ಕಾರ್ಯಕರ್ತರ ಸಂಘಟನೆಯಲ್ಲಿ ಬಿಜೆಪಿಯ ಚತುರತೆ
ಮತ್ತು ಕಾಂಗ್ರೆಸ್
ಬಿಜೆಪಿಯಂತಹ ಸಂಘಟನೆಯನ್ನು ಕಾಂಗ್ರೆಸ್ ಯಾಕೆ ರಚಿಸಬಾರದು ? ಕೊನೆಯ ಪಕ್ಷ ಆ ಮಾದರಿಯ ಸಂಘಟನಾ ಬಲವನ್ನು ಯಾಕೆ ವೃದ್ಧಿಸಿಕೊಳ್ಳಬಾರದು
?
ವಾಸ್ತವವಾಗಿ, ಜನರನ್ನು ತಲುಪುವ ಉದ್ದೇಶದಿಂದ ಪ್ರಚಾರ ಮಾಡಲು ಕಾರ್ಯಕರ್ತರನ್ನು ಹೊಣೆಗಾರರನ್ನಾಗಿ ಮಾಡುವ ಸಾಂಸ್ಥಿಕ ರಚನೆಯೊಂದನ್ನು ಮಾಡದ ಹೊರತು ಕಾಂಗ್ರೆಸ್ ಪಕ್ಷದ ಪುನರುಜ್ಜೀವನ ಅಸಾಧ್ಯ ಅಂತನ್ನಿಸುತ್ತದೆ. ಇದು ಒಂದು ಪ್ರಶ್ನೆಯಲ್ಲ ಅಥವಾ ಅಭಿಪ್ರಾಯವೂ ಅಲ್ಲ, ಈ ಬಗ್ಗೆ ಕಾಂಗ್ರೆಸ್ ಯೋಚನೆ ಮಾಡಲೇಬೇಕಿದೆ. ಒಂದು ಸಿದ್ಧಾಂತದ ವಿರುದ್ಧ ನಿಲ್ಲುವುದಕ್ಕೆ
ಮುಂದಾದವರು ಒಂದು ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಸಾಂಸ್ಥಿಕ ರಚನೆ ಮಾಡದ ಹೊರತು ಯಾವ ಬದಲಾವಣೆಯೂ
ಸಾಧ್ಯವಿಲ್ಲ.
ಕಾಂಗ್ರೆಸ್ ಎಂದಿಗೂ ನಾಯಕರ ಪಕ್ಷವಾಗಿಯೇ ಉಳಿದುಕೊಂಡಿದೆ ಹೊರತು, ಕಾರ್ಯಕರ್ತರ ಪಕ್ಷವಾಗಿ ಉಳಿಯಲಿಲ್ಲ
ಅಥವಾ ಬದಲಾಗಿಲ್ಲ. ಕಾಂಗ್ರೆಸ್ ಎಲ್ಲೇ ಗೆಲ್ಲಲಿ ಅದು ಅದರ ನಾಯಕತ್ವವನ್ನು ಹೊಗಳಿಕೊಳ್ಳುತ್ತದೆ.
ಇದು ಬಿಜೆಪಿಯನ್ನು ಒಳಗೊಂಡು ಎಲ್ಲಾ ಪಕ್ಷಗಳಲ್ಲೀಗ ಸಾಮಾನ್ಯವಾಗಿದೆ. ಆದರೇ, ಇಂದಿರಾಗಾಂಧಿ ಕಾಲದಿಂದ
ಮೊದಲ್ಗೊಂಡು, ಸೋನಿಯಾ ಗಾಂಧಿ ಮುಂದಾಳತ್ವವಿರುವ ತನಕವೂ ಕಾಂಗ್ರೆಸ್ ನಾಯಕರ ಪಕ್ಷವಾಗಿಯೇ ಉಳಿದಿದೆ.
ರಾಹುಲ್ ಗಾಂಧಿ ಜೋಡೋ ಯಾತ್ರೆಯ ಮೂಲಕ ಕಾರ್ಯಕರ್ತರನ್ನು ಒಳಗೊಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದರೂ,
ಉಳಿದ ನಾಯಕರು ಅವರ ನಡೆಯಂತೆ ಇಲ್ಲದಿರುವುದು ಕಾಂಗ್ರೆಸ್ ಓಟಕ್ಕೆ ಮತ್ತೆ ಮತ್ತೆ ಹಿನ್ನೆಡೆಯಾಗುತ್ತಿದೆ.
ಕಾಂಗ್ರೆಸ್ನ ಎಲ್ಲಾ ಗೆಲುವುಗಳಲ್ಲಿ ಕಾರ್ಯಕರ್ತರ ಶ್ರಮ ಮರೆಯಾಗಿ ಹೋಗಿ ನಾಯಕರೇ ಅದರ ಶ್ರೇಯ ಗಿಟ್ಟಿಸಿಕೊಳ್ಳುವುದು
ತೀರಾತಿಸಹಜ. ಮೋದಿ ಆಡಳಿತವೂ ಇದನ್ನೇ ಅನುಸರಿಸುತ್ತಿದೆ ಆದರೇ, ಮೋದಿಯವರ ʼಒಂದುʼ ಹೇಳಿಕೆಯು ಕಾರ್ಯಕರ್ತರನ್ನು
ಒಗ್ಗೂಡಿಸುವ ಶಕ್ತಿಯಾಗಿ ಪರಿವರ್ತನೆಯಾಗಿದೆ. ಆದರೇ, ಕಾಂಗ್ರೆಸ್ನಲ್ಲಿ ಆ ಪರಿಸ್ಥಿತಿ ಇಲ್ಲ. ಕಾರ್ಯಕರ್ತರನ್ನು
ಈ ಹಿಂದಿನಿಂದಲೂ ಕಾಂಗ್ರೆಸ್ ಅಷ್ಟೊಂದು ವಿಶ್ವಾಸದ ವಲಯದಲ್ಲಿ ಉಳಿಸಿಕೊಂಡಿಲ್ಲ. ಚುನಾವಣೆ ಬಂದಾಗ
ಕಾರ್ಯಕರ್ತರು ಬೇಕು ಎಂಬಂತಹ ಮನಸ್ಥಿತಿ ಕಾಂಗ್ರೆಸ್ನ ಅನೇಕ ನಾಯಕರಲ್ಲಿದೆ.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಾಯಕರ ಮನೋಧೋರಣೆಯ ಬಗ್ಗೆ ಅಸಮಾಧಾನವೂ ಬಹಳ ದೊಡ್ಡ ಮಟ್ಟದಲ್ಲಿದೆ.
ಅದಕ್ಕೆ ಕಾಂಗ್ರೆಸ್ ನಡೆದು ಬಂದ ದಾರಿಯೇ ಮುಖ್ಯ ಕಾರಣ. ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟಷ್ಟು ಹೋಲ್ಡ್,
ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ನೀಡಿಲ್ಲ. ಅದು ಕಾಂಗ್ರೆಸ್ನ ದೌರ್ಬಲ್ಯ.
ಭಾರತೀಯ ಜನತಾ ಪಕ್ಷ (ಬಿಜೆಪಿ),
ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)
(ಸಿಪಿಐ-ಎಂ) ಭಾರತದಲ್ಲಿ ಕಾಯಕರ್ತರ ಆಧಾರಿತ ಪಕ್ಷಗಳಿಗೆ ಕೆಲವು ಉದಾಹರಣೆಗಳಾಗಿವೆ. ಇಂದು ಬಿಜೆಪಿಯನ್ನು ಹೊರತು ಪಡಿಸಿ ಉಳಿದ
ಪಕ್ಷಗಳು ಕಾರ್ಯಕರ್ತರ ಪಕ್ಷವಾಗಿ ಉಳಿಯದೇ ಇರಬಹುದು ಅಥವಾ ದುರ್ಬಲಗೊಂಡಿರಬಹುದು. ಆದರೇ, ಕಾರ್ಯಕರ್ತರ ಶ್ರಮದಿಂದಲೇ ಈ ಎಲ್ಲಾ ಪಕ್ಷಗಳು ಬೆಳೆದಿವೆ ಎನ್ನುವುದು
ಸತ್ಯ. ಕಾಂಗ್ರೆಸ್ನಂತಹ ದೇಶದ ಅತ್ಯಂತ ಹಿರಿಯ ರಾಷ್ಟ್ರೀಯ ಪಕ್ಷದ ಹಿಂದೆ ಬಹುದೊಡ್ಡ ಕಾರ್ಯಕರ್ತರಿದ್ದಾರೆ.
ಆದರೇ, ಕಾರ್ಯಕರ್ತರನ್ನು ಕಾಂಗ್ರೆಸ್ ಸಂಘಟನಾತ್ಮಕ ವಿಕಾಸಕ್ಕೆ ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವುದು
ಇಲ್ಲಿ ಉಲ್ಲೇಖಾರ್ಹ.
1920ರ ದಶಕದಲ್ಲಿ ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ಮಾಧ್ಯಮಗಳು ಲಭ್ಯವಿರಲಿಲ್ಲ. ಮಹಾತ್ಮಾ ಗಾಂಧಿಯವರು ಎಂತಹ ಪ್ರಖರ ಬರಹಗಾರರಾಗಿದ್ದರು ಎಂಬುದನ್ನು
ಗಮನಿಸಿದರೆ, ಅವರು ಇಂದು ಬದುಕಿದ್ದಿದ್ದರೆ, ಅವರು ಸಾರ್ವಜನಿಕರನ್ನು ಮನವೊಲಿಸಲು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ
ಮುಂಚೂಣಿಯಲ್ಲಿರುತ್ತಿದ್ದರು ಎಂದು ಈ ಸಮಾಜ ನಿಸ್ಸಂಶಯವಾಗಿ ಒಪ್ಪುತ್ತದೆ.
ಹೌದು, ಕಾಂಗ್ರೆಸ್ ತನ್ನ ಪಕ್ಷ ಸಂಘಟನೆಯ ಬಗ್ಗೆ ಮರುಚಿಂತನೆ ಮಾಡುವ ಸಮಯ ಬಂದಿದೆ. ಇದು ಸರಳ
ಸದಸ್ಯತ್ವ ಅಭಿಯಾನದ ಮೂಲಕ ಮಾಡುವ ವಿಷಯವಲ್ಲ, ಯಾಕೆಂದರೆ
ಪಕ್ಷದ ಸಂಘಟನೆಯನ್ನು ರೂಪಿಸುವ ಮತ್ತು ಬಳಸುವ ವಿಧಾನದ ಬಗ್ಗೆ ಹೊಸ ಕಲ್ಪನೆ ಇಲ್ಲದಿದ್ದರೆ ಹೊಸ
ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವುದು ಅರ್ಥಹೀನ. ಕಾಂಗ್ರೆಸ್ ಪದೇ ಪದೆ ಸೋಲುತ್ತಿರುವುದೇ
ಇಲ್ಲಿ.
ಕೇರಳದ ಕಾಂಗ್ರೆಸ್ ಸಂಘಟನಾ ಮಾದರಿ :
ಕಾಂಗ್ರೆಸ್ ಸಂಘಟನೆಯು ಕಾರ್ಯಕರ್ತರ ಆಧಾರಿತ ಪಕ್ಷಗಳನ್ನು ಹೋಲುವ ಒಂದು ರಾಜ್ಯವಿದೆ. ಅದು ಕೇರಳ. ಹೌದು, ಕೇರಳದಲ್ಲಿ ಕಾಂಗ್ರೆಸ್ ಸಂಘಟನೆಯು ಸಿಪಿಐ(ಎಂ)
ಕಾರ್ಯಕರ್ತರಿಗೆ ಪ್ರತಿಯಾಗಿ ವಿಕಸನಗೊಂಡು ಬೆಳೆಯಿತು. ಕೇರಳದಲ್ಲಿ ಕಾಂಗ್ರೆಸ್ಗೆ ಆ ಅನಿವಾರ್ಯ ಇದ್ದಿತ್ತು ಕೂಡ. ಆದರೂ ಇಂದು ಕೇರಳದಲ್ಲಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗಿದೆ ಎಂದು ಕಳೆದ
ವಿಧಾನಸಭಾ ಚುನಾವಣೆ ತೋರಿಸಿಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲದಿಂದ ಗೆದ್ದಿದ್ದು
ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಂತ ಕಾರ್ಯಕರ್ತರ ಶ್ರಮವಿಲ್ಲ ಎಂದರ್ಥವಲ್ಲ. ಕರ್ನಾಟಕದಲ್ಲಿ
ಕಾಂಗ್ರೆಸ್ ಗೆಲುವಿಗೆ ಹಲವಾರು ಕಾರಣಗಳಿವೆ. ಅದೊಂದು ದೊಡ್ಡ ಚರ್ಚೆಯೇ ಸರಿ.
ಸಿಪಿಐ(ಎಂ)ಗೆ ಪ್ರತಿಯಾಗಿ ಕೇರಳದಲ್ಲಿ ಕಾಂಗ್ರೆಸ್ ಹೊಸ ಸಾಂಸ್ಥಿಕ ರಚನೆಯನ್ನು ರೂಪಿಸಿದಂತೆಯೇ, 2014ರ ನಂತರದಲ್ಲಿ ಬದಲಾದ ಬಿಜೆಪಿಗೆ ಪ್ರತಿಯಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಒಂದು
ಸಾಂಸ್ಥಿಕ ರಚನೆಗೆ ಮುಂದಾಗಬೇಕಿತ್ತು. ಅದನ್ನು ಮಾಡದೇ ಉಳಿದಿರುವುದೇ ಕಾಂಗ್ರೆಸ್ನ ಇಂದಿನ ಸ್ಥಿತಿಗೆ
ಕಾರಣ ಎಂದು ಹೇಳಿದರೇ ತಪ್ಪಲ್ಲ.
ಸಂಘಟನೆಯ ಚತುರತೆ ಮತ್ತು ಬಿಜೆಪಿ :
ಬಿಜೆಪಿ ಇಂದು ಅಸಾಧಾರಣ ಪಕ್ಷ ಸಂಘಟನೆಯನ್ನು ಹೊಂದಿದೆ. ಪಕ್ಷದ ಚುನಾವಣಾ ಪ್ರಚಾರಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)
ಹಾಗೂ ಕಾರ್ಯಕರ್ತರ ಪಾತ್ರ ದೊಡ್ಡದಿದೆ. 2014 ರಿಂದ ಬಿಜೆಪಿ ತನ್ನ ಪಕ್ಷದ ಸಂಘಟನೆಯನ್ನು ಬಹುಮುಖಿಯಾಗಿ
ವಿಸ್ತರಿಸಿದೆ. ರಾಜಕೀಯ ವಿಶ್ಲೇಷಕರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು ಮತ್ತು ಪ್ರಚಾರಗಳ ಮೇಲೆ
ಕೇಂದ್ರೀಕರಿಸುತ್ತಾರೆ, ಮಾಧ್ಯಮಗಳು ಬಿಜೆಪಿಯ ಗೆಲುವಿನ ಹಿಂದಿನ
ಅಂಶಗಗಳು. ಅವೆಲ್ಲವನ್ನೂ ಮೀರಿ ತಳಮಟ್ಟದಲ್ಲಿ ಬಿಜೆಪಿಯ ಹಿಂದೆ ಕಾರ್ಯಕರ್ತರ ದೊಡ್ಡ ಸಮೂಹವೇ ಇದೆ.
ಶ್ರೀಸಾಮಾನ್ಯರು ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಅವರಂತಹ ನಾಯಕರನ್ನು ತಲುಪಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ
ಪಕ್ಷ ಎಂದರೆ ಪಕ್ಕದ ಮನೆಯ ಕಾರ್ಯಕರ್ತರೇ ಆಗಿದ್ದಾರೆ. ಪಕ್ಷದ ಕಾರ್ಯಕರ್ತ ತನ್ನ ಮತಗಟ್ಟೆಯಲ್ಲಿ ಇರುವ ಜನರಿಗೆ ವರ್ಷಪೂರ್ತಿ ಸಂಪರ್ಕದಲ್ಲಿರುತ್ತಾನೆ. ಪರಿಣಾಮವಾಗಿ, ಪಕ್ಷದ ಕಾರ್ಯಕರ್ತರೇ ಮತವನ್ನು ವೈಯಕ್ತಿಕವಾಗಿ ಸೆಳೆಯುವಷ್ಟು ಬೆಳೆದಿರುತ್ತಾರೆ. ಕಾರ್ಯಕರ್ತರ
ಅಭಿಪ್ರಾಯಗಳಿಗೆ ಪಕ್ಷ ನೀಡುವ ಸ್ಥಾನಮಾನ ಮತ್ತು ಗೌರವ ಆ ಪಕ್ಷವನ್ನು ಅಭೂತಪೂರ್ವವಾಗಿ ಗೆದ್ದು ಬೀಗುವಂತೆ
ಮಾಡಿದೆ ಎನ್ನುವುದಕ್ಕೆ ಈ ದೇಶದಲ್ಲಿ ಬಿಜೆಪಿ ಉದಾಹರಣೆಯಾಗಿ ಮುಂಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ.
ಕಾರ್ಯಕರ್ತರೇ ನಾಯಕರು
ಎಂಬ ಮೈಂಡ್ ವಾಷ್ ತಂತ್ರಗಾರಿಕೆ :
ಬಹುಷಃ ಈ ತಂತ್ರಗಾರಿಕೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಅಗತ್ಯವಾಗಿ ಬೇಕು. ಚುನಾವಣೆಗಳಲ್ಲಿ ಎಲ್ಲೋ
ಒಬ್ಬ ಕಾರ್ಯಕರ್ತನಿಗೆ ಟಿಕೇಟ್ ನೀಡಿದಂತೆ ಮಾಡಿ ತೋರಿಸುವುದು, ಕಾರ್ಯಕರ್ತರಿಂದಲೇ ಪಕ್ಷ ನಡೆಯುತ್ತಿದೆ
ಎಂದು ಮತ್ತೆ ಮತ್ತೆ ನಿರೂಪಿಸುವ ಪ್ರಯತ್ನ ಮಾಡುವುದು, ಕಾರ್ಯಕರ್ತರೇ ನಾಯಕರು ಎಂಬ ಮೈಂಡ್ ವಾಷ್
ತಂತ್ರಗಾರಿಕೆ, ಕಾರ್ಯಕರ್ತರ ಪಕ್ಷ ಎಂದು ಮತ್ತೆ ಮತ್ತೆ ಬಿಂಬಿಸುವುದೇ ಕಾರ್ಯಕರ್ತರನ್ನು ಎಲ್ಲಿಯೂ
ವಿಭಜಿಸಿ ಹೋಗದಂತೆ ಮಾಡುವ ಅಸ್ತ್ರ. ಇದನ್ನು ಬಿಜೆಪಿ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ನಲ್ಲಿ
ಈ ಪದ್ಧತಿ ಇಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿ ತೀರಾ ಇತ್ತೀಚೆಗಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ
ಆಕ್ರೋಶಕ್ಕೆ ಕಾರಣವಾದದ್ದೂ ಉಂಟು. ಬಿಜೆಪಿಯಲ್ಲಿ ಹಾಗಲ್ಲ. ತನ್ನ ನಾಯಕನನ್ನು ಕಾರ್ಯಕರ್ತರೇ ನಿರ್ಧರಿಸುತ್ತಾರೆ
ಎಂಬ ವಾತಾವರಣವಿದೆ.
ಬಿಜೆಪಿಯಲ್ಲಿ ಕಾರ್ಯಕರ್ತರ ಉತ್ತೇಜಿಸುವ ವ್ಯವಸ್ಥೆ ಇದೆ. ಪಕ್ಷದ ಕಾರ್ಯಕರ್ತರಿಗೆ
ತಿಂಗಳಿಗೊಮ್ಮೆಯಾದರೂ ಜನರನ್ನು ತಲುಪಲು ನಿಯಮಿತ ಪ್ರಚಾರ ಕಾರ್ಯಗಳನ್ನು ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಸೋತರೆ ಅದಕ್ಕೆ ಕಾರಣ,
ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಪಕ್ಷ ಅಸಮರ್ಥನೀಯ ಆಡಳಿತ ಅಥವಾ ನಾಯಕತ್ವದ ಸವಾಲುಗಳು, ದುರ್ಬಲ ಮುಖ್ಯಮಂತ್ರಿಯ ನೇತೃತ್ವ ಅಥವಾ ಘಟಕದ ದುರ್ಬಲ ನಿರ್ವಹಣೆಯಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಆ ಸಂದರ್ಭದಲ್ಲಿಯೂ ಬಿಜೆಪಿ ಬಲವಾದ ಮತ ಪಾಲನ್ನು ಉಳಿಸಿಕೊಂಡಿದೆ/ಉಳಿಸಿಕೊಳ್ಳುತ್ತದೆ ಎಂದರೇ ಅದಕ್ಕೆ ಮುಖ್ಯ ಕಾರಣ ಮತವನ್ನು ತರುವ ಕಾರ್ಯಕರ್ತರೇ ಆಗಿದ್ದಾರೆ.
ಇನ್ನು, ಕಾರ್ಯಕರ್ತರನ್ನು ಕೇಂದ್ರೀಕರಿಸಿಕೊಂಡು ಬಿಜೆಪಿ 'ಸರಲ್' ಎಂಬ ಅಪ್ಲಿಕೇಶನ್ ಅನ್ನು ತಂದಿದೆ. ಪಕ್ಷದ ಯೋಜನೆಗಳ್ನು ಈ ಮೂಲಕ ಜನರಿಗೆ
ಹಾಗೂ ಕಾರ್ಯಕರ್ತರಿಗೆ ತಲುಪುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಇಂತಹ ವ್ಯವಸ್ಥೆಗಳು ಕಾಂಗ್ರೆಸ್ನಲ್ಲಾಗಲಿ
ಅಥವಾ ಇತರೆ ಪಕ್ಷಗಳಲ್ಲಿ ಇಲ್ಲ. ಆ ಪ್ರಯತ್ನವನ್ನು ಬಿಜೆಪಿಯೇತರ ಪಕ್ಷಗಳು ಮಾಡಿದ್ದರೂ ಕೂಡ ಬಿಜೆಪಿ
ಕಾರ್ಯರೂಪಕ್ಕೆ ತಂದಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದಿಲ್ಲ ಹಾಗೂ ಉಳಿಸಿಕೊಳ್ಳಲಿಲ್ಲ ಎನ್ನುವುದು
ನಿಜಾಂಶ.
ನಿಷ್ಠೆಗಳು ಬದಲಾಗುವ ಸಾಧ್ಯಸಾಧ್ಯತೆ :
ಇದಕ್ಕೆ ವ್ಯತಿರಿಕ್ತವಾಗಿ,
ಮತಗಟ್ಟೆಯಲ್ಲಿನ ಏಕೈಕ ಕಾಂಗ್ರೆಸ್
ಕಾರ್ಯಕರ್ತ ಸ್ಥಳೀಯ ಕಾಂಗ್ರೆಸ್ ನಾಯಕನಿಗೆ ಸಮನ್ವಯಕಾರನಾಗಿರುತ್ತಾನೆ. ಕಾಂಗ್ರೆಸ್ ನಾಯಕ ಬಿಜೆಪಿಗೆ ಅಥವಾ ಬೇರೆ ಪಕ್ಷಕ್ಕೆ ಪಕ್ಷಾಂತರಗೊಂಡರೇ, ಪ್ರಾಯಶಃ ಕಾರ್ಯಕರ್ತರು ಮತ್ತು ಆ ನಾಯಕ ಆಜ್ಞಾಪಿಸುವ ಮತಗಳೂ ಬದಲಾಗುತ್ತವೆ. ಆದರೇ, ಬಿಜೆಪಿಯಲ್ಲಿ ನಾಯಕ ಬದಲಾದರೂ ಕಾರ್ಯಕರ್ತ
ಬದಲಾಗುವುದಿಲ್ಲ ಎಂಬ ಮಾತಿದೆ, ಮತ್ತು ಕಾರ್ಯಕರ್ತರು ಮತಗಳು ಬದಲಾಗದೇ ಇರುವ ಹಾಗೆ ಕಂಡುಕೊಳ್ಳುವುದೇ
ಬಿಜೆಪಿಗೆ ಪ್ಲಸ್ ಪಾಯಿಂಟ್.
ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಶಿಸ್ತುಬದ್ಧ ಕಾರ್ಯಕರ್ತರ ಬೆಂಬಲದೊಂದಿಗೆ ಬೂತ್
ಮಟ್ಟದವರೆಗೆ ತಲುಪಿದ ನಿರ್ವಹಿಸಿ ಸಮೃದ್ಧ ಸಂಘಟನೆಯನ್ನು ಬಿಜೆಪಿ ಮಾಡಿದಷ್ಟು ಯಾವುದೇ ಪಕ್ಷವು ಮಾಡುವುದಕ್ಕೆ ಸಾಧ್ಯವಿಲ್ಲ. ಅದು ವಿಚಾರಪೂರ್ಣ ಸಂಘಟನೆಯೋ, ಭಾವನಾತ್ಮಕ ಪೂರ್ವಾಗ್ರಹ ಪೀಡಿತ ಸಂಘಟನೆಯೋ ಅದು ಎರಡನೇಯ ಚರ್ಚೆ.
ಪಕ್ಷ ಬೆಳೆಯುವುದಷ್ಟೇ ಮುಖ್ಯ.
ಬಿಜೆಪಿಯಂತಹ ಸಂಘಟನೆಯನ್ನು ಕಾಂಗ್ರೆಸ್ ಯಾಕೆ ರಚಿಸಬಾರದು ? ಕೊನೆಯ ಪಕ್ಷ ಆ ಮಾದರಿಯ ಸಂಘಟನಾ ಬಲವನ್ನು ಯಾಕೆ ವೃದ್ಧಿಸಿಕೊಳ್ಳಬಾರದು
? ವಾಸ್ತವವಾಗಿ, ಜನರನ್ನು ತಲುಪುವ ಉದ್ದೇಶದಿಂದ ಪ್ರಚಾರ ಮಾಡಲು ಕಾರ್ಯಕರ್ತರನ್ನು ಹೊಣೆಗಾರರನ್ನಾಗಿ ಮಾಡುವ ಸಾಂಸ್ಥಿಕ ರಚನೆಯೊಂದನ್ನು ಮಾಡದ ಹೊರತು ಕಾಂಗ್ರೆಸ್ ಪಕ್ಷದ ಪುನರುಜ್ಜೀವನ ಅಸಾಧ್ಯ ಅಂತನ್ನಿಸುತ್ತದೆ. ಇದು ಒಂದು ಪ್ರಶ್ನೆಯಲ್ಲ ಅಥವಾ ಅಭಿಪ್ರಾಯವೂ ಅಲ್ಲ, ಈ ಬಗ್ಗೆ ಕಾಂಗ್ರೆಸ್ ಯೋಚನೆ ಮಾಡಲೇಬೇಕಿದೆ. ಒಂದು ಸಿದ್ಧಾಂತದ ವಿರುದ್ಧ ನಿಲ್ಲುವುದಕ್ಕೆ
ಮುಂದಾದವರು ಒಂದು ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಸಾಂಸ್ಥಿಕ ರಚನೆ ಮಾಡದ ಹೊರತು ಯಾವ ಬದಲಾವಣೆಯೂ
ಸಾಧ್ಯವಿಲ್ಲ. ಬದಲಾವಣೆ ಬಯಸುವವರು ಮೊದಲು ಹೊಸತನಕ್ಕೆ ಒಗ್ಗಿಕೊಳ್ಳಬೇಕು.
2024 ರ ಲೋಕಸಭಾ ಚುನಾವಣೆ :
ಈ ಹಿನ್ನೆಲೆಯಲ್ಲಿ 2024 ರ ಲೋಕಸಭಾ ಚುನಾವಣೆ ಬಂದಿದೆ. ಕಾರ್ಯಕರ್ತರ
ಬಹುಶ್ರಮವನ್ನೇ ನಂಬಿಕೊಂಡ ಬಿಜೆಪಿ ಮತ್ತು ನಾಯಕರ ನಿರ್ಧಾರವೇ ಅಂತಿಮ ಎನ್ನುವ ಹಲವು ವಿಷಯಗಳಲ್ಲಿ ನಿರ್ಣಾಯಕವಾಗಿರುತ್ತದೆ. ಆದರೂ, ಮತದಾರರ ಮನಸ್ಸು ಮತ್ತು ಆದ್ಯತೆಗಳು ಹೇಗೆ ಬದಲಾಗಿವೆ ಎನ್ನುವುದು ಪ್ರಮುಖವಾಗಿದೆ.
ಒಂದೆಡೆ ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ತಳಮಟ್ಟದ ರಾಜಕೀಯ ವಲಯದಲ್ಲಿ ಪ್ರಧಾನ ಮಂತ್ರಿ ಮತ್ತು ಬಿಜೆಪಿ ದುರ್ಬಲಗೊಂಡಿರುವ ಯಾವ ಲಕ್ಷಣಗಳು ಕಾಣಿಸಿಕೊಳ್ಳದ ಹಾಗೆ ವ್ಯವಸ್ಥೆ ಮಾಡಿಕೊಂಡಿದೆ. ಇನ್ನೊಂದೆಡೆ ತನ್ನ ಅಂಗ ಪಕ್ಷಗಳ ಮಹತ್ವಾಕಾಂಕ್ಷೆಗಳು ಮತ್ತು ಅವನ್ನು ಒಟ್ಟಿಗೆ ಸೇರಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್
ಪಕ್ಷದ ಸಾಂಸ್ಥಿಕ ದೌರ್ಬಲ್ಯದ ಜೊತೆಜೊತೆಗೆ ಮೋದಿ ನೇತೃತ್ವದ ಎನ್ಡಿಎ ಮೈತ್ರಿಯನ್ನು, ಸೈದ್ಧಾಂತಿಕ ನಿಲುವನ್ನು
ವಿರೋಧಿಸುವ ಮಹಾ ಸಂಕಲ್ಪದೊಂದಿಗೆ ರಚನೆಗೊಂಡ ʼಇಂಡಿಯಾʼ ಮೈತ್ರಿ ಅನಿಶ್ಚಿತತೆಯಲ್ಲೇ ಇದೆ. ಉಳಿದದ್ದು
ನಿಮ್ಮ ಯೋಚನೆಗೆ ಬಿಟ್ಟಿದ್ದು.
-ಶ್ರೀರಾಜ್ ವಕ್ವಾಡಿ