Tuesday, December 31, 2019

ಪ್ರೇಕ್ಷಕರ ಮನ ಕದ್ದ “ಸೊಮಾಲಿಯಾ ಕಡಲ್ಗಳ್ಳರು”


                            ಹಲವು ವರ್ಷಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟು ಹೇಗೆ ಮುಳುಗುವುದಕ್ಕೆ ಸಾಧ್ಯ..? ಅದರಲ್ಲಿದ್ದ ಏಳು ಮಂದಿ ಮೀನುಗಾರರು ಏನಾದರು..? ಹಡಗು ನಿಜಕ್ಕೂ ಮುಳುಗಿ ಹೋಯ್ತೇ..? ಅಥವಾ ಕಡಲ್ಗಳ್ಳರ ವಶದಲ್ಲಿದೆಯೇ..? ಇದು ಡಿಸೆಂಬರ್ ೧೫ ೨೦೧೮ ರಂದು ಮಲ್ಪೆಯಿಂದ ಮೀನುಗಾರಿಕೆಗೆ ಹೊರಟು ಹೋಗಿ ನಾಪತ್ತೆಯಾದ ‘ಸುವರ್ಣ ತ್ರಿಭುಜ’ ಬೋಟು ಸೃಷ್ಟಿಸಿದ ಪುಂಖಾನುಪುಂಖವಾದ ಪ್ರಶ್ನೆಗಳು. ಕಡಲಬ್ಬೆಯ ಮಕ್ಕಳ ನಾಪತ್ತೆ ಪ್ರಕರಣ ನಿಜಕ್ಕೂ ಆ ದಿನಮಾನಗಳಲ್ಲಿ ಕರಾವಳಿಯ ತುಂಬೆಲ್ಲಾ ಕಣ್ಣೀರ ಕೋಡಿಯನ್ನೇ ಹರಿಸಿತ್ತು.
ದಿನಕ್ಕೊಂದು ಸುದ್ದಿ ‘ಆ ಸಮುದ್ರ ತೀರದಲ್ಲಿ ಆ ಬೋಟಿನ ಅವಶೇಷಗಳು ಸಿಕ್ಕಿದೆ, ಈ ಸಮುದ್ರದ ತಟದಲ್ಲಿ ಮತ್ತೊಂದೇನೋ ಸಿಕ್ಕಿದೆ..! ಅದು ಮಲ್ಪೆಯಿಂದ ಹೊರಟ ‘ಸುವರ್ಣ ತ್ರಿಭುಜ’ ಬೋಟಿನದ್ದೇ ಹೌದಾ..?’ ಎಂಬೆಲ್ಲಾ ಊಹಾಪೋಹಗಳಲ್ಲಿ ಮೀನುಗಾರರ ಕುಟುಂಬ ಬೇಸತ್ತು ಹೋಗಿತ್ತು. ಕರಾವಳಿಯಾದ್ಯಂತ ಪ್ರತಿಭಟನೆ, ಆಕ್ರೋಶದ ದನಿ ಮುಗಿಲು ಮುಟ್ಟಿತು. ಇತ್ತ ರಾಜಕಾರಣಿಗಳ ಧೋರಣೆ ಮೀನುಗಾರರ ಉರಿಗಣ್ಣಿಗೆ ಕಾರಣವಾಯಿತು. ಹಲವಾರು ವದಂತಿಗಳು ಸುವರ್ಣ ತ್ರಿಭುಜದ ಸುತ್ತ ಹಬ್ಬಿತು. ಇಷ್ಟೆಲ್ಲಾ ಆದರೂ ಇಂದಿಗೂ ನಾಪತ್ತೆಯಾದ ಮೀನುಗಾರರನ್ನು ಯಾಕೆ ಹುಡುಕಲಾಗಲಿಲ್ಲ ಎಂಬುವುದು ಪ್ರಶ್ನೆಯಾಗಿಯೇ ಉಳಿದಿದೆ.
ಮೀನುಗಾರರು ನಾಪತ್ತೆಯಾಗಿ ಒಂದು ವರ್ಷ ಕಳೆದರೂ ಇಂದಿಗೂ ಏನೂ ಸುಳಿವು ಸಿಕ್ಕಿಲ್ಲ. ಮೀನುಗಾರರ ಕುಟುಂಬ ಸರ್ಕಾರದ ಮೊರೆ ಹೋಯಿತು, ದೇವರು, ದೈವ, ಭೂತ, ಕೋಲಗಳ ಮೊರೆ ಹೋದರೂ ಏನು ಪ್ರಯೋಜನವಾಗಲಿಲ್ಲ. ನಾಪತ್ತೆಯಾದವರನ್ನು ನೆನೆಸಿಕೊಳ್ಳುತ್ತಾ ಮನೆಯವರು ಕಣ್ಣೀರಲ್ಲೇ ಕೈ ತೊಳೆದುಕೊಳ್ಳುವ ಸ್ಥಿತಿ ಬಂದೊದಗಿತು. ‘ಸುವರ್ಣ ತ್ರಿಭುಜ’ ಬೋಟು ತಂದಿಟ್ಟ ಈ ನೋವಿನ ಕಥೆಯ ಸುತ್ತ ಒಂದು ಕಾಲ್ಪನಿಕ ನಾಟಕ ಸೃಷ್ಟಿಯಾಗಿದೆ. ಹೌದು, ಮಲ್ಪೆಯಿಂದ ನಾಪತ್ತೆಯಾದ ಆ ಏಳು ಮಂದಿ ಮೀನುಗಾರರು ಎಲ್ಲಿದ್ದಾರೆ..? ಏನಾಗಿರಹುದು..? ಎಂಬ ಬಹಳ ಕುತೂಹಲದ ಘಟನೆಯ ಆಧಾರದ ಮೇಲೆ “ಸೊಮಾಲಿಯಾ ಕಡಲ್ಗಳ್ಳರು” ನಾಟಕ ಹುಟ್ಟಿಕೊಂಡಿದೆ.
ಮೀನುಗಾರರ ಕುಟುಂಬ ಪಟ್ಟ ಪಾಡೇನು..? ಕುಟುಂಬಳಿಗೆ ರಾಜಕಾರಣಿಗಳು ಯಾವ ರೀತಿಯ ಧೋರಣೆ ತೋರಿಸಿದರು ಎಂಬೆಲ್ಲಾ ವಿಚಾರವನ್ನು ಮನಗಂಡು, ಕಥಾ ಹಂದರವನ್ನು ರಚಿಸಿ ರಂಗಕರ್ಮಿ ರಾಜ್‌ಗುರು ಹೊಸಕೋಟೆ ‘ಸೊಮಾಲಿಯಾ ಕಡಲ್ಗಳ್ಳರು’ ನಾಟಕವನ್ನು ರಂಗಕ್ಕೇರಿಸಿದ್ದಾರೆ.


ರಂಗಪಯಣ ಬೆಂಗಳೂರು ಅಭಿನಯಿಸಿದ ಈ ನಾಟಕ ಇತ್ತೀಚೆಗೆ ರಂಗ ಅಧ್ಯಯನ ಕೇಂದ್ರ, ಕುಂದಾಪುರ ಮತ್ತು ಕುಂದ ಸಂಪದ ಸಹಯೋಗದೊಂದಿಗೆ ಭಂಡಾರ್‌ಕರ‍್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಪದ್ಮಾವತಿ ಭಂಡಾರ್‌ಕಾರ್ ರಂಗ ಮಂಟಪದಲ್ಲಿ ನಡೆಯಿತು. ನಾಪತ್ತೆಯಾದ ಬೋಟು ಮತ್ತು ಮೀನುಗಾರರ ಬಗ್ಗೆ ಹಲವು ಹೊಳವುಗಳನ್ನು ವೀಕ್ಷಕರ ಮುಂದಿಡುವ ಪ್ರಯತ್ನವನ್ನು ನಾಟಕ ಕಥೆಯುದ್ದಕ್ಕೂ ಮಾಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆಕ್ರೋಶ, ಪ್ರತಿಭಟನೆ ವ್ಯವಸ್ಥೆಯ ವಿರುದ್ಧವಾಗಿ ಎದ್ದಾಗ ಅದರಿಂದ ಪಾರಾಗಲು ರಾಜಕಾರಣಿಗಳು ಏನು ಬೇಕಾದರು ಮಾಡುವುದಕ್ಕೆ ಮುಂದಾಗುತ್ತಾರೆ ಎಂಬುದನ್ನು ಈ ನಾಟಕ ತೋರಿಸಿಕೊಟ್ಟಿತು. ನೊಂದು ಬೆಂದು ಕೊರಗಿದ್ದ ಮೀನುಗಾರರ ಕುಟುಂಬಕ್ಕೆ ರಾಜಕಾರಣಿಗಳ ಧಾರ್ಷ್ಟ್ಯ ಮತ್ತು ಧೋರಣೆ, ಅಧಿಕಾರಶಾಹಿ ಮನೋಭಾವವನ್ನು ನಿರ್ದೇಶಕ ರಾಜ್‌ಗುರು ಮನೋಜ್ಞವಾಗಿ ತೋರಿಸಿದ್ದಾರೆ.
ಮೀನುಗಾರರು ನಾಪತ್ತೆಯಾದ ಮೇಲೆ ಅನುಭವಿಸಿದ ನರಕಯಾತನೆಯನ್ನು ಮತ್ತು ಅವರ ಕುಟುಂಬದರು ಪಟ್ಟ ವ್ಯಥೆಯನ್ನು ಪ್ರೇಕ್ಷಕರು ಕುಂತಲ್ಲೇ ಕಣ್ಣೀರಿಡುವ ಹಾಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಮೀನುಗಾರ ಮುಖಂಡ ಧರ್ಮಣ್ಣ, ಶಿವಾನಂದ ಕರ್ಕೇರ ಮತ್ತು ಉಳಿದ ಮೀನುಗಾರರ ಪಾತ್ರವೂ ಕೂಡ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತವಾಗಿ ಮೂಡಿಬಂದಿದೆ. ನಾಪತ್ತೆಯಾದ ಮೇಲೆ ಕುಟುಂಬದವರನ್ನು ಸಮಾಧಾನಿಸುವಂತಹ ಮತ್ತು ನ್ಯಾಯ ಮೊರೆ ಹೋಗುವುದು, ಅಲ್ಲಿನ ಅಡೆತಡೆಗಳು, ಗೊಂದಲಗಳು, ಸಮಸ್ಯೆಗಳನ್ನು, ನಾಟಕದಲ್ಲಿ ನಿಜ ಜೀವನದಲ್ಲಿ ಆದಂತೆಯೇ ಅಚ್ಚು ಇಳಿಸಿದ್ದಾರೆ.
‘ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೋ ಸೇರಿಸಿದಂತೆ ವಿವಿಧ ಉಪಗ್ರಹಗಳ ಸಂಸ್ಥೆಗಳಿಂದ ಪತ್ತೆ ಕಾರ್ಯ ನಡೆಯುತ್ತಿದೆ. ಹಡಗುಗಳು, ಹೆಲಿಕಾಪ್ರ‍್ಗಳನ್ನು ಶೋಧಕ್ಕೆ ಬಳಸಿಕೊಳ್ಳಲಾಗಿದೆ. ಕರಾವಳಿಯ ಕಾವಲು ಪಡೆ, ನೌಕಾಸೇನೆ, ಪೋಲಿಸ್, ಕರಾವಳಿ ಕಾವಲು ಪೋಲಿಸ್ ಭದ್ರತಾ ಪಡೆಗಳನ್ನು ಪತ್ತೆ ಕಾರ್ಯದಲ್ಲಿ ತೋಡಗಿಸಿಕೊಳ್ಳಲಾಗಿದೆ’ ಎಂದು ಪ್ರತಿಭಟನಾಕಾರರ ಮುಂದೆ ಸಚಿವೆಯೊಬ್ಬರು ಸರಿಯಾಗಿ ಸ್ಪಂದಿಸದೇ ಹಿಂದೆ ಮುಂದೆ ನೋಡದೆ ಒಂದು ರೀತಿಯ ಅಹಂ ಭಾವದಿಂದ ಹೋಗುವ ದೃಶ್ಯ ನಿಜಕ್ಕೂ ಹೀಗೆಯೇ ಆಗಿದೆ ಎಂಬುದನ್ನು ಘಟನಾಸ್ಥಳಕ್ಕೆ ಬಂದು ನೋಡಿ ಕಥೆ ಹೆಣೆದಂತೆ ಕಾಣಿಸುತ್ತದೆ. ನಾಟಕದ ಪ್ರತಿ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ನಾಟಕ ಸಾಗುತ್ತದೆ. ಪ್ರತಿ ಸನ್ನಿವೇಶದಲ್ಲಿಯೂ ಹೀಗೇ ಆಗಿರಬಹುದು ಎಂದು ಪ್ರೇಕ್ಷಕರಿಗೆ ಭಾಸವಾಗುವಂತೆ ನಾಟಕವನ್ನು ನಿರ್ದೇಶಕರು ರಂಗದ ಮೇಲೆ ತಂದಿದ್ದಾರೆ.


ಕಳೆದ ಡಿಸೆಂಬರ್‌ನಲ್ಲಿ ನಾಪತ್ತೆಯಾದ ಏಳು ಮಂದಿ ಮೀನುಗಾರರು ಏನಾದರು ಎಂಬುದನ್ನು ಯಾರೂ ಕೂಡ ನಿಖರವಾಗಿ ಹೇಳಿಲ್ಲ. ಆದರೇ, ರಂಗಪಯಣ ಬೆಂಗಳೂರು ತಂಡ ‘ಸೊಮಾಲಿಯಾ ಕಡಲ್ಗಳ್ಳರು’ ನಾಟಕದ ಮೂಲಕ ಕಾಲ್ಪನಿಕವಾಗಿ ಹೀಗ್ಹೀಗೆ ಆಗಿರಬಹುದು, ಇಂತದ್ದೆಲ್ಲಾ ಅನುಭವಿಸಿರಬಹುದೆಂಬುದಲ್ಲೆವನ್ನೂ ಪ್ರೇಕ್ಷಕರ ಕಣ್ಮುಂದೆ ಪೋಣಿಸುತ್ತಾ ಹೋಗುತ್ತದೆ
ನಾಟಕದ ನಡುವೆ ಬರುವ.. ನಾಪತ್ತೆಯಾದ ಮೀನುಗಾರರಲ್ಲೊಬ್ಬನಾದ ದೋಜು ತನ್ನೂರಿನ ಹುಡುಗಿಯೊಬ್ಬಳನ್ನು ಪ್ರೀತಿಸಿದ ಸನ್ನಿವೇಶ ಕ್ಷಣಿಕ ಸಂತಸವನ್ನು ನೀಡಿತಾದರೂ, ಅದರಾಚೆಗೆ ಸರೋಜ ಎಂಬ ಆ ಹುಡುಗಿಯ ಪಾತ್ರವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸ್ವಲ್ಪ ಎಲ್ಲೋ ವಿಫಲರಾದರು ಎಂದೆನ್ನಿಸುತ್ತದೆ. ಸೊಮಾಲಿಯಾ ಕಡಲ್ಗಳ್ಳರ ಪಾತ್ರಧಾರಿಗಳ ಕೆಲವು ಹಾಸ್ಯ ಸಂದರ್ಭಗಳು ಪ್ರೇಕ್ಷಕರಿಗೆ ಅಲ್ಲಲ್ಲಿ ಮುದ ನೀಡಿತು. ಇನ್ನು ತುಳು ಭಾಷೆ, ಕರಾವಳಿಯ ಸಂಪ್ರದಾಯಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ನಾಟಕ ತಂಡ, ನಿರ್ದೇಶಕರು ಮಾಡಿದ್ದು ಎದ್ದು ಕಾಣಿಸುತ್ತದೆ. ಯೋಗ್ಯ ರಂಗಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗಿತವನ್ನು ಬಳಸಿಕೊಂಡಿದ್ದು ನಾಟಕಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತು. ನಾಟಕ ಮುಗಿದ ಮೇಲೆ ಸುವರ್ಣ ತ್ರಿಭುಜ ಬೋಟಿಗೂ, ನಾಪತ್ತೆಯಾದ ಏಳು ಮಂದಿ  ಮೀನುಗಾರರಿಗೂ, ಸೊಮಾಲಿಯಾ ಕಡಲ್ಗಳ್ಳರಿಗೂ ಇರುವ ಸಂಬಂಧ ಏನು ಎನ್ನುವ ಪ್ರಶ್ನೆ ಹುಟ್ಟುವುದು ಸಾಮಾನ್ಯ.  ಆದರೇ, ಕಾಲ್ಪನಿಕವಾಗಿ ವಾಸ್ತವಕ್ಕೆ ಹೆಣೆದ ‘ಸೊಮಾಲಿಯಾ ಕಡಲ್ಗಳ್ಳರು’ ಪ್ರೇಕ್ಷಕರ ಮನ ಕದ್ದು  ಘಟನೆಯ ಸಂಭಾವ್ಯತೆಗೆ ಚಿಂತನೆ ಹಚ್ಚುವಂತೆ ಮಾಡಿದ್ದಂತು ಸುಳ್ಳಲ್ಲ.
 -ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ

Sunday, November 17, 2019

‘ಅರುಂಧತಿ ನಾಗ್’ ಜೊತೆ ರಂಗಾನುಭವ ಪಯಣ



                ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ. ಮಾತ್ರವಲ್ಲ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಲ್ಲೊಬ್ಬರು. ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರಾಂತಿ ತಂದ ನಿರ್ದೇಶಕ, ನಟ ಶಂಕರ್‌ನಾಗ್ ಅವರ ಪತ್ನಿ, ಪದ್ಮಶ್ರೀ ಪುರಸ್ಕೃತೆ ಡಾ. ಅರುಂಧತಿ ನಾಗ್. ಅವರ ಕಿರು ಸಂದರ್ಶನ, ನಿಮ್ಮ ಆತ್ಮ ದರ್ಶನಕ್ಕಾಗಿ.


                                                    
ರಂಗಭೂಮಿಯಲ್ಲಿ ಆಸಕ್ತಿ ಹೇಗೆ ಹುಟ್ಟಿತು..? ಮತ್ತು ಆರಂಭದ ರಂಗಭೂಮಿಯಲ್ಲಿನ ನೆನಪುಗಳನ್ನು ಹಂಚಿಕೊಳ್ಳುವುದಾದರೆ...
ರ0ಗಭೂಮಿ ಎಲ್ಲರ ಜೀವದಲ್ಲಿಯೂ ಇರುತ್ತದೆ. ಅಮ್ಮನ ಲಾಲಿತ್ಯ, ಅಮ್ಮ ಪ್ರೀತಿ, ವಾತ್ಸಲ್ಯ ಎಲ್ಲವೂ ನಾಟಕವೇ, ಅಭಿನಯವೇ..ಬಾಲ್ಯ ಜೀವನದಲ್ಲಿ ಅಂದರೆ ಡೆಲ್ಲಿಯಲ್ಲಿರುವಾಗ ಹಬ್ಬದ ಹರಿದಿನಗಳ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ರಾಮಲೀಲಾ ಹಬ್ಬದಲ್ಲಿ ಸ್ಥಳಿಯರೆಲ್ಲಾ ಕೂಡಿ ನಾಟಕಗಳನ್ನು ಮಾಡುತ್ತಿದ್ದರು, ಅದನ್ನು ಬಹಳ ಕುತೂಹಲನಾಗಿ ನೋಡುತ್ತಿದ್ದೆ, ಹೀಗೆ ನೋಡಿ ನೋಡಿ ಆಸಕ್ತಿ ಬೆಳೆಯಿತು. ಆಮೇಲೆ ಹೀಗೆ ಶಾಲೆಗಳಲ್ಲಿ, ನಾವಿದ್ದ ಸುತ್ತಮುತ್ತಲಲ್ಲಿ ಆಗಾಗ ಅವಕಾಶಗಳು ಸಿಕ್ಕಿತು, ಅದನ್ನು ಬಳಸಿಕೊಂಡೆ. ತದನಂತರ ನಾವು ಮುಂಬೈಗೆ ಬಂದೆವು, ಅಲ್ಲಿ ಕಾಲೇಜಿನಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡೆ. ಇಂಗ್ಲಿಷ್, ಮರಾಠಿ, ಹಿಂದಿ ನಾಟಕಗಳಲ್ಲಿ ಅಭಿನಯಿಸಿದೆ. ಪಾತ್ರದಲ್ಲಿ ನಾನು ನಾನಾಗಿರುತ್ತಿರಲಿಲ್ಲ. ಆ ಪಾತ್ರವಾಗಿಯೇ ಕಾಣಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದೆ. ಹೀಗೆ ನನ್ನ ರಂಗಭೂಮಿ ಆಸಕ್ತಿ, ರಂಗಭೂಮಿಯಲ್ಲಿನ ಆರಂಭದ ದಿನಗಳಿದ್ದವು.

ಕಾಲೇಜಿನ ದಿನಗಳಲ್ಲಿ ನಾಟಕ ಮಾಡುತ್ತಿರಬೇಕಾದರೆ, ನಿಮ್ಮ ಅಭಿರುಚಿಗೆ ಶಂಕರ್‌ನಾಗ್ ಜೊತೆಯಾಗುತ್ತಾರೆ. ನಂತರ ನಿಮಗೂ, ಕನ್ನಡಕ್ಕೂ ಒಂದು ನಂಟು ಅಲ್ಲಿಂದ ಶುರುವಾಗುತ್ತದೆ...
ನಾನು ಮತ್ತು ಶಂಕರ್ ಭೇಟಿಯಾಗಿದ್ದು ಕಾಲೇಜಿನ ದಿನಗಳಲ್ಲಿ. ನಾನು ಇಂಟರ್ ಕಾಲೇಜ್ ಡ್ರಾಮಾ ಕಾಂಪಿಟೇಶನ್‌ಗಳಲ್ಲಿ, ಯೂಥ್ ಫೆಸ್ಟ್ಗಳಲ್ಲಿ ಭಾಗವಹಿಸುತ್ತಿದ್ದೆ. ಆಗ ಶಂಕರ್ ಪರಿಚಯವೇ ಇದ್ದಿರಲಿಲ್ಲ. ಮುಖ ಪರಿಚಯವಿದ್ದರೂ ಮಾತಾಡಿ ಗೊತ್ತಿರಲಿಲ್ಲ. ಇಂಡಿಯನ್ ನ್ಯಾಶನಲ್ ಥೀಯೆಟರ್ ಅಂತ ಒಂದು ನಾಟಕ ತಂಡವಿದೆ. ಆ ತಂಡ ಕಾಲೇಜುಗಳ ಕಾಂಪಿಟೇಶನ್‌ಗಳಲ್ಲಿ ಉತ್ತಮ ಅಭಿನಯಿಸುವ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಒಂದು ನಾಟಕ ತಯಾರು ಮಾಡುತ್ತಿತ್ತು. ಅದರಲ್ಲಿ ನನಗೂ ಅವಕಾಶ ಸಿಕ್ಕಿತ್ತು. ಆ ನಾಟಕ ತಂಡ ಶಂಕರ್‌ನನ್ನು ಕೂಡ ಆಯ್ಕೆ ಮಾಡಿಕೊಂಡಿತ್ತು. ಆದರೇ ಗುಜರಾತಿ ನಾಟಕ ತಂಡವಾಗಿರುವುದರಿAದ ಗುಜರಾತಿ ನಾಟಕ ಮಾಡಿಸಿದ್ದರು. ನಮ್ಮಿಬ್ಬರಿಗೂ ಗುಜರಾತಿ ಗೊತ್ತಿರಲಿಲ್ಲ. ಆ ನಾಟಕದಿಂದ ನಾವು ಗುಜರಾತಿ ಕಲಿತುಕೊಂಡೆವು. ನಂತರ ನಮ್ಮಲ್ಲಿ ಸ್ನೇಹ ಬೆಳೆಯಿತು. ಅಭಿರುಚಿ ಒಂದಾಯ್ತು. ಸಿನೆಮಾಗಳಲ್ಲಿ ಹುಟ್ಟುವ ಹಾಗೆ ಪ್ರೀತಿ ನಮ್ಮದಾಗಿರಲಿಲ್ಲ. ಆಸಕ್ತಿಯೇ ನಮ್ಮನ್ನು ಜೊತೆಯಾಗಿಸಿತು.

ನೀವು, ಶಂಕರ್‌ನಾಗ್ ಜೊತೆಯಾಗಿ ಮತ್ತೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತೀರಿ. ಸಂಕೇತ್ ಎನ್ನುವ ತಂಡವನ್ನು ನೀವು ಮಾಡುತ್ತೀರಿ.. ಆ ಬಗ್ಗೆ ಹೇಳುವುದಾದರೆ...
ಶಂಕರ್ ಮುಂಬೈ ಬಿಟ್ಟಯ ಬಂದಾಗ ಇಲ್ಲಿ ಅಂದರೆ ಕರ್ನಾಟಕದಲ್ಲಿ ಸಿನೆಮಾಗಳನ್ನು ಮಾಡುತ್ತಿದ್ದ, ಕೆಲವು ವರ್ಷಗಳ ನಂತರ ಅವನಿಗೆ ಸಿನೆಮಾಗಳ ಜೊತೆಗೆ ನಾಟಕಗಳನ್ನೂ ಮಾಡಬೇಕು ಅನ್ನಿಸಿತು. ನನ್ನನ್ನೂ ಕೇಳಿಕೊಂಡ..ಲೈಕ್ ಪ್ಲೀಸ್ ಹೆಲ್ಪ್ ಮೀ ಟು ಸ್ಟರ‍್ಟ್ ಥೀಯೇಟರ್..ದೆನ್ ಐ ಸೆಡ್ ಒಕೆ. ಇಲ್ಲಿಗೆ ಬಂದೆ. ಅಂಜು ಮಲ್ಲಿಗೆ ನಾಟಕ ಮಾಡುವುದಕ್ಕೆ ಆರಂಭಿಸಿದ್ವಿ...ಅದರಲ್ಲಿ ಅನಂತ್ ನಾಗ್ ಸಹ ಇದ್ದ,  ನನಗೆ ಕನ್ನಡ ಬರುತ್ತಿರಲಿಲ್ಲ. ದೇವನಾಗರಿಯಲ್ಲಿ ಕನ್ನಡ ಬರೆದುಕೊಂಡು, ಬಾಯಿಪಾಠ ಮಾಡಿ ಮಾಡಿದ ಕನ್ನಡದ ಮೊದಲನೇ ನಾಟಕ ಅಂಜು ಮಲ್ಲಿಗೆ. ಆಮೇಲೆ  ಶಂಕರ್ ನನ್ನನ್ನು ಮದುವೆಯಾಗ್ತೀಯಾ ಅಂತ ಕೇಳಿಕೊಂಡ. ಇಬ್ಬರೂ ಒಪ್ಪಿ ಮದ್ವೇ ಆದೆವು. ಮತ್ತೆ ನಾಟಕಗಳಲ್ಲಿ ತೊಡಗಿಕೊಂಡವು. ಆದ್ರೆ ಮುಂಬೈಯಲ್ಲಿ ಮಾಡುತ್ತಿದ್ದಷ್ಟು ನಾಟಕಗಳನ್ನು ಮಾಡುವುದಕ್ಕೆ ಆಗಲಿಲ್ಲ, ಮತ್ತು ಅವಕಾಶಗಳೂ ಇಲ್ಲಿ ಸಿಗಲಿಲ್ಲ. ಶಂಕರ್‌ನ ಎಲ್ಲಾ ಕನಸುಗಳಿಗೆ ಜೊತೆಯಾದೆ.

ಶಂಕರ್ ಜೊತೆ ಸಿನೆಮಾಗಳಲ್ಲಿ ತೊಡಗಿಕೊಂಡ್ರಿ..ಆ ಬಗ್ಗೆ ಹೇಳುವುದಾದರೆ..
ನಿಜವಾಗಿ ಸಿನೆಮಾ ನನ್ನ ಮಾಧ್ಯಮ ಅಲ್ಲ, ನಾನು ರಂಗಭೂಮಿಯನ್ನು ಇಷ್ಟಪಡುವವಳು. ಶಂಕರ್ ಸಿನೆಮಾಗಳಲ್ಲಿ ಗಟ್ಟಿ ಇದ್ದ. ಅವನ ನಿರ್ದೇಶನ, ನಟನೆ ಅದ್ಭುತ. ಬಹಳವಾಗಿ ಸಿನೆಮಾವನ್ನು ಇಷ್ಟಪಡುತ್ತಿದ್ದ. ಅವನು ಕೇಳಿಕೊಂಡಿದ್ದಕ್ಕೆ ಕೆಲವು ಸಿನೆಮಾಗಳಲ್ಲಿ ನಟಿಸಿದೆ, ಕಾಸ್ಟೂö್ಯಮ್ ಡಿಸೈನ್ ಮಾಡಿದೆ, ಮಾಲ್ಗುಡಿ ಡೇಸ್ ಗೆ ಸಂಭಾಷಣೆ ಬರೆದುಕೊಟ್ಟೆ ಅಷ್ಟೇ.. ಸಿನೇಮಾಗಳಲ್ಲಿ ನನಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಶಂಕರ್ ಗೆ ಒಳ್ಳೆಯ ಗ್ರಿಪ್ ಇದ್ದಿತ್ತು. ಸಿನೆಮಾಗಳಲ್ಲಿ ಹೊಸತನ ತರುತ್ತಿದ್ದ, ಹಾಗಾಗಿ ಅವನ ಸಿನೆಮಾಗಳು ಇಂದಿಗೂ ಪ್ರಸ್ತತ. ಅದೆಲ್ಲದಕ್ಕಿಂತ ಹೆಚ್ಚು ಒಳ್ಳೆಯ ಮನಸ್ಸು ಆತನಿಗಿತ್ತು. ಆ ಒಳ್ಳೆಯತನ ಸಿನೆಮಾದಲ್ಲಿ ಶಂಕರ್‌ಗೆ ಒಳ್ಳೆಯ ಹೆಸರು ತಂದುಕೊಡ್ತು. ಸಿನೆಮಾಗಳಲ್ಲಿ ನನ್ನದೇನೂ ಇಲ್ಲ.

‘ರಂಗಶ0ಕರ’ದ ಮೂಲಕ ಶಂಕರ್ ನಾಗ್ ಅವರ ಕನಸನ್ನು ಈಡೇರಿಸಿದ್ದೀರಿ ನೀವು... ರಂಗಶ0ಕರ ಈಗ ಹೇಗೆ ಕಾರ್ಯ ನಿರ್ವಹಿಸುತ್ತಿದೆ.
ಶಂಕರ್ ಒಬ್ಬ ಒಳ್ಳೆಯ ಕನಸುಗಾರ. ಅವನ ಕನಸ್ಸನ್ನು ಸಣ್ಣರೂಪದಲ್ಲಿ ಸಾಕಾರಗೊಳಿಸುವುದಕ್ಕೆ ರಂಗಶ0ಕರದ ಮೂಲಕ ನಾನು ಪ್ರಯತ್ನಿಸಿದ್ದೇನಷ್ಟೆ. ಶಂಕರ್ ಇದ್ದಿದ್ದರೆ ಇದೇ ರಂಗಶ0ಕರವನ್ನೂ ಇನ್ನೂ ಚೆನ್ನಾಗಿ ಮಾಡುತ್ತಿದ್ದ. ನಾನು ಥೀಯೇಟರ್ ಫ್ರೇಂಡ್‌ನ್ನು ಕಳೆದುಕೊಂಡೆ, ನಾನು ನನ್ನ ಒಳ್ಳೆಯ ಫ್ರೆಂಡ್‌ನನ್ನು ಕಳೆದುಕೊಂಡೆ. ನಾನು ನನ್ನ ಗಂಡನನ್ನು ಕಳೆದುಕೊಂಡೆ. ಅವನಿಗೆ ಗೌರವಾರ್ಥವಾಗಿ ರಂಗಶ0ಕರವನ್ನು ನಿರ್ಮಿಸಿದೆ. ಅವನು ಇದ್ದಾಗಲೇ ಈ ಥೀಯೇಟರ್ ಮಾಡೋಣ ಅಂತ ಕನಸು ಕಂಡಿದ್ದು, ಆದರೆ ಅದಾಗಲಿಲ್ಲ. ಈಗ ರಂಗಶ0ಕರ ಬೆಳೆದು ನಿಂತಿದೆ. ರಂಗಶ0ಕರಕ್ಕೀಗ ಹದಿನೈದು ವರ್ಷಗಳಾಗಿದೆ..ಎಷ್ಟರ ಮಟ್ಟಿಗೆ ನಾಟಕಗಳಲ್ಲಿ ಹೊಸ ತಂತ್ರಗಳನ್ನು ಬಳಸಿಕೊಳ್ಳಬಹುದೋ ಅಷ್ಟರಮಟ್ಟಿಗೆ ನಾವು ರಂಗಶ0ಕರದಲ್ಲಿ ಪ್ರಯತ್ನಿಸುತ್ತಿದ್ದೇವೆ. ಮಾತ್ರವಲ್ಲ, ಬೇರೆ ಬೇರೆ ನಾಟಕ ತಂಡಗಳಿಗೂ ಕೂಡ ರಂಗಶ0ಕರ ವೇದಿಕೆ ಕೊಡುತ್ತಿದೆ.

ರಂಗಭೂಮಿ ಮತ್ತು ಸಿನೆಮಾಗಳಲ್ಲಿ ನೀವು ಕಂಡ0ತಹ ವ್ಯತ್ಯಾಸ..?
ತುಂಬಾ ವ್ಯತ್ಯಾಸಗಳಿವೆ, ಆದರೆ ಸಿನೆಮಾ ಮತ್ತು ನಾಟಕಗಳ ವಸ್ತು ಬೇರೆ ಬೇರೆ ಎಂದು ನಾನು ಹೇಳುವುದಿಲ್ಲ. ಅಭಿವ್ಯಕ್ತ ಪಡಿಸುವ ರೀತಿ ಬೇರೆ. ನಾಟಕಗಳಲ್ಲಿ ಒಬ್ಬ ಕಲಾವಿದ ಹೀರೋ ಆಗಬಹುದು, ಅವನು ಅವನ ಶೈಲಿಯಲ್ಲಿ ತನ್ನ ಪಾತ್ರವನ್ನು ನಿಭಾಯಿಸಬಹುದು. ಆದ್ರೇ ಸಿನೆಮಾಗಳಲ್ಲಿ ಹಾಗಲ್ಲ, ನಿರ್ದೇಶಕನೇ ಮುಖ್ಯ. ದಿ ವೆ ಹೀ ವಾಂಟ್ಸ್ ಟು ಶೋ ಈಸ್ ಇಂಪರ‍್ಟಾAಟ್. ನಾಟಕ ಮತ್ತು ಸಿನೆಮಾಗಳ ಉದ್ದೇಶ ಒಂದೇ. ನಾನೊಬ್ಬ ರಂಗಭೂಮಿ ಕಲಾವಿದೆಯಾಗಿ ಹೇಳುವುದಾದರೆ, ಸಿನೆಮಾಗಳಿಗಿಂತ ನಾಟಕಗಳಲ್ಲಿ ಹಲವು ಭಾವನೆಗಳಿವೆ, ಕಲ್ಪನೆಗಳಿವೆ. ನಾಟಕದ ಸಾಹಿತ್ಯ ಸಿನೆಮಾ ಸಾಹಿತ್ಯಕ್ಕಿಂತ ಗಟ್ಟಿಯಾದದ್ದು. ಆದರೆ ಸಿನೆಮಾ ಯಾವಾಗ ಬೇಕಾದರೂ ನೋಡಬಹುದು. ಆದರೇ ನಾಟಕ ಹಾಗಲ್ಲ, ಆ ಒಂದು ಪ್ರದರ್ಶನದಲ್ಲಿ ಮಾತ್ರ ನೋಡಬಹುದು. ಇವುಗಳು ಸಿನೆಮಾ ಮತ್ತು ನಾಟಕಗಳಲ್ಲಿನ ಮುಖ್ಯ ವ್ಯತ್ಯಾಸ. ಬಟ್ ಫಾರ್ ಮೀ ಥೀಯೇಟರ್ ಈಸ್ ದಿ ಬೆಸ್ಟ್.

ರಂಗಭೂಮಿಯಲ್ಲಿನ ನಿಮ್ಮ ಹೆಚ್ಚುಗಾರಿಕೆಯನ್ನು ಕಂಡು ೨೦೧೦ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟಿದೆ. ಆ ಖುಷಿಯನ್ನು ಹಂಚಿಕೊಳ್ಳುವುದಾದರೆ...
ಇಲ್ಲಾ.. ಪದ್ಮಶ್ರೀ ನನಗೆ ಸರ್ಕಾರ ಕೊಟ್ಟಿದ್ದು ಫಾರ್ ಮೈ ರ‍್ವಿಸ್ ಟು ಥೀಯೇಟರ್. ಅದು ರಂಗಶ0ಕರ ಕಟ್ಟಿರುವುದು ಮತ್ತು ನಾಟಕಗಳಿಗೆ ವೇದಿಕೆ ಕೊಟ್ಟಿದ್ದು. ಇ ಸ್ಟçಗಲ್ಡ್ ಅ ಲಾಟ್ ಅಂಡ್ ಇ ಬಿಲ್ಡ್ ದಾಟ್ ಥೀಯೇಟರ್. ರಂಗಶ0ಕರ ಮಾಡಿರುವುದು ನನ್ನ ಸಂಕೇತ ತಂಡಕ್ಕಾಗಿ ಅಲ್ಲವೇ ಅಲ್ಲ. ನಿಜವಾಗಿ ಹವ್ಯಾಸಿ ರಂಗಭೂಮಿ ತಂಡಗಳಿಗೆ ಕೊಟ್ಟಿರುವ ಕೊಡುಗೆ ಅದು. ಆ ನನ್ನ ಸೇವೆಗೋಸ್ಕರ ನನಗೆ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಕೊಟ್ಟಿದೆ. ನಾನು ಸಾಕಷ್ಟು ಅಭಿನಯಗಳನ್ನು ಮಾಡಿದ್ದೇನೆ. ಆದರೇ ಎಲ್ಲವೂ ಕಲಿತಿದ್ದೇನೆ ಅಂತ ಅಲ್ಲ. ಕಲಿಯುವುದು ತುಂಬಾ ಇದೆ.

ಮೇಡಂ, ನಿಮಗೆ ರಾಷ್ಟಿçಯ ಚಲನಚಿತ್ರ ಪ್ರಶಸ್ತಿಯನ್ನು ಒಳಗೊಂಡು ಸಾಕಷ್ಟು ಪ್ರಶಸ್ತಿಗಳು ಬಂದಿದೆ. ಈ ಬಾರಿಯ ಅಂದರೆ ಹದಿನೈದನೇ ಆಳ್ವಾಸ್ ನುಡಿಸಿರಿಯಲ್ಲಿ ‘ನುಡಿಸಿರಿ ಪ್ರಶಸ್ತಿ’ ನಿಮಗೆ ಬಂದಿದೆ..ಹೇಗನ್ನಿಸುತ್ತದೆ..?
ಪದ್ಮಶ್ರೀ ಸಿಗಬಹುದು, ರಾಷ್ಟಿçಯ ಚಲನಚಿತ್ರ ಪ್ರಶಸ್ತಿ ಬರಬಹುದು. ಆದರೇ ಎಲ್ಲರಿಗೂ ನುಡಿಸಿರಿ ಪ್ರಶಸ್ತಿ ಬರುವುದಿಲ್ಲ. ಒಂದು ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಒಂದು ಸಮ್ಮೇಳನವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿ ನಮ್ಮಂಥವರನ್ನು ಗುರುತಿಸಿ ‘ನುಡಿಸಿರಿ ಪ್ರಶಸ್ತಿ’ ನೀಡಿ ಗೌರವಿಸುತ್ತದೆ ಅಲ್ವಾ..? ಆಗಾ ತುಂಬಾ ತುಂಬಾ ಹೆಮ್ಮೆ ಅನ್ನಿಸುತ್ತದೆ. ಹುಟ್ಟಿದ್ದು ಡೆಲ್ಲಿ, ಬೆಳೆದಿದ್ದು ಮುಂಬೈಯಲ್ಲಿ...ಈಗ ಇರುವುದು ಕರ್ನಾಟಕದಲ್ಲಿ. ಎಲ್ಲೋ ಇದ್ದವಳು, ಇಲ್ಲಿಗೆ ಬಂದು ಇಂತಹ ದೊಡ್ಡ ಪ್ರಶಸ್ತಿ ಪಡೆಯುತ್ತಿರುವುದು ಬಹಳ ಖುಷಿಕೊಟ್ಟಿದೆ. ಆಳ್ವಾಸ್‌ನಂತಹ ದೊಡ್ಡ ಸಂಸ್ಥೆ ಇಂತಹ ಒಳ್ಳೆಯ ಕೆಲಸ ಮಾಡುತ್ತಿದೆ ಅಲ್ವಾ ಅದನ್ನು ಶ್ಲಾಘಿಸಲೇಬೇಕು.

ಕೊನೆಯದಾಗಿ...ನೀವೊಬ್ಬ ಹಿರಿಯ ರಂಗ ಕಲಾವಿದೆಯಾಗಿ ಮುಂದೆ ಬರುವ ಯುವ ಕಲಾವಿದರಿಗೆ ಏನು ಹೇಳುವುದಕ್ಕೆ ಇಷ್ಟಪಡ್ತೀರಿ..?
ಮೊದಲು... ‘ವಿನಯ’ ವಿನಯ ಇರಬೇಕು. ಸಾಮಾಜಿಕವಾಗಿ ಬದುಕುವುದೆಂದರೆ ಸಾಮಾನ್ಯ ಬದುಕಲ್ಲ ಅದು. ಜವಾಬ್ದಾರಿಯುತವಾದದ್ದು. ಪ್ರತಿಯೊಬ್ಬರಲ್ಲು ಕಲಿಯುವುದಿದೆ. ಕಲಿಯಬೇಕು. ಓದಬೇಕು. ರಂಗಭೂಮಿಗೆ, ಸಿನೆಮಾಗಳಿಗೆ ಕಾಲಿಡುವರಿಗೆ ದೊಡ್ಡ ಸಾಮಾಜಿಕ ಹೊಣೆ ಇದೆ. ಸಂಸ್ಕೃತಿ, ಕಲೆ, ಇತಿಹಾಸ, ರಾಜಕೀಯ ಎಲ್ಲದರ ಬಗ್ಗೆಯೂ ಜ್ಙಾನ ಸ್ವಲ್ಪವಾದರೂ ಇರಬೇಕು. ಏನಾದರೂ ಹೊಸತನವಿರಬೇಕು, ಏನಾದರೂ ಮಾಡುತ್ತಿರಬೇಕು. ಯಾರು ನಾನು..? ನಾನು ಹೇಗಿರಬೇಕು..?  ನಾನು ಏನಾಗಬೇಕು..? ಆ ಪ್ರಶ್ನೆ ನಿಮಗೆ ನೀವೇ ಕೇಳಿಕೊಳ್ಳಿ. ರಂಗಭೂಮಿಯಲ್ಲಿ ನೀವೊಬ್ಬ ಒಳ್ಳೆಯ ಕಲಾವಿದರಾಗಬಹುದು.
                                                                                              -ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ

Thursday, February 14, 2019

ಸಲಾಂ


ಎಸಗಿದೆ ದಾಳಿ
ಪಾತಕಿಗಳ ದಂಡು
ಗಡಿ ರೇಖೆಯ ದೂಡಿ...
ಹರಿದಿದೆ ಗಡಿ ಸೇನಾನುಚರರ
ನೆತ್ತರ ಕೋಡಿ..!
"ಕಿಚ್ಚು" ಆರುವ ಮುನ್ನ
ಹೊತ್ತಿ ಉರಿಯದೇ 
ನಂದುವುದೇ..!?!
ಹೃದಯಕ್ಕೆ ಚುಚ್ಚಿದ ನೋವಿಗೆ
ಪ್ರತಿಕಾರ ತೀರಿಸದೆ ಮಣಿಯುವುದೇ
ನನ್ನವರ ಅನಂತ ಶಕ್ತಿ..!?

ಧಗಧಗನೆ ಉರಿಯುತ್ತಿದೆ
ಗಡಿ ಸೇವಕರ ಬಲಿದಾನದ ಬೆಂಕಿ

ಶತ್ರು ಪಾಳಯಕ್ಕೆ ಮುಖಮಾಡಿ
ಬಂದೂಕು ಹಿಡಿದು ದೇಶ ಕಾಯುತ್ತಿದ್ದ
ಯೋಧರೆಲ್ಲಾ ಹುತಾತ್ಮರಾಗಿ ಮಲಗಿದ್ದಾರೆ...!!!
ರೋಷದ ಜ್ವಾಲೆಯಲ್ಲಿಯೇ
'ದೇಶ ಸೇವಕರ' ಆತ್ಮಕ್ಕೆ ಸಲಾಂ..!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)