Monday, June 29, 2026

ರಾಮ ಮಂದಿರದಲ್ಲಿ ದೇಣಿಗೆ ಲೂಟಿ ಪ್ರಕರಣ : 2027ರ ಚುನಾವಣಾ ಸಮೀಕರಣವನ್ನೇ ಬದಲಾಯಿಸುತ್ತಾ!?

ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣ ಮತ್ತು ಎಸ್‌ಐಟಿ (SIT) ತನಿಖೆಯ ವರದಿಗಳು ಉತ್ತರ ಪ್ರದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿವೆ.

ಧಾರ್ಮಿಕ ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು ಮುನ್ನಡೆಯುವ ಬಲಪಂಥೀಯ ರಾಜಕಾರಣಕ್ಕೆ, ಆ ಧರ್ಮದ ಹೆಸರಿನಲ್ಲೇ ನಡೆಯುವ ಭ್ರಷ್ಟಾಚಾರದ ಆರೋಪಗಳು ದೊಡ್ಡ ಹಿನ್ನಡೆ ತರುತ್ತವೆ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ. ಅಯೋಧ್ಯೆ ರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳಿಂದ ಕೋಟ್ಯಂತರ ರೂಪಾಯಿ ಹಣ ಕಳ್ಳತನವಾಗಿರುವ ಪ್ರಕರಣ ಮತ್ತು ಅದರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ನೀಡಿರುವ ಪ್ರಾಥಮಿಕ ವರದಿ ಈಗ ಉತ್ತರ ಪ್ರದೇಶದ ರಾಜಕೀಯ ಸಮೀಕರಣವನ್ನು ಬದಲಾಯಿಸುವ ಮುನ್ಸೂಚನೆ ನೀಡುತ್ತಿದೆ.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಸಮಾಜವಾದಿ ಪಾರ್ಟಿಗೆ (SP) ಈ ಹಗರಣವು ಆಡಳಿತಾರೂಢ ಬಿಜೆಪಿಯ ಸಾಂಸ್ಕೃತಿಕ ರಾಷ್ಟ್ರೀಯತೆಯ ನೈತಿಕತೆಯನ್ನು ಪ್ರಶ್ನಿಸಲು ದೊಡ್ಡ ಅಸ್ತ್ರವಾಗಿ ಸಿಕ್ಕಿದೆ.

ಬಲಪಂಥೀಯ ರಾಜಕಾರಣವು ರಾಮ ಮಂದಿರವನ್ನು ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲದೆ, ತನ್ನ ನೈತಿಕ ಮತ್ತು ಸಾಂಸ್ಕೃತಿಕ ಸ್ವಚ್ಛತೆಯ ಸಂಕೇತವಾಗಿ ಬಿಂಬಿಸಿತ್ತು. ಆದರೆ, ಭಕ್ತರು ನೀಡಿದ ಪವಿತ್ರ ದೇಣಿಗೆಯಲ್ಲೇ ವ್ಯವಸ್ಥಿತವಾಗಿ ಕಳ್ಳತನ ನಡೆದಿರುವುದು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮುಂದೆ ನಿಂತು ಹಣ ಲಪಟಾಯಿಸಿರುವುದು ಸಾಬೀತಾಗಿರುವುದು ಬಹುಸಂಖ್ಯಾತ ಸಾಮಾನ್ಯ ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಬಿಜೆಪಿ ಹರಡಿದ್ದ "ಧರ್ಮ ರಕ್ಷಕ" ಎಂಬ ಬಿಂಬಕ್ಕೆ ಈ ಹಗರಣ ತೀವ್ರ ಧಕ್ಕೆ ತಂದಿದೆ. ಅಖಿಲೇಶ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಾರ್ಟಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಈ ಸಾಂಸ್ಥಿಕ ಲೂಟಿಯನ್ನು ಜನಸಾಮಾನ್ಯರ ಮುಂದೆ ಯಶಸ್ವಿಯಾಗಿ ಅನಾವರಣಗೊಳಿಸುತ್ತಿದೆ.

ಇನ್ನು,ಧಾರ್ಮಿಕ ರಾಜಕಾರಣವು ಯಾವಾಗಲೂ ಬಡವರ ಮತ್ತು ಶೋಷಿತರ ನಿಜವಾದ ಆರ್ಥಿಕ ಸಮಸ್ಯೆಗಳನ್ನು (ನಿರುದ್ಯೋಗ, ಹಣದುಬ್ಬರ) ಮರೆಮಾಚಲು ಬಳಸುವ ತಂತ್ರವಾಗಿದೆ. ರಾಮ ಮಂದಿರದ ಟ್ರಸ್ಟ್‌ನಲ್ಲಿ ಉನ್ನತ ಜಾತಿಗಳ ಪ್ರಾಬಲ್ಯ ಮತ್ತು ಅಲ್ಲಿ ನಡೆದಿರುವ ಆರ್ಥಿಕ ಅಕ್ರಮಗಳನ್ನು ಮುಂದಿಟ್ಟುಕೊಂಡು ಸಮಾಜವಾದಿ ಪಾರ್ಟಿ ತನ್ನ PDA (Pichhda, Dalit, Alpasankhyak) ಸೂತ್ರವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. "ದೇವಸ್ಥಾನದ ಹೆಸರಿನಲ್ಲಿ ಹಣ ಲೂಟಿ ಮಾಡುವವರು ಸಾಮಾನ್ಯ ಶೋಷಿತ ವರ್ಗದ ಹಿತ ಕಾಯಲು ಸಾಧ್ಯವಿಲ್ಲ" ಎಂಬ ಜಾಗೃತಿಯನ್ನು ತಳಮಟ್ಟದ ಜನರಲ್ಲಿ ಬಿತ್ತಲು ಇದು ಎಸ್‌ಪಿಗೆ ಸಹಕಾರಿಯಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ (Zero Tolerance) ಎಂದು ಸಾರುತ್ತಾ ಬಂದಿದ್ದಾರೆ. ಆದರೆ, ರಾಜ್ಯ ಸರ್ಕಾರದ ಮೂಗಿನ ನೇರದಲ್ಲೇ, ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಇಷ್ಟು ದೊಡ್ಡ ಹಗರಣ ನಡೆದಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ರಾಜೀನಾಮೆಯು ಈ ಆರೋಪಗಳಿಗೆ ಮತ್ತಷ್ಟು ತೂಕ ತಂದಿದೆ. ಪ್ರತಿಪಕ್ಷವಾದ ಎಸ್‌ಪಿ ಇದನ್ನು ಕೇವಲ ಸಣ್ಣ ಕಳ್ಳತನವಲ್ಲ, ಬದಲಿಗೆ ವ್ಯವಸ್ಥಿತ ಸಾಂಸ್ಥಿಕ ಭ್ರಷ್ಟಾಚಾರ ಎಂದು ಬಿಂಬಿಸುವಲ್ಲಿ ಯಶಸ್ವಿಯಾದರೆ, ಅದು ಮಧ್ಯಮ ವರ್ಗದ ಮತದಾರರ ಮೇಲೆಯೂ ಪ್ರಭಾವ ಬೀರಲಿದೆ.

ಕಳೆದ ಕೆಲವು ಚುನಾವಣೆಗಳಲ್ಲಿ ಉತ್ತರ ಪ್ರದೇಶದ ಮತದಾರರು ಕೇವಲ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಮತ ಚಲಾಯಿಸುತ್ತ ಬಂದಿರುವುದು ಕಂಡುಬಂದಿತ್ತು. ಆದರೆ, ಇಂತಹ ಪವಿತ್ರ ಸ್ಥಳದಲ್ಲೇ ನಡೆದ ಭ್ರಷ್ಟಾಚಾರವು ಮತದಾರರಲ್ಲಿ ಒಂದು ರೀತಿಯ ವಿರಕ್ತಿ ಮೂಡಿಸುವ ಸಾಧ್ಯತೆಯಿದೆ. ಧರ್ಮದ ಹೆಸರಿನ ರಾಜಕಾರಣದ ಮಿತಿಗಳನ್ನು ಜನರು ಅರ್ಥಮಾಡಿಕೊಳ್ಳಲು ಆರಂಭಿಸಿದಾಗ, ಸಮಾಜವಾದಿ ಪಾರ್ಟಿ ಮಂಡಿಸುವ ಉದ್ಯೋಗ, ರೈತರ ಸಮಸ್ಯೆ, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಕಲ್ಯಾಣದಂತಹ 'ಜೀವನೋಪಾಯದ ವಿಷಯಗಳು' (Bread and Butter issues) ಮುಂಚೂಣಿಗೆ ಬರುತ್ತವೆ.

ಒಟ್ಟಿನಲ್ಲಿ, ರಾಮ ಮಂದಿರದ ದೇಣಿಗೆ ವಿವಾದವು ಬಿಜೆಪಿಯ ರಾಜಕೀಯ ಬಂಡವಾಳವಾಗಿದ್ದ ಧಾರ್ಮಿಕ ಭಾವನೆಯನ್ನೇ ಅದರ ವಿರುದ್ಧ ತಿರುಗಿಸುವಂತೆ ಮಾಡಿದೆ. ಸಮಾಜವಾದಿ ಪಾರ್ಟಿಯು ಈ ಹಗರಣವನ್ನು ಕೇವಲ ಆಡಳಿತ ವಿರೋಧಿ ಅಲೆಯನ್ನು (Anti-incumbency) ಸೃಷ್ಟಿಸಲು ಮಾತ್ರ ಬಳಸದೆ, ಜಾತ್ಯತೀತತೆ ಮತ್ತು ಆರ್ಥಿಕ ನೈತಿಕತೆಯ ಹೊಸ ಪರ್ಯಾಯ ಮಾದರಿಯಾಗಿ ಜನರ ಮುಂದೆ ಪ್ರಸ್ತುತಪಡಿಸಿದರೆ, 2027ರ ಚುನಾವಣೆಯಲ್ಲಿ ಲಕ್ನೋದ ಗದ್ದುಗೆ ಹಿಡಿಯಲು ಇದು ಎಸ್‌ಪಿಗೆ ಅತ್ಯಂತ ಪ್ರಮುಖ ಮೆಟ್ಟಿಲಾಗುವುದರಲ್ಲಿ ಸಂಶಯವಿಲ್ಲ.

-ಶ್ರೀರಾಜ್ ವಕ್ವಾಡಿ 


Wednesday, June 17, 2026

ಬಿಡದಿ ಟೌನ್ ಶಿಪ್ ವಿವಾದ ; ರಾಜಕೀಯ ಬೂಟಾಟಿಕೆಯ ಪರಮಾವಧಿ!


ಇಂದು ಈ ಯೋಜನೆಯನ್ನು 33,000 ಕೋಟಿಯ "ರಿಯಲ್ ಎಸ್ಟೇಟ್ ಹಗರಣ" ಎಂದು ಕರೆಯುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ 2006 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಈ ಬಿಡದಿ ಟೌನ್ ಶಿಪ್ ಯೋಜನೆಗೆ ಮೊದಲ ಬಾರಿಗೆ ಅನುಮೋದನೆ ನೀಡಿದ್ದರು. ಅಂದು ಬಂಡವಾಳಶಾಹಿ DLF ಸಂಸ್ಥೆಯಿಂದ ನೂರಾರು ಕೋಟಿ ಮುಂಗಡ ಪಡೆದಿದ್ದ ಜೆಡಿಎಸ್, ಇಂದು ಅಧಿಕಾರ ಕೈತಪ್ಪಿದಾಗ ರೈತ ಪರ ಮುಖವಾಡ ಧರಿಸಿದೆ. ದೇಶಾದ್ಯಂತ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ತರಲು ಯತ್ನಿಸಿದ್ದ ಮತ್ತು ಅದನ್ನ ವಿರೋಧಿಸಿದ ರೈತರನ್ನು ದೆಹಲಿ ಗಡಿಯಲ್ಲಿ ವರ್ಷಾನುಗಟ್ಟಲೆ ಬೀದಿಯಲ್ಲಿರಿಸಿದ್ದ ಬಿಜೆಪಿ, ಇಂದು ಬಿಡದಿಯಲ್ಲಿ "ರೈತರ ಹಕ್ಕುಗಳ" ಬಗ್ಗೆ ಮಾತನಾಡುತ್ತಿರುವುದು ಬೂಟಾಟಿಕೆಯ ಪರಮಾವಧಿಯಾಗಿದೆ. 

ಬಿಡದಿ ಟೌನ್ ಶಿಪ್ (AI ಸಿಟಿ) ಭೂಸ್ವಾಧೀನ ವಿವಾದದ ಒಳಸುಳಿಗಳನ್ನು ಗಮನಿಸಿದಾಗ, ಇದು ಕೇವಲ ಒಂದು ನಗರಾಭಿವೃದ್ಧಿ ಯೋಜನೆಗಿಂತಲೂ ಹೆಚ್. ಡಿ ಕುಮಾರಸ್ವಾಮಿ ಮತ್ತು ಡಿ. ಕೆ ಶಿವಕುಮಾರ್ ನಡುವಿನ 'ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕತ್ವ'ದ ತೀವ್ರ ಸಂಘರ್ಷವಾಗಿ ಕಾಣಿಸುತ್ತಿದೆ. ಇನ್ನು, ಸರ್ಕಾರ ಟೌನ್‌ಶಿಪ್‌ ಗೆ ಕೋಟ್ಯಂತರ ರೂಪಾಯಿ ಸುರಿಯುವ ಬದಲು, ವೃಷಭಾವತಿಯ ಪಾತ್ರದಲ್ಲಿ ಹೂಳೆತ್ತಿ, ಶುದ್ಧೀಕರಣ ಘಟಕಗಳನ್ನು (STP & ETP) ನಿರ್ಮಿಸಿದರೆ, ಬೆಂಗಳೂರಿನ ಅಂತರ್ಜಲ ಮಟ್ಟ ತಂತಾನೇ ಸುಧಾರಿಸುತ್ತದೆ. ರೈತರ ಭೂಮಿಯೂ ಉಳಿಯುತ್ತದೆ. ವೃಷಭಾವತಿಯೂ ಸ್ವಚ್ಛವಾಗುತ್ತದೆ.

ಬೆಂಗಳೂರಿನ ಹೊರವಲಯದ ಬಿಡದಿ ಮತ್ತು ಹಾರೋಹಳ್ಳಿ ಭಾಗದ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಹೊರಟಿರುವ ಪ್ರಸ್ತಾವಿತ 18,000 ರೂ. ಕೋಟಿ ವೆಚ್ಚದ "ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್" (GBIT) ಅಥವಾ "AI ಸಿಟಿ" ಯೋಜನೆ ಪ್ರಸ್ತುತ ಕರ್ನಾಟಕದ ರಾಜಕೀಯ ಜಟಾಪಟಿಯ ಕೇಂದ್ರಬಿಂದುವಾಗಿದೆ. ತಂತ್ರಜ್ಞಾನ, ಉದ್ಯೋಗ ಸೃಷ್ಟಿ ಮತ್ತು ನಗರಾಭಿವೃದ್ಧಿಯ ಹೊದಿಕೆಯಡಿಯಲ್ಲಿ ಸಾಗುತ್ತಿರುವ ಈ ಬೃಹತ್ ಯೋಜನೆ, ವಾಸ್ತವದಲ್ಲಿ ಕಾರ್ಪೊರೇಟ್ ರಿಯಲ್ ಎಸ್ಟೇಟ್ ದಂಧೆ ಮತ್ತು ಕೃಷಿ ಅವಲಂಬಿತ ಗ್ರಾಮೀಣ ಶ್ರಮಿಕ ವರ್ಗದ ಮೇಲಿನ ದಬ್ಬಾಳಿಕೆಯಾಗಿದೆ ಎಂಬ ಆಕ್ರೋಶ ತಳಮಟ್ಟದಲ್ಲಿ ವ್ಯಕ್ತವಾಗುತ್ತಿದೆ.

ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಯೋಜನೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ರಾಜಕೀಯ ಆಟಗಳು, ಆಡಳಿತ ವರ್ಗಗಳ ನೈಜ ಮುಖವನ್ನು ಅನಾವರಣಗೊಳಿಸಿವೆ.

ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಡದಿ ಯೋಜನೆಯನ್ನು "ಭವಿಷ್ಯದ ಐಟಿ-ಎಐ ಹಬ್" ಎಂದು ಬಿಂಬಿಸುತ್ತಿದೆ. ಆದರೆ,‌ಇದು ಬಂಡವಾಳಶಾಹಿಗಳ ಹಿತಾಸಕ್ತಿ ಕಾಯುವ ಮತ್ತು ಕೃಷಿ ಭೂಮಿಯನ್ನು ಕಬಳಿಕೆ ಮಾಡುವ ನವ ಉದಾರೀಕರಣದ (Neo-liberal) ಕ್ರೂರ ಮಾದರಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. 

ಈ ನಡುವೆ ಶೇ.80 ರಷ್ಟು ರೈತರು ಜಮೀನು ನೀಡಲು ಒಪ್ಪಿದ್ದಾರೆ ಎಂದು ಸರ್ಕಾರ ಸುಳ್ಳು ದಾಖಲೆ ನೀಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೇ, ಸರ್ಕಾರ ಈ ಯೋಜನೆಯಿಂದ ರೈತರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಆಕ್ರೋಶಕ್ಕೆ ಬೆಲೆ ನೀಡಿಲ್ಲ. ಕೃಷಿಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ರೈತ ಕುಟುಂಬಗಳು ಮತ್ತು ಭೂರಹಿತ ಕೃಷಿ ಕಾರ್ಮಿಕರನ್ನು ಒಕ್ಕಲೆಬ್ಬಿಸಿ, ಕಾರ್ಪೊರೇಟ್ ಐಟಿ ಕಂಪನಿಗಳಿಗೆ ಮಣೆ ಹಾಕಲಾಗುತ್ತಿದೆ.  

ಇನ್ನು, ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಪ್ರಸ್ತುತ ಭೂಸ್ವಾಧೀನದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ರಾಹುಲ್ ಗಾಂಧಿ ಅವರಿಗೂ ಪತ್ರ ಬರೆದಿವೆ. 

ಈ ಬಗ್ಗೆ ಗಮನಿಸಬೇಕಾದ ಪ್ರಮುಖ ಅಂಶಗಳೇನು ಎಂದರೇ, ಇಂದು ಈ ಯೋಜನೆಯನ್ನು 33,000 ಕೋಟಿಯ  "ರಿಯಲ್ ಎಸ್ಟೇಟ್ ಹಗರಣ" ಎಂದು ಕರೆಯುತ್ತಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ 2006 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಈ ಬಿಡದಿ ಟೌನ್ ಶಿಪ್ ಯೋಜನೆಗೆ ಮೊದಲ ಬಾರಿಗೆ ಅನುಮೋದನೆ ನೀಡಿದ್ದರು. ಅಂದು ಬಂಡವಾಳಶಾಹಿ DLF ಸಂಸ್ಥೆಯಿಂದ ನೂರಾರು ಕೋಟಿ ಮುಂಗಡ ಪಡೆದಿದ್ದ ಜೆಡಿಎಸ್, ಇಂದು ಅಧಿಕಾರ ಕೈತಪ್ಪಿದಾಗ ರೈತ ಪರ ಮುಖವಾಡ ಧರಿಸಿದೆ. ದೇಶಾದ್ಯಂತ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ತರಲು ಯತ್ನಿಸಿದ್ದ ಮತ್ತು ಅದನ್ನ ವಿರೋಧಿಸಿದ ರೈತರನ್ನು ದೆಹಲಿ ಗಡಿಯಲ್ಲಿ ವರ್ಷಾನುಗಟ್ಟಲೆ ಬೀದಿಯಲ್ಲಿರಿಸಿದ್ದ ಬಿಜೆಪಿ, ಇಂದು ಬಿಡದಿಯಲ್ಲಿ "ರೈತರ ಹಕ್ಕುಗಳ" ಬಗ್ಗೆ ಮಾತನಾಡುತ್ತಿರುವುದು ಬೂಟಾಟಿಕೆಯ ಪರಮಾವಧಿ. ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಅವರ ಹೋರಾಟ ಕೇವಲ ಒಕ್ಕಲಿಗ ಮತ್ತು ಗ್ರಾಮೀಣ ಮತಬ್ಯಾಂಕ್ ಅನ್ನು ಸೆಳೆಯುವ ಚುನಾವಣಾ ತಂತ್ರವಾಗಿದೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ  ರೈತರನ್ನು ಬಿಜೆಪಿ ಖಲಿಸ್ತಾನಿಗಳು ಎಂದು ಬಿಂಬಿಸಿತ್ತು. ಕಾಂಗ್ರೆಸ್ ಅದನ್ನು ತೀವ್ರವಾಗಿ ಖಂಡಿಸಿತ್ತು. ಆದರೆ, ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ರೈತರು ನಿಂತಿದ್ದು, ಈಗ ಕಾಂಗ್ರೆಸ್ ನ ನಿಲುವು ಒಲವು ಏನಾಗಿರಲಿದೆ ಎನ್ನುವುದರಲ್ಲಿ ಕುತೂಹಲವಿದೆ. 

ಇನ್ನು, ಈ ಯೋಜನೆ ಕೇವಲ ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟವಲ್ಲ, ಇದು ಪ್ರಕೃತಿ ಮತ್ತು ಮಾನವ ಶ್ರಮದ ಮೇಲಿನ ಅತ್ಯಂತ ಭೀಕರ ಆಕ್ರಮಣವಾಗಿದೆ. ತೋಟಗಾರಿಕಾ ಇಲಾಖೆಯ ಆರ್‌ಟಿಐ ವರದಿಗಳ ಪ್ರಕಾರ, ಈ ಯೋಜನೆಯಿಂದಾಗಿ ಸುಮಾರು 2 ಲಕ್ಷ ಮರಗಳ ಮಾರಣಹೋಮ ನಡೆಯಲಿದೆ. ಇದರಲ್ಲಿ 87,000 ತೆಂಗಿನ ಮರಗಳು, 83,000 ಅಡಿಕೆ ಮರಗಳು ಮತ್ತು 3 ಲಕ್ಷಕ್ಕೂ ಹೆಚ್ಚು ಬಾಳೆ ಗಿಡಗಳು ಸೇರಿವೆ. ಇದು ಹವಾಮಾನ ವೈಪರೀತ್ಯದ ಈ ಕಾಲದಲ್ಲಿ ಪರಿಸರಕ್ಕೆ ತುಂಬಲಾರದ ನಷ್ಟ ತರಲಿದೆ. ಜಮೀನು ಮಾಲೀಕರಿಗೆ ಸರ್ಕಾರ ಹಣ ಅಥವಾ ಪರ್ಯಾಯ ಸೈಟ್ ನೀಡಬಹುದು, ಆದರೆ ಆ ಜಮೀನುಗಳಲ್ಲಿ ಕೂಲಿ ಮಾಡಿಕೊಂಡು ಬದುಕುತ್ತಿದ್ದ ಶ್ರಮಿಕ ವರ್ಗ, ಕೃಷಿ ಕಾರ್ಮಿಕರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಅವರು ಸಂಪೂರ್ಣವಾಗಿ ಬೀದಿಪಾಲಾಗಲಿದ್ದಾರೆ ಎನ್ನುವುದು ಇಲ್ಲಿ ಮುಖ್ಯಾಂಶ. 

ಇನ್ನು, ಈ ಮೂರೂ ಪಕ್ಷಗಳು ಬಂಡವಾಳಶಾಹಿ ವ್ಯವಸ್ಥೆಯ ಭಾಗಗಳೇ ಆಗಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಅಧಿಕಾರದಲ್ಲಿರುವಾಗ ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ನೀಡುವುದು, ವಿರೋಧ ಪಕ್ಷದಲ್ಲಿದ್ದಾಗ ಅದೇ ರೈತರನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದು ಇವರ ಚಾಳಿಯಾದಂತಿದೆ.

'ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕತ್ವ' : 

ಬಿಡದಿ ಟೌನ್ ಶಿಪ್ (AI ಸಿಟಿ) ಭೂಸ್ವಾಧೀನ ವಿವಾದದ ಒಳಸುಳಿಗಳನ್ನು ಗಮನಿಸಿದಾಗ, ಇದು ಕೇವಲ ಒಂದು ನಗರಾಭಿವೃದ್ಧಿ ಯೋಜನೆಗಿಂತಲೂ ಹೆಚ್. ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವಿನ 'ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕತ್ವ'ದ ತೀವ್ರ ಸಂಘರ್ಷವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. 

ಹಳೇ ಮೈಸೂರು ಭಾಗದಲ್ಲಿ, ವಿಶೇಷವಾಗಿ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಕ್ಕಲಿಗ ಮತಬ್ಯಾಂಕ್ ಮೇಲಿನ ಹಿಡಿತ ಸಾಧಿಸಲು ಉಭಯ ನಾಯಕರು ನಡೆಸುತ್ತಿರುವ ರಾಜಕೀಯ ಮೇಲಾಟ ಮತ್ತು ಹಠಮಾರಿ ಧೋರಣೆ ಇಲ್ಲಿ ಎದ್ದು ಕಾಣಿಸುತ್ತಿದೆ. 

ರಾಮನಗರ, ಬಿಡದಿ, ಕನಕಪುರ ಮತ್ತು ಚನ್ನಪಟ್ಟಣ ಒಳಗೊಂಡಿರುವ ಈ ಪ್ರಾಂತ್ಯವು ಸಾಂಪ್ರದಾಯಿಕವಾಗಿ ಒಕ್ಕಲಿಗ ಸಮುದಾಯದ ಪ್ರಬಲ ಕೋಟೆಯಾಗಿದೆ. ಈ ಭಾಗ ದೇವೇಗೌಡರ ಕುಟುಂಬದ ರಾಜಕೀಯ ಭದ್ರಕೋಟೆ. ಬಿಡದಿ ಯೋಜನೆಯನ್ನು ವಿರೋಧಿಸುವ ಮೂಲಕ ತಾವು ಒಕ್ಕಲಿಗ ರೈತರ ಹಿತರಕ್ಷಕ ಹಾಗೂ ಮಣ್ಣಿನ ಮಗ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲು ಕುಮಾರಸ್ವಾಮಿ ಹೋರಾಡುತ್ತಿದ್ದಾರೆ. 

ಕನಕಪುರದ ಬಂಡೆಯಾಗಿ ಬೆಳೆದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಮುದಾಯದ ಮುಂದಿನ ಏಕೈಕ ನಾಯಕನಾಗಿ ನೆಲೆ ನಿಲ್ಲಲು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಅನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವುದು ಅನಿವಾರ್ಯವಾಗಿದೆ. 

ಬಿಡದಿಯನ್ನು ಜಾಗತಿಕ ಮಟ್ಟದ "AI ಸಿಟಿ"ಯನ್ನಾಗಿ ಮಾಡುವ ಮೂಲಕ ಈ ಭಾಗದ ಒಕ್ಕಲಿಗ ಯುವಕರಿಗೆ ಉದ್ಯೋಗ ಸೃಷ್ಟಿ, ಜಮೀನುಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯ ತಂದುಕೊಡುವ 'ಆಧುನಿಕ ವಿಕಾಸ ಪುರುಷ' ತಾವಾಗಬೇಕು ಎಂಬುದು ಶಿವಕುಮಾರ್ ಅವರ ಹಠ. ಒಕ್ಕಲಿಗ ಸಮುದಾಯಕ್ಕೆ ಭೂಮಿಯೇ ಜೀವಾಳ. ಸರ್ಕಾರ ರೈತರ ಜಮೀನು ಕಬಳಿಸುತ್ತಿದೆ ಎಂದು ಬಿಂಬಿಸುವ ಮೂಲಕ, ಭಾವನಾತ್ಮಕವಾಗಿ ಒಕ್ಕಲಿಗ ರೈತರನ್ನು ಒಗ್ಗೂಡಿಸಿ ಡಿ.ಕೆ. ಶಿವಕುಮಾರ್ ಅವರನ್ನು "ರೈತ ವಿರೋಧಿ" ಎಂದು ಚಿತ್ರಿಸಲು ಕುಮಾರಸ್ವಾಮಿ ಹಠ ಹಿಡಿದಿದ್ದಾರೆ.

ವೃಷಭಾವತಿ ನದಿ ಪುನಶ್ಚೇತನವಾಗಲಿ : 

ಬೆಂಗಳೂರಿನ ಉಪನಗರವಾಗಿ ‘ಬಿಡದಿ ಸ್ಮಾರ್ಟ್ ಟೌನ್‌ಶಿಪ್’ ನಿರ್ಮಿಸುವ ಸರ್ಕಾರದ ಯೋಜನೆಗಳು ಬಂಡವಾಳಶಾಹಿ ಹಿತಾಸಕ್ತಿ ಹಾಗೂ ರಿಯಲ್ ಎಸ್ಟೇಟ್ ದಂಧೆಗೆ ರತ್ನಗಂಬಳಿ ಹಾಸುತ್ತಿವೆಯೇ ವಿನಃ, ಸ್ಥಳೀಯ ಪರಿಸರ ಮತ್ತು ಜನರ ನೈಜ ಅಗತ್ಯಗಳನ್ನು ಪೂರೈಸುತ್ತಿಲ್ಲ ಎಂಬ ಗಂಭೀರ ಚರ್ಚೆ ಮುಂಚೂಣಿಗೆ ಬಂದಿದೆ. ಕೃಷಿ ಭೂಮಿಯನ್ನು ನುಂಗಿ, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಾಂಕ್ರೀಟ್ ಜಂಗಲ್ ಸೃಷ್ಟಿಸುವ ಬದಲು, ಬೆಂಗಳೂರಿನ ಜೀವನಾಡಿಯಾಗಿದ್ದ ‘ವೃಷಭಾವತಿ’ ನದಿಯನ್ನು ಸ್ವಚ್ಛಗೊಳಿಸಿ, ಪುನಶ್ಚೇತನಗೊಳಿಸುವುದು ಹೆಚ್ಚು ಪ್ರಗತಿಪರವೆನ್ನಿಸಿಕೊಳ್ಳುತ್ತದೆ. 

ಇನ್ನು, ಒಂದು ವೇಳೆ ಈ ಟೌನ್ ಶಿಪ್ ಮಾಡಿಯೇ ಸಿದ್ಧ ಎನ್ನುವುದಾದರೇ, ಈಗಾಗಲೇ ನೀರಿನ ಅಭಾವ ಎದುರಿಸುತ್ತಿರುವ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಮೇಲೆ ಈ ಹೊಸ ಟೌನ್‌ಶಿಪ್ ಮತ್ತಷ್ಟು ಒತ್ತಡ ಹೇರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ವೃಷಭಾವತಿ ನದಿ ಕೇವಲ ಒಂದು ಜಲಮೂಲವಾಗಿ ಈಗ ಉಳಿದಿಲ್ಲ. ಅದು ಬೆಂಗಳೂರಿನ ಕೈಗಾರಿಕಾ ಕ್ರಾಂತಿ ಮತ್ತು ನಗರೀಕರಣದ ಬೇಜವಾಬ್ದಾರಿಗೆ ಬಲಿಯಾದ ಒಂದು ಜೀವಂತ ಉದಾಹರಣೆಯಾಗಿದೆ. ಪೀಣ್ಯ, ಮೈಸೂರು ರಸ್ತೆ ಹಾಗೂ ಬಿಡದಿಯ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಮತ್ತು ನಗರದ ಒಳಚರಂಡಿ ನೀರು ಈ ನದಿಯನ್ನು ‘ವಿಷದ ಹಳ್ಳ’ವನ್ನಾಗಿ ಮಾಡಿದೆ. 

ಈ ಟೌನ್ ಶಿಪ್ ಮಾಡಲು ಉದ್ದೇಶಿಸಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ವೃಷಭಾವತಿ ನದಿ ಹರಿಯುತ್ತಿದೆ. ಅಲ್ಲಿನ ಕೃಷಿ ಜೀವನವೂ ವೃಷಭಾವತಿಯ ಕಲುಷಿತ ನೀರನ್ನೇ ಆಧರಿಸಿದೆ. ಅಲ್ಲಿ ಬೇಳೆಯುವ ತರಕಾರಿಗಳೂ ವಿಷಪೂರಿತವೆ. ಸುತ್ತಮುತ್ತಲಿನ ಹಳ್ಳಿಗಳ ರೈತ ಮತ್ತು ಹಿಂದುಳಿದ ವರ್ಗಗಳು ಇಂದು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದ ನರಳುತ್ತಿದ್ದಾರೆ. ನದಿಯನ್ನು ಸ್ವಚ್ಛಗೊಳಿಸುವುದು ಈ ಶೋಷಿತ ವರ್ಗಕ್ಕೆ ಸಿಗುವ ನ್ಯಾಯವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ನದಿ ಶುದ್ಧೀಕರಣಗೊಂಡರೆ ರಾಮನಗರ, ಚನ್ನಪಟ್ಟಣ, ಮತ್ತು ಕನಕಪುರ ಭಾಗದ ಸಹಸ್ರಾರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಇದು ಕೃಷಿ ಬಿಕ್ಕಟ್ಟನ್ನು ತಡೆಯಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಹಕಾರಿಯಾಗುತ್ತದೆ. 

ಈ ಟೌನ್‌ಶಿಪ್‌ಗಳಿಗೆ ಕೋಟ್ಯಂತರ ರೂಪಾಯಿ ಸುರಿಯುವ ಬದಲು, ವೃಷಭಾವತಿಯ ಪಾತ್ರದಲ್ಲಿ ಹೂಳೆತ್ತಿ, ಶುದ್ಧೀಕರಣ ಘಟಕಗಳನ್ನು (STP & ETP) ನಿರ್ಮಿಸಿದರೆ, ಬೆಂಗಳೂರಿನ ಅಂತರ್ಜಲ ಮಟ್ಟ ತಂತಾನೇ ಸುಧಾರಿಸುತ್ತದೆ.

ಒಟ್ಟಿನಲ್ಲಿ, ನಮಗೆ ಬೇಕಿರುವುದು ಕಾಂಕ್ರೀಟ್ ಗೋಡೆಗಳ ಒಳಗೆ ಬಂಧಿಯಾಗಿರುವ 'ಸ್ಮಾರ್ಟ್ ಟೌನ್‌ಶಿಪ್' ಅಲ್ಲ, ಬದಲಿಗೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ, ಶ್ರಮಿಕ ವರ್ಗದ ಆರೋಗ್ಯ ಮತ್ತು ಜೀವನೋಪಾಯವನ್ನು ರಕ್ಷಿಸುವ 'ಸುಸ್ಥಿರ ಅಭಿವೃದ್ಧಿ ಮಾದರಿ'. ರೈತರ ಭೂಮಿ ಅವರಲ್ಲೇ ಉಳಿಯುವುದು ಮತ್ತು ವೃಷಭಾವತಿ ನದಿಯ ಸ್ವಚ್ಛಗೊಳಿಸುವಿಕೆ ಮತ್ತು ಬಳಕೆ ಜನಸಾಮಾನ್ಯ ರೈತರ ಹಕ್ಕಾಗಿದೆ ಎನ್ನುವುದು ಇಲ್ಲಿ ಪ್ರಮುಖಾಂಶ.

-ಶ್ರೀರಾಜ್ ವಕ್ವಾಡಿ 

Wednesday, June 10, 2026

ಮೋದಿ ಆಡಳಿತ ನೆಹರೂ ಆಡಳಿತಕ್ಕಿಂತ ಸುಭಿಕ್ಷೆಯೇ!? ಖಂಡಿತ ಅಲ್ಲ.


ಸಮಾಜವನ್ನು ತನ್ನ ರಾಜಕೀಯದ ಮೂಲಕ ಇಬ್ಭಾಗ ಮಾಡಿ ಆಳುತ್ತಾ ಬಂದಿರುವ ಮೋದಿ ಅವರು ಧರಿಸುವ ಪೋಷಾಕಿನಿಂದ, ಟೆಲಿ ಪ್ರಾಂಪ್ಟರ್ ಬಳಸಿ ಬರೆದುಕೊಟ್ಟಿರುವ ಭಾಷಣವನ್ನು ಓದುವುದರಿಂದ, ಹೋದಲ್ಲೆಲ್ಲಾ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದನ್ನು ನೋಡಿ ಬೆರಗಾಗಬಹುದು. ಆದರೆ, ನೆಹರೂ ಆಡಳಿತಕ್ಕಿಂತ ಮೋದಿ ಆಡಳಿತವನ್ನು ಸುಭಿಕ್ಷೆಯಿಂದ ಕೂಡಿದೆ ಎಂದು ಹೇಳಲು ಸಾಧ್ಯವೆ !? ಖಂಡಿತ ಇಲ್ಲ. ವ್ಯವಸ್ಥಿತ ಆರ್ಥಿಕ ಬೆಳವಣಿಗೆ ಮತ್ತು ಗ್ರಾಮೀಣಾಭಿವೃದ್ಧಿ( ಯೋಜನಾ ಆಯೋಗ), ಯಾವುದೇ ಜಾಗತಿಕ ಬಣಕ್ಕೆ ಸೇರದೆ, ವಿಶ್ವಮಟ್ಟದಲ್ಲಿ ಭಾರತದ ಸ್ವತಂತ್ರ ಅಸ್ಮಿತೆ(ಅಲಿಪ್ತ ನೀತಿ), ಕೋಟ್ಯಂತರ ಶೋಷಿತ ಸಮುದಾಯಗಳಿಗೆ ಉದ್ಯೋಗ ಮತ್ತು ಸಾಮಾಜಿಕ ನ್ಯಾಯ (ಮೀಸಲಾತಿ)ವನ್ನು ಒಳಗೊಂಡು ನೆಹರೂ ನೀಡಿದ ಕೊಡುಗೆಗಳನ್ನು ಮೋದಿ ಇಂದು ನೆನೆಯದೇ ಕ್ರೆಡಿಟ್ ತೆಗೆದುಕೊಂಡರೇ, ಅದು ಅವರಿಗೆ ಆತ್ಮ ವಂಚನೆಯಾಗಿ ತಟ್ಟದೇ ಉಳಿಯುವುದಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೀರ್ಘಕಾಲ ಆಡಳಿತ ನಡೆಸುವುದು ಜನಾದೇಶದ ಸಂಕೇತ ಹೌದಾದರೂ, ಆ ಆಡಳಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಹೇಗೆ ರೂಪಿಸಿತು ಮತ್ತು ದೇಶದ ಸಂಪತ್ತನ್ನು ಯಾರ ಕೈಗಿಟ್ಟಿತು ಎನ್ನುವುದು ಮುಖ್ಯವಾಗುತ್ತದೆ.

ಹೌದು, ಜೂನ್ 10, 2026 ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ತರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ (1952) ನಂತರ ಸತತವಾಗಿ ಅತಿ ಹೆಚ್ಚು ದಿನಗಳ ಕಾಲ ಆಡಳಿತ ನಡೆಸಿದ ಪ್ರಧಾನಿ ಎಂಬ ದಾಖಲೆ ಸೃಷ್ಟಿಸಿದ್ದ ಜವಾಹರಲಾಲ್ ನೆಹರೂ (4,398 ದಿನಗಳು) ಅವರನ್ನು ಹಿಂದಿಕ್ಕಿದ್ದಾರೆ. ಕೇವಲ ದಿನಗಳ ಲೆಕ್ಕಾಚಾರದಲ್ಲಿ ನೆಹರೂ ಅವರನ್ನು ಮೋದಿ ಮೀರಿದ್ದರೂ, "ಆಡಳಿತದ ಗುಣಮಟ್ಟ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ದೇಶ ಕಟ್ಟುವಿಕೆಯಲ್ಲಿ ಇಬ್ಬರನ್ನು ಹೋಲಿಸಿ ನೋಡಲು ಸಾಧ್ಯವಿಲ್ಲ". 

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಭಾರತ ಅತ್ಯಂತ ಬಡತನ, ಕೋಮು ಗಲಭೆಯ ಗಾಯಗಳು ಮತ್ತು ಅನಕ್ಷರತೆಯಿಂದ ಕಂಗಾಲಾಗಿತ್ತು. ಅಂತಹ ಸಂದರ್ಭದಲ್ಲಿ ನೆಹರೂ ದೇಶವನ್ನು ಮುನ್ನಡೆಸಲು ಸಮಾಜವಾದಿ ಮತ್ತು ವೈಜ್ಞಾನಿಕ ಮನೋಭಾವದ ದಾರಿಯನ್ನು ಆಯ್ದುಕೊಂಡರು. ದೇಶದ ಭವಿಷ್ಯದ ಅಡಿಪಾಯವನ್ನು ನಿರ್ಮಿಸಿದರು. ಇಂದು ಭಾರತ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ವೈದ್ಯಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದರೆ ಅದಕ್ಕೆ ನೆಹರೂ ಸ್ಥಾಪಿಸಿದ IIT, IIM, AIIMS ಮತ್ತು ISRO (ಆಗಿನ INCOSPAR) ನಂತಹ ಸ್ವಾಯತ್ತ ಸಂಸ್ಥೆಗಳೇ ಕಾರಣ. ಇದು ಮೋದಿ ಕೂಡ ಅರಿತುಕೊಳ್ಳಬೇಕು. ಮೋದಿ, ಸಂಸತ್ತಿನಲ್ಲಿ, ಚುನಾವಣಾ ಪ್ರಚಾರ ಸಭೆಗಳಲ್ಲಿ ನೆಹರೂ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಬದಲು ಇವೆಲ್ಲಾ ಕನಿಷ್ಠ ಜ್ಞಾನವನ್ನಾದರೂ ತಿಳಿದುಕೊಳ್ಳಬೇಕಿದೆ. ನೆಹರೂ, ಸಂಸ್ಥೆಗಳನ್ನು ಕಟ್ಟಿದ್ದಾರೆ ವಿನಃ, ಮೋದಿಯ ಹಾಗೆ ಕಟ್ಟಿದ ಸಂಸ್ಥೆಗಳನ್ನು, ವ್ಯವಸ್ಥೆಯನ್ನು ಧ್ವಂಸಗೊಳಿಸಿಲ್ಲ(ಸಾಂಸ್ಥಿಕ ಧ್ವಂಸ). 

ಸ್ವಾತಂತ್ರ್ಯಾನಂತರ ಭಾರತದಲ್ಲಿದ್ದ ಖಾಸಗಿ ಬಂಡವಾಳಶಾಹಿಗಳು ದೇಶದ ಬಡತನ ನಿವಾರಿಸಲು ಸಶಕ್ತರಾಗಿರಲಿಲ್ಲ. ನೆಹರೂ ರಷ್ಯಾದ ಪಂಚವಾರ್ಷಿಕ ಯೋಜನೆಗಳಿಂದ ಪ್ರೇರಿತರಾಗಿ, ದೇಶದ ಸಂಪತ್ತು ಸಾರ್ವಜನಿಕರ ಆಸ್ತಿಯಾಗಬೇಕೆಂದು ಯೋಜನಾ ಆಯೋಗವನ್ನು (Planning Commission) ಸ್ಥಾಪಿಸಿದರು. ಬಿಎಚ್‌ಇಎಲ್ (BHEL), ಎಚ್‌ಎಎಲ್ (HAL), ಸ್ಟೀಲ್ ಅಥಾರಿಟಿ (SAIL)ನಂತಹ ಸಂಸ್ಥೆಗಳು ಕೇವಲ ಲಾಭಕ್ಕಾಗಿ ಅಲ್ಲದೆ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಲು ಮತ್ತು ಸಾಮಾಜಿಕ ನ್ಯಾಯ (ಮೀಸಲಾತಿ) ಒದಗಿಸಲು ಬಳಕೆಯಾದವು. 

ಜವಾಹರಲಾಲ್ ನೆಹರೂ ಅವರ ದೂರದೃಷ್ಟಿ ಮತ್ತು ವೈಜ್ಞಾನಿಕ ಆಲೋಚನೆಗಳು ಇಲ್ಲದಿದ್ದರೆ, ಇಂದಿನ ಆಧುನಿಕ ಭಾರತವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತ ಕೇವಲ ಬಡತನದ ದೇಶವಾಗಿರಲಿಲ್ಲ, ಅದು ಜಗತ್ತಿನ ಅತಿ ದೊಡ್ಡ ಸವಾಲಾಗಿತ್ತು.

ನೆಹರೂ ಅವರ ಆಲೋಚನೆಗಳು ಭಾರತವನ್ನು ಕೇವಲ ಒಂದು ದೇಶವಾಗಿ ಅಲ್ಲದೆ, ಒಂದು ಜಾಗತಿಕ ಶಕ್ತಿಯಾಗಿ ರೂಪ ತಾಳಿತ್ತು. 

ನೆಹರೂ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರು ಆಧುನಿಕ ಚಿಂತಕರಾಗಿದ್ದರು. ಭಾರತ ಧಾರ್ಮಿಕ ಅಂಧಕಾರ ಮತ್ತು ಮೂಢನಂಬಿಕೆಗಳಿಂದ ಹೊರಬರಬೇಕಾದರೆ ವಿಜ್ಞಾನವೇ ಏಕೈಕ ದಾರಿ ಎಂದು ಅವರು ಬಲವಾಗಿ ನಂಬಿದ್ದರು. 

ಇಂದು ಭಾರತ ಚಂದ್ರಯಾನ ಮತ್ತು ಮಂಗಳಯಾನದ ಮೂಲಕ ಜಗತ್ತೇ ಬೆರಗಾಗುವಂತೆ ಸಾಧನೆ ಮಾಡುತ್ತದೆ/ಮಾಡಿದೆ ಎಂದರೆ, ಅದಕ್ಕೆ 1962 ರಲ್ಲಿ ನೆಹರೂ ಮತ್ತು ವಿಕ್ರಮ್ ಸಾರಾಭಾಯಿ ಅವರ ಮುತುವರ್ಜಿಯಿಂದ ಸ್ಥಾಪನೆಯಾದ INCOSPAR (ಇಂದಿನ ಇಸ್ರೋ) ಕಾರಣ. ತಿನ್ನಲು ಅನ್ನವಿಲ್ಲದ ಕಾಲದಲ್ಲಿ ರಾಕೆಟ್ ಸಂಶೋಧನೆ ಬೇಕೇ ಎಂದು ಅಂದು ಹಲವರು ಅಂದು ಪ್ರಶ್ನಿಸಿದ್ದರು, ಆದರೆ ನೆಹರೂ ಅವರ ದೂರದೃಷ್ಟಿ ಇಂದಿನ ಯಶಸ್ಸಿಗೆ ತಳಹದಿಯಾಗಿದೆ ಎನ್ನುವುದು ಮುಖ್ಯಾಂಶ. ಹೊಮಿ ಜಹಾಂಗೀರ್ ಬಾಬಾ ಅವರ ಪ್ರತಿಭೆಯನ್ನು ಗುರುತಿಸಿ, ಭಾರತೀಯ ಪರಮಾಣು ಶಕ್ತಿ ಆಯೋಗವನ್ನು (BARC) ಸ್ಥಾಪಿಸಲು ನೆಹರೂ ಪೂರ್ಣ ಸ್ವಾತಂತ್ರ್ಯ ನೀಡಿದರು. ಇದು ಭಾರತವನ್ನು ಭವಿಷ್ಯದ ಇಂಧನ ಮತ್ತು ರಕ್ಷಣಾ ರಂಗದಲ್ಲಿ ಸ್ವಾವಲಂಬಿಯನ್ನಾಗಿ ಮಾಡಿತು. 

ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಸಾಕ್ಷರತಾ ಪ್ರಮಾಣ ಕೇವಲ ಶೇ. 12ರಷ್ಟಿತ್ತು. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ನಿರ್ಧಾರ ನೆಹರೂ ಅವರ ದೂರದೃಷ್ಟಿಗೆ ಸಾಕ್ಷಿ. 

ಇನ್ನು, ಇಂದು ಜಗತ್ತಿನ ಪ್ರಮುಖ ಐಟಿ ಕಂಪನಿಗಳ (ಗೂಗಲ್, ಮೈಕ್ರೋಸಾಫ್ಟ್ ಮುಂತಾದವು) ಸಿಇಒ ಹುದ್ದೆಗಳಲ್ಲಿ ಭಾರತೀಯರು ಮಿಂಚುತ್ತಿದ್ದಾರೆ ಎಂದರೆ, ಅದಕ್ಕೆ ನೆಹರೂ ಅಂದು ಅಮೆರಿಕದ ಎಂಐಟಿ ಮಾದರಿಯಲ್ಲಿ ದೇಶದಾದ್ಯಂತ ಸ್ಥಾಪಿಸಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಸಂಸ್ಥೆಗಳೇ ಮೂಲ ಕಾರಣ. 

ಬಡವರಿಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಮತ್ತು ಸಂಶೋಧನೆಗೆ ಅವಕಾಶ ಸಿಗಬೇಕೆಂದು AIIMS ಸಂಸ್ಥೆಯನ್ನು ಸ್ಥಾಪಿಸಿದರು. 

ಇನ್ನು, ಬ್ರಿಟಿಷರು ಭಾರತವನ್ನು ಸಂಪೂರ್ಣವಾಗಿ ಲೂಟಿ ಮಾಡಿ, ಕೃಷಿ ವ್ಯವಸ್ಥೆಯನ್ನು ಧ್ವಂಸಗೊಳಿಸಿದ್ದರು. ಹಸಿವಿನಿಂದ ನರಳುತ್ತಿದ್ದ ದೇಶಕ್ಕೆ ಅನ್ನ ನೀಡಲು ಬೃಹತ್ ಮೂಲಸೌಕರ್ಯಗಳ ಅಗತ್ಯವಿತ್ತು. ನೆಹರೂ ಅವರು ಬಕ್ರಾ ನಂಗಲ್, ದಾಮೋದರ್ ವ್ಯಾಲಿ ಮತ್ತು ಕರ್ನಾಟಕದ ತುಂಗಭದ್ರಾ ನಂತಹ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದರು. ಕೃಷಿಗೆ ನೀರಾವರಿ ಒದಗಿಸುವುದರ ಜೊತೆಗೆ ದೇಶಕ್ಕೆ ವಿದ್ಯುತ್ ಶಕ್ತಿ ನೀಡಿದ ಈ ಯೋಜನೆಗಳನ್ನು ಮರೆಯುವುದಕ್ಕೆ ಸಾಧ್ಯವಿದೆಯೆ ? ಸೂಜಿಗೂ ಪರದೇಶದ ಮೇಲೆ ಅವಲಂಬಿತವಾಗಿದ್ದ ಭಾರತದಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ರೂರ್ಕೆಲಾ, ಭಿಲಾಯ್ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಿ ದೇಶದ ಕೈಗಾರಿಕಾ ಕ್ರಾಂತಿಗೆ ವೇಗ ನೀಡಿದರು. 

ಮಾತ್ರವಲ್ಲದೆ, ಪ್ರಜಾಪ್ರಭುತ್ವ ಮತ್ತು ಬಹುತ್ವದ ರಕ್ಷಣೆಗೆ ನಿಂತರು. ಸ್ವಾತಂತ್ರ್ಯದ ಸಮಯದಲ್ಲಿ ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಸರ್ವಾಧಿಕಾರ ಅಥವಾ ಮಿಲಿಟರಿ ರೂಲ್ ಗೆ ಶರಣಾದವು. ಆದರೆ ಭಾರತ ಇಂದಿಗೂ ಜಗತ್ತಿನ ಅತಿ ದೊಡ್ಡ ಯಶಸ್ವಿ ಪ್ರಜಾಪ್ರಭುತ್ವವಾಗಿ ಉಳಿದಿದೆ ಎಂದರೆ ಅದಕ್ಕೆ ನೆಹರೂ ಸಾಂವಿಧಾನಿಕ ಮೌಲ್ಯಗಳಿಗೆ ನೀಡಿದ ಗೌರವವೇ ಕಾರಣ.

"ವೈವಿಧ್ಯತೆಯಲ್ಲಿ ಏಕತೆ" (Unity in Diversity) ಎನ್ನುವ ಮಂತ್ರದ ಮೂಲಕ ಭಾರತದ ನೂರಾರು ಭಾಷೆ, ಸಂಸ್ಕೃತಿ ಮತ್ತು ಧರ್ಮಗಳನ್ನು ಒಂದೇ ಸೂರಿನಡಿ ತರುವಲ್ಲಿ ನೆಹರೂ ಯಶಸ್ವಿಯಾದರು. ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರ ಸಣ್ಣ ಟೀಕೆಗೂ ಅವರು ತಲೆಬಾಗುತ್ತಿದ್ದರು, ಇದು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿತು. 

ವ್ಯವಸ್ಥಿತ ಆರ್ಥಿಕ ಬೆಳವಣಿಗೆ ಮತ್ತು ಗ್ರಾಮೀಣಾಭಿವೃದ್ಧಿ(ಯೋಜನಾ ಆಯೋಗ), ಯಾವುದೇ ಜಾಗತಿಕ ಬಣಕ್ಕೆ ಸೇರದೆ, ವಿಶ್ವಮಟ್ಟದಲ್ಲಿ ಭಾರತದ ಸ್ವತಂತ್ರ ಅಸ್ಮಿತೆ(ಅಲಿಪ್ತ ನೀತಿ), ಕೋಟ್ಯಂತರ ಶೋಷಿತ ಸಮುದಾಯಗಳಿಗೆ ಉದ್ಯೋಗ ಮತ್ತು ಸಾಮಾಜಿಕ ನ್ಯಾಯ (ಮೀಸಲಾತಿ)ವನ್ನು ಒಳಗೊಂಡು ನೆಹರೂ ನೀಡಿದ ಕೊಡುಗೆಗಳನ್ನು ಮೋದಿ ಇಂದು ನೆನೆಯದೇ ಕ್ರೆಡಿಟ್ ತೆಗೆದುಕೊಂಡರೇ, ಅದು ಅವರಿಗೆ ಆತ್ಮ ವಂಚನೆಯಾಗಿ ತಟ್ಟದೇ ಉಳಿಯುವುದಿಲ್ಲ. 

ಇನ್ನು, ಮೋದಿ ಸಾಧಿಸಿದ್ದೇನು ? ಮೋದಿಯವರ ಆಡಳಿತಾವಧಿಯನ್ನು "ಸಾಂಸ್ಥಿಕ ಧ್ವಂಸ" ಮತ್ತು "ಬಂಡವಾಳಶಾಹಿ ಪರ ಒಲವಿನ" ಕಾಲಘಟ್ಟ ಎಂದು ಕರೆಯುದು ಹೆಚ್ಚು ಸೂಕ್ತ. 

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮಗಳು, ಚುನಾವಣಾ ಆಯೋಗ, ಸಿಬಿಐ, ಇಡಿ ಮತ್ತು ಆರ್ ಬಿ ಐನಂತಹ ಸಂಸ್ಥೆಗಳು ಸ್ವಾಯತ್ತತೆಯನ್ನು ಕಳೆದುಕೊಂಡು ಆಡಳಿತ ಪಕ್ಷದ ಕೈಗೊಂಬೆಗಳಾಗಿವೆ ಎಂಬುದು ಇಂದಿನ ಬಹುದೊಡ್ಡ ಆತಂಕವಾಗಿದೆ. ನೆಹರೂ ಸಾರ್ವಜನಿಕ ಆಸ್ತಿಯನ್ನು ದೇಶದ ಜನರಿಗಾಗಿ ಕಾಯ್ದಿರಿಸಿದರೆ, ಮೋದಿ ಸರ್ಕಾರ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ರೈಲ್ವೆಯಂತಹ ಸಾರ್ವಜನಿಕ ವಲಯದ ಆಸ್ತಿಗಳನ್ನು ಕಾರ್ಪೊರೇಟ್ ಮಿತ್ರರ (ಅದಾನಿ, ಅಂಬಾನಿ ಮುಂತಾದವರ) ವಶಕ್ಕೆ ನೀಡಿದೆ. 

ದೇಶದ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿ ಕೋಮು ಧ್ರುವೀಕರಣ, ಸಿಎಎ-ಎನ್‌ಆರ್‌ಸಿ ವಿವಾದಗಳು, ಮುಸ್ಲಿಂ ಮತ್ತು ದಲಿತರ ಮೇಲಿನ ಸಾಂಸ್ಕೃತಿಕ ದಾಳಿಗಳು ಹೆಚ್ಚುತ್ತಿವೆ. ಒಕ್ಕೂಟ ವ್ಯವಸ್ಥೆಯನ್ನು ಹತ್ತಿಕ್ಕಿ 'ಏಕರೂಪದ' ಭಾರತವನ್ನು ಹೇರಲು ಯತ್ನಿಸಲಾಗುತ್ತಿದೆ. ಇಂತಹ ದುರಾಡಳಿತವನ್ನು ನೆಹರೂ ಕಾಲದ ಆಡಳಿತಕ್ಕಿಂತ ಮಿಗಿಲಾದದ್ದು ಎಂದು ಬಿಂಬಿಸಲು ಸಾಧ್ಯವಿದೆಯೇ ? 

ಇತಿಹಾಸದಲ್ಲಿ ನಾಯಕರನ್ನು ಕೇವಲ ಅವರು ಅಧಿಕಾರದಲ್ಲಿದ್ದ ದಿನಗಳ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ. ನೆಹರೂ ಅವರು ಭಾರತಕ್ಕೆ ಒಂದು ಪ್ರಜಾಪ್ರಭುತ್ವದ ಚೌಕಟ್ಟು ಮತ್ತು ಸಾಂಸ್ಥಿಕ ತಳಹದಿಯನ್ನು ನೀಡಿದರು. ಆದರೆ, ಇಂದಿನ ಮೋದಿ ಆಡಳಿತ ಆ ತಳಹದಿಯನ್ನೇ ಅಲ್ಲಾಡಿಸುತ್ತಿದೆ. ನೆಹರೂ ಅವರದ್ದು 'ಭಾರತವನ್ನು ಒಟ್ಟುಗೂಡಿಸುವ' (Idea of India) ಪ್ರಯತ್ನವಾಗಿದ್ದರೆ, ಮೋದಿಯವರದ್ದು 'ಏಕರೂಪದ ಸಾಂಸ್ಕೃತಿಕ ಅಧಿಪತ್ಯ' ಸ್ಥಾಪಿಸುವ ಯತ್ನವಾಗಿದೆ. ಹೀಗಾಗಿ, ಇವರಿಬ್ಬರ ನಡುವಿನ ಹೋಲಿಕೆ ಕೇವಲ ಅಂಕಿ-ಅಂಶಗಳಿಗೆ ಸೀಮಿತವೇ ಹೊರತು ಮೌಲ್ಯಗಳಲ್ಲಲ್ಲ ಎನ್ನುವುದು ಅಕ್ಷರಶಃ ಸತ್ಯ. 

ಇನ್ನು, ಮೋದಿ ಆಡಳಿತ Government has no business to be in business ಎಂಬ ಬಂಡವಾಳಶಾಹಿ ತತ್ವದ ಮೇಲೆ ನಡೆಯುತ್ತಿದೆ. ನೆಹರೂ ಯುಗದಲ್ಲಿ ನಿರ್ಮಾಣವಾದ LIC, BSNL, ಏರ್ ಇಂಡಿಯಾ, ಮತ್ತು ಪ್ರಮುಖ ಬಂದರು-ವಿಮಾನ ನಿಲ್ದಾಣಗಳನ್ನು ವ್ಯವಸ್ಥಿತವಾಗಿ ನಷ್ಟಕ್ಕೆ ತಳ್ಳಿ, ನಂತರ ಅವುಗಳನ್ನು ಅದಾನಿ, ಅಂಬಾನಿಯಂತಹ ಆಪ್ತ ಬಂಡವಾಳಶಾಹಿಗಳಿಗೆ (Cronies) ಧಾರೆ ಎರೆಯಲಾಗುತ್ತಿದೆ/ಲಾಗಿದೆ. ದೇಶದ ಶೇ. 1ರಷ್ಟು ಶ್ರೀಮಂತರ ಕೈಯಲ್ಲಿ ದೇಶದ ಶೇ. 40 ಕ್ಕಿಂತ ಹೆಚ್ಚು ಸಂಪತ್ತು ಶೇಖರಣೆಯಾಗಲು ದಾರಿ ಮಾಡಿಕೊಟ್ಟಿದ್ದೇ ನೆಹರೂ ಅವರನ್ನು ಆಡಳಿತದ ದಿನಗಳ ಅಂಕಿಅಂಶಗಳಲ್ಲಿ ಹಿಂದಿಕ್ಕಿದ ಇಂದಿನ ಪ್ರಧಾನಿ ಮೋದಿ ಎನ್ನುವುದು ಇಲ್ಲಿ ಉಲ್ಲೇಖಿಸಲೇಬೇಕು. 

ಇನ್ನು, ಮೋದಿಯವರ ಅವಧಿಯಲ್ಲಿ ಯೋಜನಾ ಆಯೋಗವನ್ನು ರದ್ದುಗೊಳಿಸಿ ತರಲಾದ 'ನೀತಿ ಆಯೋಗ' ಕೇವಲ ಸರ್ಕಾರದ ಪ್ರಚಾರದ ಅಂಗವಾಗಿದೆ ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಇಡಿ (ED), ಸಿಬಿಐ (CBI) ಮತ್ತು ಐಟಿ (IT) ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಂದ ಎಲೆಕ್ಟೋರಲ್ ಬಾಂಡ್‌ಗಳ (ಚುನಾವಣಾ ಬಾಂಡ್) ಮೂಲಕ ಹಣ ವಸೂಲಿ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಜಗಜ್ಜಾಹೀರಾಗಿದೆ. ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಗಳ ಮೇಲಿನ ಆಡಳಿತ ಪಕ್ಷದ ಹಿಡಿತ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. 

ನೆಹರೂ ಅವರು ಭಾರತದ ಸಂವಿಧಾನದಲ್ಲಿ 'ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆಯನ್ನು ಬೆಳೆಸುವುದು' ಪ್ರತಿಯೊಬ್ಬ ನಾಗರಿಕನ ಕರ್ತವ್ಯ (Article 51A(h)) ಎಂದು ಸೇರ್ಪಡೆಗೊಳಿಸಲು ಕಾರಣರಾದರು. ಮೂಢನಂಬಿಕೆ ಮತ್ತು ಕೋಮುವಾದದಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ನಂಬಿದ್ದ ಅವರು, ಐಐಟಿ ಮತ್ತು ಇಸ್ರೋದಂತಹ ವೈಜ್ಞಾನಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಮೋದಿ ಆಡಳಿತ ಇತಿಹಾಸವನ್ನು ತಿರುಚುವ, ಪಠ್ಯಪುಸ್ತಕಗಳಿಂದ ವಿಜ್ಞಾನ (ಡಾರ್ವಿನ್ ಸಿದ್ಧಾಂತ) ಮತ್ತು ಇತಿಹಾಸದ (ಮೊಘಲರು, ಗಾಂಧಿ ಹತ್ಯೆ) ಭಾಗಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತಿದೆ. ವೈಜ್ಞಾನಿಕ ಸಂಶೋಧನೆಗಳಿಗಿಂತ ಮೂಢನಂಬಿಕೆಗಳಿಗೆ ಒತ್ತು ನೀಡಲಾಗುತ್ತಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಕುಸಿತದಂತಹ ನೈಜ ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ಈಗ ನೀವೇ ಹೇಳಿ, ನೆಹರೂ ಅವರಿಗಿಂತ ಮೋದಿ ಗ್ರೇಟ್ ಎಂದು ಹೇಳುವುದಕ್ಕೆ ಸಾಧ್ಯವೆ!? 

ನೆಹರೂ ಭಾಷಾವಾರು ಪ್ರಾಂತ್ಯಗಳ ರಚನೆಗೆ ಆರಂಭದಲ್ಲಿ ಹಿಂಜರಿದರೂ, ಜನರ ಆಶಯಕ್ಕೆ ಗೌರವ ನೀಡಿ ಭಾಷಾ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡನೆಗೆ ನೆಹರೂ ಒಪ್ಪಿಗೆ ನೀಡಿದರು. ವಿವಿಧ ಸಂಸ್ಕೃತಿ ಮತ್ತು ಭಾಷೆಗಳ ವೈವಿಧ್ಯತೆಯನ್ನು ಗೌರವಿಸಿದರು. 'ಒಂದು ದೇಶ, ಒಂದು ಚುನಾವಣೆ', 'ಒಂದು ದೇಶ, ಒಂದು ಮಾರುಕಟ್ಟೆ' (GST) ಎನ್ನುವ ಮೂಲಕ ಮೋದಿಯವರು ರಾಜ್ಯಗಳ ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳಿರುವ ರಾಜ್ಯಗಳಿಗೆ ಜಿಎಸ್‌ಟಿ ಪಾಲು ಮತ್ತು ಬರ ಪರಿಹಾರ ನೀಡದೆ ಸಾಂವಿಧಾನಿಕವಾಗಿ ವಂಚಿಸಲಾಗುತ್ತಿದೆ. ಈಗ ನೀವೇ ಹೇಳಿ ನೆಹರೂ ಅವರ ಆಡಳಿತವನ್ನು ದುರಾಡಳಿತ ಎನ್ನಬೇಕೆ  ಅಥವಾ ಮೋದಿಯವರ ಆಡಳಿತವನ್ನು ದುರಾಡಳಿತ ಎನ್ನಬೇಕೆ? 

ನರೇಂದ್ರ ಮೋದಿಯವರು ನೆಹರೂ ಅವರಿಗಿಂತ ಹೆಚ್ಚು ದಿನ ಅಧಿಕಾರ ನಡೆಸರಬಹುದು, ಆದರೆ ಇತಿಹಾಸವು ಒಬ್ಬ ನಾಯಕನನ್ನು ಆತ ನಿರ್ಮಿಸಿದ ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ಅಳೆಯುತ್ತದೆಯೇ ಹೊರತು ಆತ ಪಡೆದ ಅಧಿಕಾರದ ದಿನಗಳ ಮೇಲಲ್ಲ. ನೆಹರೂ ಅವರು ಭಾರತವನ್ನು ಆಧುನಿಕತೆಯತ್ತ, ಪ್ರಗತಿಪರತೆಯತ್ತ ಕೊಂಡೊಯ್ಯಲು ಶ್ರಮಿಸಿದರೆ, ಮೋದಿಯವರ ಆಡಳಿತವು ದೇಶವನ್ನು ಕಾರ್ಪೊರೇಟ್‌ಗಳ ಗುಲಾಮಗಿರಿಯತ್ತ ಮತ್ತು ಮಧ್ಯಯುಗದ ಧಾರ್ಮಿಕ ಅಂಧಕಾರದತ್ತ ತಳ್ಳುತ್ತಿದೆ. ಹೀಗಾಗಿ, ಈ ಇಬ್ಬರು ನಾಯಕರ ನಡುವಿನ ಹೋಲಿಕೆ "ಸಂಸ್ಥೆಗಳನ್ನು ನಿರ್ಮಿಸಿದ ಮುತ್ಸದ್ದಿ" ಮತ್ತು "ಸಂಸ್ಥೆಗಳನ್ನು ಧ್ವಂಸ ಮಾಡಿದ ರಾಜಕಾರಣಿ" ನಡುವಿನ ಹೋಲಿಕೆಯಾಗಿದೆ. 

ಸಮಸಮಾಜವನ್ನು ತನ್ನ ರಾಜಕೀಯದ ಮೂಲಕ ಇಬ್ಭಾಗ ಮಾಡಿ ಆಳುತ್ತಾ ಬಂದಿರುವ ಮೋದಿ, ತಾವು ಧರಿಸಿರುವ ಪೋಷಾಕಿನಿಂದ, ಟೆಲಿ ಪ್ರಾಂಪ್ಟರ್ ಬಳಸಿ ಬರೆದುಕೊಟ್ಟಿರುವ ಭಾಷಣವನ್ನು ಓದುವುದರಿಂದ, ಹೋದಲ್ಲೆಲ್ಲಾ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದನ್ನು ನೋಡಿ ಬೆರಗಾಗಬಹುದು. ಆದರೇ, ಇಂತಹ ದುರಾಡಳಿತ ಕೊಟ್ಟ ಮತ್ತೊಬ್ಬ ಪ್ರಧಾನಿ ಈ ದೇಶ ಇದುವರೆಗೆ ಕಂಡಿಲ್ಲ ಎನ್ನುವುದು ಅಕ್ಷರಶಃ ಸತ್ಯ. 

ಇನ್ನು,ವಿರೋಧ ಪಕ್ಷಗಳನ್ನು ಪ್ರಜಾಪ್ರಭುತ್ವದ ಸಹಭಾಗಿಗಳಾಗಿ ನೋಡುವ ಬದಲು, ಶತ್ರುಗಳಂತೆ ಬಿಂಬಿಸಲಾಗುತ್ತಿದೆ. 'ವಿಪಕ್ಷ ಮುಕ್ತ ಭಾರತ' ಎಂಬ ಘೋಷಣೆಯೇ ಇದಕ್ಕೆ ಸಾಕ್ಷಿ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ಭಿನ್ನಾಭಿಪ್ರಾಯ ಹೊಂದಿರುವವರನ್ನು, ಪ್ರಶ್ನೆ ಮಾಡುವ ಪತ್ರಕರ್ತರನ್ನು 'ದೇಶದ್ರೋಹಿಗಳು' ಅಥವಾ 'ಅರ್ಬನ್ ನಕ್ಸಲರು' ಎಂದು ಹಣೆಪಟ್ಟಿ ಕಟ್ಟುವ ಪ್ರವೃತ್ತಿ ಹೆಚ್ಚಾಗಿದೆ. ರೈತರ ಹೋರಾಟ, CAA ವಿರುದ್ಧ ನಡೆದ ಪ್ರತಿಭಟನೆಗಳನ್ನು ಸರ್ಕಾರ ದ್ವೇಷದ ಕಣ್ಣಿನಿಂದ ನೋಡಿ, ಪ್ರತಿಭಟನಾಕಾರರನ್ನು ಕ್ರಿಮಿನಲ್‌ಗಳಂತೆ ಬಿಂಬಿಸಲು ತನ್ನ ಅಧಿಕಾರವನ್ನು ಬಳಸಿಕೊಂಡಿರುವುದು ನಮ್ಮ ಮುಂದೆ ಪ್ರತ್ಯಕ್ಷವಾಗಿದೆ. 

ಇನ್ನು, ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ (Tax Cuts) ನೀಡುತ್ತಿರುವ ಮೋದಿ ನೇತೃತ್ವದ ಸರ್ಕಾರ, ಸಾಮಾನ್ಯ ಜನರು ಬಳಸುವ ಹಾಲು, ಮೊಸರು, ಅಕ್ಕಿಯಂತಹ ದಿನಬಳಕೆಯ ವಸ್ತುಗಳ ಮೇಲೂ ಜಿಎಸ್‌ಟಿ (GST) ಹೇರಿ ಬಡವರ ರಕ್ತ ಹೀರುತ್ತಿದೆ. ಸಂಪತ್ತಿನ ಅಸಮಾನತೆ ಭಾರತದಲ್ಲಿ ಹಿಂದೆಂದೂ ಇಲ್ಲದ ಮಟ್ಟಕ್ಕೆ ಏರಿಕೆಯಾಗಿದೆ. ಹೀಗಿರುವಾಗ ಯಾವ ಕಾರಣಕ್ಕೆ ನೆಹರೂ ಅವರಿಗಿಂತ ಮೋದಿ ಶ್ರೇಷ್ಠ ಎಂದು ಅವರ ಅನುಯಾಯಿಗಳು ಬಿಂಬಿಸಲು ಯತ್ನಿಸುತ್ತಿದ್ದಾರೆ‌ ಎನ್ನುವುದೇ ಪ್ರಬಲ ಯಕ್ಷ ಪ್ರಶ್ನೆ. 

ಗಮನಿಸಿ, ಮೋದಿ ಆಡಳಿತ ಭಾರತದ ಮೂಲಾಧಾರವಾದ 'ಜಾತ್ಯತೀತತೆ' ಮತ್ತು 'ಬಹುತ್ವ'ವನ್ನು ಧ್ವಂಸಗೊಳಿಸಿ, ಬಹುಸಂಖ್ಯಾತ ಹಿಂದುತ್ವದ ಅಧಿಪತ್ಯವನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂಬುದು ಜಾಗತಿಕ ಮಟ್ಟದಲ್ಲೂ ಚರ್ಚೆಯಾಗುತ್ತಿರುವ ವಿಷಯ. ವಿವಾದಗಳ ಮೂಲಕ ಸಮಾಜದಲ್ಲಿ ಸದಾ ಉದ್ವಿಗ್ನತೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಭೀಕರ ಘಟನೆಗಳು ನಡೆದಾಗಲೂ ಪ್ರಧಾನಿಯವರು ವಹಿಸಿದ ಮೌನ, ಆಡಳಿತ ಪಕ್ಷ ದ್ವೇಷದ ರಾಜಕಾರಣಕ್ಕೆ ನೀಡುತ್ತಿರುವ ಪರೋಕ್ಷ ಬೆಂಬಲವನ್ನು ತೋರಿಸುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಕಟುವಾಗಿ ಟೀಕಿಸಿವೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ. 

ಮೋದಿ ಸರ್ಕಾರ, ಕೇವಲ ಪಿಆರ್ (PR) ಮತ್ತು ಮಾಧ್ಯಮಗಳ ಪ್ರಚಾರದ ಮೂಲಕವೇ ಆಡಳಿತ ನಡೆಸಲಾಗುತ್ತಿದೆಯೇ ಹೊರತು, ವಾಸ್ತವದಲ್ಲಿ ದೇಶದ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. 

ಯಾವುದೇ ಪೂರ್ವಸಿದ್ಧತೆ ಇಲ್ಲದೆ ಜಾರಿಗೆ ತಂದ 'ನೋಟು ಅಮಾನ್ಯೀಕರಣ' (Demonetization) ದೇಶದ ಆರ್ಥಿಕತೆಯನ್ನು ಸಮಾಧಿ ಮಾಡಿತು. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಅದೇ ರೀತಿ, ಕೋವಿಡ್ ಸಮಯದಲ್ಲಿ ತರಾತುರಿಯಲ್ಲಿ ಘೋಷಿಸಿದ ಲಾಕ್‌ಡೌನ್ ಕೋಟ್ಯಂತರ ವಲಸೆ ಕಾರ್ಮಿಕರನ್ನು ಬೀದಿಗೆ ತಳ್ಳಿ ಮಾನವೀಯ ಬಿಕ್ಕಟ್ಟು ಸೃಷ್ಟಿಸಿತು. 

ದೇಶದಲ್ಲಿ ನಿರುದ್ಯೋಗ ದರ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಪದವೀಧರ ಯುವಕರಿಗೆ ಕೆಲಸವಿಲ್ಲದೆ ಪಕೋಡ ಮಾರುವ ಪರಿಸ್ಥಿತಿ ಬಂದಿದೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆಗಳು ಗಗನಕ್ಕೇರಿದ್ದು, ಸಾಮಾನ್ಯ ಕುಟುಂಬಗಳು ಜೀವನ ನಡೆಸಲಾರದಷ್ಟು ದುರಾಡಳಿತ ಕಾರ್ಮೋಡ ಆವರಿಸಿದೆ ಎನ್ನುವುದು ಪ್ರಮುಖಾಂಶ. 

ಒಟ್ಟಿನಲ್ಲಿ, ನರೇಂದ್ರ ಮೋದಿಯವರ ಆಡಳಿತ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿಲ್ಲ, ಬದಲಿಗೆ ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನೇ ಬುಡಮೇಲು ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನೆಹರೂ ಆಡಳಿತದ ವೈಜ್ಞಾನಿಕ ಭಾರತವನ್ನು, ಇಂದು ಕಾರ್ಪೊರೇಟ್‌ಗಳ ಲಾಭಕ್ಕಾಗಿ ಮತ್ತು ಸಾಂಸ್ಕೃತಿಕ ಅಧಿಪತ್ಯಕ್ಕಾಗಿ ಬಲಿ ಕೊಡಲಾಗುತ್ತಿದೆ ಎನ್ನುವುದಂತೂ ಪರಮ ಸತ್ಯ. ಹೀಗಿರುವಾಗ ನೆಹರೂ ಅವರ ಆಡಳಿತಕ್ಕಿಂದ ಮೋದಿ ಆಡಳಿತ ಸುಭಿಕ್ಷೆಯಿಂದ ಕೂಡಿದೆ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಈ ದೇಶದ ದುರಂತಗಳಲ್ಲೊಂದು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

 -ಶ್ರೀರಾಜ್ ವಕ್ವಾಡಿ

Friday, June 5, 2026

ರಾಜ್ಯ ಬಿಜೆಪಿಯ ಹಿಂದಿರುವ ದಿಲ್ಲಿ ಮಾಸ್ಟರ್ ಮೈಂಡ್ ಗಳಿಗೆ ಕೌಂಟರ್ ಬಿ.ಕೆ ಹರಿಪ್ರಸಾದ್ !?


"ಅಧಿಕಾರ ಇರಲಿ, ಇಲ್ಲದಿರಲಿ, ಸಿದ್ಧಾಂತ ಮುಖ್ಯ" ಎಂಬ ನಿಲುವುಳ್ಳ ಹರಿಪ್ರಸಾದ್ ಅವರಿಗೆ  ಕಾಂಗ್ರೆಸ್ ಪಕ್ಷ ನೀಡಿದ ಈ ಜವಾಬ್ದಾರಿ, ನೆಹರೂವಾದಿ ಜಾತ್ಯತೀತತೆ ಮತ್ತು ಸಮಾಜವಾದಿ ತತ್ವಗಳನ್ನು ಕಾಂಗ್ರೆಸ್‌ನಲ್ಲಿ ಮರುಸ್ಥಾಪಿಸಲು ನೆರವಾಗಲಿದೆ. ಇನ್ನು, ಹರಿಪ್ರಸಾದ್ ದಶಕಗಳ ಕಾಲ ದೆಹಲಿ ರಾಜಕಾರಣದಲ್ಲಿದ್ದವರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸಂಸದೀಯ ಹಾಗೂ ಸಾಂಸ್ಥಿಕ ತಂತ್ರಗಳನ್ನು ಹತ್ತಿರದಿಂದ ನೋಡಿದವರು. ರಾಜ್ಯ ಬಿಜೆಪಿಯ ಹಿಂದಿರುವ 'ದಿಲ್ಲಿ ಮಾಸ್ಟರ್ ಮೈಂಡ್'ಗಳಿಗೆ ಕೌಂಟರ್ ಕೊಡಲು ಹರಿಪ್ರಸಾದ್ ಸಮರ್ಥರು ಎನ್ನುವುದರಲ್ಲಿ ಸಂಶಯವಿಲ್ಲ.

ಭಾರತೀಯ ರಾಜಕಾರಣ ಹಿಂದೆಂದೂ ಕಾಣದಷ್ಟು ಬಲಪಂಥೀಯ ಕೋಮುವಾದಿ ಅಲೆಗೆ ಸಿಲುಕಿರುವ ಈ ಹೊತ್ತಿನಲ್ಲಿ, ಕಾಂಗ್ರೆಸ್‌ಗೆ ಕೇವಲ ಚುನಾವಣಾ ತಂತ್ರಗಾರರಲ್ಲ, ಬದಲಿಗೆ ರಾಜಿರಹಿತ ಸೈದ್ಧಾಂತಿಕ ಬದ್ಧತೆಯುಳ್ಳ ನಾಯಕರ ಅಗತ್ಯವಿದೆ. ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲೂ, ರಾಜ್ಯ ಮಟ್ಟದಲ್ಲೂ ಪಕ್ಷ ಸಂಘಟನೆಯ ವಿಷಯದಲ್ಲಿ ಪರದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕೂರಿಸಿದೆ‌. ಅವರಿಗೆ ಪಕ್ಷದ ಸಂಘಟನಾತ್ಮಕ ಜವಾಬ್ದಾರಿ ಸಿಕ್ಕಿರುವುದು ಕೇವಲ ಒಂದು ರಾಜಕೀಯ ಜವಾಬ್ದಾರಿಯಲ್ಲ, ಇದು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಪುನರುತ್ಥಾನದ ಮುನ್ನುಡಿ ಎಂದರೇ ತಪ್ಪಿಲ್ಲ. 

ಇವತ್ತಿನ ಬಹುಪಾಲು ಕಾಂಗ್ರೆಸ್ ನಾಯಕರು ಸಾಫ್ಟ್ ಹಿಂದುತ್ವ (Soft Hindutva) ಅಥವಾ ತಟಸ್ಥ ನಿಲುವುಗಳ ಮೂಲಕ ಬಹುಸಂಖ್ಯಾತ ಮತಬ್ಯಾಂಕ್ ಓಲೈಸಲು ಹೆಣಗಾಡುತ್ತಿದ್ದಾರೆ. ಆದರೆ, ಬಿ.ಕೆ. ಹರಿಪ್ರಸಾದ್ ಈ ಧೋರಣೆಗೆ ವಿರುದ್ಧವಾಗಿ ನಿಲ್ಲುವವರು. ನೆಹರೂ ಆಡಳಿತದ ಪ್ರಬಲ ಸಮರ್ಥಕರಾಗಿ, ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ, ಪಕ್ಷದ ಸಿದ್ಧಾಂತಗಳಿಗೆ ನಿಷ್ಠೆಯಿಂದ, ಗಾಂಧಿ ಕುಟುಂಬಕ್ಕೆ ವಿದೇಯರಾಗಿದ್ದುಕೊಂಡು ಪ್ರಗತಿಪರ ಚಿಂತನೆಯ ಮೂಲಕ ಸಮಸಮಾಜವನ್ನು ನೋಡುವ ಹರಿಪ್ರಸಾದ್ ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ತರಬಲ್ಲರು ಎನ್ನುವ ನಿರೀಕ್ಷೆ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆ.  

ಸಂಘ ಪರಿವಾರ ಮತ್ತು ಬಿಜೆಪಿಯ ಕೋಮುವಾದಿ ಅಜೆಂಡಾವನ್ನು ಯಾವುದೇ ಮುಲಾಜಿಲ್ಲದೆ, ನೇರ ನುಡಿಗಳಲ್ಲಿ ಟೀಕಿಸುವ ಕೆಲವೇ ಕೆಲವು ನಾಯಕರಲ್ಲಿ ಹರಿಪ್ರಸಾದ್ ಮುಂಚೂಣಿಯಲ್ಲಿದ್ದಾರೆ. ಅವರ ಈ ರಾಜಿರಹಿತ ಜಾತ್ಯತೀತ ನಿಲುವು, ರಾಜ್ಯದ ಸಮಸಮಾಜ ಚಿಂತನೆಯ ಮತ್ತು ಪ್ರಗತಿಪರ ಶಕ್ತಿಗಳು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಒಂದು ಭದ್ರವಾದ ಸೇತುವೆಯಾಗಬಲ್ಲರು ಎನ್ನುವುದರಲ್ಲಿ ಸಂಶಯವಿಲ್ಲ. 

ಕಾಂಗ್ರೆಸ್ ಪಕ್ಷದ ದುರಿತ ಕಾಲದಲ್ಲಿ ಸಿಕ್ಕ ಸೈದ್ಧಾಂತಿಕ ಬಲ : 

ಕಾಂಗ್ರೆಸ್ ಸದ್ಯ ಅಧಿಕಾರ ಮತ್ತು ಅಸ್ತಿತ್ವದ ಹೋರಾಟದಲ್ಲಿದೆ. ಇಂತಹ "ದುರಿತ ಕಾಲ"ದಲ್ಲಿ ಪಕ್ಷಕ್ಕೆ ಬೇಕಿರುವುದು ಚುನಾವಣಾ ಗಿಮಿಕ್‌ಗಳಲ್ಲ, ಬದಲಿಗೆ ಕಾರ್ಯಕರ್ತರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ತುಂಬುವ ನಾಯಕತ್ವ. "ಅಧಿಕಾರ ಇರಲಿ, ಇಲ್ಲದಿರಲಿ, ಸಿದ್ಧಾಂತ ಮುಖ್ಯ" ಎಂಬ ನಿಲುವುಳ್ಳ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಪಕ್ಷ ನೀಡಿದ ಈ ಜವಾಬ್ದಾರಿ, ನೆಹರೂವಾದಿ ಜಾತ್ಯತೀತತೆ ಮತ್ತು ಸಮಾಜವಾದಿ ತತ್ವಗಳನ್ನು ಕಾಂಗ್ರೆಸ್‌ನಲ್ಲಿ ಮರುಸ್ಥಾಪಿಸಲು ನೆರವಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. "ಪ್ರತಿರೋಧದ ರಾಜಕಾರಣ"ಕ್ಕೆ ಪ್ರಾಥಮಿಕವಾಗಿ ಇದು ಕರ್ನಾಟಕದ ಮಟ್ಟಿಗೆ ಹೊಸ ಚೈತನ್ಯ ನೀಡಿ, ಮುಂದೆ ರಾಷ್ಟ್ರೀಯ ಮಟ್ಟಕ್ಕೆ ಮಾದರಿಯಾಗಬಹುದು. 

ಇನ್ನು, ವಿದ್ಯಾರ್ಥಿ ದೆಸೆಯಿಂದಲೇ ಪಕ್ಷ ಕಟ್ಟಿದ ಹರಿಪ್ರಸಾದ್ ಅವರಿಗೆ ದೇಶದ ಮೂಲೆ ಮೂಲೆಗಳ ರಾಜಕೀಯ ನಾಡಿಮಿಡಿತ ಗೊತ್ತಿದೆ. ರಾಜ್ಯಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಅವರು ಸಂಸತ್ತಿನಲ್ಲಿ ತೋರಿದ ಆಕ್ರಮಣಕಾರಿ ಶೈಲಿ ಶ್ಲಾಘನೀಯ. ಈಗ ಅವರಿಗೆ ಸಿಕ್ಕಿರುವ ಸಾಂಘಿಕ ಜವಾಬ್ದಾರಿ, ಪಕ್ಷದ ಸಡಿಲಗೊಂಡಿರುವ ತಳಪಾಯವನ್ನು ಭದ್ರಪಡಿಸಲು ಸಹಕಾರಿಯಾಗಲಿದೆ. 

ಬಿಜೆಪಿಗೆ ಸಿದ್ದರಾಮಯ್ಯರಿಗಿಂತಲೂ ದೊಡ್ಡ ಸವಾಲಾಗಬಲ್ಲರೇ ಬಿ.ಕೆ. ಹರಿಪ್ರಸಾದ್?

ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ಎಂದರೆ ಸಮಾಜವಾದಿ ಹಿನ್ನೆಲೆಯ, ಜನಸಾಮಾನ್ಯರ ನಾಡಿಮಿಡಿತ ಬಲ್ಲ ಮಾಸ್ ಲೀಡರ್ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಇವತ್ತಿನ ಆಕ್ರಮಣಕಾರಿ, ಸೈದ್ಧಾಂತಿಕ ಮತ್ತು ಸಾಂಸ್ಥಿಕ ಶಕ್ತಿಯನ್ನು ವೃದ್ಧಿಸಿಕೊಂಡಿರುವ ಬಿಜೆಪಿಯನ್ನು ಎದುರಿಸಲು ಕೇವಲ ಜನಪ್ರಿಯತೆ (Populism) ಸಾಕಾಗುವುದಿಲ್ಲ, ಅಲ್ಲಿ ಬೇಕಿರುವುದು ರಾಜಿರಹಿತ ಸೈದ್ಧಾಂತಿಕ ಕಠಿಣತೆ ಮತ್ತು ದೆಹಲಿ ಮಟ್ಟದ ತಂತ್ರಗಾರಿಕೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಬಿ.ಕೆ. ಹರಿಪ್ರಸಾದ್ ಅವರು ರಾಜ್ಯ ಬಿಜೆಪಿಗೆ ಸಿದ್ದರಾಮಯ್ಯ ಅವರಿಗಿಂತಲೂ ದೊಡ್ಡ ಸವಾಲಾಗಿ ಪರಿಣಮಿಸುತ್ತಾರೆ ಎಂಬ ವಿಶ್ಲೇಷಣೆಯನ್ನು ತಳ್ಳಿಹಾಕುವಂತಿಲ್ಲ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ, ರಾಜಕೀಯ ಠೀವಿ ಬೇರೆಯಾದರೇ, ಹರಿಪ್ರಸಾದ್ ಅವರ ರಾಜಕೀಯ ಶೈಲಿಯೇ ಬೇರೆ. ಸಿದ್ದರಾಮಯ್ಯ ಅವರನ್ನು ಆಡಳಿತದಲ್ಲಿ ಸೋಲಿಸಲು ಬಿಜೆಪಿಗೆ ಸವಾಲಾಗಿತ್ತು. ಈಗ ಬಿ.ಕೆ ಹರಿಪ್ರಸಾದ್ ಅವರ ಪ್ರಬಲ ಪ್ರತಿರೋಧದ ಧ್ವನಿ ಮತ್ತು ಸಂಘಟನೆಯ ಚತುರತೆ ಬಿಜೆಪಿಗೆ ಇನ್ನೂ ದೊಡ್ಡ ಸವಾಲಾಗಿ ಎದುರಾಗಬಹುದು. 

ಹರಿಪ್ರಸಾದ್ ಅವರು ಬಿಜೆಪಿಯ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ನ ಸೈದ್ಧಾಂತಿಕ ಬೇರುಗಳನ್ನೇ ನೇರವಾಗಿ ಪ್ರಶ್ನಿಸುತ್ತಾರೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಧ್ರುವೀಕರಣವನ್ನು ಅವರು ಸಂವಿಧಾನದ ಚೌಕಟ್ಟಿನಲ್ಲೇ ನಿಂತು ಬೆತ್ತಲೆಗೊಳಿಸುವುದರಿಂದ, ಬಿಜೆಪಿಗೆ ಇವರನ್ನು ಎದುರಿಸುವುದು ಸೈದ್ಧಾಂತಿಕವಾಗಿ ದಿಗಿಲು ಮೂಡಿಸುವ ವಿಷಯವಾಗಿದೆ. 

ಇನ್ನು, ಹರಿಪ್ರಸಾದ್ ದಶಕಗಳ ಕಾಲ ದೆಹಲಿ ರಾಜಕಾರಣದಲ್ಲಿದ್ದವರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸಂಸದೀಯ ಹಾಗೂ ಸಾಂಸ್ಥಿಕ ತಂತ್ರಗಳನ್ನು ಹತ್ತಿರದಿಂದ ನೋಡಿದವರು. ದೇಶದ ವಿವಿಧ ರಾಜ್ಯಗಳಲ್ಲಿ ಎಡರಂಗ ಸೇರಿದಂತೆ ಮೈತ್ರಿಕೂಟದ ಪಕ್ಷಗಳನ್ನು ಒಗ್ಗೂಡಿಸಿದ ಅನುಭವ ಇವರಿಗಿದೆ. ಹೀಗಾಗಿ, ರಾಜ್ಯ ಬಿಜೆಪಿಯ ಹಿಂದಿರುವ 'ದಿಲ್ಲಿ ಮಾಸ್ಟರ್ ಮೈಂಡ್'ಗಳಿಗೆ ಕೌಂಟರ್ ಕೊಡಲು ಹರಿಪ್ರಸಾದ್ ಸಮರ್ಥರು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅಧಿಕಾರದ ರಾಜಕಾರಣ ಮತ್ತು ಆಡಳಿತಾತ್ಮಕ ಒತ್ತಡಗಳಿಂದಾಗಿ ಕೆಲವು ಸೈದ್ಧಾಂತಿಕ ರಾಜಿಗಳನ್ನು ಮಾಡಿಕೊಳ್ಳಬೇಕಾಗಿ ಬಂದಿತ್ತು. 

ಆದರೆ, ಹರಿಪ್ರಸಾದ್ ಸದ್ಯ ಯಾವುದೇ ಅಧಿಕಾರದ ಆಸೆಗೆ ಬಿದ್ದವರಲ್ಲ. ಅಧಿಕಾರವಿಲ್ಲದಿದ್ದರೂ ತಳಮಟ್ಟದ ದಲಿತ, ಶೋಷಿತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಬಿಜೆಪಿಯ 'ಒಬಿಸಿ ಕಾರ್ಡ್ (OBC Card)' ಅನ್ನು ಸೈದ್ಧಾಂತಿಕವಾಗಿ ಸೋಲಿಸುವ ಶಕ್ತಿ ಅವರ ಸಮಾಜವಾದಿ ನಿಲುವುಗಳಿಗಿದೆ.

ಬಿ.ಕೆ ಹರಿಪ್ರಸಾದ್ ಮಾಧ್ಯಮಗಳಿಗೂ ಸವಾಲು !? 

ಬಿಜೆಪಿಯ ಸೈದ್ಧಾಂತಿಕ ರಾಜಕಾರಣದ ವಿರುದ್ಧ ಆಕ್ರಮಣಕಾರಿ ಧ್ವನಿ ಎತ್ತಲು ಶುರು ಮಾಡಿದರೋ, ಆಗಿನಿಂದಲೇ ಕನ್ನಡದ ಪ್ರಮುಖ ಮುಖ್ಯವಾಹಿನಿ ಮಾಧ್ಯಮಗಳು (Mainstream Media) ಅವರನ್ನು ಗುರಿ ಮಾಡುತ್ತ ಬಂದಿವೆ. ಇದನ್ನು ಸರಿಯಾಗಿ ಗುರುತಿಸಿರುವ ಹರಿಪ್ರಸಾದ್, ಇತ್ತೀಚೆಗೆ ಕನ್ನಡ ಮಾಧ್ಯಮಗಳ ಪಕ್ಷಪಾತ ಧೋರಣೆಯ ವಿರುದ್ಧ ಕಟು ಶಬ್ದಗಳಲ್ಲಿ ಎಚ್ಚರಿಸಿದ್ದರು. ಇದು ಕೇವಲ ಎಚ್ಚರಿಕೆ ಅಲ್ಲ, ಬದಲಿಗೆ ಇದು "ಗೋದಿ ಮೀಡಿಯಾ" (Godi Media) ಸಂಸ್ಕೃತಿಯ ವಿರುದ್ಧದ ಸೈದ್ಧಾಂತಿಕ ಯುದ್ಧ. 

ಇವತ್ತಿನ ಬಹುಪಾಲು ಕನ್ನಡ ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕೆಗಳು ಬಂಡವಾಳಶಾಹಿಗಳ ಹಾಗೂ ಬಲಪಂಥೀಯ ಸಿದ್ಧಾಂತದ ಹಿತಾಸಕ್ತಿ ಕಾಯುವ ಸಾಧನಗಳಾಗಿವೆ ಎನ್ನುವುದು ಕಾಂಗ್ರೆಸ್ ನ ಗಂಭೀರ ಆರೋಪ. 

ಜನಸಾಮಾನ್ಯರ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳಿಗಿಂತ ಧರ್ಮ, ಕೋಮು ಧ್ರುವೀಕರಣ ಮತ್ತು ನಕಲಿ ರಾಷ್ಟ್ರೀಯತೆಯ ವಿಷಯಗಳನ್ನೇ ಇಟ್ಟುಕೊಂಡು ಟಿಆರ್‌ಪಿ (TRP) ಹಿಂದೆ ಓಡುವ ಮಾಧ್ಯಮಗಳಿಗೆ ಹರಿಪ್ರಸಾದ್ ನೇರವಾಗಿಯೇ ಕನ್ನಡಿಯಾಗಬಲ್ಲರು. 

ಮಾಧ್ಯಮಗಳು ಕಾರ್ಪೊರೇಟ್‌ಗಳ ಮತ್ತು ಕೋಮುವಾದಿಗಳ ಕೈಗೊಂಬೆಯಾಗುವುದನ್ನು ನಿಲ್ಲಿಸಿ, ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ನಿಲ್ಲದಿದ್ದರೆ ತಮ್ಮ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತವೆ ಎಂಬ ಕಟು ಸತ್ಯದ ಮನವರಿಕೆಯನ್ನು ಮಾಧ್ಯಮಗಳ ಕೆಲವು/ಬಹುತೇಕ ಸೋ ಕಾಲ್ಡ್ ವರದಿಗಾರರಿಗೆ ತಮ್ಮ ಪ್ರತಿಕ್ರಿಯೆಯ ಮೂಲಕವೇ ಮಾಡಬಹುದು. 

ಹರಿಪ್ರಸಾದ್ ಮುಂದಿರುವ ಸವಾಲುಗಳೇನು !? 

ಪಕ್ಷ ಮತ್ತು ಪಕ್ಷದ ವಿಚಾರದಲ್ಲಿ ರಾಜಿ ಇಲ್ಲದ ನಿಲುವು ಹರಿಪ್ರಸಾದ್ ಅವರದ್ದು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಹರಿಪ್ರಸಾದ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಹಿಂದ ಸಮಾವೇಶಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಈ ಹಿಂದಿನಿಂದಲೂ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ಜಗಜ್ಜಾಹೀರು. ಕೆಪಿಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಬಿ.ಕೆ. ಹರಿಪ್ರಸಾದ್, "ಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಪಕ್ಷ ಬೆಳೆಸುವವರು ನನ್ನ ಜೊತೆ ಬನ್ನಿ" ಎಂದು ಖಡಕ್ ಹೇಳಿಕೆ ನೀಡಿ ಗಮನ ಸೆಳೆದಿದ್ದರು. ಇದು ಡಿಕೆಶಿಗೆ ಪರೋಕ್ಷ ಎಚ್ಚರಿಕೆಯೂ ಹೌದು. 

ಇನ್ನು, ಅವರು ಬಿಜೆಪಿ, ಮೋದಿ ವಿರುದ್ಧ ತೀವ್ರ ಸೈದ್ಧಾಂತಿಕ ವಾಗ್ದಾಳಿ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಅವರಾಡಿದ ಮಾತುಗಳು ಬಿಜೆಪಿಗೆ ಅಸ್ತ್ರವಾಗಿದೆ. ಈ ಎಲ್ಲಾ ಸೂಕ್ಷ್ಮ ವಿಷಯಗಳ ಬಗ್ಗೆ ಎಚ್ಚರದಿಂದಲೇ ಹರಿಪ್ರಸಾದ್ ನಡೆದುಕೊಳ್ಳಬೇಕಿದೆ. 

ಸರ್ಕಾರ ಮತ್ತು ಸಂಘಟನೆಯ ನಡುವೆ ಸಮನ್ವಯ ಸಾಧಿಸಬೇಕಿದೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಮತ ಮತ್ತು ಬಣ ರಾಜಕಾರಣದ ಶಮನ ಮಾಡಬೇಕಿದೆ. ತಳಮಟ್ಟದಲ್ಲಿ ಸೈದ್ಧಾಂತಿಕ ಕೇಡರ್ (Cadre) ಶಕ್ತಿಯನ್ನು ಮರುಸ್ಥಾಪಿಸಬೇಕಿದೆ. ವಿರೋಧ ಪಕ್ಷಗಳ ಸಾಂಸ್ಥಿಕ ಹೋರಾಟಕ್ಕೆ ತೀಕ್ಷ್ಣ ಹಾಗೂ ಸೈದ್ಧಾಂತಿಕ ಪ್ರತಿಕ್ರಿಯೆ ನೀಡುವ ದೊಡ್ಡ ಸವಾಲಿನ ಜೊತೆಗೆ 2028ರ ಚುನಾವಣೆಗೂ ತಯಾರಿ ಮಾಡಿಕೊಳ್ಳಬೇಕಿದೆ. ತಮ್ಮ ವೈಯಕ್ತಿಕ ಖಡಕ್ ನಿಲುವುಗಳು ಪಕ್ಷಕ್ಕೆ ಮುಜುಗರ ತರದಂತೆ ನೋಡಿಕೊಳ್ಳುತ್ತಲೇ, ವಿರೋಧ ಪಕ್ಷಗಳ ಸೈದ್ಧಾಂತಿಕ ದಾಳಿಗೆ ಕೌಂಟರ್ ಕೊಡಬೇಕಿದೆ. 

ಒಟ್ಟಿನಲ್ಲಿ, ವಿರೋಧಿಗಳ ವೈಯಕ್ತಿಕ ದಾಳಿ ಮತ್ತು ಆಂತರಿಕ ಭಿನ್ನಮತವನ್ನು ಬದಿಗೊತ್ತಿ, ಅವರು ತಳಮಟ್ಟದಲ್ಲಿ ಸೈದ್ಧಾಂತಿಕ ಕೇಡರ್ ಕಟ್ಟಲು ಯಶಸ್ವಿಯಾದರೆ, ಅವರು ಕೇವಲ ಬಿಜೆಪಿಗೆ ಮಾತ್ರವಲ್ಲ, ಇಡೀ ಬಲಪಂಥೀಯ ಅಜೆಂಡಾಕ್ಕೆ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಸವಾಲಾಗಲಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. 

-ಶ್ರೀರಾಜ್ ವಕ್ವಾಡಿ

Wednesday, June 3, 2026

ಸಾಂವಿಧಾನಿಕ ಮೌಲ್ಯಗಳ ಮರುಸ್ಥಾಪನೆಯ ಸವಾಲಿನೊಂದಿಗೆ ಡಿ.ಕೆ ಶಿವಕುಮಾರ್ ಶಕೆ ಆರಂಭ !


ಮುಂದಿನ ಚುನಾವಣೆಯಲ್ಲೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲೇಬೇಕಾದ ‘ಅಲಿಖಿತ ಗುತ್ತಿಗೆ’ಯನ್ನು ಹೆಗಲಿಗೇರಿಸಿಕೊಂಡು ಡಿಕೆಶಿ ಮುಳ್ಳಿನ ಸಿಂಹಾಸನದ ಮೇಲೆ ಕೂತಿದ್ದಾರೆ. ಇನ್ನು, ಇಷ್ಟು ದಿನ ಡಿಕೆಶಿ ವಶದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಈಗ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಗಲೇರಿದೆ. ಹೈಕಮಾಂಡ್‌ನ ಈ ನಡೆ ಕೇವಲ ಅಧಿಕಾರ ಹಂಚಿಕೆಯಲ್ಲ, ಬದಲಿಗೆ ಸರ್ಕಾರದ ಮೇಲೆ ಸಿದ್ಧಾಂತದ ಮತ್ತು ಸಂಘಟನೆಯ ಕಣ್ಗಾವಲು ಇಡುವ ಚಾಣಾಕ್ಷ ತಂತ್ರ.

ಮತದಾರರ ಪಟ್ಟಿ ಪರಿಷ್ಕರಣೆ, ಮತಗಳ ದುರುದ್ದೇಶಪೂರಿತ ಡಿಲೀಷನ್ (ತೆಗೆದುಹಾಕುವುದು) ಮತ್ತು ಇಸಿಐನ ಪಕ್ಷಪಾತದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಈಗ ಕಾಂಗ್ರೆಸ್ ಮತ್ತು ಸಿಎಂ ಡಿಕೆಶಿ ಹೆಗಲಿಗೇರಿದೆ.

ಕೊನೆಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ರಾಜಕೀಯ ಜಿದ್ದಾಜಿದ್ದಿಗೆ ತೆರೆ ಬಿದ್ದಿದ್ದು, ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಯಶಸ್ವಿಯಾದ ‘ಸಂಘಟನಾ ಚತುರ’ನಿಗೆ ಈಗ ಆಡಳಿತದ ಚುಕ್ಕಾಣಿ ಸಿಕ್ಕಿದೆ.

ಬಂಡೆಗೆ ಬಂಡೆಯೇ ಅಡ್ಡಿ ಎನ್ನುವ ರೀತಿಯಲ್ಲಿದ್ದ ಸಿದ್ದರಾಮಯ್ಯರಿಂದ ಹೈಕಮಾಂಡ್ ನ ಕೃಪಾಪೋಷಣೆಯಿಂದಲೇ ವಿಶ್ವಾಸಾತ್ಮಕವಾಗಿ ಮುಖ್ಯಮಂತ್ರಿ ಪದವಿಯನ್ನು ಯಶಸ್ವಿಯಾಗಿ ಗಿಟ್ಟಿಸಿಕೊಂಡ ಡಿಕೆಶಿ ತಮ್ಮಲ್ಲಿ ಇರಿಸಿಕೊಂಡ ಕನಸಿನಂತೆಯೇ ಆಡಳಿತ ಯಂತ್ರವನ್ನು ಮುಂದೆ ಸಾಗಿಸುತ್ತಾರೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಒಬ್ಬ ದೂರದೃಷ್ಟಿ ಉಳ್ಳ ನಾಯಕ ಎನ್ನುವುದನ್ನು ಡಿಕೆಶಿ ಅನೇಕ ಬಾರಿ ಸಾಬೀತು ಮಾಡಿದ್ದಾರೆ. ಆದರೆ, ಡಿಕೆಶಿ ಅವರ ಸಾಫ್ಟ್ ಹಿಂದುತ್ವವನ್ನು ಒಪ್ಪದ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಬಣದಲ್ಲಿರುವ ನಾಯಕರು ಡಿಕೆಶಿಗೆ ಸುಗಮ ಆಡಳಿತವನ್ನು ನಡೆಸಲು ಬಿಡುತ್ತಾರಾ ಎನ್ನುವ ಪ್ರಶ್ನೆಯೂ ಸಹಜವಾಗಿ ಮೂಡಿದೆ. ಅಧಿಕಾರ ಸ್ವೀಕಾರದ ಸಂಭ್ರಮದ ಬೆನ್ನಲ್ಲೇ ಅವರ ಮುಂದೆ ಕಠಿಣ ಸವಾಲುಗಳ ಬೆಟ್ಟವೇ ನಿಂತಿದೆ ಎನ್ನುವುದು ಇದರ ಅರ್ಥ. 

ಕಳೆದ ಕೆಲವು ವರ್ಷಗಳಿಂದೀಚೆಗೆ ಕರ್ನಾಟಕ ಎದುರಿಸಿದ ಅತಿ ದೊಡ್ಡ ಹಿನ್ನಡೆಯೆಂದರೆ ಕೋಮು ಧ್ರುವೀಕರಣ ರಾಜಕಾರಣ. ಬಿಜೆಪಿ ನೇತೃತ್ವದ ಸರ್ಕಾರದ ಹಿಂದುತ್ವ ರಾಜಕಾರಣದ ಎದುರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅತ್ಯಂತ ಅಭೂತಪೂರ್ವವಾಗಿ ಅಧಿಕಾರಕ್ಕೇರಿತ್ತು ಕಾಂಗ್ರೆಸ್. ರಾಜ್ಯದಲ್ಲಿ ಕಾಂಗ್ರೆಸ್ ನ ಸಮಾಜವಾದಿ ಸಿದ್ಧಾಂತಕ್ಕೆ ಮುಖವಾಗಿದ್ದ ಸಿದ್ದರಾಮಯ್ಯ 

ಈಗ ಅಧಿಕಾರದಿಂದ ಹೊರಗಿರುವುದು ಡಿಕೆಶಿ ಮತ್ತು ಕಾಂಗ್ರೆಸ್ ಗೆ ದೊಡ್ಡ ಸವಾಲು. ಈ ಸವಾಲನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸಬೇಕಾದರೇ, ಡಿಕೆಶಿ ಆದಿಯಾಗಿ ಕಾಂಗ್ರೆಸ್ ನ ಎಲ್ಲಾ ನಾಯಕರು ಸಾಂವಿಧಾನಿಕ ಮೌಲ್ಯಗಳನ್ನು ಮರುಸ್ಥಾಪನೆಗೆ ಮುಂದಾಗಬೇಕಿದೆ. ಅಧಿಕಾರದ ಹಪಾಹಪಿಯನ್ನು ಬಿಟ್ಟು, ಪ್ರತಿಷ್ಠೆಯ ರಾಜಕಾರಣಕ್ಕೆ ಕಾಂಗ್ರೆಸ್ ನಾಯಕರು ಕೊನೆಯ ಚುಕ್ಕಿ ಇಟ್ಟು ಆಡಳಿತ ನಡೆಸಬೇಕಿದೆ. 

‘ಅಧಿಕಾರ’ದ ಸವಲತ್ತಲ್ಲ, ಮುಂದಿನ ಚುನಾವಣೆಯ ‘ಅಗ್ನಿಪರೀಕ್ಷೆ’!

ದೀರ್ಘಕಾಲದ ರಾಜಕೀಯ ತಂತ್ರಗಾರಿಕೆ, ಹಠ ಮತ್ತು ಸಂಘಟನಾ ಬಲದ ಪ್ರದರ್ಶನದ ಮೂಲಕ ಡಿ.ಕೆ. ಶಿವಕುಮಾರ್ ಕೊನೆಗೂ ಕಾಂಗ್ರೆಸ್ ಹೈಕಮಾಂಡ್‌ನಿಂದ ಮುಖ್ಯಮಂತ್ರಿ ಪದವಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಅಧಿಕಾರ ಅವರಿಗೆ ಸುಲಭವಾಗಿ ಸಿಕ್ಕಿದ್ದಲ್ಲ, ಇದರ ಹಿಂದೆ ಹೈಕಮಾಂಡ್‌ನ ಕಠಿಣ ಬೇಡಿಕೆಗಳು ಮತ್ತು ಭವಿಷ್ಯದ ದೊಡ್ಡ ಜವಾಬ್ದಾರಿಯ ಸವಾಲಿದೆ. ಮುಂದಿನ ಚುನಾವಣೆಯಲ್ಲೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲೇಬೇಕಾದ ‘ಅಲಿಖಿತ ಗುತ್ತಿಗೆ’ಯನ್ನು ಹೆಗಲಿಗೇರಿಸಿಕೊಂಡು ಡಿಕೆಶಿ ಮುಳ್ಳಿನ ಸಿಂಹಾಸನದ ಮೇಲೆ ಕೂತಿದ್ದಾರೆ.

ಕಾಂಗ್ರೆಸ್ ಕೇಂದ್ರ ನಾಯಕತ್ವಕ್ಕೆ ಡಿ.ಕೆ. ಶಿವಕುಮಾರ್ ಅವರ ಮೇಲಿರುವುದು ಒಬ್ಬ ಉತ್ತಮ ಆಡಳಿತಗಾರ ಎನ್ನುವುದಕ್ಕಿಂತ ಹೆಚ್ಚಾಗಿ ‘ಅಪ್ರತಿಮ ಸಂಘಟಕ’ ಮತ್ತು ‘ಸಂಪನ್ಮೂಲ ಕ್ರೋಢೀಕರಿಸುವ ನಾಯಕ’ ಎಂಬ ನಂಬಿಕೆ. ಪಕ್ಷಕ್ಕೆ ಬೇಕಾದಾಗೆಲ್ಲಾ ಡಿಕೆಶಿ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದಾರೆ. ಪಕ್ಷವನ್ನು ಕಟ್ಟಿದ್ದಾರೆ. ಪಕ್ಷಕ್ಕೆ ನಿಷ್ಠೆಯಿಂದಲೂ ನಡೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಉಪಕಾರ ಸ್ಮರಣೆಯ ಕೊಡುಗೆಯಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ.  ಅದರ ಜೊತೆಗೆ ಡಿಕೆಶಿ ಆ ಸ್ಥಾನಕ್ಕೆ ಸಮರ್ಥರೂ ಕೂಡ ಹೌದು. ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಹೆಗಲಿಗೆ ಹೊರಿಸಿರುವ ಮುಖ್ಯ ಜವಾಬ್ದಾರಿ ಎಂದರೆ, ಮುಂದಿನ ಚುನಾವಣೆಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವುದು. ಇದರರ್ಥ, ಇಂದಿನಿಂದಲೇ ಅವರು ಮುಂದಿನ ಚುನಾವಣೆಯ ತಂತ್ರಗಾರಿಕೆಗೆ ಚಾಲನೆ ನೀಡಬೇಕಿದೆ. 

ಜೊತೆಗೆ ಒಂದು ಪ್ರಜಾಪ್ರಭುತ್ವ ಸರ್ಕಾರ ಐದು ವರ್ಷಗಳ ಕಾಲ ಜನರ ಕಲ್ಯಾಣಕ್ಕಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಆದರೆ, ಮುಂದಿನ ಚುನಾವಣೆಯ ಜವಾಬ್ದಾರಿಯ ಒತ್ತಡ ಸಿಎಂ ಡಿ.ಕೆ ಶಿವಕುಮಾರ್ ಮೇಲಿರುವುದರಿಂದ, ಇಡೀ ಆಡಳಿತ ವ್ಯವಸ್ಥೆ ಸದಾ ‘ಚುನಾವಣಾ ಮೂಡ್’ನಲ್ಲೇ ಇರುವ ಸಾಧ್ಯತೆ ಹೆಚ್ಚು. ಚುನಾವಣಾ ಲಾಭ ತಂದುಕೊಡುವ ತತ್ಕಾಲದ ರಾಜಕೀಯ ಗಿಮಿಕ್‌ಗಳಿಗೆ ಸರ್ಕಾರ ಆದ್ಯತೆ ನೀಡುವ ಅಪಾಯದ ತಿರುಗಣಿಗೆ ಬೀಳದಂತೆ ಡಿಕೆಶಿ ನೋಡಿಕೊಳ್ಳಬೇಕಿದೆ. ಆ ಜವಾಬ್ದಾರಿ ಹೈಕಮಾಂಡ್ ಗೂ ಇದೆ.  ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಬೇಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳನ್ನೂ ಯಶಸ್ವಿಯಾಗಿ ಮುಂದುವರಿಸಬೇಕಿದೆ. ಕಾಂಗ್ರೆಸ್ ನ ಜಾತ್ಯತೀತ ಮತ್ತು ಸಮಾಜವಾದಿ ಸಿದ್ಧಾಂತಕ್ಕೆ ಒತ್ತು ನೀಡಬೇಕಿದೆ. ಇನ್ನು, ಕರ್ನಾಟಕದ ಸಂಪನ್ಮೂಲಗಳು ದಿಲ್ಲಿ ಕಾಂಗ್ರೆಸ್‌ನ ರಾಜಕೀಯ ಹಿತಾಸಕ್ತಿಗೆ ಬಳಕೆಯಾಗಿದೆ. ರಾಜ್ಯದ ಬಡವರ, ಶ್ರಮಿಕರ ಕಲ್ಯಾಣಕ್ಕೆ ಬಳಕೆಯಾಗಬೇಕಿರುವುದು ಅಷ್ಟೇ ಮುಖ್ಯ. 

ಇನ್ನು, ಹೈಕಮಾಂಡ್‌ನಿಂದ ಬೇಡಿಕೆ ಈಡೇರಿಸಿಕೊಂಡ ತೃಪ್ತಿ ಡಿಕೆಶಿ ಅವರಿಗಿದ್ದರೂ, ಪಕ್ಷದೊಳಗಿನ ತಮ್ಮ ವಿರುದ್ಧದ ಬಣಗಳನ್ನು ಸಮಾಧಾನಪಡಿಸುವುದು ಮತ್ತು ಸಂಪುಟದಲ್ಲಿ ಎಲ್ಲ ಪ್ರಗತಿಪರ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ನೀಡುವುದು ಸಣ್ಣ ಸವಾಲಲ್ಲ. ಅಧಿಕಾರದ ಹಂಚಿಕೆ ಕೇವಲ ವ್ಯಕ್ತಿಗತ ಹಿತಾಸಕ್ತಿಗಳ ಮೇಲಾಗದೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ನಡೆಯಬೇಕಿದೆ. 

ಡಿಕೆಶಿ ಮತ್ತು ಹರಿಪ್ರಸಾದ್ ಸಾರಥ್ಯ : 

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬೆನ್ನಲ್ಲೇ, ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ (KPCC) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಮತ್ತು ಆಸಕ್ತಿದಾಯಕ ತಿರುವು. ಪಕ್ಷ ಸಂಘಟನೆಯಲ್ಲಿ ಹಿರಿಯರಾದ, ಸದಾ ಸಮಾಜವಾದಿ, ಪ್ರಗತಿಪರ ಸಿದ್ಧಾಂತಕ್ಕೆ ಆಪ್ತರಾಗಿರುವ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಮನ್ವಯ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೆ, ಇಷ್ಟು ದಿನ ಡಿಕೆಶಿ ವಶದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಈಗ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಗಲೇರಿದೆ. ಹೈಕಮಾಂಡ್‌ನ ಈ ನಡೆ ಕೇವಲ ಅಧಿಕಾರ ಹಂಚಿಕೆಯಲ್ಲ, ಬದಲಿಗೆ ಸರ್ಕಾರದ ಮೇಲೆ ಸಿದ್ಧಾಂತದ ಮತ್ತು ಸಂಘಟನೆಯ ಕಣ್ಣಾವಲು ಇಡುವ ಚಾಣಾಕ್ಷ ತಂತ್ರ. 

ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದೊಳಗಿರುವ ಧೀಮಂತ ಸಮಾಜವಾದಿ, ಪ್ರಗತಿಪರ ಧ್ವನಿ. ಸಮಾಜವಾದಿ ಸಿದ್ಧಾಂತ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಸದಾ ರಾಜಿಯಿಲ್ಲದೆ ಮಾತನಾಡುವ ನಾಯಕ. ಇನ್ನೊಂದೆಡೆ, ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣ ಪ್ರಾಯೋಗಿಕ (Practical), ಸಂಪನ್ಮೂಲ ಕ್ರೋಢೀಕರಣ ಮತ್ತು ಬಿಕ್ಕಟ್ಟು ನಿವಾರಣೆಯ ‘ರಿಯಲ್ ಪಾಲಿಟಿಕ್ಸ್’ ನಾಯಕ.

ಹಿಂದೆ ಇವರಿಬ್ಬರ ನಡುವೆ ಇದ್ದ ರಾಜಕೀಯ ಭಿನ್ನಾಭಿಪ್ರಾಯಗಳು ಜಗಜ್ಜಾಹೀರು. ಆದರೆ, ಈಗ ಹೈಕಮಾಂಡ್ ಇಬ್ಬರ ಹೆಗಲಿಗೂ ಸಮಾನ ಜವಾಬ್ದಾರಿ ನೀಡಿದೆ. ಡಿಕೆಶಿ ಅವರಿಗೆ ‘ಮುಂದಿನ ಚುನಾವಣೆಯಲ್ಲೂ ಗೆಲ್ಲಿಸುವ’ ಸರ್ಕಾರ ನಡೆಸುವ ಜವಾಬ್ದಾರಿ ಇದ್ದರೆ, ಹರಿಪ್ರಸಾದ್ ಅವರಿಗೆ ‘ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಸಿದ್ಧಾಂತದೊಂದಿಗೆ ಸೆಳೆಯುವ’ ಜವಾಬ್ದಾರಿ ಇದೆ.

ಸರ್ಕಾರ ಮತ್ತು ಸಂಘಟನೆ (ಪಕ್ಷ) ಪರಸ್ಪರ ಮುಖಾಮುಖಿಯಾಗದೆ, ಹಳಿ ತಪ್ಪದಂತೆ ಸಾಗಬೇಕಿದೆ. ಹರಿಪ್ರಸಾದ್ ಅವರ ದೆಹಲಿ ರಾಜಕಾರಣದ ಅನುಭವ ಮತ್ತು ಹೈಕಮಾಂಡ್ ಜೊತೆಗಿನ ನೇರ ಸಂಪರ್ಕ, ಡಿಕೆಶಿ ಅವರಿಗೆ ದೆಹಲಿ ಮಟ್ಟದಲ್ಲಿ ರಕ್ಷಣಾ ಕವಚವಾಗಿಯೂ ಕೆಲಸ ಮಾಡಬಹುದು ಅಥವಾ ಅತಿಯಾದ ಹಸ್ತಕ್ಷೇಪವಾಗಿ ಪರಿಣಮಿಸಬಹುದು. ಇದು ಇವರಿಬ್ಬರ ಹೊಂದಾಣಿಕೆಯ ಮೇಲೆ ನಿರ್ಧಾರವಾಗಲಿದೆ ಎನ್ನುವುದು ಇಲ್ಲಿ ಮುಖ್ಯಾಂಶ. 

ಕರ್ನಾಟಕದಲ್ಲಿ ಕೋಮು ಸೌಹಾರ್ದತೆ ಮರುಸ್ಥಾಪನೆ ಮತ್ತು ಹಿಂದುಳಿದ ವರ್ಗಗಳ ಹಿತರಕ್ಷಣೆ ವಿಷಯದಲ್ಲಿ ಬಿ.ಕೆ. ಹರಿಪ್ರಸಾದ್ ಎಂದಿಗೂ ಆಕ್ರಮಣಕಾರಿ ನಿಲುವುಳ್ಳವರು. ಡಿಕೆಶಿ ಅವರು ಕೆಲವೊಮ್ಮೆ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸಾಫ್ಟ್ ಹಿಂದುತ್ವ ಅಥವಾ ಹೊಂದಾಣಿಕೆ ರಾಜಕಾರಣಕ್ಕೆ ಮುಂದಾದರೆ, ಹರಿಪ್ರಸಾದ್ ಅವರ ಕೆಪಿಸಿಸಿ ನಾಯಕತ್ವ ಅದನ್ನು ತಡೆದು ನಿಲ್ಲಿಸಲಿದೆ. ಕೋಮು ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಹರಿಪ್ರಸಾದ್ ಅವರ ಪ್ರಭಾವ ಸರ್ಕಾರವನ್ನು ಸರಿಯಾದ ಹಾದಿಯಲ್ಲಿ ನಡೆಸಲು ನೆರವಾಗಲಿದೆ. ಹಾಗಾಗಿ ಈ ಇಬ್ಬರು ನಾಯಕರ ನೇತೃತ್ವ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಾಯ ಬರೆಯಬಹುದು ಎನ್ನುವ ರಾಜಕೀಯ ಎಕ್ಕಾಚಾರಗಳಿವೆ. 

ಡಿಕೆಶಿ ಮುಂದಿದೆ ಎಸ್.ಐ.ಆರ್ (SIR) ಅಗ್ನಿಪರೀಕ್ಷೆ : 

ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ಕೇವಲ ಆಡಳಿತಾತ್ಮಕ ಸವಾಲುಗಳು ಮಾತ್ರವಲ್ಲದೆ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಗಂಭೀರ ಸಾಂಸ್ಥಿಕ ಸವಾಲೊಂದಿದೆ.‌ 

ಮತದಾರರ ಪಟ್ಟಿ ಪರಿಷ್ಕರಣೆ, ಮತಗಳ ದುರುದ್ದೇಶಪೂರಿತ ಡಿಲೀಷನ್ (ತೆಗೆದುಹಾಕುವುದು) ಮತ್ತು ಸಾಂಸ್ಥಿಕ ಪಕ್ಷಪಾತದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಈಗ ಕಾಂಗ್ರೆಸ್ ಮತ್ತು ಸಿಎಂ ಡಿಕೆಶಿ ಹೆಗಲಿಗೇರಿದೆ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಗೊಂದಲಕ್ಕೆ ಕಾರಣವಾಗಿರುವ ಎಸ್ ಐ ಆರ್ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುವ ಹಾಗೆ ನೋಡಿಕೊಳ್ಳಬೇಕಿದೆ. 

ಕೇಂದ್ರ ಚುನಾವಣಾ ಆಯೋಗದ (ECI) ಪಕ್ಷಪಾತದ ನೀತಿಗಳು ಹಾಗೂ ಸಾಂಸ್ಥಿಕ ದುರುಪಯೋಗದ ವಿರುದ್ಧ ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳು ಈಗಾಗಲೇ ಹೋರಾಟಕ್ಕೆ ಇಳಿದಿದ್ದು, ಡಿಕೆಶಿ ನೇತೃತ್ವದ ಸರ್ಕಾರವೂ ಸಮರ್ಥವಾಗಿ ಕೇಂದ್ರ ಚುನಾವಣಾ ಆಯೋಗದ ಪಕ್ಷಪಾತಿ ನಿಲುವಿನ ವಿರುದ್ಧ ಧ್ವನಿ ಎತ್ತಬೇಕಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.

ಒಟ್ಟಿನಲ್ಲಿ, ಚುನಾವಣೆಗೆ ಇನ್ನು ಎರಡು ವರ್ಷಗಳು ಮಾತ್ರ ಬಾಕಿ ಇರುವಾಗ ಸವಾಲಿನ ಬೆಟ್ಟವನ್ನು ಡಿಕೆಶಿ ಎದುರಿಸಲೇಬೇಕಿದೆ. ಹೈಕಮಾಂಡ್‌ನ ಷರತ್ತನ್ನು ಡಿಕೆಶಿ ಕೇವಲ ರಾಜಕೀಯವಾಗಿ ಎದುರಿಸುತ್ತಾರೋ ಅಥವಾ ಜನಪರ ಆಡಳಿತದ ಮೂಲಕ ಉತ್ತರಿಸುತ್ತಾರೋ ಎನ್ನುವುದು ಅಕ್ಷರಶಃ ಕುತೂಹಲ ಕೆರಳಿಸಿದೆ. ಅಧಿಕಾರದ ಹಾದಿ ಹೂವಿನ ಹಾಸಿಗೆಯಲ್ಲ, ಅದು ಮುಳ್ಳಿನ ಹಾದಿ ಎನ್ನುವುದು ನೂತನ ಸಿಎಂಗೆ ಚೆನ್ನಾಗಿಯೇ ಗೊತ್ತು. ಬಿಕ್ಕಟ್ಟುಗಳನ್ನು ಬಗೆಹರಿಸುವ 'ಟ್ರಬಲ್ ಶೂಟರ್' ಆಗಿ ಉಳಿಯದೆ, ಜನಸಾಮಾನ್ಯರ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟುಗಳನ್ನು ನೀಗಿಸುವ 'ಜನನಾಯಕ'ನಾಗಿ ಹೊರಹೊಮ್ಮಬೇಕಿದೆ. ಬಂಡವಾಳಶಾಹಿ ಧೋರಣೆ ಮತ್ತು ಜನಕಲ್ಯಾಣದ ನಡುವೆ ಅವರು ಸಮತೋಲನ ಕಾಯ್ದುಕೊಳ್ಳುತ್ತಾರಾ? ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಮಲತಾಯಿ ಧೋರಣೆಯ ನಡುವೆಯೂ ರಾಜ್ಯದ ಹಕ್ಕುಗಳನ್ನು ಹೇಗೆ ರಕ್ಷಿಸುತ್ತಾರೆ ಎಂಬುದರ ಮೇಲೆ ಈ ಸರ್ಕಾರದ ಯಶಸ್ಸು ನಿರ್ಧಾರವಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. 

-ಶ್ರೀರಾಜ್ ವಕ್ವಾಡಿ