ಹೈಪರ್ ರಾಷ್ಟ್ರೀಯವಾದಿ ರಾಜಪಕ್ಸೆ, ಅಲ್ಪಸಂಖ್ಯಾತ ತಮಿಳರ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಿದ್ದ..!
ಸರ್ವಾಧಿಕಾರದ ಕರಿನೆರಳನ್ನು ಒಪ್ಪುವ ದೇಶ ಅಧಪತನಗೊಳ್ಳುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ಕಂಡು ಸೊರಗಿದ ಶ್ರೀಲಂಕಾವೇ ಸಾಕ್ಷಿ. ಸುಮಾರು ಐದು ದಶಕಗಳ ನಂತರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸುತ್ತಿದೆ. ಗೋಡೆಗೆ ಹಚ್ಚಿದ ಹೊಸ ಬಣ್ಣವನ್ನೇ ಅಭಿವೃದ್ಧಿ ಎಂದು ನಂಬಿದ ಜನ ಬೀದಿ ಬೀದಿಗಳಲ್ಲಿ ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟಿರುವುದಕ್ಕೆ ಮುಖ್ಯ ಕಾರಣವೇ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ ಎಂದೇ ಹೇಳಲಾಗುತ್ತಿದೆ. ಶ್ರೀಲಂಕಾ ದೇಶಕಂಡ ಅತ್ಯಂತ ಕೆಟ್ಟ ಪ್ರಧಾನಮಂತ್ರಿ ಎಂಬ ಪಟ್ಟಕ್ಕೆ ರಾಜಪಕ್ಸೆ ಸೇರ್ಪಡೆಗೊಂಡಿದ್ದಾರೆ.
ಪ್ರಚಾರದ ಹುಚ್ಚಿನಿಂದಲೇ ಪ್ರಧಾನಮಂತ್ರಿ ಸ್ಥಾನಕ್ಕೇರಿದ ಮಹಿಂದಾ ರಾಜಪಕ್ಸೆ ಆರಂಭದಿಂದಾದಿಯಾಗಿ ತಳೆದಿದ್ದು ಸರ್ವಾಧಿಕಾರ ಧೋರಣೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ದೇಶದ ಜನರಿಗೆ ಸುಳ್ಳು ಭರವಸೆ ನೀಡುತ್ತಲೇ ಅಭಿವೃದ್ಧಿ ಹೆಸರಿನಲ್ಲಿ ನಂಬಿಸಿದ. ಶ್ರೀಲಂಕಾ ದೇಶ ಇಂದು ಅತ್ಯಂತ ಕೆಟ್ಟ ಸ್ಥಿತಿಗೆ ಬರುವುದಕ್ಕೆ ನೇರಾನೇರ ಕಾರಣವೇ ರಾಜಪಕ್ಸೆ. ಹೈಪರ್ ಶ್ರೀಲಂಕಾ ರಾಷ್ಟ್ರೀಯವಾದಿ ಹೆಸರಿನಲ್ಲಿ ಆಡಳಿತ ನಡೆಸಿದ ಮಹಿಂದಾ ಮಾಡಿದ್ದು ಜನರನ್ನು ಉದ್ರಿಕ್ತಗೊಳಿಸಿದ್ದು ಅಷ್ಟೇ. ಹೌದು ಸರ್ವಾಧಿಕಾರ, ಜನಾಂಗೀಯವಾದ, ಭಾಷಾವಾದ, ಕೋಮುವಾದದ ವಿಚಾರವಾಗಿ ಶ್ರೀಲಂಕಾ ಇಡೀ ಜಗತ್ತಿಗೆ ದೊಡ್ಡ ಪಾಠವನ್ನೇ ನೀಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ರಾಷ್ಟ್ರೀಯವಾದ ಬೇರೆ, ಆಕ್ರಮಣಕಾರಿ ರಾಷ್ಟ್ರೀಯವಾದ ಬೇರೆ. ಶ್ರೀಲಂಕಾದಲ್ಲಿ ತನಗೆ ಪರ್ಯಾಯವೇ ಇಲ್ಲ ಎಂಬ ಭ್ರಮೆಯಲ್ಲಿಯೇ ಆಡಳಿತ ನಡೆಸಿದ ರಾಜಪಕ್ಸೆ ತನ್ನ ಮಾತುಗಳಲ್ಲಿ, ಧರ್ಮ, ಜನಾಂಗ, ಭಾಷೆಯ ವಾದದ ಮಾತನಾಡಿ ಜನರನ್ನು ಭ್ರಮೆಯಲ್ಲಿಯೇ ತೇಲಿಸಿ ದೇಶದ ಅಷ್ಟೂ ಆರ್ಥಿಕ ವ್ಯವಸ್ಥೆಯೇ ತನ್ನ ಕುಟುಂಬದ ಕೈಯಡಿಗೆ ಬರುವಷ್ಟರ ಮಟ್ಟಿಗೆ ಮಾಡಿಕೊಂಡಿದ್ದ ಎಂದರೇ ಆಶ್ಚರ್ಯಪಡಬೇಕಾಗಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಹಿಂದಾ ನಡೆಸಿದ್ದು ಸರ್ವಾಧಿಕಾರ. ಶ್ರೀಲಂಕಾದಲ್ಲಿನ ಸಿಂಹಳಿಯರ ಓಲೈಕೆಗಾಗಿ ತಮಿಳು ಅಲ್ಪಸಂಖ್ಯಾತರನ್ನು ಹೊರಗೋಡಿಸುವ ಭರವಸೆ ಹುಟ್ಟಿಸಿ, ಜನಾಂಗೀಯ ದ್ವೇಷ ಹುಟ್ಟಿಸಿ ಅಧಿಕಾರವನ್ನು ಕೇಂದ್ರೀಕರಿಸಿಕೊಂಡು ದೇಶದ ಜನರನ್ನು ಮಹಿಂದಾ ನಯವಂಚನೆಗೆ ಸಿಲುಕಿಸಿದ್ದು ಅಲ್ಲಿನ ಜನರಿಗೆ ಗೊತ್ತೆಯಾಗಲಿಲ್ಲ. ಮಹಿಂದಾ ಹೂಡಿದ ವ್ಯವಸ್ಥಿತ ಹುನ್ನಾರಗಳಲ್ಲಿ ಇದೂ ಒಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ತಮಿಳರ ವಿರುದ್ಧ ಆಕ್ರಮಣಕಾರಿ ವಾತಾವರಣ ಸೃಷ್ಟಿಯಾಗುವ ಹಾಗೆ ಮಾಡಿದ್ದೇ ಇದೇ ರಾಜಪಕ್ಸೆ. ಸಿಂಹಳಿಯ ಬುದ್ದಿಸಂ ಅನ್ನು ಮೇಲೆತ್ತಿ ಕಟ್ಟುವುದರಿಂದಲೇ ಜೀವನ ಪರ್ಯಂತ ಅಧಿಕಾರದಲ್ಲಿ ಇರಬಹುದು ಎಂದು ಕನಸು ಕಂಡ ಮಹಿಂದಾ ಅಲ್ಲಿನ ಜನರೇ ತನ್ನ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಊಹಿಸಿಕೊಂಡಿರಲಿಕ್ಕಿಲ್ಲ.
ಹೇಳಿಕೇಳಿ ವಸಾಹುತುಶಾಹಿ ಯುಗದಲ್ಲಿ ಊಳಿಗಮಾನ್ಯ ಹುದ್ದೆಗಳನ್ನು ಹೊಂದಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ರಾಜಪಕ್ಸೆ, ತನ್ನ ಆಡಳಿತದಲ್ಲಿಯೂ ವಸಾಹುತುಶಾಹಿ ಧೋರಣೆಯನ್ನು ತರುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ಅಲ್ಲಿನ ಜನರು ತಮ್ಮ ಒಳಿತಿಗಾಗಿಯೇ ಮಾಡುತ್ತಿರುವುದೆಂದು ನಂಬಿ ಮೋಸ ಹೋದರು. ನಿರಂತರ ಬೆಲೆ ಏರಿಕೆ, ಹಣದುಬ್ಬರವಾಗುತ್ತಿದ್ದಾಗಲು ಅಲ್ಲಿನ ಬಹುಸಂಖ್ಯಾತ ಸಿಂಹಳಿಯರು ಇದು ದೇಶದ ಒಳಿತಿಗಾಗಿಯೇ ಆಗುತ್ತಿದೆ ಎಂದು ಕುರುಡಾಗಿ ನಂಬಿದರು. ಯಾಕೆಂದರೇ, ಅಲ್ಲಿನ ಮಹಿಂದಾ ರಾಜಪಕ್ಸೆ ಸರ್ಕಾರ ಜನಾಂಗೀಯ ಆಧಾರಿತವಾಗಿ ರಾಷ್ಟ್ರೀಯವಾದದ ಚಿಂತನೆಯನ್ನು ಅಲ್ಲಿನ ಜನರ ತಲೆಯೊಳಗೆ ಬಲವಂತವಾಗಿ ತುರುಕಿಸಿತ್ತು. ಮತ್ತದರ ಚೆಂದ ಕಾಣುವುದಕ್ಕೆ ಆರಂಭ ಮಾಡಿತ್ತು. ದೇಶದಲ್ಲಿ ಜಿಡಿಪಿ ಸರ್ವನಾಶವಾಗುತ್ತಿರುವಾಗಲೂ ರಾಜಪಕ್ಸೆ ಸರ್ಕಾರ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದೇ ಸುಳ್ಳು ಹೇಳಿ ನಂಬಿಸಿತು. ದೇಶದ ಪ್ರತಿಶತ ಬಹುತೇಕ ಎಪ್ಪತ್ತರಷ್ಟು ಆರ್ಥಿಕ ವ್ಯವಸ್ಥೆಯನ್ನೇ ತನ್ನ ಕುಟುಂಬದ ಪಾದದಡಿಯಲ್ಲಿರುವಂತೆ ಮಾಡಿಕೊಂಡ ರಾಜಪಕ್ಸೆಗೆ ದೇಶ ಸರ್ವನಾಶವಾಗುವವರೆಗೂ ಅಲ್ಲಿನ ಒಬ್ಬನಿಗೂ ಸರ್ವಾಧಿಕಾರದ ರೋಗವಿದೆ ಎನ್ನುವುದನ್ನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಅಂತಹ ಕ್ರಿಮಿನಲ್ ಮೈಂಡ್ ಬಳಸಿದ್ದ ಎನ್ನುವುದಿದರರ್ಥ. ದೇಶಕ್ಕೆ ವಿಶ್ವಬ್ಯಾಂಕ್ನಿಂದ ಸಾಲದ ಹೊರೆ ಹೊರೆಸಿದ, ಪ್ರಧಾನ ಮಂತ್ರಿ ಗದ್ದುಗೆಗೆ ನೆತ್ತರ ಕಲೆಗಳನ್ನು ಅಂಟಿಸಿದ. ಇಡೀ ಶ್ರೀಲಂಕಾವನ್ನೇ ಅಷ್ಟು ಸುಲಭವಾಗಿ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗದಿರುವಷ್ಟರ ಮಟ್ಟಿಗೆ ಪಾತಾಳಕ್ಕೆ ತಳ್ಳಿದ. ಇನ್ನು, ಮಹಿಂದಾ ರಾಜಪಕ್ಸೆಯ ಕೋಮುವಾದವನ್ನು, ಸರ್ಕಾರವನ್ನು ಪ್ರಶ್ನಿಸಿದವರು ಶ್ರೀಲಂಕಾದಲ್ಲಿ ಬೀದಿ ಹೆಣಗಳಾದರು. ಸತ್ಯ ಹೇಳಲು ಪ್ರಯತ್ನಿಸಿದ ಅಲ್ಲಿನ ಮಾಧ್ಯಮಗಳ ಹಾಗೂ ಪತ್ರಕರ್ತರ ಧ್ವನಿ ಅಡಗಿಸಲಾಯಿತು.
ಏನಿದರ ಹಿಂದಿನ ಕಥೆ : ೧೯೫೬ರಲ್ಲಿ ಶ್ರೀಲಂಕಾ ಕೋಮುವಾದಿ ಸರ್ಕಾರ ಸಿಂಹಳವನ್ನು ಶ್ರೀಲಂಕಾದ ಅಧಿಕೃತ ಭಾಷೆ ಎಂದು ಘೋಷಿಸಿದ್ದೇ ಅಲ್ಲಿ ಜನಾಂಗೀಯ ದ್ವೇಷಕ್ಕೆ ನಾಂದಿಯಾಯಿತು. ಸಿಂಹಳಿಯರು ತಮಿಳರನ್ನು ಅತ್ಯಂತ ಕೀಳಾಗಿ ನೋಡುವುದಕ್ಕೆ ಆರಂಭಿಸಿದರು. ಜನಾಂಗೀಯ ದ್ವೇಷವೊಂದೇ ಕಾರಣಕ್ಕಾಗಿ ನೂರಾರು ತಮಿಳರನ್ನು ಬೀದಿ ಬೀದಿಗಳಲ್ಲಿ ಧಾರುಣವಾಗಿ ಕೊಂದರು. ಆರ್ಥಿಕ ಹಾಗೂ ಶಿಕ್ಷಣದಿಂದ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರನ್ನು ವಂಚಿತರಾಗುವಂತೆ ಕಂಡುಕೊಂಡರು. ಇಲ್ಲಿಂದ ಆಚೆಗೆ ಶ್ರೀಲಂಕಾ ಈ ಜನಾಂಗೀಯ ದ್ವೇಷದಲ್ಲಿ ಕಂಡಿದ್ದು ರಕ್ತ ಚರಿತ್ರೆ. ಸುಮಾರು ೧೯೫೮ರಿಂದಲೇ ಶ್ರೀಲಂಕಾದಲ್ಲಿ ಇದ್ದ ತಮಿಳರ ವಿರುದ್ಧದ ವಾತಾವರಣಕ್ಕೆ ಈ ರಾಜಪಕ್ಸೆ ಎಂಬ ಕೋಮುವಾದಿ ೨೦೦೮ರಲ್ಲಿ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರ ಮೇಲೆ ಯುದ್ಧ ಸಾರಿಯೇ ಬಿಟ್ಟ. ಇದು ರಾಜಪಕ್ಸೆ ಹೂಡಿದ ಮತ್ತೊಂದು ವ್ಯವಸ್ಥಿತ ಜನಾಂಗೀಯ ಹತ್ಯೆ. ರಾಜಪಕ್ಸೆಯ ನೀಡಿದ ಆದೇಶದ ಮೇರೆಗೆ ಸಿಂಹಳಿಯ ಸೈನಿಕರು ತಮಿಳು ಮಹಿಳೆಯರನ್ನು ಬೀದಿ ಬೀದಿಗಳಲ್ಲಿ ನಗ್ನಗೊಳಿಸಿ ಅತ್ಯಾಚಾರವೆಸಗಿದರು. ಕಂಡಕಂಡಲ್ಲಿ ತಮಿಳರನ್ನು ಗುಂಡಿಕ್ಕಿ ಕೊಂದರು. ಇಡೀ ಶ್ರೀಲಂಕಾವೇ ತಮಿಳರ ರಕ್ತದೋಕುಳಿಯಲ್ಲಿ ಮುಳುಗಿತ್ತು. ಶ್ರೀಲಂಕಾದಲ್ಲಿ ತಮಿಳರನ್ನು ನಿರ್ನಾಮ ಮಾಡುವುದೇ ರಾಜಪಕ್ಸೆಯ ಉದ್ದೇಶ ಎನ್ನುವುದು ಇಲ್ಲಿಯೇ ಸ್ಪಷ್ಟವಾಗಿತ್ತು. ಈ ಜನಾಂಗೀಯ ದ್ವೇಷ ಹುಟ್ಟಿಸುವ ಬದಲಾಗಿ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಿ ದೇಶದ ಸುಧಾರಣೆಯತ್ತ ಚಿಂತಿಸಿದ್ದಿದ್ದರೇ, ಇವತ್ತು ಶ್ರೀಲಂಕಾಗೆ ಈ ಸ್ಥಿತಿ ಬರುತ್ತಿರಲಿಲ್ಲ. ಕೋಮುವಾದಿಯೊಬ್ಬನಿಂದ ಸಮಾನತೆಯನ್ನು ನಿರೀಕ್ಷಿಸುವುದಕ್ಕೆ ಹೇಗೆ ಸಾಧ್ಯವಿದೆ ಹೇಳಿ. ಶ್ರೀಲಂಕಾ ರಾಷ್ಟ್ರೀಯವಾದಿ ಸಿಂಹಳಿ ಬುದ್ಧಿಷ್ಟರಿಗೆ ಮಾತ್ರ ಸೇರಿದ್ದು ಎಂದು ತನ್ನ ಆಡಳಿತದುದ್ದಕ್ಕೂ ಹೇಳುತ್ತಲೇ ಇದ್ದ ರಾಜಪಕ್ಸೆಗೆ ಅಪಾರವಾದ ಜನಬಲ ದೊರಕಿತು. ರಾಜಕೀಯ ಆಟಕ್ಕೆ ಬೇಕಾಗಿ ಸಿಂಹಳಿ ಬುದ್ಧಿಷ್ಟರ ಮನವೋಲೈಕೆಯ ಉದ್ದೇಶದಿಂದ ಲಂಕೆಯಲ್ಲಿದ್ದ ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸಿ ಬೌದ್ಧ ಸ್ತೂಪಗಳನ್ನು ಕಟ್ಟಿಸಿ ಮೆರೆದ. ತನಗೆ ಬೇಕಾದ ಹಾಗೆ ಸರ್ಕಾರದ ನೀತಿ ನಿಯಮಗಳನ್ನು, ಕಾನೂನುಗಳನ್ನು ರೂಪಿಸಿಕೊಂಡ. ತನ್ನ ನ್ಯೂನ್ಯತೆಗಳನ್ನ ಬರೆಯುವ ಪತ್ರಕರ್ತರ ಅಡ್ರೆಸ್ ಇಲ್ಲದ ಹಾಗೆ ಮಾಡಿದ. ಅವ್ಯಾಹತವಾಗಿ ಜನಾಂಗೀಯ ದ್ವೇಷ ಅತಿರಂಜಕತೆಯಲ್ಲಿಯೇ ಇರುವ ಹಾಗೆ ನೋಡಿಕೊಂಡ. ಇನ್ನು, ತಾನಿರುವವರಗೆ ತನ್ನ ಪರವಾಗಿ ಸಿಂಹಳಿಯ ಬುದ್ದಿಷ್ಟರು ಜೊತೆಗಿರುತ್ತಾರೆ ಎಂಬ ಭ್ರಮೆ ಆತನಲ್ಲಿ ಹೆಚ್ಚಾಗ ತೊಡಗಿತು. ತಾನು ಏನೇ ಹೇಳಿದರು ಒಪ್ಪುತ್ತಾರೆಂದು ಸಂವಿಧಾನವನ್ನೇ ಬದಲಾಯಿಸಿದ. ಪ್ರಚಾರದ ಹುಚ್ಚಿನಲ್ಲಿ ತೇಲಿದ. ದೇಶದ ಆಮದುಗಳನ್ನು ಲೂಟಿ ಹೊಡೆದ. ತನ್ನ ಸರ್ಕಾರದಲ್ಲಿ ತನ್ನ ಕುಟುಂಬದ ನಾಲ್ಕು ತಲೆಮಾರಿನವರನ್ನು ಸೇರಿಸಿಕೊಳ್ಳುವಷ್ಟರಮಟ್ಟಿಗೆ ಮುಂದುವರಿದ ಎಂದರೇ ಶ್ರೀಲಂಕಾ ಜನರು ಮೋಸ ಹೋಗಿದ್ದಲ್ಲದೇ ಮತ್ತೇನು..?
ರಾಷ್ಟ್ರೀಯವಾದ, ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಕಂತೆ ಕಂತೆ ಸುಳ್ಳು ಬೊಗಳಿ ಅಧಿಕಾರಕ್ಕೆ ಬಂದ ರಾಜಪಕ್ಸೆ ಪ್ರೇರೇಪಿಸಿದ್ದು ಎಂತದ್ದು ಎನ್ನುವುದು ‘ನೋ ಫೈರ್ ಜ್ಹೋನ್’ ಸಾಕ್ಷö್ಯ ಚಿತ್ರ ಗಮನಿಸಿದರೇ ತಿಳಿಯುವುದಕ್ಕೆ ಸಾಧ್ಯ. ಶ್ರೀಲಂಕಾ ಎಷ್ಟರ ಮಟ್ಟಿಗೆ ಆರ್ಥಿಕ ದಿವಾಳಿಯಾಗಿದೆ ಎಂದರೇ ಅಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೆ ಸಾಧ್ಯವಾಗದಷ್ಟು. ಆರ್ಥಿಕ ಭೀಕರತೆಯನ್ನು ಅನುಭವಿಸುತ್ತಿರುವ ಶ್ರೀಲಂಕಾದ ಜನ ಇಂದು ಹೊತ್ತಿನ ಆಹಾರಕ್ಕೆ ಪರದಾಡುತ್ತಿದ್ದಾರೆ. ಉದ್ಯೋಗಕ್ಕೆ ಒದ್ದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಊಹಿಸಿಕೊಳ್ಳಲಾರದಷ್ಟರಮಟ್ಟಿಗಿನ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ದೂರದೃಷ್ಟಿಯಿಲ್ಲದ ಸರ್ಕಾರ ಮಾಡಿದ ವಿದೇಶಿ ಸಾಲದಿಂದ ಶ್ರೀಲಂಕಾದ ಜನ ಬೀದಿಗೆ ಬಿದ್ದಿದ್ದಾರೆ. ಶ್ರೀಲಂಕಾದ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಲ್ಲಿನ ಜನರನ್ನು ಮೃಗೀಯ ಧೋರಣೆಯಿಂದ ಉಸಿರು ನಿಲ್ಲಿಸಲಾಗಿದೆ. ಶ್ರೀಲಂಕಾದ ರಾಜಕೀಯದಲ್ಲಿ ತಮಿಳರ ರಕ್ತದ ವಾಸನೆಯಿದೆ. ರಾಜಪಕ್ಸೆ ಕುಟುಂಬದ ಕೋಮು ಅಫೀಮು ಅಂಟಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ರಾಷ್ಟ್ರೀಯವಾದ, ಜನಾಂಗೀಯವಾದ, ಧರ್ಮಾಧಾರಿತ ನಿಲುವು, ಕೋಮುವಾದ, ಬಹುಪಕ್ಷಪಾತ ಯಾವುದೂ ಕೆಲಸ ಮಾಡುವುದಿಲ್ಲವೆಂದು ತಿಳಿದು ನರಿ ಬುದ್ಧಿಯಿಂದ ರಾಜಪಕ್ಸೆ ಎಲ್ಲೋ ಅಡಗಿ ಕುಳಿತ. ಸದ್ಯ, ರನೆಲ್ ವಿಕ್ರಮಸಿಂಘೆ ದೇಶದ ಹೊಣೆ ಹೊತ್ತಿದ್ದು, ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಅತೀವ ಕುತೂಹಲವಿದೆ.
ಕೋಮುವಾದಿ, ಸರ್ವಾಧಿಕಾರಿ ಧೋರಣೆಯುಳ್ಳ ಒಬ್ಬನ ದೂರದೃಷ್ಟಿಯಿಲ್ಲದ, ಅಶಿಸ್ತಿನ ಆಡಳಿತದಲ್ಲಿ ಶ್ರೀಲಂಕಾ ಎಂಬ ಒಂದು ದೇಶ ಈ ಸ್ಥಿತಿಗೆ ತಲುಪಿದೆ ಎಂದರೇ ಇದು ಭಾರತಕ್ಕೂ ಸೇರಿ ಇಡೀ ಜಗತ್ತಿಗೆ ಒಂದು ಪಾಠ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಸರ್ವಾಧಿಕಾರ ಧೋರಣೆ ಕಂಡ ಎಲ್ಲಾ ದೇಶಗಳು ಅನುಭವಿಸಿದ್ದು ಇದೇ ಎನ್ನುವುದು ಇಲ್ಲಿ ಗಮನಾರ್ಹ. ದ್ವೀಪ ರಾಷ್ಟçದಲ್ಲಿ ಎದ್ದ ಸಾರ್ವಜನಿಕರ ಕೋಪವಂತೂ ಸದ್ಯಕಂತೂ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿದವನ ವಿರುದ್ಧ ಲಂಕೆಯ ಜನರ ಕೋಪ ತಾರಕಕ್ಕೇರಿದೆ. ಇನ್ನು, ಲಂಕೆಯ ಮುಂದಿನ ಕೆಲವು ತಿಂಗಳು ಅತ್ಯಂತ ಭೀಕರವಾಗಿರಲಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಈ ನಡುವೆ ಹೇಗೆ ಲಂಕೆ ಈ ಸ್ಥಿತಿಯಿಂದ ಹೊರಬರಲಿದೆ ಎಂಬುವುದೇ ಸದ್ಯದ ಅಚ್ಚರಿ.
-ಶ್ರೀರಾಜ್ ವಕ್ವಾಡಿ



