Monday, August 24, 2026

ಬೆಂಗಳೂರು ಟನಲ್‌ ರೋಡ್‌! ಕಾರ್ಪೊರೇಟ್ ಹಿತಾಸಕ್ತಿ? ಡಿಕೆಶಿ- ಅದಾನಿ ಭೇಟಿ | ₹17,698 to ₹22,267 ಕೋಟಿ

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒತ್ತಡದಲ್ಲಿದೆ; ನಗರ ವಿಸ್ತರಣೆ ನಿಯಂತ್ರಣವಿಲ್ಲದೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಟ್ರಾಫಿಕ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಭೂಮಿಯ ಮೇಲಿನ ಸಮಸ್ಯೆಯನ್ನು ಭೂಗರ್ಭಕ್ಕೆ ತಳ್ಳುವ ₹22,267 ಕೋಟಿ ವೆಚ್ಚದ ಸುರಂಗ ರಸ್ತೆ ಯೋಜನೆಯನ್ನು ಮುಂದಿಟ್ಟಿದೆ. ಆದರೆ ಈಗ ಈ ಯೋಜನೆಯ ಸುತ್ತ ಎದ್ದಿರುವ ಪ್ರಶ್ನೆ ಕೇವಲ “ಸುರಂಗ ರಸ್ತೆ ಬೇಕೇ ಬೇಡವೇ?” ಎಂಬುದಲ್ಲ. ಈ ಯೋಜನೆಯನ್ನು ಯಾರು ನಿರ್ಮಿಸಲಿದ್ದಾರೆ? ಯಾವ ಬೆಲೆಗೆ? ಯಾವ ಷರತ್ತುಗಳ ಮೇಲೆ? ಮತ್ತು ಸಾರ್ವಜನಿಕ ಹಣದಿಂದ ನಿರ್ಮಾಣವಾಗುವ ಈ ಬೃಹತ್ ಮೂಲಸೌಕರ್ಯದಿಂದ ಅಂತಿಮವಾಗಿ ಲಾಭ ಯಾರಿಗೆ? ಎಂಬ ಪ್ರಶ್ನೆಗಳೂ ಮುಖ್ಯವಾಗಿವೆ.

ನೋಡಿ ಈ ಎಲ್ಲಾ ಪ್ರಶ್ನೆಗಳು ಇನ್ನಷ್ಟು ತೀವ್ರವಾಗಲು ಕಾರಣ—ಯೋಜನೆಯ ಎರಡೂ ಪ್ಯಾಕೇಜ್‌ಗಳಿಗೆ ಅದಾನಿ ಎಂಟರ್‌ಪ್ರೈಸಸ್ ಅತಿ ಕಡಿಮೆ ಬಿಡ್‌ದಾರನಾಗಿ ಹೊರಹೊಮ್ಮಿರುವ ಸಂದರ್ಭದಲ್ಲಿ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಆಗಸ್ಟ್ 23ರಂದು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಈ ಭೇಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಇದನ್ನು “ಸೌಜನ್ಯದ ಭೇಟಿ” ಎಂದು ಹೇಳಿದ್ದಾರೆ. ಶಿವಕುಮಾರ್ ಅವರ ಪ್ರಕಾರ, ಅದಾನಿ ಬಹುಕಾಲದಿಂದ ಭೇಟಿಗೆ ಸಮಯ ಕೇಳುತ್ತಿದ್ದರು ಮತ್ತು ರಾಜ್ಯದಲ್ಲಿ ಸಮೂಹದ ವಿವಿಧ ಚಟುವಟಿಕೆಗಳ ಕುರಿತು ಮಾತುಕತೆ ನಡೆದಿಲ್ಲ. ಆದರೆ ಭೇಟಿ ನಡೆದ ಸಮಯ ಮತ್ತು ಸುರಂಗ ಯೋಜನೆಯ ಗುತ್ತಿಗೆ ನಿರ್ಧಾರ ಇನ್ನೂ ಅಂತಿಮವಾಗದಿರುವುದು ಸಹಜವಾಗಿಯೇ ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಮುಖ್ಯವಾದದ್ದು ಭೇಟಿಯನ್ನು ಆಧರಿಸಿ ಯಾವುದೇ ಒಳಒಪ್ಪಂದದ ಆರೋಪವನ್ನು ಸಾಬೀತಾದ ಸಂಗತಿಯಂತೆ ಹೇಳಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪಾರದರ್ಶಕ ಪ್ರಶ್ನೆಗಳನ್ನು ಕೇಳುವುದು ಮಾತ್ರ ಸಂಪೂರ್ಣ ನ್ಯಾಯಸಮ್ಮತ.

17,698 ಕೋಟಿಯ ಅಂದಾಜು; ₹22,267 ಕೋಟಿಯ ಬಿಡ್ ಇಲ್ಲಿ ಪ್ರಮುಖ ಪ್ರಶ್ನೆಗಳನ್ನು ಎಬ್ಬಿಸುತ್ತದೆ.  ಸುರಂಗ ರಸ್ತೆ ಯೋಜನೆಯ ರಾಜ್ಯ ಸರ್ಕಾರದ ಅಂದಾಜು ವೆಚ್ಚ ಸುಮಾರು ₹17,698 ಕೋಟಿ. ಅದಾನಿ ಎಂಟರ್‌ಪ್ರೈಸಸ್ ಸಲ್ಲಿಸಿರುವ ಬಿಡ್ ₹22,267 ಕೋಟಿ. ಅಂದರೆ ಸರ್ಕಾರದ ಅಂದಾಜಿಗಿಂತ ಸುಮಾರು ₹4,600 ಕೋಟಿ ಹೆಚ್ಚು. ಸುಮಾರು 16.75 ಕಿ.ಮೀ ಉದ್ದದ ಹೆಬ್ಬಾಳ–ಸೆಂಟ್ರಲ್ ಸಿಲ್ಕ್ ಬೋರ್ಡ್ ಸುರಂಗ ಸಂಪರ್ಕದ ಎರಡೂ ಪ್ಯಾಕೇಜ್‌ಗಳಿಗೆ ಅದಾನಿ ಸಂಸ್ಥೆ L1 ಆಗಿದೆ; ಆದರೆ ಗುತ್ತಿಗೆ ಇನ್ನೂ ಅಧಿಕೃತವಾಗಿ ಅಂತಿಮಗೊಂಡಿಲ್ಲ. ಇದು ಸಾಮಾನ್ಯ ಟೆಂಡರ್ ಅಂಕಿ-ಅಂಶವಲ್ಲ.  ಸರ್ಕಾರದ ಅಂದಾಜಿಗಿಂತ ಸಾವಿರಾರು ಕೋಟಿ ರೂಪಾಯಿ ಹೆಚ್ಚಿರುವ ಬಿಡ್ ಅನ್ನು ಸ್ವೀಕರಿಸುವುದಾದರೆ, ಅದರ ಹಿಂದೆ ಇರುವ ಹಣಕಾಸು ತರ್ಕವನ್ನು ಜನರಿಗೆ ಸ್ಪಷ್ಟಪಡಿಸಬೇಕಾಗುತ್ತದೆ. ಹೆಚ್ಚುವರಿ ವೆಚ್ಚ ಏಕೆ? ಯೋಜನೆಯ ವೆಚ್ಚ ಏರಿಕೆಗೆ ಕಾರಣವೇನು? ನಿರ್ಮಾಣ ಅವಧಿ ಎಷ್ಟು? ಸಾಲದ ಹೊರೆ ಯಾರ ಮೇಲಿದೆ? ನಿರ್ವಹಣಾ ವೆಚ್ಚ ಎಷ್ಟು? ಬಳಕೆದಾರರಿಂದ ಶುಲ್ಕ ವಸೂಲಿ ಮಾಡಲಾಗುತ್ತದೆಯೇ? ಯೋಜನೆಯ ಆರ್ಥಿಕ ಲಾಭ-ನಷ್ಟದ ಸಾರ್ವಜನಿಕ ಅಧ್ಯಯನ ನಡೆದಿದೆಯೇ? ಇವುಗಳಿಗೆ ಉತ್ತರ ನೀಡದೆ “ಟ್ರಾಫಿಕ್ ಪರಿಹಾರ” ಎಂಬ ಒಂದೇ ಘೋಷಣೆಯ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸಮರ್ಪಕವಲ್ಲ.

ನೋಡಿ, ಟ್ರಾಫಿಕ್ ಸಮಸ್ಯೆಗೆ ಸುರಂಗವೇ ಪರಿಹಾರವೇ? ಇದು ಇನ್ನೂ ಮೂಲಭೂತ ಪ್ರಶ್ನೆ. ನಗರ ಸಾರಿಗೆ ತಜ್ಞರ ಒಂದು ಪ್ರಮುಖ ವಾದವೇನೆಂದರೆ, ಹೆಚ್ಚುವರಿ ರಸ್ತೆ ಸಾಮರ್ಥ್ಯ ಹೆಚ್ಚಿಸಿದರೆ ವಾಹನ ಸಂಚಾರವೂ ಹೆಚ್ಚುವ ಸಾಧ್ಯತೆ ಇದೆ. ಇದನ್ನು ‘induced demand’ ಎಂದು ಕರೆಯಲಾಗುತ್ತದೆ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆ ಕೇವಲ ರಸ್ತೆಗಳ ಕೊರತೆಯಲ್ಲ. ಅದು ಸಾರ್ವಜನಿಕ ಸಾರಿಗೆಯ ಸಾಮರ್ಥ್ಯ, ಮೆಟ್ರೋ–ಬಸ್ ಸಂಪರ್ಕ, ಪಾದಚಾರಿ ಮೂಲಸೌಕರ್ಯ, ನಗರ ಯೋಜನೆ, ಉದ್ಯೋಗ–ವಸತಿ ಅಸಮತೋಲನ ಮತ್ತು ಖಾಸಗಿ ವಾಹನ ಅವಲಂಬನೆಯ ಒಟ್ಟಾರೆ ಸಮಸ್ಯೆ. ಹೀಗಿರುವಾಗ ₹22,267 ಕೋಟಿಯನ್ನು ಟನಲ್‌ ರಸ್ತೆಗೆ ಹಾಕುವುದಕ್ಕಿಂತ, ಅದೇ ಪ್ರಮಾಣದ ಸಂಪನ್ಮೂಲವನ್ನು ಸಾರ್ವಜನಿಕ ಸಾರಿಗೆ, ಬಸ್ ರ್ಯಾಪಿಡ್ ಟ್ರಾನ್ಸಿಟ್, ಮೆಟ್ರೋ ಸಂಪರ್ಕ ವಿಸ್ತರಣೆ, ಪಾದಚಾರಿ ಮಾರ್ಗಗಳು, ಸೈಕಲ್ ಜಾಲ ಮತ್ತು ಕೊನೆಯ ಮೈಲಿ ಸಂಪರ್ಕಕ್ಕೆ ಬಳಸಿದರೆ ನಗರದ ಸಂಚಾರದ ಮೇಲೆ ಪರಿಣಾಮ ಹೇಗಿರುತ್ತದೆ ಎಂಬ ಹೋಲಿಕೆ ಅಧ್ಯಯನ ಸಾರ್ವಜನಿಕವಾಗಿ ಲಭ್ಯವಾಗಬೇಕಲ್ಲವೇ? ಸುರಂಗ ಭೂಮಿಯ ಗರ್ಭದಲ್ಲಿ ನಿರ್ಮಾಣ ಆಗುತ್ತದೆ ಎಂಬ ಕಾರಣಕ್ಕೆ ಅದು ಪರಿಸರ ಸ್ನೇಹಿ ಯೋಜನೆ ಆಗುವುದಿಲ್ಲ. ಸುರಂಗದ ಪ್ರವೇಶ–ನಿರ್ಗಮನ ಪ್ರದೇಶಗಳು, ನಿರ್ಮಾಣ ಚಟುವಟಿಕೆ, ಮಣ್ಣು ತೆಗೆಯುವಿಕೆ, ಡಂಪಿಂಗ್, ನೀರಿನ ಹರಿವು, ಭೂಗರ್ಭಜಲದ ಮೇಲೆ ಪರಿಣಾಮ, ಮರಗಳ ತೆರವು, ನಿರ್ಮಾಣ ಅವಧಿಯ ಧೂಳು ಮತ್ತು ಶಬ್ದ—ಇವೆಲ್ಲವೂ ಪರಿಸರದ ಪ್ರಶ್ನೆಗಳೇ. ಅದರಲ್ಲೂ ಬೆಂಗಳೂರು ಈಗಾಗಲೇ ತನ್ನ ಹಸಿರು ಪ್ರದೇಶ, ಕೆರೆಗಳು ಮತ್ತು ಮರಗಳ ಕುರಿತು ಗಂಭೀರವಾದ ಸಾರ್ವಜನಿಕ ಚರ್ಚೆಯನ್ನು ಎದುರಿಸುತ್ತಿರುವ ನಗರ. ಹೀಗಾಗಿ ಸರ್ಕಾರದ ಮುಂದೆ ಇರುವ ಪ್ರಶ್ನೆ ಕೇವಲ “ಸುರಂಗದ ಒಳಗೆ ಎಷ್ಟು ವಾಹನಗಳು ಓಡುತ್ತವೆ?” ಎಂಬುದಲ್ಲ.ಸುರಂಗ ನಿರ್ಮಾಣದ ಮೊದಲು ಮತ್ತು ನಂತರ ನಗರದ ಪರಿಸರದ ಮೇಲೆ ಅದರ ಒಟ್ಟು ಪರಿಣಾಮವೇನು? ಎಂಬುದಾಗಿದೆ. ಇನ್ನು, ಅದಾನಿ ಸಮೂಹದ ಬಿಡ್‌ ಬಗ್ಗೆ ಯಾಕೆ ಇಲ್ಲಿ ಚರ್ಚೆಗೆ ಬರುತ್ತಿದೆ? ಎನ್ನುವುದನ್ನು ನೋಡುವುದಾದರೇ, ಉಡುಪಿಯ UPCL ಪ್ರಕರಣ ಪ್ರಸ್ತುತ ಚರ್ಚೆಗೆ ಬರುತ್ತದೆ.

ಅದಾನಿ ಸ್ವಾಮ್ಯದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು 2022ರಲ್ಲಿ ಪರಿಸರ ಹಾನಿ ಮತ್ತು ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿ ₹52.02 ಕೋಟಿ ಪರಿಸರ ಪರಿಹಾರ ಪಾವತಿಸಲು ನಿರ್ದೇಶಿಸಿತ್ತು. ಈಗಾಗಲೇ ಪಾವತಿಸಿದ್ದ ₹5 ಕೋಟಿಯನ್ನು ಕ್ರೆಡಿಟ್ ನೀಡಿ ಉಳಿದ ಮೊತ್ತವನ್ನು ಪಾವತಿಸಬೇಕೆಂದು NGT ಆದೇಶಿಸಿತ್ತು. ತೀರ್ಪಿನಲ್ಲಿ ಪರಿಸರ ಹಾನಿ, ಆರೋಗ್ಯದ ಪರಿಣಾಮಗಳು ಮತ್ತು ಕೃಷಿ ಚಟುವಟಿಕೆಗಳ ಮೇಲೆ ಉಂಟಾದ ಪರಿಣಾಮಗಳ ಕುರಿತು ಕ್ರಮಗಳನ್ನು ಸೂಚಿಸಲಾಗಿತ್ತು. ಅದಾನಿ ಪವರ್‌ನ ಸ್ವಂತ ವರದಿಯಲ್ಲಿಯೂ NGT 2022ರ ಆದೇಶದಂತೆ ₹47.02 ಕೋಟಿ ಹೆಚ್ಚುವರಿ ಪರಿಸರ ಪರಿಹಾರಕ್ಕೆ ಸಂಬಂಧಿಸಿದ ವಿಷಯ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದನ್ನು ದಾಖಲಿಸಲಾಗಿದೆ. ಅಂದರೆ ಈ ಪ್ರಕರಣವನ್ನು “ದಂಡ ಪಾವತಿಸಿ ಮುಗಿದ ಕಥೆ” ಎಂದು ಸರಳೀಕರಿಸಲಾಗುವುದಿಲ್ಲ; ಕಾನೂನು ಪ್ರಕ್ರಿಯೆಯೂ ಸಂಬಂಧಿಸಿದೆ. ಹೀಗಾಗಿ ಸುರಂಗ ಯೋಜನೆಯ ಸಂದರ್ಭದಲ್ಲಿ ಪರಿಸರವಾದಿಗಳು ಈ ಹಿಂದಿನ ದಾಖಲೆಯನ್ನು ಪ್ರಶ್ನಿಸುವುದು ಅಸಹಜವಲ್ಲ. ಆದರೆ ಇಲ್ಲೊಂದು ಸೂಕ್ಷ್ಮ ವ್ಯತ್ಯಾಸವಿದೆ: ಉಡುಪಿಯ ವಿದ್ಯುತ್ ಸ್ಥಾವರದ ಪರಿಸರ ಪ್ರಕರಣವನ್ನು ಆಧರಿಸಿ ಸುರಂಗ ರಸ್ತೆ ಯೋಜನೆಯಲ್ಲಿಯೂ ಅದೇ ರೀತಿಯ ಉಲ್ಲಂಘನೆ ಖಚಿತ ಎಂದು ಹೇಳುವುದು ಸರಿಯಲ್ಲ. ಬದಲಿಗೆ, ಹಿಂದಿನ ಪರಿಸರ ದಾಖಲೆಗಳನ್ನು ಪರಿಗಣಿಸಿ ಬೆಂಗಳೂರಿನ ಯೋಜನೆಗೆ ಇನ್ನಷ್ಟು ಕಠಿಣ ಪರಿಸರ ಮಾನದಂಡ, ಸ್ವತಂತ್ರ ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಪರಿಶೀಲನೆ ಇರಬೇಕು ಎಂಬುದು ಹೆಚ್ಚು ಸಮರ್ಥನೀಯವಾದ ಬೇಡಿಕೆ. ಇನ್ನು, ಕಾಂಗ್ರೆಸ್‌ ‘ಅದಾನಿ’ಬಗ್ಗೆ ಮಾಡುವ ವಿರೋಧವೂ ಈಗ ಪ್ರಶ್ನೆಯಲ್ಲಿದೆ.

 ಈ ಬೆಳವಣಿಗೆಯ ರಾಜಕೀಯ ಆಯಾಮವನ್ನೂ ಕಡೆಗಣಿಸಲಾಗದು. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ಸಂದರ್ಭಗಳಲ್ಲಿ ಅದಾನಿ ಸಮೂಹದ ವಿರುದ್ಧ ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಕರ್ನಾಟಕದಲ್ಲಿ ಅದೇ ಸಮೂಹದ ಮುಖ್ಯಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದು ಬಿಜೆಪಿಗೆ ಕಾಂಗ್ರೆಸ್‌ನ “ದ್ವಂದ್ವ ನೀತಿ” ಆರೋಪಿಸಲು ಅವಕಾಶ ನೀಡಿದೆ. ಬಿಜೆಪಿ ನಾಯಕ ಆರ್. ಅಶೋಕ್ ಕೂಡ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಆದರೆ ಎಡಪಂಥೀಯ ದೃಷ್ಟಿಕೋನದಿಂದ ನೋಡಿದಾಗ ಬಿಜೆಪಿಯ ಟೀಕೆಯನ್ನು ಹಾಗೆಯೇ ಸ್ವೀಕರಿಸುವ ಅಗತ್ಯವೂ ಇಲ್ಲ. ಯಾಕೆಂದರೆ ಪ್ರಶ್ನೆ “ಕಾಂಗ್ರೆಸ್ ಅದಾನಿಯನ್ನು ಭೇಟಿಯಾಗಬಹುದೇ?” ಎಂಬುದಕ್ಕಿಂತ ದೊಡ್ಡ ಪ್ರಶ್ನೆ ಏನೆಂದರೇ, ಒಂದು ಸರ್ಕಾರ ದೊಡ್ಡ ಕಾರ್ಪೊರೇಟ್ ಸಂಸ್ಥೆಯೊಂದಿಗೆ ವ್ಯವಹರಿಸುವಾಗ ಸಾರ್ವಜನಿಕ ಹಿತಾಸಕ್ತಿ, ಟೆಂಡರ್ ಪಾರದರ್ಶಕತೆ, ಪರಿಸರ ನ್ಯಾಯ ಮತ್ತು ಹಣಕಾಸಿನ ಹೊಣೆಗಾರಿಕೆಯನ್ನು ಹೇಗೆ ಖಚಿತಪಡಿಸುತ್ತದೆ? ಎನ್ನುವುದಾಗಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅದಾನಿಯನ್ನು ಟೀಕಿಸಿ, ರಾಜ್ಯದಲ್ಲಿ ಅದೇ ಕಾರ್ಪೊರೇಟ್ ಸಮೂಹದೊಂದಿಗೆ ದೊಡ್ಡ ಮೂಲಸೌಕರ್ಯ ಒಪ್ಪಂದ ಮಾಡಿಕೊಳ್ಳುವುದಾದರೆ ಅದು ರಾಜಕೀಯ ವಿರೋಧಾಭಾಸವಾಗಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಇದು ಭಾರತೀಯ ಅಭಿವೃದ್ಧಿ ಮಾದರಿಯಲ್ಲಿನ ಕಾರ್ಪೊರೇಟ್ ಅವಲಂಬನೆಯ ಪ್ರಶ್ನೆ. ‘ಅಭಿವೃದ್ಧಿ’ ಯಾರಿಗಾಗಿ? ₹22,267 ಕೋಟಿ ಎಂದರೆ ಕೇವಲ ಒಂದು ಯೋಜನೆಯ ಮೊತ್ತವಲ್ಲ. ಅದು ಜನರ ತೆರಿಗೆ ಹಣ. ಆ ಹಣವನ್ನು ನಗರಕ್ಕೆ ಸುರಂಗ ನಿರ್ಮಿಸಲು ಬಳಸಿದಾಗ, ಅದರ ಪ್ರಯೋಜನವನ್ನು ಯಾರು ಪಡೆಯುತ್ತಾರೆ ಎಂಬುದನ್ನು ಕೇಳಲೇಬೇಕು. ಸುರಂಗದ ಮೂಲಕ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಖಾಸಗಿ ಕಾರು ಮಾಲೀಕರಿಗೆ ಹೆಚ್ಚು ಪ್ರಯೋಜನವಾಗುತ್ತದೆಯೇ? ಅಥವಾ ಬಸ್ಸಿನಲ್ಲಿ ಪ್ರಯಾಣಿಸುವ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಕೆಳ-ಮಧ್ಯಮ ವರ್ಗದ ಜನರಿಗೆ?  ನಗರದ ಮೂಲಸೌಕರ್ಯವನ್ನು ಕಾರುಗಳಿಗಾಗಿ ನಿರ್ಮಿಸಬೇಕೇ, ಜನರಿಗಾಗಿ ನಿರ್ಮಿಸಬೇಕೇ? ಒಂದು ಕಾರಿಗೆ ಸುರಂಗ ಮಾರ್ಗದಲ್ಲಿ ವೇಗದ ಮಾರ್ಗ ಸಿಗುತ್ತದೆ. ಆದರೆ ಅದೇ ನಗರದಲ್ಲಿ ಬಸ್ಸಿಗಾಗಿ ಜನರು ರಸ್ತೆಯ ಬದಿಯಲ್ಲಿ ಅರ್ಧ ಗಂಟೆ ಕಾಯಬೇಕಾದರೆ, ಅದು ಯಾವ ರೀತಿಯ ನಗರಾಭಿವೃದ್ಧಿ? ಇನ್ನು, ಡಿಕೆಶಿ ಅವರು ಹೇಳಿದ ಹಾಗೆ, ಸೌಜನ್ಯದ ಭೇಟಿ ಇರಲಿ; ಪಾರದರ್ಶಕತೆಯೂ ಇರಲಿ.  ಗೌತಮ್ ಅದಾನಿ–ಡಿ.ಕೆ. ಶಿವಕುಮಾರ್ ಭೇಟಿ ನಿಜವಾಗಿಯೂ ಕೇವಲ ಸೌಜನ್ಯದ ಭೇಟಿಯಾಗಿರಬಹುದು.

ಅದನ್ನು ಯೋಜನೆಯ ಗುತ್ತಿಗೆಗೆ ಸಂಬಂಧಿಸಿದ ಗುಪ್ತ ಮಾತುಕತೆ ಎಂದು ಘೋಷಿಸುವ ಆಧಾರ ಈಗಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿಯ ಯೋಜನೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಕಂಪನಿಯ ಮುಖ್ಯಸ್ಥರು ಮತ್ತು ನಿರ್ಧಾರ ಕೈಗೊಳ್ಳುವ ಸರ್ಕಾರದ ಮುಖ್ಯಸ್ಥರ ನಡುವೆ ಭೇಟಿ ನಡೆದಿರುವಾಗ, ಪಾರದರ್ಶಕತೆಯ ಮಾನದಂಡ ಇನ್ನಷ್ಟು ಎತ್ತರವಾಗಬೇಕು.  ಸರ್ಕಾರ ಮಾಡಬೇಕಾದದ್ದು ಸರಳವಿದೆ. * ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ಸಾಧ್ಯವಾದಷ್ಟು ಸಾರ್ವಜನಿಕಗೊಳಿಸಬೇಕು. * ಟೆಂಡರ್ ಮೌಲ್ಯಮಾಪನದ ಮಾನದಂಡಗಳನ್ನು ಬಹಿರಂಗಪಡಿಸಬೇಕು. * ₹17,698 ಕೋಟಿಯ ಅಂದಾಜಿನಿಂದ ₹22,267 ಕೋಟಿಯ ಬಿಡ್‌ಗೆ ಏಕೆ ಬಂದಿತು ಎಂಬುದನ್ನು ವಿವರಿಸಬೇಕು. * ಯೋಜನೆಯ ಪರಿಸರ ಪರಿಣಾಮ ಅಧ್ಯಯನವನ್ನು ಸಾರ್ವಜನಿಕ ಚರ್ಚೆಗೆ ತೆರೆಯಬೇಕು. * ಪರ್ಯಾಯ ಸಾರ್ವಜನಿಕ ಸಾರಿಗೆ ಹೂಡಿಕೆಗಳೊಂದಿಗೆ ಯೋಜನೆಯ ವೆಚ್ಚ–ಲಾಭ ಹೋಲಿಕೆ ಪ್ರಕಟಿಸಬೇಕು. * ಗುತ್ತಿಗೆದಾರರ ಹಿಂದಿನ ಪರಿಸರ ಮತ್ತು ಕಾನೂನು ದಾಖಲೆಗಳ ಸ್ವತಂತ್ರ ಪರಿಶೀಲನೆ ನಡೆಸಬೇಕು. * ಅಂತಿಮ ನಿರ್ಧಾರಕ್ಕೂ ಮೊದಲು ವಿಧಾನಮಂಡಲ ಮತ್ತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಬೆಂಗಳೂರಿನ ಭವಿಷ್ಯವನ್ನು ‘ಸುರಂಗ’ದೊಳಗೆ ಮುಚ್ಚಬಾರದು. ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ತುರ್ತು ಪರಿಹಾರ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ.ಆದರೆ ತುರ್ತು ಪರಿಹಾರವೆಂದರೆ ದುಬಾರಿ ಪರಿಹಾರ ಎಂದರ್ಥವಲ್ಲ. ಮೂಲಸೌಕರ್ಯ ಅಭಿವೃದ್ಧಿ ಎಂದರೆ ದೊಡ್ಡ ಕಂಪನಿಗಳಿಗೆ ದೊಡ್ಡ ಗುತ್ತಿಗೆ ನೀಡುವುದಷ್ಟೇ ಅಲ್ಲ. ಅದು ನಗರದಲ್ಲಿ ವಾಸಿಸುವ ಬಹುಸಂಖ್ಯಾತ ಜನರ ಬದುಕನ್ನು ಸುಲಭಗೊಳಿಸುವ ರಾಜಕೀಯ ನಿರ್ಧಾರವಾಗಬೇಕು. ಇಂದು ಕೇಳಬೇಕಾದ ಪ್ರಶ್ನೆ “ಸುರಂಗ ರಸ್ತೆ ನಿರ್ಮಾಣವಾಗುತ್ತದೆಯೇ?” ಎಂಬುದಲ್ಲ. “₹22,267 ಕೋಟಿ ಯಾರಿಗಾಗಿ ಖರ್ಚಾಗುತ್ತಿದೆ?” “ಈ ಯೋಜನೆಯಿಂದ ಬೆಂಗಳೂರು ಯಾರಿಗೆ ಹೆಚ್ಚು ಅನುಕೂಲವಾಗಲಿದೆ?” “ಸಾರ್ವಜನಿಕ ಸಾರಿಗೆಯ ಪರ್ಯಾಯಗಳನ್ನು ಯಾಕೆ ಸಮಾನ ಗಂಭೀರತೆಯಿಂದ ಪರಿಗಣಿಸಲಾಗುತ್ತಿಲ್ಲ?” ಮತ್ತು ಎಲ್ಲಕ್ಕಿಂತ ಮುಖ್ಯವಾಗಿ— “ಕಾರ್ಪೊರೇಟ್ ಬಂಡವಾಳದೊಂದಿಗೆ ಸರ್ಕಾರದ ಸಂಬಂಧದಲ್ಲಿ ಸಾರ್ವಜನಿಕ ಹಿತಾಸಕ್ತಿ ಎಲ್ಲಿದೆ?” ನೋಡಿ, ಗೌತಮ್ ಅದಾನಿ ಮತ್ತು ಡಿ.ಕೆ. ಶಿವಕುಮಾರ್ ಅವರ ಭೇಟಿ ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಬದಲಾಗಿ, ಆ ಪ್ರಶ್ನೆಗಳನ್ನು ಇನ್ನಷ್ಟು ದೊಡ್ಡದಾಗಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

- ಶ್ರೀರಾಜ್‌ ವಕ್ವಾಡಿ 

No comments:

Post a Comment