Monday, March 30, 2020

ಬ್ಯಾಂಕ್‌ಗಳ ಮಹಾವಿಲೀನೀಕರಣ | ಏಪ್ರಿಲ್ 1ರಿಂದಲೇ ಜಾರಿ, ವಿತ್ತ ಸಚಿವೆ ಸ್ಪಷ್ಟೋಕ್ತಿ | ಕರ್ನಾಟಕದ ಮತ್ತೆರಡು ಬ್ಯಾಂಕ್‌ಗಳು ವಿಲೀನ..!


ಕೇಂದ್ರ ಸರ್ಕಾರದ ಬ್ಯಾಂಕ್ ವಿಲೀನೀಕರಣ ಧೋರಣೆ ಸಾರ್ವಜನಿಕರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದು ಸಂಪೂರ್ಣ ಖಾಸಗಿ ಒಡೆತನಕ್ಕೆ ಪ್ರೋತ್ಸಾಹ ನೀಡುವುದು ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಕಳೆದ ಬಾರಿ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡೋದೊಂದಿಗೆ ವಿಲೀನ ಮಾಡಲಾಗಿತ್ತು. ಎಸ್‌ಬಿಐನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಒಳಗೊಂಡು ಐದು ಸಹವರ್ತಿ ಬ್ಯಾಂಕ್‌ಗಳು ಹಾಗೂ ಭಾರತೀಯ ಮಹಿಳಾ ಬ್ಯಾಂಕ್‌ನ್ನು ವಿಲೀನಗೊಳಿಸಿದ್ದು ನಮ್ಮ ಮುಂದೆ ಉದಾಹರಣೆಯಾಗಿ ಇದೆ. ಆ ಬೆನ್ನಲ್ಲೇ ಬ್ಯಾಂಕ್ ವಿಲೀನೀಕರಣದ ಹೊಸದೊಂದು ಆವೃತ್ತಿಗೆ ಈಗ ಕ್ಷಣಗಣನೆ ಆರಂಭವಾಗಿದೆ. ಮೊದಲೇ ಆರ್ಥಿಕ ಸ್ಥಿತಿಯಲ್ಲಿ ಕುಸಿದಿರುವ ಭಾರತ ಈ ವಿಲೀನೀಕರಣದಿಂದಾಗಿ ಮತ್ತಷ್ಟು ಹಿನ್ನಡೆಯಾಗುವುದರಲ್ಲಿ ಸಂದೇಹವಿಲ್ಲ ಎನ್ನುವುದು  ದೃಢವಾಗುತ್ತಿದೆ. ಒಟ್ಟಿನಲ್ಲಿ, ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕ್‌ಗಳನ್ನು 4 ಬೃಹತ್ ಬ್ಯಾಂಕ್‌ಗಳಾಗಿ ಮಾಡುವ ಯೋಜನೆಗೆ ಕೋವಿಡ್-19ನ ಈ ಸಂಕಷ್ಟದಲ್ಲಿಯೂ ಸರ್ಕಾರ ಮುಂದಾಗಿದೆ. ನಿಗದಿಯಂತೆ ಏಪ್ರಿಲ್ 1ರಿಂದಲೇ ಬ್ಯಾಂಕ್ ವಿಲೀನ ಜಾರಿಗೆ ಬರಲಿದೆ ಎನ್ನುವುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.


ಹಣಕಾಸು ಮಾರುಕಟ್ಟೆಯಲ್ಲಿ ದುರ್ಬಲ ಬ್ಯಾಂಕುಗಳನ್ನು ಸದೃಢ ಬ್ಯಾಂಕುಗಳೊಂದಿಗೆ ವಿಲೀನ ಮಾಡುವುದರಿಂದ ಬ್ಯಾಂಕಿಂಗ್ ಕ್ಷೇತ್ರವನ್ನು ಬಲಗೊಳಿಸುವುದು, ಬ್ಯಾಂಕ್‌ಗಳ ಸಾಲ ಪ್ರಕ್ರಿಯೆಗಳಲ್ಲಿನ ದೋಷಗಳನ್ನು, ಲೋಪಗಳನ್ನು ನಿವಾರಿಸುವುದು ವಿಲೀನೀಕರಣದ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕಾರಣವನ್ನು ಗಮನಿಸಿ, ನಾವು ವಿಜಯ ಬ್ಯಾಂಕ್‌ನ್ನು ನೆನಪಿಸಿಕೊಳ್ಳಬಹುದು. ನಿಜಕ್ಕೂ ನಗೆಪಾಟಲಿಗೀಡಾಗುತ್ತದೆ.

ಈಗಾಗಲೇ, ಕರ್ನಾಟಕ ಮೂಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ವಿಜಯ ಬ್ಯಾಂಕ್ ವಿಲೀನದ ಪರಿಣಾಮದಿಂದಾಗಿ ಮರೆಯಾಗಿದ್ದು, ಇದೀಗ ಆ ಸಾಲಿಗೆ ಕಾರ್ಪೋರೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸೇರ್ಪಡೆಗೊಳ್ಳಲಿವೆ. ಆ ಮೂಲಕ ಕರ್ನಾಟಕ ಮೂಲದ ಬ್ಯಾಂಕುಗಳ ಪೈಕಿಯಲ್ಲಿ ನಾಲ್ಕು ಬ್ಯಾಂಕುಗಳು ವಿಲೀನದ ಹೆಸರಿನಲ್ಲಿ ಮರೆಯಾದಂತಾಗುತ್ತದೆ. ಉಳಿದದ್ದು ಕೆನರಾ ಬ್ಯಾಂಕ್ ಮಾತ್ರ.

ಯಾವ್ಯಾವ ಬ್ಯಾಂಕ್, ಯಾವ್ಯಾವ ಬ್ಯಾಂಕ್‌ನೊಂದಿಗೆ ವಿಲೀನ..?
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಇಂಡಿಯನ್ ಬ್ಯಾಂಕ್‌ನೊಂದಿಗೆ ಅಲಹಾಬಾದ್ ಬ್ಯಾಂಕ್ ವಿಲೀನೀಕರಣಗೊಳ್ಳುವುದರ ಮೂಲಕ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾರ್ವಜನಿಕ ವಲಯದ ಭಾರತದ ಎರಡನೇಯ ಅತಿದೊಡ್ಡ ಬ್ಯಾಂಕ್ ಎಂದೂ, ಕೆನರಾ ಬ್ಯಾಂಕ್ ಭಾರತದ ನಾಲ್ಕನೇಯ ದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಎಂಬ ಗರಿಮೆಗೆ, ಹಿರಿಮೆಗೆ ಪಾತ್ರವಾಗಲಿವೆ. 

ವಿಲೀನ ಅಗತ್ಯವೇ..?
ಭಾರತವನ್ನು ಜಗತ್ತಿನ ಇತರೆ ಸರಿಸಮಾನವಾದ ದೇಶಗಳಿಗೆ ಹೋಲಿಸಿ ನೋಡುವುದಾದರೇ, ಭಾರತದಲ್ಲಿ ಬ್ಯಾಂಕಿಂಗ್ ಹರಿವು ಕಡಿಮೆಯಿದೆ. ಆರ್ಥಿಕತೆಯ ಪುನಶ್ಚೇತನದ ನೆಪದಲ್ಲಿ ಬ್ಯಾಂಕ್‌ಗಳ ವಿಲೀನ ಮಾಡುತ್ತಿರುವುದು ಎಷ್ಟು ಸರಿ..? ಬ್ಯಾಂಕ್ ಉಳಿತಾಯಗಳ ಬಡ್ಡಿ ಹೆಚ್ಚಳಗೊಳ್ಳಬೇಕು, ಅದರೊಂದಿಗೆ ಸುಲಭ ದರದಲ್ಲಿ ಸಾಲದೊರೆಯುವಂತಾಬೇಕು. ಅಂದರೇ, ಬ್ಯಾಂಕಿಂಗ್ ಕ್ಷೇತ್ರ ವಿಸ್ತರಣೆಗೊಳ್ಳಬೇಕೇ ಹೊರತು, ವಿಲೀನಗೊಳ್ಳುವ ಅಗತ್ಯವಿಲ್ಲವೆನ್ನುವುದನ್ನು ಸ್ವತಃ ಆರ್ಥಿಕ ತಜ್ಙರು ವಿಶ್ಲೇಷಿಸುತ್ತಾರೆ. ಆದರೇ, ಆಗುತ್ತಿರುವುದು ವಿರುದ್ಧವೇ. ಬ್ಯಾಂಕ್‌ಗಳ ಸಾಧಕಬಾಧಕಗಳನ್ನು ಪರಾಮರ್ಶೀಸದೇ ವಿಲೀನೀಕರಣಕ್ಕೆ ಸರ್ಕಾರ ಮುಂದಾಗಿದೆ ಅಂತೆನ್ನಿಸುತ್ತಿದೆ. ಮಾತ್ರವಲ್ಲದೇ, ಇದು ಖಾಸಗಿ ಬ್ಯಾಂಕುಗಳಿಗೆ ಅವಕಾಶವನ್ನು ಮಾಡಿಕೊಡುತ್ತಿರುವ ಧೋರಣೆ ಎನ್ನುವುದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತದೆ. ಈ ವಿಲೀನೀಕರಣದಿಂದ, ಕಾರ್ಪೋರೇಟ್ ಕ್ಷೇತ್ರಕ್ಕೆ ಮಾತ್ರ ಲಾಭವಾಗುವಂತಿದ್ದರೇ, ಮಾಡಹೊರಟಿರುವ ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶ ವಿಫಲವಾಗುವುದರಲ್ಲಿ ಎರಡನೇ ಮಾತೇ ಇಲ್ಲ.
-ಶ್ರೀರಾಜ್ ವಕ್ವಾಡಿ 


Sunday, March 29, 2020

ಇದ್ದು ಬಿಡುವೆ...!


ಅಯ್ಯೋ..
ಬೆಂಕಿ ಧಗಧಗಿಸುತ್ತಿದೆ
ಅದ್ಯಾರ ಕೇಕೆಯೋ,
ಸುಟ್ಟು ಹೋದೀತೆ ಜೀವ..!? 
ಮುಷ್ಟಿಯಷ್ಟೇಯಿದ್ದ 
ಹೃದಯದಲ್ಲಿ ಖಾಲಿ ಖಾಲಿ ಮೌನ..!
ಅಯ್ಯೋ, 
ಕಲಿಭೈರವಿಯ ಹೆಜ್ಜೆಯನ್ನಿಟ್ಟು
ಬೆಂಕಿ ಕುಣಿಯುತ್ತಿದೆ...!
ಹಸಿ ಕನಸುಗಳು 
ಕರಕಲಾಗುವ ಮುನ್ನ
ಹಿಡಿದಾಚೆಯೆಳೆದೊಗೆದಾದರೂ ಬಿಡಿ.
ಅಲ್ಲೆಲ್ಲೋ 
ಕೊಚ್ಚೆಯಲ್ಲೋ, ಕಲ್ಲಿನಲ್ಲೋ, ಮಣ್ಣಿನಲ್ಲೋ ಬೆಳೆದು ಬಿಡುವೆ..!

ಕಾಣದ ಸುಖ
ಕಾಣುವುದಾದರೆಂದು..!?
ಅದ್ಯಾವ ಹೊಲೆ
ಈ ಜೀವಕ್ಕೆ...!?
ಇನ್ನೇನನ್ನೂ ಬಯಸುವುದಿಲ್ಲ
ಬದುಕಲಾದರೂ ಬಿಡಿ..!
ಎಲ್ಲೋ ಇದ್ದು ಬಿಡುವೆ. 
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)




Photo : Inchu Photography,
Internet

Saturday, March 28, 2020

ಕೊರೋನಾ ಢವಢವ | ಬೆಚ್ಚಿಬೀಳಿಸುವಂತಿದೆ ಸಿಡಿಡಿಇಪಿ ವರದಿ | ಎಚ್ಚರ ಎಚ್ಚರ..!


ದೇಶ ಅತ್ಯಂತ ದುಸ್ಥಿತಿಯಲ್ಲಿದೆ. ಪ್ರಪಂಚದ 200ಕ್ಕೂ ಹೆಚ್ಚು ದೇಶಗಳಿಗೆ ಇಂದು ಕೊರೋನಾ ಸೋಂಕು ತಟ್ಟಿದೆ. ಅಮೇರಿಕಾದ ಸಿಡಿಡಿಇಪಿ ಸಂಸ್ಥೆ ನಡೆಸಿದ ಅಧ್ಯಯನವೊಂದರ ಪ್ರಕಾರ, ಈ ಕೊರೋನಾ ಸೋಂಕು ಭಾರತಕ್ಕೆ ಅತ್ಯಂತ ಕೆಟ್ಟ ಪರಿಸ್ಥಿತಿ ತಂದೊಡ್ಡುತ್ತದೆ ಎಂಬ ಆಘಾತಕಾರಿ ವರದಿಯೊಂದನ್ನು ತಿಳಿಸಿದೆ. ಅದೇನೆಂದರೇ, ದೇಶದಲ್ಲಿ ಕೊರೋನಾ ಸೋಂಕಿತರ ಮಟ್ಟ ಗರಿಷ್ಠಕ್ಕೇರಲಿದೆಯಂತೆ, 24 ಕೋಟಿ ಮಂದಿಗೆ ಈ ಸೋಂಕು ಹರಡಲಿದೆ ಎಂಬ ಮಾಹಿತಿಯೊಂದನ್ನು ಸಿಡಿಡಿಇಪಿ (ದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಆ್ಯಂಡ್ ಪ್ವಾಲಿಸಿ) ಸಂಸ್ಥೆ ಹೊರಹಾಕಿದೆ. ಎನ್ನುವಲ್ಲಿಗೆ, ಇದೇ ರೀತಿಯಲ್ಲಿ ಸರ್ಕಾರದ ‘ಲಾಕ್ಡೌನ್’ ಕಳಕಳಿಯ ನಿರ್ಬಂಧವನ್ನು ಮೀರಿ ಜನರು ಈ ಸಾಂಕ್ರಾಮಿಕ ರೋಗವನ್ನು ನಿರ್ಲಕ್ಷಿಸಿದ್ದೇ ಹೌದಾದಲ್ಲಿ ಸೋಂಕಿತರ ಪಟ್ಟಿ ಗರಿಷ್ಠ ಮಟ್ಟಕ್ಕೆ ಏರುವುದರಲ್ಲಿ ಏನೂ ಸಂಶಯವೇ ಇಲ್ಲ. ಈಗಾಗಲೇ ಎರಡನೇ ಹಂತದ ಗಡಿಯಲ್ಲಿರುವ ಭಾರತ, ಈ ಬಗ್ಗೆ ಇನ್ನೂ ಅಸಡ್ಡೆ ತೋರಿಸಿದ್ದಲ್ಲಿ ಚೀನಾ, ಇಟೆಲಿ, ಅಮೇರಿಕಾಕ್ಕೆ ಆದಂತಹ ಪರಿಸ್ಥಿತಿಗೆ ತಲುಪುದರಲ್ಲಿ ಭಿನ್ನ ಮಾತಿಲ್ಲ.


ಇದು ಭಾರತಕ್ಕೆ, ಸಿಡಿಡಿಇಪಿ ಕೊಟ್ಟಿರುವ ಎಚ್ಚರಿಕೆಯ ಕರೆಗಂಟೆ. ಒಂದು ವೇಳೆ ಈ ಮಟ್ಟಕ್ಕೆ ತಲುಪಿದ್ದಲ್ಲಿ ಅದನ್ನು ನಿಭಾಯಿಸುವ ಸಾಮರ್ಥ್ಯ ದೇಶಕ್ಕೆ ಇದೆಯಾ..? ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆಯಾ..? ಅಗತ್ಯ ಮಟ್ಟಕ್ಕೆ ಸೋಂಕಿನ ಪರೀಕ್ಷೆಗೆ ಬೇಕಾದ ವ್ಯವಸ್ಥೆಗಳಿವೆಯಾ..? ಆರ್ಥಿಕ ಸ್ಥಿತಿಗತಿಗಳೇನು..? ಎಂಬೆಲ್ಲಾ ಪ್ರಶ್ನೆಗಳಿಗೆ ತುರ್ತಾಗಿ ಸರ್ಕಾರ ಉತ್ತರ ಕಂಡುಕೊಳ್ಳಬೇಕಾಗಿದೆ.
ದೇಶದಲ್ಲಿ, ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ವೇಗವನ್ನು ಕಂಡುಕೊಳ್ಳುತ್ತಿರುವ ಭೀತಿ ಒಂದೆಡೆಯಾದರೇ, ಮತ್ತೊಂದೆಡೆ.. ಎಷ್ಟೇ ನಿರ್ಬಂಧಗಳನ್ನು, ಕಟ್ಟೆಚ್ಚರಗಳನ್ನು ಹೂಡಿದರೂ ಜನ ‘ಡೋಂಟ್ ಕೇರ್’ ಧೋರಣೆ ತೋರಿಸುತ್ತಿರುವುದನ್ನು ನಿಭಾಯಿಸುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಎರಡನೇ ಹಂತದ ನಿರ್ಣಾಯಕ ಘಟ್ಟದಲ್ಲಿರುವ ಭಾರತದಲ್ಲಿ, ಮುಂದಿನ ಒಂದು ವಾರದ ಸಮಯದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಬಂದಲ್ಲಿ ಅಪಾಯದ ಮೂರನೇ ಹಂತಕ್ಕೆ ಹೋಗವುದನ್ನು ತಡೆಗಟ್ಟಬಹುದು ಎನ್ನುವುದನ್ನು ವರದಿ ಸ್ಪಷ್ಟವಾಗಿ ತಿಳಿಹೇಳಿದೆ. ರಾಜ್ಯದ ಸ್ಥಿತಿಯೂ ಗಂಭೀರವಾಗಿದೆ. ದೇಶದಲ್ಲಿ ಹೆಚ್ಚು ಸೋಂಕು ಧೃಡಗೊಂಡಿರುವ ರಾಜ್ಯವಾರು ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ಸದ್ಯದ ಮಟ್ಟಿಗೆ ಮೂರನೇ ಸ್ಥಾನದಲ್ಲಿದೆ. ಜನ ಇನ್ನೂ ಎಚ್ಚೆತ್ತುಗೊಂಡಿಲ್ಲ.


ಇತ್ತ, ದೇಶದಾದ್ಯಂತ ದಿನಗೂಲಿ ಕಾರ್ಮಿಕರು, ತಳ್ಳುಗಾಡಿ ವ್ಯಾಪಾರಿಗಳು, ಬಡವರ ಸ್ಥಿತಿಯಂತೂ ಸಂಕಷ್ಟಕ್ಕೀಡಾಗಿ ಬಿಟ್ಟಿದೆ. ಇನ್ನು, ಪದವಿ, ಸ್ನಾತಕೋತ್ತರ ಪದವಿಗಳಾದಿಗಳಲ್ಲಿ ಕೊನೆಯ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವವರನ್ನೆಲ್ಲರನ್ನೊಳಗೊಂಡು ವಿದ್ಯಾರ್ಥಿಗಳ ಭವಿಷ್ಯ, ಈ ಕೊರೋನಾದ ಪರಿಣಾಮದಿಂದಾಗಿ ಖಾಲಿ ಖಾಲಿಯಾಗಿ ಕಾಣಿಸಿದಂತಿದೆ. ಮೊದಲೇ ಉದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಭಾರತದಲ್ಲಿ, ಈ ಕೊರೋನಾದ ಕಾರಣದಿಂದಾಗಿ ಮತ್ತಷ್ಟು ಈ ಸಮಸ್ಯೆ ಉಲ್ಬಣಿಸುವುದರಲ್ಲಿ ಸಂದೇಹವಿಲ್ಲ. ಸದ್ಯದ ಮಟ್ಟಿಗೆ ನೋಡುವುದಾದರೇ, ಭವಿಷ್ಯ ಚಿಂತಾಜನಕವಾಗಿದೆ ಅಂತನ್ನಿಸುತ್ತಿದೆ. ಎಲ್ಲರಿಗಿನ್ನು ಹೊಸ ಬದುಕು. ಎಲ್ಲರ ಬದುಕಿಗಿನ್ನು ಪುನರಾರಂಭ.


ಕೊರೋನಾದಂತಹ ಸೋಂಕು ಪ್ರಪಂಚಕ್ಕೆ ಬಂದಿರುವುದು ಇದೇ ಮೊದಲೇನಲ್ಲ. ಇದನ್ನು ಖಂಡಿತ ಹೋಗಲಾಡಿಸುವುದಕ್ಕೆ ಸಾಧ್ಯವಿದೆ. ದಿ ಬ್ಲಾಕ್ ಡೆತ್(ಪ್ಲೇಗ್), ಪ್ಲೂ ನಂತಹ ಜಗನ್ಮಾರಿ ಸೋಂಕುಗಳನ್ನೇ ಪ್ರಪಂಚ ನಿಯಂತ್ರಣಕ್ಕೆ ತಂದು ಅವುಗಳಿಂದ ಮುಕ್ತವಾದ ಉದಾಹಣೆಯಿದೆ. ಪ್ಲೇಗ್‌ನಂತಹ ಮಹಾಮಾರಿ ಸೋಂಕಿಗೆ ಯೂರೋಪ್ ಖಂಡದಲ್ಲಿ ಬರೋಬ್ಬರಿ 5 ಕೋಟಿ ಮಂದಿ ಸತ್ತಿದ್ದರಂತೆ. ದೇಶವನ್ನೂ ಈ ಸೋಂಕು ಬಿಟ್ಟಿರಲಿಲ್ಲ. ಸೂರತ್‌ನ್ನು ಅಡಿಮೇಲನ್ನಾಗಿ ಮಾಡಿತ್ತು ಪ್ಲೇಗ್. ಯುರೋಪ್ ಆ ಮಹಾಮಾರಿಯನ್ನೂ ಹಿಂದೋಡಿಸಿ ಮತ್ತೆ ಚಿಗುರಿ ಬೆಳೆದು ನಿಂತಿಲ್ವೇ..? ಗುಜರಾತ್‌ನ ಸೂರತ್, ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾಗಿ, ಪ್ರಪಂಚದ ಅತಿ ದೊಡ್ಡ ನಗರಗಳ ಪಟ್ಟಿಯಲ್ಲಿ 36ನೇ ಸ್ಥಾನವನ್ನು ಪಡೆದಿಲ್ವೇ..? ಆ ಉದಾಹರಣೆಯನ್ನು ಮುಂದಿಟ್ಟುಕೊಂಡು ನೋಡುವುದಾದರೇ ಈ ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರುವುದು ದೊಡ್ಡದೇನಲ್ಲ ಅನ್ನಿಸುತ್ತದೆ. ಹಾಗಂತ.. ನಿರ್ಲಕ್ಷ್ಯ ಮಾಡಿದರೇ ಎಲ್ಲವೂ ದೊಡ್ಡದೇ. ಈ ಮಹಾಮಾರಿ ಕೊರೋನಾ ವೈರಸ್ಸನ್ನು ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ಎಷ್ಟು ಜವಾಬ್ದಾರಿ ಹೊರುತ್ತಿದೆಯೋ ಅದರ ಅರ್ಧದಷ್ಟು ಭಾಗ ದೇಶದ ಜನತೆ ಹೊರಬೇಕಾಗಿದೆ. ಈ ವೈರಸ್ಸನ್ನು ನಿಯಂತ್ರಿಸುವಲ್ಲಿ ದೇಶದ ಜನತೆಯೂ ಮಹತ್ತರವಾದ ಪಾಲ್ಪಡೆಯಬೇಕಿದೆ. ಯಾವ ಸಂಸ್ಥೆಯ ವರದಿ ಏನೇ ಹೇಳಲಿ, ಜಾಗೃತೆ ನಮ್ಮಲ್ಲಿದ್ದರೇ, ಆ ಎಲ್ಲಾ ಸಂಸ್ಥೆಗಳು ಮಾಡಿದ ಸಮೀಕ್ಷೆಗಳ ವರದಿಯನ್ನು ಸುಳ್ಳಾಗಿಸಬಹುದಾದ ಶಕ್ತಿ ನಮ್ಮಲ್ಲಿನ ‘ನಿರ್ಧಾರ’ಕ್ಕಿದೆ..! “ನಮ್ಮ ಆರೋಗ್ಯ’, ‘ನಮ್ಮ ದೇಶ’ ನಮ್ಮ ಜವಾಬ್ದಾರಿ” ಏನಂತೀರಿ..?
ಬಿ ಸೇಫ್, ಟೇಕ್ ಕೇರ್.
-ಶ್ರೀರಾಜ್ ವಕ್ವಾಡಿ  


Friday, March 27, 2020

‘ರಂಗಭೂಮಿ’ ನನಗೆ ಪ್ಲಸ್ ಪ್ವಾಯಿಂಟ್ - ಚಂಪಾ ಶೆಟ್ಟಿ


ಹೆಣ್ಣು ತನ್ನಲ್ಲಿ ಇಟ್ಟುಕೊಂಡ ಕನಸುಗಳನ್ನು ಮೂರ್ತ ರೂಪಕ್ಕೆ ತರುವಲ್ಲಿ ಅಡ್ಡವಾಗುವ ಪುರುಷರ ಕ್ರೌರ್ಯಾದಿ ಧೋರಣೆಗಳನ್ನು ಮೂಲವಾಗಿಟ್ಟುಕೊಂಡು ತೆರೆಕಂಡ ಚಿತ್ರ ‘ಅಮ್ಮಚ್ಚಿಯೆಂಬ ನೆನಪು’.  ವೈದೇಹಿಯವರ ಕಥೆಯಾಧಾರಿತ ಈ ಸಿನೆಮಾವನ್ನು ರಂಗಭೂಮಿ ಹಾಗೂ ಧ್ವನಿ ಕಲಾವಿದೆ ಚಂಪಾ ಶೆಟ್ಟಿ ನಿರ್ದೇಶಿಸಿದ್ದಾರೆ. 'ಹೆಣ್ಣು'  ಅನುಭವಿಸುವ ನೋವು, ಸಂಕಟ, ದುಃಖ, ದುಮ್ಮಾನಗಳನ್ನು ತನ್ನಲ್ಲೇ ಹೇಗೆ ಮೀರಿ ಮುನ್ನಡೆಯುತ್ತಾಳೆ ಎನ್ನುವುದನ್ನು  ದೃಶ್ಯಕಾವ್ಯದಲ್ಲಿ ನಿರೂಪಿಸಿ ಯಶಸ್ಸು ಕಂಡಿದ್ದಾರೆ ನಿರ್ದೇಶಕಿ ಚಂಪಾ ಶೆಟ್ಟಿ. ಇನ್ನು, ಸುಮಾರು 30 ವರ್ಷಗಳ ಕಾಲದ ರಂಗಭೂಮಿಯಲ್ಲಿನ ಅನುಭವ ಅವರ ಜೊತೆಗಿದೆ. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗಕ್ಕೆ ಹೊಸತನ ನೀಡುತ್ತಿರುವ ನಿರ್ದೇಶಕಿ ಚಂಪಾ ಶೆಟ್ಟಿಯವರ ಮನಸ್ಸನ್ನು ತೆರೆಯುವ ಪ್ರಯತ್ನ ಈ ಕಿರು ಸಂದರ್ಶನದ ಮೂಲಕ...


ವೈದೇಹಿಯವರ ಕಥೆಗಳಾದ ‘ಅಮ್ಮಚ್ಚಿಯೆಂಬ ನೆನಪು’, ‘ಪುಟ್ಟಮತ್ತೆ ಮತ್ತು ಮೊಮ್ಮಗಳು’, ಹಾಗೂ ‘ಅಕ್ಕು’ವನ್ನು ತೆರೆ ಮೇಲೆ ತರುವಲ್ಲಿನ ನಿಮ್ಮ ನಿರ್ಧಾರದ ಬಗ್ಗೆ ಹೇಳುವುದಾದರೇ..?
ನನಗೆ ಕಥೆಗಳನ್ನು ಓದುವುದೆಂದರೇ ಅತ್ಯಾಸಕ್ತಿ. ರಂಗಭೂಮಿಯಲ್ಲಿ ತೊಡಗಿಕೊಂಡಿರುವುದರಿಂದ ಹೊಸ ಪ್ರಯೋಗಳಿಗಾಗಿಯೂ ಬೇರೆ ಬೇರೆ ಕಥೆಗಳನ್ನು ಓದುವ ಅಭ್ಯಾಸ ಮೊದಲಿನಿಂದಲೂ ಇತ್ತು. ವೈದೇಹಿಯವರ ‘ಅಕ್ಕು’ ಕಥೆಯ ಬಗ್ಗೆ ಆಶಾದೇವಿಯವರು ವಿಮರ್ಶಿಸಿದ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದನ್ನು ಓದಿದ್ದೆ. ‘ಅಕ್ಕು’ ನನ್ನನ್ನು ಸೆಳೆದಿತ್ತು. ‘ಅಕ್ಕು’ವಿನಲ್ಲಿ ಆ ಕಾಲಘಟ್ಟದ ಘಟನೆಗಳಿವೆ. ಅದನ್ನು ತೆರೆಗೆ ತರುವುದಕ್ಕೆ ಕಷ್ಟವಾಯ್ತು. ಹಾಗಾಗಿ ವೈದೇಹಿಯವರ  ಇತರೆ ಕಥೆಗಳನ್ನು ಓದಿದಾಗ, ಅವರ ಕಥೆಗಳಲ್ಲಿ ಒಂದಕ್ಕೊಂದು ಸಂಬಂಧವಿದೆ ಅಂತನ್ನಿಸಿತು. ಹಾಗಾಗಿ, ಅವರದ್ದೇ ಮತ್ತೆರಡು ಕಥೆಗಳು ‘ಪುಟ್ಟಮತ್ತೆ ಮತ್ತು ಮೊಮ್ಮಗಳು’ ಹಾಗು ‘ಅಮ್ಮಚ್ಚಿಯೆಂಬ ನೆನಪು’ಗಳನ್ನು ‘ಅಕ್ಕು’ವಿನೊಂದಿಗೆ ಹೆಣೆದೆ. ತೆರೆಗೆ ತರಲು ಮನಸ್ಸಾಯ್ತು. ಈ ಕಥೆ ಪ್ರೇಕ್ಷರನ್ನು ಸೆಳೆಯಬಹುದೆಂದು ನಂಬಿಕೆಯೂ ಮೂಡಿತು. ಮುಂದೆ ತೆರೆಯ ಮೇಲೆ ತರುವುದಕ್ಕೆ ಅವಕಾಶವೂ ಒದಗಿ ಬಂತು ಅಷ್ಟೇ.

ಅಕ್ಕುವಿನಲ್ಲಿ ಕೊರಗಿನ ಜೊತೆಗೆ ಸಿಟ್ಟಿತ್ತು, ಪುಟ್ಟಮತ್ತೆಯಲ್ಲಿ ನೋವಿನಲ್ಲೂ ಸಹನೆಯಿತ್ತು, ಅಮ್ಮಚ್ಚಿ ಬಹಳ ಮುಗ್ಧೆಯಾದರೂ ಅವಳಲ್ಲಿ ವಿರೋಧಿಸುವ ಛಾತಿಯಿತ್ತು... ಈ ಮೂರೂ ಪಾತ್ರಗಳಲ್ಲಿನ ಸಂಬಂಧ ತೆರೆಯ ಮೇಲೆ ನೋಡುಗರಲ್ಲಿ ಸಣ್ಣ ಮಟ್ಟದ ಗೊಂದಲವನ್ನುಂಟುಮಾಡಿದೆ. ಆ ಬಗ್ಗೆ ಏನ್ ಹೇಳ್ತೀರಿ..?
ನನ್ನ ಪ್ರಕಾರ ಅಮ್ಮಚ್ಚಿಯಾಗಲಿ, ಪುಟ್ಟಮತ್ತೆಯಾಗಲಿ, ಅಕ್ಕುವಿನ ಪಾತ್ರಗಳಲ್ಲಿ ತಲೆಮಾರಿನ ಅಂತರವಿದ್ದರೂ, ಹೆಚ್ಚು ಕಡಿಮೆ ಒಂದೇ ರೀತಿಯ ನೋವು ಅನುಭವಿಸಿದ ಪಾತ್ರಗಳೇ. ಹಾಗಾಗಿ ಮೂರು ಪಾತ್ರಗಳಿಗೂ ಸಂಬಂಧ ಇದೆ ಎನ್ನುವ ಕಾರಣಕ್ಕಾಗಿಯೇ ಆ ಮೂರು ಕತೆಗಳನ್ನು ಸೇರಿಸಿರುವುದು. ಮೂರು ಪಾತ್ರಗಳಲ್ಲಿ ಒಂದೇ ರೀತಿಯ ಸಂವೇದನೆ ಇರುವುದರಿಂದ ಆ ಮೂರು ಪಾತ್ರಗಳಲ್ಲಿ ಒಂದಕ್ಕೊಂದು ಸಂಬಂಧವಿದೆ.  ಪುಟ್ಟಮತ್ತೆಯಲ್ಲಿನ ಸಹನೆ, ಅಕ್ಕುವಿನಲ್ಲಿನ ನೋವನ್ನು ಒಳಗಿಟ್ಟುಕೊಂಡೇ ತೋರ್ಪಡಿಸುವ ಸಿಟ್ಟು, ಅಮ್ಮಚ್ಚಿಯಲ್ಲಿನ ಮುಗ್ಧತೆಯೊಳಗಿನ ಗಟ್ಟಿತನ ಆಯಾಯ ಕಾಲದ, ಆಯಾಯ ವಾತಾವರಣದ ಅನುಭವ. ಅವರೆಲ್ಲರೂ ಅನುಭವಿಸಿದ ನೋವು ಒಂದೇ ರೀತಿಯದ್ದು ಎಂದೆನ್ನಿಸುತ್ತದೆ ನನಗೆ. ನನಗಂತೂ ಆ ಗೊಂದಲವಿಲ್ಲ.

ಚಿತ್ರದಲ್ಲಿ ಬಳಸಿಕೊಂಡಿರುವ ಭಾಷೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅದು ಕುಂದಾಪುರ ಕನ್ನಡವಾ..? ಕೋಟ ಪ್ರಾಂತ್ಯದಲ್ಲಿ ಬ್ರಾಹ್ಮಣರು ರೂಢಿಸಿಕೊಂಡಿರುವ ಕನ್ನಡವಾ..?
ಇಲ್ಲಾ, ಕುಂದಾಪುರ ಕನ್ನಡವೇ. ಸಣ್ಣ ವ್ಯತ್ಯಾಸ ಕುಂದಾಪುರದ ಪ್ರಾಂತ್ಯ ಪ್ರಾಂತ್ಯಗಳಲ್ಲಿದೆ. ನಾವು ಚಿತ್ರದಲ್ಲಿ ಬಳಸಿಕೊಂಡಿದ್ದು ಕೋಟ ಭಾಗದಲ್ಲಿ ಬ್ರಾಹ್ಮಣರು ಬಳಸುವ ಕನ್ನಡ. ಅದು ಕೋಟ ಬ್ರಾಹ್ಮಣರ ಕುಂದಾಪುರ ಕನ್ನಡ ಭಾಷೆ.


ಕಥೆ ಗಟ್ಟಿಯಿದ್ದರೂ, ಕಥೆಯನ್ನು ತೆರೆಯ ಮೇಲೆ ತೋರಿಸಿದ ರೀತಿ ಚೆನ್ನಾಗಿದ್ದರೂ.. ಚಿತ್ರ ಬಹಳ ದಿನಗಳ ಕಾಲ ಚಿತ್ರಮಂದಿರದಲ್ಲಿರಲಿಲ್ಲ. ಚಿತ್ರದಲ್ಲಿ ಬಳಸಿದ ‘ಭಾಷೆ’ ಇದಕ್ಕೆ ಕಾರಣವಾಗಿರಬಹುದಾ..?
ಇಲ್ಲಾ, ಚಿತ್ರಮಂದಿರದಲ್ಲಿ ಹೆಚ್ಚು ದಿನಗಳ ಕಾಲ ಇರಲಿಲ್ಲ ಅನ್ನುವುದು ತಪ್ಪಾಗುತ್ತದೆ. ಈಗಿನ ದಿನಗಳಲ್ಲಿ ಸ್ಟಾರ್ ಕಾಸ್ಟ್ ಸಿನೆಮಾಗಳೇ ಹೆಚ್ಚು ದಿನಗಳು ಚಿತ್ರಮಂದಿರದಲ್ಲಿರುವುದಿಲ್ಲ. ‘ಅಮ್ಮಚ್ಚಿಯೆಂಬ ನೆನಪು’ ಮೂವತ್ತೊಂದು ದಿನಗಳ ಕಾಲ ಚಿತ್ರಮಂದಿರಲ್ಲಿದ್ದಿತ್ತೆಂದರೇ ಅದು ಅದ್ಭುತವಾದ ಗೆಲುವು. ಚಿತ್ರಕ್ಕೆ ‘ಭಾಷೆ’ ಎಲ್ಲೂ ತೊಡಕಾಗಲಿಲ್ಲ. ಮಲ್ಟಿಪ್ಲೆಕ್ಸ್ನಲ್ಲಿ ಒಂದು ವಾರ ಸಿನೆಮಾ ಉಳಿದುಕೊಳ್ಳುವುದೇ ಹೆಚ್ಚು ಈಗ. ಅಂತಹುದರಲ್ಲಿ ನಮ್ಮ ಚಿತ್ರ 31 ದಿನಗಳಿದ್ದಿತ್ತು ಎನ್ನುವುದೇ ದೊಡ್ಡ ಸಕ್ಸಸ್ ಅಂತ ನನಗೆ ಅನ್ನಿಸುತ್ತದೆ.

ಚಿತ್ರ ತೆರೆಗೆ ಬಂದ ಮೇಲೆ ಒಬ್ಬ ನಿರ್ದೇಶಕಿಯಾಗಿ ನೀವು ಸಿನೆಮಾ ನೋಡುವಾಗ ನಿಮ್ಮಲ್ಲಾದ ಅನುಭವ..?
90% ಸಿನೆಮಾ ನನ್ನಲ್ಲಿ ಏನು ಕಲ್ಪನೆ ಇದ್ದಿತ್ತೋ ಹಾಗೆ ಬಂದಿತ್ತು. ನನ್ನ ಕಲ್ಪನೆಗಳು ತೆರೆ ಮೇಲೆ ಓಡುವಾಗ, ಅದನ್ನು ನಾನು ನೋಡುವಾಗ ಖುಷಿಯಾಯ್ತು. ಮುಂದೆ ಇನ್ನೂ ಹೊಸ ಆಯಾಮಗಳಲ್ಲಿ ಮಾಡ್ಬೇಕು ಅಂತ ಅನ್ನಿಸುತ್ತಿತ್ತು ಅಷ್ಟೇ.

ಕಳೆದ ಸಾಲಿನಲ್ಲಿ 'ಅಮ್ಮಚ್ಚಿಯೆಂಬ ನೆನಪು' ಚಿತ್ರಕ್ಕೆ ರಾಜ್ಯ, ರಾಷ್ಟ್ರ ಮಟ್ಟದ ಚಲನಚಿತ್ರ ಪ್ರಶಸ್ತಿ ಸಿನೆಮಾಟೋಗ್ರಾಫಿಗೆ ಹೊರತಾಗಿ ಬೇರೆಯಾವುದಕ್ಕೂ ಬಂದಿಲ್ಲ. ಆ ಬಗ್ಗೆ ನೀವು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದೀರಿ. ಒಂದು ಸಿನೆಮಾಕ್ಕೆ, ನಿರ್ದೇಶಕನಿಗೆ ಅಥವಾ ಕಲಾವಿದನಿಗೆ ‘ಪ್ರಶಸ್ತಿ’ ಎಷ್ಟು ಪ್ರಾಮುಖ್ಯತೆ ತಂದುಕೊಡುತ್ತದೆ..?
ನಾವು ಸಿನೆಮಾ ಮಾಡಿದ್ದು ಯಾವುದೇ ಪ್ರಶಸ್ತಿಗಾಗಿಯೂ ಅಲ್ಲ, ದುಡ್ಡಿಗಾಗಿಯಂತೂ ಮೊದಲೇ ಅಲ್ಲ. ಅದು ನಮ್ಮ ಪ್ರೊಡ್ಯೂಸರ್‌ಗೂ ಗೊತ್ತು, ದುಡ್ಡಿನ ನಿರೀಕ್ಷೆ ಅವರಿಗೂ ಇದ್ದಿರಲಿಲ್ಲ. ಈಗ ಹೇಗಾಗಿದೆ ಅಂದರೇ, ಅವಾರ್ಡ್ ಮೂವಿನಾ..? ಕಮರ್ಶಿಯಲ್ ಮೂವಿನಾ..? ಅಂತಾರೆ. ಅಂತದನ್ನು ಕೇಳುವ ಪರಿಸ್ಥಿತಿ ಬಂದಿದೆ. ಕಲಾತ್ಮಕ ಸಿನೆಮಾಗಳು ತಯಾರಾಗುವುದೇ ಅವಾರ್ಡ್ಗಾಗಿ ಅಂತ ಕೆಲವರು ತಿಳಿದುಕೊಂಡಿದ್ದಾರೆ. ಆದರೇ, ವಾಸ್ತವ ಅದಲ್ಲ. ಅವಾರ್ಡ್ಗಿಂತಲೂ ಹೆಚ್ಚು ಕಲಾತ್ಮಕ ಸಿನೆಮಾಗಳಿಗೆ ಜವಾಬ್ದಾರಿಯಿದೆ, ಹಾಗಂತ ಕಮರ್ಶಿಯಲ್ ಸಿನೆಮಾಗಳಿಗೆ ಜವಾಬ್ದಾರಿಯಿಲ್ಲ ಅಂತಲ್ಲ. ‘ಅಮ್ಮಚ್ಚಿಯೆಂಬ ನೆನಪು’ 31 ದಿನಗಳು ಥಿಯೇಟರ್‌ನಲ್ಲಿತ್ತು. ಅಷ್ಟಲ್ಲದೇ, ಬೇರೆ ಬೇರೆ ಕಡೆಗಳಲ್ಲಿ ನಾವು ಪ್ರದರ್ಶನ ಮಾಡಿದ್ದೇವೆ. ಅಲ್ಲೆಲ್ಲಾ ಹೌಸ್‌ಫುಲ್ ಆಗಿದೆ. ಸಿನೆಮಾದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಹೊಗಳಿದ್ದಾರೆ ಎನ್ನುವುದನ್ನು ಹೊರತಾಗಿ ಒಂದೂ ಬ್ಯಾಡ್ ಕಮೆಂಟ್ ಬಂದಿಲ್ಲ ನಮಗೆ. ಪ್ರೇಕ್ಷಕರು ಸಿನೆಮಾವನ್ನು ತಮ್ಮದಾಗಿಸಿಕೊಂಡು ಮೆಚ್ಚಿದ್ದಾರೆ. ಆ ಮಟ್ಟಿಗೆ ನೋಡುವುದಾದರೇ, ಚಿತ್ರ ಮಾಡಿದ್ದು ದೊಡ್ಡ ಸಾರ್ಥಕತೆ ನಮಗೆ. ಒಂದು ಸಿನೆಮಾ ಮಾಡುವುದಕ್ಕೆ ಮತ್ತು ಸಕ್ಸಸ್ ಕಾಣುವುದಕ್ಕೆ ತುಂಬಾ ಕಷ್ಟ ಇದೆ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಯಾವುದರಲ್ಲೂ ಕಡಿಮೆ ಇಲ್ಲ ನಮ್ಮ ಸಿನೆಮಾ. ಅದಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ಪಡೆದಿದ್ದೇವೆ. ಅಂತಹುದರಲ್ಲಿ ಪ್ರಶಸ್ತಿಗಳು ಇನ್ಯಾವುದೋ ಸಿನೆಮಾಗಳಿಗೆ ಹೋಗುವಾಗ ಸಹಜವಾಗಿ ನೋವಾಗುತ್ತದೆ. ನೋಡಿದವರ ಮೆಚ್ಚುಗೆಯ ಸಕ್ಸಸ್ ಸಿಕ್ಕಿದೆ. ಆದರೇ, ಆ ಸಕ್ಸಸ್ ಗೆ ಬೇಕಾಗುವಂತಹ ರೆಕಾಗ್ನೇಶನ್ ಸಿಗದೇ ಹೋದಾಗ ಖಂಡಿತ ಬೇಸರವಾಗುತ್ತದೆ.
ಪ್ರಾಮಾಣಿಕವಾಗಿ ಮಾಡಿದ್ದಕ್ಕೆ ಏನು ನ್ಯಾಯವಾಗಿ ಸಿಗಬೇಕೋ ಅದು ರೆಕಾಗ್ನೆಶನ್ ಆಗಿ ಪ್ರಶಸ್ತಿಯ ಹೆಸರಲ್ಲಿ ಸಿಕ್ಕಾಗ ಖಂಡಿತ ಒಬ್ಬ ಕಲಾವಿದನಿಗೆ ಅವನ ಮುಂದಿನ ಬೆಳವಣಿಗೆಗೆ ಮುಖ್ಯವಾಗುತ್ತದೆ ನನ್ನ ಪ್ರಕಾರ.

ಕಮರ್ಶಿಯಲ್ ಚಿತ್ರಗಳ ಭರಾಟೆಯಲ್ಲಿ, ಪ್ರಾದೇಶಿಕ ಕಥೆಗಳಾಧಾರಿತ ಚಿತ್ರ ಮಾಡುವಲ್ಲಿನ ನಿಮ್ಮ ನಿರ್ಧಾರದ ಬಗ್ಗೆ ಹೇಳುವುದಾದರೆ...
ಕಲಾತ್ಮಕ ಸಿನೆಮಾಗಳನ್ನು ಅತ್ಯಂತ ಆಸಕ್ತಿಯಿಂದ ನೋಡುವ ವರ್ಗವೂ ಇದೆ. ಕಮರ್ಶಿಯಲ್ ಮತ್ತು ಆರ್ಟ್ ಮೂವಿಗಳು ಅಂತ ಬೇರೆ ಮಾಡುವುದೇ ನನಗೆ ಇಷ್ಟವಿಲ್ಲ. ಈಗ ಕಲಾತ್ಮಕ ಸಿನೆಮಾಗಳೂ ಕೂಡ ಕಮರ್ಶಿಯಲ್ ಸಿನೆಮಾಗಳೊಂದಿಗೆ ಪೈಪೋಟಿ ಕೊಡುತ್ತವೆ. ಜನರಿಗೆ ಇಂತಹ ಸಿನೆಮಾಗಳೂ ಬೇಕು ಈಗ. ಈ ಕಥೆ ಆಯ್ದುಕೊಂಡಾಗ ಜನ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇತ್ತು. ಹಾಗೆಯೇ ಜನ ಇಷ್ಟಪಟ್ಟಿದ್ದಾರೆ.


‘ಅಮ್ಮಚ್ಚಿಯೆಂಬ ನೆನಪು’ ಚಿತ್ರವನ್ನು ನೋಡುಗರು ಇಷ್ಟಪಟ್ಟಾಗ ಏನ್ ಅನ್ನಿಸಿತು..?
ತುಂಬಾ ಹೆಮ್ಮೆ ಅನ್ನಿಸಿದೆ. ಈ ಕಥೆಯನ್ನೇ ಹಿಂದೆ ನಾಟಕವನ್ನಾಗಿ ಮಾಡಿದ್ದೇನೆ. ನಾಟಕವನ್ನೂ ಜನ ಮೆಚ್ಚಿದ್ದಾರೆ. ಸಿನೆಮಾವನ್ನೂ ಇಷ್ಟಪಟ್ಟಿದ್ದಾರೆ. ಸ್ವತಃ ಈ ಕಥೆಯ ಮೂಲ ಕಥೆಗಾರ್ತಿ ವೈದೇಹಿಯವರೂ ಕೂಡ ಇಷ್ಟಪಟ್ಟಿದ್ದಾರೆ. ಇದು ನಾವು ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ. ಈ ಸಿನೆಮಾ ಹೊರತರುವಲ್ಲಿ, ಮತ್ತು ಸಕ್ಸಸ್‌ನಲ್ಲಿ ಸಾಕಷ್ಟು ಮಂದಿ ನನ್ನ ಜೊತೆಗಿದ್ದಾರೆ. ಸಿನೆಮಾದಲ್ಲಿ ಪಾತ್ರವಹಿಸಿದವರು, ನಿರ್ಮಾಪಕರು, ತಾಂತ್ರಿಕ ತಂಡದವರಿಗೆ, ಪ್ರತಕ್ಷವಾಗಿ, ಪರೋಕ್ಷವಾಗಿ ನನ್ನೊಂದಿಗಿದ್ದವರಿಗೆ ಎಂದಿಗೂ ಚಿರಋಣಿ. ಮುಖ್ಯವಾಗಿ ವೈದೇಹಿಯವರಿಗೆ ಎಂದಿಗೂ ನಾನು ಕೃತಜ್ಙಳಾಗಿರುತ್ತೇನೆ.

‘ಮಹಿಳೆ’ ಮುಖ್ಯ ಕ್ಷೇತ್ರಕ್ಕೆ/ವಾಹಿನಿಗೆ ಬರುತ್ತಿದ್ದಾಳೆ ಅಂತಾದರೇ, ಅಲ್ಲಿ ಒಂದಿಷ್ಟು ಸಮಸ್ಯೆಗಳು, ತೊಂದರೆಗಳು ಎದುರಾಗುತ್ತವೆ. ನೀವು ಅವುಗಳೆಲ್ಲವನ್ನೂ ಹೇಗೆ ಎದುರಿಸಿದ್ದೀರಿ..?
ಡೈರೆಕ್ಟರ್ ಅಂತಂದ್ರೆ, ‘ಕ್ಯಾಪ್ಟನ್ ಆಫ್ ದಿ ಶಿಪ್’ ಅಂತ ಹೇಳುತ್ತೇವೆ. ಒಂದು ಸಿನೆಮಾದಲ್ಲಿ ನಾನು ಒಬ್ಬ ಮಹಿಳೆಯಾಗಿ, ನಿರ್ದೇಶಕಿಯಾಗಿ ಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವುದು ಸುಲಭವಲ್ಲ. ಮಹಿಳೆಗೆ ಸಂಸಾರದಲ್ಲಿ, ಮನೆಯಲ್ಲಿ ಅವಳದ್ದೇ ಆದ ಪಾತ್ರ, ಜವಾಬ್ದಾರಿಯಿದೆ, ಅದರೊಂದಿಗೆ ಬೇರೆ ಜವಾಬ್ದಾರಿಯೂ ಪಡೆದುಕೊಳ್ಳುವುದು ಸ್ವಲ್ಪ ಕಷ್ಟ ಆಗುತ್ತದೆ. ನಿದೇಶಕಿಯಾಗಬೇಕಾದರೇ, ಸ್ವಲ್ಪ ಡಾಮಿನೇಟಿಂಗ್ ನೇಚರ್ ಬೇಕಾಗುತ್ತದೆ. ನಾನು ಮೂಲತಃ ಸಹನೆ, ತಾಳ್ಮೆ ಇರುವ ವ್ಯಕ್ತಿ. ನಿರ್ದೇಶನಕ್ಕೆ ಇಳಿದಾಗ ಸ್ವಲ್ಪ ಇನ್ನೂ ಡಾಮಿನೇಟಿಂಗ್ ಆಗಿರಬೇಕಿತ್ತು ಅಂತ ಅನ್ನಿಸಿತು. ಹಾಗೂ, ಇವತ್ತು ಇಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಕಡಿಮೆಯಿರುವುದರಿಂದ ನೀವು ಸ್ವಲ್ಪ ಎಕ್ಸ್ಟ್ರಾ ಸ್ಪೆಷಲ್ ಆಗಿದ್ರೇ ಖಂಡಿತ  ಬೇಗ ಬೆಳಕಿಗೆ ಬರುವುದಕ್ಕೆ ಸಾಧ್ಯ. ಅದೊಂದು ಅನುಕೂಲ ಮಹಿಳೆಯರಿಗೆ. ತುಂಬಾ ಜನ ಗುರುತಿಸುತ್ತಾರೆ. ನನ್ನ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದ ಅನುಭವದಲ್ಲಿ ಎಲ್ಲಾ ಕಡೆ ಹೋಮ್ಲಿ ಫೀಲ್ ಇದ್ದಿದ್ದರಿಂದಾಗಿ ನನಗೆ ಹೇಳುವಂತದ್ದೇನು ಸಮಸ್ಯೆಯಾಗಲಿ, ತೊಂದರೆಗಳಾಗಲಿ ಆಗಿಲ್ಲ.

ರಂಗಭೂಮಿ ಮತ್ತು ಸಿನೆಮಾ ರಂಗದಲ್ಲಿ ನೀವು ನೀವಾಗಿಯೇ ಚಂಪಾ ಶೆಟ್ಟಿಯವರನ್ನು ಹೇಗೆ ಕಂಡುಕೊಳ್ಳುತ್ತೀರಿ..?
ಎಲ್ಲೂ ನಿಂತ ನೀರಾಗಬಾರದೆನ್ನುವುದು ನನ್ನ ಆಸೆ. ಹೊಸದನ್ನು ಹುಡುಕುವುದು, ಅದನ್ನು ಪ್ರಯೋಗ ಮಾಡುತ್ತಿರುವ ಚಂಪಾ ಶೆಟ್ಟಿಯನ್ನು ನಾನು ನನ್ನಲ್ಲಿ ಕಂಡುಕೊಳ್ಳುತ್ತೇನೆ. ಸದಾ ಹಸಿರಾಗಿರಬೇಕು ಅಂತ ಇಷ್ಟಪಡ್ತೇನೆ.

ಚಿತ್ರರಂಗಕ್ಕೂ, ರಂಗಭೂಮಿಗೂ ಸಂಬಂಧವಿದ್ದರೂ ಕೂಡ ಸಾಕಷ್ಟು ಭಿನ್ನತೆಯಿದೆ. ನೀವೂ ಎರಡೂ ಕ್ಷೇತ್ರಗಳಲ್ಲಿದ್ದೀರಿ. ಒಬ್ಬ ಕಲಾವಿದ/ಕಲಾವಿದೆ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದಕ್ಕೆ ಹೇಗೆ ಸಾಧ್ಯ..?
ನನಗಿದು ಪ್ಲಸ್ ಪ್ವಾಯಿಂಟ್. ರಂಗಭೂಮಿಯಲ್ಲಿ ನಾಟಗಳಲ್ಲಿ ತೊಡಗಿಕೊಂಡಿದ್ದರಿಂದ ಮತ್ತು ಒಂದಿಷ್ಟು ನಾಟಕಗಳ ನಿರ್ದೇಶನ ಮಾಡಿರುವುದರಿಂದ ನಿರ್ದೇಶನದ ಬಗ್ಗೆ ಸ್ವಲ್ಪ ಹಿಡಿತ ಇತ್ತು. ನಾಟಕದ ಶೈಲಿ, ಸಿನೆಮಾದ ಶೈಲಿ ವಿಭಿನ್ನವಾಗಿರುವುದರಿಂದ ಕೆಲವುಕಡೆ ನಾವು ಎರಡೂ ಕ್ಷೇತ್ರಗಳಲ್ಲಿ ಸರಿಹೊಂದಿಕೊಳ್ಳಬೇಕಾಗುತ್ತದೆ. ಕೆಲವು ಕಡೆ ನಮ್ಮ ಕೆಲಸವನ್ನು ನಾವೇ ನೋಡುವಾಗ, ಸಣ್ಣ ಪುಟ್ಟ ತಪ್ಪುಗಳನ್ನು ಸರಿಮಾಡಿಕೊಳ್ಳಬಹುದಿತ್ತು ಅಂತ ನಮಗೇ ಅನ್ನಿಸುತ್ತದೆ. ಅದು ಮುಂದಿನ ಬೆಳವಣಿಗೆಗೆ ಸಹಕಾರಿ. ನನಗೆ ರಂಗಭೂಮಿಯಿಂದ ಅನುಕೂಲವಾಗಿದ್ದೇ ಹೆಚ್ಚು.

ರಂಗಭೂಮಿಗೋ, ಚಿತ್ರರಂಗಕ್ಕೋ ಒಬ್ಬ 'ಹುಡುಗಿ' ಬರುವುದಕ್ಕೆ ಇಷ್ಟಪಡುತ್ತಿದ್ದರೇ, ಆಕೆಗೆ ನೀವು ಏನ್ ಹೇಳ್ತೀರಿ..? ಆಕೆ ಹೇಗಿರ‍್ಬೇಕು..?
ಏನೂ ಇಲ್ಲ. ಪ್ರಾಮಾಣಿಕತೆ ಮತ್ತು ಆಸಕ್ತಿ ಇರಲೇಬೇಕು. ತೊಡಗಿಕೊಳ್ಳುವುದು ಬಹಳ ಮುಖ್ಯ. ರಂಗಭೂಮಿಯೋ, ಚಿತ್ರರಂಗವೋ ಅಥವಾ ಬೇರೆ ಯಾವುದೋ..ನಾವು ಕೆಲಸ ಮಾಡುವ ಕ್ಷೇತ್ರವೇ ನಮ್ಮ ಉಸಿರು ಎನ್ನುವಷ್ಟರ ಮಟ್ಟಿಗೆ ಆ ಕ್ಷೇತ್ರದ ಬಗ್ಗೆ ಗೌರವವಿರಬೇಕು ಅಷ್ಟೇ.
-ಶ್ರೀರಾಜ್ ವಕ್ವಾಡಿ 

Tuesday, March 24, 2020

ಯುಗ ಯುಗಾದಿ


ಬೇವು ಮಾವು 
ನಾವು ನೀವು 
ಬೆರೆತು ಒಪ್ಪಿ ಅಪ್ಪಿ 
ಬಾಳುವ... 

ದೀಪ, ತಾಪ 
ಎಮ್ಮ ಒಡಲು 
ಕುಸಿಯದಿರಲಿ 
ನಮ್ಮ ಪದವು 
ಹರ್ಷವೇರಿ ಸಾಗುವ...

ಯುಗಾದಿ ಹರ್ಷ 
ತರುವ ತರದಿ
ಹೊನ್ನ ತೇರನೇರಿ 
ಬದುಕ ಹಾದಿ 
ಕಳೆಯುವ...
ಯುಗ ಯುಗಾದಿ
ಕಳೆಯುವ...!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)

ಚಿತ್ರ: ಛಾಯಾ ಕುಂದಾಪುರ

ಹಬ್ಬ ಹಬ್ಬವಾಗಲಿ...!


ಯುಗಾದಿ ಬಂದಿದೆ 
ಹೇಗೆ ಆಚರಿಸಲಿ ಹಬ್ಬ..!? 
ಅದೆಲ್ಲಿದೋ ಮಹಾಮಾರಿ 
ಒಕ್ಕರಿಸಿ ಬಿಟ್ಟಿದೆ ದೇಶಕ್ಕೆ,
ದುಡಿಮೆಯಿಲ್ಲ, ಎದೆಗೆ 
ಭಾರ ಹೊರತು ಮತ್ತೇನಿಲ್ಲ..! 

ಕಹಿಸುದ್ದಿಯೇ 
ಪುಂಖಾನುಪುಂಖ 
ಸಾಗರದಲೆಗಳಬ್ಬರಿಸಿದಂತೆ 
ಕಿವಿಗೆ ಬಡಿಯುತ್ತಿರಲು... 
ಸಿಹಿ ಯಾವ ಸಂತಸಕ್ಕೆ ..? 

ಚಾಂದ್ರಮಾನದಿಂದ 
ಸೌರಮಾನದೊರೆಗೂ 
ಸದ್ಯ ದೇಶ ಲಾಕ್ಡೌನ್..!
ವರ್ಷದಾರಂಭದಲ್ಲೇ
ಒಬ್ಬಟ್ಟಿನ ಸಿಹಿ 
ಹೂರಣ ಕಹಿಯಾಗಿದೆ..!

ವಿಕಾರಿ ಕಳೆದು 
ಶಾರ್ವರಿಯಾಗಮನಕ್ಕೆ 
ಸ್ತಬ್ಧ ಮೌನವೇ ಸ್ವಾಗತ..!

ಮುಗಿಯದ ಪ್ರೀತಿ ಕೊಟ್ಟ,
ಪಕ್ಕದ ಮನೆಯ ಬಂಧು
ಅದೆಲ್ಲೋ ಇದ್ದವರು
ಊರಿಗೆ ಬಂದು 
ಐಸೋಲೇಟ್ನಲ್ಲಿದ್ದಾರೆ..!
ಹೆತ್ತ ಕರುಳಿನಾಕ್ರದಂನ 
ನೀರವತೆಗೆ ಹೆಗಲಾಗಿದೆ..!

ಮಹಾಮಾರಿ
ಸಮೂಲ ಅಲುಗಾಡಿಸಿದೆ,
ಭೂಮಿ ಈಗ ಮರಣ 
ಯಜ್ಞಕ್ಕೆ ಸಿದ್ಧಗೊಳಿಸಿದ ಸ್ಥಂಡಿಲ...! 

ಯುಗಾದಿ ಅಂದರೇ,
ಕಾರಿರುಳು ಕಳೆಯುವುದಂತೆ..
ಮೌನವನ್ನು ಸರಿಸಿ
ಸಿಹಿ ನಿರೀಕ್ಷೆ ಜೊತೆಗಿರಲಿ,
ಸಮೃದ್ಧ ಬದುಕು 
ಒದಗಿಸಿಕೊಡಲಿ,
ಯುಗಾದಿ ಸಂತಸ ತರಲಿ..
ಐಸೋಲೇಟ್ನಲ್ಲಿ
ಮಲಗಿದವರಿಗೂ...
ಹಬ್ಬ ಹಬ್ಬವಾಗಲಿ...!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)


ನರಕ ಬುವಿಗೆ ಜಾರುತ್ತಿದೆ..!


ನರಕ ಬುವಿಗೆ ಜಾರುತ್ತಿದೆ..!
ಕೂಲಿ ಬೆವರಿನ ಅನ್ನ,
ತಳ್ಳುಗಾಡಿ ವ್ಯಾಪಾರಿಗಳ 
ಹೊತ್ತಿನ ತುತ್ತು ಕಸಿದ ವೈರಾಣು..! 

ನಿಶ್ಯಬ್ದ ಹರಿವಿನ ಹೊಳೆಗೆ 
ಕಾಗೆ ಧುಮುಕಿ ಕ್ಷಣ ನಿಲ್ಲದೆ
ನೀರ ಹೀರಿ ಕೊರಳ 
ಕೊಂಕಿಸಿ ಹಾರುತ್ತಿದೆ ..
ಮೊಗಗವಸು ಹಾಕಿದ 
ಮುಸುಡಿಗಳ ಕಂಡು...!

ಗಿಜಿಗುಡುತ್ತಿದ್ದ ರಸ್ತೆ, 
ಪೇಟೆ, ಮಾಲ್ಗಳೆಲ್ಲಾ 
ಸ್ತಬ್ಧ ಸ್ತಬ್ಧ..! 
ಗುಡಿಯ ಗಂಟೆ ಕೇಳಿಸುತ್ತಿಲ್ಲ,
ಮಸೀದಿಯ ಬಾಂಗ್ ಇಲ್ಲ,
ಚರ್ಚಿನ ಪ್ರಾರ್ಥನೆಯಿಲ್ಲ.
ಗುಡಿ, ಚರ್ಚು,‌ಮಸೀದಿಗಳ 
ದೇವರಿಗೂ ಲಾಕ್ಡೌನ್..!

ಅದ್ಯಾರೋ ಗೊತ್ತಿಲ್ಲದ 
ಸೋಂಕು ಹೊತ್ತು ತಂದರು, 
ಪಸರಿಸಿದರು, ಭೀತಿಯ ಬೆಂಕಿ
ಹೊತ್ತಿಸಿದರು..! 
ಮರಣದ ಡೋಲು 
ಬಡಿಯುತ್ತಲೇ ಇದೆ...
ವೈದ್ಯರು, ಪೋಲಿಸರು, 
ಪೌರ ಕಾರ್ಮಿಕರು, 
ಪತ್ರಕರ್ತರಿಗೆ ನಿಶೆಯಿಲ್ಲ..!

ಸ್ತಬ್ಧ ಸ್ತಬ್ಧ
'ನರಕ ಬುವಿಗೆ ಜಾರುತ್ತಿದೆ'
ಸಿದ್ಧರಾಗೋಣ..
ಬದುಕಿಗೋ, ಮರಣಕ್ಕೋ 
ನೀವೇ ನಿರ್ಧರಿಸಿ..! 
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)


Saturday, March 21, 2020

ನ್ಯಾಯ ಇನ್ನೂ ಸಿಕ್ಕಿಲ್ಲ..!


ಏಳು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯದ ಕಥೆಯನ್ನು ಸ್ವಲ್ಪ ನೆನಪು ಮಾಡಿಕೊಳ್ಳುವ. ಅಂದು ಡಿಸೆಂಬರ್ ೧೬. ೨೦೧೨. ಮನೆಗೆ ತೆರಳಲು ತನ್ನ ಗೆಳೆಯನೊಂದಿಗೆ ನಿರ್ಭಯ ಬಸ್ ಹತ್ತಿದಳು. ಬಸ್ ಡ್ರೈವರ್ ದಾರಿ ತಪ್ಪಿಸಿ ಎಲ್ಲೆಲ್ಲೋ ಬಸ್ಸ್ ಸಾಗಿಸಿದ. ಬಸ್ಸ್ನಲ್ಲಿದ್ದ ಆರು ಮಂದಿ ಕಾಮ ಪಿಶಾಚಿಗಳು ಒಬ್ಬೊಬ್ಬರಾಗಿ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದರು. ಅಷ್ಟಲ್ಲದೇ, ಅಲ್ಲೆ ಇದ್ದ ಗೆಳೆಯನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ಸರಳನ್ನು ತುರುಕಿಸಿ, ಅತ್ಯಂತ ಕ್ರೂರವಾಗಿ ಹತ್ಯೆ ನಡೆಸಿ ದಾರಿಯ ಮಧ್ಯದಲ್ಲೆ ಎಸೆದು ಹೋದರು. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆಯದು. ನಿರ್ಭಯಳಿಗಾಗಿ ದೇಶದೆಲ್ಲೆಡೆ ಪಾರ್ಥನೆ, ಆಕೆಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಆಕ್ರೋಶದ ಪ್ರತಿಭಟನೆ ಮುಗಿಲಿಗೇರಿತ್ತು. ಇಲ್ಲಾ ನಿರ್ಭಯ ಬದುಕುಳಿಯಲಿಲ್ಲ. ಡಿಸೆಂಬರ್ ೨೯, ಆಕೆ ತನ್ನ ಕೊನೆಯುಸಿರೆಳೆದಳು. ಮತ್ತೆ ಎಲ್ಲವೂ ವಿಳಂಬ...!


ನಿರ್ಭಯಾಳಿಗಾಗಿ ಇಡೀ ದೇಶವೇ ಕಂಬನಿ ಸುರಿಸಿತು. ಹೆತ್ತ ಕರುಳೆಷ್ಟು ಬೆಂದು, ನೊಂದಿರಲಿಕ್ಕಿಲ್ಲ ಹೇಳಿ... ನಿರ್ಭಯಾಳ ಈ ಅಂತ್ಯ ಪೋಷಕರ ಕಣ್ಣೀರು ಬತ್ತಿ ಹೋಗುವಷ್ಟು ಮಾಡಿದೆ. ನಿರ್ಭಯಾಳ ತಾಯಿ ಆಶಾದೇವಿ, ತಂದೆ ಬದ್ರಿನಾಥ್ ಆ ನೊಂದ ಹೃದಯದಲ್ಲೇ ತಮ್ಮ ಮಗಳಿಗಾಗಿ ಹೋರಾಟಕ್ಕಿಳಿದರು. ವಕೀಲೆ ಸೀಮಾ ಕುಶ್ವಾಹ ಕೂಡ. ಆ ಹೊರಾಟ ದೋಷಿಗಳಿಗೆ ಶಿಕ್ಷೆಯಾಗುವವರೆಗೂ ಬಿಡಲಿಲ್ಲ. ಕೊನೆಗೂ ‘ದೇಶದ ಮಗಳಿಗೆ’ ನ್ಯಾಯ ದೊರಕಿತು. ಹೌದು, ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳಿಗೆ ಏಕಕಾಲದಲ್ಲೇ ಕೊರಳಿಗೆ ನೇಣು ಬಿಗಿಯುವ ಮೂಲಕ ಸುದೀರ್ಘ ಏಳು ವರ್ಷಗಳ ಅವಧಿಯ ನಿರ್ಭಯ ಪ್ರಕರಣಕ್ಕೆ ಅಂತ್ಯ ಸಿಕ್ಕಿದಂತಾಗಿದೆ. ಇಷ್ಟಾದ ಮೇಲೂ ನಿರ್ಭಯಾಳ ಪೋಷಕರು ತಮ್ಮ ಹೋರಾಟವನ್ನು ಬಿಡಲಿಲ್ಲ. ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಕಾನೂನಿನಲ್ಲಿರುವ ದೋಷಗಳ ವಿರುದ್ಧ ಹೋರಾಟ ಮಾಡುತ್ತೇವೆ ಎನ್ನುವಾಗ ‘ಭೇಷ್’ ಅನ್ನದೇ ಮತ್ತೇನನ್ನಬೇಕು..? ಅಷ್ಟು ಮಾತ್ರವಲ್ಲ, ಇನ್ನೂ ಇದೆ ಜವಾಬ್ದಾರಿ.


ಇಂತಹುದದೆಷ್ಟೋ ಪ್ರಕರಣಗಳು ಈ ನೆಲದಲ್ಲಿ ನಡೆದುಹೋಗಿದೆಯೋ, ಅದೆಷ್ಟು ಪ್ರಕರಣಗಳು ರಾಜಕೀಯದ ಮೇಲಾಟದಲ್ಲಿ ಮುಚ್ಚಿಹೋಗಿವೆಯೋ, ಸಮಾಜದಲ್ಲಿನ ವೆಲ್ ನೌನ್ ಫೇಸಸ್ ಇಂತಹ ಪ್ರಕರಣಗಳಲ್ಲಿ ಎಷ್ಟಿವೆಯೋ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲದ ಮೌನ. ಇಂತಹ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ದೋಷಿಗಳೆಂದು ತಿಳಿದ ಮೇಲೂ ಕಾನೂನಿನಲ್ಲಿ ಕ್ಷಮೆಗೆ ಅವಕಾಶಗಳಿವೆ ಎನ್ನುವುದೇ ದೊಡ್ಡ ನಗೆಪಾಟಲಿಗೆ ತುತ್ತಾಗುವ ವಿಷಯ. ಮಾತ್ರವಲ್ಲದೇ, ದೋಷಿಗಳನ್ನೂ ಸಮರ್ಥಿಸಿಕೊಂಡು ಶಿಕ್ಷೆಯನ್ನು ಮುಂದೂಡುವುದಕ್ಕೆ ಹರಸಾಹಸ ಪಡುವ ವಕೀಲರು, ಅವರಿಗೆ ಕೋರ್ಟ್ ದಯಪಾಲಿಸುವ ತಕ್ಕುದಾದ ದಾರಿಗಳನ್ನು ನೆನೆಸಿಕೊಂಡರೇ ಅಸಹ್ಯ ಅನ್ನಿಸುತ್ತದೆ.


ಅದಿರಲಿ... ಅತ್ಯಾಚಾರಕ್ಕೊಳಗಾಗಿ ಕಾಡಿನ ನಡುವೆಯೆಲ್ಲೋ, ನಿರ್ಜನ ಬಯಲಿನಲ್ಲೆಲ್ಲೋ, ಬೆಟ್ಟ ಗುಡ್ಡಗಳಲ್ಲೆಲ್ಲೋ ನಗ್ನವಾಗಿ ನೊಂದು, ಬೆಂದು ಬಿದ್ದ ಅದೆಷ್ಟೋ ನಿರ್ಭಯಾಳಂತಹ ಸಂತ್ರಸ್ತೆಯರಿಗೆ ಎಲ್ಲಿದೆ ನ್ಯಾಯ..? ಹೌದು, ಈ ಗಲ್ಲು ಶಿಕ್ಷೆ ನಿರ್ಭಯಾಳಿಗೆ ನ್ಯಾಯ ದೊರಕಿಸಿರಬಹುದು. ತೃಪ್ತಿಯೂ ಇದೆ. ಆದರೇ, ದೇಶದಲ್ಲಿ ದೌರ್ಜನ್ಯ ಇನ್ನೂ ನಿಂತಿಲ್ಲ. ನಿಲ್ಲಿಸಬೇಕು. ನಿಲ್ಲಬೇಕು.
ಅತ್ಯಾಚಾರಕ್ಕೊಳಗಾಗಿ ಶವವಾಗಿ ಹೋದ ಅದೆಷ್ಟೋ ಹೆಣ್ಮಕ್ಕಳಿಗೆ ನ್ಯಾಯ ಸಿಕ್ಕಿಲ್ಲ. ಅಂತಹ ಪ್ರಕರಣಗಳ ಅಪರಾಧಿಗಳಿಗೆ ತುರ್ತಾಗಿ ಶಿಕ್ಷೆಯಾಗಲೇ ಬೇಕು. ನಿರ್ಭಯಾ ಪ್ರಕರಣದ ಈ ನ್ಯಾಯ ಮಾದರಿಯಾಗಲಿ. ನಾಗರಿಕರು ‘ನಿರ್ಭಯ ಸಮಾಜ’ ಕಟ್ಟುವಂತಾಗಬೇಕು. ಸರ್ಕಾರ ಮತ್ತಷ್ಟು ಬಲವಾದ ಕಾನೂನು ತರಲಿ, ಮಾತ್ರವಲ್ಲ ಆ ಕಾನೂನು ಕಣ್ತೆರೆಯಲಿ. ನ್ಯಾಯ ಇನ್ನೂ ಸಿಕ್ಕಿಲ್ಲ..!
-ಶ್ರೀರಾಜ್ ವಕ್ವಾಡಿ

ಕವಿಯ ಕವಿತ್ವಕ್ಕೆ 'ಓದು' ಬಲ..!


ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾಲಮಾನದಲ್ಲಿ ಬಹುಮುಖಿ ಚಿಂತನೆಯ ಕನ್ನಡ ಕಾವ್ಯ ರಚನೆ ವಿಮುಖವಾಗಿ ಬೆಳೆಯುತ್ತಿದೆ. ಕಾವ್ಯ ಕಾವ್ಯವಾಗಿರಬೇಕೆ ಹೊರತು ಅದು ಒತ್ತಾಯದಿಂದ ಬರುವ ಭಾವ್ಯವಾಗಿರಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸೋ ಕಾಲ್ಡ್ ಕವಿ ಎನ್ನಿಸಿಕೊಂಡ ಕೆಲವು ಮನಸ್ಸುಗಳು ಹರಿಯಬಿಡುವ ಕಾವ್ಯಗಳು ಅಥವಾ ಕವನಗಳು ಇಂದು ಎಷ್ಟರ ಮಟ್ಟಿಗೆ ಓದುಗರನ್ನು ಗೆದ್ದಿವೆ ಎನ್ನುವುದನ್ನು ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ.
ಬರೆದವುಗಳು ಎಲ್ಲವೂ ಕಾವ್ಯವಾಗಬೇಕಿಲ್ಲ, ಕವಿಯಾಗಬೇಕೆಂದು ಏನೇನೋ ಬರೆಯುವುದಲ್ಲಾ. ಹೌದು, ಕವನಗಳಿಗೆ ಇಂತದ್ದೇ ರೂಪ ಸ್ವರೂಪಗಳಿಲ್ಲಾ ಎನ್ನುವ ಅರಿವು ನನಗೂ ಗೊತ್ತು. ಅದನ್ನು ಎಲ್ಲರೂ ಒಪ್ಪಲೇ ಬೇಕಾದ ವಿಷಯ. ಯಾವುದು ಭಾವ ಮತ್ತು ಭಾಷೆಗಳನ್ನು ಒಳಗೊಂಡು ವಸ್ತು ಅಥವಾ ವಿಷಯಕ್ಕೆ ಸ್ಪಂದಿಸಿ ಅಕ್ಷರಗಳಿಗಿಳಿಯುತ್ತದೆಯೋ ಅದೇ ಕವನ. ಆದರೇ ಕವನಗಳಿಗೆ ಒಂದು ಚೌಕಟ್ಟಿದೆ, ಲಯವಿದೆ, ಲಾಲಿತ್ಯವಿದೆ, ಓಗವಿದೆ, ವೇಗವಿದೆ ಎಂಬುವುದನ್ನು ಕವನ ಕಟ್ಟುವಾಗ ಕವಿಯಾದವನು ಮರೆಯುವಂತಿಲ್ಲಾ. ಮತ್ತು ಅದನ್ನು ಹೊರತಾಗಿ ಬರೆದ ಅಕ್ಷರಗಳ ಗುಂಪೆಲ್ಲವೂ ಕವನಗಳೆನ್ನಿಸಿಕೊಳ್ಳುವುದಿಲ್ಲಾ. ಇಂದು ಬರೆದವುಗಳನ್ನು ಕಾವ್ಯವಾಗಿಸುವ ತವಕದಲ್ಲಿ ಸಹೃದಯರ ಓದಿನ ಭಾವಕ್ಕೆ ಸೇತುವೆಯಾಗದೆ ಸೋತ ಕವಿಗಳ ದೊಡ್ಡ ಪಟ್ಟಿಯನ್ನೇ ನಾವು ತೆಗೆಯಬಹುದುದಾಗಿದೆ.
ಮಾಧ್ಯಮಗಳಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಹೊರಹಾಕುವುದಕ್ಕೆ ಅವಕಾಶಗಳು ದೊರಕದೆ ಹೋದಾಗ ಸಾಮಾಜಿಕ ಜಾಲತಾಣಗಳು ಎಲ್ಲರ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿತು ಎನ್ನುವುದು ಅಕ್ಷರಶಃ ಸತ್ಯ. ಅಭಿವ್ಯಕ್ತಿ ಸಾಮಾಜಿಕ ಜಾಲ(ಮಾಯಾ)ತಾಣಗಳಲ್ಲಿ ಇಂದು ಅಭಿವ್ಯಕ್ತಿ ಒಂದು ಸ್ವಾತಂತ್ರ್ಯ ಎಂದು ಮರೆತು ವಿಚಿತ್ರವಾಗಿ ಬಳಕೆಯಾಗುತ್ತಿರುವುದು ಒಪ್ಪುವಂತದಲ್ಲಾ.  ಏನೆನನ್ನೋ ಕವನಗಳೆಂದು, ಲೇಖನಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಒಂದಿಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ತರಾತುರಿಯಲ್ಲಿ ಕೆಲವರು ಕ್ರಿಯಾಶೀಲರಾಗಿರುವುದನ್ನು ನೋಡಿದರೆ ನಿಜಕ್ಕೂ ಸಾಹಿತ್ಯ ಇಂದು ಯಾವ ಸ್ಥಿತಿಗೆ ತಲುಪಿಬಿಟ್ಟಿದೆ ಎಂಬ ಪ್ರಶ್ನೆ ನನ್ನಂಥವನಿಗೆ ಕುಕ್ಕದೆ ಇರುವುದಿಲ್ಲ.
ಅಕ್ಷರಗಳನ್ನು ಮಾರುಗಟ್ಟಲೆ ಹೆಣೆಯುತ್ತಾ ಹೋಗಿ ಏನೇನೋ ಭಾವಗಳನ್ನು ಅರ್ಥೈಸಿಕೊಳ್ಳುವುದಕ್ಕಾಗದ ಹಾಗೆ ಬರೆಯುವುದು ಅಥವಾ ತುಂಬಾ ಸುಲಭವಾಗಿ ಅರ್ಥೈಸಿಕೊಳ್ಳುವುದಕ್ಕಾಗುವಷ್ಟು ಸರಳವಾಗಿ ಬರೆದರೆ, ಕಾವ್ಯದ ಒಳದನಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ಎಂಥೆಂತದ್ದೋ ಶಬ್ದ ಭಂಡಾರದ ಪ್ರದರ್ಶನ ಮಾಡುವುದು ಕವನವಾಗುವುದಿಲ್ಲ. ಕವನಗಳು ಭಾವಕ್ಕೂ ಹಾಗೂ ಭಾವದೊಳಗಿನ ಭಾಷೆಗೂ ಸರಳವಾದ ನಿರೂಪಣೆಯನ್ನು ಹೊಂದಿ ಹೊಸದೊಂದು ಅರ್ಥ ನೀಡುವ ಹಾಗೆ ಇರಬೇಕು.
ನವೋದಯ ಸಾಹಿತ್ಯವು ಅಥವಾ ಕಾವ್ಯವು ಭಾವನೆಗಳ ತೀವ್ರತೆಗೆ, ಭಾವುಕತೆಗೆ, ಅಭಿವ್ಯಕ್ತಿಗೆ, ಉತ್ಸಾಹಕ್ಕೆ  ಪ್ರಾಮುಖ್ಯತೆ ಕೊಟ್ಟು ಬೆಳೆಯಿತು. ಬಹುಶಃ ಅದನ್ನೇ ಅನುಸರಿಸುತ್ತಾ ಆಧುನಿಕ ಕವಿ ಪರಂಪರೆ ಬಂದಿತ್ತಾದರೂ ಇಂದಿನ ಕವಿಗಳಾದ ನಾವು ಕಾವ್ಯ ಅನುಸಂಧಾನಕ್ಕೆ ಎಷ್ಟರ ಮಟ್ಟಿಗೆ ಅಣಿಯಾಗಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ.  ಅಭಿವ್ಯಕ್ತಿಯಲ್ಲಿ ಆತ್ಮಪ್ರಜ್ಙೆಯ ತಾಕತ್ತು ಸಾಕ್ಷಿಯಾಗಿ ನಿಂತಾಗ ಮಾತ್ರ ಕಾವ್ಯವಾಗಬಲ್ಲದು ಅದನ್ನು ಸಾಧಿಸುವತ್ತ ಬರಹಗಾರರಾದ ನಾವು ಚಿತ್ತ ಹರಿಸಬೇಕಾಗಿದೆ.


ಒಂದಿಷ್ಟು ಓದಿನ ಮೂಲಕ ಸಾಹಿತ್ಯ ಅಥವಾ ಕಾವ್ಯ ಲೋಕದಲ್ಲಿ ಕಣ್ಣಾಗುವುದು, ಸಾಹಿತ್ಯ ಅನುಭವಗಳನ್ನು ಕೇಳುವ ಮೂಲಕ ಕಿವಿಯಾಗುವುದು ಕಾವ್ಯ ರಚನೆಯ ಹಿನ್ನೆಲೆಯಲ್ಲಿ ಬಹಳ ಮುಖ್ಯವಾಗುತ್ತದೆ. ಅದಕ್ಕೆ ಹೊರತಾಗಿ ನಾವೆಷ್ಟೇ ಬರೆದರೂ ಅದರಲ್ಲಿ ಗಟ್ಟಿತನ ಬರುವುದಿಲ್ಲ ಎನ್ನುವುದು ನನ್ನ ಅಂಬೋಣ.
 ಪ್ರಚಾರದ ಗೀಳು ಅಥವಾ ಚಟದ ಬೆನ್ನು ಹತ್ತಿದ ಎಷ್ಟೋ ಸೋ ಕಾಲ್ಡ್ ಸಾಹಿತಿಗಳು/ ಕವಿಗಳು ಇಂದು ಸಾಹಿತ್ಯಕ್ಕೆ ಹೊಲಸಂಟಿಸಿದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಆ ಪ್ರಚಾರದ ಹೊಲಸಿನ ತುಡಿತಗಳು ಸಾಫಲ್ಯ ತಂದು ಕೊಟ್ಟಿಲ್ಲ ಎಂಬುವುದೇ ಒಂದು ರೀತಿಯ ಸಮಧಾನಕರ ವಿಷಯ. ಕವಿಯಾಗುವುದಕ್ಕೆ ವಿಶೇಷ ಪ್ರಚಾರದ ಅಗತ್ಯವಿಲ್ಲ. ಕಾವ್ಯದ ಒಳದನಿಯೇ ಕವಿಗೆ ಪ್ರಚಾರ ಕೊಡಬೇಕು ಮತ್ತು ಕೊಡುತ್ತದೆ. ಆ ನಿಟ್ಟಿನಲ್ಲಿ ಸಾಹಿತ್ಯ ಹಾಗೂ ಕವಿ ಪರಂಪರೆ ಬೆಳೆಯಬೇಕಾಗಿದೆ.
 ಕವಿ ಅಥವಾ ಬರಹಗಾರನಾಗುವ ಮುನ್ನ ಒಂದಿಷ್ಟು ಹಳೆಯದು ಮತ್ತು ಹೊಸ ಓದಿನೊಂದಿಗೆ, ಜೀವನಾನುಭಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಕವಿಯ ಕವಿತ್ವಕ್ಕೆ ಬಲ ಬರುವುದಕ್ಕೆ ಸಾಧ್ಯವಾಗುತ್ತದೆ.

“ಎನಗಿಂತ ಕಿರಿಯವರಿಲ್ಲ”
-ಕಾವ್ಯ ಬೈರಾಗಿ
  (ಶ್ರೀರಾಜ್ ವಕ್ವಾಡಿ) 


Friday, March 20, 2020

ತ್ರಿಕೋನ ಪ್ರೇಮಕಥೆ “ದಿಯಾ”ಗೆ ಪ್ರೇಕ್ಷಕರ ಫುಲ್ ಮಾರ್ಕ್ಸ್..!


ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಸೀನ್ಸ್, ಲವ್ ಹೆಚ್ಚಾದಾಗೆಲ್ಲಾ ಬೇಕಾದಷ್ಟು ಮೆಲೋಡಿ ಸಾಂಗ್ಸ್, ಪ್ರೀತಿಸಿದ ಹುಡುಗಿಗಾಗಿ ಹೊಡೆದಾಟ, ಬಡಿದಾಟಗಳೇ ತುಂಬಿರುವ ಮಾಮೂಲಿ ಲವ್ ಫಿಲ್ಮ್  ಇದಲ್ಲ. ಅವೆಲ್ಲದರ ಮೇರೆ ಮೀರಿದ ಪ್ರೀತಿ, ಬಾಂಧವ್ಯ, ವಾತ್ಸಲ್ಯ, ಸಂಬಂಧಕ್ಕೆ ಹಿಡಿದ ಕೈಗನ್ನಡಿ ‘ದಿಯಾ’.
ವಯೋಸಹಜವಾಗಿ ಕಥಾನಾಯಕಿ ‘ದಿಯಾ’ಗೂ ಇಲ್ಲಿ ಪ್ರೀತಿಯಾಗುತ್ತದೆ. ಕಾಲೇಜು ದಿನದ ಸಹಜ ಪ್ರೀತಿಯದು. ಆಕೆ ಕಾಲೇಜಿನಲ್ಲಿ ಒಬ್ಬ ಹುಡುಗನ್ನು ನೋಡುತ್ತಾಳೆ, ಅವನ ಟ್ಯಾಲೆಂಟ್ ಆಕೆಗೆ ಹತ್ತಿರವಾಗ್ತದೆ, ಅವನ ಮೇಲೆ ಗೊತ್ತಿಲ್ಲದ ಪ್ರೇಮಾಂಕುರ, ಇವೆಲ್ಲವೂ ಸಹಜ ಬಿಡಿ. ವಿಶೇಷ ಮತ್ತು ಅಚ್ಚರಿ ಚಿತ್ರದುದ್ದಕ್ಕೂ ಕಾಣುವುದು ಏನೆಂದರೇ, ಇನ್ನೇನು ಎಲ್ಲವೂ ಸಿಕ್ಕಿಯೇ ಬಿಡ್ತು, ಎಲ್ಲವೂ ಸುಖಾಂತ್ಯ ಎನ್ನುವಷ್ಟರಲ್ಲೇ ತಿರುವು ಪಡೆಯುವ ರೀತಿ ಮತ್ತು ಆ ತಿರುವು ಚಿತ್ರದಲ್ಲಿ ಗೆದ್ದ ಪರಿ. ಬಯಸಿದ ಪ್ರೀತಿ ಕಳೆದುಹೋಗುತ್ತದೆ, ನೋವಿನಲ್ಲಿ ಬೆಂದಿದ್ದ ದಿಯಾಗೆ ಮತ್ತೊಬ್ಬನ ಸ್ನೇಹವಾಗುತ್ತದೆ. ಆ ಸ್ನೇಹ ಅರಿವಿಲ್ಲದೇ ಪ್ರೀತಿಯಾಗಿ ಬದಲಾಗುತ್ತದೆ. ಅಲ್ಲೊಂದು ಆತ್ಮೀಯತೆ, ಸಂಬಂಧ, ವಾತ್ಸಲ್ಯ ಹುಟ್ಟುತ್ತದೆ. ಮತ್ತೆ ತಿರುವು. ಆಮೇಲೆ ಏನೆಂಬುವುದೇ ‘ದಿಯಾ’ದ ಸಸ್ಪೆನ್ಸ್.
ಆ ಪ್ರತಿ ತಿರುವು ದಿಯಾಳಿಗೆ ನಿಡುಸುಯ್ಯುವಿಕೆ. ಆ ತಿರುವನ್ನು ದಾಟುವಲ್ಲಿ ದಿಯಾ ಪಡುವ ಸಂಕಟ, ನೋವು, ಪರದಾಟ, ತೊಳಲಾಟ, ಸಣ್ಣ ಧೈರ್ಯದೊಂದಿಗಿನ ಗೊಂದಲ,  ಎಲ್ಲವೂ ದಿಯಾಳನ್ನು ಬೆಚ್ಚಿಬೀಳಿಸುತ್ತದೆ.


ಚಿತ್ರದಲ್ಲಿ ನಿರ್ದೇಶಕ ಅಶೋಕ್, ಅಲ್ಲಲ್ಲಿ ಇಟ್ಟಿರುವ ಅನಿರೀಕ್ಷಿತ ತಿರುವುಗಳೇ ಪ್ರೇಕ್ಷಕನನ್ನು ಕೊನೆಯೊರಗೂ ಹಿಡಿದಿಟ್ಟಕೊಳ್ಳುವಂತೆ ಮಾಡುತ್ತವೆ. ಈ ನಡುವೆ  ಎರಡೆರಡು ಪ್ರೇಮ ಕಥೆ, ಅಲ್ಲಲ್ಲಿ ಕಾಣಸಿಗುವ ಭಾವನಾತ್ಮಕ ದೃಶ್ಯಗಳು ಹಾಗೂ ಅಮ್ಮ-ಮಗನ ಸೆಂಟಿಮೆಂಟ್ ಅಲ್ಲಲ್ಲಿ ಚಿತ್ರ ನಿಧಾನವಾಗುತ್ತಿದೆ ಎನ್ನುವುದನ್ನು ಪ್ರೇಕ್ಷಕನ ತಲೆಯಿಂದ ಓಡಿಸುವಂತೆ ಮಾಡುತ್ತದೆ. ವಾವ್ಹ್..! ಎನ್ನಿಸುವ ಅಜನೀಶ್ ಅವರ ಹಿನ್ನೆಲೆ ಸಂಗೀತ, ವಿಶಾಲ್ ಮತ್ತು ಸೌರಭ್‌ರ ಸಿನೆಮಾಟೋಗ್ರಾಫಿಗೆ ಮೆಚ್ಚಲೇಬೇಕು.
ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿರುವ ಬೆಚ್ಚಿ ಬೀಳಿಸುವ ದೃಶ್ಯ ಕಂಬನಿ ಜಾರುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕೊನೆಗೆ, ಅಚ್ಚರಿ ಮತ್ತು ಪವಾಡಗಳಿಂದಲೇ ಜೀವನ ಎಂದು ಹೇಳಲ್ಹೊರಟ ಕಥೆ, ಪ್ರೇಕ್ಷಕರ ಮನ ಕದ್ದಿದ್ದಂತೂ ಸತ್ಯ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಖುಷಿ(ದಿಯಾ), ಪ್ರಥ್ವಿ ಅಂಬರ್(ಆದಿ), ದೀಕ್ಷಿತ್ ಶೆಟ್ಟಿ(ರೋಹಿತ್) ಪಾತ್ರಗಳಿಗೆ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಪವಿತ್ರಾ ಲೋಕೇಶ್(ಅಮ್ಮ) ಹಾಗೂ ಅರವಿಂದ್ ರಾವ್ ಪಾತ್ರಕ್ಕೆ ಜೀವ ತುಂಬಿಸಿದ್ದಾರೆ.


‘ದಿಯಾ’ ನೋಡಿದ ಅದೆಷ್ಟು ಮಂದಿ ತಮ್ಮನ್ನು ತಾವು ಆ ಕಥೆಯ ದಿಯಾಳೊಂದಿಗೆ, ರೋಹಿತ್‌ನೊಂದಿಗೆ, ಆದಿಯೊಂದಿಗೆ ಹೋಲಿಸಿಕೊಂಡರೋ ಗೊತ್ತಿಲ್ಲ. ಒಟ್ಟಿನಲ್ಲಿ ಚಿತ್ರ ನೋಡಿದ ಕೆಲವೊಂದಿಷ್ಟು ಹುಡುಗಿಯರು ತಮ್ಮೊಳಗಿನ ಸ್ವಲ್ಪ ದಿಯಾಳ ಸಂಕಟದ ಮಧ್ಯೆ, ಹುಡುಗರು ತಮ್ಮೊಳಗಿನ ಸ್ವಲ್ಪ ಆದಿ, ರೋಹಿತ್‌ರ ಬದುಕಿನ ನಡುವೆ ತಮ್ಮನ್ನು ಗುರುತಿಸಿಕೊಳ್ಳುತ್ತಲೇ, ಕಣ್ಗಳ ಹನಿಗಳನ್ನುದುರಿಸುತ್ತಲೇ ಚಿತ್ರವನ್ನು ಇಷ್ಟಪಟ್ಟರು ಎನ್ನುವುದಕ್ಕೆ ಚಿತ್ರದ ಕುರಿತಾಗಿ ಕೇಳಿಬರುತ್ತಿರುವ ಮಾತುಗಳೇ ಸಾಕ್ಷಿ.
-ಶ್ರೀರಾಜ್ ವಕ್ವಾಡಿ


Thursday, March 19, 2020

"ನಾನು ಬರೆಯುವುದು ಮನುಷ್ಯನ ಬದುಕನ್ನು" – ವೈದೇಹಿ


ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಶೈಲಿಯಲ್ಲಿ ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರೆನ್ನಿಸಿಕೊಂಡವರು ಇವರು. ವೈದೇಹಿ ಎಂಬ ಕಾವ್ಯನಾಮದಿಂದಲೇ ಸಾಹಿತ್ಯಲೋಕದಲ್ಲಿ ಹೆಸರಾದವರು. ಕುಂದಾಪುರ ಮೂಲದ ವೈದೇಹಿಯವರ ಬರಹಗಳು ಸಾಹಿತ್ಯ ವಲಯದಲ್ಲಿ, ಸಾಮಾಜಿಕ ವಲಯದಲ್ಲಿ ಪ್ರಭಾವಿಸಿದ ಪರಿ ವಿಭಿನ್ನ. ಸಾಹಿತ್ಯದ  ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವುದು ಇವರ ಹೆಚ್ಚುಗಾರಿಕೆ. ಕಥೆ, ಕಾವ್ಯ, ಕಾದಂಬರಿ, ಜೀವನ ಕಥನ, ಅನುವಾದ, ಮಕ್ಕಳ ನಾಟಕ, ಪ್ರಬಂಧಗಳು, ಸಂಪಾದಿತ ಕೃತಿ..ಹೀಗೆ ಹತ್ತು ಹಲವು. ವೈದೇಹಿಯವರ ಅನೇಕ ಕಥೆಗಳು ಇಂಗ್ಲೀಷ್, ಮರಾಠಿ, ಗುಜರಾತಿ, ತೆಲುಗು, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಿಗೆ ತರ್ಜುಮೆಗೊಂಡಿವೆ. ಇವರ ಕಥೆಗಳನ್ನಾಧರಿಸಿ 'ಗುಲಾಬಿ ಟಾಕೀಸ್', 'ಅಮ್ಮಚ್ಚಿಯೆಂಬ ನೆನಪು' ಎಂಬ ಎರಡು ಸಿನೆಮಾಗಳು ತೆರೆಕಂಡಿವೆ. ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೊಳಗೊಂಡು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವವೂ ಲಭಿಸಿವೆ ಎನ್ನುವುದು ವಿಶೇಷ. ನಾಡು ಕಂಡ ಅಗ್ರಮಾನ್ಯ ಲೇಖಕಿ ವೈದೇಹಿಯವರ ಅಂತರಾಳ ತೆರೆದಿಡುವ ಪ್ರಯತ್ನ ಈ ಸಂದರ್ಶದಿಂದ ನಿಮಗಾಗಿ..


ವಸಂತಿ ಜಾನಕಿಯಾಗಿ, ಜಾನಕಿ ವೈದೇಹಿಯಾಗಿ ಬದಲಾಗಿದ್ದು ಹೇಗೆ..?
ವಸಂತಿ ಅಮ್ಮನಿಂದ, ಜಾನಕಿ ಅಪ್ಪನಿಂದ, ವೈದೇಹಿಯಾಗಿದ್ದು ಸುಧಾ ಪತ್ರಿಕೆಯವರಿಂದ. ‘ವೈದೇಹಿ’ ನನಗೆ ಇಷ್ಟವಾಯ್ತು. ಹೀಗೆ ಈಗ ವೈದೇಹಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಇರುವೆ.

ನಿಮ್ಮ ಬಹುತೇಕ ಎಲ್ಲಾ ಸಾಹಿತ್ಯ ಕೃತಿಗಳಲ್ಲಿ ಕುಂದಾಪುರ ಕನ್ನಡ ಭಾಷೆಯೊಂದಿಗೆ ಕುಂದಾಪುರದ ಸ್ಥಿತಿಗತಿಯನ್ನೂ ತೋರ್ಪಡಿಸಿದ್ದೀರಿ. ಅಲ್ಲಿಯೇ ನೀವು ವಿಶೇಷವಾಗಿ ಕಾಣುವುದು...
ಹೌದು, ನನ್ನ ಸಾಹಿತ್ಯದಲ್ಲಿ  ನಾನು ಕಂಡ ಬದುಕಿನ ವಿವಿಧ ಮಗ್ಗುಲುಗಳನ್ನು ನಾನು ಬೆಳೆದು ಬಂದ ನೆಲದ ಭಾಷೆಯಲ್ಲಿ (ಗಮನಿಸಿ: ಅದು ಅಗತ್ಯ ಕಂಡಲ್ಲಿ ಮಾತ್ರ) ಹೇಳಲು ಯತ್ನಿಸಿದ್ದೇನೆ. ಭಾಷೆ ಒಂದು ಕೃತಿರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ನಿಜ. ಆದರೆ ಕೇವಲ ಭಾಷೆ ಬಳಸಿದ್ದರಿಂದ ಮಾತ್ರ ಅಲ್ಲ, ಅಲ್ಲಿರುವ ಕಥಾವಸ್ತು ಏನು ಮತ್ತು ಅದು ಆ ಭಾಷೆಯ  ಮೂಲಕ  ಹೇಗೆ ಅಭಿವ್ಯಕ್ತಿಗೊಂಡಿದೆ ಎನ್ನುವುದು ಮುಖ್ಯ.

ಒಬ್ಬ ಬರಹಗಾರ/ಬರಹಗಾರ್ತಿಯರನ್ನು ಸಾಹಿತ್ಯದಲ್ಲಿ ಗುರುತಿಸುವಲ್ಲಿ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತದೆ..?
ಪ್ರಕಾರಗಳು ಒಬ್ಬ ಬರಹಗಾರನ ಬರಹದ ಆಕೃತಿಗಳು. ನನ್ನ ಪ್ರಕಾರ ಎಲ್ಲವೂ ಬರಹವೇ. ಮೂಲತಃ ನಾನೊಬ್ಬ ಕಥೆಗಾರ್ತಿ ಎನುವುದಕ್ಕಿಂತ, ಬರಹಗಾರ್ತಿ. ನಾನು ಬರೆದಿದ್ದರಲ್ಲಿ ಕೆಲವು ಕಥೆಗಳಾಗುತ್ತವೆ, ಕೆಲವು ಪ್ರಬಂಧಗಳಾಗುತ್ತವೆ, ಕಾವ್ಯಗಳಾಗುತ್ತವೆ. ನಾನು ಏನು ಹೇಳಲು ಹೊರಡುವೆನೋ ಅದರ ಆಕೃತಿಯನ್ನು ಅದೇ ನಿರ್ಧರಿಸುತ್ತದೆ ಎಂಬುದು ನನ್ನ ಅನುಭವ.

ನೀವು ಹೆಣ್ಣಿನ ನೋವು, ಸಂಕಟಗಳನ್ನೇ ಹೆಚ್ಚಾಗಿ ನಿಮ್ಮ ಕೃತಿಗಳಲ್ಲಿ ಬರೆದಿದ್ದೀರಿ. ಬರೆದಾದ ಮೇಲೆ ವಾಸ್ತವದಲ್ಲಿ ಇಷ್ಟೆಲ್ಲಾ ಉಂಟಾ ಅಂತ ನಿಮಗೆ ಅನ್ನಿಸಿದ್ದಿದೆಯಾ..?
ಅಯ್ಯೋ... ಅದರ ಎಷ್ಟೋ ಪಟ್ಟು ಹೆಚ್ಚಿಗೆ ಇವೆ. ಹೆಣ್ಣಿನ ಪಾತ್ರದ ಮೂಲಕ ಬದುಕಿನ ಬಗ್ಗೆ ಬರೆದರೆ ಯಾಕೆ ಹೆಣ್ಣಿನ ಬಗ್ಗೆಯೇ ಬರೆಯುತ್ತೀರಿ ಅಂತ ಕೇಳ್ತೀರಿ. ನಗೆ ಬರುತ್ತದೆ.  ಲೇಖಕರು ಬರೆಯುವ ಅದೆಷ್ಟೋ ಕೃತಿಗಳು ಗಂಡಸರ ಬಗ್ಗೆಯೇ ಇವೆ. ಯಾರೂ ಕೂಡ ಗಂಡಸರಿಗೆ ಹೀಗೆ ಪ್ರಶ್ನೆ ಮಾಡುವುದಿಲ್ಲ. ವಾಸ್ತವವಾಗಿ ನಾನು ಬರೆಯುವುದು ಮನುಷ್ಯನ ಬದುಕನ್ನು, ಹೆಣ್ಣಿನ ಬದುಕನ್ನಲ್ಲ. ನಮ್ಮ ಅನುಭವಗಳನ್ನ ನಾವು ಬರೆಯುತ್ತೇವೆ. ನನ್ನ ಬದುಕಿನ ಮುಖ್ಯ ಕೇಂದ್ರದಲ್ಲಿರುವುದು ಮನುಷ್ಯಲೋಕದಲ್ಲೇ ಬೆಸೆದು ಹೋಗಿರುವ ಸ್ತ್ರೀ ಲೋಕ. ನಾನು ಕಂಡಿದ್ದು ಒಟ್ಟು ಬದುಕಿನಲ್ಲಿ ಒಳಗೊಂಡಿರುವ ಸ್ತ್ರೀಯರ ನೋವು ಸಂಕಟವನ್ನು. ನನ್ನ ಅನುಭವಕ್ಕೆ ತೀರಾ ಹೊರತಾದ ಪ್ರಪಂಚವನ್ನು ನಾನು ಹೇಗೆ ಬರೆಯುವುದಕ್ಕೆ ಸಾಧ್ಯ..? ಬರೀ ಕಲ್ಪನೆ ಮಾತ್ರದಿಂದ ಅಲ್ಲ, ವಾಸ್ತವಕ್ಕೆ ಕಲ್ಪನೆ ಸೇರಿಸಿದಾಗ ಅದು ಕಲಾಕೃತಿಯಾಗುತ್ತದೆ. ನಾನು ಬರೆದ, ಕಥೆಗಳು ಇಂದು ನನಗೇ ಗೊತ್ತಿಲ್ಲದ ಹಾಗೆ ದಾಖಲು ಮಾಡುತ್ತಿರುವುದು ನಾನು ಕಂಡ, ಅನುಭವಿಸಿದ ಮತ್ತು ಗ್ರಹಿಸಿದ ಹೆಣ್ಣಿನ ಜೀವನ ಗತಿಯನ್ನು ಅಂತ ಒಮ್ಮೊಮ್ಮೆ ಅನಿಸುತ್ತದೆ.

ಹೆಣ್ಣಿಗೆ ಧ್ವನಿಯಾಗಿ ಬರೆಯುವುದು ನಿಮಗೆ ಸುಲಭವಾಯ್ತಾ..?
ಹೋ! ‘ನಿಮ್ಮ ಸ್ವರದಲ್ಲಿ ಮಾತಾಡುವುದು ನಿಮಗೆ ಸುಲಭವಾಯ್ತಾ?’ ಅಂತ ಕೇಳಿದ ಹಾಗಿದು..! (ನಗೆ) ಎಲ್ಲರಿಗೂ ಅವರವರ ಧ್ವನಿ ಸಹಜ. ಇನ್ನೊಬ್ಬರ ಧ್ವನಿಯಲ್ಲಿ ನಾವು ಹೇಗೆ ಮಾತಾಡಲು ಸಾಧ್ಯ? ಪರಮ ಕಷ್ಟ ಅದು.

ನಿಮ್ಮ ಕಥೆಗಳನ್ನಾಧಾರವಾಗಿಟ್ಟುಕೊಂಡು ‘ಗುಲಾಬಿ ಟಾಕೀಸ್’, ‘ಅಮ್ಮಚ್ಚಿಯೆಂಬ ನೆನಪು’ ಎರಡು ಸಿನೆಮಾಗಳಾಗಿವೆ.. 
ಹ್ಞೂ, ಹೌದು. ನನ್ನ ಕಥೆಗಳನ್ನಿಟ್ಟುಕೊಂಡು ಸಿನೆಮಾ ಭಾಷೆಗೆ ತಕ್ಕಂತೆ ಅದರಲ್ಲಿರುವ ತಾತ್ವಿಕತೆಯನ್ನು ಬದಲಿಸದೆ ನಿರ್ದೇಶಕರುಗಳಾದ ಗಿರೀಶ್ ಕಾಸರವಳ್ಳಿ, ಚಂಪಾ ಶೆಟ್ಟಿಯವರು ಸಿನೆಮಾ ಮಾಡಿದ್ದಾರೆ, ಹಾಗಾಗಿ, ಸಿನೆಮಾಗಳಾಗಿಯೂ ಅವು ಜನರಿಗೆ ಹತ್ತಿರವಾದವು. ನನಗದು ಸಂತೋಷ.

ನೀವು ಅನುವಾದ ಸಾಹಿತ್ಯದಲ್ಲೂ ತೊಡಗಿಸಿಕೊಂಡವರು. ಮೂಲ ಕೃತಿಗೆ ಧಕ್ಕೆಯಾಗದೇ ಕೃತಿಯನ್ನು ಅನುವಾದಿಸುವ ಜವಾಬ್ದಾರಿ ಅನುವಾದಕರಿಗಿರುತ್ತದೆ. ಅನುವಾದಕ/ಅನುವಾದಕಿ ಎಷ್ಟು ಎಚ್ಚರಿಕೆಯ ಸೂಕ್ಷ್ಮ ಮನಸ್ಸಿನಿಂದಿರಬೇಕು..?
ಆ ಇಡೀ ಕೃತಿ ಏನು ಹೇಳುವುದಕ್ಕೆ ಹೊರಟಿದೆ ಎನ್ನುವುದನ್ನು ಅನುವಾದಕರಾದವರು ಮೊದಲು ನೋಡಿಕೊಳ್ಳಬೇಕು. ಆಮೇಲೆ ಅನುವಾದಿಸಬೇಕಾದ ಭಾಷೆಯಲ್ಲಿ ಹೇಗೆ ನಿರೂಪಿಸಲು ಸಾಧ್ಯ ಎನ್ನುವುದು ನೋಡಬೇಕು. ಅದು ಭಾವಾಂತರ ಅಲ್ಲ. ಮೂಲ ಲೇಖಕ/ಲೇಖಕಿ ಹೇಳುವುದನ್ನು ನಾವು ಅನುವಾದ ಮಾಡುತ್ತಿರುವ ಭಾಷೆಯಲ್ಲಿ ಹೇಗೆ ಹೇಳುತ್ತೇವೆ, ಹೇಗೆ ಸಂವಹನಕ್ಕೆ ಧಕ್ಕೆ ಆಗದಂತೆ ಹೇಳಬೇಕು ಎಂಬ ಚಿಂತನೆ ಮುಖ್ಯ. ಒಟ್ಟಿನಲ್ಲಿ ಅನುವಾದ ಮಾಡಬೇಕಾದ ಕೃತಿಯ ಜೀವಧ್ವನಿ ಅನುವಾದ ಮಾಡುವ ಭಾಷೆಯಲ್ಲಿ ಸ್ವಲ್ಪವೂ ಕುಂದದಂತೆ ಸೃಷ್ಟಿಸುವುದು ಅನುವಾದಕನ ಸವಾಲು. 

ಕಾವ್ಯಕ್ಕೆ ಬಹಳ ದೊಡ್ಡ ತಾಕತ್ತಿದೆ. ಒಂದು ವಸ್ತುವನ್ನು ಸಂಕ್ಷಿಪ್ತವಾಗಿ ಕವಿ/ಕವಯತ್ರಿ ಹೇಳಬೇಕಾಗುತ್ತದೆ. ಓದುಗನಿಗೆ ಅರ್ಥವಾಗದೇ ಕಾವ್ಯ ಸೋಲುವುದು ಎಷ್ಟೋ ಸಂದರ್ಭಗಳಲ್ಲಿವೆ... ಕಾವ್ಯ ಹೇಗಿರಬೇಕು..?
ಕಾವ್ಯ ಎಲ್ಲರಿಗೂ ಸುಲಭದಲ್ಲಿ ತಲುಪುವಂತಹ ಮಾಧ್ಯಮವೇ ಅಲ್ಲ. ಕಾವ್ಯವನ್ನು ಓದುವವರಿಗೆ ಸೂಕ್ಷ್ಮ ಮನಸ್ಸೂ ಬೇಕು. ವಿಶೇಷ ಆಸಕ್ತಿಯೂ ಬೇಕು. ಕಾವ್ಯ ಒಂದು ಓದಿಗೆ ಓದುಗರಿಗೆ ತಲುಪುತ್ತದೆ ಎಂಬ ಭರವಸೆಯೂ ಇಲ್ಲ. ಕಾವ್ಯಮಾರ್ಗ ಎಂದರೆ ರೂಪಕದ ಮಾರ್ಗ. ಕವಿ ಕಾವ್ಯದ ಒಂದಲ್ಲ ಒಂದು ಸಾಲಿನಲ್ಲಿ ಓದುಗನಿಗೆ ಪ್ರವೇಶ ಕೊಟ್ಟಿರುತ್ತಾನೆ. ಆತ ಏನು ಹೇಳುವುದಕ್ಕೆ ಹೊರಟಿದ್ದಾನೆ ಎಂದು ಅರಿಯುವ ಶ್ರದ್ಧೆ ಇದ್ದಾಗ ಕವಿತೆಯೊಂದು ತೆರೆದುಕೊಳ್ಳುತ್ತದೆ. ನನಗೇನೋ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಕಾವ್ಯ ಪ್ರಕಾರವೇ ಅಂತಿಮವೆಂದು ಕಾಣುವುದು. ಭಾವ ಮತ್ತು ಭಾಷೆಗಳು ಲಯದಿಂದ ಕೂಡಿ ರೂಪಕದ ಮೂಲಕ ಸೃಷ್ಟಿಯಾದಾಗ ಅದರ ಚೆಲುವು ಬೇರೆಯೇ.

ಸ್ತ್ರೀ ಸಾಹಿತ್ಯ, ಪುರುಷ ಸಾಹಿತ್ಯ ಅಂತ ವಿಭಾಗಗಳಿವೆಯಾ..?
ಇಲ್ಲ. ಸಾಹಿತ್ಯದಲ್ಲಿ ಸ್ತ್ರೀ, ಪುರುಷ ಅಂತ ವಿಭಾಗಗಳಿಲ್ಲ. ಅದೆಲ್ಲ ಅಧ್ಯಯನಕ್ಕಾಗಿ ಮಾಡಿಕೊಂಡ ವಿಭಾಗಗಳು ಅಷ್ಟೆ. ಸ್ತ್ರೀ ಮತ್ತು ಪುರುಷ ಬರೆದ ಸಾಹಿತ್ಯದಲ್ಲಿ ಸ್ತ್ರೀ ವಿಶಿಷ್ಟ ಸಂವೇದನೆ ಮತ್ತು ಪುರುಷ ವಿಶಿಷ್ಟ ಸಂವೇದನೆ ಇರಬಹುದು. ಇರಬೇಕು. ಅದು ಸಹಜ.

ನಿಮ್ಮ ಸಾಹಿತ್ಯ ಕೃತಿಗಳಿಂದ ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಿದೆ ಅಂತ ಅನ್ನಿಸುತ್ತಿದೆಯಾ..?
ಬದಲಾಗಿದೆ ಅಂತ ಹೇಳುವುದಿಲ್ಲ. ಪ್ರಭಾವ ಬೀರಿರಲೂಬಹುದು. ಇದನ್ನೆಲ್ಲ ಖಂಡಿತವಾಗಿ ತೀರ್ಪಿನಂತೆ ಹೇಳಲು ಸಾಧ್ಯವಿಲ್ಲ. ಸಾಹಿತ್ಯ ಕೃತಿಗಳಿಂದ ದೀರ್ಘಕಾಲೀನ ಪರಿಣಾಮ ಸಾಧ್ಯ ಎಂಬ ನಂಬಿಕೆ ಮಾತ್ರ ಇದೆ.

ಇಂದಿಗೂ ‘ಹೆಣ್ಣು’ ಎರಡನೇ ದರ್ಜೆಯವಳು ಅಂತ ಅನ್ನಿಸುತ್ತಿದೆಯಾ..?
ಖಂಡಿತ. ಹಾಗೆ ಅನಿಸುವುದು ನಮಗಲ್ಲ. ಪುರುಷವರ್ಗಕ್ಕೆ. ಇವತ್ತಿಗೂ ಕೆಡುಗಣ್ಣಿನ ಗಂಡಿಗೆ ಒಬ್ಬ ಹೆಣ್ಣೆಂದರೆ ಹೆಣ್ಣೂ ಅಲ್ಲ, ಬರೀ ಅವಳ ಅಂಗಾಂಗ. ಇಂದಿಗೂ ಪ್ರಪಂಚ ಹೆಣ್ಣಿಗೂ ಒಂದು ಜೀವ ಅಂತ ನೋಡಿಲ್ಲ. ಎಲ್ಲೋ ಕೆಲಮಂದಿ ಮಹಿಳೆಯರು ವಿದ್ಯೆ, ಸ್ಥಾನ ಮಾನ ಗಳಿಸಿರಬಹುದು. ಆದರೆ ಇಂದಿಗೂ ಲಕ್ಷ ಲಕ್ಷ ಮಂದಿ ಮಹಿಳೆಯರು ದಿನ ನಿತ್ಯದ ಕಡು ಕಷ್ಟದ ಜೀವನದಲ್ಲಿದ್ದಾರೆ. ಅಲ್ಲಿನ ದೌರ್ಜನ್ಯ, ಹಿಂಸೆ ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೆಂಗಸರೂ ಪ್ರಜೆಗಳೇ ಎಂಬುದನ್ನೇ ಗ್ರಹಿಸದ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರ ನಮ್ಮದು. ಎಲ್ಲವನ್ನೂ ನಿಭಾಯಿಸುವ ಗುಣವಿರುವುದರಿಂದ ಹೆಣ್ಣು ಉಳಿದಿದ್ದಾಳೆ. ಮಾತ್ರವಲ್ಲ ಹೆಣ್ಣಿರುವ ಕಾರಣಕ್ಕೇ ಪ್ರಪಂಚವೂ ಉಳಿದಿದೆ.

ಪ್ರಶಸ್ತಿಗಳು ಒಬ್ಬ ಬರಹಗಾರ/ಬರಹಗಾರ್ತಿಯ ಮುಂದಿನ ಕೃತಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ..?
ಪ್ರಶಸ್ತಿ ಸಾರ್ವಜನಿಕವಾಗಿ ಒಬ್ಬರನ್ನು ಗುರುತಿಸುವ ಗೌರವಿಸುವ ಮಾರ್ಗ, ಅಷ್ಟೆ. ಸಮುದಾಯ ನಮ್ಮ ಕೆಲಸವನ್ನು ಮೆಚ್ಚುಗೆಯನ್ನು ಸೂಸುವ ಕ್ರಮವದು.   ಜವಾಬ್ದಾರಿಯಿಂದಲೇ ಬರೆಯುವ ಬರಹಗಾರರಿಗೆ ಪ್ರಶಸ್ತಿ ಬಂದ ಮೇಲೆಯೇ ಜವಾಬ್ದಾರಿ ಹೆಚ್ಚಾಗಬೇಕೆಂದೇನಿಲ್ಲ. ನಿಜ, ಅದು ಸಂತೋಷ ಕೊಡಬಹುದು, ಆದರೆ ಅದರಲ್ಲಿ ಕೊಚ್ಚಿಹೋಗುವ ಪ್ರಮೇಯವೇ ಇಲ್ಲ.

ಸಾಹಿತ್ಯಕ್ಕೆ ಹೊಸದಾಗಿ ಪ್ರವೇಶ ಮಾಡುವವರಿಗೆ ನಿಮ್ಮ ಕಿವಿಮಾತು..?
ಏನಿಲ್ಲ. ಬರೆಯುವ ಆಸಕ್ತಿಯಿದ್ದಲ್ಲಿ ತುರ್ತಿದ್ದಲ್ಲಿ ಬರೆದು ಬಿಡುತ್ತಾರೆ. ಬರೆಯಬೇಕು. ನಾವು ‘ಹಾಗಲ್ಲ, ಹೀಗೆ’ ಎಂದು, ಕೇಳಿದಲ್ಲಿ ತಿಳಿಹೇಳಬಹುದು, ಅಷ್ಟೇ.
-ಶ್ರೀರಾಜ್ ವಕ್ವಾಡಿ    

Monday, March 16, 2020

Sacrifice



Everything is the direct 
Result of the sacrifice...! 
There is no life
Without sacrifice...! 
When you sacrifice 
'Love' to your own 'Heart',
You will not lose anything...! 
"Sacrifice is also Love to live"
Life is all about sacrifice,
When you sacrifice something 
for something only you can be happy..!
-ಕಾವ್ಯ ಬೈರಾಗಿ
(Shreeraj Vakwady)


Don't expect fame, within a short period of Time. It will not gives you LIFE.
If you want to survive in your field..You must be ready to spread over the soil on your body...!
-ಕಾವ್ಯ ಬೈರಾಗಿ
(Shreeraj Vakwady)





Saturday, March 14, 2020

'ಕೋವಿಡ್-19' ಭೂತ..!


ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಾರಕ ವೈರಸ್ ಕೋವಿಡ್-19. ಬಲಿಯಾದವರ ಸಂಖ್ಯೆ, ಸೋಂಕಿಗೊಳಗಾದವರ ಸಂಖ್ಯೆ ಗಮನಿಸಿದರೆ ಎದೆ ನಡುಗುವುದು ಖಚಿತ. ನಿತ್ಯ ಸಾವಿಗೆ, ಸೋಂಕಿಗೀಡಾಗುತ್ತಿರುವವರ ಸಂಖ್ಯೆ ಮೇಲ್ಮುಖಗೊಳ್ಳುತ್ತಿದೆ. ವಿಶ್ವವ್ಯಾಪಿ ಪಸರಿಸಿದ ಈ ವೈರಸ್ ಕಲ್ಲೆದೆಯನ್ನೂ ಧಂಗಾಗಿಸಿದೆ. ಈಗಿರುವ ವರದಿಯ ಪ್ರಕಾರ ಭಾರತವನ್ನು ಸೇರಿ ಬರೋಬ್ಬರಿ 150ಕ್ಕೂ ಹೆಚ್ಚು ದೇಶಗಳಿಗೆ ಸೋಂಕು ಹರಡಿದೆ. ರಾಜ್ಯದಲ್ಲಿ ಕೋವಿಡ್ ಎಮರ್ಜೆನ್ಸಿಯನ್ನೂ ಹೇರಲಾಯಿತು. ಬರೋಬ್ಬರಿ ಒಂದು ವಾರ ಸಾರ್ವಜನಿಕ ಸಂಪರ್ಕವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಶಾಲಾ ಕಾಲೇಜುಗಳಿಗೆ 15 ದಿನಗಳ ಕಾಲ ರಜೆ ಘೋಷಿಸಲಾಯಿತು. ಮಾತ್ರವಲ್ಲದೇ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇದೇ ಸ್ಥಿತಿ ಕಂಡು ಬಂತು. ಇಡೀ ದೇಶಕ್ಕೆ ದೇಶವೇ ಸ್ತಬ್ಧವಾಯ್ತು. ಇನ್ನು, ಆರ್ಥಿಕ ವಿಚಾರಗಳಿಗಾದ ನಷ್ಟ ಅಷ್ಟಿಷ್ಟಲ್ಲ..!
ಕೊವಿಡ್-19 ಕೇವಲ ಜೀವಹಾನಿ ಮಾಡುತ್ತಿರುವುದು ಮಾತ್ರವಲ್ಲದೇ, ಜಾಗತಿಕ ವಾಣಿಜ್ಯ- ಆರ್ಥಿಕ ಪರಿಸ್ಥಿತಿಯ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಕುಕ್ಕುಟೋದ್ಯಮ, ಆಟೋಮೊಬೈಲ್ ಸೇರಿದಂತೆ ಹಲವಾರು ಉದ್ಯಮಗಳ ಬುಡ ಅಲ್ಲಾಡಿಸಿದೆ. ಇಷ್ಟೆಲ್ಲಾ ಭಿತಿ ಹುಟ್ಟಿಸುತ್ತಿರುವ ಕೋವಿಡ್-19 ವೈರಸ್‌ಗೆ ಮೊನ್ನೆ ಮೊನ್ನೆಯಷ್ಟೇ ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ಚರದ ವೈರಸ್‌ನ್ನು ತೂಗುಹಾಕಲಾಗುತ್ತಿರುವುದು ಮತ್ತಷ್ಟು ಭಯದ ವಾತಾವರಣ ಸೃಷ್ಟಿಸಿದೆ.
ಇನ್ನು, ಕೋವಿಡ್-19ಯಿಂದ ತಪ್ಪಿಸಿಕೊಳ್ಳಲು ಇಡೀ ವಿಶ್ವಕ್ಕೆ ವಿಶ್ವವೇ ಹರಸಾಹಸ ಪಡುತ್ತಿದೆ.  ಎದುರಿಗಿರುವವರೊಂದಿಗೆ ಮಾತನಾಡುವುದಕ್ಕೂ ಜನ ಹಿಂಜರಿಯುತ್ತಿದ್ದಾರೆ ಎನ್ನುವುದು ಕೊವೀಡ್-19 ತಂದಿಟ್ಟ ಭೀತಿ. ಭಾರತದಲ್ಲಿಯೂ ಈಗಾಗಲೇ ಹಲವು ಮಂದಿಗಳಲ್ಲಿ ವೈರಸ್ ಕಂಡುಬಂದಿದ್ದು ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದೆ.  ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯುಎಚ್ಒ) ಕೋವಿಡ್ ವೈರಾಣು ತಡೆಗೆ ಈಗಾಗಲೇ ಎಚ್ಚರಿಕೆ, ಸಲಹೆ ನೀಡಿದೆ.


ವಿಶ್ವವೇ ಡೆಡ್ಲಿ ಕೋವಿಡ್ ವೈರಸ್‌ನಿಂದ ಪಾರಾಗಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಭಾರತದಲ್ಲಿ ಬಹುತೇಕ ಎಲ್ಲಾ ಸಿಮ್‌ಗಳ ಮೊಬೈಲ್ ಕರೆಗಳಲ್ಲಿಯೂ ಕೂಡ ಸ್ವಯಂಚಾಲಿತ ಕಾಲರ್ ಟ್ಯೂನ್ಗಳ ಮೂಲಕ ಕೋವಿಡ್ ಹರಡದಂತೆ ಎಚ್ಚರಿಕೆ ಹೇಳಲಾಗುತ್ತಿದೆ. ನಾನಾ ಬಗೆಯ ಎಚ್ಚರಿಕಾ ಕ್ರಮಗಳನ್ನು ದೇಶದೆಲ್ಲೆಡೆ ಮಾಡಲಾಗುತ್ತಿದೆ. ಈ ನಡುವೆ, ಭಿತಿ ನಿವಾರಣೆಗೆ ಜಗತ್ತಿಗೆ ಭಾರತ ‘ಕರಾಂಜಲಿ’ಯ ಪಾಠ ಕಲಿಸಿಕೊಡುತ್ತಿರುವುದನ್ನು ಇಡೀ ಜಗತ್ತು ಸ್ವೀಕರಿಸಿಕೊಳ್ಳುತ್ತಿದೆ, ಒಪ್ಪಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಭಾರತಕ್ಕೆ ಬಂದಿದ್ದ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತಹ್ಯಾನು ಕೋವಿಡ್-19 ದೂರ ಮಾಡುವುದಕ್ಕೆ ಭಾರತದ ಸಂಸ್ಕೃತಿ ನಮಸ್ಕಾರ ಮಾಡುವುದು ಒಳಿತು ಎಂದಿದ್ದರು. ಈಗ ದೇಶದ ಪ್ರಧಾನಿ ನರೇಂದ್ರ ಮೋದಿಯೂ ಕೂಡ ಕೋವಿಡ್-19 ಬಗ್ಗೆ ದೇಶದ ಜನತೆಗೆ ಎಚ್ಚರಿಕೆ ಹೇಳಿದ್ದಾರೆ.  ಸೋಂಕು ಹರಡದಂತೆ ಹ್ಯಾಂಡ್‌ಶೇಕ್ ಬದಲಾಗಿ ಕರ ಜೋಡಿಸಿ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿರುವುದು ದೇಶದಾದ್ಯಂತ, ಜಗತ್ತಿನಾದ್ಯಂತ ಭೀತಿ ಪಡುತ್ತಿರುವ ಈ ಸಂದರ್ಭದಲ್ಲಿ ತುಂಬು ಭರವಸೆ ಮೂಡಿಸಿದೆ. ಈಗಾಗಲೇ ದೇಶದ ‘ಯೋಗ’ ವಿಶ್ವದ ಮೂಲೆ ಮೂಲೆಗಳಿಗೆ ತಲುಪಿದೆ. ಈಗ ‘ನಮಸ್ಕಾರ’ದ ಸರದಿ. ಜಗತ್ತಿನೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋವಿಡ್-19 ಗೆ ಭಾರತದ ‘ನಮಸ್ಕಾರ’ ಜೀವ ಸಂಜೀವಿನಿಯಾಗುತ್ತಿದೆ ಎನ್ನುವುದು ಅಚ್ಚರಿಯೂ, ಹೆಮ್ಮೆಯೂ ಹೌದು. ಇದೆಲ್ಲದರ ನಡುವೆ ಕ್ಷಣ ಕ್ಷಣಕ್ಕೂ ಮತ್ತಷ್ಟು ಭೀತಿ ಹೆಚ್ಚಿಸುತ್ತಿರುವ ವೈರಸ್ಗೆ ವಿಶ್ವವೇ ತಲ್ಲಣಗೊಂಡಿದ್ದಂತೂ ಸತ್ಯ. ದಿನೇ ದಿನೇ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಕೊವಿಡ್-19ನಿಂದಾಗಿ ಇನ್ನೇನೆಲ್ಲಾ ಆಗಬೇಕೋ, ಮಾನವನ ಬದುಕಿಗೆ ಇನ್ನೆಷ್ಟು ಮಾರಕವಾಗಲಿಕ್ಕಿದೆಯೋ ಗೊತ್ತಿಲ್ಲ..!
-ಶ್ರೀರಾಜ್ ವಕ್ವಾಡಿ 

Sunday, March 8, 2020

ಅಕ್ಷಯ ಶಿಲ್ಪ..!



'ಅವಳು'
ಕಾವ್ಯದೊಲುಮೆಯ 
ಸಾಲುಗಳ ಭರ್ತಿ 
ಸಂತಸಗಳ ಭಾವ,
ಎದೆಯೂರಿನ ಬೆಳಕಿನ 
ಮೇರೆ ಮೀರಿದ
ಹೊನ್ನರೂಪ..!


ಅವಳೆಂದರೇ,
ಬರಿಯ ಬಸಿರಲ್ಲ..!
ಅವಳೆಂದರೇ,
ಬರಿಯ ಉಸಿರಲ್ಲ..!
ಅವಳೆಂದರೇ, 
ದಿವ್ಯಾನುಸಂಚಯ 
ಅವಳೆಂದರೇ, 
ಭವ್ಯಾನುಸಂದಾಯ..! 
ಅವಳೆಂದರೇ 
ಅಕ್ಷಯ ಶಿಲ್ಪ..!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)





Friday, March 6, 2020

ನಾಯಕನ ಪಾತ್ರಕ್ಕೂ ಸೈ, ಪ್ರತಿನಾಯಕನ ಪಾತ್ರಕ್ಕೂ ಜೈ 'ಯಕ್ಷ ತಾರಾ ಶಶಾಂಕ'


ಸರ್ವಾಂಗ ಸುಂದರ ಕಲೆಗೆ ಮತ್ತೊಂದು ಹೆಸರೇ ಯಕ್ಷಗಾನ. ಹುಟ್ಟಿನಿಂದಲೇ ಯಕ್ಷರಂಗದ ಸ್ಪರ್ಶ ಹೊಂದಿದ ಶಶಾಂಕ್ ಪಟೇಲ್,  ಯಕ್ಷಗಾನಕ್ಕೆ ಬಹು ಭರವಸೆಯ ಸ್ವತ್ತು ಎನ್ನುವುದರಲ್ಲಿ ಏನೂ ಅತಿಶಯೋಕ್ತಿಯಿಲ್ಲ. ಬಡಾಬಡಗು ತಿಟ್ಟಿನ ಶಾಸ್ತ್ರೀಯ ಹೆಜ್ಜೆಗಾರಿಕೆ ಮತ್ತು ಸುಂದರ ಅಭಿವ್ಯಕ್ತಿ ಹೊಂದಿರುವ  ಪಟೇಲರಿಗೆ ಕರ್ನಾಟಕ ಬಯಲಾಟ ಅಕಾಡೆಮಿ 'ಉದಯೋನ್ಮುಖ ಯಕ್ಷಗಾನ ಯುವ ಪ್ರತಿಭೆ' ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಒಳಗೊಂಡು 'ಯಕ್ಷ ತಾರಾ ಶಶಾಂಕ' ಎಂಬಿತ್ಯಾದಿ ಸನ್ಮಾನ,  ಗೌರವ ದೊರಕಿರುವುದು ಹೆಮ್ಮೆ. ಯಕ್ಷಗಾನದ ತಿಟ್ಟು ದ್ವಯಗಳಿಗೂ ಮೇರು ಕಲಾವಿದರನ್ನು ಕೊಟ್ಟ ಮಲೆನಾಡು, ಪಟೇಲರ ಹುಟ್ಟೂರಾದರೇ, ಕಾರ್ಯಕ್ಷೇತ್ರ ಉಡುಪಿ. ವೃತ್ತಿಪರ ಆಂಗ್ಲ ಭಾಷಾ ಉಪನ್ಯಾಸಕರಾಗಿ, ಪ್ರವೃತ್ತಿಪರ ಯಕ್ಷಗಾನ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿರುವ ಶಶಾಂಕ್ ಪಟೇಲರ ಕಿರು ಸಂದರ್ಶನ ನಿಮಗಾಗಿ...



ನಿಮ್ಮೊಂದಿಗೆ ಯಕ್ಷಗಾನ ಸೇರಿಕೊಂಡಿದ್ದು ಹೇಗೆ...? ಸ್ಫೂರ್ತಿ ..?
ಬಾಲ್ಯದಿಂದಲೂ ಮನೆಯ ವಾತಾವರಣದಿಂದ ಯಕ್ಷಗಾನ ಉಸಿರಂತೆ ಬೆರೆತಿತು. ನಮ್ಮ ಮನೆಯ 'ಸಾಕೇತ ಕಲಾವಿದರು' ಯಕ್ಷಗಾನ ತಂಡ ನನಗೆ ಸ್ಫೂರ್ತಿ.

ಹಲವು ಮೇಳಗಳ, ಮೇರು ಕಲಾವಿದರ ಸಂಸರ್ಗ ನಿಮಗಿದೆ ...ಅದರ ಅನುಭವ ಹೇಗಿದೆ...?
ಯಕ್ಷಗಾನ ಹೆಜ್ಜೆ ಕಲಿತು ನಾನು ನಮ್ಮ ಸಾಕೇತ ತಂಡದಿಂದ ಹೊರಗೆ ಪಾತ್ರ ವಹಿಸುವುದಕ್ಕೆ ಆರಂಭಿಸಿದ್ದು 2011ರಲ್ಲಿ. ಬೇರೆ ಬೇರೆ  ಮೇಳಗಳ ಅನೇಕ ಹಿರಿ, ಕಿರಿಯ ಕಲಾವಿದರ ಒಡನಾಟದಿಂದ ನಾನು ಕಲಿತದ್ದು ಅನೇಕ.ನನಗೆ ಮಾರ್ಗದರ್ಶನವಿತ್ತ, ಈಯುತ್ತಿರುವ ಎಷ್ಟೋ ಕಲಾವಿದರನ್ನು ಇಂದಿಗೂ, ಎಂದಿಗೂ ಸ್ಮರಿಸುತ್ತೇನೆ.

ನೀವು ಯಕ್ಷಗಾನದಲ್ಲಿ ಬಹುಶಃ ಸ್ತ್ರೀ ವೇಷವನ್ನು ಹೊರತಾಗಿ ಬಹುತೇಕ ಎಲ್ಲಾ ವೇಷಗಳಿಗೆ ಪಾತ್ರರಾದವರು. ಒಬ್ಬ ಕಲಾವಿದ ಎಲ್ಲಾ ರೀತಿಯ ಪಾತ್ರಗಳಿಗೆ ತೊಡಗಿಕೊಳ್ಳುವುದಕ್ಕೆ ಹೇಗೆ ಸಾಧ್ಯ..?
ನಿರ್ವಹಿಸದಿರುವ ಪಾತ್ರಗಳೇ ಹೆಚ್ಚಿದ್ದರೂ ದೇವರ ಕೃಪೆಯಿಂದ ಅನೇಕ ಪಾತ್ರಗಳನ್ನು ನಿರ್ವಹಿಸುವ ಭಾಗ್ಯ ನನ್ನದಾಗಿದೆ. ಪಾತ್ರದಿಂದ ಪಾತ್ರಕ್ಕೆ ಬಹಳ ವ್ಯತ್ಯಾಸ ಇರುತ್ತದೆ.ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವುದು ಒಬ್ಬ ಕಲಾವಿದನಿಗೆ ಸವಾಲಿನ ಕೆಲಸವೇ ಹೌದು. ಸುಧನ್ವಾರ್ಜುನದ ಅರ್ಜುನ, ಸುಧನ್ವ, ಶರಸೇತುವಿನ ಅರ್ಜುನ, ಹನುಮಂತ, ಕಾರ್ತವೀರ್ಯಾರ್ಜುನದ  ರಾವಣ, ಕಾರ್ತವೀರ್ಯ, ಕೃಷ್ಣಾರ್ಜುನದ ಅರ್ಜುನ, ಕೃಷ್ಣ, ಗದಾಯುದ್ಧದ ಭೀಮ, ಕೌರವ ಇತ್ಯಾದಿ. ಹೀಗೆ ಒಂದೇ ಪ್ರಸಂಖದ ನಾಯಕ, ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸಿ ಅದರ ಸವಾಲನ್ನು ಎದುರಿಸಿದ್ದೇನೆ.


ಯಕ್ಷಗಾನದಲ್ಲಿ ಶಾಸ್ತ್ರೀಯತೆಯ ಪ್ರಶ್ನೆ ನಿಮ್ಮನ್ನು ಹೇಗೆ ಕಾಡುತ್ತದೆ...?
ಪಾತ್ರ ಪೋಷಣೆಯಲ್ಲಿ, ಕುಣಿತದಲ್ಲಿ, ಅಭಿನಯದಲ್ಲಿ ಮಾತುಗಾರಿಕೆಯಲ್ಲಿ,ವೇಷಭೂಷಣದಲ್ಲಿ, ರಂಗಚಲನೆಯಲ್ಲಿ ಶಾಸ್ತ್ರೀಯತೆ ಬಹಳ ಮುಖ್ಯ. ರಂಗದಲ್ಲಿ ನನಗೆ ಸಾಧ್ಯವಾದಷ್ಟು ಪಾತ್ರದ ಚೌಕಟ್ಟಿನಲ್ಲೇ ವ್ಯವಹರಿಸುತ್ತೇನೆ. ಅದು ಎಲ್ಲೋ ಒಮ್ಮೊಮ್ಮೆ ತಪ್ಪಿದಾಗ ತಪ್ಪು ಎನಿಸುತ್ತದೆ.

ಹಿಮ್ಮೆಳದೊಂದಿಗೆ ಮುಮ್ಮೇಳಕ್ಕೆ ಸಾಮರಸ್ಯ ಎಷ್ಟು ಮುಖ್ಯ..?
ಹಿಮ್ಮೇಳ ಮುಮ್ಮೇಳಕ್ಕೆ ಸಾಮರಸ್ಯ ಇದ್ದರೆ ಮಾತ್ರ ಅದು ಚಂದ ಆಗುತ್ತದೆ. ಇಲ್ಲದಿದ್ದರೆ ಅಭಾಸ ಎನಿಸುತ್ತದೆ.

ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುವಾಗ ಸವಾಲುಗಳೇನು...?
ಮೇಳಗಳಲ್ಲಿ ನಿತ್ಯ ಅವರದೇ ಆದ ಸೆಟ್ಟಿಂಗ್ ಇರುತ್ತದೆ.(ಪೌರಾಣಿಕ ಆಖ್ಯಾನಗಳಿಗೂ). ಅದಕ್ಕೆ ಅತಿಥಿ ಎನಿಸಿಕೊಂಡು ಒಂದೊಂದು ದಿನ ಹೋಗಿ ವೇಷ ಮಾಡುವುದು ದೊಡ್ಡ ಸವಾಲು.

ಕಲಾವಿದ ನೋಡುಗರ ನಿರೀಕ್ಷೆಗಳಿಗೆ ಎದುರಾಗುವುದಕ್ಕೆ ಹೇಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು..?
ಯಾವುದೋ ಒಂದು ನಿರೀಕ್ಷೆ ಇರಿಸಿ ನಮ್ಮನ್ನು ವೇಷಕ್ಕೆ ಕರೆಸಿಕೊಂಡಾಗ, ಏಕಾಏಕಿ ಯಾವ ತಯಾರಿಯೂ ಇಲ್ಲದೇ ಹೋಗಿ ವೇಷ ಮಾಡುವುದು ಒಂದುರೀತಿಯ ಉದ್ಧಟತನವೇ. ಹಾಗಾಗಿ ಯಾವುದೇ ಪಾತ್ರ ನಿರ್ವಹಿಸುವಾಗ ಪೂರ್ವತಯಾರಿ ಅತಿ ಮುಖ್ಯ.

 ಹಲವಾರು ಸಂಘ, ಸಂಸ್ಥೆಗಳು ನಿಮ್ಮನ್ನು ಗುರುತಿಸಿ ಗೌರವಿಸಿದೆ ಆ ಬಗ್ಗೆ ಹೇಳುವುದಾದರೆ...
ಗೌರವ ಎನ್ನುವುದಕ್ಕಿಂತ,ಕಲಾವಿದನಾಗಿ ಗುರುರುತಿಸಲ್ಪಟ್ಟಿದ್ದೇನೆ,ಅದರಿಂದ ನನ್ನ ಗೌರವ ಇಮ್ಮಡಿಯಾಗಿದೆ. ಹಾಗಂತ ಏನೂ ಕೃಷಿ ಇಲ್ಲದೇ ಯಕ್ಷಗಾನಕ್ಕೆ ಬಂದವನಲ್ಲ ನಾನು ಎನ್ನುವ ವಿಶ್ವಾಸ ನನ್ನಲ್ಲಿದೆ.

ವೃತ್ತಿಯಲ್ಲಿ ನೀವು ಆಂಗ್ಲ ಭಾಷೆಯ ಉಪನ್ಯಾಸಕರು. ಪ್ರವೃತ್ತಿಯಲ್ಲಿ ಕಲಾವಿದರು. ವೃತ್ತಿ, ಪ್ರವೃತ್ತಿಗಳ ಸವಾಲುಗಳನ್ನು ಹೇಗೆ ನಿಭಾಯಿಸುತ್ತೀರಿ..?
ಅದು ಒಂದು ರೀತಿ ನನ್ನ ರುಟೀನ್ ಆಗಿಬಿಟ್ಟಿದೆ.ಅದರಿಂದ ತೊಂದರೆ ಮಾಡಿಕೊಳ್ಳದಿರುವುದೇ ನನ್ನ ಪ್ರಯತ್ನ.ವೃತ್ತಿ ಪ್ರವೃತ್ತಿ ಎರಡೂ ಕೂಡ ನನ್ನ ಜೀವನದಲ್ಲಿ ಪ್ರಮುಖವಾದದ್ದು. ಹಾಗಾಗಿ ಎರಡನ್ನೂ ಬಹಳ ಪ್ರೀತಿಸುತ್ತೇನೆ. ಮತ್ತೆ, ವೃತ್ತಿಯಿಂದ ಪ್ರವೃತ್ತಿಗೆ, ಪ್ರವೃತ್ತಿಯಿಂದ ವೃತ್ತಿಗೆ ಒಂದಕ್ಕೊಂದು ಬಹಳ ಸಹಕಾರಿ ನನ್ನ ಪಾಲಿಗೆ.

ಒಟ್ಟಾರೆಯಾಗಿ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯ..?
ಇಂದು ಮನೆಮನೆಗಳಲ್ಲೂ ಯಕ್ಷಗಾನದ ಕಂಪು ಪಸರಿಸಿದೆ. ಇದು ಯಕ್ಷಗಾನದ ದೃಷ್ಟಿಯಿಂದ ಸಂತೋಷದ ಬೆಳವಣಿಗೆ.ಆದರೆ ಪ್ರತಿಯೊಬ್ಬ ಕಲಾವಿದನಾಗಲು ಬಯಸುವವ ಅದರ ಮೂಲಭೂತ ಕಲಿಕೆಗಳನ್ನ(basic essence) ಇಟ್ಟುಕೊಂಡು ಅಭ್ಯಸಿಸಿದರೆ ಅದು ಯಕ್ಷಗಾನಕ್ಕೂ, ಸಮಾಜಕ್ಕೂ ಹಾಗೂ ಮುಂದಿನ ಪೀಳಿಗೆಯವರಿಗೂ ಆರೋಗ್ಯಕರವಾಗಿರುತ್ತದೆ. ಹಾಗೇ ಯಕ್ಷಗಾನ ಕಲೆ ದೇಶವ್ಯಾಪಿಯಾಗಬೇಕು ಎಂಬುದು ನನ್ನ ಆಶಯ.
- ಶ್ರೀರಾಜ್ ವಕ್ವಾಡಿ

    

Thursday, March 5, 2020

‘ನೇಣು’ ಇನ್ನೂ ತಯಾರಾಗಿಲ್ಲ..!


ಗಲ್ಲು ಶಿಕ್ಷೆ ಜಾರಿಗೊಳಿಸಲು ಇಷ್ಟೊಂದು ವಿಳಂಬ ಮಾಡುತ್ತಿರುವುದಾದರೂ ಯಾಕೆ..? ರೇಪಿಸ್ಟ್ ಗಳ ಪರವಾಗಿಯೇ ಕೋರ್ಟ್ ನಿಲ್ಲುತ್ತಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲೂ ಹುಟ್ಟುತ್ತಿವೆ ಅಂತಾದರೇ, ಅದಕ್ಕೆ ಆಶ್ಚರ್ಯವೇನಿಲ್ಲ..!. ೨೦೧೨ರ ಡಿಸೆಂಬರ್ ೨೬ರಂದು ನಡೆದ ಅಮಾನುಷ ‘ನಿರ್ಭಯಾ’ ಪ್ರಕರಣವನ್ನು ಮತ್ತೆ ವಿವರಿಸುವ ಅಗತ್ಯವಿಲ್ಲ. ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದ ಘಟನೆಯದು. ಘಟನೆ ನಡೆದು ಬರೋಬ್ಬರಿ ೮ ವರ್ಷಗಳು ಕಳೆದು ಹೋದರೂ ತಪ್ಪಿತಸ್ಥರಿಗೆ ಇನ್ನೂ ಗಲ್ಲು ಶಿಕ್ಷೆ ನೀಡುವುದಕ್ಕೆ ಕೋರ್ಟ್ ಹಿಂದೇಟು ಹಾಕುವುದರ ಮೂಲಕ ಕ್ರಿಮಿನಲ್‌ಗಳ ಪರವಾಗಿ ನಿಲ್ಲುತ್ತಿದೆ ಎಂಬಂತೆ ಕಾಣುತ್ತಿದೆ. ದೆಹಲಿಯ ನಿರ್ಭಯಾ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಕೀಚಕರ ಮರಣ ದಂಡನೆ ಮೂರನೇ ಭಾರಿ ಮುಂದಕ್ಕೆ ದೂಡಲಾಗಿದೆ. ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ ೬ ಗಂಟೆಗೆ ನೇಣಿಗೆ ಕೊರಳೊಡ್ಡಬೇಕಿದ್ದ ನಾಲ್ವರ ಪೈಕಿಯಲ್ಲೊಬ್ಬ ಪವನ್ ಗುಪ್ತ, ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಸೋಮವಾರ ವಜಾ ಗೊಳಿಸಿತು, ಇದರ ಹಿಂದಿಗೆ ಆತ ರಾಷ್ಟ್ರಪತಿಗೆ ಕ್ಷಮದಾನ ಪತ್ರ ಸಲ್ಲಿಸಿದ ಕಾರಣವಾಗಿ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗಲ್ಲುಶಿಕ್ಷೆಯನ್ನು ಮುಂದಿನ ಆದೇಶದವರೆಗೆ ಮತ್ತೆ ಮುಂದೂಡಿದೆ.
ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದಕ್ಕೆ ಇಷ್ಟೊಂದು ಹಿಂದಡಿಯಿಡುತ್ತಿರುವುದು ಕಾನೂನಿನ ಅದ್ಯಾವ ಸಾಫ್ಟ್ ಕಾರ್ನರ್  ಧೋರಣೆಯೋ ಗೊತ್ತಿಲ್ಲ. ನಾಯಿ, ನರಿಗಳಿಗೆ ಹಾಕಬೇಕಾದ ಕೀಚಕರ ಅಂಗಾಗಳನ್ನು.. ಅಲ್ಲೊಬ್ಬ, ಮೈಕಲ್ ಎಫ್. ಸಲ್ಡಾನ್ಹಾ ಎನ್ನುವ ನಿವೃತ್ತ ನ್ಯಾಯಮೂರ್ತಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ‘ಗಲ್ಲು ಶಿಕ್ಷೆಯಾದರೇ’ ಅವರ ದೇಹಗಳ ಅಂಗಾಂಗವನ್ನು ದಾನ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುತ್ತಾನೆ.. ಎಂತಾದರೆ ಅಪಹಾಸ್ಯ ಅಲ್ಲದೇ ಮತ್ತೇನು..?
ಕಳೆದ ನವೆಂಬರ್ ೨೭ರಂದು ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರನ್ನು ಅತ್ಯಾಚಾರಕ್ಕೊಳಗಾದ ಯುವತಿಯ ಮೃತದೇಹ ಪತ್ತೆಯಾದ ಸ್ಥಳಕ್ಕೆ ತನಿಖೆಗೆ ಕೊಂಡೊಯ್ದಾಗ, ನಾಲ್ವರೂ ಕೂಡ ಪೋಲಿಸರ ವಿರುದ್ಧ ದಾಳಿ ನಡೆಸಿ, ಪರಾರಿಯಾಗಲು ಮುಂದಾದರು ಎಂಬ ಕಾರಣಕ್ಕೆ ವಿಶ್ವನಾಥ್ ಸಜ್ಜನರ್ ಮತ್ತವರ ಪೋಲಿಸ್ ತಂಡ ಎನ್‌ಕೌಂಟರ್ ನಡೆಸಿದ್ದನ್ನು ಇಡೀ ದೇಶಕ್ಕೆ ದೇಶವೇ ಹರ್ಷ ವ್ಯಕ್ತಪಡಿಸಿತು. ಅದಾದ ಬಳಿಕ, ಎಷ್ಟೋ ಸೋ ಕಾಲ್ಡ್ ಚಿಂತಕರು ಬೊಬ್ಬೆ ಹಾಕಿ ವಿರೋಧಿಸಿದರು. ಪರ, ವಿರೋಧ ಚರ್ಚೆಗಳಾದವು. ಮತ್ತೆ ನಿರ್ಭಯಾ ಪ್ರಕರಣ ಇದರೊಂದಿಗೆ ತೂಗು ಹಾಕಿಕೊಂಡಿತು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯನ್ನು ಕೊನೆಗೂ ಘೋಷಿಸಲಾಯ್ತು, ಕೋರ್ಟ್ ಗಲ್ಲಿಗೆ ದಿನಾಂಕ ನಿಗಧಿ ಮಾಡಿತಾದರೂ, ಮುಂದೂಡುವಿಕೆಯಲ್ಲೇ ಕಾಲ ಕಳೆಯಿತು. ಹೈದರಾಬಾದ್‌ನ ದಿಶಾ(ಹೆಸರು ಬದಲಾಯಿಸಲಾಗಿದೆ) ಅತ್ಯಾಚಾರ ಪ್ರಕರಣದ ತಪ್ಪಿತಸ್ಥರನ್ನು ಎನ್‌ಕೌಂಟರ್ ಮಾಡಿದಾಗ ತಪ್ಪು ಎಂದು ಬೊಬ್ಬೆಹಾಕಿದವರು, ಇಂದು ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ನಿಗಧಿಸಿದ ಗಲ್ಲು ಶಿಕ್ಷೆಯನ್ನು ಪದೇ ಪದೇ ಮುಂದೂಡುತ್ತಿರುವಾಗ ಎಲ್ಲಿ ಕಾಣೆಯಾಗಿದ್ದಾರೆ..? ಅತ್ಯಂತ ಅಮಾನವೀಯವಾಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಅಪರಾಧಿಗಳಿಗೆ ಗಲ್ಲಿಗೇರಿಸಲು ಇಷ್ಟೊಂದು ವಿಳಂಬವೇಕೆ..? ನೇಣಿಗೆ ಹಗ್ಗ ತಯಾರಿಸುತ್ತಿದ್ದಾರಾ..? ಆಕ್ರೋಶಭರಿತ ಪ್ರಶ್ನೆಗಳು ಮುಗಿದ ಮೇಲೆ ಉಳಿದ ಪ್ರಶ್ನೆ... ಗಲ್ಲು ಶಿಕ್ಷೆ ವಿಧಿಸಿದ ಮೇಲೆ ಅಪರಾಧಿಗಳಿಂದ ಕ್ಷಮಾದಾನ ಪತ್ರ ಸ್ವೀಕರಿಸುವುದು ಯಾವ ಸೀಮೆಯ ದೊಣ್ಣೆ ನಾಯಕನ ಕಾನೂನು..? 
-ಶ್ರೀರಾಜ್ ವಕ್ವಾಡಿ

Wednesday, March 4, 2020

‘ಸಿಎಎ’ ಆರದ ಬೆಂಕಿ..!



ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರುದ್ಧ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ಆರಂಭದಿಂದಲೇ ಪೌರತ್ವ ಮಸೂದೆಯ ಕಾಯ್ದೆ ಜಾರಿ ವಿರೋಧಿಸಿ ರಾಷ್ಟ್ರಾದ್ಯಂತ ಕಿಚ್ಚು ಜೋರಾಗಿಯೇ ಇತ್ತು. ಸಾವು ನೋವಿಗೂ ಜನ ಹಿಂದಡಿಯಿಡಲಿಲ್ಲ. ರಾಷ್ಟ್ರದೆಲ್ಲೆಡೆ ಪರಿಸ್ಥಿತಿ ತೀರಾ ಹದಗೆಟ್ಟಿತ್ತು, ನಿಷೆದಾಜ್ಞೆಯನ್ನೂ ಉಲ್ಲಂಘಿಸಿಯೂ ದೇಶದೆಲ್ಲೆಡೆ ಹೋರಾಟಗಾರರು ಪ್ರತಿಭಟಿಸಿದರು. ರಾಜ್ಯದಲ್ಲಂತೂ ನಿಷೇಧಾಜ್ಞೆಯನ್ನು ಹೈಕೋರ್ಟ್ ಕಾನೂನು ಬಾಹಿರ ಎಂದು ಹೇಳುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯಿತು ಎಂದರೆ ತಪ್ಪಿಲ್ಲ.
ರಾಷ್ಟ್ರದ ರಾಜಧಾನಿ ದೆಹಲಿ, ಪೌರತ್ವ ಮಸೂದೆ ಕಾಯ್ದೆಯ ಬೆಂಕಿಯಲ್ಲಿಯೇ ಇಂದಿಗೂ ಉರಿಯುತ್ತಿದೆ. ಜೆಎನ್‌ಯು, ಜಾಮಿಯಾ, ಶಾಹಿನ್ ಬಾಗ್‌ಗಳಲ್ಲಿ ನಡೆದ ಪ್ರತಿಭಟನೆ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿ, ಮಹತ್ತರ ಹೋರಾಟಕ್ಕೆ ಪ್ರೈಮ್ ಎಕ್ಸಾಂಪಲ್ ಆಗಿದ್ದು ಸುಳ್ಳಲ್ಲ. ಸರ್ಕಾರ ಧರ್ಮವನ್ನು ಈ ಮಸೂದೆಗೆ ತೂಗುಹಾಕಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಹಾಗಾಗಿಯೇ, ದೇಶದೆಲ್ಲೆಡೆ ಧರ್ಮ, ಜಾತಿಗಳನ್ನು ಲೆಕ್ಕಿಸದೆ ಸಾರ್ವಜನಿಕ ಸ್ವಾತಂತ್ರ್ಯಕ್ಕಾಗಿ ಒಂದಾಗಿ ಹೋರಾಟಕ್ಕಿಳಿದದ್ದು ಬಲು ಅಚ್ಚರಿಯೇ ಸರಿ. ರಾಮ್‌ಭಕ್ತ ಗೋಪಾಲ್, ಅಮೂಲ್ಯ ಲಿಯೋನಾ, ಆರ್ದ್ರಾ ಒಳಗೊಂಡು ಮೊನ್ನೆ ಮೊನ್ನೆಯಷ್ಟೇ ದೆಹಲಿಯ ಜಾಫ್ರಾಬಾದ್‌ನ ಹಾಗೂ ಮೌಜ್‌ಪುರಗಳಲ್ಲಿ ಪೌರತ್ವ ಮಸೂದೆ ಕಾಯ್ದೆ ಜಾರಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ನಡುವೆ ದೇಶಿ ನಿರ್ಮಿತ ಪಿಸ್ತೂಲಿನಿಂದ ಗಾಳಿಯಲ್ಲಿ ಎಂಟು ಗುಂಡು ಹಾರಿಸಿ, ಪೋಲಿಸ್ ಪೇದೆಗೆ ಪಿಸ್ತೂಲ್ ತೋರಿಸಿ ಹೆದರಿಸಿದ್ದ ಸಿಎಎ ಬೆಂಬಲಿಗ ಶಾರೂಕ್ ಪ್ರತಿಭಟನೆಯ ತಿರುವನ್ನೇ ಬದಲಾಯಿಸಿ ದೇಶದುದ್ದಕ್ಕೂ ಚರ್ಚೆಗೆ ಕಾರಣರಾದರು.
ದೆಹಲಿಯಲ್ಲಿಯಂತೂ ಈಗ ಹೋರಾಟ ಸಂಪೂರ್ಣವಾಗಿ ಹಿಂಸಾಚಾರಕ್ಕೆ ತಿರುಗಿಬಿಟ್ಟಿತು. ಅದೆಷ್ಟೋ ಮಂದಿ ಗಾಯಾಳುಗಳಾದರು, ಪೋಲಿಸ್ ಪೇದೆಯೋರ್ವರನ್ನು ಸೇರಿ ಹಲವರು ಸಾವು, ನೋವುಗಳನನ್ನು ಕಂಡರು. ಅದೆಷ್ಟೋ ವಾಹನಗಳು, ಮನೆಗಳು ಬೆಂಕಿಗಾಹುತಿಯಾದವು.
ಬಹಳ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೇ, ಯಾರು ಸಿಎಎ ಬೆಂಬಲಿಸಿಕೊಂಡು ಹೋರಾಟಕ್ಕೆ ಇಳಿದಿದ್ದರೋ, ಅವರೆಲ್ಲರ ಕೈಯಲ್ಲಿಯೂ ಮಾರಕಾಸ್ತ್ರಗಳಿದ್ದದ್ದು. ಮಾತ್ರವಲ್ಲದೇ, ಬರ್ಬರ ಹತ್ಯೆ ಕೂಡ ಮಾಡಿದ್ದೂ ಸಾಕ್ಷಿಗಳಿವೆ. ಸಾಮಾಜಿಕ ವಲಯದಲ್ಲಿ ಇದು ವ್ಯವಸ್ಥಿತ ಸಂಚು ಎಂದು ಕೂಡ ಕೇಳಿಬಂದದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು.
ದೇಶದಲ್ಲಿ ಎಲ್ಲೆಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಈವರೆಗೆ ನಡೆದಿದೆಯೋ, ಅಲ್ಲೆಲ್ಲಾ ಕಡೆಗಳಲ್ಲಿಯೂ ಧರ್ಮ ದಳ್ಳುರಿ, ಕೋಮು ಗಲಭೆಯನ್ನಾಗಿ ದೇಶದ ಎಲ್ಲಾ ದೃಶ್ಯ ಮಾದ್ಯಮಗಳು, ಪತ್ರಕಾ ಮಾದ್ಯಮಗಳು ಪ್ರತಿಬಿಂಬಿಸಿದ್ದು ದುರಂತವೇ ಸರಿ.
ಒಟ್ಟಿನಲ್ಲಿ, ಇನ್ನಾದರೂ ಸಾರ್ವಜನಿಕರ ಹಿತಾಸಕ್ತಿ ಗಮನಿಸಿ, ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಸರ್ವಸ್ವತಂತ್ರ ಎಂದುಕೊಳ್ಳದೇ, ಸಂವಿಧಾನವನ್ನು ಮೀರದೇ ದೇಶಕ್ಕಾಗಿ, ದೇಶದ ಪ್ರಗತಿಗಾಗಿ ಸರ್ವರೂ ಮುಂದಾಗಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದಲ್ಲಿ, ದೇಶದಲ್ಲಿ ಸಿಎಎ ಕಾರಣದಿಂದಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆದರೂ ಆಶ್ಚರ್ಯವೇನಿಲ್ಲ.   
-ಶ್ರೀರಾಜ್ ವಕ್ವಾಡಿ