Monday, August 31, 2026

ನೇಪಾಳದ ದುರಂತದ ಹಿಂದೆ ಪ್ರಕೃತಿಯಷ್ಟೇ ಅಲ್ಲ, ಮನುಷ್ಯನ ಅಭಿವೃದ್ಧಿ ಮಾದರಿಯೂ ಇದೆ.

ಹಿಮ ಕರಗುವುದು ಎಂದರೆ ಕೇವಲ ಹಿಮದ ಕರಗುವಿಕೆಯಲ್ಲ. ಅದು ಪರ್ವತದ ಸ್ಥಿರತೆ ಕರಗುತ್ತಿರುವ ಸೂಚನೆ. 2026ರ ಆಗಸ್ಟ್ 26. ನೇಪಾಳ–ಟಿಬೆಟ್ ಗಡಿಯ ಹಿಮಾಲಯ ಪ್ರದೇಶಕ್ಕೆ ಈ ದಿನ ಮತ್ತೊಂದು ಕರಾಳ ಅಧ್ಯಾಯ ಬರೆದ ದಿನ. ರಸುವಾ ಜಿಲ್ಲೆ ಸೇರಿದಂತೆ ಭೋಟೆ ಕೋಶಿ–ತ್ರಿಶೂಲಿ ನದಿ ಕಣಿವೆಯಲ್ಲಿ ಸಂಭವಿಸಿದ ಆಕಸ್ಮಿಕ ಪ್ರವಾಹ, ಹಿಮ–ಬಂಡೆ ಕುಸಿತ ಮತ್ತು ಕೆಸರು ತುಂಬಿದ ನೀರಿನ ರಭಸ ನೂರಾರು ಜೀವಗಳನ್ನು ಬಲಿ, ಸಾವಿರಾರು ಮಂದಿಯ ನಾಪತ್ತೆ. ಇದು ಹಿಮ ಪವರ್ತಗಳ ಎಚ್ಚರಿಕೆಯ ಗಂಟೆ! 

 ನೇಪಾಳ ಅತ್ಯಂತ ಭೀಕರತೆಯನ್ನು ಕಂಡಿದೆ.   ಇತ್ತೀಚಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 400ಕ್ಕೆ ಏರಿಕೆಯಾಗಿದೆ, ಸುಮಾರು 1,468ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ನೂರಾರು ಭಾರತೀಯರೂ ಸೇರಿದ್ದಾರೆ. ಇದು ಕೇವಲ ಒಂದು ಪ್ರವಾಹವಲ್ಲ. ಇದು ಬದಲಾಗುತ್ತಿರುವ ಹಿಮಾಲಯದ ಎಚ್ಚರಿಕೆಯ ಗಂಟೆ. ಹಿಮಾಲಯವನ್ನು ನಾವು ಬಹುಕಾಲದಿಂದ ‘ಭೂಮಿಯ ಮೂರನೇ ಧ್ರುವ’ ಎಂದು ನೋಡಿದ್ದೇವೆ. ಏಷ್ಯಾದ ಬಹುತೇಕ ಪ್ರಮುಖ ನದಿಗಳಿಗೆ ನೀರು ನೀಡುವ ಈ ಪರ್ವತ ಶ್ರೇಣಿ ಇಂದು ಹವಾಮಾನ ಬದಲಾವಣೆಯ ಅತ್ಯಂತ ಸೂಕ್ಷ್ಮ ವಲಯವಾಗಿ ಪರಿಣಮಿಸಿದೆ. ಹಿಮನದಿಗಳು ಕುಗ್ಗುತ್ತಿವೆ. ಪರ್ಮಾಫ್ರಾಸ್ಟ್ ಕರಗುತ್ತಿದೆ. ಪರ್ವತ ಇಳಿಜಾರುಗಳು ಅಸ್ಥಿರವಾಗುತ್ತಿವೆ. ಹಿಮನದಿಗಳ ಅಂಚಿನಲ್ಲಿ ಹೊಸ ಸರೋವರಗಳು ರೂಪುಗೊಳ್ಳುತ್ತಿವೆ. ಇವೆಲ್ಲವೂ ಒಟ್ಟಾಗಿ ಸೇರಿದಾಗ, ಒಂದು ಸಣ್ಣ ಭೌಗೋಳಿಕ ಘಟನೆ ಕೂಡ ಕ್ಷಣಾರ್ಧದಲ್ಲಿ ಭೀಕರ ಮಾನವೀಯ ದುರಂತವಾಗಿ ಬದಲಾಗಬಹುದು. ‘ಭೂಕಂಪ’ ಕಾರಣವಲ್ಲ, ಪರಿಣಾಮವೂ ಆಗಿರಬಹುದು! ಆಗಸ್ಟ್ 26ರ ಬೆಳಗ್ಗೆ ಸಂಭವಿಸಿದ ಘಟನೆಯ ಬಗ್ಗೆ ಗೊಂದಲವಿತ್ತು. ಮೊದಲಿಗೆ ಭೂಕಂಪವೇ ಪ್ರವಾಹಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

 ಆದರೆ ನಂತರದ ಭೂವೈಜ್ಞಾನಿಕ ಮತ್ತು ಉಪಗ್ರಹ ವಿಶ್ಲೇಷಣೆಗಳು ಬೇರೆಯದ್ದೇ ಚಿತ್ರವನ್ನು, ಮಾಹಿತಿಯನ್ನು ನೀಡಿವೆ. ಹಿಮ–ಬಂಡೆಗಳ ಭಾರಿ ಕುಸಿತ ಲ್ಹೆಂಡೆ ಖೋಲಾ ನದಿಗೆ ಅಪ್ಪಳಿಸಿತು. ಬೃಹತ್ ಪ್ರಮಾಣದ ಹಿಮ, ಬಂಡೆ, ಮಣ್ಣು ಮತ್ತು ನೀರು ಕಿರಿದಾದ ಕಣಿವೆಯಲ್ಲಿ ನದಿಯ ಹರಿವನ್ನು ಹೆಚ್ಚಿಸಿವೆ. ತಾತ್ಕಾಲಿಕವಾಗಿ ನಿರ್ಮಾಣವಾದ ಈ ನೈಸರ್ಗಿಕ ‘ಅಣೆಕಟ್ಟು’ ಒಡೆದಾಗ, ಸಂಗ್ರಹವಾಗಿದ್ದ ನೀರು ಮತ್ತು ಅವಶೇಷಗಳು ಭೀಕರ ವೇಗದಲ್ಲಿ ಕೆಳಕ್ಕೆ ಧಾವಿಸಿದವು. ಇದೇ ಪ್ರವಾಹ ಭೋಟೆ ಕೋಶಿ ಮತ್ತು ನಂತರ ತ್ರಿಶೂಲಿ ನದಿಗೆ ಹರಿಯಿತು. ಅಂದರೆ ಇಲ್ಲಿ ಒಂದು ಪ್ರಮುಖ ಪಾಠವಿದೆ,  ನೋಡಿ, ಪ್ರಕೃತಿಯ ಒಂದು ಘಟನೆ ಮತ್ತೊಂದು ಘಟನೆಗೆ ಕಾರಣವಾಗುತ್ತದೆ. ಹಿಮನದಿ ಕುಸಿತ → ಬಂಡೆ ಕುಸಿತ → ನದಿ ತಡೆ → ತಾತ್ಕಾಲಿಕ ಸರೋವರ → ಅಣೆಕಟ್ಟು ಒಡೆತ → ಕೆಸರಿನ ಪ್ರವಾಹ → ನದಿಯ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ. ಇದು ‘ಒಂದು ಅಪಾಯ’ವಲ್ಲ. ಇದು ಅಪಾಯಗಳ ಸರಪಳಿ. ಹಾಗಾದರೆ ಹಿಮಾಲಯದಲ್ಲಿ ಇಂತಹ ಅಪಾಯಗಳು ಏಕೆ ಹೆಚ್ಚುತ್ತಿವೆ? ಉತ್ತರವನ್ನು ಕೇವಲ ‘ಹಿಮ ಕರಗುತ್ತಿದೆ’ ಎಂಬ ಒಂದು ವಾಕ್ಯದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯದ ಹಿಮನದಿಗಳ ಸ್ವರೂಪವೇ ಬದಲಾಗುತ್ತಿದೆ.

ಹಿಮನದಿಗಳು ಹಿಂದೆ ಸರಿಯುತ್ತಿವೆ. ಕೆಲವು ಕಡೆ ಹಿಮದ ಕೆಳಗಿನ ಬಂಡೆಗಳ ಮೇಲಿನ ಹಿಡಿತ ದುರ್ಬಲವಾಗುತ್ತಿದೆ. ಪರ್ಮಾಫ್ರಾಸ್ಟ್—ಅಂದರೆ ವರ್ಷಗಳ ಕಾಲ ಗಟ್ಟಿಯಾಗಿ ಹೆಪ್ಪುಗಟ್ಟಿರುವ ಮಣ್ಣು ಮತ್ತು ಕಲ್ಲು—ಕರಗಿದಾಗ ಪರ್ವತದ ಇಳಿಜಾರುಗಳ ಸ್ಥಿರತೆ ಕುಸಿಯಬಹುದು. ಹೀಗಾಗಿ ಸಮಸ್ಯೆ ಕೇವಲ ‘ನೀರಿನ ಪ್ರಮಾಣದ್ದಲ್ಲ. ಪರ್ವತವೇ ಅಸ್ಥಿರವಾಗುತ್ತಿದೆ. ಹಿಂದೆ ನಿಧಾನವಾಗಿ ನಡೆಯುತ್ತಿದ್ದ ಬದಲಾವಣೆಗಳು ಇಂದು ವೇಗವಾಗಿ ನಡೆಯುತ್ತಿವೆ. ಹಿಂದೂ ಕುಶ್–ಹಿಮಾಲಯ ಪ್ರದೇಶದ ಹಿಮನದಿಗಳು 2011–2020ರ ಅವಧಿಯಲ್ಲಿ ಹಿಂದಿನ ದಶಕಕ್ಕಿಂತ ಸುಮಾರು 65 ಪ್ರತಿಶತ ವೇಗವಾಗಿ ಹಿಮ ಕಳೆದುಕೊಂಡಿವೆ ಎಂದು ವರದಿಯಾಗಿದೆ. ನೇಪಾಳದ ಹಿಮನದಿಗಳು ಕಳೆದ ಸುಮಾರು ಮೂರು ದಶಕಗಳಲ್ಲಿ ತಮ್ಮ ಹಿಮದ ಪ್ರಮಾಣದ ಸುಮಾರು ಮೂರನೇ ಒಂದು ಭಾಗವನ್ನು ಕಳೆದುಕೊಂಡಿವೆ ಎಂದು ವಿಶ್ವಸಂಸ್ಥೆಯ ವರದಿಗಳನ್ನು ಆಧರಿಸಿದ ವಿಶ್ಲೇಷಣೆಗಳು ಹೇಳುತ್ತವೆ. ಹೀಗಾಗಿ ಆಗಸ್ಟ್ 26ರ ದುರಂತವನ್ನು ಕೇವಲ ಒಂದು ದಿನದ ಹವಾಮಾನ ಘಟನೆಯಾಗಿ ನೋಡುವುದು ಅಪಾಯಕಾರಿ ಸರಳೀಕರಣ. ಹಿಮನದಿ ಸರೋವರಗಳು: ಪರ್ವತದ ಮೇಲಿನ ‘ಟೈಮ್ ಬಾಂಬ್’ಹಿಮನದಿಗಳು ಕರಗಿದಾಗ ನೀರು ಎಲ್ಲಿಗೆ ಹೋಗುತ್ತದೆ? ಹಿಮನದಿಯ ಅಂಚಿನಲ್ಲಿ ಅಥವಾ ಅದರ ಕೆಳಭಾಗದಲ್ಲಿ ನೀರು ಸಂಗ್ರಹವಾಗುತ್ತದೆ. ಕೆಲವೊಮ್ಮೆ ದೊಡ್ಡ ಹಿಮನದಿ ಸರೋವರಗಳು ರೂಪುಗೊಳ್ಳುತ್ತವೆ. ಅವುಗಳ ನೈಸರ್ಗಿಕ ಕಟ್ಟೆ ಹಿಮ, ಮಣ್ಣು ಅಥವಾ ಬಂಡೆಗಳಿಂದ ನಿರ್ಮಿತವಾಗಿರಬಹುದು. ಅದು ಶಾಶ್ವತ ಅಣೆಕಟ್ಟು ಅಲ್ಲ. ಒಂದು ಭೂಕುಸಿತ. ಒಂದು ಹಿಮಬಂಡೆ ಕುಸಿತ.

ಒಂದು ಹೆಚ್ಚುವರಿ ನೀರಿನ ಒತ್ತಡ. ಅಥವಾ ಮತ್ತೊಂದು ಹಿಮನದಿ ಪ್ರವಾಹ. ಇವುಗಳಲ್ಲಿ ಯಾವುದಾದರೂ ಸಂಭವಿಸಿದರೆ ಸರೋವರದ ನೈಸರ್ಗಿಕ ಕಟ್ಟೆ ಒಡೆದು Glacial Lake Outburst Flood ಸಂಭವಿಸಬಹುದು. ಒಮ್ಮೆ ಈ ನೀರು ಕೆಳಕ್ಕೆ ಹೊರಟರೆ, ಅದು ಕೇವಲ ನೀರಲ್ಲ. ದಾರಿಯಲ್ಲಿರುವ ಬಂಡೆ, ಮಣ್ಣು, ಮರ, ಕಟ್ಟಡ, ವಾಹನ—ಎಲ್ಲವನ್ನೂ ತನ್ನೊಂದಿಗೆ ಎಳೆದುಕೊಂಡು ಹೋಗುತ್ತದೆ. ಅದಕ್ಕಾಗಿಯೇ ಇಂತಹ ಪ್ರವಾಹ ಸಾಮಾನ್ಯ ಪ್ರವಾಹಕ್ಕಿಂತ ಅನೇಕ ಪಟ್ಟು ವಿನಾಶಕಾರಿ. ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಕೇಳಲೇಬೇಕು: ಮನುಷ್ಯ ಎಲ್ಲಿದ್ದಾನೆ? ಪ್ರಕೃತಿ ತನ್ನ ನಿಯಮದಂತೆ ನಡೆಯುತ್ತದೆ. ಆದರೆ ಮನುಷ್ಯ ತನ್ನ ಅಭಿವೃದ್ಧಿ ಯೋಜನೆಗಳನ್ನು ಎಲ್ಲಿ ನಿರ್ಮಿಸುತ್ತಾನೆ? ನದಿಯ ದಡದಲ್ಲಿ. ಕಣಿವೆಯೊಳಗೆ. ಹಿಮಾಲಯದ ದುರ್ಬಲ ಇಳಿಜಾರುಗಳಲ್ಲಿ. ಭೂಕುಸಿತ ಸಾಧ್ಯತೆಯ ಪ್ರದೇಶಗಳಲ್ಲಿ. ಜಲವಿದ್ಯುತ್ ಯೋಜನೆಗಳು, ರಸ್ತೆಗಳು, ಸೇತುವೆಗಳು, ಪ್ರವಾಸೋದ್ಯಮ ಮೂಲಸೌಕರ್ಯ, ಗಡಿ ವ್ಯಾಪಾರ ಕೇಂದ್ರಗಳು, ವಸತಿ ಪ್ರದೇಶಗಳು—ಹಿಮಾಲಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿಯೇ ಮಾನವ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿವೆ. ನೇಪಾಳದ ಈ ದುರಂತದಲ್ಲಿಯೂ ರಸ್ತೆಗಳು, ಸೇತುವೆಗಳು, ವಿದ್ಯುತ್ ಯೋಜನೆಗಳು ಮತ್ತು ಗಡಿ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ.  ಹೀಗಾಗಿ ಪ್ರಶ್ನೆ ‘ಪ್ರಕೃತಿ ಯಾಕೆ ಕೋಪಗೊಂಡಿತು?’ ಎಂಬುದಲ್ಲ. ಪ್ರಕೃತಿಯ ಅಪಾಯ ಗೊತ್ತಿದ್ದರೂ ನಾವು ಅಪಾಯದ ಜಾಗದಲ್ಲೇ ಅಭಿವೃದ್ಧಿಯನ್ನು ಯಾಕೆ ಕೇಂದ್ರೀಕರಿಸುತ್ತಿದ್ದೇವೆ? ಎಂಬುದೇ ನಿಜವಾದ ಪ್ರಶ್ನೆ. ಹಿಮಾಲಯದಲ್ಲಿ ಅಭಿವೃದ್ಧಿ ಬೇಕೇ ಬೇಡವೇ? ಖಂಡಿತ ಬೇಕು. ಹಿಮಾಲಯದ ಜನರಿಗೆ ರಸ್ತೆ ಬೇಕು. ವಿದ್ಯುತ್ ಬೇಕು. ಆಸ್ಪತ್ರೆ ಬೇಕು. ಶಾಲೆ ಬೇಕು.

ಉದ್ಯೋಗ ಬೇಕು. ಸಂಪರ್ಕ ವ್ಯವಸ್ಥೆ ಬೇಕು. ಆದರೆ ಪ್ರಶ್ನೆ ಅಭಿವೃದ್ಧಿಯ ವಿರುದ್ಧವಲ್ಲ. ಯಾವ ಅಭಿವೃದ್ಧಿ? ಎಲ್ಲಿ ಅಭಿವೃದ್ಧಿ? ಯಾರಿಗಾಗಿ ಅಭಿವೃದ್ಧಿ? ಯಾವ ಪರಿಸರದ ಮೇಲೆ ಅಭಿವೃದ್ಧಿ? ಎನ್ನುವುದಾಗಿದೆ. ಗಮನಿಸಿ, ಒಂದು ಸೇತುವೆ ಕಟ್ಟಿದರೆ ಅದು ಕೇವಲ ಸೇತುವೆಯಲ್ಲ. ಅದರ ಸುತ್ತ ರಸ್ತೆ ಬರುತ್ತದೆ. ರಸ್ತೆ ಬಂದರೆ ವಸತಿ ಬರುತ್ತದೆ. ಪ್ರವಾಸೋದ್ಯಮ ಬರುತ್ತದೆ. ವ್ಯಾಪಾರ ಬರುತ್ತದೆ. ವಿದ್ಯುತ್ ಯೋಜನೆಗಳು ಬರುತ್ತವೆ. ಆದರೆ ಆ ಪ್ರದೇಶದ ಭೂವೈಜ್ಞಾನಿಕ ಸಾಮರ್ಥ್ಯವನ್ನು ಲೆಕ್ಕಿಸದೆ ಈ ಬೆಳವಣಿಗೆ ನಡೆದರೆ, ಒಂದು ದಿನ ಪ್ರಕೃತಿಯ ಲೆಕ್ಕಾಚಾರವೇ ಎಲ್ಲವನ್ನೂ ಅಳಿಸಿಹಾಕಬಹುದು. ಒಂದು ಮಿಲಿಯನ್‌ ಡಾಲರ್‌ ಪ್ರಶ್ನೆ ಏನೆಂದರೇ, ಮುನ್ನೆಚ್ಚರಿಕಾ ವ್ಯವಸ್ಥೆ ಎಲ್ಲಿ? ಇಂತಹ ದುರಂತಗಳಲ್ಲಿ ಈ ಒಂದು ಪ್ರಶ್ನೆ ಅತ್ಯಂತ ಮುಖ್ಯ.  ಹಿಮಾಲಯದ ನದಿಗಳಲ್ಲಿ ಸ್ವಯಂಚಾಲಿತ ನೀರಿನ ಮಟ್ಟ ಮಾಪಕಗಳು, ಉಪಗ್ರಹ ನಿಗಾ ವ್ಯವಸ್ಥೆ, ಹಿಮನದಿ ಸರೋವರಗಳ ನಿರಂತರ ಮೇಲ್ವಿಚಾರಣೆ, ರಿಯಲ್-ಟೈಮ್ ಡೇಟಾ ಹಂಚಿಕೆ ಮತ್ತು ಸ್ಥಳೀಯ ಜನರಿಗೆ ತಕ್ಷಣ ತಲುಪುವ ಎಚ್ಚರಿಕಾ ವ್ಯವಸ್ಥೆಗಳು ಅತ್ಯಗತ್ಯ. ಯಾಕೆಂದರೆ ಇಲ್ಲಿ ಗಂಟೆಗಳ ಮುನ್ನೆಚ್ಚರಿಕೆಯೇ ಸಾಕಾಗುವುದಿಲ್ಲ. ಕೆಲವೊಮ್ಮೆ ನಿಮಿಷಗಳ ಮುನ್ನೆಚ್ಚರಿಕೆಯೇ ಜೀವ ಉಳಿಸಬಹುದು. ನೇಪಾಳದ ಈ ದುರಂತ ಹಿಮಾಲಯದಲ್ಲಿ ಮುನ್ನೆಚ್ಚರಿಕಾ ವ್ಯವಸ್ಥೆ ಮತ್ತು ಗಡಿ ದಾಟುವ ನದಿ ಅಪಾಯ ನಿರ್ವಹಣೆಯ ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.  ಇನ್ನು, ಇದು ನೇಪಾಳದ ಸಮಸ್ಯೆಯಷ್ಟೇ ಅಲ್ಲ.

ಹಿಮಾಲಯಕ್ಕೆ ರಾಜಕೀಯ ಗಡಿಗಳಿವೆ. ಆದರೆ ನದಿಗಳಿಗೆ ಗಡಿಗಳಿಲ್ಲ. ನೇಪಾಳದಲ್ಲಿ ಹುಟ್ಟುವ ಅಥವಾ ಹರಿಯುವ ನದಿ ಭಾರತಕ್ಕೆ ಬರುತ್ತದೆ. ಟಿಬೆಟ್‌ನಲ್ಲಿ ಸಂಭವಿಸುವ ಹಿಮನದಿ ಕುಸಿತದ ಪರಿಣಾಮ ನೇಪಾಳಕ್ಕೆ ತಲುಪಬಹುದು. ನೇಪಾಳದ ಪ್ರವಾಹದ ಪರಿಣಾಮ ಭಾರತದಲ್ಲಿನ ಗಂಗಾ ನದಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಹಿಮಾಲಯದ ವಿಪತ್ತು ನಿರ್ವಹಣೆ ಮೂರು ದೇಶಗಳ ಅಂದ್ರೆ ಭಾರತ, ನೇಪಾಳ ಮತ್ತು ಚೀನ ದೇಶಗಳ ಸಹಕಾರವನ್ನು ಬೇಡುತ್ತದೆ. ಡೇಟಾ ಹಂಚಿಕೊಳ್ಳದ ಗಡಿ ರಾಜಕೀಯಕ್ಕಿಂತ, ಜೀವ ಉಳಿಸುವ ಹವಾಮಾನ ಮತ್ತು ಜಲವಿಜ್ಞಾನ ಮಾಹಿತಿಯ ಮುಕ್ತ ಹಂಚಿಕೆ ಹೆಚ್ಚು ಮುಖ್ಯ.  ‘ನೈಸರ್ಗಿಕ ವಿಕೋಪ’ ಎಂದು ಹೇಳಿ ಕೈತೊಳೆದುಕೊಳ್ಳುವುದು ಸುಲಭ. ಪ್ರತಿ ಬಾರಿ ಪ್ರವಾಹ ಬಂದಾಗ— ‘ಅತಿವೃಷ್ಟಿ’. ಭೂಕುಸಿತವಾದಾಗ—ಪ್ರಕೃತಿಯ ವಿಕೋಪ’. ಹಿಮನದಿ ಕುಸಿದಾಗ— ‘ದುರದೃಷ್ಟಕರ ಘಟನೆ’. ಎಂದು ಹೇಳಿ ಮುಗಿಸಬಹುದು. ಆದರೆ ಇದು ಸಮಸ್ಯೆಯ ಅರ್ಧ ಸತ್ಯ ಮಾತ್ರ. ಹವಾಮಾನ ಬದಲಾವಣೆ ಇಂತಹ ಅಪಾಯಗಳ ಹಿನ್ನೆಲೆಯನ್ನು ಬದಲಿಸುತ್ತಿದೆ. ಅದೇ ಸಮಯದಲ್ಲಿ ಅಸುರಕ್ಷಿತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ ವಸತಿ, ಮೂಲಸೌಕರ್ಯ ಮತ್ತು ಯೋಜನೆಗಳು ಅಪಾಯ ಎದುರಾದಾಗ ನಷ್ಟದ ಪ್ರಮಾಣವನ್ನು ಹೆಚ್ಚಿಸುತ್ತಿವೆ. ಹೀಗಾಗಿ ವಿಪತ್ತು ಪ್ರಕೃತಿಯಿಂದ ಬಂದಿರಬಹುದು; ಆದರೆ ಅದರ ಮಾನವೀಯ ಬೆಲೆ ಬಹುಮಟ್ಟಿಗೆ ನಮ್ಮ ನೀತಿಗಳಿಂದ ನಿರ್ಧಾರವಾಗುತ್ತದೆ.  ಹಿಮಾಲಯದ ಬಗ್ಗೆ ನಮ್ಮ ಅಭಿವೃದ್ಧಿ ಕಲ್ಪನೆಯನ್ನು ಬದಲಿಸಬೇಕಾದ ಸಮಯ ಇದು. ನೇಪಾಳದ ದುರಂತವನ್ನು ಕೇವಲ ಒಂದು ದೇಶದ ದುರಂತವಾಗಿ ನೋಡಬಾರದು. ಇದು ಉತ್ತರಾಖಂಡಕ್ಕೆ ಎಚ್ಚರಿಕೆ. ಇದು ಹಿಮಾಚಲಕ್ಕೆ ಎಚ್ಚರಿಕೆ.

ಇದು ಸಿಕ್ಕಿಂಗೆ ಎಚ್ಚರಿಕೆ. ಇದು ಅರುಣಾಚಲಕ್ಕೆ ಎಚ್ಚರಿಕೆ. ಇದು ಜಮ್ಮು–ಕಾಶ್ಮೀರ ಮತ್ತು ಲಡಾಖ್‌ಗೆ ಎಚ್ಚರಿಕೆ. ಹಿಮಾಲಯದ ಪ್ರತಿಯೊಂದು ಕಣಿವೆಗೂ ಒಂದೇ ಅಭಿವೃದ್ಧಿ ಮಾದರಿಯನ್ನು ಹೇರಲು ಸಾಧ್ಯವಿಲ್ಲ. ಕೆಲವು ಪ್ರದೇಶಗಳಲ್ಲಿ ದೊಡ್ಡ ಜಲವಿದ್ಯುತ್ ಯೋಜನೆಗಳಿಗಿಂತ ಪರಿಸರದ ಸಾಮರ್ಥ್ಯಕ್ಕೆ ಅನುಗುಣವಾದ ಸಣ್ಣ ಯೋಜನೆಗಳು ಬೇಕಾಗಬಹುದು. ಕೆಲವು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಬದಲಾಗಿ ಸುರಕ್ಷಿತ ಪರ್ಯಾಯ ಮಾರ್ಗ ಬೇಕಾಗಬಹುದು. ಕೆಲವು ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಮಿತಿ ವಿಧಿಸಬೇಕಾಗಬಹುದು. ಪರ್ವತವನ್ನು ಗೆಲ್ಲುವ ಅಭಿವೃದ್ಧಿಯ ಬದಲು, ಪರ್ವತದೊಂದಿಗೆ ಬದುಕುವ ಅಭಿವೃದ್ಧಿ ಬೇಕಾಗಿದೆ. ಕೊನೆಯ ಪ್ರಶ್ನೆ. ನೇಪಾಳದ ರಸುವಾದಲ್ಲಿ ನೀರು ಹರಿದುಹೋಗಿದೆ. ಆದರೆ ಪ್ರಶ್ನೆಗಳು ಉಳಿದಿವೆ. ಹಿಮಾಲಯ ಇನ್ನೆಷ್ಟು ಎಚ್ಚರಿಕೆ ನೀಡಬೇಕು? ಇನ್ನೆಷ್ಟು ಹಳ್ಳಿಗಳು ಕೊಚ್ಚಿಹೋಗಬೇಕು? ಇನ್ನೆಷ್ಟು ಸೇತುವೆಗಳು ಮುರಿಯಬೇಕು? ಇನ್ನೆಷ್ಟು ಕುಟುಂಬಗಳು ತಮ್ಮವರನ್ನು ಹುಡುಕಬೇಕು? ಇನ್ನು ಮುಂದಾದರೂ ನಾವು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ? ಪ್ರಕೃತಿಯ ವಿರುದ್ಧ ಹೋರಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಆದರೆ ಪ್ರಕೃತಿಯ ಎಚ್ಚರಿಕೆಯನ್ನು ಅರ್ಥಮಾಡಿಕೊಂಡು ತನ್ನ ಅಭಿವೃದ್ಧಿಯ ದಿಕ್ಕನ್ನು ಬದಲಿಸಿಕೊಳ್ಳಲು ಸಾಧ್ಯವಿದೆ. ನೇಪಾಳದ ಆಗಸ್ಟ್ 26ರ ದುರಂತ  ಅತ್ಯಂತ ದೊಡ್ಡ ಪಾಠ ಕಲಿಸಿದೆ.  ಹಿಮಾಲಯ ಕರಗುತ್ತಿರುವುದು ಕೇವಲ ಹಿಮವಲ್ಲ. ಅದರೊಂದಿಗೆ ನಮ್ಮ ಸುರಕ್ಷತೆಯ ಭರವಸೆಯೂ ಕರಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದುರಂತದ ದಿನವನ್ನು ಪ್ರಕೃತಿ ನಿರ್ಧರಿಸುತ್ತದೆ—ಆದರೆ ಅದರ ಹೊಣೆಗಾರಿಕೆಯಿಂದ ಮನುಷ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 


̲ ಶ್ರೀರಾಜ್‌ ವಕ್ವಾಡಿ 

No comments:

Post a Comment