Saturday, October 30, 2021

ಪೆಗಾಸಸ್ ಪೆಡಂಭೂತ : ಸುಪ್ರೀಂ ಚಾಟಿ ಕೇಂದ್ರಕ್ಕೆ ಆಪತ್ತು..!?


ಇಸ್ರೇಲ್ ಸೈಬರಾಯುಧ | ಅನುಮಾನ ಹುಟ್ಟಿಸುತ್ತಿರುವ ಮೋದಿ ‘ಟ್ವೀಟ್ ಕೃತಜ್ಞತೆ’..!    


ಕೇಂದ್ರದ ಹಾಲಿ ಸರ್ಕಾರಕ್ಕೆ ಬೆಂಬಿಡದೆ ಕಾಡುತ್ತಿರುವ ಹಲವು ಸಂಕಷ್ಟಗಳಲ್ಲಿ ಪೆಗಾಸಸ್ ಬೇಹುಗಾರಿಕೆಯ ಪೆಡಂಭೂತವೂ ಒಂದು. ಹೌದು, ಕಳೆದ ಎರಡು ಮೂರು ತಿಂಗಳುಗಳ ಹಿಂದೆ ದೇಶದ ಪ್ರಮುಖ ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು ಹಾಗೂ ಹಲವು ಇತರೆ ಪ್ರಮುಖ ಮುನ್ನೂರಕ್ಕೂ ಅಧಿಕ ಮಂದಿಯ ದೂರವಾಣಿಯ ಸಂಖ್ಯೆಗಳ ಮೇಲೆ ಬೇಹುಗಾರಿಕೆಯನ್ನು ಮಾಡಲಾಗಿದೆ ಎಂಬ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯ ವರದಿಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಸತ್ ಮುಂಗಾರು ಅಧಿವೇಶನ ಆಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಕೇಂದ್ರ ಸರ್ಕಾರ ಇಸ್ರೇಲ್ ನಿಂದ ಇದನ್ನು ಖರೀದಿಸಿ ಬೇಹುಗಾರಿಕೆ ನಡೆಸಿದೆ ಎಂಬ ಆರೋಪವನ್ನು ಮಾಡಿದ್ದವು. ಅಧಿವೇಶನದ ಉದ್ದಕ್ಕೂ ವಿಪಕ್ಷಗಳು ಈ ಬಗ್ಗೆ ಪ್ರತಿಭಟನೆ ಮಾಡಿ ಬಲವಾದ ವಿರೋಧವನ್ನು ವ್ಯಕ್ತ ಪಡಸಿದೆಯಾದರೂ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಪ್ರತಿಕ್ರಿಯಿಸದೇ, ಮುಖ್ಯವಾಗಿ ಅಧಿವೇಶನದಲ್ಲಿ ಏನೆಲ್ಲಾ ಚರ್ಚೆಯಾಗಬೇಕಿತ್ತೋ ಅದನ್ನು ಹೊರತಾಗಿ ಉಳಿದ್ದನ್ನೆಲ್ಲಾ ಚರ್ಚೆ ಮಾಡಿ ಮುಗಿಸಿತ್ತು. ವಿಪಕ್ಷಗಳ ನಿರಂತರ ವಿರೋಧವಿದ್ದರೂ ಪ್ರಧಾನ ಮಂತ್ರಿಯಾಗಲಿ ಅಥವಾ ಕೇಂದ್ರದ ಗೃಹ ಮಂತ್ರಿಗಳಾಗಲಿ ಯಾವುದೇ ಪ್ರತಿಕ್ರಿಯೆಯನ್ನೂ ಈ ಬಗ್ಗೆ ನೀಡದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಆದರೇ, ಈಗ ಸುಪ್ರೀಂ ಕೋರ್ಟ್ ಈ ಬಗ್ಗೆ ತನಿಖೆ ಮಾಡುವ ಉದ್ದೇಶದಿಂದ ಸಮಿತಿಯನ್ನು ರಚಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ ಎನ್ನುವುದಂತೂ ಸುಳ್ಳಲ್ಲ. 

ಸರ್ಕಾರಗಳಿಗೆ ಅಲ್ಲದೇ ಬೇರೆ ಯಾರಿಗೂ ಸ್ಪೈವೇರ್ ಗಳ ಮಾರಾಟಕ್ಕೆ ಇಸ್ರೇಲ್ ಸರ್ಕಾರ ಅನುಮತಿ ನೀಡುದಿಲ್ಲ. ರಫ್ತಿಗೆ ಸರ್ಕಾರದ ಅನುಮತಿ ಬೇಕೆಬೇಕು. ಸರ್ಕಾರೇತರರಿಗೆ ಅಥವಾ ಸರ್ಕಾರೇತರ ಯಾವುದೇ ಸಂಸ್ಥೆಗಳಿಗೆ ಇಸ್ರೇಲ್ ಸರ್ಕಾರ ಇದನ್ನು ರಫ್ತು ಮಾಡುದಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿರುವುದು ಈಗ ಪ್ರಧಾನಿ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಅನುಮಾನ ಹುಟ್ಟಿಸಿಹಾಕಿದೆ. ಇನ್ನು, ದೇಶದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ವಿರೋಧಕ್ಕೆ ಗ್ರಾಸವಾಗಿದ್ದ ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ವಿ ರವೀಂದ್ರನ್ ನೇತೃತ್ವದ ಸಮಿತಿಯನ್ನು ರಚಿಸಿದ ಬೆನ್ನಿಗೆ ಪತ್ರಿಕಾಗೋಷ್ಟಿಯಲ್ಲಿ ‘ಪೆಗಾಸಸ್ ಸ್ಪೈವೇರ್ ನನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ ಮತ್ತು ಈ ಪೆಗಾಸಸ್ ಸ್ಪೈವೇರ್ ಮಾಲಕತ್ವ ಹೊಂದಿರುವ ಎನ್ ಎಸ್ ಒ ಸಂಸ್ಥೆಯು ಈ ಸ್ಪೈವೇರ್ ನನ್ನು ಸರ್ಕಾರೇತರರಿಗೆ ಮಾರಾಟ ಮಾಡುವುದಿಲ್ಲ’ ಎಂದು ಭಾರತದಲ್ಲಿ ಇತ್ತೀಚೆಗಷ್ಟೇ ನೇಮಕಗೊಂಡಿರುವ ಇಸ್ರೇಲ್ ನ ರಾಯಭಾರಿ ನೌರ್ ಗಿಲೋನ್ ಹೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. 

ಇನ್ನು, ಪತ್ರಿಕಾಗೋಷ್ಟಿಯಲ್ಲಿ.. ಸ್ಪೈವೇರ್ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಸರ್ಕಾರವನ್ನು ಭಾರತ ಸರ್ಕಾರ ಸಂಪರ್ಕ ಮಾಡಿದೆಯೇ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಗಿಲೋನ್, ಎನ್ ಎಸ್ ಒ ಒಂದು ಖಾಸಗಿ ಸಂಸ್ಥೆ. ಎನ್ ಎಸ್ ಒ ಅಥವಾ ಅಂತಹ ಯಾವುದೇ ಸಂಸ್ಥೆಗಳು ಸ್ಪೈವೇರ್ ಗಳನ್ನು ರಫ್ತು ಮಾಡುವುದಾದರೇ ಇಸ್ರೇಲ್ ಸರ್ಕಾರದ ರಫ್ತು ಪರವಾನಿಗೆಯನ್ನು ಪಡೆಯುವುದ ಅಗತ್ಯ. ಸರ್ಕಾರಗಳಿಗೆ ಮಾತ್ರ ರಫ್ತು ಮಾಡುವುದಾದರೇ ಇಸ್ರೇಲ್ ಸರ್ಕಾರ ಅನುಮತಿಸುತ್ತದೆ ಎಂದಷ್ಟೇ ಹೇಳಿರುವುದು ಕೂಡ ತನಿಖೆಗೆ ಒಂದು ವಸ್ತುವಾಗಲಿದೆ. 

ಕಳೆದ ಜೂನ್ ೧೪. ೨೦೨೧ ರಂದು ಇಸ್ರೇಲ್ ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನ್ನೆಟ್ ಆಯ್ಕೆಯಾದ ಸಂದರ್ಭದಲ್ಲಿ ಪ್ರಧಾನಿ ಮೋದಿ, ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಭಾರತ ಹಾಗೂ ಇಸ್ರೇಲ್ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲು ಇಸ್ರೇಲ್ ನ ನೂತನ ಪ್ರಧಾನಿ ನಫ್ತಾಲಿಯವರನ್ನು ಭೇಟಿಯಾಗಲು ಬಯಸುತ್ತೇನೆ. ಮುಂದಿನ ವರ್ಷ ರಾಜತಾಂತ್ರಿಕ ಸಂಬಂಧಗಳ ಉನ್ನತೀಕರಣದ ೩೦ ವರ್ಷಗಳನ್ನು ಆಚರಿಸುತ್ತಿದಂತೆ, ನಿಮ್ಮನ್ನು ಭೇಟಿ ಮಾಡಲು ಮತ್ತು ‘ನಮ್ಮ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಗಾಢಗೊಳಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿರುವುದು ಮಾತ್ರವಲ್ಲದೇ, ಇದೇ ಸಂದರ್ಭದಲ್ಲಿ ಇಸ್ರೇಲ್ ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೂ “ಭಾರತ ಹಾಗೂ ಇಸ್ರೇಲ್ ಕಾರ್ಯತಂತ್ರದ ಸಹಭಾಗಿತ್ವಕೆ ಕೃತಜ್ಞತೆ. ಭಾರತ ಹಾಗೂ ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ನಿಮ್ಮ ನಾಯಕತ್ವ ಹಾಗೂ ವೈಯಕ್ತಿಕ ಗಮನಕ್ಕೆ ಕೃತಜ್ಞತೆ ತಿಳಿಸುತ್ತೇನೆ” ಎಂದು ಯಾರಿಗೂ ಇಷ್ಟೇಲ್ಲಾ ಕೃತಜ್ಞತೆ ತಿಳಿಸದ ಪ್ರಧಾನಿ ನರೇಂದ್ರ ಮೋದಿ ಅವರ ಈ ಎರಡೆರಡು “ಟ್ವೀಟ್ ಕೃತಜ್ಞತೆ” ಈಗ ಪೆಗಾಸಸ್ ಗೆ ಸಂಬಂಧಿಸಿದಂತೆ ಅನುಮಾನ ಮೂಡಿಸುತ್ತಿದೆ. ಇನ್ನು, ಇಸ್ರೇಲ್ ನ ನೂತನ ಪ್ರಧಾನಿ ನಫ್ತಾನಿ ಬಲಪಂಥೀಯ ಪಕ್ಷ ಯಾಮಿನಿ ಪಾರ್ಟಿಯ ಮುಖಂಡ ಎನ್ನುವುದು ಈ ಬಗ್ಗೆ ಮತ್ತಷ್ಟು ಕುತುಹೂಲದೊಂದಿಗೆ ಸಂಶಯಾಸ್ಪದವಾಗಿದೆ. ಮಾತ್ರವಲ್ಲದೇ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಸ್ರೇಲ್ ಸರ್ಕಾರದೊಂದಿಗೆ ರಾಜಕೀಯ ಆಂತರಿಕ ಲಾಭಕ್ಕಾಗಿ ಪೆಗಾಸಸ್ ಸ್ಪೈವೇರ್ ವಿಚಾರವಾಗಿ ಸಂಪರ್ಕ ಮಾಡಿರಬಹುದು ಎನ್ನುವುದನ್ನೂ ಕೂಡ ಅಲ್ಲಗಳೆಯುವಂತಿಲ್ಲ. 

ಇಲ್ಲಾ ತನಿಖೆಯಾಗಲೇ ಬೇಕೆಂದು ಹೇಳ್ತು ಸುಪ್ರೀಂ : ವಿರೋಧ ಪಕ್ಷಗಳ ವಿರೋಧವನ್ನು ಹಾಗೂ ತನಿಖೆಯ ಮನವಿಯ ಅರ್ಜಿಯನ್ನು ವಿಚಾರಣೆ ಮಾಡಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಸರ್ಕಾರದ  ರಾಷ್ಟ್ರೀಯ ಭದ್ರತೆಯ ನೆಪಕ್ಕೆ ಎಲ್ಲಾ ಸಂದರ್ಭದಲ್ಲಿಯೂ ಬಾಯಿ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಿಲ್ಲವೆಂದು ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠ ಖಡಕ್ ವಾರ್ನ್ ಮಾಡಿದ್ದಲ್ಲದೇ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರತಿ ಬಾರಿ ವಿನಾಯಿತಿ ನೀಡುವುದಕ್ಕೆ ಸಾಧ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನೆಡೆಯಲೇ ಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಇನ್ನು, ಇತ್ತೀಚೆಗೆ ಕೋವಿಡ್ ನಿರ್ವಹಣೆ ಸೇರಿ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಖಡಕ್ ವಾರ್ನ್ ಮಾಡುತ್ತಿರುವುದು ಮಾತ್ರವಲ್ಲದೇ, ಹಲವು ಪ್ರಕರಣಗಳಿಗೆ ತನಿಖೆ ಸಲುವಾಗಿ ಸಮಿತಿ ರಚಿಸುತ್ತಿರುವುದು ಎನ್ ವಿ. ರಮಣ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೇಲೆ ಆದ ಮಹತ್ತರ ಬೆಳವಣಿಗೆಗಳೇ ಎಂದು ಹೇಳಬಹದಾಗಿದ್ದು, ಇದು ಕಳೆದ ಕೆಲವು ವರ್ಷಗಳಿಂದೀಚೆಗೆ ಜನರಿಗೆ ಸುಪ್ರೀಂ ಕೋರ್ಟ್ ಮೇಲೆ ಇದ್ದ ಅಪನಂಬಿಕೆಯನ್ನು ಕೂಡ ಸ್ವಲ್ಪ ಮಟ್ಟಿಗೆ ತೆಗೆದುಹಾಕಿದೆ ಎನ್ನಬಹುದಾಗಿದೆ. 

ಪೆಗಾಸಸ್ : ಸುಪ್ರೀಂ ಕೋರ್ಟ್ ಏನ್ ಹೇಳಿದೆ..? : ವಿಚಾರಣೆಯ ವೇಳೆ  ಕೇಂದ್ರ ಸರ್ಕಾರವ ವಿರುದ್ಧ ಕಿಡಿ ಕಾರಿದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಭದ್ರತೆಯ ವಿಚಾರಕ್ಕಾಗಿ ರಹಸ್ಯವಾಗಿಯೇ ಇರಬೇಕು ಎಂಬ ವಿಚಾರವನ್ನು ಕೇಂದ್ರ ಸರ್ಕಾರ ಸಾಬೀತು ಪಡಿಸಬೇಕು ಎಂದು ಹೇಳಿದ್ದಲ್ಲದೇ, ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಗೂಢಚರ್ಯೆಯಂತಹ ಬೇಹುಗಾರಿಕೆಯನ್ನು ಮಾಡುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ದೇಶದ ಭದ್ರತೆಯ ವಿಚಾರದ ನೇಪ ಒಡ್ಡಿದ ಮಾತ್ರಕ್ಕೆ ಪ್ರತಿ ಬಾರಿ ವಿನಾಯಿತಿ ನೀಡಲು ಅಸಾಧ್ಯ. ವೈಯಕ್ತಿಕ ಗೌಪ್ಯತೆಯನ್ನಯ ಉಲ್ಲಂಘಿಸಿ ಒಬ್ಬ ವ್ಯಕ್ತಿಯ ಮೇಲೆ ಗೂಢಚರ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ. ಸೂಕ್ತ ಭದ್ರತೆಯ ನೆಪ ಹೇಳಿ ಸುಮ್ಮನೆ ಸರ್ಕಾರ ಕೂರಲಾಗದು, ಅಂತಹ ಅಂಶಗಳನ್ನು ಅಂಶಗಳನ್ನು ಮುಂದಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಖಡಕ್ ಆಗಿ ಸುಪ್ರೀಂ ಕೋರ್ಟ್ ಗೆ ಆದೇಶಿಸಿರುವುದು ಮೋದಿ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ. 

ಇನ್ನು, ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಇರುವ ಸಮಿತಿಯನ್ನು ರಚಿಸಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ವಿ ರವೀಂದ್ರನ್ ಉಸ್ತುವಾರಿಯಲ್ಲಿ ಮೂವರು ಇರುವ ಸಮಿತಿಯಲ್ಲಿ ಗುಜರಾತ್ ನ ರಾಷ್ಟ್ರೀಯ ವಿಧಿ ವಿಜ್ಞಾನ ವಿವಿಯ ಮುಖ್ಯಸ್ಥ ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠಂ ಸ್ಕೂಲ್ ಆಫ್ ಎಂಜಿನಿಯರಿಂಗ್ ಪ್ರೊಫೆಸರ್ ಹಾಗೂ ಬಾಂಬೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೀನಿಯರ್ ಪ್ರೊಫೇಸರ್ ಅಶ್ವಿನ್ ಅನಿಲ್ ಗುಮಸ್ಥೆ ಇದ್ದಾರೆ. ಈ ಮೂವರ ಸಮಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರಿಗೆ ವರದಿ ಸಲ್ಲಿಸಲಿದೆ. 

ಕಾಂಗ್ರೆಸ್ ನದ್ದು ಏನ್ ವಾದ..? : ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಪಕ್ಷಗಳ ಯಾವುದೇ ವಾದಕ್ಕೂ ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ ಪರೋಕ್ಷವಾಗಿ ಇದು ಪ್ರತಿಪಕ್ಷಗಳ ರಾಜಕೀಯ ಕುತಂತ್ರ ಹೇಳುತ್ತಿದೆ. ಇತ್ತ ಕಾಂಗ್ರೆಸ್ ಕೂಡ ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರೋಧ ಪಕ್ಷಗಳ ಪ್ರಭಾವಿ ನಾಯಕರ ವಿರುದ್ಧವಾಗಿ ಈ ಬೇಹುಗಾರಿಕೆಯನ್ನು ಪ್ರಯೋಗಿಸಲಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಗೂಢಚರ್ಯೆ ಮಾಡುವ ಅಧಿಕಾರ ಸರ್ಕಾರಕ್ಕೆ ನೀಡಿದ್ದು ಯಾರು..? ಯರ‍್ಯಾರ ವಿರುದ್ಧವಾಗಿ ಪೆಗಾಸಸ್ ಬೇಹುಗಾರಿಕೆಯನ್ನು ಪ್ರಯೋಗಿಸಲಾಗಿದೆ..? ಬೇರೆ ದೇಶಗಳು ಭಾರತೀಯರಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಂಡಿದ್ದೀರಿ..? ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕೇಳಿತ್ತಾದರೂ ಕೇಂದ್ರ ಸರ್ಕಾರ ಉತ್ತರ ನೀಡಿದ್ದಿರಲಿಲ್ಲ, ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಆರೋಪವನ್ನು ನಿರ್ಲಕ್ಷಿಸಿತ್ತು. ಸಂಸತ್ ಅಧಿವೇಶನದುದ್ದಕ್ಕೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಭಟನೆ ಮಾಡಿ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೆ ಆಗ್ರಹಿಸಿತ್ತಾದರೂ, ಬಿಜೆಪಿ ಸರ್ಕಾರ ಅದಕ್ಕೆ ಒಪ್ಪಿರಲಿಲ್ಲ. ಸದ್ಯ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿ ರಚನೆ ಮಾಡಿದ್ದು ಕಾಂಗ್ರೆಸ್ ವಾದಕ್ಕೆ ಬೆಂಬಲ ನೀಡಿದಂತಾಗಿದೆ.

ಒಟ್ಟಿನಲ್ಲಿ, ಪೆಗಾಸಸ್ ಪ್ರಕರಣದಲ್ಲಿ ಕಾನೂನು ಎತ್ತಿ ಹಿಡಿಯುವುದೇ ತಮ್ಮ ಉದ್ದೇಶ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದ್ದು, ಮಾತ್ರವಲ್ಲದೇ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಸಮಿತಿ ರಚಿಸಿರುವ ಉದ್ದೇಶವೇ ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯುವುದೇ ಆಗಿದೆ ಎಂದು ಹೇಳಿರುವುದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿರುವುದಂತೂ ಸತ್ಯ. ಕೇಂದ್ರ ಸರ್ಕಾರದ ಸಮರ್ಥನೆ ಹಾಗೂ ಪ್ರತಿ ಪಕ್ಷಗಳ ಆರೋಪಗಳ ಆಚೆಗೆ ಸಮಿತಿ ಯಾವ ಉತ್ತರವನ್ನು ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಿದೆ ಎನ್ನುವುದರ ಮೇಲೆ ಸದ್ಯ ಕುತೂಹಲ ಮೂಡಿಸಿದೆ. 

-ಶ್ರೀರಾಜ್ ವಕ್ವಾಡಿ

Friday, October 1, 2021

ಜಿ23 ಅಸಮಾಧಾನ ‘ಗಾಂಧಿ ಕುಟುಂಬ ರಾಜಕಾರಣ’ದ ಅಂತ್ಯಕ್ಕೆ ನಾಂದಿ..?

ನಾಯಕತ್ವದ ಬಗ್ಗೆ ‘ಜಿ23 ಪಡೆ’ಗೆ ಮಾತ್ರವಲ್ಲ ಅತೃಪ್ತಿ..!? | ಕಾಂಗ್ರೆಸ್ ಸ್ಥಿತಿ ಚಿಂತಾಜನಕ 

ಹೌದು, ಇಂತಹದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು. ದೇಶಕ್ಕೆ ಸ್ವಾತಂತ್ರ್ಯ ತಂದುಕಕೊಟ್ಟ ಪಕ್ಷ ಎಂದು ಹೇಳಿಕೊಳ್ಳಿವ ರಾಷ್ಟ್ರೀಯ ಕಾಂಗ್ರೆಸ್ ಈಗ ಅಪ್ಪ ಅಮ್ಮ ಇಲ್ಲದಂತಾಗುತ್ತಿರುವ ಹಾಗಾಗಿದೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ನ ಹಿರಿಯ ನಾಯಕರ ಅಸಮಧಾನ ಹಾಗೂ ಪಾರಂಪರಿಕ ಗಾಂಧಿ ಕುಟುಂಬದ ನಡುವೆ ಇರುವ ಮುಸುಕಿನ ಭಿನ್ನ ಧ್ವನಿ ಈಗ ಮತ್ತಷ್ಟು ಗಟ್ಟಿಯಾಗಿದೆ ಎಂದು ಕಾಣಿಸುತ್ತಿದೆ. ಕಳೆದ ವರ್ಷ ಪಕ್ಷದ ನಾಯಕತ್ವ ಬದಲಾವಣೆಯ ವಿಚಾರಕ್ಕೆಂದು ಕರೆದಿದ್ದ ಸಿಡಬ್ಲ್ಯೂಸಿ (ಕಾಂಗ್ರೆಸ್ ವರ್ಕಿಂಗ್ ಕಮಿಟಿ) ಸಭೆಯಲ್ಲಿಯೇ ಜಿ೨೩ ಪಡೆ, ‘ಹಲವು ವರ್ಷಗಳ ಹಿಂದಿನಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಪಕ್ಷಕ್ಕಾಗಿ ದಶಕಗಳಿಂದ ಮಣ್ಣು ಹೊತ್ತಿದ್ದೇವೆ, ನಮಗೆ ಸರಿಯಾದ ಸ್ಥಾನಮಾನವೇ ದೊರಕಲಿಲ್ಲ’ ಎಂದು ಪರೋಕ್ಷವಾಗಿ ನಾಯಕತ್ವ ಬದಲಾವಣೆಯ ಬಗ್ಗೆ ಕಿಡಿ ಹೊತ್ತಿಸಿತ್ತು. ಆದಾಗ್ಯೂ, ಸಭೆಯ ಅಂತಿಮದಲ್ಲಿ ಮತ್ತೆ ಸೋನಿಯಾ ಗಾಂಧಿಯವರನ್ನೇ ಪಕ್ಷದ ಸದ್ಯದ ಪರಮೋಚ್ಛ ನಾಯಕಿ ಎಂಬ ತೀರ್ಮಾನಕ್ಕೆ ಬರಲಾಯಿತು. 

ಸಿಡಬ್ಲ್ಯೂಸಿ ಸಭೆಯ ಸಂದರ್ಭದಲ್ಲಿ ‘ಜಿ23’ ಪತ್ರದ ಮುಖೇನ ನಾಯಕತ್ವ ಬದಲಾವಣೆ ಹಾಗೂ ಪಕ್ಷದ ಅಜೆಂಡಾ, ಸಿದ್ಧಾಂತಗಳಲ್ಲಿನ ಕೆಲವು ವಿಮರ್ಶಾತ್ಮಕ ಪರಿವರ್ತನೆಯ ಬಗ್ಗೆ ಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ಒಪ್ಪಿಸಿದ್ದು ಕೂಡ ಗಾಂಧಿ ಕುಟುಂಬಕ್ಕೆ ಎಚ್ಚರಿಕೆಯ ಕರೆಗಂಟೆಯಂತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದಾದ ಬಳಿಕ ಹಿರಿಯ ನಾಯಕರಾದ ಕಪಿಲ್ ಸಿಬಲ್, ಗುಲಾಮ್ ನಬಿ ಆಜಾದ್ ಸೇರಿ ಕೆಲವರು ನಡೆದುಕೊಂಡ ರೀತಿ ರಾಷ್ಟ್ರೀಯ ಕಾಂಗ್ರೆಸ್, ಮನೆಯೊಂದು ಎರಡು ಬಾಗಿಲು ಎಂಬತ್ತಾಗಿದ್ದನ್ನು ಸ್ಪಷ್ಟವಾಗಿ ದೇಶದ ಜನರಿಗೆ ತಿಳಿಯುವಂತೆ ಆಯಿತು. ಈಗ ‘ಅದೇ ಕಾಂಗ್ರೆಸ್ ನ ಸಮರ್ಥ ನಾಯಕತ್ವ’ದ ವಿಚಾರ ಮುನ್ನೆಲೆಗೆ ಬಂದಿದೆ. 

ಪಂಜಾಬ್ ರಾಜ್ಯ ರಾಜಕಾರಣದಲ್ಲಿ ಆದ ಇತ್ತೀಚೆಗಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ‘ಸಮರ್ಥ ನಾಯಕತ್ವ’ದ ಕೂಗು ಮತ್ತೆ ಜೋರಾಗಿ ಕೇಳಿ ಬಂದಿದೆ. ಪಕ್ಷ ಹಾಗೂ ಪಕ್ಷದ ಕೆಲವು ಹಿರಿಯ ನಾಯಕರ ಗುಂಪು ಒಂದೆಡೆಯಾದರೇ, ಅದೇ ಹಿಂದಿನ ಗಾಂಧಿ ಕುಟುಂಬಕ್ಕೆ ವಿದೇಯತೆಯಿಂದ ಇದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರನ್ನೇ ಬೆಂಬಲಿಸುವ ಗುಂಪಿನ ನಡುವಿನ ಬರ್ಕುಡಿ ಹೊಯ್ದಾಟ ಹಾಗೂ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ, ಅತೃಪ್ತಿ, ಮುನಿಸು, ಕೋಪ, ತಾಪ ಎಲ್ಲಾ ಈಗ ಒಂದೆಡೆ ಸೇರಿ ಬಂದು ದೇಶದ ಜನರೆದುರಿಗೆ ಬಟಾಬಯಲಾಗಿದೆ. 

ಕಾಂಗ್ರೆಸ್ ಹಿರಿಯ ನಾಯಕರ ಇರಿಸು ಮುರಿಸು :

ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕ ಹಾಗೂ ಕೇರಳದ ವಯನಾಡಿನ ಸಂಸದ ರಾಹುಲ್ ಗಾಂಧಿ, ಅವ್ಯಾಹತವಾಗಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತರಾಟೆ ತೆಗೆದುಕೊಳ್ಳುತ್ತಿರುವುದಲ್ಲದೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರವನ್ನು ಹಿಡಿಯುವ ಪ್ರಯತ್ನದಲ್ಲಿದ್ದರೇ, ಇತ್ತ.. ಪಕ್ಷದ ಹಿರಿಯ ನಾಯಕರ ಅಸಮಾಧಾನ ಹಾಗೂ ಇರಿಸು ಮುರಿಸು ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಶೇಮ್ ಉಂಟು ಮಾಡುತ್ತಿದೆ. ಕಾಂಗ್ರೆಸ್ ನಿಷ್ಠ ಹಿರಿಯ ನಾಯಕರು ಎಂದು ಹೇಳಿಕೊಳ್ಳುವವರ ನಡೆಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಕಪಿಲ್ ಸಿಬಲ್, ಗುಲಾಮ್ ನಬಿ ಆಜಾದ್ ಅವರಂತಹ ಕೆಲವು ನಾಯಕರು ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನದ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದ ನಿರ್ನಾಮಕ್ಕೆ ನಾಂದಿ ಸಿಕ್ಕಿದೆಯೇ ಎಂಬ ಪ್ರಶ್ನೆ ಎಬ್ಬಿಸುತ್ತಿದೆ. ಸೆಕ್ಯುಲರ್ ಪಕ್ಷ ಎಂದು ಹೇಳಿಕೊಂಡೇ ದೇಶದಲ್ಲಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿರುವ ಪಕ್ಷದ ಒಳಗೇ ‘ಸೆಕ್ಯುಲರ್’ ಗೆ ಸರಿಯಾದ ಅರ್ಥ ಸಿಗುತ್ತಿಲ್ಲವೇನೋ ಎಂಬ ಹಾಗೆ ಪ್ರಶ್ನೆಯೊಂದು ಬಲವಾಗಿ ಬೇರೂರುವಂತೆ ಮಾಡಿದೆ. ೨೦೧೪ ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಎನ್ ಡಿ ಎ ಸರ್ಕಾರ ದೇಶದ ಅಧಿಕಾರ ಹಿಡಿದಾಗಲೇ ಸಾರ್ವಜನಿಕ ವಲಯದಲ್ಲಿ ಕಾಂಗ್ರೆಸ್ ಪಕ್ಷ ಮೂಲೆಗೆ ಸರಿಯುತ್ತಿದೆ ಎಂಬ ಮಾತು ಬಲವಾಗಿ ಕೇಳಿತ್ತು, ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಲವು ವೈಫಲ್ಯಗಳನ್ನು ಎತ್ತಿ ವಿರೋಧಿಸುವುದಕ್ಕೆ ಸರಿಯಾದ ವಿರೋಧ ಪಕ್ಷವೇ ಇಲ್ಲ ಎಂಬಂತಾಗಿ ಆ ಮಾತು ಸತ್ಯವಾದಂತೆ ಕಾಣಿಸುತ್ತಿದೆ. ಎನ್ ಡಿ ಎ ಸರ್ಕಾರದ ಮೈನಸ್ ಪಾಯಿಂಟ್ ಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಕಾಂಗ್ರೆಸ್ ಬಲವಾದ ಪಡೆಯನ್ನು ಹೊಂದಿರಬೇಕಾದ ಸಂದರ್ಭದಲ್ಲೇ ಮನೆಯೊಂದು ಎರಡು ಬಾಗಿಲು ಎಂಬಂತಾಗಿರುವುದು ದುರಂತವೇ ಸರಿ.

ಗಾಂಧಿ ಕುಟುಂಬಕ್ಕೆ ಬಿಸಿ ಮುಟ್ಟಿಸಿದ ಸಿಬಲ್ ನಡೆ :

ಪಂಜಾಬ್ ಕಾಂಗ್ರೆಸ್ ನಲ್ಲಿ ನಡೆದ ರಾಜಕೀಯ ತಲ್ಲಣಗಳ ಬಗ್ಗೆ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಗಾಂಧಿ ಕುಟುಂಬ ಹಾಗೂ ನಾಯಕತ್ವದ ವಿರುದ್ಧವಾಗಿ ನಡೆಸಿದ ಬಹಿರಂಗ ಅಸಮಾಧಾನದ ಹೇಳಿಕೆಯ ಬೆನ್ನಿಗೆ ಸಿಬಲ್ ಮನೆ ಮೇಲೆ ಸೋನಿಯಾ ಗಾಂಧಿ ಹಾಗೂ ಗಾಂಧಿ ಕುಟುಂಬದ ವಿದೇಯ ಕಾರ್ಯಕರ್ತರು ಎಂದು ಹೇಳಲ್ಪಡುವವರು ದಾಳಿ ನಡೆಸಿರುವುದು ಕಾಂಗ್ರೆಸ್ ಗೆ ಅಳಿಸಲಾಗದ ಒಂದು ಕಪ್ಪು ಚುಕ್ಕಿಯಂತಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸಿಬಲ್, ಪಕ್ಷವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಮ್ಮದು ಜಿ ೨೩ ಹೊರತಾಗಿ ಜಿ ಹುಜೂರ್ 23 ನಾಯಕರಲ್ಲ ಎಂದು ಗಾಂಧಿ ಕುಟುಂಬದ ವಿರುದ್ಧ ತಮ್ಮ ನಿಲುವನ್ನು ಪುನರುಚ್ಛರಿಸಿರುವುದು ಗಾಂಧಿ ಕುಟುಂಬಕ್ಕೆ ಬಿಸಿ ಮುಟ್ಟಿಸಿದ್ದಂತೂ ಸತ್ಯ. ಇನ್ನು, ಪಕ್ಷದ ನಾಯಕರ ಆಪ್ತರೆನ್ನಿಸಿಕೊಂಡಿದ್ದವರು ಈಗ ಪಕ್ಷ ತೊರೆದಿದ್ದಾರೆ. ನಾಯಕರಿಂದ ಅಂತರ ಕಾಯ್ದುಕೊಂಡವರು ಇನ್ನೂ ಪಕ್ಷದಲ್ಲೇ ಇದ್ದೇವೆ. ಪಕ್ಷ ಹಾಗೂ ಪಕ್ಷದ ಸಿದ್ಧಾಂತಗಳನ್ನು ಬಿಟ್ಟು, ಬೇರೆಲ್ಲೋ ಹೋಗುವರು ನಾವಲ್ಲ. ಸುಶ್ಮಿತಾ ದೇವ್, ಜಿತಿನ್ ಪ್ರಸಾದ್, ಜ್ಯೋತಿರಾದಿತ್ಯ ಸಿಂದಿಯಾ ಅವರೆಲ್ಲಾ ಪಕ್ಷವನ್ನು ತೊರೆದಿದ್ದು ಏಕೆ ಎಂಬ ಪ್ರಶ್ನೆಯನ್ನು ಎತ್ತಬೇಕಿದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯ ಬಗ್ಗೆ ಅಸಮಾಧಾನವನ್ನು ಸಿಬಲ್ ಹೊರಹಾಕಿದ್ದಾರೆ. 

ಕಪಿಲ್ ಸಿಬಲ್ ಔತಣ ಕೂಟ, ಗಾಂಧಿ ಕುಟುಂಬ ಗೈರು : 

ಇದೇ ಆಗಷ್ಟ್ ನ ಎರಡನೇ ವಾರದಂದು ಸಿಬಲ್ ಅವರ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಔತಣ ಕೂಟಕ್ಕೆ ಗಾಂಧಿ ಕುಟುಂಬದ ಗೈರು ಹಾಜರಿ, ಸಿಬಲ್ ಸೇರಿ ಜಿ ೨೩ ಸದಸ್ಯರ ಮೇಲೆ ಗಾಂಧಿ ಕುಟುಂಬಕ್ಕೆ ಅಸಮಾಧಾನ ಇರುವುದು ಎದ್ದು ತೋರಿಸುವಂತಿತ್ತು. ಇನ್ನು, ಔತಣ ಕೂಟದಲ್ಲಿ ಜಿ23 ಸದಸ್ಯರುಗಳಾದ ಗುಲಾಮ್ ನಬಿ ಆಜಾದ್, ಪಕ್ಷದ ಸಂಸದ ಶಶಿ ತರೂರ್, ಭೂಪೇಂದ್ರ ಸಿಂಗ್ ಹೂಡ, ಆನಂದ್ ಶರ್ಮಾ, ಮನೀಷ್ ತಿವಾರಿ, ಪಿ. ಚಿದಂಬರ್ ಸೇರಿ ಪ್ರಮುಖರು ಭಾಗಿ ಆಗಿದ್ದು, ನಾವೆಲ್ಲಾ ಒಂದಾಗಿದ್ದೇವೆ ಎಂದು ಗಾಂಧಿ ಕುಟುಂಬಕ್ಕೆ ಕನ್ನಡಿ ಹಿಡಿದು ತೋರಿಸುವಂತಿತ್ತು. ಇನ್ನು, ಯುಪಿಎಯೇತರ ನಾಯಕರಾದ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ಎನ್ ಸಿಯ ಓಮರ್ ಅದ್ಬುಲ್ಲಾ, ಬಿಜು ಜನತಾದಳದ ಪಿನಾಕಿ ಮಿಶ್ರಾ, ಅಕಾಲಿದಳದ ನರೇಶ್ ಗುಜ್ರಾಲ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಟಿಡಿಪಿ, ಟಿ ಆರ್ ಎಸ್, ಡಿಎಂಕೆ, ವೈಎಸ್ ಆರ್ ನ ಪ್ರಮುಖ ನಾಯಕರು ಔತಣ ಕೂಟದಲ್ಲಿ ಭಾಗವಹಿಸಿದ್ದು ರಾಜಕೀಯ ವಲಯದಲ್ಲಿ ಹಲವು ಗುಸುಗುಸು ಊಹಾಪೋಹಗಳಿಗೆ ಸಾಕ್ಷಿಯಾಗಿತ್ತು. ಆದಾಗ್ಯೂ, ಪಕ್ಷದವರು ಹಾಗೂ ಇತರೆ ಪಕ್ಷದವರೂ ಸೇರಿದ್ದ ಈ ಔತಣಕೂಟದಲ್ಲಿಯೂ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ ಹಾಗೂ ರಾಜಕೀಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ಆಗಿತ್ತು ಎನ್ನುವುದು ಅಚ್ಚರಿಯ ಸಂಗತಿ. ಮಾತ್ರವಲ್ಲದೇ, ‘ಪಕ್ಷದ ಒಳಗೆ ಹಾಗೂ ಹೊರಗೆ ಏನೇ ಆಗಲಿ ತಮ್ಮ ಬೆಂಬಲ ಜಿ23 ಗೆ ಇರಲಿದೆ’ ಎಂದು ಶರದ್ ಪವಾರ್ ಬೆಂಬಲ ಸೂಚಿಸಿದ್ದರು. ಇನ್ನು, ಇತರೆ ಪಕ್ಷದ ಪ್ರಮುಖ ನಾಯಕರು ತಮಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕೆಂಬ ಬಯಕೆ ಇದ್ದರೂ ಕಾಂಗ್ರೆಸ್ ನಲ್ಲಿ ನಾಯಕತ್ವವೇ ಸರಿಯಾಗಿ ಇಲ್ಲದಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಎನ್ನುವಲ್ಲಿಗೆ ಸಿಬಲ್ ಕರೆದಿದ್ದ ದೇಶದ ಪ್ರಮುಖ ರಾಜಕೀಯ ಪಕ್ಷದ, ಪ್ರಮುಖ ನಾಯಕರ ಅಭಿಪ್ರಾಯವೂ ‘ಜಿ23’ ಯ ಅಭಿಪ್ರಾಯವೇ ಆಗಿದೆ ಎನ್ನುವುದು ಸ್ಪಷ್ಟ. 

ಪ್ರಧಾನಿ ಮೋದಿಯನ್ನು ಹೊಗಳಿದ ಆಜಾದ್ :

ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನ ಬಹುತೇಕ ನಾಯಕರು ಕೇಂದ್ರ ಸರ್ಕಾರದ ವೈಫಲ್ಯವನ್ನು ಟೀಕೆ ಮಾಡಿದ್ದಕ್ಕಿಂತ ಹೆಚ್ಚು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳಿದ್ದರು. ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಹಿರಿಯ ತಲೆ ಗುಲಾಮ್ ನಬಿ ಆಜಾದ್, ಕಳೆದ ಕೆಲವು ತಿಂಗಳುಗಳ ಹಿಂದೆ ಶ್ರೀನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದರು. ಪ್ರಧಾನಿ ಮೋದಿಯವರ ಹಲವು ಗುಣಗಳು ನನಗಿಷ್ಟ. ತಾವು ಚಹಾ ಮಾರಾಟ ಮಾಡುತ್ತಿದ್ದರು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಾವು ನಡೆದುಕೊಂಡು ಬಂದ ಹಾದಿಯನ್ನು ಹಾಗೂ ತಮ್ಮತನವನ್ನು ಮರೆತಿಲ್ಲ ಎಂದು ಹೇಳಿದ್ದು ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿತ್ತು. ಇನ್ನು, ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಮ್ ನಬಿ ಆಜಾದ್ ಅವರ ವಿದಾಯದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದರು. ಆಜಾದ್ ಅವರೊಂದಿಗಿನ ವೈಯಕ್ತಿಕ ಸಂಬಂಧವನ್ನು ನೆನಪಿಸಿಕೊಂಡಿದ್ದರು. ಈ ಸದನದಲ್ಲಿ ಆಜಾದ್ ಸ್ಥಾನವನ್ನು ತುಂಬುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದರು. ಆಜಾದ್ ಅಚ್ಚರಿಯ ಹೇಳಿಕೆ, ಆಜಾದ್ ಪಕ್ಷಾಂತರ ಆಗಬಹುದೇ ಎಂಬ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. 

ಕಾಂಗ್ರೆಸ್ ಗೆ ಮೈತ್ರಿ ಜಪ :

ಕಾಂಗ್ರೆಸ್ ಗೆ ಸ್ವತಂತ್ರವಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಅರಿವು ಆಗಿದೆ ಎಂದು ಕಾಣಿಸುತ್ತಿದೆ. ಇದಕ್ಕೆ ಪಕ್ಷಕ್ಕಿಲ್ಲದ ಸಮರ್ಥ ನಾಯಕತ್ವವೂ ಕಾರಣ. ಆದರೇ, ರಾಷ್ಟ್ರೀಯ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ಜಿ೨೩ ಪಡೆ ಕೂಡ ತಮ್ಮ ವಿರುದ್ಧ ಬಿದ್ದಿರುವ ಕಾರಣದಿಂದಾಗಿ ನಾಯಕತ್ವದ ಬದಲಾವಣೆಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುವುದಕ್ಕೆ ಗಾಂಧಿ ಕುಟುಂಬವೂ ಮುಂದಾಗುವುದಿಲ್ಲ. ಇನ್ನು, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಕಾಂಗ್ರೆಸ್ ನ ನಾಯಕಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಮೈತ್ರಿ ಮಾತುಕತೆ ನಡೆಸಿದ್ದಾರೆ. ಆದರೇ, ಮೈತ್ರಿಗೂ ಕೂಡ ಸೋನಿಯಾ ಗಾಂಧಿ ನೇತೃತ್ವವೇ ಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಇನ್ನು, ಸೋನಿಯಾ ಗಾಂಧಿ ಕೂಡ ಪ್ರಮುಖ ಪಕ್ಷಗಳ ಮುಖಂಡರನ್ನು ಸಭೆ ಕರೆದು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೇ, ಮೈತ್ರಿಗೆ ಒಪ್ಪುವ ಪಕ್ಷಗಳು, ಮೈತ್ರಿಗೆ ಸೋನಿಯಾ ಗಾಂಧಿ ನೇತೃತ್ವವನ್ನು ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಗೆ ಮೈತ್ರಿ ಇಷ್ಟವಿಲ್ಲದಿದ್ದರೂ, ಸದ್ಯಕ್ಕೆ ಬೇರೆ ಗತಿಯಿಲ್ಲ. ಇನ್ನು, ಮಮತಾ ಬ್ಯಾನರ್ಜಿಯವರೇ ಮೈತ್ರಿ ವಿಚಾರ ಮುನ್ನೆಲೆಗೆ ತಂದಿರುವ ಕಾರಣದಿಂದಾಗಿ, ಸೋನಿಯಾ ನೇತೃತ್ವಕ್ಕೆ ಸದ್ಯಕ್ಕೆ ಒಪ್ಪಿದರಾದರೂ ಮುಂದೆ ಒಪ್ಪುತ್ತಾರೆಯೇ ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.  

ರಾಹುಲ್ ರಹಸ್ಯ ಸಭೆ / ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಗೆ ಸೇರ್ಪಡೆ ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಕತ್ವಕ್ಕೆ ಪಕ್ಷದೊಳಗೆಯೇ ಅಸಮಾಧಾನ ಕೇಳಿಬರುತ್ತಿದ್ದರೂ ತಮ್ಮ ಬೆಂಬಲಿಗರೊAದಿಗೆ ಇತ್ತೀಚೆಗೆ ರಾಜಕೀಯ ಕಾರ್ಯತಂತ್ರ ಹೆಣೆದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಇನ್ನು, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಸೋರ್ ಅವರನ್ನು ಕೂಡ ಭೇಟಿಯಾಗಿದ್ದರು. ಪ್ರಶಾಂತ್ ಕಿಶೋರ್ ಭೇಟಿ ಹಾಗೂ ಅವರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆಯೂ ತಮ್ಮ ಬೆಂಬಲಿಗರೊಂದಿಗೆ ಅಭಿಪ್ರಾಯವನ್ನು ಕೇಳಿದ್ದಾರೆ ಎಂದು ಕೂಡ ವರದಿಯಾಗಿತ್ತು. ಆದರೇ, ಪ್ರಶಾಂತ್ ಕಿಶೋರ್ ಅವರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸೋನಿಯಾ ಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಹೇಳಿತ್ತು. ಜಿ23 ಪಡೆಯ ವಿರೋಧ ಇರುವ ಕಾರಣದಿಂದಾಗಿ ತಮ್ಮ ಪಡೆಯನ್ನು ಭದ್ರಗೊಳಿಸಿಗೊಳ್ಳುವುದರತ್ತ ಕಾರ್ಯೋನ್ಮುಖರಾಗಿದ್ದಾರೆ ಎನ್ನುವುದಕ್ಕೆ ರಾಹುಲ್ ಗಾಂಧಿಯವರ ಇಂತಹ ಕೆಲವು ನಡೆಗಳೇ ಸಾಕ್ಷಿ. ಇನ್ನು, ಕನ್ಹಯ್ಯ ಕುಮಾರ್ ಹಾಗೂ ಜಿಗ್ನೇಶ್ ಮೆವಾನಿ ಇತ್ತೀಚೆಗೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್ ಗೆ, ರಾಹುಲ್ ಗಾಂಧಿಗೆ ಆನೆ ಬಲ ಬಂದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದರೂ, ನಟವರ್ ಸಿಂಗ್ ರಂತಹ ಹಿರಿಯ ನಾಯಕರೇ, ‘ಮೂರು ಗಾಂಧಿ’ಗಳು(ಸೋನಿಯಾ, ರಾಹುಲ್, ಪ್ರಿಯಾಂಕ) ಬೇರೆಯವರಿಗೆ ಅವಕಾಶ ನೀಡುವುದಿಲ್ಲವೆಂದು ನೇರಾನೇರವಾಗಿ ಗಾಂಧಿ ಕುಟುಂಬದ ಮೇಲೆ ಆರೋಪ ಹೊರಿಸಿರುವುದರ ನಡುವೆ ರಾಹುಲ್ ಗಾಂಧಿ ಯುವ ನಾಯಕರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಎಂಥವರೇ ಪಕ್ಷಕ್ಕೆ ಸೇರ್ಪಡೆಯಾದರೂ ಪಂಜಾಬ್, ಛತ್ತೀಸ್ ಗಡ, ರಾಜಸ್ಥಾನ ಹಾಗೂ ಗೋವಾದಲ್ಲಿನ ಕಾಂಗ್ರೆಸ್ ನಾಯಕರ ರಾಜೀನಾಮೆ ಪರ್ವ ರಾಷ್ಟ್ರೀಯ ಕಾಂಗ್ರೆಸ್ ಗೆ ದೊಡ್ಡ ಹೊಡೆತವಾಗಿ ಪರಿಣಮಿಸಲಿದೆ ಎನ್ನುವುದಂತೂ ಸತ್ಯ. ಇವೆಲ್ಲದರೊಂದಿಗೆ ರಾಹುಲ್ ಗಾಂಧಿ ಜಿ೨೩ ಪಡೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ದೊಡ್ಡ ಕುತೂಹಲ. 

ಒಟ್ಟಿನಲ್ಲಿ, ಕಾಂಗ್ರೆಸ್ ನ ಸ್ಥಿತಿಯಂತೂ ಬಿಕ್ಕಟ್ಟಿನಲ್ಲಿದೆ ಎನ್ನುವುದಂತೂ ಸತ್ಯ. ಪಕ್ಷವನ್ನು ಸಮರ್ಥವಾಗಿ ಕಟ್ಟಿಕೊಳ್ಳದೇ ಇದ್ದಲ್ಲಿ ಬಹುಶಃ ಕಾಂಗ್ರೆಸ್ ಊಹಿಸಿಕೊಳ್ಳಲಾರದ ಫಲಿತಾಂಶವನ್ನು ಕಾಣಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ನ ಸದ್ಯದ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇನ್ನಾದರೂ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಅಂತಿಮ ಚುಕ್ಕಿ ಇಟ್ಟು ಪಕ್ಷದ ಹಿರಿಯರನ್ನು, ಅನುಭವಿ ನಾಯಕರನ್ನು, ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿ ಅಧಿಕಾರ ಹಿಡಿಯುವ ಭ್ರಮೆಯಿಂದ ಹೊರಬಂದು ಪಕ್ಷವನ್ನು ಸದೃಢಗೊಳಿಸುವತ್ತ ಕಾಂಗ್ರೆಸ್ ಕೆಲಸ ಮಾಡಿಲ್ಲವಾದಲ್ಲಿ ಕಾಂಗ್ರೆಸ್ ಒಂದು ಸಾಮಾನ್ಯ ಪ್ರಾದೇಶಿಕ ಪಕ್ಷದಂತೆ ಅಲ್ಲೋ ಇಲ್ಲೋ ಒಂದೆರಡು ಕಡೆಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳಬಹುದೇನೋ ಹೊರತಾಗಿ ಹೆಚ್ಚಲ್ಲ. ರಾಜಕೀಯದ ಬೆಳವಣಿಗೆಯನ್ನು ಯಾರಿಗೂ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ಎಲ್ಲದರ ನಡುವೆ ಕಾಂಗ್ರೆಸ್ ತನ್ನೊಳಗೇ ಇರುವ ಮೂಟೆ ರಾಶಿಯ ಸಮಸ್ಯೆಗಳನ್ನು ಹೇಗೆ ಸರಿಪಡಿಸಿಕೊಳ್ಳುತ್ತದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿನ ಸದ್ಯದ ಕುತೂಹಲವಾಗಿದೆ.

-ಶ್ರೀರಾಜ್ ವಕ್ವಾಡಿ