Monday, August 31, 2026

Belonging: A Journey of Love : ಪುಸ್ತಕ ಇನ್ನೂ ಬಂದಿಲ್ಲ; ಆದರೆ ಅಧಿಕಾರದ ಆತಂಕ ಈಗಾಗಲೇ ಹೊರಬಂದಿದೆಯೇ?

ಒಂದು ಪುಸ್ತಕ ಇನ್ನೂ ಭಾರತೀಯ ಓದುಗರ ಕೈಗೆ ಬಂದಿಲ್ಲ. ಅದರ ಸಂಪೂರ್ಣ ಪಠ್ಯ ಸಾರ್ವಜನಿಕವಾಗಿಲ್ಲ. ಯಾವ ಪುಟದಲ್ಲಿ ಯಾವ ವಾಕ್ಯವಿದೆ ಎಂಬುದೂ ಬಹುತೇಕರಿಗೆ ಗೊತ್ತಿಲ್ಲ. ಆದರೂ ಆ ಪುಸ್ತಕ ಈಗಾಗಲೇ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಕೇವಲ ಒಂದು ಪುಸ್ತಕದ ಪ್ರಕಟಣೆ ಮುಂದೂಡಿಕೆಯ ಕಥೆಯೇ? ಅಥವಾ ಅಧಿಕಾರಕ್ಕೆ ಅಸಹಜವಾಗಿರುವ ರಾಜಕೀಯ ನೆನಪುಗಳು ಮತ್ತು ಪ್ರಶ್ನೆಗಳನ್ನು ಸಾರ್ವಜನಿಕ ವಲಯಕ್ಕೆ ಬರದಂತೆ ತಡೆಯುವ ಮನೋಭಾವದ ಮತ್ತೊಂದು ಉದಾಹರಣೆಯೇ?

ಕಾಂಗ್ರೆಸ್ ನ ಸರ್ವೋಚ್ಚ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಕುರಿತ ವಿವಾದ ಈಗ ಇದೇ ಪ್ರಶ್ನೆಯನ್ನು ಎತ್ತಿದೆ. ಅಮೆರಿಕದ Alfred A. Knopf ಪ್ರಕಟಣಾ ಸಂಸ್ಥೆ ಪುಸ್ತಕವನ್ನು ನವೆಂಬರ್ 10, 2026ರಂದು ಜಾಗತಿಕವಾಗಿ ಪ್ರಕಟಿಸಲು ಸಿದ್ಧವಾಗಿದೆ. ಪ್ರಕಾಶಕರ ಅಧಿಕೃತ ಮಾಹಿತಿಯ ಪ್ರಕಾರ ಪುಸ್ತಕ 544 ಪುಟಗಳದ್ದಾಗಿದ್ದು, ವೈಯಕ್ತಿಕ ಬದುಕಿನ ಜೊತೆಗೆ ಭಾರತದ ರಾಜಕೀಯ-ಸಾಮಾಜಿಕ ಪಯಣವನ್ನೂ ಒಳಗೊಂಡಿದೆ. ಆದರೆ ಭಾರತದಲ್ಲಿ ಪ್ರಕಟಣೆಯ ಹಂತಕ್ಕೆ ಬಂದಾಗ ಪರಿಸ್ಥಿತಿ ಬೇರೆಯಾಗಿದೆ. ವಿವಾದದ ಕೇಂದ್ರದಲ್ಲಿ ಮೂರು ವಿಷಯಗಳಿವೆ. Penguin Random House India ಜೊತೆಗಿನ ಮಾತುಕತೆಯಲ್ಲಿ ಕೆಲವು ರಾಜಕೀಯ ಭಾಗಗಳ ಬಗ್ಗೆ ಸಂಪಾದಕೀಯ ಬದಲಾವಣೆ ಅಥವಾ ತೆಗೆದುಹಾಕುವಿಕೆ ಕುರಿತು ಚರ್ಚೆ ನಡೆದಿತ್ತು. ಕಾಂಗ್ರೆಸ್ ನಾಯಕರ ಆರೋಪದ ಪ್ರಕಾರ ಪ್ರಮುಖವಾಗಿ ನರೇಂದ್ರ ಮೋದಿ, RSS ಮತ್ತು ಚೀನಾ-ಭಾರತ ಗಡಿ ವಿವಾದಕ್ಕೆ ಸಂಬಂಧಿಸಿದ ಭಾಗಗಳು ಚರ್ಚೆಯ ಕೇಂದ್ರದಲ್ಲಿದ್ದವು. ಕೆಲವು ವರದಿಗಳು ಮೋದಿ ಅವರೊಂದಿಗೆ ಸೋನಿಯಾ ಗಾಂಧಿಯವರ ಭೇಟಿಗಳು, ಅವರ ರಾಜಕೀಯ ಮೌಲ್ಯಮಾಪನಗಳು ಹಾಗೂ ಚೀನಾ ಗಡಿ ವಿಚಾರಗಳನ್ನೂ ಉಲ್ಲೇಖಿಸುತ್ತವೆ.  ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬೇಕು.

ಸರ್ಕಾರ ನೇರವಾಗಿ ಪ್ರಕಾಶಕರಿಗೆ ಒತ್ತಡ ಹೇರಿದೆ ಎಂಬುದು ಸಾಬೀತಾದ ಸಂಗತಿಯಲ್ಲ. ಅದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ. Penguin Random House India ಕೂಡ, ಸೋನಿಯಾ ಗಾಂಧಿಯವರು ಸಂಪಾದಕೀಯ ಬದಲಾವಣೆಗಳನ್ನು ಒಪ್ಪದ ಕಾರಣ ತಾವು ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿದಿದ್ದೇವೆ ಎಂಬ ವರದಿಗಳು ನಿಖರವಾಗಿಲ್ಲ ಎಂದು ಹೇಳಿದೆ. ಸಂಸ್ಥೆಯ ಪ್ರಕಾರ, ತಾವು ಭಾರತದಲ್ಲಿ ಈ ಪುಸ್ತಕದ ಪ್ರಕಾಶಕರೇ ಅಲ್ಲ. ಆದರೆ ಇಲ್ಲಿಯೇ ಇನ್ನೊಂದು ಗಂಭೀರ ಪ್ರಶ್ನೆ ಹುಟ್ಟುತ್ತದೆ. ಒಂದೇ ಪುಸ್ತಕವನ್ನು ಜಾಗತಿಕವಾಗಿ ಅದರ ಮೂಲ ರೂಪದಲ್ಲಿ ಪ್ರಕಟಿಸಲು ಸಿದ್ಧವಾಗಿರುವ ಪ್ರಕಾಶನ ಸಮೂಹದ ಭಾರತೀಯ ಘಟಕಕ್ಕೆ ಮಾತ್ರ ಕೆಲವು ರಾಜಕೀಯ ಭಾಗಗಳು ಏಕೆ ಅಸಹಜವಾಗಿ ಕಾಣಿಸಿಕೊಂಡವು? ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಫ್ಯಾಕ್ಟ್ ಚೆಕ್’ ಎಂಬ ಹೆಸರಿನಲ್ಲಿ ಎಷ್ಟು ಸಂಪಾದನೆ?ಯಾಗಿದೆ. ಪ್ರಕಾಶಕರ ಪಾಲಿಗೆ ಫ್ಯಾಕ್ಟ್‌ ಚೆಕ್, ಕಾನೂನು ಅಪಾಯ, ಮಾನಹಾನಿ ಮತ್ತು ಸಂಪಾದಕೀಯ ಹೊಣೆಗಾರಿಕೆಗಳು ಸಹಜವಾದ ವಿಚಾರಗಳು. ಯಾವುದೇ ಪ್ರಕಾಶಕ ಒಂದು ರಾಜಕೀಯ ನಾಯಕರ ಆತ್ಮಕಥೆಯನ್ನು ಪರಿಶೀಲಿಸಬಹುದು. ಆದರೆ ‘ಪರಿಶೀಲನೆ’  ಅಥವಾ ಫ್ಯಾಕ್ಟ್‌ ಚೆಕ್ ಮತ್ತು ‘ರಾಜಕೀಯವಾಗಿ ಅಸಹಜವಾಗಿರುವ ಭಾಗವನ್ನು ತೆಗೆದುಹಾಕುವುದು’ ಎರಡೂ ಒಂದೇ ಸಂಗತಿಯಲ್ಲ. ಒಂದು ಹೇಳಿಕೆ ತಪ್ಪಾಗಿದ್ದರೆ — ತಿದ್ದುಪಡಿ ಮಾಡಬಹುದು.

ಒಂದು ಅಂಕಿಅಂಶ ತಪ್ಪಿದ್ದರೆ — ಸರಿಪಡಿಸಬಹುದು. ಒಂದು ಆರೋಪಕ್ಕೆ ಮೂಲವಿಲ್ಲದಿದ್ದರೆ — ಲೇಖಕರಿಂದ ಸ್ಪಷ್ಟೀಕರಣ ಕೇಳಬಹುದು. ಆದರೆ ಲೇಖಕರ ವೈಯಕ್ತಿಕ ಅನುಭವ, ರಾಜಕೀಯ ಮೌಲ್ಯಮಾಪನ ಅಥವಾ ಸಮಕಾಲೀನ ಸರ್ಕಾರದ ನೀತಿಗಳ ಕುರಿತು ಅವರ ಅಭಿಪ್ರಾಯವೇ ಸಮಸ್ಯೆಯಾಗುತ್ತಿದ್ದರೆ, ಅದು ಸಂಪಾದಕೀಯ ಪ್ರಶ್ನೆಯನ್ನು ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗುತ್ತದೆ. ಇದೇ ಕಾರಣಕ್ಕೆ ಈ ವಿವಾದವನ್ನು ಕೇವಲ ‘ಪ್ರಕಾಶಕ-ಲೇಖಕರ ನಡುವಿನ ಒಪ್ಪಂದದ ಸಮಸ್ಯೆ’ ಎಂದು ಮುಗಿಸುವುದು ಸರಿಯಲ್ಲ. ಇನ್ನು, ಪುಸ್ತಕವನ್ನು ಓದುವ ಮುನ್ನವೇ ಅದರ ಬಗ್ಗೆ ಭಯ ಏಕೆ? ಈ ಪ್ರಕರಣದ ಅತ್ಯಂತ ಕುತೂಹಲಕಾರಿ ಅಂಶ ಇದೇ ಆಗಿದೆ. ಪುಸ್ತಕ ಇನ್ನೂ ಭಾರತದಲ್ಲಿ ಪ್ರಕಟವಾಗಿಲ್ಲ. ಸಂಪೂರ್ಣ ಪಠ್ಯವೂ ಸಾರ್ವಜನಿಕವಾಗಿಲ್ಲ. ಆದರೂ ಅದರಲ್ಲಿರುವ ಕೆಲವು ವಿಚಾರಗಳು ರಾಜಕೀಯ ಚರ್ಚೆಯ ಕೇಂದ್ರವಾಗಿವೆ. ಹಾಗಾದರೆ ಪ್ರಶ್ನೆ ಏನೆಂದ್ರೇ,  ಪುಸ್ತಕದೊಳಗೆ ನಿಜವಾಗಿ ಏನಿದೆ ಎಂಬುದಕ್ಕಿಂತ, ಅದರಲ್ಲಿ ಏನಿರಬಹುದು ಎಂಬ ಭಯವೇ ರಾಜಕೀಯವಾಗಿ ದೊಡ್ಡದಾಗಿದೆಯೇ? ಸೋನಿಯಾ ಗಾಂಧಿ ಭಾರತೀಯ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರವಹಿಸಿದ ವ್ಯಕ್ತಿ. ಪ್ರಧಾನಮಂತ್ರಿಗಳ ಜೊತೆಗಿನ ಅವರ ಸಂವಹನ, ಕಾಂಗ್ರೆಸ್ ಅಧ್ಯಕ್ಷೆಯಾಗಿ ಅವರ ಅನುಭವ, ಯುಪಿಎ ಅವಧಿಯ ರಾಜಕೀಯ ನಿರ್ಧಾರಗಳು, ನರೇಂದ್ರ ಮೋದಿ ಅವರೊಂದಿಗೆ ನಡೆದ ರಾಜಕೀಯ ಮುಖಾಮುಖಿಗಳು, ಚೀನಾ-ಭಾರತ ಸಂಬಂಧಗಳ ಕುರಿತ ಅವರ ದೃಷ್ಟಿಕೋನ — ಇವೆಲ್ಲವೂ ಸಮಕಾಲೀನ ಭಾರತದ ರಾಜಕೀಯ ಇತಿಹಾಸದ ಭಾಗ. ಅದನ್ನು ಅವರು ಹೇಗೆ ನೆನಪಿಸಿಕೊಂಡಿದ್ದಾರೆ ಎಂಬುದನ್ನು ಓದುಗರಿಗೆ ತಿಳಿಯುವ ಅವಕಾಶ ಇರಬೇಕು.

ಓದುಗರು ಅದನ್ನು ನಂಬಬೇಕೆಂದೇನೂ ಇಲ್ಲ. ವಿರೋಧಿಸಬಹುದು. ಖಂಡಿಸಬಹುದು. ತಪ್ಪೆಂದು ಸಾಬೀತುಪಡಿಸಬಹುದು. ಆದರೆ ಓದುವ ಅವಕಾಶವೇ ಇಲ್ಲದಂತೆ ಮಾಡುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಲ್ಲ. ಇನ್ನು, ಇದು, ನರವಣೆ ಪ್ರಕರಣದ ಪ್ರಶ್ನೆಯನ್ನು ನೆನಪಿಸುತ್ತದೆ.  ಇತ್ತೀಚಿನ ಮತ್ತೊಂದು ಬೆಳವಣಿಗೆಯಾದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ *Four Stars of Destiny* ಆತ್ಮಕಥೆಯ ವಿವಾದವೂ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. Penguin Random House India ಆ ಪುಸ್ತಕದ ವಿಶೇಷ ಪ್ರಕಟಣಾ ಹಕ್ಕುಗಳನ್ನು ಹೊಂದಿದ್ದರೂ, 2026ರ ಫೆಬ್ರವರಿಯಲ್ಲಿ ಪುಸ್ತಕ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದು ಸ್ಪಷ್ಟಪಡಿಸಿತು. ಆದರೂ ಅದರ ಮುದ್ರಿತ ಪ್ರತಿಯೊಂದು, ಡಿಜಿಟಲ್ ಆವೃತ್ತಿಯೊಂದರ ಸೋರಿಕೆಯೊಂದೂ ರಾಜಕೀಯ ವಿವಾದಕ್ಕೆ ಕಾರಣವಾಯಿತು. ದೆಹಲಿ ಪೊಲೀಸರು ಕೂಡ ಪುಸ್ತಕದ ಅನಧಿಕೃತ ಪ್ರಸರಣದ ಕುರಿತು ತನಿಖೆ ನಡೆಸಿದರು. ಆ ಪುಸ್ತಕದಲ್ಲಿ 2020ರ ಭಾರತ-ಚೀನಾ ಗಡಿ ಬಿಕ್ಕಟ್ಟು ಸೇರಿದಂತೆ ಸೂಕ್ಷ್ಮ ರಾಷ್ಟ್ರೀಯ ಭದ್ರತಾ ವಿಚಾರಗಳ ಕುರಿತು ವಿವರಗಳಿದ್ದವು ಎಂದು ವರದಿಯಾಗಿತ್ತು. ಇಲ್ಲಿ ಕೂಡ ಗಮನಿಸಬೇಕಾದ ಅಂಶವೆಂದರೆ — ಸಂಪೂರ್ಣ ಪುಸ್ತಕ ಸಾರ್ವಜನಿಕವಾಗಿ ಪ್ರಕಟವಾಗುವುದಕ್ಕೂ ಮುನ್ನವೇ ಅದರ ಕೆಲವು ಭಾಗಗಳು ರಾಜಕೀಯ ಚರ್ಚೆಯ ಕೇಂದ್ರವಾಗಿದ್ದವು. ಇದು ಕಾಕತಾಳೀಯವಾಗಿರಬಹುದು. ಆದರೆ ಎರಡೂ ಪ್ರಕರಣಗಳು ಒಟ್ಟಿಗೆ ಬಂದಾಗ ಒಂದು ದೊಡ್ಡ ಪ್ರಶ್ನೆ ಎದುರಾಗುತ್ತದೆ.  ಭಾರತದಲ್ಲಿ ಅಧಿಕಾರಕ್ಕೆ ಅಸಹಜವಾಗಿರುವ ಪುಸ್ತಕಗಳಿಗೆ ಪ್ರಕಾಶನದ ಹಾದಿ ಏಕೆ ಹೆಚ್ಚು ಕಠಿಣವಾಗುತ್ತಿದೆ? ಪ್ರಜಾಪ್ರಭುತ್ವದಲ್ಲಿ ‘ಅನುಕೂಲಕರ ಸತ್ಯ’ ಮಾತ್ರ ಇರಬೇಕೇ? ಆಡಳಿತದಲ್ಲಿರುವ ಯಾವುದೇ ಸರ್ಕಾರಕ್ಕೂ ಟೀಕೆ ಇಷ್ಟವಾಗುವುದಿಲ್ಲ. ಅದು ಸಹಜ. ಆದರೆ ಪ್ರಜಾಪ್ರಭುತ್ವದ ಸೌಂದರ್ಯವೇನೆಂದರೆ ಸರ್ಕಾರಕ್ಕೆ ಇಷ್ಟವಾಗದ ಮಾತುಗಳೂ ಸಾರ್ವಜನಿಕವಾಗಿ ಕೇಳಿಸಿಕೊಳ್ಳಬೇಕು.

ನರೇಂದ್ರ ಮೋದಿ ಅವರ ಬಗ್ಗೆ ಸೋನಿಯಾ ಗಾಂಧಿಯವರಿಗೆ ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ರಾಜಕೀಯ ದೃಷ್ಟಿಕೋನ. ಅದನ್ನು ಓದುಗರು ಒಪ್ಪಬೇಕೆಂದಿಲ್ಲ. RSS ಕುರಿತು ಅವರು ಟೀಕಿಸಿದ್ದರೆ, RSS ಅದಕ್ಕೆ ಉತ್ತರಿಸಬಹುದು. ಚೀನಾ ಗಡಿ ವಿಚಾರದಲ್ಲಿ ಅವರು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದರೆ, ಸರ್ಕಾರ ತನ್ನ ದಾಖಲೆಗಳನ್ನು ಮುಂದಿಟ್ಟು ಪ್ರತಿವಾದಿಸಬಹುದು. ಪ್ರಜಾಪ್ರಭುತ್ವದಲ್ಲಿ ಪ್ರತಿವಾದಕ್ಕೆ ಉತ್ತರ ಪ್ರತಿವಾದವಾಗಬೇಕು; ಮೌನಕ್ಕೆ ಒತ್ತಡವಾಗಬಾರದು. ಇದು ಕಾಂಗ್ರೆಸ್‌ಗೆ ಮಾತ್ರ ಅನ್ವಯಿಸುವ ತತ್ವವಲ್ಲ. ಬಿಜೆಪಿ, ಎಡಪಂಥ, ಪ್ರಾದೇಶಿಕ ಪಕ್ಷಗಳು — ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ನೋಡಿ,  ಇದು ಸೋನಿಯಾ ಗಾಂಧಿಯವರ ಪುಸ್ತಕದ ಪ್ರಶ್ನೆ ಮಾತ್ರವಲ್ಲ. ಈ ವಿವಾದದ ನಿಜವಾದ ಅರ್ಥವನ್ನು ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ವಿರುದ್ಧದ ರಾಜಕೀಯ ದೃಷ್ಟಿಕೋನದಿಂದ ಮಾತ್ರ ಅಳೆಯಬಾರದು. ಇದು ಭಾರತದ ಪ್ರಕಾಶನ ಸ್ವಾತಂತ್ರ್ಯದ ಪ್ರಶ್ನೆ. ಇಂದು ಒಬ್ಬ ಕಾಂಗ್ರೆಸ್ ನಾಯಕಿಯ ಆತ್ಮಕಥೆಯ ಒಂದು ಭಾಗದ ಬಗ್ಗೆ ಆಕ್ಷೇಪ ಬರುತ್ತದೆ. ನಾಳೆ ಒಬ್ಬ ಮಾಜಿ ಸೇನಾ ಮುಖ್ಯಸ್ಥನ ನೆನಪುಗಳ ಬಗ್ಗೆ ಆಕ್ಷೇಪ ಬರಬಹುದು. ಮತ್ತೊಂದು ದಿನ ಒಬ್ಬ ಪತ್ರಕರ್ತ, ಇತಿಹಾಸಕಾರ, ಸಂಶೋಧಕ ಅಥವಾ ಲೇಖಕ ಸರ್ಕಾರದ ನೀತಿಯನ್ನು ಪ್ರಶ್ನಿಸುವ ಪುಸ್ತಕ ಬರೆಯಬಹುದು. ಪ್ರತಿಯೊಂದು ಬಾರಿ ‘ಸೂಕ್ಷ್ಮ ವಿಚಾರ’, ‘ರಾಷ್ಟ್ರೀಯ ಹಿತ’, ‘ಫ್ಯಾಕ್ಟ್ ಚೆಕ್’, ‘ಕಾನೂನು ಅಪಾಯ’ ಎಂಬ ಪದಗಳ ಹಿಂದೆ ರಾಜಕೀಯ ಅಸಹಜತೆಯನ್ನು ಮರೆಮಾಡಲು ಆರಂಭಿಸಿದರೆ, ಅಂತಿಮವಾಗಿ ನಷ್ಟವಾಗುವುದು ಪುಸ್ತಕಕ್ಕೆ ಅಲ್ಲ — ಸಾರ್ವಜನಿಕ ಸ್ಮೃತಿಗೆ. ಆಳುವವರನ್ನು ಇತಿಹಾಸ ಬರೆಯುವುದಿಲ್ಲ; ಇತಿಹಾಸವನ್ನು ದಾಖಲಿಸುವವರೂ ಬೇಕು. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪ್ರಧಾನಮಂತ್ರಿಗಳು ಬದಲಾಗುತ್ತಾರೆ. ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಅಧಿಕಾರ ಕಳೆದುಕೊಳ್ಳುತ್ತವೆ. ಆದರೆ ಆ ಕಾಲದ ರಾಜಕೀಯ ಘಟನೆಗಳನ್ನು ದಾಖಲಿಸುವ ಆತ್ಮಕಥೆಗಳು, ಪತ್ರಗಳು, ದಿನಚರಿಗಳು, ಸಂದರ್ಶನಗಳು ಮತ್ತು ಪುಸ್ತಕಗಳೇ ಭವಿಷ್ಯದ ಇತಿಹಾಸಕಾರರಿಗೆ ಮೂಲ ದಾಖಲೆಗಳಾಗುತ್ತವೆ. ಅಂತಹ ದಾಖಲೆಗಳಲ್ಲಿ ತಪ್ಪುಗಳಿದ್ದರೆ — ಇತಿಹಾಸಕಾರರು ಪ್ರಶ್ನಿಸಲಿ. ಸುಳ್ಳಿದ್ದರೆ — ದಾಖಲೆಗಳ ಮೂಲಕ ಖಂಡಿಸಲಿ. ಏಕಪಕ್ಷೀಯ ದೃಷ್ಟಿಕೋನವಿದ್ದರೆ — ಮತ್ತೊಂದು ದೃಷ್ಟಿಕೋನ ಪ್ರಕಟವಾಗಲಿ.

ಆದರೆ ಯಾವುದೇ ಪುಸ್ತಕದಲ್ಲಿ ಏನಿದೆ ಎಂಬುದನ್ನು ಓದುಗರೇ ತೀರ್ಮಾನಿಸುವ ಮುನ್ನವೇ ಅದನ್ನು ಮೃದುಗೊಳಿಸುವ ಅಥವಾ ರಾಜಕೀಯವಾಗಿ ಅನುಕೂಲಕರವಾಗಿಸುವ ಪ್ರಯತ್ನ ನಡೆದರೆ, ಅದು ಕೇವಲ ಒಬ್ಬ ಲೇಖಕಿಯ ಧ್ವನಿಯನ್ನು ನಿಯಂತ್ರಿಸುವ ವಿಚಾರವಾಗುವುದಿಲ್ಲ. ಅದು ಸಮಾಜದ ಸಾಮೂಹಿಕ ನೆನಪಿನ ಮೇಲಿನ ಹಸ್ತಕ್ಷೇಪವಾಗುತ್ತದೆ. ಹೀಗಾಗಿ ‘Belonging: A Journey of Love’ವಿವಾದದ ಅಂತಿಮ ಪ್ರಶ್ನೆ ಸೋನಿಯಾ ಗಾಂಧಿ ಏನು ಬರೆದಿದ್ದಾರೆ ಎಂಬುದಲ್ಲ. ಅವರು ಬರೆದದ್ದನ್ನು ಭಾರತೀಯ ಓದುಗರು ಸಂಪೂರ್ಣವಾಗಿ ಓದಿ, ನಂತರ ತೀರ್ಪು ನೀಡುವ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳುತ್ತೇವೆಯೇ? ಅದೇ ನಿಜವಾದ ಪರೀಕ್ಷೆ. ಪುಸ್ತಕವನ್ನು ಪ್ರಕಟಿಸಬೇಕೋ ಬೇಡವೋ ಎಂಬುದಕ್ಕಿಂತ ದೊಡ್ಡ ಪ್ರಶ್ನೆ ಇದು: ಅಧಿಕಾರಕ್ಕೆ ಅಸಹಜವಾದ ಸತ್ಯವನ್ನು ಓದುಗರಿಂದ ದೂರವಿಡುವ ಹಕ್ಕು ಯಾರಿಗಿದೆ? ಪ್ರಜಾಪ್ರಭುತ್ವದಲ್ಲಿ ಉತ್ತರ ಒಂದೇ ಇರಬೇಕು — ಓದುಗರಿಗೆ ಸತ್ಯವನ್ನು ಓದುವ ಹಕ್ಕಿದೆ; ಅಧಿಕಾರಕ್ಕೆ ಅದಕ್ಕೆ ಉತ್ತರಿಸುವ ಹೊಣೆ ಇದೆ.

- ಶ್ರೀರಾಜ್‌ ವಕ್ವಾಡಿ 

No comments:

Post a Comment