Monday, August 31, 2026

ಅಧಿಕಾರದ ʼಸುಳಿʼಯಲ್ಲಿ ನೈತಿಕತೆಯ ಹುಡುಕಾಟ !

ಸಾಹಿತ್ಯ ಒಂದು ಕಾಲದ ಪ್ರಜ್ಞೆಯಾಗಬೇಕು. ಸಾಹಿತಿ ಆ ಕಾಲವನ್ನು ಸಾಧ್ಯವಾದಷ್ಟು ಪರಿಚಯಿಸುವ ಪ್ರಯತ್ನ ಮಾಡಬೇಕು. ತಾನು ಕಂಡ, ಬದುಕಿದ, ಜೀವಿಸಿದ, ಅನುಭವಿಸಿದ ಘಟನೆಗಳನ್ನು ತನ್ನ ಕೃತಿಗಳಲ್ಲಿ ಸಾಹಿತಿ ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತನೇ ಇರುತ್ತಾನೆ. ಹಾಗೆ ವ್ಯಕ್ತಪಡಿಸದವನು ಸಾಹಿತಿಯೇ ಅಲ್ಲ. ಸತೀಶ್‌ ಶೆಟ್ಟಿ ವಕ್ವಾಡಿ ಅವರಿಗೆ ಕಾಲದ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆ ಬಹಳ ಚೆನ್ನಾಗಿದೆ. ಅದನ್ನು ಈ ʼಸುಳಿʼ ಕಾದಂಬರಿಯಲ್ಲಿಯೂ ಕಾಣಿಸಿದ್ದಾರೆ. ವಕ್ವಾಡಿಯ ಪಕ್ಕದೂರು ಅಸೋಡಿನ ನಂದಿಕೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ನಡೆದ ʼಸೂಜಿ ಪ್ರಕರಣʼ ಮತ್ತದರ ಸುತ್ತ ನಡೆದ ಕೋಮು ಸಂಘರ್ಷದ ಎಳೆ ಹಿಡಿದು ಸತೀಶ್‌ ಶೆಟ್ಟಿಯವರು ಈ ಕಾದಂಬರಿಯನ್ನು ಹೆಣೆದಿದ್ದಾರೆ. ಮಾತಾಡಿದ್ದಕ್ಕೆ, ಬರೆದಿದ್ದಕ್ಕೆಲ್ಲದಕ್ಕೂ ಹಣೆಪಟ್ಟಿ ಹಚ್ಚುವ ಕಾಲದಲ್ಲಿ ಇಂತಹದ್ದೊಂದು ಕಾದಂಬರಿಯನ್ನು ಬರೆದಿರುವುದು ಮೆಚ್ಚಲೇ ಬೇಕಾದ ಸಂಗತಿ. 

ಚಂದ್ರಹಾಸ ಎನ್ನುವ ಪಾತ್ರದಲ್ಲಿ ಕಂಡ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಇಲ್ಲಿ ಅಚ್ಚರಿಯ ವಿಷಯ. ರಾಮಕೃಷ್ಣ ಹೆಗ್ಡೆ ಅವರ “ಹೆಸರು” ಅಧಿಕಾರದಿಂದ ಮಾತ್ರ ಸೃಷ್ಟಿಯಾಗಲಿಲ್ಲ. ಆಡಳಿತದ ಬಗ್ಗೆ ಅವರ ವಿಭಿನ್ನ ದೃಷ್ಟಿಕೋನ, ಗ್ರಾಮೀಣ ಸ್ವರಾಜ್ಯದ ಕಲ್ಪನೆ ಮತ್ತು ರಾಜಕೀಯ ಶೈಲಿಯೇ ಅವರ ಹೆಸರನ್ನು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟವಾಗಿ ಸೃಷ್ಟಿಸಿದೆ. ಟೆಲಿಫೋನ್ ಟ್ಯಾಪಿಂಗ್ ವಿವಾದ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳು ಅವರ ನಾಯಕತ್ವಕ್ಕೆ ಸವಾಲು ತಂದವು. ಆದರೂ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೆಗ್ಡೆ ಅವರ ಹೆಸರು ವಿಕೇಂದ್ರೀಕರಣ, ಪಂಚಾಯತ್ ರಾಜ್ ಮತ್ತು ಆಡಳಿತ ಸುಧಾರಣೆಗಳೊಂದಿಗೆ ಗಟ್ಟಿಯಾಗಿ ಜೋಡಿಸಿಕೊಂಡಿದೆ. ಅಂತಹದ್ದೊಂದು ವ್ಯಕ್ತಿತ್ವ ಮತ್ತು ಅವರ ಆಡಳಿತಾವಧಿಯ ಕಲ್ಪನೆ, ಸವಾಲು, ರಾಜಕೀಯ ನೈತಿಕತೆಯನ್ನು ಇಲ್ಲಿ ಒಂದು ಪಾತ್ರದ ಮೂಲಕ ಇಳಿಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮಾತ್ರವಲ್ಲ, ಅದು ಆ ಕಾಲದ ಕನ್ನಡಿಯಾಗಿಯೂ ಇಲ್ಲಿ ಕಾಣಿಸುತ್ತದೆ, ಹೊಸ ತಲೆಮಾರಿಗೆ ಪರಿಚಯದ ಪ್ರಯತ್ನವಾಗಿಯೂ ಇಲ್ಲಿ ಕಾಣಿಸುತ್ತದೆ. ಮುಂದುವರಿದು ರಾಜಕೀಯದಲ್ಲಿ ಸಮಾಜವಾದವನ್ನು ಪಾಲಿಸಿದ ಅನೇಕ ಮುಖ್ಯಮಂತ್ರಿಗಳು, ರಾಜಕಾರಣಿಗಳ ವ್ಯಕ್ತಿತ್ವಗಳೂ ಇಲ್ಲಿ ಅಲ್ಲಲ್ಲಿ ಕಾಣಿಸುತ್ತದೆ. 

ಇನ್ನು, ರಾಜಕೀಯವೆಂದರೆ ಅಧಿಕಾರದ ಆಟ, ಪಿತೂರಿ, ಅಕ್ರಮ, ಭ್ರಷ್ಟಾಚಾರ ಮತ್ತು ಸ್ವಾರ್ಥದ ಸಂಘರ್ಷ ಎನ್ನುವ ಕಲ್ಪನೆ ಇಂದು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ. ಆದರೆ ರಾಜಕೀಯದ ಈ ಕತ್ತಲೆಯ ಮುಖದಾಚೆಯೂ ಮೌಲ್ಯ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಸಾರ್ವಜನಿಕ ಬದುಕಿನ ಬದ್ಧತೆಗೆ ಜಾಗವಿದೆ ಎಂಬ ಆಶಾವಾದವನ್ನು ಕಟ್ಟಿಕೊಡುವ ಪ್ರಯತ್ನವೇ ‘ಸುಳಿʼ  ಕೃತಿಯ ಪ್ರಮುಖ ವೈಶಿಷ್ಟ್ಯ. ರಾಜಕೀಯವನ್ನು ಕೇವಲ ಅಧಿಕಾರದ ಚದುರಂಗವಾಗಿ ನೋಡದೆ, ಮನುಷ್ಯನ ನೈತಿಕ ಸಂಘರ್ಷಗಳ ಮೂಲಕ ನೋಡುವುದು ಕೃತಿಗೆ ಒಂದು ವಿಭಿನ್ನ ಆಯಾಮವನ್ನು ನೀಡುತ್ತದೆ.


ಕೃತಿಯ ಕೇಂದ್ರದಲ್ಲಿರುವ ಚಂದ್ರಹಾಸನ ಸುತ್ತ ರೂಪುಗೊಳ್ಳುವ ಪಾತ್ರಗಳೆಲ್ಲವೂ ರಾಜಕೀಯ ವ್ಯವಸ್ಥೆಯ ವಿವಿಧ ಮುಖಗಳನ್ನು ಪ್ರತಿನಿಧಿಸುತ್ತವೆ. ಇವರು ಸಂಪೂರ್ಣವಾಗಿ ಒಳ್ಳೆಯವರು ಅಥವಾ ಕೆಟ್ಟವರು ಎಂಬ ಸರಳ ವರ್ಗೀಕರಣಕ್ಕೆ ಒಳಪಡುವುದಿಲ್ಲ. ಅವರೊಳಗಿನ ದೌರ್ಬಲ್ಯ, ಸ್ವಾರ್ಥ, ಅಧಿಕಾರದ ಆಸೆ, ಪಾಪಪ್ರಜ್ಞೆ, ಸಂಬಂಧಗಳ ಸಂಕೀರ್ಣತೆ ಮತ್ತು ಮಾನವೀಯ ತುಡಿತಗಳು ಅವರನ್ನು ಜೀವಂತ ಪಾತ್ರಗಳನ್ನಾಗಿ ಮಾಡುತ್ತವೆ. ಇದೇ ಕಾರಣಕ್ಕೆ ಕೃತಿಯ ರಾಜಕೀಯ ಲೋಕ ಕೇವಲ ಕಾಲ್ಪನಿಕವಾಗಿ ಉಳಿಯದೆ, ಓದುಗನಿಗೆ ಪರಿಚಿತವಾಗಿರುವ ವಾಸ್ತವದ ಪ್ರತಿಬಿಂಬದಂತೆ ಕಾಣುತ್ತದೆ.

ʼಸುಳಿʼಯ ಪ್ರಮುಖ ಶಕ್ತಿ ಅದರ ನೈತಿಕ ರಾಜಕೀಯದ ಪ್ರಶ್ನೆ. ರಾಜಕೀಯದಲ್ಲಿ ಮಾನವೀಯತೆ ಉಳಿಸಿಕೊಂಡವನು ಸೋಲುತ್ತಾನೆ, ಕುತಂತ್ರ ಮತ್ತು ರಾಜಕೀಯ ಲೆಕ್ಕಾಚಾರ ಬಲ್ಲವನೇ ಗೆಲ್ಲುತ್ತಾನೆ ಎಂಬ ಸಾಮಾನ್ಯ ನಂಬಿಕೆಯನ್ನು ಕೃತಿ ಸವಾಲೆಸೆದು ಪ್ರಶ್ನಿಸುತ್ತದೆ. ಅಧರ್ಮದ ದಾರಿಯಲ್ಲಿ ಸಾಗುವ ವ್ಯಕ್ತಿಯೊಳಗೂ ಒಂದು ಹಂತದಲ್ಲಿ ಪಾಪಪ್ರಜ್ಞೆ ಅಥವಾ ಆತ್ಮಸಾಕ್ಷಿಯ ʼಕಾಟʼ ಆರಂಭವಾಗುತ್ತದೆ ಎಂಬ ನಂಬಿಕೆಯನ್ನು ಲೇಖಕರು ಕೃತಿಯೊಳಗೆ ಅಂತರ್ಗರ್ಭಿಸಿ ಓದುಗರ ಮುಂದಿಟ್ಟಿದ್ದಾರೆ. ಹೀಗಾಗಿ ಇದು ರಾಜಕೀಯದ ಕರಾಳತೆಯನ್ನು ಮಾತ್ರ ದಾಖಲಿಸುವ ಕೃತಿ ಅಲ್ಲ, ಆ ಕರಾಳತೆಯ ನಡುವೆಯೂ ಮೌಲ್ಯಗಳು ಸಂಪೂರ್ಣವಾಗಿ ಸತ್ತಿಲ್ಲ ಎಂಬ ಭರವಸೆಯನ್ನೂ ನೀಡುವ ಕೃತಿ. ಮೌಲ್ಯಗಳಿಗೆ ಬೆಲೆ ಇದೆಯೇ ಎನ್ನುವುದು ಎರಡನೇ ಪ್ರಶ್ನೆ. ಮೌಲ್ಯಗಳಿಂದಲೇ ಬದುಕಬೇಕು ಎನ್ನುವ ಸದಾಶಯ ತುಂಬಿಕೊಂಡಿರುವ ಕೃತಿ ಇದು ಎನ್ನುವುದು ಇಲ್ಲಿ ಹೆಚ್ಚು ಸೂಕ್ತ. 

ಕೃತಿಯ ಮತ್ತೊಂದು ಗಮನಾರ್ಹ ಅಂಶವೆಂದರೆ ಹಿಂದಿನ ರಾಜಕೀಯ ಮತ್ತು ವರ್ತಮಾನದ ರಾಜಕೀಯದ ನಡುವಿನ ಹೋಲಿಕೆ. ದಶಕಗಳ ಹಿಂದೆ ಸಾರ್ವಜನಿಕ ಜೀವನದಲ್ಲಿದ್ದ ಮೌಲ್ಯಾಧಾರಿತ ರಾಜಕೀಯ, ವೈಯಕ್ತಿಕ ಪ್ರಾಮಾಣಿಕತೆ ಮತ್ತು ಜನರ ಮೇಲಿನ ಹೊಣೆಗಾರಿಕೆಯ ನೆನಪುಗಳು ಇಂದಿನ ರಾಜಕೀಯದೊಂದಿಗೆ ಹೋಲಿಸಿದಾಗ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಅಧಿಕಾರಕ್ಕಾಗಿ ಮೌಲ್ಯಗಳನ್ನು ಬದಿಗೊತ್ತುವ ಇಂದಿನ ರಾಜಕೀಯ ಸಂಸ್ಕೃತಿಯ ಎದುರು ಹಿಂದಿನ ತಲೆಮಾರಿನ ಕೆಲವು ನಾಯಕರ ಬದುಕು ಒಂದು ಪರ್ಯಾಯ ರಾಜಕೀಯ ಮಾದರಿಯಾಗಿ ಕೃತಿಯಲ್ಲಿ ಕಾಣಿಸುತ್ತದೆ. ಆದರೆ ಇಲ್ಲಿ ಹಿಂದಿನ ಕಾಲವನ್ನು ಸಂಪೂರ್ಣವಾಗಿ ಆದರ್ಶಗೊಳಿಸುವ ಪ್ರಯತ್ನವೂ ಕೆಲವಡೆ ಕಾಣಿಸಿದೆ. ಹಳೆಯ ರಾಜಕೀಯದಲ್ಲೂ ಮಿತಿಗಳು, ಸಂಘರ್ಷಗಳು ಮತ್ತು ಅಧಿಕಾರದ ಲೆಕ್ಕಾಚಾರಗಳಿದ್ದವು ಎಂಬ ವಾಸ್ತವವನ್ನು ಓದುಗ ತನ್ನ ವಿವೇಚನೆಯಿಂದ ಗಮನಿಸಬೇಕಾಗುತ್ತದೆ. ಆ ವಿವೇಚನೆಯನ್ನು ಓದುಗರಿಗೆ ಬಿಟ್ಟಿದ್ದು ಎನ್ನುವುದನ್ನು ಕೃತಿಕಾರರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಈ ಅಂಶವೇ ಕೃತಿಯನ್ನು ರಾಜಕೀಯ ಭಾವನಾತ್ಮಕ ಸಂಗತಿಯ ಬದಲಿಗೆ ಚರ್ಚೆಗೆ ಅರ್ಹವಾದ ರಾಜಕೀಯ ಕೃತಿಯನ್ನಾಗಿ ಮಾಡುತ್ತದೆ.

ನೈಜ ರಾಜಕೀಯ ಇತಿಹಾಸ ಮತ್ತು ಕಾಲ್ಪನಿಕ ಕಥನದ ಸಮ್ಮಿಶ್ರಣ ‘ಸುಳಿ’ಯ ಮತ್ತೊಂದು ಪ್ರಮುಖ ವೈಶಿಷ್ಟ್ಯ. ರಾಜ್ಯದ ರಾಜಕೀಯವನ್ನು ರೂಪಿಸಿದ ವಿವಿಧ ಪಕ್ಷಗಳ ನಾಯಕರು ಹಾಗೂ ರಾಜಕೀಯ ಘಟನೆಗಳ ನೆರಳು ಕಥೆಯೊಳಗೆ ಪ್ರವೇಶಿಸುವುದರಿಂದ ಕೃತಿಗೆ ರಾಜಕೀಯ ಘಟನೆಗಳ ಐತಿಹಾಸಿಕ ಹಿನ್ನೆಲೆ ದೊರೆಯುತ್ತದೆ. ಅದೇ ಸಂದರ್ಭದಲ್ಲಿ ಕಾಲ್ಪನಿಕ ಪಾತ್ರಗಳು ಆ ಇತಿಹಾಸದೊಂದಿಗೆ ಬೆರೆತಾಗ ಕಥನಕ್ಕೆ ನಾಟಕೀಯತೆಯೂ ಕಾಣಿಸುತ್ತದೆ. ಅವು ಈ ಕಥೆ ಬೆಳೆಯುವುದಕ್ಕೆ ಕೃತಿಕಾರರು ಮಾಡಿದ್ದಾರೆ ಎನ್ನುವುದನ್ನು ಹೊರತಾಗಿ ಬೇರೇನೂ ಇಲ್ಲ. ಆದರೆ ಇಂತಹ ಜೋಡಣೆಯ ಸಂದರ್ಭದಲ್ಲಿ ಒಂದು ಸವಾಲೂ ಇದೆ. ನೈಜ ವ್ಯಕ್ತಿಗಳು ಮತ್ತು ಕಾಲ್ಪನಿಕ ಪಾತ್ರಗಳ ನಡುವಿನ ಗಡಿ ಕೆಲವೊಮ್ಮೆ ಅಸ್ಪಷ್ಟವಾದರೆ, ಓದುಗನಿಗೆ ಕಥೆಯ ವಾಸ್ತವಿಕತೆ ಮತ್ತು ಲೇಖಕರ ಕಲ್ಪನೆಯ ವ್ಯಾಪ್ತಿಯನ್ನು ಪ್ರತ್ಯೇಕಿಸುವುದು ಕಷ್ಟವಾಗಬಹುದು. ಈ ಸೂಕ್ಷ್ಮತೆಯನ್ನು ಅರಿತು ಓದಿದಾಗ ಮಾತ್ರ ಕೃತಿಯ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ.

ಬೆಳಕ್ವಾಡಿ, ಕುಂದಾಪುರ, ಹುಬ್ಬಳ್ಳಿ ಮತ್ತು ಬೆಂಗಳೂರು ಕೃತಿಯ ವಸ್ತುವಿನ ವಿಸ್ತಾರಕ್ಕೆ ಕೇವಲ ಹಿನ್ನೆಲೆಗಳಲ್ಲ, ಅವು ಕಥೆಯ ವಾತಾವರಣವನ್ನು ರೂಪಿಸುವ ಜೀವಂತ ಅಂಶಗಳು. ಅಲ್ಲಿನ ಸಾಮಾಜಿಕ ಪರಿಸರ, ಸ್ಥಳೀಯ ಸಂಸ್ಕೃತಿ, ನಂಬಿಕೆಗಳು, ಆಚರಣೆಗಳು ಮತ್ತು ಜನಜೀವನದ ಸೊಗಡು ಕಥೆಗೆ ಪ್ರಾದೇಶಿಕ ನೆಲೆಯನ್ನು ನೀಡುತ್ತವೆ. ವಿಶೇಷವಾಗಿ ವಿಭಿನ್ನ ಪ್ರದೇಶಗಳ ಬದುಕಿನ ವೈವಿಧ್ಯವನ್ನು ರಾಜಕೀಯ ಕಥನದೊಂದಿಗೆ ಬೆಸೆದಿರುವುದು ಕೃತಿಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

ಆದರೆ ‘ಸುಳಿ’ಯನ್ನು ಸಂಪೂರ್ಣವಾಗಿ ರಾಜಕೀಯದ ವಾಸ್ತವಚಿತ್ರ ಎಂದು ಪರಿಗಣಿಸುವುದಕ್ಕಿಂತ ರಾಜಕೀಯದ ಮೂಲಕ ಮನುಷ್ಯನನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಎಂದು ನೋಡುವುದು ಹೆಚ್ಚು ಸೂಕ್ತ. ಯಾಕೆಂದರೆ ಕೃತಿಯ ಮೂಲ ಸಂಘರ್ಷ ಅಧಿಕಾರ ಮತ್ತು ವಿರೋಧದ ನಡುವಿನ ಸಂಘರ್ಷ ಮಾತ್ರವಲ್ಲ, ಮನುಷ್ಯನೊಳಗಿನ ಮೌಲ್ಯ ಮತ್ತು ಸ್ವಾರ್ಥದ ನಡುವಿನ ಸಂಘರ್ಷವೂ ಹೌದು. ಇದೇ ಕಾರಣದಿಂದ ಪಾತ್ರಗಳ ಪಾಪಪ್ರಜ್ಞೆ, ಅವರ ಬದಲಾವಣೆಯ ಸಾಧ್ಯತೆ ಮತ್ತು ಮಾನವೀಯತೆಯ ಹುಡುಕಾಟಗಳು ಕಥೆಗೆ ಭಾವನಾತ್ಮಕ ಆಳವನ್ನು ನೀಡಿವೆ.

ಒಟ್ಟಿನಲ್ಲಿ, ‘ಸುಳಿ’ ರಾಜಕೀಯವನ್ನು ಬಿಳಿ ಕಪ್ಪು ಬಣ್ಣಗಳಲ್ಲಿ ಚಿತ್ರಿಸುವ ಪ್ರಯತ್ನವನ್ನಷ್ಟೇ ಮಾಡದೇ, ರಾಜಕೀಯ ವ್ಯವಸ್ಥೆಯೊಳಗಿನ ಕತ್ತಲೆ, ಅಧಿಕಾರದ ಹಸಿವು ಮತ್ತು ಪಿತೂರಿಗಳನ್ನು ತೋರಿಸುತ್ತಲೇ ಅದರೊಳಗೆ ಉಳಿದಿರುವ ಮೌಲ್ಯಗಳ ಬೆಳಕನ್ನು ತೋರಿಸಿದೆ. ಹಿಂದಿನ ರಾಜಕೀಯದ ಮೌಲ್ಯಗಳನ್ನು ನೆನಪಿಸಿಕೊಳ್ಳುವಂತೆ ಮಾಡುವುದರ ಜೊತೆಗೆ, ಇಂದಿನ ರಾಜಕೀಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಪ್ರಶ್ನೆಯನ್ನೂ ಓದುಗರ ಮುಂದಿಟ್ಟಿದೆ. ಈ ಕೃತಿಯ ದೊಡ್ಡ ಸಾಧನೆ ಎಂದರೆ “ರಾಜಕೀಯ ಕೆಟ್ಟದ್ದೇ” ಎಂಬ ನಿರಾಶಾವಾದದ ನಿರ್ಣಯಕ್ಕೆ ಬದಲಾಗಿ, “ಕೆಟ್ಟ ರಾಜಕೀಯದ ನಡುವೆಯೂ ಒಳ್ಳೆಯ ರಾಜಕೀಯ ಸಾಧ್ಯವೇ?” ಎಂಬ ಪ್ರಶ್ನೆಯನ್ನು ಎತ್ತಿದೆ. ಅದರ ಉತ್ತರವನ್ನು ಲೇಖಕರು ಉಪದೇಶದ ರೂಪದಲ್ಲಿ ನೀಡುವುದಿಲ್ಲ, ಪಾತ್ರಗಳ ಬದುಕು, ಅವರ ತಪ್ಪುಗಳು, ಸಂಘರ್ಷಗಳು ಮತ್ತು ಪಾಪಪ್ರಜ್ಞೆಗಳ ಮೂಲಕ ಓದುಗರೇ ಕಂಡುಕೊಳ್ಳುವಂತೆ ಮಾಡಿದ್ದಾರೆ. ಆ ಕಾರಣಕ್ಕೆ ‘ಸುಳಿ’ಯನ್ನು ಕೇವಲ ರಾಜಕೀಯ ಕಾದಂಬರಿಯಾಗಿ ಓದುವುದು ಅದರ ವ್ಯಾಪ್ತಿಯನ್ನು ಸೀಮಿತಗೊಳಿಸುವಂತಾಗುತ್ತದೆ. ಇದು ಅಧಿಕಾರದ ಸುಳಿಯಲ್ಲಿ ಸಿಲುಕಿದ ಮನುಷ್ಯನ ನೈತಿಕ ಹುಡುಕಾಟದ ಕತೆ, ರಾಜಕೀಯದ ಅಧಃಪತನದ ದಾಖಲೆಯ ಜೊತೆಗೆ ಮಾನವೀಯತೆಯ ಸಾಧ್ಯತೆಯ ಮೇಲಿನ ಆಶಾವಾದದ ಕೃತಿಯೂ ಹೌದು. 

- ಶ್ರೀರಾಜ್‌ ವಕ್ವಾಡಿ 


ಅಕ್ಷರದಿಂದ ಯಕ್ಷರಂಗದವರೆಗೆ: ರಂಗದ ಬೆಳಕಿನಲ್ಲಿ ಅರಳಿದ ‘ಯಕ್ಷ ತಾರಾ’ ಶಶಾಂಕ್

ಕೆಲವು ಪ್ರತಿಭೆಗಳು ತಮ್ಮ ಕ್ಷೇತ್ರದಲ್ಲಿ ಮಾತ್ರ ಬೆಳಗುವುದಿಲ್ಲ; ಅವು ತಾವು ಹೆಜ್ಜೆಯಿಡುವ ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಬೆಳಕನ್ನು ನೀಡುತ್ತವೆ. ಜ್ಞಾನವನ್ನು ಬೋಧಿಸುವ ಅಧ್ಯಾಪಕನಾಗಿ, ಭಾವನೆಗಳಿಗೆ ಜೀವ ತುಂಬುವ ಕಲಾವಿದನಾಗಿ, ಪರಂಪರಾಗತ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಯಕ್ಷಗಾನ ಸಾಧಕನಾಗಿ ಬೆಳೆದಿರುವ ಶಶಾಂಕ್ ಪಟೇಲ್ ಕೆ.ಜಿ. ಅಂತಹ ಅಪರೂಪದ ಬಹುಮುಖ 'ಪ್ರಭಾಪ್ರತಿಭೆ'. ಯಕ್ಷರಂಗದವನ್ನು ಒಪ್ಪಿ ಅಪ್ಪಿಕೊಂಡ ಅವರ ಯಾನ ಕೇವಲ ಒಬ್ಬ ಕಲಾವಿದನ ಬೆಳವಣಿಗೆಯ ಕಥೆಯಲ್ಲ; ಅದು ಪ್ರತಿಭೆ, ಪರಿಶ್ರಮ, ಪರಂಪರೆ ಮತ್ತು ಬದ್ಧತೆಗಳು ಒಂದಾಗಿ ರೂಪಿಸಿದ ಒಂದು ಅರ್ಥಪೂರ್ಣ ಕಲಾಯಾನ.

ಅಧ್ಯಾಪನದ ಜವಾಬ್ದಾರಿಯೊಂದಿಗೆ ಯಕ್ಷಗಾನದ ಕಲಾಸೇವೆಯನ್ನು ಸಮಾನ ಉತ್ಸಾಹದಿಂದ ಮುನ್ನಡೆಸುತ್ತಿರುವ ಪಟೇಲರು, ಅಕ್ಷರಲೋಕದಿಂದ ಯಕ್ಷರಂಗದವರೆಗೆ ತನ್ನದೇ ಆದ ಹೆಜ್ಜೆಗುರುತು ಮೂಡಿಸಿರುವ ಕಲಾವಿದ.

ಕುಂದಾಪುರದ ಪ್ರತಿಷ್ಠಿತ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕರಾಗಿರುವ ಶಶಾಂಕ್ ಪಟೇಲ್ ಅವರ ವ್ಯಕ್ತಿತ್ವದಲ್ಲಿ ಅಧ್ಯಾಪಕನ ಶಿಸ್ತು, ಸಾಹಿತ್ಯಾಸಕ್ತನ ಸೂಕ್ಷ್ಮತೆ ಮತ್ತು ಕಲಾವಿದನ ಸೃಜನಶೀಲತೆ ಮೂರೂ ಸುಂದರವಾಗಿ ಮಿಳಿತಗೊಂಡಿವೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ವಿದ್ಯಾರ್ಥಿಗಳಿಗೆ ಪಾಠ ಹೇಳುವುದಷ್ಟೇ ಅಲ್ಲ, ಕಲೆಯ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯನ್ನೂ ಬೆಳೆಸುವ ಪ್ರಯತ್ನದ ಹಾದಿಯಲ್ಲಿ ಯಶಸ್ಸು ಕಂಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಕೆಳಮನೆಯ ದಿ. ನಾರಾಯಣ ಕೆ.ಜಿ. ಹಾಗೂ ಶ್ರೀಮತಿ ಗೀತಾ ನಾರಾಯಣ ದಂಪತಿಯ ಪುತ್ರರಾಗಿ 14 ಏಪ್ರಿಲ್ 1986ರಂದು ಜನಿಸಿದ ಶಶಾಂಕ್ ಪಟೇಲ್ ಅವರ ಕಲಾಯಾನದ ಬೇರುಗಳು ಕುಟುಂಬದ ನೆಲದಲ್ಲಿಯೇ ಆಳವಾಗಿ ಬೇರೂರಿವೆ. ಮನೆಯದ್ದೇ ಆದ ‘ಸಾಕೇತ ಕಲಾವಿದರು (ರಿ.), ಕೆಳಮನೆ’ ತಂಡದ ಕಲಾ ವಾತಾವರಣವೇ ಅವರೊಳಗಿನ ಕಲಾವಿದನಿಗೆ ಮೊದಲ ಸ್ಪೂರ್ತಿ. ಬಾಲ್ಯ-ಯೌವನದ ಆ ಸಾಂಸ್ಕೃತಿಕ ಪರಿಸರ, ಮುಂದೆ ಅವರನ್ನು ಯಕ್ಷರಂಗದತ್ತ ಕರೆತಂದಿದೆ.

ಯಕ್ಷಗಾನವೆಂಬುದು ಕೇವಲ ವೇಷಭೂಷಣ, ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯ ಸಂಗಮವಲ್ಲ. ಅದು ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಪ್ರದಾಯ ಮತ್ತು ತಾತ್ವಿಕ ಚಿಂತನೆಯ ಸಾರ್ಥಕ ಸಮನ್ವಯ. ಈ ಕಲೆಯ ಆಳವನ್ನು ಅರಿತುಕೊಂಡ ಶಶಾಂಕ್ ಪಟೇಲ್, ಸಂಜೀವ ಸುವರ್ಣ ಬನ್ನಂಜೆ ಹಾಗೂ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಂತಹ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕರಗತ ಮಾಡಿಕೊಂಡರು. ಗುರುಗಳ ಅನುಭವವನ್ನು ತನ್ನ ಅಧ್ಯಯನಶೀಲ ಮನಸ್ಸಿನೊಂದಿಗೆ ಬೆಸೆದುಕೊಂಡು, ರಂಗದ ಮೇಲೆ ತನ್ನದೇ ಆದ ಅಭಿನಯಶೈಲಿಯನ್ನು ರೂಪಿಸಿಕೊಂಡರು.

ಯಕ್ಷರಂಗದಲ್ಲಿ ಅವರ ಪ್ರತಿಭೆಯ ಮತ್ತೊಂದು ವಿಶೇಷತೆ ಎಂದರೆ ಪಾತ್ರಗಳ ವೈವಿಧ್ಯ. ಅರ್ಜುನ, ಭೀಮ, ರಾವಣ, ಕೌರವ, ರಾಮ, ಹನುಮಂತ, ಕೀಚಕ, ಕೃಷ್ಣ ಮುಂತಾದ ವೈವಿಧ್ಯಮಯ ಪೌರಾಣಿಕ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಶೌರ್ಯ, ರೌದ್ರ, ಕರುಣೆ, ವಾತ್ಸಲ್ಯ, ಭಕ್ತಿ, ಪ್ರೇಮ ಭಿನ್ನ ಭಾವಲೋಕಗಳನ್ನು ಹೊತ್ತ ಪಾತ್ರಗಳನ್ನು ಸಹಜವಾಗಿ ಕಟ್ಟಿಕೊಡುವ ಸಾಮರ್ಥ್ಯ ಅವರ ಅಭಿನಯದ ಪ್ರಮುಖ ಶಕ್ತಿ.

ಅವರ ಮನಸ್ಸಿಗೆ ಹತ್ತಿರವಾದ ಪ್ರಸಂಗಗಳಲ್ಲಿಯೂ ಅವರ ಕಲಾಭಿರುಚಿಯ ವೈವಿಧ್ಯ ಕಾಣುತ್ತದೆ. 'ಗದಾಯುದ್ಧ’, ‘ಕೃಷ್ಣಾರ್ಜುನ ಕಾಳಗ’, ‘ಕಾರ್ತವೀರ್ಯಾರ್ಜುನ’, ‘ಮಾರುತಿ ಪ್ರತಾಪ’ ಹಾಗೂ ‘ಲವಕುಶರ ಕಾಳಗ’ ಮೊದಲಾದ ಪ್ರಸಂಗಗಳು ಅವರ ಅಚ್ಚುಮೆಚ್ಚಿನವು. ಯುದ್ಧ, ವೀರತ್ವ, ಧರ್ಮಸಂಕಟ, ಭಕ್ತಿ ಮತ್ತು ಮಾನವೀಯ ಭಾವನೆಗಳ ಸಂಕೀರ್ಣತೆಯನ್ನು ಒಳಗೊಂಡ ಈ ಪ್ರಸಂಗಗಳು ಅವರ ಅಭಿನಯದ ವ್ಯಾಪ್ತಿ ವಿಸ್ತಾರಕ್ಕೂ ಸೂಕ್ತ ವೇದಿಕೆಯಾಗಿ ಅವಕಾಶ ಕೊಟ್ಟು, ಅವರ ಸಾಮರ್ಥ್ಯವನ್ನು ಯಕ್ಷಪ್ರಿಯರ ಮುಂದೆ ಸಾಬೀತು ಪಡಿಸಿವೆ. 

ಪ್ರತಿಷ್ಠಿತ ಡೇರೆ‌ ಮೇಳಗಳಾದ  ಸಾಲಿಗ್ರಾಮ, ಪೆರ್ಡೂರು ಹಾಗೂ ಅಮೃತೇಶ್ವರಿ, ಹಾಲಾಡಿ, ನೀಲಾವರ ಮೇಳಗಳಲ್ಲಿ, ಅತಿಥಿ ಕಲಾವಿದರಾಗಿ ನಡೆಸಿದ ತಿರುಗಾಟಗಳು ಅವರ ಯಕ್ಷಾನುಭವವನ್ನು ಮತ್ತಷ್ಟು ವಿಸ್ತರಿಸಿವೆ. ಪ್ರತಿಯೊಂದು ಮೇಳವೂ ಅವರಿಗೆ ಹೊಸ ಅನುಭವ, ಹೊಸ ಪಾತ್ರ, ಹೊಸ ಸವಾಲು ಮತ್ತು ಹೊಸ ಕಲಿಕೆಯ ಅವಕಾಶವನ್ನು ನೀಡಿವೆ. ಹೀಗಾಗಿ ಅವರ ಯಕ್ಷಗಾನ ಪಯಣ ಕೇವಲ ರಂಗದ ಮೇಲಿನ ಪ್ರದರ್ಶನಗಳ ಸರಣಿಯಾಗದೆ, ನಿರಂತರ ಕಲಿಕೆ ಮತ್ತು ಆತ್ಮಶೋಧನೆಯ ಪಯಣವಾಗಿದೆ.

ಪಟೇಲರ ಈ ಕಲಾಸಾಧನೆಗೆ ದೊರೆತ ಗೌರವಗಳು ಅವರ ಪರಿಶ್ರಮಕ್ಕೆ ಸಾಕ್ಷಿ. 2017ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಉದಯೋನ್ಮುಖ ಯಕ್ಷ ಪ್ರತಿಭೆ’ ಪುರಸ್ಕಾರ ಅವರಿಗೆ ಲಭಿಸಿದೆ. 2019ರಲ್ಲಿ ‘ಯಕ್ಷ ತಾರಾ ಶಶಾಂಕ’ ಎಂಬ ಬಿರುದಿನೊಂದಿಗೆ ಸಮ್ಮಾನಿಸಲ್ಪಟ್ಟಿರುವುದು ಅವರ ಕಲಾಪ್ರತಿಭೆಗೆ ದೊರೆತ ಮತ್ತೊಂದು ಮಹತ್ವದ ಮಾನ್ಯತೆ. ‘ಸ್ವರ್ಣ ನೂಪುರ ಯಕ್ಷ ಸಾಧಕ ಪ್ರಶಸ್ತಿ–2026’ ಅವರ ಯಕ್ಷಗಾನ ಸಾಧನೆಯ ಕಿರೀಟಕ್ಕೆ ಮತ್ತೊಂದು ಮೌಲ್ಯಯುತ ಗರಿಯನ್ನು ಸೇರಿಸಿದೆ. ಈ ಪ್ರಶಸ್ತಿಗಳು ಕೇವಲ ಒಬ್ಬ ಕಲಾವಿದನಿಗೆ ಸಂದ ಗೌರವವಲ್ಲ, ಯುವಜನತೆಯನ್ನು ಯಕ್ಷಗಾನದತ್ತ ಸೆಳೆಯುತ್ತಿರುವ ಕಲಾಸಾಧಕನಿಗೆ ದೊರೆತ ಮಾನ್ಯತೆಗಳೂ ಹೌದು.

ಯಕ್ಷಗಾನದ ಜೊತೆಗೆ ಅವರ ಕಲಾಪ್ರಯೋಗದ ವ್ಯಾಪ್ತಿ ಸಿನಿಮಾ ಕ್ಷೇತ್ರಕ್ಕೂ ವಿಸ್ತರಿಸಿದೆ. ‘ಮಾಡರ್ನ್ ಮಹಾಭಾರತ’ ಎಂಬ ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿರುವ ಅವರು, ರಂಗಭೂಮಿಯಿಂದ ಬೆಳೆದ ಕಲಾವಿದನೊಬ್ಬ ವಿಭಿನ್ನ ಮಾಧ್ಯಮಗಳಲ್ಲಿಯೂ ತನ್ನ ಪ್ರತಿಭೆಯನ್ನು ಹೇಗೆ ವಿಸ್ತರಿಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

ಅವರ ಕಲಾಸೇವೆಯ ಮತ್ತೊಂದು ಪ್ರಮುಖ ಮಜಲೆಂದರೆ ‘ಆವರ್ತ ಯಕ್ಷ-ವೇದಿಕೆ’. ಕಾಲೇಜಿನ ಈ ವೇದಿಕೆಯ ಸಕ್ರಿಯ ಸಂಘಟಕರಾಗಿ, ನಿರ್ದೇಶಕರಾಗಿ, ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಕೇವಲ ಹಿರಿಯರ ಕಲೆಯಲ್ಲ, ಯುವಜನರ ಕಲ್ಪನೆ, ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಅದು ಶಕ್ತಿಯುತ ಮಾಧ್ಯಮ ಎಂಬ ನಂಬಿಕೆಯನ್ನು ಅವರು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಇನ್ನು, ರಂಗ ಪ್ರವೇಶಿಸುವ ಮುನ್ನ ಪ್ರಸಂಗದ ಆಳವಾದ ಅಧ್ಯಯನ, ಹಿರಿಯ ಕಲಾವಿದರ ಸಲಹೆ ಮತ್ತು ಚೌಕಿ ಚರ್ಚೆಗೆ ಅವರು ನೀಡುವ ಮಹತ್ವ, ಅವರ ಕಲೆಯ ಹಿಂದಿರುವ ಗಂಭೀರ ಅಧ್ಯಯನಶೀಲತೆಯನ್ನು ತೋರಿಸುತ್ತದೆ. ವೇಷ ಧರಿಸುವುದಕ್ಕೂ ಮುನ್ನ ಪಾತ್ರವನ್ನು ಅರಿಯಬೇಕು, ಪಾತ್ರವನ್ನು ನಿರ್ವಹಿಸುವುದಕ್ಕೂ ಮುನ್ನ ಅದರ ಮನಸ್ಸನ್ನು ಪ್ರವೇಶಿಸಬೇಕು ಎಂಬ ಕಲಾವಿದನ ಬದ್ಧತೆ ಅವರಲ್ಲಿ ಕಾಣುತ್ತದೆ. ಇದೇ ಕಾರಣಕ್ಕೆ ಅವರ ಅಭಿನಯ ಕೇವಲ ಪ್ರದರ್ಶನವಾಗಿ ಉಳಿಯದೆ, ಪಾತ್ರದ ಅಂತರಂಗವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವಾಗುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಯಕ್ಷಗಾನದತ್ತ ಮತ್ತೆ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ. ಯಕ್ಷಗಾನ ಕರಾವಳಿಯ ಸಾಂಸ್ಕೃತಿಕ ಗಡಿಗಳನ್ನು ದಾಟಿ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿರುವ ಬೆಳವಣಿಗೆಯನ್ನೂ ಅವರು ಆಶಾವಾದದಿಂದ ನೋಡುತ್ತಾರೆ. ಪರಂಪರೆಯ ಜೊತೆಗೆ ಈ ಕಾಲದ ಅಗತ್ಯಕ್ಕೆ ಬೇಕಾಗುವ ಹಾಗೆ, ಹೊಸ ತಲೆಮಾರಿಗೆ ಅದನ್ನು ಅರ್ಥವಾಗುವ ರೀತಿಯಲ್ಲಿ ಪರಿಚಯಿಸುವುದು ಇಂದಿನ ಕಲಾವಿದರ ಜವಾಬ್ದಾರಿ ಎಂಬ ಚಿಂತನೆ ಅವರ ಕಾರ್ಯದಲ್ಲಿ ಪ್ರತಿಫಲಿಸುತ್ತದೆ. ಅದು ಅವರ ಹೆಚ್ಚುಗಾರಿಕೆಯೂ ಹೌದು. 

ಒಬ್ಬ ಅಧ್ಯಾಪಕನಾಗಿ ಜ್ಞಾನವನ್ನು ಹಂಚಿಕೊಳ್ಳುತ್ತಾ, ಒಬ್ಬ ಕಲಾವಿದನಾಗಿ ಭಾವನೆಗಳನ್ನು ಹಂಚಿಕೊಳ್ಳುತ್ತಾ ಸಾಗುತ್ತಿರುವ ಶಶಾಂಕ್ ಪಟೇಲ್ ಕೆ.ಜಿ. ಅವರ ಪಯಣ ನಿಜಕ್ಕೂ ಅಕ್ಷರದಿಂದ ಅಭಿನಯದವರೆಗೆ, ತರಗತಿಯಿಂದ ಚೌಕಿಯವರೆಗೆ, ಯಕ್ಷರಂಗದವರೆಗೆ ವಿಸ್ತರಿಸಿರುವ ವಿಶಿಷ್ಟ ಕಲಾಯಾನ.

ಅವರ ಸಾಧನೆಯ ಅರ್ಥ ಕೇವಲ ಪಡೆದ ಪ್ರಶಸ್ತಿಗಳ ಸಂಖ್ಯೆಯಲ್ಲಿ ಇಲ್ಲ. ಕಲೆಯನ್ನು ಕಲಿತು, ಕಲೆಯನ್ನು ಬದುಕಿ, ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಬದ್ಧತೆಯಲ್ಲಿದೆ. ‘ಉದಯೋನ್ಮುಖ ಪ್ರತಿಭೆ’ಯಾಗಿ ಆರಂಭವಾದ ಪಯಣ ‘ಯಕ್ಷ ತಾರಾ’ ಬಿರುದಿನ ಮೂಲಕ ಹೊಳೆಯುತ್ತಾ, ‘ಸ್ವರ್ಣ ನೂಪುರ ಯಕ್ಷ ಸಾಧಕ’ ಗೌರವದವರೆಗೆ ತಲುಪಿದೆ. ನಿಜವಾದ ಕಲಾವಿದನಿಗೆ ಪ್ರತಿಯೊಂದು ಹೊಸ ಪಾತ್ರವೂ ಒಂದು ಹೊಸ ಜನ್ಮ, ಪ್ರತಿಯೊಂದು ರಂಗವೂ ಒಂದು ಹೊಸ ಪಾಠ, ಪ್ರತಿಯೊಂದು ಚಪ್ಪಾಳೆಯೂ ಮತ್ತಷ್ಟು ಹೊಣೆಗಾರಿಕೆಯ ನೆನಪು. ಆ ಸ್ಪಷ್ಟ ಅರಿವು ಅವರಿಗಿದೆ. 

ಶಶಾಂಕ್ ಪಟೇಲರದ್ದು, ಅಕ್ಷರಗಳ ನಡುವೆ ಅರಳಿದ ಪ್ರತಿಭೆ, ರಂಗದ ಮೇಲೆ ರೂಪುಗೊಂಡ ವ್ಯಕ್ತಿತ್ವ,

ಯಕ್ಷಗಾನದ ಬೆಳಕಿನಲ್ಲಿ ಮತ್ತಷ್ಟು ಪ್ರಖರವಾಗುತ್ತಿರುವ ಸಾಧನೆ. ಪರಂಪರೆಯ ಮಣ್ಣಿನಲ್ಲಿ ಬೇರುಬಿಟ್ಟು, ಆಧುನಿಕತೆಯ ಆಕಾಶದತ್ತ ರೆಕ್ಕೆ ಚಾಚುತ್ತಿರುವ ಈ ಕಲಾಸಾಧಕನ ಹೆಜ್ಜೆಗಳು ಇನ್ನಷ್ಟು ದೂರ ಸಾಗಲಿ, ಯಕ್ಷರಂಗದ ನಾದದಲ್ಲಿ ಅವರ ಕಲಾಪ್ರತಿಭೆಯ ಪ್ರತಿಧ್ವನಿ ಇನ್ನಷ್ಟು ಕಾಲ ಮೊಳಗಲಿ.

- ಶ್ರೀರಾಜ್‌ ವಕ್ವಾಡಿ 

Belonging: A Journey of Love : ಪುಸ್ತಕ ಇನ್ನೂ ಬಂದಿಲ್ಲ; ಆದರೆ ಅಧಿಕಾರದ ಆತಂಕ ಈಗಾಗಲೇ ಹೊರಬಂದಿದೆಯೇ?

ಒಂದು ಪುಸ್ತಕ ಇನ್ನೂ ಭಾರತೀಯ ಓದುಗರ ಕೈಗೆ ಬಂದಿಲ್ಲ. ಅದರ ಸಂಪೂರ್ಣ ಪಠ್ಯ ಸಾರ್ವಜನಿಕವಾಗಿಲ್ಲ. ಯಾವ ಪುಟದಲ್ಲಿ ಯಾವ ವಾಕ್ಯವಿದೆ ಎಂಬುದೂ ಬಹುತೇಕರಿಗೆ ಗೊತ್ತಿಲ್ಲ. ಆದರೂ ಆ ಪುಸ್ತಕ ಈಗಾಗಲೇ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಕೇವಲ ಒಂದು ಪುಸ್ತಕದ ಪ್ರಕಟಣೆ ಮುಂದೂಡಿಕೆಯ ಕಥೆಯೇ? ಅಥವಾ ಅಧಿಕಾರಕ್ಕೆ ಅಸಹಜವಾಗಿರುವ ರಾಜಕೀಯ ನೆನಪುಗಳು ಮತ್ತು ಪ್ರಶ್ನೆಗಳನ್ನು ಸಾರ್ವಜನಿಕ ವಲಯಕ್ಕೆ ಬರದಂತೆ ತಡೆಯುವ ಮನೋಭಾವದ ಮತ್ತೊಂದು ಉದಾಹರಣೆಯೇ?

ಕಾಂಗ್ರೆಸ್ ನ ಸರ್ವೋಚ್ಚ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಕುರಿತ ವಿವಾದ ಈಗ ಇದೇ ಪ್ರಶ್ನೆಯನ್ನು ಎತ್ತಿದೆ. ಅಮೆರಿಕದ Alfred A. Knopf ಪ್ರಕಟಣಾ ಸಂಸ್ಥೆ ಪುಸ್ತಕವನ್ನು ನವೆಂಬರ್ 10, 2026ರಂದು ಜಾಗತಿಕವಾಗಿ ಪ್ರಕಟಿಸಲು ಸಿದ್ಧವಾಗಿದೆ. ಪ್ರಕಾಶಕರ ಅಧಿಕೃತ ಮಾಹಿತಿಯ ಪ್ರಕಾರ ಪುಸ್ತಕ 544 ಪುಟಗಳದ್ದಾಗಿದ್ದು, ವೈಯಕ್ತಿಕ ಬದುಕಿನ ಜೊತೆಗೆ ಭಾರತದ ರಾಜಕೀಯ-ಸಾಮಾಜಿಕ ಪಯಣವನ್ನೂ ಒಳಗೊಂಡಿದೆ. ಆದರೆ ಭಾರತದಲ್ಲಿ ಪ್ರಕಟಣೆಯ ಹಂತಕ್ಕೆ ಬಂದಾಗ ಪರಿಸ್ಥಿತಿ ಬೇರೆಯಾಗಿದೆ. ವಿವಾದದ ಕೇಂದ್ರದಲ್ಲಿ ಮೂರು ವಿಷಯಗಳಿವೆ. Penguin Random House India ಜೊತೆಗಿನ ಮಾತುಕತೆಯಲ್ಲಿ ಕೆಲವು ರಾಜಕೀಯ ಭಾಗಗಳ ಬಗ್ಗೆ ಸಂಪಾದಕೀಯ ಬದಲಾವಣೆ ಅಥವಾ ತೆಗೆದುಹಾಕುವಿಕೆ ಕುರಿತು ಚರ್ಚೆ ನಡೆದಿತ್ತು. ಕಾಂಗ್ರೆಸ್ ನಾಯಕರ ಆರೋಪದ ಪ್ರಕಾರ ಪ್ರಮುಖವಾಗಿ ನರೇಂದ್ರ ಮೋದಿ, RSS ಮತ್ತು ಚೀನಾ-ಭಾರತ ಗಡಿ ವಿವಾದಕ್ಕೆ ಸಂಬಂಧಿಸಿದ ಭಾಗಗಳು ಚರ್ಚೆಯ ಕೇಂದ್ರದಲ್ಲಿದ್ದವು. ಕೆಲವು ವರದಿಗಳು ಮೋದಿ ಅವರೊಂದಿಗೆ ಸೋನಿಯಾ ಗಾಂಧಿಯವರ ಭೇಟಿಗಳು, ಅವರ ರಾಜಕೀಯ ಮೌಲ್ಯಮಾಪನಗಳು ಹಾಗೂ ಚೀನಾ ಗಡಿ ವಿಚಾರಗಳನ್ನೂ ಉಲ್ಲೇಖಿಸುತ್ತವೆ.  ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬೇಕು.

ಸರ್ಕಾರ ನೇರವಾಗಿ ಪ್ರಕಾಶಕರಿಗೆ ಒತ್ತಡ ಹೇರಿದೆ ಎಂಬುದು ಸಾಬೀತಾದ ಸಂಗತಿಯಲ್ಲ. ಅದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ. Penguin Random House India ಕೂಡ, ಸೋನಿಯಾ ಗಾಂಧಿಯವರು ಸಂಪಾದಕೀಯ ಬದಲಾವಣೆಗಳನ್ನು ಒಪ್ಪದ ಕಾರಣ ತಾವು ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿದಿದ್ದೇವೆ ಎಂಬ ವರದಿಗಳು ನಿಖರವಾಗಿಲ್ಲ ಎಂದು ಹೇಳಿದೆ. ಸಂಸ್ಥೆಯ ಪ್ರಕಾರ, ತಾವು ಭಾರತದಲ್ಲಿ ಈ ಪುಸ್ತಕದ ಪ್ರಕಾಶಕರೇ ಅಲ್ಲ. ಆದರೆ ಇಲ್ಲಿಯೇ ಇನ್ನೊಂದು ಗಂಭೀರ ಪ್ರಶ್ನೆ ಹುಟ್ಟುತ್ತದೆ. ಒಂದೇ ಪುಸ್ತಕವನ್ನು ಜಾಗತಿಕವಾಗಿ ಅದರ ಮೂಲ ರೂಪದಲ್ಲಿ ಪ್ರಕಟಿಸಲು ಸಿದ್ಧವಾಗಿರುವ ಪ್ರಕಾಶನ ಸಮೂಹದ ಭಾರತೀಯ ಘಟಕಕ್ಕೆ ಮಾತ್ರ ಕೆಲವು ರಾಜಕೀಯ ಭಾಗಗಳು ಏಕೆ ಅಸಹಜವಾಗಿ ಕಾಣಿಸಿಕೊಂಡವು? ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಫ್ಯಾಕ್ಟ್ ಚೆಕ್’ ಎಂಬ ಹೆಸರಿನಲ್ಲಿ ಎಷ್ಟು ಸಂಪಾದನೆ?ಯಾಗಿದೆ. ಪ್ರಕಾಶಕರ ಪಾಲಿಗೆ ಫ್ಯಾಕ್ಟ್‌ ಚೆಕ್, ಕಾನೂನು ಅಪಾಯ, ಮಾನಹಾನಿ ಮತ್ತು ಸಂಪಾದಕೀಯ ಹೊಣೆಗಾರಿಕೆಗಳು ಸಹಜವಾದ ವಿಚಾರಗಳು. ಯಾವುದೇ ಪ್ರಕಾಶಕ ಒಂದು ರಾಜಕೀಯ ನಾಯಕರ ಆತ್ಮಕಥೆಯನ್ನು ಪರಿಶೀಲಿಸಬಹುದು. ಆದರೆ ‘ಪರಿಶೀಲನೆ’  ಅಥವಾ ಫ್ಯಾಕ್ಟ್‌ ಚೆಕ್ ಮತ್ತು ‘ರಾಜಕೀಯವಾಗಿ ಅಸಹಜವಾಗಿರುವ ಭಾಗವನ್ನು ತೆಗೆದುಹಾಕುವುದು’ ಎರಡೂ ಒಂದೇ ಸಂಗತಿಯಲ್ಲ. ಒಂದು ಹೇಳಿಕೆ ತಪ್ಪಾಗಿದ್ದರೆ — ತಿದ್ದುಪಡಿ ಮಾಡಬಹುದು.

ಒಂದು ಅಂಕಿಅಂಶ ತಪ್ಪಿದ್ದರೆ — ಸರಿಪಡಿಸಬಹುದು. ಒಂದು ಆರೋಪಕ್ಕೆ ಮೂಲವಿಲ್ಲದಿದ್ದರೆ — ಲೇಖಕರಿಂದ ಸ್ಪಷ್ಟೀಕರಣ ಕೇಳಬಹುದು. ಆದರೆ ಲೇಖಕರ ವೈಯಕ್ತಿಕ ಅನುಭವ, ರಾಜಕೀಯ ಮೌಲ್ಯಮಾಪನ ಅಥವಾ ಸಮಕಾಲೀನ ಸರ್ಕಾರದ ನೀತಿಗಳ ಕುರಿತು ಅವರ ಅಭಿಪ್ರಾಯವೇ ಸಮಸ್ಯೆಯಾಗುತ್ತಿದ್ದರೆ, ಅದು ಸಂಪಾದಕೀಯ ಪ್ರಶ್ನೆಯನ್ನು ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗುತ್ತದೆ. ಇದೇ ಕಾರಣಕ್ಕೆ ಈ ವಿವಾದವನ್ನು ಕೇವಲ ‘ಪ್ರಕಾಶಕ-ಲೇಖಕರ ನಡುವಿನ ಒಪ್ಪಂದದ ಸಮಸ್ಯೆ’ ಎಂದು ಮುಗಿಸುವುದು ಸರಿಯಲ್ಲ. ಇನ್ನು, ಪುಸ್ತಕವನ್ನು ಓದುವ ಮುನ್ನವೇ ಅದರ ಬಗ್ಗೆ ಭಯ ಏಕೆ? ಈ ಪ್ರಕರಣದ ಅತ್ಯಂತ ಕುತೂಹಲಕಾರಿ ಅಂಶ ಇದೇ ಆಗಿದೆ. ಪುಸ್ತಕ ಇನ್ನೂ ಭಾರತದಲ್ಲಿ ಪ್ರಕಟವಾಗಿಲ್ಲ. ಸಂಪೂರ್ಣ ಪಠ್ಯವೂ ಸಾರ್ವಜನಿಕವಾಗಿಲ್ಲ. ಆದರೂ ಅದರಲ್ಲಿರುವ ಕೆಲವು ವಿಚಾರಗಳು ರಾಜಕೀಯ ಚರ್ಚೆಯ ಕೇಂದ್ರವಾಗಿವೆ. ಹಾಗಾದರೆ ಪ್ರಶ್ನೆ ಏನೆಂದ್ರೇ,  ಪುಸ್ತಕದೊಳಗೆ ನಿಜವಾಗಿ ಏನಿದೆ ಎಂಬುದಕ್ಕಿಂತ, ಅದರಲ್ಲಿ ಏನಿರಬಹುದು ಎಂಬ ಭಯವೇ ರಾಜಕೀಯವಾಗಿ ದೊಡ್ಡದಾಗಿದೆಯೇ? ಸೋನಿಯಾ ಗಾಂಧಿ ಭಾರತೀಯ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರವಹಿಸಿದ ವ್ಯಕ್ತಿ. ಪ್ರಧಾನಮಂತ್ರಿಗಳ ಜೊತೆಗಿನ ಅವರ ಸಂವಹನ, ಕಾಂಗ್ರೆಸ್ ಅಧ್ಯಕ್ಷೆಯಾಗಿ ಅವರ ಅನುಭವ, ಯುಪಿಎ ಅವಧಿಯ ರಾಜಕೀಯ ನಿರ್ಧಾರಗಳು, ನರೇಂದ್ರ ಮೋದಿ ಅವರೊಂದಿಗೆ ನಡೆದ ರಾಜಕೀಯ ಮುಖಾಮುಖಿಗಳು, ಚೀನಾ-ಭಾರತ ಸಂಬಂಧಗಳ ಕುರಿತ ಅವರ ದೃಷ್ಟಿಕೋನ — ಇವೆಲ್ಲವೂ ಸಮಕಾಲೀನ ಭಾರತದ ರಾಜಕೀಯ ಇತಿಹಾಸದ ಭಾಗ. ಅದನ್ನು ಅವರು ಹೇಗೆ ನೆನಪಿಸಿಕೊಂಡಿದ್ದಾರೆ ಎಂಬುದನ್ನು ಓದುಗರಿಗೆ ತಿಳಿಯುವ ಅವಕಾಶ ಇರಬೇಕು.

ಓದುಗರು ಅದನ್ನು ನಂಬಬೇಕೆಂದೇನೂ ಇಲ್ಲ. ವಿರೋಧಿಸಬಹುದು. ಖಂಡಿಸಬಹುದು. ತಪ್ಪೆಂದು ಸಾಬೀತುಪಡಿಸಬಹುದು. ಆದರೆ ಓದುವ ಅವಕಾಶವೇ ಇಲ್ಲದಂತೆ ಮಾಡುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಲ್ಲ. ಇನ್ನು, ಇದು, ನರವಣೆ ಪ್ರಕರಣದ ಪ್ರಶ್ನೆಯನ್ನು ನೆನಪಿಸುತ್ತದೆ.  ಇತ್ತೀಚಿನ ಮತ್ತೊಂದು ಬೆಳವಣಿಗೆಯಾದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ *Four Stars of Destiny* ಆತ್ಮಕಥೆಯ ವಿವಾದವೂ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. Penguin Random House India ಆ ಪುಸ್ತಕದ ವಿಶೇಷ ಪ್ರಕಟಣಾ ಹಕ್ಕುಗಳನ್ನು ಹೊಂದಿದ್ದರೂ, 2026ರ ಫೆಬ್ರವರಿಯಲ್ಲಿ ಪುಸ್ತಕ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದು ಸ್ಪಷ್ಟಪಡಿಸಿತು. ಆದರೂ ಅದರ ಮುದ್ರಿತ ಪ್ರತಿಯೊಂದು, ಡಿಜಿಟಲ್ ಆವೃತ್ತಿಯೊಂದರ ಸೋರಿಕೆಯೊಂದೂ ರಾಜಕೀಯ ವಿವಾದಕ್ಕೆ ಕಾರಣವಾಯಿತು. ದೆಹಲಿ ಪೊಲೀಸರು ಕೂಡ ಪುಸ್ತಕದ ಅನಧಿಕೃತ ಪ್ರಸರಣದ ಕುರಿತು ತನಿಖೆ ನಡೆಸಿದರು. ಆ ಪುಸ್ತಕದಲ್ಲಿ 2020ರ ಭಾರತ-ಚೀನಾ ಗಡಿ ಬಿಕ್ಕಟ್ಟು ಸೇರಿದಂತೆ ಸೂಕ್ಷ್ಮ ರಾಷ್ಟ್ರೀಯ ಭದ್ರತಾ ವಿಚಾರಗಳ ಕುರಿತು ವಿವರಗಳಿದ್ದವು ಎಂದು ವರದಿಯಾಗಿತ್ತು. ಇಲ್ಲಿ ಕೂಡ ಗಮನಿಸಬೇಕಾದ ಅಂಶವೆಂದರೆ — ಸಂಪೂರ್ಣ ಪುಸ್ತಕ ಸಾರ್ವಜನಿಕವಾಗಿ ಪ್ರಕಟವಾಗುವುದಕ್ಕೂ ಮುನ್ನವೇ ಅದರ ಕೆಲವು ಭಾಗಗಳು ರಾಜಕೀಯ ಚರ್ಚೆಯ ಕೇಂದ್ರವಾಗಿದ್ದವು. ಇದು ಕಾಕತಾಳೀಯವಾಗಿರಬಹುದು. ಆದರೆ ಎರಡೂ ಪ್ರಕರಣಗಳು ಒಟ್ಟಿಗೆ ಬಂದಾಗ ಒಂದು ದೊಡ್ಡ ಪ್ರಶ್ನೆ ಎದುರಾಗುತ್ತದೆ.  ಭಾರತದಲ್ಲಿ ಅಧಿಕಾರಕ್ಕೆ ಅಸಹಜವಾಗಿರುವ ಪುಸ್ತಕಗಳಿಗೆ ಪ್ರಕಾಶನದ ಹಾದಿ ಏಕೆ ಹೆಚ್ಚು ಕಠಿಣವಾಗುತ್ತಿದೆ? ಪ್ರಜಾಪ್ರಭುತ್ವದಲ್ಲಿ ‘ಅನುಕೂಲಕರ ಸತ್ಯ’ ಮಾತ್ರ ಇರಬೇಕೇ? ಆಡಳಿತದಲ್ಲಿರುವ ಯಾವುದೇ ಸರ್ಕಾರಕ್ಕೂ ಟೀಕೆ ಇಷ್ಟವಾಗುವುದಿಲ್ಲ. ಅದು ಸಹಜ. ಆದರೆ ಪ್ರಜಾಪ್ರಭುತ್ವದ ಸೌಂದರ್ಯವೇನೆಂದರೆ ಸರ್ಕಾರಕ್ಕೆ ಇಷ್ಟವಾಗದ ಮಾತುಗಳೂ ಸಾರ್ವಜನಿಕವಾಗಿ ಕೇಳಿಸಿಕೊಳ್ಳಬೇಕು.

ನರೇಂದ್ರ ಮೋದಿ ಅವರ ಬಗ್ಗೆ ಸೋನಿಯಾ ಗಾಂಧಿಯವರಿಗೆ ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ರಾಜಕೀಯ ದೃಷ್ಟಿಕೋನ. ಅದನ್ನು ಓದುಗರು ಒಪ್ಪಬೇಕೆಂದಿಲ್ಲ. RSS ಕುರಿತು ಅವರು ಟೀಕಿಸಿದ್ದರೆ, RSS ಅದಕ್ಕೆ ಉತ್ತರಿಸಬಹುದು. ಚೀನಾ ಗಡಿ ವಿಚಾರದಲ್ಲಿ ಅವರು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದರೆ, ಸರ್ಕಾರ ತನ್ನ ದಾಖಲೆಗಳನ್ನು ಮುಂದಿಟ್ಟು ಪ್ರತಿವಾದಿಸಬಹುದು. ಪ್ರಜಾಪ್ರಭುತ್ವದಲ್ಲಿ ಪ್ರತಿವಾದಕ್ಕೆ ಉತ್ತರ ಪ್ರತಿವಾದವಾಗಬೇಕು; ಮೌನಕ್ಕೆ ಒತ್ತಡವಾಗಬಾರದು. ಇದು ಕಾಂಗ್ರೆಸ್‌ಗೆ ಮಾತ್ರ ಅನ್ವಯಿಸುವ ತತ್ವವಲ್ಲ. ಬಿಜೆಪಿ, ಎಡಪಂಥ, ಪ್ರಾದೇಶಿಕ ಪಕ್ಷಗಳು — ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ನೋಡಿ,  ಇದು ಸೋನಿಯಾ ಗಾಂಧಿಯವರ ಪುಸ್ತಕದ ಪ್ರಶ್ನೆ ಮಾತ್ರವಲ್ಲ. ಈ ವಿವಾದದ ನಿಜವಾದ ಅರ್ಥವನ್ನು ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ವಿರುದ್ಧದ ರಾಜಕೀಯ ದೃಷ್ಟಿಕೋನದಿಂದ ಮಾತ್ರ ಅಳೆಯಬಾರದು. ಇದು ಭಾರತದ ಪ್ರಕಾಶನ ಸ್ವಾತಂತ್ರ್ಯದ ಪ್ರಶ್ನೆ. ಇಂದು ಒಬ್ಬ ಕಾಂಗ್ರೆಸ್ ನಾಯಕಿಯ ಆತ್ಮಕಥೆಯ ಒಂದು ಭಾಗದ ಬಗ್ಗೆ ಆಕ್ಷೇಪ ಬರುತ್ತದೆ. ನಾಳೆ ಒಬ್ಬ ಮಾಜಿ ಸೇನಾ ಮುಖ್ಯಸ್ಥನ ನೆನಪುಗಳ ಬಗ್ಗೆ ಆಕ್ಷೇಪ ಬರಬಹುದು. ಮತ್ತೊಂದು ದಿನ ಒಬ್ಬ ಪತ್ರಕರ್ತ, ಇತಿಹಾಸಕಾರ, ಸಂಶೋಧಕ ಅಥವಾ ಲೇಖಕ ಸರ್ಕಾರದ ನೀತಿಯನ್ನು ಪ್ರಶ್ನಿಸುವ ಪುಸ್ತಕ ಬರೆಯಬಹುದು. ಪ್ರತಿಯೊಂದು ಬಾರಿ ‘ಸೂಕ್ಷ್ಮ ವಿಚಾರ’, ‘ರಾಷ್ಟ್ರೀಯ ಹಿತ’, ‘ಫ್ಯಾಕ್ಟ್ ಚೆಕ್’, ‘ಕಾನೂನು ಅಪಾಯ’ ಎಂಬ ಪದಗಳ ಹಿಂದೆ ರಾಜಕೀಯ ಅಸಹಜತೆಯನ್ನು ಮರೆಮಾಡಲು ಆರಂಭಿಸಿದರೆ, ಅಂತಿಮವಾಗಿ ನಷ್ಟವಾಗುವುದು ಪುಸ್ತಕಕ್ಕೆ ಅಲ್ಲ — ಸಾರ್ವಜನಿಕ ಸ್ಮೃತಿಗೆ. ಆಳುವವರನ್ನು ಇತಿಹಾಸ ಬರೆಯುವುದಿಲ್ಲ; ಇತಿಹಾಸವನ್ನು ದಾಖಲಿಸುವವರೂ ಬೇಕು. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪ್ರಧಾನಮಂತ್ರಿಗಳು ಬದಲಾಗುತ್ತಾರೆ. ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಅಧಿಕಾರ ಕಳೆದುಕೊಳ್ಳುತ್ತವೆ. ಆದರೆ ಆ ಕಾಲದ ರಾಜಕೀಯ ಘಟನೆಗಳನ್ನು ದಾಖಲಿಸುವ ಆತ್ಮಕಥೆಗಳು, ಪತ್ರಗಳು, ದಿನಚರಿಗಳು, ಸಂದರ್ಶನಗಳು ಮತ್ತು ಪುಸ್ತಕಗಳೇ ಭವಿಷ್ಯದ ಇತಿಹಾಸಕಾರರಿಗೆ ಮೂಲ ದಾಖಲೆಗಳಾಗುತ್ತವೆ. ಅಂತಹ ದಾಖಲೆಗಳಲ್ಲಿ ತಪ್ಪುಗಳಿದ್ದರೆ — ಇತಿಹಾಸಕಾರರು ಪ್ರಶ್ನಿಸಲಿ. ಸುಳ್ಳಿದ್ದರೆ — ದಾಖಲೆಗಳ ಮೂಲಕ ಖಂಡಿಸಲಿ. ಏಕಪಕ್ಷೀಯ ದೃಷ್ಟಿಕೋನವಿದ್ದರೆ — ಮತ್ತೊಂದು ದೃಷ್ಟಿಕೋನ ಪ್ರಕಟವಾಗಲಿ.

ಆದರೆ ಯಾವುದೇ ಪುಸ್ತಕದಲ್ಲಿ ಏನಿದೆ ಎಂಬುದನ್ನು ಓದುಗರೇ ತೀರ್ಮಾನಿಸುವ ಮುನ್ನವೇ ಅದನ್ನು ಮೃದುಗೊಳಿಸುವ ಅಥವಾ ರಾಜಕೀಯವಾಗಿ ಅನುಕೂಲಕರವಾಗಿಸುವ ಪ್ರಯತ್ನ ನಡೆದರೆ, ಅದು ಕೇವಲ ಒಬ್ಬ ಲೇಖಕಿಯ ಧ್ವನಿಯನ್ನು ನಿಯಂತ್ರಿಸುವ ವಿಚಾರವಾಗುವುದಿಲ್ಲ. ಅದು ಸಮಾಜದ ಸಾಮೂಹಿಕ ನೆನಪಿನ ಮೇಲಿನ ಹಸ್ತಕ್ಷೇಪವಾಗುತ್ತದೆ. ಹೀಗಾಗಿ ‘Belonging: A Journey of Love’ವಿವಾದದ ಅಂತಿಮ ಪ್ರಶ್ನೆ ಸೋನಿಯಾ ಗಾಂಧಿ ಏನು ಬರೆದಿದ್ದಾರೆ ಎಂಬುದಲ್ಲ. ಅವರು ಬರೆದದ್ದನ್ನು ಭಾರತೀಯ ಓದುಗರು ಸಂಪೂರ್ಣವಾಗಿ ಓದಿ, ನಂತರ ತೀರ್ಪು ನೀಡುವ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳುತ್ತೇವೆಯೇ? ಅದೇ ನಿಜವಾದ ಪರೀಕ್ಷೆ. ಪುಸ್ತಕವನ್ನು ಪ್ರಕಟಿಸಬೇಕೋ ಬೇಡವೋ ಎಂಬುದಕ್ಕಿಂತ ದೊಡ್ಡ ಪ್ರಶ್ನೆ ಇದು: ಅಧಿಕಾರಕ್ಕೆ ಅಸಹಜವಾದ ಸತ್ಯವನ್ನು ಓದುಗರಿಂದ ದೂರವಿಡುವ ಹಕ್ಕು ಯಾರಿಗಿದೆ? ಪ್ರಜಾಪ್ರಭುತ್ವದಲ್ಲಿ ಉತ್ತರ ಒಂದೇ ಇರಬೇಕು — ಓದುಗರಿಗೆ ಸತ್ಯವನ್ನು ಓದುವ ಹಕ್ಕಿದೆ; ಅಧಿಕಾರಕ್ಕೆ ಅದಕ್ಕೆ ಉತ್ತರಿಸುವ ಹೊಣೆ ಇದೆ.

- ಶ್ರೀರಾಜ್‌ ವಕ್ವಾಡಿ 

ಭಾಗವತರ ಮಾತನ್ನು ಬಿಜೆಪಿ ಒಪ್ಪುತ್ತಾ !? ಬಿಜೆಪಿಯ ಧರ್ಮ ರಾಜಕಾರಣಕ್ಕೆ 'ಸಂಘ'ದ ಅಂಕುಶ !?

ಭಾರತದಲ್ಲಿ ಮುಸ್ಲಿಮರೇ ಇರಬಾರದು’ ಎನ್ನುವವರು ಹಿಂದೂವಲ್ಲ: ಭಾಗವತ್ ಮಾತಿನ ರಾಜಕೀಯ ಸಂದೇಶವೇನು? ಭಾರತದ ರಾಜಕೀಯದಲ್ಲಿ ‘ಹಿಂದುತ್ವ’ ಎಂಬ ಪದವನ್ನು ಬಹಳಷ್ಟು ಬಾರಿ ಮುಸ್ಲಿಂ ವಿರೋಧಿ ರಾಜಕಾರಣದೊಂದಿಗೆ ಸಮೀಕರಿಸಲಾಗುತ್ತದೆ. ಚುನಾವಣಾ ಭಾಷಣಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿನ ರಾಜಕೀಯ ಪ್ರಚಾರದವರೆಗೆ, ಸಾಕಷ್ಟಿವೆ. ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿಕದಲ್ಲಿ ನೀಡಿರುವ ಹೇಳಿಕೆ ರಾಜಕೀಯ ಚರ್ಚೆಗೆ ಹೊಸ ಪ್ರಶ್ನೆಗಳನ್ನು ಎತ್ತಿದೆ.

“ಭಾರತದಲ್ಲಿ ವಾಸಿಸುವ ಹಕ್ಕು ಎಲ್ಲ ಸಮುದಾಯದವರಿಗೂ ಇದೆ. ಮುಸ್ಲಿಮರು ಭಾರತದಲ್ಲಿ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ ಎಂಬ ಭಾಗವತ್ ಅವರ ಮಾತು, ಕೇವಲ ಒಂದು ಹೇಳಿಕೆಯಾಗಿ ನೋಡಿದರೆ ಅದರ ರಾಜಕೀಯ ಮಹತ್ವ ಕಡಿಮೆಯಾಗಬಹುದು. ಆದರೆ ಬಿಜೆಪಿಯ ರಾಜಕೀಯ ಭಾಷೆ ಮತ್ತು ಆರ್‌ಎಸ್‌ಎಸ್‌ನ ವೈಚಾರಿಕ ನಿಲುವಿನ ನಡುವಿನ ಸಂಬಂಧವನ್ನು ಗಮನಿಸಿದಾಗ, ಈ ಹೇಳಿಕೆಯನ್ನು ಗಂಭೀರವಾಗಿ ಚರ್ಚಿಸಬೇಕಾದ ಅಗತ್ಯವಿದೆ. ಭಾರತ ಕೇವಲ ಬಹುಸಂಖ್ಯಾತರ ದೇಶವಲ್ಲ. ಹಲವು ಧರ್ಮಗಳು, ಭಾಷೆಗಳು, ಜಾತಿಗಳು, ಸಂಸ್ಕೃತಿಗಳು ಮತ್ತು ಪರಂಪರೆಗಳು ಒಟ್ಟಾಗಿ ರೂಪಿಸಿರುವ ನಾಗರಿಕತೆ. ಈ ವೈವಿಧ್ಯತೆಯೇ ಭಾರತದ ವಿಶಿಷ್ಟತೆ. ಹೀಗಾಗಿ ‘ಒಂದು ಧರ್ಮದ ಭಾರತ’ ಎಂಬ ಕಲ್ಪನೆಗಿಂತ ‘ವೈವಿಧ್ಯತೆಯೊಳಗಿನ ಏಕತೆ’ ಎಂಬ ಪರಿಕಲ್ಪನೆ ಭಾರತೀಯ ಸಮಾಜದ ವಾಸ್ತವಿಕತೆಗೆ ಹೆಚ್ಚು ಹತ್ತಿರ. ಭಾಗವತ್ ಅವರ ಮಾತಿನಲ್ಲೂ ಇದೇ ಅಂಶ ಸ್ಪಷ್ಟವಾಗುತ್ತದೆ. “ನಾನು, ನನ್ನದು” ಎನ್ನುವ ಮನಸ್ಥಿತಿಯ ಬದಲು “ನಾವು, ನಮ್ಮದು” ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂಬ ಅವರ ಸಂದೇಶ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎಂಬ ರಾಜಕೀಯ ವಿಭಜನೆಯಾಚೆಗೆ ಸಮಾಜವನ್ನು ನೋಡುವ ಪ್ರಯತ್ನವಾಗಿ ಕಾಣುತ್ತದೆ.ಹಾಗಾದರೆ ಬಿಜೆಪಿಯ ರಾಜಕೀಯಕ್ಕೆ ಈ ಸಂದೇಶ ಯಾಕೆ ಮುಖ್ಯ?ನೋಡಿ, ಇಲ್ಲಿಯೇ ಮೂಲ ಪ್ರಶ್ನೆ ಎದುರಾಗುತ್ತದೆ. ಆರ್‌ಎಸ್‌ಎಸ್ ಬಿಜೆಪಿಯ ಮಾತೃಸಂಸ್ಥೆ. ಬಿಜೆಪಿಯ ಅನೇಕ ಪ್ರಮುಖ ನಾಯಕರು ತಮ್ಮ ರಾಜಕೀಯ ಪಯಣವನ್ನು ಸಂಘದ ಶಾಖೆಗಳಿಂದಲೇ ಆರಂಭಿಸಿದ್ದಾರೆ.

ಸಂಘದ ವೈಚಾರಿಕ ಪ್ರಭಾವ ಬಿಜೆಪಿಯ ಮೇಲೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಸಂಘದ ಮುಖ್ಯಸ್ಥರೇ ಮುಸ್ಲಿಮರು ಭಾರತದಲ್ಲಿ ಇರಬಾರದು ಎನ್ನುವ ಬಿತ್ತಿದ ಮನೋಭಾವವನ್ನು ತಿರಸ್ಕರಿಸಿದಾಗ, ಆ ಸಂದೇಶ ಬಿಜೆಪಿಯ ರಾಜಕೀಯ ಭಾಷೆಯಲ್ಲೂ ಪ್ರತಿಫಲಿಸಬೇಕಲ್ಲವೇ?ಚುನಾವಣೆ ಬಂದಾಗ ಮುಸ್ಲಿಂ ಸಮುದಾಯವನ್ನು ರಾಜಕೀಯವಾಗಿ ‘ಇತರ’ರನ್ನಾಗಿ ಚಿತ್ರಿಸುವ ಪ್ರಯತ್ನಗಳು ನಡೆಯುತ್ತಿದ್ದರೆ, ಧಾರ್ಮಿಕ ಧ್ರುವೀಕರಣದ ಮೂಲಕ ಮತಗಳನ್ನು ಕ್ರೋಢೀಕರಿಸುವ ಭಾಷೆ ಕೇಳಿಬರುತ್ತಿದ್ದರೆ, ಭಾಗವತ್ ಅವರ ಈ ಮಾತುಗಳು ಆ ರಾಜಕೀಯಕ್ಕೆ ಒಂದು ಆತ್ಮಪರಿಶೀಲನೆಯ ಅವಕಾಶವನ್ನು ನೀಡುತ್ತವೆ. ಸಂಘದ ಮುಖ್ಯಸ್ಥರ ಮಾತು ಸಂಘದೊಳಗೇ ಉಳಿಯಬೇಕೇ? ಅಥವಾ ಬಿಜೆಪಿಯ ರಾಜಕೀಯದಲ್ಲೂ ಅದರ ಪ್ರತಿಫಲನ ಕಾಣಬೇಕೇ?

ಇದು ಇಂದು ಕೇಳಬೇಕಾದ ಪ್ರಮುಖ ಪ್ರಶ್ನೆ.‘ಹಿಂದೂ ರಾಷ್ಟ್ರ’ದ ಅರ್ಥವೇನು?ಭಾಗವತ್ ಅವರ ಹೇಳಿಕೆಯಲ್ಲಿ ಮತ್ತೊಂದು ಪ್ರಮುಖ ಅಂಶವಿದೆ.ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು?” ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ, “ದೇಶದಲ್ಲಿ ಮುಸ್ಲಿಂ ಇರಬಾರದು ಎನಮದು ಭಾವಿಸಿದರೆ ಆತ ಹಿಂದೂವಲ್ಲ” ಎಂದು ಭಾಗವತ್ ಪ್ರತಿಕ್ರಿಯಿಸಿದ್ದಾರೆ.

ಈ ಮಾತು ‘ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಯನ್ನೇ ಹೊಸ ಚರ್ಚೆಗೆ ಎಳೆಯುತ್ತದೆ.

ಒಂದು ದೇಶವನ್ನು ಹಿಂದೂ ರಾಷ್ಟ್ರ ಎಂದು ಪರಿಗಣಿಸುವುದೆಂದರೆ ಅಲ್ಲಿ ಮುಸ್ಲಿಮರಿಗೆ, ಕ್ರೈಸ್ತರಿಗೆ ಅಥವಾ ಇತರ ಸಮುದಾಯಗಳಿಗೆ ಎರಡನೇ ದರ್ಜೆಯ ಸ್ಥಾನವಿರಬೇಕೆಂದರ್ಥವೇ?ಅಥವಾ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿಯೂ ಭಾರತೀಯರೆಲ್ಲರಿಗೂ ಸಮಾನ ಸ್ಥಾನವಿದೆ ಎಂಬ ಸಂಘದ ವ್ಯಾಖ್ಯಾನವೇ ಮುಖ್ಯವೇ?

ಭಾಗವತ್ ಅವರ ಈ ಮಾತುಗಳನ್ನು ನೋಡಿದರೆ, ಕನಿಷ್ಠ ಅವರ ಸಾರ್ವಜನಿಕ ವ್ಯಾಖ್ಯಾನದಲ್ಲಿ ಎರಡನೆಯ ಅರ್ಥಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಗೋಚರಿಸುತ್ತದೆ.ಆದರೆ ಈ ವಿಚಾರವನ್ನು ಕೇವಲ ಹೇಳಿಕೆಯ ಮಟ್ಟದಲ್ಲಿ ಬಿಟ್ಟುಬಿಡಲು ಸಾಧ್ಯವಿಲ್ಲ. ಅದು ಸಾಮಾಜಿಕ ಮತ್ತು ರಾಜಕೀಯ ನಡವಳಿಕೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದೇ ನಿಜವಾದ ಪರೀಕ್ಷೆ. ಗಮನಿಸಿ, 

ಮುಸ್ಲಿಮರ ವಿರುದ್ಧದ ರಾಜಕೀಯಕ್ಕೆ ಸಂಘವೇ ಕಡಿವಾಣ ಹಾಕಬೇಕೇ?ಭಾರತೀಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯದ ಕುರಿತು ಭಯ, ಅನುಮಾನ ಮತ್ತು ಧ್ರುವೀಕರಣದ ಭಾಷೆ ಹೊಸದಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ, ಚುನಾವಣಾ ಪ್ರಚಾರ ಮತ್ತು ರಾಜಕೀಯ ಚರ್ಚೆಗಳಲ್ಲಿ ಈ ಭಾಷೆ ಹೆಚ್ಚು ಪ್ರಬಲವಾಗಿ ಕಾಣಿಸಿಕೊಂಡಿದೆ ಎಂಬ ಟೀಕೆಗಳಿವೆ.ಇಂತಹ ಸಂದರ್ಭದಲ್ಲಿ ಸಂಘದ ಮುಖ್ಯಸ್ಥರ ಹೇಳಿಕೆ ಒಂದು ರಾಜಕೀಯ ಸಂದೇಶವನ್ನು ನೀಡುತ್ತದೆ. ಹಿಂದುತ್ವ ಎಂದರೆ ಮುಸ್ಲಿಂ ವಿರೋಧವಲ್ಲ. ಹಿಂದುತ್ವ ಎಂದರೆ ಭಾರತೀಯ ಸಮಾಜದ ಎಲ್ಲ ಸಮುದಾಯಗಳನ್ನೂ ಒಳಗೊಂಡ ಒಂದು ಸಾಂಸ್ಕೃತಿಕ ಪರಿಕಲ್ಪನೆ ಎಂಬುದೇ ಸಂಘದ ನಿಲುವಾದರೆ, ಅದನ್ನು ರಾಜಕೀಯ ಕ್ಷೇತ್ರದಲ್ಲೂ ಸ್ಪಷ್ಟವಾಗಿ ಜಾರಿಗೊಳಿಸುವ ಹೊಣೆ ಸಂಘದ ಮೇಲಿದೆ.

ಬಿಜೆಪಿಯು ಕೂಡ ಇದೇ ಪರೀಕ್ಷೆಯನ್ನು ಎದುರಿಸಬೇಕಾಗಿದೆ.

ಮುಸ್ಲಿಂ ಸಮುದಾಯದ ಬಗ್ಗೆ ಅನುಮಾನ ಮೂಡಿಸುವ ಭಾಷೆ ಬಳಸುವ ರಾಜಕಾರಣಿಗಳಿಗೆ ಪಕ್ಷದೊಳಗಿಂದಲೇ ತಡೆ ಸಿಗುತ್ತದೆಯೇ? ಚುನಾವಣಾ ಲಾಭಕ್ಕಾಗಿ ಧಾರ್ಮಿಕ ಧ್ರುವೀಕರಣವನ್ನು ಬಳಸುವ ಪ್ರವೃತ್ತಿಗೆ ಪಕ್ಷ ಕಡಿವಾಣ ಹಾಕುತ್ತದೆಯೇ? ಅಲ್ಪಸಂಖ್ಯಾತರ ನಾಗರಿಕ ಹಕ್ಕುಗಳ ಬಗ್ಗೆ ಸಮಾನ ನಿಲುವು ವ್ಯಕ್ತವಾಗುತ್ತದೆಯೇ?

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅಥವಾ ಸಂಘದ್ದು ದೇಶದಲ್ಲೊಂದು, ವಿದೇಶದಲ್ಲೊಂದು ಸಿದ್ಧಾಂತವೇ ಎನ್ನುವುದನ್ನಾದರೂ ತಿಳಿಸಬೇಕಿದೆ. ಇನ್ನು, ಒಂದು ಹೇಳಿಕೆಯಿಂದ ರಾಜಕೀಯ ಬದಲಾಗುವುದಿಲ್ಲ.ಆದರೆ ಇಲ್ಲಿ ಮತ್ತೊಂದು ಎಚ್ಚರಿಕೆಯೂ ಅಗತ್ಯ.ಮೋಹನ್ ಭಾಗವತ್ ಅವರ ಒಂದು ಹೇಳಿಕೆಯನ್ನು ಆಧರಿಸಿ ಸಂಘ ಅಥವಾ ಬಿಜೆಪಿಯ ಸಂಪೂರ್ಣ ರಾಜಕೀಯವನ್ನು ‘ಸಮಾಜಮುಖಿ’ ಎಂದು ಘೋಷಿಸುವುದಕ್ಕರ ಆಗುವುದಿಲ್ಲವೋ, ಅದೇ ರೀತಿ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದೂ ಸರಿಯಲ್ಲ.

ರಾಜಕೀಯದಲ್ಲಿ ಮಾತಿಗಿಂತ ನಡೆ ಮುಖ್ಯ.ಮುಸ್ಲಿಮರಿಗೂ ಭಾರತದಲ್ಲಿ ಸಮಾನ ಹಕ್ಕಿದೆ ಎಂದು ಹೇಳುವುದು ಒಂದು ಸಂಗತಿ. ಆ ಸಮಾನತೆಯ ಭಾವನೆ ಸಮಾಜದ ಪ್ರತಿಯೊಂದು ಹಂತದಲ್ಲೂ ಪ್ರತಿಫಲಿಸುವಂತೆ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಪ್ರೇರೇಪಿಸುವುದು ಮತ್ತೊಂದು ಸಂಗತಿ.ಭಾಗವತ್ ಅವರ ಹೇಳಿಕೆಯ ನಿಜವಾದ ಮೌಲ್ಯ, ಮುಂದಿನ ದಿನಗಳಲ್ಲಿ ಸಂಘ ಮತ್ತು ಬಿಜೆಪಿಯ ರಾಜಕೀಯ ಭಾಷೆಯಲ್ಲಿ ಅದು ಎಷ್ಟು ಪ್ರಮಾಣದಲ್ಲಿ ಪ್ರತಿಫಲಿಸುತ್ತದೆ ಎಂಬುದರಿಂದ ನಿರ್ಧಾರವಾಗಲಿದೆ. ಇಮ್ನು, ಹಿಂದುತ್ವದ ರಾಜಕೀಯವನ್ನು ಟೀಕಿಸುವುದು ಪ್ರಜಾಪ್ರಭುತ್ವದಲ್ಲಿ ಸಹಜ ಮತ್ತು ಅಗತ್ಯ. ಆದರೆ ಸಂಘದ ಮುಖ್ಯಸ್ಥರು ಮುಸ್ಲಿಮರನ್ನು ಭಾರತದಿಂದ ಹೊರಗಿಡುವ ಮನೋಭಾವವನ್ನು ತಿರಸ್ಕರಿಸಿದಾಗ, ಅದನ್ನೂ ಪ್ರಾಮಾಣಿಕವಾಗಿ ವರದಿ ಮಾಡುವ ಧೈರ್ಯ ಇರಬೇಕಲ್ಲವೇ? ಸಂಘದ ಪ್ರತಿಯೊಂದು ಹೇಳಿಕೆಯಲ್ಲೂ ‘ಮುಸ್ಲಿಂ ವಿರೋಧ’ ಹುಡುಕುವುದು ಎಷ್ಟು ತಪ್ಪೋ, ಅದೇ ರೀತಿ ಸಂಘದ ಯಾವುದೇ ಹೇಳಿಕೆಯನ್ನು ಪ್ರಶ್ನಿಸದೆ ಸ್ವೀಕರಿಸುವುದೂ ಅಷ್ಟೇ ತಪ್ಪು. ಮಾಧ್ಯಮದ ಕೆಲಸ ಒಂದು ಪಕ್ಷದ ಪರ ಅಥವಾ ವಿರುದ್ಧ ನಿಲ್ಲುವುದಲ್ಲ. ರಾಜಕೀಯ ಸಂಘಟನೆಗಳ ಮಾತು ಮತ್ತು ನಡೆ ನಡುವಿನ ಅಂತರವನ್ನು ಜನರ ಮುಂದೆ ಇಡುವುದೇ ಮಾಧ್ಯಮದ ನಿಜವಾದ ಜವಾಬ್ದಾರಿ.

ಭಾಗವತ್ ಅವರ ಈ ಮಾತುಗಳನ್ನು ಬಿಜೆಪಿಯ ಮೇಲೆ ಒತ್ತಡ ಹೇರುವ ರಾಜಕೀಯ ಪ್ರಶ್ನೆಯನ್ನಾಗಿ ಮಾಡುವುದು ಅಗತ್ಯ. ಏಕೆಂದರೆ ಸಂಘದ ಮುಖ್ಯಸ್ಥರು ‘ಮುಸ್ಲಿಮರು ಭಾರತದಲ್ಲಿ ಇರಬಾರದು’ ಎನ್ನುವ ಮನೋಭಾವವನ್ನು ಹಿಂದುತ್ವದ ಭಾಗವಲ್ಲ ಎಂದು ಹೇಳುತ್ತಿದ್ದರೆ, ಅದೇ ಸಂಘದ ರಾಜಕೀಯ ಪ್ರಭಾವವಿರುವ ಪಕ್ಷದ ನಾಯಕರೂ ಅದೇ ನಿಲುವನ್ನು ತಮ್ಮ ರಾಜಕೀಯ ಭಾಷೆಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಬೇಕಾಗಿದೆ. ಇನ್ನಾದರೂ, ಪಾಠ ಕಲಿಯುತ್ತದೆಯೇ ಬಿಜೆಪಿ?

ಕೊನೆಗೆ ಉಳಿಯುವುದು ಈ ಒಂದೇ ಪ್ರಶ್ನೆ.“ಮುಸ್ಲಿಮರೇ ಭಾರತದಲ್ಲಿ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲಎನ್ನುವ ಮಾತು ಕೇವಲ ಅಮೆರಿಕದ ವೇದಿಕೆಯಲ್ಲಿ ಮೊಳಗಿದ ಒಂದು ಹೇಳಿಕೆಯಾಗಿ ಉಳಿಯುತ್ತದೆಯೇ? ಅಥವಾ ಭಾರತದ ರಾಜಕೀಯದಲ್ಲೂ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆಯೇ?

ಬಿಜೆಪಿಯು ಈ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ, ಅದರ ರಾಜಕೀಯ ಭಾಷೆಯಲ್ಲಿ ಒಂದು ಮಹತ್ವದ ಬದಲಾವಣೆಗೆ ಇದು ಆರಂಭವಾಗಬಹುದು. ಹಿಂದುತ್ವವನ್ನು ಮುಸ್ಲಿಂ ವಿರೋಧಿ ರಾಜಕಾರಣದಿಂದ ಬೇರ್ಪಡಿಸುವ ಪ್ರಯತ್ನವನ್ನು ಸಂಘ ನಿಜವಾಗಿಯೂ ಮಾಡುತ್ತಿದ್ದರೆ, ಆ ಪ್ರಯತ್ನದ ಮೊದಲ ಹೆಜ್ಜೆ ಮುಸ್ಲಿಮರನ್ನು ರಾಜಕೀಯ ‘ವಿರೋಧಿ ಸಮುದಾಯ’ವಾಗಿ ನೋಡುವ ಪ್ರವೃತ್ತಿಯನ್ನು ತಿರಸ್ಕರಿಸುವುದಾಗಿರಬೇಕು. ಭಾರತದಲ್ಲಿ ಯಾರೂ ‘ಅತಿಥಿ’ಯಲ್ಲ. ಈ ನೆಲದಲ್ಲಿ ಹುಟ್ಟಿ, ಬೆಳೆದು, ಬದುಕುತ್ತಿರುವ ಪ್ರತಿಯೊಬ್ಬರೂ ಈ ದೇಶದ ನಾಗರಿಕರು.ಆದ್ದರಿಂದ ಪ್ರಶ್ನೆ ಕೇವಲ “ಭಾಗವತ್ ಏನು ಹೇಳಿದರು?”ಎನ್ನುವುದಲ್ಲ.“ಅವರ ಮಾತನ್ನು ಬಿಜೆಪಿಯ ರಾಜಕೀಯ ಎಷ್ಟು ದಿನಗಳಲ್ಲಿ ತನ್ನ ನಡವಳಿಕೆಯಲ್ಲಿ ತೋರಿಸಲಿದ ? ಎನ್ನುವುದಾಗಿದೆ. ಕಾದು ನೋಡೋಣ.

- ಶ್ರೀರಾಜ್‌ ವಕ್ವಾಡಿ 

ಕಸ್ತೂರಿ ರಂಗನ್‌ ವರದಿ : Cultural landscape & Natural landscape

ಪಶ್ಚಿಮ ಘಟ್ಟದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕೇಂದ್ರ ಸರ್ಕಾರ 2026ರ ಜುಲೈ 27ರಂದು ಪಶ್ಚಿಮ ಘಟ್ಟದ 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಉದ್ದೇಶದೊಂದಿಗೆ ಏಳನೇ ಕರಡು ಅಧಿಸೂಚನೆ ಹೊರಡಿಸಿದೆ. ಹಿಂದಿನ ಆರು ಕರಡು ಅಧಿಸೂಚನೆಗಳು ಅಂತಿಮ ಅಧಿಸೂಚನೆಯಾಗಿ ರೂಪುಗೊಳ್ಳದೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಕರಡು ಬಂದಿದೆ. ಕರ್ನಾಟಕದ ಪಾಲಿಗೆ 20,668 ಚದರ ಕಿಲೋಮೀಟರ್ ಪ್ರದೇಶ, 10 ಜಿಲ್ಲೆಗಳು ಮತ್ತು 1,449 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಹಾಗಾದ್ರೆ ESA ಅನುಷ್ಠಾನದಿಂದ ಕೃಷಿಕರ ಬದುಕಿಗೆ ಸಮಸ್ಯೆಯೇ!? ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಆಗುತ್ತಾ!?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವ ರಾಜ್ಯದ ನಿಲುವನ್ನು ಪುನರುಚ್ಚರಿಸಿರುವ ಸರ್ಕಾರ, ಈ ವಿಚಾರದಲ್ಲಿ ಕೇಂದ್ರದೊಂದಿಗೆ ಕಾನೂನು ಮತ್ತು ರಾಜಕೀಯ ಹೋರಾಟ ನಡೆಸುವುದಾಗಿ ಹೇಳಿದೆ. ಒಂದು ದಿನದ ವಿಶೇಷ ಅಧಿವೇಶನ ಕರೆದು ಪಕ್ಷಾತೀತ ಚರ್ಚೆ ನಡೆಸುವ ಮುಖ್ಯಮಂತ್ರಿಯ ಹೇಳಿಕೆಯೂ ಇದೇ ಸಂದರ್ಭದಲ್ಲಿ ಬಂದಿದೆ. ಆದರೆ ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ: ಕರ್ನಾಟಕ ಕಸ್ತೂರಿರಂಗನ್ ವರದಿಯನ್ನು ಏಕೆ ವಿರೋಧಿಸುತ್ತಿದೆ? ಮತ್ತು ಅದಕ್ಕಿಂತ ದೊಡ್ಡ ಪ್ರಶ್ನೆ ಏನೆಂದರೇ, ಪಶ್ಚಿಮ ಘಟ್ಟವನ್ನು ರಕ್ಷಿಸುವ ಜವಾಬ್ದಾರಿ ಯಾರದ್ದು? ಕೇಂದ್ರದ್ದೇ? ರಾಜ್ಯದ್ದೇ? ಅಲ್ಲಿನ ಜನರದ್ದೇ? ಅಥವಾ ಎಲ್ಲರದ್ದೂ? ಮಾಧವ ಗಾಡ್ಗಿಲ್‌ ವರದಿಯಿಂದ ಕಸ್ತೂರಿ ರಂಗನ್‌  ವರದಿಯವವರೆಗೆ  ವಿವಾದದ ಬೇರು ಹಬ್ಬಿದೆ.  ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಯ ಕುರಿತು ಚರ್ಚೆ ಇಂದಿನದಲ್ಲ. 2011ರಲ್ಲಿ ಮಾಧವ ಗಾಡ್ಗಿಲ್ ನೇತೃತ್ವದ Western Ghats Ecology Expert Panel ವರದಿ ನೀಡಿತ್ತು.

 ಗಾಡ್ಗಿಲ್ ಸಮಿತಿ ಪಶ್ಚಿಮ ಘಟ್ಟದ ಬಹುಪಾಲು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಅದನ್ನು ವಿವಿಧ ಪರಿಸರ ಸಂವೇದನಾಶೀಲ ವಲಯಗಳಾಗಿ ವಿಭಜಿಸಿ, ಸ್ಥಳೀಯ ಸಮುದಾಯಗಳಿಗೆ ಹೆಚ್ಚಿನ ನಿರ್ಧಾರಾಧಿಕಾರ ನೀಡಬೇಕು ಎಂದು ಪ್ರತಿಪಾದಿಸಿತ್ತು. ಆ ವರದಿ ಅಭಿವೃದ್ಧಿ ಯೋಜನೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುತ್ತದೆ ಎಂಬ ಕಾರಣಕ್ಕೆ ರಾಜ್ಯಗಳು ಮತ್ತು ಅಭಿವೃದ್ಧಿ ಪರ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅದಾದ ನಂತರ ಕಸ್ತೂರಿರಂಗನ್ ನೇತೃತ್ವದ ಹೈ-ಲೆವೆಲ್ ವರ್ಕಿಂಗ್ ಗ್ರೂಪ್ ರಚಿಸಲಾಯಿತು. ಅದು ಗಾಡ್ಗಿಲ್ ವರದಿಗಿಂತ ಭಿನ್ನವಾದ ವಿಧಾನವನ್ನು ಅನುಸರಿಸಿತು. ಪಶ್ಚಿಮ ಘಟ್ಟದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಮಾನವ ವಸತಿ, ಕೃಷಿ, ತೋಟಗಾರಿಕೆ ಇರುವ ಪ್ರದೇಶಗಳನ್ನು ‘cultural landscape’ ಎಂದು ಮತ್ತು ಹೆಚ್ಚಿನ ನೈಸರ್ಗಿಕ ಮಹತ್ವ ಹೊಂದಿರುವ ಪ್ರದೇಶಗಳನ್ನು ‘natural landscape’ ಎಂದು ಗುರುತಿಸಿತು. ಸುಮಾರು 37 ಪ್ರತಿಶತ ಅಥವಾ 60,000 ಚದರ ಕಿಲೋಮೀಟರ್ ಪ್ರದೇಶವನ್ನು ESA ವ್ಯಾಪ್ತಿಗೆ ತರಲು ಶಿಫಾರಸು ಮಾಡಿತು. ಅಂದರೆ ಕಸ್ತೂರಿರಂಗನ್ ವರದಿ ಗಾಡ್ಗಿಲ್ ವರದಿಗಿಂತಲೂ ‘ಸೌಮ್ಯ’ವಾದ ಮಾದರಿಯಾಗಿದೆ ಎಂಬ ವಾದಕ್ಕೆ ಆಧಾರವಿದೆ. ಹಾಗಿದ್ದರೆ ಕರ್ನಾಟಕಕ್ಕೆ ಅದರ ಮೇಲೂ ಏಕೆ ಅಸಮಾಧಾನ? ಸಮಸ್ಯೆ ವರದಿಯಲ್ಲೇ ಇದೆಯೇ, ಅದರ ಅನುಷ್ಠಾನದ ವಿಧಾನದಲ್ಲೇ ಇದೆಯೇ? ಕರ್ನಾಟಕ ಸರ್ಕಾರದ ಆತಂಕವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದಲ್ಲಿ ಕೃಷಿ, ಕಾಫಿ, ಅಡಿಕೆ, ಏಲಕ್ಕಿ, ಮೆಣಸು, ತೆಂಗು, ಬಾಳೆ ಸೇರಿದಂತೆ ಹಲವು ಕೃಷಿ–ತೋಟಗಾರಿಕಾ ಚಟುವಟಿಕೆಗಳು ಜನರ ಜೀವನೋಪಾಯದ ಭಾಗವಾಗಿವೆ. ಸಾವಿರಾರು ಕುಟುಂಬಗಳು ಪೀಳಿಗೆಗಳಿಂದ ಅಲ್ಲಿ ವಾಸಿಸುತ್ತಿವೆ. ಹೊಸ ನಿಯಮ ಬಂದಾಗ ‘ESA’ ಎಂಬ ಪದವೇ ಜನರಲ್ಲಿ ಭಯ ಹುಟ್ಟಿಸುತ್ತದೆ. ಆದರೆ ಇಲ್ಲಿ ಒಂದು ಪ್ರಮುಖ ರಾಜಕೀಯ ಗೊಂದಲವನ್ನು ನಿವಾರಿಸಬೇಕಿದೆ. ESA ಘೋಷಣೆ ಎಂದರೆ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದು ಎಂದಲ್ಲ. 

ಪ್ರಸ್ತುತ ಕರಡು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ಸಾಮಾನ್ಯವಾಗಿ ನಿಷೇಧಿಸುವುದಿಲ್ಲ. ಬದಲಾಗಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಕೆಲವು ಕೈಗಾರಿಕಾ ಚಟುವಟಿಕೆಗಳು, ಉಷ್ಣ ವಿದ್ಯುತ್ ಯೋಜನೆಗಳು ಮತ್ತು ದೊಡ್ಡ ಪ್ರಮಾಣದ ನಿರ್ಮಾಣ–ಟೌನ್‌ಶಿಪ್ ಚಟುವಟಿಕೆಗಳ ಮೇಲೆ ನಿರ್ಬಂಧ ಅಥವಾ ನಿಯಂತ್ರಣ ವಿಧಿಸುವ ಉದ್ದೇಶ ಹೊಂದಿದೆ. ಹೀಗಾಗಿ ‘ESA ಬಂದರೆ ರೈತರೆಲ್ಲ ಬೀದಿಗೆ ಬರುತ್ತಾರೆ’ ಎಂಬ ಸರಳ ರಾಜಕೀಯ ಪ್ರಚಾರವೂ ತಪ್ಪು. ಅದೇ ರೀತಿ ‘ESA ಬಂದರೆ ರೈತರ ಬದುಕಿಗೆ ಯಾವುದೇ ತೊಂದರೆಯೇ ಇಲ್ಲ’ ಎನ್ನುವುದೂ ಸರಿಯಾದ ವಾದವಲ್ಲ. ಯಾಕೆಂದರೆ ಭೂ ಬಳಕೆ, ರಸ್ತೆ, ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ, ಸಣ್ಣ ಕೈಗಾರಿಕೆ, ಮೂಲಸೌಕರ್ಯ, ಗ್ರಾಮೀಣ ವಸತಿ ವಿಸ್ತರಣೆ ಮುಂತಾದ ಪ್ರಶ್ನೆಗಳು ಮುಂದಿನ ಹಂತದಲ್ಲಿ ಸ್ಥಳೀಯ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೊಂದಿವೆ. ಹೀಗಾಗಿ ನಿಜವಾದ ಚರ್ಚೆ ‘ESA ಬೇಕೋ ಬೇಡವೋ?’ ಎಂಬುದಲ್ಲ. ನಿಜವಾದ ಪ್ರಶ್ನೆ ಏನೆಂದರೇ,  ‘ಯಾವ ಪ್ರದೇಶ ESA ಆಗಬೇಕು? ಯಾವ ಚಟುವಟಿಕೆಗೆ ಎಷ್ಟು ನಿಯಂತ್ರಣ? ನಿರ್ಧಾರ ತೆಗೆದುಕೊಳ್ಳುವವರು ಯಾರು? ಸ್ಥಳೀಯ ಜನರ ಹಕ್ಕುಗಳೇನು?’ ಪರಿಸರವನ್ನು ವಿರೋಧಿಸುವ ಅಭಿವೃದ್ಧಿ ಯಾರಿಗಾಗಿ? ಇಲ್ಲಿ ಎಡರಂಗದ ದೃಷ್ಟಿಕೋನದಿಂದ ಅತ್ಯಂತ ಮುಖ್ಯವಾದ ಪ್ರಶ್ನೆ ಎದ್ದು ಬರುತ್ತದೆ. ಅಭಿವೃದ್ಧಿ ಎಂದರೆ ಏನು? ಒಂದು ಬೆಟ್ಟವನ್ನು ಕಡಿದು ರಸ್ತೆ ಮಾಡುವುದು ಅಭಿವೃದ್ಧಿಯೇ? ಅರಣ್ಯವನ್ನು ತೆರವುಗೊಳಿಸಿ ರೆಸಾರ್ಟ್ ಕಟ್ಟುವುದು ಅಭಿವೃದ್ಧಿಯೇ? ಗಣಿಗಾರಿಕೆ ಮೂಲಕ ಬೆಟ್ಟವನ್ನು ಖಾಲಿ ಮಾಡುವುದು ಅಭಿವೃದ್ಧಿಯೇ? ನದಿಯ ಮೂಲ ಪ್ರದೇಶವನ್ನು ದುರ್ಬಲಗೊಳಿಸಿ ಯೋಜನೆಗಳನ್ನು ರೂಪಿಸುವುದು ಅಭಿವೃದ್ಧಿಯೇ? ಅಥವಾ ಅಲ್ಲಿನ ಜನರ ಜೀವನಮಟ್ಟ ಸುಧಾರಿಸುವುದು, ಕೃಷಿಗೆ ಮಾರುಕಟ್ಟೆ ಕಲ್ಪಿಸುವುದು, ಸಾರ್ವಜನಿಕ ಆರೋಗ್ಯ–ಶಿಕ್ಷಣ ವ್ಯವಸ್ಥೆ ಬಲಪಡಿಸುವುದು, ಪರಿಸರವನ್ನು ಉಳಿಸುವುದು ಮತ್ತು ಮುಂದಿನ ಪೀಳಿಗೆಗೂ ಸಂಪನ್ಮೂಲ ಉಳಿಸುವುದೇ ನಿಜವಾದ ಅಭಿವೃದ್ಧಿಯೇ? ಈ ಪ್ರಶ್ನೆಯನ್ನು ಕೇಳದೆ ಕಸ್ತೂರಿರಂಗನ್ ವರದಿಯನ್ನು ಕೇವಲ ‘ರೈತ ವಿರೋಧಿ’ ಎಂದು ಕರೆಯುವುದು ಪರಿಸರ ರಾಜಕೀಯವನ್ನು ಅತ್ಯಂತ ಸರಳೀಕರಿಸುವುದು. ಯಾಕೆಂದರೆ ಪಶ್ಚಿಮ ಘಟ್ಟದ ಪರಿಸರ ನಾಶದ ಹೊರೆ ಕೇವಲ ಅಲ್ಲಿನ ಜನರ ಮೇಲೆಯೇ ಬೀಳುವುದಿಲ್ಲ. ಪಶ್ಚಿಮ ಘಟ್ಟ ನಾಶವಾದರೆ ಅದರ ಬೆಲೆ ಇಡೀ ಕರ್ನಾಟಕ ಮತ್ತು ದಕ್ಷಿಣ ಭಾರತದ ಜನರು ಕಟ್ಟಬೇಕಾಗುತ್ತದೆ.ನೀರಿನ ಭದ್ರತೆ, ನದಿಗಳ ಹರಿವು, ಮಣ್ಣಿನ ಸಂರಕ್ಷಣೆ, ಜೀವವೈವಿಧ್ಯ, ಮಳೆ ಮಾದರಿ, ಪ್ರವಾಹ ಮತ್ತು ಭೂಕುಸಿತದ ಅಪಾಯ—ಇವೆಲ್ಲವೂ ಪಶ್ಚಿಮ ಘಟ್ಟದ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ.

ರಾಜ್ಯಸಭೆಯ ಸಮಿತಿಯೂ ಹಿಂದೆ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ವಿಳಂಬವಾಗುತ್ತಿರುವ ಸಂದರ್ಭದಲ್ಲಿ ಗಣಿಗಾರಿಕೆ, ಅರಣ್ಯ ನಾಶ ಮತ್ತು ದೊಡ್ಡ ಪ್ರಮಾಣದ ನಿರ್ಮಾಣ ಚಟುವಟಿಕೆಗಳು ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಎಚ್ಚರಿಸಿತ್ತು.  ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನೇ ಬಲಿಪಶು ಮಾಡಬಹುದೇ? ಇಲ್ಲ.  ಪಶ್ಚಿಮ ಘಟ್ಟವನ್ನು ಉಳಿಸುವ ಹೆಸರಿನಲ್ಲಿ ಪೀಳಿಗೆಗಳಿಂದ ಅಲ್ಲಿ ಬದುಕುತ್ತಿರುವ ರೈತನನ್ನು ಅಪರಾಧಿಯನ್ನಾಗಿ ಮಾಡಲಾಗದು. ಪರಿಸರ ನಾಶಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುವ ಗಣಿಗಾರಿಕೆ, ಅಕ್ರಮ ಭೂ ಪರಿವರ್ತನೆ, ಅತಿದೊಡ್ಡ ನಿರ್ಮಾಣ ಯೋಜನೆಗಳು ಮತ್ತು ನಿಯಂತ್ರಣರಹಿತ ಪ್ರವಾಸೋದ್ಯಮವನ್ನು ಪ್ರಶ್ನಿಸದೆ, ಸಣ್ಣ ರೈತನ ಕೃಷಿಯನ್ನೇ ಪರಿಸರದ ಮುಖ್ಯ ಶತ್ರುವೆಂದು ಬಿಂಬಿಸುವುದು ಸಾಮಾಜಿಕ ನ್ಯಾಯವಲ್ಲ. ಪರಿಸರ ಸಂರಕ್ಷಣೆಯ ಮೊದಲ ಬಲಿಯಾಗಬೇಕಾದವರು ದುರ್ಬಲರು ಅಲ್ಲ; ಪರಿಸರವನ್ನು ವ್ಯಾಪಾರೀಕರಣದ ಸರಕಾಗಿ ನೋಡುವ ದೊಡ್ಡ ಬಂಡವಾಳದ ಮಾದರಿಯಾಗಬೇಕು. ಇದೇ ಸಂದರ್ಭದಲ್ಲಿ ಸ್ಥಳೀಯ ಸಮುದಾಯಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ನಿಜವಾದ ಸ್ಥಾನ ನೀಡುವುದು ಅತ್ಯಗತ್ಯ. ಗಾಡ್ಗಿಲ್ ವರದಿಯ ಪ್ರಮುಖ ಬಲಗಳಲ್ಲಿ ಒಂದಾಗಿದ್ದ ಸ್ಥಳೀಯ ಆಡಳಿತ ಮತ್ತು ಗ್ರಾಮಸಭೆಗಳ ಪಾತ್ರದ ಪ್ರಶ್ನೆ ಇಲ್ಲಿಯೂ ಪ್ರಸ್ತುತವಾಗುತ್ತದೆ. ಗಮನಿಸಿ, ಕೇಂದ್ರ–ರಾಜ್ಯ ಸಂಘರ್ಷದ ಮತ್ತೊಂದು ಮುಖ. ಕರ್ನಾಟಕ ಸರ್ಕಾರದ ವಿರೋಧದಲ್ಲಿ ಕೇವಲ ಪರಿಸರದ ಪ್ರಶ್ನೆಯಿಲ್ಲ. ಇಲ್ಲಿ ಕೇಂದ್ರ–ರಾಜ್ಯ ಸಂಬಂಧದ ಪ್ರಶ್ನೆಯೂ ಇದೆ. ಪಶ್ಚಿಮ ಘಟ್ಟ ಆರು ರಾಜ್ಯಗಳಲ್ಲಿ ಹರಡಿಕೊಂಡಿದೆ. ಕೇಂದ್ರ ಸರ್ಕಾರ ಒಂದೇ ಮಾದರಿಯ ನಿಯಮವನ್ನು ಎಲ್ಲ ರಾಜ್ಯಗಳಿಗೂ ಅನ್ವಯಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಪಶ್ಚಿಮ ಘಟ್ಟದ ಪ್ರತಿಯೊಂದು ಭಾಗವೂ ಒಂದೇ ರೀತಿಯಲ್ಲ. ಕೊಡಗಿನ ಕಾಫಿ ತೋಟ, ಉತ್ತರ ಕನ್ನಡದ ಅರಣ್ಯ ಪ್ರದೇಶ, ಚಿಕ್ಕಮಗಳೂರಿನ ಬೆಟ್ಟ ಪ್ರದೇಶ, ಉಡುಪಿಯ ಕರಾವಳಿ–ಘಟ್ಟ ಸಂಕ್ರಮಣ ಪ್ರದೇಶ—ಇವುಗಳ ಪರಿಸರ ಮತ್ತು ಸಾಮಾಜಿಕ ಸ್ವರೂಪ ಒಂದೇ ಅಲ್ಲ. ಹೀಗಿರುವಾಗ ದೆಹಲಿಯಲ್ಲಿ ಕುಳಿತು ಒಂದೇ ನಕ್ಷೆ ಎಳೆದು ನಿಯಮ ರೂಪಿಸುವುದಕ್ಕಿಂತ ಸ್ಥಳೀಯ ಭೌಗೋಳಿಕತೆ, ಜಲವಿಜ್ಞಾನ, ಭೂಮಿಯ ಬಳಕೆ, ಜನಸಂಖ್ಯೆ, ಕೃಷಿ ಮಾದರಿ ಮತ್ತು ಪರಿಸರ ಅಪಾಯಗಳನ್ನು ಆಧರಿಸಿದ ಸೂಕ್ಷ್ಮ ವಲಯೀಕರಣ ಅಗತ್ಯ. ಕರ್ನಾಟಕದ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯೂ ಇತ್ತೀಚೆಗೆ ಕೇಂದ್ರದ ಕರಡಿನ ಬಗ್ಗೆ ಭೌಗೋಳಿಕ ಸ್ಥಿರತೆ, ಜಲವಿಜ್ಞಾನ, ಮಣ್ಣಿನ ಗುಣ, ಇಳಿಜಾರು ಅಪಾಯ ಮತ್ತು ನದಿ ಮೂಲ ಪ್ರದೇಶಗಳನ್ನು ಹೆಚ್ಚು ವೈಜ್ಞಾನಿಕವಾಗಿ ಪರಿಗಣಿಸಬೇಕು ಎಂದು ಆಕ್ಷೇಪಿಸಿದೆ. ಈ ಆಕ್ಷೇಪಣೆಗಳನ್ನು ರಾಜಕೀಯ ಹಠವೆಂದು ತಳ್ಳಿಹಾಕುವುದೂ ಸರಿಯಲ್ಲ. ಹಾಗಾದರೆ ಸರ್ಕಾರದ ವಿರೋಧದ ಹಿಂದೆ ರಾಜಕೀಯವೂ ಇದೆಯೇ? ಖಂಡಿತವಾಗಿಯೂ ಈ ಪ್ರಶ್ನೆಯನ್ನು ಕೇಳಬೇಕು. ಯಾಕೆಂದರೆ ಪಶ್ಚಿಮ ಘಟ್ಟದ ‘ಅಭಿವೃದ್ಧಿ’ ಎನ್ನುವ ಪದದ ಹಿಂದೆ ಕೇವಲ ರೈತನಿಲ್ಲ. ಅಲ್ಲಿ ಪ್ರವಾಸೋದ್ಯಮ ಉದ್ಯಮವಿದೆ. ರಿಯಲ್ ಎಸ್ಟೇಟ್ ಇದೆ.

ಕಾಫಿ ಮತ್ತು ತೋಟಗಾರಿಕೆ ಆರ್ಥಿಕತೆ ಇದೆ. ಮೂಲಸೌಕರ್ಯ ಯೋಜನೆಗಳಿವೆ. ಗಣಿಗಾರಿಕೆ ಮತ್ತು ನಿರ್ಮಾಣದ ಆಸಕ್ತಿಗಳಿವೆ. ಆದ್ದರಿಂದ ಸರ್ಕಾರ ‘ರೈತರ ಬದುಕು’ ಎಂಬ ಹೆಸರಿನಲ್ಲಿ ಯಾವ ಅಭಿವೃದ್ಧಿ ಮಾದರಿಯನ್ನು ರಕ್ಷಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ರೈತನ ಹೊಲವನ್ನು ರಕ್ಷಿಸುವುದೇ ಸರ್ಕಾರದ ಉದ್ದೇಶವಾಗಿದ್ದರೆ ಅದನ್ನು ಸ್ವಾಗತಿಸಬೇಕು. ಆದರೆ ಅದೇ ಹೆಸರಿನಲ್ಲಿ ದೊಡ್ಡ ಪ್ರವಾಸೋದ್ಯಮ ಯೋಜನೆಗಳು, ರಿಯಲ್ ಎಸ್ಟೇಟ್ ವಿಸ್ತರಣೆ ಮತ್ತು ಪರಿಸರಕ್ಕೆ ಹಾನಿಕಾರಕ ಯೋಜನೆಗಳಿಗೆ ಬಾಗಿಲು ತೆರೆದಿಡುವಂತಾಗಬಾರದು. ಇದು ಸರ್ಕಾರಕ್ಕೆ ಕೇಳಬೇಕಾದ ಪ್ರಮುಖ ಪ್ರಶ್ನೆ. ‘ಜನರ ಬದುಕು’ ಮತ್ತು ‘ಪರಿಸರ’ವನ್ನು ಮುಖಾಮುಖಿ ನಿಲ್ಲಿಸುವ ರಾಜಕೀಯ ನಿಲ್ಲಬೇಕು. ನೋಡಿ, ಕಸ್ತೂರಿರಂಗನ್ ವರದಿಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಎರಡು ಅತಿರೇಕದ ನಿಲುವುಗಳು ಗೋಚರಿಸುತ್ತವೆ. ಒಂದು ಕಡೆ: “ವರದಿ ಜಾರಿಯಾದರೆ ರೈತರ ಬದುಕು ನಾಶವಾಗುತ್ತದೆ” ಎನ್ನುವುದು, ಮತ್ತೊಂದು ಕಡೆ: “ಪರಿಸರ ಉಳಿಸಲು ಯಾವುದೇ ಅಭಿವೃದ್ಧಿ ಬೇಡ.” ಎನ್ನುವುದು ಎರಡೂ ಅರ್ಧಸತ್ಯಗಳು. ನಿಜವಾದ ಪರಿಹಾರ ಮೂರನೇ ದಾರಿಯಲ್ಲಿದೆ. ಜನಕೇಂದ್ರಿತ ಪರಿಸರ ಅಭಿವೃದ್ಧಿ.ಅಂದರೆ— * ಸಣ್ಣ ಮತ್ತು ಮಧ್ಯಮ ರೈತರ ಕೃಷಿಗೆ ರಕ್ಷಣೆ; * ಸ್ಥಳೀಯ ಜನರ ಭೂಹಕ್ಕುಗಳಿಗೆ ಭದ್ರತೆ; * ಗ್ರಾಮಸಭೆಗಳ ಪಾತ್ರ; * ಗಣಿಗಾರಿಕೆ ಮತ್ತು ಅಕ್ರಮ ಕಲ್ಲುಗಣಿಗಾರಿಕೆಯ ಮೇಲೆ ಕಠಿಣ ನಿಯಂತ್ರಣ; * ದೊಡ್ಡ ನಿರ್ಮಾಣ ಯೋಜನೆಗಳಿಗೆ ಪರಿಸರದ ಹೊರೆ ಸಾಮರ್ಥ್ಯ ಅಧ್ಯಯನ; * ಪ್ರವಾಸೋದ್ಯಮಕ್ಕೆ ಮಿತಿ; * ನದಿ ಮೂಲ ಮತ್ತು ಜಲಾನಯನ ಪ್ರದೇಶಗಳ ರಕ್ಷಣೆ; * ಭೂಕುಸಿತ ಅಪಾಯದ ಪ್ರದೇಶಗಳಿಗೆ ವೈಜ್ಞಾನಿಕ ವಲಯೀಕರಣ; * ಪರಿಸರ ಸಂರಕ್ಷಣೆಗೆ ಸ್ಥಳೀಯ ಜನರಿಗೆ ಆರ್ಥಿಕ ಪ್ರೋತ್ಸಾಹ; * ಅರಣ್ಯಾಧಾರಿತ ಸಮುದಾಯಗಳ ಜೀವನೋಪಾಯಕ್ಕೆ ಮೌಲ್ಯವರ್ಧಿತ ಮಾರುಕಟ್ಟೆ; * ಮತ್ತು ನಿರ್ಧಾರ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ. ಗಮನಿಸಿ, ಕಸ್ತೂರಿರಂಗನ್ ಸಮಿತಿಯೂ ಪರಿಸರ ಸಂರಕ್ಷಣೆಯೊಂದಿಗೆ ‘green growth’, ಸುಸ್ಥಿರ ಕೃಷಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಪ್ರಯೋಜನ ಮತ್ತು ಪರಿಸರ ಸೇವೆಗಳ ಮೌಲ್ಯೀಕರಣದಂತಹ ಕ್ರಮಗಳನ್ನು ಶಿಫಾರಸು ಮಾಡಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.  ಇನ್ನು, ಅಧಿವೇಶನ: ರಾಜಕೀಯ ಪ್ರದರ್ಶನವಾಗಬಾರದು.

ಮುಖ್ಯಮಂತ್ರಿ ಒಂದು ದಿನದ ವಿಶೇಷ ಅಧಿವೇಶನದ ಮಾತು ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ವಿಶೇಷ ಅಧಿವೇಶನ ಕೇವಲ ಕೇಂದ್ರದ ವಿರುದ್ಧ ರಾಜಕೀಯ ನಿರ್ಣಯ ಕೈಗೊಳ್ಳುವ ವೇದಿಕೆಯಾಗಬಾರದು. ಅಲ್ಲಿ ಪಶ್ಚಿಮ ಘಟ್ಟದ ಬಗ್ಗೆ ಎಲ್ಲಾ ಪಕ್ಷಗಳ ಸದಸ್ಯರು, ಪರಿಸರ ವಿಜ್ಞಾನಿಗಳು, ರೈತ ಸಂಘಟನೆಗಳು, ಆದಿವಾಸಿ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ದಾಖಲಿಸುವ ವ್ಯವಸ್ಥೆ ಇರಬೇಕು. ಸರ್ಕಾರ ತನ್ನ ನಿಲುವನ್ನು ಜನರ ಮುಂದೆ ಇಡಬೇಕು. ಅದೇ ರೀತಿ ಕೇಂದ್ರ ಸರ್ಕಾರವೂ ರಾಜ್ಯದ ಆಕ್ಷೇಪಣೆಗಳನ್ನು ಕೇವಲ ‘ಅಭಿವೃದ್ಧಿ ವಿರೋಧಿ ರಾಜಕೀಯ’ ಎಂದು ತಳ್ಳಿಹಾಕಬಾರದು. ಪಶ್ಚಿಮ ಘಟ್ಟ ಯಾರದ್ದು? ಈ ಪ್ರಶ್ನೆಗೆ ಸರಳ ಉತ್ತರ ಇಲ್ಲ. ಪಶ್ಚಿಮ ಘಟ್ಟ ಅಲ್ಲಿನ ರೈತನದ್ದೂ ಹೌದು. ಅರಣ್ಯಾಧಾರಿತ ಸಮುದಾಯಗಳದ್ದೂ ಹೌದು. ಕರ್ನಾಟಕದ ಜನರದ್ದೂ ಹೌದು. ದಕ್ಷಿಣ ಭಾರತದ ಕೋಟ್ಯಂತರ ಜನರ ನೀರಿನ ಭದ್ರತೆಯ ಭಾಗವೂ ಹೌದು. ಅದೇ ಸಮಯದಲ್ಲಿ ಅದು ಅಪರೂಪದ ಜೀವವೈವಿಧ್ಯದ ಸಾರ್ವಜನಿಕ ಸಂಪತ್ತೂ ಹೌದು. ಆದ್ದರಿಂದ ಅದರ ಭವಿಷ್ಯವನ್ನು ಕೇವಲ ಸರ್ಕಾರಗಳು, ಅಧಿಕಾರಿಗಳು ಅಥವಾ ರಾಜಕೀಯ ಪಕ್ಷಗಳು ನಿರ್ಧರಿಸಲು ಸಾಧ್ಯವಿಲ್ಲ. ಜನರನ್ನು ಹೊರಗಿಟ್ಟು ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಪರಿಸರವನ್ನು ಹೊರಗಿಟ್ಟು ಜನರ ಅಭಿವೃದ್ಧಿಯೂ ಸಾಧ್ಯವಿಲ್ಲ.  ಇದೇ ಕಸ್ತೂರಿರಂಗನ್ ವಿವಾದದ ನಿಜವಾದ ಪಾಠ. ಒಟ್ಟಿನಲ್ಲಿ, ಕರ್ನಾಟಕ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುತ್ತಿರುವುದು ಕೇವಲ ಕೇಂದ್ರದ ವಿರುದ್ಧದ ರಾಜಕೀಯ ಸಂಘರ್ಷವಾಗಿ ಉಳಿದರೆ ಅದರ ಅರ್ಥ ಸೀಮಿತವಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರವೂ ESA ಘೋಷಣೆಯನ್ನು ಕೇವಲ ಅಧಿಸೂಚನೆ ಹೊರಡಿಸುವ ಆಡಳಿತಾತ್ಮಕ ಪ್ರಕ್ರಿಯೆಯಾಗಿ ನೋಡಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಪಶ್ಚಿಮ ಘಟ್ಟವನ್ನು ಉಳಿಸಬೇಕಾದರೆ ಮೊದಲು ಅದರ ಮೇಲೆ ನಡೆಯುತ್ತಿರುವ ಅಭಿವೃದ್ಧಿಯ ಮಾದರಿಯನ್ನೇ ಪ್ರಶ್ನಿಸಬೇಕು. ರೈತನಿಗೆ ಪರಿಸರ ಶತ್ರುವಿನ ಪಟ್ಟ ನೀಡದೆ, ಪರಿಸರ ಸಂರಕ್ಷಣೆಯ ಪಾಲುದಾರನನ್ನಾಗಿ ಮಾಡಬೇಕು. ಅರಣ್ಯವನ್ನು ರಕ್ಷಿಸುವ ಸಮುದಾಯಕ್ಕೆ ರಕ್ಷಣೆ ನೀಡಬೇಕು. ಗಣಿಗಾರಿಕೆ ಮತ್ತು ಅತಿಯಾದ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು.

ಪ್ರವಾಸೋದ್ಯಮವನ್ನು ನಿಯಂತ್ರಿಸಬೇಕು. ಮತ್ತು ಕೇಂದ್ರ–ರಾಜ್ಯ–ಸ್ಥಳೀಯ ಸಂಸ್ಥೆಗಳ ನಡುವೆ ಅಧಿಕಾರ ಹಂಚಿಕೆಯ ಹೊಸ ಮಾದರಿಯನ್ನು ರೂಪಿಸಬೇಕು. ಪಶ್ಚಿಮ ಘಟ್ಟ ಉಳಿಯಬೇಕಾದರೆ ಕೇವಲ ಕಸ್ತೂರಿರಂಗನ್ ವರದಿಯೂ ಸಾಕಾಗುವುದಿಲ್ಲ; ವರದಿಯನ್ನು ತಿರಸ್ಕರಿಸುವ ರಾಜಕೀಯವೂ ಸಾಕಾಗುವುದಿಲ್ಲ. ಅಗತ್ಯವಿರುವುದು— ಪರಿಸರ ನ್ಯಾಯ + ಸಾಮಾಜಿಕ ನ್ಯಾಯ + ಸ್ಥಳೀಯ ಪ್ರಜಾಪ್ರಭುತ್ವ + ವೈಜ್ಞಾನಿಕ ಯೋಜನೆ.  ಈ ನಾಲ್ಕು ಸ್ತಂಭಗಳ ಮೇಲೆ ಮಾತ್ರ ಪಶ್ಚಿಮ ಘಟ್ಟದ ಭವಿಷ್ಯವನ್ನು ಕಟ್ಟಬಹುದು. ಇಲ್ಲದಿದ್ದರೆ ‘ಅಭಿವೃದ್ಧಿ’ ಎಂಬ ಹೆಸರಿನಲ್ಲಿ ಪಶ್ಚಿಮ ಘಟ್ಟವನ್ನು ಕಳೆದುಕೊಳ್ಳುತ್ತೇವೆ; ‘ಪರಿಸರ ಸಂರಕ್ಷಣೆ’ ಎಂಬ ಹೆಸರಿನಲ್ಲಿ ಅಲ್ಲಿನ ಜನರ ಬದುಕನ್ನು ಕಳೆದುಕೊಳ್ಳುತ್ತೇವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ 

ಮಳೆ ಕೈಕೊಟ್ಟಿದೆ. ಹೊಲದಲ್ಲಿ ಬೆಳೆ ನಿಂತಿದ್ದರೂ ರೈತನ ಮನಸ್ಸಿನಲ್ಲಿ ಆತಂಕ. ಸರ್ಕಾರದ 635 ಕೋಟಿ ರೂ.

ಮಳೆ ಕೈಕೊಟ್ಟಿದೆ. ಹೊಲದಲ್ಲಿ ಬೆಳೆ ನಿಂತಿದ್ದರೂ ರೈತನ ಮನಸ್ಸಿನಲ್ಲಿ ಆತಂಕ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಮಹತ್ವದ ಆಡಳಿತಾತ್ಮಕ ಕ್ರಮ. ಅದರ̧ಲ್ಲೂ ಬರ ಪರಿಸ್ಥಿತಿ ನಿಭಾಯಿಸಲು ₹635 ಕೋಟಿ ವೆಚ್ಚ ಮಾಡುತ್ತಿರುವುದಾಗಿ ಸರ್ಕಾರ ಹೇಳಿರುವುದು, ಸಂಕಷ್ಟವನ್ನು ಕೇವಲ ಘೋಷಣೆಯ ಮಟ್ಟದಲ್ಲಿ ಬಿಡದೆ ಪರಿಹಾರ ಕಾರ್ಯಗಳಿಗೆ ಸಂಪನ್ಮೂಲ ಒದಗಿಸುತ್ತಿರುವುದನ್ನು ಸೂಚಿಸುತ್ತದೆ.

ಜೂನ್ 1ರಿಂದ ಆಗಸ್ಟ್ 21ರವರೆಗೆ 29 ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದೆ. 176 ತಾಲೂಕುಗಳು ಮಳೆ ಕೊರತೆ ಹಾಗೂ 15 ತಾಲೂಕುಗಳು ತೀವ್ರ ಮಳೆ ಕೊರತೆಯಲ್ಲಿವೆ. ಈ ಹಿನ್ನೆಲೆಯಲ್ಲಿ 89 ತಾಲೂಕುಗಳನ್ನು ತೀವ್ರ ಹಾಗೂ 12 ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ಗುರುತಿಸಲಾಗಿದೆ. ಅಂಕಿ-ಅಂಶಗಳೇ ಈ ವರ್ಷದ ಕೃಷಿ ಸಂಕಷ್ಟದ ಗಂಭೀರತೆಯನ್ನು ಹೇಳುತ್ತಿವೆ. ಆದರೆ ಬರ ಘೋಷಣೆಯೇ ಪರಿಹಾರವಲ್ಲ; ಅದು ಪರಿಹಾರದ ಆರಂಭ. ₹635 ಕೋಟಿ ವೆಚ್ಚವಾಗುತ್ತಿದೆ ಎನ್ನುವುದಕ್ಕಿಂತ ಆ ಹಣ ಯಾರಿಗೆ ತಲುಪುತ್ತದೆ?, ಯಾವ ರೂಪದಲ್ಲಿ ತಲುಪುತ್ತದೆ? ಮತ್ತು ಎಷ್ಟು ವೇಗವಾಗಿ ತಲುಪುತ್ತದೆ ಎಂಬುದೇ ಮುಖ್ಯ. ಬೆಳೆ ನಷ್ಟ ಅನುಭವಿಸಿದ ರೈತನ ಖಾತೆಗೆ ಪರಿಹಾರ ತಲುಪುತ್ತದೆಯೇ? ಜಾನುವಾರುಗಳಿಗೆ ಮೇವು ಸಿಗುತ್ತದೆಯೇ? ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆಯೇ? ಮುಂದಿನ ಬಿತ್ತನೆಗೆ ರೈತನಿಗೆ ಅಗತ್ಯ ನೆರವು ದೊರೆಯುತ್ತದೆಯೇ? ಇವೇ ಸರ್ಕಾರದ ಕಾರ್ಯಕ್ಷಮತೆಯನ್ನು ಅಳೆಯುವ ಮಾನದಂಡಗಳಾಗಬೇಕು. 

ಜೂನ್ 1ರಿಂದ ಆಗಸ್ಟ್ 26ರವರೆಗೆ ಕರ್ನಾಟಕದಲ್ಲಿ ಸಾಮಾನ್ಯವಾಗಿ 666 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಕೇವಲ 465 ಮಿ.ಮೀ. ಮಳೆಯಾಗಿದ್ದು, ಶೇ.30ರಷ್ಟು ಕೊರತೆ ದಾಖಲಾಗಿದೆ. 29 ಜಿಲ್ಲೆಗಳ 190 ತಾಲೂಕುಗಳು ಮಳೆ ಕೊರತೆಯಿಂದ ಬಳಲುತ್ತಿವೆ. 134 ತಾಲೂಕುಗಳಲ್ಲಿ ಸತತ ಮೂರು ವಾರಕ್ಕೂ ಹೆಚ್ಚು ಅವಧಿಯ ಒಣಹವೆ ದಾಖಲಾಗಿದ್ದು, ಬರ ನಿರ್ಣಯದ ‘ಟ್ರಿಗರ್-1’ ಮಾನದಂಡದಡಿ ಅವುಗಳನ್ನು ಪರಿಶೀಲಿಸಲಾಗಿದೆ. ಈ ಪರಿಶೀಲನೆ ಮತ್ತು ಸ್ಥಳಮಟ್ಟದ ‘ಗ್ರೌಂಡ್ ಟ್ರೂಥಿಂಗ್’ ಬಳಿಕ 101 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಈ ಪೈಕಿ 89 ತಾಲೂಕುಗಳಲ್ಲಿ ತೀವ್ರ ಬರದ ಪರಿಸ್ಥಿತಿ ಹಾಗೂ 12 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ ಇದೆ ಎಂದು ವರದಿಯಾಗಿದೆ. ಇನ್ನೂ 32 ತಾಲೂಕುಗಳ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಅಂದರೆ ಬರದ ವ್ಯಾಪ್ತಿ ಇಷ್ಟಕ್ಕೇ ಸೀಮಿತವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಮಳೆಯ ಕೊರತೆ ಎಂದರೆ ಕೇವಲ ಒಂದು ಹಂಗಾಮಿನ ಬೆಳೆ ನಷ್ಟವಲ್ಲ. ಅದರ ಪರಿಣಾಮ ಇಡೀ ಗ್ರಾಮೀಣ ಆರ್ಥಿಕತೆಯ ಮೇಲೆ ಬೀಳುತ್ತದೆ. ಬಿತ್ತನೆ ಮಾಡಿದ ರೈತನಿಗೆ ಮೊದಲು ಬೀಜ, ಗೊಬ್ಬರ, ಕೃಷಿ ಕಾರ್ಮಿಕರ ವೆಚ್ಚ, ವಿದ್ಯುತ್ ಅಥವಾ ನೀರಾವರಿ ವೆಚ್ಚ ಸೇರಿದಂತೆ ಹಲವು ಖರ್ಚುಗಳು ಎದುರಾಗುತ್ತವೆ.

ಬೆಳೆ ಕೈಕೊಟ್ಟರೆ ಈ ಹೂಡಿಕೆಗೆ ಪ್ರತಿಫಲ ಸಿಗುವುದಿಲ್ಲ. ಮುಂದಿನ ಹಂಗಾಮಿಗೆ ಹಣ ಹೊಂದಿಸುವುದೂ ಕಷ್ಟವಾಗುತ್ತದೆ. ಇದರ ಜೊತೆಗೆ ಜಾನುವಾರುಗಳಿಗೆ ಮೇವು, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಅಂತರ್ಜಲದ ಲಭ್ಯತೆ ಹಾಗೂ ಜಲಾಶಯಗಳ ನೀರಿನ ಸಂಗ್ರಹದ ಮೇಲೂ ಬರದ ಪರಿಣಾಮ ಬೀಳುತ್ತಿದೆ. ಕೆಲವು ಪ್ರದೇಶಗಳಲ್ಲಿ ಟ್ಯಾಂಕರ್‌ಗಳು ಮತ್ತು ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಪೂರೈಸುವ ಅಗತ್ಯ ಎದುರಾಗಿದೆ. ಇದರ ನಡುವೆ ಕೇಂದ್ರದ ಬರ ಮಾನದಂಡಗಳ ಬಗ್ಗೆಯೂ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.  ಇದು ಕೇವಲ ಕೇಂದ್ರ–ರಾಜ್ಯ ರಾಜಕೀಯ ಸಂಘರ್ಷವಾಗಿ ಉಳಿಯಬಾರದು. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಬರವನ್ನು ಅಳೆಯುವ ಮಾನದಂಡಗಳೇ ಬದಲಾಗಬೇಕೇ ಎಂಬ ಗಂಭೀರ ಚರ್ಚೆ ನಡೆಯಬೇಕಿದೆ. ಮಳೆಯ ಒಟ್ಟು ಪ್ರಮಾಣ ಮಾತ್ರವಲ್ಲದೆ, ಮಳೆಯ ಹಂಚಿಕೆ, ಬಿತ್ತನೆಯ ನಂತರದ ಮಳೆ ವಿರಾಮ, ಮಣ್ಣಿನ ತೇವಾಂಶ ಮತ್ತು ಬೆಳೆಗಳ ವಾಸ್ತವ ಸ್ಥಿತಿಯನ್ನೂ ಪರಿಗಣಿಸುವ ಅಗತ್ಯವಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ತನ್ನ ಸಂಪನ್ಮೂಲಗಳನ್ನು ಬಳಸುತ್ತಿದ್ದರೂ, ಇಂತಹ ದೊಡ್ಡ ಪ್ರಮಾಣದ ಸಂಕಷ್ಟವನ್ನು ರಾಜ್ಯದ ಸಂಪನ್ಮೂಲಗಳಿಂದ ಮಾತ್ರ ನಿಭಾಯಿಸುವುದು ಕಷ್ಟ. ಕೇಂದ್ರದ ಬರ ಪರಿಹಾರ ಮಾನದಂಡಗಳ ಕುರಿತೂ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಅವುಗಳನ್ನು ಪರಿಷ್ಕರಿಸುವಂತೆ ಒತ್ತಾಯಿಸಿದೆ. ಹೀಗಾಗಿ ಮುಂದಿನ ಹಂತದಲ್ಲಿ ಕೇಂದ್ರದಿಂದ ಹೆಚ್ಚುವರಿ ನೆರವು ಪಡೆಯುವ ಪ್ರಯತ್ನವೂ ನಿರ್ಣಾಯಕವಾಗಲಿದೆ. ಇನ್ನು, ಪ್ರತಿ ವಾರ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಸರ್ಕಾರ ಹೇಳಿರುವುದು ಸ್ವಾಗತಾರ್ಹ.

ಅಗತ್ಯವಿದ್ದಲ್ಲಿ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದೂ ಅಗತ್ಯ. ಆದರೆ ಈ ಪ್ರಕ್ರಿಯೆ ರಾಜಕೀಯ ಘೋಷಣೆಗಳಿಗಿಂತ ವೈಜ್ಞಾನಿಕ ಮಾಹಿತಿ ಮತ್ತು ರೈತರ ನೈಜ ಅನುಭವದ ಮೇಲೆ ಆಧಾರಿತವಾಗಬೇಕು. ಗಮನಿಸಿ, ₹635 ಕೋಟಿ ವೆಚ್ಚ, 101 ತಾಲೂಕುಗಳ ಬರ ಘೋಷಣೆ ಮತ್ತು ಬೆಳೆ ನಷ್ಟ ಸಮೀಕ್ಷೆ—ಇವೆಲ್ಲವೂ ಸರ್ಕಾರದ ಬದ್ಧತೆಯ ಸೂಚಕಗಳಾಗಬಹುದು. ಆದರೆ ಅಂತಿಮವಾಗಿ ರೈತನ ಬದುಕಿನಲ್ಲಿ ಬದಲಾವಣೆ ಕಾಣಿಸಿದಾಗ ಮಾತ್ರ ಅವುಗಳ ಅರ್ಥ ಸಾರ್ಥಕವಾಗುತ್ತದೆ. ಬರವನ್ನು ಘೋಷಿಸುವುದು ಸರ್ಕಾರದ ಕರ್ತವ್ಯದ ಅಂತ್ಯವಲ್ಲ; ರೈತನನ್ನು ಸಂಕಷ್ಟದಿಂದ ಪಾರು ಮಾಡುವುದು ಅದರ ನಿಜವಾದ ಪರೀಕ್ಷೆ.  ಒಟ್ಟಿನಲ್ಲಿ, ಈ ವರ್ಷದ ಪರಿಸ್ಥಿತಿ ಸಂಕಷ್ಟದ ಪಾಠವನ್ನು ಹೇಳಿದೆ. ಮುಂಗಾರು ವಿಫಲವಾದಾಗ ಮಾತ್ರ ತುರ್ತು ಕ್ರಮ ಕೈಗೊಳ್ಳುವ ಬದಲು, ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ, ಕೆರೆ-ಕಟ್ಟೆಗಳ ಪುನಶ್ಚೇತನ, ಕಡಿಮೆ ನೀರು ಬಳಕೆಯ ಬೆಳೆಗಳಿಗೆ ಪ್ರೋತ್ಸಾಹ ಮತ್ತು ಹವಾಮಾನ ಆಧಾರಿತ ಕೃಷಿ ಯೋಜನೆಗಳನ್ನು ದೀರ್ಘಕಾಲಿಕವಾಗಿ ಜಾರಿಗೆ ತರಬೇಕಾಗಿದೆ. ಸರ್ಕಾರ ಈ ಬಗ್ಗೆಯೂ ಗಮನ ಹರಿಸಬೇಕಿದೆ. ಇಲ್ಲವಾದರೆ ಪ್ರತಿವರ್ಷ ಮಳೆ ಕಡಿಮೆಯಾದಾಗ ‘ಬರ ಘೋಷಣೆ–ಪರಿಹಾರ–ಟ್ಯಾಂಕರ್’ ಎಂಬ ಚಕ್ರ ಪುನರಾವರ್ತನೆಯಾಗುತ್ತಲೇ ಇರುತ್ತದೆ. 

- ಶ್ರೀರಾಜ್‌ ವಕ್ವಾಡಿ 

ನೇಪಾಳದ ದುರಂತದ ಹಿಂದೆ ಪ್ರಕೃತಿಯಷ್ಟೇ ಅಲ್ಲ, ಮನುಷ್ಯನ ಅಭಿವೃದ್ಧಿ ಮಾದರಿಯೂ ಇದೆ.

ಹಿಮ ಕರಗುವುದು ಎಂದರೆ ಕೇವಲ ಹಿಮದ ಕರಗುವಿಕೆಯಲ್ಲ. ಅದು ಪರ್ವತದ ಸ್ಥಿರತೆ ಕರಗುತ್ತಿರುವ ಸೂಚನೆ. 2026ರ ಆಗಸ್ಟ್ 26. ನೇಪಾಳ–ಟಿಬೆಟ್ ಗಡಿಯ ಹಿಮಾಲಯ ಪ್ರದೇಶಕ್ಕೆ ಈ ದಿನ ಮತ್ತೊಂದು ಕರಾಳ ಅಧ್ಯಾಯ ಬರೆದ ದಿನ. ರಸುವಾ ಜಿಲ್ಲೆ ಸೇರಿದಂತೆ ಭೋಟೆ ಕೋಶಿ–ತ್ರಿಶೂಲಿ ನದಿ ಕಣಿವೆಯಲ್ಲಿ ಸಂಭವಿಸಿದ ಆಕಸ್ಮಿಕ ಪ್ರವಾಹ, ಹಿಮ–ಬಂಡೆ ಕುಸಿತ ಮತ್ತು ಕೆಸರು ತುಂಬಿದ ನೀರಿನ ರಭಸ ನೂರಾರು ಜೀವಗಳನ್ನು ಬಲಿ, ಸಾವಿರಾರು ಮಂದಿಯ ನಾಪತ್ತೆ. ಇದು ಹಿಮ ಪವರ್ತಗಳ ಎಚ್ಚರಿಕೆಯ ಗಂಟೆ! 

 ನೇಪಾಳ ಅತ್ಯಂತ ಭೀಕರತೆಯನ್ನು ಕಂಡಿದೆ.   ಇತ್ತೀಚಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 400ಕ್ಕೆ ಏರಿಕೆಯಾಗಿದೆ, ಸುಮಾರು 1,468ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ನೂರಾರು ಭಾರತೀಯರೂ ಸೇರಿದ್ದಾರೆ. ಇದು ಕೇವಲ ಒಂದು ಪ್ರವಾಹವಲ್ಲ. ಇದು ಬದಲಾಗುತ್ತಿರುವ ಹಿಮಾಲಯದ ಎಚ್ಚರಿಕೆಯ ಗಂಟೆ. ಹಿಮಾಲಯವನ್ನು ನಾವು ಬಹುಕಾಲದಿಂದ ‘ಭೂಮಿಯ ಮೂರನೇ ಧ್ರುವ’ ಎಂದು ನೋಡಿದ್ದೇವೆ. ಏಷ್ಯಾದ ಬಹುತೇಕ ಪ್ರಮುಖ ನದಿಗಳಿಗೆ ನೀರು ನೀಡುವ ಈ ಪರ್ವತ ಶ್ರೇಣಿ ಇಂದು ಹವಾಮಾನ ಬದಲಾವಣೆಯ ಅತ್ಯಂತ ಸೂಕ್ಷ್ಮ ವಲಯವಾಗಿ ಪರಿಣಮಿಸಿದೆ. ಹಿಮನದಿಗಳು ಕುಗ್ಗುತ್ತಿವೆ. ಪರ್ಮಾಫ್ರಾಸ್ಟ್ ಕರಗುತ್ತಿದೆ. ಪರ್ವತ ಇಳಿಜಾರುಗಳು ಅಸ್ಥಿರವಾಗುತ್ತಿವೆ. ಹಿಮನದಿಗಳ ಅಂಚಿನಲ್ಲಿ ಹೊಸ ಸರೋವರಗಳು ರೂಪುಗೊಳ್ಳುತ್ತಿವೆ. ಇವೆಲ್ಲವೂ ಒಟ್ಟಾಗಿ ಸೇರಿದಾಗ, ಒಂದು ಸಣ್ಣ ಭೌಗೋಳಿಕ ಘಟನೆ ಕೂಡ ಕ್ಷಣಾರ್ಧದಲ್ಲಿ ಭೀಕರ ಮಾನವೀಯ ದುರಂತವಾಗಿ ಬದಲಾಗಬಹುದು. ‘ಭೂಕಂಪ’ ಕಾರಣವಲ್ಲ, ಪರಿಣಾಮವೂ ಆಗಿರಬಹುದು! ಆಗಸ್ಟ್ 26ರ ಬೆಳಗ್ಗೆ ಸಂಭವಿಸಿದ ಘಟನೆಯ ಬಗ್ಗೆ ಗೊಂದಲವಿತ್ತು. ಮೊದಲಿಗೆ ಭೂಕಂಪವೇ ಪ್ರವಾಹಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

 ಆದರೆ ನಂತರದ ಭೂವೈಜ್ಞಾನಿಕ ಮತ್ತು ಉಪಗ್ರಹ ವಿಶ್ಲೇಷಣೆಗಳು ಬೇರೆಯದ್ದೇ ಚಿತ್ರವನ್ನು, ಮಾಹಿತಿಯನ್ನು ನೀಡಿವೆ. ಹಿಮ–ಬಂಡೆಗಳ ಭಾರಿ ಕುಸಿತ ಲ್ಹೆಂಡೆ ಖೋಲಾ ನದಿಗೆ ಅಪ್ಪಳಿಸಿತು. ಬೃಹತ್ ಪ್ರಮಾಣದ ಹಿಮ, ಬಂಡೆ, ಮಣ್ಣು ಮತ್ತು ನೀರು ಕಿರಿದಾದ ಕಣಿವೆಯಲ್ಲಿ ನದಿಯ ಹರಿವನ್ನು ಹೆಚ್ಚಿಸಿವೆ. ತಾತ್ಕಾಲಿಕವಾಗಿ ನಿರ್ಮಾಣವಾದ ಈ ನೈಸರ್ಗಿಕ ‘ಅಣೆಕಟ್ಟು’ ಒಡೆದಾಗ, ಸಂಗ್ರಹವಾಗಿದ್ದ ನೀರು ಮತ್ತು ಅವಶೇಷಗಳು ಭೀಕರ ವೇಗದಲ್ಲಿ ಕೆಳಕ್ಕೆ ಧಾವಿಸಿದವು. ಇದೇ ಪ್ರವಾಹ ಭೋಟೆ ಕೋಶಿ ಮತ್ತು ನಂತರ ತ್ರಿಶೂಲಿ ನದಿಗೆ ಹರಿಯಿತು. ಅಂದರೆ ಇಲ್ಲಿ ಒಂದು ಪ್ರಮುಖ ಪಾಠವಿದೆ,  ನೋಡಿ, ಪ್ರಕೃತಿಯ ಒಂದು ಘಟನೆ ಮತ್ತೊಂದು ಘಟನೆಗೆ ಕಾರಣವಾಗುತ್ತದೆ. ಹಿಮನದಿ ಕುಸಿತ → ಬಂಡೆ ಕುಸಿತ → ನದಿ ತಡೆ → ತಾತ್ಕಾಲಿಕ ಸರೋವರ → ಅಣೆಕಟ್ಟು ಒಡೆತ → ಕೆಸರಿನ ಪ್ರವಾಹ → ನದಿಯ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ. ಇದು ‘ಒಂದು ಅಪಾಯ’ವಲ್ಲ. ಇದು ಅಪಾಯಗಳ ಸರಪಳಿ. ಹಾಗಾದರೆ ಹಿಮಾಲಯದಲ್ಲಿ ಇಂತಹ ಅಪಾಯಗಳು ಏಕೆ ಹೆಚ್ಚುತ್ತಿವೆ? ಉತ್ತರವನ್ನು ಕೇವಲ ‘ಹಿಮ ಕರಗುತ್ತಿದೆ’ ಎಂಬ ಒಂದು ವಾಕ್ಯದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯದ ಹಿಮನದಿಗಳ ಸ್ವರೂಪವೇ ಬದಲಾಗುತ್ತಿದೆ.

ಹಿಮನದಿಗಳು ಹಿಂದೆ ಸರಿಯುತ್ತಿವೆ. ಕೆಲವು ಕಡೆ ಹಿಮದ ಕೆಳಗಿನ ಬಂಡೆಗಳ ಮೇಲಿನ ಹಿಡಿತ ದುರ್ಬಲವಾಗುತ್ತಿದೆ. ಪರ್ಮಾಫ್ರಾಸ್ಟ್—ಅಂದರೆ ವರ್ಷಗಳ ಕಾಲ ಗಟ್ಟಿಯಾಗಿ ಹೆಪ್ಪುಗಟ್ಟಿರುವ ಮಣ್ಣು ಮತ್ತು ಕಲ್ಲು—ಕರಗಿದಾಗ ಪರ್ವತದ ಇಳಿಜಾರುಗಳ ಸ್ಥಿರತೆ ಕುಸಿಯಬಹುದು. ಹೀಗಾಗಿ ಸಮಸ್ಯೆ ಕೇವಲ ‘ನೀರಿನ ಪ್ರಮಾಣದ್ದಲ್ಲ. ಪರ್ವತವೇ ಅಸ್ಥಿರವಾಗುತ್ತಿದೆ. ಹಿಂದೆ ನಿಧಾನವಾಗಿ ನಡೆಯುತ್ತಿದ್ದ ಬದಲಾವಣೆಗಳು ಇಂದು ವೇಗವಾಗಿ ನಡೆಯುತ್ತಿವೆ. ಹಿಂದೂ ಕುಶ್–ಹಿಮಾಲಯ ಪ್ರದೇಶದ ಹಿಮನದಿಗಳು 2011–2020ರ ಅವಧಿಯಲ್ಲಿ ಹಿಂದಿನ ದಶಕಕ್ಕಿಂತ ಸುಮಾರು 65 ಪ್ರತಿಶತ ವೇಗವಾಗಿ ಹಿಮ ಕಳೆದುಕೊಂಡಿವೆ ಎಂದು ವರದಿಯಾಗಿದೆ. ನೇಪಾಳದ ಹಿಮನದಿಗಳು ಕಳೆದ ಸುಮಾರು ಮೂರು ದಶಕಗಳಲ್ಲಿ ತಮ್ಮ ಹಿಮದ ಪ್ರಮಾಣದ ಸುಮಾರು ಮೂರನೇ ಒಂದು ಭಾಗವನ್ನು ಕಳೆದುಕೊಂಡಿವೆ ಎಂದು ವಿಶ್ವಸಂಸ್ಥೆಯ ವರದಿಗಳನ್ನು ಆಧರಿಸಿದ ವಿಶ್ಲೇಷಣೆಗಳು ಹೇಳುತ್ತವೆ. ಹೀಗಾಗಿ ಆಗಸ್ಟ್ 26ರ ದುರಂತವನ್ನು ಕೇವಲ ಒಂದು ದಿನದ ಹವಾಮಾನ ಘಟನೆಯಾಗಿ ನೋಡುವುದು ಅಪಾಯಕಾರಿ ಸರಳೀಕರಣ. ಹಿಮನದಿ ಸರೋವರಗಳು: ಪರ್ವತದ ಮೇಲಿನ ‘ಟೈಮ್ ಬಾಂಬ್’ಹಿಮನದಿಗಳು ಕರಗಿದಾಗ ನೀರು ಎಲ್ಲಿಗೆ ಹೋಗುತ್ತದೆ? ಹಿಮನದಿಯ ಅಂಚಿನಲ್ಲಿ ಅಥವಾ ಅದರ ಕೆಳಭಾಗದಲ್ಲಿ ನೀರು ಸಂಗ್ರಹವಾಗುತ್ತದೆ. ಕೆಲವೊಮ್ಮೆ ದೊಡ್ಡ ಹಿಮನದಿ ಸರೋವರಗಳು ರೂಪುಗೊಳ್ಳುತ್ತವೆ. ಅವುಗಳ ನೈಸರ್ಗಿಕ ಕಟ್ಟೆ ಹಿಮ, ಮಣ್ಣು ಅಥವಾ ಬಂಡೆಗಳಿಂದ ನಿರ್ಮಿತವಾಗಿರಬಹುದು. ಅದು ಶಾಶ್ವತ ಅಣೆಕಟ್ಟು ಅಲ್ಲ. ಒಂದು ಭೂಕುಸಿತ. ಒಂದು ಹಿಮಬಂಡೆ ಕುಸಿತ.

ಒಂದು ಹೆಚ್ಚುವರಿ ನೀರಿನ ಒತ್ತಡ. ಅಥವಾ ಮತ್ತೊಂದು ಹಿಮನದಿ ಪ್ರವಾಹ. ಇವುಗಳಲ್ಲಿ ಯಾವುದಾದರೂ ಸಂಭವಿಸಿದರೆ ಸರೋವರದ ನೈಸರ್ಗಿಕ ಕಟ್ಟೆ ಒಡೆದು Glacial Lake Outburst Flood ಸಂಭವಿಸಬಹುದು. ಒಮ್ಮೆ ಈ ನೀರು ಕೆಳಕ್ಕೆ ಹೊರಟರೆ, ಅದು ಕೇವಲ ನೀರಲ್ಲ. ದಾರಿಯಲ್ಲಿರುವ ಬಂಡೆ, ಮಣ್ಣು, ಮರ, ಕಟ್ಟಡ, ವಾಹನ—ಎಲ್ಲವನ್ನೂ ತನ್ನೊಂದಿಗೆ ಎಳೆದುಕೊಂಡು ಹೋಗುತ್ತದೆ. ಅದಕ್ಕಾಗಿಯೇ ಇಂತಹ ಪ್ರವಾಹ ಸಾಮಾನ್ಯ ಪ್ರವಾಹಕ್ಕಿಂತ ಅನೇಕ ಪಟ್ಟು ವಿನಾಶಕಾರಿ. ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಕೇಳಲೇಬೇಕು: ಮನುಷ್ಯ ಎಲ್ಲಿದ್ದಾನೆ? ಪ್ರಕೃತಿ ತನ್ನ ನಿಯಮದಂತೆ ನಡೆಯುತ್ತದೆ. ಆದರೆ ಮನುಷ್ಯ ತನ್ನ ಅಭಿವೃದ್ಧಿ ಯೋಜನೆಗಳನ್ನು ಎಲ್ಲಿ ನಿರ್ಮಿಸುತ್ತಾನೆ? ನದಿಯ ದಡದಲ್ಲಿ. ಕಣಿವೆಯೊಳಗೆ. ಹಿಮಾಲಯದ ದುರ್ಬಲ ಇಳಿಜಾರುಗಳಲ್ಲಿ. ಭೂಕುಸಿತ ಸಾಧ್ಯತೆಯ ಪ್ರದೇಶಗಳಲ್ಲಿ. ಜಲವಿದ್ಯುತ್ ಯೋಜನೆಗಳು, ರಸ್ತೆಗಳು, ಸೇತುವೆಗಳು, ಪ್ರವಾಸೋದ್ಯಮ ಮೂಲಸೌಕರ್ಯ, ಗಡಿ ವ್ಯಾಪಾರ ಕೇಂದ್ರಗಳು, ವಸತಿ ಪ್ರದೇಶಗಳು—ಹಿಮಾಲಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿಯೇ ಮಾನವ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿವೆ. ನೇಪಾಳದ ಈ ದುರಂತದಲ್ಲಿಯೂ ರಸ್ತೆಗಳು, ಸೇತುವೆಗಳು, ವಿದ್ಯುತ್ ಯೋಜನೆಗಳು ಮತ್ತು ಗಡಿ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ.  ಹೀಗಾಗಿ ಪ್ರಶ್ನೆ ‘ಪ್ರಕೃತಿ ಯಾಕೆ ಕೋಪಗೊಂಡಿತು?’ ಎಂಬುದಲ್ಲ. ಪ್ರಕೃತಿಯ ಅಪಾಯ ಗೊತ್ತಿದ್ದರೂ ನಾವು ಅಪಾಯದ ಜಾಗದಲ್ಲೇ ಅಭಿವೃದ್ಧಿಯನ್ನು ಯಾಕೆ ಕೇಂದ್ರೀಕರಿಸುತ್ತಿದ್ದೇವೆ? ಎಂಬುದೇ ನಿಜವಾದ ಪ್ರಶ್ನೆ. ಹಿಮಾಲಯದಲ್ಲಿ ಅಭಿವೃದ್ಧಿ ಬೇಕೇ ಬೇಡವೇ? ಖಂಡಿತ ಬೇಕು. ಹಿಮಾಲಯದ ಜನರಿಗೆ ರಸ್ತೆ ಬೇಕು. ವಿದ್ಯುತ್ ಬೇಕು. ಆಸ್ಪತ್ರೆ ಬೇಕು. ಶಾಲೆ ಬೇಕು.

ಉದ್ಯೋಗ ಬೇಕು. ಸಂಪರ್ಕ ವ್ಯವಸ್ಥೆ ಬೇಕು. ಆದರೆ ಪ್ರಶ್ನೆ ಅಭಿವೃದ್ಧಿಯ ವಿರುದ್ಧವಲ್ಲ. ಯಾವ ಅಭಿವೃದ್ಧಿ? ಎಲ್ಲಿ ಅಭಿವೃದ್ಧಿ? ಯಾರಿಗಾಗಿ ಅಭಿವೃದ್ಧಿ? ಯಾವ ಪರಿಸರದ ಮೇಲೆ ಅಭಿವೃದ್ಧಿ? ಎನ್ನುವುದಾಗಿದೆ. ಗಮನಿಸಿ, ಒಂದು ಸೇತುವೆ ಕಟ್ಟಿದರೆ ಅದು ಕೇವಲ ಸೇತುವೆಯಲ್ಲ. ಅದರ ಸುತ್ತ ರಸ್ತೆ ಬರುತ್ತದೆ. ರಸ್ತೆ ಬಂದರೆ ವಸತಿ ಬರುತ್ತದೆ. ಪ್ರವಾಸೋದ್ಯಮ ಬರುತ್ತದೆ. ವ್ಯಾಪಾರ ಬರುತ್ತದೆ. ವಿದ್ಯುತ್ ಯೋಜನೆಗಳು ಬರುತ್ತವೆ. ಆದರೆ ಆ ಪ್ರದೇಶದ ಭೂವೈಜ್ಞಾನಿಕ ಸಾಮರ್ಥ್ಯವನ್ನು ಲೆಕ್ಕಿಸದೆ ಈ ಬೆಳವಣಿಗೆ ನಡೆದರೆ, ಒಂದು ದಿನ ಪ್ರಕೃತಿಯ ಲೆಕ್ಕಾಚಾರವೇ ಎಲ್ಲವನ್ನೂ ಅಳಿಸಿಹಾಕಬಹುದು. ಒಂದು ಮಿಲಿಯನ್‌ ಡಾಲರ್‌ ಪ್ರಶ್ನೆ ಏನೆಂದರೇ, ಮುನ್ನೆಚ್ಚರಿಕಾ ವ್ಯವಸ್ಥೆ ಎಲ್ಲಿ? ಇಂತಹ ದುರಂತಗಳಲ್ಲಿ ಈ ಒಂದು ಪ್ರಶ್ನೆ ಅತ್ಯಂತ ಮುಖ್ಯ.  ಹಿಮಾಲಯದ ನದಿಗಳಲ್ಲಿ ಸ್ವಯಂಚಾಲಿತ ನೀರಿನ ಮಟ್ಟ ಮಾಪಕಗಳು, ಉಪಗ್ರಹ ನಿಗಾ ವ್ಯವಸ್ಥೆ, ಹಿಮನದಿ ಸರೋವರಗಳ ನಿರಂತರ ಮೇಲ್ವಿಚಾರಣೆ, ರಿಯಲ್-ಟೈಮ್ ಡೇಟಾ ಹಂಚಿಕೆ ಮತ್ತು ಸ್ಥಳೀಯ ಜನರಿಗೆ ತಕ್ಷಣ ತಲುಪುವ ಎಚ್ಚರಿಕಾ ವ್ಯವಸ್ಥೆಗಳು ಅತ್ಯಗತ್ಯ. ಯಾಕೆಂದರೆ ಇಲ್ಲಿ ಗಂಟೆಗಳ ಮುನ್ನೆಚ್ಚರಿಕೆಯೇ ಸಾಕಾಗುವುದಿಲ್ಲ. ಕೆಲವೊಮ್ಮೆ ನಿಮಿಷಗಳ ಮುನ್ನೆಚ್ಚರಿಕೆಯೇ ಜೀವ ಉಳಿಸಬಹುದು. ನೇಪಾಳದ ಈ ದುರಂತ ಹಿಮಾಲಯದಲ್ಲಿ ಮುನ್ನೆಚ್ಚರಿಕಾ ವ್ಯವಸ್ಥೆ ಮತ್ತು ಗಡಿ ದಾಟುವ ನದಿ ಅಪಾಯ ನಿರ್ವಹಣೆಯ ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.  ಇನ್ನು, ಇದು ನೇಪಾಳದ ಸಮಸ್ಯೆಯಷ್ಟೇ ಅಲ್ಲ.

ಹಿಮಾಲಯಕ್ಕೆ ರಾಜಕೀಯ ಗಡಿಗಳಿವೆ. ಆದರೆ ನದಿಗಳಿಗೆ ಗಡಿಗಳಿಲ್ಲ. ನೇಪಾಳದಲ್ಲಿ ಹುಟ್ಟುವ ಅಥವಾ ಹರಿಯುವ ನದಿ ಭಾರತಕ್ಕೆ ಬರುತ್ತದೆ. ಟಿಬೆಟ್‌ನಲ್ಲಿ ಸಂಭವಿಸುವ ಹಿಮನದಿ ಕುಸಿತದ ಪರಿಣಾಮ ನೇಪಾಳಕ್ಕೆ ತಲುಪಬಹುದು. ನೇಪಾಳದ ಪ್ರವಾಹದ ಪರಿಣಾಮ ಭಾರತದಲ್ಲಿನ ಗಂಗಾ ನದಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಹಿಮಾಲಯದ ವಿಪತ್ತು ನಿರ್ವಹಣೆ ಮೂರು ದೇಶಗಳ ಅಂದ್ರೆ ಭಾರತ, ನೇಪಾಳ ಮತ್ತು ಚೀನ ದೇಶಗಳ ಸಹಕಾರವನ್ನು ಬೇಡುತ್ತದೆ. ಡೇಟಾ ಹಂಚಿಕೊಳ್ಳದ ಗಡಿ ರಾಜಕೀಯಕ್ಕಿಂತ, ಜೀವ ಉಳಿಸುವ ಹವಾಮಾನ ಮತ್ತು ಜಲವಿಜ್ಞಾನ ಮಾಹಿತಿಯ ಮುಕ್ತ ಹಂಚಿಕೆ ಹೆಚ್ಚು ಮುಖ್ಯ.  ‘ನೈಸರ್ಗಿಕ ವಿಕೋಪ’ ಎಂದು ಹೇಳಿ ಕೈತೊಳೆದುಕೊಳ್ಳುವುದು ಸುಲಭ. ಪ್ರತಿ ಬಾರಿ ಪ್ರವಾಹ ಬಂದಾಗ— ‘ಅತಿವೃಷ್ಟಿ’. ಭೂಕುಸಿತವಾದಾಗ—ಪ್ರಕೃತಿಯ ವಿಕೋಪ’. ಹಿಮನದಿ ಕುಸಿದಾಗ— ‘ದುರದೃಷ್ಟಕರ ಘಟನೆ’. ಎಂದು ಹೇಳಿ ಮುಗಿಸಬಹುದು. ಆದರೆ ಇದು ಸಮಸ್ಯೆಯ ಅರ್ಧ ಸತ್ಯ ಮಾತ್ರ. ಹವಾಮಾನ ಬದಲಾವಣೆ ಇಂತಹ ಅಪಾಯಗಳ ಹಿನ್ನೆಲೆಯನ್ನು ಬದಲಿಸುತ್ತಿದೆ. ಅದೇ ಸಮಯದಲ್ಲಿ ಅಸುರಕ್ಷಿತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ ವಸತಿ, ಮೂಲಸೌಕರ್ಯ ಮತ್ತು ಯೋಜನೆಗಳು ಅಪಾಯ ಎದುರಾದಾಗ ನಷ್ಟದ ಪ್ರಮಾಣವನ್ನು ಹೆಚ್ಚಿಸುತ್ತಿವೆ. ಹೀಗಾಗಿ ವಿಪತ್ತು ಪ್ರಕೃತಿಯಿಂದ ಬಂದಿರಬಹುದು; ಆದರೆ ಅದರ ಮಾನವೀಯ ಬೆಲೆ ಬಹುಮಟ್ಟಿಗೆ ನಮ್ಮ ನೀತಿಗಳಿಂದ ನಿರ್ಧಾರವಾಗುತ್ತದೆ.  ಹಿಮಾಲಯದ ಬಗ್ಗೆ ನಮ್ಮ ಅಭಿವೃದ್ಧಿ ಕಲ್ಪನೆಯನ್ನು ಬದಲಿಸಬೇಕಾದ ಸಮಯ ಇದು. ನೇಪಾಳದ ದುರಂತವನ್ನು ಕೇವಲ ಒಂದು ದೇಶದ ದುರಂತವಾಗಿ ನೋಡಬಾರದು. ಇದು ಉತ್ತರಾಖಂಡಕ್ಕೆ ಎಚ್ಚರಿಕೆ. ಇದು ಹಿಮಾಚಲಕ್ಕೆ ಎಚ್ಚರಿಕೆ.

ಇದು ಸಿಕ್ಕಿಂಗೆ ಎಚ್ಚರಿಕೆ. ಇದು ಅರುಣಾಚಲಕ್ಕೆ ಎಚ್ಚರಿಕೆ. ಇದು ಜಮ್ಮು–ಕಾಶ್ಮೀರ ಮತ್ತು ಲಡಾಖ್‌ಗೆ ಎಚ್ಚರಿಕೆ. ಹಿಮಾಲಯದ ಪ್ರತಿಯೊಂದು ಕಣಿವೆಗೂ ಒಂದೇ ಅಭಿವೃದ್ಧಿ ಮಾದರಿಯನ್ನು ಹೇರಲು ಸಾಧ್ಯವಿಲ್ಲ. ಕೆಲವು ಪ್ರದೇಶಗಳಲ್ಲಿ ದೊಡ್ಡ ಜಲವಿದ್ಯುತ್ ಯೋಜನೆಗಳಿಗಿಂತ ಪರಿಸರದ ಸಾಮರ್ಥ್ಯಕ್ಕೆ ಅನುಗುಣವಾದ ಸಣ್ಣ ಯೋಜನೆಗಳು ಬೇಕಾಗಬಹುದು. ಕೆಲವು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಬದಲಾಗಿ ಸುರಕ್ಷಿತ ಪರ್ಯಾಯ ಮಾರ್ಗ ಬೇಕಾಗಬಹುದು. ಕೆಲವು ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಮಿತಿ ವಿಧಿಸಬೇಕಾಗಬಹುದು. ಪರ್ವತವನ್ನು ಗೆಲ್ಲುವ ಅಭಿವೃದ್ಧಿಯ ಬದಲು, ಪರ್ವತದೊಂದಿಗೆ ಬದುಕುವ ಅಭಿವೃದ್ಧಿ ಬೇಕಾಗಿದೆ. ಕೊನೆಯ ಪ್ರಶ್ನೆ. ನೇಪಾಳದ ರಸುವಾದಲ್ಲಿ ನೀರು ಹರಿದುಹೋಗಿದೆ. ಆದರೆ ಪ್ರಶ್ನೆಗಳು ಉಳಿದಿವೆ. ಹಿಮಾಲಯ ಇನ್ನೆಷ್ಟು ಎಚ್ಚರಿಕೆ ನೀಡಬೇಕು? ಇನ್ನೆಷ್ಟು ಹಳ್ಳಿಗಳು ಕೊಚ್ಚಿಹೋಗಬೇಕು? ಇನ್ನೆಷ್ಟು ಸೇತುವೆಗಳು ಮುರಿಯಬೇಕು? ಇನ್ನೆಷ್ಟು ಕುಟುಂಬಗಳು ತಮ್ಮವರನ್ನು ಹುಡುಕಬೇಕು? ಇನ್ನು ಮುಂದಾದರೂ ನಾವು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ? ಪ್ರಕೃತಿಯ ವಿರುದ್ಧ ಹೋರಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಆದರೆ ಪ್ರಕೃತಿಯ ಎಚ್ಚರಿಕೆಯನ್ನು ಅರ್ಥಮಾಡಿಕೊಂಡು ತನ್ನ ಅಭಿವೃದ್ಧಿಯ ದಿಕ್ಕನ್ನು ಬದಲಿಸಿಕೊಳ್ಳಲು ಸಾಧ್ಯವಿದೆ. ನೇಪಾಳದ ಆಗಸ್ಟ್ 26ರ ದುರಂತ  ಅತ್ಯಂತ ದೊಡ್ಡ ಪಾಠ ಕಲಿಸಿದೆ.  ಹಿಮಾಲಯ ಕರಗುತ್ತಿರುವುದು ಕೇವಲ ಹಿಮವಲ್ಲ. ಅದರೊಂದಿಗೆ ನಮ್ಮ ಸುರಕ್ಷತೆಯ ಭರವಸೆಯೂ ಕರಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದುರಂತದ ದಿನವನ್ನು ಪ್ರಕೃತಿ ನಿರ್ಧರಿಸುತ್ತದೆ—ಆದರೆ ಅದರ ಹೊಣೆಗಾರಿಕೆಯಿಂದ ಮನುಷ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 


̲ ಶ್ರೀರಾಜ್‌ ವಕ್ವಾಡಿ 

Wednesday, August 26, 2026

ಮುಂಗಾರು ಕೈಕೊಟ್ಟಾಗಲೂ ಕೇಂದ್ರದ ನೆರವಿನ ನಿರೀಕ್ಷೆ: ಕರ್ನಾಟಕದ ರೈತರ ಸಂಕಷ್ಟಕ್ಕೆ ರಾಜಕೀಯ ಉತ್ತರ ಯಾವುದು?

ಮುಂಗಾರು ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಕರ್ನಾಟಕದ ರೈತನ ಪಾಲಿಗೆ ಈ ಮುಂಗಾರು ಈ ಬಾರಿ ನೋವು ನೀಡಿದೆ. ಮಳೆ ಕೊರತೆ ಎಂದರೆ ಕೇವಲ ಹವಾಮಾನದ ವೈಪರೀತ್ಯವಲ್ಲ. ಅದರ ಹಿಂದೆ ಬಿತ್ತನೆಯಾಗದ ಹೊಲಗಳಿವೆ, ಮೊಳಕೆಯೊಡೆದು ಒಣಗಿದ ಬೆಳೆಗಳಿವೆ, ಸಾಲ ತೀರಿಸಲಾಗದೆ ಕಂಗಾಲಾಗಿರುವ ರೈತರಿದ್ದಾರೆ. ಹೀಗಾಗಿ ಮಳೆಯ ಕೊರತೆಯನ್ನು ಕೇವಲ ‘ಪ್ರಕೃತಿ ವಿಕೋಪ’ ಎಂದು ನೋಡಿದರೆ ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದ ಕೆಲವು ಭಾಗಗಳನ್ನು ಹೊರತುಪಡಿಸಿದರೆ ರಾಜ್ಯದ ಅನೇಕ ಕಡೆ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಉತ್ತರ ಕರ್ನಾಟಕದಲ್ಲಿ ಅಲ್ಪಸ್ವಲ್ಪ ಮಳೆಗೆ ಶೇಂಗಾ, ಸಜ್ಜೆ, ಹೈಬ್ರಿಡ್ ಜೋಳ ಸೇರಿದಂತೆ ಬೆಳೆ ಬಿತ್ತಿದರೂ, ದಕ್ಷಿಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ರಾಗಿ ಸೇರಿದಂತೆ ಬೆಳೆಗಳು ನೀರಿನ ಕೊರತೆಯಿಂದ ಕಮರಿ ಹೋಗಿವೆ. ಕೆಲವು ಅಂದಾಜುಗಳ ಪ್ರಕಾರ ಸುಮಾರು ಶೇ.30ರಷ್ಟು ಕೃಷಿ ಜಮೀನುಗಳಲ್ಲಿ ಬಿತ್ತನೆಯೇ ಆಗಿಲ್ಲ ಎನ್ನುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. 

ಬರಪೀಡಿತ ಪ್ರದೇಶ ಘೋಷಣೆಗೆ ಸರ್ಕಾರಗಳು ನಿಗದಿತ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬೆಳೆ ನಷ್ಟ, ಮಳೆ ಕೊರತೆ, ಬಿತ್ತನೆ ಪ್ರಮಾಣ, ಜಲಮೂಲಗಳ ಸ್ಥಿತಿ, ಕೃಷಿ ಚಟುವಟಿಕೆಯ ಮೇಲೆ ಉಂಟಾದ ಪರಿಣಾಮ ಸೇರಿದಂತೆ ಹಲವು ಅಂಶಗಳನ್ನು ವೈಜ್ಞಾನಿಕವಾಗಿ ದಾಖಲಿಸಬೇಕಾಗುತ್ತದೆ. ಆದರೆ ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ: ರೈತನ ಹೊಲದಲ್ಲಿ ಬೆಳೆ ನಾಶವಾದ ನಂತರವೂ ಆ ನಷ್ಟವನ್ನು ಸಾಬೀತುಪಡಿಸಲು ಮತ್ತೊಂದು ಆಡಳಿತಾತ್ಮಕ ಪರೀಕ್ಷೆ ಏಕೆ? ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಕರ್ನಾಟಕದ ಬರ ಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಿ ಕೇಂದ್ರ ಸರಕಾರವು ಆದೇಶ ಹೊರಡಿಸಿದೆ.

ಇದಕ್ಕೆ ಮೊದಲು ಕರ್ನಾಟಕ ಸರಕಾರವು ಅವಧಿ ವಿಸ್ತರಣೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ. ಇನ್ನು, ಮೋಡ ಬಿತ್ತನೆಯ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ. ಆದರೇ ಮೋಡ ಬಿತ್ತನೆ ಮಾಡಿದರೇ, ಕೆಲವೊಮ್ಮೆ ಅತಿವೃಷಿಯೂ ಆಗಬಹುದು, ಕೆಲವೊಮ್ಮೆ ಅನಾವೃಷ್ಟಿಯೂ ಆಗಬಹುದು ಎನ್ನುವ ಹವಾಮಾನ ತಜ್ಞರ ಅಭಿಪ್ರಾಯವನ್ನು ತಳ್ಳಿ ಹಾಕುವಂತಿಲ್ಲ. ಗಮನಿಸಿ, ಬರದ ಪರಿಣಾಮ ಕಣ್ಣಿಗೆ ಕಾಣುತ್ತಿದ್ದರೂ, ಪರಿಹಾರ ಪಡೆಯಲು ಅಂಕಿ-ಅಂಶಗಳ ಭಾಷೆಯಲ್ಲಿ ಅದನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ರೈತನ ಸಂಕಷ್ಟವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಾರಿ ಜಿಲ್ಲಾವಾರು, ಬೆಳೆವಾರು ಮತ್ತು ತಾಲ್ಲೂಕುವಾರು ಸಮಗ್ರ ವೈಜ್ಞಾನಿಕ ಸಮೀಕ್ಷೆ ನಡೆಸಿ, ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕೇಂದ್ರದ ಮುಂದೆ ವಾಸ್ತವಾಂಶಗಳನ್ನು ಇಡಬೇಕು. ಕರ್ನಾಟಕದ ರೈತರು ಕೇಳುತ್ತಿರುವುದು ಯಾರದ್ದೋ ವೈಯಕ್ತಿಕ ಪ್ರಶ್ನೆಯಲ್ಲ. ಪ್ರಕೃತಿ ವಿಕೋಪದಿಂದ ಕೃಷಿ ಆರ್ಥಿಕತೆ ಕುಸಿದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಜನರನ್ನು ಸಂಕಷ್ಟದಿಂದ ಹೊರತರಬೇಕಾದದ್ದು ಒಕ್ಕೂಟ ವ್ಯವಸ್ಥೆಯ ಮೂಲಭೂತ ಹೊಣೆಗಾರಿಕೆ.

ಹೀಗಾಗಿ ಕೇಂದ್ರದ ನೆರವನ್ನು ಪಡೆಯಲು ರಾಜ್ಯ ಸರ್ಕಾರ ರಾಜಕೀಯವಾಗಿ ದುರ್ಬಲವಾಗಬೇಕಾದ ಅಗತ್ಯವಿಲ್ಲ. ಅದೇ ಸಮಯದಲ್ಲಿ ಕೇಂದ್ರದೊಂದಿಗೆ ಸಂಘರ್ಷವನ್ನೇ ರಾಜಕೀಯ ತಂತ್ರವನ್ನಾಗಿ ಮಾಡಿಕೊಂಡರೂ ರೈತನ ಹೊಟ್ಟೆ ತುಂಬುವುದಿಲ್ಲ. ಕರ್ನಾಟಕಕ್ಕೆ ಬೇಕಿರುವುದು ಘೋಷಣೆಗಳ ರಾಜಕಾರಣವಲ್ಲ; ದಾಖಲೆ, ವೈಜ್ಞಾನಿಕ ಅಧ್ಯಯನ ಮತ್ತು ನಿರಂತರ ಒತ್ತಡದ ಮೂಲಕ ಪರಿಹಾರವನ್ನು ಖಚಿತಪಡಿಸುವ ರಾಜಕೀಯ. ಎರಡು ವರ್ಷಗಳ ಹಿಂದೆ ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಿದಾಗ, ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹18,171.44 ಕೋಟಿ ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ನೆರವು ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ರಾಜಕೀಯ ಹಾಗೂ ಕಾನೂನು ಸಂಘರ್ಷವೂ ಉಂಟಾಗಿತ್ತು. ಕೊನೆಗೆ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆ ಘಟನೆ ಕರ್ನಾಟಕದ ಒಕ್ಕೂಟ ವ್ಯವಸ್ಥೆಯೊಳಗಿನ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿತ್ತು. ರಾಜ್ಯ ಸರ್ಕಾರಗಳು ಬದಲಾಗಬಹುದು. ಮುಖ್ಯಮಂತ್ರಿಗಳು ಬದಲಾಗಬಹುದು. ಆದರೆ ರೈತನ ಸಮಸ್ಯೆ ಬದಲಾಗುವುದಿಲ್ಲ. ಅದಕ್ಕಾಗಿಯೇ ಹಿಂದಿನ ಅನುಭವದಿಂದ ಪಾಠ ಕಲಿಯುವುದು ಮುಖ್ಯ. ಈ ಬಾರಿ ಮತ್ತೆ ಮನವಿ ಸಲ್ಲಿಸಿ ಮೌನವಾಗಿರುವುದರಿಂದ ಪ್ರಯೋಜನವಿಲ್ಲ.

ಕೇಂದ್ರದ ಪ್ರತಿಕ್ರಿಯೆ ವಿಳಂಬವಾದರೆ ರಾಜ್ಯ ಸರ್ಕಾರ ತನ್ನ ಹಕ್ಕಿಗಾಗಿ ರಾಜಕೀಯ, ಆಡಳಿತಾತ್ಮಕ ಮತ್ತು ಅಗತ್ಯವಿದ್ದರೆ ಕಾನೂನು ಮಾರ್ಗಗಳನ್ನೂ ಬಳಸಬೇಕು. ಇನ್ನು, ಡಿ.ಕೆ. ಶಿವಕುಮಾರ್ ಅವರ ‘ಮೃದು ಧೋರಣೆ’ ಸಾಕೇ?ಮ  ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರದ ನಿಲುವು ಕುತೂಹಲ ಮೂಡಿಸುತ್ತದೆ. ಕೇಂದ್ರದೊಂದಿಗೆ ನೇರ ಸಂಘರ್ಷಕ್ಕಿಳಿಯದೆ, ಸಹಕಾರದ ಮೂಲಕ ನೆರವು ಪಡೆಯುವ ಪ್ರಯತ್ನ ರಾಜಕೀಯವಾಗಿ ತಪ್ಪೇನಲ್ಲ. ಆದರೆ ಪ್ರಶ್ನೆ ಇರುವುದು ಬೇರೆಡೆ. ಸೌಜನ್ಯ ರಾಜಕಾರಣ ರೈತನಿಗೆ ಪರಿಹಾರ ತಂದುಕೊಡುತ್ತದೆಯೇ? ಕೇಂದ್ರದೊಂದಿಗೆ ಉತ್ತಮ ಸಂಬಂಧ ಇರುವುದು ಒಂದು ವಿಚಾರ. ರಾಜ್ಯದ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸುವುದು ಮತ್ತೊಂದು ವಿಚಾರ. ಎರಡೂ ಪರಸ್ಪರ ವಿರುದ್ಧವಾಗಬೇಕಿಲ್ಲ. ಕೇಂದ್ರ ಸರ್ಕಾರ ನೆರವು ನೀಡಿದರೆ ಅದನ್ನು ಸ್ವಾಗತಿಸಬೇಕು. ನೆರವು ನೀಡಲು ವಿಳಂಬ ಮಾಡಿದರೆ ಕಾರಣ ಕೇಳಬೇಕು. ಕಡಿಮೆ ನೆರವು ನೀಡಿದರೆ ಅದರ ಮಾನದಂಡಗಳನ್ನು ಪ್ರಶ್ನಿಸಬೇಕು. ಅಗತ್ಯವಿದ್ದರೆ ಎಲ್ಲ ಪಕ್ಷಗಳ ಸಂಸದರನ್ನು ಒಟ್ಟುಗೂಡಿಸಿ ಕೇಂದ್ರದ ಮೇಲೆ ಒತ್ತಡ ತರಬೇಕು. ರೈತನ ಬದುಕು ಯಾವುದೇ ಪಕ್ಷದ ‘ಇಮೇಜ್ ಮ್ಯಾನೇಜ್‌ಮೆಂಟ್’ಗಿಂತ ದೊಡ್ಡದು. ನೋಡಿ, ಸಂಕಷ್ಟದ ಹೊತ್ತಿನಲ್ಲಿ ರಾಜಕೀಯಕ್ಕಿಂತ ರೈತ ಮುಖ್ಯ. ಬರ ಬಂದಾಗ ಒಂದು ವಿಚಿತ್ರ ರಾಜಕೀಯ ಆರಂಭವಾಗುತ್ತದೆ. ಆಡಳಿತ ಪಕ್ಷ ಕೇಂದ್ರವನ್ನು ದೂಷಿಸುತ್ತದೆ. ಕೇಂದ್ರ ರಾಜ್ಯದ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತವೆ.

ಆರೋಪ-ಪ್ರತ್ಯಾರೋಪಗಳು ನಡೆಯುತ್ತವೆ . ಆದರೆ ಈ ಎಲ್ಲದರ ನಡುವೆ ರೈತ ಮಾತ್ರ ತನ್ನ ಹೊಲದ ಮುಂದೆ ನಿಂತಿರುತ್ತಾನೆ. ಅವನಿಗೆ ರಾಜಕೀಯ ವಾದ ಬೇಡ. ಬಿತ್ತನೆ ನಷ್ಟಕ್ಕೆ ಪರಿಹಾರ ಬೇಕು. ಬೆಳೆ ನಷ್ಟಕ್ಕೆ ಪರಿಹಾರ ಬೇಕು. ಸಾಲದ ಒತ್ತಡದಿಂದ ರಕ್ಷಣೆ ಬೇಕು. ಮುಂದಿನ ಹಂಗಾಮಿಗೆ ಬೀಜ, ರಸಗೊಬ್ಬರ ಮತ್ತು ನೀರಿನ ಭರವಸೆ ಬೇಕು. ಆದ್ದರಿಂದ ಬರ ಪರಿಹಾರವನ್ನು ಕೇವಲ ಒಂದು ಬಾರಿಯ ಹಣಕಾಸು ಪ್ಯಾಕೇಜ್ ಆಗಿ ನೋಡಬಾರದು. ಕೃಷಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ದೀರ್ಘಕಾಲೀನ ಯೋಜನೆಯಾಗಬೇಕು. ಕರ್ನಾಟಕದ ಪಾಲು ಏನು? ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ದೇಶದ ಆರ್ಥಿಕತೆಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತದೆ. ತೆರಿಗೆ ಸಂಗ್ರಹ, ಕೈಗಾರಿಕೆ, ಸೇವಾ ವಲಯ, ಕೃಷಿ—ಎಲ್ಲ ಕ್ಷೇತ್ರಗಳಲ್ಲೂ ರಾಜ್ಯದ ಪಾತ್ರ ದೊಡ್ಡದು. ಹೀಗಿರುವಾಗ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕರ್ನಾಟಕ ತನ್ನ ಪಾಲಿನ ನೆರವನ್ನು ಕೇಳುವುದು ‘ವಿಶೇಷ ಸವಲತ್ತು’ ಕೇಳಿದಂತಲ್ಲ. ಇದು ಪ್ರಶ್ನೆ ಕೇವಲ ಒಂದು ರಾಜ್ಯದದ್ದೂ ಅಲ್ಲ. ದೇಶದ ಯಾವುದೇ ರಾಜ್ಯ ಬರ, ಪ್ರವಾಹ, ಚಂಡಮಾರುತ ಅಥವಾ ಇನ್ನಾವುದೇ ಪ್ರಕೃತಿ ವಿಕೋಪಕ್ಕೆ ಸಿಲುಕಿದಾಗ ಕೇಂದ್ರದ ಪ್ರತಿಕ್ರಿಯೆ ಪಕ್ಷಾತೀತವಾಗಿರಬೇಕು. ಸರ್ಕಾರದ ಬಣ್ಣ ಬದಲಾಗಬಹುದು; ಆದರೆ ವಿಪತ್ತಿನ ಬಣ್ಣ ಒಂದೇ. ಈಗ ಬೇಕಿರುವುದು ಸ್ಪಷ್ಟ ಕಾರ್ಯಯೋಜನೆ. ರಾಜ್ಯ ಸರ್ಕಾರ ಈಗಲೇ ಕೆಲವು ಕ್ರಮಗಳನ್ನು ವೇಗಗೊಳಿಸಬೇಕಾಗಿದೆ. ಮೊದಲನೆಯದಾಗಿ, ಜಿಲ್ಲಾವಾರು ನೈಜ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಎರಡನೆಯದಾಗಿ, ಬಿತ್ತನೆಯಾಗದ ಪ್ರದೇಶಗಳನ್ನೂ ನಷ್ಟದ ಲೆಕ್ಕಾಚಾರದಲ್ಲಿ ಸಮರ್ಪಕವಾಗಿ ದಾಖಲಿಸಬೇಕು. ಮೂರನೆಯದಾಗಿ, ಕೇಂದ್ರಕ್ಕೆ ಸಲ್ಲಿಸುವ ವರದಿ ಕೇವಲ ಆಡಳಿತಾತ್ಮಕ ದಾಖಲೆ ಆಗದೆ, ರೈತರ ನೈಜ ಪರಿಸ್ಥಿತಿಯನ್ನು ಪ್ರತಿಬಿಂಬಿಸುವಂತಿರಬೇಕು. ನಾಲ್ಕನೆಯದಾಗಿ, ಕೇಂದ್ರದ ನೆರವು ವಿಳಂಬವಾದರೆ ಸಂಸದರು, ರೈತ ಸಂಘಟನೆಗಳು ಮತ್ತು ಎಲ್ಲಾ ಪಕ್ಷಗಳ ಸಹಕಾರದೊಂದಿಗೆ ಒತ್ತಡ ನಿರ್ಮಿಸಬೇಕು. ಐದನೆಯದಾಗಿ, ಪರಿಹಾರದ ಜೊತೆಗೆ ಮುಂದಿನ ಹಂಗಾಮಿಗೆ ರೈತರನ್ನು ಸಿದ್ಧಗೊಳಿಸುವ ಪುನಶ್ಚೇತನ ಕಾರ್ಯಕ್ರಮ ರೂಪಿಸಬೇಕು. ಶೇ.33 ಬೆಳೆ ನಷ್ಟವೇ? ಶೇ.50 ನಷ್ಟವೇ? ಬರದ ಮಾನದಂಡ ಪೂರೈಸಿದೆಯೇ? ವರದಿ ಸರಿಯಾಗಿದೆಯೇ? ಇವೆಲ್ಲವೂ ಆಡಳಿತಾತ್ಮಕವಾಗಿ ಅಗತ್ಯವಾದ ಪ್ರಶ್ನೆಗಳು.

ಇನ್ನು, “ನನ್ನ ಹೊಲದಲ್ಲಿ ಬೆಳೆ ಇಲ್ಲ. ನನ್ನ ಸಾಲ ಹೇಗೆ ತೀರಿಸಲಿ?” ಎನ್ನುವ ರೈತನ ಈ ಪ್ರಶ್ನೆಗೆ ಕೇಂದ್ರವೂ ಉತ್ತರಿಸಬೇಕು. ರಾಜ್ಯವೂ ಉತ್ತರಿಸಬೇಕು. ಕರ್ನಾಟಕದ ರೈತನ ಸಂಕಷ್ಟವನ್ನು ಕೇಂದ್ರ-ರಾಜ್ಯ ರಾಜಕೀಯದ ಪೈಪೋಟಿಯಲ್ಲಿ ಕಳೆದುಹೋಗಲು ಬಿಡಬಾರದು. ಕೇಂದ್ರ ಸರ್ಕಾರ ನೆರವು ನೀಡುವುದು ತನ್ನ ಕರ್ತವ್ಯವೆಂದು ಪರಿಗಣಿಸಬೇಕು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ 

Monday, August 24, 2026

ಕಣ್ಣಿಗೆ ಕಾಣುವ ಪ್ರತಿಪಕ್ಷ, ಮತ್ತದರ ಸೂತ್ರಧಾರ !? ಅಧಿವೇಶನ ಹಾಳು ಮಾಡಿದ ಕೀರ್ತಿ!

ಕರ್ನಾಟಕದ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಸದನದ ಒಳಗೂ ಮತ್ತ ಹೊರಗೂ  ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳು ಮೇಲ್ನೋಟಕ್ಕೆ ಸಚಿವ ನಾಗೇಂದ್ರ ಅವರ ರಾಜೀನಾಮೆಗಾಗಿ ನಡೆಯುತ್ತಿರುವ ಹೋರಾಟದಂತೆ ಕಾಣಬಹುದು. ಆದರೆ ರಾಜಕೀಯದ ಒಳನೋಟವನ್ನು ಗಮನಿಸಿದರೆ, ಈ ಪ್ರತಿಭಟನೆಯ ಹಿಂದೆ ಕೇವಲ ಬಿಜೆಪಿ ಹೈಕಮಾಂಡ್‌ನ ತಂತ್ರವಷ್ಟೇ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಬಿಜೆಪಿಯೊಳಗೇ ಕೇಳಿಬರುತ್ತಿರುವ ಗುಸು-ಗುಸು ಮಾತುಗಳನ್ನು ನಂಬುವುದಾದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗಿಂತಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಪ್ರಭಾವವೇ ಕೆಲವು ನಿರ್ಧಾರಗಳ ಮೇಲೆ ಹೆಚ್ಚು ಕಾಣಿಸುತ್ತಿದೆ ಎಂಬ ಮಾತಿದೆ. ಕಣ್ಣಿಗೆ ಕಾಣುವ ಪಾತ್ರಧಾರಿ ಆರ್. ಅಶೋಕ್,  ಆದರೆ ಪರದೆಯ ಹಿಂದಿನ ಸೂತ್ರಧಾರ ಯಾರು ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಆ ಚರ್ಚೆಯಲ್ಲಿ ಮತ್ತೆ ಮತ್ತೆ ಕೇಳಿಬರುವ ಹೆಸರು ಹೆಚ್.ಡಿ. ಕುಮಾರಸ್ವಾಮಿ. ಇದು ಕೇವಲ ವ್ಯಕ್ತಿಗಳ ನಡುವಿನ ರಾಜಕೀಯ ಪೈಪೋಟಿಯ ಪ್ರಶ್ನೆಯಲ್ಲ. ಕರ್ನಾಟಕದ ಪ್ರತಿಪಕ್ಷ ರಾಜಕಾರಣದ ದಿಕ್ಕೇನು ಎಂಬುದನ್ನು ಸೂಚಿಸುವ ಬೆಳವಣಿಗೆಯೂ ಹೌದು.

ಬಿಜೆಪಿಯದ್ದು ಹೋರಾಟವೇ? ಅಥವಾ ಸರ್ಕಾರಕ್ಕೆ ಮುಜುಗರ ತರುವ ತಂತ್ರವೇ? ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ವಿಧಾನಮಂಡಲ ಅಧಿವೇಶನ ಕಾಂಗ್ರೆಸ್ ಸರ್ಕಾರಕ್ಕೆ ರಾಜಕೀಯವಾಗಿ ಮಹತ್ವದ್ದು. ಇಂತಹ ಸಂದರ್ಭದಲ್ಲಿ ಸದನ ಸುಗಮವಾಗಿ ನಡೆಯದಂತೆ ಮಾಡುವುದು, ಪ್ರತಿಪಕ್ಷದ ಪ್ರತಿಭಟನೆಯ ಮೂಲಕ ಸರ್ಕಾರವನ್ನು ನಿರಂತರವಾಗಿ ರಕ್ಷಣಾತ್ಮಕ ಸ್ಥಿತಿಗೆ ತಳ್ಳುವುದು ಸಹಜವಾಗಿಯೇ ಪ್ರತಿಪಕ್ಷದ ತಂತ್ರವಾಗಿರಬಹುದು. ಆದರೆ ಇಲ್ಲಿ ಪ್ರಶ್ನೆ ಬೇರೆ. ಸಚಿವ ನಾಗೇಂದ್ರ ಅವರ ರಾಜೀನಾಮೆಯ ಬೇಡಿಕೆ ಬಿಜೆಪಿಯ ಅಧಿಕೃತ ರಾಜಕೀಯ ನಿಲುವಾಗಿದ್ದರೆ, ಅದನ್ನು ಸದನದಲ್ಲಿ ಚರ್ಚೆ, ದಾಖಲೆಗಳು, ಪ್ರಶ್ನೋತ್ತರ ಮತ್ತು ಸರ್ಕಾರದ ಉತ್ತರಗಳ ಮೂಲಕ ಜನರ ಮುಂದಿಡುವುದೇ ಹೆಚ್ಚು ಪರಿಣಾಮಕಾರಿ ಮಾರ್ಗ. ಆದರೆ ಕಪ್ಪು ಟಿ-ಶರ್ಟ್ ಧರಿಸಿ ಸದನಕ್ಕೆ ಪ್ರವೇಶಿಸುವಂತಹ ಪ್ರತಿಭಟನಾ ತಂತ್ರ ಅಥವಾ ವಿಧಾನಸಭಾ ಚಲೋದಂತಹ ಪ್ರತಿಭಟನೆ ಅದು ವಿಷಯದ ಗಂಭೀರತೆಯನ್ನು ಹೆಚ್ಚಿಸುತ್ತದೆಯೇ ಅಥವಾ ಪ್ರತಿಭಟನೆಯನ್ನೇ ಮುಖ್ಯ ಸುದ್ದಿಯನ್ನಾಗಿ ಮಾಡುತ್ತದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.

ಬಿಜೆಪಿ ಶಾಸಕರಲ್ಲೇ ಈ ತಂತ್ರದ ಬಗ್ಗೆ ಅಸಮಾಧಾನವಿತ್ತು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಪ್ರತಿಭಟನೆಗಳು, ಪ್ರತಿರೋಧಗಳಿಗೆ ಚೌಕಟ್ಟಿದೆ. ಸರ್ಕಾರದ ವಿರುದ್ಧ ಹೋರಾಡಲು ಬಂದವರು ತಾವೇ ಸದನದಿಂದ ಹೊರಗಿರುವ ಸ್ಥಿತಿ ನಿರ್ಮಾಣ ಮಾಡಿಕೊಳ್ಳಬಾರದು. ಬರ ಸೇರಿದ ಹಾಗೆ ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ . ಇವನ್ನೆಲ್ಲಾ ಬಿಟ್ಟು ವಿಪಕ್ಷ ಬಿಜೆಪಿಯವ ರಾಜಕೀಯ ಎಂತದ್ದು ಎನ್ನುವುದನ್ನು ನಾವು ಪ್ರಶ್ನೆ ಮಾಡಲೇಬೇಕಿದೆ. ಸದನ ನಡೆಯದಂತೆ ಮಾಡಿ, ಜನರ ಸಮಸ್ಯೆಗಳಿಗೆ ವೇದಿಕೆಯಾಗಬೇಕಿದ್ದ ಸದನ, ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವುಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಕರ್ನಾಟಕದ ರೈತರು ಬರ, ಬೆಳೆ ನಷ್ಟ, ಸಾಲ, ಪರಿಹಾರ ಮತ್ತು ನೀರಿನ ಸಮಸ್ಯೆಗಳಂತಹ ನೈಜ ಸಂಕಷ್ಟಗಳನ್ನು ಎದುರಿಸುತ್ತಿರುವಾಗ ವಿಧಾನಮಂಡಲದ ಅಧಿವೇಶನವು ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ವೇದಿಕೆಯಾಗಬೇಕು. ಆದರೆ ಪ್ರತಿಪಕ್ಷದ ಬಹುಪಾಲು ಶಕ್ತಿ ಪ್ರತಿಭಟನೆ, ಘೋಷಣೆ, ಸದನದ ಗದ್ದಲ ಮತ್ತು ರಾಜಕೀಯ ಮುಖಾಮುಖಿಯಲ್ಲಿ ಸಿಲುಕಿಕೊಂಡರೆ, ಜನರ ಮೂಲ ಪ್ರಶ್ನೆಗಳು ಹಿಂದೆ ಸರಿಯುತ್ತವೆ. ಇದೇ ಕಾರಣಕ್ಕೆ ಬಿಜೆಪಿ ಶಾಸಕರಲ್ಲೇ ಕೆಲವರು, ಸರ್ಕಾರ ನಾಗೇಂದ್ರ ಅವರ ರಾಜೀನಾಮೆ ನೀಡುವುದಿಲ್ಲ ಎಂಬುದು ರಾಜಕೀಯವಾಗಿ ಬಹುತೇಕ ಸ್ಪಷ್ಟವಾಗಿದ್ದರೂ, ಅದರಾಚೆಗೆ ಬರದ ವಿಚಾರ ಸೇರಿದಂತೆ ಜನರ ಸಮಸ್ಯೆಗಳನ್ನು ಸದನದಲ್ಲಿ ಎತ್ತುವುದು ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಇದು ಬಿಜೆಪಿಯೊಳಗಿನ ಮೂಲಭೂತ ಸಮಸ್ಯೆಯನ್ನು ತೋರಿಸುತ್ತದೆ. ಪ್ರತಿಪಕ್ಷವಾಗಿರುವುದು ಎಂದರೆ ಕೇವಲ ಸರ್ಕಾರವನ್ನು ತಡೆಯುವುದಲ್ಲ; ಸರ್ಕಾರವನ್ನು ಪ್ರಶ್ನಿಸುವುದು, ಪರ್ಯಾಯವನ್ನು ಮುಂದಿಡುವುದು ಮತ್ತು ಜನರ ಸಮಸ್ಯೆಗಳನ್ನು ರಾಜಕೀಯದ ಕೇಂದ್ರಕ್ಕೆ ತರುವುದೇ ಆಗಿದೆ.  ಈ ನಡುವೆ  ಅಶೋಕ್–ವಿಜಯೇಂದ್ರ ನಡುವಿನ ಅಂತರ ಇದೆಯೇ? ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.  ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಸೂಕ್ಷ್ಮ ರಾಜಕೀಯವೂ ನಡೆಯುತ್ತಿದೆ ಎಂಬ ಮಾತುಗಳಿವೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಆದ್ಯತೆಗಳು ಒಂದೇ ಆಗಿವೆಯೇ ಎಂಬ ಪ್ರಶ್ನೆ ಆಗಾಗ್ಗೆ ಮುನ್ನೆಲೆಗೆ ಬರುತ್ತಿದೆ. ಅಶೋಕ್ ಅವರಿಗೆ ವಿಧಾನಸಭೆಯೊಳಗಿನ ಪ್ರತಿಪಕ್ಷದ ನಾಯಕನಾಗಿ ಸ್ವತಂತ್ರ ರಾಜಕೀಯ ಅಸ್ತಿತ್ವವಿದೆ. ವಿಜಯೇಂದ್ರ ಅವರಿಗೆ ಪಕ್ಷದ ಸಂಘಟನೆ ಮತ್ತು ರಾಜ್ಯಾಧ್ಯಕ್ಷರ ಜವಾಬ್ದಾರಿ ಇದೆ.

ಇಬ್ಬರ ಅಧಿಕಾರ ಕ್ಷೇತ್ರಗಳು ವಿಭಿನ್ನವಾದರೂ, ಸದನದ ತಂತ್ರದ ವಿಚಾರದಲ್ಲಿ ಅಂತಿಮ ಮಾತು ಯಾರದ್ದು ಎಂಬುದು ಬಿಜೆಪಿ ಒಳಗಿನ ಚರ್ಚೆಯ ವಿಷಯವಾಗುತ್ತಿದೆ. ಇದರ ನಡುವೆ ಕುಮಾರಸ್ವಾಮಿ ಅವರ ಪಾತ್ರದ ಬಗ್ಗೆ ಚರ್ಚೆ ಹೆಚ್ಚಾಗುವುದು ಸಹಜ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ರಾಜಕೀಯದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಬಿಜೆಪಿಯೊಳಗಿನ ಕೆಲವು ನಾಯಕರೊಂದಿಗೆ ಹೊಂದಿರುವ ರಾಜಕೀಯ ಸಮೀಕರಣಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ಅವರು ನೇರವಾಗಿ ರಾಜ್ಯ ಬಿಜೆಪಿಯ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲು ಸಾರ್ವಜನಿಕವಾಗಿ ದೃಢವಾದ ಸಾಕ್ಷ್ಯ ಬೇಕಾಗುತ್ತದೆ. ಸದ್ಯ ಅದು ರಾಜಕೀಯ ವಲಯದ ಚರ್ಚೆ ಮತ್ತು ಆರೋಪಗಳ ಮಟ್ಟದಲ್ಲೇ ಕಾಣುತ್ತದೆ. ಆದರೆ ರಾಜಕೀಯದಲ್ಲಿ ಕೆಲವೊಮ್ಮೆ ನಿರ್ಧಾರಕ್ಕಿಂತ ನಿರ್ಧಾರದ ಪರಿಣಾಮವೇ ಹೆಚ್ಚು ಮಾತನಾಡುತ್ತದೆ. “ವಿಜಯೇಂದ್ರ ಮಾತು ನಡೆಯುತ್ತಿಲ್ಲವೇ?” ಎಂಬ ಪ್ರಶ್ನೆ. ರಾಜ್ಯ ಬಿಜೆಪಿಯೊಳಗೆ ನಾಯಕತ್ವದ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ಯಡಿಯೂರಪ್ಪ ಅವರ ನಂತರದ ಹಂತದಲ್ಲಿ ಪಕ್ಷದೊಳಗಿನ ಅಧಿಕಾರ ಸಮೀಕರಣಗಳು ಹಲವು ಪದರಗಳನ್ನು ಪಡೆದುಕೊಂಡಿವೆ. ವಿಜಯೇಂದ್ರ ಅವರು ಸಂಘಟನೆಯ ಮುಖವಾಗಿದ್ದರೂ, ವಿಧಾನಸಭೆಯೊಳಗಿನ ಪ್ರತಿಪಕ್ಷದ ರಾಜಕೀಯವನ್ನು ಅಶೋಕ್ ಮುನ್ನಡೆಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಂತಹ ಮೈತ್ರಿ ರಾಜಕಾರಣದ ಕೇಂದ್ರ ವ್ಯಕ್ತಿ ಪ್ರತಿಪಕ್ಷದ ತಂತ್ರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಭಾವನೆ ಬಿಜೆಪಿಯ ಶಾಸಕರಲ್ಲಿ ಮೂಡಿದರೆ, ಅದು ಸ್ವತಃ ಬಿಜೆಪಿಗೆ ರಾಜಕೀಯವಾಗಿ ಅಸೌಕರ್ಯಕರ ಸಂಗತಿ. ಯಾಕೆಂದರೆ ಆಗ ಪ್ರಶ್ನೆ ಕೇವಲ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಇರುವುದಿಲ್ಲ. “ಬಿಜೆಪಿಯ ಪ್ರತಿಪಕ್ಷ ರಾಜಕಾರಣವನ್ನು ರೂಪಿಸುತ್ತಿರುವುದು ಬಿಜೆಪಿಯೇನಾ?” ಎಂಬ ಪ್ರಶ್ನೆ ಎದುರಾಗುತ್ತದೆ. ಈ ನಡುವೆ ಶಾಸಕರ ಸ್ಥಿತಿ: ಎತ್ತು ಏರಿಗೆ, ಎಮ್ಮೆ ನೀರಿಗೆ ಎಂಬಂತಾಗಿದೆ. ಇದರ ನಡುವೆ ಸಾಮಾನ್ಯ ಬಿಜೆಪಿ ಶಾಸಕರ ಸ್ಥಿತಿ ಮಾತ್ರ ವಿಚಿತ್ರ. ಒಂದೆಡೆ ಅಶೋಕ್ ಅವರ ಪ್ರತಿಪಕ್ಷ ನಾಯಕತ್ವ. ಮತ್ತೊಂದೆಡೆ ವಿಜಯೇಂದ್ರ ಅವರ ಪಕ್ಷ ಸಂಘಟನೆ. ಮೂರನೇ ಕಡೆ ಮೈತ್ರಿಯ ರಾಜಕೀಯದಲ್ಲಿ ಕುಮಾರಸ್ವಾಮಿ ಅವರ ಪ್ರಭಾವ. ಈ ಮೂರು ಕೇಂದ್ರಗಳ ನಡುವೆ ಸಾಮಾನ್ಯ ಶಾಸಕರಿಗೆ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಅವಕಾಶ ಎಷ್ಟು ಉಳಿಯುತ್ತದೆ? ಅವರಿಗೆ ಬೇಕಾಗಿರುವುದು ಘೋಷಣೆಗಳಲ್ಲ, ತಮ್ಮ ಕ್ಷೇತ್ರಕ್ಕೆ ಅನುದಾನ, ನೀರು, ರಸ್ತೆ, ಉದ್ಯೋಗ, ರೈತರ ಸಮಸ್ಯೆ, ಬೆಲೆ ಏರಿಕೆ, ಬರ ಪರಿಹಾರ ಮತ್ತು ಆಡಳಿತದ ವೈಫಲ್ಯಗಳ ಕುರಿತು ಸರ್ಕಾರದಿಂದ ಉತ್ತರ. ಆದರೆ ನಾಯಕತ್ವದ ರಾಜಕೀಯದಲ್ಲಿ ಶಾಸಕರ ಧ್ವನಿ ಮಂಕಾದರೆ, ಪ್ರತಿಪಕ್ಷದ ಹೋರಾಟ ಜನರ ಹೋರಾಟವಾಗುವುದಿಲ್ಲ. ಅದು ನಾಯಕರ ನಡುವಿನ ಪ್ರತಿಷ್ಠೆಯ ಹೋರಾಟವಾಗಿ ಉಳಿಯುತ್ತದೆ.

ಪ್ರತಿಪಕ್ಷದ ರಾಜಕೀಯಕ್ಕೆ ಹೊಸ ವ್ಯಾಖ್ಯಾನ ಬೇಕು. ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುವುದು ಬಿಜೆಪಿಯ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಆದರೆ ಜನತಾಂತ್ರಿಕ ಪ್ರತಿಪಕ್ಷದ ಶಕ್ತಿ ಸದನವನ್ನು ಸ್ಥಗಿತಗೊಳಿಸುವ ಸಾಮರ್ಥ್ಯದಲ್ಲಿಲ್ಲ, ಸರ್ಕಾರವನ್ನು ಉತ್ತರಿಸಲು ಒತ್ತಾಯಿಸುವ ಸಾಮರ್ಥ್ಯದಲ್ಲಿದೆ. ಸಚಿವರ ರಾಜೀನಾಮೆ ಕೇಳುವುದು ರಾಜಕೀಯವಾಗಿ ಸಮರ್ಥನೀಯವಾಗಿರಬಹುದು. ಆದರೆ ಅದರೊಂದಿಗೆ ಪ್ರಕರಣದ ದಾಖಲೆಗಳು, ಸರ್ಕಾರದ ನಿರ್ಧಾರಗಳು, ಆಡಳಿತಾತ್ಮಕ ಹೊಣೆಗಾರಿಕೆ, ಹಣಕಾಸಿನ ವ್ಯವಹಾರಗಳು ಮತ್ತು ಜನರಿಗೆ ಉಂಟಾದ ಪರಿಣಾಮಗಳ ಕುರಿತು ನಿರಂತರ ಚರ್ಚೆ ನಡೆಸಿದಾಗ ಮಾತ್ರ ಅದು ಪರಿಣಾಮಕಾರಿ ಪ್ರತಿಪಕ್ಷ ರಾಜಕಾರಣವಾಗುತ್ತದೆ. ಇಲ್ಲವಾದರೆ ಕಪ್ಪು ಟಿ-ಶರ್ಟ್, ಘೋಷಣೆ, ಮಾರ್ಷಲ್‌ಗಳೊಂದಿಗೆ ತಳ್ಳಾಟ, ಸದನದಿಂದ ಹೊರಹಾಕಿಸಿಕೊಳ್ಳುವುದು—ಇವೆಲ್ಲವೂ ಒಂದು ದಿನದ ರಾಜಕೀಯ ದೃಶ್ಯವಾಗಬಹುದು. ಆದರೆ ಜನರ ಬದುಕಿನ ಪ್ರಶ್ನೆಗಳಿಗೆ ಉತ್ತರವಾಗುವುದಿಲ್ಲ.ಕರ್ನಾಟಕದ ಪ್ರತಿಪಕ್ಷ ರಾಜಕಾರಣ ಈಗ ಒಂದು ವಿಚಿತ್ರ ತಿರುವಿನಲ್ಲಿದೆ. ಕಣ್ಣಿಗೆ ಕಾಣುವ ನಾಯಕರು ಅಶೋಕ್ ಮತ್ತು ವಿಜಯೇಂದ್ರ. ಮೈತ್ರಿಯ ರಾಜಕೀಯದಲ್ಲಿ ಪ್ರಮುಖ ಪಾತ್ರಧಾರಿ ಕುಮಾರಸ್ವಾಮಿ. ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರ ತನ್ನದೇ ಆಂತರಿಕ ರಾಜಕೀಯ ಸವಾಲುಗಳ ನಡುವೆ ಆಡಳಿತ ನಡೆಸುತ್ತಿದೆ. ಈ ಸಂದರ್ಭದಲ್ಲಿ ನಿಜವಾದ ಪ್ರಶ್ನೆ “ಯಾರು ಯಾರನ್ನು ಕುಣಿಸುತ್ತಿದ್ದಾರೆ?” ಎನ್ನುವುದಲ್ಲ. ನಿಜವಾದ ಪ್ರಶ್ನೆ— ಜನರ ಪರವಾಗಿ ಸರ್ಕಾರವನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷವನ್ನು ಯಾರು ಮುನ್ನಡೆಸುತ್ತಿದ್ದಾರೆ ? ಆ ಪ್ರಶ್ನೆಗೆ ಉತ್ತರ ಸ್ಪಷ್ಟವಾಗದಿದ್ದರೆ, ಸದನದ ಒಳಗಿನ ಗದ್ದಲ ಎಷ್ಟೇ ದೊಡ್ಡದಾಗಿದ್ದರೂ, ಹೊರಗಿರುವ ಜನರಿಗೆ ಅದು ಕೇವಲ ರಾಜಕೀಯದ ಮತ್ತೊಂದು ಪ್ರದರ್ಶನವಾಗಿಯೇ ಕಾಣಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

- ಶ್ರೀರಾಜ್‌ ವಕ್ವಾಡಿ 

ಬೆಂಗಳೂರು ಟನಲ್‌ ರೋಡ್‌! ಕಾರ್ಪೊರೇಟ್ ಹಿತಾಸಕ್ತಿ? ಡಿಕೆಶಿ- ಅದಾನಿ ಭೇಟಿ | ₹17,698 to ₹22,267 ಕೋಟಿ

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒತ್ತಡದಲ್ಲಿದೆ; ನಗರ ವಿಸ್ತರಣೆ ನಿಯಂತ್ರಣವಿಲ್ಲದೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಟ್ರಾಫಿಕ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಭೂಮಿಯ ಮೇಲಿನ ಸಮಸ್ಯೆಯನ್ನು ಭೂಗರ್ಭಕ್ಕೆ ತಳ್ಳುವ ₹22,267 ಕೋಟಿ ವೆಚ್ಚದ ಸುರಂಗ ರಸ್ತೆ ಯೋಜನೆಯನ್ನು ಮುಂದಿಟ್ಟಿದೆ. ಆದರೆ ಈಗ ಈ ಯೋಜನೆಯ ಸುತ್ತ ಎದ್ದಿರುವ ಪ್ರಶ್ನೆ ಕೇವಲ “ಸುರಂಗ ರಸ್ತೆ ಬೇಕೇ ಬೇಡವೇ?” ಎಂಬುದಲ್ಲ. ಈ ಯೋಜನೆಯನ್ನು ಯಾರು ನಿರ್ಮಿಸಲಿದ್ದಾರೆ? ಯಾವ ಬೆಲೆಗೆ? ಯಾವ ಷರತ್ತುಗಳ ಮೇಲೆ? ಮತ್ತು ಸಾರ್ವಜನಿಕ ಹಣದಿಂದ ನಿರ್ಮಾಣವಾಗುವ ಈ ಬೃಹತ್ ಮೂಲಸೌಕರ್ಯದಿಂದ ಅಂತಿಮವಾಗಿ ಲಾಭ ಯಾರಿಗೆ? ಎಂಬ ಪ್ರಶ್ನೆಗಳೂ ಮುಖ್ಯವಾಗಿವೆ.

ನೋಡಿ ಈ ಎಲ್ಲಾ ಪ್ರಶ್ನೆಗಳು ಇನ್ನಷ್ಟು ತೀವ್ರವಾಗಲು ಕಾರಣ—ಯೋಜನೆಯ ಎರಡೂ ಪ್ಯಾಕೇಜ್‌ಗಳಿಗೆ ಅದಾನಿ ಎಂಟರ್‌ಪ್ರೈಸಸ್ ಅತಿ ಕಡಿಮೆ ಬಿಡ್‌ದಾರನಾಗಿ ಹೊರಹೊಮ್ಮಿರುವ ಸಂದರ್ಭದಲ್ಲಿ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಆಗಸ್ಟ್ 23ರಂದು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಈ ಭೇಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಇದನ್ನು “ಸೌಜನ್ಯದ ಭೇಟಿ” ಎಂದು ಹೇಳಿದ್ದಾರೆ. ಶಿವಕುಮಾರ್ ಅವರ ಪ್ರಕಾರ, ಅದಾನಿ ಬಹುಕಾಲದಿಂದ ಭೇಟಿಗೆ ಸಮಯ ಕೇಳುತ್ತಿದ್ದರು ಮತ್ತು ರಾಜ್ಯದಲ್ಲಿ ಸಮೂಹದ ವಿವಿಧ ಚಟುವಟಿಕೆಗಳ ಕುರಿತು ಮಾತುಕತೆ ನಡೆದಿಲ್ಲ. ಆದರೆ ಭೇಟಿ ನಡೆದ ಸಮಯ ಮತ್ತು ಸುರಂಗ ಯೋಜನೆಯ ಗುತ್ತಿಗೆ ನಿರ್ಧಾರ ಇನ್ನೂ ಅಂತಿಮವಾಗದಿರುವುದು ಸಹಜವಾಗಿಯೇ ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಮುಖ್ಯವಾದದ್ದು ಭೇಟಿಯನ್ನು ಆಧರಿಸಿ ಯಾವುದೇ ಒಳಒಪ್ಪಂದದ ಆರೋಪವನ್ನು ಸಾಬೀತಾದ ಸಂಗತಿಯಂತೆ ಹೇಳಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪಾರದರ್ಶಕ ಪ್ರಶ್ನೆಗಳನ್ನು ಕೇಳುವುದು ಮಾತ್ರ ಸಂಪೂರ್ಣ ನ್ಯಾಯಸಮ್ಮತ.

17,698 ಕೋಟಿಯ ಅಂದಾಜು; ₹22,267 ಕೋಟಿಯ ಬಿಡ್ ಇಲ್ಲಿ ಪ್ರಮುಖ ಪ್ರಶ್ನೆಗಳನ್ನು ಎಬ್ಬಿಸುತ್ತದೆ.  ಸುರಂಗ ರಸ್ತೆ ಯೋಜನೆಯ ರಾಜ್ಯ ಸರ್ಕಾರದ ಅಂದಾಜು ವೆಚ್ಚ ಸುಮಾರು ₹17,698 ಕೋಟಿ. ಅದಾನಿ ಎಂಟರ್‌ಪ್ರೈಸಸ್ ಸಲ್ಲಿಸಿರುವ ಬಿಡ್ ₹22,267 ಕೋಟಿ. ಅಂದರೆ ಸರ್ಕಾರದ ಅಂದಾಜಿಗಿಂತ ಸುಮಾರು ₹4,600 ಕೋಟಿ ಹೆಚ್ಚು. ಸುಮಾರು 16.75 ಕಿ.ಮೀ ಉದ್ದದ ಹೆಬ್ಬಾಳ–ಸೆಂಟ್ರಲ್ ಸಿಲ್ಕ್ ಬೋರ್ಡ್ ಸುರಂಗ ಸಂಪರ್ಕದ ಎರಡೂ ಪ್ಯಾಕೇಜ್‌ಗಳಿಗೆ ಅದಾನಿ ಸಂಸ್ಥೆ L1 ಆಗಿದೆ; ಆದರೆ ಗುತ್ತಿಗೆ ಇನ್ನೂ ಅಧಿಕೃತವಾಗಿ ಅಂತಿಮಗೊಂಡಿಲ್ಲ. ಇದು ಸಾಮಾನ್ಯ ಟೆಂಡರ್ ಅಂಕಿ-ಅಂಶವಲ್ಲ.  ಸರ್ಕಾರದ ಅಂದಾಜಿಗಿಂತ ಸಾವಿರಾರು ಕೋಟಿ ರೂಪಾಯಿ ಹೆಚ್ಚಿರುವ ಬಿಡ್ ಅನ್ನು ಸ್ವೀಕರಿಸುವುದಾದರೆ, ಅದರ ಹಿಂದೆ ಇರುವ ಹಣಕಾಸು ತರ್ಕವನ್ನು ಜನರಿಗೆ ಸ್ಪಷ್ಟಪಡಿಸಬೇಕಾಗುತ್ತದೆ. ಹೆಚ್ಚುವರಿ ವೆಚ್ಚ ಏಕೆ? ಯೋಜನೆಯ ವೆಚ್ಚ ಏರಿಕೆಗೆ ಕಾರಣವೇನು? ನಿರ್ಮಾಣ ಅವಧಿ ಎಷ್ಟು? ಸಾಲದ ಹೊರೆ ಯಾರ ಮೇಲಿದೆ? ನಿರ್ವಹಣಾ ವೆಚ್ಚ ಎಷ್ಟು? ಬಳಕೆದಾರರಿಂದ ಶುಲ್ಕ ವಸೂಲಿ ಮಾಡಲಾಗುತ್ತದೆಯೇ? ಯೋಜನೆಯ ಆರ್ಥಿಕ ಲಾಭ-ನಷ್ಟದ ಸಾರ್ವಜನಿಕ ಅಧ್ಯಯನ ನಡೆದಿದೆಯೇ? ಇವುಗಳಿಗೆ ಉತ್ತರ ನೀಡದೆ “ಟ್ರಾಫಿಕ್ ಪರಿಹಾರ” ಎಂಬ ಒಂದೇ ಘೋಷಣೆಯ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸಮರ್ಪಕವಲ್ಲ.

ನೋಡಿ, ಟ್ರಾಫಿಕ್ ಸಮಸ್ಯೆಗೆ ಸುರಂಗವೇ ಪರಿಹಾರವೇ? ಇದು ಇನ್ನೂ ಮೂಲಭೂತ ಪ್ರಶ್ನೆ. ನಗರ ಸಾರಿಗೆ ತಜ್ಞರ ಒಂದು ಪ್ರಮುಖ ವಾದವೇನೆಂದರೆ, ಹೆಚ್ಚುವರಿ ರಸ್ತೆ ಸಾಮರ್ಥ್ಯ ಹೆಚ್ಚಿಸಿದರೆ ವಾಹನ ಸಂಚಾರವೂ ಹೆಚ್ಚುವ ಸಾಧ್ಯತೆ ಇದೆ. ಇದನ್ನು ‘induced demand’ ಎಂದು ಕರೆಯಲಾಗುತ್ತದೆ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆ ಕೇವಲ ರಸ್ತೆಗಳ ಕೊರತೆಯಲ್ಲ. ಅದು ಸಾರ್ವಜನಿಕ ಸಾರಿಗೆಯ ಸಾಮರ್ಥ್ಯ, ಮೆಟ್ರೋ–ಬಸ್ ಸಂಪರ್ಕ, ಪಾದಚಾರಿ ಮೂಲಸೌಕರ್ಯ, ನಗರ ಯೋಜನೆ, ಉದ್ಯೋಗ–ವಸತಿ ಅಸಮತೋಲನ ಮತ್ತು ಖಾಸಗಿ ವಾಹನ ಅವಲಂಬನೆಯ ಒಟ್ಟಾರೆ ಸಮಸ್ಯೆ. ಹೀಗಿರುವಾಗ ₹22,267 ಕೋಟಿಯನ್ನು ಟನಲ್‌ ರಸ್ತೆಗೆ ಹಾಕುವುದಕ್ಕಿಂತ, ಅದೇ ಪ್ರಮಾಣದ ಸಂಪನ್ಮೂಲವನ್ನು ಸಾರ್ವಜನಿಕ ಸಾರಿಗೆ, ಬಸ್ ರ್ಯಾಪಿಡ್ ಟ್ರಾನ್ಸಿಟ್, ಮೆಟ್ರೋ ಸಂಪರ್ಕ ವಿಸ್ತರಣೆ, ಪಾದಚಾರಿ ಮಾರ್ಗಗಳು, ಸೈಕಲ್ ಜಾಲ ಮತ್ತು ಕೊನೆಯ ಮೈಲಿ ಸಂಪರ್ಕಕ್ಕೆ ಬಳಸಿದರೆ ನಗರದ ಸಂಚಾರದ ಮೇಲೆ ಪರಿಣಾಮ ಹೇಗಿರುತ್ತದೆ ಎಂಬ ಹೋಲಿಕೆ ಅಧ್ಯಯನ ಸಾರ್ವಜನಿಕವಾಗಿ ಲಭ್ಯವಾಗಬೇಕಲ್ಲವೇ? ಸುರಂಗ ಭೂಮಿಯ ಗರ್ಭದಲ್ಲಿ ನಿರ್ಮಾಣ ಆಗುತ್ತದೆ ಎಂಬ ಕಾರಣಕ್ಕೆ ಅದು ಪರಿಸರ ಸ್ನೇಹಿ ಯೋಜನೆ ಆಗುವುದಿಲ್ಲ. ಸುರಂಗದ ಪ್ರವೇಶ–ನಿರ್ಗಮನ ಪ್ರದೇಶಗಳು, ನಿರ್ಮಾಣ ಚಟುವಟಿಕೆ, ಮಣ್ಣು ತೆಗೆಯುವಿಕೆ, ಡಂಪಿಂಗ್, ನೀರಿನ ಹರಿವು, ಭೂಗರ್ಭಜಲದ ಮೇಲೆ ಪರಿಣಾಮ, ಮರಗಳ ತೆರವು, ನಿರ್ಮಾಣ ಅವಧಿಯ ಧೂಳು ಮತ್ತು ಶಬ್ದ—ಇವೆಲ್ಲವೂ ಪರಿಸರದ ಪ್ರಶ್ನೆಗಳೇ. ಅದರಲ್ಲೂ ಬೆಂಗಳೂರು ಈಗಾಗಲೇ ತನ್ನ ಹಸಿರು ಪ್ರದೇಶ, ಕೆರೆಗಳು ಮತ್ತು ಮರಗಳ ಕುರಿತು ಗಂಭೀರವಾದ ಸಾರ್ವಜನಿಕ ಚರ್ಚೆಯನ್ನು ಎದುರಿಸುತ್ತಿರುವ ನಗರ. ಹೀಗಾಗಿ ಸರ್ಕಾರದ ಮುಂದೆ ಇರುವ ಪ್ರಶ್ನೆ ಕೇವಲ “ಸುರಂಗದ ಒಳಗೆ ಎಷ್ಟು ವಾಹನಗಳು ಓಡುತ್ತವೆ?” ಎಂಬುದಲ್ಲ.ಸುರಂಗ ನಿರ್ಮಾಣದ ಮೊದಲು ಮತ್ತು ನಂತರ ನಗರದ ಪರಿಸರದ ಮೇಲೆ ಅದರ ಒಟ್ಟು ಪರಿಣಾಮವೇನು? ಎಂಬುದಾಗಿದೆ. ಇನ್ನು, ಅದಾನಿ ಸಮೂಹದ ಬಿಡ್‌ ಬಗ್ಗೆ ಯಾಕೆ ಇಲ್ಲಿ ಚರ್ಚೆಗೆ ಬರುತ್ತಿದೆ? ಎನ್ನುವುದನ್ನು ನೋಡುವುದಾದರೇ, ಉಡುಪಿಯ UPCL ಪ್ರಕರಣ ಪ್ರಸ್ತುತ ಚರ್ಚೆಗೆ ಬರುತ್ತದೆ.

ಅದಾನಿ ಸ್ವಾಮ್ಯದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು 2022ರಲ್ಲಿ ಪರಿಸರ ಹಾನಿ ಮತ್ತು ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿ ₹52.02 ಕೋಟಿ ಪರಿಸರ ಪರಿಹಾರ ಪಾವತಿಸಲು ನಿರ್ದೇಶಿಸಿತ್ತು. ಈಗಾಗಲೇ ಪಾವತಿಸಿದ್ದ ₹5 ಕೋಟಿಯನ್ನು ಕ್ರೆಡಿಟ್ ನೀಡಿ ಉಳಿದ ಮೊತ್ತವನ್ನು ಪಾವತಿಸಬೇಕೆಂದು NGT ಆದೇಶಿಸಿತ್ತು. ತೀರ್ಪಿನಲ್ಲಿ ಪರಿಸರ ಹಾನಿ, ಆರೋಗ್ಯದ ಪರಿಣಾಮಗಳು ಮತ್ತು ಕೃಷಿ ಚಟುವಟಿಕೆಗಳ ಮೇಲೆ ಉಂಟಾದ ಪರಿಣಾಮಗಳ ಕುರಿತು ಕ್ರಮಗಳನ್ನು ಸೂಚಿಸಲಾಗಿತ್ತು. ಅದಾನಿ ಪವರ್‌ನ ಸ್ವಂತ ವರದಿಯಲ್ಲಿಯೂ NGT 2022ರ ಆದೇಶದಂತೆ ₹47.02 ಕೋಟಿ ಹೆಚ್ಚುವರಿ ಪರಿಸರ ಪರಿಹಾರಕ್ಕೆ ಸಂಬಂಧಿಸಿದ ವಿಷಯ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದನ್ನು ದಾಖಲಿಸಲಾಗಿದೆ. ಅಂದರೆ ಈ ಪ್ರಕರಣವನ್ನು “ದಂಡ ಪಾವತಿಸಿ ಮುಗಿದ ಕಥೆ” ಎಂದು ಸರಳೀಕರಿಸಲಾಗುವುದಿಲ್ಲ; ಕಾನೂನು ಪ್ರಕ್ರಿಯೆಯೂ ಸಂಬಂಧಿಸಿದೆ. ಹೀಗಾಗಿ ಸುರಂಗ ಯೋಜನೆಯ ಸಂದರ್ಭದಲ್ಲಿ ಪರಿಸರವಾದಿಗಳು ಈ ಹಿಂದಿನ ದಾಖಲೆಯನ್ನು ಪ್ರಶ್ನಿಸುವುದು ಅಸಹಜವಲ್ಲ. ಆದರೆ ಇಲ್ಲೊಂದು ಸೂಕ್ಷ್ಮ ವ್ಯತ್ಯಾಸವಿದೆ: ಉಡುಪಿಯ ವಿದ್ಯುತ್ ಸ್ಥಾವರದ ಪರಿಸರ ಪ್ರಕರಣವನ್ನು ಆಧರಿಸಿ ಸುರಂಗ ರಸ್ತೆ ಯೋಜನೆಯಲ್ಲಿಯೂ ಅದೇ ರೀತಿಯ ಉಲ್ಲಂಘನೆ ಖಚಿತ ಎಂದು ಹೇಳುವುದು ಸರಿಯಲ್ಲ. ಬದಲಿಗೆ, ಹಿಂದಿನ ಪರಿಸರ ದಾಖಲೆಗಳನ್ನು ಪರಿಗಣಿಸಿ ಬೆಂಗಳೂರಿನ ಯೋಜನೆಗೆ ಇನ್ನಷ್ಟು ಕಠಿಣ ಪರಿಸರ ಮಾನದಂಡ, ಸ್ವತಂತ್ರ ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಪರಿಶೀಲನೆ ಇರಬೇಕು ಎಂಬುದು ಹೆಚ್ಚು ಸಮರ್ಥನೀಯವಾದ ಬೇಡಿಕೆ. ಇನ್ನು, ಕಾಂಗ್ರೆಸ್‌ ‘ಅದಾನಿ’ಬಗ್ಗೆ ಮಾಡುವ ವಿರೋಧವೂ ಈಗ ಪ್ರಶ್ನೆಯಲ್ಲಿದೆ.

 ಈ ಬೆಳವಣಿಗೆಯ ರಾಜಕೀಯ ಆಯಾಮವನ್ನೂ ಕಡೆಗಣಿಸಲಾಗದು. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ಸಂದರ್ಭಗಳಲ್ಲಿ ಅದಾನಿ ಸಮೂಹದ ವಿರುದ್ಧ ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಕರ್ನಾಟಕದಲ್ಲಿ ಅದೇ ಸಮೂಹದ ಮುಖ್ಯಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದು ಬಿಜೆಪಿಗೆ ಕಾಂಗ್ರೆಸ್‌ನ “ದ್ವಂದ್ವ ನೀತಿ” ಆರೋಪಿಸಲು ಅವಕಾಶ ನೀಡಿದೆ. ಬಿಜೆಪಿ ನಾಯಕ ಆರ್. ಅಶೋಕ್ ಕೂಡ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಆದರೆ ಎಡಪಂಥೀಯ ದೃಷ್ಟಿಕೋನದಿಂದ ನೋಡಿದಾಗ ಬಿಜೆಪಿಯ ಟೀಕೆಯನ್ನು ಹಾಗೆಯೇ ಸ್ವೀಕರಿಸುವ ಅಗತ್ಯವೂ ಇಲ್ಲ. ಯಾಕೆಂದರೆ ಪ್ರಶ್ನೆ “ಕಾಂಗ್ರೆಸ್ ಅದಾನಿಯನ್ನು ಭೇಟಿಯಾಗಬಹುದೇ?” ಎಂಬುದಕ್ಕಿಂತ ದೊಡ್ಡ ಪ್ರಶ್ನೆ ಏನೆಂದರೇ, ಒಂದು ಸರ್ಕಾರ ದೊಡ್ಡ ಕಾರ್ಪೊರೇಟ್ ಸಂಸ್ಥೆಯೊಂದಿಗೆ ವ್ಯವಹರಿಸುವಾಗ ಸಾರ್ವಜನಿಕ ಹಿತಾಸಕ್ತಿ, ಟೆಂಡರ್ ಪಾರದರ್ಶಕತೆ, ಪರಿಸರ ನ್ಯಾಯ ಮತ್ತು ಹಣಕಾಸಿನ ಹೊಣೆಗಾರಿಕೆಯನ್ನು ಹೇಗೆ ಖಚಿತಪಡಿಸುತ್ತದೆ? ಎನ್ನುವುದಾಗಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅದಾನಿಯನ್ನು ಟೀಕಿಸಿ, ರಾಜ್ಯದಲ್ಲಿ ಅದೇ ಕಾರ್ಪೊರೇಟ್ ಸಮೂಹದೊಂದಿಗೆ ದೊಡ್ಡ ಮೂಲಸೌಕರ್ಯ ಒಪ್ಪಂದ ಮಾಡಿಕೊಳ್ಳುವುದಾದರೆ ಅದು ರಾಜಕೀಯ ವಿರೋಧಾಭಾಸವಾಗಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಇದು ಭಾರತೀಯ ಅಭಿವೃದ್ಧಿ ಮಾದರಿಯಲ್ಲಿನ ಕಾರ್ಪೊರೇಟ್ ಅವಲಂಬನೆಯ ಪ್ರಶ್ನೆ. ‘ಅಭಿವೃದ್ಧಿ’ ಯಾರಿಗಾಗಿ? ₹22,267 ಕೋಟಿ ಎಂದರೆ ಕೇವಲ ಒಂದು ಯೋಜನೆಯ ಮೊತ್ತವಲ್ಲ. ಅದು ಜನರ ತೆರಿಗೆ ಹಣ. ಆ ಹಣವನ್ನು ನಗರಕ್ಕೆ ಸುರಂಗ ನಿರ್ಮಿಸಲು ಬಳಸಿದಾಗ, ಅದರ ಪ್ರಯೋಜನವನ್ನು ಯಾರು ಪಡೆಯುತ್ತಾರೆ ಎಂಬುದನ್ನು ಕೇಳಲೇಬೇಕು. ಸುರಂಗದ ಮೂಲಕ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಖಾಸಗಿ ಕಾರು ಮಾಲೀಕರಿಗೆ ಹೆಚ್ಚು ಪ್ರಯೋಜನವಾಗುತ್ತದೆಯೇ? ಅಥವಾ ಬಸ್ಸಿನಲ್ಲಿ ಪ್ರಯಾಣಿಸುವ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಕೆಳ-ಮಧ್ಯಮ ವರ್ಗದ ಜನರಿಗೆ?  ನಗರದ ಮೂಲಸೌಕರ್ಯವನ್ನು ಕಾರುಗಳಿಗಾಗಿ ನಿರ್ಮಿಸಬೇಕೇ, ಜನರಿಗಾಗಿ ನಿರ್ಮಿಸಬೇಕೇ? ಒಂದು ಕಾರಿಗೆ ಸುರಂಗ ಮಾರ್ಗದಲ್ಲಿ ವೇಗದ ಮಾರ್ಗ ಸಿಗುತ್ತದೆ. ಆದರೆ ಅದೇ ನಗರದಲ್ಲಿ ಬಸ್ಸಿಗಾಗಿ ಜನರು ರಸ್ತೆಯ ಬದಿಯಲ್ಲಿ ಅರ್ಧ ಗಂಟೆ ಕಾಯಬೇಕಾದರೆ, ಅದು ಯಾವ ರೀತಿಯ ನಗರಾಭಿವೃದ್ಧಿ? ಇನ್ನು, ಡಿಕೆಶಿ ಅವರು ಹೇಳಿದ ಹಾಗೆ, ಸೌಜನ್ಯದ ಭೇಟಿ ಇರಲಿ; ಪಾರದರ್ಶಕತೆಯೂ ಇರಲಿ.  ಗೌತಮ್ ಅದಾನಿ–ಡಿ.ಕೆ. ಶಿವಕುಮಾರ್ ಭೇಟಿ ನಿಜವಾಗಿಯೂ ಕೇವಲ ಸೌಜನ್ಯದ ಭೇಟಿಯಾಗಿರಬಹುದು.

ಅದನ್ನು ಯೋಜನೆಯ ಗುತ್ತಿಗೆಗೆ ಸಂಬಂಧಿಸಿದ ಗುಪ್ತ ಮಾತುಕತೆ ಎಂದು ಘೋಷಿಸುವ ಆಧಾರ ಈಗಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿಯ ಯೋಜನೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಕಂಪನಿಯ ಮುಖ್ಯಸ್ಥರು ಮತ್ತು ನಿರ್ಧಾರ ಕೈಗೊಳ್ಳುವ ಸರ್ಕಾರದ ಮುಖ್ಯಸ್ಥರ ನಡುವೆ ಭೇಟಿ ನಡೆದಿರುವಾಗ, ಪಾರದರ್ಶಕತೆಯ ಮಾನದಂಡ ಇನ್ನಷ್ಟು ಎತ್ತರವಾಗಬೇಕು.  ಸರ್ಕಾರ ಮಾಡಬೇಕಾದದ್ದು ಸರಳವಿದೆ. * ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ಸಾಧ್ಯವಾದಷ್ಟು ಸಾರ್ವಜನಿಕಗೊಳಿಸಬೇಕು. * ಟೆಂಡರ್ ಮೌಲ್ಯಮಾಪನದ ಮಾನದಂಡಗಳನ್ನು ಬಹಿರಂಗಪಡಿಸಬೇಕು. * ₹17,698 ಕೋಟಿಯ ಅಂದಾಜಿನಿಂದ ₹22,267 ಕೋಟಿಯ ಬಿಡ್‌ಗೆ ಏಕೆ ಬಂದಿತು ಎಂಬುದನ್ನು ವಿವರಿಸಬೇಕು. * ಯೋಜನೆಯ ಪರಿಸರ ಪರಿಣಾಮ ಅಧ್ಯಯನವನ್ನು ಸಾರ್ವಜನಿಕ ಚರ್ಚೆಗೆ ತೆರೆಯಬೇಕು. * ಪರ್ಯಾಯ ಸಾರ್ವಜನಿಕ ಸಾರಿಗೆ ಹೂಡಿಕೆಗಳೊಂದಿಗೆ ಯೋಜನೆಯ ವೆಚ್ಚ–ಲಾಭ ಹೋಲಿಕೆ ಪ್ರಕಟಿಸಬೇಕು. * ಗುತ್ತಿಗೆದಾರರ ಹಿಂದಿನ ಪರಿಸರ ಮತ್ತು ಕಾನೂನು ದಾಖಲೆಗಳ ಸ್ವತಂತ್ರ ಪರಿಶೀಲನೆ ನಡೆಸಬೇಕು. * ಅಂತಿಮ ನಿರ್ಧಾರಕ್ಕೂ ಮೊದಲು ವಿಧಾನಮಂಡಲ ಮತ್ತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಬೆಂಗಳೂರಿನ ಭವಿಷ್ಯವನ್ನು ‘ಸುರಂಗ’ದೊಳಗೆ ಮುಚ್ಚಬಾರದು. ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ತುರ್ತು ಪರಿಹಾರ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ.ಆದರೆ ತುರ್ತು ಪರಿಹಾರವೆಂದರೆ ದುಬಾರಿ ಪರಿಹಾರ ಎಂದರ್ಥವಲ್ಲ. ಮೂಲಸೌಕರ್ಯ ಅಭಿವೃದ್ಧಿ ಎಂದರೆ ದೊಡ್ಡ ಕಂಪನಿಗಳಿಗೆ ದೊಡ್ಡ ಗುತ್ತಿಗೆ ನೀಡುವುದಷ್ಟೇ ಅಲ್ಲ. ಅದು ನಗರದಲ್ಲಿ ವಾಸಿಸುವ ಬಹುಸಂಖ್ಯಾತ ಜನರ ಬದುಕನ್ನು ಸುಲಭಗೊಳಿಸುವ ರಾಜಕೀಯ ನಿರ್ಧಾರವಾಗಬೇಕು. ಇಂದು ಕೇಳಬೇಕಾದ ಪ್ರಶ್ನೆ “ಸುರಂಗ ರಸ್ತೆ ನಿರ್ಮಾಣವಾಗುತ್ತದೆಯೇ?” ಎಂಬುದಲ್ಲ. “₹22,267 ಕೋಟಿ ಯಾರಿಗಾಗಿ ಖರ್ಚಾಗುತ್ತಿದೆ?” “ಈ ಯೋಜನೆಯಿಂದ ಬೆಂಗಳೂರು ಯಾರಿಗೆ ಹೆಚ್ಚು ಅನುಕೂಲವಾಗಲಿದೆ?” “ಸಾರ್ವಜನಿಕ ಸಾರಿಗೆಯ ಪರ್ಯಾಯಗಳನ್ನು ಯಾಕೆ ಸಮಾನ ಗಂಭೀರತೆಯಿಂದ ಪರಿಗಣಿಸಲಾಗುತ್ತಿಲ್ಲ?” ಮತ್ತು ಎಲ್ಲಕ್ಕಿಂತ ಮುಖ್ಯವಾಗಿ— “ಕಾರ್ಪೊರೇಟ್ ಬಂಡವಾಳದೊಂದಿಗೆ ಸರ್ಕಾರದ ಸಂಬಂಧದಲ್ಲಿ ಸಾರ್ವಜನಿಕ ಹಿತಾಸಕ್ತಿ ಎಲ್ಲಿದೆ?” ನೋಡಿ, ಗೌತಮ್ ಅದಾನಿ ಮತ್ತು ಡಿ.ಕೆ. ಶಿವಕುಮಾರ್ ಅವರ ಭೇಟಿ ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಬದಲಾಗಿ, ಆ ಪ್ರಶ್ನೆಗಳನ್ನು ಇನ್ನಷ್ಟು ದೊಡ್ಡದಾಗಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

- ಶ್ರೀರಾಜ್‌ ವಕ್ವಾಡಿ 

Sunday, August 23, 2026

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ನ್ಯಾಯಕ್ಕಾಗಿ ಏಳು ಗಂಟೆಗಳ ಧರಣಿಯ ರಾಜಕೀಯ ಅರ್ಥ

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ, ರಾಹುಲ್ ಗಾಂಧಿ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎದುರು ಏಳು ಗಂಟೆಗಳ ಕಾಲ ಧರಣಿ ನಡೆಸಿರುವುದು ಕೇವಲ ಒಂದು ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಎಂದು ನೋಡಲಾಗದು. ಇದು ಪ್ರತಿಭಟನೆ ನಡೆಸುವ ಹಕ್ಕು, ಪೊಲೀಸ್ ಅಧಿಕಾರದ ಬಳಕೆ ಮತ್ತು ಆಡಳಿತದ ಉತ್ತರದಾಯಿತ್ವದ ಕುರಿತಾದ ದೊಡ್ಡ ಪ್ರಶ್ನೆಗಳನ್ನು ಎತ್ತುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎನ್ನುವುದು ಅಪರಾಧವಲ್ಲ. ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತುವುದು, ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ಪ್ರಶ್ನಿಸುವುದು ಮತ್ತು ವಿದ್ಯಾರ್ಥಿಗಳ ಪರವಾಗಿ ಬೀದಿಗೆ ಇಳಿಯುವುದು ನಾಗರಿಕ ಹಕ್ಕಿನ ಭಾಗ. ಅಂತಹ ಪ್ರತಿಭಟನೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪೊಲೀಸರು ಬಳಸುವ ಬಲಕ್ಕೆ ಸ್ಪಷ್ಟವಾದ ಕಾನೂನುಬದ್ಧ ಕಾರಣ ಮತ್ತು ಹೊಣೆಗಾರಿಕೆ ಇರಬೇಕು. ಇಲ್ಲಿ ಪ್ರಮುಖ ಪ್ರಶ್ನೆ ಪೆಲೆಟ್ ಗನ್ ಯಾಕೆ ಬಳಕೆ ಮಾಡಿದ್ದಾರೆ ಎನ್ನುವುದೇ ಆಗಿದೆ. ಪೆಲೆಟ್ ಗನ್ ಸಾಮಾನ್ಯ ಜನರನ್ನು ನಿಯಂತ್ರಿಸಲು ಬಳಸುವ  ಸಾಧನವಲ್ಲ. ಅದು ದೇಹಕ್ಕೆ ಗಂಭೀರ ಗಾಯ ಉಂಟುಮಾಡಬಲ್ಲ ಅಪಾಯಕಾರಿ ಆಯುಧ. 

ಹಾಗಾದರೆ ಪ್ರತಿಭಟನಾಕಾರರ ಮೇಲೆ ಅದನ್ನು ಬಳಸುವ ಅಗತ್ಯ ಯಾಕೆ ಎದುರಾಯಿತು? ಅದನ್ನು ಬಳಸಲು ಯಾರು ಆದೇಶಿಸಿದರು? ಯಾವ ಪರಿಸ್ಥಿತಿಯಲ್ಲಿ ಬಳಕೆಗೆ ಅನುಮತಿ ನೀಡಲಾಯಿತು? ಪೊಲೀಸ್ ಅಧಿಕಾರಿಗಳು ತಮ್ಮ ನಿರ್ಧಾರದ ಬಗ್ಗೆ ಯಾರಿಗೆ ಉತ್ತರ ನೀಡಬೇಕು? ಎನ್ನುವ ಸಾಲುಸಾಲು ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ. ಇದಕ್ಕಿಂತ ಗಂಭೀರವಾದ ಪ್ರಶ್ನೆ ಎಫ್‌ಐಆರ್ ದಾಖಲಿಸಲು ಯಾಕೆ ಏಳು ಗಂಟೆಗಳ ಧರಣಿ ಬೇಕಾಯಿತು ಎಂಬುದು. ಒಬ್ಬ ಗಾಯಗೊಂಡ ವಿದ್ಯಾರ್ಥಿ ದೂರು ನೀಡಿದಾಗ, ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಲ್ಲವೇ? ಪ್ರಕರಣ ದಾಖಲಿಸುವುದು ರಾಜಕೀಯ ಒತ್ತಡ, ಸಚಿವಾಲಯದ ಅನುಮತಿ ಅಥವಾ ಮೇಲಧಿಕಾರಿಗಳ ಸೂಚನೆಗೆ ಅವಲಂಬಿತವಾಗಿದ್ದರೆ, ಪೊಲೀಸ್ ವ್ಯವಸ್ಥೆಯ ಸ್ವಾಯತ್ತತೆಯ ಬಗ್ಗೆ ಸಹಜವಾಗಿಯೇ ಪ್ರಶ್ನೆಗಳು ಮೂಡುತ್ತವೆ. ರಾಹುಲ್ ಗಾಂಧಿ ಆರೋಪಿಸಿರುವಂತೆ, 'ಮೇಲಿನವರ' ಒತ್ತಡದಿಂದ ಆರಂಭದಲ್ಲಿ ಪ್ರಕರಣ ದಾಖಲಿಸದಿದ್ದರೆ, ಅದು ಇನ್ನಷ್ಟು ಗಂಭೀರ ವಿಚಾರ. ಏಕೆಂದರೆ ಇಲ್ಲಿ ಪ್ರಶ್ನೆ ಕೇವಲ ಒಬ್ಬ ವಿದ್ಯಾರ್ಥಿಯ ಗಾಯದ ಬಗ್ಗೆ ಮಾತ್ರವಲ್ಲ; ಅಧಿಕಾರದ ವಿರುದ್ಧ ದೂರು ನೀಡುವ ಸಾಮಾನ್ಯ ನಾಗರಿಕನಿಗೆ ನ್ಯಾಯ ಪಡೆಯಲು ರಾಜಕೀಯ ಹಸ್ತಕ್ಷೇಪದ ಅವಶ್ಯಕತೆ ಇದೆಯೇ ಎಂಬುದಾಗಿದೆ. ಅದೇ ಸಂದರ್ಭದಲ್ಲಿ, ರಾಹುಲ್ ಗಾಂಧಿಯವರ ಧರಣಿಯನ್ನು ಕೇವಲ ರಾಜಕೀಯ ನಾಟಕ ಎಂದು ತಳ್ಳಿಹಾಕುವುದೂ ಸಮಸ್ಯೆಯ ಮೂಲವನ್ನು ಮರೆಮಾಚುತ್ತದೆ. 

ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಪ್ರಶ್ನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದು; ಆದರೆ ಅದರಿಂದ ವಿದ್ಯಾರ್ಥಿಗಳ ಸಮಸ್ಯೆ ಅಸತ್ಯವಾಗುವುದಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ, ನಿರುದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆಯ ವಾಣಿಜ್ಯೀಕರಣದಿಂದ ಈಗಾಗಲೇ ಅಸಮಾಧಾನಗೊಂಡಿರುವ ಯುವಜನತೆಯ ನಡುವೆ ಇಂತಹ ಘಟನೆಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಕುಂದಿಸುತ್ತವೆ. ನೀಟ್‌ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದೆ. ಒಂದು ಪ್ರಶ್ನೆಪತ್ರಿಕೆ ಸೋರಿಕೆ ಎಂದರೆ ಕೇವಲ ಪರೀಕ್ಷಾ ಅಕ್ರಮವಲ್ಲ; ಅದು ವರ್ಷಗಳ ಕಾಲ ತಯಾರಿ ನಡೆಸಿದ ಪ್ರಾಮಾಣಿಕ ವಿದ್ಯಾರ್ಥಿಯ ಅವಕಾಶದ ಮೇಲೆ ನಡೆಯುವ ದಾಳಿ. ಹಣ, ಪ್ರಭಾವ ಅಥವಾ ಸಂಪರ್ಕ ಹೊಂದಿರುವವರಿಗೆ ಒಂದು ಬಾಗಿಲು ತೆರೆದು, ಸಾಮಾನ್ಯ ವಿದ್ಯಾರ್ಥಿಗೆ ಮತ್ತೊಂದು ಬಾಗಿಲು ಮುಚ್ಚುವ ವ್ಯವಸ್ಥೆ ರೂಪುಗೊಂಡರೆ ಶಿಕ್ಷಣದಲ್ಲಿ ಸಮಾನ ಅವಕಾಶ ಎಂಬ ಪರಿಕಲ್ಪನೆಯೇ ಅರ್ಥಹೀನವಾಗುತ್ತದೆ. 

ಆದ್ದರಿಂದ ಈ ಘಟನೆಯಲ್ಲಿ ತನಿಖೆ ನಡೆಯಬೇಕಾದದ್ದು ಕೇವಲ ಪೆಲೆಟ್ ಗನ್‌ ಬಳಕೆ ಮಾಡಿದ ವ್ಯಕ್ತಿಯ ವಿರುದ್ಧವಲ್ಲ. ಪೆಲೆಟ್ ಗನ್ ಬಳಕೆಗೆ ಆದೇಶ ನೀಡಿದವರು ಯಾರು? ಯಾವ ಅಧಿಕಾರಿಯ ಸೂಚನೆಯ ಮೇರೆಗೆ ಬಳಸಲಾಯಿತು? ಬಳಕೆಗೆ ಸಂಬಂಧಿಸಿದ ದಾಖಲೆಗಳಿವೆಯೇ? ಗಾಯಗೊಂಡ ವಿದ್ಯಾರ್ಥಿಯ ವೈದ್ಯಕೀಯ ವರದಿ ಏನು ಹೇಳುತ್ತದೆ? ದೂರು ದಾಖಲಿಸಲು ಆರಂಭದಲ್ಲಿ ಏಕೆ ನಿರಾಕರಿಸಲಾಯಿತು? ಪೊಲೀಸ್ ಅಧಿಕಾರಿಗಳ ಮೇಲೆ ಯಾರಾದರೂ ಒತ್ತಡ ಹೇರಿದ್ದರೇ?—ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಏಳು ಗಂಟೆಗಳ ಧರಣಿಯ ನಂತರ ಎಫ್‌ಐಆರ್ ದಾಖಲಾಗಿರುವುದನ್ನು ನ್ಯಾಯದ ಅಂತಿಮ ಜಯ ಎಂದು ನೋಡಲಾಗದು. ಅದು ಕೇವಲ ಮೊದಲ ಹೆಜ್ಜೆ. 

ಎಫ್‌ಐಆರ್ ದಾಖಲಾದ ನಂತರ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಮುಂದೆ ಉತ್ತರಿಸಬೇಕು. ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಸರ್ಕಾರವನ್ನು ಬೆಂಬಲಿಸುವವರ ಪ್ರತಿಭಟನೆಯನ್ನು ಹೇಗೆ ನೋಡುತ್ತದೆ ಎಂಬುದರಲ್ಲಿ ಇಲ್ಲ; ಸರ್ಕಾರವನ್ನು ಪ್ರಶ್ನಿಸುವವರ ಪ್ರತಿಭಟನೆಯನ್ನು ಹೇಗೆ ಎದುರಿಸುತ್ತದೆ ಎಂಬುದರಲ್ಲಿ ಇದೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ ಅವರ ಕೈಗೆ ಪೆಲೆಟ್ ಗನ್ ಉತ್ತರವಾಗಬಾರದು. ಅವರ ಪ್ರಶ್ನೆಗೆ ಸರ್ಕಾರದ ಉತ್ತರ ಬೇಕು. ಇನ್ನು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟದ ಮಧ್ಯೆ ನಡೆದ ಈ ಘಟನೆ ಮತ್ತೊಂದು ಮೂಲಭೂತ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ—ನ್ಯಾಯ ಪಡೆಯಲು ಸಾಮಾನ್ಯ ನಾಗರಿಕ ಪೊಲೀಸ್ ಠಾಣೆಯ ಬಾಗಿಲು ತಟ್ಟಿದರೆ ಸಾಕೇ, ಅಥವಾ ಅವನ ಪರವಾಗಿ ಒಬ್ಬ ಪ್ರಭಾವಿ ರಾಜಕಾರಣಿ ಏಳು ಗಂಟೆಗಳ ಕಾಲ ಧರಣಿ ಕುಳಿತುಕೊಳ್ಳಬೇಕೇ? ಈ ಪ್ರಶ್ನೆಗೆ ಸರ್ಕಾರವೂ, ಪೊಲೀಸ್ ವ್ಯವಸ್ಥೆಯೂ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳೂ ಉತ್ತರಿಸಬೇಕಿದೆ. 

-ಶ್ರೀರಾಜ್ ವಕ್ವಾಡಿ

ಧರ್ಮಸ್ಥಳದ ಎಸ್‌ಐಟಿ ವರದಿ: ಸರ್ಕಾರದ ಮೌನದ ಹಿಂದೆ ಏನಿದೆ?

ಧರ್ಮಸ್ಥಳದ ಸುತ್ತಮುತ್ತ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ, ಕೊಲೆ, ನಾಪತ್ತೆ ಹಾಗೂ ಅಸಹಜ ಸಾವುಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)  ಧರ್ಮಸ್ಥಳ ಪ್ರಕರಣದ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಯ ಅಂತಿಮ ವರದಿಯನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಬದಲಾಗಿ ನೇರವಾಗಿ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಈ ನಡುವೆ ಎಸ್‌ಐಟಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ, ರಾಜ್ಯ ಮಹಿಳಾ ಆಯೋಗಕ್ಕೆ ಸಾವಿರ ಪುಟಗಳ ಪ್ರತ್ಯೇಕ ವರದಿಯನ್ನು ಸಲ್ಲಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ. ಮಾತ್ರವಲ್ಲದೇ ಗೃಹ ಇಲಾಖೆಯ ಸಂಬಂಧಿತ ಶಾಖೆಯಲ್ಲಿ ಈ ಕುರಿತು ನಡೆದ ಸಭೆಯ ನಡೆದಿದೆ, ಸಭೆಯ ನಡವಳಿಯೂ ಲಭ್ಯವಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಇದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಸರ್ಕಾರದ ತನಿಖಾ ಸಂಸ್ಥೆಯೊಂದು ನಡೆಸಿದ ತನಿಖೆಯ ವರದಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಾಗಿದ್ದರೆ, ಅದನ್ನು ಮುಚ್ಚಿಡುವುದಕ್ಕೆ…. ಬೇಡ ಬಿಡಿ ಸ್ವಲ್ಪ ಸಭ್ಯ ಭಾಷೆಯಲ್ಲೇ ಹೇಳುವುದಾದರೇ, ಬಹಿರಂಗಗೊಳಿಸದೇ ಇರುವುದಕ್ಕೆ ಸರ್ಕಾರ ನೀಡುವ ಕಾರಣವೂ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ವಿಶೇಷವಾಗಿ, ಹಲವು ವರ್ಷಗಳಿಂದ ಜನರಲ್ಲಿ ಅನುಮಾನ ಮತ್ತು ಆತಂಕ ಹುಟ್ಟಿಸಿರುವ ಸಾವು-ನಾಪತ್ತೆ ಪ್ರಕರಣಗಳ ಸರಣಿಗೆ ಸಂಬಂಧಿಸಿದ ತನಿಖೆಯ ಪಾರದರ್ಶಕತೆಯ ಅಗತ್ಯ ಇಲ್ಲಿ ಬಹಳ ಮುಖ್ಯ. ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿರುವುದು ಹೌದಾದರೇ, ಅದನ್ನು ಬಹಿರಂಗಪಡಿಸಲು ಕಾನೂನುಬದ್ಧವಾಗಿ ಸಾಧ್ಯವಿಲ್ಲ ಎನ್ನುವುದಾದರೆ, ಯಾವ ನಿರ್ದಿಷ್ಟ ಕಾರಣದಿಂದ ಸಾಧ್ಯವಿಲ್ಲ? ಯಾವ ಕಾನೂನು ವಿಧಿಯ ಅಡಿಯಲ್ಲಿ ಮಾಹಿತಿಯನ್ನು ಒದಗಿಸುವುದಕ್ಕೆ ನಿರಾಕರಿಸಲಾಗಿದೆ? ತನಿಖೆ ಇನ್ನೂ ಬಾಕಿಯಿದೆಯೇ? ಯಾರಾದರೂ ಆರೋಪಿಗಳ ಹಿತಾಸಕ್ತಿಗೆ ಧಕ್ಕೆಯಾಗಬಹುದೇ? ಅಥವಾ ವರದಿಯಲ್ಲಿರುವ ಕೆಲವು ಅಂಶಗಳು ರಾಜಕೀಯವಾಗಿ ಅಥವಾ ಆಡಳಿತಾತ್ಮಕವಾಗಿ ಅಸಹಜ ಪ್ರಶ್ನೆಗಳನ್ನು ಹುಟ್ಟುಹಾಕಬಹುದೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕಾಗಿದೆ. ಇಲ್ಲದಿದ್ದಲ್ಲಿ, ವರದಿ ಸಲ್ಲಿಕೆ ಆಗಿರುವುದು ಹೌದಾದಲ್ಲಿ ವರದಿಯನ್ನು ಬಹಿರಂಗಗೊಳಿಸಬೇಕಿದೆ. 

ಇದರ ಜೊತೆಗೆ ಮತ್ತೊಂದು ಗಂಭೀರ ಪ್ರಶ್ನೆ ಉದ್ಭವಿಸುತ್ತದೆ. ಎಸ್‌ಐಟಿ ವರದಿಯ ಬಗ್ಗೆ ಗೃಹ ಇಲಾಖೆಯ ಮಟ್ಟದಲ್ಲಿ ಸಭೆಗಳು ನಡೆದಿದ್ದರೆ, ಅದರ ನಡವಳಿ ಎಲ್ಲಿ? ಸಭೆಯೇ ನಡೆದಿಲ್ಲ ಎಂದಾದರೆ, ವರದಿ ಸರ್ಕಾರದ ಮಟ್ಟದಲ್ಲಿ ಹೇಗೆ ಪರಿಶೀಲನೆಯಾಯಿತು? ಸಭೆ ನಡೆದಿದ್ದರೂ ನಡವಳಿ ದಾಖಲಾಗಿಲ್ಲ ಎಂದಾದರೆ, ಆಡಳಿತಾತ್ಮಕವಾಗಿ ಅದು ಹೇಗೆ ಸಮರ್ಥನೀಯ? ಇಲ್ಲಿ ಬೇರೇನೋ ʼಷಡ್ಯಂತ್ರʼ ಆಗಿದೆ ಎನ್ನುವುದೇ ಇದರ ಅರ್ಥ ಅಲ್ವಾ!? ನೋಡಿ, ಮಾಹಿತಿಯನ್ನು ನೀಡದಿರುವುದು ಮತ್ತು ಮಾಹಿತಿಯೇ ಇಲ್ಲದಿರುವುದು—ಇವೆರಡೂ ಒಂದೇ ವಿಷಯವಲ್ಲ. ಈ ವ್ಯತ್ಯಾಸವನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು. ಧರ್ಮಸ್ಥಳದ ಸುತ್ತ ಮುತ್ತ ನಡೆದಿದೆ ಎಂದು ಹೇಳಲಾಗುತ್ತಿರುವ ಈ ಸೂಕ್ಷ್ಮ ಪ್ರಕರಣಗಳಲ್ಲಿ ಜನರ ನಂಬಿಕೆ ಅತ್ಯಂತ ಮುಖ್ಯ. ತನಿಖೆಯ ಮೇಲೆ ಅನುಮಾನ ಮೂಡಿದಾಗ ಕೇವಲ “ತನಿಖೆ ನಡೆದಿದೆ” ಎಂದು ಹೇಳುವುದಷ್ಟೇ ಸಾಲದು. ತನಿಖೆಯ ವ್ಯಾಪ್ತಿ ಏನು? ಯಾವ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿಕೊಳ್ಳಲಾಯಿತು? ಯಾವ ಸಾಕ್ಷ್ಯಗಳನ್ನು ಪರಿಗಣಿಸಲಾಯಿತು? ಯಾವ ನಿರ್ಣಯಕ್ಕೆ ಬರಲಾಯಿತು? ಮುಂದಿನ ಕ್ರಮವೇನು? ಇಂತಹ ಮೂಲಭೂತ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಾಗುತ್ತದೆ.

 ಇಲ್ಲಿ “ಸರ್ಕಾರ ಯಾರನ್ನು ರಕ್ಷಿಸುತ್ತಿದೆ?” ಎಂಬ ರಾಜಕೀಯ ಪ್ರಶ್ನೆಯೂ ಸಹಜವಾಗಿಯೇ ಕೇಳಿಬರುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಸಾಕ್ಷ್ಯವಿಲ್ಲದೆ ಆರೋಪ ಹೊರಿಸುವುದು ಸರಿಯಲ್ಲ. ಬದಲಿಗೆ, ವರದಿ ಸಲ್ಲಿಕೆ ಆಗಿದ್ದು ಹೌದಾದರೇ, ವರದಿ ಬಹಿರಂಗಪಡಿಸದಿರುವ ಕಾರಣವೇನು ಎಂಬುದನ್ನು ಬಹಿರಂಗಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಪರಿಣಾಮಕಾರಿ ಪ್ರಶ್ನೆಯಲ್ಲವೇ ? ಈ ಬಗ್ಗೆ ಒಂದೇ ಒಂದು ಮಾತಿಲ್ಲ ಯಾಕೆ ? ಅಧಿವೇಶನ ನಡೆಯುತ್ತಿದೆ. ಯಾವೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ಮಾತೇ ಆಡಿಲ್ಲ. ಕಳೆದ ಅಧಿವೇಶನದ ಸಂದರ್ಭದಲ್ಲಿ ಈ ಬಗ್ಗೆ ಬಹಳ ದೊಡ್ಡ ವಿವಾದವನ್ನೇ ಎಬ್ಬಿಸಿದ್ದ ವಿಪಕ್ಷದವರು, ಈ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ. ಪಾದಯಾತ್ರೆ ಮಾಡಿದವರು, ಧರ್ಮ ರಕ್ಷಣೆ ಎಂದವರು, ಷಡ್ಯಂತ್ರ ಎಂದವರು ಈಗ ತುಟಿ ಬಿಚ್ಚದೇ ಉಳಿದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಕೆಯಾಗಿ, ಆ ವರದಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎನ್ನುವುದಾದರೆ, ಕನಿಷ್ಠ ಅದರ ನಿರಾಕರಣೆಯ ಕಾನೂನು ಆಧಾರವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು. ಅಥವಾ ಇನ್ನೂ ವರದಿ ಸಲ್ಲಿಕೆಯಾಗಿಲ್ಲ, ತನಿಖೆಯ ಮುಂದಿನ ಹಂತ ಇನ್ನೂ ಆಗಬೇಕಿದೆ ಎನ್ನುವುದನ್ನಾದರೂ ಹೇಳಬೇಕು. ತನಿಖೆ ಪೂರ್ಣಗೊಂಡಿಲ್ಲ ಎನ್ನುವ ಸಬೂಬು ಕೊಡುವುದಾದರೇ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಾಹಿತಿಯನ್ನಷ್ಟೇ ಬಹಿರಂಗಪಡಿಸುವ ಸಾಧ್ಯತೆಯನ್ನಾದರೂ ಪರಿಶೀಲಿಸಬೇಕು. ವೈಯಕ್ತಿಕ ಗೌಪ್ಯತೆ, ಸಾಕ್ಷಿಗಳ ಸುರಕ್ಷತೆ ಅಥವಾ ಬಾಕಿ ತನಿಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯಿದ್ದರೆ, ಆ ಮಾಹಿತಿಯನ್ನು ಮಾತ್ರ ಮುಚ್ಚಿಟ್ಟು, ಸ್ವಾರಿ…. ಬಹಿರಂಗಗೊಳಿಸದೇ, ಉಳಿದ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಮಾರ್ಗವೂ ಇದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಕ್ಕೆ ಮಾಹಿತಿ ಮುಚ್ಚಿಡುವ…. ಸ್ವಾರಿ ಒನ್ಸ್‌ ಅಗೈನ್…‌ ಬಹಿರಂಗಗೊಳಿದೇ ಇರುವ ಅಧಿಕಾರ ಇರಬಹುದು; ಆದರೆ ಮಾಹಿತಿ ಬಹಿರಂಗಗೊಳಿದೇ ಇರುವುದು, ಅಧಿಕಾರ ಜನರಿಗೆ ಉತ್ತರ ಕೊಡದಿರುವ ಪರವಾನಗಿ ಅಲ್ಲ. ಧರ್ಮಸ್ಥಳದ ಪ್ರಕರಣಗಳಲ್ಲಿ ನಿಜಕ್ಕೂ ಯಾವುದೇ ಬಹಿರಂಗಗೊಳಿಸದೇ ಇರುವ ಸಂಗತಿ ಇಲ್ಲದಿದ್ದರೆ, ಸರ್ಕಾರ ಪಾರದರ್ಶಕತೆಯಿಂದ ನಡೆದುಕೊಳ್ಳುವುದರಲ್ಲಿ ಹಿಂಜರಿಯಬೇಕಾದ ಅಗತ್ಯವೇನು? ನೋಡಿ,  ಜನರ ಪ್ರಶ್ನೆ, ಸೌಜನ್ಯ ಪರ ಹೋರಾಟಗಗಾರರು ಮತ್ತು ಈ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಹೋರಾಡುತ್ತಿರುವವರ ಪ್ರಶ್ನೆಗಳು ಸರಳವಾಗಿವೆ,  ಎಸ್‌ಐಟಿ ಯಾವ ಮಾಹಿತಿಯನ್ನು ಕಲೆಹಾಕಿದೆ? ಎಸ್‌ ಐ ಟಿ ತನಿಖೆಯ ಮುಂದಿನ ಹಂತಕ್ಕೆ ಪ್ರತ್ಯೇಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಹೌದಾ? ಹೌದಾದಲ್ಲಿ ಎಸ್‌ ಐ ಟಿ ಸಲ್ಲಿಕೆ ಮಾಡಿರುವ ವರದಿಯಲ್ಲಿ ಏನಿದೆ? ರಾಜ್ಯ ಸರ್ಕಾರ ಅದನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ? ವರದಿ ಬಹಿರಂಗವಾದರೆ ಯಾರಿಗೆ ತೊಂದರೆಯಾಗುತ್ತದೆ? ಮತ್ತು ವರದಿಯನ್ನು ಮುಚ್ಚಿಡುವುದರಿಂದ,,,, ಸ್ವಾರಿ ಬಹಿರಂಗಗೊಳಿಸದೇ ಇರುವುದರಿಂದ ಯಾರಿಗೆ ಲಾಭ? ಈ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡುವವರೆಗೆ, ಅನುಮಾನಗಳಿಗೆ ಅವಕಾಶ ಉಳಿಯುತ್ತದೆ. ಆ ಅನುಮಾನಗಳನ್ನು ನಿವಾರಿಸುವ ಜವಾಬ್ದಾರಿಯೂ ಸರ್ಕಾರದ್ದೇ. 

ಸತ್ಯ ಯಾರ ಪರವಾಗಿದ್ದರೂ ಸರಿ, ಅದು ಹೊರಬರಬೇಕು. ತನಿಖೆ ಯಾರನ್ನೇ ಒಳಗೊಂಡಿದ್ದರೂ ಸರಿ, ಕಾನೂನಿನ ಮುಂದೆ ಎಲ್ಲರೂ ಸಮಾನರಾಗಬೇಕು. ಧರ್ಮಸ್ಥಳದ ಪ್ರಕರಣಗಳಲ್ಲಿ ಜನರಿಗೆ ಬೇಕಾಗಿರುವುದು ರಾಜಕೀಯ ಆರೋಪ-ಪ್ರತ್ಯಾರೋಪವಲ್ಲ; ಸತ್ಯ, ಪಾರದರ್ಶಕತೆ ಮತ್ತು ನ್ಯಾಯ. ಪಟ್ಟಭದ್ರ ಹಿತಾಸಕ್ತಿ ಸೋಲಲಿ, ನ್ಯಾಯವೇ ಗೆಲ್ಲಲಿ. 

-ಶ್ರೀರಾಜ್ ವಕ್ವಾಡಿ

Friday, August 21, 2026

ʼಅಹಿಂದʼಕ್ಕೆ 25 : ಸಿದ್ದರಾಮಯ್ಯನವರ ಮುಂದಿನ ನಡೆ, ಶಿವಕುಮಾರ್‌ಗೆ ಎದುರಾಗುವ ಸವಾಲು

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯನವರು ರಾಜಕೀಯವಾಗಿ ಹಿಂದೆ ಸರಿದಂತೆ ಕಾಣುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಮೌನದ ಅರ್ಥ ರಾಜಕೀಯದಲ್ಲಿ ಬೇರೆಯದ್ದೇ ಇದೆ. ಕೆಲವೊಮ್ಮೆ ಅದು ಮುಂದಿನ ಹೆಜ್ಜೆಗೆ ಮುನ್ನದ ರಾಜಕೀಯ ತಯಾರಿ ಎಂಬರ್ಥವನ್ನೂ ನೀಡುತ್ತದೆ. ಕಳೆದ ಕೆಲವು ದಿನಗಳಲ್ಲಿ ಅವರ ನಡೆಗಳು ಇದೇ ಪ್ರಶ್ನೆಯನ್ನು ಹುಟ್ಟುಹಾಕಿವೆ. ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ಅಧಿವೇಶನದ ಮೊದಲ ದಿನಕ್ಕೆ ಗೈರು, ಹೊಸ ಸಚಿವರ ಪ್ರಮಾಣವಚನ ಸಮಾರಂಭದಿಂದ ದೂರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು—ಈ ಎಲ್ಲ ಬೆಳವಣಿಗೆಗಳು ಸಿದ್ದರಾಮಯ್ಯನವರ ಮೌನವನ್ನು ಕೇವಲ ವೈಯಕ್ತಿಕ ಅಸಮಾಧಾನವೆಂದು ನೋಡಲು ಅವಕಾಶ ನೀಡುವುದಿಲ್ಲ. ಇದರ ನಡುವೆ ಸೆಪ್ಟೆಂಬರ್ 6ರಂದು ಅಹಿಂದ ಚಳವಳಿಗೆ 25 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂಬುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಅಹಿಂದ ಎನ್ನುವುದು ಕೇವಲ ಒಂದು ಚುನಾವಣಾ ಘೋಷಣೆ ಅಲ್ಲ; ಕರ್ನಾಟಕದ ಸಾಮಾಜಿಕ ನ್ಯಾಯದ ರಾಜಕಾರಣದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಒಂದೇ ರಾಜಕೀಯ ನೆಲೆಯ ಮೇಲೆ ತರುವ ಪ್ರಯತ್ನದ ಪ್ರಮುಖ ಅಧ್ಯಾಯ. ಸಿದ್ದರಾಮಯ್ಯನವರ ರಾಜಕೀಯ ಏಳಿಗೆಯಲ್ಲೂ ಈ ಸಾಮಾಜಿಕ ಸಮೀಕರಣ ಮಹತ್ವದ ಪಾತ್ರ ವಹಿಸಿದೆ. ಸಿದ್ದರಾಮಯ್ಯ ಮತ್ತೆ ಅಹಿಂದದತ್ತ ಯಾಕೆ? ಎನ್ನುವ ಪ್ರಶ್ನೆ, ಸಹಜವಾಗಿ ಉದ್ಭವವಾಗುತ್ತದೆ. ಇಲ್ಲಿ ಮೊದಲ ಪ್ರಶ್ನೆ—ಸಿದ್ದರಾಮಯ್ಯನವರು ನಿಜವಾಗಿಯೂ ಮತ್ತೆ ಅಹಿಂದ ಚಳವಳಿ ಕಟ್ಟಲು ಹೊರಟಿದ್ದಾರೆಯೇ? ಇದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ.

ಆದರೆ ಅವರ ಮುಂದಿರುವ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಅಹಿಂದ ಎನ್ನುವುದು ಅವರಿಗೆ ಸಹಜವಾದ ರಾಜಕೀಯ ವೇದಿಕೆ. ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯ ಸ್ಥಾನವೇ ಅವರ ಮಾತಿಗೆ ರಾಜಕೀಯ ಶಕ್ತಿ ನೀಡುತ್ತಿತ್ತು. ಈಗ ಆ ಸ್ಥಾನವಿಲ್ಲ. ಹೀಗಾಗಿ ಅಧಿಕಾರದ ಹೊರಗಿರುವ ನಾಯಕನಿಗೆ ಜನಾಧಾರವೇ ದೊಡ್ಡ ಬಂಡವಾಳ. ಸಿದ್ದರಾಮಯ್ಯನವರ ಬಳಿ ಆ ಬಂಡವಾಳವಿದೆ ಎನ್ನುವುದನ್ನು ಕಾಂಗ್ರೆಸ್ ಕೂಡ ನಿರಾಕರಿಸಲು ಸಾಧ್ಯವಿಲ್ಲ. ಅವರ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮನವು ಕಾಂಗ್ರೆಸ್‌ನ ಅಹಿಂದ ಸಾಮಾಜಿಕ ಸಮೀಕರಣಕ್ಕೆ ಪರಿಣಾಮ ಬೀರುತ್ತದೆ ಎಂಬ ಚರ್ಚೆ ಈಗಾಗಲೇ ನಡೆದಿದೆ. ಆದ್ದರಿಂದ ಅಹಿಂದ ಸಮಾವೇಶವನ್ನು ಕೇವಲ 25ನೇ ವರ್ಷದ ಆಚರಣೆಯಾಗಿ ನೋಡಿದರೆ ರಾಜಕೀಯದ ಅರ್ಧ ಚಿತ್ರ ಮಾತ್ರ ಕಾಣುತ್ತದೆ. ಅಹಿಂದ ಸಮಾವೇಶ ಸಿದ್ದರಾಮಯ್ಯನವರ ರಾಜಕೀಯ ಪ್ರಭಾವ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸುವ ವೇದಿಕೆಯಾಗಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಇದು ಶಿವಕುಮಾರ್ ವಿರುದ್ಧದ ನೇರ ಯುದ್ಧವೇ? ಅನಿವಾರ್ಯವಾಗಿ ಅಲ್ಲ. ಸಿದ್ದರಾಮಯ್ಯನವರು ಅಹಿಂದವನ್ನು ಪುನರ್‌ಸಂಘಟಿಸಿದರೂ ಅದರ ಮೊದಲ ಗುರಿ ಡಿ.ಕೆ. ಶಿವಕುಮಾರ್ ಆಗಬೇಕೆಂದಿಲ್ಲ. ಅವರ ರಾಜಕೀಯ ತಂತ್ರ ಇನ್ನೂ ಸೂಕ್ಷ್ಮವಾಗಿರಬಹುದು. 

ಒಂದು ಕಡೆ ಅವರು ಕಾಂಗ್ರೆಸ್‌ನ ಹಿರಿಯ ನಾಯಕನಾಗಿಯೇ ಉಳಿದುಕೊಂಡು, ಮತ್ತೊಂದು ಕಡೆ ತಮ್ಮ ಸಾಮಾಜಿಕ ನೆಲೆಯನ್ನು ಪ್ರತ್ಯೇಕವಾಗಿ ಬಲಪಡಿಸಬಹುದು. ಹೀಗೆ ಮಾಡಿದರೆ ಕಾಂಗ್ರೆಸ್‌ನೊಳಗಿನ ಅವರ ಮಾತಿನ ತೂಕ ಕಡಿಮೆಯಾಗುವುದಿಲ್ಲ. ಬದಲಿಗೆ, ಅಧಿಕಾರವಿಲ್ಲದಿದ್ದರೂ ತಮ್ಮ ಹಿಂದೆ ಒಂದು ದೊಡ್ಡ ಸಾಮಾಜಿಕ ಸಮೀಕರಣವಿದೆ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ನೀಡಬಹುದು. ಇದು ಒಂದು ರೀತಿಯಲ್ಲಿ ‘ಪದವಿ ಇಲ್ಲದ ಅಧಿಕಾರ’ದ ರಾಜಕಾರಣ. ಮುಖ್ಯಮಂತ್ರಿಯ ಕುರ್ಚಿ ಶಿವಕುಮಾರ್ ಅವರ ಬಳಿ ಇರಬಹುದು. ಆದರೆ ಆ ಕುರ್ಚಿಯ ಹೊರಗಿರುವ ಸಿದ್ದರಾಮಯ್ಯನವರ ಸಾಮಾಜಿಕ ಪ್ರಭಾವವನ್ನು ನಿರ್ಲಕ್ಷಿಸುವುದು ಅಷ್ಟು ಸುಲಭವಲ್ಲ.  ಶಿವಕುಮಾರ್ ಎದುರಿನ ನಿಜವಾದ ಸವಾಲು ಏನು !? ಡಿ.ಕೆ. ಶಿವಕುಮಾರ್ ಅವರ ಮುಂದಿರುವ ಸವಾಲು ಸಿದ್ದರಾಮಯ್ಯನವರನ್ನು ಎದುರಿಸುವುದಕ್ಕಿಂತ ದೊಡ್ಡದು—ಸಿದ್ದರಾಮಯ್ಯನವರ ಸಾಮಾಜಿಕ ನೆಲೆಯನ್ನು ತಮ್ಮ ಸರ್ಕಾರದ ರಾಜಕೀಯದೊಳಗೆ ಉಳಿಸಿಕೊಳ್ಳುವುದು. ಶಿವಕುಮಾರ್ ಅವರು ತಮ್ಮದೇ ಆದ ರಾಜಕೀಯ ಶಕ್ತಿ ಹೊಂದಿದ್ದಾರೆ. ಆದರೆ ಅವರ ರಾಜಕೀಯದ ಸಾಮಾಜಿಕ ಚಿತ್ರಣ ಸಿದ್ದರಾಮಯ್ಯನವರಿಗಿಂತ ಭಿನ್ನವಾಗಿದೆ. ಸಿದ್ದರಾಮಯ್ಯ ಕಟ್ಟಿದ ಅಹಿಂದ ಸಮೀಕರಣದಿಂದ ಕಾಂಗ್ರೆಸ್‌ಗೆ ದೊರೆತ ಬೆಂಬಲವನ್ನು ಮುಂದುವರಿಸಬೇಕಾದರೆ ಶಿವಕುಮಾರ್ ಅವರು ಕೇವಲ ಆಡಳಿತದ ಕಾರ್ಯಕ್ಷಮತೆಯನ್ನು ತೋರಿಸಿದರೆ ಸಾಲದು. ಸಾಮಾಜಿಕ ನ್ಯಾಯ, ಮೀಸಲಾತಿ, ಹಿಂದುಳಿದ ವರ್ಗಗಳ ಹಕ್ಕು, ದಲಿತ ಪ್ರಶ್ನೆ, ಅಲ್ಪಸಂಖ್ಯಾತರ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಬೇಕು.

ಅಹಿಂದವನ್ನು ಬಿಜೆಪಿ ವಿರುದ್ಧದ ಚುನಾವಣಾ ಘೋಷಣೆಯಾಗಿ ಮಾತ್ರವಲ್ಲ, ಸಾಮಾಜಿಕ ನ್ಯಾಯದ ನೀತಿಯಾಗಿ ಸರ್ಕಾರ ರೂಪಿಸಬೇಕು. ಇನ್ನು, ಸಿದ್ದರಾಮಯ್ಯನವರ ಮೌನ ಯಾರಿಗೆ ಹೆಚ್ಚು ಅಪಾಯ? ವಿಚಿತ್ರವೆಂದರೆ ಸಿದ್ದರಾಮಯ್ಯನವರ ಮೌನದಿಂದ ತಕ್ಷಣಕ್ಕೆ ಹೆಚ್ಚು ಆತಂಕಗೊಳ್ಳಬೇಕಾದವರು ಬಿಜೆಪಿ ಮಾತ್ರವಲ್ಲ; ಕಾಂಗ್ರೆಸ್‌ನೊಳಗಿನ ನಾಯಕತ್ವವೂ ಹೌದು. ಯಾಕೆಂದರೆ ಅವರು ಪ್ರತಿದಿನ ಸರ್ಕಾರದ ವಿರುದ್ಧ ಮಾತನಾಡಿದರೆ ಅದನ್ನು ‘ಮಾಜಿ ಮುಖ್ಯಮಂತ್ರಿಯ ಅಸಮಾಧಾನ’ ಎಂದು ಸರಳವಾಗಿ ವ್ಯಾಖ್ಯಾನಿಸಬಹುದಿತ್ತು. ಆದರೆ ಅವರು ಮೌನವಾಗಿದ್ದು, ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಕಾಣಿಸಿಕೊಂಡರೆ ಅವರ ಪ್ರತಿಯೊಂದು ಹೆಜ್ಜೆಗೂ ರಾಜಕೀಯ ಅರ್ಥ ಹುಡುಕಲಾಗುತ್ತದೆ. ಇತ್ತೀಚಿನ ಶಾಸಕಾಂಗ ಪಕ್ಷದ ಸಭೆಗೆ ಸಿದ್ದರಾಮಯ್ಯ ಮಾತ್ರವಲ್ಲದೆ 20ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದರೆಂಬ ವರದಿಯೂ ಬಂದಿದೆ. ಇದು ನೇರ ಬಂಡಾಯ ಎಂದು ಹೇಳುವುದು ಅತಿಶಯೋಕ್ತಿಯಾಗಬಹುದು. ಆದರೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ನಂತರವೂ ಹಳೆಯ ಸಾಮಾಜಿಕ-ರಾಜಕೀಯ ಜಾಲ ಸಂಪೂರ್ಣವಾಗಿ ಹೊಸ ನಾಯಕತ್ವದ ನಿಯಂತ್ರಣಕ್ಕೆ ಬಂದಿಲ್ಲ ಎಂಬ ಸೂಚನೆಯನ್ನು ಇದು ನೀಡುತ್ತದೆ. 2028ರ ಚುನಾವಣೆಯ ನೆರಳು ಇಲ್ಲಿ ಕಾಣಿಸುತ್ತಿದೆ. ಇಡೀ ಬೆಳವಣಿಗೆಯನ್ನು 2028ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಸಿದ್ದರಾಮಯ್ಯನವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಹಾಗಾಗಿಯೇ ಇಲ್ಲಿ ಅಹಿಂದ ರಾಜಕಾರಣ ಮತ್ತೆ ಪ್ರಸ್ತುತವಾಗುತ್ತದೆ. ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲದ ನಾಯಕನೂ ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸಬಹುದು.

ಪಕ್ಷದ ಅಭ್ಯರ್ಥಿಗಳ ಆಯ್ಕೆ, ಸಾಮಾಜಿಕ ಸಮೀಕರಣ, ಮತದಾರರ ಮನೋಭಾವ ಮತ್ತು ಪಕ್ಷದ ಪ್ರಚಾರದ ದಿಕ್ಕಿನ ಮೇಲೆ ಪ್ರಭಾವ ಬೀರುವಷ್ಟು ದೊಡ್ಡ ನಾಯಕತ್ವ ಸಿದ್ದರಾಮಯ್ಯನವರಲ್ಲಿದೆ. ಹೀಗಾಗಿ 2028ರಲ್ಲಿ ಅವರು ಸ್ಪರ್ಧಿಸದಿದ್ದರೂ, ಚುನಾವಣಾ ರಾಜಕೀಯದಿಂದ ಹೊರಗುಳಿಯುತ್ತಾರೆ ಎಂದು ಅರ್ಥವಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ. ಅಹಿಂದದ ಪುನರುತ್ಥಾನ ಬಿಜೆಪಿಗೆ ಯಾವ ಪರಿಣಾಮ ಬೀರಬಹುದು!? ಅಹಿಂದ ಮತ್ತೆ ರಾಜಕೀಯದ ಕೇಂದ್ರಬಿಂದುವಾದರೆ ಬಿಜೆಪಿ ತನ್ನ ಸಾಮಾಜಿಕ ವಿಸ್ತರಣೆಯ ತಂತ್ರವನ್ನು ಮರುಪರಿಶೀಲಿಸಬೇಕಾಗುತ್ತದೆ. ಬಿಜೆಪಿ ಬಹುಕಾಲದಿಂದ ಕಾಂಗ್ರೆಸ್‌ನ ಅಹಿಂದ ರಾಜಕಾರಣಕ್ಕೆ ಪರ್ಯಾಯ ಸಾಮಾಜಿಕ ಸಮೀಕರಣ ಕಟ್ಟಲು ಪ್ರಯತ್ನಿಸುತ್ತಿದೆ. ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ವರ್ಗಗಳು ಮತ್ತು ಇತರ ಸಮುದಾಯಗಳ ನಡುವೆ ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನ ಅದರ ರಾಜಕೀಯದ ಭಾಗವಾಗಿದೆ.

ಸಿದ್ದರಾಮಯ್ಯ ಮತ್ತೆ ಅಹಿಂದವನ್ನು ಸಕ್ರಿಯಗೊಳಿಸಿದರೆ ಕರ್ನಾಟಕದ ಚುನಾವಣಾ ರಾಜಕೀಯ ಮತ್ತೆ ‘ಯಾರು ಯಾರ ಜೊತೆ?’ ಎಂಬ ಸಾಮಾಜಿಕ ಸಮೀಕರಣದ ಪ್ರಶ್ನೆಯತ್ತ ತಿರುಗಬಹುದು. ಆದರೆ ಇಲ್ಲಿಯೂ ಒಂದು ಎಚ್ಚರಿಕೆ ಅಗತ್ಯ. ಅಹಿಂದ ಎನ್ನುವುದು ಎರಡುವರೆ ದಶಕದ ಆರಂಭದಲ್ಲಿದ್ದ ಅದೇ ರಾಜಕೀಯ ಪರಿಸ್ಥಿತಿಯಲ್ಲಿ ಈಗಿಲ್ಲ. ಹೊಸ ತಲೆಮಾರಿನ ಮತದಾರರು, ಬದಲಾಗಿರುವ ಉದ್ಯೋಗದ ಪ್ರಶ್ನೆಗಳು, ಶಿಕ್ಷಣ, ನಗರೀಕರಣ, ಯುವಕರ ನಿರೀಕ್ಷೆಗಳು ಮತ್ತು ಸಾಮಾಜಿಕ ಮಾಧ್ಯಮದ ರಾಜಕೀಯ—ಇವೆಲ್ಲವೂ ರಾಜಕೀಯ ಸಮೀಕರಣಗಳನ್ನು ಬದಲಿಸಿವೆ ಅಂತ ಅನ್ನಿಸುತ್ತದೆ. ಇನ್ನು, ಮುಖ್ಯಮಂತ್ರಿ ಶಿವಕುಮಾರ್‌ಗೆ ಇರುವ ಏಕೈಕ ಪರಿಣಾಮಕಾರಿ ದಾರಿ ಯಾವುದು!?  ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ರಾಜಕೀಯ ಎದುರಾಳಿಯನ್ನಾಗಿ ಮಾಡಿಕೊಂಡು ಹೋರಾಡುವುದು ಕಾಂಗ್ರೆಸ್‌ಗೆ ಆತ್ಮಹತ್ಯೆಯ ತಂತ್ರವಾಗಬಹುದು.

ಹಾಗಾಗಿ  ಜಾಣ್ಮೆಯಿಂದ ಅಹಿಂದದ ಸಾಮಾಜಿಕ ಆಶಯಗಳನ್ನು ತಮ್ಮ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಜೋಡಿಸಬೇಕಿದೆ. ಸಿದ್ದರಾಮಯ್ಯನವರನ್ನು ಎದುರಿಸುವ ಬದಲು ಸಿದ್ದರಾಮಯ್ಯನವರ ಸಾಮಾಜಿಕ ನೆಲೆಯನ್ನು ತಮ್ಮತ್ತ ಸೆಳೆಯುವಂತೆ ನಡೆದುಕೊಂಡರೇ ಶಿವಕುಮಾರ್ ಅವರ ಮುಂದಿನ ರಾಜಕೀಯ ಭವಿಷ್ಯದ ಹಾದಿಗೂ ಅನುಕೂಲ ಮಾಡಿಕೊಡಬಹುದು. ಸಿದ್ದರಾಮಯ್ಯನವರಿಗೆ ಗೌರವ ನೀಡುತ್ತಲೇ ಪಕ್ಷದೊಳಗಿನ ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಬೇಕು. ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳೊಂದಿಗೆ ಹೊಸ ತಲೆಮಾರಿನ ನಾಯಕತ್ವವನ್ನು ಬೆಳೆಸಬೇಕು. ಅಲ್ಪಸಂಖ್ಯಾತರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಜೊತೆಗೆ ತಮ್ಮ ಒಕ್ಕಲಿಗ ಹಾಗೂ ಇತರ ಸಾಮಾಜಿಕ ಬೆಂಬಲವನ್ನು ವಿಸ್ತರಿಸಬೇಕು. ಅಂದರೆ ಶಿವಕುಮಾರ್ ಅವರ ಮುಂದೆ ಇರುವ ಗುರಿ ‘ಸಿದ್ದರಾಮಯ್ಯನವರ ಅಹಿಂದ ವಿರುದ್ಧ ಶಿವಕುಮಾರ್’ ಎನ್ನುವ ಸಮೀಕರಣ ನಿರ್ಮಿಸುವುದಲ್ಲ; ‘ಅಹಿಂದ + ಅಭಿವೃದ್ಧಿ + ಹೊಸ ನಾಯಕತ್ವ’ ಎನ್ನುವ ಹೊಸ ಕಾಂಗ್ರೆಸ್ ಮಾದರಿ ಕಟ್ಟುವುದು. ಒಟ್ಟಿನಲ್ಲಿ,  ಸೆಪ್ಟೆಂಬರ್ 6ರ ಅಹಿಂದ ಸಮಾವೇಶ ಈ ಮೌನದ ಮೊದಲ ಸಾರ್ವಜನಿಕ ರಾಜಕೀಯ ಪರೀಕ್ಷೆಯಾಗಬಹುದು.

ಅದು ಕೇವಲ ನೆನಪಿನ ಕಾರ್ಯಕ್ರಮವಾಗಿ ಉಳಿಯುತ್ತದೆಯೇ, ಅಥವಾ ಸಿದ್ದರಾಮಯ್ಯನವರ ಹೊಸ ರಾಜಕೀಯ ಅಧ್ಯಾಯಕ್ಕೆ ಚಾಲನೆ ನೀಡುತ್ತದೆಯೇ ಎಂಬುದನ್ನು ಅವರ ಭಾಷಣಕ್ಕಿಂತಲೂ ಸಮಾವೇಶಕ್ಕೆ ಸೇರುವ ಸಾಮಾಜಿಕ ಶಕ್ತಿಯ ಪ್ರಮಾಣ ಮತ್ತು ಅದರ ನಂತರದ ರಾಜಕೀಯ ಚಟುವಟಿಕೆಗಳು ನಿರ್ಧರಿಸಲಿವೆ. ಕರ್ನಾಟಕ ಕಾಂಗ್ರೆಸ್‌ಗೆ ಈಗ ಎದುರಾಗಿರುವ ಪ್ರಶ್ನೆ ಏನೆಂದರೇ,  ಸಿದ್ದರಾಮಯ್ಯ ಅವರಿಲ್ಲದೆ ಅಧಿಕಾರ ನಡೆಸುವ ಕಾಂಗ್ರೆಸ್, ಅವರ ಸಾಮಾಜಿಕ ರಾಜಕೀಯವನ್ನು ತನ್ನೊಳಗೆ ಉಳಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗೆ ಶಿವಕುಮಾರ್ ಸರ್ಕಾರ ಕೊಡುವ ಉತ್ತರವೇ ಮುಂದಿನ ಕರ್ನಾಟಕ ರಾಜಕೀಯದ ದಿಕ್ಕನ್ನು ಬಹುಮಟ್ಟಿಗೆ ನಿರ್ಧರಿಸಬಹುದು. ಕಾದು ನೋಡೋಣ. 

- ಶ್ರೀರಾಜ್‌ ವಕ್ವಾಡಿ 

Thursday, August 20, 2026

ನೀಟ್ ವೈಫಲ್ಯದಿಂದ ರಾಮಮಂದಿರದ ಹುಂಡಿವರೆಗೆ: ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರವೇನು?

ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ಕೇವಲ ವಿರೋಧದ ಸಾಧನವಾಗಿ ನೋಡುವುದಿಲ್ಲ; ಅವುಗಳನ್ನು ಜನರ ಮನಸ್ಸಿನಲ್ಲಿ ರಾಜಕೀಯ ಪ್ರಶ್ನೆಯಾಗಿ ರೂಪಿಸುವ ಸಾಧನವಾಗಿಯೂ ಬಳಸುತ್ತವೆ. ಕಾಂಗ್ರೆಸ್‌ನ ಇತ್ತೀಚಿನ ನಡೆಗಳನ್ನು ಈ ಹಿನ್ನೆಲೆಯಲ್ಲಿ ನೋಡಿದರೆ, ನೀಟ್ ಪರೀಕ್ಷಾ ಅಕ್ರಮದ ವಿರುದ್ಧದ ಹೋರಾಟ ಮತ್ತು ಅಯೋಧ್ಯೆ ರಾಮಮಂದಿರದ ದೇಣಿಗೆ ಅವ್ಯವಹಾರದ ಆರೋಪವನ್ನು ಜನರ ನಡುವೆ ಕೊಂಡೊಯ್ಯುವ ನಿರ್ಧಾರದ ಹಿಂದೆ ಎರಡು ವಿಭಿನ್ನ, ಆದರೆ ಪರಸ್ಪರ ಪೂರಕವಾದ ರಾಜಕೀಯ ಲೆಕ್ಕಾಚಾರಗಳು ಕಾಣಿಸುತ್ತವೆ. ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಫಲಿತಾಂಶಗಳಲ್ಲಿನ ಗೊಂದಲಗಳು ಇಂದು ಕೇವಲ ವಿದ್ಯಾರ್ಥಿಗಳ ಸಮಸ್ಯೆಯಾಗಿ ಉಳಿದಿಲ್ಲ. ಮಧ್ಯಮ ವರ್ಗದ ಕುಟುಂಬಗಳು, ಉದ್ಯೋಗಾಕಾಂಕ್ಷಿ ಯುವಕರು ಮತ್ತು ಅವರ ಪೋಷಕರ ಆತಂಕದ ಪ್ರಶ್ನೆಯಾಗಿದೆ. ಪರೀಕ್ಷೆಗಾಗಿ ವರ್ಷಗಟ್ಟಲೆ ಸಿದ್ಧತೆ ನಡೆಸುವ ವಿದ್ಯಾರ್ಥಿಯ ಭವಿಷ್ಯವೇ ಒಂದು ಪರೀಕ್ಷಾ ವ್ಯವಸ್ಥೆಯ ವೈಫಲ್ಯದಿಂದ ಅಸ್ಥಿರವಾಗುವುದಾದರೆ, ಅದು ಸರ್ಕಾರದ ಆಡಳಿತ ಸಾಮರ್ಥ್ಯದ ಪ್ರಶ್ನೆಯೂ ಆಗುತ್ತದೆ.

ಕಾಂಗ್ರೆಸ್ ತನ್ನ ಆಡಳಿತವಿರುವ ರಾಜ್ಯಗಳ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವುದು ಕೇವಲ ಆಡಳಿತಾತ್ಮಕ ಕ್ರಮವೆಂದು ನೋಡಲು ಸಾಧ್ಯವಿಲ್ಲ. ಒಂದು ಕಡೆ ಕೇಂದ್ರ ಸರ್ಕಾರದ ಪರೀಕ್ಷಾ ವ್ಯವಸ್ಥೆಯ ವಿರುದ್ಧ ರಾಜಕೀಯವಾಗಿ ಪ್ರಶ್ನೆ ಎತ್ತುವುದು; ಮತ್ತೊಂದೆಡೆ ತನ್ನದೇ ರಾಜ್ಯಗಳಲ್ಲಿ ಪರ್ಯಾಯ ಮತ್ತು ವಿಶ್ವಾಸಾರ್ಹ ವ್ಯವಸ್ಥೆಯ ಮಾದರಿಯನ್ನು ತೋರಿಸುವ ಪ್ರಯತ್ನ. ಇದು ಕಾಂಗ್ರೆಸ್‌ಗೆ ರಾಜಕೀಯವಾಗಿ ಉಪಯುಕ್ತವಾದ ದ್ವಿಮುಖ ತಂತ್ರ. ಆದರೆ ಇಲ್ಲಿ ಕಾಂಗ್ರೆಸ್ ಎದುರಿಸುವ ಮೊದಲ ಸವಾಲು ಇದೇ ಆಗಿದೆ.  ಕೇಂದ್ರದ ವೈಫಲ್ಯವನ್ನು ಪ್ರಶ್ನಿಸುವ ಮೊದಲು, ತಮ್ಮ ರಾಜ್ಯಗಳಲ್ಲಿನ ಪರೀಕ್ಷಾ ವ್ಯವಸ್ಥೆಯನ್ನು ಎಷ್ಟು ಪಾರದರ್ಶಕಗೊಳಿಸುತ್ತಾರೆ?’ ನಮ್ಮದೇ ರಾಜ್ಯದಲ್ಲಿ ಕೆಪಿಎಸ್‌ಸಿ ಅಲ್ಲಿ ಕೇಳಿ ಬಂದ ಹಗರಣ ಮತ್ತು ಕಾಂಗ್ರೆಸ್‌ ಮೈತ್ರಿ ಇರುವ ಜಾರ್ಖಾಂಡ್‌ ನಲ್ಲಿ ಕೇಳಿ ಬಂದಿರುವ ಪರೀಕ್ಷಾ ಪೇಪರ್‌ ಲೀಕ್‌ ಇವು ಕಾಂಗ್ರೆಸ್‌ ಗೆ ಕೊಂಚ ಮುಜುಗರಕ್ಕೀಡು ಮಾಡಿದೆ. ಇದೇ ಹಿನ್ನೆಲೆಯಲ್ಲಿ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್‌ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಿದೆ ಎಂಬಂತೆ ಕಾಣಿಸುತ್ತಿದೆ. 

 ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ವ್ಯವಸ್ಥೆಯ ಸುಧಾರಣೆಯೇ ಮುಖ್ಯ. ಪರೀಕ್ಷಾ ಸಂಸ್ಥೆಗಳ ಸ್ವಾಯತ್ತತೆ, ಪ್ರಶ್ನೆಪತ್ರಿಕೆಗಳ ಭದ್ರತೆ, ಮೌಲ್ಯಮಾಪನದ ಪಾರದರ್ಶಕತೆ, ದೂರು ಪರಿಹಾರ ವ್ಯವಸ್ಥೆ, ತ್ವರಿತ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ—ಇವುಗಳ ಬಗ್ಗೆ ಕಾಂಗ್ರೆಸ್ ಆಡಳಿತದ ರಾಜ್ಯಗಳು ಸ್ಪಷ್ಟವಾದ ಮಾದರಿಯನ್ನು ನೀಡಿದರೆ ಮಾತ್ರ ಅದರ ರಾಜಕೀಯ ಸಂದೇಶಕ್ಕೆ ನೈತಿಕ ಬಲ ಬರುತ್ತದೆ.  ಇನ್ನೊಂದು ಕಡೆ ಕಾಂಗ್ರೆಸ್ ಅಯೋಧ್ಯೆ ರಾಮಮಂದಿರದ ದೇಣಿಗೆ ಅಥವಾ ಹುಂಡಿ ಕಳವು ಆರೋಪವನ್ನು ಹಳ್ಳಿಹಳ್ಳಿಗೆ ಕೊಂಡೊಯ್ಯಲು ನಿರ್ಧರಿಸಿರುವುದು ಇನ್ನಷ್ಟು ಸೂಕ್ಷ್ಮವಾದ ರಾಜಕೀಯ ಹೆಜ್ಜೆ. ರಾಮಮಂದಿರದ ಪ್ರಶ್ನೆ ಬಿಜೆಪಿ ಹಲವು ವರ್ಷಗಳಿಂದ ನಿರ್ಮಿಸಿಕೊಂಡಿರುವ ಅತ್ಯಂತ ಪ್ರಬಲ ರಾಜಕೀಯ-ಭಾವನಾತ್ಮಕ ಸಂಕೇತ. ರಾಮಮಂದಿರವನ್ನು ಕೇವಲ ಧಾರ್ಮಿಕ ಸ್ಥಳವಾಗಿ ಅಲ್ಲ, ರಾಷ್ಟ್ರೀಯತೆ, ಹಿಂದೂ ಭಾವನೆ ಮತ್ತು ರಾಜಕೀಯ ಗುರುತಿನ ಭಾಗವಾಗಿ ಬಿಜೆಪಿ ರೂಪಿಸಿಕೊಂಡಿದೆ.

ಹೀಗಿರುವಾಗ ಅದೇ ರಾಮಮಂದಿರದಲ್ಲಿ ದೇಣಿಗೆ ಕಳ್ಳತನದ ಆರೋಪ ಕೇಳಿಬಂದಾಗ, ಕಾಂಗ್ರೆಸ್ ಅದನ್ನು ಬಿಜೆಪಿಯ ರಾಜಕೀಯ ನೈತಿಕತೆಯ ವಿರುದ್ಧದ ಪ್ರಶ್ನೆಯನ್ನಾಗಿ ಮಾಡಲು ಬಯಸುವುದು ಸಹಜ. ಇದರ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ: ಬಿಜೆಪಿ ಅತ್ಯಂತ ಬಲವಾಗಿ ನಿಂತಿರುವ ಭಾವನಾತ್ಮಕ ನೆಲೆಯಲ್ಲೇ ಪ್ರಶ್ನೆ ಎತ್ತುವುದು. ಆದರೆ ಈ ಹೋರಾಟದ ಯಶಸ್ಸು ಆರೋಪದ ತೀವ್ರತೆಯಿಂದ ನಿರ್ಧಾರವಾಗುವುದಿಲ್ಲ; ಆರೋಪಕ್ಕೆ ಆಧಾರವೇನು, ತನಿಖೆ ಏನು ಹೇಳುತ್ತದೆ, ತಪ್ಪಿತಸ್ಥರು ಯಾರು ಎಂಬುದನ್ನು ಕಾಂಗ್ರೆಸ್ ಎಷ್ಟು ನಿಖರವಾಗಿ ಜನರ ಮುಂದಿಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಧಾರ್ಮಿಕ ಭಾವನೆಗೆ ಸಂಬಂಧಿಸಿದ ವಿಚಾರವನ್ನು ಕೇವಲ ಚುನಾವಣಾ ಪ್ರಚಾರದ ಭಾಷೆಗೆ ಇಳಿಸಿದರೆ, ಅದು ಕಾಂಗ್ರೆಸ್‌ಗೇ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ನೀಟ್ ಮತ್ತು ರಾಮಮಂದಿರ—ಈ ಎರಡೂ ವಿಚಾರಗಳನ್ನು ಒಟ್ಟಿಗೆ ನೋಡಿದಾಗ ಕಾಂಗ್ರೆಸ್‌ನ ರಾಜಕೀಯ ತಂತ್ರದಲ್ಲಿ ಒಂದು ದೊಡ್ಡ ಬದಲಾವಣೆಯ ಸೂಚನೆ ಕಾಣಿಸುತ್ತದೆ. ಒಂದೆಡೆ ಯುವಕರ ಅಸಮಾಧಾನ ಮತ್ತು ಉದ್ಯೋಗ-ಪರೀಕ್ಷಾ ವ್ಯವಸ್ಥೆಯ ಮೇಲಿನ ಅವಿಶ್ವಾಸವನ್ನು ರಾಜಕೀಯ ಪ್ರಶ್ನೆಯನ್ನಾಗಿ ಮಾಡುವುದು. ಮತ್ತೊಂದೆಡೆ ಬಿಜೆಪಿಯ ಸಾಂಸ್ಕೃತಿಕ-ಧಾರ್ಮಿಕ ರಾಜಕೀಯದ ಕೇಂದ್ರ ಸಂಕೇತವಾದ ರಾಮಮಂದಿರದ ಸುತ್ತಲಿನ ಆರೋಪಗಳನ್ನು ಸಾರ್ವಜನಿಕ ಚರ್ಚೆಯನ್ನಾಗಿ ಮಾಡುವುದು. ಅಂದರೆ, ಕಾಂಗ್ರೆಸ್ ಕೇವಲ ಬಿಜೆಪಿಯ ಆಡಳಿತ ವೈಫಲ್ಯವನ್ನು ಪ್ರಶ್ನಿಸುವುದಲ್ಲ; ಬಿಜೆಪಿಯ ರಾಜಕೀಯದ ಎರಡು ಪ್ರಮುಖ ಮತದಾರ ನೆಲೆಗಳನ್ನೇ ಗುರಿಯಾಗಿಸಿಕೊಂಡಂತಿದೆ—ಯುವಜನತೆ ಮತ್ತು ಹಿಂದೂ ಭಾವನೆಯ ರಾಜಕೀಯ ಇದು ಚುನಾವಣಾ ದೃಷ್ಟಿಯಿಂದ ಮಹತ್ವದ ತಂತ್ರ.

ಆದರೆ ಪ್ರಶ್ನೆ ಉಳಿಯುವುದು ಏನೆಂದ್ರೆ? ಕಾಂಗ್ರೆಸ್‌ಗೆ ಇದರಿಂದ ನಿಜವಾಗಿಯೂ ರಾಜಕೀಯ ಲಾಭವಾಗುತ್ತದೆಯೇ? ನೋಡಿ ಇದು, ಕಾಂಗ್ರೆಸ್ ತನ್ನದೇ ಆಡಳಿತದ ಮೇಲೆ ಎಷ್ಟು ಕಠಿಣ ಮಾನದಂಡವನ್ನು ಅನ್ವಯಿಸುತ್ತದೆ ಎಂಬುದರಲ್ಲಿ ಅಡಗಿದೆ. ಪರೀಕ್ಷಾ ಅಕ್ರಮದ ವಿರುದ್ಧ ಹೋರಾಟ ನಡೆಸುವ ಕಾಂಗ್ರೆಸ್, ತನ್ನ ರಾಜ್ಯಗಳಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಶುದ್ಧಗೊಳಿಸಬೇಕು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕಾಂಗ್ರೆಸ್, ತನ್ನ ಆಡಳಿತದಲ್ಲೂ ಆರೋಪ ಬಂದಾಗ ತ್ವರಿತ ಮತ್ತು ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು. ರಾಮಮಂದಿರದ ದೇಣಿಗೆ ವಿಚಾರದಲ್ಲಿ ಉತ್ತರ ಕೇಳುವ ಕಾಂಗ್ರೆಸ್, ತನ್ನದೇ ಪಕ್ಷದ ಹಣಕಾಸು ಮತ್ತು ರಾಜಕೀಯ ನಿಧಿಗಳ ವಿಚಾರದಲ್ಲೂ ಪಾರದರ್ಶಕತೆಯ ನಿಲುವು ತೋರಿಸಬೇಕು. ಇಲ್ಲವಾದರೆ, ಬಿಜೆಪಿ ವಿರುದ್ಧದ ಹೋರಾಟ ‘ನೈತಿಕ ರಾಜಕೀಯದ ಹೋರಾಟ’ದಿಂದ ‘ಚುನಾವಣಾ ಆರೋಪ-ಪ್ರತ್ಯಾರೋಪದ ಮತ್ತೊಂದು ಅಧ್ಯಾಯವಾಗಿ ಮಾತ್ರ ಉಳಿಯಬಹುದು. ಕಾಂಗ್ರೆಸ್ ಈಗ ಅರ್ಥಮಾಡಿಕೊಂಡಿರುವ ಪ್ರಮುಖ ರಾಜಕೀಯ ಸತ್ಯವೆಂದರೆ—ಬಿಜೆಪಿಯನ್ನು ಕೇವಲ ಬಿಜೆಪಿಯ ಬಲವಾದ ಕ್ಷೇತ್ರಗಳ ಹೊರಗಿನಿಂದ ಎದುರಿಸಲು ಸಾಧ್ಯವಿಲ್ಲ. ಅದರ ಬಲದೊಳಗೇ ಪ್ರಶ್ನೆಗಳನ್ನು ಹುಟ್ಟುಹಾಕಬೇಕು. ಕಾಂಗ್ರೆಸ್‌ ನ ಈ ಪ್ಲ್ಯಾನ್‌, ನೀಟ್ ಪ್ರಶ್ನೆ ಯುವಕರನ್ನು ಮುಟ್ಟುತ್ತದೆ. ರಾಮಮಂದಿರದ ದೇಣಿಗೆ ಪ್ರಶ್ನೆ ಭಕ್ತರ ಮನಸ್ಸನ್ನು ಮುಟ್ಟುವ ಸಾಧ್ಯತೆಯಿದೆ. ಈ ಎರಡನ್ನೂ ಜನಜೀವನದ ಪ್ರಶ್ನೆಗಳೊಂದಿಗೆ ಜೋಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಅಂತಿಮವಾಗಿ ರಾಜಕೀಯ ಘೋಷಣೆಗಿಂತ ಜನರಿಗೆ ಬೇಕಾಗಿರುವುದು ವಿಶ್ವಾಸಾರ್ಹ ವ್ಯವಸ್ಥೆ ಮತ್ತು ಉತ್ತರದಾಯಿತ್ವ.

ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ನ್ಯಾಯ ಬೇಕು. ಭಕ್ತನಿಗೆ ತನ್ನ ದೇಣಿಗೆ ಸುರಕ್ಷಿತವಾಗಿದೆ ಎಂಬ ವಿಶ್ವಾಸ ಬೇಕು. ತೆರಿಗೆದಾರನಿಗೆ ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಬೇಕು. ಈ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ನೀಡಬಲ್ಲ ಪಕ್ಷವೇ ಈ ರಾಜಕೀಯ ಹೋರಾಟದಲ್ಲಿ ನೈತಿಕ ಮೇಲುಗೈ ಸಾಧಿಸಬಹುದು.  ಹೀಗಾಗಿ ಕಾಂಗ್ರೆಸ್‌ನ ಇತ್ತೀಚಿನ ನಿರ್ಧಾರವನ್ನು ಕೇವಲ ಪ್ರತಿಭಟನೆಗಳ ಮುಂದುವರಿಕೆಯಾಗಿ ನೋಡುವುದು ತಪ್ಪಾಗಬಹುದು. ಇದು ಬಿಜೆಪಿಯ ವಿರುದ್ಧ ‘ಆಡಳಿತ ವೈಫಲ್ಯ’ದ ರಾಜಕೀಯವನ್ನಷ್ಟೇ ಅಲ್ಲ, ‘ನೈತಿಕತೆ ಮತ್ತು ಉತ್ತರದಾಯಿತ್ವ’ದ ರಾಜಕೀಯವನ್ನು ಕಟ್ಟುವ ಪ್ರಯತ್ನ. ಆದರೆ ಆ ರಾಜಕೀಯಕ್ಕೆ ವಿಶ್ವಾಸಾರ್ಹತೆ ಬರಬೇಕಾದರೆ, ಕಾಂಗ್ರೆಸ್ ಮೊದಲು ತನ್ನದೇ ಆಡಳಿತದಲ್ಲಿ ಅದೇ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಬಿಜೆಪಿಯ ಬಲದ ಮೇಲೆ ದಾಳಿ ಮಾಡುವುದು ಸುಲಭ. ಅದಕ್ಕೆ ಪರ್ಯಾಯ ವಿಶ್ವಾಸ ಕಟ್ಟುವುದು ಕಷ್ಟ. ಕಾಂಗ್ರೆಸ್‌ನ ನಿಜವಾದ ಪರೀಕ್ಷೆ ಅಲ್ಲಿಯೇ ಆರಂಭವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. 

- ಶ್ರೀರಾಜ್‌ ವಕ್ವಾಡಿ 

ನಾಗೇಂದ್ರ ಮರುಸೇರ್ಪಡೆ: ಕಾಂಗ್ರೆಸ್‌ಗೆ ಬಿಸಿ ತುಪ್ಪವಾದ ರಾಜಕೀಯ ಲೆಕ್ಕಾಚಾರ

ಸಚಿವ ಸಂಪುಟಕ್ಕೆ ಬಿ. ನಾಗೇಂದ್ರ ಅವರ ಮರುಸೇರ್ಪಡೆ ಕಾಂಗ್ರೆಸ್ ಸರ್ಕಾರದ ಪಾಲಿಗೆ ಒಂದು ರಾಜಕೀಯ ನಿರ್ಧಾರವಾಗಿ ಉಳಿದಿಲ್ಲ. ಅದು ಪಕ್ಷದೊಳಗಿನ ಅಸಮಾಧಾನ, ನೈತಿಕತೆಯ ಪ್ರಶ್ನೆ, ವಾಲ್ಮೀಕಿ ಸಮುದಾಯದ ಪ್ರತಿನಿಧಿತ್ವ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕಾಂಗ್ರೆಸ್‌ನ ನಿಲುವು—ಇವೆಲ್ಲವನ್ನೂ ಒಂದೇ ಬಾರಿಗೆ ಚರ್ಚೆಗೆ ಎಳೆದಿದೆ. ಆರೋಪಗಳ ನಡುವೆಯೇ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಕಾಂಗ್ರೆಸ್‌ನೊಳಗೇ ಅನೇಕರಿಗೆ ಸಹಜವಾಗಿ ಅಸಮಾಧಾನವನ್ನು ಮೂಡಿಸಿದೆ.

ಪಕ್ಷದೊಳಗಿನ ಚರ್ಚೆಯ ಒಂದು ವಾದ ಸರಳವಾಗಿದೆ, ಆರೋಪಗಳಿಂದ ಮುಕ್ತರಾದ ಬಳಿಕ ಸಚಿವ ಸ್ಥಾನ ನೀಡಬಹುದಿತ್ತು. ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಬೇಕೆಂಬುದು ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರವಾಗಿದ್ದರೆ, ಅದಕ್ಕೆ ಬೇರೆ ಮಾರ್ಗಗಳೂ ಇದ್ದವು. ಈಗಾಗಲೇ ಸಚಿವ ಸಂಪುಟದಲ್ಲಿ ಸತೀಶ್ ಜಾರಕಿಹೊಳಿ, ರಘುಮೂರ್ತಿ ಅವರು ಇದ್ದಾರೆ. ಹಾಗಿದ್ದಾಗ ನಾಗೇಂದ್ರ ಅವರನ್ನು ಮರಳಿ ಸಂಪುಟಕ್ಕೆ ತೆಗೆದುಕೊಳ್ಳುವ ಅಗತ್ಯವೇನು ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಇನ್ನು, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ವಿಪಕ್ಷಗಳು ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವುದರ ನಡುವೆಯೇ ವಾಲ್ಮೀಕಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ನಾಗೇಂದ್ರ ವಿರುದ್ದ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಮೂಲಕ ನಾಗೇಂದ್ರ ಅವರ ಸುತ್ತ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗುವ ಸಾಧ್ಯತೆಗಳೂ ಇವೆ. ನೋಡಿ, ಇದು ಕೇವಲ ವ್ಯಕ್ತಿಯ ಪ್ರಶ್ನೆಯಲ್ಲ.

‘ಒಬ್ಬ ವ್ಯಕ್ತಿ ಅನಿವಾರ್ಯನಾ? ಅಥವಾ ಒಂದು ಸಮುದಾಯದ ಪ್ರತಿನಿಧಿತ್ವವೇ ಅನಿವಾರ್ಯನಾ?’ ಎಂಬ ದೊಡ್ಡ ಪ್ರಶ್ನೆಯಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊರೆತಿರುವ ಬಲ ಗಮನಾರ್ಹ. ಇದರ ಜೊತೆಗೆ ವಿಧಾನ ಪರಿಷತ್ತಿನಲ್ಲಿಯೂ ಪರಿಶಿಷ್ಟ ಪಂಗಡದ ಪ್ರತಿನಿಧಿಗಳಿದ್ದಾರೆ. ಹೀಗಿರುವಾಗ ನಾಗೇಂದ್ರ ಅವರ ಮರುಸೇರ್ಪಡೆಯನ್ನು ಕೇವಲ ‘ಸಾಮಾಜಿಕ ನ್ಯಾಯದ ಪ್ರತಿನಿಧಿತ್ವ’ ಎಂಬ ಕಾರಣಕ್ಕೆ ಸಮರ್ಥಿಸುವುದು ರಾಜಕೀಯವಾಗಿ ದುರ್ಬಲ ವಾದವಾಗುತ್ತದೆ. ಹಾಗಾದರೆ ನಿಜವಾದ ಕಾರಣವೇನು? ಈ ಪ್ರಶ್ನೆಗೆ ಕಾಂಗ್ರೆಸ್‌ನ ರಾಜ್ಯ ನಾಯಕತ್ವ ಮಾತ್ರವಲ್ಲ, ಹೈಕಮಾಂಡ್ ಕೂಡ ಉತ್ತರಿಸಬೇಕಾಗಿದೆ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ವಾಲ್ಮೀಕಿ ಸಮುದಾಯ ಕಾಂಗ್ರೆಸ್‌ನಿಂದ ದೂರ ಸರಿಯುತ್ತಿತ್ತೇ? ಅಥವಾ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿದ್ದರೆ ಪಕ್ಷದೊಳಗೆ ಯಾವುದಾದರೂ ದೊಡ್ಡ ರಾಜಕೀಯ ಬಿಕ್ಕಟ್ಟು ಉಂಟಾಗುತ್ತಿತ್ತೇ? ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲದಿರುವುದೇ ಈ ನಿರ್ಧಾರದ ಸುತ್ತ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ.

ಇನ್ನು, ಅಧಿಕಾರದ ನೈತಿಕತೆ ಎಲ್ಲಿದೆ? ಭ್ರಷ್ಟಾಚಾರದ ಆರೋಪ ಎದುರಾದಾಗ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಈಗ ಬಹುತೇಕ ಒಂದೇ ಮಾದರಿಯಾಗಿದೆ. ಆರೋಪ ಬಂದರೆ ವಿರೋಧ ಪಕ್ಷ ರಾಜೀನಾಮೆ ಕೇಳುತ್ತದೆ; ಆಡಳಿತ ಪಕ್ಷ ಆರೋಪ ರಾಜಕೀಯ ಪ್ರೇರಿತ ಎಂದು ಹೇಳುತ್ತದೆ. ತನಿಖೆ ನಡೆಯಲಿ ಎನ್ನುತ್ತದೆ. ಕೆಲವು ಕಾಲದ ಬಳಿಕ ಅದೇ ವ್ಯಕ್ತಿ ಮತ್ತೆ ಅಧಿಕಾರದ ಕೇಂದ್ರಕ್ಕೆ ಮರಳುತ್ತಾನೆ. ಇದು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಜನರ ನಂಬಿಕೆಗೆ ಅಪಾಯಕಾರಿ ಬೆಳವಣಿಗೆ. ಹಿಂದಿನ ಅವಧಿಗಳಲ್ಲಿ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಸಚಿವರು ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಆದರೆ ಇತ್ತೀಚಿನ ರಾಜಕೀಯದಲ್ಲಿ ‘ಆರೋಪ ಬಂದರೆ ರಾಜೀನಾಮೆ’ ಎಂಬ ಕನಿಷ್ಠ ನೈತಿಕ ಮಾನದಂಡವೇ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ—ಇದರಿಂದ ಯಾರೂ ಸಂಪೂರ್ಣವಾಗಿ ಮುಕ್ತರಲ್ಲ.

ಯುಪಿಎ ಅವಧಿಯ ಹಗರಣಗಳನ್ನು ನೆಪ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಮಾತನಾಡಿದ ಬಿಜೆಪಿಯೇ ಅಧಿಕಾರಕ್ಕೆ ಬಂದ ನಂತರ ತನ್ನ ಸಚಿವರು ಮತ್ತು ನಾಯಕರ ವಿರುದ್ಧದ ಗಂಭೀರ ಆರೋಪಗಳ ಸಂದರ್ಭದಲ್ಲಿ ಇದೇ ನೈತಿಕ ಮಾನದಂಡವನ್ನು ಎಂದಿಗೂ ಅನುಸರಿಸಿಲ್ಲ. ಈಗ ಕಾಂಗ್ರೆಸ್ ಕೂಡ ಅದೇ ದಾರಿಯಲ್ಲಿ ಸಾಗಿದರೆ, ಅದು ಹಿಂದಿನ ತಪ್ಪುಗಳನ್ನು ಟೀಕಿಸುವ ನೈತಿಕ ಹಕ್ಕನ್ನೇ ದುರ್ಬಲಗೊಳಿಸುತ್ತದೆ. ‘ನೀವು ಆಗ ಏನು ಮಾಡಿದ್ದಿರಿ?’ ಎಂಬ ಪ್ರಶ್ನೆಗೆ ಉತ್ತರವಾಗಿ ‘ನೀವು ಈಗ ಏನು ಮಾಡುತ್ತಿದ್ದೀರಿ?’ ಎಂಬ ಪ್ರಶ್ನೆ ಬರುವಂತಾಗಬಾರದು.  ರಾಜಕೀಯದ ನೈತಿಕತೆಯನ್ನು ಪಕ್ಷಗಳ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದಾಗ ನಷ್ಟವಾಗುವುದು ಅಂತಿಮವಾಗಿ ಜನರಿಗೇ. ನೋಡಿ, 2023ರಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮೊದಲ ಎರಡು ವರ್ಷಗಳ ರಾಜಕೀಯ ಚಿತ್ರಣವನ್ನು ನೋಡಿದರೆ, ಆಡಳಿತದ ಸಾಧನೆಗಳಿಗಿಂತ ಆಂತರಿಕ ರಾಜಕೀಯವೇ ಹೆಚ್ಚು ಸುದ್ದಿಯಾಗಿರುವುದು ಗಮನಾರ್ಹ.

ಅಧಿಕಾರ ಹಂಚಿಕೆ ಕುರಿತು ಚರ್ಚೆ, ನಾಯಕತ್ವ ಬದಲಾವಣೆಯ ಊಹಾಪೋಹ, ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಸಚಿವರ ಅಸಮಾಧಾನ, ಪ್ರಾದೇಶಿಕ ನಾಯಕತ್ವದ ಪೈಪೋಟಿ—ಇವೆಲ್ಲವೂ ಸರ್ಕಾರದ ರಾಜಕೀಯ ವಾತಾವರಣವನ್ನು ಆವರಿಸಿವೆ. 2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಆಡಳಿತದ ಮೇಲೆ ಒಂದು ನಿರ್ದಿಷ್ಟ ರಾಜಕೀಯ ನಿಯಂತ್ರಣ ಕಂಡುಬಂದಿತ್ತು. ಆದರೆ ಎರಡನೇ ಅವಧಿಯಲ್ಲಿ ಆ ರೀತಿ ಕಾಣಿಸಿಲ್ಲ ಎಂಬ ಟೀಕೆ ಪಕ್ಷದೊಳಗೇ ಕೇಳಿಬರುತ್ತಿದೆ. ಈಗ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದ ಬಳಿಕವೂ ಆ ಗೊಂದಲ ಇನ್ನೂ ಬಗೆಹರಿದಿಲ್ಲ. ಸರ್ಕಾರದಲ್ಲಿ ಹೊಸತನದ ಕೊರತೆಯೂ ಕಾಣಿಸುತ್ತಿದೆ. ಸಂಪುಟ ಪುನರ್‌ರಚನೆಯ ಚರ್ಚೆ ನಡೆದರೂ, ಮುಖಗಳ ಬದಲಾವಣೆಗಿಂತ ಅಧಿಕಾರದ ಒಳಗಿನ ಸಮೀಕರಣಗಳೇ ಮುಖ್ಯವಾಗಿರುವಂತೆ ಕಾಣುತ್ತದೆ. ಇದರಿಂದ ಸಚಿವ ಸಂಪುಟದ ಬಗ್ಗೆ ನಿರೀಕ್ಷಿಸಿದ್ದ ‘ಹೊಸ ರಾಜಕೀಯ ಸಂದೇಶ’ವೂ ಮೂಡಲಿಲ್ಲ.

ನಾಗೇಂದ್ರ ಪ್ರಕರಣದ ರಾಜಕೀಯ ಪರಿಣಾಮ ಏನು !? ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್‌ಗೆ ಮೂರು ರೀತಿಯ ಸವಾಲುಗಳನ್ನು ತಂದಿದೆ. ಮೊದಲನೆಯದು ನೈತಿಕತೆಯ ಸವಾಲು. ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸುವ ಮೂಲಕ ಕಾಂಗ್ರೆಸ್ ತನ್ನದೇ ನೈತಿಕ ಮಾನದಂಡವನ್ನು ಪ್ರಶ್ನೆಗೆ ಒಳಪಡಿಸಿಕೊಂಡಿದೆ. ಎರಡನೆಯದು ಪಕ್ಷದೊಳಗಿನ ಅಸಮಾಧಾನದ ಸವಾಲು. ಪ್ರತಿ ಸಚಿವ ಸ್ಥಾನವೂ ರಾಜಕೀಯ ಸಮೀಕರಣದ ಒಂದು ಭಾಗವಾಗಿರುವ ಸಂದರ್ಭದಲ್ಲಿ, ಒಬ್ಬರನ್ನು ಮರಳಿ ಕರೆತರುವ ನಿರ್ಧಾರ ಇತರ ಶಾಸಕರಲ್ಲಿ ‘ನಮಗೆ ಯಾವ ಸಂದೇಶ?’ ಎಂಬ ಪ್ರಶ್ನೆ ಮೂಡಿಸಿದೆ.  ಮೂರನೆಯದು ಜನಾಭಿಪ್ರಾಯದ ಸವಾಲು. ಭ್ರಷ್ಟಾಚಾರ ವಿರೋಧಿ ರಾಜಕೀಯವನ್ನು ಚುನಾವಣಾ ಘೋಷಣೆಗಳ ಮೂಲಕ ಹೇಳಿಕೊಳ್ಳುವ ಪಕ್ಷವೇ ಆರೋಪದ ನೆರಳಿನಲ್ಲಿರುವ ವ್ಯಕ್ತಿಗೆ ಅಧಿಕಾರ ನೀಡಿದಾಗ, ಜನರು ಸಹಜವಾಗಿಯೇ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಬೇಕಾದ ಹೊಣೆಗಾರಿಕೆ ಕಾಂಗ್ರೆಸ್‌ಗಿದೆ. ನಾಗೇಂದ್ರ ‘ಬಿಸಿ ತುಪ್ಪ’ ಏಕೆ? ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ವಾಲ್ಮೀಕಿ ಸಮುದಾಯದ ಒಂದು ವರ್ಗವನ್ನು ತೃಪ್ತಿಪಡಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದ್ದರೆ, ಅದೇ ನಿರ್ಧಾರ ಮತ್ತೊಂದು ವರ್ಗದಲ್ಲಿ ‘ಆರೋಪಗಳಿಗಿಂತ ರಾಜಕೀಯ ಲೆಕ್ಕಾಚಾರವೇ ದೊಡ್ಡದಾಯಿತೇ?’ ಎಂಬ ಅನುಮಾನ ಹುಟ್ಟಿಸಿದೆ.

ಒಂದೆಡೆ ಸಮುದಾಯದ ಪ್ರತಿನಿಧಿತ್ವದ ರಾಜಕೀಯ. ಮತ್ತೊಂದೆಡೆ ಭ್ರಷ್ಟಾಚಾರದ ಆರೋಪಗಳ ವಿರುದ್ಧದ ನೈತಿಕ ನಿಲುವು. ಈ ಎರಡರಲ್ಲಿ ಯಾವುದನ್ನಾದರೂ ಸ್ಪಷ್ಟವಾಗಿ ಸಮರ್ಥಿಸಲು ಕಾಂಗ್ರೆಸ್‌ಗೆ ಈಗ ಕಷ್ಟ. ಇದಕ್ಕಾಗಿಯೇ ನಾಗೇಂದ್ರ ಪ್ರಕರಣ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ. ಉಗುಳಲೂ ಆಗುವುದಿಲ್ಲ; ನುಂಗಲೂ ಆಗುವುದಿಲ್ಲ. ಈ ಬೆಳವಣಿಗೆಯನ್ನು ಕೇವಲ ಒಬ್ಬ ಸಚಿವರ ರಾಜಕೀಯ ಭವಿಷ್ಯಕ್ಕೆ ಸೀಮಿತಗೊಳಿಸುವುದು ತಪ್ಪು. ಇದು ಭಾರತೀಯ ರಾಜಕಾರಣದ ದೊಡ್ಡ ಸಮಸ್ಯೆಯೊಂದರ ಪ್ರತಿಬಿಂಬ. ಆರೋಪಗಳು ಎದುರಾದಾಗ ರಾಜೀನಾಮೆ ನೀಡುವುದು ‘ದುರ್ಬಲತೆ’ ಎಂಬಂತೆ ಕಾಣತೊಡಗಿದೆ. ಅಧಿಕಾರಕ್ಕೆ ಅಂಟಿಕೊಂಡಿರುವುದೇ ರಾಜಕೀಯ ಸಾಮರ್ಥ್ಯ ಎಂಬ ಭಾವನೆ ಬೆಳೆದಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಸ್ಥಾನದಲ್ಲಿ ಮುಂದುವರಿಯಬಹುದು ಎಂಬ ಕಾನೂನುಬದ್ಧ ವಾದವನ್ನು ರಾಜಕೀಯ ನೈತಿಕತೆಯ ಮೇಲೂ ಅನ್ವಯಿಸಲಾಗುತ್ತಿದೆ. ಆದರೆ ಕಾನೂನು ಮತ್ತು ರಾಜಕೀಯ ನೈತಿಕತೆ ಒಂದೇ ಅಲ್ಲ.ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವವರೆಗೆ ವ್ಯಕ್ತಿ ಕಾನೂನಿನ ದೃಷ್ಟಿಯಲ್ಲಿ ನಿರ್ದೋಷಿಯಾಗಿರಬಹುದು.

ಆದರೆ ಸಾರ್ವಜನಿಕ ಜೀವನದಲ್ಲಿ ಆರೋಪ ಎದುರಾದ ವ್ಯಕ್ತಿ ತನ್ನ ಸ್ಥಾನದಿಂದ ಹಿಂದೆ ಸರಿಯುವುದು, ತನಿಖೆಗೆ ಅಡ್ಡಿಯಾಗದಂತೆ ಅವಕಾಶ ನೀಡುವುದು ಮತ್ತು ತನ್ನ ಮೇಲಿನ ಅನುಮಾನವನ್ನು ನಿವಾರಿಸಿಕೊಂಡ ಬಳಿಕ ಅಧಿಕಾರಕ್ಕೆ ಮರಳುವುದು—ಇವು ರಾಜಕೀಯ ನೈತಿಕತೆಯ ಭಾಗವಾಗಬಹುದು. ಇಂತಹ ಸಂವೇದನೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕಳೆದುಕೊಳ್ಳುತ್ತಿರುವುದು ಆತಂಕಕಾರಿ. ಕೊನೆಗೆ ಜನರು ಕೇಳುವುದು ಒಂದೇ ಪ್ರಶ್ನೆ: ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಎಲ್ಲವೂ ಸಮರ್ಥನೀಯವೇ? ನಾಗೇಂದ್ರ ಅವರ ಮರುಸೇರ್ಪಡೆಯ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕಿರುವ ಪ್ರಶ್ನೆಯೂ ಇದೇ. ಅವರನ್ನು ಸಚಿವರನ್ನಾಗಿ ಮಾಡುವುದು ಕಾನೂನುಬದ್ಧವಾಗಿರಬಹುದು. ಆದರೆ ಅದು ರಾಜಕೀಯವಾಗಿ ಮತ್ತು ನೈತಿಕವಾಗಿ ಸರಿಯಾದ ನಿರ್ಧಾರವೇ ಎಂಬುದನ್ನು ಜನರ ಮುಂದೆ ಸಮರ್ಥಿಸುವ ಹೊಣೆಗಾರಿಕೆ ಸರ್ಕಾರದ್ದು. ಸರ್ಕಾರಗಳು ಬಹುಮತದಿಂದ ಉಳಿಯುತ್ತವೆ. ಆದರೆ ಪ್ರಜಾಪ್ರಭುತ್ವಗಳು ನಂಬಿಕೆಯಿಂದ ಉಳಿಯುತ್ತವೆ. ಆ ನಂಬಿಕೆಯೇ ಪ್ರಶ್ನೆಗೆ ಒಳಗಾದಾಗ, ಒಂದು ಸಚಿವ ಸ್ಥಾನಕ್ಕಿಂತ ದೊಡ್ಡ ರಾಜಕೀಯ ಬಿಕ್ಕಟ್ಟು ಆರಂಭವಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

- ಶ್ರೀರಾಜ್‌ ವಕ್ವಾಡಿ 

Wednesday, August 19, 2026

ಸಮರ್ಥ ಕೃಷ್ಣ ಬೈರೇಗೌಡರಿಗೆ ಮತ್ತೊಂದು ಮಹತ್ವದ ಹೊಣೆ: ಡಿಕೆಶಿ ನಡೆ ಹಿಂದೆ ಇರುವ ರಾಜಕೀಯ ಲೆಕ್ಕಾಚಾರವೇನು?

ರಾಜ್ಯ ಸಚಿವ ಸಂಪುಟದಲ್ಲಿ ನಡೆದಿರುವ ಖಾತೆಗಳ ಮರುಹಂಚಿಕೆ ಮೇಲ್ನೋಟಕ್ಕೆ ಆಡಳಿತಾತ್ಮಕ ನಿರ್ಧಾರವೆನಿಸಿದರೂ, ಅದರ ಹಿಂದೆ ಇರುವ ರಾಜಕೀಯ ಸಂದೇಶವನ್ನು ನಿರ್ಲಕ್ಷಿಸುವಂತಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿಯಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ವಹಿಸಿರುವುದು ಕುತೂಹಲ ಮೂಡಿಸಿದೆ.

ಕೃಷ್ಣ ಬೈರೇಗೌಡ ಸಾಮಾನ್ಯವಾಗಿ ಯಾವುದೇ ಇಲಾಖೆಯನ್ನು ಸಮರ್ಥವಾಗಿ ವಹಿಸಿಕೊಂಡು ಹೋಗುವ ನಾಯಕ. ಆಡಳಿತಾತ್ಮಕ ವಿಚಾರಗಳ ಆಳವಾದ ಅರಿವು, ಸದನದ ಕಾರ್ಯವಿಧಾನದ ಮೇಲೆ ಹಿಡಿತ, ವಿಷಯ ಮಂಡಿಸುವ ಸಾಮರ್ಥ್ಯ ಹಾಗೂ ಸರ್ಕಾರದ ನೀತಿಗಳನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುವ ರಾಜಕೀಯ ಕೌಶಲ್ಯ—ಇವೆಲ್ಲವೂ ಅವರಲ್ಲಿರುವ ಪ್ರಮುಖ ಗುಣಗಳು. ಹೀಗಾಗಿ, ಅವರಿಗೆ ಸಂಸದೀಯ ವ್ಯವಹಾರಗಳಂತಹ ರಾಜಕೀಯವಾಗಿ ಸೂಕ್ಷ್ಮವಾದ ಖಾತೆ ನೀಡಿರುವುದು ಕೇವಲ ಇಲಾಖಾ ಬದಲಾವಣೆ ಎಂದು ನೋಡುವುದು ಸರಳೀಕರಣವಾಗುತ್ತದೆ. ಗಮನಿಸಿ, ಸರ್ಕಾರಕ್ಕೆ ವಿಧಾನಸಭೆಯ ಒಳಗಿನ ನಿರ್ವಹಣೆ ಅತ್ಯಂತ ಮಹತ್ವದ್ದು. ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರವಲ್ಲದೆ, ಮಸೂದೆಗಳ ಮಂಡನೆ, ಚರ್ಚೆಗಳನ್ನು ಸಮನ್ವಯಗೊಳಿಸುವುದು, ಸದನದ ಗೊಂದಲಗಳನ್ನು ನಿಭಾಯಿಸುವುದು ಹಾಗೂ ಸರ್ಕಾರದ ನಿಲುವನ್ನು ಪರಿಣಾಮಕಾರಿಯಾಗಿ ಮಂಡಿಸುವುದು ಸಂಸದೀಯ ವ್ಯವಹಾರಗಳ ಸಚಿವರ ಪ್ರಮುಖ ಹೊಣೆ. ಈ ಹಿನ್ನೆಲೆಯಲ್ಲಿ ಕೃಷ್ಣ ಬೈರೇಗೌಡರ ಆಯ್ಕೆ ಒಂದು ‘ಮ್ಯಾನೇಜ್‌ಮೆಂಟ್’ ನಿರ್ಧಾರಕ್ಕಿಂತ ‘ಪಾಲಿಟಿಕಲ್ ಕಮ್ಯುನಿಕೇಶನ್’ ನಿರ್ಧಾರವಾಗಿಯೂ ಕಾಣುತ್ತದೆ.

ಸರ್ಕಾರದ ಮುಂದಿನ ಅವಧಿಯಲ್ಲಿ ಹಲವು ಸೂಕ್ಷ್ಮ ವಿಚಾರಗಳು ವಿಧಾನಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಪ್ರತಿಪಕ್ಷದ ಆಕ್ರಮಣ, ಸರ್ಕಾರದ ವಿರುದ್ಧದ ಆರೋಪಗಳು, ಆಡಳಿತಾತ್ಮಕ ನಿರ್ಧಾರಗಳ ಕುರಿತು ಚರ್ಚೆಗಳು—ಇವೆಲ್ಲವನ್ನೂ ಎದುರಿಸಲು ಸದನದಲ್ಲಿ ಅನುಭವ ಹೊಂದಿರುವ ಮತ್ತು ವಿಷಯಾಧಾರಿತವಾಗಿ ಮಾತನಾಡಬಲ್ಲ ಸಚಿವರ ಅಗತ್ಯವಿದೆ. ಸಂಸದೀಯ ವ್ಯವಹಾರಗಳ ಖಾತೆ ಮುಖ್ಯಮಂತ್ರಿ ಬಳಿಯೇ ಉಳಿಯಬೇಕೆಂಬ ಅನಿವಾರ್ಯತೆ ಇರಲಿಲ್ಲ. ಆದರೆ ಅದನ್ನು ಯಾರಿಗೆ ನೀಡಬೇಕು ಎಂಬುದು ಮುಖ್ಯ. ಡಿಕೆ ಶಿವಕುಮಾರ್ ಅವರು ತಮ್ಮ ಬಳಿಯಿದ್ದ ಈ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ವಹಿಸುವ ಮೂಲಕ ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ’ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದಾರೆಯೇ?ಎಂಬ ಪ್ರಶ್ನೆ ಎದುರಾಗುತ್ತದೆ.

ಇದರ ಮತ್ತೊಂದು ಆಯಾಮವೂ ಇದೆ. ಮುಖ್ಯಮಂತ್ರಿಗೆ ಹಲವು ಪ್ರಮುಖ ಜವಾಬ್ದಾರಿಗಳಿರುವ ಸಂದರ್ಭದಲ್ಲಿ, ಪ್ರತಿಯೊಂದು ಇಲಾಖೆಯ ಸೂಕ್ಷ್ಮ ನಿರ್ವಹಣೆಯನ್ನು ಸ್ವತಃ ನೋಡಿಕೊಳ್ಳುವುದಕ್ಕಿಂತ, ಸಮರ್ಥ ಸಚಿವರಿಗೆ ನಿರ್ದಿಷ್ಟ ಹೊಣೆಗಾರಿಕೆ ನೀಡುವುದು ಆಡಳಿತಾತ್ಮಕವಾಗಿ ಪರಿಣಾಮಕಾರಿ. ಕೃಷ್ಣ ಬೈರೇಗೌಡರಂತಹ ಸಚಿವರಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರಿಂದ ಸರ್ಕಾರದೊಳಗಿನ ಕೆಲಸದ ಹಂಚಿಕೆ ಮತ್ತಷ್ಟು ಸ್ಪಷ್ಟವಾಗುತ್ತದೆ.ಕೃಷ್ಣ ಬೈರೇಗೌಡರಿಗೆ ‘ಗ್ರೇಟರ್ ಬೆಂಗಳೂರು’ ಜೊತೆಗೆ ಸಂಸದೀಯ ವ್ಯವಹಾರಗಳ ಜವಾಬ್ದಾರಿ ನೀಡಿರುವುದು ಇದೇ ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಮತ್ತೊಂದು ರಾಜಕೀಯ ಸಂದೇಶವನ್ನು ಗಮನಿಸಬೇಕು.

ಕೃಷ್ಣ ಬೈರೇಗೌಡರಿಗೆ ಈಗಾಗಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿಯಂತಹ ಅತ್ಯಂತ ಮಹತ್ವದ ಖಾತೆಯ ಹೊಣೆ ಇದೆ. ಬೆಂಗಳೂರು ಅಭಿವೃದ್ಧಿ ಎಂದರೆ ಕೇವಲ ನಗರಾಡಳಿತದ ವಿಚಾರವಲ್ಲ; ಅದು ಮೂಲಸೌಕರ್ಯ, ಸಂಚಾರ, ನೀರು, ನಗರ ಯೋಜನೆ, ಮಹಾನಗರದ ಆಡಳಿತ ವ್ಯವಸ್ಥೆ ಸೇರಿದಂತೆ ಭವಿಷ್ಯದ ಬೆಂಗಳೂರಿನ ರಾಜಕೀಯ-ಆಡಳಿತಾತ್ಮಕ ರೂಪುರೇಷೆಗಳಿಗೆ ಸಂಬಂಧಿಸಿದ ವಿಷಯ. ಅಂತಹ ಪ್ರಮುಖ ನಗರಾಭಿವೃದ್ಧಿಯ ಹೊಣೆಗಾರಿಕೆಯ ಜೊತೆಗೆ ಸಂಸದೀಯ ವ್ಯವಹಾರಗಳ ಖಾತೆಯನ್ನೂ ನೀಡಿರುವುದು, ಅವರ ಮೇಲಿನ ಸರ್ಕಾರದ ನಂಬಿಕೆ ಹೆಚ್ಚಿರುವುದನ್ನು ಸೂಚಿಸುತ್ತದೆ. ಆದರೆ ಪ್ರಶ್ನೆ ಇಲ್ಲಿಯೇ ನಿಲ್ಲುವುದಿಲ್ಲ.

ಇದು ಕೃಷ್ಣ ಬೈರೇಗೌಡರನ್ನು ಸರ್ಕಾರದ ಪ್ರಮುಖ ‘ಫ್ರಂಟ್‌ಲೈನ್’ ಸಚಿವರನ್ನಾಗಿ ರೂಪಿಸುವ ಪ್ರಯತ್ನವೇ?

ಸರ್ಕಾರದಲ್ಲಿ ಎಲ್ಲವೂ ಸರಾಗವಾಗಿದ್ದರೆ, ಈ ಖಾತೆ ಬದಲಾವಣೆಯನ್ನು ಕೇವಲ ಆಡಳಿತಾತ್ಮಕ ಮರುಹಂಚಿಕೆ ಎಂದು ಹೇಳಬಹುದು. ಆದರೆ ರಾಜಕೀಯದಲ್ಲಿ ಖಾತೆಗಳು ಕೇವಲ ಕಡತಗಳ ವಹಿವಾಟಿನ ಸಾಧನವಲ್ಲ; ಅವು ಅಧಿಕಾರ, ಪ್ರಭಾವ ಮತ್ತು ರಾಜಕೀಯ ಪಾತ್ರದ ಸೂಚಕಗಳೂ ಹೌದು.ಹೀಗಾಗಿ ಕೇಳಬೇಕಾದ ಪ್ರಶ್ನೆ ಏನೆಂದರೆ, ಕೃಷ್ಣ ಬೈರೇಗೌಡರಿಗೆ ಸಂಸದೀಯ ವ್ಯವಹಾರಗಳ ಖಾತೆ ನೀಡಿರುವುದು ಅವರ ಸಾಮರ್ಥ್ಯಕ್ಕೆ ನೀಡಿದ ಮನ್ನಣೆಯೇ? ಅಥವಾ ಸರ್ಕಾರದ ಮುಂದಿನ ರಾಜಕೀಯ ಹೋರಾಟಗಳಿಗೆ ಅವರನ್ನು ಮುಂಚೂಣಿಗೆ ತರುವ ತಂತ್ರವೇ?

ಮುಖ್ಯವಾಗಿ, ವಿಧಾನಸಭೆಯಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಜವಾಬ್ದಾರಿ ಈಗ ಮತ್ತಷ್ಟು ಸ್ಪಷ್ಟವಾಗಿ ಕೃಷ್ಣ ಬೈರೇಗೌಡರ ಹೆಗಲಿಗೆ ಬಂದಿದೆ. ಇದರಿಂದ ಪ್ರತಿಪಕ್ಷದ ಟೀಕೆಗಳಿಗೆ ಸರ್ಕಾರದ ಪರವಾಗಿ ತಕ್ಷಣ, ತರ್ಕಬದ್ಧವಾಗಿ ಮತ್ತು ರಾಜಕೀಯವಾಗಿ ಉತ್ತರಿಸುವ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವೂ ಇರಬಹುದು. ಇಮ್ನು, ಸಿಎಂ ಡಿಕೆಶಿ ಅವರ ‘ತಂತ್ರ’ ಇಲ್ಲಿ ಕಾಣುತ್ತದೆಯೇ?

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿಯನ್ನು ಗಮನಿಸಿದರೆ, ಪ್ರಮುಖ ಹೊಣೆಗಾರಿಕೆಗಳನ್ನು ಸಮರ್ಥ ನಾಯಕರಿಗೆ ಹಂಚುವ ಮೂಲಕ ತಮ್ಮ ಮೇಲಿನ ಆಡಳಿತಾತ್ಮಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಪಕ್ಷ-ಸರ್ಕಾರದ ರಾಜಕೀಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಪ್ರಯತ್ನವಾಗಿರಬಹುದು.

ಅದರಲ್ಲೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ನೀಡಿರುವುದು ಸರ್ಕಾರದ ಪರವಾಗಿ ಸದನದಲ್ಲಿ ಗಂಭೀರವಾದ, ವಿಷಯಾಧಾರಿತ ಮತ್ತು ಸಂಘಟಿತ ಪ್ರತಿಕ್ರಿಯೆ ನೀಡುವ ಅಗತ್ಯವನ್ನು ಮುಖ್ಯಮಂತ್ರಿ ಗುರುತಿಸಿದ್ದಾರೆ ಎಂಬ ಸಂದೇಶ ನೀಡುತ್ತದೆ.ಆದರೆ ಇದರ ರಾಜಕೀಯ ಪರಿಣಾಮ ಇನ್ನೂ ದೊಡ್ಡದಾಗಬಹುದು.

ಕೃಷ್ಣ ಬೈರೇಗೌಡರಿಗೆ ಒಂದರ ಹಿಂದೆ ಒಂದರಂತೆ ಮಹತ್ವದ ಜವಾಬ್ದಾರಿಗಳು ಬರುತ್ತಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಅವರ ಪಾತ್ರ ವಿಸ್ತರಿಸುತ್ತಿರುವುದರ ಸೂಚನೆಯೇ? ಅಥವಾ ಇದು ಕೇವಲ ಆಡಳಿತದ ಅಗತ್ಯಕ್ಕೆ ತಕ್ಕಂತೆ ಮಾಡಿದ ಜವಾಬ್ದಾರಿ ಹಂಚಿಕೆಯೇ? ಉತ್ತರವನ್ನು ಮುಂದಿನ ಕೆಲವು ನಡೆಗಳು ಸ್ಪಷ್ಟಪಡಿಸುತ್ತವೆ. ಒಟ್ಟಿನಲ್ಲಿ, ಡಿಕೆ ಶಿವಕುಮಾರ್ ತಮ್ಮ ಬಳಿಯಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳದೆ ಕೃಷ್ಣ ಬೈರೇಗೌಡರಂತಹ ಸಮರ್ಥ ಸಚಿವರಿಗೆ ವಹಿಸಿರುವುದು, ಸರ್ಕಾರದ ಸದನ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವಾಗಿ ಕಾಣುತ್ತದೆ.ಆದರೆ ರಾಜಕೀಯದ ಕಣ್ಣಿನಿಂದ ನೋಡಿದರೆ, ಇದು ಇನ್ನೊಂದು ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ

“ಕೃಷ್ಣ ಬೈರೇಗೌಡರಿಗೆ ಖಾತೆ ಸಿಕ್ಕಿದೆಯೇ, ಅಥವಾ ಸರ್ಕಾರದ ಮುಂದಿನ ರಾಜಕೀಯ ಸಮರಕ್ಕೆ ಒಂದು ಪ್ರಮುಖ ‘ಸ್ಪೀಕರ್’ ಸಿಕ್ಕಿದ್ದಾರೆಯೇ? ಇದು ಕುತೂಹಲವಾಗಿಯೇ ಉಳಿಯುತ್ತದೆ. ಮತ್ತು ಕೃಷ್ಣ ಬೈರೇಗೌಡರಂತಹ ಸಮರ್ಥ ನಾಯಕರನ್ನು ಇನ್ನಷ್ಟು ಯಶಸ್ವಿಯಾಗಿ ಬಳಸಿಕೊಂಡರೇ, ಕಾಂಗ್ರೆಸ್ ಗೆ ಒಳಿತು, ರಾಜ್ಯದ ಜನತೆಗೂ ಒಳಿತು. 

- ಶ್ರೀರಾಜ್‌ ವಕ್ವಾಡಿ