Thursday, September 26, 2024

ಗಟ್ಟಿತನವಿಲ್ಲದ ʼಕಲ್ಜಿಗʼದಲ್ಲಿ ಕೊರಗಜ್ಜ ಅಪಾತ್ರ !

 

ದೈವ ದೇವರ ಅತೀತ ಶಕ್ತಿಯನ್ನು ಸಿನೆಮಾ ಮಾಡಿ ತೋರಿಸಬೇಕೆ !?

ಸಿನೆಮಾ‌ ಮಾಧ್ಯಮಗಳಲ್ಲಿ ದೃಶ್ಯಗಳು ಮಾತನಾಡುತ್ತವೆ. ದೃಶ್ಯಗಳೆ ಕಥೆಗಳಾಗಿ ಮಾತನಾಡುತ್ತವೆ. ಬಹುಶಃ ಯಾವ ರಂಗವೂ ಕಟ್ಟಿಕೊಡದ ಮಾತನ್ನು ಸಿನೆಮಾ ರಂಗ ಆಡುತ್ತದೆ. ಅದು ಸಿನೆಮಾ ಕ್ಷೇತ್ರದ ಹೆಚ್ಚುಗಾರಿಕೆ. ಸಿನೆಮಾದ ವಿಷಯದ ಆಳ ವಿಸ್ತಾರ ಗಟ್ಟಿ ಇಲ್ಲದೆ ಇದ್ದರೂ, ದೃಶ್ಯಗಳು ಸಿನೆಮಾಗಳಿಗೆ ಗಟ್ಟಿ ಬೇಕು. ಸಿನೆಮಾಗಳಲ್ಲಿ ಒಮ್ಮೊಮ್ಮೆ ದೃಶ್ಯಗಳೇ ಎಲ್ಲವನ್ನೂ ಹೇಳಿಬಿಡುತ್ತವೆ. ಅಥವಾ ಸಿನೆಮಾಗಳಲ್ಲಿ ದೃಶ್ಯಗಳೇ ಎಲ್ಲವನ್ನೂ ಹೇಳಿಬಿಡಬೇಕು ಎಂದರೆ ಸೂಕ್ತ ಆಗುತ್ತದೆ ಇರಬೇಕು. ಒಂದು ವೇಳೆ ಇವೆರಡರಲ್ಲಿ ಯಾವುದಾರೂ ಒಂದು ಸೋತರೂ ಪ್ರೇಕ್ಷಕರ ಮನಸ್ಸಲ್ಲಿ ಸಿನೆಮಾ ಗೆದ್ದು ಬಿಡಬಹುದು. ಆದರೆ, ಎರಡೂ ಸೋತರೆ ತೀರಾ ಯಕಶ್ಚಿತ್ ಎಂಬ ಧೋರಣೆಯಲ್ಲೇ ಸಿನೆಮಾವನ್ನು ನೋಡುಗರು ತ್ಯಜಿಸಿಬಿಡುತ್ತಾರೆ.

ಪ್ರೇಕ್ಷಕರು ಸಿನೆಮಾ ನಿರ್ಮಾಪಕರು ಅಲ್ಲದೆ ಇರಬಹುದು, ಸಿನೆಮಾ ನಿರ್ದೇಶಕರು ಅಲ್ಲದೆ ಇರಬಹುದು, ಸಿನೆಮಾ ನಟ, ನಟಿಯರು ಅಲ್ಲದೆ ಇರಬಹುದು, ಸಿನೆಮಾ ಟೆಕ್ನಿಶಿಯನ್ಸ್ ಅಲ್ಲದೆ ಇರಬಹುದು. ಆದರೆ, ಸಿನೆಮಾ ತಂಡವೊಂದು ನಿರ್ಮಿಸಿದ ಎಂಥದ್ದೇ ಒಂದು ಸಿನೆಮಾ ನೋಡುವಾಗ ಶಿಳ್ಳೆ, ಕೇಕೆ, ಚಪ್ಪಾಳೆ ಹೊಡೆಯುವ ಸಿನೆಮಾ ಪ್ರೇಕ್ಷಕರ ಪೈಕಿಯಲ್ಲಿ ಒಬ್ಬ ಪ್ರಾಮಾಣಿಕ ವಿಮರ್ಶಕನಿರಬಹುದು. ಒಬ್ಬ ಒಳ್ಳೆಯ ವಿಶ್ಲೇಷಕನಿರಬಹುದು ಎಂಬುವುದನ್ನು ಸಿನೆಮಾ ತಂಡ ಮರೆಯಬಾರದು. ಈ ವಿಷಯವನ್ನು ಮರೆತ ಸಿನೆಮಾ ತಂಡ ಸಿನೆಮಾವನ್ನು ಮಾಡುವುದಕ್ಕೆ ಮುಂದಾಗಲೇಬಾರದು. ಸಿನೆಮಾ ಕ್ಷೇತ್ರ ʼಜನಪ್ರೀತಿಗಳಿಸುವುದನ್ನು ಬಿಟ್ಟು ಜನಪ್ರಿಯʼ ಮನರಂಜನಾ ಮಾಧ್ಯಮವಾದಂತಿದೆ. ಇದು ಜವಾಬ್ದಾರಿಯನ್ನು ಮರೆತ ಸ್ಥಿತಿ ಅಂತಲೇ ಹೇಳಬಹುದು.

ಸಿನೆಮಾ ನೋಡುವುದಕ್ಕೆ ಬರುವ ಪ್ರೇಕ್ಷಕರನ್ನು ವಂಚಿಸುವ ಯಾವ ಅಧಿಕಾರವೂ ಸಿನೆಮಾ ತಂಡಕ್ಕೆ ಇಲ್ಲ. ಕಾಲ ಬದಲಾಗಿದೆ. ಸಿನೆಮಾ ಕ್ಷೇತ್ರದ ಮುಂದೆ ದೊಡ್ಡ ಸವಾಲಿದೆ, ಸಿನೆಮಾ ಕ್ಷೇತ್ರದ ವ್ಯಾಪ್ತಿ ವಿಸ್ತಾರಗೊಂಡಿದೆ. ಬದಲಾವಣೆಯ ತುರ್ತಿದೆ. ಈ ಎಲ್ಲವನ್ನು ಸಾರ್ಥಕವಾಗಿ ಪ್ರೇಕ್ಷಕರಿಗೆ ಒಪ್ಪಿಸಬೇಕಾದರೇ ಸುದೀರ್ಘ ಪರಿಶ್ರಮ, ಅಧ್ಯಯನ ಬೇಕು. ಪರಿಶ್ರಮ ಅಥವಾ ಅಧ್ಯಯನ ರಹಿತವಾಗಿ ಬರುವ ಸಿನೆಮಾ ಖಂಡಿತ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ನಿರ್ಮಾಣ ಸಂಖ್ಯೆಯನ್ನು ಹೆಚ್ಚಿಸುವುದಕ್ಕೋ, ದಾಖಲೀಕರಣದ ಕಾರಣಕ್ಕೋ ಏನನ್ನೊ ಮಾಡಿದರೆ ಈಗಿನ ಜನರಂತೂ ಒಪ್ಪುವ ಮನಸ್ಥಿತಿಯಲ್ಲಿಲ್ಲ‌.

'ಕಾಂತಾರ' ಸಿನೆಮಾ ಬಂದ ಮೇಲೆ ಸಿನೆಮಾಕ್ಕೆ ದೈವ ದೇವರುಗಳನ್ನು ಅನಗತ್ಯವಾಗಿ ತರುವ ಕೆಟ್ಟ ಅಭ್ಯಾಸ ಸಿನೆಮಾ ಕ್ಷೇತ್ರದಲ್ಲಿ ಬಂದುಬಿಟ್ಟಿದೆ ಎಂದರೆ ತಪ್ಪಿಲ್ಲ. ಕಣ್ಣಿಗೆ ಕಾಣದೆ ಇರುವ ಅತೀತ ಶಕ್ತಿಯನ್ನು ನಂಬುವ ಜನ ಇಲ್ಲಿದ್ದಾರೆ ಎಂಬ ಕಾರಣಕ್ಕೆ, ದೈವ ದೇವರುಗಳನ್ನು ಸಿನೆಮಾದಲ್ಲಿ ಸೇರಿಸಿಕೊಂಡರಾಯ್ತು, ಸಿನೆಮಾದಲ್ಲಿ ಕಥೆ ಏನಾದರೂ ಪರವಾಗಿಲ್ಲ ಜನ ಬರುತ್ತಾರೆ ಎಂಬ ಧೋರಣೆ ಸಿನೆಮಾ ಕ್ಷೇತ್ರದಲ್ಲಿ ಕೆಲವರಿಗೆ ಬಂದು ಬಿಟ್ಟಿದೆ ಅಂತನ್ನಿಸುತ್ತಿದೆ. ಏನೇನೋ ಅರ್ಥವಿಲ್ಲದ, ಗಟ್ಟಿತನವಿಲ್ಲದ ಕಥೆಗೆ ದೈವ ದೇವರುಗಳನ್ನು ಎಳೆತಂದು ಮನಬಂದಂತೆ ವೈಭವೀಕರಿಸುವ ಛಾಳಿ ಸಿನೆಮಾ ರಂಗಕ್ಕೆ ಹೊಸತಲ್ಲದೆ ಇದ್ದರೂ, ಈಗ ಅದು ತೀವ್ರ ಸ್ವರೂಪ ಕಂಡುಕೊಂಡಿದೆ ಅಂತನ್ನಿಸುತ್ತಿದೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ವಿವಾದಕ್ಕೊಳಗಾಗುತ್ತಲೇ ಇದೆ.

ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಸಿನೆಮಾ ತನ್ನಲ್ಲಿನ ಕಥೆಯ ಆಳ, ವಿಸ್ತಾರದ ನಡುವೆಯೂ ವಿವಾದಕಕ್ಕೊಳಗಾಗಿತ್ತು. ಇನ್ನು, ಗಂಭೀರ ಕಥೆ, ವಿಷಯ, ವಸ್ತು ಆಳ ಅಗಲವಿಲ್ಲದ ಸಿನೆಮಾ ವಿವಾದಕ್ಕೊಳಗಾಗದೇ ಇರುತ್ತದೆಯೆ? ಸಿನೆಮಾದಲ್ಲಿ ದೈವ ದೇವರುಗಳಿಗೆ ಅಥವಾ ಧಾರ್ಮಿಕ ನಂಬಿಕೆಗೆ ಅಪಚಾರ ಮಾಡಿದ್ದಾರೆ ಎನ್ನುವ ವಾದವನ್ನು ಬದಿಗಿಟ್ಟು ನೋಡಿದರೆ, ಸಿನೆಮಾದಲ್ಲಿ ಏನಿದೆ ಎನ್ನುವುದು ಕೂಡ ಚರ್ಚೆಯಾಗಬೇಕಲ್ಲವೆ ? ಇತ್ತೀಚೆಗೆ ತೆರೆಕಂಡ 'ಕಲ್ಜಿಗ' ಸಿನೆಮಾದಲ್ಲಿ ಏನಿದೆ ? ತಲೆಮಾರುಗಳಿಂದ ಈ ನೆಲದ ಒಂದು ಅತೀತ ಶಕ್ತಿಯನ್ನು ನಂಬಿಕೊಂಡು, ಆರಾಧಿಸಿಕೊಂಡು ಬಂದ ಜನರಿಗೆ ಕಾರಣಿಕ ದೈವ ಎಂದು ದೈವ ಶಕ್ತಿಯನ್ನು ತೋರಿಸುವ ಯಾವ ಅಗತ್ಯವಿತ್ತು ಎನ್ನುವುದೇ ಪ್ರಶ್ನೆ.

'ಕಲ್ಜಿಗ' ಸಿನೆಮಾ ವಿವಾದಕ್ಕೊಳಗಾದಾಗ, ಸಿನೆಮಾ ತಂಡ ʼಸಿನೆಮಾ ನೋಡಿ ಮಾತನಾಡಿʼ ಎಂದು ಸಮರ್ಥಿಸಿಕೊಂಡಿತ್ತು. ಈಗ ನೋಡಿದವರು ಮಾತಾಡುತ್ತಿದ್ದಾರೆ, ಸಿನೆಮಾ ತಂಡ ಕೇಳಿಸಿಕೊಳ್ಳಲಿ. 'ಕಲ್ಜಿಗ' ಸಿನೆಮಾದ ಕಥೆ ಏನು ? ಕಥೆಯಲ್ಲಿ ಯಾವ ವಿಚಾರ ಹೊಸತನ್ನು ನೀಡಲಾಗಿದೆ ? ಕೊರಗಜ್ಜ ದೈವ ಕಾರಣಿಕ ಎಂದು ತೋರಿಸಿಕೊಡುವ ಅಗತ್ಯ ಸಿನೆಮಾ ತಂಡಕ್ಕೆ ಏನಿತ್ತು ? ಕೊರಗಜ್ಜ ದೈವದ ಕಾರಣಿಕದ ಬಗ್ಗೆ ಈ ನೆಲದವರಿಗೆ ಯಾರಿಗೆ ತಿಳಿದಿಲ್ಲ ? ಆಸ್ತಿಕ ವರ್ಗದವರಿಗಾಗಿಯೇ ಈ ಸಿನೆಮಾವನ್ನು ಮಾಡಿದ್ದೆ? ಆಸ್ತಿಕ ವರ್ಗದವರಿಗೆ ದೈವ ದೇವರುಗಳಿಗೆ ಶಕ್ತಿ ಇದೆ ಎಂದು ಸಿನೆಮಾ ತಂಡ ಹೇಳಿಕೊಡುವಂತದ್ದೇನಿದೆ ? ಅಥವಾ ನಾಸ್ತಿಕ ವರ್ಗಕ್ಕಾಗಿ ಸಿನೆಮಾ ನಿರ್ಮಾಣ ಮಾಡಿದ್ದೆ ? ನಾಸ್ತಿಕ ವರ್ಗ ದೈವ ದೇವರುಗಳ ಅತೀತ ಶಕ್ತಿಯನ್ನು ಯಾವ ರೀತಿಯಲ್ಲಿ ವೈಭವಿಕರಿಸಿ ತೋರಿಸಿದರೂ ನಾಸ್ತಿಕ ವರ್ಗ ಒಪ್ಪುವುದಿಲ್ಲ. ಅಥವಾ ಮುಂದಿನ ಪೀಳಿಗೆಗಾಗಿ ಮಾಡಿದ ಸಿನೆಮಾವೆ ? ಆಸ್ತಿಕ ವರ್ಗದಲ್ಲಿ ಹುಟ್ಟಿದ ಒಂದು ಹೊಸ ಪೀಳಿಗೆ ದೈವ ದೇವರುಗಳ ಮೇಲೆ ನಂಬಿಕೆಯಿರಿಸಿಕೊಂಡೇ ಬೆಳೆಯುತ್ತದೆ. ನಾಸ್ತಿಕ ವರ್ಗದಲ್ಲಿ ಹುಟ್ಟಿದ ಹೊಸ ಪೀಳಿಗೆ ಬಹುಶಃ ಖಂಡಿತ ದೈವ ದೇವರುಗಳನ್ನು ಒಪ್ಪುವುದಿಲ್ಲವೇನೋ. ಯಾವುದಕ್ಕೂ ಅಲ್ಲ ಎನ್ನುವುದಾದರೇ ಯಾಕೆ ಬೇಕಿತ್ತು? ಸಾಧ್ಯವಾದರೇ ಒಂದು ದೈವದ ಬಗ್ಗೆಯೇ ದಾಖಲೀಕರಣ ಮಾಡುವುದಾದರೇ ಅಧ್ಯಯನಶೀಲ ಡಾಕ್ಯುಮೆಂಟರಿಯನ್ನು ಯಾಕೆ ಹೊರತರಬಾರದು ? ಈ ಪೊಳ್ಳು, ಗಟ್ಟಿತನವಿಲ್ಲದ ಕಥೆಯಲ್ಲಿ ನಿಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳುವುದಕ್ಕೆ ಬೇಕಾಗಿ, ಲಾಭಗಳಿಸುವುದಕ್ಕೆ ಬೇಕಾಗಿ ಸಿನೆಮಾದ ಮೂಲಕ ಧಾರ್ಮಿಕ ವಂಚನೆ ಮಾಡುವುದ್ಯಾಕೆ ?

'ಕಾಂತಾರ' ಸಿನೆಮಾವನ್ನು ಜನ ಸುಮ್ಮನೇ ಒಪ್ಪಿದ್ದಲ್ಲ, ಅಥವಾ ಪಂಜುರ್ಲಿ, ಗುಳಿಗ ದೈವರಿದ್ದಾರೆ ಎನ್ನುವುದಕ್ಕೂ ಅಲ್ಲ. ʼಕಾಂತಾರʼದಲ್ಲಿ ಜಾಗ ಒತ್ತುವರಿ, ಅಲ್ಲಿನ ಜನರ ಆಚರಣೆಗಳ ಬಗ್ಗೆ ಕಥೆಯ ಗಟ್ಟಿತನವಿತ್ತು. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸ ʼಕಾಂತಾರಾʼ ಸಿನೆಮಾ ಮಾಡಿದೆ. ಮಣ್ಣಿನ ಕಥೆಯನ್ನು ಹೆಣೆಯುವುದರ ಜೊತೆಗೆ ಸಂಘರ್ಷದ ಮಿಳಿತದಲ್ಲಿ ಸೌಹಾರ್ದದ ತೆರೆ ಎಳೆಯುವ ಪ್ರಯತ್ನ ಮಾಡಿದ್ದಕ್ಕಾಗಿ ʼಕಾಂತಾರʼ ಸಿನೆಮಾವನ್ನು  ಜನ ಒಪ್ಪಿದರು. ʼಕಾಂತಾರʼವನ್ನು ಒಪ್ಪಿದರು ಎನ್ನುವ ಮಾತ್ರಕ್ಕೆ ಕೊರಗಜ್ಜ ದೈವ ಇದ್ದಾರೆಂದು 'ಕಲ್ಜಿಗ' ಸಿನೆಮಾವನ್ನು ಒಪ್ಪಬೇಕಂತಿಲ್ಲ. ಸಿನೆಮಾದಲ್ಲಿ ಕಥೆ ಗಟ್ಟಿ ಇದ್ದರೆ ಜನ ಒಪ್ಪಿಯೇ ಒಪ್ಪುತ್ತಾರೆ. ದೈವಕ್ಕೆ ಶಕ್ತಿ ಇದೆ ಅಂತ ಸಿನೆಮಾ ಮಾಡಿ ತೋರಿಸಬೇಕಂತಿಲ್ಲ. ದೈವ ದೇವರನ್ನು ನಂಬುವವರಿಗೆ ಆ ವಿಷಯ ಗೊತ್ತಿದೆ. 'ಕಲ್ಜಿಗ' ಗಟ್ಟಿತನವಿಲ್ಲದ, ಒಂದು ಕಿರುಚಿತ್ರವಾಗಬಲ್ಲ ಕಥೆ ಅಷ್ಟೇ. ಕರಾವಳಿಯ ಆಚರಣೆ, ಸಂಸ್ಕೃತಿಯನ್ನು ಸಿನೆಮಾದಲ್ಲಿ ತೋರಿಸಲಾಗಿದೆ ಎಂದು ಹೇಳುವ ʼಕಲ್ಜಿಗʼ ಸಿನೆಮಾ ತಂಡ, 'ಮೀನು ಸಾರು ಮಾಡುವುದು, ಮರುವಾಯಿ ಹೆಕ್ಕುವುದು, ಸುಕ್ಕ ಮಾಡುವುದಷ್ಟನ್ನೇ ಇಲ್ಲಿನ ಆಚರಣೆಗಳು, ಸಂಸ್ಕೃತಿ ಎಂದು ಭಾವಿಸಿದೆಯೇ ?'.

ದೈವ ದೇವರುಗಳು ಸಿನೆಮಾದಲ್ಲಿ ಇದ್ದರೆ ಜನ ಬರುತ್ತಾರೆ ಎಂಬ ಧೋರಣೆ ಸಿನೆಮಾ ನಿರ್ಮಾಣ ಮಾಡುವವರು ಬಿಡಲಿ. ಜನರನ್ನು ವಂಚಿಸುವುದನ್ನು ಬಿಡಲಿ. ಎಲ್ಲವೂ 'ಕಾಂತಾರ' ಆಗುವುದಿಲ್ಲ. 'ಕಾಂತಾರ'ದ ಕಥೆಯಲ್ಲಿ ಒಂದು ಅಧ್ಯಯನಶೀಲತೆ ಎದ್ದು ಕಾಣಿಸುತ್ತದೆ.‌ ನಂಬಿಕೆಯೂ ಆ ಸಿನೆಮಾದ ಜೊತೆಗಿದೆ. 'ಕಲ್ಜಿಗ' ಸಿನೆಮಾದಲ್ಲಿ ಏನಿದೆ ? ದೈವದ ಹೆಸರಿನಲ್ಲಿ ಏನು ಮಾಡಿದರೂ ಜನ ನೋಡುವುದಕ್ಕೆ ಬರುತ್ತಾರೆ ಎನ್ನುವ ಧೋರಣೆಯೇ ?. ʼಕಲ್ಜಿಗʼ ಸಿನೆಮಾದಲ್ಲಿ ಕೊರಗಜ್ಜ ದೈವಕ್ಕೆ ನಿಂದನೆ ಮಾಡಲಾಗಿದೆ ಎಂದು ವಿರೋಧಿಸುವಂತಹ ಯಾವ ನಿಂದನೆಯೂ ಸಿನೆಮಾದಲ್ಲಿ ಕಾಣಿಸುವುದಿಲ್ಲ ಎನ್ನುವುದು ಸತ್ಯ. ಆದರೇ ಸಿನೆಮಾ ಎನು ಕೊಟ್ಟಿದೆ ? ಮನರಂಜನೆಯೇ? ಪಾಠವೇ ? ಕಥೆಯೇ ? ಖುಷಿಯೇ ? ಏನು ? ಕೊಟ್ಟಿದ್ದು ಬರೀ ನಿರಾಸೆಯನ್ನಷ್ಟೆ. ದೈವ ದೇವರುಗಳನ್ನು ಸುಖಾಸುಮ್ಮನೆ ಅನಗತ್ಯವಾಗಿ ತಂದು ಸಿನೆಮಾ ಮಾಡುವವರಿಗೆ 'ಕಲ್ಜಿಗ' ಸಿನೆಮಾ ಎದುರಿಸಿದ ವಿವಾದ ದೊಡ್ಡ ಪಾಠ. ಬಹುಶಃ ಈ ಸಿನೆಮಾದಿಂದ ಆದ ವಿವಾದ, ಚರ್ಚೆಯನ್ನು ಸಿನೆಮಾ ತಂಡ ಪರಾಮರ್ಶಿಸಿಕೊಳ್ಳಲಿ ಎನ್ನುವುದೇ ಈ ಲೇಖನದ ಉದ್ದೇಶ. 

-ಶ್ರೀರಾಜ್ ವಕ್ವಾಡಿ.

Thursday, September 19, 2024

ರಾಗಾ ಹೇಳಿಕೆ ವಿವಾದ : ಸರಿಯಾದ ನಡೆ, ನುಡಿಗಳಿಗೆ ದಾರಿದ್ರ್ಯವೇಕೆ ?

ಮಾತು, ಅರ್ಥ, ವಿವೇಚನೆ, ಅರಿವು

ತೀವ್ರವಾದ ಸೈದ್ಧಾಂತಿಕ ಹೋರಾಟ ಮಾಡದ ಹೊರತು ನಾವು ನಮ್ಮ ವೈರಿಗಳ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬ ನಿಲುವಿನ ಜೊತೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೇಶದ ಉದ್ದಗಲಕ್ಕೂ ಭಾರತ್‌ ಜೋಡೋ ಯಾತ್ರೆ ಹಾಗೂ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಮಾಡಿದರು. ಅಲ್ಲಿಂದ ರಾಹುಲ್‌ ಗಾಂಧಿ ಅವರ ಮೇಲೆ ದೇಶದ ಒಂದು ವರ್ಗ ಬಲವಾದ ನಂಬಿಕೆಯಿರಿಸಲಾರಂಭಿಸಿತ್ತು. ರಾಹುಲ್‌ ಅಕ್ಷರಶಃ ಪ್ರಜಾಪ್ರಭುತ್ವದ ನಿಜ ಧ್ವನಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದರು. ಬಹುಶಃ ಇದರ ಫಲವಾಗಿಯೇ ಕಾಂಗ್ರೆಸ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರಿಂದ ಮಹತ್ತರವಾದ ತೀರ್ಪನ್ನು ಪಡೆದಿದೆ. ಈ ಫಲವೇ ರಾಹುಲ್‌ ಅವರಿಗೆ ಸುಮಾರು ಎರಡು ದಶಕಗಳ ಫುಲ್‌ ಟೈಮ್‌ ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಸಾಂವಿಧಾನಿಕ ಹುದ್ದೆಯನ್ನು ಏರುವ ಹಾಗಾಯ್ತು.

ರಾಹುಲ್‌ ಅವರ ಸೈದ್ಧಾಂತಿಕ ನಿಲುವು, ರಾಜಕೀಯದಲ್ಲಿ ಅವರು ವೃದ್ಧಿಸಿಕೊಂಡ ವರ್ಚಸ್ಸು, ರಾಜಕೀಯ ವಲಯದಲ್ಲಿನ ಆಗುಹೋಗುಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ ರಾಹುಲ್‌ ಅವರನ್ನು ವಿಪರೀತವಾಗಿ ಬೆಂಬಲಿಸುತ್ತಿರುವವರಲ್ಲಿಯೂ ಆಶ್ಚರ್ಯ ತಂದಿರಬಹುದು. ರಾಜಕೀಯ ವಲಯದಲ್ಲಿ ಬಲವಂತವಾಗಿ ಹೇರಿ ಸ್ಥಾಪಿಸಲ್ಪಟ್ಟಿದ್ದ ʼರಾಹುಲ್‌ ಗಂಭೀರವಾದ ರಾಜಕಾರಣಿ ಅಲ್ಲʼ ಎಂಬ ಅಭಿಪ್ರಾಯದಿಂದ ಬಹುತೇಕ ಹೊರಬರುವಲ್ಲಿ ರಾಹುಲ್‌ ಯಶಸ್ವಿಯಾಗಿದ್ದಾರೆ. ಆದರೇ, ಈಗ ಅವರೊಂದಿಗೆ ಸಾಂವಿಧಾನಿಕ ಹುದ್ದೆಯೊಂದಿದೆ. ಹಾಗಾಗಿ ರಾಹುಲ್‌ ಅವರಿಂದ ಆ ಹುದ್ದೆ ಇನ್ನಷ್ಟು ಗಂಭೀರತೆಯನ್ನು ಬೇಡುತ್ತದೆ. ಬಿಜೆಪಿಗೆ ರಾಹುಲ್‌ ಗಾಂಧಿಯನ್ನು ಅಷ್ಟು ಸುಲಭದಲ್ಲಿ ನಿರ್ಲಕ್ಷಿಸಿ ನೋಡುವ ಹಾಗಿಲ್ಲ ಎಂಬ ಅಭಿಪ್ರಾಯ ಹುಟ್ಟಿಸುವಲ್ಲಿ ಅವರು ಬೆಳೆದಿದ್ದಾರೆ ಎಂದರೇ, ಅದನ್ನು ಉಳಿಸಿಕೊಳ್ಳುವಲ್ಲಿಯೂ ಶ್ರಮ ಪಡಬೇಕಿದೆ.

ರಾಹುಲ್‌ ಮೇಲೆ ಮಹತ್ತರವಾದ ಹೊಣೆಗಾರಿಕೆ ಇದೆ. ಈ ಹಿಂದೆ ಒಬ್ಬ ಸಂಸದ, ಕಾಂಗ್ರೆಸ್‌ ಪಕ್ಷದ ನಾಯಕರಾಗಿ ಅಷ್ಟೇ ಇದ್ದ ರಾಹುಲ್‌ ಗಾಂಧಿ ಅವರಿಗೆ ಈಗ ಲೋಕಸಭೆಯ ಪ್ರತಿನಾಯಕನ ಸಾಂವಿಧಾನಿಕ ಹುದ್ದೆಯೂ ಜೊತೆ ಇದೆ. ರಾಹುಲ್‌ ತಾವಾಡುವ ಮಾತುಗಳು, ತಾವು ತೆಗೆದುಕೊಳ್ಳುವ ನಿರ್ಧಾರಗಳು, ನಡೆನುಡಿಗಳ ಬಗ್ಗೆ ಬಹಳ ಜಾಗೃತೆಯಿಂದ ನಡೆದುಕೊಳ್ಳಬೇಕಿದೆ. ಇಲ್ಲದಿದ್ದರೇ, ಲೋಕಸಭೆಯಲ್ಲಿ ಅವರೆದುರಿಗಿರುವ ನಾಯಕನ ಛಾಯೆ ಎಂಬಂತೆಯೇ ಉಳಿಯಬೇಕಾಗುತ್ತದೆ !.

ಲೋಕಸಭೆಯ ಪ್ರತಿನಾಯಕನ ಮೇಲೆ ಬಿಜೆಪಿ ಸಹಜವಾಗಿಯೇ ಈಗ ವಿಶೇಷ ಕಣ್ಣಿರಿಸಿದೆ. ರಾಹುಲ್‌ ಅವರು ತಮ್ಮ ನಡೆ ನುಡಿಯ ಬಗ್ಗೆ ಬಹಳ ಎಚ್ಚರದಿಂದಿರಬೇಕು. ರಾಹುಲ್‌ ಅವರು ಮಾತಾಡುವ ಮಾತುಗಳು ಬಹುಶಃ ಅದು ಪ್ರಜಾಪ್ರಭುತ್ವದ ಧ್ವನಿಯೇ ಆಗಿರಬಹುದು ಅಥವಾ ಅದು ವಾಸ್ತವವೇ ಆಗಿರಬಹುದು. ಆದರೇ, ತಾವಾಡುವ ಮಾತುಗಳು ಹೇಗೆ ತಲುಪಬಹುದು ಎನ್ನುವುದರ ಬಗ್ಗೆ ಅರಿವಿರಬೇಕಾಗಿರುವುದು ಬಹಳ ಮುಖ್ಯ. ಪ್ರತಿ ಬಾರಿಯೂ ರಾಹುಲ್ ಗಾಂಧಿ ಅವರು ವಿದೇಶಕ್ಕೆ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಿಗೆ ಪ್ರವಾಸಕ್ಕೆ ತೆರಳಿದಾಗ, ವಿವಾದಕ್ಕೆ ಒಳಗಾಗುವುದು ಅವರಿಗೆ ಅಭ್ಯಾಸವಾದಂತಾಗಿದೆ ಅಂತನ್ನಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಕುತೂಹಲಕಾರಿಯಾಗಿ, ಸ್ವಂತ ಪಕ್ಷದ ಸದಸ್ಯರು ಅಥವಾ ಮೈತ್ರಿ ಪಕ್ಷಗಳಿಗಿಂತ ಹೆಚ್ಚಾಗಿ ಬಿಜೆಪಿ ಹಾಗೂ ಅದರ ಬೆಂಬಲಿತ ಪಕ್ಷಗಳು ಟೀಕೆಗಳಿಗಾಗಿಯೇ ಹೆಚ್ಚು ಗಮನ ಹರಿಸುತ್ತವೆ ಮತ್ತು ಆ ವಿವಾದಾತ್ಮಕ ಹೇಳಿಕೆಗಳನ್ನೇ ಹೆಚ್ಚಾಗಿ ರಾಜಕೀಯ ಮೈಲೇಜ್‌ ಪಡೆದುಕೊಳ್ಳುವ ಉದ್ದೇಶದಿಂದ ಬಳಸಿಕೊಳ್ಳುತ್ತವೆ. ಬಿಜೆಪಿ ಹಾಗೂ ಬಿಜೆಪಿಯ ಬೆಂಬಲಿತ ಪಕ್ಷಗಳಿಂದ ಈ ಪದ್ಧತಿ ಇತ್ತೀಚೆಗೆ ರಾಹುಲ್ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪ್ರತಿಷ್ಠಿತ  ವಿಶ್ವವಿದ್ಯಾಲಯದ ಸಂವಾದವೊಂದರಲ್ಲಿ ಭಾಗಿಯಾಗಿರವ ವೇಳೆ ಮಾತಾಡಿರುವ ಹೇಳಿಕೆಗಳೊಂದಿಗೆ ಮುಂದುವರಿದಿದೆ. ಹಾಗಾಗಿ ರಾಹುಲ್‌ ಮತ್ತು ಅವರ ಮಾತುಗಳು ದೇಶದ ರಾಜಕೀಯ ವಲಯದ ಚರ್ಚೆಯ ವಿಷಯ.

ರಾಹುಲ್‌ ಹೊಂದಿರುವ ಸಂವಿಧಾನಾತ್ಮಕ ಹುದ್ದೆ ಹೆಚ್ಚಿನ ಜವಾಬ್ದಾರಿಗಳನ್ನು ಹೊಂದಿದೆ, ಹಾಗಾಗಿ ಅವರ ಹೇಳಿಕೆಗಳು ಹೆಚ್ಚು ಗಂಭೀರವಾಗಿ ಪರಿಗಣನೆಗೆ ಒಳಪಡುತ್ತವೆ. ಯುನೈಟೆಡ್ ಸ್ಟೇಟ್ಸ್‌ ನಲ್ಲಿ ಭಾರತೀಯ ರಾಜಕೀಯದ ಸೂಕ್ಷ್ಮತೆಗಳ ಪರಿಚಯವಿಲ್ಲದ ಅಥವಾ ಪರಿಸ್ಥಿತಿಯ ವೈಯಕ್ತಿಕ ಅನುಭವವನ್ನು ಹೊಂದಿರದ ಪ್ರೇಕ್ಷಕರು, ರಾಹುಲ್‌ ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಭಾರತದ ಬಗ್ಗೆ ಋಣಾತ್ಮಕ ಅಭಿಪ್ರಾಯವೂ ಇದರಿಂದಾಗಿ ತಲುಪಬಹುದು. ರಾಹುಲ್‌ ಅವರ ಮಾತುಗಳು ದೇಶದ ವಿರುದ್ಧ ಅಲ್ಲದೇ ಇದ್ದರೂ, ಅದು ಬೇರೊಂದು ದೇಶದಲ್ಲಿ ನಿಂತು ಮಾತಾಡಿರುವ ಕಾರಣಕ್ಕೆ ಅಲ್ಲಿನವರು ಅದನ್ನು ತಪ್ಪಾಗಿ ಸ್ವೀಕರಿಸಬಹುದು ಅಥವಾ ರಾಜಕೀಯ ವೈರುದ್ಯಕ್ಕೆ ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳಬಹುದು. ರಾಹುಲ್‌ ಹೇಳಿರುವ ಮಾತುಗಳು ಎಲ್ಲವೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಸರಿ ಇರಬಹುದು, ಆದರೇ, ಅದು ಹೇಳಿದ ಅಥವಾ ತಲುಪಿಸಿದ ಟೋನ್ (ಧ್ವನಿ) ಸರಿಯಿರಲಿಲ್ಲ ಎನ್ನುವುದನ್ನು ಬಹುಶಃ ಎಲ್ಲರೂ ಒಪ್ಪಿಕೊಳ್ಳಬೇಕು. ಹಾಗಾಗಿ ರಾಹುಲ್‌ ಇಂತೆಲ್ಲಾ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಸ್ತಾಪಿಸುವಾಗ ಈಗಂತೂ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವೈಫಲ್ಯವನ್ನು ಟೀಕಿಸುವುದು ಪ್ರತಿನಾಯಕನಿಗೆ ಒಂದು ವಿಷಯ, ಆದರೆ ರಾಹುಲ್ ಆಗಾಗ್ಗೆ ತನ್ನ ದೇಶವನ್ನು, ಸಂಸ್ಥೆಗಳನ್ನು, ಸಮುದಾಯಗಳನ್ನು, ಸಂಸ್ಥೆಯನ್ನು ವಿದೇಶಿ ನೆಲದಲ್ಲಿ ‌ʼಅವಹೇಳನವಾಗಿ ಪರಿವರ್ತನೆʼಯಾಗುವ ಹಾಗೆ ಮಾತನಾಡುತ್ತಾರೆ. ಹಾಗಾಗಿಯೇ ಬಹಶಃ ರಾಹುಲ್‌ ಆಗಾಗ್ಗೆ ವಿವಾದಕ್ಕೆ ಒಳಗಾಗುತ್ತಾರೆ. ಭಾರತೀಯ ರಾಜಕೀಯ ಪರಿಸ್ಥಿತಿ, ಆರ್ಥಿಕತೆ, ಧರ್ಮ ರಾಜಕಾರಣ, ಮತ್ತು ಜಾಗತಿಕ ಆರ್ಥಿಕತೆ, ನಿರುದ್ಯೋಗ, ಮೀಸಲಾತಿಗಳ ಬಗ್ಗೆ ಧ್ವನಿ ಎತ್ತಿದ ರಾಹುಲ್‌ ಅವರ ಉದ್ದೇಶ ಪ್ರಜಾಪ್ರಭುತ್ವದ ಆಶಯಗಳಿಗೆ ಬೆಲೆ ಕೊಡಬೇಕೆನ್ನುವುದೇ ಆಗಿದ್ದರೂ, ಅವನ್ನು ಸರಿಯಾಗಿ ತಲುಪಿಸುವಲ್ಲಿ ಮತ್ತೆ ಸೋತರು ಎನ್ನುವುದೇ ಇಲ್ಲಿನ ವಿಷಯ.

ರಾಹುಲ್‌ ಮಾತಾಡಿರುವುದು ʼಭಾರತದ ಜನರ ಧ್ವನಿʼಯೇ ಆಗಿರಬಹುದು, ಆದರೆ ಇಂತಹ ಸಂದರ್ಭಗಳಲ್ಲಿ ಟೀಕಾಸ್ತ್ರ ಬಳಸಲು ಬಿಜೆಪಿ ಸಕ್ರಿಯವಾಗುತ್ತದೆ. ರಾಹುಲ್ ಗಾಂಧಿ ಇಂತಹ ಸೂಕ್ಷ್ಮ ವಿವೇಚನೆಗಳನ್ನು ವೃದ್ಧಿಸಿಕೊಳ್ಳುವ ಅಗತ್ಯವಿದೆ. ಸಮಯೋಚಿತವಾಗಿ ನಡೆದುಕೊಳ್ಳಬೇಕು. ಸರ್ಕಾರ ನ್ಯಾಯಯುತವಾಗಿ ಸಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪಾಲಿಸುವುದರ ಬರದಲ್ಲಿ ಎಡವದಂತೆ ಎಚ್ಚರಿಕೆಯಿಂದ ವರ್ತಿಸಬೇಕು. ಸಂಘರ್ಷಾತ್ಮಕವಾಗಿಯೇ ರಾಜಕೀಯ ಸಾಗಬೇಕು ಎನ್ನುವ ಯಾವ ನಿಯಮವಿಲ್ಲದ ಕಾರಣ ಈ ಸೂಕ್ಷ್ಮ ವಿಚಾರಗಳ ಬಗ್ಗೆ ಸ್ಪಂದಿಸುವಾಗ ಸರಿ ದಿಕ್ಕಿನಲ್ಲಿ ಚರ್ಚೆಗೆ ಆಸ್ಪದವಾಗುವಂತೆ ನೋಡಿಕೊಳ್ಳಬೇಕೆ ಹೊರತು ಅದು ವಿವಾದವಾಗುವಂತಾಗಬಾರದು.

ಇನ್ನು, ತಮ್ಮ ಭಾರತ ವಿರೋಧಿ ನಿಲುವಿನಿಂದಲೇ ಕುಖ್ಯಾತರಾಗಿರುವ ಅಮೆರಿಕ ಸಂಸದೆ ಇಲ್ಹಾನ್ ಒಮರ್ ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದರು. ಇದು ಕೂಡ ಭಾರೀ ಚರ್ಚೆಗೆ ಗ್ರಾಸವಾಯ್ತು. ಪ್ರಧಾನ ಮಂತ್ರಿ ಮೋದಿ ಅವರ ವಿರುದ್ಧ ಟೀಕಾಪ್ರಕಾರ ನಡೆಸುವ ಸಂಸದೆ ಜೊತೆ ರಾಹುಲ್ ಗಾಂಧಿ ಇರುವ ಫೋಟೋ ಕುರಿತಾಗಿ ಪರ ವಿರೋಧ ಚರ್ಚೆಗಳು ಎದ್ದವು. ಅಮೆರಿಕಾದ ಸಂಸದರಾದ ಬ್ರಾಡ್ಲಿ ಜೇಮ್ಸ್ ಶೆರ್ಮನ್, ಜೊನಾಥನ್ ಜಾಕ್ಸನ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಬಾರ್ಬರಾ ಲೀ, ತಾನೆದಾರ್, ಜೆಸಸ್ ಜಿ ಚುಯ್ ಗಾರ್ಸಿಯಾ, ಹ್ಯಾಂಕ್ ಜಾನ್ಸನ್ ಹಾಗೂ ಜಾನ್ ಶಾಕೋವ್ಸ್ಕಿ ಅವರನ್ನು ರಾಹುಲ್ ಭೇಟಿ ಮಾಡಿದ್ದರು. ಇವರ ಜೊತೆಗೆ ಇಲ್ಹಾನ್ ಒಮರ್ ಅವರೂ ಇದ್ದರು. ಈ ಗ್ರೂಪ್‌ ಫೋಟೋವನ್ನು ಕಾಂಗ್ರೆಸ್ ಪಕ್ಷ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು.

ಇಲ್ಹಾನ್ ಒಮರ್ ಭಾರತ - ಕೆನಡಾ ದೇಶಗಳ ನಡುವೆ ರಾಜತಾಂತ್ರಿಕ ಸಮರ ಏರ್ಪಟ್ಟ ಸಂದರ್ಭದಲ್ಲೂ ಇಲ್ಹಾನ್ ಒಮರ್ ಭಾರತ ವಿರೋಧಿ ಹೇಳಿಕೆ ನೀಡಿದ್ದರು. ಖಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ವಿರುದ್ಧ ತನಿಖೆ ನಡೆಸಲು ಅಮೆರಿಕ ಕೆನಡಾ ದೇಶಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದಳು. ಹೀಗೆಲ್ಲಾ ವಿವಾದಗಳಿರುವ ವ್ಯಕ್ತಿಗಳನ್ನು ಭೇಟಿ ಮಾಡುವುದು ಕೂಡ ರಾಹುಲ್‌ ವೈಯಕ್ತಿಕ ಹಾಗೂ ರಾಜಕೀಯ ವರ್ಚಸ್ಸಿಗೆ ಧಕ್ಕೆಯೇ ಸರಿ. ಇಂತಹ ಸಂದರ್ಭಗಳು ಎದುರಾದಾಗ ನಿರಾಕರಿಸುವುದೇ ಒಳ್ಳೆಯದು. ಇಂತಹ ವಿವೇಚನೆ ಇಲ್ಲದಿದ್ದರೇ, ರಾಜಕೀಯದಲ್ಲಿ ಭವಿಷ್ಯ ಕಷ್ಟ.

ನಡೆ, ನುಡಿ ನಿಮ್ಮನ್ನು ಸೆರೆಮನೆಗೆ ಕಳುಹಿಸಬಹುದು. ಮಾತೇ ನಿಮ್ಮ ಅಂತ್ಯಕ್ಕೆ ಕಾರಣವಾಗಬಹುದು. ಒಳ್ಳೆಯ, ಸರಿಯಾದ ಮಾತುಗಳಿಗೆ ದಾರಿದ್ರ್ಯ ಯಾಕೆ ? ರಾಹುಲ್‌ ನಿಮ್ಮ ಮೇಲೆ ಹೊಣೆಗಾರಿಕೆ ಹೆಚ್ಚಿದೆ. 

-ಶ್ರೀರಾಜ್‌ ವಕ್ವಾಡಿ

 

Thursday, September 12, 2024

ನಿರುದ್ಯೋಗ ಹೆಚ್ಚಳ : ಮೌನಂ ಪ್ರಧಾನಿ ಮೋದಿ ಲಕ್ಷಣಂ

ದೇಶದ ಮುಂದಿದೆ ಉದ್ಯೋಗ ಸೃಷ್ಟಿಯ ಜರೂರು !

ನಮ್ಮ ದೇಶ ಕಳೆದ ಕೆಲವು ವರ್ಷಗಳಿಂದ ಗಂಭೀರ ಸವಾಲಾಗಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಮುಂಪಂಕ್ತಿಯ ಸಾಲಿನಲ್ಲಿದೆ. ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ʼನಿರುದ್ಯೋಗʼವನ್ನೇ ರಾಜಕೀಯ ದಾಳವಾಗಿಟ್ಟುಕೊಂಡು ಚುನಾವಣೆಗಳಲ್ಲಿ ಪ್ರಚಾರ ಪಡೆದುಕೊಂಡ ಮೋದಿ, ದೇಶದಲ್ಲಿ ವರ್ಷಕ್ಕೆ ಬರೋಬ್ಬರಿ 2 ಕೋಟಿ ಉದ್ಯೋಗಳನ್ನು ಸೃಷ್ಠಿ ಮಾಡುವುದಾಗಿ ಭರವಸೆ ನೀಡಿ ದೇಶದ ಜನರನ್ನು ಭ್ರಮಾಲೋಕದಲ್ಲಿ ತೇಲಿಸಿ ಮೂರು ಭಾರಿ ಪ್ರಧಾನಿಯಾಗಿ ಮೆರೆದರು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾಯಿತು. ಉದ್ಯೋಗ ಕೇಳಿದ ಯುವಕರಿಗೆ ಇದೇ ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡ ಮಾರಿ ಎಂದಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಈಗ ಕಳೆದ 45-50 ವರ್ಷಗಳಲ್ಲಿಯೇ ಅಧಿಕ ನಿರುದ್ಯೋಗ ಸಮಸ್ಯೆ ಈ ದೇಶ ಅನುಭವಿಸುತ್ತಿದೆ ಎಂದರೇ ನೀವು ಅಚ್ಚರಿ ಪಡಬೇಕಿಲ್ಲ. ನಿರುದ್ಯೋಗ ಸಮಸ್ಯೆ ಭಾರತದಲ್ಲಿ ಗಂಭೀರವಾಗಿದೆ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗಿನ ನಿರುದ್ಯೋಗ ಪ್ರಮಾಣದ ದರವನ್ನು ಗಮನಿಸುವುದಾದರೇ, 2012ರಲ್ಲಿ(ಮೋದಿ ಮೊದಲ ಬಾರಿಗೆ ಅಧಿಕಾರ ಸ್ವೀಕಾರ ಮಾಡುವುದಕ್ಕೂ ಮೊದಲು) ಶೇ. 2.1 ರಷ್ಟಇತ್ತು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ವರದಿಯ ಪ್ರಕಾರ ಜೂನ್ 2024ರ ಹೊತ್ತಿಗೆ, ಭಾರತದ ನಿರುದ್ಯೋಗ ದರ ಶೇ. 9.2 ರಷ್ಟಕ್ಕೆ ತಲುಪಿದೆ. ಈ ಮಟ್ಟಿಗೆ ಏರಿಕೆಯಾಗಿರುವ ನಿರುದ್ಯೋಗ ಪ್ರಮಾಣ 2023ರಲ್ಲಿ ಶೇ. 8.03, 2021ರಲ್ಲಿ ಶೇ. 5.98, 2020ರಲ್ಲಿ ಶೇ. 8.0, 2019ರಲ್ಲಿ ಶೇ. 5.27, 2018ರಲ್ಲಿ ಶೇ. 5.33, 2017ರಲ್ಲಿ ಶೇ. 5.36, 2016ರಲ್ಲಿ ಶೇ. 5.42, 2015ರಲ್ಲಿ ಶೇ. 5.44, 2014ರಲ್ಲಿ ಶೇ. 5.44 ರಷ್ಟಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಗಮನಾರ್ಹವಾಗಿ, 2018ಬಳಿಕ ದೇಶದಲ್ಲಿ ನಿರುದ್ಯೋಗದ ಸಮಸ್ಯೆ  ಕಳೆದ 45-50 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು. ಬಹುಶಃ ನಿರುದ್ಯೋಗ ಸಮಸ್ಯೆಯ ಬಗ್ಗೆ ಗಮನ ನೀಡಬೇಕಾದ ಸರ್ಕಾರ ಏನೂ ಆಗಿಲ್ಲ ಎಂಬಂತೆ ಕೈಕಟ್ಟಿ ಕೂತಿತ್ತು. ಇನ್ನು, ಸಮಸ್ಯೆಗಳ ಬಗ್ಗೆಯೆಲ್ಲಾ ಮೋದಿಯವರಿಗಂತೂ ದಿವ್ಯ ಮೌನ ತಾಳುವುದೇ ಅಭ್ಯಾಸವಾಗಿಬಿಟ್ಟಿದೆ.

ಬಹುಶಃ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೇಶಲ್ಲಿಯೂ, ವಿದೇಶದಲ್ಲಿಯೂ ದೇಶದ ಇಂತಹ ಸಮಸ್ಯೆಗಳ ಬಗ್ಗೆಯಷ್ಟೇ ಮಾತನಾಡಿದ್ದಾರೆ ಹೊರತು, ದೇಶಕ್ಕೆ ಅಪಕೀರ್ತಿ ಬರುವಂತೆ ಮಾತನಾಡಿಲ್ಲ ಎನ್ನುವ ನೆಲೆಯಲ್ಲಿ ಇಲ್ಲಿ ಯಾರೂ ಯೋಚಿಸುವವರಿಲ್ಲ ಅಥವಾ ಚಿಂತಿಸುವವರಿಲ್ಲ. ಅಮೇರಿಕಾದಲ್ಲಿ ಇತ್ತೀಚೆಗೆ ರಾಗಾ ಒಂದು ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ, ಭಾರತ ದೇಶ ಉತ್ಪಾದನೆಯನ್ನು ವೃದ್ಧಿಸುವ ನೆಲೆಯಲ್ಲಿ ಯೋಚಿಸಬೇಕು. ಇಲ್ಲದಿದ್ದರೆ ಉತ್ಪಾದನೆ ಕೇತ್ರ ಚೀನಾ, ಬಾಂಗ್ಲಾ ದೇಶದವರ ಸಂರಕ್ಷಣೆಯ ಕ್ಷೇತ್ರವೆನ್ನಿಸಿಕೊಳ್ಳಲಿದೆ. ಉತ್ಪಾದನೆಯಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ ಎನ್ನುವುದನ್ನೇ ಇಲ್ಲಿನ ಬಹುತೇಕ ಮಾಧ್ಯಮಗಳು ದೇಶದ ಬಗ್ಗೆ ರಾಹುಲ್‌ ಗಾಂಧಿ ಟೀಕೆ ಮಾಡಿದರು ಎಂಬುವುದಾಗಿ ಬಿಂಬಿಸಿದವು. ರಾಹುಲ್‌ ಇಲ್ಲಿನ ಸಮಸ್ಯೆಗಳನ್ನು ಧ್ವನಿಸಿದರು ಎನ್ನುವುದಾಗಿ ಬಿಂಬಿಸಿದ ಯಾವ ಮಾಧ್ಯಮಗಳೂ ಇಲ್ಲ.

ಉತ್ಪಾದನೆಯನ್ನು ಉತ್ತೇಜಿಸುವ ಅಗತ್ಯವನ್ನು ರಾಹುಲ್ ಒತ್ತಿ ಹೇಳಿದರು. ಉತ್ಪಾದನಾ ಕ್ಷೇತ್ರವನ್ನು ಉತ್ತೇಜಿಸುವವರೆಗೆ, ನಿರುದ್ಯೋಗ ಸಮಸ್ಯೆ ಇರುತ್ತದೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ ಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ರಾಜಕೀಯದ ಧ್ರುವೀಕರಣಕ್ಕೆ ಕಾರಣವಾಗಿದೆ ಎಂದು ಹೇಳಿರುವುದು ದೇಶದ ಬಗ್ಗೆ ಇರುವ ಕಾಳಜಿ ಎಂದು ಯಾಕೆ ತಿಳಿದುಕೊಳ್ಳಬಾರದು ? ನಿಜಕ್ಕೂ ಈ ದೇಶದ ಬಗ್ಗೆ ಅಪಾರವಾದ ಪ್ರೀತಿ ಇದ್ದವನಲ್ಲಿ ರಾಹುಲ್‌ ಅಮೇರಿಕಾದಲ್ಲಿ ಹೇಳಿರುವ ವಿಷಯಗಳು ಈ ದೇಶದ ಬಗೆಗಿನ ಕಾಳಜಿ ಎಂದೇ ಬಹುಶಃ ಕಾಣಿಸುತ್ತದೆ ಎಂದನ್ನಿಸುತ್ತದೆ. ಇನ್ನು, ರಾಹುಲ್‌ ಗಾಂಧಿ ಭಾರತದಲ್ಲಿಯೂ ಅಮೇರಿಕಾದಲ್ಲಿ ಪ್ರಸ್ತಾಪಿಸಿದ ವಿಚಾರಗಳನ್ನೇ ಅನೇಕ ಬಾರಿ ಧ್ವನಿಸಿದ್ದರು ಎನ್ನುವುದು ಉಲ್ಲೇಖಾರ್ಹ.

ರಾಜಕೀಯದಲ್ಲಿ ಪರ ವಿರೋಧ ಇರುವುದು ಸಹಜ. ಆದರೇ, ರಾಹುಲ್‌ ಹೇಳಿದ್ದನ್ನೆಲ್ಲಾ ತಪ್ಪು ಎಂದು ಹೇಳುವ ವರ್ಗ ರಾಜಕೀಯ ವಲಯದಲ್ಲಿದೆ. ಅಥವಾ ರಾಹುಲ್‌ ಹೇಳಿದ್ದನ್ನೆಲ್ಲಾ ಸರಿ ಎನ್ನುವ ವರ್ಗವೂ ಇದೆ. ರಾಜಕೀಯ ಅಂದ ಮೇಲೆ ಇದು ಸಹಜ. ಈ ಧೋರಣೆಯೇ ಇಲ್ಲಿನ ಸಮಸ್ಯೆಗಳು ಗೌಣವಾಗಿ ಉಳಿಯುವುದಕ್ಕೆ ಮೂಲ ಕಾರಣವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.  

ನಿರುದ್ಯೋಗ ದೇಶದ ಆರ್ಥಿಕತೆಯ ಆರೋಗ್ಯವನ್ನು ಹದಗೆಡಿಸುತ್ತದೆ. ಸುಸ್ಥಿರತೆಯನ್ನು ಕಾಯ್ದುಕೊಂಡು ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವಂತೆ ಸರ್ಕಾರ ಮಾಡಿದಾಗಲೇ, ಅಲ್ಲೊಂದಿಷ್ಟು ಉದ್ಯೋಗ ಸೃಷ್ಟಿಯಾಗುವುದಕ್ಕೆ ಸಾಧ್ಯವಿದೆ. ಇದನ್ನೇ ರಾಹುಲ್‌ ಸ್ವಲ್ಪ ಕಟುವಾಗಿ ಹೇಳಿರಬಹುದು ಅಷ್ಟೆ. ರಾಹುಲ್‌ ಹೇಳಿರುವ ವಿಷಯದ ಬಗ್ಗೆ ಚರ್ಚಿಸುವುದನ್ನು ಬಿಟ್ಟು ರಾಹುಲ್ ಅವರು ಎಲ್ಲಿ ಹೇಳಿದ್ದಾರೆ ಎನ್ನುವುದೇ ದೊಡ್ಡ ಚರ್ಚೆಯ ವಿಷಯವಾಗಿರುವುದು ವಿರೋಧಿಸಿದ ವರ್ಗದ ಬೌದ್ಧಿಕ ಬಡಸ್ಥಿಕೆ ಎಂದು ತಿಳಿಯಬೇಕೆನೋ ಗೊತ್ತಿಲ್ಲ.

ದೇಶ ಇಂದು ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ಸಂಪನ್ಮೂಲಗಳನ್ನು, ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಇರುವುದು ಕೂಡ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವುದಕ್ಕೆ ಕಾರಣ. ದೇಶದಲ್ಲಿ ಯುವ ಸಮುದಾಯವನ್ನು ಅತೀವ ಸಂಕಷ್ಟಕ್ಕೆ ತಳ್ಳಿರುವ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದನ್ನು ದೇಶ ಒಪ್ಪಿಕೊಳ್ಳಲೇ ಬೇಕಿದೆ. ಕಳೆದೊಂದೆರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರ ಜನ್ಮದಿನದಂದು ಮೈಕ್ರೋ ಬ್ಲಾಗಿಂಗ್‌ ಜಾಲತಾಣ ಟ್ವೀಟರ್‌(ಈಗ ಎಕ್ಸ್‌)ನಲ್ಲಿ ʼರಾಷ್ಟ್ರೀಯ ನಿರುದ್ಯೋಗ ದಿನʼ ಎಂದು ಟ್ರೆಂಡ್‌ ಆಗಿರುವುದು ಈ ದೇಶದ ವಾಸ್ತವ ಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ.

ಔದ್ಯೋಗಿಕ ಕೌಶಲ್ಯಗಳ ಕೊರತೆ ಅಥವಾ ದುಡಿಯುವ ಜನಸಂಖ್ಯೆಯ ಕಡಿಮೆ ಶೈಕ್ಷಣಿಕ ಗುಣಮಟ್ಟ, ವಿಶೇಷವಾಗಿ ನೋಟು ಅಮಾನ್ಯೀಕರಣದ ಬಳಿಕ ಖಾಸಗಿ ಹೂಡಿಕೆಯಲ್ಲಿನ ಮಂದಗತಿಯ ಬೆಳವಣಿಗೆ, ಕಾನೂನು ಸಂಕೀರ್ಣತೆಗಳು, ರಾಜ್ಯಗಳ ಅಸಮರ್ಪಕ ಬೆಂಬಲ, ಕಡಿಮೆ ಮೂಲ ಸೌಕರ್ಯ, ಸಣ್ಣ ಉದ್ಯಮ ಕ್ಷೇತ್ರಗಳಿಗೆ ಅಥವಾ ವ್ಯವಹಾರಗಳಿಗೆ ಹಣಕಾಸು ಹಾಗೂ ಮಾರುಕಟ್ಟೆ ಸಂಪರ್ಕಗಳಿಗೆ ಬೇಕಾಗಿ ಪೂರಕ ವಾತಾವರಣ ಇಲ್ಲದೇ ಇರುವುದು ಮತ್ತು ಶಿಕ್ಷಣ ಹಾಗೂ ಕೌಶಲ್ಯಗಳ ಕೊರತೆಯಿಂದಾಗಿ ದೇಶದ ಬೃಹತ್‌ ಸಂಖ್ಯೆಯ ಉದ್ಯೋಗಿಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿವೆ. ಇವೆಲ್ಲಾ ಅಡಚಣೆಗಳನ್ನು ನೀಗಿಸಬೇಕಿರುವ ಸರ್ಕಾರ ಮೌನವಹಿಸಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ ಒಂದೆಡೆಯಾದರೇ, ಇನ್ನೊಂದೆಡೆಯಲ್ಲಿ ಇಡೀ ದೇಶಕ್ಕೆ ದೇಶವೇ ಸಂಕಷ್ಟ ಪಡುತ್ತಿರುವ ನಿರುದ್ಯೋಗದ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದನ್ನೇ ತಪ್ಪು ಎಂದು ಬಿಂಬಿಸುವ ವಾತಾವರಣ ಸೃಷ್ಟಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯೇ ಸರಿ.

ಒಟ್ಟಿನಲ್ಲಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉದ್ಯೋಗ ಖಾತರಿ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಉತ್ಪಾದನಾ ಕಾರ್ಯಕ್ರಮ, ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ದೀನ್‌ ದಯಾಳ್‌ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳು, ಪ್ರಧಾನ ಮಂತ್ರಿ ಕೌಶಲ್‌ ವಿಕಾಸ್‌ ಯೋಜನೆ, ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆ, ಸ್ಟಾರ್ಟ್‌ ಅಪ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಯೋಜನೆಗಳು ಸೇರಿ ಇನ್ನೂ ಹಲವು ಈ ಸಂಬಂಧಿ ಯೋಜನೆಗಳು ಇದ್ದೂ ಇಲ್ಲದೇ ಇರುವಂತಾಗಿರುವ ಸ್ಥಿತಿಗೆ ತಂದಿರಿಸಿದ ಸರ್ಕಾರದ ಅಸಮರ್ಥತೆ ಈ ದೇಶದ ನಿರುದ್ಯೋಗ ಸಮಸ್ಯೆ ಏರಿಕೆಯಾಗುವುದಕ್ಕೆ ಮೂಲ ಕಾರಣವಾಗಿದೆ. ಇವೆಲ್ಲದಕ್ಕೂ ಉತ್ತರವನ್ನು ಅಧಿಕಾರದಲ್ಲಿರುವ ಸರ್ಕಾರದಿಂದ ನಿರೀಕ್ಷಿಸದೇ ಮತ್ತ್ಯಾರಿಂದ ನಿರೀಕ್ಷಿಸಬೇಕು? ಈ ಸಮಸ್ಯೆಯಿಂದ ಹೊರಬರಲು ಸರ್ಕಾರ ಉದ್ಯೋಗ ಸೃಷ್ಟಿ ಆಧಾರಿತ ಪ್ರಗತಿಯ ಬಗ್ಗೆ ಕಾರ್ಯೋನ್ಮುಖವಾಗಲೇ ಬೇಕಿದೆ. ಈಗ ಎಚ್ಚರಗೊಳ್ಳದೇ ಇದ್ದರೇ, ಮುಂದೆ ಬಹಳ ಕಷ್ಟವಿದೆ.  

-ಶ್ರೀರಾಜ್‌ ವಕ್ವಾಡಿ


Wednesday, September 4, 2024

ಮನಸ್ಸಿನ ನಿಷ್ಕಲ್ಮಶ ಭಾವದ ಭಾಷೆಯೇ ಸ್ವರ್ಗದ ಭಾಷೆ


ಸಂಘರ್ಷವನ್ನು ಚಾಲ್ತಿಯಲ್ಲಿಡುವ ಪ್ರಯತ್ನದ ನಡುವೆ ಸಿಲುಕಿದ ಸಮಾಜ !

ಬಹುಶಃ ಯಾವ ಭಾಷೆಯೂ ಭವಿಷ್ಯಕ್ಕೂ, ಸ್ವರ್ಗಕ್ಕೂ ತೊಡಕಾಗುವುದಿಲ್ಲ. ಭಾಷೆಯ ಕಾರಣದಿಂದಲೇ ಭವಿಷ್ಯ ಹಾಳಾದ ಉದಾಹರಣೆ ಎಲ್ಲಿಯೂ ಇಲ್ಲ. ಭಾಷೆ ಒಂದು ಸಂಕೀರ್ಣ ಸಂವಹನ ಮಾಧ್ಯಮ. ತಲುಪಿಸುವ ರೀತಿ ಸರಿಯಾಗಿದ್ದರೇ ಎಲ್ಲಿಯೂ ಭಾಷೆಯ ಕಾರಣದಿಂದ ತೊಡಕಾಗುವುದಿಲ್ಲ. ತಲುಪಿಸುವ ರೀತಿ ಸರಿಯಾಗಿರಬೇಕು ಎನ್ನುವುದು ಸುಮ್ಮನೆ ಅಲ್ಲ. ಬಹುಶಃ ಒಂದೇ ಸಿದ್ಧ ಮಾದರಿಯಲ್ಲಿ ಯಾವುದೇ ಒಂದು ಭಾಷೆ ಸುದೀರ್ಘ ಕಾಲದವರೆಗೆ ಬಳಕೆಯಾದ ಉದಾಹರಣೆ ಇಲ್ಲವೇನೋ.   

ಭಾರತದಲ್ಲಿರುವ ಎಲ್ಲಾ ಪ್ರಮುಖ ಭಾಷೆಗಳು, ಪ್ರಾದೇಶಿಕ ಭಾಷೆಗಳು ಅತ್ಯುತ್ತಮ ಮನಸ್ಸು, ಪ್ರತಿಭೆ, ಬೆಲೆಕಟ್ಟಲಾಗದ ಚಿಂತನೆ, ಚಿಂತನಶೀಲತೆ, ವಿವೇಚನೆ, ಸೃಜನಶೀಲತೆ, ವೈಚಾರಿಕ ಬುದ್ಧಿವಂತಿಕೆಯನ್ನು ಅಪಾರವಾಗಿ ಧಾರೆ ಎರೆದಿವೆ. ಎಲ್ಲಾ ಭಾಷೆಗಳಿಂದಲೂ  ವ್ಯಾವಹಾರಿಕವಾಗಲಿ, ವೈಯಕ್ತಿಕವಾಗಲಿ ಸಂವಹನದ ಪ್ರವಾಹ ನಿತ್ಯ ನಿರಂತರ ಹರಿಯುತ್ತಲೇ ಇದೆ.

ಎರಡು ವಾದಗಳು ಮುಖಾಮುಖಿಯಾದಾಗ ಅಥವಾ ಈ ಮುಖಾಮುಖಿಯ ಸಂಘರ್ಷದಿಂದ ಹುಟ್ಟುವ ಸಮಸ್ಯೆಗಳನ್ನು ನಾವು ಭಾಷೆಯ ಮೂಲಕವೇ ಗ್ರಹಿಸುವುದು ಅನಿವಾರ್ಯವಾದರೂ, ಇಲ್ಲಿ ನಾವು ಗುರುತಿಸುತ್ತಿರುವ ಸಮಸ್ಯೆಗಳು ಭಾಷೆಯಲ್ಲಿಲ್ಲ, ಬದಲಾಗಿ, ಸಾಂಸ್ಕೃತಿಕ ಭಿನ್ನತೆ ಹಾಗೂ ವಾದಗಳ ಭಿನ್ನತೆಯ ಮೂಲಕ ಜನಿಸುವ ತೊಡಕುಗಳಲ್ಲಿವೆ. ಇದರ ಒಳಿತು ಕೆಡುಕುಗಳ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳು ಎದ್ದು ಪ್ರಯೋಜನಕ್ಕೆ ಬಾರದೆ ಸೋತಿವೆ. ಇಂತಹ ಚರ್ಚೆಗಳಲ್ಲಿ ಬಹುತೇಕ ಎಲ್ಲಾ ಸಂದರ್ಭಗಳಲ್ಲಿಯೂ ಸಾಮಾನ್ಯವಾಗಿ ಭಿನ್ನ ಮನಸ್ಥಿತಿಗಳಿವೆ, ಭಿನ್ನ ಆಚರಣೆಗಳಿವೆ, ಭಿನ್ನ ಸಂಸ್ಕೃತಿಗಳಿವೆ, ಈ ಭಿನ್ನತೆಗಳೇ ಅನೇಕ ತೊಡಕುಗಳನ್ನು ಸೃಷ್ಟಿ ಮಾಡುತ್ತಿವೆ ಎನ್ನುವ ವಿಚಾರಗಳೇ ಮುಂದೆ ಬಂದಿವೆ. ಹಾಗಾದರೇ ಯಾವ ವಾದ, ಯಾವ ವಾದದ ಮೇಲೆ ತನ್ನ ನಿಲುವನ್ನು ಹೇರುತ್ತಿದೆ ? ಎನ್ನುವ ಪ್ರಶ್ನೆ ಸಹಜವಾಗಿ ಮುನ್ನೆಲೆಗೆ ಬಂದು ಕಾಡುತ್ತದೆ. ಇದು ಈ ʼಭಾಷೆʼಯ ವಿಷಯದಲ್ಲಿ ಬಹಳಷ್ಟು ಕಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.  ಮತ್ತು ಈ ಭಿನ್ನತೆಗಳು ಈ ಎರಡು ವಾದಗಳ ನಡುವೆ ನಡೆಯಬೇಕಾದ ವಿಚಾರ, ವಿಷಯ ವಿನಿಮಯಕ್ಕೆ ಅಡೆತಡೆಯಾಗುತ್ತದೆ ಎನ್ನುವುದೇ ಚರ್ಚೆಯ ಮೂಲ ಬಿಂದು.

ಸಂಸ್ಕೃತ ಭಾಷೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಎಂಬ ಕೀರ್ತಿಯೂ ಸಂಸ್ಕೃತ ಭಾಷೆಗಿದೆ. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವುಗಳೇ ಆಗಿವೆ ಎನ್ನುವ ನಂಬಿಕೆಯೂ ಇದೆ. ಹೀಗೆ ಪ್ರತಿ ಭಾಷೆಯೂ ಒಂದಲ್ಲಾ ಒಂದು ಭಾಷೆಯಿಂದ ಅನೇಕ ಪದಗಳನ್ನು ಎರವಲು ಪಡೆದುಕೊಂಡೆ ಪರಿಪೂರ್ಣತೆಯನ್ನು ಕಂಡುಕೊಂಡಿದೆ. ಸದ್ಯ ಈ ಸಂಸ್ಕೃತ ಭಾಷೆಯ ಶ್ರೇಷ್ಠತೆಯ ವಾದ ಮತ್ತು ಪ್ರತಿವಾದ ಮೇಲೆದ್ದಿದೆ. ಉಡುಪಿಯ ಪರ್ಯಾಯ ಶ್ರೀ ಸುಗುಣೇಂದ್ರ ಸ್ವಾಮೀಜಿ ಅವರು ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ 'ಸಂಸ್ಕೃತ ಭಾಷೆ ಗೊತ್ತಿಲ್ಲದೇ ಇರುವವರು ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ’ ಎಂದು ಹೇಳಿಬಿಟ್ಟರು. ಸುಗುಣೇಂದ್ರ ತೀರ್ಥರ ಬೇರೆ ವಿವಾದವನ್ನು ಬಿಟ್ಟು ಮಾತಾಡುವುದಾದರೇ, ಈ ವಿಷಯದಲ್ಲಿ ಬಹುಶಃ ಸ್ವಾಮಿಜಿ ಅವರಿಗೆ ಇನ್ನೊಂದು ಭಾಷೆಯನ್ನು ದೂಷಿಸುವ ಯಾವ ಉದ್ದೇಶವೂ ಇದ್ದಿರಲಿಕ್ಕಿಲ್ಲ‌. ಅವರು ಮಾತನಾಡಿರುವ ವೀಡಿಯೋ ಅನ್ನು ಗಮನಿಸಿಸರೇ, ಅವರು ಸಂಸ್ಕೃತ ಭಾಷೆಯ ಮಹತ್ವವನ್ನು ಹೇಳುತ್ತಿದ್ದರು, ಸಂಸ್ಕೃತ ಭಾಷೆಯಲ್ಲಿನ ವಿದ್ವತ್ತು ಅಪರಾವಾದದ್ದು, ಅದನ್ನು ಕಲಿಯಬೇಕು ಎಂಬ ಅರ್ಥದಲ್ಲಿಯೇ ಮಾತಾಡಿದ್ದು ಅಂತ ತೀರಾ ಸಾಮಾನ್ಯನಿಗೂ ತಿಳಿಯುತ್ತದೆ. ಆದರೇ, ಇಲ್ಲಿ ಚರ್ಚೆಗೆ ಗ್ರಾಸವಾದ ಶಬ್ದ 'ಸ್ವರ್ಗ'.

ಯಾರೋ ಒಬ್ಬ ಸಾಮಾನ್ಯ ಈ ಮಾತನ್ನು ಹೇಳಿದ್ದರೇ ಇಷ್ಟೊಂದು ವಿವಾದಕ್ಕೆ ಈ ವಿಷಯ ಗ್ರಾಸವಾಗುತ್ತಿರಲಿಲ್ಲವೇನೋ. ಆದರೇ ಸ್ವಾಮೀಜಿ ಆದವರೊಬ್ಬರು ಹೇಳಿರುವ ಕಾರಣಕ್ಕೆ ವಿವಾದ ಸೃಷ್ಟಿಯಾಗಿದೆ. ಒಬ್ಬ ಸಾಮಾಜಿಕವಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಬದುಕುತ್ತಿರುವವ ಇಂತೆಲ್ಲಾ ಸೂಕ್ಷ್ಮ ವಿಚಾರಗಳಲ್ಲಿ ಬಹಳ ಜಾಗೃತೆಯಿಂದಿರಬೇಕು ಎನ್ನುವುದು ಸುಮ್ಮನೆ ಅಲ್ಲ ಎನ್ನುವುದು ಈಗ ಮತ್ತೆ ಹೌದಂತನ್ನಿಸಿಕೊಂಡಿದೆ.

ಜಗತ್ತಿನ ಎಲ್ಲಾ ಭಾಷೆಗಳೂ ಕೂಡ ಅದರದ್ದೇ ಆದ ವಿದ್ವತ್ತನ್ನು ಹೊಂದಿದೆ. ಸಂಸ್ಕೃತವೂ ಅದರಿಂದ ಹೊರತಾಗಿಲ್ಲ. ಕಲಿಯುವುದಕ್ಕೆ ಸಾಧ್ಯವಾದರೇ ಎಲ್ಲವನ್ನೂ ಕಲಿಯಬಹುದು. ಎಲ್ಲವೂ ʼಸ್ವರ್ಗದ ಭಾಷೆʼಯೇ ಆಗಿದೆ. ಜಿಜ್ಞಾಸೆಯಿಂದ ಆತ್ಮೀಯರೊಬ್ಬರು ನನ್ನಲ್ಲಿ ಈ ಬಗ್ಗೆ ಚರ್ಚಿಸುತ್ತಿರುವಾಗ 'ದೇವರು ಎಲ್ಲವನ್ನೂ ಬಲ್ಲವ, ದೇವರಿಗೆ ಸಂಸ್ಕೃತ ಬಿಟ್ಟು ಬೇರೆ ಭಾಷೆಗಳ ಜ್ಞಾನವಿಲ್ಲವೇ ಹಾಗಾದರೇ ?' ಅಂತ ಕೇಳಿದರು. ದೇವರ ಭಾಷೆ 'ಮನಸ್ಸಿನ ಭಾಷೆ', ಕನ್ನಡ, ತುಳು ಅಥವಾ ಉಳಿದ ಯಾವ ಭಾಷೆಗಳಲ್ಲಿಯೂ ದೇವರೊಂದಿಗೆ ಸಂವಹನ ಮಾಡಬಹುದು, ನಿಮ್ಮ ಮನಸ್ಸಿನ ನಿಷ್ಕಲ್ಮಶ ಭಾವದ ಭಾಷೆಯೇ ಸ್ವರ್ಗದ ಭಾಷೆ. ಸರಿಯಾದ ಮಾರ್ಗದಲ್ಲಿದ್ದರೇ ಎಲ್ಲವೂ ಸೇರುವುದು ಸ್ವರ್ಗಕ್ಕೆ ಅಂತಂದೆ.‌ ʼಸ್ವರ್ಗ ಎಲ್ಲಿದೆ ಮಾರಾಯರೇ ಅಂತ ಮರು ಪ್ರಶ್ನಿಸಿದರು. ಭಾಷೆ, ಧರ್ಮ, ಜಾತಿ, ಮೇಲು ಕೀಳು ಹಾಗೂ ಅನಗತ್ಯ ಇತರೆ ಕಾರಣಗಳಿಗೆ ದ್ವೇಷ ಮಾಡದೇ ಪ್ರೀತಿಯ ಸಂವಹನ ಮಾರ್ಗದಲ್ಲಿ ಬದುಕಿದರೇ ಅದುವೇ ಸ್ವರ್ಗ. ಸರಿಯಾದ ರೀತಿಯ  ತಲುಪಿಸುವ ಪ್ರೀತಿಯ ಮಾರ್ಗವೇ ʼಸ್ವರ್ಗʼ ಅಂತಂದೆ. ಬದುಕಬೇಕಾಗಿರುವುದೇ ಹೀಗೆ. ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಜಾತಿ ಶ್ರೇಷ್ಠ ಎನ್ನುವ ಧ್ವನಿಯನ್ನು ಹೇರುವ ಪ್ರಯತ್ನ ಮಾಡಿದಾಗಲೇ ಚರ್ಚೆಗೆ ಕಾರಣವಾಗುತ್ತದೆ. ಇಲ್ಲಿ ಸ್ವಾಮೀಜಿ ಅವರ ಭಾಷಣವನ್ನು ನೋಡಿದರೇ ಅವರ ಧ್ವನಿಯಲ್ಲಿ ಹೇರುವ ಉದ್ದೇಶ ಕಾಣಿಸುವುದಿಲ್ಲ ಎನ್ನುವುದು ಒಪ್ಪಿತ ವಿಷಯ. ಆದರೇ, ಸಾಮಾಜಿಕವಾಗಿ ಈ ಹೇಳಿಕೆ ದ್ವೇಷದ ಭಾವ ಪಡೆಯಿತು. ಅದು ಸಹಜವೇ ಸರಿ. ಇಲ್ಲಿ ನೂರು ಮನಸ್ಸಿದ್ದರೇ, ನೂರು ಭಾವನೆಗಳಿರುತ್ತವೆ. ಸ್ವಾಮೀಜಿ ಏನೋ ಹೇಳುವ ಭರದಲ್ಲಿ ಏನೋ ಅರ್ಥ ಪಡೆದು ಅದು ಅತಿಗೆ ತಲುಪಿ ಪ್ರಮಾದವಾಗಿ ಹೋಯಿತು ಎನ್ನದೇ ಬೇರೆ ಉಪಾಯವಿಲ್ಲ. ಒಂದು ವೇಳೆ ಹೇರುವ ಉದ್ದೇಶದಿಂದಲೇ ಹೇಳಿದ್ದು ಹೌದಾದರೇ ಅದು‌ ಸ್ವಾಮೀಜಿ ಹೇಳಲಿ ಅಥವಾ ಇನ್ನ್ಯಾರೇ ಹೇಳಲಿ ನಿಜಕ್ಕೂ ಅಕ್ಷಮ್ಯ.

ಇನ್ನು, ವಿವಾದ ಸೃಷ್ಟಿಯಾಗುವುದಕ್ಕೆ ಈಗ ವಿಷಯ ಬೇಕಂತಿಲ್ಲ. ಜಾತಿ ಮತ್ತು ವಾದ ಯಾವುದು ಅಂತ ಗೊತ್ತಿದ್ದರೇ ಸಾಕು. ಪ್ರತಿ ಹೇಳಿಕೆಯೂ ವಿವಾದವೇ ಆಗಿ ಸಂಘರ್ಷಕ್ಕೆ ಕಾರಣವಾಗುವ ದುರಂತ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಹೌದು, ಈ ಸಮಾಜಕ್ಕೆ ಎಂದೂ ಕಡಿಮೆಯಾಗದ ಒಂದು ಅಹಂಕಾರ, ಸೊಕ್ಕು ಇದೆ. ವಾದ ಮತ್ತು ಪ್ರತಿವಾದಗಳನ್ನು ಸಂಘರ್ಷಕ್ಕೆ ತಲುಪಿಸುವುದರಲ್ಲೇ ಸದಾ ಆನಂದ ಬಯಸುತ್ತದೆ ಎಂದರೇ ಇದರಷ್ಟು ದುರಂತ ಮತ್ತೊಂದಿಲ್ಲ. ಈ ಹಿಂದೆ ಸಂಗೀತ ನಿರ್ದೇಶಹಂಸಲೇಖ, ಸಿನೆಮಾ ನಿರ್ದೇಶಕ, ನಟ ಉಪೇಂದ್ರ ಅವರ ಹೇಳಿಕೆಗಳೂ ಹೀಗೆ ವಿವಾದ ಸೃಷ್ಟಿಸಿ ವಾದ, ಪ್ರತಿವಾದಗಳ ಸಂಘರ್ಷ ಸೃಷ್ಟಿ ಮಾಡಿದ್ದವು ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕಿದೆ.

ಹಂಸಲೇಖ, ಉಪೇಂದ್ರರ ಹೇಳಿಕೆ ಒಂದು ಜಾತಿ, ಆಚರಣೆಯ ಬಗ್ಗೆ ನಿಂದನೆ ಎಂಬ ವಾದಕ್ಕೆ ಕಾರಣಯಿತು. ಈಗ ಸುಗುಣೇಂದ್ರ ತೀರ್ಥರ ಈ ಹೇಳಿಕೆ ಭಾಷೆಯ ಆಧಾರದಲ್ಲಿ ಮೇಲು, ಕೀಳು ಎಂಬ ಚರ್ಚೆಗೆ ಕಾರಣವಾಯಿತು. ಇಲ್ಲಿ ತಮಗೆ ಬೇಕಾದದ್ದೇ ಶ್ರೇಷ್ಠ. ಸಮಾಜಕ್ಕೆ ಬೇಕಾಗಿರುವುದರ ಬಗ್ಗೆ ಯಾವ ವಾದವೂ ಚಿಂತಿಸುವುದಿಲ್ಲ ಎನ್ನುವುದು ದುರಂತವೇ ಸರಿ.

ಹೀಗೆ ಜಾತಿ, ಧರ್ಮ, ಭಾಷೆಗಳ ವಿಚಾರಗಳಲ್ಲಿ ವಾದ ಮತ್ತು ಪ್ರತಿವಾದಗಳು ಒಂದಕ್ಕೊಂದು ಎಷ್ಟು ಜರೆದಿಲ್ಲ ? ಎಂದು ಈ ಸಂಘರ್ಷಗಳಿಗೆ ಕೊನೆ ? ಅಥವಾ ಈ ವಾದ ಮತ್ತು ಪ್ರತಿವಾದ  ತನ್ನ ಉಳಿವಿಗಾಗಿ ನಿರಂತರ ಈ ಸಂಘರ್ಷವನ್ನು ಚಾಲ್ತಿಯಲ್ಲಿಡುತ್ತದೆಯೇ ? ಈ ಜಾತಿ, ಧರ್ಮ, ಭಾಷೆಗಳ ಸಂಘರ್ಷ ಹೀಗೆಯೆ ಮುಂದುವರಿದರೇ ಒಂದು ಸ್ವಾಸ್ಥ್ಯ ಸಮಾಜದಲ್ಲಿ ಬದುಕುವುದು ಯಾವಾಗ ? ಯೋಚನೆ ಮಾಡಿ.

-ಶ್ರೀರಾಜ್ ವಕ್ವಾಡಿ.