Friday, August 21, 2026

ʼಅಹಿಂದʼಕ್ಕೆ 25 : ಸಿದ್ದರಾಮಯ್ಯನವರ ಮುಂದಿನ ನಡೆ, ಶಿವಕುಮಾರ್‌ಗೆ ಎದುರಾಗುವ ಸವಾಲು

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯನವರು ರಾಜಕೀಯವಾಗಿ ಹಿಂದೆ ಸರಿದಂತೆ ಕಾಣುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಮೌನದ ಅರ್ಥ ರಾಜಕೀಯದಲ್ಲಿ ಬೇರೆಯದ್ದೇ ಇದೆ. ಕೆಲವೊಮ್ಮೆ ಅದು ಮುಂದಿನ ಹೆಜ್ಜೆಗೆ ಮುನ್ನದ ರಾಜಕೀಯ ತಯಾರಿ ಎಂಬರ್ಥವನ್ನೂ ನೀಡುತ್ತದೆ. ಕಳೆದ ಕೆಲವು ದಿನಗಳಲ್ಲಿ ಅವರ ನಡೆಗಳು ಇದೇ ಪ್ರಶ್ನೆಯನ್ನು ಹುಟ್ಟುಹಾಕಿವೆ. ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ಅಧಿವೇಶನದ ಮೊದಲ ದಿನಕ್ಕೆ ಗೈರು, ಹೊಸ ಸಚಿವರ ಪ್ರಮಾಣವಚನ ಸಮಾರಂಭದಿಂದ ದೂರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು—ಈ ಎಲ್ಲ ಬೆಳವಣಿಗೆಗಳು ಸಿದ್ದರಾಮಯ್ಯನವರ ಮೌನವನ್ನು ಕೇವಲ ವೈಯಕ್ತಿಕ ಅಸಮಾಧಾನವೆಂದು ನೋಡಲು ಅವಕಾಶ ನೀಡುವುದಿಲ್ಲ. ಇದರ ನಡುವೆ ಸೆಪ್ಟೆಂಬರ್ 6ರಂದು ಅಹಿಂದ ಚಳವಳಿಗೆ 25 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂಬುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಅಹಿಂದ ಎನ್ನುವುದು ಕೇವಲ ಒಂದು ಚುನಾವಣಾ ಘೋಷಣೆ ಅಲ್ಲ; ಕರ್ನಾಟಕದ ಸಾಮಾಜಿಕ ನ್ಯಾಯದ ರಾಜಕಾರಣದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಒಂದೇ ರಾಜಕೀಯ ನೆಲೆಯ ಮೇಲೆ ತರುವ ಪ್ರಯತ್ನದ ಪ್ರಮುಖ ಅಧ್ಯಾಯ. ಸಿದ್ದರಾಮಯ್ಯನವರ ರಾಜಕೀಯ ಏಳಿಗೆಯಲ್ಲೂ ಈ ಸಾಮಾಜಿಕ ಸಮೀಕರಣ ಮಹತ್ವದ ಪಾತ್ರ ವಹಿಸಿದೆ. ಸಿದ್ದರಾಮಯ್ಯ ಮತ್ತೆ ಅಹಿಂದದತ್ತ ಯಾಕೆ? ಎನ್ನುವ ಪ್ರಶ್ನೆ, ಸಹಜವಾಗಿ ಉದ್ಭವವಾಗುತ್ತದೆ. ಇಲ್ಲಿ ಮೊದಲ ಪ್ರಶ್ನೆ—ಸಿದ್ದರಾಮಯ್ಯನವರು ನಿಜವಾಗಿಯೂ ಮತ್ತೆ ಅಹಿಂದ ಚಳವಳಿ ಕಟ್ಟಲು ಹೊರಟಿದ್ದಾರೆಯೇ? ಇದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ.

ಆದರೆ ಅವರ ಮುಂದಿರುವ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಅಹಿಂದ ಎನ್ನುವುದು ಅವರಿಗೆ ಸಹಜವಾದ ರಾಜಕೀಯ ವೇದಿಕೆ. ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯ ಸ್ಥಾನವೇ ಅವರ ಮಾತಿಗೆ ರಾಜಕೀಯ ಶಕ್ತಿ ನೀಡುತ್ತಿತ್ತು. ಈಗ ಆ ಸ್ಥಾನವಿಲ್ಲ. ಹೀಗಾಗಿ ಅಧಿಕಾರದ ಹೊರಗಿರುವ ನಾಯಕನಿಗೆ ಜನಾಧಾರವೇ ದೊಡ್ಡ ಬಂಡವಾಳ. ಸಿದ್ದರಾಮಯ್ಯನವರ ಬಳಿ ಆ ಬಂಡವಾಳವಿದೆ ಎನ್ನುವುದನ್ನು ಕಾಂಗ್ರೆಸ್ ಕೂಡ ನಿರಾಕರಿಸಲು ಸಾಧ್ಯವಿಲ್ಲ. ಅವರ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮನವು ಕಾಂಗ್ರೆಸ್‌ನ ಅಹಿಂದ ಸಾಮಾಜಿಕ ಸಮೀಕರಣಕ್ಕೆ ಪರಿಣಾಮ ಬೀರುತ್ತದೆ ಎಂಬ ಚರ್ಚೆ ಈಗಾಗಲೇ ನಡೆದಿದೆ. ಆದ್ದರಿಂದ ಅಹಿಂದ ಸಮಾವೇಶವನ್ನು ಕೇವಲ 25ನೇ ವರ್ಷದ ಆಚರಣೆಯಾಗಿ ನೋಡಿದರೆ ರಾಜಕೀಯದ ಅರ್ಧ ಚಿತ್ರ ಮಾತ್ರ ಕಾಣುತ್ತದೆ. ಅಹಿಂದ ಸಮಾವೇಶ ಸಿದ್ದರಾಮಯ್ಯನವರ ರಾಜಕೀಯ ಪ್ರಭಾವ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸುವ ವೇದಿಕೆಯಾಗಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಇದು ಶಿವಕುಮಾರ್ ವಿರುದ್ಧದ ನೇರ ಯುದ್ಧವೇ? ಅನಿವಾರ್ಯವಾಗಿ ಅಲ್ಲ. ಸಿದ್ದರಾಮಯ್ಯನವರು ಅಹಿಂದವನ್ನು ಪುನರ್‌ಸಂಘಟಿಸಿದರೂ ಅದರ ಮೊದಲ ಗುರಿ ಡಿ.ಕೆ. ಶಿವಕುಮಾರ್ ಆಗಬೇಕೆಂದಿಲ್ಲ. ಅವರ ರಾಜಕೀಯ ತಂತ್ರ ಇನ್ನೂ ಸೂಕ್ಷ್ಮವಾಗಿರಬಹುದು. 

ಒಂದು ಕಡೆ ಅವರು ಕಾಂಗ್ರೆಸ್‌ನ ಹಿರಿಯ ನಾಯಕನಾಗಿಯೇ ಉಳಿದುಕೊಂಡು, ಮತ್ತೊಂದು ಕಡೆ ತಮ್ಮ ಸಾಮಾಜಿಕ ನೆಲೆಯನ್ನು ಪ್ರತ್ಯೇಕವಾಗಿ ಬಲಪಡಿಸಬಹುದು. ಹೀಗೆ ಮಾಡಿದರೆ ಕಾಂಗ್ರೆಸ್‌ನೊಳಗಿನ ಅವರ ಮಾತಿನ ತೂಕ ಕಡಿಮೆಯಾಗುವುದಿಲ್ಲ. ಬದಲಿಗೆ, ಅಧಿಕಾರವಿಲ್ಲದಿದ್ದರೂ ತಮ್ಮ ಹಿಂದೆ ಒಂದು ದೊಡ್ಡ ಸಾಮಾಜಿಕ ಸಮೀಕರಣವಿದೆ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ನೀಡಬಹುದು. ಇದು ಒಂದು ರೀತಿಯಲ್ಲಿ ‘ಪದವಿ ಇಲ್ಲದ ಅಧಿಕಾರ’ದ ರಾಜಕಾರಣ. ಮುಖ್ಯಮಂತ್ರಿಯ ಕುರ್ಚಿ ಶಿವಕುಮಾರ್ ಅವರ ಬಳಿ ಇರಬಹುದು. ಆದರೆ ಆ ಕುರ್ಚಿಯ ಹೊರಗಿರುವ ಸಿದ್ದರಾಮಯ್ಯನವರ ಸಾಮಾಜಿಕ ಪ್ರಭಾವವನ್ನು ನಿರ್ಲಕ್ಷಿಸುವುದು ಅಷ್ಟು ಸುಲಭವಲ್ಲ.  ಶಿವಕುಮಾರ್ ಎದುರಿನ ನಿಜವಾದ ಸವಾಲು ಏನು !? ಡಿ.ಕೆ. ಶಿವಕುಮಾರ್ ಅವರ ಮುಂದಿರುವ ಸವಾಲು ಸಿದ್ದರಾಮಯ್ಯನವರನ್ನು ಎದುರಿಸುವುದಕ್ಕಿಂತ ದೊಡ್ಡದು—ಸಿದ್ದರಾಮಯ್ಯನವರ ಸಾಮಾಜಿಕ ನೆಲೆಯನ್ನು ತಮ್ಮ ಸರ್ಕಾರದ ರಾಜಕೀಯದೊಳಗೆ ಉಳಿಸಿಕೊಳ್ಳುವುದು. ಶಿವಕುಮಾರ್ ಅವರು ತಮ್ಮದೇ ಆದ ರಾಜಕೀಯ ಶಕ್ತಿ ಹೊಂದಿದ್ದಾರೆ. ಆದರೆ ಅವರ ರಾಜಕೀಯದ ಸಾಮಾಜಿಕ ಚಿತ್ರಣ ಸಿದ್ದರಾಮಯ್ಯನವರಿಗಿಂತ ಭಿನ್ನವಾಗಿದೆ. ಸಿದ್ದರಾಮಯ್ಯ ಕಟ್ಟಿದ ಅಹಿಂದ ಸಮೀಕರಣದಿಂದ ಕಾಂಗ್ರೆಸ್‌ಗೆ ದೊರೆತ ಬೆಂಬಲವನ್ನು ಮುಂದುವರಿಸಬೇಕಾದರೆ ಶಿವಕುಮಾರ್ ಅವರು ಕೇವಲ ಆಡಳಿತದ ಕಾರ್ಯಕ್ಷಮತೆಯನ್ನು ತೋರಿಸಿದರೆ ಸಾಲದು. ಸಾಮಾಜಿಕ ನ್ಯಾಯ, ಮೀಸಲಾತಿ, ಹಿಂದುಳಿದ ವರ್ಗಗಳ ಹಕ್ಕು, ದಲಿತ ಪ್ರಶ್ನೆ, ಅಲ್ಪಸಂಖ್ಯಾತರ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಬೇಕು.

ಅಹಿಂದವನ್ನು ಬಿಜೆಪಿ ವಿರುದ್ಧದ ಚುನಾವಣಾ ಘೋಷಣೆಯಾಗಿ ಮಾತ್ರವಲ್ಲ, ಸಾಮಾಜಿಕ ನ್ಯಾಯದ ನೀತಿಯಾಗಿ ಸರ್ಕಾರ ರೂಪಿಸಬೇಕು. ಇನ್ನು, ಸಿದ್ದರಾಮಯ್ಯನವರ ಮೌನ ಯಾರಿಗೆ ಹೆಚ್ಚು ಅಪಾಯ? ವಿಚಿತ್ರವೆಂದರೆ ಸಿದ್ದರಾಮಯ್ಯನವರ ಮೌನದಿಂದ ತಕ್ಷಣಕ್ಕೆ ಹೆಚ್ಚು ಆತಂಕಗೊಳ್ಳಬೇಕಾದವರು ಬಿಜೆಪಿ ಮಾತ್ರವಲ್ಲ; ಕಾಂಗ್ರೆಸ್‌ನೊಳಗಿನ ನಾಯಕತ್ವವೂ ಹೌದು. ಯಾಕೆಂದರೆ ಅವರು ಪ್ರತಿದಿನ ಸರ್ಕಾರದ ವಿರುದ್ಧ ಮಾತನಾಡಿದರೆ ಅದನ್ನು ‘ಮಾಜಿ ಮುಖ್ಯಮಂತ್ರಿಯ ಅಸಮಾಧಾನ’ ಎಂದು ಸರಳವಾಗಿ ವ್ಯಾಖ್ಯಾನಿಸಬಹುದಿತ್ತು. ಆದರೆ ಅವರು ಮೌನವಾಗಿದ್ದು, ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಕಾಣಿಸಿಕೊಂಡರೆ ಅವರ ಪ್ರತಿಯೊಂದು ಹೆಜ್ಜೆಗೂ ರಾಜಕೀಯ ಅರ್ಥ ಹುಡುಕಲಾಗುತ್ತದೆ. ಇತ್ತೀಚಿನ ಶಾಸಕಾಂಗ ಪಕ್ಷದ ಸಭೆಗೆ ಸಿದ್ದರಾಮಯ್ಯ ಮಾತ್ರವಲ್ಲದೆ 20ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದರೆಂಬ ವರದಿಯೂ ಬಂದಿದೆ. ಇದು ನೇರ ಬಂಡಾಯ ಎಂದು ಹೇಳುವುದು ಅತಿಶಯೋಕ್ತಿಯಾಗಬಹುದು. ಆದರೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ನಂತರವೂ ಹಳೆಯ ಸಾಮಾಜಿಕ-ರಾಜಕೀಯ ಜಾಲ ಸಂಪೂರ್ಣವಾಗಿ ಹೊಸ ನಾಯಕತ್ವದ ನಿಯಂತ್ರಣಕ್ಕೆ ಬಂದಿಲ್ಲ ಎಂಬ ಸೂಚನೆಯನ್ನು ಇದು ನೀಡುತ್ತದೆ. 2028ರ ಚುನಾವಣೆಯ ನೆರಳು ಇಲ್ಲಿ ಕಾಣಿಸುತ್ತಿದೆ. ಇಡೀ ಬೆಳವಣಿಗೆಯನ್ನು 2028ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಸಿದ್ದರಾಮಯ್ಯನವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಹಾಗಾಗಿಯೇ ಇಲ್ಲಿ ಅಹಿಂದ ರಾಜಕಾರಣ ಮತ್ತೆ ಪ್ರಸ್ತುತವಾಗುತ್ತದೆ. ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲದ ನಾಯಕನೂ ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸಬಹುದು.

ಪಕ್ಷದ ಅಭ್ಯರ್ಥಿಗಳ ಆಯ್ಕೆ, ಸಾಮಾಜಿಕ ಸಮೀಕರಣ, ಮತದಾರರ ಮನೋಭಾವ ಮತ್ತು ಪಕ್ಷದ ಪ್ರಚಾರದ ದಿಕ್ಕಿನ ಮೇಲೆ ಪ್ರಭಾವ ಬೀರುವಷ್ಟು ದೊಡ್ಡ ನಾಯಕತ್ವ ಸಿದ್ದರಾಮಯ್ಯನವರಲ್ಲಿದೆ. ಹೀಗಾಗಿ 2028ರಲ್ಲಿ ಅವರು ಸ್ಪರ್ಧಿಸದಿದ್ದರೂ, ಚುನಾವಣಾ ರಾಜಕೀಯದಿಂದ ಹೊರಗುಳಿಯುತ್ತಾರೆ ಎಂದು ಅರ್ಥವಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ. ಅಹಿಂದದ ಪುನರುತ್ಥಾನ ಬಿಜೆಪಿಗೆ ಯಾವ ಪರಿಣಾಮ ಬೀರಬಹುದು!? ಅಹಿಂದ ಮತ್ತೆ ರಾಜಕೀಯದ ಕೇಂದ್ರಬಿಂದುವಾದರೆ ಬಿಜೆಪಿ ತನ್ನ ಸಾಮಾಜಿಕ ವಿಸ್ತರಣೆಯ ತಂತ್ರವನ್ನು ಮರುಪರಿಶೀಲಿಸಬೇಕಾಗುತ್ತದೆ. ಬಿಜೆಪಿ ಬಹುಕಾಲದಿಂದ ಕಾಂಗ್ರೆಸ್‌ನ ಅಹಿಂದ ರಾಜಕಾರಣಕ್ಕೆ ಪರ್ಯಾಯ ಸಾಮಾಜಿಕ ಸಮೀಕರಣ ಕಟ್ಟಲು ಪ್ರಯತ್ನಿಸುತ್ತಿದೆ. ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ವರ್ಗಗಳು ಮತ್ತು ಇತರ ಸಮುದಾಯಗಳ ನಡುವೆ ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನ ಅದರ ರಾಜಕೀಯದ ಭಾಗವಾಗಿದೆ.

ಸಿದ್ದರಾಮಯ್ಯ ಮತ್ತೆ ಅಹಿಂದವನ್ನು ಸಕ್ರಿಯಗೊಳಿಸಿದರೆ ಕರ್ನಾಟಕದ ಚುನಾವಣಾ ರಾಜಕೀಯ ಮತ್ತೆ ‘ಯಾರು ಯಾರ ಜೊತೆ?’ ಎಂಬ ಸಾಮಾಜಿಕ ಸಮೀಕರಣದ ಪ್ರಶ್ನೆಯತ್ತ ತಿರುಗಬಹುದು. ಆದರೆ ಇಲ್ಲಿಯೂ ಒಂದು ಎಚ್ಚರಿಕೆ ಅಗತ್ಯ. ಅಹಿಂದ ಎನ್ನುವುದು ಎರಡುವರೆ ದಶಕದ ಆರಂಭದಲ್ಲಿದ್ದ ಅದೇ ರಾಜಕೀಯ ಪರಿಸ್ಥಿತಿಯಲ್ಲಿ ಈಗಿಲ್ಲ. ಹೊಸ ತಲೆಮಾರಿನ ಮತದಾರರು, ಬದಲಾಗಿರುವ ಉದ್ಯೋಗದ ಪ್ರಶ್ನೆಗಳು, ಶಿಕ್ಷಣ, ನಗರೀಕರಣ, ಯುವಕರ ನಿರೀಕ್ಷೆಗಳು ಮತ್ತು ಸಾಮಾಜಿಕ ಮಾಧ್ಯಮದ ರಾಜಕೀಯ—ಇವೆಲ್ಲವೂ ರಾಜಕೀಯ ಸಮೀಕರಣಗಳನ್ನು ಬದಲಿಸಿವೆ ಅಂತ ಅನ್ನಿಸುತ್ತದೆ. ಇನ್ನು, ಮುಖ್ಯಮಂತ್ರಿ ಶಿವಕುಮಾರ್‌ಗೆ ಇರುವ ಏಕೈಕ ಪರಿಣಾಮಕಾರಿ ದಾರಿ ಯಾವುದು!?  ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ರಾಜಕೀಯ ಎದುರಾಳಿಯನ್ನಾಗಿ ಮಾಡಿಕೊಂಡು ಹೋರಾಡುವುದು ಕಾಂಗ್ರೆಸ್‌ಗೆ ಆತ್ಮಹತ್ಯೆಯ ತಂತ್ರವಾಗಬಹುದು.

ಹಾಗಾಗಿ  ಜಾಣ್ಮೆಯಿಂದ ಅಹಿಂದದ ಸಾಮಾಜಿಕ ಆಶಯಗಳನ್ನು ತಮ್ಮ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಜೋಡಿಸಬೇಕಿದೆ. ಸಿದ್ದರಾಮಯ್ಯನವರನ್ನು ಎದುರಿಸುವ ಬದಲು ಸಿದ್ದರಾಮಯ್ಯನವರ ಸಾಮಾಜಿಕ ನೆಲೆಯನ್ನು ತಮ್ಮತ್ತ ಸೆಳೆಯುವಂತೆ ನಡೆದುಕೊಂಡರೇ ಶಿವಕುಮಾರ್ ಅವರ ಮುಂದಿನ ರಾಜಕೀಯ ಭವಿಷ್ಯದ ಹಾದಿಗೂ ಅನುಕೂಲ ಮಾಡಿಕೊಡಬಹುದು. ಸಿದ್ದರಾಮಯ್ಯನವರಿಗೆ ಗೌರವ ನೀಡುತ್ತಲೇ ಪಕ್ಷದೊಳಗಿನ ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಬೇಕು. ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳೊಂದಿಗೆ ಹೊಸ ತಲೆಮಾರಿನ ನಾಯಕತ್ವವನ್ನು ಬೆಳೆಸಬೇಕು. ಅಲ್ಪಸಂಖ್ಯಾತರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಜೊತೆಗೆ ತಮ್ಮ ಒಕ್ಕಲಿಗ ಹಾಗೂ ಇತರ ಸಾಮಾಜಿಕ ಬೆಂಬಲವನ್ನು ವಿಸ್ತರಿಸಬೇಕು. ಅಂದರೆ ಶಿವಕುಮಾರ್ ಅವರ ಮುಂದೆ ಇರುವ ಗುರಿ ‘ಸಿದ್ದರಾಮಯ್ಯನವರ ಅಹಿಂದ ವಿರುದ್ಧ ಶಿವಕುಮಾರ್’ ಎನ್ನುವ ಸಮೀಕರಣ ನಿರ್ಮಿಸುವುದಲ್ಲ; ‘ಅಹಿಂದ + ಅಭಿವೃದ್ಧಿ + ಹೊಸ ನಾಯಕತ್ವ’ ಎನ್ನುವ ಹೊಸ ಕಾಂಗ್ರೆಸ್ ಮಾದರಿ ಕಟ್ಟುವುದು. ಒಟ್ಟಿನಲ್ಲಿ,  ಸೆಪ್ಟೆಂಬರ್ 6ರ ಅಹಿಂದ ಸಮಾವೇಶ ಈ ಮೌನದ ಮೊದಲ ಸಾರ್ವಜನಿಕ ರಾಜಕೀಯ ಪರೀಕ್ಷೆಯಾಗಬಹುದು.

ಅದು ಕೇವಲ ನೆನಪಿನ ಕಾರ್ಯಕ್ರಮವಾಗಿ ಉಳಿಯುತ್ತದೆಯೇ, ಅಥವಾ ಸಿದ್ದರಾಮಯ್ಯನವರ ಹೊಸ ರಾಜಕೀಯ ಅಧ್ಯಾಯಕ್ಕೆ ಚಾಲನೆ ನೀಡುತ್ತದೆಯೇ ಎಂಬುದನ್ನು ಅವರ ಭಾಷಣಕ್ಕಿಂತಲೂ ಸಮಾವೇಶಕ್ಕೆ ಸೇರುವ ಸಾಮಾಜಿಕ ಶಕ್ತಿಯ ಪ್ರಮಾಣ ಮತ್ತು ಅದರ ನಂತರದ ರಾಜಕೀಯ ಚಟುವಟಿಕೆಗಳು ನಿರ್ಧರಿಸಲಿವೆ. ಕರ್ನಾಟಕ ಕಾಂಗ್ರೆಸ್‌ಗೆ ಈಗ ಎದುರಾಗಿರುವ ಪ್ರಶ್ನೆ ಏನೆಂದರೇ,  ಸಿದ್ದರಾಮಯ್ಯ ಅವರಿಲ್ಲದೆ ಅಧಿಕಾರ ನಡೆಸುವ ಕಾಂಗ್ರೆಸ್, ಅವರ ಸಾಮಾಜಿಕ ರಾಜಕೀಯವನ್ನು ತನ್ನೊಳಗೆ ಉಳಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗೆ ಶಿವಕುಮಾರ್ ಸರ್ಕಾರ ಕೊಡುವ ಉತ್ತರವೇ ಮುಂದಿನ ಕರ್ನಾಟಕ ರಾಜಕೀಯದ ದಿಕ್ಕನ್ನು ಬಹುಮಟ್ಟಿಗೆ ನಿರ್ಧರಿಸಬಹುದು. ಕಾದು ನೋಡೋಣ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment