ಇಸ್ರೇಲ್ ಸೈಬರಾಯುಧ | ಅನುಮಾನ ಹುಟ್ಟಿಸುತ್ತಿರುವ ಮೋದಿ ‘ಟ್ವೀಟ್ ಕೃತಜ್ಞತೆ’..!
ಕೇಂದ್ರದ ಹಾಲಿ ಸರ್ಕಾರಕ್ಕೆ ಬೆಂಬಿಡದೆ ಕಾಡುತ್ತಿರುವ ಹಲವು ಸಂಕಷ್ಟಗಳಲ್ಲಿ ಪೆಗಾಸಸ್ ಬೇಹುಗಾರಿಕೆಯ ಪೆಡಂಭೂತವೂ ಒಂದು. ಹೌದು, ಕಳೆದ ಎರಡು ಮೂರು ತಿಂಗಳುಗಳ ಹಿಂದೆ ದೇಶದ ಪ್ರಮುಖ ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು ಹಾಗೂ ಹಲವು ಇತರೆ ಪ್ರಮುಖ ಮುನ್ನೂರಕ್ಕೂ ಅಧಿಕ ಮಂದಿಯ ದೂರವಾಣಿಯ ಸಂಖ್ಯೆಗಳ ಮೇಲೆ ಬೇಹುಗಾರಿಕೆಯನ್ನು ಮಾಡಲಾಗಿದೆ ಎಂಬ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯ ವರದಿಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಸತ್ ಮುಂಗಾರು ಅಧಿವೇಶನ ಆಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಕೇಂದ್ರ ಸರ್ಕಾರ ಇಸ್ರೇಲ್ ನಿಂದ ಇದನ್ನು ಖರೀದಿಸಿ ಬೇಹುಗಾರಿಕೆ ನಡೆಸಿದೆ ಎಂಬ ಆರೋಪವನ್ನು ಮಾಡಿದ್ದವು. ಅಧಿವೇಶನದ ಉದ್ದಕ್ಕೂ ವಿಪಕ್ಷಗಳು ಈ ಬಗ್ಗೆ ಪ್ರತಿಭಟನೆ ಮಾಡಿ ಬಲವಾದ ವಿರೋಧವನ್ನು ವ್ಯಕ್ತ ಪಡಸಿದೆಯಾದರೂ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಪ್ರತಿಕ್ರಿಯಿಸದೇ, ಮುಖ್ಯವಾಗಿ ಅಧಿವೇಶನದಲ್ಲಿ ಏನೆಲ್ಲಾ ಚರ್ಚೆಯಾಗಬೇಕಿತ್ತೋ ಅದನ್ನು ಹೊರತಾಗಿ ಉಳಿದ್ದನ್ನೆಲ್ಲಾ ಚರ್ಚೆ ಮಾಡಿ ಮುಗಿಸಿತ್ತು. ವಿಪಕ್ಷಗಳ ನಿರಂತರ ವಿರೋಧವಿದ್ದರೂ ಪ್ರಧಾನ ಮಂತ್ರಿಯಾಗಲಿ ಅಥವಾ ಕೇಂದ್ರದ ಗೃಹ ಮಂತ್ರಿಗಳಾಗಲಿ ಯಾವುದೇ ಪ್ರತಿಕ್ರಿಯೆಯನ್ನೂ ಈ ಬಗ್ಗೆ ನೀಡದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಆದರೇ, ಈಗ ಸುಪ್ರೀಂ ಕೋರ್ಟ್ ಈ ಬಗ್ಗೆ ತನಿಖೆ ಮಾಡುವ ಉದ್ದೇಶದಿಂದ ಸಮಿತಿಯನ್ನು ರಚಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ ಎನ್ನುವುದಂತೂ ಸುಳ್ಳಲ್ಲ.
ಸರ್ಕಾರಗಳಿಗೆ ಅಲ್ಲದೇ ಬೇರೆ ಯಾರಿಗೂ ಸ್ಪೈವೇರ್ ಗಳ ಮಾರಾಟಕ್ಕೆ ಇಸ್ರೇಲ್ ಸರ್ಕಾರ ಅನುಮತಿ ನೀಡುದಿಲ್ಲ. ರಫ್ತಿಗೆ ಸರ್ಕಾರದ ಅನುಮತಿ ಬೇಕೆಬೇಕು. ಸರ್ಕಾರೇತರರಿಗೆ ಅಥವಾ ಸರ್ಕಾರೇತರ ಯಾವುದೇ ಸಂಸ್ಥೆಗಳಿಗೆ ಇಸ್ರೇಲ್ ಸರ್ಕಾರ ಇದನ್ನು ರಫ್ತು ಮಾಡುದಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿರುವುದು ಈಗ ಪ್ರಧಾನಿ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಅನುಮಾನ ಹುಟ್ಟಿಸಿಹಾಕಿದೆ. ಇನ್ನು, ದೇಶದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ವಿರೋಧಕ್ಕೆ ಗ್ರಾಸವಾಗಿದ್ದ ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ವಿ ರವೀಂದ್ರನ್ ನೇತೃತ್ವದ ಸಮಿತಿಯನ್ನು ರಚಿಸಿದ ಬೆನ್ನಿಗೆ ಪತ್ರಿಕಾಗೋಷ್ಟಿಯಲ್ಲಿ ‘ಪೆಗಾಸಸ್ ಸ್ಪೈವೇರ್ ನನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ ಮತ್ತು ಈ ಪೆಗಾಸಸ್ ಸ್ಪೈವೇರ್ ಮಾಲಕತ್ವ ಹೊಂದಿರುವ ಎನ್ ಎಸ್ ಒ ಸಂಸ್ಥೆಯು ಈ ಸ್ಪೈವೇರ್ ನನ್ನು ಸರ್ಕಾರೇತರರಿಗೆ ಮಾರಾಟ ಮಾಡುವುದಿಲ್ಲ’ ಎಂದು ಭಾರತದಲ್ಲಿ ಇತ್ತೀಚೆಗಷ್ಟೇ ನೇಮಕಗೊಂಡಿರುವ ಇಸ್ರೇಲ್ ನ ರಾಯಭಾರಿ ನೌರ್ ಗಿಲೋನ್ ಹೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಇನ್ನು, ಪತ್ರಿಕಾಗೋಷ್ಟಿಯಲ್ಲಿ.. ಸ್ಪೈವೇರ್ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಸರ್ಕಾರವನ್ನು ಭಾರತ ಸರ್ಕಾರ ಸಂಪರ್ಕ ಮಾಡಿದೆಯೇ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಗಿಲೋನ್, ಎನ್ ಎಸ್ ಒ ಒಂದು ಖಾಸಗಿ ಸಂಸ್ಥೆ. ಎನ್ ಎಸ್ ಒ ಅಥವಾ ಅಂತಹ ಯಾವುದೇ ಸಂಸ್ಥೆಗಳು ಸ್ಪೈವೇರ್ ಗಳನ್ನು ರಫ್ತು ಮಾಡುವುದಾದರೇ ಇಸ್ರೇಲ್ ಸರ್ಕಾರದ ರಫ್ತು ಪರವಾನಿಗೆಯನ್ನು ಪಡೆಯುವುದ ಅಗತ್ಯ. ಸರ್ಕಾರಗಳಿಗೆ ಮಾತ್ರ ರಫ್ತು ಮಾಡುವುದಾದರೇ ಇಸ್ರೇಲ್ ಸರ್ಕಾರ ಅನುಮತಿಸುತ್ತದೆ ಎಂದಷ್ಟೇ ಹೇಳಿರುವುದು ಕೂಡ ತನಿಖೆಗೆ ಒಂದು ವಸ್ತುವಾಗಲಿದೆ.
ಕಳೆದ ಜೂನ್ ೧೪. ೨೦೨೧ ರಂದು ಇಸ್ರೇಲ್ ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನ್ನೆಟ್ ಆಯ್ಕೆಯಾದ ಸಂದರ್ಭದಲ್ಲಿ ಪ್ರಧಾನಿ ಮೋದಿ, ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಭಾರತ ಹಾಗೂ ಇಸ್ರೇಲ್ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲು ಇಸ್ರೇಲ್ ನ ನೂತನ ಪ್ರಧಾನಿ ನಫ್ತಾಲಿಯವರನ್ನು ಭೇಟಿಯಾಗಲು ಬಯಸುತ್ತೇನೆ. ಮುಂದಿನ ವರ್ಷ ರಾಜತಾಂತ್ರಿಕ ಸಂಬಂಧಗಳ ಉನ್ನತೀಕರಣದ ೩೦ ವರ್ಷಗಳನ್ನು ಆಚರಿಸುತ್ತಿದಂತೆ, ನಿಮ್ಮನ್ನು ಭೇಟಿ ಮಾಡಲು ಮತ್ತು ‘ನಮ್ಮ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಗಾಢಗೊಳಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿರುವುದು ಮಾತ್ರವಲ್ಲದೇ, ಇದೇ ಸಂದರ್ಭದಲ್ಲಿ ಇಸ್ರೇಲ್ ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೂ “ಭಾರತ ಹಾಗೂ ಇಸ್ರೇಲ್ ಕಾರ್ಯತಂತ್ರದ ಸಹಭಾಗಿತ್ವಕೆ ಕೃತಜ್ಞತೆ. ಭಾರತ ಹಾಗೂ ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ನಿಮ್ಮ ನಾಯಕತ್ವ ಹಾಗೂ ವೈಯಕ್ತಿಕ ಗಮನಕ್ಕೆ ಕೃತಜ್ಞತೆ ತಿಳಿಸುತ್ತೇನೆ” ಎಂದು ಯಾರಿಗೂ ಇಷ್ಟೇಲ್ಲಾ ಕೃತಜ್ಞತೆ ತಿಳಿಸದ ಪ್ರಧಾನಿ ನರೇಂದ್ರ ಮೋದಿ ಅವರ ಈ ಎರಡೆರಡು “ಟ್ವೀಟ್ ಕೃತಜ್ಞತೆ” ಈಗ ಪೆಗಾಸಸ್ ಗೆ ಸಂಬಂಧಿಸಿದಂತೆ ಅನುಮಾನ ಮೂಡಿಸುತ್ತಿದೆ. ಇನ್ನು, ಇಸ್ರೇಲ್ ನ ನೂತನ ಪ್ರಧಾನಿ ನಫ್ತಾನಿ ಬಲಪಂಥೀಯ ಪಕ್ಷ ಯಾಮಿನಿ ಪಾರ್ಟಿಯ ಮುಖಂಡ ಎನ್ನುವುದು ಈ ಬಗ್ಗೆ ಮತ್ತಷ್ಟು ಕುತುಹೂಲದೊಂದಿಗೆ ಸಂಶಯಾಸ್ಪದವಾಗಿದೆ. ಮಾತ್ರವಲ್ಲದೇ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಸ್ರೇಲ್ ಸರ್ಕಾರದೊಂದಿಗೆ ರಾಜಕೀಯ ಆಂತರಿಕ ಲಾಭಕ್ಕಾಗಿ ಪೆಗಾಸಸ್ ಸ್ಪೈವೇರ್ ವಿಚಾರವಾಗಿ ಸಂಪರ್ಕ ಮಾಡಿರಬಹುದು ಎನ್ನುವುದನ್ನೂ ಕೂಡ ಅಲ್ಲಗಳೆಯುವಂತಿಲ್ಲ.
ಇಲ್ಲಾ ತನಿಖೆಯಾಗಲೇ ಬೇಕೆಂದು ಹೇಳ್ತು ಸುಪ್ರೀಂ : ವಿರೋಧ ಪಕ್ಷಗಳ ವಿರೋಧವನ್ನು ಹಾಗೂ ತನಿಖೆಯ ಮನವಿಯ ಅರ್ಜಿಯನ್ನು ವಿಚಾರಣೆ ಮಾಡಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಸರ್ಕಾರದ ರಾಷ್ಟ್ರೀಯ ಭದ್ರತೆಯ ನೆಪಕ್ಕೆ ಎಲ್ಲಾ ಸಂದರ್ಭದಲ್ಲಿಯೂ ಬಾಯಿ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಿಲ್ಲವೆಂದು ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠ ಖಡಕ್ ವಾರ್ನ್ ಮಾಡಿದ್ದಲ್ಲದೇ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರತಿ ಬಾರಿ ವಿನಾಯಿತಿ ನೀಡುವುದಕ್ಕೆ ಸಾಧ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನೆಡೆಯಲೇ ಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಇನ್ನು, ಇತ್ತೀಚೆಗೆ ಕೋವಿಡ್ ನಿರ್ವಹಣೆ ಸೇರಿ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಖಡಕ್ ವಾರ್ನ್ ಮಾಡುತ್ತಿರುವುದು ಮಾತ್ರವಲ್ಲದೇ, ಹಲವು ಪ್ರಕರಣಗಳಿಗೆ ತನಿಖೆ ಸಲುವಾಗಿ ಸಮಿತಿ ರಚಿಸುತ್ತಿರುವುದು ಎನ್ ವಿ. ರಮಣ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೇಲೆ ಆದ ಮಹತ್ತರ ಬೆಳವಣಿಗೆಗಳೇ ಎಂದು ಹೇಳಬಹದಾಗಿದ್ದು, ಇದು ಕಳೆದ ಕೆಲವು ವರ್ಷಗಳಿಂದೀಚೆಗೆ ಜನರಿಗೆ ಸುಪ್ರೀಂ ಕೋರ್ಟ್ ಮೇಲೆ ಇದ್ದ ಅಪನಂಬಿಕೆಯನ್ನು ಕೂಡ ಸ್ವಲ್ಪ ಮಟ್ಟಿಗೆ ತೆಗೆದುಹಾಕಿದೆ ಎನ್ನಬಹುದಾಗಿದೆ.
ಪೆಗಾಸಸ್ : ಸುಪ್ರೀಂ ಕೋರ್ಟ್ ಏನ್ ಹೇಳಿದೆ..? : ವಿಚಾರಣೆಯ ವೇಳೆ ಕೇಂದ್ರ ಸರ್ಕಾರವ ವಿರುದ್ಧ ಕಿಡಿ ಕಾರಿದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಭದ್ರತೆಯ ವಿಚಾರಕ್ಕಾಗಿ ರಹಸ್ಯವಾಗಿಯೇ ಇರಬೇಕು ಎಂಬ ವಿಚಾರವನ್ನು ಕೇಂದ್ರ ಸರ್ಕಾರ ಸಾಬೀತು ಪಡಿಸಬೇಕು ಎಂದು ಹೇಳಿದ್ದಲ್ಲದೇ, ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಗೂಢಚರ್ಯೆಯಂತಹ ಬೇಹುಗಾರಿಕೆಯನ್ನು ಮಾಡುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ದೇಶದ ಭದ್ರತೆಯ ವಿಚಾರದ ನೇಪ ಒಡ್ಡಿದ ಮಾತ್ರಕ್ಕೆ ಪ್ರತಿ ಬಾರಿ ವಿನಾಯಿತಿ ನೀಡಲು ಅಸಾಧ್ಯ. ವೈಯಕ್ತಿಕ ಗೌಪ್ಯತೆಯನ್ನಯ ಉಲ್ಲಂಘಿಸಿ ಒಬ್ಬ ವ್ಯಕ್ತಿಯ ಮೇಲೆ ಗೂಢಚರ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ. ಸೂಕ್ತ ಭದ್ರತೆಯ ನೆಪ ಹೇಳಿ ಸುಮ್ಮನೆ ಸರ್ಕಾರ ಕೂರಲಾಗದು, ಅಂತಹ ಅಂಶಗಳನ್ನು ಅಂಶಗಳನ್ನು ಮುಂದಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಖಡಕ್ ಆಗಿ ಸುಪ್ರೀಂ ಕೋರ್ಟ್ ಗೆ ಆದೇಶಿಸಿರುವುದು ಮೋದಿ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.
ಇನ್ನು, ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಇರುವ ಸಮಿತಿಯನ್ನು ರಚಿಸಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ವಿ ರವೀಂದ್ರನ್ ಉಸ್ತುವಾರಿಯಲ್ಲಿ ಮೂವರು ಇರುವ ಸಮಿತಿಯಲ್ಲಿ ಗುಜರಾತ್ ನ ರಾಷ್ಟ್ರೀಯ ವಿಧಿ ವಿಜ್ಞಾನ ವಿವಿಯ ಮುಖ್ಯಸ್ಥ ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠಂ ಸ್ಕೂಲ್ ಆಫ್ ಎಂಜಿನಿಯರಿಂಗ್ ಪ್ರೊಫೆಸರ್ ಹಾಗೂ ಬಾಂಬೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೀನಿಯರ್ ಪ್ರೊಫೇಸರ್ ಅಶ್ವಿನ್ ಅನಿಲ್ ಗುಮಸ್ಥೆ ಇದ್ದಾರೆ. ಈ ಮೂವರ ಸಮಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರಿಗೆ ವರದಿ ಸಲ್ಲಿಸಲಿದೆ.
ಕಾಂಗ್ರೆಸ್ ನದ್ದು ಏನ್ ವಾದ..? : ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಪಕ್ಷಗಳ ಯಾವುದೇ ವಾದಕ್ಕೂ ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ ಪರೋಕ್ಷವಾಗಿ ಇದು ಪ್ರತಿಪಕ್ಷಗಳ ರಾಜಕೀಯ ಕುತಂತ್ರ ಹೇಳುತ್ತಿದೆ. ಇತ್ತ ಕಾಂಗ್ರೆಸ್ ಕೂಡ ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರೋಧ ಪಕ್ಷಗಳ ಪ್ರಭಾವಿ ನಾಯಕರ ವಿರುದ್ಧವಾಗಿ ಈ ಬೇಹುಗಾರಿಕೆಯನ್ನು ಪ್ರಯೋಗಿಸಲಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಗೂಢಚರ್ಯೆ ಮಾಡುವ ಅಧಿಕಾರ ಸರ್ಕಾರಕ್ಕೆ ನೀಡಿದ್ದು ಯಾರು..? ಯರ್ಯಾರ ವಿರುದ್ಧವಾಗಿ ಪೆಗಾಸಸ್ ಬೇಹುಗಾರಿಕೆಯನ್ನು ಪ್ರಯೋಗಿಸಲಾಗಿದೆ..? ಬೇರೆ ದೇಶಗಳು ಭಾರತೀಯರಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಂಡಿದ್ದೀರಿ..? ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕೇಳಿತ್ತಾದರೂ ಕೇಂದ್ರ ಸರ್ಕಾರ ಉತ್ತರ ನೀಡಿದ್ದಿರಲಿಲ್ಲ, ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಆರೋಪವನ್ನು ನಿರ್ಲಕ್ಷಿಸಿತ್ತು. ಸಂಸತ್ ಅಧಿವೇಶನದುದ್ದಕ್ಕೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಭಟನೆ ಮಾಡಿ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೆ ಆಗ್ರಹಿಸಿತ್ತಾದರೂ, ಬಿಜೆಪಿ ಸರ್ಕಾರ ಅದಕ್ಕೆ ಒಪ್ಪಿರಲಿಲ್ಲ. ಸದ್ಯ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿ ರಚನೆ ಮಾಡಿದ್ದು ಕಾಂಗ್ರೆಸ್ ವಾದಕ್ಕೆ ಬೆಂಬಲ ನೀಡಿದಂತಾಗಿದೆ.
ಒಟ್ಟಿನಲ್ಲಿ, ಪೆಗಾಸಸ್ ಪ್ರಕರಣದಲ್ಲಿ ಕಾನೂನು ಎತ್ತಿ ಹಿಡಿಯುವುದೇ ತಮ್ಮ ಉದ್ದೇಶ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದ್ದು, ಮಾತ್ರವಲ್ಲದೇ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಸಮಿತಿ ರಚಿಸಿರುವ ಉದ್ದೇಶವೇ ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯುವುದೇ ಆಗಿದೆ ಎಂದು ಹೇಳಿರುವುದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿರುವುದಂತೂ ಸತ್ಯ. ಕೇಂದ್ರ ಸರ್ಕಾರದ ಸಮರ್ಥನೆ ಹಾಗೂ ಪ್ರತಿ ಪಕ್ಷಗಳ ಆರೋಪಗಳ ಆಚೆಗೆ ಸಮಿತಿ ಯಾವ ಉತ್ತರವನ್ನು ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಿದೆ ಎನ್ನುವುದರ ಮೇಲೆ ಸದ್ಯ ಕುತೂಹಲ ಮೂಡಿಸಿದೆ.
-ಶ್ರೀರಾಜ್ ವಕ್ವಾಡಿ