Saturday, May 27, 2023

'ಡೇರ್ ಡೆವಿಲ್ ಮುಸ್ತಾಫಾ' ಸಿನೆಮಾದ ಉದ್ದೇಶ ಸಮಾಜವನ್ನು ತಲುಪಲಿ !


'ಡೇರ್ ಡೆವಿಲ್ ಮುಸ್ತಾಫಾ' ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಸಿನೆಮಾ‌. ಅಬಚೂರು ಎಂಬ ಊರಿನ ಮನಸ್ಥಿತಿಯನ್ನು ತೆರೆಯ ಮೇಲೆ ಸೊಗಸಾಗಿ ಕಟ್ಟಿಕೊಟ್ಟುವುದಕ್ಕೆ ಚಿತ್ರ ನಿರ್ದೇಶಕ  ಶಶಾಂಕ್ ಸೋಗಲ್ ಪ್ರಯತ್ನಿಸಿದ್ದಾರೆ. 

ಪೂರ್ತಿ ಹಿಂದೂ ಧರ್ಮದ ಹುಡುಗರೇ ಓದುತ್ತಿದ್ದ ಕಾಲೇಜೊಂದಕ್ಕೆ ಏಕೈಕ ಮುಸ್ಲಿಂ ಧರ್ಮದ ಹುಡುಗ ಪ್ರವೇಶ ಪಡೆಯುತ್ತಿದ್ದಂತೆ ಮುಸ್ಲಿಂ ರ ಮೇಲಿರುವ ಅಪನಂಬಿಕೆ, ಊಹಾಪೋಹಗಳು, ಪೂರ್ವಾಗ್ರಹಗಳನ್ನೆಲ್ಲಾ ಆ ಕಾಲೇಜಿನಲ್ಲಿ ಓದುತ್ತಿದ್ದ ಎಲ್ಲಾ ಹಿಂದೂ ಧರ್ಮದ ಹುಡುಗರೊಳಗೆ ಬೇರೂರಿ ಹೋದ ಮಾತೆಂಬಂತೆ ಗ್ರಾಫಿಕ್ಸ್ ನ ಮೂಲಕ ಕಥೆಗೆ ತೆರೆದುಕೊಳ್ಳುವ ಸಿನೆಮಾ, ಈ ಸಮಾಜದ ಮನಸ್ಸನ್ನು ಆವರಿಸಿರುವ ಭಿನ್ನಾಭಿಪ್ರಾಯಗಳು, ಅಪನಂಬಿಕೆ, ಯಾವನೋ ಒಬ್ಬ ಮಾಡಿದ ತಪ್ಪಿಗೆ ಆ ಸಮುದಾಯದ ಎಲ್ಲರನ್ನೂ ತಪ್ಪಿತಸ್ಥ ಎಂದು ಕಾಣುವ ಮನೋಭಾವನೆಗಳ ಬಗ್ಗೆ ಗಂಭೀರವಾಗಿ ಚಿಂತನೆಗೊಡ್ಡುತ್ತದೆ.

ಕಾಲೇಜಿನಲ್ಲಿ ಮುಸ್ತಾಫಾ ಎಂಬ ಹುಡುಗ ಮುಸ್ಲಿಂ ಎಂಬ ಕಾರಣಕ್ಕೆ ಉಳಿದವರೆಲ್ಲಾ ಆತನ ಮೇಲೆ ಇರುವ ಕೆಟ್ಟ ಅಭಿಪ್ರಾಯದಿಂದ ಅವನಿಗೆ ಮಾಡುವ ಸಮಸ್ಯೆಗಳಿಂದ ಸಿನೆಮಾದ ಕಥೆ ಬಹಳ ಹೊತ್ತು ಆಚೆಗೆ ಬರುವುದಿಲ್ಲ. ಕಾಲೇಜು, ಕಾಲೇಜಿನ ಮುಸ್ತಾಫಾ, ಅಯ್ಯಂಗಾರಿ ರಾಮಾನುಜ, ಮತ್ತವನ ಸ್ನೇಹಿತರ ಬಳಗದ ಸುತ್ತಲೇ ಸುತ್ತುವ ಕಥೆ ವಾಸ್ತವಾಗಿ ಗಂಭೀರತೆಯಿಂದ ಕೂಡಿದ್ದರೂ, ಒಂದು ರೀತಿಯಲ್ಲಿ ಕಾಲೇಜು ಹುಡುಗರ ಲೋಕದಲ್ಲಿನ ಒಂದು ತೆರನಾದ ಸಾಮಾನ್ಯ ಸಮಸ್ಯೆ ಎಂಬಂತೆಯೇ ಅಲ್ಲಲ್ಲಿ ಕಾಣಿಸುತ್ತದೆ. 

ಆ ಭಾಗದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಉಂಟಾದ ಧಾರ್ಮಿಕ ಸಂಘರ್ಷ, ಹಿಂದೂ ಹುಡುಗಿಯೊಬ್ಬಳ ಮುಸ್ಲಿಂ ಯುವಕನೊಂದಿಗಿನ ಪ್ರೇಮ ಪ್ರಕರಣದ ನಂತರ ಅಲ್ಲಿನ ಜನರ ಮನಸ್ಥಿತಿಯಲ್ಲಾದ ಬದಲಾವಣೆಯನ್ನು ಹೇಳಲುಹೊರಟಿರುವ ಕಥೆ ಇದು‌. 

ಶಿವಮೊಗ್ಗದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾದ ವೈಯಕ್ತಿಕ ಅನುಭವವೂ ಇದೆ ನನಗೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳು ಆ ಕೇರಿಯ/ ಗಲ್ಲಿಯನ್ನು ದಾಟಿ ಬರುವಾಗ ದರ್ಗಾ / ಮಸೀದಿಗಳ ಸುತ್ತಮುತ್ತ ಬಿಗಿ ಪೋಲೀಸ್ ಪಡೆಗಳನ್ನು ರಕ್ಷಣೆಗಾಗಿ ನಿಯೋಜನೆ ಮಾಡಿರುವ ಪ್ರತ್ಯೇಕ್ಷ ನೋಟವನ್ನು ತೀರಾ ಇತ್ತೀಚಿಗೆ ನಾನು ಕಂಡಿದ್ದೇನೆ. ಶಿವಮೊಗ್ಗದಂತಹ ನಗರದಲ್ಲಿ ಕೋಮು ವೈಷಮ್ಯ ಹೇಗಿದೆ ಅಂತಂದರೇ, ನಗರದ ಒಂದು ಕಡೆಯಿಂದ ಒಂದು ಸಂಘಟನೆ ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತಾ ತಮ್ಮ ಶಕ್ತಿ ಪ್ರದರ್ಶಿಸಿದರೇ, ಇನ್ನೊಂದು ಕಡೆಯಿಂದ ಇನ್ನೊಂದು ಸಮುದಾಯಕ್ಕೆ ಸೇರಿದ ಗುಂಪೊಂದು ಗಲ್ಲಿ ಗಲ್ಲಿ ಮೆ ಟಿಪ್ಪು ನಗರ್ ಎಂದು ಘೋಷಣೆ ಹಾಕುತ್ತಾ ತಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ತಮ್ಮ ಶಕ್ತಿ ಪ್ರದರ್ಶನ ಮಾಡುವಷ್ಟರ ಮಟ್ಟಿಗಿದೆ. ಇದನ್ನೇ ತೇರೆಯ ಮೇಲೆ ಬಹಳ ಸೂಕ್ಷ್ಮವಾಗಿ ಹೇಳಿ, ಇದು ಸ್ವಾಸ್ಥ್ಯ ಸಮಾಜದ ದುರಂತಗಳಲ್ಲೊಂದು ಎಂಬಂತೆ ತೋರಿಸುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ. 

ಸಿನೆಮಾ, ಸಿನೆಮಾ ಅಂತಂದ ಮೇಲೆ ಅಲ್ಲೊಂದಿಷ್ಟು ಮಿತಿ, ಅಲ್ಲೊಂದು ಚೌಕಟ್ಟು ಎಲ್ಲವೂ ಇರುವ ಕಾರಣದಿಂದ, ಕಾಲೇಜಿನ ವಾತಾವರಣದಲ್ಲೇ ಧಾರ್ಮಿಕ ವಿಚಾರಕ್ಕೆ ಸಂಘರ್ಷಗಳಾಗುವಾಗ ಕಾಲೇಜಿನ ಪ್ರಾಂಶುಪಾಲರಾದಿಯಾಗಿ ಎಲ್ಲರೂ ದೊಡ್ಡವರಾಗಿ ಇದು ತಮ್ಮದಲ್ಲ ಎಂಬಂತೆ ಮೌನವಾಗಿ ಪ್ರತಿಕ್ರಿಯಿಸುವಂತಹ ಕೆಲವು ದೃಶ್ಯಗಳು ಸಿನೆಮಾಗೆ ಸ್ವಲ್ಪ ಹಿನ್ನಡೆಯೆನ್ನಿಸುತ್ತದೆ. ಮತ್ತೆ ಅದೇ ವಿಚಾರ ಸಮಾಜದ ಮೌನ ಪ್ರತಿಕ್ರಿಯೆಯ ಬಗ್ಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ಮಾಡುತ್ತದೆ. 

ಮಾನವ ಸಂಬಂಧಗಳು ಪವಿತ್ರ ಎಂಬ ಭಾವನೆಗಳಿಂದ ದೂರ ಓಡಿ ಹೋಗುತ್ತಿರುವ ಕಾಲದಲ್ಲಿ ಇಂತಹದ್ದೊಂದು ಸಿನೆಮಾ ಗಂಭೀರ ಚಿಂತನೆಗೆ ನೋಡುಗಗನ್ನು ತೆರೆದುಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ. ಒಬ್ಬ ವ್ಯಕ್ತಿಯ ಹೆಸರು ನೋಡಿ ಆತ ಇಂತಹ ಜಾತಿಗೆ, ಧರ್ಮಕ್ಕೆ ಸೇರಿದವನು ಅಂತ ತಿಳಿದು ಆತನನ್ನು ದೂರ ಇಡುವ ಮನಸ್ಥಿತಿ ಈ ಸಮಾಜದಲ್ಲಿದೆ ಎಂಬುವುದು ದುರಂತದ ಸಂಗತಿ. ಜಾತಿ,‌ ಧರ್ಮ, ಮತಗಳ ನಡುವೆ ಯುದ್ಧ, ಹೊಡಿಬಡಿ, ಕೊಲ್ಲು, ಕೊಚ್ಚು, ಮಚ್ಚು, ತಲ್ವಾರು, ಸಂಘರ್ಷ ಇವೇ ಅವ್ಯಾಹತವಾಗಿ ಆಗುತ್ತಿರುವ ಸಮಾಜದಲ್ಲಿ ಪ್ರೀತಿ ಗೆಲ್ಲುವುದೆಲ್ಲಿ..? ಸಮಾಜದಲ್ಲಿ ಇಂತಹ ಮಾನಸಿಕತೆಗಳಿಂದ ಎದ್ದಿರುವ ಗೋಡೆಗಳನ್ನು ಒಡೆಯುವುದಕ್ಕೆ ಈ ಸಮಾಜ ಮುಂದಾಗದಿದ್ದರೇ ದ್ವೇಷಗಳಿಂದ ಯುದ್ಧವೇ ನಡೆದೀತು. 

ಡಾ. ಜಿ‌.ಎಸ್ ಶಿವರುದ್ರಪ್ಪ ಅವರ ಕಾವ್ಯದ ಸಾಲೊಂದು ಎಷ್ಟು ಅರ್ಥ ಗರ್ಭಿತವಾಗಿದೆ..? "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?". ಈ ಸಮಾಜ ತುರ್ತಾಗಿ ಪ್ರೀತಿ ಮಾಡುವುದನ್ನು ಕಲಿಯಬೇಕಿದೆ. ಈ ಸಿನೆಮಾ ಅದನ್ನೇ ವಿಶೇಷ ನಿರೂಪಣೆಯೊಂದಿಗೆ ಹೇಳುವುದಕ್ಕೆ ಹೋಗಿ ಗೆದ್ದಿದೆ‌. 

ಇನ್ನು, ಪ್ರೊಪಾಗಂಡಾ  ಆಧಾರಿತ, ಭ್ರಮಾಸತ್ಯಗಳನ್ನೇ ತುಂಬಿಕೊಂಡಿರುವ, ರಾಜಕೀಯ ಪ್ರೇರಿತವಾದ ಸಿನೆಮಾಗಳಿಗೆ ನಮ್ಮ ಸರ್ಕಾರಗಳು ತೆರಿಗೆ ವಿನಾಯಿತಿ ಮಾಡಿ ಪ್ರೋತ್ಸಾಹಿಸುತ್ತವೆ. ಇಂತಹ ಕೋಮು ಸಾಮರಸ್ಯ ಬೆಸೆಯುವ ಸಿನೆಮಾಗಳಿಗೆ ಸರ್ಕಾರಗಳ ಪ್ರೋತ್ಸಾಹವೂ ಇಲ್ಲ, ಜನ ಕೂಡ ಬರುವುದಿಲ್ಲ. ಏನೇ ಇರಲಿ. ಸಿನೆಮಾ ತಂಡ ಸಮಾಜಕ್ಕೆ ಒಳ್ಳೆಯದ್ದೊಂದು ಪಾಠ ಹೇಳುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. 

ಪಾತ್ರಗಳ ಬಗ್ಗೆ ಹೇಳುವುದಾದರೇ, ಮುಸ್ತಾಫನ ಪಾತ್ರದಲ್ಲಿ ನಟ ಶಿಶಿರ್‌ ಬೈಕಾಡಿ, ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ನಟ ಆದಿತ್ಯ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ನಟ ನಾಗಭೂಷಣ್‌ ಕನ್ನಡ ಪ್ರಾಧ್ಯಾಪಕರಾಗಿ, ದೈಹಿಕ ಶಿಕ್ಷಕರಾಗಿ ವಿಜಯ್‌ ಶೋಭರಾಜ್‌ ಮನೋಜ್ಞ ಅಭಿನಯಕ್ಕಾಗಿ ಇಷ್ಟವಾಗುತ್ತಾರೆ. ಮಂಡ್ಯ ರಮೇಶ್‌, ಉಮೇಶ್‌ ಸಹಜವಾಗಿ, ಸಾಮಾನ್ಯವಾಗಿ ನಟನೆಯಲ್ಲಿ ಗೆದ್ದಿದ್ದಾರೆ. ಉಳಿದ ಎಲ್ಲಾ ನಟ, ನಟಿಯರೂ ಕೂಡ ಪಾತ್ರಕ್ಕೆ ಬೇಕಾಗುವಷ್ಟು ಜೀವ ತುಂಬಿಸಿದ್ದಾರೆ. ಹಾಡುಗಳು, ಗ್ರಾಫಿಕ್ಸ್ ಚೆನ್ನಾಗಿ ಮೂಡಿಬಂದಿವೆ. 'ಡೇರ್ ಡೆವಿಲ್ ಮುಸ್ತಾಫಾ' ದಂತಹ ಸಾಮಾಜಿಕ ಕಳಕಳಿ ಇರುವ ಸಿನೆಮಾವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಿ, ಮತ್ತೆ ಕನ್ನಡ ಸಿನೆಮಾ ರಂಗದಲ್ಲಿ ಭರವಸೆ ಮೂಡಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹ. ಇಂತಹ ಸಿನೆಮಾಗಳು ಮತ್ತೆ ಮತ್ತೆ ಬರಲಿ, ಸಿನೆಮಾಗಳು ಸಮಾಜವನ್ನು ಪ್ರಭಾವಿಸುವಂತಾಗಲಿ. 

-ಶ್ರೀರಾಜ್ ವಕ್ವಾಡಿ 

Thursday, May 25, 2023

'ದೇಶಕ್ಕೆ ಮೋದಿ ಬೇಕು' ಎಂಬ ಅಭಿಪ್ರಾಯವನ್ನು ಮೀರಿದರಷ್ಟೇ ಕಾಂಗ್ರೆಸ್‌ ಗೆ ಲಾಭ

ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟ ರಾಜ್ಯ ವಿಧಾನಸಭಾ ತೀರ್ಪು !

ರಾಜ್ಯದಲ್ಲಿ ನೂತನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್‌ ನನ್ನು ಪ್ರಚಂಡ ಬಹುಮತದೊಂದಿಗೆ ಜನ ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಏರಿಸಿದೆ. ಅಧಿಕಾರದಲ್ಲಿದ್ದ ಬಿಜೆಪಿಗೆ ನಾಡಿನ ಜನ ಹೀನಾಯ ಸೋಲಿನ ರುಚಿ ತೋರಿಸುವುದರ ಮೂಲಕ ಪ್ರತಿ ಪಕ್ಷದಲ್ಲಿ ಕೂರುವಂತೆ ಮಾಡಿದ್ದಾರೆ. ಉಭಯ ಪಕ್ಷಗಳಿಗೆ ಸವಾಲಿರುವುದು ಇನ್ನು ಮುಂದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಗಾಗಿ ಪಕ್ಷಗಳು ತಯಾರಾಗಬೇಕಿದೆ. 

ಕಾಂಗ್ರೆಸ್  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ ರಾಜಕೀಯ ತಂತ್ರಗಳು ಮುಂದಿನ ವರ್ಷ ಬರಲಿರುವ ಲೋಕಸಭಾ ಚುನಾವಣೆಗೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರದಲ್ಲಿದ್ದರೇ ಬಹುಶಃ ಎಲ್ಲವೂ ಮೇಲೆ-ಕೆಳಗಾಗಬಹುದು. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ರಾಜ್ಯದಲ್ಲಿ ತೀವ್ರ ಮುಖಭಂಗಕ್ಕೊಳಗಾದರೂ, ಕೇಂದ್ರದಲ್ಲಿ ತನ್ನದೇ ಸರ್ಕಾರವಿರುವ ಕಾರಣಕ್ಕೆ ರಾಜ್ಯದಲ್ಲಿರುವ ಅಷ್ಟೂ ಸಂಸದೀಯ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಬಿಜೆಪಿ ಇದೆ. ಹಾಗಾಗಿ ವಿರೋಧ ಪಕ್ಷದಲ್ಲಿರುವ ಬಿಜೆಪಿಯನ್ನು ಅಲ್ಲೇ ಕಟ್ಟಿಹಾಕುವಂತೆ ಕಾಂಗ್ರೆಸ್ ತಂತ್ರಗಾರಿಕೆ ಹೆಣೆಯಬೇಕಿದೆ. 

ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನೇ ಕೇಂದ್ರವಾಗಿಟ್ಟುಕೊಂಡಿತ್ತು. ಮೋದಿ ತಮ್ಮ ರೋಡ್‌ ಶೋಗಳಲ್ಲಿ ಯಾವುದೇ ಸ್ಥಳೀಯ ವಿಧಾನಸಭಾ ಅಭ್ಯರ್ಥಿಗಳನ್ನು ಅಥವಾ ರಾಜ್ಯ ಸಚಿವರನ್ನು ಕರೆದುಕೊಂಡು ಹೋಗಲಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಗೆ ತಾಲೀಮು ಎಂಬಂತೆ ತೋರಿತ್ತು. ಒಂದು ವೇಳೆ ಕರ್ನಾಟಕದಲ್ಲಿ ಪಕ್ಷದ ವೈಫಲ್ಯವು ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ, ಪರಿಣಾಮ ಬೀರಿದರೇ, ಅದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೈಫಲ್ಯವೆಂದು ಬಿಂಬಿತವಾಗುವುದು ಸಹಜ. ಆ ವಿಷಯದಲ್ಲಿನ ಆಪಾದನೆಯ ಯಾವುದೇ ಭಾಗವನ್ನು ಪ್ರಧಾನಿ ಮೇಲೆ ಹಾಕುವುದಕ್ಕೆ ಬಿಜೆಪಿ ಮುಂದಾಗುವುದಿಲ್ಲ. ೨೦೧೯ರ ಲೋಕಸಭಾ ಚುನಾವಣೆ ರಾಜ್ಯದಲ್ಲಂತೂ ಮೋದಿ ವರ್ಸಸ್‌ ಸಿದ್ದರಾಮಯ್ಯ ಎಂಬಂತೆ ಬಿಂಬಿತವಾಗಿತ್ತು. ಸಿದ್ದರಾಮಯ್ಯ ಮೋದಿ ಎದುರು ನಿಲ್ಲಬಹುದಾದ ಸಮರ್ಥ ನಾಯಕನೆಂಬಂತೆ ಬಿಂಬಿತಗೊಂಡರೇ ಹೊರತು ಮೋದಿಗೆ ಆ ಪ್ರಚಾರದಲ್ಲಿ ಅಷ್ಟೊಂದು ವರ್ಚಸ್ಸು ತಂದುಕೊಡಲಿಲ್ಲ. ಅದೇ ಪ್ರಯೋಗವನ್ನು ಬಿಜೆಪಿಯ ಹೈಕಮಾಂಡ್‌ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮಾಡಿತ್ತಾದರೂ, ಇಲ್ಲಿ ಯಾವುದೇ ರೀತಿಯ ವರ್ಕೌಟ್‌  ಆಗಲಿಲ್ಲ. ಪ್ರಧಾನಿ ಮೋದಿ ಮಾಡಿದ ಚುನಾವಣಾ ಪ್ರಚಾರ ಹಾಗೂ ರೋಡ್‌ ಶೋ ನಡೆಸಿದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದ್ದು, ಪ್ರಧಾನಿ ಮೋದಿಯವರ ರಾಜಕೀಯ ವರ್ಚಸ್ಸಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತರುವಂತೆ ಮಾಡಿದೆ. ಇದು ಬಿಜೆಪಿಗೆ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. 

ರಾಜ್ಯದಲ್ಲಿ ತನ್ನ ಗೆಲುವಿನಿಂದ ಬೀಗಿ ಅಧಿಕಾರಕ್ಕೇರಿದ ಕಾಂಗ್ರೆಸ್ ಲೋಕಸಭೆಗೆ ತನ್ನ ತಂತ್ರವನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ಕಾಂಗ್ರೆಸ್‌ ನ ಸ್ಥಳೀಯ ನಾಯಕರ ಪ್ರಚಾರ ಎಷ್ಟರಮಟ್ಟಿಗೆ ಸಾಗಿತ್ತೆಂದರೆ, ಪ್ರಚಾರದ ಕೊನೆಯ ದಿನದಂದು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಯಿತು. ಆದರೆ ಫಲಿತಾಂಶಗಳು ಹೊರಬಿದ್ದ ಕೂಡಲೇ ಗಾಂಧಿಯವರಿಗೆ ಮನ್ನಣೆ ನೀಡುವತ್ತ ಗಮನ ಹರಿಸಲಾಯಿತು. ರಾಹುಲ್ ಗಾಂಧಿಯವರ ʼಭಾರತ್ ಜೋಡೋ ಯಾತ್ರೆʼ ಸಾಗಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂದು  ಗಮನಸೆಳೆಯುವ ಯಶಸ್ವಿ ಪ್ರಯತ್ನ ಮಾಡಿ, ಮೋದಿಗೆ ಟಕ್ಕರ್‌ ಕೊಡುವಲ್ಲಿ ಯಶಸ್ವಿಯಾಯಿತು.  ೨೦೧೮ರಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದು, ಮತ್ತು ರಾಜ್ಯ, ರಾಷ್ಟ್ರ ರಾಜಕೀಯ ವಲಯ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ಬಹುಮತದೊಂದಿಗೆ ಅಧಿಕಾರಕ್ಕೇರದ್ದು ʼಭಾರತ್ ಜೋಡೋ ಯಾತ್ರೆʼಯ “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ” ಎಂಬ ಕಾಂಗ್ರೆಸ್‌ ನ ಸಂದೇಶವನ್ನು ಮುನ್ನೆಲೆಗೆ ತರುವ ಸಹಜ, ಸ್ವಾಭಾವಿಕ ಯತ್ನ ಮಾಡಿ ಸೆಲ್ಫ್‌ ಕ್ರೆಡಿಟ್‌ ತೆಗೆದುಕೊಂಡಿತು. ಅದನ್ನು ಜನ ಕೂಡ ಒಪ್ಪಿದರು.  

ಆದಾಗ್ಯೂ, ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಅಧಿಕಾರಕ್ಕಾಗಿ ಅಭ್ಯರ್ಥಿ ಆಧಾರಿತವಾಗಿ, ಜಾತಿ ಆಧಾರಿತವಾಗಿ, ಪಕ್ಷ ಆಧಾರಿತವಾಗಿ ಮತ ಹಾಕುವ ಕರ್ನಾಟಕದ ಜನರ ಮನಸ್ಥಿತಿಯನ್ನು ಬದಲಾಯಿಸುವುದಕ್ಕೆ ಅಥವಾ ರಾಜ್ಯದ ಪ್ರಜಾಮತವನ್ನು ಕಾಂಗ್ರೆಸ್‌ ಗೆ ಸೆಳೆದು ಬಹುಮತವನ್ನಾಗಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಗೆ ʼಗಾಂಧಿʼ ಕುಟುಂಬವನ್ನು ಬಿಂಬಿಸುವುದಷ್ಟೇ ಸಾಕಾಗುವುದಿಲ್ಲ. ೧೯೮೫ ರಲ್ಲಿ, ರಾಜ್ಯವು ಸಂಸತ್ತಿನ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್‌ ಗೆ ಅದ್ಭುತ ವಿಜಯವನ್ನು ನೀಡಿತ್ತು. ನಂತರ ಕೆಲವೇ ತಿಂಗಳುಗಳ ಅಂತರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಪರವಾಗಿ ಅಷ್ಟೇ ಪ್ರಬಲವಾದ ತೀರ್ಪು ಬಂದಿತ್ತು ಎನ್ನುವುದನ್ನು ಕಾಂಗ್ರೆಸ್‌ ಮರೆಯುವಂತಿಲ್ಲ. 

ಈ ಸುತ್ತಿನಲ್ಲಿಯೂ ಹಾಗೆ, ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯನ್ನು ಬಹುಮತದಲ್ಲಿ ಗೆದ್ದಿದೆ ಎಂಬ ಕಾರಣಕ್ಕೆ ಓವರ್‌ ಕಾನ್ಫಿಡೆನ್ಸ್‌ನಲ್ಲಿ ಮುಂದೆ ಹೋದರೇ ಕಾಂಗ್ರೆಸ್‌ ಮುಖಭಂಗಕ್ಕೊಳಗಾಗಬಹುದು. ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗದಂತೆ ಕಾಂಗ್ರೆಸ್ ಖಚಿತಪಡಿಸಿಕೊಳ್ಳಲು, ಲೋಕಸಭೆ ಚುನಾವಣೆಗೆ ತನ್ನ ಕಾರ್ಯತಂತ್ರದೊಂದಿಗೆ ತನ್ನ ಯಶಸ್ವಿ ಸ್ಥಳೀಯ ವಿಷಯಗಳ ನಿರೂಪಣೆಯನ್ನು ಸಿಂಕ್ರೊನೈಸ್ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎಂದಾಗ ʼರಾಷ್ಟ್ರೀಯವಾದʼ, ʼದೇಶಭಕ್ತಿʼ ಎಂಬ ವಿಷಯವನ್ನು ಮೋದಿ ನೇತೃತ್ವದ ಸರ್ಕಾರ ಜನರ ತಲೆಯೊಳಗೆ ಬಿತ್ತಿದೆ. ಅಷ್ಟೇ ಅಲ್ಲದೇ, ʼರಾಜ್ಯದಲ್ಲಿ ಓಕೆ, ದೇಶಕ್ಕೆ ಮೋದಿ ಬೇಕುʼ ಎಂಬ ಜನರ ಅಭಿಪ್ರಾಯವನ್ನು ಮೀರಿಸುವಂತೆ ಕಾಂಗ್ರೆಸ್‌ ತಯಾರಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ. 

ಕರ್ನಾಟಕ ಚುನಾವಣೆಯಲ್ಲಿ ತನಗೆ ಉತ್ಕೃಷ್ಟ ಲಾಭಾಂಶವನ್ನು ತಂದುಕೊಟ್ಟ ತನ್ನ ಭರವಸೆಯ ಗುಣಮಟ್ಟವನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಕಾಂಗ್ರೆಸ್ ಬಯಸಿದರೆ, ತನ್ನ ರಾಷ್ಟ್ರೀಯ ನಾಯಕತ್ವವನ್ನು ಮತ್ತಷ್ಟು ಪ್ರಬಲಗೊಳಿಸಿಕೊಳ್ಳಬೇಕಾಗುತ್ತದೆ. ಇದನ್ನು ಕಾಂಗ್ರೆಸ್ ಸಾಧಿಸಿದರೂ ಸಹ, ಇತರೆ ಅಗತ್ಯಗಳನ್ನು ಒಂದು ಸುಸಂಬದ್ಧವಾದ ರಾಷ್ಟ್ರೀಯ ವಿಧಾನಕ್ಕೆ ಪ್ಯಾಕಿಂಗ್ ಮಾಡುವ ಸವಾಲನ್ನು ಎದುರಿಸಬೇಕಾಗುತ್ತದೆ.  ದೇಶದ ೫೪೩ ಸಂಸದೀಯ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳಾಗುವ ಸ್ಥಳೀಯವಾಗಿ ಪ್ರಭಾವ ಹೊಂದಿರುವ ನಾಯಕರ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಶಕ್ತವಾಗಿರಬೇಕಾಗುತ್ತದೆ. 

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನ ಮತ ಚಲಾಯಿಸಿದಂತೆಯೇ ಮುಂದಿನ ವರ್ಷ ನಡೆಯುವ ಸಂಸತ್ತಿನ ಚುನಾವಣೆಯಲ್ಲೂ ಮತ ಚಲಾಯಿಸುವಂತೆ ಮಾಡುವುದು ಸುಲಭದ ಕೆಲಸವಲ್ಲ. ಕೆಲವು ಪ್ರಮುಖ ರಚನಾತ್ಮಕ ಬದಲಾವಣೆಗಳನ್ನು ಕಾಂಗ್ರೆಸ್ ಮಾಡಿಕೊಳ್ಳಲೇಬೇಕಿದೆ. 

ಇನ್ನು, ಭ್ರಷ್ಟಾಚಾರ ಎಷ್ಟೋ ಸರ್ಕಾರಗಳನ್ನು ಚುನಾವಣೆಗಳಲ್ಲಿ ಸೋಲುವಂತೆ ಮಾಡಿದೆ., ೧೯೮೯ ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ನನ್ನು ಬೋಫೋರ್ಸ್ ಹಗರಣವು ಅಧಿಕಾರದಿಂದ ಕೆಳಗಿಳಿಸಿತ್ತು  ಎನ್ನವುದನ್ನು ಕಾಂಗ್ರೆಸ್‌ ಮರೆಯುವಂತಿಲ್ಲ(ರಾಜೀವ್ ಗಾಂಧಿ ಅವರನ್ನು ಅವರ ಮರಣದ ನಂತರ ನ್ಯಾಯಾಲಯವು ನಿರ್ದೋಷಿ ಎಂದು ಘೋಷಿಸಿತು). ಆದರೆ ಕರ್ನಾಟಕದಲ್ಲಿ ಈ ಬಾರಿ ನಡೆದದ್ದೇ ಬೇರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಥವಾ ಅವರ ಸಹೋದ್ಯೋಗಿಗಳು ಒಳಗೊಂಡ ಯಾವುದೇ ನಿರ್ದಿಷ್ಟ ಹಗರಣದಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿಲ್ಲ. ಬದಲಾಗಿ, ಇಡೀ ಸರ್ಕಾರಿ ಯಂತ್ರವು ಕೆಳಗಿನಿಂದ ಮೇಲಿನವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಕಾರಣಕ್ಕೆ ಜನ ಬಿಜೆಪಿಯ ವಿರುದ್ಧವಾದ ತೀರ್ಪನ್ನು ಕೊಟ್ಟರು. 

ನಿಜ, ಭ್ರಷ್ಟಾಚಾರವೊಂದೇ ಕರ್ನಾಟಕದಲ್ಲಿ ಬಿಜೆಪಿಯನ್ನು ಕೆಳಗಿಳಿಸಿದ ವಿಷಯವಲ್ಲ. ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ ಜನರ ಅಸಹನೆಯನ್ನು ಹೆಚ್ಚಿಸಿತು. ರಾಷ್ಟ್ರಮಟ್ಟದ ಸಮಸ್ಯೆಗಳು ಕರ್ನಾಟಕದ ಮೂಲಕ ಮೊಟ್ಟ ಮೊದಲ ಬಾರಿಗೆ ಉಗ್ರವಾಗಿಯೇ ಹೊರಹೊಮ್ಮಿತು. "ಡಬಲ್-ಎಂಜಿನ್ ಸರ್ಕಾರ"ದ ಆಡಳಿತ ಜನರಲ್ಲಿ ನಿಜಕ್ಕೂ ಭ್ರಮನಿರಸನ ಮೂಡಿಸಿತು. ಕೇಂದ್ರದಲ್ಲಿ "ಕಳೆದ ಒಂಬತ್ತು ವರ್ಷಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ನ ಬೆಲೆಯು ಮೂರು ಪಟ್ಟು ಹೆಚ್ಚಳಕ್ಕೆ ಇದೇ ಮೋದಿ ನೇತೃತ್ವದ ಸರ್ಕಾರ ಕಾರಣ ಎಂಬ ವಿಚಾರ ಜನರಿಗೆ ಮನವರಿಕೆಯಾಯಿತು. 

ಜಾತಿ ಕಾರಣದಿಂದಾಗಿ ಬಿಜೆಪಿ ಭಾರೀ ಬೆಲೆ ತೆರಬೇಕಾಯಿತು. ರಾಜ್ಯದಲ್ಲಿ ಬಿಜೆಪಿಯ ಪ್ರಬಲ ಸ್ಥಳೀಯ ನಾಯಕರ ಕೊರತೆಯಿಂದಾಗಿ, ಪಕ್ಷವು ಗೆಲುವನ್ನು ತರಲು ಸಂಪೂರ್ಣವಾಗಿ ಮೋದಿಯವರ ವರ್ಚಸ್ಸಿನ ಮೇಲೆ ಅವಲಂಬಿತವಾಯಿತು. ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸಲು ಪಕ್ಷದ ಅವಿರತ ಪ್ರಯತ್ನಗಳು ಮತ್ತು ಬಹುಸಂಖ್ಯಾತ ಸಮುದಾಯದ ಮತಗಳನ್ನು ಗಳಿಸಲು ಪ್ರಯತ್ನಿಸಲು ಮತ್ತು ತನ್ನ ಕಟುವಾದ ಹಿಂದುತ್ವದ ಮನವಿಯನ್ನು ಬಳಸಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಜನರಿಗೆ ಪ್ರಗತಿಪರ ಆಡಳಿತಕ್ಕೆ ಜನರು ಒಲವು ಮೂಡಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದರೇ, ಬಜರಂಗದಳದ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಕಾಂಗ್ರೆಸ್ ನ ಪ್ರಣಾಳಿಕೆಗೆ ವಿರುದ್ಧವಾಗಿ ಮತ ಚಲಾಯಿಸುವಾಗ ಜೈ ಭಜರಂಗ ಬಲಿ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಗೆ ಶಿಕ್ಷೆ ನೀಡಿ ಎಂದು ಮನವಿ ಮಾಡಿಕೊಂಡು ಮತ್ತೆ ಹಿಂದೂ ಧರ್ಮದ ವಿಚಾರ ಮುಂದೆ ತಂದು ಭಾವನಾತ್ಮಕವಾಗಿ ಸೆಳೆದುಕೊಳ್ಳುವುದಕ್ಕೆ ಮೋದಿ ಸೇರಿ ಇಡಿ ಬಿಜೆಪಿ ಮಾಡಿದ ಪ್ರಯತ್ನಕ್ಕೆ ಜನ ಬಗ್ಗಲಿಲ್ಲ.  

ಇನ್ನು, ಚುನಾವಣಾ ಲಾಭಕ್ಕಾಗಿ ಬಿಜೆಪಿಗೆ "೪೦% ಕಮಿಷನ್" ಮೇಲೆ ದಾಳಿ ಮಾಡುವುದು ಕಾಂಗ್ರೆಸ್‌ ಗೆ ಸುಲಭದ ಕೆಲಸವಾಗಿತ್ತು. ಆದರೇ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಕಾಂಗ್ರೆಸ್‌ ಗೆ ಇನ್ನಿರುವ ದೊಡ್ಡ ಸವಾಲು. ಉನ್ನತ ಮಟ್ಟದ ಪಾರದರ್ಶಕತೆ ಮತ್ತು ಜನ ಇಟ್ಟ ವಿಶ್ವಾಸವನ್ನು ವ್ಯವಸ್ಥಿತ ಸುಧಾರಣೆಗಳ ಮೂಲಕ ಉಳಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಎಷ್ಟರ ಮಟ್ಟಿಗೆ ತಯಾರಾಗಿದೆ ಎನ್ನುವುದು ಮುಖ್ಯ.  ರಾಜ್ಯ ಬಿಜೆಪಿಯ ವಿಚಾರವನ್ನಷ್ಟೇ ಅಲ್ಲದೇ, ದೇಶಕ್ಕೆ ಬಿಜೆಪಿ ಸರ್ಕಾರದಿಂದಾದ ಸಮಸ್ಯೆಗಳನ್ನು ತಿಳಿಸುವುದರ ಜೊತೆಗೆ ಒಂದಿಷ್ಟು ಹೊಸ ತಂತ್ರಗಾರಿಕೆಯನ್ನು ಕಾಂಗ್ರೆಸ್‌ ಅಗತ್ಯವಾಗಿ ಲೋಕಸಭಾ ಚುನಾವಣೆಯೊಳಗೆ ರಾಜ್ಯದಲ್ಲಿ ಮಾಡಿಕೊಳ್ಳಬೇಕಿದೆ. ಬಿಜೆಪಿಯ ಎಲ್ಲಾ ಮೈನಸ್ ಗಳನ್ನು ಕಾಂಗ್ರೆಸ್‌ ಹಠ ಹಿಡಿದು ಪ್ಲಸ್ ಮಾಡಿಕೊಂಡಲ್ಲಿ ಬದಲಾವಣೆ ಸಾಧ್ಯ. ಒಟ್ಟಿನಲ್ಲಿ, ಕರ್ನಾಟಕದಲ್ಲಿ ಜನರ ತೀರ್ಪು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಮುಂದೇನಾಗುತ್ತದೆ ? ಕಾದು ನೋಡೋಣ.  

-ಶ್ರೀರಾಜ್‌ ವಕ್ವಾಡಿ




Friday, May 19, 2023

ದಕ್ಷಿಣದ ಹೃದಯವು ಉತ್ತರದ ಹೃದಯಕ್ಕಿಂತ ಭಿನ್ನವೆಂದ ಮತದಾರ

ಸೆಕೆಂಡ್‌ ಲೆವೆಲ್‌ ಲೀಡರ್ ಶಿಪ್‌ ನನ್ನು ಕಾಂಗ್ರೆಸ್‌ ಬೆಳೆಸಲಿ । ಕೆಲಸಕ್ಕೆ ಬರಲಿಲ್ಲ ಮೋದಿ ವರ್ಚಸ್ಸು !

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲ್ಲುವುದರ ಮೂಲಕ ಮತ್ತೆ ಇಡೀ ದೇಶದಾದ್ಯಂತ ಕಾಂಗ್ರೆಸ್‌ ಮರು ಜೀವ ಪಡೆದಂತಾಗಿದೆ. ಕಾಂಗ್ರೆಸ್ ಸಂಭ್ರಮಿಸಲು ಕಾರಣವಿದೆ. ಬಿಜೆಪಿಯ ದೊಡ್ಡ ಮಟ್ಟದ ಅಪಪ್ರಚಾರದ ಪ್ರೊಪಗಂಡಾದ ನಡುವೆಯೂ ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ವಿರುದ್ಧವಾಗಿ ಬಂದ ನಿರ್ಣಾಯಕ ತೀರ್ಪು ಕಾಂಗ್ರೆಸ್‌ ನ ಪಾಳಯದಲ್ಲಿ ಹೊಸ ಹುಮ್ಮಸ್ಸು ತಂದಿದೆ. 

ಕಾಂಗ್ರೆಸ್‌ ನ "ವಾಯ್ಸ್‌ ಫಾರ್‌ ಲೋಕಲ್‌ / ಸ್ಥಳೀಯ ಪರ ಧ್ವನಿ" ಪ್ರಚಾರವು ಮೇಲುಗೈ ಸಾಧಿಸಿತು. ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಗುತ್ತಿಗೆದಾರರ ಸಂಘ ಮತ್ತು ಶಾಲಾ ಆಡಳಿತ ಮಂಡಳಿಗಳ ಲಂಚದ ಆರೋಪದ ನಂತರ "೪೦% ಸರ್ಕಾರ" ಅಂಟಿಕೊಂಡಿದ್ದೆಲ್ಲಾ ಕಾಂಗ್ರೆಸ್‌ ಗೆ ಅನುಕೂಲವಾಯಿತು. ರಾಜ್ಯದ ಜನ ಬಿಜೆಪಿಯ ದುರಾಡಳಿತದಲ್ಲಿ ಬೇಸತ್ತು ಹೋದರು. 

ಚುನಾವಣೆಯು ಸ್ಥಳೀಯ ಸಮಸ್ಯೆಗಳ ಮೇಲೆ ನಿಂತಿತ್ತು. ಬಿಜೆಪಿಯ ಯಾವುದೇ ರೋಡ್‌ ಶೋ, ಪ್ರಚಾರ ಸಭೆ, ಅಪಪ್ರಚಾರ, ಗುಜರಾತ್‌ ಮಾಡೆಲ್‌ ಕಾರ್ಯರೂಪಕ್ಕೆ ತರುವ ಯಾವುದೇ ಪ್ರಯತ್ನ ಇಲ್ಲಿ ಫಲ ಕೊಟ್ಟಿಲ್ಲ. ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಆಗುವ ಸಂದರ್ಭದಲ್ಲಿ ಅಯ್ಯೋ ʼಈವಯ್ಯ ಏನ್‌ ಮಾಡ್ತಾನಪ್ಪಾ ?ʼ ಎಂಬ ಮಾತು ರಾಜ್ಯದಲ್ಲಿತ್ತು. ಆದರೇ, ಕೆಳವರ್ಗದವರನ್ನೂ ತಲುಪಿದ ಭಾರತ್‌ ಜೋಡೋ ಯಾತ್ರೆ ಕೂಡ ಇಲ್ಲಿ ಕಾಂಗ್ರೆಸ್‌ ಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಪಕ್ಷದ ಪ್ರಬಲ ಪ್ರಾದೇಶಿಕ ನಾಯಕತ್ವ, ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಮಾಡಿಕೊಂಡ ನಿರ್ಧಾರ ಸ್ಪಷ್ಟವಾಗಿದ್ದಕ್ಕೆ ಇವೆಲ್ಲವೂ ಸಾಕಾರವಾಯ್ತು. ಇನ್ನು, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ವಿಮರ್ಶೆಯು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರಚಾರವನ್ನು ನಿರ್ಲಕ್ಷಿಸುವುದಿಲ್ಲ, ಅವರು ಮಹಿಳೆಯರು ಮತ್ತು ಯುವ ಮತದಾರರನ್ನು ತಲುಪುವ ಸಂದರ್ಭದಲ್ಲಿ ತಮ್ಮ ಅಜ್ಜಿ ಇಂದಿರಾ ಗಾಂಧಿಯವರ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದು ಕೂಡ ಗೆಲುವಿನ ಒಂದು ಭಾಗ.  

ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪನವರ ವರ್ಚಸ್ಸು ಈ ಬಾರಿಯ ಚುನಾವಣೆಯಲ್ಲಿ ಕೆಲಸಕ್ಕೆ ಬಾರದಿರುವುದು ಬಿಜೆಪಿ ತಂತ್ರಜ್ಞರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಳೆದುಕೊಂಡ ರಾಜ್ಯದ ಬಗ್ಗೆ ಬಿಜೆಪಿ ಹೈಕಮಾಂಡ್‌ ಮರಳಿ ಪಡೆಯುವುದಕ್ಕೆ ಮುಂದೆ ಯಾರಿಗೆ ನೇತೃತ್ವ ನೀಡಬೇಕು ಎಂಬ ವಿಚಾರದಲ್ಲೀಗ ತಲೆಕೆಡಿಸಿಕೊಂಡಂತಿದೆ. ಮೋದಿ ಮತ್ತು ಶಾ ಅವರ ʼರೋಬೋ ಆಡಿಯನ್ಸ್‌ʼ ರೋಡ್‌ ಶೋ, ಚುನಾವಣಾ ಪ್ರಚಾರ ಸಭೆಗಳು ಮತ್ತೆ ಮತ್ತೆ ಸೋಲುತ್ತಿವೆ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಈ ಸೋಲು ಬಿಜೆಪಿಗೆ ಚಿಂತನಾರ್ಹವಾಗಿದೆ. ಈ ಸೋಲಿನಿಂದಾಗಿ, ಇಲ್ಲಿ ಮಾತ್ರವಲ್ಲದೇ, ಜೈರಾಮ್ ಠಾಕೂರ್ (ಹಿಮಾಚಲ ಪ್ರದೇಶ), ರಘುಬರ್ ದಾಸ್ (ಜಾರ್ಖಂಡ್), ಮನೋಹರಲಾಲ್ ಖಟ್ಟರ್ (ಹರಿಯಾಣ) ಅಥವಾ ದೇವೇಂದ್ರ ಫಡ್ನವಿಸ್ (ಮಹಾರಾಷ್ಟ್ರ) ಅವರಂತಹವರನ್ನು ಪ್ರಯೋಗಿಸುವ ಆಲೋಚನೆಯನ್ನು ಮುಂದಿನ ದಿನಗಳಲ್ಲಿ ಬಿಜೆಪಿ ಮರುಪರಿಶೀಲಿಸಬೇಕಾಗಬಹುದು.

ಬಿಜೆಪಿಯ ಪ್ರಚಾರವು "ಡಬಲ್ ಇಂಜಿನ್" ಸರ್ಕಾರ, ರಾಷ್ಟ್ರೀಯತೆ, ಹಿಂದುತ್ವ, ಭಜರಂಗಬಲಿ ಮತ್ತು ನರೇಂದ್ರ ಮೋದಿಯವರ ರಾಜಕೀಯ ವರ್ಚಸ್ಸಿನ ಜನಪ್ರಿಯತೆಯ ಮೇಲೆ ಕೇಂದ್ರೀಕೃತವಾಗಿತ್ತು. ಕಾಂಗ್ರೆಸ್‌ ನ ಪ್ರಚಾರವು ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚು ಬೇರೂರಿತ್ತು. ರಾಹುಲ್ ಗಾಂಧಿ ಮತ್ತು  ಕಾಂಗ್ರೆಸ್‌ ನ ಕೇಂದ್ರ ನಾಯಕತ್ವವು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಂಡರೆ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಂತಹ ರಾಜ್ಯ ನಾಯಕರು ತಾರಾ ಪ್ರಚಾರಕರಾಗಿ ಕಾಣಿಸಿಕೊಂಡಿದ್ದು ವಿಶೇಷ.

ರಾಜ್ಯದಲ್ಲಿ ಕಾಂಗ್ರೆಸ್‌ ನ ಯಶಸ್ಸು ಎರಡೂ ಪಕ್ಷಗಳಿಗೆ ಪ್ರಮುಖ ಪಾಠಗಳನ್ನು ಹೇಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿಗೆ, ಇದು ರಾಜ್ಯ ಚುನಾವಣೆಗೆ ಬಂದಾಗ ಕೇಂದ್ರೀಕೃತ ಪ್ರಚಾರ ಮತ್ತು ನರೇಂದ್ರ ಮೋದಿಯನ್ನು ಅವಲಂಬಿಸುವ ಅವಶ್ಯಕತೆಗಳ ಮಿತಿಗಳನ್ನು ಒತ್ತಿ ಹೇಳುತ್ತದೆ. ಕಾಂಗ್ರೆಸ್‌ ನ ದೃಷ್ಟಿಕೋನದಿಂದ, ಯಶಸ್ಸು ರಾಜ್ಯ ಮಟ್ಟದ ನಾಯಕತ್ವವನ್ನು ಸಶಕ್ತಗೊಳಿಸುವ ಮಹತ್ವವನ್ನು ತೋರಿಸುತ್ತದೆ. ಮತ್ತು ಇನ್ನಾದರೂ ಕಾಂಗ್ರೆಸ್ ಈ ಐದು ವರ್ಷಗಳ ಆಡಳಿತಾವಧಿಯಲ್ಲಿ ತನ್ನ ಸೆಕೆಂಡ್‌ ಲೆವೆಲ್‌ ಲೀಡರ್ ಶಿಪ್‌ / ಎರಡನೇ ಹಂತದ ನಾಯಕತ್ವವನ್ನು ಬಲಗೊಳಿಸಿಕೊಳ್ಳಬೇಕಿದೆ. 

ದಕ್ಷಿಣದಲ್ಲಿ ಯಶಸ್ಸು ಪಡೆಯದ ಉತ್ತರದ ತಂತ್ರ : 

ಮೇ ೬ ಮತ್ತು ೭ ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ವ್ಯಾಪಕ ಪ್ರಚಾರದ ರೋಡ್‌ ಶೋನೊಂದಿಗೆ ಬಿಜೆಪಿಯ ಪ್ರಚಾರವು ತಾರಕಕ್ಕೆ ತಲುಪಿತು. ರೋಡ್‌ ಶೋ ಚೆನ್ನಾಗಿಯೇ ಯೋಜಿಸಲಾಗಿತ್ತು. ನಗರದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಬಿಜೆಪಿ ಸರ್ಕಾರಿ ವ್ಯವಸ್ಥೆಯ ಕಾರ್ಯಾಂಗವನ್ನೇ ಬಳಸಿಕೊಂಡಿತ್ತು. ಪ್ರಧಾನ ಮಂತ್ರಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಬಿಂಬಿಸಿ ಒಂದೆಡೆ ಪ್ರಚಾರವಾದರೇ, ಇನ್ನೊಂದೆಡೆ ಇದಕ್ಕೆ ತದ್ವಿರುದ್ಧ. ಎಷ್ಟೇ ಪ್ರಯತ್ನ ಮಾಡಿದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ತೋರಿದ ಪ್ರಾಬಲ್ಯವನ್ನು ಬಿಜೆಪಿಗೆ ಈ ಚುನಾವಣೆಯಲ್ಲಿ ತೋರಿಸಲು ಸಾಧ್ಯವಾಗಿಲ್ಲ. ಪ್ರಧಾನಿಯವರ  ʼಜೈ ಭಜರಂಗಬಲಿ ಭಾಷಣʼವೂ ಕೂಡ ಹೆಚ್ಚಿನ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವಲ್ಲಿ ಸಫಲವಾಗಲಿಲ್ಲ. 

ಪಿಎಂ ಮೋದಿ ಜನಪ್ರಿಯವಾಗಿದ್ದರೂ, ಅದು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮತಗಳಾಗಿ ಬದಲಾಗಲಿಲ್ಲ. ಕೇಂದ್ರ ನಾಯಕತ್ವ ಮತ್ತು ರಾಷ್ಟ್ರೀಯ ಮಟ್ಟದ ಸಮಸ್ಯೆಗಳಿಗಿಂತ ರಾಜ್ಯ ಮಟ್ಟದ ನಾಯಕರು ಮತ್ತು ಸ್ಥಳೀಯ ಸಮಸ್ಯೆಗಳು ಇಲ್ಲಿ ಮುಖ್ಯವಾದವು. ಬೊಮ್ಮಾಯಿ ನೇತೃತ್ವದ ಬಿಜೆಪಿಯ "೪೦% ಕಮಿಷನ್ ಸರ್ಕಾರ" ಮತದಾರರನ್ನು ಬಡಿದೆಬ್ಬಿಸಿತು. ಪ್ರಧಾನಿಯವರ ನಿರಂತರ ಜನಪ್ರಿಯತೆ ಕೂಡ ಅದನ್ನು ಮೀರಿಸಲು ಸಾಧ್ಯವಾಗಲಿಲ್ಲ.

ಉತ್ತರದ ರಾಜ್ಯಗಳಲ್ಲಿ ತೋರಿಸಿಕೊಂಡು ಬಂದ ಬಿಜೆಪಿಯ ಧೋರಣೆ ದಕ್ಷಿಣದಲ್ಲಿ ಕೆಲಸ ಮಾಡಲಿಲ್ಲ. ʼದಕ್ಷಿಣದ ಹೃದಯವು ಉತ್ತರದ/ಹಿಂದಿಯ ಹೃದಯಕ್ಕಿಂತ ಭಿನ್ನವಾಗಿದೆʼ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಮಾಡುವಂತೆ ದಕ್ಷಿಣದಲ್ಲಿ ಮತ ಧ್ರವೀಕರಣ ಮಾಡಬಹುದೆಂದು ತಿಳಿದಿದ್ದ ಬಿಜೆಪಿಗೆ ಇಲ್ಲಿ ನಿರಾಸೆ ಆಯ್ತು. 

ತಿಂಗಳುಗಟ್ಟಲೆ ಪತ್ರಿಕಾ ಮಾಧ್ಯಮಗಳಲ್ಲಿ ಬ್ಯಾನರ್‌ ಹೆಡ್‌ ಲೈನ್‌ ಅಡಿಯಲ್ಲಿ ಸುದ್ದಿಯಾದ ಹಿಜಾಬ್ ಪ್ರಕರಣ, ಚುನಾವಣಾ ಪ್ರಚಾರಗಳಲ್ಲಿ ಅಷ್ಟೇನೂ ಉಲ್ಲೇಖಿಸಲ್ಪಡದಿರುವುದು ಆಶ್ಚರ್ಯವೇನಿಲ್ಲ. 'ದಿ ಕೇರಳ ಸ್ಟೋರಿ' ಮತ್ತು ಭಜರಂಗದಳ ನಿಷೇಧದಂತಹ ವಿವಾದಗಳಲ್ಲಿ ಎದ್ದಿರುವ ವಿಷಯಗಳು ಬಿಜೆಪಿಗೆ ಮತ ತಂದುಕೊಡಲಿಲ್ಲ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಗಳಿಂದ ಬಿಜೆಪಿ ನಾಯಕರು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು, ಆದರೆ ಮತದಾರರ ತೀರ್ಪು ಬಿಜೆಪಿಯು ಪ್ರಧಾನಿ ಮೋದಿಯವರ ಮೈಲೇಜ್‌, ಹಿಂದು ಧಾರ್ಮಿಕ ಭಾವನೆಗಳ ಮೇಲೆ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಕೊಟ್ಟಿರುವುದು ಬಿಜೆಪಿಗೆ ಆಘಾತವಾಗಿದೆ.

ರಾಜ್ಯದಲ್ಲಿ ಅಭಿವೃದ್ಧಿಯ ವಿಭಿನ್ನ ವ್ಯಾಖ್ಯಾನ :

ರಾಜ್ಯ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಮತ್ತು ರಾಜ್ಯ ಮಟ್ಟದ ನಾಯಕತ್ವದ ಮಹತ್ವವನ್ನು ಒತ್ತಿ ಹೇಳುತ್ತದೆ. ಯಡಿಯೂರಪ್ಪ ಬಿಟ್ಟರೇ, ಬಿಜೆಪಿಗೆ ರಾಜ್ಯ ಮಟ್ಟದ ಪ್ರಬಲ ನಾಯಕತ್ವ ಇರಲಿಲ್ಲ. ಒಂದಿಷ್ಟು ಗಂಟಲು ಹರಿದುಕೊಳ್ಳುತ್ತಿರುವವರು ʼಉರಿ ನಂಜುʼ, ಹಿಜಾಬ್‌, ಲವ್‌ ಜಿಹಾದ್‌ ಅಂತಲೇ ಕಾಲ ಕಳೆದರು. ಅದು ಸಾಸಿವೆ ಕಾಳಷ್ಟೂ ಉಪಯೋಗಕ್ಕೆ ಬರಲಿಲ್ಲ. ಬೊಮ್ಮಾಯಿ ಸರ್ಕಾರದ ನಕಾರಾತ್ಮಕ ಚಿತ್ರಣ, ದುರಾಡಳಿತದಿಂದಾಗಿ ರಾಜ್ಯದಲ್ಲಿ ಜನ ಬೇಸತ್ತು ಹೋದರು.  

೨೦೨೧ ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯ ರಾಷ್ಟ್ರೀಯ ಮಟ್ಟದ ನಾಯಕತ್ವವು ಚುನಾವಣೆಯ ಸಂದರ್ಭದಲ್ಲಿ ಹಲವಾರು ರೋಡ್‌ ಶೋ ಗಳನ್ನು ನಡೆಸಿತು. ಮತ್ತದೆ ಹಿಂದುತ್ವ. ಇದರ ಹೊರತಾಗಿಯೂ, ತೃಣಮೂಲ ಕಾಂಗ್ರೆಸ್ ಪರವಾಗಿ ಜನ ನಿಂತರು.  ಮಮತಾ ಬ್ಯಾನರ್ಜಿಯವರ ನಿರ್ಣಾಯಕ ಪಾತ್ರಕ್ಕೆ ಪಶ್ಚಿಮ ಬಂಗಾಳ ಅಸ್ತು ಅಂದಿತ್ತು. ಕರ್ನಾಟಕದಲ್ಲಿಯೂ ಈಗ ಅಂಥದ್ದೇ ಚಿತ್ರಣ ಹೊರಬಿದ್ದಿದೆ. ಅಭಿವೃದ್ಧಿ ಇಲ್ಲದ ಪ್ರಚಾರಕ್ಕೆ, ದುರಾಡಳಿತಕ್ಕೆ ಜನ ಪಾಠ ಕಲಿಸಿ, ಇಲ್ಲಿ ಅಭಿವೃದ್ಧಿಗೆ ವಿಭಿನ್ನವಾದ ವಾಖ್ಯಾನವಿದೆ ಎಂದು ಹೇಳಿದ್ದಾರೆ.

೨೦೨೪ರ ಆಟವು ವಿಭಿನ್ನವಾಗಿದೆ : 

ಕಾಂಗ್ರೆಸ್ ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ನಾಯಕರ ಮೇಲೆ ಪಣತೊಟ್ಟಿತು ಮತ್ತು ಕರ್ನಾಟಕದ ಅಧಿಕಾರ ಪಡೆಯಿತು. ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡದ ಒಂದು ವಿಷಯವನ್ನು ಕಾಂಗ್ರೆಸ್ ಉಲ್ಲೇಖಿಸಲಿಲ್ಲ. ನಿಸ್ಸಂಶಯವಾಗಿ, ಇದು ಸಂಸತ್ತಿಗೆ ಮತ್ತು ದೇಶಕ್ಕೆ ಮಾತ್ರವಲ್ಲದೆ ಕಾಂಗ್ರೆಸ್‌ ಗೂ ಒಳ್ಳೆಯದು. ಪ್ರತಿಪಕ್ಷಗಳು ಆಗಾಗ್ಗೆ ಇವಿಎಂಗಳನ್ನು ಮ್ಯಾನಿಪ್ಯುಲೇಟ್ ಮಾಡಿದ ವಿಷಯವನ್ನು ಪ್ರಸ್ತಾಪಿಸುತ್ತವೆ. ಆದರೆ ಇಲ್ಲಿ ಯಾರಿಗೂ ಇವಿಎಂಗಳಲ್ಲಿ ಯಾವುದೂ ತಪ್ಪಿರಲಿಲ್ಲ. ಇವಿಎಂ ಬಗ್ಗೆ ದೂರುತ್ತಾ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂದು ಆಗಾಗ ಹೇಳುತ್ತಿದ್ದ ಕಾಂಗ್ರೆಸ್ ಇಂದು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಆಚರಿಸುತ್ತಿದೆ. ಅವರು ಸರಿಯಾದ ವಿಷಯಗಳನ್ನು ಪ್ರಸ್ತಾಪಿಸಿ, ಸ್ಥಳೀಯ ನಾಯಕರಿಗೂ ಆದ್ಯತೆ ನೀಡಿ, ರಾಜ್ಯದಲ್ಲಿ ಶ್ರಮಿಸಿದರೆ ಮತ್ತೆ ಅವಕಾಶವಿದೆ ಎನ್ನುವುದನ್ನು ಅರಿತಂತಿದೆ. ೨೦೨೪ರ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕಾಂಗ್ರೆಸ್‌ ಗೆ ಈ ವಿಜಯದ ಅಗತ್ಯವಿತ್ತು, ಆದರೆ ಈ ಸಣ್ಣ ಔಷಧಿ ಪ್ರಮಾಣವನ್ನು ಬೂಸ್ಟರ್ ಶಾಟ್ ಎಂದು ಪರಿಗಣಿಸುವುದು ತಪ್ಪಾಗುತ್ತದೆ. ೨೦೨೪ರ ಆಟವು ವಿಭಿನ್ನವಾಗಿದೆ ಎನ್ನುವುದನ್ನು ಕಾಂಗ್ರೆಸ್‌ ಅರಿತುಕೊಂಡು ಮುನ್ನಡೆಯಬೇಕಿದೆ. 

-ಶ್ರೀರಾಜ್‌ ವಕ್ವಾಡಿ 



Tuesday, May 9, 2023

ಸಿದ್ದರಾಮಯ್ಯ : ಮೋಸ್ಟ್‌ ಫೇವರೆಟ್‌ ಸಿಎಂ

ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಗಿಲ್ಲ ಜನಮತ । ಸರ್ಕಾರ ಬದಲಾವಣೆ ಬಯಸಿದ ಕರ್ನಾಟಕ 

ಎಲ್ಲಾ ರಾಜಕೀಯ ಪಕ್ಷಗಳ ಕನಸು, ಭರವಸೆ, ಆಶ್ವಾಸನೆ, ಜನಾಭಿಮತದ ಮೂಲಕ ಸದ್ಯ ೨೦೨೩ರ ರಾಜ್ಯ ವಿಧಾನಸಭಾ ಚುನಾವಣೆ  ಮುಕ್ತಾಯಗೊಂಡಿದ್ದು, ಈಗ ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. ಜೆಡಿಎಸ್‌ ನ ಹೊರತಾಗಿ ಕಾಂಗ್ರೆಸ್‌ ಅಥವಾ ಬಿಜೆಪಿಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರ ಹಿಡಿದರೂ ಕೂಡ ಯಾರು ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲಭರಿತವಾದಂತಹ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಜಾತಿ ಲೆಕ್ಕಾಚಾರದಲ್ಲಿ, ಅನುಭವದ ಆಧಾರದಲ್ಲಿ, ವಯಸ್ಸಿನ ಕಾರಣದಲ್ಲಿ, ರಾಜಕೀಯ ವರ್ಚಸ್ಸು ಮತ್ತು ರಾಜ್ಯ ರಾಜಕಾರಣದಲ್ಲಿ ಬೆಳೆಸಿಕೊಂಡ ಪ್ರಭಾವದಲ್ಲಿ ಈ ಹಿಂದೆ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಮತ್ತೊಂದಿಷ್ಟು ವಿವಾದಗಳೂ ಆಗಿದ್ದಿವೆ. ಕಾಂಗ್ರೆಸ್‌ ನಲ್ಲಂತೂ ಈ ಬಗ್ಗೆ ಸಣ್ಣ ಬಣ ಸೃಷ್ಟಿಯಾಗಿ, ಚುನಾವಣೆಯ ದೃಷ್ಟಿಯಲ್ಲಿ ಅದು ಸ್ವಲ್ಪ ಮರೆವೆಗೆ ಸಂದಿದೆ.  ಈ ಹಿನ್ನೆಲೆಯಲ್ಲಿ ಈಗ ಸದ್ಯಕ್ಕೆ ಒಂದು ಸಮೀಕ್ಷೆ ಹೊರಬಂದಿದ್ದು, ಅದರ ಬಗ್ಗೆ ಚರ್ಚೆ ಆರಂಭವಾಗಿದೆ. 

ರಾಷ್ಟ್ರೀಯ ಸುದ್ದಿವಾಹಿನಿ ಎನ್‌ ಡಿ ಟಿವಿ ವಿಶೇಷ ಸಮೀಕ್ಷೆ ಹಾಗೂ ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾದರೇ ರಾಜ್ಯಕ್ಕೆ ಹಿತ ಎಂಬ ದೃಷ್ಟಿಕೋನದಲ್ಲಿ ನಡೆಸಲಾದ "ಪಬ್ಲಿಕ್ ಒಪಿನಿಯನ್" ಸಮೀಕ್ಷೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಜನಪ್ರಿಯತೆ ಇದ್ದು, ಹಾಲಿ ಮುಖ್ಯಮಂತ್ರಿ ಬಸಸವರಾಜ್‌ ಬೊಮ್ಮಾಯಿ ಆಡಳಿತದ ಬಗ್ಗೆ ಜನ ಅಷ್ಟಾಗಿ ತೃಪ್ತರಾಗಿಲ್ಲ ಎಂಬ ವರದಿ ಹೊರಬಂದಿದ್ದು ರಾಜಕೀಯ ವಲಯದಲ್ಲಿ ಹೊಸ ದಿಕ್ಕಿನೆಡೆಗೆ ಮತ್ತೊಂದು ಚರ್ಚೆ ಹುಟ್ಟಿಕೊಂಡಿದೆ. 

ಮೇ ೧೦ ರಂದು ನಡೆದ ರಾಜ್ಯ  ವಿಧಾನಸಭಾ ಚುನಾವಣೆ ಮತ್ತು ಮೂರು ದಿನಗಳ ನಂತರ ಬರಲಿರುವ ಫಲಿತಾಂಶಕ್ಕೂ ಮುನ್ನ ಈ ಬಗ್ಗೆ ವ್ಯಾಪಕವಾದ ಚರ್ಚೆ ಹುಟ್ಟಿಕೊಂಡಿದ್ದು, ಕರ್ನಾಟಕದಲ್ಲಿ ಸಾರ್ವಜನಿಕರ ಚಿತ್ತ ಎತ್ತ ಕಡೆಯಿದೆ ಎಂಬುವುದರ ಬಗ್ಗೆ ಸೂಕ್ಷ್ಮವಾಗಿ ಅಳೆಯಲು ಸಮೀಕ್ಷೆಯು ಪ್ರಯತ್ನಿಸಿದೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಹಿರಿಯ ಮತದಾರರಲ್ಲಿ ಸ್ವಲ್ಪ ಹೆಚ್ಚು ಜನಪ್ರಿಯರಾಗಿದ್ದಾರೆ, ಬಸವರಾಜ್‌ ಬೊಮ್ಮಾಯಿ ಅವರನ್ನು ಕಿರಿಯ ಮತದಾರರು ಬಿಜೆಪಿ ಎನ್ನುವ ಕಾರಣಕ್ಕೆ ಆದ್ಯತೆ ನೀಡಿ ಅವರ ಪರವಾಗಿ ಒಲವು ತೋರಿಸಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. 

ಜನತಾದಳ ಸೆಕ್ಯುಲರ್ (ಜೆಡಿಎಸ್) ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮೂರನೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್‌ ನ ಮತ್ತೋರ್ವ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಂತರದ ಸ್ಥಾನದಲ್ಲಿದ್ದಾರೆ.

ರಾಜ್ಯದಲ್ಲಿ ಬರೋಬ್ಬರಿ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿ, ಒಂದು ಅವಧಿಯನ್ನು ಕೂಡ ಪೂರ್ಣಗೊಳಿಸದ ಬಿಜೆಪಿಯ ಹಿರಿಯ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡುವುದಕ್ಕೆ ಜನ ಅಷ್ಟರ ಮಟ್ಟಿಗೆ ಒಪ್ಪದೇ ಇರುವುದು ಆಶ್ಚರ್ಯಕರವಾಗಿದೆ. ಸಮೀಕ್ಷೆ ಹೇಳುವ ಪ್ರಕಾರ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಕೇವಲ ಶೇಕಡಾ ೫ರಷ್ಟು ಮಂದಿ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿಯಾದರೇ ರಾಜ್ಯಕ್ಕೆ ಹಿತವೆಂಬ ಇಂಗಿತ ವ್ಯಕ್ತಪಡಿಸಿದ್ದಾರೆಂಬುವುದು ತಿಳಿದು ಬಂದಿದೆ. ಒಂದೆಡೆ ಬಿಜೆಪಿ ರಾಜ್ಯದಲ್ಲಿ ಯಡಿಯೂರಪ್ಪರನ್ನು ಪ್ರಶ್ನಾತೀತ ನಾಯಕ ಎಂಬಂತೆಲ್ಲಾ ಬಿಂಬಿಸಿ  ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದರೇ, ಯಡಿಯೂರಪ್ಪರ ಪರವಾಗಿ ಸಮೀಕ್ಷೆಯಲ್ಲಿ ಇಂತದ್ದೊಂದು ವರದಿ ಹೊರ ಬಂದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಭ್ರಷ್ಟಾಚಾರದ ಆರೋಪ, ವಯಸ್ಸಿನ ಕಾರಣಗಳ ನಡುವೆ ೨೦೨೧ ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರನ್ನು ಹುದ್ದೆಯಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಯಡಿಯೂರಪ್ಪ ಈಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ತಮ್ಮ ಕ್ಷೇತ್ರವನ್ನು ಮಗ ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಯಡಿಯೂರಪ್ಪರ ಮೇಲೆ ಈಗ ರಾಜ್ಯ ವಿಧಾನ ಸಭಾ ಚುನಾವಣಾ ಗೆಲುವಿನ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್‌ ಹೊರಿಸಿದೆ. ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೇ, ನಿಸ್ಸಂಶಯವಾಗಿ ಮೋದಿ ರೋಡ್‌ ಶೋ, ಪಾಲಿಟಿಕಲ್‌ ಕ್ಯಾಂಪೆನ್‌ ಗಳಿಗೆ ಜೈಕಾರ ಸಲ್ಲುತ್ತದೆ. ಸೋತರೇ, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಯಡಿಯೂರಪ್ಪರ ಮೇಲೆ ಕಟ್ಟುವುದು ಬಿಜೆಪಿಯ ಹಿಡೆನ್‌ ಅಜೆಂಡಾ. ಸೋತರೇ, ಯಾವುದೇ ಮುಲಾಜಿಲ್ಲದೇ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿಬಿಡಬಹುದು ಎಂಬುವುದು ಬಿಜೆಪಿ ಹೈಕಮಾಂಡ್‌ ನ ಲೆಕ್ಕಾಚಾರ.  

ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆಂದು ಅಭಿಪ್ರಾಯ ವ್ಯಕ್ತಪಡಿಸಿದರು (೫೬%) ಮತ್ತು ೩೮% ರಷ್ಟು ಮಂದಿ ಪಕ್ಷಕ್ಕಿಂತ ಕ್ಷೇತ್ರದಲ್ಲಿನ ಉತ್ತಮ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದು ಹೇಳಿದರು. ಶೇಕಡಾ ೪ ರಷ್ಟು ಮಂದಿ ಮಾತ್ರ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯ ರಾಜಕೀಯ ವರ್ಚಸ್ಸು ನೋಡಿಕೊಂಡು  ಮತ ಹಾಕುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಅಥವಾ ಜೆಡಿಎಸ್ ಅನ್ನು ಬೆಂಬಲಿಸುವ ಮತದಾರರು ಹೆಚ್ಚಾಗಿ ಪಕ್ಷವನ್ನು ದೊಡ್ಡ ಅಂಶವೆಂದು ಪರಿಗಣಿಸುತ್ತಾರೆ. ಆದರೆ ಈ ವಿಷಯದಲ್ಲಿ ಬಿಜೆಪಿ ಮತದಾರರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಪಕ್ಷಕ್ಕಿಂತ ಹೆಚ್ಚಾಗಿ ʼಹಿಂದುತ್ವʼ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಬಿಜೆಪಿ ಪರವಾಗಿ ಇರುವ ಮತದಾರರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ, ಹಿಂದೂ ಧರ್ಮ ರಕ್ಷಣೆಯಾಗುತ್ತದೆ, ಬಿಜೆಪಿ ಹೊರತಾಗಿ ಉಳಿದ ಯಾವುದೇ ಪಕ್ಷ ಅಧಿಕಾರಕ್ಕೇರಿದರೇ ಹಿಂದೂ ಧರ್ಮದ ವಿರುದ್ಧ ಆಡಳಿತ ಇರುತ್ತದೆ ಎಂಬ ಒಂದು ಪೂರ್ವಾಗ್ರಹದ ಅಭಿಪ್ರಾಯವಿದೆ. ಇನ್ನು, ಪ್ರಮುಖ ಮೆಟ್ರಿಕ್‌ಗಳ ಬಗ್ಗೆ ಮತದಾರರ ಗ್ರಹಿಕೆಗೆ ಬಂದಾಗ ಬಿಜೆಪಿಗಿಂತ ಕಾಂಗ್ರೆಸ್ ಉತ್ತಮವಾಗಿದೆ ಎಂದು ಸಮೀಕ್ಷೆ ಹೇಳಿದೆ. 

ಹೆಚ್ಚು ಪ್ರತಿಕ್ರಿಯಿಸಿದವರು (೫೯%) ಬಿಜೆಪಿಯನ್ನು ಕಾಂಗ್ರೆಸ್ (೩೫%) ಮತ್ತು ಜೆಡಿಎಸ್ (೩%) ಗಿಂತ ಹೆಚ್ಚು ಭ್ರಷ್ಟ ಸರ್ಕಾರ ಎಂದು  ಅಭಿಪ್ರಾಯ ಪಟ್ಟಿದ್ದಾರೆ. ಪಕ್ಷಗಳ ಐಟಿ ಸೆಲ್‌ ಗಳು ಎಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇನ್ನಿತರ ಪ್ಲಾಟ್‌ ಫಾರ್ಮ್‌ ಗಳಲ್ಲಿ ತಮಗೆ ಬೇಕಾದ ಹಾಗೆ ಪ್ರಚಾರ ಗಿಟ್ಟಿಸಿಕೊಳ್ಳಬಹುದು, ಅಂತಿಮವಾಗಿ ಜನರ ತೀರ್ಪಿಗೆ ತಲೆ ಬಾಗಲೇಬೇಕು ಎಂಬುವುದಕ್ಕೆ ಇದೊಂದೇ ಉದಾಹರಣೆ ಸಾಕು. 

 ಕುಟುಂಬ ರಾಜಕಾರಣದ ವಿರುದ್ಧ ರಾಷ್ಟ್ರವ್ಯಾಪಿ ಹರಿಹಾಯ್ದ, ಅದರಲ್ಲೂ ಕಾಂಗ್ರೆಸ್‌ ಪಕ್ಷವನ್ನು ಈ ವಿಚಾರದಲ್ಲಿ ಎಂದಿಗೂ ಟೀಕೆ ಮಾಡುತ್ತಿದ್ದ ಪಕ್ಷಕ್ಕೆ ಅನಿರೀಕ್ಷಿತವಾಗಿ,  ಸ್ವಜನಪಕ್ಷಪಾತದ ವಿಚಾರದಲ್ಲಿ  ಬಿಜೆಪಿಯು (೫೯%) ಕಾಂಗ್ರೆಸ್ (೩೦%) ಮತ್ತು ಜೆಡಿಎಸ್ (೮%) ಗಿಂತ ಅಗ್ರಸ್ಥಾನದಲ್ಲಿದೆ ಎಂದು ಈ ಸಮೀಕ್ಷೆ ತಿಳಿಸುತ್ತದೆ. ಮಾತ್ರವಲ್ಲದೇ, ಗುಂಪುಗಾರಿಕೆ ಅಥವಾ ಬಣ ರಾಜಕೀಯದಲ್ಲಿಯೂ ಬಿಜೆಪಿ (೫೫%) ಕಾಂಗ್ರೆಸ್‌ (೩೦%) ಮತ್ತು ಜೆಡಿಎಸ್‌ (೧೨%) ಗಿಂತ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದೆ. 

ಇನ್ನು, ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ಕಾಂಗ್ರೆಸ್‌ ಗೆ ೪೭%, ಬಿಜೆಪಿಗೆ ೩೭% ಮತ್ತು ಜೆಡಿಎಸ್‌ ಗೆ ೧೪% ಜನರು ಬೆಸ್ಟ್‌ ಎಂದಿದ್ದಾರೆ  ಮತ್ತು ಕೋಮು ಸೌಹಾರ್ದತೆ ಕಾಪಾಡುವಲ್ಲಿ ಕಾಂಗ್ರೆಸ್‌ ೪೯% , ಬಿಜೆಪಿಗೆ  ೩೪% ಮತ್ತು ಜೆಡಿಎಸ್‌ ಗೆ ೧೪% ರಷ್ಟು ಮಂದಿ ಅತ್ಯುತ್ತಮ ಎಂದು ಶ್ರೇಯಾಂಕ ನೀಡಿದ್ದಾರೆ.ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ನಿಭಾಯಿಸುವಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ರೇಟಿಂಗ್ (೪೦%) ಹಂಚಿಕೊಳ್ಳುತ್ತವೆ ಮತ್ತು ಜೆಡಿಎಸ್  ಗೆ ೧೪% ರಷ್ಟು ಜನ ಬೆಸ್ಟ್‌ ಎಂದಿದ್ದಾರೆ. 

ಇನ್ನು, ರಾಜ್ಯದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಮತಗಳು ಮೂರು ಪಕ್ಷಗಳಿಗೆ ಎಷ್ಟರಮಟ್ಟಿಗೆ ವಿಭಜನೆಯಾಗಿ ಹೋಗಲಿದೆ ಎಂಬ ವಿಚಾರದ ಬಗ್ಗೆಯೂ ತಿಳಿಯಲು ಪ್ರಯತ್ನಿಸಿದ್ದು, 

ಶೇಕಡಾ ೩೪ರಷ್ಟು ಒಕ್ಕಲಿಗರು ಕಾಂಗ್ರೆಸ್ ಗೆ ಮತ ಹಾಕುತ್ತೇವೆ ಎಂದರೇ, ಶೇ. ೩೬ರಷ್ಟು ಒಕ್ಕಲಿಗ ಮತದಾರರು ಜೆಡಿಎಸ್ ಪರ ಒಲವು ತೋರಿದ್ದಾರೆ, ಶೇಕಡಾ ೬೭ರಷ್ಟು ಲಿಂಗಾಯತ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದರೇ, ಶೇಕಡಾ ೫೯ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್‌ ಗೆ ಬೆಂಬಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ಬಾರಿ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು ಚರ್ಚೆಯಾಗಿತ್ತು. ಅದಕ್ಕೆ ಪೂರಕವೆಂಬಂತೆ ಕೆಳ ವರ್ಗದ ಮತದಾರರು ಬಿಜೆಪಿಗಿಂತ (೨೩%) ಕಾಂಗ್ರೆಸ್ ಗೆ ಹೆಚ್ಚು (೫೦%) ಒಲವು ತೋರಿಸಿದ್ದನ್ನು ಮತ್ತು ಮೇಲ್ವರ್ಗದ ಮತದಾರರು ಸಹಜವೆಂಬಂತೆ ಧಾರ್ಮಿಕ ಭಾವನೆ, ಹಿಂದುತ್ವದ ಆಧಾರದಲ್ಲಿ ಕಾಂಗ್ರೆಸ್ (೩೧%) ಗಿಂತ ಬಿಜೆಪಿ (೪೬%) ಹೆಚ್ಚು ಒಲವು ತೋರಿರುವುದನ್ನು ಈ ಸಮೀಕ್ಷೆಯಲ್ಲಿ ಕಾಣಬಹುದಾಗಿದೆ.

ಒಟ್ಟಿನಲ್ಲಿ, ರಾಜ್ಯದ ಜನ ಒಂದಿಷ್ಟು ಬದಲಾವಣೆ ಬಯಸಿದ್ದಾರೆ ಎಂಬುವುದನ್ನು ಈ ಸಮೀಕ್ಷಾ ವರದಿಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಇನ್ನು, ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಇರುವ ಮತದಾರರ ಒಲವು ಯಾರ ಕಡೆ ಇದೆ ಎನ್ನುವುದು ಗೊತ್ತಿಲ್ಲ. ಒಂದಿಷ್ಟು ಜಿದ್ದಾಜಿದ್ದಿನ ಹೋರಾಟವಂತೂ ಹಿಂದೆಂದಿಗಿಂತಲೂ ಈ ಬಾರಿ ಸೃಷ್ಟಿಯಾಗಿದೆ. ಏನಾಗಲಿದೆ ಎನ್ನುವುದು ಸದ್ಯದ ಕುತೂಹಲ. ಕಾದು ನೋಡೋಣ. ಏನ್‌ ಅಂತೀರಿ ..?

-ಶ್ರೀರಾಜ್‌ ವಕ್ವಾಡಿ 


Thursday, May 4, 2023

ನಾ ಮುಖ್ಯಮಂತ್ರಿ : ಸಿದ್ದು, ಡಿಕೆಶಿ


ಕಾಂಗ್ರೆಸ್‌ ಅಧಿಕಾರಕ್ಕೇರಿದರೇ, ಯಾರನ್ನು ಸಮಾಧಾನ ಪಡಿಸಲಿದೆ ಹೈಕಮಾಂಡ್‌ ? 

ಒಂದೆಡೆ ಕಾಂಗ್ರೆಸ್‌ ನ ʼಗ್ಯಾರಂಟಿʼಗಳು ಹೊಸ ಭರವಸೆಯನ್ನು ಮೂಡಿಸುತ್ತಿದೆ. ಇನ್ನೊಂದೆಡೆ ಬಿಜೆಪಿ ಸಹಜವೆಂಬಂತೆ ಅದರ ಸಾಮಾನ್ಯವಾದ ಪ್ರಚಾರ ಶೈಲಿಯಲ್ಲಿ ಮುಂದುವರಿಯುತ್ತಿದೆ. ಇಲ್ಲಿ ಈ ಬಾರಿ ಬಹಳ ಕುತೂಹಲಕರಿಯಾದ ಮತ್ತೊಂದು ವಿಚಾರವೇನೆಂದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೇ, ಯಾರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬುವುದೇ ಆಗಿದೆ. ಹಿಂದೆಂದಿಗಿಂತಲೂ ಈ ಬಾರಿ ಕಾಂಗ್ರೆಸ್‌ ಪಾಳಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅದರ ಎರಡು ಪ್ರಭಾವಿಗಳಾದ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೆಸರು ಕೇಳಿಬಂದಿತ್ತು ಮತ್ತು ಅದು ಆಡಳಿತ ಪಕ್ಷಕ್ಕೆ ಒಂದು ರೀತಿಯಲ್ಲಿ ಅನಾಯಸ ಗ್ರಾಸವಾಗಿಯೂ ದೊರಕಿತ್ತು, ಮತ್ತದನ್ನು ಕಾಂಗ್ರೆಸ್‌ ವಿರುದ್ಧದ ಟೀಕೆಗೆ ಬಿಜೆಪಿ ಚೆನ್ನಾಗಿಯೇ ಬಳಸಿಕೊಂಡಿತ್ತು. ಕಾಂಗ್ರೆಸ್‌ ಏನೋ ಸದ್ಯಕ್ಕೆ ಚುನಾವಣೆ ಗೆಲ್ಲುವುದೇ ಪರಮ ಗುರಿ, ಮುಖ್ಯಮಂತ್ರಿ ಯಾರಾಗುವುದೆಂದು ಗೆದ್ದ ಮೇಲೆ ನೋಡಿಕೊಂಡರಾಯ್ತು ಎಂಬ ಮನಸ್ಥಿತಿಯಲ್ಲಿದ್ಧ ಹಾಗಿದೆ. ಆದರೂ, ಕಾಂಗ್ರೆಸ್‌ ಅಧಿಕಾರ ಹಿಡಿದರೆ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುವುದರ ಬಗ್ಗೆ ಸಾಮಾಜಿಕ ವಲಯದಲ್ಲಿ ಒಂದು ಕುತೂಹಲ ಹುಟ್ಟಿಕೊಂಡಿದೆ.  

ಕಾಂಗ್ರೆಸ್‌ ಪಕ್ಷ ದೇಶದೆಲ್ಲೆಡೆ ಸೋಲು ಅನುಭವಿಸುತ್ತಿದೆ. ಆದರೇ, ಕಾಂಗ್ರೆಸ್ ಪಕ್ಷ ಇನ್ನೂ ಒಂದು ಹಂತದಲ್ಲಿ ಗಮನಾರ್ಹ ಹಿಡಿತ ಮತ್ತು ಅಸ್ತಿತ್ವವನ್ನು ಹೊಂದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಎರಡು ಪ್ರಭಾವಿ ನಾಯಕರ ಹೆಸರು ಉಲ್ಲೇಖಿಸಲ್ಪಟ್ಟಿದ್ದವು. ಉಭಯ ನಾಯಕರ ಬೆಂಬಲಿಗರ ವಲಯದಲ್ಲಿ ಒಂದು ಹಂತದಲ್ಲಿ ʼಸಾಫ್ಟ್‌ ವೈಷಮ್ಯವೂʼ ಮೂಡಿತ್ತು. ಸಿದ್ದರಾಮಯ್ಯ ಹೋದ ಕೆಲವೆಡೆ ಬೆಂಬಲಿಗರು ʼಭವಿಷ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯʼ ಎಂದು ಘೋಷಣೆ ಕೂಗಿದರು, ಡಿಕೆಶಿ ತಮ್ಮ ಸಮುದಾಯದವರಲ್ಲಿ ಎರಡೆರಡು ಬಾರಿ ತಮ್ಮನ್ನು ಮುಖ್ಯಮಂತ್ರಿಯಾಗಿ ಮಾಡುವುದಕ್ಕೆ ಮತ ನೀಡುವುದರ ಮೂಲಕ ಅವಕಾಶ ಕೊಟ್ಟು ಸಹಕರಿಸಿ ಎಂದು ಅಕ್ಷರಶಃ ಅಂಗಲಾಚಿ ಬೇಡಿಕೊಂಡರು. ಇನ್ನು , ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ತೀವ್ರ ಪೈಪೋಟಿ ನಡುವೆ ಡಿಕೆಶಿ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ್‌ ಖರ್ಗೆ ಹೆಸರನ್ನು ಮುಖ್ಯಮಂತ್ರಿ ಹುದ್ದೆಯ ರೇಸ್‌ ಗೆ ತರುವುದಕ್ಕೆ ಪ್ರಯತ್ನಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿತ್ತು. ಖರ್ಗೆ ಅವರನ್ನು ಅನುಮೋದಿಸುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ನಡೆ ಪಕ್ಷದ ಒಳಗೆ  ʼದಲಿತ ಸಿಎಂʼ ಹಾಗೂ ʼಸ್ಥಳೀಯ ವರ್ಸಸ್‌ ವಲಸಿಗʼ ಎಂಬ ಚರ್ಚೆಯನ್ನು ಮುನ್ನೆಲೆಗೆ ತರುವ ಮೂಲಕ ಸಿದ್ದರಾಮಯ್ಯ ಅವರ ಭವಿಷ್ಯವನ್ನು ಚೆಕ್‌ ಮೇಟ್‌ ಮಾಡುವ ಪ್ರಯತ್ನವೆಂಬ ರಾಜಕೀಯ ಚರ್ಚೆಗೂ ಕಾರಣವಾಯ್ತು. 

ಕಾಂಗ್ರೆಸ್‌ ಪಾಳಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಪ್ರಭಾವಿ ನಾಯಕರು. ಉಭಯ ನಾಯಕರು ತಮ್ಮದೇ ಆದ ರಾಜಕೀಯ ವರ್ಚಸ್ಸನ್ನು ರಾಜ್ಯದಲ್ಲಿ ಹೊಂದಿದ್ದಾರೆ. ಖರ್ಗೆ ಈಗ ರಾಷ್ಟ್ರ ರಾಜಕಾರಣದಲ್ಲಿದ್ದಾರೆ. ಅವರಿಗೆ ಈಕಡೆ ಬರುವ ಯೋಚನೆ ಇಲ್ಲದಿರಬಹುದು. ಆದರೇ, ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರಿಗೂ ಬೇಸರವಾಗದಂತೆ ನೋಡಿಕೊಳ್ಳುವುದಕ್ಕೆ ಕಾಂಗ್ರೆಸ್‌ ಗೆದ್ದರೇ, ʼಖರ್ಗೆ ಸಾಬ್‌ʼ ನೀವು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ಎಂದು ವಾಪಾಸ್‌ ರಾಜ್ಯಕ್ಕೆ ಕಳುಹಿಸಿ ಎಐಸಿಸಿ ಯನ್ನು ಮತ್ತೆ ಗಾಂಧಿ ಕುಟುಂಬದ ತೆಕ್ಕೆಯೊಳಗೆ ತೆಗೆದುಕೊಳ್ಳುವ ಪ್ರಯತ್ನವೊಂದು ಕಾಂಗ್ರೆಸ್‌ ನಲ್ಲಿ ನಡೆದರೂ ಅಚ್ಚರಿಯಿಲ್ಲ. ಈ ಸಾಧ್ಯತೆ ತೀರಾ ಕಡಿಮೆ ಇದ್ದರೂ, ಇಂತಹದ್ದೊಂದು ಚರ್ಚೆಯನ್ನು ಸಲೀಸಾಗಿ ತಳ್ಳಿ ಹಾಕುವುದಕ್ಕಾಗಲ್ಲ.  ಇನ್ನು, ಸಿದ್ದರಾಮಯ್ಯ, ಡಿಕೆಶಿ ಪ್ರಬಲ ಬೆಂಬಲದ ನೆಲೆಯನ್ನು ಹೊಂದಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯ ಸ್ಪಷ್ಟತೆಯೊಂದಿಗೆ ಕಾಂಗ್ರೆಸ್‌ ಇಲ್ಲದಿರಲು ಬಹುಶಃ ಇದು ಕೂಡ ಒಂದು ಕಾರಣವಿರಬಹುದು. 

೭೫ರ ವಯಸ್ಸಿನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್‌ ನ ಮುಖ್ಯಮಂತ್ರಿಯಾಗಿ ಯಶಸ್ವಿ ಅಧಿಕಾರ ನಡೆಸಿದವರು. ಸಿದ್ದರಾಮಯ್ಯ ಇದು ತಮ್ಮ ಕೊನೆಯ ಚುನಾವಣೆಯಾಗಿದ್ದು, ಈ ಅವಧಿ ಮುಗಿದ ಮೇಲೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ರಾಜ್ಯದಲ್ಲಿ ಕಾಂಗ್ರೆಸ್‌ ನನ್ನು ಹಿಂದಿನ ವರ್ಚಸ್ಸನ್ನು ಪಡೆದುಕೊಳ್ಳುವುದಕ್ಕೆ ಬೇಕಾಗಿ ಸಾಕಷ್ಟು ಒದ್ದಾಡಿದ್ದಾರೆ. ಆದರೇ, ಡಿಕೆಶಿ ಮುಂದೆ ಇನ್ನೂ ರಾಜಕೀಯದಲ್ಲಿ ಹಲವು ವರ್ಷಗಳ ಅವಕಾಶಗಳಿವೆ. ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ ಎಂಬ ದೃಷ್ಟಿಯಲ್ಲಿ ಪಕ್ಷ ಅವರಿಗೆ ಮತ್ತೊಂದು ಅವಕಾಶ ಮಾಡಿಕೊಡಲಿದೆಯೇ ? ಅಥವಾ ೬೧ ವರ್ಷದ ಪವರ್‌ ಫುಲ್‌ ಡಿಕೆಶಿಗೆ ಮುಖ್ಯಮಂತ್ರಿ ಹುದ್ದೆಯ ಅವಕಾಶ ಕೊಡಲಿದೆಯೇ ? ಎಂಬ ಪ್ರಶ್ನೆಗಳು ಎದ್ದಿವೆ. 

ಶಿವಕುಮಾರ್‌ ನಿಸ್ಸಂದೇಹವಾಗಿ ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ೨೦೧೮ರಲ್ಲಿ ಪಕ್ಷ ಬಹುಮತಗಳಿಸದೇ ಇದ್ದಾಗ ಬಿಜೆಪಿಯನ್ನು ಅಧಿಕಾರದಿಂದ ಹೊರಗುಳಿಸುವುದಕ್ಕೆ ಬೇಕಾಗಿ ಜೆಡಿಎಸ್‌ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಹಾಗೂ ೨೦೧೯ರಲ್ಲಿ ಇದೇ ಮೈತ್ರಿ ಸರ್ಕಾರದ ಸುಮಾರು ೧೭ ಮಂದಿ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಸೇರುವುದಕ್ಕೆ ಮುಂದಾದಾಗ ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರವನ್ನು ರಕ್ಷಿಸಲು ಅವರು ಪ್ರಯತ್ನಿಸಿದರಾದರು. ಪಕ್ಷಾಂತರಿಗಳನ್ನು ಭೇಟಿ ಮಾಡಲು, ಅವರ ಮನವೊಲಿಸಲು ಮುಂಬೈಗೆ ಹಾರಿದರಾದರೂ ಬಿಜೆಪಿ ತೆಕ್ಕೆಯಲ್ಲಿದ್ದ ೧೭ ಶಾಸಕರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಆದರೂ, ಡಿಕೆಶಿ ರಾಜಕೀಯ ಚರ್ಚೆಯನ್ನು ಇನ್ನೊಂದು ಹಂತಕ್ಕೆ ದೂಡುವಲ್ಲಿ ಯಶಸ್ವಿಯಾಗಿದ್ದರು. ಮಾತ್ರವಲ್ಲದೇ ೨೦೦೧ರಲ್ಲಿ ಮಹಾರಾಷ್ಟ್ರ ಕಾಂಗ್ರೆಸ್‌ ಗಿದ್ದ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿಕೆಶಿ ಹೈಕಮಾಂಡ್‌ ನಾಯಕತ್ವಕ್ಕೆ ಸಹಾಯ ಮಾಡಿದ್ದರು, ೨೦೧೭ರಲ್ಲಿ ಪಕ್ಷಾಂತರಕ್ಕೆ ಮುಂದಾಗಿದ್ದ ಗುಜರಾತ್‌ ನ ಸುಮಾರು ೪೨ ಶಾಸಕರನ್ನು ಬೆಂಗಳೂರಿನ ತಮ್ಮ ರೆಸಾರ್ಟ್‌ ನಲ್ಲಿ ಇರಿಸಿಕೊಂಡು ಪಕ್ಷಾಂತರ ಆಗದಂತೆ ನೋಡಿಕೊಂಡರು. ಹೀಗೆ ಪಕ್ಷದ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿಕೆಶಿ ನಿರ್ಣಾಯಕ ಪಾತ್ರ ವಹಿಸಿದ್ದರು. 

ಡಿಕೆಶಿ ಮೂಲದಿಂಧ ಕಾಂಗ್ರೆಸಿಗ, ಆದರೇ, ಸಿದ್ದರಾಮಯ್ಯ ಹಾಗಲ್ಲ. ಸಿದ್ದರಾಮಯ್ಯ ಈ ಹಿಂದೆ ಜನತಾ ಪಾರ್ಟಿ ( ಆಮೇಲೆ ಅದು ಜನತಾದಳ ಆಯ್ತು)ಯಲ್ಲಿ ಹೆಚ್‌. ಡಿ ದೇವೇಗೌಡರ ಗರಡಿಯಲ್ಲಿ ಬೆಳೆದವರು. ಹಿರಿಗೌಡರ ನಡುವೆ ಇದ್ದ ಸಣ್ಣ ವೈಷಮ್ಯದ ಕಾರಣದಿಂದಾಗಿ ೨೦೦೫ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರ್ಪಡೆಗೊಂಡರು. ಕಾಂಗ್ರೆಸ್‌ ನಲ್ಲಿ ʼವಲಸಿಗʼನಾಗಿಯೂ ಹೇರಳವಾದ ಅವಕಾಶವನ್ನು ಪಡೆದುಕೊಂಡರು. ಎಲ್ಲಿಯವರೆಗೆ ಅಂದರೇ, ಪಕ್ಷಾಂತರಗೊಂಡು ಬಂದ ಒಬ್ಬ ನಾಯಕ, ಕಾಂಗ್ರೆಸ್‌ ಪಕ್ಷದ ಪ್ರಭಾವಿಯಾಗಿ, ಮುಖ್ಯಮಂತ್ರಿಯಾಗುವವರೆಗೂ ಕಾಂಗ್ರೆಸ್‌ ನಲ್ಲಿ ಅವಕಾಶ ಪಡೆದರು. 

ಶಿವಕುಮಾರ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕ. ೧೯೮೯ರಿಂದಲೂ ಶಿವಕುಮಾರ್ ಕಾಂಗ್ರೆಸ್‌  ನ ಒಕ್ಕಲಿಗ ಅಭ್ಯರ್ಥಿ. ಹಂತಹಂತವಾಗಿ ಆ ಸಮುದಾಯದ, ಪಕ್ಷದ ಪ್ರಭಾವಿ ನಾಯಕರಾಗಿ ಶಿವಕುಮಾರ್ ಬೆಳೆದರು.‌  

ಉಭಯ ನಾಯಕರು ರಾಜ್ಯದ ಪ್ರಭಾವಿ ನಾಯಕರು. ರಾಜ್ಯದ ಕಾಂಗ್ರೆಸ್‌ ನ ದೊಡ್ಡ ಶಕ್ತಿಗಳು. ಔಋ ಕಾಲದ ನಂತರ ಯಾರನ್ನು ಮುಂದೆ ತರಲಿದೆ ಎನ್ನುವುದು ಯಕ್ಷ ಪ್ರಶ್ನೆ. ಕಾಂಗ್ರೆಸ್‌ ಎರಡನೇ ಹಂತದ ನಾಯಕರನ್ನು ಬಿಜೆಪಿಯಂತೆ ಬೆಳಸಿಲ್ಲ. ಆ ಕೊರಗು ಕಾಂಗ್ರೆಸ್‌ ಗಿದೆ. ಹಾಗಾಗಿಯೇ ಸದಾ ಬಿಜೆಪಿ ಈ ಉಭಯ ನಾಯಕರನ್ನೇ ಹೆಚ್ಚಾಗಿ ಟಾರ್ಗೇಟ್‌ ಮಾಡುವುದು. ಸಿದ್ದರಾಮಯ್ಯ ಮಾತುಗಳಲ್ಲಿ ಕೆಲವೊಮ್ಮೆ ಎಡವುತ್ತಾರೆ. ವಿವಾದಕ್ಕೂ ಕಾರಣರಾಗುತ್ತಾರೆ. ಅದು ಪಕ್ಷದ ಇಮೇಜ್‌ ಗೆ ಒಂದಿಷ್ಟು ಡ್ಯಾಮೇಜ್‌ ಕೂಡ ಆದದ್ದಿದೆ. ಇನ್ನು, ಡಿಕೆಶಿ ಪಕ್ಷದ ಮತ್ತು ರಾಷ್ಟ್ರದ ಶ್ರೀಮಂತ ರಾಜಕಾರಣಿಗಳಲ್ಲೊಬ್ಬರು. ಅವರು ಇನ್ನೂ ಭ್ರಷ್ಟಾಚಾರದ ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಡಿಕೆಶಿಗೆ ಜೈಲು ಶಿಕ್ಷೆಯೂ ಆಗಿತ್ತು. ಶಿವಕುಮಾರ್‌ ವಿರುದ್ಧದ ತನಿಖೆ ಹಾಗೂ ಐಟಿ ದಾಳಿಗಳ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ೨೦೧೭ರಲ್ಲಿ ಪಕ್ಷಾಂತರಗೊಳ್ಳುವುದಕ್ಕೆ ಮುಂದಾಗಿದ್ದ ೪೨ ಗುಜರಾತ್‌ ನ ಶಾಸಕರನ್ನು ತಮ್ಮ ಬೆಂಗಳೂರಿನ ರೆಸಾರ್ಟ್‌ ನಲ್ಲಿ ಉಳಿಸಿಕೊಂಡು ಪಕ್ಷಾಂತರ ಆಗುವುದನ್ನು ತಡೆದ ಡಿಕೆಶಿ ಪಕ್ಷದ ಹೈಕಮಾಂಡ್‌ ಗೆ ಸಹಾಯ ಮಾಡಿದ್ದೇ ಇದಕ್ಕೆ ಕಾರಣ ಎಂಬ ಚರ್ಚೆಯೂ ಇದೆ. ಆದರೇ ಎಲ್ಲಿಯೂ ಡಿಕೆಶಿ ಕುಗ್ಗಲಿಲ್ಲ. ʼಜೈಲು ಶಿಕ್ಷಗೆ ಕಾರಣರಾದವರನ್ನು ಕಾಲ ಬಂದಾಗ ಜನ್ಮ ಜಾಲಾಡ್ತೇನೆʼ ಎಂಬ ಧೈರ್ಯ ಅವರಿಗೆ ಬಂದಿದೆ. ಆದರೂ ಇವೆಲ್ಲಾ ಕೆಲವೊಮ್ಮೆ ಪಕ್ಷದ ವರ್ಚಸ್ಸನ್ನು ಕುಗ್ಗಿಸಿದ್ದೂ ಇದೆ ಎನ್ನುವುದು ಒಪ್ಪಿಕೊಳ್ಳಲೇ ಬೇಕಾದ ವಿಷಯ. 

ಇನ್ನು, ಕಾಂಗ್ರೆಸ್‌ ಗೆದ್ದರೆ ಮುಖ್ಯಮಂತ್ರಿಯನ್ನಾಗಿ ಈ ಉಭಯ ನಾಯಕರುಗಳಲ್ಲಿ ಯಾರನ್ನು ಆಯ್ಕೆ ಮಾಡುತ್ತದೆ ? ಎನ್ನುವುದು ಕುತೂಹಲ. ಇತ್ತೀಚೆಗೆ ʼದಿ ಪ್ರಿಂಟ್‌ʼ ಎಂಬ ಸುದ್ದಿ ಸಂಸ್ಥೆಗೆ ಕೊಟ್ಟ ಸಂದರ್ಶನದಲ್ಲಿ ʼಖರ್ಗೆ ಒಪ್ಪುವುದಾದರೇ ನಾನು ಯಾವುದೇ ತಕರಾರಿಲ್ಲದೇ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತೇನೆʼ ಎಂದು ಡಿಕೆಶಿ ಹೇಳಿಕೊಂಡಿದ್ದರು. ಇದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವುದು ತಮಗೆ ಇಷ್ಟವಿಲ್ಲ ಎಂಬ ವಿಚಾರವನ್ನು ಮತ್ತೆ ಪರೋಕ್ಷವಾಗಿ ಡಿಕೆಶಿ ಹೇಳಿಕೊಂಡರೇ ಎಂಬ ಚರ್ಚೆಗೂ ಕಾರಣವಾಯ್ತು.  

ಒಟ್ಟಿನಲ್ಲಿ, ಸಿದ್ದರಾಮಯ್ಯ, ಡಿಕೆಶಿ ನಡುವೆ ಇಂದಿಗೂ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಇರುವುದು ಸ್ಪಷ್ಟ. ಇಬ್ಬರೂ ಆ ರಾಜಕೀಯ ಎಕ್ಸ್‌ ಫ್ಯಾಕ್ಟರ್‌, ನಾಯಕತ್ವದ ಗುಣಮಟ್ಟವನ್ನು ಹೊಂದಿದ್ದಾರೆ. ಪಕ್ಷಕ್ಕೆ ಈ ವಿಚಾರದಲ್ಲಿ ಆಯ್ಕೆಗಳಿರುವುದು ಒಂದು ಹಂತದಲ್ಲಿ ಪ್ಲಸ್‌ ಪಾಯಿಂಟ್‌ ಆದರೇ, ಮತ್ತೊಂದು ಹಂತದಲ್ಲಿ ಕಠಿಣವೂ ಹೌದು. ಉಭಯ ನಾಯಕರ ನಡುವೆ ಪೈಪೋಟಿಯಂತೂ ಇದೆ. ಏನಂತೀರಿ ?

-ಶ್ರೀರಾಜ್‌ ವಕ್ವಾಡಿ