Sunday, August 22, 2021

ಯುನೈಟೆಡ್ ಕಿಂಗ್‌ ಡಂ ನ ಮಹಿಳೆಯರು ಅಲ್ಲಿನ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?

 


ವಿಶ್ವದ ಅಗ್ರಗಣ್ಯ ಶಕ್ತಿಯಾಗಿದ್ದ ಬ್ರಿಟನ್ ನಲ್ಲಿ ಲೈಂಗಿಕ ಕಿರುಕುಳ ಅನುಭವಿಸದೇ ಇರುವ ಮಹಿಳೆಯರೇ ಇಲ್ಲ..!

ಯುಕೆಯು ಒಂದು ಅಭಿವೃದ್ಧಿ ಹೊಂದಿದ ದೇಶವಾಗಿದ್ದು, ಅತ್ಯಲ್ಪ ಮೊತ್ತದ ಜಿಡಿಪಿಗೆ ಸಂಬಂಧಿಸಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯನ್ನು ಹಾಗೂ ಖರೀದಿ ಸಾಮರ್ಥ್ಯದ ಹೋಲಿಕೆಗೆ ಸಂಬಂಧಿಸಿ ವಿಶ್ವದ ಏಳನೇ ಅತಿದೊಡ್ಡಆರ್ಥಿಕತೆಯನ್ನು ಹೊಂದಿದೆ.  ವಿಶ್ವದ ಮೊದಲ ಕೈಗಾರಿಕೀಕೃತ ದೇಶವಾಗಿತ್ತು ಹಾಗೂ 19ನೇ ಹಾಗೂ 20ನೇ ಶತಮಾನಗಳ ಅವಧಿಯಲ್ಲಿ ವಿಶ್ವದ ಅಗ್ರಗಣ್ಯ ಶಕ್ತಿಯಾಗಿತ್ತು. ಆದರೆ ಎರಡು ಜಾಗತಿಕ ಸಮರಗಳ ಆರ್ಥಿಕ ವೆಚ್ಚ ಹಾಗೂ 20ನೇ ಶತಮಾನದ ದ್ವಿತೀಯಾರ್ಧದಲ್ಲಿನ ತನ್ನ ಚಕ್ರಾಧಿಪತ್ಯದ ಕುಸಿತದಿಂದಾಗಿ ಜಾಗತಿಕ ವಿದ್ಯಮಾನಗಳಲ್ಲಿ ಅದರ ಅಗ್ರಗಣ್ಯ ಪಾತ್ರವು ಕುಗ್ಗಿಹೋಯಿತು. 

ಇಷ್ಟಾಗಿಯೂ ಸಹ ಸದೃಢವಾದ ಆರ್ಥಿಕ, ಸಾಂಸ್ಕೃತಿಕ, ಸೈನಿಕ, ವೈಜ್ಞಾನಿಕ ಮತ್ತು ರಾಜಕೀಯ ಪ್ರಭಾವಗಳೊಂದಿಗೆ ಇಂಗ್ಲೆಂಡ್ ಪ್ರಮುಖ ಶಕ್ತಿಯಾಗಿಯೇ ಉಳಿದಿದೆ. ಮಾತ್ರವಲ್ಲದೇ ಇಂಗ್ಲೆಂಡ್ ಅಣ್ವಸ್ತ್ರ ಶಕ್ತಿಯಾಗಿದ್ದು, ರಕ್ಷಣಾ ವೆಚ್ಚಗಳಿಗೆ ಸಂಬಂಧಿಸಿ ವಿಶ್ವದಲ್ಲೇ ನಾಲ್ಕನೇ ಉನ್ನತ ಸ್ಥಾನವನ್ನು ಹೊಂದಿದೆ. ಐರೋಪ್ಯ ಒಕ್ಕೂಟದಲ್ಲಿ ಇದೊಂದು ಸದಸ್ಯ ಸಂಸ್ಥಾನವಾಗಿದ್ದು, ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನವನ್ನು ಹೊಂದಿದೆ. 

ಯುನೈಟೆಡ್ ಕಿಂಗ್‌ ಡಂ ಒಂದು ಸಾಂವಿಧಾನಿಕ ರಾಜಪ್ರಭುತ್ವದ ಮತ್ತು ಏಕೀಕೃತ ಸಂಸ್ಥಾನವಾಗಿದ್ದು, ಇಂಗ್ಲೆಂಡ್, ಉತ್ತರ ಐರ್ಲೆಂಡ್, ಸ್ಕಾಟ್ಲೆಂಡ್ ಹಾಗೂ ವೇಲ್ಸ್ ಎಂಬ ನಾಲ್ಕು ದೇಶಗಳನ್ನು ಒಳಗೊಂಡಿದೆ.

ತನ್ನ ರಾಜಧಾನಿಯಾದ ಲಂಡನ್‌ ನಲ್ಲಿ ಇದರ ಸರ್ಕಾರದ ಅಧಿಕಾರ ಕೇಂದ್ರವಿದ್ದು ಸಂಸದೀಯ ವ್ಯವಸ್ಥೆಯಿಂದ ಆಳಲ್ಪಡುತ್ತಿದೆಯಾದರೂ, ಕ್ರಮವಾಗಿ ಉತ್ತರ ಐರ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್‌ ನ ರಾಜಧಾನಿಗಳಾದ ಬೆಲ್‌ಫಾಸ್ಟ್‌, ಕಾರ್ಡಿಫ್ ಹಾಗೂ ಎಡಿನ್‌ ಬರ್ಗ್‌ ಗಳಲ್ಲಿರುವ ಮೂರು ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳೂ ಈ ಆಳ್ವಿಕೆಯ ಜೊತೆಗಿವೆ. 

ಇಷ್ಟೆಲ್ಲಾ ಇರುವ ಇಂಗ್ಲೆಂಡ್ ನಲ್ಲಿ ಮಹಿಳೆಯರು ನಿತ್ಯ ನಿರಂತರವಾಗಿ ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆಂದರೇ, ನೀವು ಒಪ್ಪಲೇ ಬೇಕು. ಹೌದು, ಬಹುತೇಕ ಬ್ರಿಟನ್ ನ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾಗಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ  ಸಮೀಕ್ಷೆಯ ವರದಿವೊಂದು ಮಾಹಿತಿ ನೀಡಿದೆ.

ಸಮೀಕ್ಷೆಗೆ ಒಳಗೊಂಡ ಬಹುತೇಕ ಎಲ್ಲಾ 18 ರಿಂದ 24 ವರ್ಷದೊಳಗಿನ ಮಹಿಳೆಯರು  ಸಾರ್ವಜನಿಕ ವಲಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಯುನೈಟೆಡ್ ಸ್ಟೇಷನ್ಸ್ ಈಕ್ವಿಟಿ ಫಾರ್ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಅಥವಾ ವುಮೆನ್ ಯು ಕೆ ನಡೆಸಿದ ಸಮೀಕ್ಷೆಯಲ್ಲಿ ಈ ರೀತಿಯ ವರದಿಯಾಗಿದೆ ಎಂದು ತಿಳಿದು ಬಂದಿದೆ.

ಬ್ರಿಟಿಷ್ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಯುಗೊವ್ ಮೂಲಕ ನಡೆಸಿದ ಈ ಸಮೀಕ್ಷೆಯಲ್ಲಿ ಶೇಕಡಾ 97ರಷ್ಟು ಮಹಿಳೆಯರು ತಮಗಾದ ಲೈಂಗಿಕ ಕಿರುಕುಳವನ್ನು ಹೇಳಿಕೊಳ್ಳುವುದಕ್ಕೆ ಮುಜುಗರ ಪಟ್ಟರೇ, ಶೇಕಡಾ 45 ರಷ್ಟು ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿಯಾದ ಮೇಲೆ ಹೇಳಿ ಪ್ರಯೋಜನ ಇಲ್ಲ, ಹೇಳಿಕೊಳ್ಳುವುದರಿಂದ ವ್ಯವಸ್ಥೆಯಲ್ಲಿ ಏನು ಬದಲಾಗುವುದಿಲ್ಲ ಎಂದು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಬಹುತೇಕ ಎಲ್ಲಾ ಮಹಿಳೆಯರು ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ದಿ ಗಾರ್ಡಿಯನ್ ನೊಂದಿಗೆ ನಡೆಸಿದ ಒಂದು ಸಂದರ್ಶನದಲ್ಲಿ ವುಮೆನ್ ಯು ಕೆ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಕ್ಲೇರ್ ಬಾರ್ನೆಟ್, ಯುವತಿಯರು ಸಮಾಜದಲ್ಲಿ ಕೆಲವರು ತಮ್ಮನ್ನು ಒಂದು ವಸ್ತುವಾಗಿ ನೋಡುತ್ತಿರುವ ವಿರುದ್ಧ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ. ಒಂದಿಷ್ಟು ಧೈರ್ಯಶಾಲಿಯಾಗಿದ್ದಾರೆ. ಆದರೇ, ವಯಸ್ಸಾದ ಮಹಿಳೆಯರು ಕತ್ತಲಾದಾಗ ಹಾಗೂ ಇನ್ನು ಕೆಲವು ಸಂದರ್ಭದಲ್ಲಿ ತಮ್ಮ ರಕ್ಷಣೆಯ ಬಗ್ಗೆ ಭಯ ಪಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ನಾವಿಂದು ಮಹಿಳೆಯ ಸಬಲೀಕರಣ ಆಗುತ್ತಿದೆ ಎಂದು ಬಯಸುತ್ತೇವೆ ಆದರೇ, ಇಂದು ಪ್ರತಿ ಮನೆ ಮನೆಯಲ್ಲೂ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾಳೆ. ಮಿತಿಯೊಳಗೆ ಬದುಕುತ್ತಾಳೆ. ಅದನ್ನು ವ್ಯಕ್ತ ಪಡಿಸುವುದಕ್ಕಾಗೆ ಪರದಾಡುತ್ತಾಳೆ. ಇದು ಮಾನವ ಹಕ್ಕುಗಳ ಬಿಕ್ಕಟ್ಟು ಎಂದು ಸಹ ಬಾರ್ನಟ್ ಹೇಳಿಕೊಂಡಿದ್ದಾರೆ.

ಪ್ರಪಂಚದಾದ್ಯಂತ ಲಿಂಗಭೇದಭಾವದ ಉದಾಹರಣೆಗಳನ್ನು ದಾಖಲಿಸುವ ಗುರಿಯನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುಯವ ವೆಬ್ ಸೈಟ್ ‘ಎವರಿಡೆ ಸೆಕ್ಸಿಸಮ್ ಪ್ರಾಜೆಕ್ಟ್’ ನ ಸಂಸ್ಥಾಪಕಿ ಲಾರಾ ಬೇಟ್ಸ್ ಮಹಿಳೆಯರು ತಮ್ಮ ಸುತ್ತಲಿನ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

-ಶ್ರೀರಾಜ್ ವಕ್ವಾಡಿ

Sunday, August 15, 2021

ಪೋರ್ನೋಗ್ರಫಿ ಸ್ಟಾರ್ ಮತೀಯ ವೈಷಮ್ಯದಲ್ಲಿ ಬೆಂದಿದ್ದೇಕೆ..?

 


ಮಾಡೆಲಿಂಗ್ ಕ್ಷೇತ್ರವೆಂದು ಮಿಯಾ ಕಲೀಫ ಕಾಲಿಟ್ಟಿದ್ದು ‘ಸೆಕ್ಸ್’ ಲೋಕಕ್ಕೆ..!

ಮಿಯಾ ಕಲೀಫ ಪೋರ್ನೋಗ್ರಫಿ ನಟಿ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಆದರೇ, ಆಕೆಯ ಅದರ ಆಚೆಗಿನ ಬದುಕಿನ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. 

ಗೂಗಲ್, ವಿಕಿಪೀಡಿಯ ಎಲ್ಲಿಯೂ ಇಲ್ಲದ ಮಿಯಾ ಕಲೀಫ ಎಂಬ ಪೋರ್ನೋಗ್ರಫಿ ನಟಿಯ ಬದುಕಿನ ಹಿಂದಿನ ಕಥೆಯನ್ನು ತೆರೆದಿಡುವ ಪ್ರಯತ್ನ ಈ ಲೇಖಬದಲ್ಲಿದೆ. 

ಜಗತ್ತಿನಾದ್ಯಂತ 2016 ಹಾಗೂ 2018 ರಲ್ಲಿ ಪೋರ್ನ್ ಕ್ಷೇತ್ರದಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಹೆಸರು ಮಿಯಾ ಕಲೀಫ. 

ಪೋರ್ನೋಗ್ರಫಿಯಲ್ಲಿ ದೊಡ್ಡ ಮಟ್ಟದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಹೆಸೆರೆಂದರೇ ಮಿಯಾ ಕಲೀಫ ಎಂದೇ ಹೇಳಬಹುದು. ಸಾಮಾಜಿಕ ಜಾಲತಾಣಗಳ ದೈತ್ಯ ವೇದಿಕೆಗಳನ್ನೆಸಿಕೊಂಡ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವೀಟರ್ ಎಲ್ಲಾ ಕಡೆ ಪೇಮ್, ನೇಮ್ ಎಲ್ಲದರ ಜೊತೆಗೆ ಮಿಯಾ ಕಲೀಫ ಹೆಸರಿನ ಜೊತೆಗೆ ದೊಡ್ಡ ವಿವಾದವೂ ಸುತ್ತಿಕೊಂಡಿತ್ತು. 

ಮಿಯಾ ಕಲೀಫ ಪೋರ್ನೋಗ್ರಫಿ ಕ್ಷೇತ್ರದಲ್ಲಿ ಎಲ್ಲರಂತೆ ಅಲ್ಲ. ತನ್ನನ್ನು ತಾನು ಸಾಮಾಜಿಕವಾಗಿ ತೊಡಗಿಸಿಕೊಂಡವಳು, ಸಾಧ್ಯವಾದಷ್ಟು ತಪ್ಪುಗಳನ್ನು ಪ್ರಶ್ನಿಸಿದವಳು. ಅವಳ ಹೆಸರಿನ ಮೇಲೆ ಅವಳ ವ್ಯಕ್ತಿತ್ವವನ್ನು ಬೇರೆಯಾಗಿ ರೂಪಿಸಿದ ಸಿದ್ಧಾಂತ, ಸಾಮಾಜಿಕ ವ್ಯವಸ್ಥೆಯನ್ನು ಬಿಟ್ಟು ಯೋಚಿಸಿದರೇ, ಮಿಯಾ ಕಲೀಫ ನಡೆದು ಬಂದ ದಾರಿ ಅಷ್ಟು ಸುಲಭದ್ದಲ್ಲ. 

ಜಾತಿ, ಧರ್ಮ, ವರ್ಣಗಳ ಬರ್ಕುಡಿ ಹೊಡೆದಾಟ, ಕಚ್ಚಾಟಗಳು, ಸಿದ್ಧಾಂತಗಳ ವಾಗ್ಯುದ್ಧಗಳು  ಆರಂಭವಾಗಿದ್ದು ಇಂದು ನಿನ್ನೆಯಲ್ಲ. ಅದಕ್ಕೆ ಸಾವಿರಾರು ವರ್ಷಗಳ ದೊಡ್ಡ ಇತಿಹಾಸವೇ ಇದೆ ಎಂದು ಹೇಳಬಹುದು. 

ಮಿಯಾ ಕಲೀಫಳ ಬದುಕಿನ ಆರಂಭಕ್ಕೆ ಒಂದು ಒಳ್ಳೆಯ ಬಾಗಿಲೇ ಇರಲಿಲ್ಲ. ಜನಾಂಗೀಯ ದ್ವೇಷಕ್ಕೆ, ವರ್ಣ ಬೇಧಕ್ಕೆ ಸಿಲುಕಿ ತನ್ನ ಬದುಕಿನಲ್ಲಿ ಅಸಹನೀಯ ಸ್ಥಿತಿ ಕಂಡ ಹೆಣ್ಣವಳು. ತನಗಿಷ್ಟವಲ್ಲದ ಪೋರ್ನೋಗ್ರಫಿ ಕ್ಷೇತ್ರಕ್ಕೆ ತನಗೆ ಅರಿವಿಲ್ಲದೇ ಅದರ ಕಷ್ಟದ ಸಂಕೋಲೆಯಲ್ಲಿ ಸಿಲುಕಿ ಬೆಂದವಳು. ಆಕೆ ಕಂಡಿದ್ದು ಹೋರಾಟದ ಬದುಕು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಸಾಮಾಜಿಕ ವಂಚನೆಗೆ ಸಿಲುಕಿದ ಕಲೀಫ, ಮೂಲತಃ ಪಶ್ಚಿಮ ಏಷ್ಯಾದ ಲೆಬನಾನಿನವಳು. ಬಿಳಿಯರ ದೇಶವೆಂದೇ ಕರೆಯಲ್ಪಡುವ ತನ್ನ ಕುಟುಂಬಕ್ಕೆ ಅಮೆರಿಕಕ್ಕೆ ಕಾಲಿಟ್ಟು ತನ್ನ ಬದುಕನ್ನು ಹೊಸ ದಾರಿಯಲ್ಲಿ ಕಂಡುಕೊಳ್ಳಬೇಕು ಎಂದುಕೊಂಡ ಕಲೀಫ ಕಂಡಿದ್ದು ಬರೀ ಶೋಚನೀಯ ಸ್ಥಿತಿ. 

ಅಮೆರಿಕಾದಲ್ಲಿ ತನ್ನ ಬಾಲ್ಯದಿಂದಲೇ, ಅಂದರೆ ಶಾಲಾದಿನಗಳಿಂದಲೇ ವರ್ಣ ಬೇಧಕ್ಕೆ ಸಿಲುಕಿ ಬದಿಗೆ ತಳ್ಳಲ್ಪಟ್ಟವಳು. ಅಲ್ಲಿನ ಸಾಮಾಜಿಕ ಅಸಮಾನತೆ, ತಾರತಮ್ಯ ಎಲ್ಲವನ್ನೂ ಕಂಡು ಬದುಕಿದ ಕಲೀಫ, ವಯೋಸಹಜವಾಗಿ ಅಮೆರಿಕಾದ ಹುಡುಗನೋರ್ವನೊಂದಿಗೆ ಪ್ರೀತಿಗೆ ಬೀಳುತ್ತಾಳೆ. ಆದರೇ, ಆ ಪ್ರೀತಿಯೂ ಕಲೀಫಳಿಗೆ ಹಿತ ನೀಡಲಿಲ್ಲ. ಆತನಿಂದಲೂ ಮೋಸ ಹೋಗಿ ಕಲೀಫ ಸೋರಗಿದವಳು. 

ದೇಹ ಸೌಂದರ್ಯವನ್ನು ಹೊಗಳಿದ ಒಬ್ಬನಿಂದ ಮಾಡೆಲ್ ಕ್ಷೇತ್ರಕ್ಕೆಂದು ಕಾಲಿಟ್ಟ ಕಲೀಫ, ಕಂಡಿದ್ದು ಪೋರ್ನೋಗ್ರಫಿ ಎಂಬ ಕರಾಳ ಕ್ಷೇತ್ರವನ್ನು. ಮಾಡೆಲ್ ಆಗಬೇಕೆಂಬ ಬಹುದೊಡ್ಡ ಕನಸ್ಸನ್ನು ಹೊತ್ತು, ಮಾಡೆಲ್ ಕ್ಷೇತ್ರಕ್ಕೆ ಕಾಲಿಟ್ಟು ಭ್ರಮನಿರಸನಕ್ಕೊಳಗಾದ ಕಲೀಫಳ ಬದುಕು ಕರುಣಾಜನಕ. 

ಗೊತ್ತಿಲ್ಲದ, ಇಷ್ಟವಿಲ್ಲದ ಪೋರ್ನೋಗ್ರಫಿ  ಕ್ಷೇತ್ರಕ್ಕೆ ತನಗೆ ಅರಿವಿಲ್ಲದೇ ಕಾಲಿಟ್ಟ ಕಲೀಫ, ತನ್ನ ದೇಶದವರಿಂದಲೇ ದೇಶದ್ರೋಹಿ ಎಂಬ ಹಣೆ ಪಟ್ಟಿಯನ್ನು ಹಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗುತ್ತದೆ. 

2014 ರಲ್ಲಿ ಪೋರ್ನೋಗ್ರಫಿ ಕ್ಷೇತ್ರಕ್ಕೆ ಕಾಲಿಟ್ಟ ಕಲೀಫ, ನಟಿಸಿದ್ದು ಕೇವಲ ಹನ್ನೆರಡು ಪೋರ್ನ್ ವೀಡಿಯೋ ಗಳಲ್ಲಿ ಮಾತ್ರ. ಕಲೀಫ ಈಗ ಮಾಜಿ ನೀಲಿ ಚಿತ್ರದ ನಟಿ. ಕಲೀಫ ಇಂದಿಗೆ ಪೋರ್ನೋಗ್ರಫಿ ಕ್ಷೇತ್ರದಿಂದ ಕಾಲ್ಕಿತ್ತು ಏಳು ವರ್ಷಗಳಾದರೂ ಇಂದಿಗೂ ಪೋರ್ನ್ ಕ್ಷೇತ್ರದಲ್ಲಿ ಮಿಯಾ ಕಲೀಫ ಹೆಸರು ಟಾಪ್ ಲೆವೆಲ್ ನಲ್ಲೇ ಇದೆ. 

ಕೇವಲ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಮಾತ್ರವಷ್ಟೇ ಪೋರ್ನೋಗ್ರಫಿ ಕ್ಷೇತ್ರದಲ್ಲಿ ಇದ್ದ ಕಲೀಫ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಹೆಸರು. 

ಲೆಬನಾನ್ ನ ಮೂಲದವಳಾದ ಕಲೀಫ. ನಡೆದ ದೊಡ್ಡ ಮತೀಯ ಘರ್ಷಣೆ ನಡೆಯುತ್ತದೆ. ಮುಸಲ್ಮಾನರ ದೇಶದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತ ಧರ್ಮದವರೊಂದಿಗೆ ಮತೀಯ ಸಂಘರ್ಷ ನಡೆಯುತ್ತದೆ. ಕಲೀಫ ಮೂಲತಃ  ಮುಸ್ಲಿಂ ಧರ್ಮಕ್ಕೆ ಸೇರಿದವಳಾದರೂ, ನಂತರದ ದಿನಗಳಲ್ಲಿ ಆಕೆಯ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತದೆ. 

2000 ದ ಸಂದರ್ಭದಲ್ಲಿ ಅಮೆರಿಕಾಕ್ಕೆ ತನ್ನ ಕುಟುಂಬಕ್ಕೆ ಬಂದ ಕಲೀಫ, ಇಲ್ಲಿ ಕಂಡಿದ್ದು ಕೂಡ ಕಷ್ಟದ ದಿನಗಳನ್ನೇ. ಅಲ್ಲಿನ ಟ್ವಿನ್ ಟವರ್ ಗಳು ದ್ವಂಸವಾದ ಸಂದರ್ಭವದು. ವಸಾಮ ಬಿನ್ ಲಾಡೆನ್ ಉಗ್ರರ ಪಡೆಯ ದಾಳಿಗೆ ಬಲಿಯಾದ ನಂತರ ಅಮೆರಿಕಾದಲ್ಲೂ ಘರ್ಷಣೆಗಳು, ಸಾಮಾಜಿಕ ದಂಗೆಗಳು, ರಾಜಕೀಯ ಕೋಲಾಹಲ ಸೃಷ್ಟಿಯಾಗಿದ್ದು ದೊಡ್ಡ ಇತಿಹಾಸ. 

ಅಮೆರಿಕಾದಲ್ಲೂ ಮುಸ್ಮೀಮರ ಮೇಲೆ ಮತೀಯ ವೈಷಮ್ಯ ತಾರಕಕ್ಕೇರಿತ್ತು. ಮಿಯಾ ಕಲೀಫ ಅವರ ಕುಟುಂಬ ಇದೇ ಸಂದರ್ಭದಲ್ಲಿ ಅಮೆರಿಕಾಕ್ಕೆ ಬಂದಿದ್ದಷ್ಟೇ, ಅಮೆರಿಕಾದಲ್ಲಿ ಮುಸ್ಮೀಂ ರ ಮೇಲೆ ದೊಡ್ಡ ವೈಷಮ್ಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣದಿಂದಾಗಿ ಮಿಯಾ ಕಲೀಫ ಕುಟುಂಬ ಕೂಡ ಈ ಘರ್ಷಣೆ, ವೈಷಮ್ಯದ ಬಿಸಿಗೆ ಬೇಯಬೇಕಾಯ್ತು ಎನ್ನುವುದು ಸತ್ಯ. 

ಮಿಯಾ ಕಲೀಫ ಮುಸ್ಮೀಂ ಟು ಕ್ರಿಶ್ಚಿಯನ್ ಗೆ ಕನ್ವರ್ಟ್ ಆದವಳು ಎಂಬ ವಿಷಯವೇ ಅಮೆರಿಕಾದಲ್ಲಿ ಆಕೆ ಪ್ರತ್ಯೇಕತೆಯ ವಾತಾವರಣಕ್ಕೆ ಒಳಗಾಗಬೇಕಾಗುತ್ತದೆ.

ಮಿಯಾ ಕಂದು ಮೈ ಬಣ್ಣದ ಚೆಲುವೆ. ಕಂದು ಬಣ್ಣದ ಮೈ ಇರುವವರಿಗೆ ಸಾಮಾಜಿಕ ವಂಚನೆ, ತಾತ್ಸಾರ ಎಲ್ಲವೂ ಅಮೆರಿಕಾದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಮಿಯಾ ಅನುಭವಿಸಬೇಕಾಗಿ ಬರುತ್ತದೆ. ಕರಿಯರೆಲ್ಲಾ ಉಗ್ರವಾದಿಗಳು ಎಂಬ ಧೋರಣೆ ಅಮೆರಿಕಾದಲ್ಲಿ ಸೃಷ್ಟಿಯಾಯಿತು. ಜನಾಂಗೀಯ ದ್ವೇಷ, ವರ್ಣ ಬೇಧದ ಧೋರಣೆ ಮಿಯಾ ಕುಟುಂಬದ ಮೇಲೂ ದೊಡ್ಟ ಪರಿಣಾಮ ಬೀರುತ್ತದೆ. 

ಕಂದು ವರ್ಣದವಳು ಎಂಬ ಕಾರಣಕ್ಕೆ ಸಾಮಾಜಿಕವಾಗಿ ವಂಚನೆಗೆ ಒಳಗಾಗಿದ್ದ ಮಿಯಾ ಸ್ವಲ್ಪ ಅರಳಿದ್ದು ಹೈಸ್ಕೂಲಿನ ಸಂದರಗಭದಲ್ಲಿ. ಅಮೆರಿಕಾದ ಮೂಲದ ಹುಡುಗನೋರ್ವ ಮಿಯಾಳ ದೇಹ ಸೌಂದರ್ಯಕ್ಕೆ ಮಾರು ಹೋಗಿ ಮಿಯಾಳಿಗೆ ಪ್ರಪೋಸ್ ಮಾಡುತ್ತಾನೆ. ಮಿಯಾ ಕೂಡ ಆತನನ್ನು ಮನಸಾರೆ ಇಷ್ಟ ಪಡುತ್ತಾಳೆ. ಪ್ರೇಮಾಂಕುರವಾಗುತ್ತದೆ. 

ಕಾಲೇಜು ಮುಗಿಸಿದ ನಂತರ ಮನೆಯವರ ತೀವ್ರ ವಿರೋಧದ ನಡುವೆಯೂ ಮಿಯಾ ಆ ಹುಡುಗನೊಂದಿಗೆ ಮದುವೆಯಾಗುತ್ತಾಳೆ. 

ಸಣ್ಣ ವಯಸ್ಸಿನಲ್ಲಿ ಅಷ್ಟೇನೂ ಆಕರ್ಷಕಳಾಗಿಲ್ಲದ ಮಿಯಾ, ಕಾಲೇಜಿನ ದಿನಗಳಲ್ಲಿ ಆಕರ್ಷಕ  ದೇಹ ಸೌಂದರ್ಯವನ್ನು ಪಡೆದು, ಯಾರಿಂದ ವರ್ಣ ಬೇಧಕ್ಕೊಳಗಾಗಿದ್ದಳೋ, ಅವರೇ ತಿರುಗಿ ನೋಡುವ ಹಾಗೆ ಮಾಡುತ್ತಾಳೆ. 

ಇತಿಹಾಸ ವಿಷಯದಲ್ಲಿ ಪದವಿ ಓದುತ್ತಿರುವಾಗ ಯಾರನ್ನು ಇಷ್ಟ ಪಟ್ಟಿದ್ದಳೋ ಆತನಿಂದಲೇ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಒಂಟಿ ಬದುಕನ್ನು ಎದುರಿಸಬೇಕಾಗಿ ಬಂದರೂ, ಮಿಯಾ ಮೊದಲಿಗಿಂತ ದುಪ್ಪಟ್ಟು ಗಟ್ಟಿಯಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಒಗ್ಗಿಕೊಳ್ಳುವ ಧೈರ್ಯ ಹೊಂದಿದ್ದಳು. ಪದವಿ ಮುಗಿಸುತ್ತಾಳೆ. 

ಒಂದೊಮ್ಮೆ ರಸ್ತೆಯೊಂದರಲ್ಲಿ ಈಕೆಯನ್ನು ಕಂಡ ಶ್ರೀಮಂತ ಪ್ರೊಡ್ಯುಸರ್ ಒಬ್ಬ ಮಾಡೆಲಿಂಗ್ ಕ್ಷೇತ್ರಕ್ಕೆ ಬರುವಂತೆ ಪ್ರೇರೇಪಿಸುತ್ತಾರೆ. ಯಾವದೇ ಅರಿವಿಲ್ಲದೇ ಮಾಡೆಲಿಂಗ್ ಕ್ಷೇತ್ರಕ್ಕೆಂದು ಕಾಲಿಟ್ಟಾಗ ಅದು ಮಾಡೆಲಿಂಗ್ ಕ್ಷೇತ್ರವಾಗಿರಲಿಲ್ಲ. ಅದು ಪೋರ್ನೋಗ್ರಫಿ ಕ್ಷೇತ್ರವಾಗಿತ್ತು ಎನ್ನುವುದು ಆಕೆ ಅಲ್ಲಿ ಬಂಧಿಯಾದ ಮೇಲೆ ತಿಳಿಯಿತು. 

ಪ್ರೀತಿಯ ಕಾರಣದಿಂದ ತನ್ಮ ಕುಟುಂಬದಿಂದ ದೂರವಾಗಿದ್ದ ಮಿಯಾ, ಪೋರ್ನೋಗ್ರಫಿ ಕ್ಷೇತ್ರಕ್ಕೆ ಕಾಲಿಡುವಾಗ ಒಬ್ಬಂಟಿ. ತನಗೆ ತಾನು ಮಾಡುತ್ತಿರುವುದು ಸರಿಯೇ, ತಪ್ಪೇ ಎನ್ನುವುದರ ಬಗ್ಗೆ ಅರಿವೇ ಇಲ್ಲದ ಪರಿಸ್ಥಿತಿಯಲ್ಲಿ ಕಲೀಫ ಇದ್ದಿದ್ದಳು. 

ಮಾಡೆಲಿಂಗ್ ಕ್ಷೇತ್ರದಲ್ಲಿ  ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಮಹತ್ತರ ಕನಸಿನೊಂದಿಗೆ ಕಾಲಿಟ್ಟಿದ್ದು, ಅಮೆರಿಕಾ ಮೂಲದ ಅಂತಾರಾಷ್ಟ್ರೀಯ ಪೋರ್ನೋಗ್ರಫಿ ಪ್ರೊಡಕ್ಷನ್ ಸಂಸ್ಥೆ ಬ್ಯಾಂಗ್ ಬ್ರೋಸ್ ಸಂಸ್ಥೆಗೆ. 

ಕಲೀಫಾ ಮೊದಲು ನಟಿಸಿದ ಮೊದಲ ಪೋರ್ನೋಗ್ರಫಿ ಶೋಗಳಲ್ಲಿ ಮುಸ್ಲೀಂ ಸಾಂಪ್ರದಾಯಿಕ ಧಿರಿಸನ್ನು ಧರಿಸಿ ನಟಿಸುವಂತೆ ಆ ಪ್ರೊಡಕ್ಷನ್ ಸಂಸ್ಥೆ ಕಲೀಫಳನ್ನು ಒತ್ತಾಯಿಸುತ್ತದೆ. ಆದರೇ, ಅದೇ ದೊಡ್ಡ ವಿವಾದದ ಮೂಟೆಯನ್ನು ಕಲೀಫಳ ತಲೆ ಮೇಲೆ ತಂದಿಡುತ್ತದೆ ಎಂಬ ಸಣ್ಣ ಆಲೋಚನೆಯೂ ಇಲ್ಲದ ಮುಗ್ದೆಯಾಗಿದ್ದಳು ಕಲೀಫ ಎಂದರೇ ತಪ್ಪಿಲ್ಲ‌. 

ಆ ದೃಶ್ಯ ಬಹಿರಂಗವಾದಾಗ ಮುಸ್ಲಿಂ ದೇಶಗಳಲ್ಲಿ ಮಿಯಾ ಕಲೀಫಳ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ. ಪ್ರೊಡಕ್ಷನ್ ಸಂಸ್ಥೆಯಲ್ಲಿ ಈ ಸಾಂಪ್ರದಾಯಿಕ ಧಿರಿಸು ಧರಿಸುವುದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ ಎಂದು ಸ್ವತಃ ಕಲೀಫ ಕೇಳುತ್ತಾಳೆ, ಆದರೇ, ಆ ಪ್ರೊಡಕ್ಷನ್ ಸಂಸ್ಥೆ ಈಕೆಗೆ ಏನೂ ಸಮಸ್ಯೆಯಾಗುವುದಿಲ್ಲ ಎಂದು ಒತ್ತಾಯಿಸಿ ನಟನೆ ಮಾಡಿಸುತ್ತದೆ. 

ಮುಸ್ಲಿಂ ಧರ್ಮದ ಸಾಂಪ್ರದಾಯಿಕ ಧಿರಿಸು ಆಕೆಗೆ ಇಷ್ಟೊಂದು ವಿವಾದ ತಂದೊಡ್ಡುತ್ತದೆ ಎಂದು ಆಕೆಗೆ ಗೊತ್ತೇ ಇರುವುದಿಲ್ಲವೆಂದು ಇತ್ತೀಚೆಗೆ ಬಿಬಿಸಿ ಚಾನೆಲ್ ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತಾಡುವಾಗ, "ಹಣದ ಹಿಂದೆ ನಡೆಯುವ ಈ ಆಧುನಿಕ ಜಗತ್ತು ಯಾರನ್ನು ಯಾವ ರೀತಿಯಲ್ಲಿ ಬಲಿ ತೆಗೆದುಕೊಳ್ಳುತ್ತದೆ ಎನ್ನುವುದು ತಿಳಿಯುವುದಿಲ್ಲ" ಎಂಬ ಮಾತೇ ದೊಡ್ಡ ಸಾಕ್ಷಿ. 

ಪೋರ್ನೋಗ್ರಫಿ ಕ್ಷೇತ್ರದಲ್ಲಿ ಕೇವಲ 12 ವೀಡಿಯೋ ಗಳಲ್ಲಿ ನಟಿಸಿದ ಕಲಿಫ ದುಡಿದಿದ್ದು ಕೇವಲ 12,000 ಡಾಲರ್. ಆದರೇ, 2016 ರಿಂದ ಈವರೆಗೆ ಪೋರ್ನ್ ಸೈಟ್ ಗಳಲ್ಲಿ ಅತಿ ಹೆಚ್ಚು ಸರ್ಚ್ ಗೆ ಒಳಗಾಗಿರುವ ನಟಿ. 

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಟಿಕ್ ಟಾಕ್ ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಹಾಕುವ ಪೋಸ್ಟ್ಗಳನ್ನು ನೋಡೋಕೆ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ಈಗ ಪಾಕಿಸ್ತಾನ ಅವರಿಗೆ ಟಿಕ್ ಟಾಕ್ ಖಾತೆಯನ್ನು ಬ್ಯಾನ್ ಮಾಡುವ ಮೂಲಕ ಶಾಕ್ ನೀಡಿದೆ. ಹಾಗಂತ ಮಿಯಾ ಕೈಕಟ್ಟಿ ಕೂತಿಲ್ಲ. ಅವರು ಖಡಕ್ ಆಗಿಯೇ ಇದಕ್ಕೆ ಉತ್ತರಿಸಿದ್ದಾರೆ.

ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್ ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಈ ಮೊದಲು ಅವರ ಟಿಕ್ ಟಾಕ್ ಖಾತೆಯನ್ನು ಬ್ಯಾನ್ ಮಾಡಿತ್ತು. ಏಪ್ರಿಲ್ ತಿಂಗಳಲ್ಲಿ ಈ ನಿಷೇಧವನ್ನು ಹಿಂಪಡೆಯಲಾಗಿತ್ತು. ಆದರೆ, ಮಿಯಾ ಮೊದಲಿನ ರೀತಿಯಲ್ಲೇ ಪೋಸ್ಟ್ಗಳನ್ನು ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಮತ್ತೆ ಅವರ ಟಿಕ್ ಟಾಕ್ ಖಾತೆ ಬ್ಯಾನ್ ಆಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಿಯಾ, ಟಿಕ್ಟಾಕ್ ಖಾತೆ ಬ್ಯಾನ್ ಮಾಡಿದ ಪಾಕಿಸ್ತಾನಕ್ಕೆ ನನ್ನ ಶೌಟೌಟ್. ಫ್ಯಾಸಿಸಂನಿಂದ ದೂರ ಉಳಿಯ ಬಯಸುವ ಪಾಕಿಸ್ತಾನಿ ಫ್ಯಾನ್ಸ್ಗಾಗಿ ನಾನು ನನ್ನ ಟಿಕ್ಟಾಕ್ ವಿಡಿಯೋಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ. ಮಿಯಾ ಟಿಕ್ಟಾಕ್ನಲ್ಲಿ 2.2 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. 

ನೀಲಿ ಚಿತ್ರಗಳಲ್ಲಿ ನಟನೆ ನಿಲ್ಲಿಸಿದ್ದ ಮಿಯಾ ಇತ್ತೀಚೆಗೆ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ. ಮಿಯಾ ಖಲೀಫಾ ಫೆಬ್ರವರಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಭಾರತದ ರೈತರು ನಡೆಸುತ್ತಿದ್ದ ಪ್ರತಿಭಟನೆ ಬೆಂಬಲಿಸಿ ಸುದ್ದಿಯಾಗಿದ್ದರು.

-ಶ್ರೀರಾಜ್ ವಕ್ವಾಡಿ 

Sunday, August 8, 2021

ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?

 



ಮನುಷ್ಯನಿಗೆ ಭಾವನೆಗಳನ್ನು ಹೊರತಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಭಾವನೆಗಳು ನೀವು ಹೇಗೆ ಯೋಚಿಸುತ್ತೀರಿ ಮತ್ತು ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ನೀವು ಪ್ರತಿದಿನ ಅನುಭವಿಸುವ ಭಾವನೆಗಳು ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಮತ್ತು ಪ್ರಭಾವಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಭಾವನೆಯ ಮೂರು ಮೂಲಭೂತ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬದುಕಿನಲ್ಲಿ ಬಹಳ ಮುಖ್ಯ. ಈ ಮೂರು ಅಂಶಗಳನ್ನು ನಾವು ಅರ್ಥ ಮಾಡಿಕೊಂಡಿಲ್ಲವೆಂದಾದಲ್ಲಿ ಭಾವನೆಗಳಿಂದಲೇ ಕೊರಗಬೇಕಾಗುತ್ತದೆ ಎನ್ನವುದು ಸತ್ಯ. 

ಸಾಮಾನ್ಯವಾಗಿ ಕೆಲವರು ತಮ್ಮನ್ನು ತಾವು ಭಾವನಾತ್ಮಕ ಜೀವಿ ಎಂದು ಗುರುತಿಸಿಕೊಳ್ಳುತ್ತಾರೆ. ಅದು ಇನ್ನೊಬ್ಬರು ತನ್ನ ಮೇಲೆ ಒಂದಿಷ್ಟು ಅನುಕಂಪ ಇಟ್ಟುಕೊಳ್ಳಲಿ ಎಂಬ ತಂತ್ರವೂ ಹೌದು ಎನ್ನುತ್ತದೆ ಮನಃಶಾಸ್ತ್ರ. ಆದರೇ, ಎಲ್ಲಾ ಸಂದರ್ಭದಲ್ಲಿಯೂ ಅಲ್ಲ. 

ಒಂದು ಭಾವನೆಯು ಮೂರು ಅಂಶಗಳಿಂದ ಕೂಡಿದೆ : 

ವ್ಯಕ್ತಿನಿಷ್ಠ ಅಂಶ :  ಇದು ನೀವು ಭಾವನೆಯನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದರ ಮೇಲೆ ಆಧರಿಸಿ ಇರುತ್ತದೆ. ಭಾವನೆಗಳನ್ನು ಅನುಭವಿಸುವುದು ಮುಖ್ಯ.ಅನುಭವಿಸುವ ಗುಣ ಇಲ್ಲದಿದ್ದರೇ. ಭಾವನೆಗಳಲ್ಲೇ ಮುಳಗಿ ಹೋಗಬೇಕಾಗುತ್ತದೆ ಎನ್ನುವುದು ಅಕ್ಷರಶ‍ಃ ಸತ್ಯ. 

ಶಾರೀರಿಕ ಅಂಶ : ಇದು ನಿಮ್ಮ ದೇಹವು ಭಾವನೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುವುದನ್ನು ಅನುರಿಸಿ ಇರುತ್ತದೆ. ಶಾರೀರಿಕ ಪ್ರತಿಕ್ರಿಯೆಯೂ ಭಾವನೆಗಳಿಗೆ ಮುಖ್ಯವಾಗುತ್ತದೆ. ಭಾವನಗೆಗಳಿಗೆ ಶರೀರ ಪ್ರತಿಕೂಲವಾಗಿ ಸ್ಪಂದಿಸದೇ ಇದ್ದರೇ ವ್ಯತ್ಯಾಸ ಆಗುವ ಸಾಧ್ಯತೆಯೂ ಇದೆ.

ಅಭಿವ್ಯಕ್ತಿಗೊಳಿಸುವ ಅಂಶ  : ಭಾವನೆಗೆ ಪ್ರತಿಕ್ರಿಯೆಯಾಗಿ ನೀವು ಹೇಗೆ ವರ್ತಿಸುತ್ತೀರಿ ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ, ಅಳುವನ್ನು ಅದುಮಿಟ್ಟುಕೊಂಡರೇ, ಅದು ನಿಮ್ಮನ್ನು ಮತ್ತಷ್ಟು ಹಿಂಸಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಅಳು ಬಂದಾಗ ಅಳುವುದು, ಸಿಟ್ಟು ಬಂದಾಗ ಅದನ್ನು ವ್ಯಕ್ತ ಪಡಿಸಿಕೊಳ್ಳುವುದು ಭಾವನೆಗಳ ವಿಚಾರದಲ್ಲಿ ಮುಖ್ಯವಾಗುತ್ತದೆ.  

ಭಾವನೆಗಳು ಕ್ಷಣಿಕವಾಗಬಹುದು, ಉದಾಹರಣೆಗೆ ಸಹೋದ್ಯೋಗಿಯ ಮೇಲಿನ ಕೋಪ, ಅಥವಾ ಅವರ ಸಂಬಂಧವನ್ನು ಕಳೆದುಕೊಳ್ಳುವ ದುಃಖ ದೀರ್ಘಕಾಲೀನವಾಗಬಹುದು. ಆದರೆ ನೀವು ಮೊದಲಿಗೆ ಭಾವನೆಗಳನ್ನು ಏಕೆ ಅನುಭವಿಸುತ್ತೀರಿ ? ಭಾವನೆಗಳು ಯಾವ ಕಾರ್ಯವನ್ನು ಹೊಂದಿವೆ ? ಭಾವನೆ ನಮಗೆ ಸಹಾಯ ಮಾಡುವ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಭಾವನೆಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇಂಗ್ಲಿಷ್ ಪದ 'ಇಮೋಷನ್' ನನ್ನು ಫ್ರೆಂಚ್ ಪದ ಇಮೌವಾಯರ್ ನಿಂದ ಪಡೆಯಲಾಗಿದೆ. ಇದು ಲ್ಯಾಟಿನ್ ಪದ ಇಮೋವೀರ್ ನನ್ನು ಆಧರಿಸಿದೆ, ಇದರಲ್ಲಿ ಇ ಅಂದರೆ 'ಹೊರಗೆ' ಮತ್ತು ಮೋವೂರ್ ಅಂದರೆ 'ಚಲನೆ' ಎಂದರ್ಥ.

 ಸಂಬಂಧಿತ ಪದ "ಮೋಟಿವೇಶನ್” ನನ್ನೂ ಸಹ ಮೋವೀರ್ ನಿಂದ ಪಡೆಯಲಾಗಿದೆ.

ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳ, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆ ಇರುತ್ತದೆ. 

ಸಾಮಾನ್ಯವಾಗಿ ಹೆಚ್ಚಿನವು ಅವರವರ ಭಾವನಾತ್ಮಕ ಸ್ಥಿತಿಯ ನೇರ ಪರಿಣಾಮವಾಗಿ ಕೆಲವು ರೀತಿಗಳಲ್ಲಿ ವರ್ತಿಸುತ್ತಾರೆ, ಅಳುವುದು, ಜಗಳವಾಡುವುದು ಅಥವಾ ತೊರೆದುಬಿಡುವುದು ಹೀಗೆ ಹಲವು…. ಅನುಗುಣವಾದ ವರ್ತನೆಯಿಲ್ಲದ ಭಾವನೆಯನ್ನು ಹೊಂದಿದ್ದರೆ, ಭಾವನೆಗೆ ವರ್ತನೆಯ ಅಗತ್ಯವಿಲ್ಲ ಎಂದು ನಾವು ಪರಿಗಣಿಸಬಹುದು.

ಯೋಚನೆಯೊಂದನ್ನು ಪಡೆದು ಅದು ಭಾವನಾತ್ಮಕ ಪ್ರತಿಕ್ರಿಯೆಯಾಗಿ ಹೊರಹೊಮ್ಮುವ ಮೊದಲು ಒಂದು "ಅದ್ಭುತವಾದ ಕೆಲ ಸೆಕೆಂಡು" ಇರುತ್ತದೆ ಎಂದು ನರ ವೈಜ್ಞಾನಿಕ ಸಂಶೋಧನೆಯು ಸೂಚಿಸುತ್ತದೆ. ಆ ಕೆಲ ಕ್ಷಣಗಳಲ್ಲೆ ಭಾವನೆಗಳು ನಮ್ಮನ್ನು ಸಂತೋಷ ಪಡಿಸಲೂ ಬಹದು ಮತ್ತು ದುಃಖ ಪಡಿಸಲೂ ಬಹುದು. 

ಭಾವನೆಗಳನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೇ, ಮೇಲೆ ಹೇಳಿರುವ ಮೂರು ಅಂಶಗಳನ್ನು ಅಳವಡಿಸಿಕೊಂಡರೇ, ಭಾವನೆಗಳಿಗೆ ಪ್ರತಿ ಸ್ಪಂದಿಸುವುದಕ್ಕೆ ಆಗುತ್ತದೆ. ಮಾತ್ರವಲ್ಲದೇ, ಎಲ್ಲಾ ಭಾವನೆಗಳನ್ನು ಕೇವಲ ಭಾವನೆಗಳಂತೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಭಾವನೆಗಳು ‘ಕೊರಗು’ ಗಳಾಗಿ ಪರಿವರ್ತೆನಯಾಗುತ್ತವೆ. 

ನಿಮ್ಮ ಭಾವನೆಗಳು, ನೀವು ಕಂಡುಹಿಡಿದಂತೆ, ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಭಾವನೆಗಳು ಸಂಕ್ಷಿಪ್ತ, ದೀರ್ಘಕಾಲೀನ, ತೀವ್ರವಾದ, ಮತ್ತು ಸಂಕೀರ್ಣ ಜೀವನವನ್ನು ಬದಲಾಯಿಸುವಂತಹುದು. ಕೆಲವು ರೀತಿಯಲ್ಲಿ ಕಾರ್ಯನಿರ್ವಹಿಸಲು ಅವರು ನಿಮ್ಮನ್ನು ಪ್ರೇರೇಪಿಸಬಹುದು ಮತ್ತು ನಿಮ್ಮ ಸಾಮಾಜಿಕ ಜೀವನದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುತ್ತದೆ. 

-ಶ್ರೀರಾಜ್ ವಕ್ವಾಡಿ

Friday, August 6, 2021

ಬೊಮ್ಮಾಯಿ ಸಂಪುಟ ಕೇವಲ ಸಮಾಧಾನದ ಪರಿಹಾರ..!

 


ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ರಾಜ್ಯ ಬಿಜೆಪಿ ಸರ್ಕಾರದ ನೊಗ ಹೊತ್ತುಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ನೊಗ ಭಾರವಾಗಿದ್ದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಎಲ್ಲಿಯೂ ಇಲ್ಲದ ಮಹತ್ತರವಾದ ಬದಲಾವಣೆ ಆಗುತ್ತದೆ ಎಂಬ ದೊಡ್ಡ  ನಿರೀಕ್ಷೆಗಳೆಲ್ಲಾ ಹುಸಿ ಆಗಿ ಹೋಗಿವೆ. 

ರಾಜ್ಯ ಸರ್ಕಾರದ ಸಚಿವ ಸಂಪುಟ ಹೇಗಾಗಿದೆ ಎಂದರೇ, ಹಿರಿತನ, ಸಮುದಾಯಗಳ ಮಾನದಂಡದಲ್ಲಿ ನೀಡಿದ ಸಮಾಧಾನದ ಪರಿಹಾರದಂತಾಗಿದೆ. ಬಿಜೆಪಿ ಹೈಕಮಾಂಡ್ ಗೆ ಕರ್ನಾಟಕದ ಬಿಜೆಪಿ ನಾಯಕರನ್ನು ಸಮಾಧಾನ ಪಡಿಸುವುದೇ ಒಂದು ರೀತಿಯಲ್ಲಿ ಮೂಲಮಂತ್ರದಂತಾಗಿದೆ. ಅತ್ತ ಯಡಿಯೂರಪ್ಪರವರನ್ನು ಮೂಲೆಗುಂಪು ಮಾಡುವುದಕ್ಕೆ ಸಾಧ್ಯವಿಲ್ಲದೇ ಅವರನ್ನು ಸಮಾಧಾನ ಪಡಿಸುವುದರಲ್ಲೇ ಹೈಕಮಾಂಡ್ ಜಾಣತನದ ಪರಿಹಾರ ಒದಗಿಸಿದೆ. 

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಪಿತಾಮಹ ಇದ್ದ ಹಾಗೆ. ಯಡಿಯೂರಪ್ಪ ಅವರಿಗೆ ಸಮನಾದಂತಹ ನಾಯಕ ಬಿಜೆಪಿ ಕರ್ನಾಟಕದಲ್ಲಿ ಇಲ್ಲದಿರುವುದರಿಂದ ಯಡಿಯೂರಪ್ಪರನ್ನು ಬದಿಗೊತ್ತಿ ಪಕ್ಷ ಬೆಳೆಸುತ್ತೇವೆ ಎಂದರೇ, ದಕ್ಷಿಣ ಭಾರತದಲ್ಲಿಯೇ ಬಿಜೆಪಿ ದೊಡ್ಡ  ಆಘಾತ ಕಾಣಬೇಕಾಗುತ್ತದೆ ಎಂಬ ಭಿತಿಯಲ್ಲಿಯೇ ಹೈಕಮಾಂಡ್ ಜಾಣತನ ತೋರಿಸಬೇಕಾದ ಸ್ಥಿತಿಯಲ್ಲಿದೆ. ಅತ್ತ ಕೋಲು ಮುರಿಯಬಾರದು, ಇತ್ತ ಹಾವು ಸಾಯಬಾರದು ಹಾಗಾಗಿದೆ ಬಿಜೆಪಿ ಹೈಕಮಾಂಡ್ ಕಥೆ. 

ಅಳೆದು ತೂಗಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಅತೃಪ್ತ ಬಿಜೆಪಿ ನಾಯಕರ ಅಸಮಾಧಾನದ ಕಿಡಿ ರಾಜ್ಯ ಬಿಜೆಪಿ ವಲಯದಲ್ಲಿ ಜೀವ ಪಡೆದಿದ್ದು, ಸರ್ಕಾರದ ಅಸ್ತಿತ್ವದ ಮೇಲೆ ದೊಡ್ಡ ಪ್ರಶ್ನೆಯೆಬ್ಬಿಸಿದೆ. ಇದುವರೆಗೆ ಪೂರ್ಣ ಬಹುಮತ ಇಲ್ಲದೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಮಾಡಿರುವುದರಿಂದ ಸರ್ಕಾರ ರಚನೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೊಟ್ಟಿದ್ದ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ಬಿ. ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಬೊಮ್ಮಾಯಿ ಮೇಲೆ ಇತ್ತು ಎನ್ನುವುದು ಈಗ ಸಚಿವ ಸಂಪುಟದಲ್ಲಿ ಮತ್ರಿಗಿರಿ ಪಡೆದ ವಲಸಿಗರ ಪಟ್ಟಿ ನೋಡಿದರೆ ತಿಳಿಯುತ್ತದೆ. 

ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಗೆ, ಬಿ. ಎಸ್ ಯಡಿಯೂರಪ್ಪ ಅವರ ಸಲಹೆಯನ್ನು ಪಡೆಯುವುದು ಬೇಡ, ನೀವು ನಿಮ್ಮ ನೇತೃತ್ವದಲ್ಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸಿ ಎಂದಿದ್ದರೂ, ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ವೈ ಅವರನ್ನು ‘ನಮ್ಮ ನಾಯಕರು’ ಎಂದು ಸಂಭೋದಿಸುತ್ತಿರುವುದನ್ನು ಗಮನಿಸಿದರೇ, ಯಡಿಯೂರಪ್ಪ ಅವರ ಕೈಯಲ್ಲೇ ಇನ್ನೂ ಸೂತ್ರ ಇದೆ. ಸಚಿವ ಸಂಪುಟವೂ ಬಿ. ಎಸ್ ವೈ ನಿರ್ದೇಶನದಲ್ಲಿಯೇ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 

ತ್ರಿಶಂಕು ಸ್ಥಿತಿಯಲ್ಲಿ ಬೊಮ್ಮಾಯಿ : 

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಗ ತ್ರಿಶಂಕು ಸ್ಥಿತಿ. ಅತ್ತ ಹೈಕಮಾಂಡ್, ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕೇಳಿಕೊಂಡೇ ಮುಂದುವರಿಯಬೇಕಾದ ಸ್ಥಿತಿ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಹಗ್ಗದ ಮೇಲೆ ನಡಿಗೆ ಆರಂಭಿಸಿದ್ದಾರೆ ಎನ್ನುವುದು ಸತ್ಯ. 

ಸಮುದಾಯ, ಜಾತಿ ಲೆಕ್ಕಾಚಾರ, ಹಿರಿತನ, ಸರ್ಕಾರದ ರಚನೆಯಲ್ಲಿ ಪಾಲು, ಪಕ್ಷ ಸಂಘಟನೆ ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆ ಮಾಡಲಾಗಿದೆ.  ಸರ್ಕಾರವನ್ನು ಅರ್ಧದಾರಿಯಿಂದ ಪೂರ್ಣತ್ವದೆಡೆಗೆ ಸಾಗಿಸುವ ಹೊಣೆಗಾರಿಗೆ ಬೊಮ್ಮಾಯಿ ಅವರಿಗಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ವಿಶ್ವಾಸ, ಗೌರವ ಇರಿಸಿಕೊಳ್ಳಬೇಕಾದ ಅನಿವಾರ್ಯವಿದೆ. 

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕೆಲವು ಸಚಿವರು ಭ್ರಷ್ಟಾಚಾರದ ಆರೋಪವನ್ನು ಹೊತ್ತಿದ್ದರು. ಆ ಎಲ್ಲಾ ಕಳಂಕದಿಂದ ಮುಕ್ತವಾಗಿ ಸರ್ಕಾರವನ್ನು ಮುನ್ನಡೆಸುವ ನೇತೃತ್ವ ಬೊಮ್ಮಾಯಿ ಅವರ ಮೇಲಿದೆ. ಹೈಕಮಾಂಡ್ ಕೂಡ ಅದೇ ಸಲಹೆಯನ್ನು ಬೊಮ್ಮಾಯಿಗೆ ನೀಡಿದ್ದಾರೆ. ಆದರೇ, ಈಗಾಗಲೇ ಇತ್ತೀಚೆಗಷ್ಟೇ ‘ಮೊಟ್ಟೆ ಕೇಸ್’ ನಲ್ಲಿ ಸಿಲುಕಿಕೊಂಡಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸ್ಥಾನ ಸಿಕ್ಕಿದ್ದು, ಅತೃಪ್ತ ಶಾಸಕರಿಗೆ, ಪ್ರತಿಪಕ್ಷಗಳಿಗೆ ಈ ವಿಚಾರ ಆಹಾರವಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. 

ಈಶ್ವರಪ್ಪ ಅಸಮಾಧಾನ, ಕಾಂಗ್ರೆಸ್ ಗೆ ವರದಾನ..? 

ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಈಶ್ವರಪ್ಪರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕದೇ ಇರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಕೊನೆಯ ಪಕ್ಷ ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ನೀಡಲಿ ಎಂದು ಈಶ್ವರಪ್ಪ ಪಕ್ಷದ ಹೈಕಮಾಂಡ್ ನನ್ನು ಬಹಿರಂಗವಾಗಿ ಬೇಡಿಕೊಂಡಿದ್ದರು. ಅದು ಕೂಡ ಫಲಿಸಲಿಲ್ಲ. 

ಕಳೆದ ಸಚಿವ ಸಂಪುಟದಲ್ಲಿ, ಅಂದರೇ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಉಪ ಮುಖ್ಯಮಂತ್ರಿ ಸ್ಥಾನ ರಚಿಸಿ ರಾಜ್ಯ ಬಿಜೆಪಿಯಲ್ಲಿ ಹೇಳುವಂತದ್ದೇನೂ ಬದಲಾವಣೆಯಾಗಿರಲಿಲ್ಲ. ಈಶ್ವರಪ್ಪ ಅವರಿಗೂ ಆ ಸಂದರ್ಭದಲ್ಲಿಯೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿಲ್ಲ. ಆಗ ಅಸಮಧಾನ ತೋರ್ಪಡಿಸಿಕೊಳ್ಳುವುದಕ್ಕೆ ಆಗದ ಸ್ಥಿತಿಯಲ್ಲಿ ಈಶ್ವರಪ್ಪ ಇದ್ದಿದ್ದರು. ಗೋವಿಂದ ಕಾರಜೋಳ, ಡಾ. ಸಿ ಎನ್. ಅಶ್ವಥ್ ನಾಯಾರಣ  ಲಕ್ಷ್ಮಣ ಸವದಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಾಲಾಗಿತ್ತು. 

ಸಮುದಾಯವವನ್ನು ಬಿಟ್ಟು ಬಿಡಬಾರದು, ಯಾವ ನಾಯಕರಿಗೂ ಅಸಮಾಧಾನ ಉಂಟಾಗಬಾರದೆಂಬ ಉದ್ದೇಶದಿಂದಲೇ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಅವಕಾಶವನ್ನೇ ನೀಡಿಲ್ಲ. ಇದು ಉಪ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿದ್ದ ಈಶ್ವರಪ್ಪ, ಸುನಿಲ್ ಕುಮಾರ್, ಆರ್. ಅಶೋಕ್, ಶ್ರೀರಾಮುಲು ಪಾಲಿಗೆ ಕಹಿಯಾಗಿತ್ತು ಎನ್ನುವುದು ಸತ್ಯ. 

ಈಶ್ವರಪ್ಪ ಈ ಬಗ್ಗೆ ಈಗಾಗಲೇ ಅಸಮಧಾನ ವ್ಯಕ್ತ ಪಡಿಸಿದ್ದು, ಈವರೆಗೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಮುಂದೆ ಪೂರ್ಣ ಬಹುಮತ ಸಿಗಲಿದೆ. ಆಗ  ರಾಷ್ಟ್ರವಾದಿ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಗಾಗಲೇ ಬೊಮ್ಮಾಯಿ, ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದು, ಬಂಡಾಯದ ಸುಳಿವು ನೀಡಿದ್ದಾರೆ. ಆ ರಾಷ್ಟ್ರವಾದಿ ನಾಯಕ ಯಾರು..? ಆ ರಾಷ್ಟ್ರವಾದಿ ನಾಯಕ ಈಶ್ವರಪ್ಪನವರೇ..? ಅಥವಾ ಇನ್ಯಾರು..? ಒಂದು ವೇಳೆ  ಈಶ್ವರಪ್ಪ ನಾಯಕತ್ವದಲ್ಲಿ ಮುಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದರೂ, ಸಮರ್ಥ ಆಡಳಿತ ನೀಡುವಲ್ಲಿ ಹಿನ್ನಡೆ ಅನುಭವಿಸಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದಕ್ಕೆ ಈಶ್ವರಪ್ಪ ವೃದ್ಧಿಸಿಕೊಳ್ಳದ ವಿಶ್ವಾಸಾರ್ಹ ರಾಜಕೀಯದ ಮುಖವೇ ಸಾಕ್ಷಿ. 

ಪಕ್ಷದಲ್ಲಿನ ಹಿರಿಯ ನಾಯಕ ಈಶ್ವರಪ್ಪ ಅವರನ್ನೊಳಗೊಂಡು ಕೆಲವರ ಅಸಮಾಧಾನವನ್ನೇ ಕಾಂಗ್ರೆಸ್ ಲಾಭ ಮಾಡಿಕೊಳ್ಳಬಹುದು. ಆದರೂ, ಯಡಿಯೂರಪ್ಪ ಅವರ ಇರುವ ತನಕ ಅಷ್ಟು ಸುಲಭವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಬಹುಮತದೊಂದಿಗೆ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಿಲ್ಲ ಎನ್ನುವ ರಾಜಕೀಯ ವಿಶ್ಲೇಷಣೆಯನ್ನು ತೆಗೆದು ಹಾಕುವಂತಿಲ್ಲ. ಆದರೇ, ಯಡಿಯೂರಪ್ಪ ಕೂಡ ಒಂದು ವೇಳೆ ಪಕ್ಷ ನೀಡುತ್ತಿರುವ ಗೌರವ ಕಡಿಮೆಯಾಗಿಯೋ, ಸಮಧಾನದಿಂದಲೋ ಬಿಜೆಪಿ ವಿರುದ್ಧ 2011 ರಂತೆ ತಿರುಗಿ ಬಿದ್ದರೇ, ಕಾಂಗ್ರೆಸ್ ಗೆ ಲಾಭ ಆಗುವುದಂತೂ ಸತ್ಯ.    

ಇನ್ನು, ಬಿ. ಎಸ್ ವೈ ಸರ್ಕಾರದಲ್ಲಿ ಸವದಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು, ಸಮುದಾಯದ ಲೆಕ್ಕಾಚಾರದಲ್ಲಿ ಬಿ. ಎಸ್. ವೈ ಅವರ ಉತ್ತರಾಧಿಕಾರಿಯಾಗಬಹುದೇನೋ ಎಂಬ ಯೋಚನೆಯಲ್ಲಿ ಹೈಕಮಾಂಡ್ ಇದ್ದಿತ್ತೇನೋ ಎಂದು ನಾವು ಅರ್ಥೈಸಿಕೊಂಡರೂ, ಸವದಿ ಒಬ್ಬ ಸಮುದಾಯದ ನಾಯಕರಾಗಿ, ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರಲಿಲ್ಲ. ಅವರ ಮೇಲೆ ಹಿಂದೆ ಇದ್ದ ವಿವಾದಗಳು ಅವರಿಗೆ ಆ ವರ್ಚಸ್ಸನ್ನು ತಂದುಕೊಟ್ಟಿಲ್ಲ. ಇತ್ತ, ಅರವಿಂದ ಬೆಲ್ಲದ ಅವರ ಕಥೆಯೂ ಹಾಗೆ ಆಗಿ ಹೋಯಿತು. ಜಿಂದಾಲ್ ಒಳಗೊಂಡು ಇತರೆ ವಿಷಯಗಳನ್ನು ಮುಂದಿಟ್ಟುಕೊಂಡು ಬಿ ಎಸ್ ವೈ ಅವರ ವಿರುದ್ಧ ಮಾತನಾಡಿ, ಎದುರು ಹಾಕಿಕೊಂಡರು. ಹಾಗಾಗಿ ಯಡಿಯೂರಪ್ಪ ಅವರ ಆಪ್ತ ಬಣದಲ್ಲೊಬ್ಬರಾದ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಲಾಯಿತು. ಹಾಗಾಗಿ ಸಂಪುಟದಲ್ಲಿ ಈ ಇಬ್ಬರನ್ನೂ ಸೇರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈಗ ಈ ಎಲ್ಲಾ ಅತೃಪ್ತರ ಗುಂಪು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದೇ ಎನ್ನುವುದು ಪ್ರಶ್ನೆಯಾಗಿದೆ. 

ಯಡಿರೂಪ್ಪರ ಕೆಂಗಣ್ಣಿಗೆ ಭಸ್ಮವಾದ ಯತ್ನಾಳ್, ಬೆಲ್ಲದ, ಯೋಗೇಶ್ವರ್ : 

ಮಾಜಿ ಬಿಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಬಹಿರಂಗವಾಗಿ ಭಿನ್ನಮತವೆಬ್ಬಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್... ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದು ಯಡಿಯೂರಪ್ಪರನ್ನು ಸಮಾಧಾನ ಮಾಡುವುದಕ್ಕೆ ಹೈಕಮಾಂಡ್ ಮಾಡಿದ ತಂತ್ರ. ಆದರೇ, ಹೈಕಮಾಂಡ್ ಹೆಣೆದ ತಂತ್ರದ ವಿರುದ್ಧ ಈ ಮೂವರು ತಿರುಗಿ ಬೀಳಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೈಕಮಾಂಡ್ ಈ ಮೂವರಿಗೆ ಸಮಾಧಾನ ತರಿಸುವ ಕೆಲಸ ಮಾಡದಿದ್ದರೇ, ಸರ್ಕಾರವನ್ನು ಮತ್ತೆ ಅಲುಗಾಡಿಸುವ ಪ್ರಯತ್ನವನ್ನಂತೂ ಮಾಡಿಯೇ ಮಾಡುತ್ತಾರೆ ಎನ್ನುವುದು ಸತ್ಯ. 

ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸ್ಥಾನ ತನ್ನ ಪಾಲಿಗಾಗುತ್ತಿದ್ದದ್ದನ್ನು ತಪ್ಪಿಸಿದ್ದು ಯಡಿಯೂರಪ್ಪ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಆ ಕೋಪ ಮತ್ತಷ್ಟು ರೌದ್ರತೆಯನ್ನು ಕೂಡ ಕಂಡುಕೊಳ್ಳುವ ಎಲ್ಲಾ ಸಾಧ್ಯತೆ ಇದೆ. 

ಇನ್ನು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಸುತ್ತಬೇಕು. ಇದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ.  ನನ್ನನ್ನು ಗುರುತಿಸಿರುವ ಕ್ಷೇತ್ರ ವರುಣಾ, ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಹೇಳಿಕೆ ನೀಡಿದ ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಅವರ ಮೇಲೆ ಈ ಅತೃಪ್ತರ ವಕ್ರ ದೃಷ್ಟಿಯಂತೂ ಇದ್ದೇ ಇರುತ್ತದೆ. 

ಸರ್ಕಾರ ರಚನೆಗೆ ಸಹಾಯ ಮಾಡಿದವರಿಗೆ ಸ್ಥಾನಮಾನ..!

ಸರ್ಕಾರ ವಿಶ್ವಾಸ ಕಳೆದುಕೊಂಡಾಗ, ಬಹುಮತವಿಲ್ಲದ ಸಂದರ್ಭದಲ್ಲಿ ಸರ್ಕಾರದ ರಚನೆಗೆ ಸಹಾಯ ಮಾಡಿರುವ ಹಾಗೂ ಪಕ್ಷಕ್ಕೆ ನಿಷ್ಠೆಯಿಂದಿರುವ ಕಾರಣಕ್ಕೆ ಡಾ. ಕೆ. ಸುಧಾಕರ್, ಎಸ್ ಟಿ. ಸೋಮಶೇಖರ್, ಆನಂದ್ ಸಿಂಗ್, ಶಿವರಾಂ ಹೆಬ್ಬಾರ್, ಬಿ. ಸಿ ಪಾಟೀಲ್, ಬೈರತಿ ಬಸವರಾಜ್, ಕೆ. ಗೋಪಾಲಯ್ಯ, ಎಂ. ಟಿ. ಬಿ ನಾಗಾರಾಜ್, ಕೆ. ಸಿ ನಾರಾಯಣ ಗೌಡ, ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಹೈ ಕಮಾಂಡ್ ಮಣೆ ಹಾಕಿದ್ದು, ಇದಕ್ಕೆ ಯಡಿಯೂರಪ್ಪರ ಶಿಫಾರಸ್ಸು ಕೂಡ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸರ್ಕಾರ ರಚನೆಗೆ ಸಹಕರಿಸಿದ ವಲಸಿಗರಿಗೆ ಬೊಮ್ಮಾಯಿ ನೇತೃತ್ವದ ಮೂಲಕ ಯಡಿಯೂರಪ್ಪ ಮತ್ತೆ ಋಣ ತೀರಿಸಿಕೊಂಡಿದ್ದಾರೆ. ಆದರೇ, ಅತೃಪ್ತರು, ಪಕ್ಷದಲ್ಲಿ ಹಲವಾರು ವರ್ಷಗಳಿಂದ ಇದ್ದ ಹಿರಿಯ ನಾಯಕರು ಪಕ್ಷದ ವಿರುದ್ಧ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ, ಮುಂದಿನ ಚುನಾವಣೆಯ ಸಂದರ್ಭದಲ್ಲಾದರೂ  ಅಸಮಾಧಾನ ತೋರಿಸಿಕೊಳ್ಳಬಹುದು. ಇದು ಬಿಜೆಪಿಗೆ ಕೆಟ್ಟ ಪರಿಣಾಮವನ್ನು ಕೂಡ ಉಂಟು ಮಾಡಬಹುದು.  

ಈ ಎಲ್ಲಾ ಸಮಾಧಾನ, ಅಸಮಾಧಾನಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಸಚಿವರ, ಶಾಸಕರ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ. ಜೊತೆಗೆ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಬೇಕಾಗಿದೆ. ಈ ವಿಶ್ವಾಸ ಕಳೆದುಕೊಂಡರೇ, ಮತ್ತೆ ಸರ್ಕಾರದಲ್ಲಿ ಗೊಂದಲ ಸೃಷ್ಟಿ ಆಗುವುದಂತೂ ಖಚಿತ. ಬಹಳ ಮುಖ್ಯವಾಗಿ ಬಿ. ಎಸ್. ಯಡಿಯೂರಪ್ಪರಿಗೆ ಯಾವ ಸಂದರ್ಭದಲ್ಲಿಯೂ ನೋವಾಗದ ಹಾಗೆ ನೋಡಿಕೊಳ್ಳಬೇಕಾಗಿದೆ. ಈ ಎಲ್ಲಾ ಒತ್ತಡದ ನಡುವೆ ಬೊಮ್ಮಾಯಿ ಸರ್ಕಾರವನ್ನು ಹೇಗೆ ನಡೆಸುತ್ತಾರೆ ಎನ್ನುವುದರಲ್ಲಿ ಕುತೂಹಲ ಮೂಡಿಸಿದೆ.

-ಶ್ರೀರಾಜ್ ವಕ್ವಾಡಿ

Thursday, August 5, 2021

ವಿಶೇಷ ಸ್ಥಾನಮಾನ ರದ್ದಾಗಿ ಇಂದಿಗೆ 2 ವರ್ಷ | ಜಮ್ಮು ಕಾಶ್ಮೀರದಲ್ಲಾದ ಬದಲಾವಣೆಗಳೇನು.?

 


ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಹಿಂದೆ ಈ ದಿನ ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಪಟ್ಟಂತೆ  ಐತಿಹಾಸಿಕ ಬದಲಾವಣೆಯನ್ನು ತಂದಿತು. ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರ ನಿರ್ಧಾರ ಕೈಗೊಂಡಿತ್ತು. 

ಹೌದು, ಆಗಸ್ಟ್ 5, 2019 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಅದರ ವಿಭಜನೆಯನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡುವುದಾಗಿ ಪ್ರಸ್ತಾಪವನ್ನು ಮಂಡಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಏನು..? 370 ನೇ ವಿಧಿ ಏನು..? ‘35–ಎ’ಕಲಂ ಏನನ್ನು ಹೇಳುತ್ತದೆ..? ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಆದ ಬದಲಾವಣೆಗಳೇನು ಎನ್ನುವುದಕ್ಕೆ ಈ ಲೇಖನ ಸಂಕ್ಷಿಪ್ತ ಮಾಹಿತಿ ನೀಡುತ್ತದೆ. 

370 ನೇ ವಿಧಿ ಏನು ಹೇಳುತ್ತದೆ..? 

ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಿಂದೆ ದೊಡ್ಡ ಇತಿಹಾಸವಿದೆ. ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಪ್ರಚೋದಿತ ದಾಳಿ ನಡೆಯುತ್ತದೆ. ಇದಕ್ಕೆ ಹೆದರಿದ ಅಲ್ಲಿನ ಕೊನೆಯ ರಾಜ ಹರಿಸಿಂಗ್‌ ಓಡಿ ಬಂದು ಭಾರತದ ಬೆಂಬಲ ಕೇಳುತ್ತಾರೆ. ನೆರವು ಕೊಡಲು ಸರ್ಕಾರ ಷರತ್ತು ಹಾಕುತ್ತದೆ. ಅದೇ ವಿಲೀನದ ಷರತ್ತು. ಈ ಹಿನ್ನೆಲೆಯಲ್ಲಿ ಸಂವಿಧಾನದ 370ನೇ ಕಲಂ ಹುಟ್ಟು ಪಡೆಯುತ್ತದೆ. ಅದರಂತೆ ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳು ಕೇಂದ್ರ ಸರ್ಕಾದ ಅಧೀನಕ್ಕೆ ಒಳಪಡುತ್ತವೆ. ಉಳಿದೆಲ್ಲ ಅಧಿಕಾರ ರಾಜ್ಯದಲ್ಲಿ ಉಳಿಯುತ್ತದೆ. ಉಭಯ ಪಕ್ಷಗಳು ನಿಯಮ ಮೀರಿ ಆಚೀಚೆ ಸರಿಯುವಂತಿಲ್ಲ. ಇದರಲ್ಲಿ ಏನೇ ಬದಲಾವಣೆ ಆಗಬೇಕಾದರೂ ಸಂವಿಧಾನ ಸಮಿತಿಯಲ್ಲಿ ಚರ್ಚೆ ಆಗಬೇಕು. ಆದರೆ ಈಗ ಸಂವಿಧಾನ ಸಮಿತಿ ಇಲ್ಲದಿರುವುದರಿಂದ ಸಂಸತ್ತು, ರಾಜ್ಯ ವಿಧಾನಸಭೆಯದೇ ಪರಮಾಧಿಕಾರವಾಗಿದೆ.

ಸಂವಿಧಾನದ 370 ನೇ ವಿಧಿಯು ಜಮ್ಮು-ಕಾಶ್ಮೀರ ರಾಜ್ಯದ ಕುರಿತು ವಿವರಿಸುತ್ತದೆ. ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವು ಅಸ್ತಿತ್ವದಲ್ಲಿದೆ. 1956ರ ನವೆಂಬರ್‌ 17ರಂದು ರಾಜ್ಯದ ವಿಧಾನಸಭೆಯು ಸರ್ವಾನುಮತದಿಂದ ಇದನ್ನು ಅಂಗೀಕರಿಸಿದೆ. ಈ ಸಂವಿಧಾನದ 1 ರಿಂದ8 ಮತ್ತು 158ನೇ ವಿಧಿಗಳು ಅಂದೇ ಜಾರಿಗೆ ಬಂದಿವೆ. ಉಳಿದೆಲ್ಲಾ ವಿಧಿಗಳು ಜಾರಿಗೆ ಬಂದದ್ದು 1957ರ ಜನವರಿ 26ರಂದು.ಇದರಿಂದಾಗಿಯೇ ಜಮ್ಮು-ಕಾಶ್ಮೀರದ ಸಂವಿಧಾನವು ದೇಶದಲ್ಲಿ ಜಾರಿಯಲ್ಲಿರುವ ಎರಡನೇ ಸಂವಿಧಾನ ಎಂದೂ ಹೇಳಲಾಗುತ್ತಿದೆ. ಕಾಶ್ಮೀರದ ಸಂವಿಧಾನವು ತಿದ್ದುಪಡಿಗೊಳ್ಳುವುದು ಅಲ್ಲಿನ ವಿಧಾನಸಭೆಯಲ್ಲಿ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರಬೇಕು ಎನ್ನುತ್ತದೆ ಈ ವಿಧಿ. ರಾಜ್ಯದ ಜನರ ಮೂಲಭೂತ ಹಕ್ಕುಗಳು ಕೂಡ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. 

‘35–ಎ’ಕಲಂ ಏನು ಹೇಳುತ್ತದೆ..?  

ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಈ ಎರಡು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಏನೇನು ಬದಲಾಗಿದೆ..?

ಹೊರ ರಾಜ್ಯದವರೂ ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು :

2019 ರ ತನಕ 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿರಲಿಲ್ಲಿ.  ಆದರೇ, ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಈಗ ಯಾವೊಬ್ಬ ದೇಶದ ನಾಗರಿಕನೂ ಜಮ್ಮು ಕಾಶ್ಮೀರದಲ್ಲಿ ಭೂ ಖರೀದಿಸಬಹುದು, ಆಸ್ತಿ ಹೊಂದಬಹುದಾಗಿದೆ. 

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಹಾಗೂ ಸಂವಿಧಾನವಿಲ್ಲ.!

2019 ರಲ್ಲಿ ನರೇಂದ್ರ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ದೇಶದ ತ್ರಿವರ್ಣ ಧ್ವಜ ಹಾರಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿದ್ದಾಗ ಸ್ವತಂತ್ರ ಧ್ವಜವನ್ನು ಹೊಂದುವ ಅವಕಾಶವಿತ್ತು. ತನ್ನದೇ ಆದ ದಂಡ ಸಂಹಿತೆಯನ್ನು ಹೊಂದಿತ್ತು, ಇದನ್ನು ರಣಬೀರ್ ದಂಡ ಸಂಹಿತೆ ಎಂದು ಕರೆಯಲಾಗುತ್ತಿತ್ತು. 

ಮಹಿಳೆಯರಿಗೆ ಸಮಾನತೆ :

ಆಗಸ್ಟ್ 2019 ಕ್ಕಿಂತ ಮೊದಲು, ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಜಮ್ಮು ಕಾಶ್ಮೀರದಲ್ಲಿ ಇದ್ದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಈಗ ಜಮ್ಮ ಕಾಶ್ಮೀರದಲ್ಲಿ ಮಹಿಳೆಯರಿಗೆ ಸಮಾನತೆಯ ಹಕ್ಕು ಲಭಿಸಿದೆ. 

ಗುಪ್ಕರ್ ಅಲಿಯನ್ಸ್ - ಕಾಶ್ಮೀರಿ ಮಹಾ ಘಟಬಂಧನ್ :

2014 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದೇಶದಾದ್ಯಂತ ಬಹುತಮತಗಳಿಂದ ಭರ್ಜರಿ ಗೆಲುವು ಕಂಡ ನಂತರ, ಪ್ರತಿಪಕ್ಷಗಳ ಒಗ್ಗೂಡುವಿಕೆಯ ಬೆಳವಣಿಗೆಗಳು ಕಂಡವು. ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ ಜೆಡಿ) ಮತ್ತು ಜನತಾದಳ-ಯುನೈಟೆಡ್ (ಜೆಡಿಯು) ಮೈತ್ರಿಯಾಗುವ ಮೂಲಕ ಪ್ರತಿಪಕ್ಷಗಳ ಒಗ್ಗೂಡುವಿಕೆ ಆರಂಭವಾಯಿತು. ಈ ಪ್ರಯೋಗವನ್ನು ಮಹಾ ಘಟಬಂಧನ್, ಮಹಾ ಮೈತ್ರಿ ಎಂದು ಕರೆಯಲಾಯಿತು. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಇದು ಯಶಸ್ಸು ಕೂಡ ಕಂಡಿತು.  

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರತಿಸ್ಪರ್ಧಿಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮೈತ್ರಿಯಾದವು. 

ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಯ ಮೆಹಬೂಬ ಮುಫ್ತಿ ಅವರು ಕೈಜೋಡಿಸಿದರು. ಗೃಹ ಬಂಧನದಿಂದ 2020 ರಲ್ಲಿ ಬಿಡುಗಡೆಯಾದ ನಂತರ ಮೈತ್ರಿ ಸಭೆಗಳನ್ನು ನಡೆಸಿದರು. ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಲಭ್ಯವಿರುವ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುವ ನಿರ್ಣಯವನ್ನು ಅಂಗೀಕರಿಸಿದರು. 

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಮ್ಮ ಕಾಶ್ಮೀರದ ಪ್ರಾದೇಶಿಕ ಪಕ್ಷಗಳನ್ನು ಸಭೆಗೆ ಕರೆದ್ದರು. ಎಲ್ಲಾ ಪಕ್ಷಗಳು ಚುನಾವಣೆಗೆ ಒಮ್ಮತವನ್ನು ಸೂಚಿಸಿದ್ದವು. ಕೇಂದ್ರ ಸರ್ಕಾರ ಡಿಲಿಮಿಟೇಶನ್ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿತ್ತು. 

ಗುಪ್ಕರ್ ಒಕ್ಕೂಟವು ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ.

ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಪಾಸ್ ಪೋರ್ಟ್ ಇಲ್ಲ..!

ವಿಧ್ವಂಸಕ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಭಾರತೀಯ ಪಾಸ್‌ ಪೋರ್ಟ್‌ ಗಳನ್ನು ನೀಡದಿರಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿತು.

ಇನ್ನು, ವಿಶೇಷ ಸ್ಥಾನಮಾನ ರದ್ದು ಮಾಡುವುದೆಂದರೆ ಕಾಶ್ಮೀರ ವಿಲೀನದ ವೇಳೆ ರಾಜ ಹರಿಸಿಂಗ್ ಜತೆ ಮಾಡಿಕೊಂಡ ಷರತ್ತಿನ ಉಲ್ಲಂಘನೆಯೂ ಆಗುತ್ತದೆ ಎಂಬ ವಾದವೂ ಇದ್ದಿತ್ತು. ಈ ವಾದ ವಿವಾದಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. 

-ಶ್ರೀರಾಜ್ ವಕ್ವಾಡಿ

Monday, August 2, 2021

ಕಂಪೆನಿಯ ಯಶಸ್ಸಿಗೆ ಉದ್ಯೋಗಿಗಳೇ ಕಾರಣ, ಸಿಇಒ ಗಳಲ್ಲ..! : ಡಾನ್


(ಸಿಬ್ಬಂದಿಗಳ ಸಂಬಳ ಹೆಚ್ಚಳಕ್ಕೆ ಶೇಕಡಾ. 90ರಷ್ಟು ಸಂಬಳವನ್ನು ಕಡಿತಗೊಳಿಸಿಕೊಂಡ ಸಿಇಒ..! )

ಉದ್ಯಮ ಕ್ಷೇತ್ರದಲ್ಲಿ ತಿಂಗಳ ಕೊನೆಯಲ್ಲಿ ಎಲ್ಲರೂ ಬಯಸುವುದು ಕೈ ತುಂಬಾ ಸಂಬಳ. ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ವೃತ್ತಿ ಧರ್ಮ ಪಾಲಿಸುತ್ತಿದ್ದರೂ, ಮಾತ್ರವಲ್ಲದೇ ತನ್ನ ಸಹೋದ್ಯೋಗಿಗಳೊಂದಿಗೆ ಎಷ್ಟೇ ಆಪ್ತ ಬಂಧವನ್ನು ಹೊಂದಿದ್ದರೂ ಕೂಡ  ಸಂಬಳದ ವಿಚಾರದಲ್ಲಿ ಯಾರೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗೆ ಸೇರುವ ಸಂಬಳ ಒಂದೆರಡು ದಿನ ತಡವಾದರೂ ಕೂಡ ಎಲ್ಲಾ ಯೋಜನೆಗಳು ಬದಲಾಗುತ್ತವೆ, ಮಾತ್ರವಲ್ಲದೆ ಮಾನಸಿಕ ಸ್ಥಿತಿಯೂ ಬದಲಾವಣೆಯಾಗುತ್ತದೆ. 

ತನಗೆ ಬಂದ ಸಂಬಳದ ಪಾಲಿನಲ್ಲಿ ನನಗಿಷ್ಟೇ ಸಾಕು, ಉಳಿದದ್ದನ್ನು ಸಂಸ್ಥೆಯ ಸಹೋದ್ಯೋಗಿಗಳಿಗೆ ಅಥವಾ ಉದ್ಯೋಗಿಗಳಿಗೆ ನೀಡಿ, ಅದರಿಂದ ಸಂಸ್ಥೆಯ ಬೆಳವಣಿಗೆಗೂ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಕಾರ್ಯ ಕ್ಷೇತ್ರದಲ್ಲಿ ಒಂದು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವ ವಿಶಾಲವಾದ ಮನಸ್ಸು ಯಾರಿಗಿದೆ ಹೇಳಿ..? ಖಂಡಿತಾ ಇಲ್ಲ. ಕೆಲಸದ ವಿಷಯದಲ್ಲಿ ಅವರೆಷ್ಟು ಒಳ್ಳೆಯತನದಿಂದ ಇದ್ದರೂ, ಹಣದ ವಿಚಾರದಲ್ಲಿ ಎಲ್ಲರೂ ಹತ್ತಾರು ಬಾರಿ ಯೋಚಿಸಿಯೇ ಮುಂದೆ ನಡೆಯುತ್ತಾರೆ. ಆದರೇ, ಇಲ್ಲೊಂದು ಸಂಸ್ಥೆಯ ಸಿಇಒ ಅಥವಾ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ತನಗೆ ಬರುವ ಸಂಬಳದ  90 ಶೇಕಡಾ ಪಾಲನ್ನು ಸಂಸ್ಥೆಯ ಇತರೆ ಉದ್ಯೋಗಿಗಳಿಗೆ ನೀಡುವಂತೆ ಧಾರಾಳತನವನ್ನು ಮೆರೆದಿದ್ದಾರೆ.  



ಕ್ರೆಡಿಟ್ ಕಾರ್ಡ್ ಸಂಸ್ಕರಣಾ ಕಂಪನಿ ಗ್ರಾವಿಟಿ ಪೇಮೆಂಟ್ಸ್  ಮುನ್ನಡೆಸುತ್ತಿರುವ ಡಾನ್ ಪ್ರೈಸ್, ತಮಗೆ ಬರುತ್ತಿರುವ ಒಟ್ಟಾರೆ ಸಂಬಳದ ಒಟ್ಟು 90 ಶೇಕಡಾವನ್ನು ಕಡಿತಗೊಳಿಸಿಕೊಂಡಿದ್ದಾರೆ. ಉಳಿದದ್ದನ್ನು ತನ್ನ ಅಡಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ನೀಡುವುದಕ್ಕೆ ಮುಂದೆ ಬಂದು ಉದ್ಯೋಗಿಗಳಿಗೆ ಸಿಹಿ ಉಣಿಸಿದ್ದಲ್ಲದೇ ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. 

ತನ್ನ ಸಹೋದ್ಯೋಗಿ ರೋಸಿಟಾ ಎಂಬಾಕೆಗೆ ಆದ ಆರ್ಥಿಕ ಸಮಸ್ಯೆಯನ್ನು ಗಮನಿಸಿದ ಡಾನ್, ಈ ನಿರ್ಧಾರಕ್ಕೆ ಬಂದಿದ್ದಾರೆ. ಜೀವನಕ್ಕೆ ಯಾರಿಗೂ ಕಷ್ಟವಾಗಬಾರದು, ಜೀವನವನ್ನು ಯಾವುದೇ ಕೊರತೆ ಇಲ್ಲದೆ ಬದುಕುವಂತಹ ಸಂಬಳ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೂ ಇರಬೇಕು ಎನ್ನುವುದೆ ತನ್ನ ಉದ್ದೇಶ ಎನ್ನುತ್ತಾರೆ ಡಾನ್. 

ಈ ಬಗ್ಗೆ ತನ್ನ ಟ್ವೀಟರ್ ಖಾತೆಯ ಮೂಲಕ ಇತ್ತೀಚೆಗೆ ಬರೆದುಕೊಂಡಿರುವ ಡಾನ್, ಫಾಸ್ಟ್ ಫುಡ್ ಚೈನ್‌ ನಲ್ಲಿ ಮ್ಯಾನೇಜರ್ ಆಗಲು ತರಬೇತಿ ಪಡೆಯುತ್ತಿದ್ದ ರೋಸಿಟಾ ಎಂಬ ಉದ್ಯೋಗಿಗೆ  ಹಣದ ಸಮಸ್ಯೆ ಇದೆ ಎಂದು ಅರಿತುಕೊಂಡೆ. ಇದರಿಂದ ನನ್ನ ಮನ ಕಲುಕಿತು ಎಂದು ಡಾನ್ ಬರೆದುಕೊಂಡಿದ್ದರು.

ಸಂಸ್ಥೆಯಿಂದ ಬರುತ್ತಿದ್ದ ಆದಾಯದಿಂದ ಜೀವನ ನಿರ್ವಹಣೆ ಕಷ್ಟ ಸಾಧ್ಯ ಎಂಬ ಉದ್ದೇಶದಿಂದ ರೋಸಿಟಾ, ಇನ್ನೊಂದು ಉದ್ಯೋಗವನ್ನು ಪ್ರಾರಂಭಿಸಬೇಕಾದ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸಿಇಒ ಡಾನ್, ತನ್ನ ಸಂಸ್ಥೆಯಲ್ಲಿ ದುಡಿಯುತ್ತಿರುವ ಯಾವೊಬ್ಬ ಉದ್ಯೋಗಿಗೂ ಸಂಬಳದ ಕಾರಣದಿಂದ ಜೀವನ ನಿರ್ವಹಣೆಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ತನಗೆ ಬರುತ್ತಿದ್ದ ಆದಾಯದ ಶೇಕಡಾ 90 ರಷ್ಟು ಪಾಲನ್ನು ತನ್ನ ಸಹೋದ್ಯೋಗಿಗಳಿಗೆ ನೀಡಲು ನಿರ್ಧಾರಿಸಿದ್ದಾಗಿ ಡಾನ್ ಹೇಳುತ್ತಾರೆ. 

'ರೋಸಿಟಾ ತನ್ನ ಮತ್ತೊಂದು ವೃತ್ತಿಯ ಬಗ್ಗೆ ಯಾವುದೇ ವಿಚಾರವನ್ನು ಬಿಟ್ಟುಕೊಡುತ್ತಿರಲಿಲ್ಲ. ತನನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂಬ ಭಯದಿಂದ ವರ್ತಿಸುತ್ತಿದ್ದಳು. ಛೇ, ನಾನು ನನ್ನ ಸಂಸ್ಥೆಯಲ್ಲಿ ಎಂತಹ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದೇನೆ..? ಯಾಕೆ ಹೀಗೆ ಈ ವಾತಾವರಣ, ಸಂಸ್ಕೃತಿ ಸಂಸ್ಥೆಯಲ್ಲಿ ಸೃಷ್ಟಿಯಾಯಿತು..? ಒಬ್ಬ ಉದ್ಯೋಗಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವಿಲ್ಲದಿರಿವುದು ಎಂತಹ ಸ್ಥಿತಿ..? ಎಂದು ಡಾನ್  ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. 

'ರೊಸಿಟಾ ಕಾಲೇಜ್ ಗ್ರಾಡ್ ಆದರೆ ವರ್ಷಕ್ಕೆ $ 30,000 ಗಳಿಸುತ್ತಿದ್ದಳು. ಅವಳು ಸಂಸ್ಥೆಯ ಕೆಲಸವನ್ನು 5 ಕ್ಕೆ ಮುಗಿಸುತ್ತಾಳೆ ಮತ್ತು ಒಂದುವರೆ ವರ್ಷದಿಂದ  5: 30 ರಿಂದ 11 ರ ತನಕ  ಪ್ರತಿ ದಿನ ರಾತ್ರಿಯೂ ಮೆಕ್ ಡೋನಾಲ್ಡ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕೆಲಸ ಮಾಡುತ್ತಿದ್ದಾಳೆ. 

ತನ್ನ ಇನ್ನೊಂದು ಉದ್ಯೋಗವನ್ನು ತೊರೆಯಬೇಕಾದರೇ ತನಗೆ $ 10,000 (£ 7,156.50) ಹೆಚ್ಚಿಸುವ ಅಗತ್ಯವಿದೆ ಎಂದು ರೋಸಿಟಾ ಡಾನ್‌ ಗೆ ಹೇಳಿಕೊಂಡಾಗ,  ಕೆಲವು ಹೆಚ್ಚುವರಿ ಕರ್ತವ್ಯಗಳನ್ನು ನಿಭಾಯಿಸುವುದಾರೇ, ವೇತನದ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದೆಂದು ಡಾನ್ ಭರವಸೆ ನೀಡುತ್ತಾರೆ. 

ಆಕೆ ಈಗ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಸುಧಾರಿಸಿದ್ದಾಳೆ. ತನ್ನ ಮತ್ತೊಂದು ಉದ್ಯೋಗವನ್ನು ತ್ಯಜಿಸಿ ಸಂಪೂರ್ಣ ಸಂಸ್ಥೆಯ ಕಾರ್ಯದಲ್ಲಿಯೇ ತೊಡಗಿಕೊಂಡಿದ್ದಾಳೆ. ಆಕೆಯ ಕಾರ್ಯಕ್ಷಮತೆಯೂ ಸುಧಾರಿಸಿದೆ ಎಂದು ಹೆಮ್ಮೆಯಿಂದ ತನ್ನ ಉದ್ಯೋಗಿ ರೋಸಿಟಾ ಬಗ್ಗೆ ಹೇಳುತ್ತಾರೆ ಡಾನ್ ಪ್ರೈಸ್.

ಅಷ್ಟೇ ಅಲ್ಲ, ಇದಾದ ಬಳಿಕ ಕೆಲವೇ ದಿನಗಳ ಅಂತರದಲ್ಲಿ ರೋಸಿಟಾ ಸಂಸ್ಥೆಯ ಆಪರೇಷನ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾಳೆ. ಮಾತ್ರವಲ್ಲದೇ ರೋಸಿಟಾ ಯಶಸ್ಸಿನ ಪರಿಣಾಮವಾಗಿ, ಅವರು ಕಂಪನಿಯ ಎಲ್ಲಾ ಉದ್ಯೋಗಿಗಳ ಕನಿಷ್ಠ ಸಂಬಳವನ್ನು $ 70,000 ಕ್ಕೆ ಹೆಚ್ಚಿಸಲು ನಿರ್ಧರಿಸುತ್ತಾರೆ.

ಇದು, ಗ್ರಾವಿಟಿ ಪೇಮೆಂಟ್ಸ್  ಕಂಪೆನಿಯ ಸಿಇಒ ತೆಗೆದುಕೊಂಡ ನಿರ್ಧಾರದ ಬಗ್ಗೆ ಜಗತ್ತೇ ಬೆರಗುಗಣ್ಣಿನಿಂದ ಕಾಣುವ ಹಾಗೆ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

'ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ : ಡಾನ್ 

ಡಾನ್ ತನ್ನ ಸ್ವಂತ ವೇತನ ಶೇಕಡಾ 90 ರಷ್ಟನ್ನು ಕಡಿತಗೊಳಿಸಿ, ಅಂದರೇ, ಅಂದಾಜು $ 1.1M (£ 787,017) ನಿಂದ $ 70,000 ಗೆ ಕಡಿತಗೊಳಿಸಿಕೊಂಡು, ತನ್ನ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಲು ಮುಂದಾದರು. 

'ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ. ನಾನು ನನ್ನ  ಸಂಸ್ಥೆಯ ಉದ್ಯೋಗಿಗಳ ಪಾಲಿಗೆ ಒಬ್ಬ ಒಳ್ಳೆಯ ಬಾಸ್ ಆಗಿದ್ದೇನೆ ಎನ್ನುವುದರ ಬಗ್ಗೆ ನನಗೆ ಸಂತೋಷವಿದೆ. ನೆಮ್ಮದಿ ಇದೆ. ಸಂಸ್ಥೆಯ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಕಂಡಿದ್ದೇನೆ. ಶ್ರೀಮಂತನಾಗಿ ಬದುಕುವುದೆಂದರೇ, ಹಣ ಸಂಪಾಧನೆ ಮಾಡುವುದಕ್ಕಿಂತ ಇನ್ನೊಬ್ಬರ ಮುಖದಲ್ಲಿ ಸಂತಸ ಕಾಣುವುದೇ ಆಗಿದೆ ಎನ್ನುತ್ತಾರೆ ಡಾನ್. 

ಕಂಪೆನಿಯ ಆದಾಯ ಮೂರು ಪಟ್ಟು ಏರಿಕೆ..!

ಸಿಇಒ ಡಾನ್ ಪ್ರೈಸ್ ತೆಗೆದುಕೊಂಡ ಈ ನಿರ್ಧಾರದಿಂದ ಕಂಪೆನಿಗೆ ಏನು ಪ್ರಯೋಜನವಾಯಿತಿ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಡಾನ್ ತೆಗೆದುಕೊಂಡ ನಿರ್ಧಾರದಿಂದ ಕಂಪನಿಯ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಗ್ರಾಹಕರ ಸಂಖ್ಯೆ ದ್ವಿಗುಣವಾಗಿದೆ, ಸಂಸ್ಥೆಯ ಉದ್ಯೋಗಿಗಳ ಬದುಕು ಮೊದಲಿಗಿಂತ ಚೆನ್ನಾಗಿದ್ದು, ಸಂಸ್ಥೆಯ ಉದ್ಯೋಗಿಗಳು ಹೊಸದಾಗಿ ಖರೀದಿಸಿದ ಮನೆಗಳು 10 ಪಟ್ಟು ಹೆಚ್ಚಾಗಿದೆ. ಉದ್ಯೋಗಿಗಳು ದಾಖಲೆಯ ಮಾರಾಟವನ್ನು ನಡೆಸಿದ್ದಾರೆ ಮತ್ತು ನಾವು ಈಗ 20,000 ಸಣ್ಣ ವ್ಯಾಪಾರ ಗ್ರಾಹಕರನ್ನು ಹೊಂದಿದ್ದೇವೆ ಎನ್ನುತ್ತದೆ ಕಂಪೆನಿ. 

ಈ ಬಗ್ಗೆ ಹರ್ಷ ವ್ಯಕ್ತ ಪಡಿಸುವ ಡಾನ್, 'ನಾನು ಇನ್ನೂ ಉತ್ತಮ ಬಾಸ್ ಆಗಲು ಕಲಿಯುತ್ತಿದ್ದೇನೆ. ಇತರ ಸಿಇಒಗಳಿಗೆ ಹೋಲಿಸಿದಾಗ ಮಾತ್ರ ನಾನು "ಚೆನ್ನಾಗಿ" ಕಾಣುತ್ತೇನೆ. ನಾನು ಇನ್ನಷ್ಟು ಚೆನ್ನಾಗಿ ನನ್ನ ಉದ್ಯೋಗಿಗಳೊಂದಿಗೆ ಇರಲು ಬಯಸುತ್ತೇನೆ ಎನ್ನುತ್ತಾರೆ.

'ನಿಮ್ಮ ಉದ್ಯೋಗಿಗಳನ್ನು ಕೇಳಿ, ಅವರನ್ನು ನಂಬಿ, ಅವರಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿ. ಕಂಪನಿಯ ಯಶಸ್ಸಿಗೆ ಉದ್ಯೋಗಿಗಳೇ ಕಾರಣ. ಸಿಇಒಗಳಲ್ಲ. ’ ಎಂದು ಅಬಿಪ್ರಾಯ ವ್ಯಕ್ತಪಡಿಸುತ್ತಾರೆ ಡಾನ್. 

-ಶ್ರೀರಾಜ್ ವಕ್ವಾಡಿ