Wednesday, August 26, 2026

ಮುಂಗಾರು ಕೈಕೊಟ್ಟಾಗಲೂ ಕೇಂದ್ರದ ನೆರವಿನ ನಿರೀಕ್ಷೆ: ಕರ್ನಾಟಕದ ರೈತರ ಸಂಕಷ್ಟಕ್ಕೆ ರಾಜಕೀಯ ಉತ್ತರ ಯಾವುದು?

ಮುಂಗಾರು ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಕರ್ನಾಟಕದ ರೈತನ ಪಾಲಿಗೆ ಈ ಮುಂಗಾರು ಈ ಬಾರಿ ನೋವು ನೀಡಿದೆ. ಮಳೆ ಕೊರತೆ ಎಂದರೆ ಕೇವಲ ಹವಾಮಾನದ ವೈಪರೀತ್ಯವಲ್ಲ. ಅದರ ಹಿಂದೆ ಬಿತ್ತನೆಯಾಗದ ಹೊಲಗಳಿವೆ, ಮೊಳಕೆಯೊಡೆದು ಒಣಗಿದ ಬೆಳೆಗಳಿವೆ, ಸಾಲ ತೀರಿಸಲಾಗದೆ ಕಂಗಾಲಾಗಿರುವ ರೈತರಿದ್ದಾರೆ. ಹೀಗಾಗಿ ಮಳೆಯ ಕೊರತೆಯನ್ನು ಕೇವಲ ‘ಪ್ರಕೃತಿ ವಿಕೋಪ’ ಎಂದು ನೋಡಿದರೆ ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದ ಕೆಲವು ಭಾಗಗಳನ್ನು ಹೊರತುಪಡಿಸಿದರೆ ರಾಜ್ಯದ ಅನೇಕ ಕಡೆ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಉತ್ತರ ಕರ್ನಾಟಕದಲ್ಲಿ ಅಲ್ಪಸ್ವಲ್ಪ ಮಳೆಗೆ ಶೇಂಗಾ, ಸಜ್ಜೆ, ಹೈಬ್ರಿಡ್ ಜೋಳ ಸೇರಿದಂತೆ ಬೆಳೆ ಬಿತ್ತಿದರೂ, ದಕ್ಷಿಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ರಾಗಿ ಸೇರಿದಂತೆ ಬೆಳೆಗಳು ನೀರಿನ ಕೊರತೆಯಿಂದ ಕಮರಿ ಹೋಗಿವೆ. ಕೆಲವು ಅಂದಾಜುಗಳ ಪ್ರಕಾರ ಸುಮಾರು ಶೇ.30ರಷ್ಟು ಕೃಷಿ ಜಮೀನುಗಳಲ್ಲಿ ಬಿತ್ತನೆಯೇ ಆಗಿಲ್ಲ ಎನ್ನುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. 

ಬರಪೀಡಿತ ಪ್ರದೇಶ ಘೋಷಣೆಗೆ ಸರ್ಕಾರಗಳು ನಿಗದಿತ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬೆಳೆ ನಷ್ಟ, ಮಳೆ ಕೊರತೆ, ಬಿತ್ತನೆ ಪ್ರಮಾಣ, ಜಲಮೂಲಗಳ ಸ್ಥಿತಿ, ಕೃಷಿ ಚಟುವಟಿಕೆಯ ಮೇಲೆ ಉಂಟಾದ ಪರಿಣಾಮ ಸೇರಿದಂತೆ ಹಲವು ಅಂಶಗಳನ್ನು ವೈಜ್ಞಾನಿಕವಾಗಿ ದಾಖಲಿಸಬೇಕಾಗುತ್ತದೆ. ಆದರೆ ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ: ರೈತನ ಹೊಲದಲ್ಲಿ ಬೆಳೆ ನಾಶವಾದ ನಂತರವೂ ಆ ನಷ್ಟವನ್ನು ಸಾಬೀತುಪಡಿಸಲು ಮತ್ತೊಂದು ಆಡಳಿತಾತ್ಮಕ ಪರೀಕ್ಷೆ ಏಕೆ? ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಕರ್ನಾಟಕದ ಬರ ಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಿ ಕೇಂದ್ರ ಸರಕಾರವು ಆದೇಶ ಹೊರಡಿಸಿದೆ.

ಇದಕ್ಕೆ ಮೊದಲು ಕರ್ನಾಟಕ ಸರಕಾರವು ಅವಧಿ ವಿಸ್ತರಣೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ. ಇನ್ನು, ಮೋಡ ಬಿತ್ತನೆಯ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ. ಆದರೇ ಮೋಡ ಬಿತ್ತನೆ ಮಾಡಿದರೇ, ಕೆಲವೊಮ್ಮೆ ಅತಿವೃಷಿಯೂ ಆಗಬಹುದು, ಕೆಲವೊಮ್ಮೆ ಅನಾವೃಷ್ಟಿಯೂ ಆಗಬಹುದು ಎನ್ನುವ ಹವಾಮಾನ ತಜ್ಞರ ಅಭಿಪ್ರಾಯವನ್ನು ತಳ್ಳಿ ಹಾಕುವಂತಿಲ್ಲ. ಗಮನಿಸಿ, ಬರದ ಪರಿಣಾಮ ಕಣ್ಣಿಗೆ ಕಾಣುತ್ತಿದ್ದರೂ, ಪರಿಹಾರ ಪಡೆಯಲು ಅಂಕಿ-ಅಂಶಗಳ ಭಾಷೆಯಲ್ಲಿ ಅದನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ರೈತನ ಸಂಕಷ್ಟವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಾರಿ ಜಿಲ್ಲಾವಾರು, ಬೆಳೆವಾರು ಮತ್ತು ತಾಲ್ಲೂಕುವಾರು ಸಮಗ್ರ ವೈಜ್ಞಾನಿಕ ಸಮೀಕ್ಷೆ ನಡೆಸಿ, ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕೇಂದ್ರದ ಮುಂದೆ ವಾಸ್ತವಾಂಶಗಳನ್ನು ಇಡಬೇಕು. ಕರ್ನಾಟಕದ ರೈತರು ಕೇಳುತ್ತಿರುವುದು ಯಾರದ್ದೋ ವೈಯಕ್ತಿಕ ಪ್ರಶ್ನೆಯಲ್ಲ. ಪ್ರಕೃತಿ ವಿಕೋಪದಿಂದ ಕೃಷಿ ಆರ್ಥಿಕತೆ ಕುಸಿದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಜನರನ್ನು ಸಂಕಷ್ಟದಿಂದ ಹೊರತರಬೇಕಾದದ್ದು ಒಕ್ಕೂಟ ವ್ಯವಸ್ಥೆಯ ಮೂಲಭೂತ ಹೊಣೆಗಾರಿಕೆ.

ಹೀಗಾಗಿ ಕೇಂದ್ರದ ನೆರವನ್ನು ಪಡೆಯಲು ರಾಜ್ಯ ಸರ್ಕಾರ ರಾಜಕೀಯವಾಗಿ ದುರ್ಬಲವಾಗಬೇಕಾದ ಅಗತ್ಯವಿಲ್ಲ. ಅದೇ ಸಮಯದಲ್ಲಿ ಕೇಂದ್ರದೊಂದಿಗೆ ಸಂಘರ್ಷವನ್ನೇ ರಾಜಕೀಯ ತಂತ್ರವನ್ನಾಗಿ ಮಾಡಿಕೊಂಡರೂ ರೈತನ ಹೊಟ್ಟೆ ತುಂಬುವುದಿಲ್ಲ. ಕರ್ನಾಟಕಕ್ಕೆ ಬೇಕಿರುವುದು ಘೋಷಣೆಗಳ ರಾಜಕಾರಣವಲ್ಲ; ದಾಖಲೆ, ವೈಜ್ಞಾನಿಕ ಅಧ್ಯಯನ ಮತ್ತು ನಿರಂತರ ಒತ್ತಡದ ಮೂಲಕ ಪರಿಹಾರವನ್ನು ಖಚಿತಪಡಿಸುವ ರಾಜಕೀಯ. ಎರಡು ವರ್ಷಗಳ ಹಿಂದೆ ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಿದಾಗ, ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹18,171.44 ಕೋಟಿ ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ನೆರವು ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ರಾಜಕೀಯ ಹಾಗೂ ಕಾನೂನು ಸಂಘರ್ಷವೂ ಉಂಟಾಗಿತ್ತು. ಕೊನೆಗೆ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆ ಘಟನೆ ಕರ್ನಾಟಕದ ಒಕ್ಕೂಟ ವ್ಯವಸ್ಥೆಯೊಳಗಿನ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿತ್ತು. ರಾಜ್ಯ ಸರ್ಕಾರಗಳು ಬದಲಾಗಬಹುದು. ಮುಖ್ಯಮಂತ್ರಿಗಳು ಬದಲಾಗಬಹುದು. ಆದರೆ ರೈತನ ಸಮಸ್ಯೆ ಬದಲಾಗುವುದಿಲ್ಲ. ಅದಕ್ಕಾಗಿಯೇ ಹಿಂದಿನ ಅನುಭವದಿಂದ ಪಾಠ ಕಲಿಯುವುದು ಮುಖ್ಯ. ಈ ಬಾರಿ ಮತ್ತೆ ಮನವಿ ಸಲ್ಲಿಸಿ ಮೌನವಾಗಿರುವುದರಿಂದ ಪ್ರಯೋಜನವಿಲ್ಲ.

ಕೇಂದ್ರದ ಪ್ರತಿಕ್ರಿಯೆ ವಿಳಂಬವಾದರೆ ರಾಜ್ಯ ಸರ್ಕಾರ ತನ್ನ ಹಕ್ಕಿಗಾಗಿ ರಾಜಕೀಯ, ಆಡಳಿತಾತ್ಮಕ ಮತ್ತು ಅಗತ್ಯವಿದ್ದರೆ ಕಾನೂನು ಮಾರ್ಗಗಳನ್ನೂ ಬಳಸಬೇಕು. ಇನ್ನು, ಡಿ.ಕೆ. ಶಿವಕುಮಾರ್ ಅವರ ‘ಮೃದು ಧೋರಣೆ’ ಸಾಕೇ?ಮ  ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರದ ನಿಲುವು ಕುತೂಹಲ ಮೂಡಿಸುತ್ತದೆ. ಕೇಂದ್ರದೊಂದಿಗೆ ನೇರ ಸಂಘರ್ಷಕ್ಕಿಳಿಯದೆ, ಸಹಕಾರದ ಮೂಲಕ ನೆರವು ಪಡೆಯುವ ಪ್ರಯತ್ನ ರಾಜಕೀಯವಾಗಿ ತಪ್ಪೇನಲ್ಲ. ಆದರೆ ಪ್ರಶ್ನೆ ಇರುವುದು ಬೇರೆಡೆ. ಸೌಜನ್ಯ ರಾಜಕಾರಣ ರೈತನಿಗೆ ಪರಿಹಾರ ತಂದುಕೊಡುತ್ತದೆಯೇ? ಕೇಂದ್ರದೊಂದಿಗೆ ಉತ್ತಮ ಸಂಬಂಧ ಇರುವುದು ಒಂದು ವಿಚಾರ. ರಾಜ್ಯದ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸುವುದು ಮತ್ತೊಂದು ವಿಚಾರ. ಎರಡೂ ಪರಸ್ಪರ ವಿರುದ್ಧವಾಗಬೇಕಿಲ್ಲ. ಕೇಂದ್ರ ಸರ್ಕಾರ ನೆರವು ನೀಡಿದರೆ ಅದನ್ನು ಸ್ವಾಗತಿಸಬೇಕು. ನೆರವು ನೀಡಲು ವಿಳಂಬ ಮಾಡಿದರೆ ಕಾರಣ ಕೇಳಬೇಕು. ಕಡಿಮೆ ನೆರವು ನೀಡಿದರೆ ಅದರ ಮಾನದಂಡಗಳನ್ನು ಪ್ರಶ್ನಿಸಬೇಕು. ಅಗತ್ಯವಿದ್ದರೆ ಎಲ್ಲ ಪಕ್ಷಗಳ ಸಂಸದರನ್ನು ಒಟ್ಟುಗೂಡಿಸಿ ಕೇಂದ್ರದ ಮೇಲೆ ಒತ್ತಡ ತರಬೇಕು. ರೈತನ ಬದುಕು ಯಾವುದೇ ಪಕ್ಷದ ‘ಇಮೇಜ್ ಮ್ಯಾನೇಜ್‌ಮೆಂಟ್’ಗಿಂತ ದೊಡ್ಡದು. ನೋಡಿ, ಸಂಕಷ್ಟದ ಹೊತ್ತಿನಲ್ಲಿ ರಾಜಕೀಯಕ್ಕಿಂತ ರೈತ ಮುಖ್ಯ. ಬರ ಬಂದಾಗ ಒಂದು ವಿಚಿತ್ರ ರಾಜಕೀಯ ಆರಂಭವಾಗುತ್ತದೆ. ಆಡಳಿತ ಪಕ್ಷ ಕೇಂದ್ರವನ್ನು ದೂಷಿಸುತ್ತದೆ. ಕೇಂದ್ರ ರಾಜ್ಯದ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತವೆ.

ಆರೋಪ-ಪ್ರತ್ಯಾರೋಪಗಳು ನಡೆಯುತ್ತವೆ . ಆದರೆ ಈ ಎಲ್ಲದರ ನಡುವೆ ರೈತ ಮಾತ್ರ ತನ್ನ ಹೊಲದ ಮುಂದೆ ನಿಂತಿರುತ್ತಾನೆ. ಅವನಿಗೆ ರಾಜಕೀಯ ವಾದ ಬೇಡ. ಬಿತ್ತನೆ ನಷ್ಟಕ್ಕೆ ಪರಿಹಾರ ಬೇಕು. ಬೆಳೆ ನಷ್ಟಕ್ಕೆ ಪರಿಹಾರ ಬೇಕು. ಸಾಲದ ಒತ್ತಡದಿಂದ ರಕ್ಷಣೆ ಬೇಕು. ಮುಂದಿನ ಹಂಗಾಮಿಗೆ ಬೀಜ, ರಸಗೊಬ್ಬರ ಮತ್ತು ನೀರಿನ ಭರವಸೆ ಬೇಕು. ಆದ್ದರಿಂದ ಬರ ಪರಿಹಾರವನ್ನು ಕೇವಲ ಒಂದು ಬಾರಿಯ ಹಣಕಾಸು ಪ್ಯಾಕೇಜ್ ಆಗಿ ನೋಡಬಾರದು. ಕೃಷಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ದೀರ್ಘಕಾಲೀನ ಯೋಜನೆಯಾಗಬೇಕು. ಕರ್ನಾಟಕದ ಪಾಲು ಏನು? ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ದೇಶದ ಆರ್ಥಿಕತೆಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತದೆ. ತೆರಿಗೆ ಸಂಗ್ರಹ, ಕೈಗಾರಿಕೆ, ಸೇವಾ ವಲಯ, ಕೃಷಿ—ಎಲ್ಲ ಕ್ಷೇತ್ರಗಳಲ್ಲೂ ರಾಜ್ಯದ ಪಾತ್ರ ದೊಡ್ಡದು. ಹೀಗಿರುವಾಗ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕರ್ನಾಟಕ ತನ್ನ ಪಾಲಿನ ನೆರವನ್ನು ಕೇಳುವುದು ‘ವಿಶೇಷ ಸವಲತ್ತು’ ಕೇಳಿದಂತಲ್ಲ. ಇದು ಪ್ರಶ್ನೆ ಕೇವಲ ಒಂದು ರಾಜ್ಯದದ್ದೂ ಅಲ್ಲ. ದೇಶದ ಯಾವುದೇ ರಾಜ್ಯ ಬರ, ಪ್ರವಾಹ, ಚಂಡಮಾರುತ ಅಥವಾ ಇನ್ನಾವುದೇ ಪ್ರಕೃತಿ ವಿಕೋಪಕ್ಕೆ ಸಿಲುಕಿದಾಗ ಕೇಂದ್ರದ ಪ್ರತಿಕ್ರಿಯೆ ಪಕ್ಷಾತೀತವಾಗಿರಬೇಕು. ಸರ್ಕಾರದ ಬಣ್ಣ ಬದಲಾಗಬಹುದು; ಆದರೆ ವಿಪತ್ತಿನ ಬಣ್ಣ ಒಂದೇ. ಈಗ ಬೇಕಿರುವುದು ಸ್ಪಷ್ಟ ಕಾರ್ಯಯೋಜನೆ. ರಾಜ್ಯ ಸರ್ಕಾರ ಈಗಲೇ ಕೆಲವು ಕ್ರಮಗಳನ್ನು ವೇಗಗೊಳಿಸಬೇಕಾಗಿದೆ. ಮೊದಲನೆಯದಾಗಿ, ಜಿಲ್ಲಾವಾರು ನೈಜ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಎರಡನೆಯದಾಗಿ, ಬಿತ್ತನೆಯಾಗದ ಪ್ರದೇಶಗಳನ್ನೂ ನಷ್ಟದ ಲೆಕ್ಕಾಚಾರದಲ್ಲಿ ಸಮರ್ಪಕವಾಗಿ ದಾಖಲಿಸಬೇಕು. ಮೂರನೆಯದಾಗಿ, ಕೇಂದ್ರಕ್ಕೆ ಸಲ್ಲಿಸುವ ವರದಿ ಕೇವಲ ಆಡಳಿತಾತ್ಮಕ ದಾಖಲೆ ಆಗದೆ, ರೈತರ ನೈಜ ಪರಿಸ್ಥಿತಿಯನ್ನು ಪ್ರತಿಬಿಂಬಿಸುವಂತಿರಬೇಕು. ನಾಲ್ಕನೆಯದಾಗಿ, ಕೇಂದ್ರದ ನೆರವು ವಿಳಂಬವಾದರೆ ಸಂಸದರು, ರೈತ ಸಂಘಟನೆಗಳು ಮತ್ತು ಎಲ್ಲಾ ಪಕ್ಷಗಳ ಸಹಕಾರದೊಂದಿಗೆ ಒತ್ತಡ ನಿರ್ಮಿಸಬೇಕು. ಐದನೆಯದಾಗಿ, ಪರಿಹಾರದ ಜೊತೆಗೆ ಮುಂದಿನ ಹಂಗಾಮಿಗೆ ರೈತರನ್ನು ಸಿದ್ಧಗೊಳಿಸುವ ಪುನಶ್ಚೇತನ ಕಾರ್ಯಕ್ರಮ ರೂಪಿಸಬೇಕು. ಶೇ.33 ಬೆಳೆ ನಷ್ಟವೇ? ಶೇ.50 ನಷ್ಟವೇ? ಬರದ ಮಾನದಂಡ ಪೂರೈಸಿದೆಯೇ? ವರದಿ ಸರಿಯಾಗಿದೆಯೇ? ಇವೆಲ್ಲವೂ ಆಡಳಿತಾತ್ಮಕವಾಗಿ ಅಗತ್ಯವಾದ ಪ್ರಶ್ನೆಗಳು.

ಇನ್ನು, “ನನ್ನ ಹೊಲದಲ್ಲಿ ಬೆಳೆ ಇಲ್ಲ. ನನ್ನ ಸಾಲ ಹೇಗೆ ತೀರಿಸಲಿ?” ಎನ್ನುವ ರೈತನ ಈ ಪ್ರಶ್ನೆಗೆ ಕೇಂದ್ರವೂ ಉತ್ತರಿಸಬೇಕು. ರಾಜ್ಯವೂ ಉತ್ತರಿಸಬೇಕು. ಕರ್ನಾಟಕದ ರೈತನ ಸಂಕಷ್ಟವನ್ನು ಕೇಂದ್ರ-ರಾಜ್ಯ ರಾಜಕೀಯದ ಪೈಪೋಟಿಯಲ್ಲಿ ಕಳೆದುಹೋಗಲು ಬಿಡಬಾರದು. ಕೇಂದ್ರ ಸರ್ಕಾರ ನೆರವು ನೀಡುವುದು ತನ್ನ ಕರ್ತವ್ಯವೆಂದು ಪರಿಗಣಿಸಬೇಕು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ 

No comments:

Post a Comment