲ್ಲಿ ಎಚ್ಚರದ ಪ್ರಜ್ಞೆಯಾಗಿ ಉಳಿದು ಬಿಡುತ್ತಾರೆ. ಕಥಾನಾಯಕ ಮಂಜು (ಶೃಂಗ ಬಿ.ವಿ), ನಾಯಕನ ತಂದೆ (ಮಹಾದೇವ್ ಹಡಪದ), ರತ್ನಮ್ಮ (ಎಂ ಡಿ. ಪಲ್ಲವಿ) ಪಾತ್ರಗಳು ತಮಗಿರುವ ಮಿತಿಯೊಳಗೆ ಜೀವ ತುಂಬಿಸಿಕೊಂಡಿವೆ.  

ಕನ್ನಡ ಸಿನೆಮಾ ರಂಗದಲ್ಲಿ ಇಂತಹ ಪ್ರಯೋಗಗಳು ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ. ಕಥೆಯನ್ನು ದೃಶ್ಯರೂಪಕ್ಕೆ ತರುವುದು ಅಷ್ಟು ಸುಲಭವಲ್ಲ. ಈ ನೈಜ ಘಟನಾಧಾರಿತ ಸಿನೆಮಾದ ಮೂಲಕ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಇಂತಹ ಅದೆಷ್ಟೋ ಸಮುದಾಯಗಳ ಕೆಟ್ಟ ಸ್ಥಿತಿಯ ಬಗ್ಗೆ ಸಮಾಜಕ್ಕೆ ನೆನಪಿಸಿಕೊಡುವಂತೆ ನಿರ್ದೇಶಕ ಮಂಸೋರೆ ಮತ್ತು ಟೀಂ ಮಾಡಿದೆ. ಸಮಾಜ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.  ಗಂಭೀರ ಮನಸ್ಥಿತಿಯ ಪ್ರತಿರೂಪವಾಗಿ ಮೂಡಿಬಂದ ಈ ಕಥಾವಸ್ತು ಎಲ್ಲಿಯೂ ನೋಡುಗನ ಕುತೂಹಲವನ್ನು ಅಲುಗಾಡಿಸುವುದಿಲ್ಲ. ಇನ್ನು, ಟೀಕೆಗೆ ಅವಕಾಶ ಕೊಡದೇ ಈ ಸಿನೆಮಾ ಆತ್ಮಾವಲೋಕನಕ್ಕೆ ದೊಡ್ಡ ಅವಕಾಶ ಮಾಡಿಕೊಡುತ್ತದೆ ಎನ್ನುವುದು ಗರಿಷ್ಠೀಕರಣವಲ್ಲ. 

-ಶ್ರೀರಾಜ್‌ ವಕ್ವಾಡಿ 


Wednesday, March 1, 2023

ಕಾಂಗ್ರೆಸ್ ನೇತೃತ್ವದ ಚುನಾವಣಾ ಮೈತ್ರಿ ಒಂದು ಮರೀಚಿಕೆ ?


ಅಧಿಕಾರದಲ್ಲಿ ಹೆಚ್ಚು ಪಾಲು ನೀಡುವವರತ್ತ ಪ್ರಾದೇಶಿಕ ಪಕ್ಷಗಳ ಚಿತ್ತ !

೨೦೨೪ ರ ಲೊಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು, ಬಿಜೆಪಿ ವಿರುದ್ಧ ದಿನದಿಂದ ದಿನಕ್ಕೆ ಮಹಾ ಒಕ್ಕೂಟದ ಕೂಗು ಪ್ರಬಲವಾಗುತ್ತಿದೆ. ಕೆಲವು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿಗಾಗಿ ಕಾಂಗ್ರೆಸ್ ಪಕ್ಷದ ಮುಂದಾಳತ್ವಕ್ಕೆ ಕಾಯುತ್ತಿದ್ದರೇ, ಇನ್ನು ಕೆಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೇಸೇತರ ಮುಂದಾಳತ್ವವನ್ನು ಬಯಸುತ್ತಿವೆ ಎನ್ನುವುದು ಸದ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವ ವಿಷಯ. 

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಒಲ್ಲೆ ಎಂದಿದ್ದವು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ, ಹಲವು ರಾಜಕೀಯ ಬೃಹನ್ನಾಟಕಗಳಾದ ಮೇಲೆ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಬಿಜೆಪಿ ವಿರುದ್ಧ ಒಗ್ಗೂಡುವ ರಾಜಕೀಯ ಬಣದ ಮುಂದಾಳು ಎಂದು ಬಿಂಬಿಸಲಾಗಿತ್ತು, ಅದಾಗ್ಯೂ ಹಲವು ಬಾರಿಯ ರಾಷ್ಟ್ರ ರಾಜಧಾನಿಯ ಭೇಟಿ, ಹೈ ಲೆವೆಲ್ ಮೀಟಿಂಗ್ ಗಳ ನಂತರ ಆ ವಿಚಾರ ದೂರ ಸರಿಯಿತು. ಕಾಂಗ್ರೆಸ್ ತಾನೇ ಮುಂದಾಳತ್ವ ವಹಿಸಿಕೊಳ್ಳುವುದಾಗಿ ಹಠ ಹಿಡಿಯಿತು. ತೃಣ ಮೂಲ ಕಾಂಗ್ರೆಸ್ ಸೇರಿ ಹಲವು ರಾಜಕೀಯ ಪಕ್ಷಗಳ ಅಭಿಪ್ರಾಯ ಭಿನ್ನವಾಗಿತ್ತು. 

ಇದೇ ರೀತಿ ಬಿಹಾರದಲ್ಲಿ ಬಿಜೆಪಿ ವಿರುದ್ಧ ಜಯ ಸಾಧಿಸಿ ಆರ್ ಜೆ ಡಿ ಜೊತೆಗೆ ಮೈತ್ರಿ ಮಾಡಿ ಸರ್ಕಾರ ರಚಿಸಿದಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಜೆಪಿ ವಿರೋಧಿ ರಾಜಕೀಯ ಮೈತ್ರಿಗೆ ನೇತಾರ ಎಂದು ಬಿಂಬಿಸಲಾಯಿತು. ನಿತೀಶ್ ಕುಮಾರ್ ಕಾಂಗ್ರೆಸ್ ತೀರ್ಮಾನಕ್ಕೆ ಕಾದು ಕುಳಿತರಾದರೂ, ಕಾಂಗ್ರೆಸ್ ಈ ಬಗ್ಗೆ ಹೆಚ್ಚು ಮನಸ್ಸು ಮಾಡಲಿಲ್ಲ. ಈ ವಿಚಾರವೂ ದೂರ ಸರಿಯಿತು. 

ಕಾಂಗ್ರೆಸ್ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಸ್ಪರ್ಧಿಸಲು ಹೆಣೆದ ದೊಡ್ಡ ಪಬ್ಲಿಕ್ ಈವೆಂಟ್ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ ಸರಿಸುಮಾರು ೪೧೦೦ ಕಿಲೋ ಮೀಟರ್ ಸಾಗಿತ್ತು. ಕಾಂಗ್ರೆಸ್ ದೊಡ್ಡ ಮಟ್ಟಿಗೆ ರಾಜಕೀಯವಾಗಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿತ್ತು. ಮೇಲ್ನೋಟಕ್ಕೆ ಯಾತ್ರೆ ಸಾಗಿದಲ್ಲೆಲ್ಲಾ ಜನರ ಅಭೂತಪೂರ್ವ ಬೆಂಬಲ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ದೊರಕಿತ್ತಾದರೂ ರಾಹುಲ್ ಹಾಗೂ ಕಾಂಗ್ರೆಸ್ ನ ನಿಜ ಉದ್ದೇಶ ಅಷ್ಟಾಗಿ ಫಲಿಸಲಿಲ್ಲ. ರಾಹುಲ್ ಗಾಂಧಿ ಇಡೀ ದೇಶದ ರಾಜಕೀಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡರು ಮತ್ತು ಧ್ವನಿ ಕಳೆದುಕೊಂಡ ವರ್ಗಕ್ಕೆ ಧ್ವನಿಯಾಗುವ ಪ್ರಯತ್ನ ಮಾಡಿದರು. ಆದರೇ, ಕಾಂಗ್ರೆಸ್ ನ ಈ ಪಬ್ಲಿಕ್ ಈವೆಂಟ್ ಭಾರತದುದ್ದಕ್ಕೂ ಪ್ರಾದೇಶಿಕ ಪಕ್ಷಗಳನ್ನು ಓಲೈಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ ಎನ್ನುವುದು ಅಷ್ಟೇ ಸತ್ಯ. ಕಾಶ್ಮೀರದ ಕೆಲವು ಪ್ರಮುಖ ನಾಯಕರು ಹಾಗೂ ತಮಿಳುನಾಡಿನ ಮಕ್ಕಳ್ ನೀಧಿ ಮೈಯಂ ಪಕ್ಷದ ಕಮಲ್ ಹಾಸನ್ ಸೇರಿ ಕೆಲವು ಪ್ರಮುಖರನ್ನು ಹೊರತಾಗಿ ಇತರೆ ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರಿಗೆ ರಾಹುಲ್ ಖುದ್ದಾಗಿ ಆಹ್ವಾನ ಇತ್ತಿದ್ದರೂ ಕೂಡ, ಮತ್ಯಾರು ರಾಹುಲ್ ಗಾಂಧಿಗೆ ಯಾತ್ರೆಯಲ್ಲಿ ಬೆಂಬಲ ಸೂಚಿಸಿಲ್ಲ. ಇದು ರಾಹುಲ್ ಗಾಂಧಿ ಒಂದು ರೀತಿಯಲ್ಲಿ ಮುಖಭಂಗವಾಯ್ತು. 

ಹಾಗಾದರೇ ಈ ವಿರೋಧ ಪಕ್ಷಗಳ ಮೈತ್ರಿ ಒಂದು ಮರೀಚಿಕೆಯೇ ? ಅಥವಾ ಮೋದಿಯನ್ನು ರಾಜಕೀಯವಾಗಿ ಮಣಿಸುವ ಘನ ಉದ್ದೇಶದಿಂದ ವಿರೋಧ ಪಕ್ಷಗಳು ರಹಸ್ಯವಾಗಿ ಮೈತ್ರಿ ರೂಪು ಪಡೆಯುತ್ತಿವೆಯೇ ಎನ್ನುವುದು ೨೦೨೪ರ ಲೋಕಸಭಾ ಚುನಾವಣೆಯ ಮುಂದಿರುವ ಕುತೂಹಲಕಾರಿ ಪ್ರಶ್ನೆ. ಒಂದು ವೇಳೆ ರಾಜಕೀಯವಾಗಿ ಬಿಜೆಪಿಯನ್ನು ಶತಾಯಗತಾಯ ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ಒಂದಾದರೇ, ಬಹುಶಃ ರಾಜಕೀಯದ ಇತಿಹಾಸದಲ್ಲೊಂದು ದಿನ ಒಂದು ರಾಷ್ಟ್ರೀಯ ಪಕ್ಷದ ವಿರುದ್ಧವಾಗಿ ವಿರೋಧ ಪಕ್ಷಗಳು ಒಂದಾದದ್ದನ್ನು ಈ ದೇಶ ಅಚ್ಚರಿಯಾಗಿ ಕಾಣಬಹುದು. ಇನ್ನು, ಈ ಹಿಂದೆಯೂ ದೇಶದ ಇತಿಹಾಸದಲ್ಲಿ ಒಂದು ರಾಜಕೀಯ ಸಿದ್ಧಾಂತದ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಿದ್ದು ಇದೆ (೧೯೬೭. ೧೯೭೭, ೧೯೮೯ರಲ್ಲಿ ವಿರೋಧ ಪಕ್ಷಗಳು ಸೇರಿಕೊಂಡು ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದಕ್ಕೆ ಬೇಕಾದ ಎಲ್ಲಾ ತಂತ್ರಗಳನ್ನು ಹೂಡಿದ್ದವು) ಆದರೂ, ಈ ಮಟ್ಟಿಗೆ ಆಡಳಿತ ವಿರುದ್ಧಕ್ಕಾಗಿ ಹುಟ್ಟಿಕೊಂಡ ಮೈತ್ರಿ ಇಲ್ಲ. ಅಂದಿನ ಸನ್ನಿವೇಶಕ್ಕೂ ಇಂದಿನ ಸನ್ನಿವೇಶಕ್ಕೂ ವ್ಯತ್ಯಾಸಗಳಿವೆ ಎನ್ನುವುದು ಗಮನಾರ್ಹ. ಹಾಗಾಗಿ ದೇಶ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ನಡುವೆ ರಾಜಕೀಯ ಅಸ್ಥಿರತೆ ಇರುವ ಸಂದರ್ಭದಲ್ಲಿ ಮೈತ್ರಿ ಆದರೇ ಮತ್ತು ಗೆದ್ದರೇ, ಈ ದೇಶದ ಇತಿಹಾಸದಲ್ಲಿ ಒಂದು ರಾಜಕೀಯ ಅಚ್ಚರಿಯಾಗಬಹುದು. 

ಒಂದಿಷ್ಟು ಹಿಂದಕ್ಕೆ ಹೋಗೋಣ, ೧೯೬೭ರಲ್ಲಿ ಕಾಂಗ್ರೆಸ್ ಅಜೇಯ ಏಂದು ಭಾವಿಸಿದ್ದಾಗ, ವಿರೋಧ ಪಕ್ಷಗಳ ಮೈತ್ರಿ ಅಸಾಧ್ಯವಾದದ್ದನ್ನು ಮಾಡಿ ತೋರಿಸಿತ್ತು, ಅಂದು ವಿರೋಧ ಪಕ್ಷಗಳು ಒಂಬತ್ತು ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ೧೯೭೭ರಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿತು. ೧೯೮೯ರಲ್ಲಿ ಲೋಕಸಭೆಯಲ್ಲಿ ೪೦೦ಕ್ಕೂ ಹೆಚ್ಚು ಸಂಸದೀಯ ಸ್ಥಾನಗಳನ್ನು ಹೊಂದಿದ್ದ ಸರ್ಕಾರವು ಬೋಫೋರ್ಸ್ ಹಗರಣದ ಕಾರಣದಿಂದ ಹೀನಾಯ ಸೋಲು ಅನುಭವಿಸಿತ್ತು. 

ಇಂದು ಕಾಂಗ್ರೆಸ್ ಚಕ್ರಾಧಿಪತ್ಯದಲ್ಲಿದ್ದ ದೇಶವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಭಾರತ ರಾಜಕೀಯವಾಗಿ, ಸಾಮಾಜಿಕವಾಗಿ, ಸೈದ್ಧಾಂತಿಕವಾಗಿ ಬದಲಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯದ ಮೂಲ ಮಾದರಿಯು ಟೆಕ್ನೋನಿಕ್ ಶಿಫ್ಟ್ ಅನ್ನು ಕಂಡುಕೊಂಡಿದೆ. ಒಂದೆಡೆ ಆಡಳಿತ ವ್ಯವಸ್ಥೆ ಪೂರ್ತಿ ಸೈದ್ಧಾಂತಿಕವಾದಾಗ, ಇನ್ನೊಂದೆಡೆ ವಿರೋಧ ಬಣ ಅದರ ಸಿದ್ಧಾಂತವನ್ನು ಕಿತ್ತೆಸೆಯುವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬೆಳೆದಿದೆ. ಬಿಜೆಪಿ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿಕೊಳ್ಳುವ ಪಕ್ಷಗಳು ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಬಹುತೇಕ ಪ್ರಾದೇಶಿಕ ವಿರೋಧಿ ರಾಜಕೀಯ ಪಕ್ಷಗಳ ನಾಯಕರಿಗೆ ರಾಷ್ಟ್ರೀಯ ದೃಷ್ಟಿಕೋನ ಇಲ್ಲ, ಹಿಂದಿನ ಪ್ರಮುಖ ಮೂರು ರಾಜಕೀಯ ಸ್ಟ್ರೀಮ್ ಗಳು - ಜನಸಂಘ ಮತ್ತು ನಂತರ ಬಿಜೆಪಿ, ಸಮಾಜವಾದಿ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಬದಲಾಯಿಸಲು ಹೋರಾಡುತ್ತಿದ್ದವು. ಭಾರತದ ಬಗ್ಗೆ ಅವು ಸ್ಪಷ್ಟವಾದ ಸೈದ್ಧಾಂತಿಕ ತಿಳುವಳಿಕೆಯನ್ನು ಹೊಂದಿದ್ದವು. ರಾಜಕೀಯ ಸಿದ್ಧಾಂತಗಳಲ್ಲಿ ಸ್ಪಷ್ಟ ದೃಷ್ಟಿ ಇತ್ತು. ಭಾರತದ ಭವಿಷ್ಯಕ್ಕಾಗಿ ಅವರ ದೃಷ್ಟಿಕೋನಗಳಲ್ಲಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಎಲ್ಲಾ ಪಕ್ಷಗಳು ಮತ್ತು ಅವರ ನಾಯಕರು ಕಾಂಗ್ರೆಸ್ ಪಕ್ಷವನ್ನು ಮಣಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬೇಕು ಎಂಬ ಸಾಮಾನ್ಯ ನಿಲುವನ್ನು ಹೊಂದಿದ್ದರು. ಆ ಒಮ್ಮತ ಇಂದು ಕಾಣೆಯಾಗಿದೆ. ಈಗ ಮೈತ್ರಿಗೆ ತಯಾರಾಗುತ್ತಿರುವ ಯಾವ ಪಕ್ಷಗಳಿಗೂ ತಮ್ಮ ಕನಸಿನ ಭಾರತದ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ಅಧಿಕಾರವನ್ನು ವಶಪಡಿಸಿಕೊಳ್ಳುವುದು ಮತ್ತು ಸರ್ಕಾರಗಳನ್ನು ರಚಿಸುವುದು ಅವರ ಪ್ರಾಥಮಿಕ ಗುರಿಯಾಗಿದೆ.  

ಇನ್ನು ಮುಲಾಯಂ ಸಿಂಗ್ ಯಾದವ್ (ಸಮಾಜವಾದಿ ಪಕ್ಷ), ಲಾಲೂ ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಬಾಳಾ ಸಾಹೇಬ್ ಠಾಕ್ರೆ (ಶಿವಸೇನೆ), ವೈ ಎಸ್ ರಾಜಶೇಖರ್ ರೆಡ್ಡಿ (ಕಾಂಗ್ರೆಸ್ ಪಕ್ಷ. ಮಗ ವೈ ಎಸ್ ಜಗನ್ಮೋಹನ್ ರೆಡ್ಡಿ ಈಗ ವೈ ಎಸ್ ಆರ್ ಕಾಂಗ್ರೆಸ್ ಪಾರ್ಟಿಯ ಮುಖ್ಯಮಂತ್ರಿ) ಬಿಜು ಪಟ್ನಾಯಕ್ (ಜನತಾ ದಳ), ಎಂ ಕೆ ಕರುಣಾನಿಧಿ (ಡಿಎಂ.ಕೆ), ಶಿಬು ಸೋರೆನ್ (ಜಾರ್ಖಾಂಡ್ ಮುಕ್ತಿ ಮೋರ್ಚಾ), ದೇವೇ ಗೌಡ (ಜೆಡಿಎಸ್ ), ಫಾರೂಖ್ ಅಬ್ದುಲ್ಲಾ (ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ), ಮುಫ್ತಿ ಮೊಹಮ್ಮದ್ ಸಯ್ಯದ್ (ಜಮ್ಮು & ಕಾಶ್ಮೀರ ಪೀಪಲ್ಸ್ ಡೆಮೊಕ್ರೆಟಿಕ್ ಪಾರ್ಟಿ) ಇವರೆಲ್ಲಾ ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಂದಲೇ ರಾಜಕೀಯ ಧೀಮಂತರೆನ್ನಿಸಿಕೊಂಡವರು. ಒಂದು ಥರದಲ್ಲಿ ಐಡಿಯಾಲಜಿ ಇವರ ಬಲವಲ್ಲ, ಪ್ರಾದೇಶಿಕ ಅಧಿಕಾರವೇ ಪ್ರೇರಕ ಶಕ್ತಿ. ಇವರದ್ದು ಮತ್ತಿವರ ಮಕ್ಕಳ ಭವಿಷ್ಯವನ್ನು ಅಧಿಕಾರ ಮತ್ತು ಕನ್ವಿಕ್ಷನ್ ಅವರ ರಾಜಕೀಯ ವ್ಯಾಖ್ಯಾನಿಸುವುದರಿಂದ ತಮ್ಮೊಂದಿಗೆ ಅಧಿಕಾರದ ಮೈತ್ರಿ ಮಾಡಿಕೊಳ್ಳಬಹುದಾದ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಿದ್ಧರಿರುವವರು. ಇವರ ದೃಷ್ಟಿಯಲ್ಲಿ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ಒಂದೇ. ಅಧಿಕಾರದಲ್ಲಿ ಹೆಚ್ಚಿನ ಪಾಲುದಾರಿಕೆ ನೀಡುವವರು ಅವರ ಮೈತ್ರಿಯಾಗುತ್ತಾರೆ.  

ಇನ್ನು, ಮಾಯಾವತಿ ಮೋದಿ ಸರ್ಕಾರದ ಬಗ್ಗೆ ಮೃದು ಧೋರಣೆ ಇದೆ ಎಂಬ ವದಂತಿಗಳಿವೆ. ಮೋದಿ ವಿರುದ್ಧ ಹಗೆತನ ಮೆರೆದಿದ್ದ ಮಮತಾ ಬ್ಯಾನರ್ಜಿ ನಿಲುವು ಅಸ್ಪಷ್ಟ. ನವೀನ್ ಪಟ್ನಾಯಕ್ ಒಡಿಶಾದಲ್ಲಿ ಸಂತೋಷವಾಗಿದ್ದಾರೆ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಗೆ ಮೋದಿ ಬಗ್ಗೆ ಮೃದು ಧೊರಣೆ ಇದೆ. ಕೇಜ್ರಿವಾಲ್ ಅವರು ತಮ್ಮ ರಾಜ್ಯಗಳಲ್ಲಿ ಅಸ್ತಿತವದಲ್ಲಿರಬೇಕಾದರೇ, ಬಿಜೆಪಿ ವಿರುದ್ಧ ಹೋರಾಡಬೇಕು. ಆದರೆ ಭವಿಷ್ಯದಲ್ಲಿ ರಾಜಿಗೆ ತೆರೆದ ಬಾಗಿಲು ಅನ್ನಿಸುತ್ತದೆ. ಕರ್ನಾಟಕದಲ್ಲಿ  ಕುಮಾರಸ್ವಾಮಿ ಮತ್ತು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಈ ಹಿಂದೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದ್ದಾರೆ. ಶರದ್ ಪವಾರ್ ೨೦೧೪ ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದರು. ಮೆಹಬೂಬಾ ಮುಫ್ತಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದರು.  

ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಕುತೂಹಲ ಕೆರಳಿಸಿದೆ. ಆದರೆ ಕೆಲವು ರಾಜ್ಯಗಳಲ್ಲಿ ಕೆಲವು ಸ್ಥಾನಗಳನ್ನು ಹೊರತುಪಡಿಸಿ, ಬಿಜೆಪಿ ವಿರುದ್ಧ ಏಕಾಂಗಿಯಾಗಿ ಗಣನೀಯವಾದ ಬದಲಾವಣೆ ತರಲಿದೆ ಎಂಬ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಫೆಡರಲಿಸಂ ಬಗ್ಗೆ ಮಾತನಾಡುತ್ತದೆ, ಆದರೆ ಈ ವಿಷಯಗಳ ಬಗ್ಗೆ ಸಿದ್ಧಾಂತಗಳಲ್ಲಿ ಸ್ಪಷ್ಟತೆಯ ಕೊರತೆ ಕಾಂಗ್ರೆಸ್ ನಲ್ಲಿ ಎದ್ದು ಕಾಣುತ್ತದೆ. 

ಒಟ್ಟಿನಲ್ಲಿ, ವಿರೋಧ ಪಕ್ಷಗಳ ಮೈತ್ರಿಯ ವಿಷಯ ಜಟಿಲವಾದಂತಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಪ್ರಾದೇಶಿಕ ಪಕ್ಷಗಳ ನಿಲುವೇನು ?, ಬಿಜೆಪಿಯ ಅಸ್ತ್ರವೇನು..? ರಾಜಕೀಯ ಪಾಲುದಾರಿಕೆಯ ಗುಟ್ಟೇನು? ಮುಂದಿನ ಲೋಕಸಭಾ ಚುನಾವಣೆಯೊಳಗಾಗಿ ರಾಜಕೀಯದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು ಸದ್ಯದ ಕುತೂಹಲ.  

-ಶ್ರೀರಾಜ್ ವಕ್ವಾಡಿ