“ಜವಾಬ್ದಾರಿ ಕೊಟ್ಟು ಕೈ ಕಟ್ಟಿದರೇ, ಕೆಲಸ ಮಾಡಲಸಾಧ್ಯ”: ಕಿಶೋರ್ | ಕಾಂಗ್ರೆಸ್ ಸೇರಲು ಪಿಕೆ ನಕಾರ
ಸಮರ್ಥ ನಾಯಕತ್ವದ ಕೊರತೆಯಲ್ಲಿ ದೇಶದಾದ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ‘೨೦೨೪’ರ ತಲೆಬಿಸಿ ಹೆಚ್ಚಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ತನ್ನನ್ನ ತಾನು ಕರೆಸಿಕೊಳ್ಳುವ ಕಾಂಗ್ರೆಸ್ಗೆ ಈಗ ರಾಜಕೀಯ ವಲಯದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಗೊತ್ತಾದ ಹಾಗೆ ಕಾಣಿಸುತ್ತಿದೆ. ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಯಾರೂ ಊಹಿಸಲಾರದಷ್ಟು ದೊಡ್ಡ ಮಟ್ಟಿಗೆ ರಾಜಕೀಯದ ಅಲೆ ಸೃಷ್ಟಿ ಮಾಡಿದ ಬಿಜೆಪಿ ವಿರುದ್ಧ ಚುನಾವಣೆಯನ್ನು ಎದುರಿಸುವ ವಿಚಾರದಲ್ಲಿ ಕಾಂಗ್ರೆಸ್ಗೆ ಮೈನಡುಕ ಆರಂಭವಾಗಿದೆ ಎನ್ನುವುದಂತೂ ಸ್ಪಷ್ಟ. ಸದ್ಯ ಚುನಾವಣಾ ರೂಪುರೇಷೆ ಮಾಡುವ ಭರಾಟೆಯಲ್ಲಿರುವ ಪಕ್ಷ ಚುನಾವಣಾ ವ್ಯೂಹ ರಚನಾಕಾರ ಪ್ರಶಾಂತ್ ಕಿಶೋರ್(ಪಿಕೆ) ಅವರ ತಂತ್ರಗಳೊಂದಿಗೆ ಕಣಕ್ಕಿಳಿಯುವ ಸರ್ವ ಪ್ರಯತ್ನ ಮಾಡಿದೆಯಾದರೂ ಸದ್ಯ ಅದು ವಿಫಲವಾದಂತಾಗಿದೆ.
ಹೌದು, ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದಿಗಿಂತಲೂ ದೊಡ್ಡ ಸವಾಲಿದೆ. ಈ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿರುವುದು ಕಾಂಗ್ರೆಸ್ಗೆ ಅನಿವಾರ್ಯ. ಪಕ್ಷದ ಎಲ್ಲಾ ಸ್ತರಗಳಲ್ಲೂ ಒಗ್ಗಟ್ಟು ಇರಬೇಕಾಗಿದೆ. ಒಂದೆಡೆ ಎಂತದ್ದೇ ಮಾಡಿದರೂ ಬಂಡಾಯ ಏಳುವ ಜಿ೨೩ ಹಿರಿಯ ನಾಯಕರ ಅತೃಪ್ತ ಧ್ವನಿಯಾದರೇ, ಇನ್ನೊಂದೆಡೆ ಅನುಭವದ ಕೊರತೆ ಇರುವ ಕಾಂಗ್ರೆಸ್ ಯುವ ಪಡೆ ಕಾಲಿಟ್ಟಲ್ಲೆಲ್ಲಾ ವೈಫಲ್ಯವನ್ನು ಎದುರಿಸುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ನಂತಹ ದೊಡ್ಡ ಪಕ್ಷಕ್ಕೆ ಸದ್ಯ ನಾಯಕತ್ವವೇ ದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಈ ಸ್ಥಿತಿ ಹೀಗೆ ಮುಂದುವರಿದರೇ, ಪ್ರಜಾಪ್ರಭುತ್ವದ ದೇಶದಲ್ಲಿ ಒಂದು ಸಮರ್ಥ ವಿರೋಧ ಪಕ್ಷವೇ ಇಲ್ಲದಂತಾಗಿ ಸರ್ವಾಧಿಕಾರಕ್ಕೆ ಈ ದೇಶ ತುತ್ತಾಗಲಿದೆಯೇ ಎಂಬ ಆತಂತ ಮೊಳಕೆ ಒಡೆಯುತ್ತಿದೆ.
ಈ ದೇಶಕ್ಕೆ ಪ್ರಬಲವಾದ ‘ವಿರೋಧ ಪಕ್ಷದ ಪುನರುತ್ಥಾನ’ದ ತುರ್ತಿದೆ. ಅದು ಭಾರತದಂತಹ ದೇಶದ ಸಾಮಾಜಿಕ ವ್ಯವಸ್ಥೆಗೂ ಅತ್ಯವಶ್ಯಕವಾಗಿದೆ. ಹೌದು, ಈ ದೇಶವನ್ನು ಕೆಲವು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ಈಗ ನಿಜಕ್ಕೂ ಅತಂತ್ರ ಸ್ಥಿತಿಯಿಂದ ಫಿನಿಕ್ಸ್ ಹಕ್ಕಿಯಂತೆ ಪುಟಿದೇಳುವ ಅಗತ್ಯತೆ ಇದೆ. ತನ್ನ ರಾಜಕೀಯ ಅಜೆಂಡಾದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳದಿದ್ದರೇ, ಕಾಂಗ್ರೆಸ್ಗೆ ಈ ಬದಲಾದ ರಾಜಕೀಯ ವಲಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದೇ ಕಾಣಿಸುತ್ತಿದೆ. ಇದು ಸ್ವತಃ ಕಾಂಗ್ರೆಸ್ಗೂ ಕೂಡ ಗೊತ್ತಿದೆ. ಮುಂದಿನ ಲೋಕಸಭೆಯನ್ನು ಕಾಂಗ್ರೆಸ್ ಈಗ ಟಾರ್ಗೇಟ್ ಇಟ್ಟುಕೊಂಡಿದ್ದು, ಹೇಗೆ ಚುನಾವಣಾ ಕಣವನ್ನು ಎದುರಿಸಲಿದೆ ಎನ್ನುವುದೇ ಸದ್ಯದ ಕುತೂಹಲ.
ರಾಜಕೀಯ ಅಂದುಕೊಂಡಷ್ಟು ಸುಲಭದಲ್ಲ. ಸೋಲು, ಗೆಲುವು, ಟೀಕೆ ಇಲ್ಲಿ ಸಾಮಾನ್ಯ. ಬಹುತೇಕ ಎಲ್ಲಾ ಕಡೆಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ಗೆ ಅಗತ್ಯವಾಗಿ ಈಗ ಜೀವ ತುಂಬುವ ಶಕ್ತಿ ಬೇಕಾಗಿದೆ. ಆ ಜೀವ ತುಂಬುವ ಶಕ್ತಿ ಪಕ್ಷದ ಚುನಾವಣಾ ರಚನಾಕಾರರ ಮೇಲಿರುತ್ತದೆ. ಕಾಂಗ್ರೆಸ್ ಪಾಳಯದಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರದ್ದು. ಬಹುತೇಕ ಕಾಂಗ್ರೆಸ್ ಅಂಗಳಕ್ಕೆ ಪ್ರಶಾಂತ್ ಈಗಾಗಲೇ ಕಾಲಿಟ್ಟಾಗಿದೆ ಎಂಬಷ್ಟರಲ್ಲಿಯೇ ಅದು ಹುಸಿಯಾಗಿದೆ. ಕಳೆದ ವರ್ಷದ ಜುಲೈನಲ್ಲೇ ಪಿಕೆ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯ ಬಗ್ಗೆ ಗೌಪ್ಯ ಮಾತುಕತೆ ನಡೆಸಿದ್ದರು ಎಂದು ವರದಿಯಾಗಿದ್ದಲ್ಲದೇ, ಕಾಂಗ್ರೆಸ್ ಸೈದ್ಧಾಂತಿಕ ನಿಲುವುಗಳಿಗೆ ಪಿಕೆ ಒಪ್ಪುತ್ತಾರೆಯೇ ಎಂಬ ಚರ್ಚೆ ಕಾಂಗ್ರೆಸ್ ಪ್ರಮುಖ ನಾಯಕರ ವಲಯದಲ್ಲಿ ನಡೆದಿತ್ತು. ಇನ್ನು ಕೆಲವು ಕಾಂಗ್ರೆಸ್ನ ಹಿರಿಯ ನಾಯಕರಂತೂ ಪಿಕೆ ಕಾಂಗ್ರೆಸ್ಗೆ ಸೇರ್ಪಡೆಗೊಂಡರೇ, ಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದಕ್ಕೆ ಸಾಧ್ಯ ಎಂದು ಹೇಳಿದ್ದರು. ಆದರೇ, ತೃತೀಯ – ಚತುರ್ಥ ರಂಗದಿಂದ ಬಿಜೆಪಿಯನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪಿಕೆ ಅವರ ಇತ್ತೀಚಿನ ನಡೆಗಳು ರಾಜಕೀಯ ವಲಯದಲ್ಲಿ ಇಂಟ್ರೆಸ್ಟಿಂಗ್ ಮೂಡಿಸಿತ್ತು. ಆದರೇ, ಸದ್ಯ ಕಾಂಗ್ರೆಸ್ ಆಹ್ವಾನವನ್ನು ಪಿಕೆ ನಿರಾಕರಿಸಿದ್ದಾರೆ.
೨೦೦೪ ರಿಂದ ೨೦೧೪ರವರೆಗಿನ ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತದ ನಂತರ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಅದ್ಭುತವೆನ್ನಿಸುವ ಹಾಗೆ ಬರೋಬ್ಬರಿ ೨೮೨ ಸ್ಥಾನಗಳನ್ನು ಗಿಟ್ಟಿಸಿಕೊಂಡು ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಾಗ ಹೆಚ್ಚಾಗಿ ಕೇಳಿ ಬಂದಿದ್ದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೆಸರು. ಆದರೇ, ಆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಪಿಕೆ ಬಿಹಾರ, ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ ಸೇರಿ ಇನ್ನು ಕೆಲವು ಕಡೆಗಳಲ್ಲಿ ತಮ್ಮ ಬ್ರ್ಯಾಂಡ್ ಹೆಚ್ಚಿಸಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಹಾಗಾಗಿ ಪಿಕೆ ಇದ್ದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಮಾತೂ ಕೂಡ ಇದೆ. ಪ್ರಧಾನಿ ನರೇಂದ್ರ ಮೋದಿ ೨೦೧೨ರಲ್ಲಿ ಗುಜರಾತ್ನ ಮುಖ್ಯಮಂತ್ರಿ ಆದಾಗ ಪಿಕೆ ಜೊತೆಗಿದ್ದರು, ಅದಾದ ಬಳಿಕ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪಿಕೆ ಬಿಜೆಪಿಯೊಂದಿಗೆ ಚುನಾವಣಾ ರಣತಂತ್ರ ಹೂಡಿದ್ದರು, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿ ಅಧಿಕಾರ ಹಿಡಿದರು. ಬಿಜೆಪಿ ಕಂಡ ಈ ಅಭೂತಪೂರ್ವ ಯಶಸ್ಸಿನ ಹಿಂದೆ ಪಿಕೆ ಸೃಷ್ಟಿಸಿದ ವ್ಯೂಹ ಇದೆ ಎನ್ನುವುದು ಇಲ್ಲಿ ಗಮನಾರ್ಹ. ಅದಾದ ಬಳಿಕ ೨೦೧೫ರಲ್ಲಿ ಬಿಹಾರದಲ್ಲಿ ನಿತಿಶ್ ಕುಮಾರ್, ೨೦೧೭ರಲ್ಲಿ ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಆಂದ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ೨೦೧೮ರಲ್ಲಿ ತೆಲಂಗಾಣದಲ್ಲಿ ಕೆಸಿಆರ್, ೨೦೨೦ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ೨೦೨೧ರ ಪಂಚ ರಾಜ್ಯ ಚುನಾವಣೆಯಲ್ಲಿಯೇ ಹೈವೋಲ್ಟೇಜ್ ರಾಜ್ಯ ಎಂದು ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ದೀದಿ ಯಾನೆ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ ಕೆ. ಸ್ಟ್ಯಾಲಿನ್ ಗೆಲುವಿನ ಹಿಂದೆ ಈ ಎಲ್ಲಾ ರಾಜಕೀಯ ನಾಯಕರ ರಾಜಕೀಯ ವರ್ಚಸ್ಸು ಆಯಾಯ ರಾಜ್ಯದಲ್ಲಿದ್ದರೂ ಚುನಾವಣೆಯಲ್ಲಿ ಪಿಕೆ ಸೃಷ್ಟಿಸಿದ ವ್ಯೂಹ ಇಲ್ಲಿ ವರ್ಕೌಟ್ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ.
ಇನ್ನು, ಕಾಂಗ್ರೆಸ್ ಪಕ್ಷದೊಂದಿಗೆ ಪಿಕೆ ಹೂಡಿದ ಎಲ್ಲಾ ತಂತ್ರಗಾರಿಕೆ ಸಕ್ಸಸ್ ಕಂಡಿದೆ ಎನ್ನುವುದಕ್ಕೆ ಖಂಡಿತ ಸಾಧ್ಯವಿಲ್ಲ. ಉತ್ತರಪ್ರದೇಶದಲ್ಲಿ ೨೦೧೭ರಲ್ಲಿ ಸೃಷ್ಟಿಸಿದ ಮೈತ್ರಿ ಸೂತ್ರ ಕಾಂಗ್ರೆಸ್ಗೆ ಯಶಸ್ಸು ಕೊಟ್ಟಿರಲಿಲ್ಲ. ೨೦೧೯ರಲ್ಲಿ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಹಾಗೂ ಇತರೆ ತೃತೀಯ ರಂಗದ ಪಕ್ಷಗಳು ಒಗ್ಗೂಡಿ ಆದ ‘ಮಹಾಘಟಬಂಧನ್’ ಕೂಡ ಇದೇ ಪಿಕೆ ಸೃಷ್ಟಿಸಿದ ರಣತಂತ್ರ. ಆದರೇ, ಈ ಘಟಬಂಧನ ಕಾಂಗ್ರೆಸ್ಗಂತೂ ದೊಡ್ಡ ಮಟ್ಟದಲ್ಲಿ ಮುಜುಗರ ತಂದುಕೊಟ್ಟಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಪಿಕೆ ನಿರ್ದೇಶನದ ‘ಮಹಾಘಟಬಂಧನ್’ ಸೂತ್ರ ಈ ದೇಶದಲ್ಲಿ ಮೋದಿ ಅಲೆಯ ಮುಂದೆ ಏನೂ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.
೨೦೧೩-೨೦೧೪ರ ಸಂದರ್ಭದಲ್ಲಿ ಮನಬಂದಂತೆ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿದ್ದ ಪಿಕೆ ಒಂದೊಮ್ಮೆ ದಿಢೀರ್ ಅಂತನೇ ಕಾಂಗ್ರೆಸ್ ಬಗ್ಗೆ ಒಲವು ತೋರಿಸಿದ್ದರು, ಮತ್ತೆ ಈಗ ಸ್ವತಃ ಸೋನಿಯಾ ಗಾಂಧಿ ಆಹ್ವಾನವನ್ನು ನಿರಾಕರಿಸಿದ್ದು ನೋಡಿದರೇ, ಆಶ್ಚರ್ಯವೆನ್ನಿಸುತ್ತಿದೆ. ಆದಾಗ್ಯೂ, ಕಾಂಗ್ರೆಸ್ನ ಕೆಲವು ಹಿರಿಯ ನಾಯಕರಿಗೆ ಪಿಕೆ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಒಂದೊಮ್ಮೆ ಸಂದರ್ಶನವೊಂದರಲ್ಲಿ ಕಾಂಗ್ರೆಸ್ನೊಂದಿಗೆ ಚುನಾವಣಾ ತಂತ್ರ ಹೂಡುವುದು ಕಷ್ಟಕರ, ಕಾಂಗ್ರೆಸ್ನೊಂದಿಗೆ ಸೇರಿ ಕೆಲಸ ಮಾಡಿ ತನ್ನ ಇಂಡಿಯನ್ ಪಾಲಿಟಿಕಲ್ ಆಕ್ಶನ್ ಕಮಿಟಿ ಕೆಟ್ಟ ಅನುಭವ ಪಡೆದಿದೆ. “ಜವಾಬ್ದಾರಿ ಕೊಟ್ಟು ಕೈ ಕಟ್ಟಿದರೇ, ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ” ಅಂತಹ ವಾತಾವರಣದಲ್ಲಿ ನಾನು ಇನ್ನು ಮುಂದೆ ಕೆಲಸ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್ ಪಿಕೆ ಅವರ ರಣತಂತ್ರ ಬಯಸುತ್ತಿದೆಯಾದರೂ ಪಿಕೆ ಕಾಂಗ್ರೆಸ್ನೊಂದಿಗೆ ಕೆಲಸ ಮಾಡಲು ಒಲವು ತೋರಿಸುತ್ತಿಲ್ಲ.
ಕಾಂಗ್ರೆಸ್ನ ಅನುಭವಿ ಹಿರಿಯರೆಲ್ಲಾ ಒಂದು ಗುಂಪು ಮಾಡಿಕೊಂಡು ಪಕ್ಷದ ನಾಯಕತ್ವದ ಬಗ್ಗೆ ಕಟು ಟೀಕೆ ಮಾಡುತ್ತಿರುವಾಗ ಪಿಕೆ ಹೇಳುವ ಪಕ್ಷದೊಳಗಿನ ಸಂಘಟನಾತ್ಮಕ ಬದಲಾವಣೆ ಹೇಗೆ ಆಗುವುದಕ್ಕೆ ಸಾದ್ಯವಿದೆಯೇ ಎಂಬ ಪ್ರಶ್ನೆಯೆದ್ದಿತ್ತು. ಮತ್ತೊಂದು ವಿಷಯವೇನೆಂದರೇ, ಒಳಗಿಂದೊಳಗೆ ಪಿಕೆಗೂ ಕಾಂಗ್ರೆಸ್ನ ನಾಯಕತ್ವದ ಬಗ್ಗೆಯೇ ಅಸಮಾಧಾನವಿದೆ. ಇನ್ನು, ಈಗ ಪಿಕೆ ಬಹಿರಂಗವಾಗಿಯೇ ಪಕ್ಷಕ್ಕೆ ನಾಯಕತ್ವ, ಸಾಮೂಹಿಕ ಇಚ್ಛಾಶಕ್ತಿ ಬೇಕಿದೆ ಎಂದು ಆಂತರಿಕ ಅತೃಪ್ತಿಯನ್ನು ಹೊರಹಾಕಿದ್ದಾರೆ.
ಒಟ್ಟಿನಲ್ಲಿ, ಕಳೆದ ಕೆಲವು ವರ್ಷಗಳಿಂದ ಬಹುತೇಕ ಎಲ್ಲಾ ಚುನಾನವಣೆಗಳಲ್ಲಿ ಸೋಲುತ್ತಾ ಬಂದಿರುವ ಕಾಂಗ್ರೆಸ್ನನ್ನು ಪಿಕೆ ಹಾಗೂ ಅವರ ಟೀಮ್ಗೆ ಪುಟಿದೇಳಿಸುವುದಕ್ಕೆ ಸಾಧ್ಯವಿದೆಯೇ..? “೨೦೨೪ರ ಚುನಾವಣಾ ಫಲಿತಾಂಶವನ್ನು ಯಾವುದೇ ರಾಜ್ಯದ ಚುನಾವಣಾ ಫಲಿತಾಂಶದಿಂದ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ, ಇದು ಸಾಹೇಬರಿಗೂ ಗೊತ್ತು” ಎಂದು ಪರೋಕ್ಷವಾಗಿ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಟ್ವೀಟರ್ ಮೂಲಕ ಪ್ರಧಾನಿ ಮೋದಿಯವರ ಕಾಲೆಳೆದ ಪಿಕೆ, ಕಾಂಗ್ರೆಸ್ ಪರವಾಗಿ ಹಾಗೂ ಬಿಜೆಪಿ ವಿರುದ್ಧವಾಗಿ ಅದೆಂತಹ ರಣತಂತ್ರ ಹೂಡಲಿದ್ದಾರೆ..? ಎನ್ನುವ ಪ್ರಶ್ನೆಗಳೆಲ್ಲಾ ಸುಳ್ಳಾಗಿದ್ದು, ಸದ್ಯ ಕಾಂಗ್ರೆಸ್ ‘೨೦೨೪’ನ್ನು ಹೇಗೆ ಎದುರಿಸಲಿದೆ ಎಂಬ ಪ್ರಶ್ನೆ ಮೂಡಿದೆ.
-ಶ್ರೀರಾಜ್ ವಕ್ವಾಡಿ






