Wednesday, August 19, 2026

ಮಾನ್ಯ ವಿಪಕ್ಷದವರೇ… ಅಧಿವೇಶನ ಗಲಾಟೆಯ ವೇದಿಕೆಯೇ?

ವಿಧಾನಮಂಡಲದ ಅಧಿವೇಶನವೆಂದರೆ ಸರ್ಕಾರ ಮತ್ತು ಪ್ರತಿಪಕ್ಷಗಳು ಮುಖಾಮುಖಿಯಾಗುವ ರಾಜಕೀಯ ಅಖಾಡ ಮಾತ್ರವಲ್ಲ. ಅದು ರಾಜ್ಯದ ಕೋಟ್ಯಂತರ ಜನರ ಸಮಸ್ಯೆಗಳು, ನಿರೀಕ್ಷೆಗಳು ಮತ್ತು ಪ್ರಶ್ನೆಗಳು ಚರ್ಚೆಯಾಗಬೇಕಾದ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ವೇದಿಕೆ. ಆದರೆ ಅಧಿವೇಶನ ಆರಂಭವಾದಾಗಲೆಲ್ಲ ಸದನದ ಒಳಗೆ ಘೋಷಣೆ, ಪ್ರತಿಭಟನೆ, ಧರಣಿ, ಸಭಾತ್ಯಾಗ ಮತ್ತು ಗದ್ದಲವೇ ಪ್ರಧಾನವಾಗುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಪ್ರತಿಪಕ್ಷಕ್ಕೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಇದೆ. ಸರ್ಕಾರದ ತಪ್ಪುಗಳನ್ನು ಬಯಲಿಗೆಳೆಯಬೇಕು. ಭ್ರಷ್ಟಾಚಾರ, ಆಡಳಿತ ವೈಫಲ್ಯ, ಜನವಿರೋಧಿ ನಿರ್ಧಾರಗಳ ಬಗ್ಗೆ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡಬೇಕು. ಆದರೆ ಅದಕ್ಕಾಗಿ ಸದನವೇ ನಡೆಯದಂತೆ ಮಾಡುವುದು ಪ್ರಜಾಪ್ರಭುತ್ವದ ಹೋರಾಟದ ಮಾರ್ಗವೇ ಎಂಬ ಪ್ರಶ್ನೆಯನ್ನು ಕೇಳಲೇಬೇಕಾಗುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸುವುದು ಪ್ರತಿಪಕ್ಷದ ರಾಜಕೀಯ ಹಕ್ಕು. ಪ್ರಕರಣದ ಬಗ್ಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಕೇಳುವುದು, ತನಿಖೆಯ ಪ್ರಗತಿ ಕುರಿತು ಪ್ರಶ್ನಿಸುವುದು, ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಒತ್ತಾಯಿಸುವುದು—ಇವೆಲ್ಲವೂ ವಿಧಾನಮಂಡಲದ ಆರೋಗ್ಯಕರ ಕಾರ್ಯವಿಧಾನದ ಭಾಗ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಇಡೀ ಅಧಿವೇಶನವನ್ನು ಹಾಳು ಮಾಡಬಾರದು. ಒಂದು ಹಗರಣದ ಕುರಿತು ಸರ್ಕಾರವನ್ನು ಪ್ರಶ್ನಿಸುವುದು ಒಂದು ವಿಷಯ; ಹಗರಣದ ಹೆಸರಿನಲ್ಲಿ ಜನರ ಇತರ ಎಲ್ಲ ಸಮಸ್ಯೆಗಳ ಚರ್ಚೆಯನ್ನೇ ಸ್ಥಗಿತಗೊಳಿಸುವುದು ಮತ್ತೊಂದು ವಿಷಯ. ರೈತರ ಸಮಸ್ಯೆಗಳೇನು? ನಿರುದ್ಯೋಗದ ಪ್ರಶ್ನೆಯೇನು? ಬೆಲೆ ಏರಿಕೆ, ನೀರಾವರಿ, ಬರ, ಶಿಕ್ಷಣ, ಆರೋಗ್ಯ, ನಗರ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ—ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಕೇಳಬೇಕಾದ ವೇದಿಕೆ ವಿಧಾನಮಂಡಲ. ಇವುಗಳ ಕುರಿತು ಅಂಕಿ-ಅಂಶಗಳೊಂದಿಗೆ ಸರ್ಕಾರವನ್ನು ಕಟ್ಟಿ ಹಾಕಬೇಕಾದ ಪ್ರತಿಪಕ್ಷ, ಸದನದಲ್ಲೇ ರಾಜಕೀಯ ಘೋಷಣೆಗಳೊಂದಿಗೆ ನಿಲ್ಲುವುದಾದರೆ ಅಂತಿಮವಾಗಿ ನಷ್ಟವಾಗುವುದು ಯಾರಿಗೆ? ಸರ್ಕಾರಕ್ಕೆ ಅಲ್ಲ. ಜನರಿಗೆ.

ಪ್ರತಿಪಕ್ಷದ ಶಕ್ತಿ ಅದರ ಸಂಖ್ಯೆಯಲ್ಲಿ ಮಾತ್ರ ಇರುವುದಿಲ್ಲ; ಅದರ ಪ್ರಶ್ನೆಗಳ ಗುಣಮಟ್ಟದಲ್ಲಿರುತ್ತದೆ. ಸರ್ಕಾರದ ಬಜೆಟ್‌ನ ಅಂಕಿ-ಅಂಶಗಳಲ್ಲಿ ದೋಷ ಹುಡುಕುವುದು, ಇಲಾಖೆಗಳ ವೆಚ್ಚದ ವೈರುಧ್ಯಗಳನ್ನು ಬಯಲಿಗೆಳೆಯುವುದು, ಯೋಜನೆಗಳ ಅನುಷ್ಠಾನದ ವೈಫಲ್ಯವನ್ನು ದಾಖಲೆಗಳೊಂದಿಗೆ ತೋರಿಸುವುದು, ಅಧಿಕಾರಿಗಳ ಜವಾಬ್ದಾರಿಯನ್ನು ಪ್ರಶ್ನಿಸುವುದು—ಇವೆಲ್ಲವೂ ಸರ್ಕಾರವನ್ನು ರಾಜಕೀಯವಾಗಿ ಹೆಚ್ಚು ಒತ್ತಡಕ್ಕೆ ಸಿಲುಕಿಸುವ ಪರಿಣಾಮಕಾರಿ ಮಾರ್ಗಗಳು. ಆದರೆ ಘೋಷಣೆ ಕೂಗಿ ಸದನ ನಡೆಯದಂತೆ ಮಾಡುವುದು ಸುಲಭದ ರಾಜಕಾರಣ. ನೋಡಿ, ಗಲಾಟೆ ಮಾಡುವುದಕ್ಕೆ ಗದ್ದಲ ಸೃಷ್ಟಿಸುವುದಕ್ಕೆ, ನೀನು-ತಾನು ಎಂದು ಮಾತಾಡುವುದಕ್ಕೆ ಅಂಕಿ-ಅಂಶಗಳ ಅಗತ್ಯವಿಲ್ಲ. ಆರೋಪಕ್ಕೆ ದಾಖಲೆಗಳ ಅಗತ್ಯವಿಲ್ಲ. ಆದರೆ ಸರ್ಕಾರವನ್ನು ನಿಜವಾಗಿ ಉತ್ತರದಾಯಿಯನ್ನಾಗಿ ಮಾಡಲು ದಾಖಲೆ ಬೇಕು, ಅಧ್ಯಯನ ಬೇಕು, ತಾಳ್ಮೆ ಬೇಕು ಮತ್ತು ಮುಖ್ಯವಾಗಿ ಸದನದಲ್ಲಿ ಮಾತನಾಡುವ ಅವಕಾಶವನ್ನು ಬಳಸಿಕೊಳ್ಳುವ ರಾಜಕೀಯ ಪ್ರಬುದ್ಧತೆ ಬೇಕು.

ಅಂತಹ ಅಧ್ಯಯನ, ತಾಳ್ಮೆ, ಪ್ರಭುದ್ಧತೆ ನಮ್ಮ ವಿಪಕ್ಷದ ನಾಯಕರಿಗೆ ಇದೆಯೇ!? ಇಲ್ಲಿ ಇನ್ನೊಂದು ಪ್ರಶ್ನೆಯೂ ಇದೆ. ಪ್ರತಿಪಕ್ಷ ಇಂದು ಸದನವನ್ನು ಅಡ್ಡಿಪಡಿಸುವುದನ್ನು ತನ್ನ ರಾಜಕೀಯ ಆಯುಧವನ್ನಾಗಿ ಮಾಡಿಕೊಂಡರೆ, ನಾಳೆ ಇದೇ ಮಾದರಿಯನ್ನು ಆಡಳಿತ ಪಕ್ಷ ಬಳಸಿದಾಗ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ಪ್ರತಿಪಕ್ಷಕ್ಕೆ ಉಳಿಯುತ್ತದೆಯೇ? ಪ್ರಜಾಪ್ರಭುತ್ವದಲ್ಲಿ ಸರ್ಕಾರ ಬಹುಮತದ ಬಲದಿಂದ ನಡೆಯುತ್ತದೆ. ಆದರೆ ಪ್ರತಿಪಕ್ಷ ಪ್ರಶ್ನೆಯ ಬಲದಿಂದ ಸರ್ಕಾರವನ್ನು ನಿಯಂತ್ರಿಸುತ್ತದೆ. ಆ ಪ್ರಶ್ನೆಯೇ ಸದನದಲ್ಲಿ ಕೇಳಿಸದಂತೆ ಮಾಡುವುದರಿಂದ ಪ್ರತಿಪಕ್ಷ ತನ್ನದೇ ಅಸ್ತ್ರವನ್ನು ದುರ್ಬಲಗೊಳಿಸಿಕೊಳ್ಳುತ್ತದೆ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ನಿಜವಾಗಿಯೂ ನಾಗೇಂದ್ರ ಅವರ ಪಾಲಿದ್ದರೆ, ಅದನ್ನು ರಾಜಕೀಯ ಘೋಷಣೆಗಳಿಂದ ಮಾತ್ರವಲ್ಲ, ದಾಖಲೆಗಳಿಂದಲೂ ಸಾಬೀತುಪಡಿಸಬಹುದು. ಎಷ್ಟು ಹಣ? ಯಾರ ಖಾತೆಗೆ? ಯಾವ ಪ್ರಕ್ರಿಯೆಯಲ್ಲಿ? ಯಾವ ಅಧಿಕಾರಿಯ ಹೊಣೆ? ತನಿಖೆ ಮತ್ತು ತನಿಖೆ ವೈಫಲ್ಯ ಹೇಗಾಯಿತು? ಸರ್ಕಾರ ಏನು ಕ್ರಮ ಕೈಗೊಂಡಿದೆ? ಇನ್ನೂ ಯಾರ ವಿರುದ್ಧ ಕ್ರಮ ಬಾಕಿಯಿದೆ? ಇಂತಹ ಪ್ರಶ್ನೆಗಳು ಸದನದಲ್ಲಿ ಕೇಳಿಬಂದಾಗಲೇ ಪ್ರಕರಣದ ರಾಜಕೀಯ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ಸ್ಪಷ್ಟವಾಗುತ್ತದೆ.

ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಸರ್ಕಾರ ತಪ್ಪಿಸಿಕೊಳ್ಳುತ್ತಿದ್ದರೆ, ಪ್ರತಿಪಕ್ಷ ಅದನ್ನು ಜನರ ಮುಂದೆ ಇನ್ನಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯಬಹುದು. ಆದರೆ ಸದನವೇ ನಡೆಯದಿದ್ದರೆ, ಸರ್ಕಾರದ ಉತ್ತರ ದಾಖಲಾಗುವುದಿಲ್ಲ. ಪ್ರತಿಪಕ್ಷದ ಪ್ರಶ್ನೆಯೂ ದಾಖಲಾಗುವುದಿಲ್ಲ. ಕೊನೆಗೆ ಉಳಿಯುವುದು ಕೇವಲ ರಾಜಕೀಯ ಗದ್ದಲ. ಇದು ಕೇವಲ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಇದು ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ಪ್ರಶ್ನೆ. ಪ್ರತಿಪಕ್ಷದ ಕೆಲಸ ಸರ್ಕಾರವನ್ನು ಬೀಳಿಸುವುದಷ್ಟೇ ಅಲ್ಲ; ಸರ್ಕಾರವನ್ನು ಸರಿಯಾಗಿ ಕೆಲಸ ಮಾಡುವಂತೆ ಒತ್ತಾಯಿಸುವುದೂ ಹೌದು. ಸರ್ಕಾರದ ಪ್ರತಿಯೊಂದು ತಪ್ಪನ್ನೂ ಜನರ ಮುಂದೆ ತರುವ ಅತ್ಯಂತ ಬಲವಾದ ವೇದಿಕೆಯೇ ವಿಧಾನಮಂಡಲ. ರಾಜಕೀಯ ಪಕ್ಷಗಳು ತಮ್ಮ ಪ್ರತಿಭಟನೆಯಿಂದ ರಾಜಕೀಯ ಲಾಭ ಪಡೆಯಬಹುದು. ಆದರೆ ಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದ ಜನರ ಪ್ರಶ್ನೆಗಳು ಮತ್ತೆ ಮುಂದೂಡಲ್ಪಡುತ್ತವೆ. ಹೀಗಾಗಿ ಸರ್ಕಾರವನ್ನು ಪ್ರಶ್ನಿಸುವ ಹೆಸರಿನಲ್ಲಿ ಸದನವನ್ನು ಪ್ರಶ್ನೆಯೇ ಕೇಳಲಾಗದ ಸ್ಥಿತಿಗೆ ತರುವುದು ಪ್ರಜಾಪ್ರಭುತ್ವದ ಹೋರಾಟವೇ? ಪ್ರತಿಪಕ್ಷಕ್ಕೆ ಗಲಾಟೆ ಮಾಡುವ ಹಕ್ಕಿಗಿಂತ, ಸರ್ಕಾರವನ್ನು ಉತ್ತರಿಸುವಂತೆ ಮಾಡುವ ಜವಾಬ್ದಾರಿ ದೊಡ್ಡದು. ವಿಧಾನಮಂಡಲ ಜನರ ಹಣದಿಂದ ನಡೆಯುತ್ತದೆ. ಜನರ ಪ್ರತಿನಿಧಿಗಳು ಅಲ್ಲಿ ಕುಳಿತುಕೊಳ್ಳುತ್ತಾರೆ. ಆದ್ದರಿಂದ ಅದು ರಾಜಕೀಯ ಪಕ್ಷಗಳ ಶಕ್ತಿಪ್ರದರ್ಶನದ ವೇದಿಕೆಯಾಗದೆ, ಜನರ ಸಮಸ್ಯೆಗಳಿಗೆ ಉತ್ತರ ಹುಡುಕುವ ವೇದಿಕೆಯಾಗಬೇಕು. ಸರ್ಕಾರ ತಪ್ಪು ಮಾಡಿದರೆ ಪ್ರತಿಪಕ್ಷ ಪ್ರಶ್ನಿಸಲಿ. ಭ್ರಷ್ಟಾಚಾರವಿದ್ದರೆ ಬಯಲಿಗೆಳೆಯಲಿ.

ರಾಜೀನಾಮೆ ಬೇಕಿದ್ದರೆ ಒತ್ತಾಯಿಸಲಿ. ಆದರೆ ಸದನವೇ ನಡೆಯದಂತೆ ಮಾಡುವ ರಾಜಕಾರಣದಿಂದ ಅಂತಿಮವಾಗಿ ಸೋಲುವುದು ಸರ್ಕಾರವಲ್ಲ—ಜನರ ಪ್ರಜಾಪ್ರಭುತ್ವದ ಹಕ್ಕು. ಅದಕ್ಕಾಗಿಯೇ ಇಂದಿನ ಪ್ರತಿಪಕ್ಷದ ಮುಂದೆ ಇರುವ ನಿಜವಾದ ಸವಾಲು ಗದ್ದಲ ಎಬ್ಬಿಸುವುದಲ್ಲ; ಅಂಕಿ-ಅಂಶ, ದಾಖಲೆ ಮತ್ತು ತರ್ಕದ ಮೂಲಕ ಸರ್ಕಾರವನ್ನು ಉತ್ತರಿಸಲಾಗದ ಸ್ಥಿತಿಗೆ ತರುವುದು. ಅದೇ ಪರಿಣಾಮಕಾರಿ ವಿರೋಧ ಪಕ್ಷದ ರಾಜಕಾರಣ. ಅದೇ ವಿಧಾನಮಂಡಲದ ಗೌರವ. ಮತ್ತು ಅದೇ ಪ್ರಜಾಪ್ರಭುತ್ವದ ನಿಜವಾದ ಅರ್ಥ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment