Monday, August 31, 2026

ಭಾಗವತರ ಮಾತನ್ನು ಬಿಜೆಪಿ ಒಪ್ಪುತ್ತಾ !? ಬಿಜೆಪಿಯ ಧರ್ಮ ರಾಜಕಾರಣಕ್ಕೆ 'ಸಂಘ'ದ ಅಂಕುಶ !?

ಭಾರತದಲ್ಲಿ ಮುಸ್ಲಿಮರೇ ಇರಬಾರದು’ ಎನ್ನುವವರು ಹಿಂದೂವಲ್ಲ: ಭಾಗವತ್ ಮಾತಿನ ರಾಜಕೀಯ ಸಂದೇಶವೇನು? ಭಾರತದ ರಾಜಕೀಯದಲ್ಲಿ ‘ಹಿಂದುತ್ವ’ ಎಂಬ ಪದವನ್ನು ಬಹಳಷ್ಟು ಬಾರಿ ಮುಸ್ಲಿಂ ವಿರೋಧಿ ರಾಜಕಾರಣದೊಂದಿಗೆ ಸಮೀಕರಿಸಲಾಗುತ್ತದೆ. ಚುನಾವಣಾ ಭಾಷಣಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿನ ರಾಜಕೀಯ ಪ್ರಚಾರದವರೆಗೆ, ಸಾಕಷ್ಟಿವೆ. ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿಕದಲ್ಲಿ ನೀಡಿರುವ ಹೇಳಿಕೆ ರಾಜಕೀಯ ಚರ್ಚೆಗೆ ಹೊಸ ಪ್ರಶ್ನೆಗಳನ್ನು ಎತ್ತಿದೆ.

“ಭಾರತದಲ್ಲಿ ವಾಸಿಸುವ ಹಕ್ಕು ಎಲ್ಲ ಸಮುದಾಯದವರಿಗೂ ಇದೆ. ಮುಸ್ಲಿಮರು ಭಾರತದಲ್ಲಿ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ ಎಂಬ ಭಾಗವತ್ ಅವರ ಮಾತು, ಕೇವಲ ಒಂದು ಹೇಳಿಕೆಯಾಗಿ ನೋಡಿದರೆ ಅದರ ರಾಜಕೀಯ ಮಹತ್ವ ಕಡಿಮೆಯಾಗಬಹುದು. ಆದರೆ ಬಿಜೆಪಿಯ ರಾಜಕೀಯ ಭಾಷೆ ಮತ್ತು ಆರ್‌ಎಸ್‌ಎಸ್‌ನ ವೈಚಾರಿಕ ನಿಲುವಿನ ನಡುವಿನ ಸಂಬಂಧವನ್ನು ಗಮನಿಸಿದಾಗ, ಈ ಹೇಳಿಕೆಯನ್ನು ಗಂಭೀರವಾಗಿ ಚರ್ಚಿಸಬೇಕಾದ ಅಗತ್ಯವಿದೆ. ಭಾರತ ಕೇವಲ ಬಹುಸಂಖ್ಯಾತರ ದೇಶವಲ್ಲ. ಹಲವು ಧರ್ಮಗಳು, ಭಾಷೆಗಳು, ಜಾತಿಗಳು, ಸಂಸ್ಕೃತಿಗಳು ಮತ್ತು ಪರಂಪರೆಗಳು ಒಟ್ಟಾಗಿ ರೂಪಿಸಿರುವ ನಾಗರಿಕತೆ. ಈ ವೈವಿಧ್ಯತೆಯೇ ಭಾರತದ ವಿಶಿಷ್ಟತೆ. ಹೀಗಾಗಿ ‘ಒಂದು ಧರ್ಮದ ಭಾರತ’ ಎಂಬ ಕಲ್ಪನೆಗಿಂತ ‘ವೈವಿಧ್ಯತೆಯೊಳಗಿನ ಏಕತೆ’ ಎಂಬ ಪರಿಕಲ್ಪನೆ ಭಾರತೀಯ ಸಮಾಜದ ವಾಸ್ತವಿಕತೆಗೆ ಹೆಚ್ಚು ಹತ್ತಿರ. ಭಾಗವತ್ ಅವರ ಮಾತಿನಲ್ಲೂ ಇದೇ ಅಂಶ ಸ್ಪಷ್ಟವಾಗುತ್ತದೆ. “ನಾನು, ನನ್ನದು” ಎನ್ನುವ ಮನಸ್ಥಿತಿಯ ಬದಲು “ನಾವು, ನಮ್ಮದು” ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂಬ ಅವರ ಸಂದೇಶ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎಂಬ ರಾಜಕೀಯ ವಿಭಜನೆಯಾಚೆಗೆ ಸಮಾಜವನ್ನು ನೋಡುವ ಪ್ರಯತ್ನವಾಗಿ ಕಾಣುತ್ತದೆ.ಹಾಗಾದರೆ ಬಿಜೆಪಿಯ ರಾಜಕೀಯಕ್ಕೆ ಈ ಸಂದೇಶ ಯಾಕೆ ಮುಖ್ಯ?ನೋಡಿ, ಇಲ್ಲಿಯೇ ಮೂಲ ಪ್ರಶ್ನೆ ಎದುರಾಗುತ್ತದೆ. ಆರ್‌ಎಸ್‌ಎಸ್ ಬಿಜೆಪಿಯ ಮಾತೃಸಂಸ್ಥೆ. ಬಿಜೆಪಿಯ ಅನೇಕ ಪ್ರಮುಖ ನಾಯಕರು ತಮ್ಮ ರಾಜಕೀಯ ಪಯಣವನ್ನು ಸಂಘದ ಶಾಖೆಗಳಿಂದಲೇ ಆರಂಭಿಸಿದ್ದಾರೆ.

ಸಂಘದ ವೈಚಾರಿಕ ಪ್ರಭಾವ ಬಿಜೆಪಿಯ ಮೇಲೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಸಂಘದ ಮುಖ್ಯಸ್ಥರೇ ಮುಸ್ಲಿಮರು ಭಾರತದಲ್ಲಿ ಇರಬಾರದು ಎನ್ನುವ ಬಿತ್ತಿದ ಮನೋಭಾವವನ್ನು ತಿರಸ್ಕರಿಸಿದಾಗ, ಆ ಸಂದೇಶ ಬಿಜೆಪಿಯ ರಾಜಕೀಯ ಭಾಷೆಯಲ್ಲೂ ಪ್ರತಿಫಲಿಸಬೇಕಲ್ಲವೇ?ಚುನಾವಣೆ ಬಂದಾಗ ಮುಸ್ಲಿಂ ಸಮುದಾಯವನ್ನು ರಾಜಕೀಯವಾಗಿ ‘ಇತರ’ರನ್ನಾಗಿ ಚಿತ್ರಿಸುವ ಪ್ರಯತ್ನಗಳು ನಡೆಯುತ್ತಿದ್ದರೆ, ಧಾರ್ಮಿಕ ಧ್ರುವೀಕರಣದ ಮೂಲಕ ಮತಗಳನ್ನು ಕ್ರೋಢೀಕರಿಸುವ ಭಾಷೆ ಕೇಳಿಬರುತ್ತಿದ್ದರೆ, ಭಾಗವತ್ ಅವರ ಈ ಮಾತುಗಳು ಆ ರಾಜಕೀಯಕ್ಕೆ ಒಂದು ಆತ್ಮಪರಿಶೀಲನೆಯ ಅವಕಾಶವನ್ನು ನೀಡುತ್ತವೆ. ಸಂಘದ ಮುಖ್ಯಸ್ಥರ ಮಾತು ಸಂಘದೊಳಗೇ ಉಳಿಯಬೇಕೇ? ಅಥವಾ ಬಿಜೆಪಿಯ ರಾಜಕೀಯದಲ್ಲೂ ಅದರ ಪ್ರತಿಫಲನ ಕಾಣಬೇಕೇ?

ಇದು ಇಂದು ಕೇಳಬೇಕಾದ ಪ್ರಮುಖ ಪ್ರಶ್ನೆ.‘ಹಿಂದೂ ರಾಷ್ಟ್ರ’ದ ಅರ್ಥವೇನು?ಭಾಗವತ್ ಅವರ ಹೇಳಿಕೆಯಲ್ಲಿ ಮತ್ತೊಂದು ಪ್ರಮುಖ ಅಂಶವಿದೆ.ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು?” ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ, “ದೇಶದಲ್ಲಿ ಮುಸ್ಲಿಂ ಇರಬಾರದು ಎನಮದು ಭಾವಿಸಿದರೆ ಆತ ಹಿಂದೂವಲ್ಲ” ಎಂದು ಭಾಗವತ್ ಪ್ರತಿಕ್ರಿಯಿಸಿದ್ದಾರೆ.

ಈ ಮಾತು ‘ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಯನ್ನೇ ಹೊಸ ಚರ್ಚೆಗೆ ಎಳೆಯುತ್ತದೆ.

ಒಂದು ದೇಶವನ್ನು ಹಿಂದೂ ರಾಷ್ಟ್ರ ಎಂದು ಪರಿಗಣಿಸುವುದೆಂದರೆ ಅಲ್ಲಿ ಮುಸ್ಲಿಮರಿಗೆ, ಕ್ರೈಸ್ತರಿಗೆ ಅಥವಾ ಇತರ ಸಮುದಾಯಗಳಿಗೆ ಎರಡನೇ ದರ್ಜೆಯ ಸ್ಥಾನವಿರಬೇಕೆಂದರ್ಥವೇ?ಅಥವಾ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿಯೂ ಭಾರತೀಯರೆಲ್ಲರಿಗೂ ಸಮಾನ ಸ್ಥಾನವಿದೆ ಎಂಬ ಸಂಘದ ವ್ಯಾಖ್ಯಾನವೇ ಮುಖ್ಯವೇ?

ಭಾಗವತ್ ಅವರ ಈ ಮಾತುಗಳನ್ನು ನೋಡಿದರೆ, ಕನಿಷ್ಠ ಅವರ ಸಾರ್ವಜನಿಕ ವ್ಯಾಖ್ಯಾನದಲ್ಲಿ ಎರಡನೆಯ ಅರ್ಥಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಗೋಚರಿಸುತ್ತದೆ.ಆದರೆ ಈ ವಿಚಾರವನ್ನು ಕೇವಲ ಹೇಳಿಕೆಯ ಮಟ್ಟದಲ್ಲಿ ಬಿಟ್ಟುಬಿಡಲು ಸಾಧ್ಯವಿಲ್ಲ. ಅದು ಸಾಮಾಜಿಕ ಮತ್ತು ರಾಜಕೀಯ ನಡವಳಿಕೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದೇ ನಿಜವಾದ ಪರೀಕ್ಷೆ. ಗಮನಿಸಿ, 

ಮುಸ್ಲಿಮರ ವಿರುದ್ಧದ ರಾಜಕೀಯಕ್ಕೆ ಸಂಘವೇ ಕಡಿವಾಣ ಹಾಕಬೇಕೇ?ಭಾರತೀಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯದ ಕುರಿತು ಭಯ, ಅನುಮಾನ ಮತ್ತು ಧ್ರುವೀಕರಣದ ಭಾಷೆ ಹೊಸದಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ, ಚುನಾವಣಾ ಪ್ರಚಾರ ಮತ್ತು ರಾಜಕೀಯ ಚರ್ಚೆಗಳಲ್ಲಿ ಈ ಭಾಷೆ ಹೆಚ್ಚು ಪ್ರಬಲವಾಗಿ ಕಾಣಿಸಿಕೊಂಡಿದೆ ಎಂಬ ಟೀಕೆಗಳಿವೆ.ಇಂತಹ ಸಂದರ್ಭದಲ್ಲಿ ಸಂಘದ ಮುಖ್ಯಸ್ಥರ ಹೇಳಿಕೆ ಒಂದು ರಾಜಕೀಯ ಸಂದೇಶವನ್ನು ನೀಡುತ್ತದೆ. ಹಿಂದುತ್ವ ಎಂದರೆ ಮುಸ್ಲಿಂ ವಿರೋಧವಲ್ಲ. ಹಿಂದುತ್ವ ಎಂದರೆ ಭಾರತೀಯ ಸಮಾಜದ ಎಲ್ಲ ಸಮುದಾಯಗಳನ್ನೂ ಒಳಗೊಂಡ ಒಂದು ಸಾಂಸ್ಕೃತಿಕ ಪರಿಕಲ್ಪನೆ ಎಂಬುದೇ ಸಂಘದ ನಿಲುವಾದರೆ, ಅದನ್ನು ರಾಜಕೀಯ ಕ್ಷೇತ್ರದಲ್ಲೂ ಸ್ಪಷ್ಟವಾಗಿ ಜಾರಿಗೊಳಿಸುವ ಹೊಣೆ ಸಂಘದ ಮೇಲಿದೆ.

ಬಿಜೆಪಿಯು ಕೂಡ ಇದೇ ಪರೀಕ್ಷೆಯನ್ನು ಎದುರಿಸಬೇಕಾಗಿದೆ.

ಮುಸ್ಲಿಂ ಸಮುದಾಯದ ಬಗ್ಗೆ ಅನುಮಾನ ಮೂಡಿಸುವ ಭಾಷೆ ಬಳಸುವ ರಾಜಕಾರಣಿಗಳಿಗೆ ಪಕ್ಷದೊಳಗಿಂದಲೇ ತಡೆ ಸಿಗುತ್ತದೆಯೇ? ಚುನಾವಣಾ ಲಾಭಕ್ಕಾಗಿ ಧಾರ್ಮಿಕ ಧ್ರುವೀಕರಣವನ್ನು ಬಳಸುವ ಪ್ರವೃತ್ತಿಗೆ ಪಕ್ಷ ಕಡಿವಾಣ ಹಾಕುತ್ತದೆಯೇ? ಅಲ್ಪಸಂಖ್ಯಾತರ ನಾಗರಿಕ ಹಕ್ಕುಗಳ ಬಗ್ಗೆ ಸಮಾನ ನಿಲುವು ವ್ಯಕ್ತವಾಗುತ್ತದೆಯೇ?

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅಥವಾ ಸಂಘದ್ದು ದೇಶದಲ್ಲೊಂದು, ವಿದೇಶದಲ್ಲೊಂದು ಸಿದ್ಧಾಂತವೇ ಎನ್ನುವುದನ್ನಾದರೂ ತಿಳಿಸಬೇಕಿದೆ. ಇನ್ನು, ಒಂದು ಹೇಳಿಕೆಯಿಂದ ರಾಜಕೀಯ ಬದಲಾಗುವುದಿಲ್ಲ.ಆದರೆ ಇಲ್ಲಿ ಮತ್ತೊಂದು ಎಚ್ಚರಿಕೆಯೂ ಅಗತ್ಯ.ಮೋಹನ್ ಭಾಗವತ್ ಅವರ ಒಂದು ಹೇಳಿಕೆಯನ್ನು ಆಧರಿಸಿ ಸಂಘ ಅಥವಾ ಬಿಜೆಪಿಯ ಸಂಪೂರ್ಣ ರಾಜಕೀಯವನ್ನು ‘ಸಮಾಜಮುಖಿ’ ಎಂದು ಘೋಷಿಸುವುದಕ್ಕರ ಆಗುವುದಿಲ್ಲವೋ, ಅದೇ ರೀತಿ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದೂ ಸರಿಯಲ್ಲ.

ರಾಜಕೀಯದಲ್ಲಿ ಮಾತಿಗಿಂತ ನಡೆ ಮುಖ್ಯ.ಮುಸ್ಲಿಮರಿಗೂ ಭಾರತದಲ್ಲಿ ಸಮಾನ ಹಕ್ಕಿದೆ ಎಂದು ಹೇಳುವುದು ಒಂದು ಸಂಗತಿ. ಆ ಸಮಾನತೆಯ ಭಾವನೆ ಸಮಾಜದ ಪ್ರತಿಯೊಂದು ಹಂತದಲ್ಲೂ ಪ್ರತಿಫಲಿಸುವಂತೆ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಪ್ರೇರೇಪಿಸುವುದು ಮತ್ತೊಂದು ಸಂಗತಿ.ಭಾಗವತ್ ಅವರ ಹೇಳಿಕೆಯ ನಿಜವಾದ ಮೌಲ್ಯ, ಮುಂದಿನ ದಿನಗಳಲ್ಲಿ ಸಂಘ ಮತ್ತು ಬಿಜೆಪಿಯ ರಾಜಕೀಯ ಭಾಷೆಯಲ್ಲಿ ಅದು ಎಷ್ಟು ಪ್ರಮಾಣದಲ್ಲಿ ಪ್ರತಿಫಲಿಸುತ್ತದೆ ಎಂಬುದರಿಂದ ನಿರ್ಧಾರವಾಗಲಿದೆ. ಇಮ್ನು, ಹಿಂದುತ್ವದ ರಾಜಕೀಯವನ್ನು ಟೀಕಿಸುವುದು ಪ್ರಜಾಪ್ರಭುತ್ವದಲ್ಲಿ ಸಹಜ ಮತ್ತು ಅಗತ್ಯ. ಆದರೆ ಸಂಘದ ಮುಖ್ಯಸ್ಥರು ಮುಸ್ಲಿಮರನ್ನು ಭಾರತದಿಂದ ಹೊರಗಿಡುವ ಮನೋಭಾವವನ್ನು ತಿರಸ್ಕರಿಸಿದಾಗ, ಅದನ್ನೂ ಪ್ರಾಮಾಣಿಕವಾಗಿ ವರದಿ ಮಾಡುವ ಧೈರ್ಯ ಇರಬೇಕಲ್ಲವೇ? ಸಂಘದ ಪ್ರತಿಯೊಂದು ಹೇಳಿಕೆಯಲ್ಲೂ ‘ಮುಸ್ಲಿಂ ವಿರೋಧ’ ಹುಡುಕುವುದು ಎಷ್ಟು ತಪ್ಪೋ, ಅದೇ ರೀತಿ ಸಂಘದ ಯಾವುದೇ ಹೇಳಿಕೆಯನ್ನು ಪ್ರಶ್ನಿಸದೆ ಸ್ವೀಕರಿಸುವುದೂ ಅಷ್ಟೇ ತಪ್ಪು. ಮಾಧ್ಯಮದ ಕೆಲಸ ಒಂದು ಪಕ್ಷದ ಪರ ಅಥವಾ ವಿರುದ್ಧ ನಿಲ್ಲುವುದಲ್ಲ. ರಾಜಕೀಯ ಸಂಘಟನೆಗಳ ಮಾತು ಮತ್ತು ನಡೆ ನಡುವಿನ ಅಂತರವನ್ನು ಜನರ ಮುಂದೆ ಇಡುವುದೇ ಮಾಧ್ಯಮದ ನಿಜವಾದ ಜವಾಬ್ದಾರಿ.

ಭಾಗವತ್ ಅವರ ಈ ಮಾತುಗಳನ್ನು ಬಿಜೆಪಿಯ ಮೇಲೆ ಒತ್ತಡ ಹೇರುವ ರಾಜಕೀಯ ಪ್ರಶ್ನೆಯನ್ನಾಗಿ ಮಾಡುವುದು ಅಗತ್ಯ. ಏಕೆಂದರೆ ಸಂಘದ ಮುಖ್ಯಸ್ಥರು ‘ಮುಸ್ಲಿಮರು ಭಾರತದಲ್ಲಿ ಇರಬಾರದು’ ಎನ್ನುವ ಮನೋಭಾವವನ್ನು ಹಿಂದುತ್ವದ ಭಾಗವಲ್ಲ ಎಂದು ಹೇಳುತ್ತಿದ್ದರೆ, ಅದೇ ಸಂಘದ ರಾಜಕೀಯ ಪ್ರಭಾವವಿರುವ ಪಕ್ಷದ ನಾಯಕರೂ ಅದೇ ನಿಲುವನ್ನು ತಮ್ಮ ರಾಜಕೀಯ ಭಾಷೆಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಬೇಕಾಗಿದೆ. ಇನ್ನಾದರೂ, ಪಾಠ ಕಲಿಯುತ್ತದೆಯೇ ಬಿಜೆಪಿ?

ಕೊನೆಗೆ ಉಳಿಯುವುದು ಈ ಒಂದೇ ಪ್ರಶ್ನೆ.“ಮುಸ್ಲಿಮರೇ ಭಾರತದಲ್ಲಿ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲಎನ್ನುವ ಮಾತು ಕೇವಲ ಅಮೆರಿಕದ ವೇದಿಕೆಯಲ್ಲಿ ಮೊಳಗಿದ ಒಂದು ಹೇಳಿಕೆಯಾಗಿ ಉಳಿಯುತ್ತದೆಯೇ? ಅಥವಾ ಭಾರತದ ರಾಜಕೀಯದಲ್ಲೂ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆಯೇ?

ಬಿಜೆಪಿಯು ಈ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ, ಅದರ ರಾಜಕೀಯ ಭಾಷೆಯಲ್ಲಿ ಒಂದು ಮಹತ್ವದ ಬದಲಾವಣೆಗೆ ಇದು ಆರಂಭವಾಗಬಹುದು. ಹಿಂದುತ್ವವನ್ನು ಮುಸ್ಲಿಂ ವಿರೋಧಿ ರಾಜಕಾರಣದಿಂದ ಬೇರ್ಪಡಿಸುವ ಪ್ರಯತ್ನವನ್ನು ಸಂಘ ನಿಜವಾಗಿಯೂ ಮಾಡುತ್ತಿದ್ದರೆ, ಆ ಪ್ರಯತ್ನದ ಮೊದಲ ಹೆಜ್ಜೆ ಮುಸ್ಲಿಮರನ್ನು ರಾಜಕೀಯ ‘ವಿರೋಧಿ ಸಮುದಾಯ’ವಾಗಿ ನೋಡುವ ಪ್ರವೃತ್ತಿಯನ್ನು ತಿರಸ್ಕರಿಸುವುದಾಗಿರಬೇಕು. ಭಾರತದಲ್ಲಿ ಯಾರೂ ‘ಅತಿಥಿ’ಯಲ್ಲ. ಈ ನೆಲದಲ್ಲಿ ಹುಟ್ಟಿ, ಬೆಳೆದು, ಬದುಕುತ್ತಿರುವ ಪ್ರತಿಯೊಬ್ಬರೂ ಈ ದೇಶದ ನಾಗರಿಕರು.ಆದ್ದರಿಂದ ಪ್ರಶ್ನೆ ಕೇವಲ “ಭಾಗವತ್ ಏನು ಹೇಳಿದರು?”ಎನ್ನುವುದಲ್ಲ.“ಅವರ ಮಾತನ್ನು ಬಿಜೆಪಿಯ ರಾಜಕೀಯ ಎಷ್ಟು ದಿನಗಳಲ್ಲಿ ತನ್ನ ನಡವಳಿಕೆಯಲ್ಲಿ ತೋರಿಸಲಿದ ? ಎನ್ನುವುದಾಗಿದೆ. ಕಾದು ನೋಡೋಣ.

- ಶ್ರೀರಾಜ್‌ ವಕ್ವಾಡಿ 

No comments:

Post a Comment