Wednesday, May 25, 2022

ಜನಾಂಗೀಯ ದ್ವೇಷದ ಕರಿನೆರಳು ಬಿತ್ತಿದ ರಾಜಪಕ್ಸೆ


 ಹೈಪರ್ ರಾಷ್ಟ್ರೀಯವಾದಿ ರಾಜಪಕ್ಸೆ, ಅಲ್ಪಸಂಖ್ಯಾತ ತಮಿಳರ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಿದ್ದ..!

ಸರ್ವಾಧಿಕಾರದ ಕರಿನೆರಳನ್ನು ಒಪ್ಪುವ ದೇಶ ಅಧಪತನಗೊಳ್ಳುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ಕಂಡು ಸೊರಗಿದ ಶ್ರೀಲಂಕಾವೇ ಸಾಕ್ಷಿ. ಸುಮಾರು ಐದು ದಶಕಗಳ ನಂತರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸುತ್ತಿದೆ. ಗೋಡೆಗೆ ಹಚ್ಚಿದ ಹೊಸ ಬಣ್ಣವನ್ನೇ ಅಭಿವೃದ್ಧಿ ಎಂದು ನಂಬಿದ ಜನ ಬೀದಿ ಬೀದಿಗಳಲ್ಲಿ ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟಿರುವುದಕ್ಕೆ ಮುಖ್ಯ ಕಾರಣವೇ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ ಎಂದೇ ಹೇಳಲಾಗುತ್ತಿದೆ. ಶ್ರೀಲಂಕಾ ದೇಶಕಂಡ ಅತ್ಯಂತ ಕೆಟ್ಟ ಪ್ರಧಾನಮಂತ್ರಿ ಎಂಬ ಪಟ್ಟಕ್ಕೆ ರಾಜಪಕ್ಸೆ ಸೇರ್ಪಡೆಗೊಂಡಿದ್ದಾರೆ. 

ಪ್ರಚಾರದ ಹುಚ್ಚಿನಿಂದಲೇ ಪ್ರಧಾನಮಂತ್ರಿ ಸ್ಥಾನಕ್ಕೇರಿದ ಮಹಿಂದಾ ರಾಜಪಕ್ಸೆ ಆರಂಭದಿಂದಾದಿಯಾಗಿ ತಳೆದಿದ್ದು ಸರ್ವಾಧಿಕಾರ ಧೋರಣೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ದೇಶದ ಜನರಿಗೆ ಸುಳ್ಳು ಭರವಸೆ ನೀಡುತ್ತಲೇ ಅಭಿವೃದ್ಧಿ ಹೆಸರಿನಲ್ಲಿ ನಂಬಿಸಿದ. ಶ್ರೀಲಂಕಾ ದೇಶ ಇಂದು ಅತ್ಯಂತ ಕೆಟ್ಟ ಸ್ಥಿತಿಗೆ ಬರುವುದಕ್ಕೆ ನೇರಾನೇರ ಕಾರಣವೇ ರಾಜಪಕ್ಸೆ. ಹೈಪರ್ ಶ್ರೀಲಂಕಾ ರಾಷ್ಟ್ರೀಯವಾದಿ ಹೆಸರಿನಲ್ಲಿ ಆಡಳಿತ ನಡೆಸಿದ ಮಹಿಂದಾ ಮಾಡಿದ್ದು ಜನರನ್ನು ಉದ್ರಿಕ್ತಗೊಳಿಸಿದ್ದು ಅಷ್ಟೇ. ಹೌದು ಸರ್ವಾಧಿಕಾರ, ಜನಾಂಗೀಯವಾದ, ಭಾಷಾವಾದ, ಕೋಮುವಾದದ ವಿಚಾರವಾಗಿ ಶ್ರೀಲಂಕಾ ಇಡೀ ಜಗತ್ತಿಗೆ ದೊಡ್ಡ ಪಾಠವನ್ನೇ ನೀಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ರಾಷ್ಟ್ರೀಯವಾದ ಬೇರೆ, ಆಕ್ರಮಣಕಾರಿ ರಾಷ್ಟ್ರೀಯವಾದ ಬೇರೆ. ಶ್ರೀಲಂಕಾದಲ್ಲಿ ತನಗೆ ಪರ್ಯಾಯವೇ ಇಲ್ಲ ಎಂಬ ಭ್ರಮೆಯಲ್ಲಿಯೇ ಆಡಳಿತ ನಡೆಸಿದ ರಾಜಪಕ್ಸೆ ತನ್ನ ಮಾತುಗಳಲ್ಲಿ, ಧರ್ಮ, ಜನಾಂಗ, ಭಾಷೆಯ ವಾದದ ಮಾತನಾಡಿ ಜನರನ್ನು ಭ್ರಮೆಯಲ್ಲಿಯೇ ತೇಲಿಸಿ ದೇಶದ ಅಷ್ಟೂ ಆರ್ಥಿಕ ವ್ಯವಸ್ಥೆಯೇ ತನ್ನ ಕುಟುಂಬದ ಕೈಯಡಿಗೆ ಬರುವಷ್ಟರ ಮಟ್ಟಿಗೆ ಮಾಡಿಕೊಂಡಿದ್ದ ಎಂದರೇ ಆಶ್ಚರ್ಯಪಡಬೇಕಾಗಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಹಿಂದಾ ನಡೆಸಿದ್ದು ಸರ್ವಾಧಿಕಾರ. ಶ್ರೀಲಂಕಾದಲ್ಲಿನ ಸಿಂಹಳಿಯರ ಓಲೈಕೆಗಾಗಿ ತಮಿಳು ಅಲ್ಪಸಂಖ್ಯಾತರನ್ನು ಹೊರಗೋಡಿಸುವ ಭರವಸೆ ಹುಟ್ಟಿಸಿ, ಜನಾಂಗೀಯ ದ್ವೇಷ ಹುಟ್ಟಿಸಿ ಅಧಿಕಾರವನ್ನು ಕೇಂದ್ರೀಕರಿಸಿಕೊಂಡು ದೇಶದ ಜನರನ್ನು ಮಹಿಂದಾ ನಯವಂಚನೆಗೆ ಸಿಲುಕಿಸಿದ್ದು ಅಲ್ಲಿನ ಜನರಿಗೆ ಗೊತ್ತೆಯಾಗಲಿಲ್ಲ. ಮಹಿಂದಾ ಹೂಡಿದ ವ್ಯವಸ್ಥಿತ ಹುನ್ನಾರಗಳಲ್ಲಿ ಇದೂ ಒಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ತಮಿಳರ ವಿರುದ್ಧ ಆಕ್ರಮಣಕಾರಿ ವಾತಾವರಣ ಸೃಷ್ಟಿಯಾಗುವ ಹಾಗೆ ಮಾಡಿದ್ದೇ ಇದೇ ರಾಜಪಕ್ಸೆ. ಸಿಂಹಳಿಯ ಬುದ್ದಿಸಂ ಅನ್ನು ಮೇಲೆತ್ತಿ ಕಟ್ಟುವುದರಿಂದಲೇ ಜೀವನ ಪರ್ಯಂತ ಅಧಿಕಾರದಲ್ಲಿ ಇರಬಹುದು ಎಂದು ಕನಸು ಕಂಡ ಮಹಿಂದಾ ಅಲ್ಲಿನ ಜನರೇ ತನ್ನ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಊಹಿಸಿಕೊಂಡಿರಲಿಕ್ಕಿಲ್ಲ. 

ಹೇಳಿಕೇಳಿ ವಸಾಹುತುಶಾಹಿ ಯುಗದಲ್ಲಿ ಊಳಿಗಮಾನ್ಯ ಹುದ್ದೆಗಳನ್ನು ಹೊಂದಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ರಾಜಪಕ್ಸೆ, ತನ್ನ ಆಡಳಿತದಲ್ಲಿಯೂ ವಸಾಹುತುಶಾಹಿ ಧೋರಣೆಯನ್ನು ತರುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ಅಲ್ಲಿನ ಜನರು ತಮ್ಮ ಒಳಿತಿಗಾಗಿಯೇ ಮಾಡುತ್ತಿರುವುದೆಂದು ನಂಬಿ ಮೋಸ ಹೋದರು. ನಿರಂತರ ಬೆಲೆ ಏರಿಕೆ, ಹಣದುಬ್ಬರವಾಗುತ್ತಿದ್ದಾಗಲು ಅಲ್ಲಿನ ಬಹುಸಂಖ್ಯಾತ ಸಿಂಹಳಿಯರು ಇದು ದೇಶದ ಒಳಿತಿಗಾಗಿಯೇ ಆಗುತ್ತಿದೆ ಎಂದು ಕುರುಡಾಗಿ ನಂಬಿದರು. ಯಾಕೆಂದರೇ, ಅಲ್ಲಿನ ಮಹಿಂದಾ ರಾಜಪಕ್ಸೆ ಸರ್ಕಾರ ಜನಾಂಗೀಯ ಆಧಾರಿತವಾಗಿ ರಾಷ್ಟ್ರೀಯವಾದದ ಚಿಂತನೆಯನ್ನು ಅಲ್ಲಿನ ಜನರ ತಲೆಯೊಳಗೆ ಬಲವಂತವಾಗಿ ತುರುಕಿಸಿತ್ತು. ಮತ್ತದರ ಚೆಂದ ಕಾಣುವುದಕ್ಕೆ ಆರಂಭ ಮಾಡಿತ್ತು. ದೇಶದಲ್ಲಿ ಜಿಡಿಪಿ ಸರ್ವನಾಶವಾಗುತ್ತಿರುವಾಗಲೂ ರಾಜಪಕ್ಸೆ ಸರ್ಕಾರ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದೇ ಸುಳ್ಳು ಹೇಳಿ ನಂಬಿಸಿತು. ದೇಶದ ಪ್ರತಿಶತ ಬಹುತೇಕ ಎಪ್ಪತ್ತರಷ್ಟು ಆರ್ಥಿಕ ವ್ಯವಸ್ಥೆಯನ್ನೇ ತನ್ನ ಕುಟುಂಬದ ಪಾದದಡಿಯಲ್ಲಿರುವಂತೆ ಮಾಡಿಕೊಂಡ ರಾಜಪಕ್ಸೆಗೆ ದೇಶ ಸರ್ವನಾಶವಾಗುವವರೆಗೂ ಅಲ್ಲಿನ ಒಬ್ಬನಿಗೂ ಸರ್ವಾಧಿಕಾರದ ರೋಗವಿದೆ ಎನ್ನುವುದನ್ನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಅಂತಹ ಕ್ರಿಮಿನಲ್ ಮೈಂಡ್ ಬಳಸಿದ್ದ ಎನ್ನುವುದಿದರರ್ಥ. ದೇಶಕ್ಕೆ ವಿಶ್ವಬ್ಯಾಂಕ್‌ನಿಂದ ಸಾಲದ ಹೊರೆ ಹೊರೆಸಿದ, ಪ್ರಧಾನ ಮಂತ್ರಿ ಗದ್ದುಗೆಗೆ ನೆತ್ತರ ಕಲೆಗಳನ್ನು ಅಂಟಿಸಿದ. ಇಡೀ ಶ್ರೀಲಂಕಾವನ್ನೇ ಅಷ್ಟು ಸುಲಭವಾಗಿ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗದಿರುವಷ್ಟರ ಮಟ್ಟಿಗೆ ಪಾತಾಳಕ್ಕೆ ತಳ್ಳಿದ. ಇನ್ನು, ಮಹಿಂದಾ ರಾಜಪಕ್ಸೆಯ ಕೋಮುವಾದವನ್ನು, ಸರ್ಕಾರವನ್ನು ಪ್ರಶ್ನಿಸಿದವರು ಶ್ರೀಲಂಕಾದಲ್ಲಿ ಬೀದಿ ಹೆಣಗಳಾದರು. ಸತ್ಯ ಹೇಳಲು ಪ್ರಯತ್ನಿಸಿದ ಅಲ್ಲಿನ ಮಾಧ್ಯಮಗಳ ಹಾಗೂ ಪತ್ರಕರ್ತರ ಧ್ವನಿ ಅಡಗಿಸಲಾಯಿತು. 

ಏನಿದರ ಹಿಂದಿನ ಕಥೆ : ೧೯೫೬ರಲ್ಲಿ ಶ್ರೀಲಂಕಾ ಕೋಮುವಾದಿ ಸರ್ಕಾರ ಸಿಂಹಳವನ್ನು ಶ್ರೀಲಂಕಾದ ಅಧಿಕೃತ ಭಾಷೆ ಎಂದು ಘೋಷಿಸಿದ್ದೇ ಅಲ್ಲಿ ಜನಾಂಗೀಯ ದ್ವೇಷಕ್ಕೆ ನಾಂದಿಯಾಯಿತು. ಸಿಂಹಳಿಯರು ತಮಿಳರನ್ನು ಅತ್ಯಂತ ಕೀಳಾಗಿ ನೋಡುವುದಕ್ಕೆ ಆರಂಭಿಸಿದರು. ಜನಾಂಗೀಯ ದ್ವೇಷವೊಂದೇ ಕಾರಣಕ್ಕಾಗಿ ನೂರಾರು ತಮಿಳರನ್ನು ಬೀದಿ ಬೀದಿಗಳಲ್ಲಿ ಧಾರುಣವಾಗಿ ಕೊಂದರು. ಆರ್ಥಿಕ ಹಾಗೂ ಶಿಕ್ಷಣದಿಂದ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರನ್ನು ವಂಚಿತರಾಗುವಂತೆ ಕಂಡುಕೊಂಡರು. ಇಲ್ಲಿಂದ ಆಚೆಗೆ ಶ್ರೀಲಂಕಾ ಈ ಜನಾಂಗೀಯ ದ್ವೇಷದಲ್ಲಿ ಕಂಡಿದ್ದು ರಕ್ತ ಚರಿತ್ರೆ. ಸುಮಾರು ೧೯೫೮ರಿಂದಲೇ ಶ್ರೀಲಂಕಾದಲ್ಲಿ ಇದ್ದ ತಮಿಳರ ವಿರುದ್ಧದ ವಾತಾವರಣಕ್ಕೆ ಈ ರಾಜಪಕ್ಸೆ ಎಂಬ ಕೋಮುವಾದಿ ೨೦೦೮ರಲ್ಲಿ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರ ಮೇಲೆ ಯುದ್ಧ ಸಾರಿಯೇ ಬಿಟ್ಟ. ಇದು ರಾಜಪಕ್ಸೆ ಹೂಡಿದ ಮತ್ತೊಂದು ವ್ಯವಸ್ಥಿತ ಜನಾಂಗೀಯ ಹತ್ಯೆ. ರಾಜಪಕ್ಸೆಯ ನೀಡಿದ ಆದೇಶದ ಮೇರೆಗೆ ಸಿಂಹಳಿಯ ಸೈನಿಕರು ತಮಿಳು ಮಹಿಳೆಯರನ್ನು ಬೀದಿ ಬೀದಿಗಳಲ್ಲಿ ನಗ್ನಗೊಳಿಸಿ ಅತ್ಯಾಚಾರವೆಸಗಿದರು. ಕಂಡಕಂಡಲ್ಲಿ ತಮಿಳರನ್ನು ಗುಂಡಿಕ್ಕಿ ಕೊಂದರು. ಇಡೀ ಶ್ರೀಲಂಕಾವೇ ತಮಿಳರ ರಕ್ತದೋಕುಳಿಯಲ್ಲಿ ಮುಳುಗಿತ್ತು. ಶ್ರೀಲಂಕಾದಲ್ಲಿ ತಮಿಳರನ್ನು ನಿರ್ನಾಮ ಮಾಡುವುದೇ ರಾಜಪಕ್ಸೆಯ ಉದ್ದೇಶ ಎನ್ನುವುದು ಇಲ್ಲಿಯೇ ಸ್ಪಷ್ಟವಾಗಿತ್ತು. ಈ ಜನಾಂಗೀಯ ದ್ವೇಷ ಹುಟ್ಟಿಸುವ ಬದಲಾಗಿ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಿ ದೇಶದ ಸುಧಾರಣೆಯತ್ತ ಚಿಂತಿಸಿದ್ದಿದ್ದರೇ, ಇವತ್ತು ಶ್ರೀಲಂಕಾಗೆ ಈ ಸ್ಥಿತಿ ಬರುತ್ತಿರಲಿಲ್ಲ. ಕೋಮುವಾದಿಯೊಬ್ಬನಿಂದ ಸಮಾನತೆಯನ್ನು ನಿರೀಕ್ಷಿಸುವುದಕ್ಕೆ ಹೇಗೆ ಸಾಧ್ಯವಿದೆ ಹೇಳಿ. ಶ್ರೀಲಂಕಾ ರಾಷ್ಟ್ರೀಯವಾದಿ ಸಿಂಹಳಿ ಬುದ್ಧಿಷ್ಟರಿಗೆ ಮಾತ್ರ ಸೇರಿದ್ದು ಎಂದು ತನ್ನ ಆಡಳಿತದುದ್ದಕ್ಕೂ ಹೇಳುತ್ತಲೇ ಇದ್ದ ರಾಜಪಕ್ಸೆಗೆ ಅಪಾರವಾದ ಜನಬಲ ದೊರಕಿತು. ರಾಜಕೀಯ ಆಟಕ್ಕೆ ಬೇಕಾಗಿ ಸಿಂಹಳಿ ಬುದ್ಧಿಷ್ಟರ ಮನವೋಲೈಕೆಯ ಉದ್ದೇಶದಿಂದ ಲಂಕೆಯಲ್ಲಿದ್ದ ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸಿ ಬೌದ್ಧ ಸ್ತೂಪಗಳನ್ನು ಕಟ್ಟಿಸಿ ಮೆರೆದ. ತನಗೆ ಬೇಕಾದ ಹಾಗೆ ಸರ್ಕಾರದ ನೀತಿ ನಿಯಮಗಳನ್ನು, ಕಾನೂನುಗಳನ್ನು ರೂಪಿಸಿಕೊಂಡ. ತನ್ನ ನ್ಯೂನ್ಯತೆಗಳನ್ನ ಬರೆಯುವ ಪತ್ರಕರ್ತರ ಅಡ್ರೆಸ್ ಇಲ್ಲದ ಹಾಗೆ ಮಾಡಿದ. ಅವ್ಯಾಹತವಾಗಿ ಜನಾಂಗೀಯ ದ್ವೇಷ ಅತಿರಂಜಕತೆಯಲ್ಲಿಯೇ ಇರುವ ಹಾಗೆ ನೋಡಿಕೊಂಡ. ಇನ್ನು, ತಾನಿರುವವರಗೆ ತನ್ನ ಪರವಾಗಿ ಸಿಂಹಳಿಯ ಬುದ್ದಿಷ್ಟರು ಜೊತೆಗಿರುತ್ತಾರೆ ಎಂಬ ಭ್ರಮೆ ಆತನಲ್ಲಿ ಹೆಚ್ಚಾಗ ತೊಡಗಿತು. ತಾನು ಏನೇ ಹೇಳಿದರು ಒಪ್ಪುತ್ತಾರೆಂದು ಸಂವಿಧಾನವನ್ನೇ ಬದಲಾಯಿಸಿದ. ಪ್ರಚಾರದ ಹುಚ್ಚಿನಲ್ಲಿ ತೇಲಿದ. ದೇಶದ ಆಮದುಗಳನ್ನು ಲೂಟಿ ಹೊಡೆದ. ತನ್ನ ಸರ್ಕಾರದಲ್ಲಿ ತನ್ನ ಕುಟುಂಬದ ನಾಲ್ಕು ತಲೆಮಾರಿನವರನ್ನು ಸೇರಿಸಿಕೊಳ್ಳುವಷ್ಟರಮಟ್ಟಿಗೆ ಮುಂದುವರಿದ ಎಂದರೇ ಶ್ರೀಲಂಕಾ ಜನರು ಮೋಸ ಹೋಗಿದ್ದಲ್ಲದೇ ಮತ್ತೇನು..? 

ರಾಷ್ಟ್ರೀಯವಾದ, ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಕಂತೆ ಕಂತೆ ಸುಳ್ಳು ಬೊಗಳಿ ಅಧಿಕಾರಕ್ಕೆ ಬಂದ ರಾಜಪಕ್ಸೆ ಪ್ರೇರೇಪಿಸಿದ್ದು ಎಂತದ್ದು ಎನ್ನುವುದು ‘ನೋ ಫೈರ್ ಜ್ಹೋನ್’ ಸಾಕ್ಷö್ಯ ಚಿತ್ರ ಗಮನಿಸಿದರೇ ತಿಳಿಯುವುದಕ್ಕೆ ಸಾಧ್ಯ. ಶ್ರೀಲಂಕಾ ಎಷ್ಟರ ಮಟ್ಟಿಗೆ ಆರ್ಥಿಕ ದಿವಾಳಿಯಾಗಿದೆ ಎಂದರೇ ಅಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೆ ಸಾಧ್ಯವಾಗದಷ್ಟು. ಆರ್ಥಿಕ ಭೀಕರತೆಯನ್ನು ಅನುಭವಿಸುತ್ತಿರುವ ಶ್ರೀಲಂಕಾದ ಜನ ಇಂದು ಹೊತ್ತಿನ ಆಹಾರಕ್ಕೆ ಪರದಾಡುತ್ತಿದ್ದಾರೆ. ಉದ್ಯೋಗಕ್ಕೆ ಒದ್ದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಊಹಿಸಿಕೊಳ್ಳಲಾರದಷ್ಟರಮಟ್ಟಿಗಿನ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ದೂರದೃಷ್ಟಿಯಿಲ್ಲದ ಸರ್ಕಾರ ಮಾಡಿದ ವಿದೇಶಿ ಸಾಲದಿಂದ ಶ್ರೀಲಂಕಾದ ಜನ ಬೀದಿಗೆ ಬಿದ್ದಿದ್ದಾರೆ. ಶ್ರೀಲಂಕಾದ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಲ್ಲಿನ ಜನರನ್ನು ಮೃಗೀಯ ಧೋರಣೆಯಿಂದ ಉಸಿರು ನಿಲ್ಲಿಸಲಾಗಿದೆ. ಶ್ರೀಲಂಕಾದ ರಾಜಕೀಯದಲ್ಲಿ ತಮಿಳರ ರಕ್ತದ ವಾಸನೆಯಿದೆ. ರಾಜಪಕ್ಸೆ ಕುಟುಂಬದ ಕೋಮು ಅಫೀಮು ಅಂಟಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ರಾಷ್ಟ್ರೀಯವಾದ, ಜನಾಂಗೀಯವಾದ, ಧರ್ಮಾಧಾರಿತ ನಿಲುವು, ಕೋಮುವಾದ, ಬಹುಪಕ್ಷಪಾತ ಯಾವುದೂ ಕೆಲಸ ಮಾಡುವುದಿಲ್ಲವೆಂದು ತಿಳಿದು ನರಿ ಬುದ್ಧಿಯಿಂದ ರಾಜಪಕ್ಸೆ ಎಲ್ಲೋ ಅಡಗಿ ಕುಳಿತ. ಸದ್ಯ, ರನೆಲ್ ವಿಕ್ರಮಸಿಂಘೆ ದೇಶದ ಹೊಣೆ ಹೊತ್ತಿದ್ದು, ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಅತೀವ ಕುತೂಹಲವಿದೆ. 

ಕೋಮುವಾದಿ, ಸರ್ವಾಧಿಕಾರಿ ಧೋರಣೆಯುಳ್ಳ ಒಬ್ಬನ ದೂರದೃಷ್ಟಿಯಿಲ್ಲದ, ಅಶಿಸ್ತಿನ ಆಡಳಿತದಲ್ಲಿ ಶ್ರೀಲಂಕಾ ಎಂಬ ಒಂದು ದೇಶ ಈ ಸ್ಥಿತಿಗೆ ತಲುಪಿದೆ ಎಂದರೇ ಇದು ಭಾರತಕ್ಕೂ ಸೇರಿ ಇಡೀ ಜಗತ್ತಿಗೆ ಒಂದು ಪಾಠ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಸರ್ವಾಧಿಕಾರ ಧೋರಣೆ ಕಂಡ ಎಲ್ಲಾ ದೇಶಗಳು ಅನುಭವಿಸಿದ್ದು ಇದೇ ಎನ್ನುವುದು ಇಲ್ಲಿ ಗಮನಾರ್ಹ. ದ್ವೀಪ ರಾಷ್ಟçದಲ್ಲಿ ಎದ್ದ ಸಾರ್ವಜನಿಕರ ಕೋಪವಂತೂ ಸದ್ಯಕಂತೂ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿದವನ ವಿರುದ್ಧ ಲಂಕೆಯ ಜನರ ಕೋಪ ತಾರಕಕ್ಕೇರಿದೆ. ಇನ್ನು, ಲಂಕೆಯ ಮುಂದಿನ ಕೆಲವು ತಿಂಗಳು ಅತ್ಯಂತ ಭೀಕರವಾಗಿರಲಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಈ ನಡುವೆ ಹೇಗೆ ಲಂಕೆ ಈ ಸ್ಥಿತಿಯಿಂದ ಹೊರಬರಲಿದೆ ಎಂಬುವುದೇ ಸದ್ಯದ ಅಚ್ಚರಿ.     

-ಶ್ರೀರಾಜ್ ವಕ್ವಾಡಿ             


Thursday, May 19, 2022

ದೇಶದ್ರೋಹ ಕಾಯ್ದೆ ದುರ್ಬಳಕೆಗೆ ಫುಲ್ ಸ್ಟಾಪ್..!

ದೇಶ ಬೇರೆ, ಸರ್ಕಾರ ಬೇರೆ | ಸೆಕ್ಶನ್ 124ಎ ಏನು ಹೇಳುತ್ತದೆ..?

ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾರಿಯಾಗಿದ್ದ ‘ದೇಶದ್ರೋಹ ಕಾಯ್ದೆ’ಗೆ ಇತ್ತೀಚೆಗೆ ತಡೆ ನೀಡಿರುವುದು, ದೇಶದ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗುವಂತೆ ಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದೇಶ ಬೇರೆ, ಸರ್ಕಾರ ಬೇರೆ. ಸರ್ಕಾರ ದೇಶ ಆಗುವುದಕ್ಕೆ ಸಾಧ್ಯವಿಲ್ಲ. ಸರ್ಕಾರವನ್ನು ಪ್ರಶ್ನಿಸುವುದು ದೇಶದ್ರೋಹವಾಗುವುದಕ್ಕೆ ಸಾಧ್ಯವಿಲ್ಲ. ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಗೆಡುವುದಕ್ಕೆ ಪ್ರಯತ್ನಿಸಿದರೇ, ಹಿಂಸೆ ಮತ್ತು ಕಾನೂನುಬಾಹಿರ ಮಾರ್ಗ ಬಳಸಿದರೇ, ಸರ್ಕಾರದ ವಿರುದ್ಧ ಅಸಮಾಧಾನವನ್ನು ಹಿಂಸಾತ್ಮಕವಾಗಿ ಅಥವಾ ಅತಿರಂಜಕಗೊಳಿಸಿ ಪ್ರಚೋದಿಸುವ ಯತ್ನ ಮಾಡಿದರೇ ಮಾತ್ರ ಅದನ್ನು ದೇಶದ್ರೋಹ ಎಂದು ಪರಿಗಣಿಸುವುದಕ್ಕೆ ಸಾಧ್ಯ. ಸದ್ಯ, ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವ ವಾತಾವರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ಕಾಯ್ದೆಯನ್ನು ಆಡಳಿತ ಸರ್ಕಾರಗಳು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಹಾಗೂ ಮತ್ತಿತರರು ಸುಪ್ರೀಂಇಂದಿರಾಗಾಂಧಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಚರ್ಚೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ ಮತ್ತು ನ್ಯಾಯಪೀಠ ದೇಶದಾದ್ಯಂತ ಬಾಕಿಯಿರುವ ಎಲ್ಲಾ ದೇಶದ್ರೋಹ ಕೇಸು, ಮೇಲ್ಮನವಿ ಹಾಗೂ ವಿಚಾರಣೆಗಳಿಗೆ ತಡೆ ನೀಡಿದ್ದಲ್ಲದೇ, ಹೊಸದಾಗಿ ದೇಶದ್ರೋಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. 

ದೇಶದ್ರೋಹ ಕಾಯ್ದೆ ಬ್ರಿಟೀಷ್ ಕಾಲದಲ್ಲಿ ಜಾರಿಗೆ ತಂದದ್ದಾದರೂ, ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ನಿಸ್ಸಂಶಯವಾಗಿ ದುರ್ಬಳಕೆ ಮಾಡಿಕೊಂಡಿವೆ. ಹಾಗಾಗಿ ಈ ಕಾಯ್ದೆಯ ಬಗ್ಗೆ ಟೀಕೆ ಟಿಪ್ಪಣಿಗಳು ಹಲವು ದಶಕಗಳಿಂದಲೇ ಕೇಳಿಬರುತ್ತಲಿದ್ದು, ಸದ್ಯ ಈ ಕಾಯ್ದೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಹಿಂಸ್ಮಾತ್ಮಕ ವಿಧಾನಗಳ ಮೂಲಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುವುದು ಮಾತ್ರವಲ್ಲದೇ, ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಯತ್ನಿಸುವುದನ್ನು ಮಾತ್ರ ದೇಶದ್ರೋಹವೆಂದು ಕಾಯ್ದೆ ವಾಖ್ಯಾನಿಸಿದೆ ಆದರೇ, ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದ್ದವರ ಮಣಿಸಲು ಬಳಸಿಕೊಂಡಿವೆ ಎನ್ನುವುದು ವಾಸ್ತವ ಸತ್ಯ. 

ಸೆಕ್ಶನ್ 124ಎ ಏನು ಹೇಳುತ್ತದೆ..?  : ಸೆಕ್ಶನ್ 124ಎ ಹೇಳುವ ಪ್ರಕಾರ, ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸರ್ಕಾರದ ವಿರುದ್ಧ ಯಾರು ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವುದು, ಸರ್ಕಾರದ ವಿರುದ್ಧವಾಗಿ ಮಾತಿನ ಮೂಲಕ, ಬರವಣಿಗೆಯ ಮೂಲಕ, ಸಂಕೇತ ಅಥವಾ ಚಿಹ್ನೆಗಳ ಮೂಲಕ ಅತರಂಜಕಗೊಳಿಸಿ ಒತ್ತಾಯಪೂರ್ವಕವಾಗಿ ಅಸಮಾಧಾನ ಮೂಡಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತದೆ. ಉತ್ತೇಜನೆ ಅಥವಾ ಅಸಮಾಧಾನವನ್ನು ಪ್ರಚೋದಿಸಲು ಯಾವುದೇ ರೀತಿಯಲ್ಲಿ ಪ್ರಯತ್ನಿಸದೇ, ಕಾನೂನುಬದ್ಧವಾಗಿ ಸರ್ಕಾರದ ಬಗ್ಗೆ ವ್ಯಕ್ತಪಡಿಸುವ ಅಸಾಮಾಧಾನಗಳು ದೇಶದ್ರೋಹ ಎಂದು ಪರಿಗಣಿಸಲಾಗುವುದಿಲ್ಲ. 

ಸ್ವಾತಂತ್ರ್ಯ ನಂತರದ ಭಾರತದಲ್ಲಿ ದೇಶದ್ರೋಹ ಕಾಯ್ದೆ ಹಲವಾರು ವಿಮರ್ಶೆ, ಟೀಕೆಗೆ ಒಳಗಾಯಿತು. ೧೯೫೧ರಲ್ಲಿ ಭಾರತ ಸಂವಿಧಾನದ ಮೊದಲ ತಿದ್ದುಪಡಿಯ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಈ ಕಾಯ್ದೆಯನ್ನು ತೆಗೆದು ಹಾಕುವ ವಿಚಾರ ಪ್ರಸ್ತಾಪಿಸಿದರಾರೂ, ಏನೂ ಆಗಿರಲಿಲ್ಲ. ಇನ್ನು. ೨೦೧೯ರ ಸಾರ್ವತ್ರಿಕ ಚುನಾವಣೆಯ ಸಂದರ್ಬದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ೧೨೪ಎ ಅನ್ನು ರದ್ದುಗೊಳಿಸುವುದಾಗಿ ಪ್ರಸ್ತಾಪಿಸಿತ್ತು, ಆದರೇ, ೨೦೦೪-೨೦೧೪ರ ತನಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ಅಧಿಕಾರದಲ್ಲಿದ್ದಾಗ ಈ ಸಂಬಂಧ ಯಾವುದೇ ವಿಚಾರ ಹೊರತೆಗೆಯಲೇ ಇಲ್ಲ. ಪ್ರಜಾಪ್ರಭುತ್ವದಂತಹ ರಾಷ್ಟ್ರದ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಈ ಕಾಯ್ದೆ ಅಡ್ಡಿಮಾಡುತ್ತದೆ ಎಂದು ಒಂದೆಡೆ ವಾದವಾದರೇ, ದೇಶದ ಸಮಗ್ರತೆ ಹಾಗೂ ಭದ್ರತೆಯ ವಿಚಾರ ಬಂದಾಗ ಇಂತಹ ಕಾಯ್ದೆ ಅಗತ್ಯ ಎಂಬವರ ವಾದ ಮತ್ತೊಂದೆಡೆ. ಈವೆರಡು ಅಭಿಪ್ರಾಯಗಳ ಸಮತೋಲನ ಕಾಪಾಡುವ ಕೆಲಸ ಸದ್ಯಕ್ಕೆ ಸುಪ್ರೀಂ ಕೋರ್ಟ್ ಮಾಡಿದೆ ಎನ್ನುವುದು ಇಲ್ಲಿ ಗಮನಾರ್ಹ. 

ಬಹಳ ಪ್ರಮುಖವಾಗಿ, ದೇಶದಾದ್ಯಂತ ಮೋದಿ ಸರ್ಕಾರ ತರಲು ಹೊರಟಿದ್ದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ದ ನಡೆದ ಪ್ರತಿಭಟನೆಯ ವರದಿ ಮಾಡಿದ ಹಿರಿಯ ಪತ್ರಕರ್ತರ ವಿರುದ್ಧವೂ ಈ ದೇಶದ್ರೋಹ ಕಾಯ್ದೆಯನ್ನು ಬಿಜೆಪಿ ಸರ್ಕಾರ ಬಳಸಿಕೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಈ ವಿಚಾರವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬಲವಾಗಿ ಖಂಡಿಸಿತ್ತು. ಸಮಾಜದ ಮುಖವಾಣಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ವಿರುದ್ಧವೇ ಈ ಕಾಯ್ದೆಯನ್ನು ಈ ದೇಶದ ಆಡಳಿತ ಪಕ್ಷ ಬಳಿಸಿಕೊಂಡಿದೆ ಎಂದಾದರೇ, ಸಾಮಾನ್ಯರ ಗತಿ ಏನು..? ಹಾಗಾಗಿಯೇ, ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಐಡಬ್ಲ್ಯೂಪಿಸಿ (ಭಾರತೀಯ ಮಹಿಳಾ ಪ್ರೆಸ್ ಕಾರ್ಪ್ಸ್) ಈ ಕಾಯ್ದೆಯನ್ನು “ಕಠಿಣ ಕಾಯ್ದೆ” ಎಂದು ಕರೆದಿದ್ದಲ್ಲದೇ, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.  

ವಿದ್ಯಾರ್ಥಿಗಳನ್ನು ಒಳಗೊಂಡು ವಿಮರ್ಶಕರು, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ಪೊಲೀಸರು, ರಾಜಕೀಯ ನಾಯಕರು, ವಕೀಲರು, ಪತ್ರಕರ್ತರು ಮುಂತಾದವರು ದೇಶದ್ರೋಹ ಕಾಯ್ದೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಾತ್ರವಲ್ಲದೇ ಕಾಯ್ದೆಯನ್ನು ರದ್ದು ಮಾಡಿಸಬೇಕು ಅಥವಾ ತಿದ್ದುಪಡಿಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಒಳಗೊಂಡ ನ್ಯಾಯಪೀಠ ಕೂಡ ಸರ್ಕಾರವನ್ನು ಮರುಪರಿಶೀಲಿಸುವಂತೆ ಕೇಳಿ ಸದ್ಯ ತಡೆಹಿಡಿದು ವಿಚಾರಣೆಯನ್ನು ಜುಲೈ ೩ನೇ ವಾರಕ್ಕೆ ಮುಂದೂಡಿದೆ. ಹಾಗಾದರೇ, ಒಂದು ವೇಳೆ ದೇಶದ್ರೋಹ ಕಾಯ್ದೆ ಭಾರತದಲ್ಲಿ ರದ್ದಾದರೇ, ಅದಕ್ಕೆ ಸರಿಹೊಂದುವ ಬೇರೆ ಯಾವುದೇ ಕಾಯ್ದೆಗಳಿಲ್ಲವೇ..? ಖಂಡಿತ ಇವೆ. ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, ಸಾರ್ವಜನಿಕ ಸುರಕ್ಷತಾ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆಗಳು ಸೇರಿ ಮುಂತಾದ ಕಾಯೆಗಳು ಇವೆ ಎನ್ನುವುದು ಗಮನಾರ್ಹ. 

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯ್ದೆ : ಈ ಕಾಯ್ದೆಯು ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ತಡೆಗಟ್ಟುವ ಕಾನೂನಾಗಿದೆ. ಸಮಗ್ರತೆ ಹಾಗೂ ಸಾರ್ವಭೌಮತೆಗೆ ವಿರುದ್ಧವಾದ ಚಟುವಟಿಕೆಗಳನ್ನು ನಿರ್ಬಂಧಿಸುವುದಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ೨೦೧೯ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ ಯ (ಯುಎಪಿಎ ೨೦೧೯) ಕಾನೂನಿಗೆ ವಿರುದ್ಧ/ವಾದ ನಡೆದುಕೊಳ್ಳುವವರನ್ನು/ಚಟುವಟಿಕೆಗಳನ್ನು ಭಯೋತ್ಪಾದಕರೆಂದು/ಭಯೋತ್ಪಾದಕ ಚಟುವಟಿಕೆಗಳೆಂದು ಪರಿಗಣಿಸಬಹುದಾಗಿದೆ. ಯುಎಪಿಎ ಕಾಯ್ದೆಯನ್ನು ಭಯೋತ್ಪಾದನಾ ವಿರೋಧಿ ಕಾಯ್ದೆ ಎಂದು ಕೂಡ ಕರೆಯಲಾಗುತ್ತದೆ. 

ಇನ್ನು, ಯುಎಪಿಎ ಕಾಯ್ದೆಯ ಪ್ರಕಾರ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡ, ಅಥವಾ ಭಯೋತ್ಪಾದನೆಗಾಗಿ ತಯಾರಿ, ಭಯೋತ್ಪಾದನೆಯನ್ನು ಉತ್ತೇಜಿಸುವ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವುದಕ್ಕೆ ಈ ಕಾಯ್ದೆಗೆ ಅಧಿಕಾರ ಇದೆ.  

ರಾಷ್ಟ್ರೀಯ ಭದ್ರತಾ ಕಾಯ್ದೆ : ೧೯೮೦ರಲ್ಲಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಸುಮಾರು ೧೮ ಸೆಕ್ಶನ್‌ಗಳುಳ್ಳ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾರತದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ, ವಿದೇಶಗಳೊಂದಿಗಿನ ಭಾರತದ ಸಂಬಂಧಗಳ ನಿರ್ವಹಣೆಯ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.  

ಹೌದು, ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಅನೇಕ ಕಾಯ್ದೆಗಳಿವೆ. ಅಂತಹುದರಲ್ಲಿ ಮಹಾತ್ಮಗಾಂಧಿ ಅವರಂತಹ ಸ್ವಾತಂತ್ರದ ಹೆಗ್ಗುರುತುಗಳ ಧ್ವನಿಯನ್ನೇ ಅಡಗಿಸಲು ಅಥವಾ ಸತ್ಯವನ್ನು ಅಡಗಿಸಲು ಬ್ರಿಟೀಷ್ ಸರ್ಕಾರ ಬಳಸಿಕೊಂಡ ದೇಶದ್ರೋಹದಂತಹ ಕಾಯ್ದೆಯನ್ನೇಕೆ ಈ ದೇಶದ ಸರ್ಕಾರ ರದ್ದುಗೊಳಿಸುತ್ತಿಲ್ಲ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಇಲ್ಲಿನ ನಾಗರಿಕರಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಕಾರ್ಯಚಟುವಟಿಕೆಗಳನ್ನು, ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹವೆಂದು ಸರ್ಕಾರದ ಪರವಾದ ಸಂಘಟನೆಗಳು, ಪರವಾದಿಗಳು ಬಿಂಬಿಸುವಂತಹ ಭಯೋತ್ಪಾದಕ ವಾತಾವರಣ ಸೃಷ್ಟಿಗೆ ಪರೋಕ್ಷವಾಗಿ ಸರ್ಕಾರಗಳೇ ಕಾರಣವಾದವು. ಸತ್ಯವನ್ನು ಅಡಗಿಸುವ ಪ್ರಯತ್ನವನ್ನು ಈ ಕಾಯ್ದೆಯನ್ನು ಬಳಸಿಕೊಂಡು ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ದುರ್ಬಳಕೆ ಮಾಡಿಕೊಂಡವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂವಿಧಾನ ಈ ದೇಶದ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದ ತನ್ನ ಪರವಾದ ಸಂಘಟನೆಗಳ ವಿರುದ್ಧ ಎಂದೂ ಯಾವ ಸರ್ಕಾರವೂ ಸರ್ಕಾರ ದೇಶದ್ರೋಹದ ಪ್ರಕರಣಗಳನ್ನು ದಾಖಲು ಮಾಡಿಲ್ಲ. ತನ್ನ ಆಡಳಿತದ ವೈಫಲ್ಯವನ್ನು ಪ್ರಶ್ನಿಸಿದವರ ಮೇಲೆ, ವರದಿ ಮಾಡಿದವರ ಮೇಲೆ ದೇಶದ್ರೋಹದಂತಹ ಕಾಯ್ದೆಯನ್ನು ಬಳಸಿಕೊಂಡು ಜಾಮೀನುರಹಿತ ಅಪರಾಧವೆಂದು ಘೊಷಿಸಿದವು. ತನಗೆ ಲಾಭ ತಂದುಕೊಡುವ ಸೆನ್ಸೇಷನಲೈಸ್ಡ್ ಧರ್ಮ ರಾಜಕೀಯ ಸಂಘರ್ಷಗಳು, ಘಟನೆಗಳು ಸರ್ಕಾರಗಳಿಗೆ ಎಂದೂ ದೇಶದ್ರೋಹವೆಂದು ಕಾಣಿಸಲೇ ಇಲ್ಲ. ಅವುಗಳ ಚೆಂದ ಕಾಣುತ್ತಲೇ ತನ್ನ ಆಡಳಿತ ಮುಂದುವರಿಸಿದ್ದು ಈ ದೇಶದ ದುರಂತವೇ ಸರಿ. 

ಒಟ್ಟಿನಲ್ಲಿ, ಈ ದೇಶದಲ್ಲಿ ವಾಸ್ತವಾಂಶವನ್ನು ಮರೆಮಾಚಲಾಗದು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ದೇಶದ ನಾಗರಿಕರಿಗೆ ಸಂವಿಧಾನ ನೀಡಿದ ಹಕ್ಕುಗಳು ಹಾಗೂ ಸಮಗ್ರತೆಯ ಸಮತೋಲನಕ್ಕೆ ಧ್ವನಿ ಸೇರಿಸುವುದರ ಮೂಲಕ ಸುಪ್ರೀಂ ಕೋರ್ಟ್ ದೇಶದ್ರೋಹ ಕಾಯ್ದೆಗಳಿಗೆ ಸದ್ಯ ತಡೆ ಹಿಡಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಸಂಶಯವಿಲ್ಲ.

-ಶ್ರೀರಾಜ್ ವಕ್ವಾಡಿ  


Thursday, May 12, 2022

ವಿವಾದ ಸೃಷ್ಟಿಸಿದ್ದ ‘ಪೌರತ್ವ’ ಮತ್ತೆ ಮುನ್ನೆಲೆಗೆ..!

(ಸಾಂದರ್ಭಿಕ ಚಿತ್ರ)

ಸಿಎಎ ವಿವಾದಕ್ಕೆ ಕಾರಣವೇನು..? | ‘ಪೌರತ್ವ’ ಮತ್ತೆ ಬಿಜೆಪಿಯ ೨೦೨೪ರ ಪ್ರಣಾಳಿಕೆಗೆ..?

ಕಳೆದ ಎರಡು ಮೂರು ವರ್ಷಗಳ ಹಿಂದೆ ಇಡೀ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಈಗ ಮತ್ತೆ ಸದ್ದು ಮಾಡುತ್ತಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಿಎಎ ಕಾಯ್ದೆಯ ವಿಚಾರ ಮತ್ತೆ ಮೇಲೆತ್ತಿದ್ದು, ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. 

ಮುಸ್ಲೀಮರನ್ನು ಉದ್ದೇಶಪೂರ್ವಕವಾಗಿ ಧರ್ಮಾಧಾರಿತವಾಗಿ ಈ ದೇಶದಲ್ಲಿ ನಿರ್ಲಕ್ಷ್ಯಕ್ಕೆ  ಒಳಪಡಿಸುವ ಅಥವಾ ಹೊರಹಾಕುವ ಬಿಜೆಪಿಯ ಪೂರ್ವಯೋಜಿತ ಷಡ್ಯಂತ್ರವಿದು ಎಂದು ಈ ದೇಶದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಈ ತಿದ್ದುಪಡಿ ಕಾಯ್ದೆ, ಕೋವಿಡ್‌ನ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿತ್ತು. ಸಿಎಎ ಜೊತೆಗೆ ಎನ್ ಆರ್ ಸಿ ಯೋಜನೆಯನ್ನೂ ಕೂಡ ಧರ್ಮಾಧಾರಿತವಾಗಿ ತಂದು ಧಾರ್ಮಿಕ ತಾರತಮ್ಯ ಮಾಡುವ ಸಂಚು ಎನ್ನುವುದು ಈ ಕಾಯ್ದೆಯ ವಿರುದ್ಧ ನಿಂತವರ ವಾದವಾಗಿತ್ತು. ಆದರೇ, ಸರ್ಕಾರ ಹಾಗೂ ಕಾಯ್ದೆಯ ಪರವಾಗಿ ನಿಂತವರು ಈ ಕಾಯ್ದೆಯನ್ನು ಸಮರ್ಥಿಸಿಕೊಂಡೇ ಬಂದಿದ್ದು, ಮೂರು ಮುಸ್ಲೀಂ ಬಹುಸಂಖ್ಯಾತ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ತುಳಿತಕ್ಕೆ ಒಳಗಾದ ಅಲ್ಲಿಯ ಅಲ್ಪಸಂಖ್ಯಾತರಿಗಷ್ಟೇ (ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ) ಭಾರತೀಯ ಪೌರತ್ವ ನೀಡಲಾಗುತ್ತದೆ. ಅಕ್ರಮವಾಗಿ ವಲಸೆ ಬಂದಿರುವ ಮುಸ್ಲೀಮರಿಗಷ್ಟೇ ಸಮಸ್ಯೆ ಆಗುತ್ತದೆ. ಭಾರತೀಯ ಮೂಲ ಮುಸ್ಲೀಮರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಇಂದಿಗೂ ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಈ ಕಾಯ್ದೆಯ ತಿದ್ದುಪಡಿಯ ವಿಚಾರ ಮುನ್ನೆಲೆಗೆ ಬಂದಾಗ ಇಡೀ ದೇಶದಾದ್ಯಂತ ಕಾಯ್ದೆಯ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆದವು, ಕೆಲವಡೆದೆ ಅದು ಧಾರ್ಮಿಕ ಹೊಯ್ದಾಟಕ್ಕೂ ಕಾರಣವಾಯಿತು. ಮಾತ್ರವಲ್ಲದೇ ಈ ಹೊಯ್ದಾಟವನ್ನು ಕೆಲವರು ‘ದೇಶವನ್ನು ರಕ್ಷಿಸುವ ಮತ್ತೊಂದು ಸ್ವಾತಂತ್ರ್ಯ ಹೋರಾಟ’ ಎಂದು ಬಿಂಬಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಸುವ ಕೆಲಸವನ್ನೂ ಮಾಡಿದರು. ಇನ್ನು, ಈ ಸಂಘರ್ಷದ ಬಗ್ಗೆ ಕೇಂದ್ರ ಸರ್ಕಾರವಂತೂ ತನಗೆ ಸಂಬಂಧವೇ ಇಲ್ಲ ಎಂಬ ಧೋರಣೆ ತೋರಿಸಿ ಬಾಯಿ ಮುಚ್ಚಿ ಚೆಂದ ಕಂಡಿದ್ದು ಬಿಟ್ಟರೇ, ತಿಳಿ ಹೇಳುವ ಕೆಲಸವನ್ನೂ ಮಾಡದೇ ಇರುವುದು ದುರಂತವೇ ಸರಿ. 

ಅಷ್ಟಕ್ಕೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ ೩೭೦ ರದ್ದು, ಅಯೋಧ್ಯೆ ರಾಮ ಮಂದಿರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಇತ್ಯಾದಿಗಳು ಜನ ಪರವೋ, ವಿರೋಧವೋ ಗೊತ್ತಿಲ್ಲ ಆದರೇ, ಬಿಜೆಪಿ ಸರ್ಕಾರದ ಚುನಾವಣಾ ಅಜೆಂಡಾ ಆಗಿ ಬಳಸಿಕೊಳ್ಳುತ್ತಿರುವುದಂತೂ ಸತ್ಯ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಸರ್ಕಾರ ತನಗೆ ಲಾಭವಾಗುವುದನ್ನೇ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದು ರಾಜಕೀಯದಲ್ಲಿ ಸಾಮಾನ್ಯ. ಈವರೆಗೆ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳು ಅದನ್ನೇ ಮಾಡಿದ್ದು, ಅದರಿಂದ ಮೋದಿ ಸರ್ಕಾರ ಹೊರತಾಗಿಲ್ಲ. ಇನ್ನು, ವಿಚಾರಗಳನ್ನು ಅತಿರಂಜಕಗೊಳಿಸಿ ಚೆಂದ ಕಾಣುವುದನ್ನು ಈಗಿನ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ವಿಶೇಷವಾಗಿ ಹೇಳಿಕೊಡಬೇಕೆಂದಿಲ್ಲ. ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಅದಕ್ಕೆ ಬೇಕಾದ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದಿರುವುದೇ ಬಿಜೆಪಿಯಲ್ಲಿನ ದೊಡ್ಡ ಸಮಸ್ಯೆ. ಅದಕ್ಕಾಗಿ ಬಿಜೆಪಿ ಯಾವುದೇ ವಿಷಯ ಮುನ್ನೆಲೆಗೆ ತಂದಾಗ ಒಂದಿಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ೨೦೧೯ರ ವಿಷಯದಲ್ಲಿ ಇದೇ ಆಗಿದ್ದು. 

ಎಲ್ಲಿ ವಿವಾದಕ್ಕೆ ಕಾರಣವಾಗಿದ್ದು..? : ಭಾರತಕ್ಕೆ ವಾಮ ಮಾರ್ಗದ ಮೂಲಕ ಅಥವಾ ಅಕ್ರಮವಾಗಿ ವಲಸೆ ಬಂದವರಿಗೆ ಈ ದೇಶದಲ್ಲಿ ಪೌರತ್ವ ನೀಡುವುದಕ್ಕೆ ಪೌರತ್ವ ಕಾಯ್ದೆ ೧೯೫೫ ಹಾಗೂ ವಿದೇಶಿಗರ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಕಾಯ್ದೆಗಳು ನಿರ್ಬಂಧಗಳನ್ನು ಹಾಕಿವೆ. ಆದರೇ, ಮೋದಿ ನೇತೃತ್ವದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿAದ ಅಕ್ರಮವಾಗಿ ವಲಸೆ ಬಂದ ಮುಸ್ಲೀಮರನ್ನು ಹೊರತುಪಡಿಸಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ ಧರ್ಮಗಳ ಅಲ್ಪಸಂಖ್ಯಾತರು ೬ ವರ್ಷ ವಾಸವಿದ್ದರೇ ಪೌರತ್ವ ನೀಡುವ ವಿಚಾರವನ್ನು ಪ್ರಸ್ತಾಪಿಸಿರುವುದೇ ದೇಶದಲ್ಲಿ ಇದನ್ನು ಧಾರ್ಮಿಕ ತಾರತಮ್ಯ ಎಂದು ಬಿಂಬಿಸಿ ದೊಡ್ಡ ಮಟ್ಟದ ಹೋರಾಟ, ಪ್ರತಿಭಟನೆಗಳು ನಡೆಯುವುದಕ್ಕೆ ಕಾರಣ ಎನ್ನುವುದು ಸ್ಪಷ್ಟ.   

ನೆರೆ ರಾಷ್ಟçಗಳಿಂದ ಧಾರ್ಮಿಕವಾಗಿ ಶೋಷಣೆಗೆ ಒಳಗಾಗಿ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ ಅಲ್ಪಸಂಖ್ಯಾತರಿಗಷ್ಟೇ ಪೌರತ್ವ ನೀಡುವುದಾಗಿ, ಹಾಗೂ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ಮುಸ್ಲೀಮರು ಆ ದೇಶದಲ್ಲಿ ಅಲ್ಪಸಂಖ್ಯಾತರಲ್ಲ ಎಂದು ಮೋದಿ ಸರ್ಕಾರ ವಾದಿಸುತ್ತಿರುವುದು ಪ್ರಗತಿಪರ ಚಿಂತಕರನ್ನು ಕೆರಳಿಸಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಮೋದಿ ವಿರೋಧಿಗಳನ್ನು ಈ ತಿದ್ದುಪಡಿ ಕೆರಳಿಸಿದ್ದು ಯಾಕೆ..?  : ೧೯೫೫ರಲ್ಲಿ ಜವಹರಲಾಲ್ ನೆಹರು ಈ ದೇಶದ ಪ್ರಧಾನಿಯಾಗಿದ್ದಾಗ, ಈ ದೇಶದಿಂದ ದೇಶ ವಿಭಜನೆಯ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಇತರೆ ನೆರೆ ರಾಷ್ಟçಗಳಿಗೆ ಗುಳೆ ಹೋಗಿ, ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದ ಭಾರತ ದೇಶದ ಮೂಲವಾಸಿಗರಿಗೆ ಮತ್ತೆ ಈ ನೆಲದಲ್ಲಿ ನೆಲೆ ಕಲ್ಪಿಸುವ ಉದ್ದೇಶದಿಂದ ಮತ್ತು ಈ ದೇಶದ ಪೌರತ್ವ ನೀಡುವ ಸದುದ್ದೇಶದಿಂದ ಅಂದಿನ ಕೇಂದ್ರ ಸರ್ಕಾರ (ನೆಹರು ನೇತೃತ್ವದ ಸರ್ಕಾರ) ಭಾರತೀಯ ಪೌರತ್ವ ಕಾಯ್ದೆ ಜಾರಿಗೆ ತಂದಿತ್ತು. ಸುಮಾರು ಆರು ದಶಕಗಳಿಂದ ಈ ದೇಶದಲ್ಲಿ ಇದೇ ಕಾಯ್ದೆ ಜಾರಿಯಲ್ಲಿತ್ತು. ನೆಹರು ಸರ್ಕಾರ ಜಾರಿಗೆ ತಂದ ಈ ಕಾಯ್ದೆಯ ಅನ್ವಯ ನೆರೆಹೊರೆ ರಾಷ್ಟçಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಅಕ್ರಮವಾಗಿ ಈ ದೇಶದಲ್ಲಿ ಸುಮಾರು ೧೨ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ನೆಲೆ ನಿಂತ ಸಿಖ್, ಹಿಂದೂ, ಕ್ರೆöÊಸ್ತ, ಪಾರ್ಸಿ, ಬೌದ್ಧ, ಜೈನ ಹಾಗೂ ಮುಸ್ಲೀಂ ಅಥವಾ ಯಹೂದಿಗಳು ಕಾನೂನು ಅನುಸಾರವಾಗಿ ಸೂಕ್ತ ದಾಖಲೆಗಳಿದ್ದರೇ ಭಾರತ ದೇಶದ ಪೌರತ್ವ ನೀಡಲಾಗುತ್ತಿತ್ತು. ಮಾತ್ರವಲ್ಲದೇ, ೧೯೫೫ರಲ್ಲಿ ಜಾರಿಗೆ ಬಂದ ಈ ಕಾಯ್ದೆ ಹೇಳುವ ಪ್ರಕಾರ, ವಿದೇಶಿ ಪ್ರಜೆಯೊಬ್ಬ ಭಾರತ ದೇಶದಲ್ಲಿದ್ದು, ದೇಶದ ಸರ್ಕಾರದಲ್ಲಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿರುವುದರೊಂದಿಗೆ ಹಲವು ಕಾನೂನುಬದ್ಧ ಷರತ್ತುಗಳಿಗೆ ಬದ್ಧರಾಗಿದ್ದರೇ ಈ ದೇಶದ ಪೌರತ್ವ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನೂ ಕೂಡ ನೀಡಿತ್ತು. ಮತ್ತು ಅರ್ಜಿ ಸಲ್ಲಿಸುವ ಹಿಂದಿನ ೧೪ ವರ್ಷಗಳಲ್ಲಿ ಸುಮಾರು ಹನ್ನೊಂದು ವರ್ಷಗಳ ಕಾಲ ಈ ದೇಶದಲ್ಲಿ ವಾಸವಿರುವುದನ್ನು ಆ ವಿದೇಶಿ ಪ್ರಜೆ ದೃಢಪಡಿಸಭೇಕಾಗಿರುವುದು ಅನಿವಾರ್ಯವಾಗಿತ್ತು. ಆದರೇ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ತಿದ್ದುಪಡಿಯಲ್ಲಿ ಕೆಲವು ಬದಲಾವಣೆ ಮಾಡಿರುವುದು ಮತ್ತು ಅಕ್ರಮವಾಗಿ ವಲಸೆ ಬಂದ ಮುಸ್ಲೀಮರಿಗೆ ಪೌರತ್ವ ನೀಡುವ ವಿಷಯವನ್ನು ತೆಗೆದು ಹಾಕಿರುವುದು ಚರ್ಚೆಗೆ ಕಾರಣವಾಗಿತ್ತು. 

೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿತ್ತು. ೨೦೧೪ರಲ್ಲಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದ ಅಧಿಕಾರ ಹಿಡಿದ ಎರಡು ವರ್ಷಗಳ ನಂತರ ಅಂದರೇ, ೨೦೧೬ರ ಜುಲೈ ೧೯ ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡನೆ ಮಾಡಿತ್ತು, ಮಾತ್ರವಲ್ಲದೇ ಅದೇ ವರ್ಷವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಇನ್ನು, ಸಂಸದೀಯ ಸಮಿತಿ ೨೦೧೯ರ ಜನವರಿಯಲ್ಲಿ ತನ್ನ ವರದಿಯನ್ನು ನೀಡಿತ್ತು. ಮತ್ತು ಲೋಕಸಭೆಯಲ್ಲಿಯೂ ಕೂಡ ಮಸೂದೆ ಮಂಡನೆಯಾಗಿ ಪಾಸ್ ಆಗಿತ್ತು. ಆದರೇ, ರಾಜ್ಯ ಸಭೆಯಲ್ಲಿ ಮಂಡನೆಯಾಗಿರಲಿಲ್ಲ. ಸರ್ಕಾರದ ಅವಧಿ ಮುಗಿದ ಕಾರಣದಿಂದಾಗಿ ಮಸೂದೆಯೂ ರದ್ದಾಗಿತ್ತು. ೨೦೧೯ರಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ಮತ್ತೆ ಕೇಂದ್ರದ ಅಧಿಕಾರ ಹಿಡಿದ ಮೇಲೆ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು, ಆದರೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ. ತದನಂತರ ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಮಸೂದೆ ಒಂದು ರೀತಿಯಲ್ಲಿ ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾಯ್ದೆಯ ವಿಚಾರವನ್ನು ಮೇಲಕ್ಕೆತ್ತಿದ್ದು, ೨೦೨೪ರ ಲೋಕಸಭಾ ಚುನಾವಣಾ ಪೂರ್ವವಾಗಿ ಜಾರಿಗೆ ತರುವ ಎಲ್ಲಾ ಲಕ್ಷಣಗಳು ಕಾಣಿಸತ್ತಿವೆ. 

ಇನ್ನು, ಈಗಾಗಲೇ ಈ ಕಾಯ್ದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೂರು ಬಾರಿ ಹಾಗೂ ಬಿಜೆಪಿ ಸರ್ಕಾರ ಇದ್ದಾಗ ಎರಡು ಬಾರಿ ಸೇರಿ ಒಟ್ಟು ಐದು ಬಾರಿ ತಿದ್ದುಪಡಿಯಾಗಿದ್ದು, ಕಾಂಗ್ರೆಸ್, ಟಿಎಂಸಿ ಸೇರಿ ಹಲವು ಪಕ್ಷಗಳು ಇದನ್ನು ‘ಭಾರತದಂತಹ ಜಾತ್ಯಾತೀತ ರಾಷ್ಟçದಲ್ಲಿ ಧರ್ಮಾಧಾರಿತ ರಾಜಕೀಯ ಮಾಡುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಸಂವಿಧಾನ ಕೊಡಮಾಡಿರುವ ೧೪ನೇ ವಿಧಿ ಅಥವಾ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಜಾತಿ, ಧರ್ಮಗಳ ಆಧಾರದ ಮೇಲೆ ದೇಶದ ಪೌರತ್ವ ನೀಡುವುದು ಈ ದೇಶದ ಕಾನೂನಿಗೆ ವಿರುದ್ಧವಾದದ್ದು’ ಎಂದು ಬಲವಾಗಿ ವಿರೋಧಿಸುತ್ತಿರುವುದರ ನಡುವೆಯೂ ಮೋದಿ ನೇತೃತ್ವದ ಸರ್ಕಾರ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದೆ. ಆದರೇ, ರಾಜ್ಯಸಭೆಯಲ್ಲಿ ಇಷ್ಟೆಲ್ಲಾ ಬಾರಿ ವಿರೋಧದ ನಡುವೆಯೂ ಪಾಸ್ ಆಗಲಿದೆಯೇ ಎಂಬ ಪ್ರಶ್ನೆಯೊಂದು ಈ ತನ್ಮಧ್ಯೆ ಎದ್ದಿದೆ. 

-ಶ್ರೀರಾಜ್ ವಕ್ವಾಡಿ 


Thursday, May 5, 2022

ರಾಜ್ಯದಲ್ಲಿ ಪುನರ್ಜನ್ಮಕ್ಕೆ ಕಾಂಗ್ರೆಸ್ ಸರ್ವಪ್ರಯತ್ನ

ರಾಜ್ಯ ಕಾಂಗ್ರೆಸ್‌ಗೆ ಸುರ್ಜೇವಾಲ, ಕನ್ನುಗೋಲು ಸ್ಟ್ರ್ಯಾಟಜಿ | ಕಾಂಗ್ರೆಸ್ ‘150’ ಪರಮ ಗುರಿ

ಸತತ ಎರಡು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಹಲವು ರಾಜ್ಯಗಳಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಈಗ ಕರ್ನಾಟಕ ಚುನಾವಣೆಯತ್ತ ಗಮನ ಹರಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಎದುರಾಗಬಹುದಾದ ಎಲ್ಲಾ ರಾಜಕೀಯ ಸವಾಲುಗಳನ್ನು ಮೆಟ್ಟಿ ನಿಲ್ಲಲು ಕಾರ್ಯೋನ್ಮುಖವಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ೧೫೦ ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳಲೇ ಬೇಕು ಎಂದು ಹೇಳಿದ್ದರು, ಸಾಮೂಹಿಕವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಹೋರಾಟ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿದ ರಾಹುಲ್ ಗಾಂಧಿ ಈಗ ರಾಜ್ಯದಲ್ಲಿ ಚುನಾವಣಾ ತಂತ್ರ ಹೂಡುವುದಕ್ಕೆ ರಾಜಕೀಯ ತಂತ್ರಜ್ಞ ಸುನೀಲ್ ಕನ್ನುಗೋಲು ಅವರನ್ನು ಕೂಡ ಕಳುಹಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಯನ್ನು ಈ ಬಾರಿ ಬಹಳ ಸೀರಿಯಸ್ ಆಗಿ ತೆಗೆದುಕೊಂಡ ಹಾಗೆ ಕಾಣಿಸುತ್ತಿದೆ. 

ದಕ್ಷಿಣ ಭಾರತದ ರಾಜ್ಯಗಳಲ್ಲಿಯೇ ಅತ್ಯಂತ ಪ್ರಬಲವಾದ ಪಕ್ಷ ಹಾಗೂ ಅನುಭವಿಗಳುಳ್ಳ ಕರ್ನಾಟಕದಲ್ಲಿ ಈ ಚುನಾವಣೆಯನ್ನು ಗೆದ್ದು ತೋರಿಸುವ ಕನಸು ಕಾಂಗ್ರೆಸ್ ಕಾಣುತ್ತಿದೆ. ಆಡಳಿತ ಪಕ್ಷ ಬಿಜೆಪಿಯ ಹಿಂದುತ್ವದ ಅಲೆ ಎದುರು ಕಾಂಗ್ರೆಸ್‌ನ ‘ಪಾಲಿಟಿಕಲ್ ಸೆಕ್ಯುಲರಿಸಂ’  ಹೇಗೆ ಕಾರ್ಯಕ್ಕೆ ಬರುತ್ತದೆ ಎನ್ನುವುದು ಸದ್ಯದ ಕುತೂಹಲ. 

ಸರಣಿ ಸಭೆ ಮಾಡಿ ಸಾಮೂಹಿಕ ನಾಯಕತ್ವದಡಿ ಕೆಲಸ ಮಾಡಿ ಎಂದು ರಾಹುಲ್ ಗಾಂಧಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಸೂಚನೆ ನೀಡಿದ್ದರೂ ಅವರೀರ್ವರ ನಡುವೆ ವೈಮಸ್ಸು ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವುದು ಗೊತ್ತಿರುವ ವಿಷಯ. ಉಭಯ ನಾಯಕರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಿಂತ ಹೆಚ್ಚು ಸ್ವಪ್ರತಿಷ್ಠೆಯೇ ಹೆಚ್ಚು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಉಭಯ ನಾಯಕರೇ ಕಾಂಗ್ರೆಸ್ ಹೈಕಮಾಂಡ್‌ಗೆ ಉಭಯ ಸಂಕಟವಾಗಿದೆ. ಡಿಕೆಶಿ ಅಂತಹ ರಾಜಕೀಯ ರೆಬಲ್ ವರ್ಚಸ್ಸು ಇರುವ ನಾಯಕನನ್ನೂ ಬಿಡುವ ಹಾಗಿಲ್ಲ, ಅತ್ತ ಸಿದ್ದರಾಮಯ್ಯನಂತಹ ಅತ್ಯಂತ ಅನುಭವಿ ರಾಜಕೀಯ ನಾಯಕನನ್ನೂ ದೂರ ಇಡುವ ಹಾಗಿಲ್ಲ. ಸದ್ಯಕ್ಕೆ ಕರ್ನಾಟಕದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಡಬೇಕಾಗಿರುವುದು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನವನ್ನು ಚುನಾವಣಾ ಮುಗಿಯುವವರೆಗೆ ಕಾಯ್ದಿರಿಸಿಕೊಳ್ಳುವುದು ಬಹಳ ಮುಖ್ಯ. ಕಾಂಗ್ರೆಸ್‌ನನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರುವುದಕ್ಕೆ ಪಕ್ಷ ಬಲವರ್ದನೆಗೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹಳೆ ಮೈಸೂರು ಹಾಗೂ ಬಯಲು ಸೀಮೆ ಜಿಲ್ಲೆಗಳ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಗುರಿಯಾಗಿಸಿಕೊಂಡು ಗೆಲ್ಲುವ ಕುದುರೆಯನ್ನು ಆಪರೇಷನ್ ಹಸ್ತ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಬಿಜೆಪಿ ಕೂಡ ಹಳೆ ಮೈಸೂರು ಭಾಗದಲ್ಲಿ ತನ್ನನ್ನು ತಾನು ಗಟ್ಟಿಗೊಳಿಸಿಕೊಳ್ಳುವ ಸರ್ವ ಪ್ರಯತ್ನದಲ್ಲಿದೆ. ರೆಸಾರ್ಟ್ ರಾಜಕಾರಣ ಹಾಗೂ ಆಪರೇಷನ್ ಸಕ್ಸಸ್ ಮಾಡುವುದರಲ್ಲಿ ಡಿಕೆಶಿ ಎತ್ತಿದ ಕೈ. ಅದು ಸ್ವತಃ ಬಿಜೆಪಿ ಹಾಗೂ ಜೆಡಿಎಸ್‌ಗೂ ಕೂಡ ಗೊತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಹೊಂದಿಕೊಳ್ಳಬಲ್ಲ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕಿದ್ದಾರೆ. ಒಕ್ಕಲಿಗ ಮತ ಬ್ಯಾಂಕ್ ಬಗ್ಗೆ ಡಿಕೆಶಿ ಗಮನಾರ್ಹ ನಡೆಯಲ್ಲಿದ್ದು ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲೂ ಸರ್ವಪ್ರಯತ್ನದಲ್ಲಿದ್ದಾರೆ. ಅಹಿಂದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದರೇ, ಇತ್ತ ಹಿಂದುಳಿದ ವರ್ಗದ ನಾಯಕರಾಗಿ ಡಾ. ಜಿ ಪರಮೇಶ್ವರ್ ಗುರುತಿಸಿಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ದಲಿತ ನಾಯಕರಿಗೂ ಏನೂ ಕೊರತೆ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ಎದುರು ಕಾಂಗ್ರೆಸ್‌ಗೆ ಒಂದು ಪ್ರಬಲ ಒಕ್ಕಲಿಗ ನಾಯಕತ್ವ ಬೇಕು. ಒಂದಿಷ್ಟು ವಿವಾದಗಳಿಂದ ಒಕ್ಕಲಿಗ ಸಮುದಾಯದಲ್ಲಿ ತಮಗಿದ್ದ ವರ್ಚಸ್ಸನ್ನು ಕಳೆದುಕೊಂಡಿದ್ದ ಡಿಕೆಶಿ ಈಗ ಮತ್ತೆ ಒಕ್ಕಲಿಗರ ಪ್ರಬಲ ನಾಯಕರಾಗಿ ಗುರುತಿಸಿಕೊಳ್ಳುವುದು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗ ಮತ ಬ್ಯಾಂಕ್ ಸೆಳೆಯುವುದು ಪರಮ ಗುರಿಯಾಗಿಸಿಕೊಂಡಿದ್ದಾರೆ. ಇನ್ನು, ಕಳೆದ ಹಲವು ವರ್ಷಗಳಿಂದ ಕುರುಬರ ಹಾಗೂ ಅಹಿಂದ ನಾಯಕರಾಗಿ ಸಿದ್ದರಾಮಯ್ಯರಿಗೆ ಸರಿಸಮನಾಗಿ ಗುರುತಿಸಿಕೊಂಡವರು ರಾಜ್ಯದಲ್ಲಿ ಯಾವ ಪಕ್ಷದ ನಾಯಕರೂ ಇಲ್ಲ. ಹಾಗಾಗಿ ಸದ್ಯದ ಕಾಂಗ್ರೆಸ್‌ನ ಸಾಮೂಹಿಕ ನೇತೃತ್ವ ಸಮಾಧಾನದ ಪರಿಹಾರವಾದರೂ ಮುಂದೆ ಚುನಾವಣೆ ಹತ್ತಿರಕ್ಕೆ ಬಂದಾಗ ನೇತೃತ್ವ ಈ ಈರ್ವರಲ್ಲಿ ಯಾರಿಗೆ ಕೊಟ್ಟರೂ ಮತಗಳು ಚೆಲ್ಲಾಪಿಲ್ಲಿಯಾಗಿ ಹೋಗುತ್ತವೆ ಎನ್ನುವುದು ಅಕ್ಷರಶಃ ಸತ್ಯ. ಹಾಗಾಗಿ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಹೈಕಮಾಂಡ್ ನೇತೃತ್ವ ಕೊಟ್ಟರೇ, ಕಾಂಗ್ರೆಸ್‌ಗೆ ಲಾಭವೂ ಉಂಟು, ನಷ್ಟವೂ ಉಂಟು. ಈಗ ಲಾಭ ಯಾರಿಂದ ಹೆಚ್ಚಾಗುತ್ತದೆ ಎನ್ನುವುದನ್ನು ಅರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಬಹಳ ಮುಖ್ಯ. 

ಡಿಕೆಶಿ ಕಾಂಗ್ರೆಸ್‌ಗೆ ಆಪತ್ಕಾಲದಲ್ಲಿ ಆದವರು. ೨೦೧೮ರ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರವಹಿಸಿದವರು ಡಿಕೆಶಿ. ೨೦೦೧ರ ಕಾಂಗ್ರೆಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ ವಹಿಸಿದ್ದರು. ೨೦೧೭ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮುನ್ನ ಪಕ್ಷಾಂತರ ಮಾಡಲು ಪ್ರಯತ್ನಿಸಿದ ಸುಮಾರು ೪೦೪೨ ಮಂದಿ ಶಾಶಕರನ್ನು ತಮ್ಮ ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್ಗೆ ಸ್ಥಳಾಂತರಿಸಿ ತಮ್ಮ ಪಕ್ಷದ ಹೈಕಮಾಂಡ್‌ಗೆ ಸಹಾಯ ಹಸ್ತ ಚಾಚಿದ್ದರು. ತರಯವಾಯ ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ್ದರು ಈ ಎಲ್ಲಾ ಋಣ ಕಾಂಗ್ರೆಸ್ ಹೈಕಮಾಂಡ್‌ಗೆ ಇದೆ. ಇನ್ನು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಗೆ ದೊಡ್ಡ ಪ್ರಮಾಣದ ವಿರೋಧದ ನಡುವೆಯೂ ಅವಕಾಶ ಕೊಟ್ಟಿರುವ ಋಣ ಖರ್ಗೆಗೆ ಇದೆ. ಹೈಕಮಾಂಡ್‌ಗೆ ಕರ್ನಾಟಕದ ವಿಚಾರದದಲ್ಲಿ ಖರ್ಗೆ ಮಾತು ಫೈನಲ್ ಎಂಬ ಹಾಗಿದೆ. ಸಿದ್ದು ಪರ ಖರ್ಗೆ ಋಣಕ್ಕಾಗಿಯಾದರೂ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸೋನಿಯಾ ಅಭಯವಿದ್ದರೂ ಡಿಕೆಶಿಗೆ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನ ನೀಡುವುದು ಬೇಡ ಎಂದು ರಾಹುಲ್ ಟೀಮ್ ಹೇಳುವ ಸಾಧ್ಯತೆ ಹೆಚ್ಚೇ ಇದೆ. ಇವೆಲ್ಲವನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎನ್ನುವುದು ಯಕ್ಷ ಪ್ರಶ್ನೆ. 

ಇತ್ತ ಕಳೆದ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಟಿ ಏರ್ಪಡಿಸಿ ಸುಮಾರು ೫,೨೪೦ ಕೋಟಿ ಮೊತ್ತದ ಬಿಟ್ ಕಾಯಿನ್ ವರ್ಗಾವಣೆ ಹಗರಣದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದು ಇಡೀ ದೇಶವನ್ನೇ ಕರ್ನಾಟಕದತ್ತ ಬೆರಗುಗಣ್ಣಿನಿಂದ ನೋಡುವ ಹಾಗೆ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಈ ಬಾರಿ ಚುನಾವಣೆಯ ಉದ್ದೇಶದಿಂದ ರಾಜ್ಯದಲ್ಲೇ ಠಿಕಾಣಿ ಹೂಡಿ ಚುನಾವಣಾ ರಣತಂತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ಪರವಾಗಿ ರಣತಂತ್ರ ಮಾಡುವುದಕ್ಕಾಗಿ ಚುನಾವಣಾ ತಂತ್ರಜ್ಞ ಸುನೀಲ್ ಕನ್ನುಗೋಲು ತಂಡವನ್ನು ಕಳುಹಿಸಿದ್ದು, ಈಗಾಗಲೇ ಸುನೀಲ್ ತಂಡ ಕಾಂಗ್ರೆಸ್ ಪರ ಕೆಲಸ ಆರಂಭಿಸಿದೆ. 

ಬಿಟ್ ಕಾಯಿನ್ ಹಗರಣ, ೪೦% ಕಮಿಷನ್, ಕೋವಿಡ್ ಅವ್ಯವಸ್ಥೆ, ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಾಗೂ ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಇತ್ಯಾದಿ ಹಗರಣ, ಭ್ರಷ್ಟಾಚಾರ, ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆಗೆ ಮುಂದಿಟ್ಟುಕೊಂಡು ರಾಜ್ಯದಲ್ಲಿ ಪುನರ್ಜನ್ಮಕ್ಕೆ ಪ್ಲ್ಯಾನ್  ಮಾಡುತ್ತಿದೆ. ಆದರೂ, ಈ ಹಗರಣ, ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಳ್ಳುವುದರೊಂದಿಗೆ ರಾಜ್ಯದಲ್ಲಿ ದೊಡ್ಡ ಸಮುದಾಯವನ್ನು ತಲುಪಬಲ್ಲ ಹೊಸ ರೂಪಾಂತರಿ ಕಾಂಗ್ರಸ್ ಪಕ್ಷ ಕಟ್ಟುವ ಕೆಲಸ ಆಗಬೇಕಾಗಿದೆ. ಮಾತ್ರವಲ್ಲದೇ, ಪಕ್ಷದ ಸಿದ್ಧಾಂತವನ್ನು ಸ್ಪಷ್ಟಪಡಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಸಮರ್ಥಿಸಿಕೊಳ್ಳುವ ವ್ಯವಸ್ಥೆ ರಚಿಸಿಕೊಳ್ಳುವುದು ಹಾಗೂ ಹಿಂದುತ್ವ, ಭ್ರಷ್ಟಾಚಾರದ ವಿರುದ್ಧ ಪ್ರಬಲವಾಗಿ ನಿಲ್ಲಬೇಕಾದ ಅನಿವಾರ್ಯ ಕಾಂಗ್ರೆಸ್‌ಗೆ ತುರ್ತಿದೆ. 

ಈ ಎಲ್ಲದಕ್ಕಿಂತಲೂ ಹೆಚ್ಚು ಕಾಂಗ್ರೆಸ್ ಅಗತ್ಯವಾಗಿ ಜನ ಸಮೂಹದೊಂದಿಗೆ ಸಂಪರ್ಕ ಸಾಧಿಸಿಕೊಳ್ಳಬೇಕಾಗಿದೆ. ತನ್ನ ಸೆಕ್ಯುಲರಿಸಂ ಧೋರಣೆಯ ನಿಜ ಉದ್ದೇಶವನ್ನು ಕಾಂಗ್ರೆಸ್ ತೋರಿಸಿಕೊಡಬೇಕಾಗಿದೆ. ಕಾಂಗ್ರೆಸ್ ಅಂದ್ರೆ ಮುಸ್ಲೀಂ ಸಮುದಾಯದ ಮುಖವಾಣಿ ಎಂಬಂತಹ ಅಭಿಪ್ರಾಯ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾಗಿದೆ, ಅದರಿಂದ ಶೀಘ್ರಮುಖವಾಗಿ ಹೊರಬಂದು ಕಾಂಗ್ರೆಸ್ ಸಮಾಜದ ಮುಖವಾಣಿ ಎಂಬುವುದನ್ನು ತೋರಿಸಿಕೊಡುವಲ್ಲಿ ಕಾರ್ಯೋನ್ಮುಖವಾಗಬೇಕಿದೆ. ೨೦೧೮ರ ವಿಧಾನಸಭಾ ಚುನಾವಣೆ ಅಕ್ಷರಶಃ ಸಿದ್ದರಾಮಯ್ಯ ವರ್ಸಸ್ ಮೋದಿ ಎಂಬ ಹಾಗಾಗಿತ್ತು. ಆದರೇ, ಈ ಬಾರಿ ಮೋದಿ ವರ್ಸಸ್ ಕಾಂಗ್ರೆಸ್ ಎಂಬಂತೆ ಚುನಾವಣೆ ನಡೆಯಬಾರದು. ಹೈಕಮಾಂಡ್‌ನಿಂದ ಕಳುಹಿಸಿದ ರಾಜಕೀಯ ತಂತ್ರಜ್ಞ ಸುನೀಲ್ ಕೂಡ ಈಗ ಇದನ್ನೇ ಹೇಳುತ್ತಿರುವುದು ಎನ್ನುವುದು ಇಲ್ಲಿ ಗಮನಾರ್ಹ.

ಒಟ್ಟಿನಲ್ಲಿ, ಕಾಂಗ್ರೆಸ್ ಸೈದ್ಧಾಂತಿಕ ಸ್ಪಷ್ಟತೆಯನ್ನು ಮೊದಲು ಕಂಡುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನನ್ನು ಅಧಿಕಾರಕ್ಕೆ ತರುವ ಬಯಕೆ ಅನುಭವಿ, ಪ್ರಭಾವಿ ನಾಯಕರುಗಳ ಮನಸ್ಸಲ್ಲಿ ಇರುವುದು ನಿಜವೇ ಆಗಿದ್ದರೇ, ತಮ್ಮ ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಪ್ರಬುದ್ಧ ನಡೆಯಿಂದ ಚುನಾವಣೆಯನ್ನು ಎದುರಿಸಬೇಕಾಗಿರುವುದು ಸದ್ಯಕ್ಕೆ ಕಾಂಗ್ರೆಸ್‌ಗೆ ಅಗತ್ಯವಿದೆ ಎಂಬುವುದು ಸ್ಪಷ್ಟ. 

-ಶ್ರೀರಾಜ್ ವಕ್ವಾಡಿ