Wednesday, September 22, 2021

ಸಿದ್ದು ಪರ ಖರ್ಗೆ ಬ್ಯಾಟಿಂಗ್ | ಸೋನಿಯಾ ಅಭಯವಿದ್ದರೂ ಡಿಕೆಶಿಗೆ ನಾಯಕತ್ವ ಡೌಟ್ ಫುಲ್..!


ಪ್ರತಿಷ್ಠೆ, ನಾಯಕತ್ವದ ಮುಸುಕಿನ ಗುದ್ದಾಟದಲ್ಲಿ ಡಿಕೆಶಿ, ಸಿದ್ದು..? ಡಿಕೆಶಿ ವಿರುದ್ಧ ಖರ್ಗೆ ಯಾಕೆ ಮುನಿಸು..? 

ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಹಾಗೂ ಅದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ವಿಚಾರದಲ್ಲಾದ ‘ಪಾಲಿಟಿಕಲ್ ಹೈ ಡ್ರಾಮ’ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕಂತೂ ದೊಡ್ಡ ಮಟ್ಟದಲ್ಲಿ ಲಾಭ ಆಗುವಂತೆ ಕಾಣಿಸುತ್ತಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಆಗುತ್ತಿವೆ. ಆದರೇ, ಕಾಂಗ್ರೆಸ್ ಆ ಲಾಭವನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದು ಬಹಳ ಮುಖ್ಯವಾಗಿದೆ. ರಾಜ್ಯ ಬಿಜೆಪಿಯಲ್ಲಿ ನಡೆದ ನಾಯಕತ್ವದ ಗೊಂದಲಗಳು, ಅಸಮಾಧಾನಗಳು, ಅತೃಪ್ತಿಗಳು ಒಂದೆಡೆಯಾದರೇ, ಇನ್ನೊಂದೆಡೆ ಕಾಂಗ್ರೆಸ್ ನಲ್ಲಿಯೂ ಈಗ ನಾಯಕತ್ವದ ಚರ್ಚೆ ಆರಂಭವಾಗಿದೆ. 

ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಮತ್ತೊಂದಿಷ್ಟು ದಿನಗಳು ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಹುದ್ದೆಯ ಬಗ್ಗೆ ಚರ್ಚೆ ಆರಂಭವಾಗಿದೆ. ವಿರೋಧ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರ ನಡುವೆ ಈಗಾಗಲೇ ಒಳಗಿಂದೊಳಗೆ ಪೈಪೋಟಿ ಆರಂಭವಾಗಿರುವುದು ಉಭಯ ನಾಯಕರ ನಡೆಗಳು ತೋರಿಸಿಕಕೊಡುತ್ತಿವೆ. ತಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದು ಜನರಿಗೆ ತೋರಿಸುವುದಕ್ಕೆ ಉಭಯ ಕಾಂಗ್ರೆಸ್ ನ ದೈತ್ಯ ನಾಯಕರು ಪ್ರಯತ್ನ ಪಡುತ್ತಿದ್ದರೂ ಕೂಡ ಇಬ್ಬರಲ್ಲೂ ಪ್ರತಿಷ್ಠೆಯ ಕಿಚ್ಚು ಸಣ್ಣದಾಗಿ ಉರಿಯಲಾರಂಭಿಸಿದೆ ಎನ್ನುವುದಂತೂ ಅಕ್ಷರಶಃ ಸತ್ಯ.

ಪಂಜಾಬ್ ಕಾಂಗ್ರೆಸ್ ನಲ್ಲಿ ನಡೆದ ಗೊಂದಲಗಳು ಕರ್ನಾಟಕದಲ್ಲಿಯೂ ಆಗಬಹುದೇ ಎನ್ನುವ ಬಿಲಿಯನ್ ಡಾಲರ್ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ. ಪಂಜಾಬ್ ನಲ್ಲಿ ‘ಸಿಂಗ್ ದ್ವಯರ’ (ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಂಜಾಬ್ ನ ಪ್ರದೇಶ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜಿತ್ ಸಿಂಗ್ ಸಿಧು) ಮುಸುಕಿನ ಗುದ್ದಾಟ ಅಂತಿಮವಾಗಿ ಪಂಜಾಬ್ ನ ಮುಖ್ಯಮಂತ್ರಿಯ ಅಚ್ಚರಿಯ ಆಯ್ಕೆ ಅಥವಾ ಬದಲಾವಣೆಯ ತನಕ ತಂದು ತಲುಪಿಸಿದ್ದು ಗೊತ್ತೇ ಇದೆ. ಆದರೇ, ಕರ್ನಾಟಕ್ಕೆ ಪಂಜಾಬ್ ನ ಸ್ಥಿತಿಯನ್ನು ಹೋಲಿಸುವುದಕ್ಕೆ ಸಾಧ್ಯವಿಲ್ಲ. ಆದರೇ, ಹಾಗಯೇ ಇಲ್ಲಿಯೂ ಆಗಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. 

ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ವಿಚಾರವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಪಂಜಾಬ್ ನ ಕಾಂಗ್ರೆಸ್ ನ ವಿಚಾರವಾಗಿ ನಡೆದ ಒಂದಿಷ್ಟು ಬೆಳವಣಿಗೆಯನ್ನು ಗಮನಿಸಿದರೇ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲೇಬೇಕು ಎನ್ನುವುದನ್ನು ಸ್ಪಷ್ಟವಾಗಿ ಕಾಣಿಸುತ್ತಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಗೊಂದಲದ ಗೂಡಾಗಿದೆ, ಅಮರಿಂದರ್ ಸಿಂಗ್ ನಾಯಕತ್ವ ಇನ್ಮುಂದೆ ಪಂಜಾಬ್ ನಲ್ಲಿ ನಡೆಯಲ್ಲ ಎಂಬ ಲೋಕಸಭೆಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ನೇತೃತ್ವದ ಸಮಿತಿಯ ನಿರ್ಧಾರವೇ ಮುಖ್ಯಮಂತ್ರಿ ಬದಲಾವಣೆಗೆ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಕರ್ನಾಟಕದಲ್ಲಿ ಡಿಕೆಶಿ ಪಡೆಗೆ ಎಚ್ಚರಿಕೆಯಂತಾಗಿದೆ ಎನ್ನುವುದು ಸತ್ಯ. ಖರ್ಗೆ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ವಿಚಾರಕ್ಕೆ ಅಸ್ತು ಎಂದಿದೆ ಎಂದಾದಲ್ಲಿ ಕರ್ನಾಟಕದ ವಿಚಾರದಲ್ಲಿಯೂ ಖರ್ಗೆ ಮಾತಿಗೆ ಹೈಕಮಾಂಡ್ ಬೆಲೆ ನೀಡಿಯೇ ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಕರ್ನಾಟಕದ ವಿಚಾರದಲ್ಲಿ ಖರ್ಗೆ ಸಿದ್ದು ಪರ ಬ್ಯಾಟಿಂಗ್..!?

ಡಿ. ಕೆ ಶಿವಕುಮಾರ್ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನೇತೃತ್ವದ ಸರ್ಕಾರ ಇದ್ದಾಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿರುವುದು ಗೊತ್ತೇ ಇರುವ ವಿಚಾರ. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಸಣ್ಣ ಮಟ್ಟಿನ ಅವಮಾಧಾನವಾಗಿತ್ತು. ಡಿಕೆಶಿ ಬೆಳವಣಿಗೆ ಖರ್ಗೆ ಅವರನ್ನು ಒಳಗೊಂಡು ಹಲವು ನಾಯಕರಿಗೆ ಅಸಮಧಾನ ಉಂಟು ಮಾಡಿದ್ದಂತೂ ಸುಳ್ಳಲ್ಲ. ಕಾಂಗ್ರೆಸ್ ನ ಹೈಕಮಾಂಡ್ ಪಕ್ಷದ ವಿಚಾರವಾಗಿ ಹಾಗೂ ವೈಯಕ್ತಿಕವಾಗಿ ಡಿಕೆಶಿಯನ್ನು ಬೆಂಬಲಿಸಿದ್ದು ಹಲವು ನಾಯಕರ ಕೆಂಗಣ್ಣಿಗೂ ಗುರಿಯಾಗಿದೆ. ಅದು ಸ್ವತಃ ಡಿಕೆಶಿ ಅವರಿಗೂ ಗೊತ್ತಿದೆ. ರಾಜ್ಯದಲ್ಲಿ ಡಿಕೆಶಿ ತಮ್ಮ ಪ್ರತಿಷ್ಠೆಯನ್ನು ವೃದ್ಧಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಾಶಸ್ಯ ನೀಡುತ್ತಿದ್ದಾರೆ. ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಅವರಿಗೆ ಜಾಸ್ತಿಯಾಗಿದೆ. ತಮ್ಮ ಪ್ರಚಾರಕ್ಕಾಗಿ ಒಂದು ಟೀಮ್ ನನ್ನೇ ಡಿಕೆಶಿ ಕಟ್ಟಿಕೊಂಡಿದ್ದಾರೆ ಎಂಬ ಮಾತನ್ನು ಖರ್ಗೆ ಕಾಂಗ್ರೆಸ್ ನ ಹೈಕಮಾಂಡ್ ಗೆ ಒಪ್ಪಿಸುತ್ತಿದ್ದಂತೆ, ಹೈಕಮಾಂಡ್ ಖರ್ಗೆ ಮಾತಿಗೆ ಬೆಲೆ ಕೊಟ್ಟು ಡಿಕೆಶಿ ಪ್ರಚಾರಕ್ಕಾಗಿ ಇಟ್ಟುಕೊಂಡಿದ್ದ ಟೀಮ್ ನನ್ನು ಹೊರಗೆ ಕಳುಸಿತು ಎನ್ನುವುದೊಂದೇ ಸಾಕು ಖರ್ಗೆ ಮಾತಿಗೆ ಕಾಂಗ್ರೆಸ್ ನೀಡುವ ಬೆಲೆ ಎಷ್ಟು ಎನ್ನುವುದನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. 

ಇನ್ನು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಗೆ ದೊಡ್ಡ ಪ್ರಮಾಣದ ವಿರೋಧದ ನಡುವೆಯೂ ಅವಕಾಶ ಕೊಟ್ಟಿರುವ ಋಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರುವ ಕಾರಣದಿಂದಾಗಿ ಅವರು ಸಿದ್ದರಾಮಯ್ಯ ಪರವಾಗಿಯೇ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದು ಸ್ಪಷ್ಟ. ಖರ್ಗೆ ಕರ್ನಾಟಕದ ಮೂಲದವರು, ಪಕ್ಷದ ಹಿರಿಯ ನಾಯಕರು ಆಗಿರುವುದರಿಂದ ಈ ಎಲ್ಲಾ ಹಿನ್ನೆಲೆಯಲ್ಲಿ ಖರ್ಗೆ ಸಿದ್ದರಾಮಯ್ಯ ಅವರ ಹೆಸರನ್ನೇ ಶಿಫಾರಸ್ಸು ಮಾಡುವ ಸಾಧ್ಯತೆ ಹೆಚ್ಚಿದ್ದು, ಕಾಂಗ್ರೆಸ್ ಹೈಕಮಾಂಡ್ ಕೂಡ ಖರ್ಗೆ ಮಾತಿಗೆ ಅಸ್ತು ಹೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡಿಕೆಶಿಗೆ ಸೋನಿಯಾ ಅಭಯವಿದ್ದರೂ ಕರ್ನಾಟಕದ ನಾಯಕತ್ವ ಡೌಟ್ ಫುಲ್..!

ಸೋನಿಯಾ ಗಾಂಧಿ ಪಕ್ಷದ ಪರಮೋಚ್ಛ ನಾಯಕಿಯಾದರೂ ಕೂಡ ಕೊನೆಗೆ ನಡೆಯುವ ಮಾತು ರಾಹುಲ್ ಗಾಂಧಿ ಅವರದ್ದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಕೆಪಿಸಿಸಿ ಅಧ್ಯಕ್ಷ ಸ್ಥಾನವು ಪಡೆಯುವುದಕ್ಕೆ ಡಿಕೆಶಿ ಎಷ್ಟು ಹರಸಾಹಸ ಪಟ್ಟಿದ್ದರೂ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಡಿಕೆಶಿ ಅವರ ಪ್ರಯತ್ನ ಒಂದಿಷ್ಟು ಕಡಿಮೆಯಾಗಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ ಬಿ ಪಾಟೀಲ್ ಗೆ ಹೈಕಮಾಂಡ್ ಮಣೆ ಹಾಕುತ್ತಿತ್ತು. ಆ ಮಟ್ಟಿಗೆ ಡಿಕೆಶಿ ಜಾಣ ನಡೆಯನ್ನು ಪ್ರದರ್ಶಿಸಿದ್ದರು ಎಂದರೇ ತಪ್ಪಿಲ್ಲ. ಆದರೇ, ವಿಧಾನ ಸಭಾ ಚುಣಾವಣಾ ನಾಯಕತ್ವ ಡಿಕೆಶಿಗೆ ಒಲಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದೇ ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಹೋಲಿಸಿದರೇ ಡಿಕೆಶಿ ಅವರ ಬೆಂಬಲಿಗರ ಸಂಖ್ಯೆ ಕಡಿಮೆ ಇದೆ ಎನ್ನುವುದು ಸ್ವತಃ ಡಿಕೆಶಿಗೂ ಗೊತ್ತಿದೆ. ಅದೇ ಕಾರಣದಿಂದಾಗಿ, ರಾಜ್ಯದಾದ್ಯಂತ ತಮ್ಮ ಬೆಂಬಲಿಗರ ಪಡೆಯನ್ನು ವೃದ್ಧಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಇನ್ನು ಉಳಿದಿದ್ದು ಕೆಲವೇ ಕೆಲವು ತಿಂಗಳುಗಳು ಆ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ನಾಯತ್ವದ ವಿಚಾರದಲ್ಲಿ ಸಮನಾಗಿ ಡಿಕೆಶಿ ನಿಲ್ಲುತ್ತಾರೆಯೇ ಎನ್ನುವುದೇ ಯಕ್ಷ ಪ್ರಶ್ನೆ. ಅದೆಂತಹುದ್ದೇ ಪ್ರಯತ್ನವು ಡಿಕೆಶಿ ಮಾಡಿದರೂ, ರಾಹುಲ್ ಗಾಂಧಿ ಟೀಮ್ ನಲ್ಲಿಯೇ ಮಲ್ಲಿಕಾರ್ಜುನ ಖರ್ಗೆ ಗುರುತಿಸಿಕೊಂಡಿರುವ ಕಾರಣದಿಂದಾಗಿ ಡಿಕೆಶಿ ಬಗ್ಗೆ ಖರ್ಗೆ ಅಸಮಾಧಾನದ ಸಲಹೆಯನ್ನೇ ನೀಡುತ್ತಾರೆ ಎನ್ನುವುದಕ್ಕೆ ಡಿಕೆಶಿ ವಿಚಾರವಾಗಿ ಖರ್ಗೆ ತೆಗೆದುಕೊಂಡಿರುವ ಕೆಲವು ನಿರ್ಧಾರಗಳೇ ಸಾಕು. ಹಾಗಾಗಿ ಸೋನಿಯಾ ಗಾಂಧಿ ಅವರ ಕೃಪಾಕಟಾಕ್ಷ ಕನಕಪುರ ಬಂಡೆ ಮೇಲೆ ಇದ್ದರೂ  ಕರ್ನಾಟಕ ಕಾಂಗ್ರೆಸ್ ನ ನಾಯಕತ್ವವನ್ನು ನೀಡುವುದಕ್ಕೆ ರಾಹುಲ್ ಟೀಮ್ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.   

ಸಿದ್ದರಾಮಯ್ಯ ಜನಪ್ರಿಯತೆ ಕುಗ್ಗದಿರುವುದೇ ಡಿಕೆಶಿಗೆ ಪ್ರಾಬ್ಲಂ..!

ಅವಧಿ ಪೂರ್ಣಗೊಳಿಸಿ ಯಶಸ್ವಿ ಸರ್ಕಾರವನ್ನು ನಡೆಸಿದ ಸಿದ್ದರಾಮಯ್ಯ ಅವರ ಜನಪ್ರಿಯತೆ ಇಂದಿಗೂ ಹಾಗೆಯೇ ಇದೆ ಎನ್ನುವುದೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಡೊಡ್ಡ ತಲೆ ನೋವಾಗಿದೆ. ಬಿಜೆಪಿಯಂತಹ ಹಿಂದುತ್ವವಾದಿ ಪಕ್ಷದ ಬಲವಾದ ವಿರೋಧದ ನಡುವೆಯೂ ಯಶಸ್ವಿಯಾಗಿ ಐದು ವರ್ಷ ಆಡಳಿತ ನಡೆಸಿದ ಕೀರ್ತಿ ಹಾಗೂ ನಂತರದ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬೇಕಾಗುವಷ್ಟು ಸೀಟ್ ಬರಲಿಲ್ಲವಾದರೂ ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ಮಾಡುವಲ್ಲಿ ಪೈಪೋಟಿ ನೀಡಿದ ಸಿದ್ದರಾಮಯ್ಯ ನೇತೃತ್ವದ ಪಕ್ಷದ ಬಗ್ಗೆ ಹೈಕಮಾಂಡ್ ಗೆ ದೊಡ್ಡ ಮಟ್ಟಿನ ವಿಶ್ವಾಸ ಇರುವುದರಿಂದ ಹಾಗೂ ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ನೇರಾ ನೇರವಾಗಿ ಪ್ರತಿಕ್ರಿಯಿಸಿ ರಾಷ್ಟç ಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದು ಮೇಲೆ ಬಹಳ ದೊಡ್ಡ ವಿಶ್ವಾಸ ಇದೆ ಎಂದು ಕಾಣಿಸುತ್ತಿದೆ. ಇನ್ನು, ಹಿಂದಿನ ವಿಧಾನ ಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಡಿಕೆಶಿಯಾದರೂ, ಅವರ ರಾಜಕೀಯ ಬದುಕಿಗೆ ಅಂಟಿಕೊ0ಡ ಕೆಲವು ಕಪ್ಪು ಚುಕ್ಕೆಗಳು ಮುಂದೆ ಕಾಂಗ್ರೆಸ್ ನ ನೇತೃತ್ವದ ಹೊಣೆಗಾರಿಕೆ ಡಿಕೆಶಿ ಹೆಗಲ ಮೇಲೆ ಹಾಕಿದರೇ, ವರ್ಕೌಟ್ ಆಗುವುದಿಲ್ಲ ಎನ್ನುವುದು ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ. 

ಶಾಸಕರ ಮನ ಓಲೈಕೆಗೆ ಡಿಕೆಶಿ ಶತಪ್ರಯತ್ನ..!

ಜನಪ್ರಿಯತೆಯ ವಿಚಾರಕ್ಕೆ ಬಂದರೇ, ಶಿವಕುಮಾರ್ ಅವರಿಗಿಂತ ಸಿದ್ದರಾಮಯ್ಯ ಅವರಿಗೇ ಹೆಚ್ಚು ಶಾಸಕರ ಬೆಂಬಲ ಇರುವುದರಿಂದ ಡಿಕೆಶಿ ಶಾಸಕರ ಮನ ಓಲೈಕೆಯ ಪ್ರಯತ್ನದಲ್ಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ತಮ್ಮ ಬೆಂಬಲಿಗರ ಪಡೆಯನ್ನು ವಿಸ್ತರಿಸಿಕೊಳ್ಳುವತ್ತ ಡಿಕೆಶಿ ಮುಖಮಾಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಅತೃಪ್ತ ನಾಯಕರ ಮನವೊಲಿಸಿ ತಮ್ಮ ಟೀಮ್ ಗೆ ಸೇರಿಸಿಕೊಳ್ಳುವತ್ತ ಪ್ರಯತ್ನದಲ್ಲಿದ್ದಾರೆ ಎಂಬ ಗುಸುಗುಸು ಚರ್ಚೆಯಾಗುತ್ತಿದೆ. ಹಲವರನ್ನು ಈಗಾಗಲೇ ಡಿಕೆಶಿ ಸಂಪರ್ಕಿಸಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇನ್ನು, ಪಕ್ಷ ವೃದ್ಧಿಸಿಕೊಳ್ಳುವ ಹಾಗೂ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುವುದು ಡಿಕೆಶಿಗೇನೂ ಹೊಸತಲ್ಲ. ೨೦೦೧ ರಲ್ಲಿ ಮಹಾರಾಷ್ಟç ಕಾಂಗ್ರೆಸ್ ಗಿದ್ದ ಬಿಕ್ಕಟ್ಟಿನ ಸಮಯದಲ್ಲಿ ಡಿಕೆಶಿ ವಹಿಸಿದ ನಿರ್ಣಾಯಕ ಪಾತ್ರ, ೨೦೧೭ ರಲ್ಲಿ ಪಕ್ಷಾಂತಕ್ಕೆ ಮುಂದಾಗಿದ್ದ ಸುಮಾರು ೪೨ ಗುಜರಾತ್ ನ ಶಾಸಕರನ್ನು ಬೆಂಗಳೂರಿನ ತಮ್ಮ ರೆಸಾರ್ಟ್ ನಲ್ಲಿ ಇರಿಸಿ, ಪಕ್ಷಾಂತರವಾಗದೇ ಇರುವಂತೆ ನೋಡಿಕೊಂಡು ಪಕ್ಷದ ಏಳ್ಗೆಗೆ ದುಡಿದ ಇತಿಹಾಸ ಡಿಕೆಶಿ ಜೊತೆಗಿದೆ. ಆದರೇ, ಕರ್ನಾಟಕದಲ್ಲಿ ಅಂತಹ ಛಾಪು ಡಿಕೆಶಿ ಉಳಿಸಿಕೊಂಡಿದ್ದಾರೆಯೇ, ಬೆಳೆಸಿಕೊಂಡಿದ್ದಾರೆಯೇ ಎನ್ನುವುದು ಇಲ್ಲಿ ಪ್ರಮುಖ ವಿಷಯವಾಗಿದೆ.  

ಚುನಾವಣೆಯಾದ ಬಳಿಕೆ ಟಗರು ವರ್ಸಸ್ ಬಂಡೆ..!?

ಪಕ್ಷದ ಏಳ್ಗೆಗಾಗಿ, ಬಲವರ್ಧನೆಗಾಗಿ ಕಾಂಗ್ರೆಸ್ ಹೈಕಮಾಂಡ್ ಈಗ ರಾಜ್ಯದ ಪ್ರಬಲ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿಯವರಿಗೆ ಜೊತೆಯಾಗಿ ಕೆಲಸ ಮಾಡಿ ಎಂದು ಸೂಚಿಸಿದೆ. ಆದರೇ, ಇಬ್ಬರಲ್ಲೂ ನಾಯಕತ್ವದ ಮೋಹ ಇದೆ ಎನ್ನುವುದು ಸ್ಪಷ್ಟ. ಮುಖ್ಯಮಂತ್ರಿ ಅಭ್ಯರ್ಥಿ ಅಥವಾ ಕೆಪಿಸಿಸಿ ನಾಯಕತ್ವದ ಬದಲಾವಣೆಯ ವಿಚಾರ ಬಂದಾಗ ಉಭಯ ನಾಯಕರು ಬಂಡಾಯ ಏಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚುನಾವಣೆಯ ತನಕ ಜೊತೆಗಿದ್ದು, ತದನಂತರ ರಾಜ್ಯ ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು ಎಂಬ0ತಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಜನರ ಮುಂದೆ ನಾವೆಲ್ಲಾ ಒಂದೇ ಎಂದು ಹೇಳಿಕೊಂಡು ಸಿದ್ದು ಹಾಗೂ ಡಿಕೆಶಿ ಇದ್ದರೂ ನಾಯಕತ್ವದ ವಿಚಾರದಲ್ಲಿ ವೈರಿಗಳಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ. 

ಇವರೆಲ್ಲಾ ಡಿಕೆಶಿ ಟೀಮ್ ಗೆ ಎಂಟ್ರಿ..?

ಬಿಜೆಪಿಯಲ್ಲಿನ ಅನುಭವಿ ಅತೃಪ್ತ ನಾಯಕರನ್ನು ಕಾಂಗ್ರೆಸ್ ಗೆ, ಅದರಲ್ಲಿಯೂ ತಮ್ಮ ಟೀಮ್ ಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಡಿಕೆಶಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿ ಹಾಗೂ ಜೊಲ್ಲೆ ಫ್ಯಾಮಿಲಿಯನ್ನು ಎದುರಿಸುವ ಕಾರಣದಿಂದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ಅರಣ್ಯ ಹಾಗೂ ಆಹಾರ ಇಲಾಖೆಯಯ ಸಚಿವ ಉಮೇಶ್ ಕತ್ತಿ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನ ಮಾಡುವುದರ ಮೂಲಕ ಬೆಳಗಾವಿಯಲ್ಲಿ ತಮ್ಮ ಟೀಮ್ ನ ಬಲವರ್ದನೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು, ತುಮುಕೂರಿನ ಬಿಜೆಪಿ ಸಂಸದ ಬಸವರಾಜು, ಬಸವರಾಜು ಪುತ್ರ ಜ್ಯೋತಿ ಗಣೇಶ್, ಹಳೆಮೈಸೂರು ಭಾಗದ ಶ್ರೀನಿವಾಸ್ ಪ್ರಸಾದ್, ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್, ಸಚಿವ ಸಂಪುಟದ ವಿಚಾರಕ್ಕೆ ಸಂಬ0ಧಿಸಿದ0ತೆ ತಮ್ಮ ಪಕ್ಷದ ವಿರುದ್ಧವೇ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸಿದ ಗೊಲ್ಲ ಸಮುದಾಯದ ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ರಾಯಚೂರಿನ ದೇವದುರ್ಗದ ಶಾಸಕ ಶಿವನಗೌಡ ನಾಯಕ್, ವಲಸೆ ಬಂದು ಬಿಜೆಪಿ ಸರ್ಕಾರದ ರಚನೆಗೆ ಸಹಕಾರ ನೀಡಿದ, ಪ್ರಸ್ತುತ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿರುವ ಕೆ. ಗೋಪಾಲಯ್ಯ (ಅಬಕಾರಿ ಇಲಾಖೆಯ ಸಚಿವ) ಹಾಗೂ ನಾರಾಯಣ ಗೌಡ (ಕ್ರೀಡೆ ಹಾಗೂ ರೇಷ್ಮೆ ಇಲಾಖೆಯ ಸಚಿವ) ಅವರನ್ನು ಕೂಡ ತಮ್ಮ ಕೈ ಬಲ ಪಡಿಸಿಕೊಳ್ಳುವ ಕಾರಣದಿಂದಾಗಿ ಸಂಪರ್ಕ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಒಟ್ಟಿನಲ್ಲಿ, ನಾಯಕತ್ವಕ್ಕಾಗಿ ಯಾರು ಬೆವರು ಸುರಿಸುತ್ತಿದ್ದಾರೋ ಇಲ್ಲವೋ, ಆದರೇ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತ್ರ ರಾಜ್ಯದಾದ್ಯಂತ ಪ್ರಯತ್ನದಲ್ಲಿದ್ದಾರೆ ಎನ್ನುವುದಂತೂ ಸತ್ಯ. ಇನ್ನು, ಬರುವ ವಿಧಾನ ಸಭಾ ಚುನಾವಣೆಗೆ ಡಿಕೆಶಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡುತ್ತದಾ..? ಸಿದ್ದರಾಮಯ್ಯ ಅವರನ್ನೇ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುತ್ತದಾ..? ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಕೂಡ ಕಳೆದುಕೊಳ್ಳುತ್ತಾರಾ..? ಇಷ್ಟೆಲ್ಲಾ ಪ್ರಚಾರ ಮಾಡಿಕೊಳ್ಳುತ್ತಿರುವ ಡಿಕೆಶಿಯವರ ಪ್ರಯತ್ನ ಸಂಪೂರ್ಣ ವಿಫಲವಾಗುತ್ತದಾ..? ಡಿಕೆಶಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿಯ ಆಯ್ಕೆ ಮಾಡುತ್ತದಾ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿದ್ದಲ್ಲದೇ, ಈ ಆಪರೇಶನ್ ನಲ್ಲಿ ಡಿಕೆಶಿ ಸಕ್ಸಸ್ ಸ್ಟೋರಿ ಬರೆಯುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ.    

-ಶ್ರೀರಾಜ್ ವಕ್ವಾಡಿ