Monday, October 12, 2020

‘ಕೊರೋನ ನಂತರದ ಗ್ರಾಮ ಭಾರತ’ದೊಳಗೆ ನಿತ್ಯ ಸತ್ಯ


ದೇರ್ಲ ಅವರೇ ಹೇಳುವ ಹಾಗೆ “ಬರೀ ಕನಸನ್ನಷ್ಟೇ ಅಲ್ಲ, ವಾಸ್ತವ ಬದುಕನ್ನೇ ಕೊರೋನಾ ಕಸಿದುಕೊಂಡಿದೆ”. ಕೊರೋನಾ ಇಡಿಯ ವ್ಯವಸ್ಥೆಯನ್ನು ಅಡಿಮೇಲಾಗಿ ಮಾಡಿ ಮಾನವನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಮತ್ತವನ ಮನಸ್ಸನ್ನೂ.

‘ಕೊರೋನಾ ನಂತರದ ಗ್ರಾಮಭಾರತ’ ಹಲವು ಆಯಾಮಗಳಲ್ಲಿ ಹಳ್ಳಿ ಬದುಕನ್ನು ಪುಟ ಪುಟವಾಗಿ ತೆರೆದಿಡುತ್ತದೆ. 

ನಾನು ಸಾಮಾನ್ಯವಾಗಿ ಪುಸ್ತಕಗಳ ಓದಿನ ಅನಿಸಿಕೆಯನ್ನು ಹಂಚಿಕೊಳ್ಳುವುದಿಲ್ಲ ಅಥವಾ ಬರೆಯುವುದಕ್ಕೆ ಮುಂದಾಗಿದ್ದು, ಮುಂದಾಗುವುದು ಬಹಳ ಕಡಿಮೆ. ಈ ಕೃತಿಯ ಕುರಿತಾಗಿ ನಾಲ್ಕಕ್ಷರ ಬರೆಯುವುದಕ್ಕೆ ಹೊರಟಿರುವ ಕಾರಣ, ಕೃತಿಕಾರ ನರೇಂದ್ರ ರೈ ದೇರ್ಲ ಅವರ ಬರಹಗಳಲ್ಲಿನ ನಾಳೆಯ ಭಾರತದ ಕನಸುಗಳು, ಗ್ರಾಮ ಭಾರತದ ಸೊಗಡು, ಹಳ್ಳಿಯ ಇನ್ನೊಂದು ಗಂಭೀರ ಮುಖ, ಹಳ್ಳಿ ಬದುಕಿನ ಸಮಸ್ಯೆ, ‘ನಗರಗಳು ಕುಲಕೆಟ್ಟ ವೇಗದಲ್ಲೇ ಗ್ರಾಮಗಳು ಬದಲಾದರೇ ಉಳಿಯುವುದೇನು..?’ ಎಂಬ ದೇರ್ಲ ಅವರೊಳಗಿನ ಆತಂಕ. 

ಹಳ್ಳಿಗಳನ್ನು ಬಿಟ್ಟು ನಗರವೇ ಚೆಂದ ಅಂದ ಎಂದು ಹೋಗಿದ್ದ ಮಂದಿಯೆಲ್ಲಾ ಮೂಟೆ ಹೊತ್ತು ಮರಳಿ ಗೂಡಿಗೆ ಎಂಬ0ತೆ ಮತ್ತದೇ ಹೊರಟಲ್ಲೇ ನೆಲೆ ಕಾಣಲು ಮುಖ ಮಾಡಿದ್ದು ಕೊರೋನಾ ನಂತರದ ದಿನಮಾನಗಳು. ಮರಳಿ ಬಂದವರಿಗೆ ಹಳ್ಳಿ ನೀಡಿದ ಸ್ವಾಗತ ಮತ್ತು ಆಶ್ರಯ ಅಚ್ಚರಿಯೇ ಸರಿ.

ಎಲ್ಲೋ ದೂರದ ಮಹಾ ನಗರಗಳಲ್ಲಿ ಬದುಕು ಕಂಡುಕೊ0ಡು ಈ ಕೊರೋನಾ ಎಂಬ ಕಾಯಿಲೆಗೆ ಹೆದರಿ ಹಳ್ಳಿಗೆ ಹಿಂತಿರುಗಿದಾಗ ಈ ಹಿಂದೆಲ್ಲಾ ಮದುವೆ ಮುಂಜಿಗೆ0ದು ಬಂದು ಹೋಗುತ್ತಿದ್ದಾಗಿದ್ದ ಆತಿಥ್ಯ, ಇಲ್ಲಿಯೇ ಹೊಸ ಬದುಕು ಕಾಣಬೇಕು ಎಂದು ಹೊರಟು ಬಂದಿರುವವರ ಬಗ್ಗೆ ಬದಲಾದ ಭಾವನೆಯ ಬಗೆಯನ್ನು ದೇರ್ಲ ಅವರು ಚೆನ್ನಾಗಿ ವಿವರಿಸಿದ್ದಾರೆ. ‘ಇಲ್ಲಿರುವವರಿಗೇ ಕಷ್ಟ, ಈಗ ಇವನೊಬ್ಬ ಮತ್ತೆ ವಕ್ಕರಿಸಿದ’ ಎಂಬುವುದು ಸಹಜವಾಗಿ ಹಳ್ಳಿ ಬದುಕನ್ನು ಕಂಡವರಿಗೆ ಒಪ್ಪಿಕೊಳ್ಳಲಾಗದ ವಾಸ್ತವದ ನಿಜ ಮುಖದ ಅಧ್ಯಯನ ದೇರ್ಲರದ್ದು. 

ಸೆಗಣಿ, ಕೆಸರು, ಗಂಜಲ, ನಮ್ಮದು ಇಪ್ಪತ್ತನಾಲ್ಕು ಗಂಟೆ ಎ.ಸಿ ಹವೆ ಎಂದೆಲ್ಲಾ ಸಾಂಪ್ರದಾಯಿಕ ರೈತಾಪಿಗಳನ್ನು ಟೀಕಿಸಿ ನಗರದೆಡೆಗೆ ಮುಖ ಮಾಡಿ ಹೋದವರು ಈಗ ಹಳ್ಳಿಗೆ ಬಂದು, ಹಳ್ಳಿಯ ಪಡಸಾಲೆಯಲ್ಲಿ ಕೂತು ವರ್ಕ್ ಫ್ರಂ ಹೋಮ್ ಮಾಡಿ, ಉಳಿದ ಸಮಯದಲಿ ಕೈ ಕಾಲು ಕೆಸರು ಮಾಡಿಕೊಂಡು ಕೃಷಿ ಮಾಡುತ್ತಿರುವಾಗ, ‘ನಮ್ಮದಾದದ್ದು ಆಯ್ತು ಬಿಡಿ, ನೀವು ಮಣ್ಣಿಗಿಳಿಯುವುದು ಬೇಡ’ ಅಂದ ಹಿರಿಯವರೇ ಮುಸಿ ಮುಸಿ ನಗುವಂತೆ ಕೊರೋನಾ ಮಾಡಿ ಬಿಟ್ಟಿದೆ ಅಂತ ಲೇಖಕರು ಬಹಳ ಮಾರ್ಮಿಕವಾಗಿ ಹಳ್ಳಿ ಬದುಕಿನ ಗಟ್ಟಿತನವನ್ನು, ಹಳ್ಳಿ ಬದುಕಿನ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಸತ್ಯದ ಕಹಿ ರಾಚಿ ಹೊಡೆಯುವಂತೆ ಹೇಳಿರುವುದು ನಮ್ಮನ್ನು ಕೃತಿ ಒಳಗೆ ಮತ್ತಷ್ಟು ಎಳೆದುಕೊಳ್ಳುತ್ತದೆ. 

ಇನ್ನು, ಸ್ವದೇಶೀಯತೆ. 

ಚೀನಾದಿಂದ ಆಮದಾಗುವ ಕಳೆಕೊಚ್ಚುವ ಯಂತ್ರ. ಯಂತ್ರದ ಬ್ಲೇಡ್ ನ ಫಿನಿಶಿಂಗ್ ಆಧಾರದಲ್ಲಿ ನಮ್ಮ ರೈತರನ್ನು ತಲುಪುವ ಮತ್ತು ಈಗೀಗ ನಮ್ಮ ರೈತರಿಗೆ ಬೇಕಾಗುವುದು ಕೂಡ ಅದೇ. ಆ ಯಂತ್ರದ ಹರಿತವಾದ ಬ್ಲೇಡ್. ಚೀನಾ ಕಂಪೆನಿಯ ಮಾಲಿಕತ್ವ. ವಾಸ್ತವಾಂಶವೆ0ದರೇ, ಆ ಯಂತ್ರದ ಹರಿತವಾದ ಬ್ಲೇಡ್ ನಮ್ಮ ದೇಶದಿಂದಲೇ ಚೀನಾಗೆ ರಫ್ತಾದ ಕಬ್ಬಿಣದಿಂದಲೇ ತಯಾರಿಸಿದ್ದು. ಇದು, ವರ್ತಮಾನದ ಗಡಿಬಿಡಿಯ ಆರ್ಥಿಕ ಸ್ಥಿತಿ ಗತಿಯ ಹಪಹಪಿಯ ಸ್ವದೇಶಿಯತೆಯನ್ನು ಕಟುವಾಗಿ ಟೀಕಿಸುವಂತೆ ಮಾಡುತ್ತದೆ. 

ಈ ಎಲ್ಲದರ ಆಚೆಯಲ್ಲಿ... ದೇರ್ಲರ ಆಳ, ವಿಸ್ತಾರ ನೋಟ ಅವರ ಅಧ್ಯಯನಶೀಲತೆಯಲ್ಲಿ ಇಲ್ಲಿ ಕಾಣಸಿಗುವುದು ಭವಿಷ್ಯದ ಗ್ರಾಮ ಭಾರತ. ‘ಸಾಲ, ಬಡತನ, ಮಣ್ಣಿನ ಮನೆ, ಕಾಲಿನ ಕೆಸರು, ಗಂಜಲದ ವಾಸನೆ, ಬರಿಗಾಲ ಓಡಾಟ ಇವೆಲ್ಲಾ ಅವಮಾನವಲ್ಲ ಎಂಬ ಅರಿವು ಮೂಡಬೇಕು. ಶುದ್ಧ ನೀರು, ಸ್ವಚ್ಛ ಗಾಳಿ, ವಿಷವಿಲ್ಲದ ಹಾಲು, ತರಕಾರಿ, ಅನ್ನ, ನಿರ್ಮಲ ಸಂಪನ್ನ ಪ್ರೀತಿಯೇ ವರ್ತಮಾನದ ಬಹುದೊಡ್ಡ ಸುಖ ಎಂಬ ಅರಿವು ಬರಬೇಕು’ ಎಂಬ ಅವರ ಮಾತುಗಳಲ್ಲಿ ನಾಳೆಯ ಭಾರತದ ಶಿಖರದೆತ್ತರದ ಆಶಯಗಳಿವೆ ಎನ್ನುವುದು ಅಪ್ಪಟ ಸತ್ಯ.

ಸರಳ ಜೀವನಕ್ಕೆ ಕೊರೋನ, ಹಳ್ಳಿಯಲ್ಲಿ ತೋರಿಸಿದ ಹಲವು ದಾರಿಗಳನ್ನು, ಹಳ್ಳಿಯ ಅವಕಾಶಗಳನ್ನು ‘ಯುಗಧರ್ಮವನ್ನು ಪಾಲಿಸುವುದು ಆಯಾಯ ಕಾಲದ ಧರ್ಮ’ ಎಂದು ಹೇಳಿ ಹಳೆಯ ತಲೆಮಾರಿನವರ ಬಾಯಿ ಮುಚ್ಚಿಸುವ ಹೊಸ ತಲೆಮಾರಿನವರಿಗೆ ಈ ಕೃತಿ ಅನೇಕ ಆಯಾಮಗಳಲ್ಲಿ ಕನ್ನಡಿ ಹಿಡಿದು ಇಲ್ಲೇ ಇದೆ ನಿತ್ಯ ಸತ್ಯ ಎನ್ನುವುದನ್ನು  ತೋರಿಸಿಕೊಟ್ಟಿದೆ. 

ಈ ಓದು ಖುಷಿ ಕೊಟ್ಟಿದೆ. 

-ಕಾವ್ಯ ಬೈರಾಗಿ

 (ಶ್ರೀರಾಜ್ ವಕ್ವಾಡಿ)