ಎಲೆಕ್ಶನ್ ಮೂಡ್ನಲ್ಲಿಲ್ಲ ಹಾಲಾಡಿ ! | ಉಡುಪಿಯಲ್ಲಿ ಭಟ್ರ ಅದೃಷ್ಟ ಕೈಕೊಟ್ರೆ ಶೆಟ್ರಿಗೆ ಟಿಕೆಟ್.!
ಉಡುಪಿ ಜಿಲ್ಲೆ, ಜಿಲ್ಲೆಯಾಗಿ ರಜತ ಮಹೋತ್ಸವ ಆಚರಿಸಿದ ನಂತರ ಇದೇ ಮೊಟ್ಟ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಹುರಿಗೊಳ್ಳುತ್ತಿದೆ. ಈ ಬಾರಿ ಒಂದಿಷ್ಟು ರಾಜಕೀಯ ಕುತೂಹಲಕ್ಕೆ ಉಡುಪಿ ಜಿಲ್ಲೆ ಕಾರಣವಾಗ್ತಿದ್ದು, ಜನ ಯಾರ ಕಡೆಗೆ ಒಲವು ತೋರಿಸುತ್ತಾರೆ ಎಂದು ನೋಡಬೇಕಿದೆ. ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಒಡಲಲ್ಲಿರುವ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿ ಮೇಲೆ ಸಾಮಾನ್ಯವಾಗಿಯೇ ಈ ಬಾರಿ ಒಂದಿಷ್ಟು ನಿರೀಕ್ಷೆಗಳು ಹೆಚ್ಚಿವೆ ಎನ್ನುವುದು ಇಲ್ಲಿ ಗಮನಾರ್ಹ.
ಭಟ್ರ ಅದೃಷ್ಟ ಕೈಕೊಟ್ರೆ ಶೆಟ್ರಿಗೆ ..? : ೧೯೭೨ರಲ್ಲಿ ಭಾರತೀಯ ಜನಸಂಘದಿಂದ ಕಣಕ್ಕಿಳಿದಿದ್ದ ದಿವಂಗತ ವಿ.ಎಸ್ ಆಚಾರ್ಯ ಹಾಗೂ ಕಾಂಗ್ರೆಸ್ನ ಮನೋರಮಾ ಮಧ್ವರಾಜ್ ನಡುವೆ ಚುನಾವಣಾ ಜಿದ್ದಾಜಿದ್ದಿ ನಡೆದಿತ್ತು. ಮನೋರಮಾ ಗೆಲುವಿನ ನಗೆ ಬೀರಿದ್ದರು. ೧೯೭೮ರಲ್ಲೂ ಮನೋರಮಾ ಪಾಲಿಗೆ ಅದೃಷ್ಟ ಒಲಿಯಿತು. ಆದರೇ, ೧೯೮೩ರಲ್ಲಿ ಲೆಕ್ಕಾಚಾರ ಬದಲಾಗಿ ಬಿಜೆಪಿಯಿಂದ ವಿ.ಎಸ್ ಆಚಾರ್ಯ ಗೆದ್ದರು. ಮತ್ತೆ ೧೯೮೫, ೧೯೮೯ರಲ್ಲಿ ಮನೋರಮಾ ಪಾಲಿಗೆ ಉಡುಪಿ ಒಲವು ತೋರಿಸಿದ್ದು ಉಡುಪಿಯ ರಾಜಕೀಯದ ಅಚ್ಚರಿಯ ಬೆಳವಣಿಗೆ. ೧೯೯೪, ೧೯೯೯ರಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಯು. ಆರ್. ಸಭಾಪತಿ, ಬಿಜೆಪಿಯ ಸುಧಾಕರ್ ಶೆಟ್ಟಿ ವಿರುದ್ಧ ಗೆದ್ದರು. ೨೦೦೪ರಲ್ಲಿ ಮನೋರಮಾ ಬಣ್ಣ ಬದಲಾಯಿಸಿ ಬಿಜೆಪಿಯಿಂದ ಲೋಕಸಭೆಗೆ ಪ್ರವೇಶ ಪಡೆದರು. ೨೦೦೪ರಲ್ಲಿ ಬಿಜೆಪಿಯ ರಘುಪತಿ ಭಟ್ಗೆ ಉಡುಪಿ ವಿಧಾನಸಭಾ ಕ್ಷೇತ್ರ ಒಲಿಯಿತು. ೨೦೦೮ರಲ್ಲಿ ಮತ್ತೆ ಮನೋರಮಾ ಕಾಂಗ್ರೆಸ್ಗೆ ಮರಳಿ, ಮಗ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್ನಿಂದ ಕಣಕ್ಕಿಳಿಸಿದರಾದರೂ ರಘುಪತಿ ಭಟ್ ವಿರುದ್ಧ ಪ್ರಮೋದ್ ಸೋಲನುಭವಿಸಿದರು. ೨೦೧೩ರ ಚುನಾವಣೆಯ ಸಂದರ್ಭದಲ್ಲಿ ರಘುಪತಿ ಭಟ್ ಅವರ ಅನೈತಿಕ ಸಂಬಂಧ ಭಾರಿ ಸದ್ದು ಮಾಡಿದ್ದ ಕಾರಣ, ರಘುಪತಿ ಭಟ್ ಬದಲಾಗಿ ಬಿ. ಸುಧಾಕರ್ ಶೆಟ್ಟಿ ಅವರನ್ನು ಕಣಕ್ಕಿಳಿಸಿದ್ದು ಬಿಜೆಪಿಗೆ ವರ್ಕೌಟ್ ಆಗಿಲ್ಲ. ಗೆಲುವು ಪ್ರಮೋದ್ ಕಡೆಗೆ ಒಲಿಯಿತು. ೨೦೧೮ರಲ್ಲಿ ಮೋದಿ ಹವಾದೊಂದಿಗೆ ಪರೇಶ್ ಮೇಸ್ತ ಹತ್ಯೆ ಪ್ರಕರಣ ಮತ್ತೆ ಬಿಜೆಪಿಗೆ ರಾಜಕೀಯ ಮೈಲೇಜ್ ತಂದುಕೊಡ್ತು, ಮತ್ತೆ ಉಡುಪಿ ಬಿಜೆಪಿ ತೆಕ್ಕೆಗಾಯ್ತು. ಈಗ ಮತ್ತೆ ಬಿಜೆಪಿಗೆ ಉಡುಪಿ ಒಲಿಯುವುದು ಬಹುತೇಕ ಪಕ್ಕಾ ಎಂದೇ ಕಾಣಿಸುತ್ತಿದೆ. ಕಳದೆ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಇತ್ತೀಚೆಗಷ್ಟೆ ತಮ್ಮ ಬಣ್ಣ ಬದಲಾಯಿಸಿಕೊಂಡಿದ್ದು, ಸದ್ಯಕ್ಕೆ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಮಾಸ್ ಲೀಡರ್ ಯಾರೂ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ೨೦೨೩ರ ಚುನಾವಣೆ ಬಿಜೆಪಿಗೆ ಸುಲಭ ಗ್ರಾಸವಾಗಲಿದೆ. ಹಾಲಿ ಶಾಸಕ ರಘುಪತಿ ಭಟ್ ಒಂದಿಷ್ಟು ಜನಪರ ಕಾಳಜಿ ವಹಿಸಿ, ಕಳೆದ ಅವಧಿಗಿಂತ ಈ ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಿರುವುದರಿಂದ ದೊಡ್ಡಮಟ್ಟದ ವಿರೋಧವೇನು ಉಡುಪಿಯಲ್ಲಿ ಇಲ್ಲ. ಭಟ್ರನ್ನು ಬದಲಾಯಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇನ್ನು ಒಂದು ವೇಳೆ ಭಟ್ರನ್ನು ಬದಲಾಯಿಸುವ ನಿರ್ಧಾರಕ್ಕೆ ಬಿಜೆಪಿ ಬಂದರೇ, ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನ ಶೆಟ್ರ ಪಾಲಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಉದಯ್ ಕುಮಾರ್ ಶೆಟ್ಟಿ ಅಭ್ಯರ್ಥಿ ಸ್ಥಾನದ ರೇಸ್ನಲ್ಲಿ ಇದ್ದಾರೆ. ಉದಯ್ ಕುಮಾರ್ ಶೆಟ್ಟಿ ಉಡುಪಿ ಬಿಜೆಪಿ ಪಾಳಯದಲ್ಲಿನ ಅಗ್ರ ಪಂಕ್ತಿಯ ನಾಯಕರಲ್ಲಿ ಒಬ್ಬರು, ಹಾಗಾಗಿ ಭಟ್ರ ಅದೃಷ್ಟ ಕೈಕೊಟ್ಟರೇ ಶೆಟ್ರಿಗೆ ಒಲಿಯಬಹುದು ಎಂಬ ಮಾತಿದೆ. ಉಳಿದಂತೆ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕೂಡ ಈ ಅಭ್ಯರ್ಥಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಆದರೇ ಇವರ್ಯಾರಿಗೂ ಅಭ್ಯರ್ಥಿ ಸ್ಥಾನ ಒಲಿಯುವ ಲಕ್ಷಣಗಳು ಈ ಬಾರಿ ಕಾಣಿಸುತ್ತಿಲ್ಲ.
ಇನ್ನು, ಉಡುಪಿ ಕಾಂಗ್ರೆಸ್ ಸದ್ಯಕ್ಕೆ ಕಂಗಾಲಾದಂತೆ ಕಾಣಿಸುತ್ತಿದ್ದು, ಒಂದು ಹಂತದಲ್ಲಿ ಪರೋಕ್ಷವಾಗಿ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಬಿಜೆಪಿಗೆ ಬಿಟ್ಟುಕೊಟ್ಟಂತೆ ಕಾಣಿಸುತ್ತಿದೆ. ಮಾಜಿ ಶಾಸಕ, ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿಕೊಂಡಿದ್ದಾರೆ. ಪ್ರಮೋದ್ ಕಾಂಗ್ರೆಸ್ನಲ್ಲಿ ಇದ್ದಿದ್ದರೇ, ಪ್ರಶ್ನಾತೀತವಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಥಾನ ಪ್ರಮೋದ್ಗೆ ಒಲಿಯುತ್ತಿತ್ತು. ಆದರೇ, ಪ್ರಮೋದ್ ಅವರಿಂದ ತೆರವುಗೊಂಡ ಸ್ಥಾನಕ್ಕೆ ಸದ್ಯ ಉಡುಪಿ ಕಾಂಗ್ರೆಸ್ನ ಪ್ರಮುಖ ನಾಯಕರುಗಳಾದ ಉದ್ಯಮಿ ಪ್ರಸಾದ್ ಕಾಂಚನ್, ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ರಮೇಶ್ ಕಾಂಚನ್, ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಹಿರಿಯ ನಾಯಕ, ಮಾಜಿ ಶಾಸಕ ಯು. ಆರ್ ಸಭಾಪತಿ, ಕಾಂಗ್ರೆಸ್ನ ಸಿದ್ಧಾಂತಕ್ಕೆ ಬದ್ಧರಾಗಿರುವ, ಕಾಂಗ್ರೆಸ್ ತೊರೆದು ಕೆಆರ್ಎಸ್ಗೆ ಹೋಗಿ ಮತ್ತೆ ಮರಳಿ ಕಾಂಗ್ರೆಸ್ಗೆ ಹಿಂತಿರುಗಿದ ಅಮೃತ್ ಶೆಣೈ, ಭುಜಂಗ ಶೆಟ್ಟಿ ಕಾಂಗ್ರೆಸ್ನ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಕಾಪು ಕುತೂಹಲ ? : ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಶಾಸಕ ಲಾಲಾಜಿ ಆರ್. ಮೆಂಡನ್ ಮೇಲೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕನಾಟಕ ಸರ್ಕಾರದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತೆ ಶಾಸಕ ಸ್ಥಾನ ಅಲಂಕರಿಸುವ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ನಲ್ಲಿ ಸದ್ಯಕ್ಕೆ ಸೊರಕೆ ಬಿಟ್ಟರೇ ಬೇರೆ ಯಾರೂ ಆಕಾಂಕ್ಷಿಗಳ ಪಟ್ಟಿಯಲ್ಲಿಲ್ಲ. ಆದರೇ, ಇತ್ತೀಚೆಗಷ್ಟೆ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಪ್ರಮೋದ್ ಮಧ್ವರಾಜ್ ಒಂದು ವೇಳೆ ಕಾಪುವಿಂದ ಸ್ಪರ್ಧೆಗಿಳಿದರೇ, ಚುನಾವಣಾ ಕಣ ತಾರಕಕ್ಕೆ ಏರುವ ಎಲ್ಲಾ ಲಕ್ಷಣಗಳಿವೆ. ಯಾಕಂದ್ರೆ ವೈಯಕ್ತಿಕವಾಗಿ, ರಾಜಕೀಯವಾಗಿ ಸೊರಕೆಗೂ, ಮಧ್ವರಾಜ್ಗೂ ಅಷ್ಟಕ್ಕಷ್ಟೇ. ಆದರೇ, ಉಡುಪಿಯಲ್ಲಿ ಇದ್ದಷ್ಟು ಜನಪ್ರಿಯತೆ ಪ್ರಮೋದ್ಗೆ ಕಾಪುವಿನಲ್ಲಿ ಇಲ್ಲ ಎನ್ನುವುದು ಇಲ್ಲಿ ಗಮನಾರ್ಹ. ಇನ್ನು, ಲಾಲಾಜಿಯವರನ್ನು ಕಿತ್ತೊಗೆದರೇ, ಬಿಜೆಪಿಯಿಂದ ಕಳೆದ ಕೆಲವು ವರ್ಷಗಳಿಂದ ಅಭ್ಯರ್ಥಿ ಸ್ಥಾನಕ್ಕೆ ಕಣ್ಣಿಟ್ಟಿರುವ ಹಿಂದೂ ಮುಖಂಡ ಯಶಪಾಲ್ ಸುವರ್ಣ ಅವರ ಪಾಲಿಗೆ ಅಭ್ಯರ್ಥಿ ಸ್ಥಾನ ಒಲಿಯುವ ಸಾಧ್ಯತೆಯೇ ಹೆಚ್ಚು. ಆದರೂ, ಕಾಪುವಿನಲ್ಲಿ ಸೊರಕೆಯನ್ನು ಎದುರಿಸಲು ಮಾಜಿ ಕೈ ನಾಯಕನನ್ನು ಕಣಕ್ಕಿಳಿಸಬಹುದೇ ಎಂಬ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಮೊಗವೀರ ಹಾಗೂ ಬಿಲ್ಲವ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನ ರಾಜಕೀಯ ಲೆಕ್ಕಾಚಾರದ ಬಗ್ಗೆ ಬಾರಿ ಕುತೂಹಲ ಮೂಡಿಸಿದೆ. ಸೊರಕೆ ಬಿಟ್ಟರೇ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಬೇರೆ ಯಾವ ಆಕಾಂಕ್ಷಿಗಳಿಲ್ಲ. ಆದರೇ, ಬಿಜೆಪಿಯಿಂದ ಯಶಪಾಲ್ ಸುವರ್ಣ ಬಿಟ್ಟರೇ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ ಆಕಾಂಕ್ಷಿಗಳಾಗಿದ್ದಾರೆ.
ವಸಂತ್ ಸಾಲ್ಯಾನ್ ಅವರ ಕಾಂಗ್ರೆಸ್ನ ಸುದೀರ್ಘ ಆಡಳಿತ ಕಂಡ ಕಾಪು ವಿಧಾನ ಸಭಾಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿ ಬಾವುಟ ಹಾರಿಸಿದ್ದು ೨೦೦೪ರಲ್ಲಿ. ೨೦೦೮ರಲ್ಲಿ ಮತ್ತೆ ಬಿಜೆಪಿಗೆ ಕಾಪು ಒಲಿಯಿತು. ೨೦೧೩ರಲ್ಲಿ ಕಾಂಗ್ರೆಸ್ ಸೀಟ್ನನ್ನು ಪುತ್ತೂರಿನಿಂದ ಬಂದ ಅನುಭವಿ ವಿನಯಕುಮಾರ್ ಸೊರಕೆಗೆ ನೀಡಲಾಯಿತು. ಸಾಲ್ಯಾನ್ ಬಂಡೆದ್ದು ಜೆಡಿಎಸ್ನಿಂದ ಸ್ಪರ್ಧಿಸಿದ್ದರೂ, ಏನು ಪ್ರಯೋಜನವಾಗಿಲ್ಲ. ಸೊರಕೆ ಗೆದ್ದರು. ೨೦೧೮ರಲ್ಲಿಯೂ ಮತ್ತೆ ಸೊರಕೆ ಗೆದ್ದೇ ಗೆಲ್ಲುತ್ತಾರೆ ಎಂಬ ವಾತಾವರಣ ಇದ್ದಿತ್ತಾದರೂ ಚುನಾವಣೆಯ ಹೊಸ್ತಿಲಲ್ಲಿ ನಡೆದ ಕೋಮುಗಲಭೆ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಿದೆ ಎಂಬ ಮಾತಿದೆ. ಈಗ ಮತ್ತೆ ಚುನಾವಣೆ ರಂಗೇರಿದ್ದು, ಕಾಪು ಕುತೂಹಲ ಮೂಡಿಸಿದೆ.
ಕಾರ್ಕಳದ ರಾಜಕೀಯ ಸ್ಥಿತಿ : ೧೯೬೭ರಲ್ಲಿ ಒಮ್ಮೆ ಬಿಜೆಪಿ(ಭಾರತೀಯ ಜನಸಂಘ) ಗೆದ್ದಿದ್ದನ್ನು ಹೊರತು ಪಡಿಸಿದರೇ, ಮತ್ತೆ ೧೯೭೨ ರಿಂದ ೧೯೯೪ ರವರೆಗೆ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರವನ್ನು ಆಳಿದ್ದು ಕಾಂಗ್ರೆಸ್ನ ಹಿರಿಯ ನಾಯಕ ವೀರಪ್ಪ ಮೋಯ್ಲಿ. ೧೯೯೯ರಲ್ಲಿ ಮೊಯ್ಲಿ ದೆಹಲಿ ರಾಜಕಾರಣದತ್ತ ತೆರಳಿದ ಕಾರಣದಿಂದಾಗಿ ಮೊಯ್ಲಿ ಇಲ್ಲಿಂದ ಸ್ಪರ್ಧಿಸಿಲ್ಲ. ಎಚ್. ಗೋಪಾಲ ಭಂಡಾರಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಆದರೇ, ೨೦೦೪ರಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಕಾರ್ಕಳ ಯುವ ರಾಜಕಾರಣಿ ಬಿಜೆಪಿಯ ಸುನೀಲ್ ಕುಮಾರ್ಗೆ ಒಲಿಯಿತು. ಆಗ ಸುನಿಲ್ ದತ್ತಪೀಠದ ವಿವಾದದಿಂದ ಟ್ರೆಂಡ್ನಲ್ಲಿದ್ದರು. ೨೦೦೮ರಲ್ಲಿ ಗೋಪಾಲ್ ಭಂಡಾರಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾದರು. ಆದರೇ, ೨೦೧೩ರಲ್ಲಿ ಅಚ್ಚರಿ ಎಂಬಂತೆ, ಇಡೀ ಉಡುಪಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಕೈಚೆಲ್ಲಿ ಕೂತಿದ್ದಾಗ ಬಿಜೆಪಿಯಿಂದ ಗೆದ್ದ ಏಕೈಕ ಶಾಸಕ ಸುನೀಲ್ ಕುಮಾರ್ ಎನ್ನುವುದು ಗಮನಾರ್ಹ. ಮತ್ತೆ ೨೦೧೮ರಲ್ಲಿ ಸುನೀಲ್ ಗೋಪಾಲ್ ಭಂಡಾರಿ ವಿರುದ್ಧ ಬರೋಬ್ಬರಿ ೪೨ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದರು. ಈ ಚುನಾವಣೆಯ ಸಂದರ್ಭದಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್ ಮೆಸ್ತಾ ಕೊಲೆ ಪ್ರಕರಣ ಹಾಗೂ ಸುರತ್ಕಲ್ನಲ್ಲಿ ನಡೆದ ಮರಾಠ ಯುವಕ ದೀಪಕ್ ರಾವ್ ಕೊಲೆ ಪ್ರಕರಣಗಳು ಬಿಜೆಪಿಗೆ ರಾಜಕೀಯ ಮೈಲೇಜ್ ಕೊಟ್ಟಿತ್ತು ಎನ್ನುವುದು ರಾಜಕೀಯ ಪಡಸಾಲೆಯ ಮಾತು.
ಇನ್ನು, ಬಿಜೆಪಿಯಿಂದ ಸುನೀಲ್ ಕುಮಾರ್ ಬಿಟ್ಟರೇ ಬೇರೆ ಯಾವ ಆಕಾಂಕ್ಷಿಗಳಿಲ್ಲ. ಆದರೇ, ಕಾಂಗ್ರೆಸ್ನಲ್ಲಿ ಭಂಡಾರಿಯವರಿಂದ ತೆರವುಗೊಂಡ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಶುಭದ್ ರಾವ್ ಸೇರಿ ಸುರೇಂದ್ರ ಶೆಟ್ಟಿ (ಮೊಯ್ಲಿ ಆಪ್ತ) ಕಾಂಗ್ರೆಸ್ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು.
ಕುಂದಾಪುರಕ್ಕೆ ಮತ್ತೆ ಹಾಲಾಡಿ ? : ೧೯೮೩ರಿಂದ ೧೯೯೯ರವರೆಗೆ ಕಾಂಗ್ರೆಸ್ನ ಪ್ರತಾಪ್ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಸತತ ನಾಲ್ಕು ಬಾರಿ ಗೆದ್ದಿದ್ದ ಪ್ರತಾಪ್ಚಂದ್ರ ಶೆಟ್ಟಿ ೧೯೯೯ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಚುನಾವಣೆಯ ಕಣಕ್ಕಿಳಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಸೋಲನುಭವಿಸಿದರು. ೨೦೦೪ರಲ್ಲಿ ಹಾಲಾಡಿ ತಮ್ಮ ಮತಗಳ ಅಂತರವನ್ನು ೨೦,೦೦೦ ಗಡಿ ದಾಟಿಸಿ ಮತ್ತೆ ಗೆದ್ದರು. ೨೦೦೮ರಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದ ಪ್ರಭಾವಿ ರಾಜಕಾರಣಿ ಜಯಪ್ರಕಾಶ್ ಶೆಟ್ಟಿಯವರನ್ನೂ ಭಾರಿ ಮತಗಳ ಅಂತರದಿಂದ ಹಾಲಾಡಿ ಸೋಲಿಸಿದರು.
೨೦೧೨ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹಾಲಾಡಿಗೆ ಸಚಿವ ಸ್ಥಾನ ನೀಡುವುದಾಗಿ ಕರೆಸಿಕೊಂಡು ಅಂತಿಮ ಹಂತದಲ್ಲಿ ಹಾಲಾಡಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷವನ್ನು ತೊರೆದಿದ್ದೆಲ್ಲವೂ ಕುಂದಾಪುರ ರಾಜಕೀಯದ ದೊಡ್ಡ ಇತಿಹಾಸ. ೨೦೧೩ರಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಹಾಲಾಡಿ ರಾಷ್ಟ್ರೀಯ ಪಕ್ಷಗಳನ್ನು ಸುಮಾರು ೪೦ ಸಾವಿರ ಮತಗಳ ಅಂತರದಿಂದ ನೆಲಕಚ್ಚಿಸಿದರು. ಇದು ಹಾಲಾಡಿ ಮೇಲೆ ಜನ ಇಟ್ಟ ಪ್ರೀತಿಯನ್ನು ರಾಜ್ಯ ಬಿಜೆಪಿಗೆ ತಿಳಿಸಿತ್ತು. ೨೦೧೮ರಲ್ಲಿ ಮತ್ತೆ ಬಿಜೆಪಿಗೆ ಮರಳಿದ ಹಾಲಾಡಿ, ಮತ್ತೆ ಭರ್ಜರಿ ಗೆಲುವು ಸಾಧಿಸಿ ಶಾಸಕರಾದರು.
ಈಗ ಮತ್ತೆ ಚುನಾವಣಾ ಅಖಾಡ ಸಿದ್ಧವಾಗಿದೆ. ಮತ್ತೆ ಬಿಜೆಪಿಯಿಂದ ಹಾಲಾಡಿಗೆ ಟಿಕೆಟ್ ಸಿಗುವುದು ಖಚಿತ. ಆದರೇ, ಹಾಲಾಡಿ ಮನಸ್ಸು ಮಾಡುತ್ತಿಲ್ಲ ಎಂಬ ಒಂದು ಮಾತು ಕೂಡ ಕುಂದಾಪುರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಹಾಲಾಡಿ ಅಲ್ಲದಿದ್ದರೇ, ಎ.ಜಿ ಕೊಡ್ಗಿ ಅವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಬಿಜೆಪಿ ಮಣೆ ಹಾಕಬಹುದು ಎಂಬ ಮಾತಿದೆ. ಮಾತ್ರವಲ್ಲದೇ ಹಾಲಾಡಿ ಅಲ್ಲದಿದ್ರೆ, ಹಾಲಾಡಿ ತಮ್ಮ ಉತ್ತರಾಧಿಕಾರಿಯ ಹೆಸರು ಹೇಳ್ತಾರೆ, ಅವರೇ ಕುಂದಾಪುರದ ಬಿಜೆಪಿ ಅಭ್ಯರ್ಥಿಯಾಗಿರಲಿದ್ದಾರೆ ಎಂಬ ಮಾತು ಕೂಡ ಕುಂದಾಪುರ ರಾಜಕೀಯ ವಲಯದಲ್ಲಿ ಗುಸುಗುಸು ಚರ್ಚೆ ಎದ್ದಿದೆ.
ಇನ್ನು, ಕಾಂಗ್ರೆಸ್ ಕಳೆದ ಬಾರಿ ಎಲ್ಲಿಂದಲೋ ರಾಕೇಶ್ ಮಲ್ಲಿಯನ್ನು ಕರೆತಂದು ಮುಖಭಂಗಕ್ಕೆ ಒಳಗಾಗಿದ್ದು ಸಾಕೆನ್ನಿಸಿ ಈ ಭಾರಿ ಸ್ಥಳಿಯ ನಾಯಕರಿಗೆ ಮಣೆ ಹಾಕುವ ಯೋಚನೆಯಲ್ಲಿದೆ. ೨೦೧೩ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಲ್ಯಾಡಿ ಶಿವರಾಮ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು ಇಲ್ಲದಿದ್ದರೇ, ಮೊಳವಳ್ಳಿ ದಿನೇಶ್ ಹೆಗ್ಡೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಬಂಟ್ಸ್ ಮತಗಳು ಹೆಚ್ಚಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ತಂತ್ರಗಾರಿಕೆ ಏನೆಂಬುವುದು ಕುತೂಹಲ.
ಬೈಂದೂರಿಗೆ ಶೆಟ್ರಾ..? ಪೂಜಾರ್ರಾ..? : ಉಡುಪಿಯಿಂದ ಸುಮಾರು ಎಪ್ಪತ್ತು ಕೀ.ಮೀ ದೂರವಿರುವ ವಿಧಾನಸಭಾ ಕ್ಷೇತ್ರ ಬೈಂದೂರು. ೧೯೮೫, ೧೯೮೯ರಲ್ಲಿ ಕಾಂಗ್ರೆಸ್ನ ಜಿ.ಎಸ್ ಆಚಾರ್ ಗೆಲುವು ಸಾಧಿಸಿದ್ದರು. ೧೯೯೪ರಲ್ಲಿ ಬಿಜೆಪಿಯ ಐಎಂ ಜಯರಾಮ್ ಶೆಟ್ಟಿ ಗೆಲುವು ಕಂಡಿದ್ದರು. ೧೯೯೮ರಲ್ಲಿ ಉಡುಪಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಗೋಪಾಲ ಪೂಜಾರಿ ಅವರು ಅದೇ ವರ್ಷ ನಡೆದಿದ್ದ ಚುನಾನವಣೆಯಲ್ಲಿ ಗೆದ್ದಿದ್ದರು. ೧೯೯೯, ೨೦೦೪ರಲ್ಲಿಯೂ ಪೂಜಾರಿಯವರು ಗೆದ್ದಿದ್ದರು, ಆದರೇ, ೨೦೦೮ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಅವರ ವಿರುದ್ಧ ಸೋಲು ಕಂಡರು. ೨೦೧೩ರಲ್ಲಿ ಬಿಜೆಪಿಯ ಸುಕುಮಾರ್ ಶೆಟ್ಟಿಯವರ ವಿರುದ್ಧ ಸುಮಾರು ೩೦ ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೆ ಬೈಂದೂರು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಪೂಜಾರಿಯವರು ತಂದುಕೊಟ್ಟರು. ಆದರೇ, ೨೦೧೮ರಲ್ಲಿ ಅದಲು ಬದಲಾಗಿ, ಗೆಲುವು ಸುಕುಮಾರ್ ಶೆಟ್ಟಿಯವರ ಪಾಲಿಗೆ ಅದೃಷ್ಟ ಒಲಿಯಿತು. ಪರೇಶ್ ಮೇಸ್ತಾ ಹತ್ಯೆ ಪ್ರಕರಣದಿಂದಾದ ಹಿಂದೂ ಮತ ಧ್ರುವೀಕರಣ ಹಾಗೂ ಮೋದಿ ಹವಾದಿಂದಾಗಿ ಸುಕುಮಾರ್ ಶೆಟ್ಟಿ ಗೆಲುವು ಅನುಭವಿಸಿದರು ಎಂಬುವುದು ಬೈಂದೂರು ರಾಜಕೀಯ ವಲಯದ ಮಾತು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಸುಕುಮಾರ್ ಶೆಟ್ಟಿ ಅವರಿಗೆ ಟಿಕೇಟ್ ನೀಡುವುದರ ಬಗ್ಗೆ ಒಂದಿಷ್ಟ ಚರ್ಚೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಹಾಗಾಗಿ ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಬಿಜೆಪಿ ಟಿಕೇಟ್ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ಕಾಂಗ್ರೆಸ್ನಲ್ಲಿ ಗೋಪಾಲ್ ಪೂಜಾರಿಯವರಿಗೆ ಟಿಕೆಟ್ ಪಕ್ಕಾ ಎಂದು ಹೇಳಲಾಗುತ್ತಿದ್ದರೂ ಕೂಡ, ಡಿಕೆಶಿ ಆಪ್ತ ಬಳಗದಲ್ಲಿ ಓರ್ವರಾದ, ಗುತ್ತಿಗೆದಾರ ಯುಬಿ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೂ ಆಶ್ಚರ್ಯವೇನಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ, ಮುಂದಿನ ವಿಧಾನಸಭಾ ಚುನಾವಣೆಗಾಗಿ ಉಡುಪಿ ಜಿಲ್ಲೆಯಲ್ಲಿ ಬೂತ್ ಮಟ್ಟದ ತಂತ್ರ ಆರಂಭವಾಗಿದೆ. ಉಡುಪಿ ವಿಧಾನಸಭೆಯ ಒಟ್ಟು ಐದೂ ಕ್ಷೇತ್ರಗಳು ಈ ಬಾರಿ ಹಲವು ಕಾರಣಗಳಿಗೆ ಕುತೂಹಲ ಹೆಚ್ಚಿಸಿದ್ದು, ಹಲವು ಬದಲಾವಣೆಗೆ ೨೦೨೩ರ ಚುನಾವಣೆಗೆ ಸಾಕ್ಷಿಯಾಗಲಿದೆಯೇ ಎಂದು ಕಾದು ನೋಡಬೇಕಿದೆ.
-ಶ್ರೀರಾಜ್ ವಕ್ವಾಡಿ
.jpeg)




