Thursday, April 30, 2020

ಸಂಬಂಧ ಉಳಿಸಿಕೊಳ್ಳಲು ಗುಡ್ಡೆಯಾಗುವಷ್ಟು ಸಾಧನೆ ಮಾಡಬೇಕಂತಿಲ್ಲ | ಸೈಕಾಲಜಿ ಟಚ್ ಜೊತೆಗೆ ಹೊಂದಾಣಿಕೆ ಇದ್ದರೆ ಸಾಕು..!



ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸುತ್ತಮುತ್ತಲಲ್ಲಿ ಎಲ್ಲರೊಂದಿಗೆ ಎಲ್ಲರಿಗಿಂತ ಚೆನ್ನಾಗಿರಬೇಕು, ಎಲ್ಲರಲ್ಲೂ ಪ್ರೀತಿ, ಬಾಂಧವ್ಯ ಹೊಂದಬೇಕು ಎಂಬ ಬಯಕೆಯಿರುವುದು ಸಹಜ. ಹಾಗೆ ಅಂದುಕೊಂಡ ಎಲ್ಲರಲ್ಲಿಯೂ ಇನ್ನೊಬ್ಬರೊಂದಿಗೆ ಒಳ್ಳೆಯ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬಹುಶಃ ಕೆಲವು ಲೋಪ ದೋಷಗಳು ಅವರ ವ್ಯಕ್ತಿತ್ವದಲ್ಲಿರುವುದೇ ಇದಕ್ಕೆ ಕಾರಣ. ಖಂಡಿತ ಆ ಲೋಪ ದೋಷಗಳನ್ನು ತಿದ್ದಿಕೊಳ್ಳಬಹುದು. ಮನಸ್ಸು ಮಾಡಬೇಕಷ್ಟೇ. ಜೊತೆಗೆ ಸ್ವಲ್ಪ ಸೈಕಾಲಜಿ ಟಚ್ ಬೇಕು.

ನಮ್ಮ ಸುತ್ತಲಿರುವ ನಮ್ಮವರು ನಮ್ಮನ್ನು ಇಷ್ಟಪಡುವಂತೆ ಮಾಡುವುದು, ನಮ್ಮ ಬಗ್ಗೆ ಮೆಚ್ಚುಗೆಯ ಅಭಿಪ್ರಾಯ, ಅನಿಸಿಕೆಯಿರಿಸಿಕೊಳ್ಳುವಂತೆ ಮಾಡುವ ಶಕ್ತಿ ನಮ್ಮಲ್ಲೇ ಇದೆ. ಇನ್ನೊಬ್ಬರೊಂದಿಗೆ ಒಳ್ಳೆಯ ಸಂಬಂಧ ಉಳಿಸಿಕೊಳ್ಳಲು ಗುಡ್ಡೆಯಾಗುವಷ್ಟು ಸಾಧನೆ ಮಾಡಬೇಕಂತಿಲ್ಲ. ನಮ್ಮ ನಯ, ವಿನಯ, ನಡವಳಿಕೆ, ಚರ್ಯೆ ಒಳ್ಳೆಯದಾಗಿದ್ದರೆ, ಆಕರ್ಷಕವಾಗಿದ್ದರೆ ಅದು ಸಂಬಂಧ ಬೆಳೆಯುವಂತೆ, ಉಳಿಯುವಂತೆ ಮಾಡುತ್ತದೆ.



ಫಸ್ಟ್ ಇಂಪ್ರೆಶನ್‌ಗೆ ಸೆಂಕೆಂಡ್ ಚಾನ್ಸ್ ಇಲ್ಲ..!
ಯಾರೇ ಆಗಲಿ ಒಬ್ಬರನ್ನು ಮೊದಲ ಭಾರಿಗೆ ನೋಡಿದಾಗ ನಮ್ಮಲ್ಲಿ ಒಂದು ಅಭಿಪ್ರಾಯ ಉಂಟಾಗುತ್ತದೆ. ಅದು ಎಷ್ಟೋ ಭಾರಿ ಬದಲಾಗುವುದಿಲ್ಲ. ಇನ್ನು, ಯಾರನ್ನಾದರೂ ನೋಡಿದ ತಕ್ಷಣ ನಾವು ಹೆಲೋ ಅಥವಾ ನಮಸ್ತೆ ಹೇಳುತ್ತೇವೆ. ಅದು ಎದುರಿಗಿರುವವರಲ್ಲಿ ನಿಮ್ಮ ಮೇಲೆ ಪಾಸಿಟಿವ್ ಅಥವಾ ನೆಗೆಟಿವ್ ಅಭಿಪ್ರಾಯ ಹುಟ್ಟಿಸುತ್ತದೆ. ಇದಕ್ಕೆ ಕೇವಲ 30 ಸೆಂಕೆಂಡ್ಸ್ ಸಾಕು ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಅದು ಸರಿಯಾದ ಅಥವಾ ತಪ್ಪಾದ ಅಭಿಪ್ರಾಯವೂ ಆಗಬಹುದು. ತದನಂತರ ಆಗುವ ಮುಂದಿನ ಬೆಳವಣಿಗೆ ಎಲ್ಲವೂ ಈ ಫಸ್ಟ್ ಇಂಪ್ರೇಶನ್ ಮೇಲೆ ಆಧಾರವಾಗಿರುತ್ತದೆ. ಅದಕ್ಕಾಗಿಯೇ ‘ಫಸ್ಟ್ ಇಂಪ್ರೆಶನ್ ಈಸ್ ದಿ ಬೆಸ್ಟ್ ಇಂಪ್ರೆಶನ್’ ಎನ್ನುವುದು. ಹಾಗಾಗಿ, ನಿಮ್ಮ ಮೊದಲ ವರ್ತನೆ ಉತ್ತಮವಾಗಿರಲಿ. ಯಾಕೆಂದರೇ, ಅದಕ್ಕೆ ಸೆಕೆಂಡ್ ಚಾನ್ಸ್ ಇಲ್ಲ.

ಸಂಬಂಧಕ್ಕೆ ಸ್ನೇಹದ ಸೇತುವೆ
ಯಾವುದೇ ಥರದ ಸ್ನೇಹಕ್ಕೆ ಮೂಲ ಯಾವುದೆಂದರೇ, ಸ್ನೇಹ. ಮೊದಲು ನೀವು ಸಂಬಂಧ ಬೆಳೆಸಿಕೊಳ್ಳಲು ಇಷ್ಟಪಡುವವರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಎಲ್ಲವನ್ನೂ ಹೇಳುವ ಮತ್ತು ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ. ಒಳ್ಳೆಯ ಸಂಬಂಧದಲ್ಲಿ ಎಲ್ಲವನ್ನು ಹೇಳಿಕೊಳ್ಳುವುದು ಮತ್ತು ಕೇಳುವುದು ಇರಿಟೇಶನ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಇರಿಟೇಶನ್ ಆಗುತ್ತದೆ ಅಂದರೇ, ಅದು ನಿಮ್ಮೊಳಗಿನ ನ್ಯೂನ್ಯತೆಯೇ ಹೊರತು ಮತ್ತೇನಲ್ಲ. ಮುಚ್ಚುಮರೆ ಮಾಡಿಕೊಳ್ಳುವುದು ನೀವು ಬಯಸುವ ಸಂಬಂಧಕ್ಕೆ ಒಳ್ಳೆಯದಲ್ಲ. ಸ್ನೇಹ ಹೊರನೋಟಕ್ಕಷ್ಟೇ ಅಲ್ಲದೇ, ಒಳನೋಟದಲ್ಲಿಯೂ ಚೆನ್ನಾಗಿರಬೇಕು. ಆಗ ಮಾತ್ರ, ಮುಂದೆ ಬೆಳೆಯುವ ಸಂಬಂಧ ಗಟ್ಟಿಯಾಗುತ್ತದೆ.

ಪ್ರೀತಿಯ ಕೋಮಲ ಸ್ಪರ್ಶ
ಸಂಬಂಧಗಳಿಗೆ ಪ್ರೀತಿ ಎನ್ನುವುದು ಉತ್ತಮ ಸ್ಪರ್ಶ. ನೋವನ್ನೆಲ್ಲಾ ದೂರ ಮಾಡಿ ಧೈರ್ಯ, ವಿಶ್ವಾಸ, ಭರವಸೆ ತುಂಬಿಸುವ ಶಕ್ತಿ ಈ ಸ್ಪರ್ಶಕ್ಕಿದೆ. ಸಂದರ್ಭಕ್ಕೆ ತಕ್ಕಂತೆ ಭಾವನಾತ್ಮಕವಾದ ಪ್ರೀತಿಯ ಸ್ಪರ್ಶದ ಒಡನಾಟವಿದ್ದರೆ ಸಂಬಂಧಗಳ ಗಾಢತೆಗೆ ಅಥವಾ ಸಂಬಂಧಗಳ ಉಳಿವಿಕೆಗೆ ಸಹಾಯ ಮಾಡುವುದರಲ್ಲಿ ನೋ ಡೌಟ್.



ಸಂಬಂಧಗಳಿಗೆ ‘ಸುಳ್ಳು’ ವಿಷ..!
ಸಂಬಂಧ ಬೆಳೆಸಿಕೊಳ್ಳುವುದಕ್ಕೆ ನೀವು ಮುಂದಾಗುತ್ತೀರಿ ಅಂತಾದರೇ, ಸುಳ್ಳು ಹೇಳುವುದನ್ನು ನಿಲ್ಲಿಸಿ. ಅದು ವಿಷದ ವರ್ತುಲದಂತೆ. ನೀವು ಹೇಳುವ ಒಂದು ಸಣ್ಣ ಸುಳ್ಳು, ನಿಮ್ಮ ಮೇಲಿನ ನೂರು ಪಟ್ಟು ನಂಬಿಕೆಯನ್ನು ಕಡಿಮೆಗೊಳಿಸಬಲ್ಲದು. ಹಾಗಾಗಿ, ಸಂಬಂಧಗಳಲ್ಲಿ ಸುಳ್ಳಿಗೆ ಗೇಟ್ ಪಾಸ್ ಕೊಡುವುದು ಒಳ್ಳೆಯದು.

ಆತ್ಮೀಯತೆ
ಒಂದು ಆತ್ಮೀಯ ಮಾತು, ನಗು ಸಂಬಂಧಗಳಿಗೆ ಸಾಕಷ್ಟು ಪ್ರಭಾವ ಬೀರುತ್ತದೆ. ಪೂರ್ತಿಯಾಗಿ ಹೇಳಲಾಗದ ಒಂದು ನಗು ಅಥವಾ ಹಿತವಾದ ಒಂದು ಮಾತು ಸಾವಿರ ಪಟ್ಟು ಪ್ರೀತಿಯನ್ನು ಹೇಳುತ್ತದೆ. ಹಾಗಾಗಿ ಆತ್ಮೀಯತೆ ನಿಮ್ಮ ಬತ್ತಳಿಕೆಯಲ್ಲಿರುವುದು ಉತ್ತಮ.

ಗೌರವಿಸಿ
ಸಂಬಂಧಗಳು ಹೇಗೇ ಇದ್ದರೂ ನಿಮ್ಮೊಳಗಿನ ನಿಮ್ಮವರಿಗೆ ಗೌರವ ನೀಡುವುದು ಮರೆಯಬೇಡಿ. ಗೌರವಕ್ಕೆ ಅರ್ಹರಲ್ಲದಿದ್ದರೂ ಅಥವಾ ಆ ವ್ಯಕ್ತಿತ್ವ ನಿಮಗೆ ಇಷ್ಟವಿಲ್ಲದಿದ್ದರೂ ಮೇಲ್ನೋಟಕ್ಕಾದರೂ ಗೌರವ ನೀಡಿ. ಅದು ನಿಮ್ಮ ವ್ಯಕ್ತಿತ್ವಕ್ಕೆ ಗೌರವ ತಂದು ಕೊಡುತ್ತದೆ.

ಅಭಿವ್ಯಕ್ತಿಗೆ ಸ್ಪಂದಿಸಿ
ಕ್ರಿಯೆ, ಪ್ರತಿಕ್ರಿಯೆ ಸಂಬಂಧಗಳಲ್ಲಿ ಮುಖ್ಯ. ಭಾವಾಭಿವ್ಯಕ್ತಿಗೆ ತಕ್ಕುದಾದ ಸ್ಪಂದನೆ ಸಂಬಂಧಗಳಲ್ಲಿ ಬೇಕೆಬೇಕು. ಹಾಗಾಗಿ, ಅಭಿವ್ಯಕ್ತಿಗೆ ಸ್ಪಂದಿಸುವುದೂ ಕೂಡ ಒಂದು ಉತ್ತಮ ಔಷದ.

ಸಣ್ಣ ಹೊಗಳಿಕೆ ಇರಲಿ.
ನೀವು ನಿಮ್ಮ ಸಂಬಂಧಗಳಿಗೆ ನೀಡುವ ಸಣ್ಣ ಪ್ರೀತಿಯ ಹೊಗಳಿಕೆ ಸಂಬಂಧವನ್ನು ಚೇತೋಹಾರಿಯಾಗಿಸಬಲ್ಲದು. ಸಮಯೋಚಿತ ಸಣ್ಣ ಹೊಗಳಿಕೆ ನಿಮ್ಮ ಸಂಬಂಧವನ್ನು ಗಟ್ಟಿಯಾಗಿರಿಸಲು ಸಹಾಯ ಮಾಡುತ್ತದೆ.



ಬದುಕು ಸಂಬಂಧಗಳಿಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ. ಸಂಬಂಧಗಳನ್ನು ಉಳಿಸಿಕೊಳ್ಳಲು ದೊಡ್ಡ ಸಾಧನೆ ಮಾಡಬೇಕೆಂದಿಲ್ಲ. ಹೊಂದಿಕೊಂಡು ಹೋಗುವ ಗುಣ ಇದ್ದರೇ ಸಾಕು. ಹೊಂದಿಕೊಳ್ಳುವುದಕ್ಕೆ ಆಗುವುದಿಲ್ಲ, ನಾನು ನಾನಾಗಿಯೇ ಇರುತ್ತೇನೆ ಎಂಬ ಧೋರಣೆಗಳೆಲ್ಲಾ ಸಂಬಂಧಗಳಲ್ಲಿ ಫಲಿಸುವುದಿಲ್ಲ. ಸಂಬಂಧಗಳು ಬೇಕೆಂದರೇ, ಹೊಂದಿಕೊಂಡು ಬಾಳಲೇ ಬೇಕು. ನಿಮ್ಮೊಳಗಿನ ಸಣ್ಣ ಬದಲಾವಣೆ ಖಂಡಿತ ನಿಮಗೆ ಹಿತ ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
------------------------------
-ಶ್ರೀರಾಜ್ ವಕ್ವಾಡಿ

Wednesday, April 29, 2020

ಪ್ರೀತಿಯೆಂದರೇ, ಪೂರಿಯೊಳಗಿನ ಪಾನಿಯಂತೆ ಚೂರ‍್ಚೂರು ಖಾರ..!



ಪ್ರೀತಿಯೆಂದರೇ, ಹಲವರು, ಹಲವಾರು ರೀತಿಯಲ್ಲಿ ಡೆಫಿನೇಶನ್ ಕೊಡಬಲ್ಲರು. ಕೆಲವರು ರೋಮಿಯೋ ಜುಲಿಯೆಟ್‌ನ್ನು ವಿವರಿಸಬಹುದು, ಕೆಲವರು ಕೃಷ್ಣ ರಾಧೆಯರನ್ನು ಹಾಡಿ ಹೊಗಳಬಹುದು, ಕೆಲವರು ಶಹಜಾನ್ ಮುಮ್ತಾಜ್‌ನ್ನು ವರ್ಣಿಸಬಹುದು.

ಹಾಗಾದ್ರೇ.. ಈ ಪ್ರೀತಿ, ಪ್ರೇಮ ಪುರಾಣ ಅಂದ್ರೇ ಏನು..? ‘ಪ್ರೀತಿ’ಗೆ ಅಷ್ಟು ಸುಲಭವಾಗಿ ಡೆಫಿನೇಶನ್ ಕೊಡೋದಕ್ಕೆ ಸಾಧ್ಯವಿದೆಯಾ..?. ‘ಇಟ್ ಈಸ್ ಅನ್‌ಕಂಡೀಶನಲ್ ಅಫೆಕ್ಶನ್’ ಅಂತ ಅಪ್ಪಟ ಆಂಗ್ಲ ಭಾಷೆಯಲ್ಲಿ ಒಂದೇ ಸೆಂಟೆನ್ಸ್ ಅಲ್ಲಿ ಹೇಳಿ ಬಿಡಬಹುದು. ಆದರೇ ಅದು ಅದಕ್ಕಿಂತ ಮೀರಿದ್ದು ಎನ್ನುವುದು ಪ್ರೀತಿಯಷ್ಟೇ ಸತ್ಯ.

ಪ್ರೀತಿಯ ಸ್ವರೂಪ ಯಾವುದು..? ಅದು ಹೇಗೆ ವ್ಯಕ್ತವಾಗುತ್ತದೆ..? ಎನ್ನುವುದನ್ನು ಇದಮಿತ್ಥಂ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೇ, ಅದು ಹೇಳಲಾಗದ ಉತ್ಕಟಾನುಪಮ ಅನುಭವ. ನಾವು ಅದನ್ನು ಏನೆಂದು ತಿಳಿದುಕೊಂಡಿದ್ದೇವೋ ಅದಕ್ಕಿಂತ ಉನ್ನತವಾದ ಸೊಗಸದು. ಹಾಗಾಗಿ, ಪ್ರೀತಿಗೆ ಅರ್ಥ ಕಟ್ಟುವುದಕ್ಕೆ ಖಂಡಿತ ಆಗಲಾರದು.

ಪ್ರೀತಿಯ ಹುಟ್ಟು ಮತ್ತು ಅದು ವಿಸ್ತಾರಗೊಳ್ಳುವ ಬಗೆಯ ಕಥೆ ಹೇಗೆ ಇರಬೇಕು ಎನ್ನುವ ಹಕ್ಕು ಆ ಪ್ರೀತಿಗೆ ಗೊತ್ತಿದೆ. ಖುಷಿ, ಸಂತೋಷ, ಹಿತಾನುಭವ, ವೈಮಸ್ಸು, ದುಃಖ, ದುಮ್ಮಾನ, ಏಕಾಂತ ಎಲ್ಲವನ್ನೂ ಸಂಬಂಧದಲ್ಲಿ ಸಂಕಲಿಸುತ್ತದೆ ಪ್ರೀತಿ. ಅದು ಪ್ರೀತಿಯ ಖಚಿತ ಸಂಕೇತ. ಅನುಬಂಧದ ಅನಿಯಮಿತ ಮೇರೆಯನ್ನು ಮೀರುತ್ತಲೇ ಹಿತ ಕೊಡುವ ಶಕ್ತಿ ಇದೆ ಅಂದ್ರೇ ಅದು ಕೇವಲ ಪ್ರೀತಿಗೆ ಮಾತ್ರ.

‘ಬೇಡ ಎಂದರೂ ನಾ ಬಿಡೆ ಎನ್ನುವ ಮಮತೆ’, ‘ನೆನಪಿಸಲಿಚ್ಛಿಸದಿದ್ದರೂ ನೆನಪಿಸಿ ಕೊಡುವ ಸಂವೇದನೆ’, ‘ದೂರ ಸರಿದರೂ ಸನಿಹ ಬಯಸುವ ಭಾವನೆ’ ಇರುವುದು ಪ್ರೀತಿಗೆ ಮಾತ್ರ. ಸಣ್ಣ ಜಗಳವಾಡಿದ ಜೋಡಿಯಲ್ಲಿ ಮುನಿಸು ಆವರಿಸಿಕೊಂಡರೇ, ಕೆಲ ಹೊತ್ತಿನಲ್ಲೇ ಅವರಲ್ಲಿ ಯಾರಾದರೂ ಒಬ್ಬರು ಬಂದು ‘ಇನ್ನೂ ಕೋಪನಾ’ ಅಂತ ಕೇಳ್ತಾರೆ. ದೂರವಾಗಿದ್ರೇ, ‘ನಿನ್ನ ನೆನಪಾಗ್ತಿದೆ’ ಅಂತ ಮನಸ್ಸು ಹೇಳುತ್ತೆ. ಅದೇ ಪ್ರೀತಿಯ ವಿಶೇಷ. ಇದ್ದಾಗ ಅಮಿತ ಸಂಭ್ರಮವನ್ನಿತ್ತು ಹಿತ ಉಣಿಸುವ, ಇಲ್ಲದಿದ್ದಾಗ ಅಷ್ಟೇ ದುಃಖ ಕೊಟ್ಟು ಕಾಡಿಸುವ ಒಂದು ಅನುಭವ ನಮ್ಮಲ್ಲಾಗುತ್ತದೆ ಅಂದ್ರೇ ಅದು ನಿಜಕ್ಕೂ ಪ್ರೀತಿ.



ಇಲ್ಲಿ ಎಲ್ಲವೂ ಸಹ್ಯ. ಕೋಪ, ತಾಪ, ಮುನಿಸು, ದುಃಖ, ಎಲ್ಲವೂ. ಎಷ್ಟೇ ನೋವಾದರೂ, ‘ನನಗೆ ನೀನೇ ಬೇಕು’, ‘ಐ ವಿಲ್ ಹ್ಯಾಪಿ ವೀಥ್ ಯೂ’ ಅಂತ ಹೇಳಿ ಭಾವನೆಗಳ ಜೊತೆ ಮಾತಾಡಬಲ್ಲ ಮನಸ್ಸು ಪ್ರೀತಿಗಲ್ಲದೇ ಮತ್ತ್ಯಾವುದಕ್ಕೆ ಬರಲು ಸಾಧ್ಯ..?!

ಇಂತಹ ಪ್ರೀತಿಗೆ ಸಾವುಂಟೆ...? ಖಂಡಿತ ಇಲ್ಲ. ಪ್ರೀತಿ ಸತ್ತು ಹೋಗುವುದಿಲ್ಲ. ಅದಕ್ಕೆ ಸಾವೇ ಇಲ್ಲ. ಇರುವುದು ಅಂತರ ಮಾತ್ರ. ಒಮ್ಮೊಮ್ಮೆ ಯಾವುದೋ ಕಾರಣಕ್ಕೆ ಅಂತರ ಸೃಷ್ಟಿಯಾಗಬಹುದು.

ಪ್ರೀತಿ, ಯಾವುದೋ ಸಣ್ಣ ವಿಷಯಕ್ಕೆ ದೂರವಾಗುವುದು ಕೂಡ ಇದೆ. ‘ಟೈಮ್ ರೂಲ್ಸ್ ಎವರಿಥಿಂಗ್’, ‘ಟೈಮ್ ಚೇಂಜಸ್ ಎವರಿಥಿಂಗ್’ ಎನ್ನುವ ಮಾತುಗಳು ಪ್ರೀತಿಗೂ ಕೂಡ ಅನ್ವಯಿಸುತ್ತದೆ. ಅಂತರಗಳ ದೂರ ಆಗಬಹುದು. ಆದರೇ, ಎಂದಿಗೂ ಆ ಪ್ರೀತಿಯ ಒಳಧ್ವನಿ ದೂರವಾಗುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಅಲ್ಲವೇ ಅಂತಹದ್ದೊಂದು ಅನುಭವವನ್ನು ‘ಪ್ರೀತಿ’ ಅಂತ ಕರೆದಿದ್ದು...?!

‘ಪ್ರೀತಿ’ಗೆ ಹೇಗೆ ಹೇಳದೆ ಕೇಳದೆ ಆರಂಭಿಸುವ ಶಕ್ತಿ ಇದೆಯೋ, ಹಾಗೆ ಮುಕ್ತಾಯಗೊಳಿಸುವ ನಿಷ್ಕರುಣೆಯೂ ಕೂಡ ಇದೆ. ಅದು ನಾಳೆಯ ಒಳ್ಳೆಯದಕ್ಕೆ ಹೊರತು ಬೇರೆಯಾವುದಕ್ಕಲ್ಲ. ಅದು ಕೊನೆಗೆ ನೀಡುವುದು ವಿಶ್ರಾಂತ ನಸುನಗು ಅಷ್ಟೇ.

ಕೊನೆಗೆ ಒಳಗೇ ಇದ್ದು ಹೇಳುತ್ತೇ.. ಏನು ಗೊತ್ತಾ..?

“ನೀನು ಅನುಭವಿಸಿದ್ದೆಲ್ಲಾ ನಿನ್ನದಲ್ಲ,
ನಿನ್ನೊಳಗಿನ ದುಃಖ ನಿನ್ನದಲ್ಲ,
ಕಾಡುವ ನೆನಪು ನಿನ್ನದಲ್ಲ, 
ನಿನ್ನೊಳಗಿನ ನಿಡುಸುಯ್ಯುವಿಕೆ ನಿನ್ನದಲ್ಲ,
ನಿನ್ನೊಳಗೆ ಅವಿತಿಟ್ಟುಕೊಂಡಿರುವ ಶಕ್ತಿ ನೀನು,
ಅದನ್ನು ಹೊರಹಾಕಿ ಮುನ್ನಡೆಯುವ ಧೈರ್ಯ ನೀನು” ಅಂತ. 

...ವಾವ್ಹ್... ಅಲ್ವಾ..?

ಪ್ರೀತಿ ಅಂದರೇ, ಪೂರಿಯೊಳಗಿನ ಪಾನಿಯಂತೆ ಚೂರ‍್ಚೂರು ಖಾರ..!
---------------------------------
-ಶ್ರೀರಾಜ್ ವಕ್ವಾಡಿ




Tuesday, April 28, 2020

ವಿದ್ಯಾರ್ಥಿಗಳಿಗೆ ‘ಆನ್‌ಲೈನ್’ ಸಂಕಟ..!



ದೇಶದಾದ್ಯಂತ ಲಾಕ್ಡೌನಿಂದಾಗಿ ಎಲ್ಲವೂ ಅತಂತ್ರವಾಗಿದೆ. ವಿದ್ಯಾರ್ಥಿಗಳ ಭವಿಷ್ಯವೂ ಹೌದು. ಕೊರೋನಾ ವೈರಸ್‌ನ ಪರಿಣಾಮ ವಿದ್ಯಾರ್ಥಿಳ ಸಂಕಷ್ಟ ಎದುರಿಸುವಂತಾಗಿದೆ. ವಿದ್ಯಾರ್ಥಿಗಳ ಪಾಲಿಗೆ ಈ ಕೊರೋನಾ ವೈರಸ್ ಮಾನಸಿಕ ಸಂದಿಗ್ಧತೆ ತಂದೊಡ್ಡಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆಯ ನಿಗದಿತ ವೇಳಾಪಟ್ಟಿ ಲಾಕ್ಡೌನ್‌ಯಿಂದಾಗಿ ಮುಂದೂಡಲಾಗಿದೆ. ಪಿಯುಸಿ ವಿದ್ಯಾರ್ಥಿಗಳ ಕೊನೆಯ ಪರೀಕ್ಷೆಯದ್ದೂ ಕೂಡ ಇದೇ ಪರಿಸ್ಥಿತಿ. ಮಾತ್ರವಲ್ಲದೇ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಅರ್ಧಕ್ಕೆ ನಿಂತಿವೆ. ಫಾರ್ಮಸಿ, ಇಂಜಿನಿಯರಿಂಗ್, ಮೆಡಿಕಲ್ ಸೇರಿ ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳದ್ದೂ ಕೂಡ ಇದೇ ಸ್ಥಿತಿ. ವಾರ್ಷಿಕ ವೇಳಾಪಟ್ಟಿಗೆ ತಕ್ಕಂತೆ ತರಗತಿಗಳು, ಪರೀಕ್ಷೆಗಳನ್ನು ಮಾಡಲು ಅನಾನುಕೂಲವಾಯಿತು ಎಂಬ ಕಾರಣಕ್ಕೆ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು ಆನ್‌ಲೈನ್ ಪರೀಕ್ಷೆಗಳನ್ನೂ ಮಾಡಲು ಯೋಜನೆ ರೂಪಿಸುತ್ತಿವೆ ಎನ್ನುವುದು ಸುದ್ದಿಯಾಗಿವೆ. ಇದಕ್ಕೆ ಮಂಗಳೂರು ವಿಶ್ವವಿದ್ಯಾಲಯ ಕೂಡ ಹೊರತಾಗಿಲ್ಲ.

ಆನ್‌ಲೈನ್ ತರಗತಿಗಳನ್ನು ಮಾಡುವ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಸೂಚಿಸಿದ್ದಾರೆ. ವಿಶ್ವವಿದ್ಯಾನಿಲಯದ ಸೂಚನೆಗಳಂತೆ, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಬಹುತೇಕ ಎಲ್ಲಾ ಕಾಲೇಜುಗಳು ಆನ್‌ಲೈನ್ ತರಗತಿಗಳನ್ನು ಮಾಡುತ್ತಿವೆ. ಈ ಆನ್‌ಲೈನ್ ತರಗತಿಗಳು ಹಲವು ವಿದ್ಯಾರ್ಥಿಗಳಲ್ಲಿ ಮುನಿಸಿಗೆ ಕಾರಣವಾಗಿದೆ ಎನ್ನುವುದು ಸುಳ್ಳಲ್ಲ.



‘ವಿಶ್ವವಿದ್ಯಾಲಯದಲ್ಲಿ ಹಾಗೂ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಕಾಲೇಜುಗಳಲ್ಲಿ ಕೇಲವ ಮಂಗಳೂರಿನಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿರುವುದಲ್ಲ. ಹಳ್ಳಿ ಪ್ರದೇಶಗಳಲ್ಲಿರುವವರೂ ವ್ಯಾಸಂಗ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಮಾತ್ರವಲ್ಲ, ಪರಜಿಲ್ಲೆಗಳ ಹಳ್ಳಿಗಳಿಂದ ಬಂದು ಪಿಜಿ, ಹಾಸ್ಟೇಲ್‌ಗಳಲ್ಲಿ ಇದ್ದು ವ್ಯಾಸಂಗ ಮಾಡುವವರೂ ಕೂಡ ಇದ್ದಾರೆ ಎನ್ನುವುದು ತಿಳಿದುಕೊಳ್ಳಬೇಕು. ಇನ್ನೂ ಸಾರಿಗೆ ಸಂಪರ್ಕ, ಫೋನ್ ಸಂಪರ್ಕ, ನೆಟ್‌ವರ್ಕ್ ಸರಿಯಾದ ಮಟ್ಟಿಗೆ ಇಲ್ಲದಿರುವ ಗ್ರಾಮೀಣ ಪ್ರದೇಶಗಳಲ್ಲಿ, ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿದ್ದಾರೆ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳಬೇಕು.’ ಎಂದು ಸಾಕಷ್ಟು ವಿದ್ಯಾರ್ಥಿಳು ಆನ್‌ಲೈನ್ ತರಗತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಆನ್‌ಲೈನ್ ತರಗತಿಗಳನ್ನು ಪಡೆಯಲು ಪೂರಕವಾದ ನೆಟ್‌ವರ್ಕ್ ವ್ಯವಸ್ಥೆ ಅದೆಷ್ಟೋ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳಿಗಿಲ್ಲ. ಆ ಬಗ್ಗೆಯೂ ಕೂಡ ವಿಶ್ವವಿದ್ಯಾಲಯ ಗಮನಹರಿಸಬೇಕಾಗಿದೆ. ಏಕಾಏಕಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ವಿಶ್ವವಿದ್ಯಾಲಯ ಹಾಗೂ ಸಂಬಂಧಪಟ್ಟ ಇಲಾಖೆ ಇದನ್ನು ಗಮನಕ್ಕೆ ತೆಗೆದುಕೊಂಡು ಮುಂದಿನ ಯೋಜನೆ ಕೈಗೊಳ್ಳಬೇಕಾಗಿದೆ.

ಇನ್ನು, ಈಗಾಗಲೇ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲಾಗದೇ ಎಷ್ಟೋ ವಿದ್ಯಾರ್ಥಿಗಳು ಒತ್ತಡದಲ್ಲಿದ್ದಾರೆ. ಕೆಲವು ಕಾಲೇಜುಗಳು, ಅಸೈನ್‌ಮೆಂಟ್ಸ್, ಆನ್‌ಲೈನ್ ಇಂಟರ್‌ನಲ್ ಎಕ್ಸಾಂ, ಪ್ರಾಜೆಕ್ಟ್ ಗಳ ಆನ್‌ಲೈನ್ ಡೆಮೋ ಅದು ಇದು ಅಂತ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿವೆ. ಇದು ವಿರ್ದ್ಯಾರ್ಥಿಗಳ ಪಾಲಿಗೆೆ ತಲೆ ಮೇಲೆ ಬಂಡೆ ಹಾಕಿದಂತಾಗಿದೆ ಎನ್ನುವುದು ಅಕ್ಷರಶಃ ಸತ್ಯ.

‘ಕರ್ನಾಟಕ ಸರ್ಕಾರ ಕೋವೀಡ್19 ಸ್ಪ್ರೆಡ್ ಆಗುತ್ತಿದೆ ಎಂಬ ಕಾರಣವಾಗಿ ಮಾರ್ಚ್ 14ರಂದೇ ರಾಜ್ಯದಾದ್ಯಂತ ಲಾಕ್ಡೌನ್ ಮಾಡಿ ಶಾಲಾ ಕಾಲೇಜಿಗೆ ರಜೆ ಘೋಷಿಸಿತ್ತು. ರಜೆ ಇದೆ ಎಂದು ನಾನು ನನ್ನೂರು ಹೊನ್ನಾವರಕ್ಕೆ ಬಂದಿದ್ದೇನೆ. ಇಲ್ಲಿ ನಾನು ಲಾಕ್ ಆಗಿದ್ದೇನೆ. ಈಗ ದೇಶದಾದ್ಯಂತ ಮತ್ತೆ ಲಾಕ್ಡೌನ್ ಮುಂದುವರಿದಿದೆ. ಯೂನಿವರ್ಸಿಟಿ ಆನ್‌ಲೈನ್ ಕ್ಲಾಸ್ ಮಾಡಲು ಸೂಚಿಸಿದೆ. ನನಗೆ ಫೋನ್ ಕಾಲ್ ಮಾಡೋದಕ್ಕೂ ಕೂಡ ಸರಿಯಾದ ನೆಟ್‌ವರ್ಕ್ ಇಲ್ಲ. ಇನ್ನು, ಆನ್‌ಲೈನ್ ಕ್ಲಾಸ್ ಹೇಗೆ ಅಟೆಂಡ್ ಮಾಡಲಿ..? ಅದೂ ಅಲ್ಲದೇ, ನನ್ನ ರೀಡಿಂಗ್ ಮೆಟಿರಿಯಲ್ಸ್ ಎಲ್ಲವೂ ಕೂಡ ಹಾಸ್ಟೇಲ್‌ನಲ್ಲಿದೆ. ಎಕ್ಸಾಮ್ಸ್ ಬಗ್ಗೆ ನಿಜಕ್ಕೂ ಸ್ಟ್ರೆಸ್  ಅನ್ನಿಸುತ್ತಿದೆ’ ಅಂತಾರೆ ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ಫೈನಲ್ ಬಿಕಾಂ ವ್ಯಾಸಂಗ ಮಾಡುತ್ತಿರುವ ರಂಜನಾ. 

ಇದು ಒಬ್ಬ ವಿದ್ಯಾರ್ಥಿನಿಯ ಗೋಳಾದರೇ, ಹೀಗೆ ಗೋಳು ಅನುಭವಿಸುತ್ತಿರುವವರು ಸಾಕಷ್ಟು ಮಂದಿ ವಿದ್ಯಾರ್ಥಿಗಳಿದ್ದಾರೆ. ಕುಂದಾಪುರ ತಾಲೂಕು ವ್ಯಾಪ್ತಿಗೆ ಒಳಗೊಳ್ಳುವ ಹೊಸೂರು, ಕೌಂಜೂರು, ಹೈಕಾಡಿ, ಕೆರಾಡಿ, ಜಡ್ಕಲ್, ಆರ್ಡಿ ಸೇರಿದಂತೆ ಮುಂತಾದ ಪ್ರದೇಶಗಳ ಕೆಲವೆಡೆ ಇನ್ನೂ ಜ್ಹೀರೊ ನೆಟ್‌ವರ್ಕ್ ಇರುವ ಪರಿಸ್ಥಿತಿಯೂ ಇದೆ. ಅಂತಹ ಪ್ರದೇಶಗಳಿಂದ ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜು, ಡಾ. ಬಿ.ಬಿ ಹೆಗ್ಡೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ಈ ಆನ್‌ಲೈನ್ ತರಗತಿಗಳಿಂದಾಗಿ ಆ ವಿದ್ಯಾರ್ಥಿಗಳ ಪಾಡು ಹೇಳತೀರದಂತಾಗಿದೆ.



ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸೂಚನೆಯಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ತೊಂದರೇ ಆಗದಂತೆ ರೀಡಿಂಗ್ ಮೆಟಿರಿಯಲ್‌ಗಳ ಪಿಡಿಎಫ್, ವೀಡಿಯೋ ಲಿಂಕ್ ಗಳನ್ನು ವಾಟ್ಸಾಪ್ ಗ್ರೂಪ್‌ಗಳ ಮೂಲಕ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ವಿಜ್ಞಾನ ವಿಷಯಗಳಿಗೆ ಈ ಆನ್‌ಲೈನ್ ತರಗತಿಗಳು ತುಸು ಕಷ್ಟ. ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿಯಲ್ಲಿರುವುದಿಲ್ಲ ಕೆಲವು ವಿದ್ಯಾರ್ಥಿಗಳು ಸ್ಲೋ ಲರ್ನರ್ಸ್ ಇರುತ್ತಾರೆ, ಅಂತವರಿಗೆ ತರಗತಿಯಲ್ಲಿ ಹೇಳಿದ ವಿಚಾರಗಳು ಅರ್ಥವಾಗುವುದಕ್ಕೇ ಎರಡು ಮೂರು ಭಾರಿ ವಿವರಿಸಿ ಹೇಳಬೇಕಾದ ಅನಿವಾರ್ಯವಿರುತ್ತದೆ. ಉಪನ್ಯಾಸಕರಾದವರು ನಾವು ಅಂತಹ ವಿದ್ಯಾರ್ಥಿಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮತ್ತು ನಮ್ಮ ಕಾಲೇಜಿಗೆ ತುಂಬಾ ಹಳ್ಳಿ ಪ್ರದೇಶಗಳಿಂದ ಬರುವ ಹಲವಾರು ವಿದ್ಯಾರ್ಥಿಗಳೂ ಕೂಡ ಇದ್ದಾರೆ. ತುಂಬಾ ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಯ ಬಗ್ಗೆ ಅಳಲು ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ತರಗತಿಗಳನ್ನು ಮಾಡುವಲ್ಲಿ ಮತ್ತು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಮಸ್ಯೆಗಳಿವೆ ಎನ್ನುವುದು ಸತ್ಯ.
-ಚೇತನ್ ಕುಮಾರ್ ಶೆಟ್ಟಿ
ಉಪ ಪ್ರಾಂಶುಪಾಲರು, ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ.

ನಮ್ಮ ಕಾಲೇಜ್ ಅಲ್ಲಿ ವೆಬ್‌ಸೈಟ್‌ಗೆ ಲಾಗಿನ್ ಆಗಿ ಅಂತ ಹೇಳಿದ್ದಾರೆ. ಈಮೇಲ್ ಅಲ್ಲಿ ಸ್ಟಡಿ ಮೆಟಿರಿಯಲ್ಸ್ ಕಳುಹಿಸುತ್ತಿದ್ದಾರೆ. ನನ್ನ ಮನೆ ಇರುವುದು ಕುಂದಾಪುರದ ಕೌಂಜೂರು ಎಂಬ ಗ್ರಾಮೀಣ ಪ್ರದೇಶದಲ್ಲಿ. ನನಗಿಲ್ಲಿ ಅದಕ್ಕೆ ಬೇಕಾದಷ್ಟು ಪೂರಕವಾದ ನೆಟ್‌ವರ್ಕ್ ಇಲ್ಲ. ಅಲ್ಲಲ್ಲಿ ಸ್ವಲ್ಪ ನೆಟ್‌ವರ್ಕ್ ಸಿಕ್ಕರೂ ಡೌನ್‌ಲೋಡ್ ಮಾಡುವುದಕ್ಕೆ ಕಷ್ಟವಾಗುತ್ತದೆ.  
-ವಿನಯಾ ಕೌಂಜೂರು
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಉಡುಪಿ. 
---------------------
 -ಶ್ರೀರಾಜ್ ವಕ್ವಾಡಿ

Monday, April 27, 2020

ಆರ್ದ್ರ..!



ಅಂದು ಕೇವಲ
ಅಲ್ಪವಿರಾಮವಷ್ಟೇ...
ಅದು ನೋವಿನೇಟಿಗೆ
ಕ್ಷಣ ಹಿತಕೊಟ್ಟ
ಮುಲಾಮು..!

ದೂರದೆತ್ತರದಲ್ಲಿ
ಮಿನುಗುತ್ತಿದ್ದ
ಒಂಟಿ ನಕ್ಷತ್ರ
ನನ್ನನ್ನೇ ದಿಟ್ಟಿಸುತ್ತಿತ್ತು
ನಾನು ಆರ್ದ್ರಳಾಗಿದ್ದೆ...!

ನೀನು ಹಾಗೆ
ಹೋಗಬಾರದಿತ್ತು
ಎಲ್ಲವೂ ಇಲ್ಲಿ ಉಳಿದಿದೆ ..!
ಅವೆಲ್ಲಾ ಅರ್ಧ ಓದಿದ
ಕಥೆಗಳು...!
ಮಡಚಿಟ್ಟ ಪುಸ್ತಕದ
ಮೇಲೆ ಉದುರುತ್ತಿವೆ
ಟಕ್ ಟಕ್ ಟಕ್
ಕಣ್ಣ ಹನಿ...!
ನಕ್ಷತ್ರ ಮರೆಯಾಯಿತು
ದುಃಖವಿನ್ನೂ ಪೂರ್ಣ ಚುಕ್ಕಿ
ಕಾಣಲಿಲ್ಲ...!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)

ಸೆಕ್ಯುಲರಿಸಂ, ಹಿಂದುತ್ವ ಭವ್ಯ ಭಾರತಕ್ಕೆ ಬೇಕು..!



ಇಂದು ಏನಾಗಿದೆ ಎಂದರೇ, ಯಾರು ಪಾಲನೆ ಮಾಡುದಿಲ್ಲವೋ ಅವರು ಪಾಲನೆ ಮಾಡುವವರಿಗೆ ಬುದ್ಧಿ ಹೇಳುವ ಕಾಲ ಬಂದೊದಗಿದೆ. ಎಲ್ಲಾ ವಿಚಾರಗಳಲ್ಲಿಯೂ ಹೌದು.

ಬಹಳ ಚರ್ಚೆಗೆ ಒಳಪಡುವ ಹಿಂದುತ್ವ ಮತ್ತು ಸೆಕ್ಯುಲರಿಸಂ ಚಿಂತನೆಗಳದ್ದೂ ಹಾಗೆ. ಯಾವಾತ ಹಿಂದುತ್ವವನ್ನು ಪಾಲಿಸುವುದಿಲ್ಲವೋ ಆತ ಹಿಂದುತ್ವದ ಬಗ್ಗೆ ಮಾತಾಡುತ್ತಾನೆ. ಯಾವಾತನಿಗೆ ಸೆಕ್ಯುಲರಿಸಂ ಅಂದರೇ ಏನು ಅಂತ ಗೊತ್ತಿಲ್ಲವೋ ಆತ ಸೆಕ್ಯುಲರಿಸಂ ಏನೆಂದು ಹೇಳುವುದಕ್ಕೆ ಮುಂದಾಗುತ್ತಾನೆ. ನಿಜಕ್ಕೂ ತಮಾಷೆಯ ಜೊತೆಗೆ ಇಂತದ್ದನ್ನೆಲ್ಲಾ ನೋಡುವಾಗ ಆಶ್ಚರ್ಯವಾಗುತ್ತದೆ.



ಹಿಂದುತ್ವ ಅಂದರೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಜಿ ಭಾಗವತ್ ಅವರು ಹೇಳುವ ಪ್ರಕಾರ, “ಎಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ ಸಾಂಘಿಕವಾಗಿರುವುದೇ ಹಿಂದುತ್ವ” (ಮೋಹನ್ ಭಾಗವತ್ ಅವರು ಯಾವಾಗಲೂ ಹೇಳುವ ಮಾತು). ಸೆಕ್ಯುಲರಿಸಂ ಅಂದರೇ, ಕುವೆಂಪು ಅವರು ಹೇಳುವ ಪ್ರಕಾರ “ಸೆಕ್ಯುಲರಿಸಂ ಅಂದರೇ, ಇನ್ನೇನೂ ಅಲ್ಲ, ಎಲ್ಲರೂ ನನ್ನಂತೆಯೇ ಎನ್ನುವ ಸರಳ ಅನುಭೂತಿ” (‘ಕುವೆಂಪು ನುಡಿ ತೋರಣ’ ಕುವೆಂಪು ಅವರ ಭಾಷಣ ಮತ್ತು ಲೇಖನಗಳ ಸಂಕಲನ). ಅನೇಕರು ಇನ್ನೂ ಹಲವಾರು ರೀತಿಯಲ್ಲಿ ಸೆಕ್ಯುಲರಿಸಂ ಅಂದರೇನು..? ಹಿಂದುತ್ವ ಅಂದರೇನು..? ಎನ್ನುವುದನ್ನು ವಿವರಿಸುತ್ತಾರೆ.

ಈ ಎರಡೂ ಸಿದ್ಧಾಂತಗಳು ಸಂಪೂರ್ಣ ರಾಜಕೀಯವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ರಾಜಕೀಯದಲ್ಲಿ ಬಳಕೆಯಲ್ಲಿರುವ ಸೆಕ್ಯುಲರಿಸಂ ಮತ್ತು ಹಿಂದುತ್ವ ಅಂದರೇ ಏನೆಂದೇ ತಿಳಿಯುತ್ತಿಲ್ಲ.



ಸೆಕ್ಯುಲರಿಸಂ ಗೆ ಮೂಲ ಯುರೋಪ್. ಸರ್ಕಾರದ ಮೇಲೆ ಯೂರೋಪಿನಲ್ಲಿ ಚರ್ಚ್‌ನ ನಿಯಂತ್ರಣ ಹೆಚ್ಚಾದಾಗ ಅಲ್ಲಿನ ಚಿಂತಕರು ಸೆಕ್ಯುಲರಿಸಂ ಬಳಕೆಗೆ ತಂದರು ಎನ್ನುವುದು ಇತಿಹಾಸ ಹೇಳುತ್ತದೆ. ಸರ್ಕಾರದ ಮೇಲೆ ಯಾವುದೇ ಧರ್ಮದ ನಿಯಂತ್ರಣ ಇರಬಾರದು, ಸರ್ಕಾರ ಮತ್ತು ಧರ್ಮ ಪ್ರತ್ಯೇಕವಾಗಿರಬೇಕು ಎನ್ನುವುದನ್ನು ಸೆಕ್ಯುಲರಿಸಂ ಹೇಳುತ್ತದೆ. ಜಾತ್ಯಾತೀತವಾಗಿ ಸರ್ಕಾರ ಒಂದು ದೇಶವನ್ನು ನಡೆಸಬೇಕು ಎಂದು ಹೇಳುತ್ತದೆ.

ಈ ಸೆಕ್ಯುಲರಿಸಂ, ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೂಪು ಪಡೆಯಿತು. ಭಾರತದಲ್ಲಿ ಸೆಕ್ಯುಲರಿಸಂ ಮಾನವತಾವಾದ ಎಂದಾಯಿತು. ಸಮಾಜವಾದ ಎಂದಾಯಿತು ಹೀಗೆ ಅನೇಕನೇಕ ರೂಪು ಪಡೆಯಿತು. ಅದನ್ನು ರಾಜಕೀಯ ಲಾಭಕ್ಕಾಗಿ ಬಳಕೆಮಾಡಿಕೊಂಡರು. ಸಮಯಸಾಧಕ ಹುನ್ನಾರಗಳು ಸೆಕ್ಯುಲರಿಸಂ ನ ಹೆಸರಿನಲ್ಲಿ ನಡೆಯಿತು ಎನ್ನುವುದು ಅಕ್ಷರಶಃ ಸತ್ಯ.


ಇನ್ನು, ಹಿಂದುತ್ವ. ಹಿಂದುತ್ವಕ್ಕೆ ಮತ್ತು ಹಿಂದೂ ಧರ್ಮಕ್ಕೆ ಸಂಬಂಧವಿದೆಯಾ.? ಅಥವಾ ಹಿಂದುತ್ವ ಒಂದು ರಾಜಕೀಯ ಪರಿಕಲ್ಪನೆಯಾ..? ಹಿಂದುತ್ವ ಎನ್ನುವುದು ವಿವಿಧ ಜಾತಿಗಳಲ್ಲಿ ಚದುರಿ ಹೋದ ಹಿಂದೂ ಧರ್ಮದವರನ್ನು ಒಗ್ಗೂಡಿಸಲು ಹುಟ್ಟಿಕೊಂಡ ಸಂಘಟನೆಯೋ..? ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರವಿಲ್ಲ. ವೀರ ಸಾವರ್ಕರ್ ಹಿಂದುತ್ವವನ್ನು ಮೊದಲು ಜಾರಿಗೆ ತಂದವರು ಎಂದು ಹಿಂದುತ್ವವನ್ನು ಪಾಲಿಸುವವರೇ ಹೇಳುತ್ತಾರೆ. ಮೃದು ಹಿಂದುತ್ವವನ್ನು ಪಾಲಿಸುವವರು ಸ್ವಾಮಿ ವಿವೇಕಾನಂದರ ಪ್ರತಿಪಾದನೆಯಲ್ಲಿ ಕಾಣುತ್ತಾರೆ. ಅದೇನೇ ಇರಲಿ, ರಾಜಕೀಯದಲ್ಲಿ ಹಿಂದೂ ಧರ್ಮವನ್ನು ಸೇರಿಸಿಕೊಂಡು ವಿಷಮ ಸ್ಥಿತಿ ಉಂಟು ಮಾಡುವಂತಹ ಕೆಲಸವನ್ನೂ ಕೂಡ ಹಿಂದುತ್ವ ಮಾಡಿದೆ ಎನ್ನುವುದು ಸತ್ಯ. ಅನೇಕ ರಾಜಕೀಯ ನಾಯಕರೇ, ಹಿಂದೂ ಧರ್ಮದ ಮಠಾಧಿಪತಿಗಳೇ ‘ಹಿಂದೂ ಧರ್ಮವೇ ಬೇರೆ, ಹಿಂದುತ್ವವೇ ಬೇರೆ’ ಎಂದು ಹೇಳುತ್ತಾರೆ. ಆದರೂ, ಇಂದಿಗೂ ಹಿಂದುತ್ವದಲ್ಲಿ ಹಿಂದೂ ಧರ್ಮವನ್ನು ಸೇರಿಸಿಕೊಳ್ಳುವ ಕೆಲಸ ಆಗುತ್ತಿದೆ ಎನ್ನುವುದು ಸುಳ್ಳಲ್ಲ. ಇದು ರಾಜಕೀಯ ಸಿದ್ಧಾಂತಗಳ  ಮತ್ಸರವಲ್ಲದೇ ಮತ್ತೇನು..?

ಸೆಕ್ಯುಲರಿಸಂ ಅಂದರೇ, ಒಂದು ವರ್ಗದವರು ‘ಮಾನವತಾವಾದ’, ‘ಜಾತ್ಯಾತೀತ’ ಎಂದು ಡೆಫಿನಿಶನ್ ಕೊಟ್ಟು ರಾಜಕೀಯ ಮಾಡುತ್ತಾರೆ. ಹಿಂದುತ್ವ ಅಂದರೇ, ‘ರಾಷ್ಟ್ರೀಯವಾದ’, ‘ದೇಶಪ್ರೇಮ’ ಎಂದು ಮತ್ತೊಂದು ವರ್ಗದವರು ಡೆಫಿನಿಶನ್ ಕೊಟ್ಟು ರಾಜಕೀಯ ಮಾಡುತ್ತಾರೆ.

ಆದರೇ ನಿಜವಾದ ಸೆಕ್ಯುಲರಿಸಂ ಅಂದರೇ ಏನು..? ನಿಜವಾದ ಹಿಂದುತ್ವ ಅಂದರೇ ಏನು..? ಎಂದು ಪ್ರಶ್ನಿಸಿಕೊಳ್ಳಲೇ ಇಲ್ಲ ಅಂತನ್ನಿಸುತ್ತದೆ. ಮಾನವತಾವಾದ, ಜಾತ್ಯಾತೀತ ಅಂದರೇ ರಾಜಕೀಯವಾ..? ರಾಷ್ಟ್ರೀಯವಾದ, ದೇಶಪ್ರೇಮ ಅಂದರೇ ರಾಜಕೀಯವಾ..? ಪ್ರಶ್ನಿಸಿಕೊಳ್ಳುವ ಅಗತ್ಯವಿದೆ.

ಹಿಂದುತ್ವ ಅಂದರೇ ‘ಇದಮಿತ್ಥಂ’ ಎನ್ನುವ ಸಿದ್ಧಾಂತವಾ..? ಅನ್ಯರನ್ನು ಸೃಷ್ಟಿಸುವ ರಾಜಕೀಯ ಶಕ್ತಿನಾ..? ಹಿಂದುತ್ವ ಅಂದರೇ, ಕೇವಲ ಮುಸ್ಲಿಂರನ್ನು ವಿಮರ್ಶಿಸುವ, ಪ್ರಶ್ನಿಸುವ ಅಧಿಕಾರನಾ..? ಹಿಂದುತ್ವ ಅಂದರೇ, ಗರ್ವದಿಂದ ಹೇಳು ನಾನೋರ್ವ ಹಿಂದು ಎಂದು ಹೇಳುವುದಾ..? ಗರ್ವ ಪಡುವುದು ಹಿಂದುತ್ವನಾ..? ಭಯಭೀತಗೊಳಿಸುವುದು ಹಿಂದುತ್ವನಾ..?

ಸೆಕ್ಯುಲರಿಸಂ ಅಂದರೇ, ಮುಸ್ಲಿಂ ಪರ ವಾದನಾ..? ಸೆಕ್ಯುಲರಿಸಂ ಅಂದರೇ, ಹಿಂದೂ ಧರ್ಮವನ್ನು ಪ್ರಶ್ನಿಸುವ ಧೋರಣೆಯಾ..? ಸೆಕ್ಯುಲರಿಸಂ ಅಂದರೇ, ಬಹುಸಂಖ್ಯಾತರ ವಿರುದ್ಧ ಹುಟ್ಟಿಕೊಂಡ ಸಿದ್ಧಾಂತನಾ..? ರಾಷ್ಟ್ರ ವಿರೋಧಿಗಳ ಪರವಾಗಿರುವ ಚಿಂತನೆಯಾ..? ಸೆಕ್ಯುಲರಿಸಂ ಅಂದರೇ, ಹಿಂದೂ ಧರ್ಮದ ಮೂಲವನ್ನು ಕೇಳುವುದಾ..?

ರಾಷ್ಟ್ರೀಯವಾದ, ದೇಶಪ್ರೇಮ, ಮಾನವತಾವಾದ, ಜಾತ್ಯಾತೀತ ಎಂದು ರಾಜಕೀಯ ಮಾಡುವವರು, ಬೊಬ್ಬೆ ಹಾಕುವವರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಿ. ನಿಮ್ಮ ನಿಮ್ಮ ರಾಷ್ಟ್ರೀಯವಾದ, ದೇಶ ಪ್ರೇಮ, ಮಾನವತಾವಾದ, ಜಾತ್ಯಾತೀತ ಏನೆಂಬುವುದು ಇನ್ನೂ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತದೆ.

ಇನ್ನಾದರೂ ಹೇಳುವವರೆಲ್ಲಾ ಪಾಲಿಸುವಂತವರಾಗಲಿ. ರಾಷ್ಟ್ರೀಯವಾದ, ರಾಷ್ಟ್ರೀಯವಾದವಾಗಲಿ. ದೇಶ ಪ್ರೇಮ, ದೇಶ ಪ್ರೇಮವಾಗಲಿ. ಮಾನವತವಾದ, ಮಾನವತವಾದವಾಗಲಿ. ಜಾತ್ಯಾತೀತ ಜಾತ್ಯಾತೀತವಾಗಲಿ. ಜಾತ್ಯಾತೀತ, ಮಾನವಾತವಾದ ಎಂದು ಕರೆಸಿಕೊಳ್ಳುವ ಸೆಕ್ಯುಲರಿಸಂ ಮತ್ತು  ರಾಷ್ಟ್ರೀಯವಾದ, ದೇಶಪ್ರೇಮ ಎಂದು ಕರೆಸಿಕೊಳ್ಳುವ ಹಿಂದುತ್ವ ರಾಜಕೀಯದಿಂದ ಹೊರಗುಳಿಯಲಿ. ರಾಷ್ಟ್ರೀಯವಾದ, ದೇಶಪ್ರೇಮ, ಮಾನವತಾವಾದ, ಜಾತ್ಯಾತೀತಗಳು ಮೂಲ ಅರ್ಥವನ್ನೇ ಪಡೆಯಲಿ. ಸಮಾಜದ ಹಿತ ಚಿಂತನೆಗೆ ದುಡಿಯಲಿ.

ರಾಜಕೀಯವನ್ನು ಹೊರತಾಗಿರುವ ಮಾನವತಾವಾದ, ಜಾತ್ಯಾತೀತ ಎಂದು ಕರೆಸಿಕೊಳ್ಳುವ ಸೆಕ್ಯುಲರಿಸಂ ಹಾಗೂ ರಾಷ್ಟ್ರೀಯವಾದ, ದೇಶಪ್ರೇಮ ಎಂದು ಕರೆಸಿಕೊಳ್ಳುವ ಹಿಂದುತ್ವ ಭವಿಷ್ಯದ ಭವ್ಯ ಭಾರತಕ್ಕೆ ಬೇಕು..!
----------------------------------
-ಶ್ರೀರಾಜ್ ವಕ್ವಾಡಿ

Sunday, April 26, 2020

‘ಮಾನವ ಧರ್ಮ’ವೊಂದೇ ಸಾಕು, ಬಸವಣ್ಣನನ್ನು ಪೂರ್ತಿ ಒಪ್ಪಬೇಕಂತಿಲ್ಲ..!



ಮತ್ತೆ ಬಸವಣ್ಣ ಇಂದು ನೆನಪಾಗಿದ್ದಾರೆ. ಹೌದು, ಬಸವಣ್ಣನ ಜಯಂತಿ ಮತ್ತೆ ಬಂದಿದೆ. ಮಹಾ ಮಾನವತಾವಾದಿ ಬಸವಣ್ಣ ಬೇರೆ ಯಾವ ದಿನವೂ ನೆನಪಾಗುವುದಿಲ್ಲ. ಆತ ಪ್ರತಿಪಾದಿಸಿದ ಧರ್ಮ ಆಚರಣೆಗೆ ಬರುವುದಿಲ್ಲ. ಅದು ಬರುವುದಿದ್ದರೇ, ಆತನ ಜಯಂತಿ ದಿನ ಮಾತ್ರ ಅನ್ನುವಷ್ಟರ ಮಟ್ಟಿಗೆ ಕಾಲ ಬಂದೊದಗಿದೆ ಎನ್ನುವುದು ವಿಷಾದನೀಯ.

ಇಂದಿನ ಸಮಾಜದಲ್ಲಿ ಧರ್ಮ ಎನ್ನುವುದು ಅಪ್ಪಟ ರಾಜಕಾರಣವಾಗಿದೆ. ದೇವರನ್ನು ಮಾರುವ ಧರ್ಮವೇ ಶ್ರೇಷ್ಠ ಅನ್ನಿಸಿಕೊಂಡಿದೆ. ಧರ್ಮಾಚರಣೆಯೂ ಸಂಪೂರ್ಣವಾಗಿ ವ್ಯಾಪಾರೀಕರಣವಾಗಿದೆ ಎಂಬುವುದು ಸತ್ಯ.

ಬಸವಣ್ಣ ವಿಶ್ವ ಮಾನವತಾವಾದಿ. ಅಪ್ಪಟ ದಾರ್ಶನಿಕ. ಬಸವಣ್ಣ ಪ್ರತಿಪಾದಿಸಿದ ವಿಚಾರಗಳು ನನಗನ್ನಿಸುವ ಮಟ್ಟಿಗೆ ಇನ್ನೂ ಆಚರಣೆಗೆ ಬಂದಿಲ್ಲ. ಅದು ಕೇವಲ ವಚನಗಳಾಗಿಯೇ, ತತ್ವವಾಗಿಯೇ ಉಳಿದುಹೋಗಿದೆ ಅಂತನ್ನಿಸುತ್ತಿದೆ. ಜಾತಿ, ಮತ, ಧರ್ಮ, ಭೇದ ಭಾವಗಳಿಲ್ಲದೆ ಸಕಲ ಜೀವಿಗಳ ಕಲ್ಯಾಣ ಬಯಸಿದ್ದರು ಬಸವಣ್ಣ. ಸಾಮಾಜಿಕ ಸಮಾನತೆಯನ್ನು ಕಟ್ಟಲು ವೈಚಾರಿಕ ಕ್ರಾಂತಿಯನ್ನು ಬಸವಣ್ಣ ಮಾಡಿದ್ದರು. ಆದರೇ, ಬಸವಣ್ಣನನ್ನು ಗೌರವಿಸುವವರು, ಮಾನವೀಯತೆ, ಮನುಜ ಧರ್ಮದ ಬಗ್ಗೆ ಮಾತಾಡುವವರು ಇಂದು ಎಷ್ಟರ ಮಟ್ಟಿಗೆ ಬಸವಣ್ಣನ ತತ್ವವನ್ನು, ವಿಚಾರವನ್ನು ಪಾಲಿಸುತ್ತಿದ್ದಾರೆ ಎಂದು ಪ್ರಶ್ನೆ ಕೇಳಬೇಕಾದ ಅನಿವಾರ್ಯವಿದೆ. ಲಾಭಕ್ಕಾಗಿ ಎಲ್ಲವೂ ತೋರಿಕೆಯಾಗಿದೆ. ಸಮಾಜವಿಂದು ಜಾತೀಯತೆ, ಮತೀಯತೆಯಲ್ಲಿ ನಲುಗಿಹೋಗಿದೆ. ನೆಲದೆಲ್ಲೆಡೆ ಧರ್ಮ ದಳ್ಳುರಿಯ ಹೊಗೆಯಾಡುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ/ಮಾಡುವ ಮತಾಂಧರೇ, ಧರ್ಮ ಧರ್ಮಗಳ ನಡುವೆ ಗಲಭೆ ಎಬ್ಬಿಸುವವರೇ, ಪರಧರ್ಮದ ಬಗ್ಗೆ ತುಚ್ಛವಾಗಿ ಕಾಣುವವರೇ ಇಂದು ಬಸವಣ್ಣನ ಬಗ್ಗೆ ಮಾತಾಡುತ್ತಾರೆ. ಒಂದು ದಿನದ ಮಟ್ಟಿಗೆ ಬಸವಾನುಯಾಯಿಗಳಾಗುತ್ತಾರೆ. ನಿಜಕ್ಕೂ ತಮಾಷೆ ಅನ್ನಿಸುತ್ತದೆ. ಅಂತವರೆಲ್ಲಾ.. ‘ನಾನೇಷ್ಟು ಬಸವಣ್ಣನ ತತ್ವವನ್ನು ಪಾಲಿಸುತ್ತಿದ್ದೇನೆ’ ಅಂತ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ಬಸವಣ್ಣನ ಬಗ್ಗೆ ಮಾತಾಡುವುದಕ್ಕೆ ನೈತಿಕತೆ ಇಲ್ಲದವರು ಬಸವಣ್ಣನನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂದರೇ ಅದಕ್ಕಿಂತ ಅಸಹ್ಯವಾದದ್ದು ಮತ್ತಾವುದೂ ಇಲ್ಲ.

ಬಸವಣ್ಣ ಏಕದೇವೋಪಾಸನೆಯ ಧರ್ಮವನ್ನು ದೇಶದಲ್ಲಿ ಮೋದಲು ಸ್ಥಾಪಿಸಿದರು.  ನಂತರದಲ್ಲಿ ಹಿಂದೂ ಧರ್ಮ, ಜೈನ ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ ಹೀಗೆ ಅನೇಕ ಧರ್ಮಗಳು ಬಂದವು. ದೇಶದಲ್ಲಿ ಮನುಸ್ಮತಿ ಮೊದಲಿನಿಂದಲೂ ಆಳುತ್ತಿದೆ. ಇವತ್ತಿಗೂ ಪರೋಕ್ಷವಾಗಿ ಆಳುತ್ತಿದೆ ಎನ್ನುವುದು ಸುಳ್ಳಲ್ಲ. ಅದನ್ನು ಒಪ್ಪಿಕೊಳ್ಳಲೇಬೇಕು.

ಮನುಸ್ಮತಿ ‘ಬ್ರಾಹ್ಮಣೋ ಧರ್ಮ ಮೂಲಃ’ ಎಂದು ಹೇಳುತ್ತದೆ. ಮನುಸ್ಮತಿ ದೇವರು ಧರ್ಮದ ಮೂಲ ಎಂದು ಹೇಳಲಿಲ್ಲ. ಬಸವಣ್ಣ ಇದನ್ನು ಒಪ್ಪಲಿಲ್ಲ. ಬ್ರಾಹ್ಮಣನೇ ಧರ್ಮದ ಮೂಲ ಎಂಬುವುದನ್ನು ತಿರಸ್ಕರಿಸಿದ ಬಸವಣ್ಣನನ್ನು ಸಮಾಜದಿಂದ ಹೊರದೂಡಲಾಯಿತು. “ದಯೆಯಿಲ್ಲದ ಧರ್ಮ ಯಾವುದಯ್ಯ..? ದಯಯೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯಯೇ ಧರ್ಮದ ಮೂಲವಯ್ಯ ಕೂಡಲಸಂಗಮದೇವ" ಎಂದು ಪ್ರತಿಪಾದಿಸುವುದರ ಮೂಲಕ ಮಾನವತಾವಾದಿಯಾಗಿ ಬಸವಣ್ಣ ದೈತ್ಯರಾದರು. ಸಮಾಜವನ್ನು ಜಾತಿಯ ಆಧಾರಗಳಲ್ಲಿ, ವರ್ಣದ ಆಧಾರಗಳಲ್ಲಿ ವರ್ಗೀಕರಣ ಮಾಡುವ ಸಿದ್ಧಾಂತದ ವಿರುದ್ಧ ಬಸವಣ್ಣ ನಿಂತರು. ಮಾನವೀಯ ಮೌಲ್ಯವನ್ನು ಜಗತ್ತಿಗೆ ಧಾರೆಯೆರೆದವರು ಬಸವಣ್ಣ. ಬಸವಣ್ಣ ಬಸವಣ್ಣನಾಗಿಯೇ ಉಳಿದರು.

ಇಂದಿಗೂ ಜಾತಿಯಿಂದಾಗಿ, ಧರ್ಮದಿಂದಾಗಿ, ವರ್ಣದಿಂದಾಗಿ ಭೇದ ಭಾವಗಳು ನಡೆಯುತ್ತಲೇ ಇದೆ. ಅದಕ್ಕೆ ಪೂರಕವಾದ ವಾತಾವರಣ ಬಹಳ ಗಟ್ಟಿಯಾಗಿ ಸೃಷ್ಟಿಯಾಗಿದೆ ಅನ್ನಿಸುತ್ತಿದೆ. ಬಸವಣ್ಣನನ್ನು ಪೂರ್ತಿಯಾಗಿ ಒಪ್ಪಬೇಕು ಎನ್ನುದನ್ನು ನಾನಿಲ್ಲಿ ಹೇಳಲಾರೆ. ಸ್ವಲ್ಪವೋ, ಪೂರ್ತಿಯೋ ಒಪ್ಪಬೇಕಂತನೂ ಕೂಡ ಇಲ್ಲ. ಅವೆಲ್ಲವೂ ಮನೋಧರ್ಮಕ್ಕೆ ಬಿಟ್ಟಿದ್ದು. ಆದರೇ, ಮಾನವೀಯತೆಯನ್ನು ಪಾಲಿಸಬಹುದು. ಮನುಜ ಧರ್ಮವನ್ನು ಅನುಸರಿಸಬಹುದು. ಆ ಮೂಲಕವೇ ಸಮಾಜದಲ್ಲಿ ನೆಮ್ಮದಿಯ ನಾಳೆಗಳನ್ನು ಕಾಣಬಹುದಲ್ಲವೇ..? ಸೌಹಾರ್ಧತೆಯ ಸಾಮುದಾಯಿಕ ಬದುಕು ಕಟ್ಟಿಕೊಳ್ಳಬಹುದಲ್ಲವೇ..? ರಾಗ ದ್ವೇಷಗಳ ವಿಜೃಂಭಿಸಿ ಸಮಾಜದ ನಾಶಕ್ಕೆ ಕಾರಣವಾಗುವ ಬದಲಾಗಿ ಸಮಾಜದ ಹಿತಚಿಂತನೆಗಾಗಿ ಸಮಾನತೆ ಪಾಲಿಸಬಹುದಲ್ಲವೇ..? ಪ್ರಶ್ನಿಸಿಕೊಳ್ಳಿ ತಮಗೆ ತಾವೇ. ಉತ್ತರ ಸಿಗಬಹುದು. 



ತಾನು ಬಸವಣ್ಣನನ್ನು ಅನುಸರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರೇ, ಆತ ಬಸವಣ್ಣನ ಎಲ್ಲಾ ವಚನಗಳನ್ನು, ತತ್ವಗಳನ್ನು ತಿಳಿದುಕೊಳ್ಳುವುದೇನೂ ಬೇಕಾಗಿಲ್ಲ.

“ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಲು ಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮ ದೇವನೊಲಿಸುವ ಪರಿ”.

ಇದೊಂದೇ ಸಾಕಲ್ಲವೇ ಆತ್ಮೋದ್ಧಾರಕ್ಕೆ..? ಇದೊಂದೇ ಸಾಕಲ್ಲವೇ ಆತ್ಮಶುದ್ಧಿಗೆ..? ಮಾನವ ಧರ್ಮ ಇಲ್ಲಿಂದಲೇ ಆರಂಭ.
------------------------------
-ಶ್ರೀರಾಜ್ ವಕ್ವಾಡಿ 

Saturday, April 25, 2020

‘ರಿವರ್ಸ್ ಕ್ವಾರಂಟೈನ್’ ಕೇರಳದ ಹೊಸ ಸೂತ್ರ..!



ಕೊರೋನಾ ಸೋಂಕು ತಡೆಗಟ್ಟುವಲ್ಲಿ ಕೇರಳ ಸರ್ಕಾರ ಕೈಗೊಂಡ ಕ್ರಮಗಳು ಅಂತರಾಷ್ಟ್ರೀಯ  ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಸೋಂಕು ಮೊದಲು ಕಾಣಿಸಿಕೊಂಡಾಗಲೇ 28 ದಿನಗಳ ಕ್ವಾರಂಟೈನ್, ಹಳ್ಳಿ ಹಳ್ಳಿಗಳಲ್ಲಿ ಕ್ಲೀನಿಂಗ್, ಸ್ಕ್ರೀನಿಂಗ್ ಬೂತ್‌ಗಳನ್ನು ಅಳವಡಿಸಿದ್ದಲ್ಲದೇ, ಅಲ್ಲಿನ ತುರ್ತು ಪರಿಸ್ಥಿತಿಗಾಗಿ ಕೇರಳ ಸರ್ಕಾರ ಬರೋಬ್ಬರಿ 20,000 ಕೋಟಿ ಪ್ಯಾಕೇಜ್ ಘೋಷಿಸಿದ್ದು ಕೂಡ ಪ್ರಶಂಸೆಗೆ ಪಾತ್ರವಾಯಿತು. ಈಗ ಮತ್ತೆ ಕೇರಳ ಸರ್ಕಾರ, ಕೊರೋನಾ ವೈರಸ್‌ನ್ನು ಬಡಿದೋಡಿಸಲು ಹೊಸ ಅಸ್ತ್ರವನ್ನು ಯೋಜಿಸುತ್ತಿದೆ. ಆ ಹೊಸ ಅಸ್ತ್ರ ಯಾವುದೆಂಬ ಕುತೂಹಲ ನಿಮಗಿದ್ದರೇ, ಸ್ವಲ್ಪ ಮುಂದೆ ಕಣ್ಣೋಡಿಸಿ.

ಸದ್ಯಕ್ಕೆ ದೇಶದಲ್ಲಿ ಮೇ 3ರ ತನಕ ಲಾಕ್ಡೌನ್ ಇದೆ. ಲಾಕ್ಡೌನ್ ಮುಂದುವರಿಯುತ್ತಾ..? ಅಥವಾ ಲಾಕ್ಡೌನ್ ಮುಗಿಯುತ್ತಾ..? ಸಡಿಲಗೊಳ್ಳುತ್ತದಾ..? ಲಾಕ್ಡೌನ್ ಒಂದು ವೇಳೆ ಮುಗಿದರೆ ಮುಂದೇನು..? ಎಂಬ ಪ್ರಶ್ನೆಗಳಿಗೆ ನಮ್ಮಲ್ಲಿ ಸರಿಯಾದ ಉತ್ತರಗಳಿಲ್ಲ. ಲಾಕ್ಡೌನ್ ಮೇ 3ರ ನಂತರ ಮುಗಿದರೂ ಕೂಡ ಸಾರಿಗೆ ವ್ಯವಸ್ಥೆಗಳನ್ನು, ವಾಜಿಜ್ಯ ಕ್ಷೇತ್ರಗಳಿಗೆ ಅಷ್ಟು ಸುಲಭವಾಗಿ ವಹಿವಾಟಿಗೆ ಬಿಡಲು ಸಾಧ್ಯವಿಲ್ಲ. ಆರ್ಥಿಕತೆಯೂ ಸುಧಾರಿಸುವುದೊಂದಿಗೆ ಜನ ಜೀವನವೂ ಸುಧಾರಣೆ ಮಾಡುವಂತಹ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಸೋಂಕಿತರ ಸಂಖ್ಯೆ, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಮೇಲ್ಮುಖಗೊಳ್ಳುತ್ತಲೇ ಇದೆ. ಮೇ 3ರ ನಂತರ ಲಾಕ್ಡೌನ್ ಮುಗಿಸಿದರೇ ಹೇಗೆ ಸೋಂಕು ನಿಯಂತ್ರಣಕ್ಕೆ ಬರುತ್ತದೆ..? ಲಾಕ್ಡೌನ್ ಇರುವಾಗಲೇ ಸೋಂಕು ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇನ್ನು ಲಾಕ್ಡೌನ್ ತೆರವುಗೊಳಿಸಿದರೇ ಏನಾಗಬಹುದು ಎಂಬ ಚಿಂತೆ ಕೇಂದ್ರ ಸರ್ಕಾರಕ್ಕೆ ಕಾಡುತ್ತಿದೆ.  ಆದರೇ, ಕೇರಳ ಸರ್ಕಾರ ಮೇ 3ರ ನಂತರ ಏನು ಮಾಡಬೇಕು ಎಂಬ ಯೋಜನೆಯನ್ನು ಈಗಾಗಲೇ ರೂಪಿಸಿಕೊಂಡಿದೆ. ಅದೇ, ‘ರಿವರ್ಸ್ ಕ್ವಾರಂಟೈನ್’.



ಹೌದು, ‘ರಿವರ್ಸ್ ಕ್ವಾರಂಟೈನ್’ ಕೇರಳ ಸರ್ಕಾರದ ಮೇ 3ರ ನಂತರದ ಹೊಸ ಸೂತ್ರ. ಸೋಂಕು ನಿಯಂತ್ರಣಕ್ಕೆ ಬರಬೇಕು, ನಾಗರಿಕರ ಬದುಕು ಕೂಡ ಸಹಜ ಸ್ಥಿತಿಗೆ ಬರಬೇಕು ಎಂಬೆಲ್ಲಾ ಯೋಜನೆಗಳ ಬಗ್ಗೆ ಸಮಯೋಚಿತವಾಗಿ ಪ್ರಿ ಪ್ಲಾನಿಂಗ್ ಮಾಡುತ್ತಿದೆ ಕೇರಳ ರಾಜ್ಯ ಸರ್ಕಾರ. ಕೊರೋನಾ ಸೋಂಕನ್ನು ಬಡಿದೋಡಿಸಲು ಕೇರಳ ಚಿಂತನೆ ಮಾಡಿ ರಿವರ್ಸ್ ಕ್ವಾರಂಟೈನ್ ಮಾಡುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿದೆ ಕೇರಳ. 28 ದಿನಗಳ ಕ್ವಾರಂಟೈನ್ ಮಾಡಿಯಾದ ಮೇಲೂ ಮತ್ತೆ ರಿವರ್ಸ್ ಕ್ವಾರಂಟೈನ್ ಮಾಡುತ್ತದಾ..? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೇ ಈ ಕ್ವಾರಂಟೈನ್ ಸಂಪೂರ್ಣ ಭಿನ್ನ. ಸೋಂಕು ತಗಲಿದವರನ್ನು ಅಥವಾ ಅವರನ್ನು ಸಂಪರ್ಕಿಸಿದವರನ್ನು ಪ್ರತ್ಯೇಕಿಸಿ ಇಡುವುದು ಕ್ವಾರಂಟೈನ್ ಆದರೇ, ಸೋಂಕು ಇಲ್ಲದೇ ಇರುವವರನ್ನೂ ಪ್ರತ್ಯೇಕಿಸಿ ಇರಿಸುವುದೇ ಕೇರಳದ ಈ ರಿವರ್ಸ್ ಕ್ವಾರಂಟೈನ್‌ನ ಉದ್ದೇಶ. ಇಡೀ ದೇಶಕ್ಕೆ ದೇಶವೇ ಹೋಮ್ ಕ್ವಾರಂಟೈನ್‌ನಲ್ಲಿರುವಾಗ ಇದೇನು ವಿಶೇಷ ಅಲ್ಲ ಅಂತನ್ನಿಸಬಹುದು ನಿಮಗೆ. ಆದರೇ, ಕೇರಳ ಸರ್ಕಾರದ ಪ್ಲಾನಿಂಗ್ ಭಿನ್ನವಾಗಿದೆ.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಗುರುತಿಸಿ ಅವರನ್ನು ಯಾವುದೇ ರೀತಿಯಲ್ಲಿ ಸೋಂಕಿಗೆ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕಿಸಿ ಇರಿಸುವುದೇ ಕೇರಳ ಸರ್ಕಾರದ ರಿವರ್ಸ್ ಕ್ವಾರಂಟೈನ್‌ನ ಯೋಜನೆ. ಕೇರಳದ ಒಟ್ಟು 3.47 ಕೋಟಿ ಜನಸಂಖ್ಯೆಯ ಪೈಕಿಯಲ್ಲಿ ಅಂದಾಜು 12 ರಿಂದ 13 ಶೇಕಡಾ ಜನರು ಅನಾರೋಗ್ಯದಿಂದಿದ್ದಾರೆ ಕೇರಳ ಸರ್ಕಾರ ಹೇಳುತ್ತದೆ. ಸ್ಥಳೀಯ ಮಟ್ಟದ ಆಡಳಿತಗಳ ಸಹಾಯದಿಂದ ಅಂತವರನ್ನೆಲ್ಲಾ ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿರಿಸುವ ಕೇರಳ ಸರ್ಕಾರದ ಯೋಚನೆಯಿದು. ಟ್ರ್ಯಾಕ್, ಟ್ರೇಸ್, ಟ್ರೀಟ್‌ಮೆಂಟ್ ಸೂತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದಕ್ಕೆ ಕೇರಳ ಸರ್ಕಾರ ವೈದ್ಯಕೀಯ ಇಲಾಖೆಗಳ ಸಹಕಾರದೊಂದಿಗೆ ಒಂದು ಹೆಜ್ಜೆ ಮುಂದಿಟ್ಟಿದೆ ಎಂದರೇ ತಪ್ಪಲ್ಲ. ಮಾತ್ರವಲ್ಲದೇ, ಅವರಿಗೆ ಬೇಕಾದ ವೈದಕೀಯ ಸೌಲಭ್ಯಗಳನ್ನು ಒಳಗೊಂಡು ಅಗತ್ಯ ಸೌಲಭ್ಯಗಳನ್ನೂ ನೀಡುವುದಕ್ಕೆ ಕೇರಳ ಸರ್ಕಾರ ಮುಂದಾಗಿದೆ ಎನ್ನುವುದು ಸ್ತುತ್ಯಾರ್ಹ.

ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿವಾರಿಸಲು ಹಾಗೂ ಸಾಮಾಜಿಕ ಜನ ಜೀವನವನ್ನು ಸಹಜ ಸ್ಥಿತಿಗೆ ಬರುವಂತೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವನ್ನು ಒಳಗೊಂಡು ಎಲ್ಲಾ ರಾಜ್ಯ ಸರ್ಕಾರಗಳು ಮಾಡುತ್ತಿವೆ ಎನ್ನುವುದು ಖಂಡಿತ ಒಪ್ಪಿಕೊಳ್ಳಬೇಕು. ಇನ್ನು, ಕೇಲವು ಪ್ರದೇಶಗಳಲ್ಲಿ ಲಾಕ್ಡೌನ್ ಕೊಂಚ ಸಡಿಲಗೊಳಿಸುವುದನ್ನೂ ಕೆಲವು ರಾಜ್ಯ ಸರ್ಕಾರಗಳು ಮಾಡಿದೆ/ಮಾಡುತ್ತಿದೆ. ಕೆಲವು ಕಡೆಗಳಲ್ಲಿ ವಿಫಲವೂ ಆಗಿದೆ. ಆದರೇ, ಕೇರಳ ಸರ್ಕಾರ ಮಾತ್ರ ಮುಂದಾಲೋಚನೆಯಿಂದ ಆರ್ಥಿಕ ಸ್ಥಿತಿ ಸರಿದೂಗಿಸುವ ಯೋಚನೆಯೊಂದಿಗೆ ಇಂತಹದ್ದೊಂದು ನೂತನ ಸೋಂಕು ನಿಯಂತ್ರಣಕ್ಕೆ ತರುವ ಮಾರ್ಗದ ಪ್ರಯತ್ನಕ್ಕೆ ಅಲ್ಲಿನ ಸ್ಥಳಿಯ ಆಡಳಿತದ ಸಹಕಾರದಿಂದ ಮುಂದಾಗಿದೆ ಎನ್ನುವುದು ನಿಜಕ್ಕೂ ಶ್ಲಾಘನೀಯ.



ಈ ನಿರ್ಧಾರ ಹೇಳುವಷ್ಟು ಸುಲಭದ್ದಾ..? ಎಂಬ ಪ್ರಶ್ನೆಗೆ... ಸ್ಥಳಿಯಾಡಳಿತ, ವೈದ್ಯಕೀಯ ಇಲಾಖೆ ಸರ್ಕಾರದ ಜೊತೆಗಿದೆ, ಜನರೂ ಕೂಡ ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್.

ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನತೆ ಇದೆ ಎಂಬ ಕಾರಣದಿಂದ ಕೇರಳವನ್ನು ಬದಿಗೆ ದೂಡುವ ಧೋರಣೆಯೊಂದು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿದೆ. ಅವೆಲ್ಲವನ್ನೂ ದೂರ ಮಾಡಿ, ಸೋಂಕು ನಿವಾರಿಸುವುದಕ್ಕೆ ದೇಶದೆಲ್ಲೆಡೆ ಕೇರಳ ಕೈಗೊಂಡ ಮತ್ತು ಕೈಗೊಳ್ಳುತ್ತಿರುವ ಕ್ರಮಗಳನ್ನು ಯಾಕೆ ಪಾಲನೆಗೆ ತರಬಾರದು..? ಇಂತಹ ಸ್ಥಿತಿಯಲ್ಲಿಯೂ ರಾಜಕೀಯ ಅಡ್ಡಿಯಾಗುತ್ತದೆಯೇ..? ಗೊತ್ತಿಲ್ಲ.

ಕೇರಳ ಸರ್ಕಾರ ಸೋಂಕು ನಿವಾರಣೆಗೆ ಈ ಹಿಂದೆ ಕೈಗೊಂಡ ಕ್ರಮಗಳಿಂದ ಅಲ್ಲಿನ ಕೊರೋನಾ ಹೊಸ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿ ಜಗತ್ತಿಗೆ ತೋರಿಸಿದೆ. ಈ ಯೋಜನೆಯಲ್ಲಿಯೂ ಕೇರಳ ಯಶಸ್ವಿಯಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ...ಕೇರಳ, ಸೋಂಕು ನಿವಾರಣೆಗೆ ಕೈಗೊಂಡ ಯೋಜನೆಗಳು ಮಾದರಿಯಾಗಿ ಕಾಣಿಸುತ್ತಿದೆ ಎನ್ನುವುದು ಅಕ್ಷರಶಃ ನಿಜ. 


-------------------------------------
-ಶ್ರೀರಾಜ್ ವಕ್ವಾಡಿ




Friday, April 24, 2020

ಭ್ರಮೆ ಹುಟ್ಟಿಸುವುದು ಮಾಧ್ಯಮ, ರಾಜಕೀಯದ ಕೆಲಸವಲ್ಲ..!



ವಿಕಿಪೀಡಿಯಾದ ಪ್ರಕಾರ, ಭ್ರಮೆ ಅಂದರೇ, ಕನಸು. ಇದರಲ್ಲಿ ಎಚ್ಚರವಿರುವುದಿಲ್ಲ. ಇಲ್ಯೂಶನ್(ಭ್ರಮೆ) ಅಂದರೇ, ವಿಕೃತ ಅಥವಾ ತಪ್ಪಾಗಿ ಅರ್ಥೈಸಿಕೊಂಡ ಅನುಭವ. ಈ ಇಮೆಜರಿ ಎನ್ನುವುದು ಸ್ವಂತ ನಿಯಂತ್ರಣದಲ್ಲಿರುವುದಿಲ್ಲ. ಭ್ರಮೆಗಳು ಭ್ರಾಂತಿಯ (ಡೆಲ್ಯೂಶನಲ್) ಅನುಭವಕ್ಕಿಂತಲೂ ಭಿನ್ನವಾಗಿರುತ್ತದೆ. ಮೇಲ್ಪದರದ ನೋಟಕ್ಕೆ ಎಲ್ಲವೂ ನಿಜ ಎನಿಸಿಕೊಳ್ಳುವುದರಿಂದ ಒಳನೋಟದ ಕಡೆಗೆ ಸುಳಿವುಗಳ ಜ್ಞಾನವೇ ಇರುವುದಿಲ್ಲವಂತೆ.

ಇಂತಹದ್ದೊಂದು ಭ್ರಮೆ, ಕೆಲವು ಮಾಧ್ಯಮನ್ನೊಳಗೊಂಡು ಕೆಲವರಿಗೆ ಗೊತ್ತಿಲ್ಲದೆ ಹುಟ್ಟಿದೆ ಎಂದು ಕಾಣುತ್ತಿದೆ. ವಾಸ್ತವಾಂಶಗಳನ್ನು ಅರಿಯದೇ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳು ಒಂದಾದರೇ, ಅದನ್ನೇ ವೇದವಾಕ್ಯ ಎನ್ನುವ ವರ್ಗ ಮತ್ತೊಂದೆಡೆ. ಭ್ರಮೆ ಹುಟ್ಟಿಸುವವರು ಒಂದೆಡೆಯಾದರೇ, ಭ್ರಮಗೆ ಒಳಗಾಗುವವರು ಮತ್ತೊಂದೆಡೆ. ಕೆಲವು ಮಾಧ್ಯಮಗಳು ಈಗೀಗ ರಾಜಕೀಯ, ಧರ್ಮದ ಪ್ರಚಾರ ಸಂಸ್ಥೆಯಾಗಿ ಮಾರ್ಪಾಡಾಗುತ್ತಿದೆ ಎನ್ನುವ ಆತಂಕ ಕಾಡುತ್ತಿದೆ.

ಧರ್ಮ ರಾಜಕೀಯ ವ್ಯವಸ್ಥೆ, ಭ್ರಮಾ ಲೋಕ ಸೃಷ್ಟಿಸುವ ಕೆಲವು ಮಾಧ್ಯಮಗಳು ಸಾಮಾಜಿಕ ಸ್ವಾಸ್ಥ್ಯ ನಾಜೂಕಾಗಿ ಹಾಳುಮಾಡುವ ಷಡ್ಯಂತ್ರ ಹೂಡುತ್ತಿವೆ ಅನ್ನಿಸುತ್ತಿದೆ. ಜನರೂ ಕೂಡ ಎಚ್ಚರ ತಪ್ಪಿ ಮರುಳಾಗುತ್ತಿದ್ದಾರೆ. ಭ್ರಷ್ಟಾಚಾರ, ಖಾಸಗೀಕರಣ, ವ್ಯಾಪಾರೀಕರಣ ವಿರಾಜಮಾನವಾಗಿ ಪಟ್ಟ ಅಲಂಕರಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಕಟು ವಾಸ್ತವವನ್ನು ಮರೆಮಾಚುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ‘ಪ್ರಜಾಸತ್ತೆ’ ಇಲ್ಲದಾಗಿ ಹೋಗಿದೆ. ರಾಜಕೀಯದೊಂದಿಗೆ ಕೆಲವು ಮಾಧ್ಯಮಗಳೇ ಇದಕ್ಕೆ ಮೂಲ ಕಾರಣ.

ಸಮಾಜವನ್ನು ಕಾಯುವ ನಾಯಿ (ವಾಚಿಂಗ್ ಡಾಗ್ ಆಫ್ ಸೊಸೈಟಿ) ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ, ಇಂದು ರಾಜಕೀಯ ನಾಯಕರ ತೋಳಲ್ಲಿ ಆಡುವ ನಾಯಿಯಾಗಿ ಬದಲಾಗಿದೆ ಎನ್ನುವುದು ಸತ್ಯ. ಮೇಲ್ನೋಟಕ್ಕೆ ಏನು ಕಾಣುತ್ತದೆಯೋ ಅದನ್ನೇ ಸತ್ಯ ಎಂದು ಸಮಾಜದ ಮೇಲೆ ಹೇರುವ ಕೆಲಸವನ್ನು ಕೆಲವು ಮಾಧ್ಯಮಗಳು ಮಾಡುತ್ತಿವೆ. ಅಧ್ಯಯನಶೀಲತೆಯೇ ಇಲ್ಲ. ಜ್ವಲಂತ ಸಮಸ್ಯೆಗಳನ್ನು ಕೇಳುವ ಛಾತಿಯೇ ಕೆಲವು ಮಾಧ್ಯಮಗಳಿಗೆ ಮರೆತು ಹೋದಂತೆ ಕಾಣುತ್ತಿದೆ. ಮತ್ತು, ಆ  ರೀತಿಯಲ್ಲಿ ಸಮಸ್ಯೆಗಳನ್ನು ನೇರಾನೇರವಾಗಿ ತೆಗೆದು ಹಾಕುತ್ತಿರುವುದನ್ನೂ ಕಾಣುತ್ತಿದ್ದೇವೆ ಎನ್ನುವುದು ವ್ಯಾಪಾರೀಕರಣಗೊಂಡಿದ್ದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಮಾಧ್ಯಮ ಆರಂಭವಾದದ್ದೇ ಆಳುವವರಿಂದ, ಆಳುವವರ ಪರವಾಗಿಯೇ ಈ ಹಿಂದೆಯೂ ಮಾಧ್ಯಮ ಇತ್ತು. ಆದರೇ, ಈಗ ಹೊಗಳುವ, ಹೊಗಳಿ ಏರಿಸುವ ಧೋರಣೆ ಆರಂಭವಾಗಿದೆ. ಆಡಳಿತ ಪಕ್ಷದ ವಿರೋಧ ಪಕ್ಷದಂತಿದ್ದು, ಆಡಳಿತ ಸರ್ಕಾರದ ಯೋಜನೆಗಳ ಲೋಪದೋಷಗಳನ್ನು ಪ್ರತಿಬಿಂಬಿಸುವುದರ ಮೂಲಕ ಅದನ್ನು ಸರಿಪಡಿಸುವುದು ಮಾಧ್ಯಮದ ನಿಜವಾದ ಜವಾಬ್ದಾರಿ. ನಿಜವಾದ ದೇಶಪ್ರೇಮಿ ಪತ್ರಕರ್ತನಾದವನು ಸರ್ಕಾರದ ಯೋಜನೆಗಳಲ್ಲಿನ ತಪ್ಪುಗಳನ್ನು ಪ್ರಶ್ನಿಸುವಲ್ಲಿ ಮೊದಲು ಮುಂದಾಗುತ್ತಾನೆ. ಅದಕ್ಕೆ ಅಲ್ಲವೇ ಸಂವಿಧಾನದ ನಾಲ್ಕನೇ ಅಂಗ ಎಂದು ಮಾಧ್ಯಮವನ್ನು ಕರೆದಿದ್ದು..? ಸರ್ಕಾರ ಎಲ್ಲಿ, ಯಾವಾಗ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಅಂತಾದರೇ, ಅದು ಮಾಧ್ಯಮಗಳ ಇಂಪ್ಯಾಕ್ಟ್ ಅಥವಾ ಪ್ರಭಾವ ಎಂಬರ್ಥ. ಮತ್ತೆ ಆ ಬಗ್ಗೆ ಮಾಧ್ಯಮವಾಗಲಿ, ಪತ್ರಕರ್ತನಾಗಲಿ ಬಣ್ಣಿಸಿ ಹೇಳುವ ಅಗತ್ಯವಿಲ್ಲ. ಸಮಸ್ಯೆಯಾಗಿ ಕೊಳೆಯುತ್ತಿರುವ ವಿಷಯಗಳೇ ರಾಶಿ ಬಿದ್ದಿರುವಾಗ ಆದದ್ದರ ಬಗ್ಗೆಯೇ ಮಾಧ್ಯಮ ಅಥವಾ ಪತ್ರಕರ್ತ ಹೊಗಳಿ ಹೇಳಲು ಮುಂದಾಗುತ್ತಾನೆ ಅಂತಾದರೇ ಅದರಷ್ಟು ಮೂರ್ಖತನ ಮತ್ತೊಂದಿಲ್ಲ. ಮಾಧ್ಯಮ ಅಥವಾ ಪತ್ರಕರ್ತ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು. ಆ ಮೂಲಕ ಸಮಸ್ಯೆಗಳನ್ನು ಸರಿಪಡಿಸುವಂತದ್ದಾಗಬೇಕು. ಆಗ ಅದು ನಿಜವಾದ ರಾಷ್ಟ್ರೀಯವಾದಿ ಪತ್ರಿಕೋದ್ಯಮ ಎಂದು ಕರೆಸಿಕೊಳ್ಳುತ್ತದೆ.


ಇನ್ನು, ಧರ್ಮ ರಾಜಕಾರಣ. ಧರ್ಮ ರಾಜಕೀಯಕ್ಕೆ ಜೋತು ಬಿದ್ದ ಮೇಲೆ ರಾಜಕಾರಣದಲ್ಲಿ ವಾಸ್ತವಾಂಶವನ್ನು ತರ್ಕಿಸುವ ಮತ್ತು ವಿವೇಕಿಸುವುದೇ ಕಡಿಮೆಯಾಗಿದೆ. ಧರ್ಮ ಮನುಜನ ಒಳಿತಿಗಾಗಿ ಒಂದು ಚೌಕಟ್ಟು ಕಟ್ಟಿಕೊಡುತ್ತದೆ ಹೊರತು ಧರ್ಮವೇ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ವಿಷಯವಾಗಬಾರದು. ಪೂರ್ವಾಗ್ರಹ ಪೀಡಿತರಾಗಿ ಉದ್ವೇಗದಲ್ಲಿ ಸಮಾಜಕ್ಕೆ ಸಲ್ಲಿಸುವ ಸಂದೇಶಗಳನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಮಾಜದ ಹಿತ ಚಿಂತನೆಗೆ ಪೂರ್ವಾಗ್ರಹ ಪೀಡಿತ ಚಿಂತನೆ ಮಾರಕವೇ ಹೊರತು ಪೂರಕವಲ್ಲ. ಒಟ್ಟಿನಲ್ಲಿ ರಾಜಕೀಯಕ್ಕೆ ಧರ್ಮವನ್ನು ತೂಗುಹಾಕುವ ಧೋರಣೆಯೇ ಸರಿಯಲ್ಲ.

ಸಮಾಜದ ಹಿತ ಚಿಂತನಗೆ ಮೊದಲು ಕಾರ್ಯನಿರ್ವಹಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಕ್ಷೇತ್ರಗಳೇ ಭ್ರಮೆ ಹುಟ್ಟಿಸುವ ಕೆಲಸ ಮಾಡಿದರೇ, ಅಪಾಯ ಕಟ್ಟಿಟ್ಟ ಬುತ್ತಿ.
ಮಾಧ್ಯಮ, ರಾಜಕೀಯ ಸೇರಿ ಸಾರ್ವಜನಿಕರು ಧರ್ಮ, ಜಾತಿ, ಸಿದ್ಧಾಂತಗಳ ಚಿಂತನೆಯ ಭ್ರಮಾಲೋಕದಿಂದ ತುರ್ತಾಗಿ ಹೊರಬರಬೇಕಾಗಿದೆ. ಸಮಾಜದ ಮಹತ್ತರ ಶಕ್ತಿಯಾಗಿ, ಜವಾಬ್ದಾರಿಯಾಗಿ ಮಾಧ್ಯಮ ಕಾರ್ಯನಿರ್ವಹಿಸಬೇಕಿದೆ. ಸಮಾಜದ ಪರವಾಗಿ ರಾಜಕೀಯ ಇರಬೇಕಾಗಿದೆ. ಅದನ್ನು ಹೊರತಾಗಿ ಭ್ರಮೆಯಲ್ಲಿ ತೇಲಿಸುವ ಕೇಲಸ ಮಾಡಿದರೇ, ಸಮಾಜ ದೊಡ್ಡ ಸಂಕಷ್ಟವನ್ನನುಭವಿಸುವುರಲ್ಲಿ ಸಂಶಯವಿಲ್ಲ.
----------------------------------------
-ಶ್ರೀರಾಜ್ ವಕ್ವಾಡಿ  

Thursday, April 23, 2020

ಅಭಿವ್ಯಕ್ತಿ “ಸ್ವಾತಂತ್ರ್ಯ” ಸ್ವೇಚ್ಛಾಚಾರವಲ್ಲ..!



ಸಾಮಾಜಿಕತೆ ಅಂದಮೇಲೆ ಅಲ್ಲಿ ರಾಜಕೀಯ, ಜಾತಿ, ಧರ್ಮ ಎಲ್ಲವೂ ಇರುತ್ತದೆ. ಆಯಾಯ ಕ್ಷೇತ್ರಗಳಲ್ಲಿ, ಆಯಾಯ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುವ ಆಶಯಗಳು ಒಂದು ರೀತಿಯಲ್ಲಿ ಸಹಜ, ಆದರೇ ಕೆಲವೊಮ್ಮೆ ನಾವು ನಮ್ಮದೇ ಆದ ವ್ಯಾಪ್ತಿಯಲ್ಲಿ ನಿರ್ಮಿಸಿಕೊಳ್ಳಬೇಕಾದ ಅಗತ್ಯವಿದೆ ಮತ್ತು ಸಾಮಾಜಿಕವಾಗಿ ಎಲ್ಲರ ಭಾವನೆಗಳಿಗೆ, ಎಲ್ಲಾ ಭಾವನೆಗಳಿಗೂ ಬೆಲೆ ಇದೆ ಎನ್ನುವುದು ಸತ್ಯ.

ಭಾರತೀಯ ಸಂವಿಧಾನದ 19(1)ಎ ಅನುಸೂಚಿಯಲ್ಲಿ ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಲಾಗಿದೆ ಮಾತ್ರವಲ್ಲ ಅದೇ ಪುಟದಲ್ಲಿ 19(2) ಅನುಸೂಚಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು, ಮಿತಿಗಳನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ಕೊಟ್ಟಿದೆ ಎಂದ ಮಾತ್ರಕ್ಕೆ ಇನ್ನೊಬ್ಬರ ಖಾಸಗಿತನವನ್ನು ಮನಬಂದಂತೆ ಪ್ರಶ್ನಿಸುವುದಾಗಲಿ, ಪ್ರತಿಭಟನೆ ಮಾಡುವುದಾಗಲಿ ಅಥವಾ ತಮ್ಮ ಮೂಗಿನ ನೇರಕ್ಕೆ ಮಾತನಾಡುವುದಾಗಲಿ ಅಥವಾ ವಾದಿಸುವುದಕ್ಕೆ ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅದರದ್ದೇ ಆದಂತಹ ರೀತಿ-ನೀತಿಗಳಿವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಅಷ್ಟಕ್ಕೂ ಅಭಿವ್ಯಕ್ತಿ ಸ್ವಾತಂತ್ರರ ಭಾರತ ದೇಶ ನಮಗೆ ಕೊಟ್ಟಿರುವ ಹಕ್ಕುಗಳಲ್ಲಿ ಒಂದು ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು.

ವಿಜ್ಞಾನ ಮುಂದುವರಿದ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಅಭಿವ್ಯಕ್ತಿ ಹೆಚ್ಚಾಗಿ ಬಳಕೆಯಲ್ಲಿವೆ ಎನ್ನುವುದು ಸಾಮಾನ್ಯ ವಿಚಾರ. ದಶಕಗಳ ಹಿಂದಿನ ದಿನಗಳಲ್ಲಿ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಮೇಲ್ವರ್ಗದ ಅಥವಾ ಬುದ್ಧಿ ಜೀವಿಗಳ ಪಾಂಡಿತ್ಯವೇ ಕಾಣಸಿಗುತ್ತಿದ್ದರಿಂದ ಸಾಮಾನ್ಯರಿಗೆ ವೈಯಕ್ತಿಕ ಪ್ರಚಾರ ಪಡೆದುಕೊಳ್ಳುವ ಭಾಗ್ಯ ಟಿವಿ ಮಾಧ್ಯಮಗಳಾಗಲಿ, ಪತ್ರಿಕಾ ಮಾಧ್ಯಮಗಳಾಗಲಿ ನೀಡಿರಲಿಲ್ಲ. ಆದರೇ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ಜೊತೆಗೆ ಮಾಧ್ಯಮಗಳು ಕೂಡ ಸಾಮಾನ್ಯರಿಗೂ ಅಭಿವ್ಯಕ್ತಿ ವೇದಿಕೆ ಕಲ್ಪಿಸಿಕೊಡುತ್ತಿವೆ. ಹಾಗೆಂದ ಮಾತ್ರಕ್ಕೆ ಬೇಕಾಬಿಟ್ಟಿಯಾಗಿ ಜಾಲತಾಣಗಳನ್ನು ಬಳಸಿಕೊಳ್ಳಬಹುದು ಎನ್ನುವ ಅರ್ಥವಲ್ಲ. ಸಾಮಾಜಿಕ ಜಾಲತಾಣಗಳಲ್ಲಾಗಲಿ, ಮಾಧ್ಯಮಗಳಲ್ಲಾಗಲಿ ನಮ್ಮ ಅಭಿವ್ಯಕ್ತಿಗಳು ಅಧಿಕೃತವಾಗಿ ದಾಖಲಾಗುವುದರಿಂದ ಅಭಿವ್ಯಕ್ತಿ ಪಡಿಸಿಕೊಳ್ಳುವ ಮುನ್ನ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದು ಪಾಲಲಿಸದವರ ಗತಿ ಏನಾಗಿದೆ ಎನ್ನುವುದು ಉದಾಹರಣೆ ನಮ್ಮು ಮುಂದಿದೆ. ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಂತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಶೀರ್ಷಿಕೆಯಡಿಯಲ್ಲಿ ಋಣಾತ್ಮಕ ಸುದ್ದಿಗಳ ಪ್ರಸಾರ ಮಾಡುವುದಾಗಲಿ, ತೇಜೋವಧೆ ಮಾಡುವುದಾಗಲಿ, ಮಾನಹಾನಿ ಮಾಡುವುದಾಗಲಿ, ರಾಜಕೀಯ, ಧರ್ಮ, ಜಾತಿಗಳ ಕುರಿತಂತೆ ಅವಹೇಳನಕಾರಿಯಾದ ಅಥವಾ ಸುಳ್ಳು ಸುದ್ದಿಗಳನ್ನು ಹರಡಿಸುವುದನ್ನು ಮಾಡಬಾರದು ಎನ್ನುವುದನ್ನು ಮರೆಯುವಂತಿಲ್ಲ.

 ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಹೊರಬರುವ ಭಿನ್ನ ಭಿನ್ನ ಅನಿಸಿಕೆ, ಅಭಿಪ್ರಾಯಗಳು ಒಂದು ವಿಷಯದ ಕುರಿತು ಹೊಸ ತರಹದ ದೃಷ್ಟಿಕೋನವನ್ನು ನೀಡುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕೂ ಹೌದು, ಜವಾಬ್ದಾರಿಯೂ ಹೌದು. ಆದ್ದರಿಂದ ಆ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವಾಗ ಪ್ರಜ್ಞೆಯೂ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಅದು ಬೇಕಾಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಮಾರ್ಗವಲ್ಲ ಎನ್ನುವುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಮುಖ್ಯವಾಗಿ ಪತ್ರಕರ್ತರು.

ಬಹಳ ಪ್ರಮುಖವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಆದಂತಹ ಅನುಕೂಲವನ್ನು ನಾವು ಗಮನಿಸುವುದಾದರೆ.. ಸಾಂಸ್ಕೃತಿಕ ಹೆಚ್ಚುಗಾರಿಕೆಯನ್ನು ಕಲೆ, ಸಂಪ್ರದಾಯ, ಸಾಹಿತ್ಯಗಳ ಶ್ರೀಮಂತಿಕೆಯನ್ನು ಹೆಚ್ಚಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜಕ್ಕೆ ಕೊಟ್ಟಂತಹ ಅತ್ಯಮೂಲ್ಯ ಕೊಡುಗೆ ಎನ್ನುವುದು ವೈಯಕ್ತಿಕ ಅಭಿಪ್ರಾಯ. ಕಲೆ, ಸಾಹಿತ್ಯ, ಸಂಪ್ರದಾಯಗಳು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಸಂಪೂರ್ಣವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಇಂತಹ ಅಭಿವ್ಯಕ್ತಿಗಳು ಸಾಮಾಜಿಕ ಬದ್ಧತೆಯನ್ನು ಗಟ್ಟಿಗೊಳಿಸುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಗಳು ಈ ರೀತಿಯಲ್ಲಿ ಬಹಳ ಪರಿಣಾಮಕಾರಿಯಾಗಿ ಸಮಾಜಕ್ಕೆ ಪ್ರಭಾವ  ಬೀರಬೇಕಾಗಿದೆ. ಮತ್ತು ಅವನ್ನು ಬಳಸುವುದರಲ್ಲಿ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಪೂರಕವಾಗಿ ಕೆಲಸ ಮಾಡುತ್ತದೆ ಎನ್ನುವುದು ಸತ್ಯ.




ಇಲ್ಲಿ ಯಾರೂ ಸರ್ವಸ್ವತಂತ್ರರಲ್ಲ. ಪತ್ರಿಕೋದ್ಯಮವೂ ಸರ್ವಸ್ವತಂತ್ರವಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ವೈಯಕ್ತಿಕ ಪ್ರಚಾರದ ಗೀಳಿಗೆ ಬಳಸಿಕೊಂಡು ಪತ್ರಿಕೋದ್ಯಮದ ಮೂಲ ಆಶಯಕ್ಕೆ ಹೇಸಿಗೆ ಅಂಟಿಸುವವ ಪತ್ರಕರ್ತರೂ ನಮ್ಮ ನಿಮ್ಮ ನಡುವೆ ಇದ್ದಾರೆ ಎನ್ನುವುದೇ ದುರಂತ. ಆಯಾಯ ಕಾಲಘಟ್ಟಕ್ಕೆ ಅಂತವರಿಗೆ ಜನರಿಂದ, ಕಾನೂನಿಂದ ಸರಿಯಾದ ಪ್ರತಿ ಉತ್ತರವೂ ದೊರಕಿದೆ ಎನ್ನುವುದು ಸಮಾಧಾನಕರ ವಿಷಯ.

ಜನರ ಮುಖವಾಣಿಯಾಗಿ ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಪತ್ರಿಕೋದ್ಯಮ ಅನೇಕ ವ್ಯಾಖ್ಯಾನ ಹಾಗೂ ವಿಶ್ಲೇಷಣೆ ನೀಡಿಕೊಂಡು ಬಂದಿದೆ. ‘ಪತ್ರಿಕೋದ್ಯಮವೆನ್ನುವುದು ಆಳದಲ್ಲಿ ಗಂಭೀರವಾದ ವ್ಯವಹಾರ. ಅನುಕೂಲಕರವಲ್ಲದ ಪ್ರಶ್ನೆಗಳೇ ಪತ್ರಿಕೋದ್ಯಮದ ಬುನಾದಿ. ಅಧಿಕಾರಸ್ಥರ ಜೊತೆ ಅನುಕೂಲಕರ ಸಾಂಗತ್ಯ. ಜಾಣತನದ ಬರವಣಿಗೆ ಅಥವಾ ಮಾತುಗಾರಿಕೆ ಮಾತ್ರವೇ ಪತ್ರಿಕೋದ್ಯಮವಲ್ಲ’. ವಿಶ್ವಾಸಾರ್ಹತೆ, ನೈತಿಕತೆಗಳು ಪತ್ರಿಕೋದ್ಯಮದ ಜೀವಾಳ. ಇದಕ್ಕೆ ಅಗತ್ಯವಾದದ್ದು ಮಾಧ್ಯಮ ಸ್ವಾತಂತ್ರ್ಯ. ಪತ್ರಕರ್ತನ ಸರ್ವಸ್ವತಂತ್ರ ಧೋರಣೆಯಲ್ಲ.

ಸರ್ಕಾರದ ಆಡಳಿತ ಮತ್ತು ಸಾರ್ವಜನಿಕ ನಡವಳಿಗೆಳ ಸರಿ ತಪ್ಪು ಒಪ್ಪುಗಳ ಕ್ರಿಯೆಗಳಿಗೆ , ಪಾರದರ್ಶಕತೆಯಿಂದ ಉತ್ತರದಾಯಿತ್ವ ಒದಗುತ್ತದೆ. ಈ ಅರಿವು ಮೂಡಿಸುವಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಬಹುಮುಖ್ಯ. ಸೋವಿಯತ್ ರಷ್ಯಾದ ಲೇಖಕ ಸೋಲ್ಜೇನಿಟ್ಸನ್, ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಮತ್ತು ಪರಾಮರ್ಶಿಸುವ ಪತ್ರಕರ್ತನನ್ನು ಶ್ರೇಷ್ಠ ಎಂದು ಹೇಳುತ್ತಾನೆ. ಮಾತ್ರವಲ್ಲದೇ, ಆತನನ್ನು ‘ಎರಡನೇ ಸರ್ಕಾರ’  ಎಂದು ಹೇಳುತ್ತಾನೆ. ಪತ್ರಕರ್ತನೊಬ್ಬನಿಗೆ ಇಡೀ ಸಮಾಜವೇ ಜವಾಬ್ದಾರಿ. ಅವನ ಎಲ್ಲಾ ಕಾರ್ಯಗಳು ಪ್ರಜೆಯ ಪರವಾಗಿಯೇ ಇರಬೇಕು. ಅವನು ಜನಪ್ರತಿನಿಧಿಯಾಗಿರಬೇಕೇ ಹೊರತು ಆಡಳಿತ ಸರ್ಕಾರದ ಪ್ರತಿನಿಧಿಯಾಗಿರಬಾರದು. ಆತ ಪ್ರತಿಪಾಧಿಸುವ ವಿಷಯಗಳಿಂದ ಸರ್ಕಾರ ತನ್ನ ತಪ್ಪುಗಳನ್ನು ಸರಿಮಾಡಿಸಿಕೊಳ್ಳಬೇಕು. ಅಂತಹ ತಾಕತ್ತು, ಗಟ್ಟಿತನ ಪತ್ರಕರ್ತನಲ್ಲಿರಬೇಕು. ಸರ್ಕಾರದ ಆಡಳಿವನ್ನು ಹೊಗಳುವುದೇ ಪತ್ರಕರ್ತನ ಕೆಲಸವಲ್ಲ. ಆಡಳಿತ ಸರ್ಕಾರದ ನ್ಯೂನ್ಯತೆಗಳನ್ನು ಸರಿ ಮಾಡುವುದೇ ಒಬ್ಬ ನಿಜವಾದ ಪತ್ರಕರ್ತನ ಜವಾಬ್ದಾರಿ ಎನ್ನುತ್ತಾನೆ ಸೋಲ್ಜೇನಿಟ್ಸನ್.

ಇಂತಹದ್ದೊಂದು ಜವಾಬ್ದಾರಿ ಈಗ ಪತ್ರಕರ್ತನಿಗಿದೆಯೇ..? ಎಂಬ ಪ್ರಶ್ನೆ ಕೇಳಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ವೈಯಕ್ತಿಕ ಸಿದ್ಧಾಂತಗಳನ್ನು, ನಿಲುವುಗಳನ್ನು ಜನರ ತಲೆ ಮೇಲೆ ಬಹಳ ನಾಜೂಕಾಗಿ ಹೇರುವುದೇ ಪತ್ರಿಕೋದ್ಯಮ ಎಂದು ಬದಲಾಗಿ ಬಿಟ್ಟಿದೆ ಎನ್ನುವುದು ವಿಷಾದನೀಯ. ಅದರ ಬಗ್ಗೆ ವಾಸ್ತವಾಂಶ ಅರಿಯದೇ ಒಪ್ಪಿಕೊಳ್ಳುವ ದೊಡ್ಡ ವರ್ಗವೂ ಇದೆ ಎನ್ನುವುದು ಬೇಸರದ ಸಂಗತಿ.

ಮಾಧ್ಯಮಗಳು ಆಡಳಿತ ಸಕಾರಕ್ಕೆ ಮಾರ್ಗದರ್ಶಿಯಾಗಿ ಕೆಲಸಮಾಡಬೇಕು. ಹೊಗಳು ಭಟರಾಗಿ ಕೆಲಸ ಮಾಡಬಾರದು. ಒಂದು ನಿಲುವಿಗೆ, ಸಿದ್ಧಾಂತಕ್ಕೆ ಸಿಲುಕಿ ಒಬ್ಬ ಪತ್ರಕರ್ತ ತನ್ನ ಅಭಿವ್ಯಕ್ತಿ ಹೊರಹಾಕುತ್ತಿದ್ದಾನೆ ಅಂದರೇ, ಆತ ನಿಜಕ್ಕೂ ಸರ್ವಸ್ವತಂತ್ರ ಧೋರಣೆ ಪಾಲಿಸುತ್ತಿದ್ದಾನೆ ಎಂಬರ್ಥ. ಆತನ ಪ್ರಶ್ನೆ ಸಮಯೋಚಿತವಾಗಿರಬೇಕು. ವಸ್ತನಿಷ್ಠವಾಗಿರಬೇಕು. ಅವೆಲ್ಲದಕ್ಕಿಂತ ಮಿಗಿಲಾಗಿ ಆತನ ಅಭೀವ್ಯಕ್ತಿ ಸ್ವಾತಂತ್ರ್ಯವನ್ನು ಮೀರಿಸುವಂತಿರಬಾರದು. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವನೇ ‘ಅಭಿವ್ಯಕ್ತಿ’ ಒಂದು ಸ್ವಾತಂತ್ರ್ಯ ಎನ್ನುವುದನ್ನು ಮರೆತು ಸ್ವೇಚ್ಛಾಚಾರ ಮೆರೆದರೆ..? ಸಾರ್ವಜನಿಕರೇನು ಮಾಡಿಯಾರು..? ಎಂಬೆಲ್ಲಾ ಪ್ರಶ್ನೆಗಳಿಗೆ ‘ಅಭಿವ್ಯಕ್ತಿ’ಯೇ ಉತ್ತರಿಸಬೇಕು.
ಒಟ್ಟಿನಲ್ಲಿ, ಸದಾ ವಿಕಾಸಗೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಮಾನವನ ಪ್ರಜ್ಞೆಯು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಸಾಮಾಜಿಕ ಜಾಗೃತಿಯನ್ನು ಜೊತೆಗೆ ಮಾನವೀಯತೆಯನ್ನು ಉಳಿಸಿಕೊಳ್ಳುವ ಪಾಠವನ್ನು ಕಲಿಯಬೇಕಾಗಿದೆ ಎನ್ನುವುದು ಪದಶಃ ಅಪ್ಪಟ.
----------------------------
-ಶ್ರೀರಾಜ್ ವಕ್ವಾಡಿ.

Wednesday, April 22, 2020

ಹೌದು... ನಂಜು ಅವರದ್ದೆ..!?


ಸುಮಾರು 25 ದಿನಗಳ ಹಿಂದೆಯೋ ಅಥವಾ ತಿಂಗಳ ಹಿಂದೆ ದೆಹಲಿಯ ನಿಜಾಮುದ್ಧೀನ್ ಮರ್ಕಝ್ ಪ್ರಕರಣ ಮಾಧ್ಯಮಗಳಲ್ಲಿ “ನಿಜಾಮುದ್ಧೀನ್ ನಂಜು” ಎಂದು ಸುದ್ದಿಯಾದಾಗ ಮಾಧ್ಯಮಗಳ ಮೇಲೆ ಸಿಟ್ಟೆದ್ದಿತ್ತು. ‘ತಬ್ಲಿಘಿ ವೈರಸ್’ ಎಂದು ಸುದ್ದಿ ಹೋಗಲಾರಂಭಿಸಿದಾಗ ಇದೆಂಥಾ ಮಾಧ್ಯಮದ ಧೋರಣೆ ಎಂದು ಅಸಹ್ಯ ಹುಟ್ಟಿಸಿತು. ಮಾಧ್ಯಮಗಳು ತಬ್ಲಿಘಿಗಳಲ್ಲಿ ‘ಟೆಸ್ಟ್ ಮಾಡಿಸಿಕೊಳ್ಳಿ’ ಎಂದು ಮನವಿ ಮಾಡಿಕೊಂಡಾಗ ಅದು ಮಾಧ್ಯಮದ ನಿಜವಾದ ಕಾಳಜಿ ಅಂತನ್ನಿಸಿತು. ತಬ್ಲಿಘಿಗಳ ಬೇಜವಾಬ್ದಾರಿಯನ್ನೂ ಸಮರ್ಥಿಸಿಕೊಳ್ಳುವವರನ್ನು ‘ಪಾಪ ಅಜ್ಙಾನಿಗಳು’ ಅನ್ನಿಸಿತು. ಧರ್ಮ, ಜಾತಿ, ಬಣ್ಣ, ವಯಸ್ಸು, ಮೇಲ್ವರ್ಗ, ಕೆಳವರ್ಗ ಯಾವುದನ್ನೂ ನೋಡದೆ ಹರಡುವ ವೈರಸ್‌ಗೆ ಕೋಮಿನ ಬಣ್ಣ ಹಚ್ಚಿದವರನ್ನು ಕಂಡು ಇವರೇ ನಿಜವಾದ ಧರ್ಮಾಂಧರು ಅಂತನ್ನಿಸಿತು. ಈ ಚರ್ಚೆಯ ನಡುವೆ ವಾಸ್ತವಾಂಶಗಳನ್ನಿಟ್ಟುಕೊಂಡು ವಿಮರ್ಶೆ ಮಾಡಿದವರನ್ನು ಕಂಡು ನಿಜಕ್ಕೂ ಭೇಷ್ ಅನ್ನಿಸಿತು. ನನ್ನದೂ ಒಂದು ಇರಲಿ ಎಂದು ಕಡ್ಡಿ ಅಲ್ಲಾಡಿಸುತ್ತಾ ಬಂದವರನ್ನು ಕಂಡು ಸೊಂಟದ ಕೆಳಗಿನ ಭಾಷೆಗಳು ಬಾಯಿಯಿಂದ ಬರಲಾರಂಭಿಸಿತು. ಈಗ ಇನ್ನೂ 340-350 ತಬ್ಲಿಘಿಗಳು ಅಡಗಿ ಕೂತುಕೊಂಡಿದ್ದಾರೆ ಎಂಬ ಭಯಾನಕ ಸುದ್ದಿ ಕಿವಿಗೆ ಬೀಳುವಾಗ, ನಮ್ಮ ನಿಮ್ಮ ನಡುವೆ ಇಂತಹ ಸಮಾಜ ಘಾತುಕರೂ ಇದ್ದಾರಲ್ಲಾ ಅನ್ನಿಸುತ್ತಿದೆ. ಮಾಧ್ಯಮಗಳು ಈಗ ಕೇಳುತ್ತಿರುವ ಪ್ರಶ್ನೆಗಳನ್ನು ನೋಡಿ ಹೆಮ್ಮೆ ಅನ್ನಿಸುತ್ತಿದೆ. ತಬ್ಲಘಿಗಳದ್ದೇ ನಂಜು ಎಂದು ಅನ್ನಿಸುತ್ತಿದೆ.

ಕೊರೋನಾ ವೈರಸ್ ದೇಶವ್ಯಾಪಿ ಯಾರ ಮುಖಮೂತಿ ನೋಡದೆ ಹರಡುತ್ತಿದೆ. ಕೊರೋನಾ ವೈರಸ್ ಹರಡಲು ಸಾಕಷ್ಟು ಕಾರಣಗಳಿವೆ. ನಿಜಾಮುದ್ಧೀನ್ ಮರ್ಕಝ್‌ನಲ್ಲಿ ನಡೆದ ತಬ್ಲಿಘಿಗಳ ಸಮಾವೇಶವೂ ಕೂಡ ಒಂದು. ಅದೇ ಪ್ರಮುಖ ಎಂದರೇ ತಪ್ಪಿಲ್ಲ. ಆದರೇ, ಅದಕ್ಕೂ ಮೊದಲೇ, ಭಾರತ ಸರ್ಕಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ‘ಕೊರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಹಬ್ಬುತ್ತಿದೆ, ಭಾರತಕ್ಕೆ ಹಬ್ಬದಂತೆ ಕ್ರಮಗಳನ್ನು ಕೈಗೊಳ್ಳಿ’ ಸೂಚನೆ ಬಂದಿದ್ದೂ ಕೂಡ ಸುಳ್ಳಲ್ಲ. ಭಾರತ ಸರ್ಕಾರ ಸೋಂಕು ಬಾರದಂತೆ ತಡೆಯುವಲ್ಲಿ ಎಡವಿತ್ತು ಎನ್ನುವುದು ಕೂಡ ಸುಳ್ಳಲ್ಲ. ಅದಕ್ಕೆ ಏರಪೋರ್ಟ್ನಲ್ಲಿ ನಡೆಯುತ್ತಿದ್ದ ಥರ್ಮಲ್ ಸ್ಕ್ರೀನಿಂಗ್ ಯಾವ ಮಟ್ಟದಲ್ಲಿತ್ತು ಎನ್ನುವುದನ್ನು ವಿಮಾನ ಪ್ರಯಾಣಿಕರೇ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದನ್ನು ಇಡೀ ಭಾರತ ಕಂಡಿದೆ.

ಅದಿರಲಿ, ಮುಗಿದು ಹೋದ ವಿಷಯ.

ದೆಹಲಿ ಸರ್ಕಾರ ಮರ್ಕಝನಲ್ಲಿ ನಡೆಯುತ್ತಿದ್ದ ತಬ್ಲಿಘಿ ಸಮಾವೇಶವನ್ನು ನಿಲ್ಲಿಸಿ ಎಂಬ ಆದೇಶವನ್ನು ಕೊಟ್ಟರೂ ಸಮಾವೇಶ ಮುಂದುವರಿದದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಸಮಾವೇಶದಲ್ಲಿ ಪಾಲ್ಗೊಂಡವರು ದೇಶದ ಬೇರೆ ಬೇರೆ ಕಡೆಗಳಿಗೆ ಹರಿದು ಹಂಚಿ ಹೋದರು. ಸಾಲದ್ದಕ್ಕೆ, ಅಮಾಯಕರಿಗೂ ಸೋಂಕು ಹಬ್ಬಿಸಿದರು. ಇಷ್ಟಾದ ಮೇಲೂ ಸರ್ಕಾರ ತಬ್ಲಿಘಿಗಳನ್ನು ಸ್ವಯಂ ತಪಾಸಣೆಗೆ ಆಹ್ವಾನ ಕೊಟ್ಟರೂ ಬರಲಿಲ್ಲ. ಅದೆಷ್ಟೋ ತಬ್ಲಿಘಿಗಳು ಅಡಗಿ ಕೂತರು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರು. ಊರೂರು ಸೋಂಕು ಹಬ್ಬಿಸುವಲ್ಲಿ ಯಶಸ್ವಿಯಾದರು. ಇನ್ನೂ ಇಂತಹ ಸಮಾಜ ಘಾತುಕರ ಮೇಲೆ ಸಹನೆ ತೋರಿಸುವುದಕ್ಕೆ ಸಾಧ್ಯವಿಲ್ಲ. ಇವರನ್ನು ‘ತಬ್ಲಿಘಿ ನಂಜು’ ಅನ್ನದೇ ಬೇರೇನು ಕರೆಯಬೇಕೆಂದು ತಿಳಿಯುತ್ತಿಲ್ಲ.

ಈ ಸಮಾಜ ಘಾತುಕ ತಬ್ಲಿಘಿಗಳ ಕಾರಣದಿಂದಾಗಿ ಪ್ರಾಮಾಣಿಕವಾಗಿರುವ ಮುಸ್ಲಿಂ ಸಮುದಾಯದವರು ಬೇರೆ ಧರ್ಮಗಳಿಂದ ವಿರೋಧ ಭಾವನೆಗೆ ಒಳಗಾದರು. 'ಅದೆಷ್ಟೋ ಮುಸ್ಲಿಂ ಸಮುದಾಯದವರು ಬೇರೆ ಸಮುದಾಯದ ಜನರಿಗೆ ಭಯೋತ್ಪಾದಕರಂತೆ ಕಂಡರು. ಮುಸ್ಲೀಮರನ್ನು ಸಮಾಜ ಈಗ ಬೇರೆ ದೃಷ್ಟಿಯಲ್ಲಿ ಕಾಣುತ್ತಿದೆ, ಸಮುದಾಯದ ಕೆಲವು ಮಂದಿ ಮಾಡಿದ  ತಪ್ಪಿಗಾಗಿ ಇಡೀ ಮುಸ್ಲೀಂ ಸಮುದಾಯ ಇಂತಹ ವಿರೋಧಕ್ಕೆ ಒಳಗಾಗಬೇಕಾಗಿ ಬಂದಿದೆ. ಸಮಾಜದ ವಿರುದ್ಧವಾಗಿ ನಿಲ್ಲುವವರು ಯಾರೇ ಇರಲಿ ಅವರನ್ನು ಕಾನೂನು ಶಿಕ್ಷಿಸಲಿ. ಈ ಸಮಾಜವನ್ನೇ ಆಶ್ರಯಿಸಿ ಇರುವವರು ನಾವು. ನಮ್ಮನ್ನು ಭಿನ್ನವಾಗಿ ನೋಡಬೇಡಿ' ಎಂದು ಮಾಧ್ಯಮಗಳೊಂದಿಗೆ ಎಷ್ಟೋ ಮುಸ್ಲೀಮರು ಅಳಲು ತೋಡಿಕೊಂಡಿದ್ದು ವರದಿಯಾದವು.

ಹೌದು, ಈ ತಬ್ಲಿಘಿಗಳು ಮಾಡಿದ್ದು ಅಷ್ಟಿಷ್ಟಲ್ಲ. ಈವರೆಗೆ ಪತ್ತೆಯಾದ ಸೋಂಕುಗಳ ಪೈಕಿಯಲ್ಲಿ 4,300ಕ್ಕೂ ಹೆಚ್ಚು ಕೇಸ್‌ಗಳಲ್ಲಿ ತಬ್ಲಿಘಿಗಳ ನಂಟಿದೆ ಎಂದು ಸಾಭೀತಾಗಿದೆ. ದೇಶದಲ್ಲಿ ಸೋಂಕಿನ ನಿಯಂತ್ರಣದ ದಿಕ್ಕು ತಪ್ಪಿಸಿದ್ದೇ ಈ ತಬ್ಲಿಘಿಗಳು. ಇಷ್ಟೆಲ್ಲಾ ಸಾಕ್ಷಿ ಇದ್ದ ಮೇಲೂ, ನಾವು ಸೋಂಕು ಹರಡಿಸುವಂತಹ ಕೆಲಸ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುವ ತಬ್ಲಿಘಿಗಳು, ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುವುದಾದರೂ ಯಾಕೆ..? ನಿಜಾಮುದ್ಧೀನ್ ಮರ್ಕಝ್‌ನ ಮುಖ್ಯಸ್ಥ ಮೌಲಾನ ಸಾದ್ ತಪಾಸಣೆಗೆ ನಕಾರ ಮಾಡುತ್ತಿರುವುದರ ಬಗ್ಗೆ ನಿನ್ನೆ ಸುದ್ದಿಯಾಯಿತು. ಹಾಗಾದರೇ, ಸಮಾಜಕ್ಕೆ ಆತ ನೀಡುತ್ತಿರುವ ಸಂದೇಶ ಏನು..? ತಬ್ಲಿಘಿಗಳ ಮನೋಧೋರಣೆಯೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ಪಿವ್ಯೂ ರಿಸರ್ಚ್ ಸೆಂಟರ್ ಹೇಳುವ ಪ್ರಕಾರ ವಿಶ್ವದಾದ್ಯಂತ 150 ದೇಶಗಳಲ್ಲಿ ತಬ್ಲಿಘಿಗಳ ಅಸ್ತಿತ್ವವಿದೆ. ಬರೋಬ್ಬರಿ ಎಂಟು ಕೋಟಿ ಮಂದಿ ಸದ್ಯಕ್ಕೆ ಸದಸ್ಯತ್ವ ಹೊಂದಿದ್ದಾರೆ.
ದೆಹಲಿಯ ನಿಜಾಮುದ್ಧೀನ್ ಮರ್ಕಝ್‌ನಲ್ಲಿ ತಬ್ಲಿಘಿ ಸಮಾವೇಶ ನಡೆದ ಸಂದರ್ಭದ ಸ್ವಲ್ಪ ಆಸು ಪಾಸಿನಲ್ಲೇ ವೈರಿ ದೇಶ ಪಾಕಿಸ್ತಾನದಲ್ಲಿಯೂ ತಬ್ಲಿಘಿಗಳ ಸಮಾವೇಶ ನಡೆದಿತ್ತು. ಬರೋಬ್ಬರಿ 3,000 ಸಾವಿರ ವಿದೇಶಿ ತಬ್ಲಿಘಿಗಳನ್ನು ಒಳಗೊಂಡು 70,000 ಮಂದಿ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದು ವರದಿಯಾಗಿದೆ. ಮಲೇಶಿಯಾ, ಇಂಡೋನೇಷಿಯಾಗಳಿಗೂ ಈ ತಬ್ಲಿಘಿಗಳು ಸೋಂಕು ಹರಡಿಸುವುವಲ್ಲಿ ಮುಖ್ಯ ಪಾತ್ರವನ್ನೇ ವಹಿಸಿದ್ದಾರೆ. ಎನ್ನುವಲ್ಲಿಗೆ ದಕ್ಷಿಣ ಏಷ್ಯಾ ಖಂಡದ ದೇಶಗಳು ಈ ತಬ್ಲಿಘಿಗಳ ಕಾರಣದಿಂದಾಗಿಯೇ ಬೆಚ್ಚಿಬೀಳುವಂತಾಯಿತು ಎನ್ನುವುದು ಅಪ್ಪಟ ಸತ್ಯ.

 ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಮೇಲೂ, ಅವರನ್ನು ಸಮರ್ಥಿಸಿಕೊಂಡು ಮಾತಾಡುವವರ ಬಳಗವೊಂದಿದೆ. ಅದರೊಂದಿಗೆ ಕೋಮಿನ ಬಣ್ಣ ಹಚ್ಚುವ ಮತ್ತೊಂದು ದೊಡ್ಡ ಬಳಗವಿದೆ. ಅಂತವರೆಲ್ಲರನ್ನೂ ತಬ್ಲಿಘಿಗಳ ಪಟ್ಟಿಗೆ ಸೇರಿಸಬೇಕು.  ಇನ್ನು, ತಬ್ಲಿಘಿಗಳೆಂದ ಕೂಡಲೇ ಮುಸ್ಲೀಮರು ಎಂದು ಹೇಳುವ ಮತ್ತು ತಬ್ಲಿಘಿಗಳೆಂದು ಮುಸ್ಲಿಮರನ್ನೇ ಗುರಿ ಮಾಡುತ್ತಿದ್ದೀರಿ ಎಂದು ಹೇಳುವ ವರ್ಗವೂ ಇದೆ. ಅಂತವರನ್ನು ಅಜ್ಙಾನಿಗಳೆಂದು ಪರಿಗಣಿಸುವುದು ಬಿಟ್ಟರೇ ಬೇರೆ ಯಾವ ಮಾರ್ಗವೂ ಕಾಣಿಸುತ್ತಿಲ್ಲ.
ಒಟ್ಟಿನಲ್ಲಿ ದೇಶದಲ್ಲಿ ಸೋಂಕು ಹರಡುವ ವೇಗವನ್ನು ಹೆಚ್ಚಿಸಿದ್ದರಲ್ಲಿ ತಬ್ಲಿಘಿಗಳ ಪಾತ್ರ ದೊಡ್ಡದಿದೆ ಎನ್ನುವುದರಲ್ಲಿ ನೋ ಡೌಟ್ಸ್.
----------------------------------
-ಶ್ರೀರಾಜ್ ವಕ್ವಾಡಿ.

Tuesday, April 21, 2020

ಪಾದರಾಯನಪುರದಲ್ಲಿ ನಡೆದ ಘಟನೆಯಂತೆ ಮತ್ತೆಲ್ಲೂ ಆಗದಿರಲಿ..!


ಇಡೀ ಪ್ರಪಂಚಕ್ಕೆ ಪ್ರಪಂಚವೇ ಕೊರೋನಾ ಸೋಂಕಿನ ಪರಿಣಾಮದಿಂದಾಗಿ ಆತಂಕ ಪಡುತ್ತಿರುವ ಸಂದರ್ಭದಲ್ಲಿ, ಪುಂಡರ ಗೂಂಡಾರಿಗಿರಿಯನ್ನು ನಿಭಾಯಿಸುವುದಕ್ಕೆ ದೊಡ್ಡ ತಲೆನೋವಾಗಿದೆ.
ಎರಡು ಮೂರು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಗಡ್ಚಿಂಚಾಲೆಯಲ್ಲಿ ನಡೆದ ಘಟನೆ ನಿಮಗೆ ಗೊತ್ತಿರಬಹುದು. ಇಬ್ಬರು ಸಾಧುಗಳನ್ನು ಒಳಗೊಂಡು ಮೂವರನ್ನು ಪೋಲಿಸರ ಕಣ್ಣೆದುರೇ ಅಲ್ಲಿನ ಜನರು ಗುಂಪು ಗುಂಪಾಗಿ ದೊಣ್ಣೆ ಇತ್ಯಾದಿಗಳಿಂದ  ಅಮಾನುಷವಾಗಿ ಹೊಡೆದು ಕೊಂದರು. ಉದ್ರಿಕ್ತ ಗ್ರಾಮಸ್ತರನ್ನು ಸುಧಾರಿಸಲು ಬಂದ ಪೋಲಿಸರ ಮೇಲೂ ಹಲ್ಲೆ ಮಾಡಿದ ಘಟನೆ ನಡೆಯಿತು. ಸಾಧುಗಳು ತಮ್ಮನ್ನು ಕಾಪಾಡಿ ಎಂದು ಕೇಳಿಕೊಳ್ಳುತ್ತಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಯಿತು. ಆ ಸಾಧುಗಳು ಚಲಾಯಿಸುತ್ತಿದ್ದ ಕಾರನ್ನು ಮತ್ತು ಪೋಲಿಸರು ಗಸ್ತು ತಿರುಗುತ್ತಿದ್ದ ವಾಹನವನ್ನು ನುಜ್ಜುಗುಜ್ಜು ಮಾಡಿದ್ದು ಆ ವೀಡಿಯೋದಲ್ಲಿ ದಾಖಲೀಕರಣಗೊಂಡಿತ್ತು. ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೋಲಿಸರು 101 ಜನರನ್ನು ಬಂಧಿಸಿದರು.

ಆ ಘಟನೆಯ ಬಿಸಿ ಹಬೆ ತಣ್ಣಗಾಗುವ ಮುನ್ನಾ ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೊಂದು ಹಿಂಸಾಚಾರ ನಡೆದಿದೆ. ಕೋವಿಡ್ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಹೋಗಿದ್ದ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ  ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೋಲಿಸರು ಸೀಲ್‌ಡೌನ್‌ಗಾಗಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು, ತಗಡಿನ ಶೀಟ್‌ಗಳನ್ನು, ಪೆಂಡಾಲ್‌ಗಳನ್ನು ಧ್ವಂಸಗೊಳಿಸಿದ್ದಾರೆ.

ಇಂತಹ ಸಮೂಹ ಗಲಭೆಗಳು ಇದೇ ಮೊದಲಲ್ಲ. ಈ ಹಿಂದೆಯೂ ಬೇಕಾದಷ್ಟು ನಡೆದಿವೆ. ಮಂಡ್ಯ, ಬೆಳಗಾವಿಯ ಕುಡ್ಚಿ ಹಾಗೂ ಇನ್ನೂ ಕೆಲವು ಭಾಗಗಳಲ್ಲಿ ಮಾಹಿತಿ ಕೇಳಿಕೊಂಡು ಹೋದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯಿತು. ನಿನ್ನೆ ಕೂಡ ಮೈಸೂರಿನ ಅಲೀಂ ನಗರದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಧಮ್ಕಿ ಹಾಕಿ ಹಲ್ಲೆ ಮಾಡಲು ಮುಂದಾದ ಘಟನೆ ನಡೆಯಿತು. ಹುಬ್ಬಳ್ಳಿ, ಮಂಗಳೂರು ಸೇರಿ ಕೆಲವಡೆ ಪೋಲಿಸರ ಮೇಲೆ ಕಲ್ಲೆಸೆದರು, ಹಲ್ಲೆ ಮಾಡಿದರು, ಟ್ರೀಟ್‌ಮೆಂಟ್‌ಗೆ ಬಂದ ಡಾಕ್ಟರ್, ನರ್ಸ್ಗಳ ಮೇಲೆ ಎಂಜಲುಗಿದರು. ಒಂದೆರಡಲ್ಲ. ಇಂತಹ ಘಟನೆಗಳೇ ಸರ್ಕಾರಗಳಿಗೆ ಮತ್ತಷ್ಟು ದೊಡ್ಡ ತಲೆನೋವಾಗಿ ಪರಿಣಮಿಸಿತು.



ಇನ್ನು, ಈ ಗುಂಪು ಹಿಂಸಾಚಾರಗಳು ಎನ್‌ಆರ್‌ಸಿ ವಿಷಯವಾಗಿ ನಡೆದ ಪ್ರತಿಭಟನೆಗಳನ್ನು, ಅಲ್ಲಿ ಪರವಾಗಿದ್ದ, ವಿರೋಧವಾಗಿದ್ದ ಕಿಡಿಗೇಡಿಗಳು ಮಾಡಿದ ಧ್ವಂಸ, ಕಲ್ಲು ತೂರಾಟ, ಇನ್ನು ಕೆಲವರು ತಲ್ವಾರು ತೋರಿಸಿ ದಾಂಧಲೆ ನಡೆಸಿದ್ದು, ಪಿಸ್ತೂಲು ತೋರಿಸಿ ಗುಂಡು ಹಾರಿಸಿದ ಘಟನೆಗಳನ್ನೂ ಕೂಡ ನೆನಪಿಸಿದ್ದು ಸುಳ್ಳಲ್ಲ. ಅಂದರೇ, ಈ ಪಾದರಾಯನಪುರದ ಘಟನೆ ಮತ್ತೆ ಕೋಮು ಜ್ವಾಲೆ ಉರಿಸಿದೆ ಎನ್ನುವ ಅರ್ಥ.

ತಬ್ಲಿಘಿಗಳು ಊರೆಲ್ಲಾ ಸುತ್ತಾಡಿ ವೈರಸ್‌ನ್ನು ಹರಡಿಸಿದ್ದಾರೆ ಎಂದಾಗ ಮುಸ್ಲಿಂ ಸಮುದಾಯದವರು ಅದು ಬೆರಳಣೀಕೆಯಷ್ಟು ಮಾತ್ರ ಎಂದು ಗುರುತಿಸಿ ತೋರಿಸಿದರು. ಮಾತ್ರವಲ್ಲದೇ, ಆ ಬೆರಳೆಣಿಕೆಯಷ್ಟು ಮಂದಿ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬೇಡಿ ಎನ್ನುವುದನ್ನು ಹೇಳಿದರು. ಆ ಬಗ್ಗೆ ದೇಶ ವ್ಯಾಪಿ ದೊಡ್ಡ ಚರ್ಚೆಯೇ ಆಯಿತು.

ಎಸ್ ಫೈನ್.

ಹಾಗಾದರೇ, ತಬ್ಲಿಘಿ ವಿಷಯವನ್ನು ಸಮುದಾಯಕ್ಕೆ ಗುರಿ ಮಾಡಬೇಡಿ ಎಂದವರು ಪಾದರಾಯನಪುರದ ಘಟನೆಯ ಬಗ್ಗೆ ಏನು ಹೇಳುತ್ತಾರೆ..? ಇದಕ್ಕೆ ಯಾರು ಹೊಣೆ..?
ಇದನ್ನು ನೀವು ಹೇಗೆ ಬೇಕೋ ಹಾಗೆ ಸ್ವೀಕರಿಸಿ. ಸಾಕ್ಷಿಯೋ, ಪ್ರಶ್ನೆಯೋ, ಭಿನ್ನ ಧ್ವನಿಯೋ.. ನಿಮ್ಮ ನಿಮ್ಮ ಯೋಚನೆಗೆ.

ದಾಂಧಲೆ ನಡೆಸಿ ಈವರೆಗೆ ಬಂಧನಕ್ಕೊಳಗಾದವರೆಲ್ಲಾ 67 ಮಂದಿ ಬಹುತೇಕರೆಲ್ಲರೂ ಅದೇ ಸಮುದಾಯಕ್ಕೆ ಸೇರಿದವರು ಎನ್ನುವುದು ತಿಳಿದುಬಂದಿದೆ. ಹತ್ತಾರು ವರ್ಷಗಳಿಂದ ಪಾದರಾಯನಪುರದಲ್ಲೇ ಇದ್ದು ಗಾಂಜಾ ಸರಬರಾಜು ಮಾಡುತ್ತಿದ್ದ ಫರೋಜಾಳನ್ನು ಸೇರಿ 35 ಮಂದಿ ಅಪರಾಧದ ಹಿನ್ನಲೆಯಿರುವವರು. ಫರೋಜಾ ಅಲ್ಲಿದ್ದ ಯುವಕರಿಗೆಲ್ಲಾ ಪ್ರಚೋದಿಸಿದ್ದರಿಂದ ಪಾದರಾಯನಪುರದಲ್ಲಿ 5-6 ಕಡೆಗಳಲ್ಲಿ  ಹಾಕಲಾಗಿದ್ದ ಬ್ಯಾರಿಕೇಡ್‌ಗಳಿಂದ ತಂಡೋಪತಂಡವಾಗಿ ನುಗ್ಗಿ ಬಂದು ಶಾಮಿಯಾನ, ಟೇಬಲ್‌ಗಳನ್ನು ಎಸೆದು ಅಟ್ಟಹಾಸ ಮೆರೆದರು. ಇನ್ನು ಕೆಲವು ಮಂದಿ ಚೂರಿ ತೋರಿಸಿ ಕೊಲೆಗೆ ಯತ್ನಿಸಿದರು ಎನ್ನುವುದನ್ನು ಸ್ವತಃ ಪೋಲಿಸರೇ, ಬಿಬಿಎಂಪಿ ವೈದ್ಯರೇ ಹೇಳುತ್ತಾರೆ.

ಆ ಸಮುದಾಯದಲ್ಲಿ ಇಂತವರನ್ನೂ ಸಮರ್ಥಿಸಿಕೊಳ್ಳುವವರಿದ್ದಾರೆಯೇ..? ಎಂಬ ಪ್ರಶ್ನೆಗೆ ಹೌದೆನ್ನುವುದನ್ನು ಬಿಟ್ಟರೇ ಮತ್ತೇನನ್ನಬೇಕು..?. ಯಾಕೆಂದರೇ ಅಲ್ಲಿನ ಶಾಸಕ, ಜಮೀರ್ ಖಾನ್, ಅವರೆಲ್ಲರನ್ನೂ ‘ಅಮಾಯಕರು’ ಎಂದು ಕರೆದಿದ್ದೇ ಸಾಕ್ಷಿಯಾಗಿ ಸಾಕು. ಇಲ್ಲಿ, ಅಮಾಯಕರೆಲ್ಲರೂ ಪಾಪ ಗಾಂಜ ಹೊಡೆಯುತ್ತಾರೆ... ಬಾಲಿಶ ಎನ್ನಿಸುವುದು ಮತ್ತೇನಲ್ಲ. ಅವರು ರಾತ್ರಿ ಯಾಕೆ ಬಂದರು..? ರಾತ್ರಿ ಬಂದಿದ್ದೇ ಈ ಗಲಾಟೆಗೆ ಕಾರಣವಾಯಿತು ಅಂತ ಹೇಳುವ ಜಮೀರ್ ಖಾನ್‌ರ ಮಾತು. ಹಾಗಾದರೇ, ರಾತ್ರಿ ಬಂದದ್ದಕ್ಕಾಗಿಯೇ ಹಲ್ಲೆ ನಡೆಸಿದ್ದಾ..? ಪಾದರಾಯನಪುರಕ್ಕೆ ರಾತ್ರಿ ಹೋಗುವವರಿಗೆಲ್ಲಾ ಈ ಕಿಡಿಗೇಡಿಗಳು ಹಲ್ಲೇ ಮಾಡುವುದಕ್ಕೆ ತಯಾರಾಗಿ ಇರುತ್ತಾರಾ..? ಜಮಿರ್ ಖಾನ್ ಎಂಬ ಶಾಸಕನ ಪ್ರತಿಕ್ರಿಯೆ ನಿಜಕ್ಕೂ ತಮಾಷೆ ಅನ್ನಿಸುತ್ತದೆ.

ನಿಜ, ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಆ ಇಡೀ ಸಮುದಾಯದವರನ್ನು ದೂಷಿಸುವುದು ಅಕ್ಷಮ್ಯ ಅಪರಾಧ. ಆದರೇ, ಪದೆ ಪದೆ ಆ ಸಮುದಾಯದಿಂದಲೇ ಇಂತಹ ಘಟನೆಗಳು ಸಂಭವಿಸಿದಾಗ ಮತ್ತೇನು ಮಾಡಬೇಕು..? ಎಲ್ಲೋ ಒಂದು ಕಡೆಯಲ್ಲಿ, ಇಂತಹ ಘಟನೆಗಳನ್ನು ಧರ್ಮದ ಆಧಾರದಲ್ಲಿ ನೋಡಿ ಮಾತನಾಡುವವರ, ವಿಶ್ಲೇಷಿಸುವವರ ಚಿಂತನೆಯೇ ಸರಿ ಅಂತನ್ನಿಸುತ್ತದೆ.

ಹೌದು, ಧರ್ಮದ ಹಿನ್ನೆಲೆಯಲ್ಲಿ ಒಂದು ಘಟನೆಯನ್ನು ವಿಶ್ಲೇಷಿಸುವುದು ಖಂಡಿತ ಸರಿಯಲ್ಲ. ಇಂತಹ ಕಿಡಿಗೇಡಿಗಳಿಗೆ ಸರ್ಕಾರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಸರ್ಕಾರ ಮಾತ್ರವಿಲ್ಲ. ಸರ್ಕಾರದಡಿಯಲ್ಲಿ ಬರುವ ಎಲ್ಲಾ ಪ್ರಜೆಗಳೂ ಇದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಉಳಿಸುವುದು ಎಲ್ಲರ ಸಾಮಾಜಿಕ ಹೊಣೆಗಾರಿಕೆ. ಯಾರಿಗೂ ಇಂತಹ ವಿಷಯದಲ್ಲಿ ರಿಯಾಯಿತಿ ಇಲ್ಲದೇ, ಕಾನೂನಿನ ಮೂಲಕ ಬೆಂಡೆತ್ತಲಿ. ಗೂಂಡಾ ಕಾಯ್ದೆಯಡಿ ಒಳಗೆ ಹಾಕುವಂತಹ ಕಠಿಣ ಕಾನೂನು ಜಾರಿಗೆ ಬರಲಿ.

ಫೈನ್.
ಇನ್ನು ಮುಂದಾದರೂ ಜಾತಿ, ಧರ್ಮ, ಸಿದ್ಧಾಂತಗಳಾಚೆಗೆ ಸಾಮಾಜಿಕ ಸ್ವಾಸ್ಥ್ಯ ಉಳಿಯಲಿ. ಈ ಘಟನೆಯೇ ಹಿಂಸಾಚಾರಕ್ಕೆ ಅಂತ್ಯ ಹಾಡಲಿ. ಜಮೀರ್‌ನಂತಹ ಯಡಬಿಡಂಗಿ ನಾಯಕರನ್ನು ಕಾಣುವ ಕೆಟ್ಟ ಕಾಲ ದೇಶದ, ರಾಜ್ಯದ ಪಾಲಿಗೆ ಕಳೆದು ಹೋಗಲಿ.
ಯಾವ ಧರ್ಮ, ಜಾತಿ, ಲಿಂಗ, ಬಣ್ಣ ತಾರತಮ್ಯ ಮಾಡದೆ ಒಳ್ಳೆಯವರನ್ನು ಗೌರವಿಸೋಣ.
------------------------------------
-ಶ್ರೀರಾಜ್ ವಕ್ವಾಡಿ 

Monday, April 20, 2020

‘ಹೆಲಿಕಾಪ್ಟರ್ ಮನಿ’ ಅಂದ್ರೆ ಏನೇನೋ ಅಲ್ಲ..!


‘ಕೋವಿಡ್19’ ಈಗ ಜಗತ್ತಿನೆಲ್ಲೆಡೆ ಕೇಳಿಸುತ್ತಿರುವ ಮಾತು. ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ, ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡುಬಿಟ್ಟಿದೆ. ಮಾತ್ರವಲ್ಲದೇ, ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ಅರ್ಥವ್ಯವಸ್ಥೆಯನ್ನೂ ಅಡಿಮೇಲಾಗಿಸಿದೆ. ಭಾರತವೂ ಕೂಡ ಇದಕ್ಕೆ ಹೊರತಾಗಿಲ್ಲ. ಭಾರತ ಸರ್ಕಾರ, ದೇಶವ್ಯಾಪಿ ಹಬ್ಬುತ್ತಿರುವ ಈ ಕೊರೋನಾ ಸೋಂಕನ್ನು ನಿವಾರಿಸುವ ಎಲ್ಲಾ ಪ್ರಯತ್ನದೊಂದಿಗೆ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು ಹಲವಾರು ಪ್ರಯತ್ನ ಮಾಡುತ್ತಿದೆ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ‘ಹೆಲಿಕಾಪ್ಟರ್ ಮನಿ’  ದೊಡ್ಡ ಸುದ್ದಿ ಎಬ್ಬಿಸಿಬಿಟ್ಟಿದೆ. ಅನೇಕರಲ್ಲಿ ಹೆಲಿಕಾಪ್ಟರ್ ಮನಿ ಅಂದರೆ ಏನು ಎಂಬ ಗೊಂದಲವಿದೆ. ಹೆಲಿಕಾಪ್ಟರ್ ಮನಿ ಅಂದರೆ, ಹೆಲಿಕಾಪ್ಟರ್‌ನಿಂದ ಹಣದ ಕಂತೆಗಳನ್ನು ತಂದು ಜನರಿರುವ ಪ್ರದೇಶಗಳಲ್ಲಿ ಸುರಿಯುವುದಾ..? ಅದು ಸತ್ಯನಾ..? ಹಾಗೊಂದು ಸರ್ಕಾರದ ಯೋಜನೆ ಇದೆಯಾ..? ಸರ್ಕಾರ ಹೆಲಿಕಾಪ್ಟರ್‌ಲ್ಲಿ ಹಣ ತಂದು ಸುರಿದು ಬಿಡುತ್ತದಾ..? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇಲ್ಲಿದೆ.


ಹೆಲಿಕಾಪ್ಟರ್ ಮನಿ ಅಂದರೇ ಒಂದು ಅಪ್ಪಟ ಅರ್ಥಶಾಸ್ತçದ ಪರಿಕಲ್ಪನೆ. ಅರ್ಥಶಾಸ್ತ್ರದ ಪದ ಅದು. ವಿಕಿಪೀಡಿಯಾ ‘ಹೆಲಿಕಾಪ್ಟರ್ ಮನಿ’ ಅಂದರೇ, ‘ಸಾಂಪ್ರದಾಯಿಕವಲ್ಲದ ಹಣಕಾಸು ನೀತಿ’ ಎಂದು ವಿವರಿಸುತ್ತದೆ. ದೇಶ ಆರ್ಥಿಕ ತುರ್ತು ಪರಿಸ್ಥಿತಿಯಿಂದ ಬಳಲುತ್ತಿದ್ದರೇ, ಕೊನೆಯ ಹಂತದಲ್ಲಿ ಈ ‘ಹೆಲಿಕಾಪ್ಟರ್ ಮನಿ’ ಪ್ರಯೋಗವನ್ನು ಬಳಸಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಜನರ ಕೈಯಲ್ಲಿ ಹಣದ ವಹಿವಾಟು ಹೆಚ್ಚಾಗುವಂತೆ ಮಾಡುವುದೇ ಇದರ ಉದ್ದೇಶ. ಸರ್ಕಾರ ತನ್ನ ಎಲ್ಲಾ ತೆರಿಗೆಗಳನ್ನು ಕಡಿತಗೊಳಿಸುವ ಮೂಲಕ ಅಥವಾ ಕಡಿಮೆಗೊಳಿಸುವ ಮೂಲಕ ಮತ್ತು ವೆಚ್ಚವನ್ನು ಅಧಿಕಗೊಳಿಸುವ ಮೂಲಕ ಸಾರ್ವಜನಿಕರ ಕೈಯಲ್ಲಿ ಹೆಚ್ಚು ಹೆಚ್ಚು ಹಣ ಚಲಾವಣೆಯಾಗುವಂತೆ ಮಾಡುವುದು. ಅಧಿಕ ಪ್ರಮಾಣದಲ್ಲಿ ಹಣವನ್ನು ಪ್ರಿಂಟ್ ಮಾಡುವ ಮೂಲಕ ಸಾರ್ವಜನಿಕರ ಬ್ಯಾಂಕ್ ಖಾತೆಗೆ ಜಮಾ ಮಾಡುವುದೇ ಹೊರತು ಹೆಲಿಕಾಪ್ಟರ್ ಮೂಲಕ ಹಣ ತಂದು ಸುರಿಯುವುದಲ್ಲ.

ಆರ್ಥಿಕ ಸ್ಥಿತಿ ಮಂದಗತಿಯಲ್ಲಿರುವ ಸಂದರ್ಭದಲ್ಲಿ, ಆರ್ಥಿಕ ಮಟ್ಟವನ್ನು ಚೇತರಿಕೆ ಮಾಡಲು ಈ ಅಸ್ತ್ರವನ್ನು ಬಳಕೆಗೆ ತರಬಹುದು. ಆಯಾಯ ದೇಶಗಳ ಕೇಂದ್ರೀಯ ಬ್ಯಾಂಕ್‌ನ ಮೂಲಕ ಹಣ ಮುದ್ರಿಸಿ, ಅಲ್ಲಿನ ಸರ್ಕಾರಕ್ಕೆ ವರ್ಗಾವಣೆ ಮಾಡುವುದು. ಸರ್ಕಾರ ಕೇಂದ್ರೀಯ ಬ್ಯಾಂಕ್‌ಗೆ ಹಿಂದಿರುಗಿಸಬೇಕೆಂದೇನಿಲ್ಲ. ದೊಡ್ಡ ಪ್ರಮಾಣದಲ್ಲಿ ಹಣ ಮುದ್ರಿಸಿ, ಅದನ್ನು ಜನರ ಮೂಲಕ ಹೆಚ್ಚು ಹೆಚ್ಚು ವಹಿವಾಟು ಆಗುವಂತೆ ಮಾಡುವುದರ ಮೂಲಕ ಆರ್ಥಿಕ ಸ್ಥಿತಿ ಸರಿದೂಗಿಸುವಂತೆ ಮಾಡುವುದು ಈ ‘ಹೆಲಿಕಾಪ್ಟರ್ ಮನಿ’ ಕಾನ್ಸೆಪ್ಟ್ನ ಮೂಲ ತಂತ್ರ.




‘ಹೆಲಿಕಾಪ್ಟರ್ ಮನಿ’ ಮೊದಲು ಬಳಸಿದವರು ಮಿಲ್ಟನ್ ಫ್ರಿಡ್‌ಮನ್ ..!
‘ಹೆಲಿಕಾಪ್ಟರ್ ಡ್ರಾಪ್’ ಅಥವಾ ‘ಹೆಲಿಕಾಪ್ಟರ್ ಮನಿ’ ಕಾನ್ಸೆಪ್ಟ್ ನ್ನು ಮೊದಲು ಬಳಸಿದವರು ಅಮೇರಿಕದ ಆರ್ಥಿಕ ತಜ್ಙ ಮಿಲ್ಟನ್ ಫ್ರೀಡ್‌ಮನ್. 1960ರಲ್ಲಿ ಫ್ರೀಡ್‌ಮನ್ ಮಂಡಿಸಿದ ‘ದಿ ಆಪ್ಟಿಮಮ್ ಕ್ವಾಂಟಿಟಿ ಆಪ್ ಮನಿ’ ಎಂಬ ಪ್ರಬಂಧದಲ್ಲಿ ಅವರು ಮೊದಲ ಬಾರಿಗೆ ಈ ‘ಹೆಲಿಕಾಪ್ಟರ್ ಮನಿ’ ಪದ ಪ್ರಯೋಗಿಸಿದ್ದರು ಎನ್ನುವುದನ್ನು ಇತಿಹಾಸ ಹೇಳುತ್ತದೆ.

ಫ್ರಿಡ್‌ಮನ್ ಕಾನ್ಸೆಪ್ಟ್ ಏನು..?
ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಸಂದರ್ಭದಲ್ಲಿ, ದೇಶದ ಕೇಂದ್ರೀಯ ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಹಣ ಮುದ್ರಿಸಿ ಸರ್ಕಾರಕ್ಕೆ ನೀಡಬೇಕು. ಸರ್ಕಾರ ಅದನ್ನು ಸಾರ್ವಜನಿಕರ ಖಾತೆಗೆ ಹಾಕುವಂತಹ ವ್ಯವಸ್ಥೆ ರೂಪಿಸಬೇಕು. ಜನರು ಆ ಹಣವನ್ನು ಸರ್ಕಾರಕ್ಕೆ ವಾಪಾಸ್ ಮಾಡುವಂತಿಲ್ಲ. ಆದರೇ, ಅದನ್ನು ಉಳಿಸಿಕೊಳ್ಳುವಂತಿಲ್ಲ. ಹೆಚ್ಚು ಹೆಚ್ಚು ವಹಿವಾಟಿಗೆ ಬಳಸಿಕೊಂಡು ಖರ್ಚು ಮಾಡಬೇಕು. ಅದು ದೇಶದ ಆರ್ಥಿಕ ಪುನಶ್ಚೇತನಕ್ಕೆ ಸಹಾಯವಾಗುತ್ತದೆ ಎನ್ನುವುದು ಫ್ರಿಡ್‌ಮನ್ ಕಾನ್ಸೆಪ್ಟ್ ಆಗಿದೆ.

(ಆಧಾರ : ಹಲವು ಇಂಟರ್‌ನೆಟ್ ಮೂಲಗಳು.)
----------------------------------------------------
-ಶ್ರೀರಾಜ್ ವಕ್ವಾಡಿ.  

Sunday, April 19, 2020

ಸಿನೆಮಾ ರಂಗದ ದೈತ್ಯ ಹೆಸರು “ಕಾಸರವಳ್ಳಿ”



"ಸಿನೆಮಾ ಅಂದ್ರೆ ‘ಒಳನೋಟ’- ಗಿರೀಶ್ ಕಾಸರವಳ್ಳಿ"

ಗಿರೀಶ್ ಕಾಸರವಳ್ಳಿ, ಭಾರತೀಯ ಸಿನೆಮಾ ರಂಗದ ಮೇರು ವ್ಯಕ್ತಿತ್ವ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೆಸಲೂರಿನ ಮೂಲದವರಾದ ಗಿರೀಶ್ ಕಾಸರವಳ್ಳಿ, ತಮ್ಮ ವೃತ್ತಿಯಾಗಿ ಆಯ್ದುಕೊಂಡ ಕ್ಷೇತ್ರ ಸಿನೆಮಾ. ತನ್ನ ವೃತ್ತಿ ಜೀವನದಲ್ಲಿ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಸಣ್ಣದಾದರೂ, ಅವರು ನಿರ್ದೇಶಿಸಿರುವ 'ಘಟಶ್ರಾದ್ಧ'ದಿಂದ ಹಿಡಿದು 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ'ಯ ತನಕ ಎಲ್ಲಾ ಸಿನೆಮಾಗಳು ಎಂದಿಗೂ ಪ್ರಸ್ತುತ ಎನ್ನುವುದೇ ಕಾಸರವಳ್ಳಿಯವರ ಸಿನೆಮಾಗಳ ಹೆಚ್ಚುಗಾರಿಕೆ. ನಿರ್ದೇಶನಕ್ಕಾಗಿ ಭಾರತ ಸರ್ಕಾರ ಕೊಡಮಾಡುವ 4 ಸ್ವರ್ಣ ಕಮಲ ಗೌರವಗಳೊಂದಿಗೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಸಂಭಾಷಣೆಕಾರರೂ ಆಗಿರುವ ಗಿರೀಶ್ ಕಾಸರವಳ್ಳಿಯವರೊಂದಿಗೆ ನಡೆಸಿದ ಸಣ್ಣ ಸಂದರ್ಶನ ಇಲ್ಲಿದೆ.




ಕಾಸರವಳ್ಳಿಯವರಿಗೆ ಸಿನೆಮಾದ ನಂಟು ಹೇಗೆ ಆರಂಭವಾಗಿದ್ದು..? ನೀವು ಯಾಕೆ ಸಿನೆಮಾ ಮಾಡ್ತೀರಿ..?
ಸಿನೆಮಾ ನನ್ನ ವೃತ್ತಿ. ‘ಒಬ್ಬ ಟೀಚರ್‌ಗೆ ನೀನು ಯಾಕೆ ಕ್ಲಾಸಿಗೆ ಹೋಗಿ ಪಾಠ ಮಾಡ್ತೀಯಾ ?’ ಅಂತ ಕೇಳಿದ ಹಾಗಾಯ್ತು (ನಗೆ). ರಂಗದ ವಾತಾವರಣ ನಮ್ಮ ಮನೆಯಲ್ಲಿತ್ತು. ಮಣಿಪಾಲದಲ್ಲಿ ಬಿ.ಫಾರ್ಮ್ ಪದವಿ ಮುಗಿಸಿದ ಮೇಲೆ, ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸಿನೆಮಾದಲ್ಲಿ ಸಹಜವಾಗಿ ಆಸಕ್ತಿ ಹೆಚ್ಚಾಯ್ತು. ಮೂರು ವರ್ಷಗಳ ಕಾಲ ಅಲ್ಲಿ ಓದಿದ ಮೇಲೆ ಒಂದು ರೀತಿಯಲ್ಲಿ, ಸಿನೆಮಾದ ಬಗ್ಗೆ ವಿಶೇಷವಾದ ಕಲ್ಪನೆ ಬರಲಾರಂಭಿಸಿತು. ಸಿನೆಮಾಕ್ಕೆ ಬಂದೆ. ಸಿನೆಮಾವೇ ನಾನು ನನ್ನಲ್ಲಿರುವ ಯೋಚನೆಗಳನ್ನು ಹೇಳಿಕೊಳ್ಳುವುದಕ್ಕೆ ಮಾಧ್ಯಮ ಅಂತನ್ನಿಸಿತು. ಹಾಗಾಗಿ ಸಿನೆಮಾ ಮಾಡ್ತಿದ್ದೇನೆ.

ಸಿನೆಮಾಗಳ ಕಥೆಗಳಿಗೆ ಯಾವುದು ಮೂಲ ಅಂತ ಅನ್ನಿಸುತ್ತದೆ ನಿಮಗೆ..?
ಸಿನೆಮಾ ಕಥೆಗಳಿಗೆ ಎಲ್ಲವೂ ಮೂಲ. ಬದುಕು ಮತ್ತು ಸುತ್ತಲಿನ ಎಲ್ಲಾ ವಿದ್ಯಾಮಾನಗಳೆಲ್ಲವೂ ಕಥೆಗಳಿಗೆ ಮೂಲವಾಗುತ್ತದೆ. ನನ್ನ ಯಾವ ಸಿನೆಮಾಗಳು ಸುತ್ತಲಿನ ವಿದ್ಯಮಾನಗಳಿಲ್ಲದೇ ವ್ಯಕ್ತಿಯ ಬದುಕು ಮಾತ್ರ ಆಗಲಿಲ್ಲ. ಮನುಷ್ಯ ಮತ್ತು ಅವನ ಎಲ್ಲಾ ನಿರ್ಧಾರಗಳು, ಅವನ ಪರಿಸದಲ್ಲಿ ನಡೆದ/ನಡೆಯುವ ವಿದ್ಯಮಾನಗಳಿಂದ ಪ್ರೇರಿತವಾಗಿರುತ್ತದೆ. ಹಾಗಾಗಿ ಸಿನೆಮಾಗಳಿಗೆ ಎಲ್ಲವೂ ಮೂಲವಾಗುತ್ತದೆ. 

ನಿವು ಸಿನೆಮಾಗಳಿಗೆ ಬಳಸಿಕೊಳ್ಳುವ ವಸ್ತು ಅಥವಾ ವಿಷಯ ಯಾವುದೆಂದು ಅನ್ನಿಸುತ್ತದೆ ನಿಮಗೆ..?
ಇದನ್ನು ನನಗಿಂತ ಚೆನ್ನಾಗಿ ಒಬ್ಬ ಒಳ್ಳೆಯ ವಿಮರ್ಶಕ ಹೇಳಬಲ್ಲ. ನನಗಿಂತ ಚೆನ್ನಾಗಿ ಒಬ್ಬ ಪ್ರೇಕ್ಷಕ ಹೇಳಬಲ್ಲ. ಪ್ರತಿಕ್ರಿಯಿಸಬೇಕು ಎನ್ನುವ ವಸ್ತುವನ್ನು ನಾನು ಆಯ್ದುಕೊಳ್ಳುತ್ತೇನೆ. ಆ ಪ್ರತಿಕ್ರಿಯಿಸುತ್ತಿರುವ ವಸ್ತುಗಳ ಬಗ್ಗೆ ಒಂದು ಸೂತ್ರ ಇರುತ್ತದಾ ಎನ್ನುವುದನ್ನು ನಾನು ಹುಡುಕಿ ಹೋಗಲ್ಲ. ಹುಡಿಕಿಕೊಂಡು ಹೋದರೇ, ಆ ಸೂತ್ರಕ್ಕೆ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಹಾಗಾಗಿ ಈ ಪ್ರಶ್ನೆಗೆ ಒಬ್ಬ ವಿಮರ್ಶಕ ನನಗಿಂತ ಬಹಳ ಚೆನ್ನಾಗಿ ಹೇಳಬಲ್ಲ.

ಸಿನೆಮಾಗಳು ಬದುಕಿನ ವಾಸ್ತವವೋ, ವಾಸ್ತವವನ್ನು ಒಳಗೊಂಡಿರುವ ಕಲ್ಪನೆಯೋ..? ಏನ್ ಅನ್ಸುತ್ತೆ..?
ವಾಸ್ತವ ಅಂದ್ರೇ ಏನು ಎನ್ನುವ ಪ್ರಶ್ನೆ ನಾವೀಗ ಕೇಳ್ಬೇಕು. ವಾಸ್ತವ ಅಂದ್ರೆ ಏನು..? ಯಾಕಂದ್ರೇ, ತುಂಬಾ ಜನರಿಗೆ ವಾಸ್ತವ ಅಂದ್ರೇ, ಕಣ್ಣಿಗೆ ಕಾಣುವ ಮೇಲ್ಪದರ ಅಂತ ತಿಳಿದುಕೊಂಡಿರುತ್ತಾರೆ. ಆದರೇ, ವಾಸ್ತವ ಅಂದ್ರೇ ಮೇಲ್ಪದರ ಮಾತ್ರವಲ್ಲ. ಅದರ ಒಳಗಡೆಯೂ ಇದೆ.  ಆಳಕ್ಕೆ ಹೋಗಬೇಕು. ನನ್ನ ಸಿನೆಮಾಗಳಲ್ಲಿ ವಾಸ್ತವವನ್ನೇ ತೋರಿಸುವ ಪ್ರಯತ್ನ ಮಾಡುತ್ತೇನೆ. ವಾಸ್ತವನ್ನೇ ತೋರಿಸಿದ್ದೇನೆ ಕೂಡ. ಸಿನೆಮಾಗಳಲ್ಲಿ ಕಲ್ಪನೆಯೂ ಇರುತ್ತದೆ. ಆದರೇ, ವಾಸ್ತವಕ್ಕಿಂತ ಮೇಲಾಗಿರುವುದಿಲ್ಲ.

ನೀವು ಮಾಡಿದ ಸಿನೆಮಾಗಳೆಲ್ಲವೂ ಕೂಡ ಆಯಾಯ ಕಾಲಘಟ್ಟದ ದಾಖಲೀಕರಣ ಅಂತ ಅನ್ನಿಸುತ್ತದಾ ನಿಮಗೆ..?
ಖಂಡಿತ ಅನ್ಸುತ್ತೆ. ಅಂತ ತಿಳಿದುಕೊಂಡಿದ್ದೇನೆ ನಾನು. ಕಥೆಗಳು ಆಯಾಯ ಕಾಲಮಾನದ ಸ್ಥಿತಿಗತಿಗಳಿಗನುಗುಣವಾಗಿ ಹುಟ್ಟಿಕೊಳ್ಳುವುದರಿಂದ, ನನ್ನ ಸಿನೆಮಾಗಳೆಲ್ಲವೂ ಆಯಾಯ ಕಾಲದ ಸ್ಥಿತಿಗತಿಗಳ ದಾಖಲೀಕರಣ ಅಂತ ಅನ್ನಿಸುತ್ತದೆ.

ಸಿನೆಮಾಗಳು ಹೇಗಿರಬೇಕು ಸರ್..?
ಸಿನೆಮಾಗಳು ಹೇಗಿರಬೇಕು ಅಂದ್ರೇ, ಸಿನೆಮಾದ ಥರ ಇರಬೇಕು ಅಷ್ಟೇ. ಸಿನೆಮಾ ಅಂದ್ರೇ, ಏನೋ ಸಣ್ಣ ವಿಚಾರ ಅಲ್ಲ. ಸಿನೆಮಾ ಅಂದ್ರೆ ಒಳನೋಟ. ಸಿನೆಮಾಗಳು ಹಾಗೆಯೇ ಅರ್ಥ ಪಡೆಯಬೇಕು.

ಸಿನೆಮಾ ರಂಗದಲ್ಲಿ ನಿಮ್ಮನ್ನು ನೀವೇ ಹೇಗೆ ಗುರುತಿಸಿಕೊಳ್ಳುವುದಕ್ಕೆ ಇಷ್ಟಪಡ್ತೀರಿ..?
ಕಥೆಯನ್ನು ಸಮಕಾಲೀನಕ್ಕೆ ತರುವಲ್ಲಿ ನಾನು ತುಂಬಾ ಪ್ರಯತ್ನ ಪಡುತ್ತೇನೆ. ನಾನು ಸುಮ್ನೆ ಸಿನೆಮಾ ಮಾಡಲ್ಲ. ನನ್ನೊಳಗಿನ ಏನನ್ನೋ ಹೇಳುವುದಕ್ಕೆ ಸಿನೆಮಾ ಮಾಡುತ್ತೇನೆ. ಭಾಷೆಯನ್ನು ನಾನು ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತೇನೆ ಹಾಗೂ ಕಥೆಗೆ ಬೇಕಾಗುವ ಎಲ್ಲಾ ಅಂಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತೇನೆ ಅಂತ ಅನ್ನಿಸುತ್ತದೆ ನನಗೆ. ಹಾಗಾಗಿ ನಾನೊಬ್ಬ ಕ್ರಿಯೇಟಿವ್ ಆರ್ಟಿಸ್ಟ್ ಅಂತ ತಿಳಿದುಕೊಳ್ಳುತ್ತೇನೆ.

ಸಿನೆಮಾ ಮಾಡುವುದಕ್ಕೆ ಮುಂದಾಗುವ ಹೊಸಬರಿಗೆ ಹಿರಿಯ ನಿರ್ದೇಶಕರಾಗಿ ಏನ್ ಹೇಳ್ತೀರಿ..?
ಸಿನೆಮಾ ಮಾಡಿ ಅಂತ ಹೇಳ್ತೇನೆ. ನಂಬಿಕೆಗಳಿಗೆ ನಿಷ್ಠೆಯಿಂದ ಇದ್ದು ಕೆಲಸ ಮಾಡಿ ಅಂತ ಹೇಳ್ತೇನೆ ಅಷ್ಟೇ. 
------------------------------------------
-ಶ್ರೀರಾಜ್ ವಕ್ವಾಡಿ   





Saturday, April 18, 2020

ಚಿನ್ನ ಕೆಲಸಗಾರರ ಬದುಕು ದುರ್ಭರ | ಇದ್ದ ಚೂರುಪಾರು ಚಿನ್ನವನ್ನೂ ಮಾರಿ ಊಟ ಮಾಡುವ ದುಸ್ಥಿತಿ..!


ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವಕ್ಕೆ ವಿಶ್ವವೇ ತತ್ತರಿಸಿ ಹೋಗಿದೆ. ದಿನಗೂಲಿ ಕೆಲಸಗಾರರು, ಬಡವರ ಸ್ಥಿತಿಯಂತೂ ಶೋಚನೀಯ. ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿರುವ ಕಾರಣದಿಂದಾಗಿ ಎಷ್ಟೋ ಮದುವೆ, ಉಪನಯನ ಇತ್ಯಾದಿ ಶುಭ ಸಮಾರಂಭಗಳು ಮುಂದೂಡುವುದರ ಜೊತೆಗೆ ಇಂತಹ ಶುಭ ಸಮಾರಂಭವನ್ನೇ ಆಧಾರವಾಗಿಟ್ಟುಕೊಂಡು ಬದುಕು ಸಾಗಿಸುತ್ತಿರುವ ಚಿನ್ನ ಮತ್ತು ಬೆಳ್ಳಿ ಕೆಲಸಗಾರರನ್ನು ಪದಶಃ ಬೀದಿಗೆ ತಳ್ಳಿದೆ.

ಲಾಕ್ಡೌನ್ ಬಿಗಿ ಕಟ್ಟುನಿಟ್ಟಿನ ಆದೇಶದಿಂದಾಗಿ ಇಡೀ ದೇಶದಾದ್ಯಂತ ಅದೆಷ್ಟೋ ಶುಭ ಸಮಾರಂಭಗಳು ನಿಂತಿವೆ. ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ ಮೊದಲಾದ ಕಾರ್ಯಕಗ್ರಮಗಳಿಗೆ ಸರ್ಕಾರ ನಿಷೇದ ಹೇರಿದೆ. ಇದರಿಂದಾಗಿ ಇಂತಹ ಕಾರ್ಯಕ್ರಮಗಳನ್ನೇ ನಂಬಿ ಬದುಕುತ್ತಿರುವ ಚಿನ್ನ ಕೆಲಸಗಾರರು ಖಾಲಿ ಕೈಯಲ್ಲಿ ಕುಳಿತುಕೊಳ್ಳುವಂತಾಗಿದೆ. ಈ ನಡುವೆ ‘ಇದ್ದಬದ್ದ ಚೂರುಪಾರು ಚಿನ್ನವನ್ನೂ ಮಾರಿ ಊಟ ಮಾಡುವ ಸ್ಥಿತಿ ಬಂದಿದೆ’ ಎಂದು ಕಣ್ಣೀರಿಡುತ್ತಾರೆ ಒಬ್ಬರು ಹೆಸರು ಹೇಳಲಿಚ್ಛಿಸದ ಚಿನ್ನ ಕೆಲಸಗಾರರು.

ಚಿನ್ನದ ಕೆಲಸವನ್ನೇ ವೃತ್ತಿಯಾಗಿಸಿಕೊಂಡವರು ಉಡುಪಿ ಜಿಲ್ಲಾದ್ಯಂತ ಸಾವಿರಾರು ಮಂದಿ ಇದ್ದಾರೆ. ಕುಂದಾಪುರ ತಾಲೂಕು ಒಂದರಲ್ಲೇ ಸದಸ್ಯತ್ವ ಹೊಂದಿದವರು ಮತ್ತು ಸದಸ್ಯತ್ವ ಹೊಂದದವರನ್ನೊಳಗೊಂಡು 5೦೦ಕ್ಕೂ ಹೆಚ್ಚು ಮಂದಿ ಚಿನ್ನ,  ಬೆಳ್ಳಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.


ಚಿನ್ನದ ಕೆಲಸ ಉಳಿದ ವೃತ್ತಿಯಂತಲ್ಲ. ವರ್ಷದಲ್ಲಿ 6-7 ತಿಂಗಳುಗಳಷ್ಟೇ ಕೆಲಸ. ಇನ್ನು ಉಳಿದ 5-6 ತಿಂಗಳುಗಳು ಖಾಲಿ ಕೂರುವ ಪರಿಸ್ಥಿತಿ. ಮದುವೆ ಇತ್ಯಾದಿ ಶುಭ ಸಮಾರಂಭಗಳ ಸೀಸನ್‌ನಲ್ಲಿ ಶಕ್ತಿ ಮೀರಿ ದುಡಿಯಬೇಕು. ಈ ಸೀಸನ್‌ಗಳಲ್ಲಿ ದುಡಿದದ್ದನ್ನೇ ವರ್ಷಪೂರ್ತಿ ಉಳಿಸಿಕೊಂಡು ಕುಟುಂಬ ನಿರ್ವಹಣೆ ಮಾಡಬೇಕು. ಇವತ್ತು ಈ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇದೆ. ದೊಡ್ಡ ದೊಡ್ಡ ಆಭರಣ ಮಳಿಗೆಗಳ ಆಫರ್ ಧೋರಣೆಗಳು ಚಿನ್ನ ಕೆಲಸಗಾರರ ಹೊಟ್ಟೆ ಮೇಲೆ ಹೊಡೆದದ್ದಂತೂ ಅಕ್ಷರಶಃ ಸತ್ಯ. ದೊಡ್ಡ ಚಿನ್ನಾಭರಣ ಮಳಿಗೆಗಳಿಂದ ಕೆಲಸಗಾರರಿಗೆ ನೇರ ಕತ್ತರಿ ಬಿದ್ದಿದೆ. ಒಂದು ಮದುವೆ ಸೀಸನ್‌ನಲ್ಲಿ 3-4 ಕೆಲಸಗಳು ಸಿಗುವುದೇ ಕಷ್ಟ ಎನ್ನುತ್ತಾರೆ ಕುಂದಾಪುರ ತಾಲೂಕಿನ ವ್ಯಾಪ್ತಿಯೊಳಗೆ ಬರುವ ಚಿನ್ನ ಕೆಲಸಗಾರರು.


‘ಚಿನ್ನ, ಬೆಳ್ಳಿ ಕೆಲಸಗಾರರ ಸಂಘದಿಂದ, ಕೆಲಸಗಾರರ ಪರವಾಗಿ, ಕೆಲಸಗಾರರ ಬದುಕಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಇದಕ್ಕಾಗಿ ದೊಡ್ಡ ಹೋರಾಟವನ್ನೇ ಮಾಡಲಾಗಿದೆ. ಒಬ್ಬ ಕೆಲಸಗಾರನಿಂದ 5-6 ಮಂದಿ ಇರುವ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ. ಸರ್ಕಾರ ಚಿನ್ನ, ಬೆಳ್ಳಿ ಕೆಲಸಗಾರರ ಬಗ್ಗೆಯೂ ಗಮನ ಹರಿಸಬೇಕು. ಸಂಘದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ' ಎನ್ನುತ್ತಾರೆ ಕುಂದಾಪುರ ತಾಲೂಕಿನ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಗೌರವಾಧ್ಯಕ್ಷ ನವಮಿ ಚಂದ್ರಶೇಖರ ಆಚಾರ್ಯ.  

ಅನೇಕರು ಸಾಲ ಮಾಡಿ ಬದುಕುತ್ತಿದ್ದಾರೆ. ಈಗ ಸಂಪಾದನೆಯೂ ಇಲ್ಲದಂತಾಗಿದೆ. ಸಾಲ ಕೊಟ್ಟವರು ಬೆನ್ನಿಗೆ ಬಿದ್ದು ಕೇಳುವುದು ಕಡಿಮೆಯಾಗಿಲ್ಲ ಎಂದು ಅವರು ಬೇಸರ ಹೇಳಿಕೊಳ್ಳುತ್ತಾರೆ.



ಚಿನ್ನ, ಬೆಳ್ಳಿ ಕೆಲಸಗಾರರು ನಯಾಪೈಸೆ ದುಡಿಮೆಯಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ.  ಕುಂದಾಪುರ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಪರವಾಗಿ, ಸಂಘಕ್ಕೆ ಒಳಪಡುವ, ಹೊತ್ತಿನ ಊಟಕ್ಕೂ ತುಂಬಾ ಕಷ್ಟದಲ್ಲಿರುವ ಚಿನ್ನ, ಬೆಳ್ಳಿ ಕೆಲಸಗಾರರನ್ನು ಗುರುತಿಸಿ ಸುಮಾರು 700 ರೂಪಾಯಿ ಮೌಲ್ಯದಷ್ಟು ದಿನಸಿ ಕಿಟ್‌ಗಳನ್ನು ನೀಡುವುದರ ಮೂಲಕ ತಕ್ಕ ಮಟ್ಟಿನ ಪ್ರಯತ್ನ ಮಾಡುತ್ತಿದ್ದೇವೆ. ಈ ಸಮಸ್ಯೆಯನ್ನು ಜಿಲ್ಲೆಯ ಸಂಘದ ಅಧ್ಯಕ್ಷರ ಗಮನಕ್ಕೆ ತರುವ ಮೂಲಕ ಮುಂದಿನ ಕ್ರಮಕೈಗೊಳ್ಳುತ್ತೇವೆ.
-ಬಿ. ರಾಘವೇಂದ್ರ ಆಚಾರ್ಯ,
ಅಧ್ಯಕ್ಷರು, ಚಿನ್ನ, ಬೆಳ್ಳಿ ಕೆಲಸಗಾರರ ಸಂಘ, ಕುಂದಾಪುರ  

ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರೆಡಿಮೇಡ್ ಹಾವಳಿಯಿಂದ ಖಾಯಾಂ ಗ್ರಾಹಕರೂ ಕೂಡ ಕೆಲಸ ಕೊಡುತ್ತಿಲ್ಲ. ಮದುವೆ ಸೀಸನ್‌ಗಳಲ್ಲಿಯೂ ಕೆಲಸ ತೀರಾ ಕಡಿಮೆಯಾಗಿದೆ. ಈ ವರ್ಷವಂತೂ ಏನೇನೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶಕ್ಕೆ ದೇಶವೇ ಕೊರೋನಾದಿಂದಾಗಿ ಲಾಕ್ಡೌನ್ ಆಗಿದೆ. ಕೆಲಸವಿಲ್ಲದೆ ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ.
-ಹೆಚ್. ಆರ್ ಶ್ರೀನಿವಾಸ ಆಚಾರ್ಯ, 'ಮಾಂಗಲ್ಯ' ವಕ್ವಾಡಿ
ಸ್ಥಳೀಯ ಚಿನ್ನದ ಕೆಲಸಗಾರರು.

--------------------------------
-ಶ್ರೀರಾಜ್ ವಕ್ವಾಡಿ 

Friday, April 17, 2020

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಇರಲು ಭಾರತಕ್ಕೆ ಸಾಧ್ಯವೇ..?!


ವಿಶ್ವದಾದ್ಯಂತ ಬಹು ಬಂಡವಾಳ ಹೂಡಿಕೆಯನ್ನು ಹೂಡಿ, ಉತ್ಪನ್ನಗಳಿಂದಲೇ ಇಡೀ ವಿಶ್ವವನ್ನೇ ಆಳುತ್ತಿರುವ ದೇಶ ಚೀನಾ. ಬಹುತೇಕ ಎಲ್ಲಾ ದೇಶಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಆಮದು ರಫ್ತಿನ ವಹಿವಾಟುಗಳನ್ನು ಹೊಂದಿದ ದೇಶವನ್ನು ಅಷ್ಟು ಸುಲಭದಲ್ಲಿ ಬಹಿಷ್ಕರಿಸುವುದಕ್ಕಂತೂ ಸದ್ಯದ ಮಟ್ಟಿಗೆ ಭಾರತಕ್ಕೆ ಸಾಧ್ಯವಿಲ್ಲ.
‘ಮೇಕ್ ಇನ್ ಇಂಡಿಯಾ’ ಅಂತ ಹೇಳುತ್ತಿದ್ದವರೇ, ಗುಜರಾತ್‌ನ ವಡೋದರಾ ನಗರದ 100 ಕಿ.ಮೀ ಅಂತರದ ಆಗ್ನೇಯ ಭಾಗದಲ್ಲಿರುವ ನರ್ಮದಾ ಅಣೆಕಟ್ಟಿಗೆ ಎದುರಾಗಿ ನಿರ್ಮಿಸಲಾದ ಸರದಾರ್ ವಲ್ಲಭಭಾಯ್ ಪಟೇಲರ ‘ಏಕತಾ ಪ್ರತಿಮೆ’ಗೆ ಚೀನಾದ ನಾಚಾಂಗ್ ಮೂಲದ ಜಿಯಾಂಗ್ಸಿ ಟೋಕಿನ್ ಕಂಪೆನಿಯ ಅಂಗಸಂಸ್ಥೆ, ಲಾರ್ಸೆನ್ ಮತ್ತು ಟರ್ಬೋ ಕಂಪೆನಿ ಟಿಕ್ಯೂ ಆರ್ಟ್ ಫೌಂಡ್ರಿ ಜತೆಗೆ ಒಪ್ಪಂದ ಮಾಡಿಕೊಂಡು ತಯಾರಿಸಿದ್ದನ್ನು ನಾವು ನೀವೆಲ್ಲರೂ ಕಂಡಿದ್ದೇವೆ. ಅದಕ್ಕೆ ವ್ಯಾಪಕ ಟೀಕೆಯೂ ಕೇಳಿಬಂತು.

ಅದಿರಲಿ, ಭಾರತದಲ್ಲಿ ಚೀನಾದ ಉತ್ಪನ್ನಗಳ ಬಳಕೆ ಇಲ್ಲದೇ ಬದುಕು ಮುನ್ನಡೆಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ವ್ಯಾಪಕವಾಗಿ ಚೀನಾದ ಸರಕುಗಳು ನಮ್ಮನ್ನು ಸುತ್ತುವರಿದುಕೊಂಡಿವೆ. ‘ಮೇಕ್ ಇನ್ ಇಂಡಿಯಾ’ ಎಷ್ಟೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಂಡುಕೊಂಡರೂ, ಸದ್ಯದ ಮಟ್ಟಿಗೆ ಭಾರತದಲ್ಲಿ ನಡೆಯುತ್ತಿರುವುದು ಮತ್ತು ಮಾಡಲಾಗುತ್ತಿರುವುದು ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಜೋಡಣೆ ಮಾತ್ರ. ಸ್ಮಾರ್ಟ್ ಫೋನ್ ತಯಾರಿಸಲು ಅಗತ್ಯವಿರುವ ಚಿಪ್, ಪ್ರೊಸೆಸರ್, ಡಿಸ್‌ಪ್ಲೆ, ಬ್ಯಾಟರಿ, ಮೆಮೋರಿ ಕಾರ್ಡ್ ಇತ್ಯಾದಿಗಳು ಚೀನಾದಲ್ಲಿಯೇ ಸಿದ್ಧಗೊಳ್ಳುತ್ತವೆ. ಇಡೀ ಪ್ರಪಂಚಕ್ಕೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅತ್ಯಂತ ಕಡಿಮೆ ದರದಲ್ಲಿ ಚೀನಾ ರಫ್ತು ಮಾಡುತ್ತಿದೆ.
ಸೋಲಾರ್ ಪ್ಯಾನಲ್‌ಗಳು, ಮಾಹಿತಿ ತಂತ್ರಜ್ಙಾನಗಳಲ್ಲಿ ಬಳಕೆಯಾಗುತ್ತಿರುವ ಉಪಕರಣಗಳು, ಮಕ್ಕಳ ಆಟಿಕೆಗಳು, ಸಿದ್ಧ ಪ್ರದರ್ಶನ ವಸ್ತುಗಳಿಗಾಗಿ ಭಾರತ ಚೀನಾವನ್ನೇ ಅವಲಂಭಿಸಿದೆ. ಭಾರತದಿಂದ ಚೀನಾಗೆ, ಚೀನಾದಿಂದ ಭಾರತಕ್ಕೆ ಆಗುವ ಆಮದು, ರಫ್ತು ವಹಿವಾಟಿನಲ್ಲಿ ಬಹಳ ದೊಡ್ಡ ವ್ಯತ್ಯಾಸವಿದೆ. ಭಾರತ ಎದುರಿಸುತ್ತಿರುವ ಈ ವಹಿವಾಟಿನ ಕೊರತೆಯ ಮೌಲ್ಯ ಅಂದಾಜು 3.54 ಲಕ್ಷ ಕೋಟಿ ಎಂದು ರಾಷ್ಟ್ರೀಯ ಮಟ್ಟದ ವರದಿಯೊಂದು ಹೇಳುತ್ತದೆ. ಆಮದುವಿನ ಪ್ರಮಾಣವೇ ರಫ್ತಿಗಿಂತ ನಾಲ್ಕೈದು ಪಟ್ಟು ಹೆಚ್ಚಿದೆಯಂತೆ.
ಮಾತ್ರವಲ್ಲ, ಅದು ಎಂತದ್ದೇ ಬ್ರಾಂಡ್ ಆಗಲಿ, ಅದರ ತದ್ರೂಪ ಮಾಲ್‌ಗಳನ್ನು ತಯಾರಿಸಿ ರಫ್ತು ಮಾಡುವಲ್ಲಿ ಚೀನಾ ಎತ್ತಿದ ಕೈ. ಭಾರತದ ಪ್ರಮುಖ ನಗರ ಪ್ರದೇಶಗಳಲ್ಲಿ ಚೀನಾ ಮೂಲದ ಉತ್ಪನ್ನಗಳಿಗಂತಲೇ, ಪ್ರತ್ಯೇಕ ಮಾರುಕಟ್ಟೆಗಳೇ ಇವೆ. ಅಲ್ಲಿ ಬೇರೆಲ್ಲೆಡೆಗಳಿಗಿಂತ ಹೆಚ್ಚಿನ ವಹಿವಾಟು ನಡೆಯುತ್ತಿದೆ ಎನ್ನುವುದು ಅಪ್ಪಟ ಸತ್ಯ.
ಇಂದು, ಚೀನಾದಿಂದ ಬರೋಬ್ಬರಿ 6.5 ಲಕ್ಷ ಕೊರೋನಾ ಸೋಂಕಿನ ಪರೀಕ್ಷೆ ಮಾಡುವ ಕಿಟ್‌ಗಳನ್ನು ಭಾರತ ಸರ್ಕಾರ ಆಮದು ಮಾಡಿಕೊಂಡಿದೆ. ಭಾರತ ಎಷ್ಟು ಚೀನಾವನ್ನು ಅವಲಂಭಿಸಿದೆ ಎನ್ನುವುದು ಇದರಲ್ಲೇ ಸ್ಪಷ್ಟವಾಗುತ್ತದೆ.


ಇತ್ತೀಚಿನ ದಿನಗಳಲ್ಲಿ ‘ಚೀನಾ ಉತ್ಪನ್ನಗಳನ್ನು’ ಧಿಕ್ಕರಿಸಬೇಕು ಎಂಬ ಮಾತುಗಳು ಗಟ್ಟಿಯಾಗಿ ಕೇಳಿಬರುತ್ತಿದೆ. ಆದರೇ, ಅದು ಹೇಗೆ ಎನ್ನುವ ಪ್ರಶ್ನೆಯೊಂದು ಕಾಡುತ್ತಿದೆ. ಒಂದು ವೇಳೆ ಚೀನಾ ಉತ್ಪನ್ನಗಳನ್ನು ನಾವು ಬಹಿಷ್ಕರಿಸುವ ನಿರ್ಧಾರ ಮಾಡುವುದಾದರೇ, ಬಹುಶಃ ಎಲ್ಲವನ್ನೂ ತೊರೆಯುವುದಕ್ಕೆ ಸಿದ್ಧರಿರಬೇಕು ಅಂತನ್ನಿಸುತ್ತಿದೆ. ಮಕ್ಕಳ ಆಟಿಕೆಗಳಿಂದ ಹಿಡಿದು, ಬಹುತೇಕ ಎಲ್ಲಾ ನಿತ್ಯ ಬಳಕೆಯ ವಸ್ತುಗಳಿಗೆ ನಾವು ಚೀನಾವನ್ನು ಅವಲಂಭಿಸಿದ್ದೇವೆ. ಹೀಗಿರುವಾಗ, ಹೇಳಿದಷ್ಟು ಸುಲಭದಲ್ಲಂತೂ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಸಾಧ್ಯವಿಲ್ಲ.
ದೇಶದಲ್ಲಿ ಉತ್ಪನ್ನದ ಮಟ್ಟ ಹೆಚ್ಚಾಗಬೇಕು. ಆಗ ಮಾತ್ರ ಚೀನಾದ ಉತ್ಪನ್ನವನ್ನು ಬಹಿಷ್ಕರಿಸುವುದಕ್ಕೆ ಗಣನೀಯ ಪ್ರಮಾಣದಲ್ಲಿ ಸಾಧ್ಯವಾಗಬಗಹುದು. ಸದ್ಯದ ಮಟ್ಟಿಗಂತೂ ಭಾರತಕ್ಕೆ ಚೀನಾವನ್ನು ಅವಲಂಭಿಸದೇ ಇರಲು ಸಾಧ್ಯವಿಲ್ಲ ಎನ್ನುವುದು ವಾಸ್ತವಾಂಶ. ಅದನ್ನು ಸ್ವತಃ ತಜ್ಙರೇ ಹೇಳುತ್ತಾರೆ.
------------------------------------
-ಶ್ರೀರಾಜ್ ವಕ್ವಾಡಿ

Thursday, April 16, 2020

ಯಾಕೆ ದೇವರನಾಡು ಮಾದರಿಯಾಗಬಾರದು..?!


ಭಾರತದಲ್ಲಿ ಸದ್ಯ ಕೊರೋನಾ  ಸೋಂಕಿತರ ಪಟ್ಟಿ ಹನ್ನೊಂದು ಸಾವಿರದ ಗಡಿ ದಾಟಿದೆ. ಇಷ್ಟೆಲ್ಲಾ ಬಿಗಿಯಾಗಿ ಲೌಕ್ಡೌನ್ ಬಿಗಿಗೊಳಿಸಿದ್ದರೂ ದೇಶದಲ್ಲಿ, ರಾಜ್ಯದಲ್ಲಿ ಸೋಂಕಿತರ ಪಟ್ಟಿ ಇಳಿಮುಖವಾದಂತೆ ಕಾಣಿಸುತ್ತಿಲ್ಲ. ವಯಸ್ಸು, ಜಾತಿ, ಧರ್ಮ, ಲಿಂಗ ಯಾವುದನ್ನೂ ನೋಡದೇ ಸೋಂಕು ಹಬ್ಬುತ್ತಿದೆ. ಪ್ರಪಂಪಚದ ಬೇರೆ ಬೇರೆ ದೇಶಗಳಲ್ಲಿ ಪಾಲಿಸುತ್ತಿರುವ ನಿಯಮಗಳನ್ನು ಅವಲೋಕಿಸಿ ಭಾರತ ಸರ್ಕಾರ ಇಲ್ಲಿನ ಪರಿಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳುತ್ತಿದೆ.
21 ದಿನಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರೂ ಪಾಸಿಟಿವ್ ಕೇಸ್ ಮತ್ತೆ ಮತ್ತೆ ಹೆಚ್ಚುತ್ತಿರುವ ಕಾರಣದಿಂದಾಗಿ ಲೌಕ್ಡೌನನ್ನು ಸರ್ಕಾರ ವಿಸ್ತರಿಸಿದೆ.
ಒಂದು ತಿಂಗಳ ಹಿಂದೆ ರಾಷ್ಟ್ರದ ಅತಿ ಹೆಚ್ಚು ಸೋಂಕಿತರು ಹೊಂದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕೇರಳ, ಕೊರೋನಾ ಹರಡುವಿಕೆಯ ನಿಯಂತ್ರಣ ಮಾಡುವ ಬಿಗಿ ಕ್ರಮಗಳನ್ನು ಪಾಲನೆಗೆ ತರುವ  ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಕೇರಳದಲ್ಲಿ, ಕೊರೋನಾ ವೈರಸ್ ತಡೆಗಟ್ಟುವಿಕೆಗೆ ತಂದ ಕ್ರಮಗಳನ್ನು ಅಮೇರಿಕಾ ಮೂಲದ ‘ದಿ ವಾಸಿಂಗ್ಟನ್ ಪೋಸ್ಟ್’ ಎಂಬ ಸುದ್ದಿ ಸಂಸ್ಥೆಯೂ ಕೂಡ ಹಾಡಿ ಹೊಗಳಿದೆ.

  https://www.washingtonpost.com/world/aggressive-testing-contact-tracing-cooked-meals-how-the-indian-state-of-kerala-flattened-its-coronavirus-curve/2020/04/10/3352e470-783e-11ea-a311-adb1344719a9_story.html
(ಪೂರ್ಣ ಸುದ್ದಿಗೆ ಮೇಲಿರುವ ಲಿಂಕ್ ಬಳಸಬಹುದು)

ಈ ಹಿಂದೆಯೂ ಕೂಡ ರಾಜ್ಯದ, ದೇಶದ ಅನೇಕ ರಾಜಕೀಯ ನಾಯಕರುಗಳು, ಕೇರಳದಲ್ಲಿ ಕೈಗೊಂಡ ಕ್ರಮಗಳನ್ನು ಪಾಲಿಸಿ ಎಂದು ರಾಜ್ಯ ಸರ್ಕಾರಗಳಿಗೆ, ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನೂ ಕೊಟ್ಟಿದ್ದರು. ಆದರೇ, ಆ ಬಗ್ಗೆ ಯಾವುದೇ ರಾಜ್ಯ ಸರ್ಕಾರಗಳಾಗಲಿ, ಕೇಂದ್ರ ಸರ್ಕಾರವಾಗಲಿ ಈವರೆಗೆ ಗಮನಹರಿಸಿಲ್ಲ.
ಕೇರಳದಲ್ಲಿಯೇ ಮೊದಲ ಕೊರೋನಾ ಸೋಂಕು ದೃಢಗೊಂಡಿದ್ದು. ಕೇರಳದ ಕಾರಣದಿಂದಾಗಿ ರಾಜ್ಯದ ಮಂಗಳೂರಿಗೆ ಹಾಗೂ ಮಡಿಕೇರಿಗೆ ಅಪಾಯದ ಸಂಭವವೂ ಇದ್ದಿತ್ತು. ಆ ಬಗ್ಗೆ ಕರ್ನಾಟಕ ಸರ್ಕಾರ ತಲೆಗೆ ಕೈವೊತ್ತಿ ಕುಳಿತಿತ್ತು. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲನೆಗೆ ಕರ್ನಾಟಕ ಜಾರಿಗೆ ತರುವುದರ ಮೂಲಕ ಯಶಸ್ವಿಯಾಯಿತು.


ಭಾರತದಲ್ಲಿ ಸೋಂಕು ಹರಡುತ್ತಿದ್ದ ಆರಂಭ ಕಾಲದಲ್ಲಿ ಅತಿ ಹೆಚ್ಚು ಸೋಂಕಿತರ ಸಂಖ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಕೇರಳ ರಾಜ್ಯ, ಇಡೀ ದೇಶದಲ್ಲಿ ಆತಂಕ ಸೃಷ್ಟಿ ಮಾಡಿತ್ತು, ಆದರೇ, ಇಂದು ಅದೇ ಕೇರಳ, ಹೊಸ ಪ್ರಕರಣಗಳ ಪಟ್ಟಿಯಲ್ಲಿ ಗುರುತರವಾದ ಇಳಿಮುಖ ಕಂಡು ಅಚ್ಚರಿ ಹುಟ್ಟಿಸುತ್ತಿದೆ ಎನ್ನುವುದಕ್ಕೆ ಅಲ್ಲಿನ ಸರ್ಕಾರ ಕೈಗೊಂಡ ಕ್ರಮಗಳೇ ಸಾಕ್ಷಿ.
ಕಾಲೋಚಿತ ನಿಯಂತ್ರಣದ ಕ್ರಮಗಳನ್ನು ಕೇರಳ ರಾಜ್ಯ ಸರ್ಕಾರ ಕೈಗೊಂಡಿದ್ದರಿಂದ ಇವತ್ತಿಗೆ ಸೋಂಕು ಹರಡುವುದು ಗಣನೀಯವಾಗಿ ಇಳಿಮುಖ ಕಂಡಿದೆ ಎನ್ನುವುದನ್ನು ಕೇರಳದ ಸೋಂಕಿತರ ಸಂಖ್ಯೆ ಸ್ಪಷ್ಟವಾಗಿ ತಿಳಿಹೇಳುತ್ತದೆ.
ಸೋಂಕು ಲಕ್ಷಣ ಕಾಣಿಸಿಕೊಳ್ಳುವ ಮುನ್ನವೇ ಇಡೀ ಕೇರಳ ರಾಜ್ಯದಲ್ಲಿ 28 ದಿನಗಳ ಕ್ವಾರೆಂಟೈನ್ ಮಾಡಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಅಲ್ಲಿನ ಆಡಳಿತ ಸರ್ಕಾರ ಕೈಗೊಂಡಿತು. ಬಸ್ ಸ್ಟ್ಯಾಂಡ್ಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿಯೂ ನೀರಿನ ಟ್ಯಾಪ್ ಅಳವಡಿಕೆ ಮಾಡಿಸಲಾಯಿತು. ಗಲ್ಲಿ ಗಲ್ಲಿಗಳಲ್ಲಿಯೂ ಸೋಂಕು ನಿಯಂತ್ರಣಕ್ಕೆ ಬೂತ್‌ಗಳನ್ನು ಸ್ಥಾಪಿಸುವುದರ ಮೂಲಕ, ಕ್ಲೀನಿಂಗ್, ಸ್ಕ್ರೀನಿಂಗ್‌ಗಳ ಮೂಲಕ ಸೋಂಕು ಹರಡುವ ಸರಪಳಿಯನ್ನು ತುಂಡರಿಸುವುದಕ್ಕೆ ಕ್ರಮ ಕೈಗೊಂಡಿತು. ಆ ಮೂಲಕ ಕೇರಳ ಸೋಂಕು ತಡೆಗಟ್ಟುವಲ್ಲಿ ಯಶಸ್ವಿಯೂ ಆಯಿತು. ಈಗ ಕೇರಳ, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದರೇ, ಅದಕ್ಕೆ ಅಲ್ಲಿನ ಸರ್ಕಾರ ಕೈಗೊಂಡ ಸಮಯೋಚಿತ ಕ್ರಮಗಳೇ ಕಾರಣ.



‘ನಿಫಾ’  ಸೋಂಕನ್ನು ಎದುರಿಸಿದ ಅನುಭವ
 ‘ನಿಫಾ’ ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗ‌ಳಿಂದ ಮನುಷ್ಯರಿಗೆ  ಹರಡುವ ಸೋಂಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಕಾಯಿಲೆ 1998ರಲ್ಲಿ ಸಿಂಗಾಪುರ ಹಾಗೂ ಮಲೇಶಿಯಾಗಳಲ್ಲಿ ಮೊಟ್ಟ ಮೊದಲಿಗೆ ಪತ್ತೆಯಾಗಿದ್ದು. ಆ ಕಾಲದಲ್ಲಿ, ಹಂದಿ ಮೂಲಕ ಈ ಸೋಂಕು ಹರಡುತ್ತಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ತದನಂತರದಲ್ಲಿ, ಬಾವಲಿಗಳಿಂದ ಈ ಸೋಂಕು ಹರಡುತ್ತದೆ ಎಂಬುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿತು. ಬಾವಲಿಗಳು ತಿಂದ ಹಣ್ಣುಗಳನ್ನು ಮಾನವ ತಿನ್ನುವುದರ ಮೂಲಕವೂ ಈ ಸೋಂಕು ಹರಡುತ್ತದೆ ಎಂದು ಹೇಳಿತು. ತಲೆನೋವು, ಜ್ವರ, ಸುಸ್ತು, ವಾಂತಿ, ಮೆದುಳಿನಲ್ಲಿ ತೊಂದರೆ ಕಾಣಿಸಿಕೊಳ್ಳುವುದು ‘ನಿಫಾ’ದ ಲಕ್ಷಣ.
ಇಂತಹ ಭಯಾನಕ ಸೋಂಕೂ ಕೂಡ ಕೇರಳದಲ್ಲಿ ಸಾವು, ನೋವುಗಳನ್ನು ಉಂಟುಮಾಡಿತ್ತು. 2018ರಲ್ಲಿ ನಿಫಾ ಸೋಂಕು ಕಾಣಿಸಿಕೊಂಡಾಗಲೇ, ಕೇರಳ ಸರ್ಕಾರ, ಐಸೋಲೇಷನ್, ಕ್ವಾರಂಟೈನ್‌ಗಳಂತಹ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿತ್ತು. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸುಮಾರು 40 ರಿಂದ 5೦ ಮಂದಿಗೆ ಈ ಸೋಂಕು ಕಾಣಿಸಿಕೊಂಡು, ಸೋಂಕಿನಿಂದ ಸುಮಾರು 17 ಮಂದಿ ಸಾವಿಗೀಡಾಗಿದ್ದರು. ಆದರೇ, ನಿಫಾ ಸೋಂಕನ್ನು ರಾಜ್ಯದ ಇತರೆ ಯಾವ ಕಡೆಗಳಿಗೂ ಹರಡದಂತೆ ಕೇರಳ ಸರ್ಕಾರ ಯಶಸ್ವಿಯಾಗಿತ್ತು. ‘ನಿಫಾ’ ಕಾಣಿಸಿಕೊಂಡಾಗ ಎದುರಿಸಿದ ಸವಾಲುಗಳು, ಪಾಲಿಸಿದ ನಿಯಮಗಳು.. ಈಗ ಕೊರೋನಾ ಸೋಂಕಿನ ನಿಯಂತ್ರಣ ತಡೆಗಟ್ಟುವಲ್ಲಿಯೂ ಕೇರಳ ಸರ್ಕಾರಕ್ಕೆ ಸಹಾಯವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ.

ಕೇರಳದಲ್ಲಿ ಪಿಣರಾಯಿ ಸರ್ಕಾರ, ಆರೋಗ್ಯ ಇಲಾಖೆ ಕೈಗೊಂಡು ಜಾರಿಗೆ ತಂದು ಯಶಸ್ವಿಯಾದ ಕ್ರಮಗಳನ್ನು ಇಂದು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ.
ದೇಶದಲ್ಲಿ, ಕೇರಳವನ್ನು ನೋಡುವ ದೃಷ್ಟಿ ಬೇರೆಯೇ ಇದೆ. ಅದು ರಾಜಕೀಯ, ಸಿದ್ಧಾಂತದ ಕಾರಣಗಳಿಂದಿರಬಹುದು. ಅವೆಲ್ಲವನ್ನು ಬದಿಗೊತ್ತಿ, ದೇಶದೆಲ್ಲೆಡೆ ಕೇರಳ ಸರ್ಕಾರ ಕೈಗೊಂಡ ಕ್ರಮಗಳನ್ನು ಜಾರಿಗೆ ತರುವಲ್ಲಿ ಪ್ರಯತ್ನಿಸಿದರೇ, ಸೋಂಕು ಇಳಿಮುಖವಾಗಬಹುದು. ಮಾತ್ರವಲ್ಲದೇ, ಆರ್ಥಿಕ ವಿಚಾರಗಳಿಗೂ ಸಂಬಂಧಿಸಿದಂತೆ, ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ತುತ್ಯಾರ್ಹ. ಕೊರೋನಾ ವೈರಸ್‌ನಿಂದಾಗಿ ಅಡಿಮೇಲಾಗಿರುವ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಕೇರಳ ಸರ್ಕಾರ, ಜನರಿಗೆ 20,000 ಕೋಟಿ ಪ್ಯಾಕೇಜ್ ಘೋಷಿಸಿದೆ. ಸಾಲಕ್ಕೆ ನೆರವು ನೀಡಿದೆ, ಮಾಸಾಶನ, ಉಚಿತ ದಿನಸಿ, ಆರೋಗ್ಯ ಸೇವೆಗಳೊಂದಿಗೆ ಪರಿಹಾರ ಮೊತ್ತಗಳು ಒಳಗೊಂಡಿವೆ. ಕೊರೋನಾ ಬಿಕ್ಕಟ್ಟಿನಲ್ಲಿರುವ ಇಡೀ, ಭಾರತಕ್ಕೆ.. ಭಾರತದ್ದೇ ಒಂದು ರಾಜ್ಯವಾಗಿರುವ ದೇವರನಾಡು ಕೇರಳದ ನಡೆ ಈ ಪರಿಸ್ಥಿತಿಯಲ್ಲಾದರೂ ಯಾಕೆ ಮಾದರಿಯಾಗಬಾರದು..?!


-------------------------------------
-ಶ್ರೀರಾಜ್ ವಕ್ವಾಡಿ.