Thursday, May 28, 2026

ಸಿದ್ದರಾಮಯ್ಯರ 'ಅಹಿಂದ'ವನ್ನು 'ವೈಚಾರಿಕ ಮಾದರಿ'ಯಾಗಿ ಬಳಸಿಕೊಳ್ಳುತ್ತದೆಯೇ ಕಾಂಗ್ರೆಸ್ !?


ಬಲಪಂಥೀಯರ 'ಕೋಮು ಧ್ರುವೀಕರಣ'ದ ರಾಜಕಾರಣಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯನವರ 'ಆರ್ಥಿಕ ಮತ್ತು ಸಾಮಾಜಿಕ ನ್ಯಾಯ'ದ ಮಾದರಿಯನ್ನು ದೇಶಾದ್ಯಂತ ಚರ್ಚಿಸುವಂತೆ ಮಾಡುವ ಇಂಗಿತವನ್ನು ಯಥೇಚ್ಛವಾಗಿ ಕಾಂಗ್ರೆಸ್ ತೋರಿಸಬೇಕಿದೆ. ಈ ಹಿಂದೆ ತಮಿಳುನಾಡಿನ ಕುಮಾರಸ್ವಾಮಿ ಕಾಮರಾಜ್ ಅವರನ್ನು, ಅವರ ಕಾರ್ಯತಂತ್ರವನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಹೇಗೆ ಬಳಸಿಕೊಂಡಿದ್ದರೋ, ಹಾಗೇ ಇಂದು ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯರ ಅಹಿಂದ ಸಿದ್ಧಾಂತವನ್ನು ಕಾಂಗ್ರೆಸ್ ಹೈಕಮಾಂಡ್ ಬಳಸಿಕೊಳ್ಳಬೇಕಿದೆ. ರಾಹುಲ್ ಗಾಂಧಿ ದೇಶಾದ್ಯಂತ ಮಾಡುತ್ತಿರುವ ಸಾಮಾಜಿಕ ನ್ಯಾಯದ ಹೋರಾಟವನ್ನು ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಗೆ ತಂದು ತೋರಿಸಿದವರು ಸಿದ್ದರಾಮಯ್ಯ. ಆದರೇ, ಸಿದ್ದರಾಮಯ್ಯನವರು ಶುದ್ಧ ಪ್ರಾದೇಶಿಕ ರಾಜಕಾರಣದಲ್ಲಿ ಬೆಳೆದವರು. ಉತ್ತರ ಭಾರತದ ಹಿಂದಿ ಪಟ್ಟಿಯ ರಾಜಕಾರಣಕ್ಕೆ ಅವರ ಭಾಷೆಯ ಮಿತಿ ಮತ್ತು ಪ್ರಾದೇಶಿಕ ಶೈಲಿ ಎಷ್ಟು ಒಗ್ಗಿಕೊಳ್ಳುತ್ತದೆ ಎಂಬ ಪ್ರಶ್ನೆಯಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಮತ್ತು ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸ್ಪಂದಿಸಿದ ರೀತಿ, ಕೇವಲ ಒಂದು ಪಕ್ಷದ ಆಂತರಿಕ ನಿರ್ಧಾರವಲ್ಲ. ಇದು ಭಾರತೀಯ ರಾಜಕೀಯದ ಸದ್ಯದ ಸನ್ನಿವೇಶದಲ್ಲಿ ವೈಚಾರಿಕ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ತಿರುವು. ಯಾವುದೇ ರೀತಿಯ ರಾಜಕೀಯ ಒತ್ತಡಕ್ಕೆ ಮಣಿಯದೇ, ಸಿದ್ದರಾಮಯ್ಯ ಅವರನ್ನು ಮತ್ತು ಸಿದ್ದರಾಮಯ್ಯ ಅವರ ಸೈದ್ಧಾಂತಿಕ ನಿಲುವನ್ನು ಕಾಂಗ್ರೆಸ್ ನಡೆಸಿಕೊಂಡಿದೆ. 

ಸಿದ್ದರಾಮಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಕರ್ನಾಟಕದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ (ಅಹಿಂದ) ವರ್ಗಗಳ ಧ್ವನಿಯಾಗಿದ್ದವರು. ದಶಕಗಳ ಕಾಲ ಸಮಾಜವಾದಿ ಮತ್ತು ಪ್ರಗತಿಪರ ಚಳವಳಿಗಳ ಹಿನ್ನೆಲೆಯಿಂದ ಬಂದ ಅವರು, ಬದಲಾದ ರಾಜಕೀಯ ಸಮೀಕರಣಗಳ ಕಾಲಘಟ್ಟದಲ್ಲೂ ಜನಕಲ್ಯಾಣ (Welfare) ಯೋಜನೆಗಳ ಮೂಲಕ ಬಡವರ ಪರ ನಿಲುವು ತಳೆದವರು. ಸಾಮಾನ್ಯವಾಗಿ ಅಧಿಕಾರ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಗಳು ಕಹಿ ಮತ್ತು ಸಂಘರ್ಷದಿಂದ ಕೂಡಿರುತ್ತವೆ. ಆದರೆ, ಕಾಂಗ್ರೆಸ್ ಸಿದ್ದರಾಮಯ್ಯನವರನ್ನು ಮತ್ತು ಅವರ 'ಅಹಿಂದ' ಸಿದ್ಧಾಂತವನ್ನು ಗೌರವಯುತವಾಗಿ ನಡೆಸಿಕೊಂಡಿರುವುದು ಶ್ಲಾಘನೀಯ. ಇದು ಬಲಪಂಥೀಯ ಶಕ್ತಿಗಳು ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದ ಹೊತ್ತಿನಲ್ಲಿ, ಅವರ ಸಿದ್ಧಾಂತವನ್ನು ಪಕ್ಷ ಕೈಬಿಟ್ಟಿಲ್ಲ ಎಂಬ ಸ್ಪಷ್ಟ ಸಂದೇಶವನ್ನು  ರವಾನಿಸಿದಂತಿದೆ. 

'ಅಹಿಂದ' ಚಳವಳಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ನಾಯಕತ್ವ :

ಸಿದ್ದರಾಮಯ್ಯನವರ ಶಕ್ತಿ ಇರುವುದು ಅಧಿಕಾರದಲ್ಲಲ್ಲ, ಬದಲಿಗೆ ತಳಸಮುದಾಯಗಳೊಂದಿಗಿನ ಅವರ ನೇರ ಒಡನಾಟದಲ್ಲಿ. ಅಧಿಕಾರದ ಮಿತಿಯನ್ನು ಮೀರಿ ಈ ಸಂದರ್ಭದಲ್ಲಿ, ಅವರು ಮತ್ತೊಮ್ಮೆ ಜನಸಾಮಾನ್ಯರ ಧ್ವನಿಯಾಗಿ ನಿಲ್ಲಬಹುದು. ರಾಜಕಾರಣದಲ್ಲಿ ನಿರತನಾಗಿರಲಿದ್ದೇನೆ ಎನ್ನುವುದನ್ನು ಖುದ್ದಾಗಿ ಅವರೇ ಹೇಳಿದ್ದಾರೆ. 2028ರ ಹೊತ್ತಿಗೆ ರಾಜಕೀಯಕ್ಕೆ ಬಂದು 50 ವರ್ಷಗಳನ್ನು ಪೂರೈಸುವ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕಾಂಗ್ರೆಸ್ ಗೆ ಗೆಲ್ಲುವ ಶಕ್ತಿಯಾಗಿಯೇ ಉಳಿಯಬಹುದು. ಸದ್ಯಕ್ಕಂತೂ ರಾಜ್ಯಸಭೆಗೆ ಹೋಗುವ ಮನಸ್ಸಿಲ್ಲ ಅನ್ನುವುದನ್ನು ಸ್ವತಃ ಅವರೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪರೋಕ್ಷವಾಗಿ 2028ರ‌ ಚುನಾವಣೆಗೂ ತಾವು ಕೆಲಸ ಮಾಡುವುದಾಗಿ ಅವರು ಹೇಳಿದಂತಿದೆ. ಮತ್ತು ಅವರನ್ನು ಮುಂದಿನ ಚುನಾವಣೆಗೂ ಬಳಸಿಕೊಳ್ಳುವ ಇರಾದೆಯನ್ನು ಕಾಂಗ್ರೆಸ್ ಹೊಂದಿದಂತಿದೆ. 

ಅಧಿಕಾರದಲ್ಲಿ ಇಲ್ಲದಿದ್ದರೂ ತಳವರ್ಗದ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುವ ಸಾಂಸ್ಕೃತಿಕ ಮತ್ತು ನೈತಿಕ ನಾಯಕರಾಗಿ (Ideological Mentor) ಅವರ ವರ್ಚಸ್ಸನ್ನು ಕಾಂಗ್ರೆಸ್ ಬೆಳೆಸಬಹುದು. ಅಥವಾ ಬೆಳೆಸಬೇಕಿದೆ. 

ವೈಚಾರಿಕ ಅಸ್ತ್ರವಾಗಿ 'ಕರ್ನಾಟಕ ಮಾದರಿ' ಮತ್ತು ಸಿದ್ದರಾಮಯ್ಯ ಸೈದ್ಧಾಂತಿಕ ನಿಲುವು : 

ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಜನಕಲ್ಯಾಣ ಯೋಜನೆಗಳು (ಗ್ಯಾರಂಟಿಗಳು) ಮತ್ತು ಸಾಮಾಜಿಕ ನ್ಯಾಯದ ನೀತಿಗಳನ್ನು ಒಂದು ಸಿದ್ಧಾಂತವಾಗಿ ಕಾಂಗ್ರೆಸ್ ಚೆನ್ನಾಗಿ ಬಳಸಿಕೊಳ್ಳಬೇಕಿದೆ‌. 

ಬಲಪಂಥೀಯರ 'ಕೋಮು ಧ್ರುವೀಕರಣ'ದ ರಾಜಕಾರಣಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯನವರ 'ಆರ್ಥಿಕ ಮತ್ತು ಸಾಮಾಜಿಕ ನ್ಯಾಯ'ದ ಮಾದರಿಯನ್ನು ದೇಶಾದ್ಯಂತ ಚರ್ಚಿಸುವಂತೆ ಮಾಡುವ ಇಂಗಿತವನ್ನು ಯಥೇಚ್ಛವಾಗಿ ಕಾಂಗ್ರೆಸ್ ತೋರಿಸಬೇಕಿದೆ. ಸಿದ್ದರಾಮಯ್ಯನವರ ವರ್ಚಸ್ಸು ಕೇವಲ ಅವರ ವ್ಯಕ್ತಿತ್ವಕ್ಕೆ ಸೀಮಿತವಾಗದೆ, ಅವರ ನಂತರದ ತಲೆಮಾರಿನ ಪ್ರಗತಿಪರ ನಾಯಕರನ್ನು ಬೆಳೆಸುವಲ್ಲಿ ಕಾಂಗ್ರೆಸ್ ಬಳಸಿಕೊಳ್ಳಬೇಕು. ಈ ಹಿಂದೆ ತಮಿಳುನಾಡಿನ ಕುಮಾರಸ್ವಾಮಿ ಕಾಮರಾಜ್ ಅವರನ್ನು, ಅವರ ಕಾರ್ಯತಂತ್ರವನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಹೇಗೆ ಬಳಸಿಕೊಂಡಿದ್ದರೋ, ಹಾಗೇ ಇಂದು ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯರ ಅಹಿಂದ ಸಿದ್ಧಾಂತವನ್ನು ಕಾಂಗ್ರೆಸ್ ಹೈಕಮಾಂಡ್ ಬಳಸಿಕೊಳ್ಳಬೇಕು. ಅದು ಇಡೀ ದೇಶದಾದ್ಯಂತ ರಾಹುಲ್ ಗಾಂಧಿ ಮಾಡಲು ಹೊರಟಿರುವ ಅಹಿಂದ ಚಳವಳಿಗೂ ಪೂರಕವಾಗಿರಲಿದೆ ಮತ್ತು ಪಕ್ಷದ ಬಲವರ್ಧನೆಗೂ ಸಹಕಾರಿಯಾಗಿರಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಇನ್ನು, ಕಾಂಗ್ರೆಸ್ ಪಕ್ಷದ ಒಳಗಿರುವ ಮತ್ತು ಹೊರಗಿರುವ ಯುವ, ಸಮಾಜವಾದಿ ಮತ್ತು ಪ್ರಗತಿಪರ ಆಲೋಚನೆಗಳುಳ್ಳ ನಾಯಕರಿಗೆ ಸಿದ್ದರಾಮಯ್ಯನವರು ಬೆಂಬಲವಾಗಿ ನಿಲ್ಲಬೇಕು/ಕಾಂಗ್ರೆಸ್ ಸಿದ್ದರಾಮಯ್ಯರನ್ನು ಆ ರೀತಿಯಾಗಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಇದು ಅವರ ಸಿದ್ಧಾಂತಕ್ಕೆ ಸಾಂಸ್ಥಿಕ ರೂಪ ನೀಡುತ್ತದೆ ಮತ್ತು ಡಿಕೆಶಿ ರಾಜಕೀಯ ಚಾಣಾಕ್ಷತನದ ಜೊತೆಗೆ ಸಿದ್ದರಾಮಯ್ಯ ಸೈದ್ಧಾಂತಿಕ ಗಟ್ಟಿತನ ಒಂದಾದಾಗ ಕಾಂಗ್ರೆಸ್ ಪಕ್ಷದ ಸಂಘಟನೆಗೂ ಬಲ ಬರಲಿದೆ. 

ಒಕ್ಕೂಟ ವ್ಯವಸ್ಥೆಯ ಹೋರಾಟದ ಮುಂಚೂಣಿ ಮುಖವಾಗಿ ಸಿದ್ದರಾಮಯ್ಯ !? 

ನರೇಂದ್ರ ಮೋದಿ ಅವರ ರಾಜಕಾರಣ ಬಂಡವಾಳಶಾಹಿ ಸ್ನೇಹಿ ನೀತಿಗಳು ಮತ್ತು ಕಾರ್ಪೊರೇಟ್ ಕೇಂದ್ರೀಕೃತ ಬೆಳವಣಿಗೆಯನ್ನು (Neo-liberalism) ಆಧರಿಸಿದೆ. ಇದಕ್ಕೆ ತದ್ವಿರುದ್ಧವಾಗಿ ಸಿದ್ದರಾಮಯ್ಯನವರ ರಾಜಕಾರಣ ಸಮಾಜವಾದಿ ಹಿನ್ನೆಲೆಯುಳ್ಳದ್ದು. ಪ್ರಧಾನಿ ಮೋದಿಯನ್ನು ಅತ್ಯಂತ ಕಟುವಾಗಿ ಟೀಕಿಸಿದ ನಾಯಕರಲ್ಲಿ ಓರ್ವರು ಸಿದ್ದರಾಮಯ್ಯ. ಇಲ್ಲಿನ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಪ್ರಧಾನಿ ಮೋದಿ ಸಿದ್ದರಾಮಯ್ಯ ರಾಜಕೀಯ ವರ್ಚಸ್ಸಿನ ಎದುರು ನಿಂತು ಚುನಾವಣೆಗಾಗಿ ಪ್ರಚಾರ ಮಾಡಬೇಕಾದ ಪರಿಸ್ಥಿತಿ ಮೋದಿಗೆ ಬಂದಿತ್ತು. ಅದು ಸಿದ್ದರಾಮಯ್ಯ ಮತ್ತು ಅವರ ಸೈದ್ಧಾಂತಿಕ ಶಕ್ತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯನವರನ್ನು ವೈಯಕ್ತಿಕವಾಗಿ ಮತ್ತು ತೀವ್ರವಾಗಿ ವಿರೋಧಿಸಿದ್ದಕ್ಕೆ ಕಾರಣ, ಸಿದ್ದರಾಮಯ್ಯ ಕೇವಲ ಸೀಟು ಗೆಲ್ಲುವ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಬಲಪಂಥೀಯ ಸಿದ್ಧಾಂತದ ಹೆಡ್‌ಲೈಟ್‌ಗಳಿಗೆ ನೇರವಾಗಿ ಕಣ್ಣು ನೆಟ್ಟು ನಿಲ್ಲಬಲ್ಲ ವೈಚಾರಿಕ ಗಟ್ಟಿತನ ಹೊಂದಿದ್ದ ಪ್ರಬಲ ನಾಯಕರಾಗಿದ್ದರು. ಸಿದ್ದರಾಮಯ್ಯನವರ ನಿರ್ಗಮನದ ನಂತರವೂ ಅವರು ಬಿತ್ತಿದ ಈ ವೈಚಾರಿಕ ಹೋರಾಟವನ್ನು ಮುಂದುವರಿಸುವುದು ಕಾಂಗ್ರೆಸ್ ಮುಂದಿನ ಸವಾಲಾಗಿದೆ. ರಾಹುಲ್ ಗಾಂಧಿ ದೇಶ ಮಟ್ಟದಲ್ಲಿ ಆ ಪ್ರಯತ್ನವನ್ನು ಯಶಸ್ವಿಯಾಗಿ ಮಾಡುತ್ತಿದ್ದರೂ, ರಾಜ್ಯದಲ್ಲಿ ಸಿದ್ದರಾಮಯ್ಯರ ರಾಜೀನಾಮೆಯಿಂದ ಆ ಬಲ ಕುಂದಿದೆ. ಡಿಕೆಶಿ ಅಷ್ಟು ಬಲವಾಗಿ ಹೋರಾಡಬಲ್ಲರೇ ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ. 

ಇನ್ನು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಏಕಪಕ್ಷೀಯ ನೀತಿಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತಬಲ್ಲ ಪ್ರಾದೇಶಿಕ ನಾಯಕರ ಕೊರತೆ ಕಾಂಗ್ರೆಸ್ ಪಕ್ಷಕ್ಕೆ ಇದೆ.  ಸಿದ್ದರಾಮಯ್ಯನವರು ಈಗ ಯಾವುದೇ ಸಾಂವಿಧಾನಿಕ ಹುದ್ದೆಯ ಹಂಗಿಲ್ಲದೆ, ಮುಕ್ತವಾಗಿ ಒಕ್ಕೂಟ ವ್ಯವಸ್ಥೆಯ ರಕ್ಷಣೆಗಾಗಿ ಮತ್ತು ರಾಜ್ಯಗಳ ಸ್ವಾಯತ್ತತೆಗಾಗಿ ರಾಷ್ಟ್ರಮಟ್ಟದಲ್ಲಿ 'ಇಂಡಿಯಾ' (I.N.D.I.A) ಮೈತ್ರಿಕೂಟದ ಪ್ರಮುಖ ಪ್ರಭಾವಿ ಮುಖವಾಗಿ ಕೆಲಸ ಮಾಡಬಹುದು. ಅಥವಾ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮನವೊಲಿಸಿ ಬಿಜೆಪಿ ವಿರುದ್ಧದ ಹೋರಾಟದ ಮುಂಚೂಣಿ ಸಲಹೆಗಾರ ಮುಖವಾಗಿ ಮಾಡಬಹುದು. ಇದು ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯರ ಸೈದ್ಧಾಂತಿಕ ನಿಲುವನ್ನು ಕಾಂಗ್ರೆಸ್ ಗೆ ಬೇಕಾಗುವ ಹಾಗೆ ರಾಷ್ಟ್ರಮಟ್ಟದಲ್ಲಿ ವಿಸ್ತರಿಸಿದಂತೆಯೂ ಆಗುತ್ತದೆ. ಕಾಂಗ್ರೆಸ್ ರಾಜಕೀಯ ಹೋರಾಟಕ್ಕೆ ಬಲವೂ ತುಂಬಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ರಾಹುಲ್ ಗೆ ಸಿದ್ದರಾಮಯ್ಯ ಆನೆಬಲ !? 

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ನಡುವಿನ ಸಂಬಂಧ ಕೇವಲ ಹೈಕಮಾಂಡ್ ಮತ್ತು ಪ್ರಾದೇಶಿಕ ನಾಯಕನ ನಡುವಿನದ್ದಲ್ಲ. ಅದು ಪರಸ್ಪರ ವೈಚಾರಿಕ ಗೌರವದ ಸಂಕೇತವೂ ಹೌದು. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ತರಲು ಬಯಸುವುದರ ಹಿಂದೆ ದೊಡ್ಡದೊಂದು ಸಿದ್ಧಾಂತದ ಕಾರ್ಯತಂತ್ರವಿದೆ. 

ರಾಹುಲ್ ಗಾಂಧಿ ದೇಶಾದ್ಯಂತ ಮಾಡುತ್ತಿರುವ ಸೈದ್ಧಾಂತಿಕ ಹೋರಾಟವನ್ನು ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಗೆ ತಂದು ತೋರಿಸಿದವರು ಸಿದ್ದರಾಮಯ್ಯ. 

ರಾಹುಲ್ ಗಾಂಧಿಯವರಿಗೆ ತಮ್ಮ 'ಸಾಮಾಜಿಕ ನ್ಯಾಯ'ದ ಹೋರಾಟಕ್ಕೆ ರಾಷ್ಟ್ರಮಟ್ಟದಲ್ಲಿ ಒಬ್ಬ ಸಮರ್ಥ, ಅನುಭವಿ ಮತ್ತು ತಳಮಟ್ಟದ ಜನಬೆಂಬಲವಿರುವ ನಾಯಕನ ಅಗತ್ಯವಿದೆ. ಅದಕ್ಕೆ ಸಿದ್ದರಾಮಯ್ಯನವರಿಗಿಂತ ಸೂಕ್ತ ನಾಯಕ ಮತ್ತೊಬ್ಬರಿಲ್ಲ. ಹೀಗಾಗಿ, ರಾಹುಲ್ ಗಾಂಧಿ ಖಂಡಿತವಾಗಿಯೂ ಸಿದ್ದರಾಮಯ್ಯನವರನ್ನು ರಾಷ್ಟ್ರಮಟ್ಟದಲ್ಲಿ ಬಳಸಿಕೊಳ್ಳಬಹುದು. ಸಿದ್ದರಾಮಯ್ಯ ಅವರೂ ಕೂಡ ರಾಹುಲ್ ಗಾಂಧಿ ನಡೆಯನ್ನು ಮೆಚ್ಚಿಕೊಂಡವರು. ಹಾಗಾಗಿ ರಾಹುಲ್ ಖುದ್ದಾಗಿ ಸಿದ್ದರಾಮಯ್ಯರನ್ನು ಮನವೊಲಿಸಿದರೇ, ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದಲ್ಲಿ ಸಿದ್ದರಾಮಯ್ಯ ಪ್ರಬಲ ಮುಖವಾಗಿ ಬೆಳೆಯಬಹುದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಸಿದ್ದರಾಮಯ್ಯನವರು ದಿಲ್ಲಿಗೆ ಹೋಗಿ ಸಂಸದೀಯ ರಾಜಕಾರಣ ಮಾಡುವುದು ಅಥವಾ ಕೇಂದ್ರ ಮಂತ್ರಿಯಾಗುವುದು ಸದ್ಯದ ಪರಿಸ್ಥಿತಿಯಲ್ಲಿ ದೂರದ ಮಾತು ಎನಿಸಬಹುದು. ಆದರೆ, ಅದಕ್ಕಿಂತ ಪ್ರಮುಖವಾದ ಪಾತ್ರಗಳು ಅವರಿಗಾಗಿ ಕಾಯುತ್ತಿವೆ ಎನ್ನಿಸುತ್ತಿದೆ. ಇಂಡಿಯಾ ಮೈತ್ರಿಕೂಟದ ಸಮಾಜವಾದಿ ಮುಖವಾಗಿ, ರಾಷ್ಟ್ರೀಯ ನೀತಿ ನಿರೂಪಕನಾಗಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬೆಳೆಸಬಹುದು. 

ಆದರೇ, ಸಿದ್ದರಾಮಯ್ಯನವರು ಶುದ್ಧ ಪ್ರಾದೇಶಿಕ ರಾಜಕಾರಣದಲ್ಲಿ ಬೆಳೆದವರು. ಉತ್ತರ ಭಾರತದ ಹಿಂದಿ ಪಟ್ಟಿಯ ರಾಜಕಾರಣಕ್ಕೆ ಅವರ ಭಾಷೆಯ ಮಿತಿ ಮತ್ತು ಪ್ರಾದೇಶಿಕ ಶೈಲಿ ಎಷ್ಟು ಒಗ್ಗಿಕೊಳ್ಳುತ್ತದೆ ಎಂಬ ಪ್ರಶ್ನೆಯಿದೆ. ಇನ್ನು, ಸಿದ್ದರಾಮಯ್ಯನವರು ದಿಲ್ಲಿಗೆ ತೆರಳಿದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಒಳರಾಜಕಾರಣ ಮತ್ತು 'ಅಹಿಂದ' ಮತಬ್ಯಾಂಕ್ ಚದುರಿಹೋಗುವ ಆತಂಕ ಹೈಕಮಾಂಡ್‌ಗೆ ಸಹಜವಾಗಿಯೇ ಇರಲಿದೆ. 

ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರನ್ನು ದಿಲ್ಲಿಯ ಅಧಿಕಾರ ರಾಜಕಾರಣಕ್ಕೆ ತರುತ್ತಾರೋ ಇಲ್ಲವೋ, ಆದರೆ ರಾಷ್ಟ್ರೀಯ ವೈಚಾರಿಕ ರಾಜಕಾರಣದ ಮುಂಚೂಣಿಗೆ ತರುವ ಕೆಲಸವನ್ನು ಮಾಡಲೇಬೇಕಿದೆ. ಬಹುಶಃ ಅದನ್ನು ರಾಹುಲ್ ಮುಂದಿನ ದಿನಗಳಲ್ಲಿ ಮಾಡಬಹುದು ಎನ್ನುವ ನಿರೀಕ್ಷೆ ಅನೇಕ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. 

ಒಟ್ಟಿನಲ್ಲಿ, ಇತಿಹಾಸದಲ್ಲಿ ಜನಪ್ರಿಯ ನಾಯಕರು ಅಧಿಕಾರ ಕಳೆದುಕೊಂಡಾಗ ಮತ್ತಷ್ಟು ಶಕ್ತಿಶಾಲಿಯಾಗಿದ್ದಾರೆ. ಸಿದ್ದರಾಮಯ್ಯನವರ ವರ್ಚಸ್ಸು ಕೇವಲ 'ಮುಖ್ಯಮಂತ್ರಿ' ಎಂಬ ಹುದ್ದೆಗೆ ಸೀಮಿತವಾಗಿರಲಿಲ್ಲ. ಅದು ಅಹಿಂದ ಪರವಾದ ಆಲೋಚನೆಗೆ ಸಿಕ್ಕ ಗೌರವವಾಗಿತ್ತು. ಹಾಗಾಗಿ, ಅಧಿಕಾರದಿಂದ ಹೊರಬಂದ ನಂತರ ಅವರು ಜನಪರ ಚಳವಳಿಗಳ ಭಾಗವಾಗಿ ಉಳಿದರೆ/ಕಾಂಗ್ರೆಸ್ ಉಳಿಸುವಂತೆ ಮಾಡಿದರೆ ಅವರ ವರ್ಚಸ್ಸು ಕುಗ್ಗುವ ಬದಲು ಮತ್ತಷ್ಟು ಪ್ರಖರವಾಗುತ್ತದೆ. ಬಲಪಂಥೀಯ ವಿರೋಧಿ ರಾಜಕಾರಣಕ್ಕೆ ಇದುವೇ ದೊಡ್ಡ ಶಕ್ತಿಯಾಗಬಲ್ಲದು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

Wednesday, May 27, 2026

ಕಾಂಗ್ರೆಸ್ ಪಕ್ಷದ ಜಟಿಲ ಸವಾಲು ಮತ್ತು ಡಿಕೆಶಿ ಸಾರಥ್ಯ!?


2028ಕ್ಕೆ ಡಿಕೆಶಿ ನೇತೃತ್ವ ಕಾಂಗ್ರೆಸ್‌ಗೆ ಕೇವಲ ಚುನಾವಣಾ ಜಯದ ಸವಾಲಲ್ಲ, ಬದಲಿಗೆ ಸಮಾಜವಾದಿ ನೀತಿಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ‘ಬಲಪಂಥೀಯ ನೀತಿಗಳ ಮತ್ತೊಂದು ಮುಖ’ವಾಗಿ ಬದಲಾಗದಂತೆ ಪಕ್ಷದ ಮೂಲ ಸಿದ್ಧಾಂತವನ್ನು ಉಳಿಸಿಕೊಳ್ಳುವ ಕಡೆಯ ಸವಾಲಾಗಿದೆ. ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋದರೂ, ರಾಜ್ಯದಲ್ಲಿ ಅವರ ಬೆಂಬಲಿಗ ಶಾಸಕರು ಮತ್ತು ಮಂತ್ರಿಗಳನ್ನು ಯಾವುದೇ ತಾರತಮ್ಯವಿಲ್ಲದೆ ಮುನ್ನಡೆಸುವುದು ಡಿಕೆಶಿಗೆ ಅತ್ಯಂತ ಜಟಿಲ ಸವಾಲಾಗಿ ಪರಿಣಮಿಸಲಿದೆ.

ಒಂದು ನಿರ್ಗಮನ ಬಿಂದುವಿನ ಮೂಲಕ ಒಬ್ಬರು ಹೊರನಡೆಯಲೇ ಬೇಕು, ಒಂದು ಆಗಮನ ಬಿಂದುವಿನ ಮೂಲಕ ಇನ್ನೊಬ್ಬರು ಒಳಗೆ ಬರಲೇಬೇಕು. ಆದರೇ, ಈ ಬದಲಾವಣೆ ಕಾಂಗ್ರೆಸ್ ಪಕ್ಷದ ಆಂತರಿಕ ಸೈದ್ಧಾಂತಿಕ ರಾಜಕಾರಣದ ಪತನದ ಸ್ಪಷ್ಟ ಸೂಚನೆ ಎಂಬಂತೆ ಕಾಣಿಸುತ್ತಿರುವುದು ಇಲ್ಲಿ ಮುಖ್ಯಾಂಶ. 

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರಾಜ್ಯ ರಾಜಕಾರಣಕ್ಕೆ ಮಹತ್ವದ ಕೊಡುಗೆಯನ್ನು ಕೊಟ್ಟವರು. ಒಬ್ಬರು ಸೈದ್ಧಾಂತಿಕವಾಗಿ ಆದರೇ, ಇನ್ನೊಬ್ಬರು ಪಕ್ಷ, ಪಕ್ಷದ ನಿಷ್ಠೆಯ ಅಪರಿಮಿತ ಕೊಡುಗೆ ನೀಡಿದವರೇ ಆಗಿದ್ದಾರೆ. ಕಾಂಗ್ರೆಸ್ ಈವರೆಗೆ ಅನೇಕ ಏಳು ಬೀಳುಗಳನ್ನು ಕಂಡಿದೆ. ಕಾಲ ಬದಲಾದಂತೆ ಕಾಲಕ್ಕೆ ಹೊಂದಿಕೊಂಡು ಬಂದಿದೆ. ರಾಜಕೀಯ ಅನಿವಾರ್ಯತೆಯೂ, ಅಸ್ತಿತ್ವವೂ ಅದಕ್ಕೆ ಮೂಲ ಕಾರಣ. 

ಈ ನಡುವೆ ಕರ್ನಾಟಕದಲ್ಲಿ ಆಗುತ್ತಿರುವ ನಾಯಕತ್ವದ ಬದಲಾವಣೆ ಅಥವಾ ಅಧಿಕಾರ ಹಂಚಿಕೆಯ ಸೂತ್ರ ಪಕ್ಷದೊಳಗೆ ತಳಮಟ್ಟದವರೆಗೆ ಭಿನ್ನಮತವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರ ಸಮಾಜವಾದಿ ಹಿನ್ನೆಲೆಯ ‘ಅಹಿಂದ’ ಮತಬ್ಯಾಂಕ್ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರಬಲ ಒಕ್ಕಲಿಗ ಸಮುದಾಯದ ಸಮೀಕರಣಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ಸಿದ್ದರಾಮಯ್ಯ ಅವರ ಪ್ರಭಾವ ಕುಸಿಯುವುದು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತದಾರರಲ್ಲಿ ಅಸಮಾಧಾನ ಮೂಡಿಸಿದರೆ ಪಕ್ಷಕ್ಕೆ ದೊಡ್ಡ ಪೆಟ್ಟು ಬೀಳಬಹುದು. ತಳಮಟ್ಟದ ಕಾರ್ಯಕರ್ತರು ಸೈದ್ಧಾಂತಿಕವಾಗಿ ಎರಡು ಬಣಗಳಾಗಿ ಸೀಳಿ ಹೋಗುವ ಅಪಾಯವಿದೆ, ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಒಗ್ಗಟ್ಟನ್ನು ಸಾಂಸ್ಥಿಕವಾಗಿ ದುರ್ಬಲಗೊಳಿಸಬಹುದು.

ಡಿಕೆಶಿ ಮುಂದಿರುವ ಸವಾಲುಗಳೇನು ?

ಸಿದ್ದರಾಮಯ್ಯ ಅವರು ಕರ್ನಾಟಕ ರಾಜಕಾರಣದಲ್ಲಿ ಗಳಿಸಿರುವ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವರ್ಗಗಳ ಮತ್ತು ಪ್ರಗತಿಪರರ ವಿಶ್ವಾಸಕ್ಕೆ ಸುದೀರ್ಘ ಐತಿಹಾಸಿಕ ಮತ್ತು ಸೈದ್ಧಾಂತಿಕ ಹಿನ್ನೆಲೆಯಿದೆ. ಲೋಹಿಯಾವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರು ಬಡವರ, ಶೋಷಿತರ ಧ್ವನಿಯಾಗಿ ಗುರುತಿಸಿಕೊಂಡವರು.

ಈ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರು ಸಿದ್ದರಾಮಯ್ಯರಷ್ಟೇ ವ್ಯಾಪಕವಾದ ಜನಸಾಮಾನ್ಯರ ಹಾಗೂ ಪ್ರಗತಿಪರ ವಲಯದ ವಿಶ್ವಾಸವನ್ನು ಗಳಿಸಬೇಕಾದರೆ ಅವರ ಮುಂದೆ ಸೈದ್ಧಾಂತಿಕ ಹಾಗೂ ರಾಜಕೀಯವಾಗಿ ಹತ್ತಾರು ಸವಾಲುಗಳಿವೆ‌. 

ಡಿ.ಕೆ. ಶಿವಕುಮಾರ್ ಅವರು ಪ್ರಬಲ ಉದ್ಯಮಿ, ಕಾರ್ಪೊರೇಟ್ ಶೈಲಿಯ ರಾಜಕಾರಣಿಯಾಗಿ ಕಾಣಿಸುತ್ತಾರೆ. ಸಿದ್ದರಾಮಯ್ಯನವರನ್ನು ಬಡವರು "ನಮ್ಮವನು" ಎಂದು ಭಾವಿಸುವಂತೆ, ಡಿಕೆಶಿ ತಮ್ಮನ್ನು ಸಾಮಾನ್ಯ ಶ್ರಮಿಕ ವರ್ಗ, ಕಾರ್ಮಿಕರು ಮತ್ತು ಕೃಷಿಕರ ನಾಯಕ ಎಂದು ಬಿಂಬಿಸಿಕೊಳ್ಳಬೇಕಾಗಿದೆ. ಕೇವಲ ಹಣಬಲ ಮತ್ತು ಮ್ಯಾನೇಜ್‌ಮೆಂಟ್ ತಂತ್ರಗಳಿಂದ ಸಾರ್ವಜನಿಕರ ಹೃದಯ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅವರು ಸಾಬೀತುಪಡಿಸಬೇಕಿದೆ. ಸಿದ್ದರಾಮಯ್ಯ ಅವರು ಗಳಿಸಿದ ವೈಯಕ್ತಿಕ ವರ್ಚಸ್ಸು ಕಾಂಗ್ರೆಸ್ ಮತ್ತು ಅದರ ಸಿದ್ಧಾಂತಕ್ಕೂ ಪೂರಕವಾಗಿತ್ತು. ಆದರೇ, ಡಿಕೆಶಿ ಅವರಿಂದ ಅದು ಸಾಧ್ಯವೇ ?

ಡಿ.ಕೆ. ಶಿವಕುಮಾರ್ ಅವರು ಮೂಲತಃ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರು. ರಾಜಕಾರಣದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಸಾಂಪ್ರದಾಯಿಕವಾಗಿ ಪ್ರಬಲ ಶಕ್ತಿಗಳಾಗಿವೆ.

ಸಿದ್ದರಾಮಯ್ಯನವರ ನಿಷ್ಠಾವಂತ ಮತಬ್ಯಾಂಕ್ ಆಗಿರುವ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಲ್ಲಿ ಡಿಕೆಶಿ ಬಗ್ಗೆ ಒಂದು ರೀತಿಯ ಸೈದ್ಧಾಂತಿಕ ಅಪನಂಬಿಕೆ ಅಥವಾ ಆತಂಕ ಇರುವುದು ಸಹಜ. ತಾವು ಕೇವಲ ಒಂದು ಪ್ರಬಲ ಸಮುದಾಯದ ಹಿತರಕ್ಷಕರಲ್ಲ, ಬದಲಿಗೆ ಶೋಷಿತರ ಮತ್ತು ದಮನಿತರ ಹಕ್ಕುಗಳಿಗೂ ಬದ್ಧರಾಗಿದ್ದೇವೆ ಎಂಬ ನಂಬಿಕೆಯನ್ನು ಪ್ರಾಯೋಗಿಕ ನಿರ್ಧಾರಗಳ ಮೂಲಕ ಡಿಕೆಶಿ ಹುಟ್ಟುಹಾಕಬೇಕಿದೆ.

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿ ಹೆಚ್ಚು ವ್ಯವಹಾರಿಕ (Pragmatic) ಮತ್ತು ಅಧಿಕಾರ ಕೇಂದ್ರಿತವಾಗಿದೆ. ಅವರು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಅನುಕೂಲವಾಗುವ ಹಾಗೆ ಪ್ರಗತಿಪರ ಚಿಂತಕರು, ಸಾಹಿತಿಗಳು ಮತ್ತು ತಳಮಟ್ಟದ ಕಾರ್ಯಕರ್ತರೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕಿದೆ. ಬಲಪಂಥ, ಕೋಮುವಾದದ ವಿರುದ್ಧ ಸಿದ್ದರಾಮಯ್ಯನವರಂತೆ ಸ್ಪಷ್ಟ ಮತ್ತು ರಾಜಿರಹಿತ ಸೈದ್ಧಾಂತಿಕ ನಿಲುವನ್ನು ತಳೆಯುವುದು ಡಿಕೆಶಿಗೆ ಅನಿವಾರ್ಯವಾಗಿದೆ. ಇದು ಡಿಕೆಶಿ ಅವರಿಂದ ಸಾಧ್ಯವಾಗದೇ ಇದ್ದಲ್ಲಿ   ಯಶಸ್ಸಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆ ಮತ್ತೊಂದು ದೊಡ್ಡ ಸೋಲಾಗಲಿದೆ. 

ಇನ್ನು, ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋದರೂ, ರಾಜ್ಯದಲ್ಲಿ ಅವರ ಬೆಂಬಲಿಗ ಶಾಸಕರು ಮತ್ತು ಮಂತ್ರಿಗಳನ್ನು ಯಾವುದೇ ತಾರತಮ್ಯವಿಲ್ಲದೆ ಮುನ್ನಡೆಸುವುದು ಡಿಕೆಶಿಗೆ ಅತ್ಯಂತ ಜಟಿಲವಾದ ಸವಾಲಾಗಿದೆ. ಒಂಚೂರು ಭೇದಭಾವ ಕಂಡರೂ ಅದು ಪಕ್ಷದೊಳಗಿನ ಆಂತರಿಕ ಭಿನ್ನಮತಕ್ಕೆ ಕಾರಣವಾಗಿ ಅವರ ನಾಯಕತ್ವಕ್ಕೆ ಕಂಟಕ ತರಬಹುದು. 

ಸಿದ್ದರಾಮಯ್ಯ ಕೇವಲ ಅಧಿಕಾರದಿಂದ ನಾಯಕರಾದವರಲ್ಲ, ಸಿದ್ಧಾಂತದಿಂದ ನಾಯಕರಾದವರು. ಡಿ.ಕೆ. ಶಿವಕುಮಾರ್ ಅವರು ಕೇವಲ 'ಅಧಿಕಾರ ಹಿಡಿಯುವ ಚತುರ' ಎಂಬ ಪಟ್ಟದಿಂದ 'ಜನರ ನಾಯಕ' ಎಂಬ ಸ್ಥಾನಕ್ಕೆ ಏರಬೇಕಾದರೆ, ತಮ್ಮ ರಾಜಕೀಯ ಶೈಲಿಯನ್ನು ಸಂಪೂರ್ಣವಾಗಿ ಜನಪರ ಹಾಗೂ ಸಮಾಜವಾದಿ ಮಾದರಿಗೆ ಬದಲಾಯಿಸಿಕೊಳ್ಳಬೇಕಾದ ಸವಾಲು ಅವರ ಮುಂದಿದೆ.

2028ರ ಸವಾಲು ಮತ್ತು ನೇತೃತ್ವ : 

2028ರ ಹೊತ್ತಿಗೆ ಕರ್ನಾಟಕ ರಾಜಕಾರಣ ಮತ್ತು ಕಾಂಗ್ರೆಸ್ ಪಕ್ಷದ ನಾಯಕತ್ವದ ಸಮೀಕರಣಗಳು ಸಂಪೂರ್ಣ ಹೊಸ ಆಯಾಮವನ್ನು ಪಡೆದುಕೊಳ್ಳಲಿವೆ. ಪ್ರಸ್ತುತ ಕಾಂಗ್ರೆಸ್ ಎದುರಿಸುತ್ತಿರುವ ಸೈದ್ಧಾಂತಿಕ ಏರುಪೇರುಗಳು 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಗಂಭೀರ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ. 

ಈ ನಡುವೆ ಸಿದ್ದರಾಮಯ್ಯನವರ ನಂತರ ‘ಅಹಿಂದ’ ಸಮುದಾಯಗಳನ್ನು ವಿಮುಖವಾಗದಂತೆ ಹಿಡಿದಿಟ್ಟುಕೊಳ್ಳಬಲ್ಲ ಸಮಾಜವಾದಿ ಹಿನ್ನೆಲೆಯ ಪ್ರಬಲ ಎರಡನೇ ಹಂತದ ನಾಯಕತ್ವವನ್ನು ಸೃಷ್ಟಿಸುವುದು ಪಕ್ಷಕ್ಕೆ ಅನಿವಾರ್ಯವಾಗಲಿದೆ. ಇಲ್ಲದಿದ್ದರೆ, ಪಕ್ಷ ಬಿಜೆಪಿಯಂತೆ ಕೇವಲ ಪ್ರಬಲ ಜಾತಿಗಳ ಮುಖವಾಗುವ ಅಪಾಯವಿದೆ. ಇಂತೆಲ್ಲಾ ವಿಷಯಗಳನ್ನು ಕಾಂಗ್ರೆಸ್ ಹೈಕಮಾಂಡ್ ಹೇಗೆ ಸಂಭಾಳಿಸಲಿದೆ ಎನ್ನುವುದು ಕೂಡ ಕುತೂಹಲಕಾರಿಯಾಗಿದೆ. 

ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೈದ್ಧಾಂತಿಕವಾಗಿ ದಾರಿ ತಪ್ಪಿ, ಕೇವಲ ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಶೈಲಿಯ ರಾಜಕಾರಣಕ್ಕೆ ಶರಣಾದರೆ, 2028ರ ಹೊತ್ತಿಗೆ ರಾಜ್ಯದ ಪ್ರಗತಿಪರ, ದಲಿತ ಮತ್ತು ಕಾರ್ಮಿಕ ಚಳವಳಿಗಳು ಕಾಂಗ್ರೆಸ್‌ನಿಂದ ಸೈದ್ಧಾಂತಿಕ ಅಂತರ ಕಾಯ್ದುಕೊಳ್ಳಬಹುದು. ಈ ಎಲ್ಲದರ ಬಗ್ಗೆಯೂ ಕಾಂಗ್ರೆಸ್ ಹೈಕಮಾಂಡ್ ಯಾರನ್ನೋ ಸಮಾಧಾನ ಪಡಿಸುವ ಭರದಲ್ಲಿ ಮರೆಯದೇ ರಾಜಕೀಯ ಮಾಡಬೇಕಿದೆ. 

ಒಟ್ಟಿನಲ್ಲಿ, 2028ಕ್ಕೆ ಡಿಕೆಶಿ ನೇತೃತ್ವ ಕಾಂಗ್ರೆಸ್‌ಗೆ ಕೇವಲ ಚುನಾವಣಾ ಜಯದ ಸವಾಲಲ್ಲ, ಬದಲಿಗೆ ಸಮಾಜವಾದಿ ನೀತಿಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ‘ಬಲಪಂಥೀಯ ನೀತಿಗಳ ಮತ್ತೊಂದು ಮುಖ’ವಾಗಿ ಬದಲಾಗದಂತೆ ಪಕ್ಷದ ಮೂಲ ಸಿದ್ಧಾಂತವನ್ನು ಉಳಿಸಿಕೊಳ್ಳುವ ಕಡೆಯ ಸವಾಲಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

Thursday, May 21, 2026

ಧರ್ಮಸ್ಥಳ ಪ್ರಕರಣ : ಸುಳ್ಳನ್ನು ಎಲ್ಲಿಯವರೆಗೆ ಪೊರೆಯಬಹುದು!?


ಸೌಜನ್ಯ ಪ್ರಕರಣ ಮತ್ತು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರದ ಗದ್ದುಗೆಯ ಮೇಲೆ ಕುಳಿತು ಕಾನೂನನ್ನು ಆಟವಾಡಿಸಿದವರು ಈಗ ನ್ಯಾಯಾಲಯದ ಕಟಕಟೆಯ ಮುಂದೆ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪ್ರಕರಣಗಳ ತನಿಖೆಗೆ ಆಗ್ರಹಿಸಿದವರನ್ನು 'ಧರ್ಮ ವಿರೋಧಿಗಳು' ಎಂದು ಚಿತ್ರಿಸುವ ಮೂಲಕ ಜನಸಾಮಾನ್ಯರ ತಾರ್ಕಿಕ ಚಿಂತನೆಯನ್ನು ಮರಗಟ್ಟಿಸಿದ ಹಣಕ್ಕೆ ಮಾರಿಕೊಂಡ ಮಾಧ್ಯಮಗಳು ಈಗ ಮೌನವಹಿಸಿವೆ.

ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ  ನಡೆದಿದೆ ಎನ್ನಲಾದ ಸಾಮೂಹಿಕ ಶವ ಹೂತ ಪ್ರಕರಣದ ತನಿಖೆ ಈಗ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಹಲವು ದಿನಗಳಿಂದ ತಣ್ಣಗಾಗಿದ್ದಂತೆ ಕಂಡುಬಂದಿದ್ದ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆ, ಇದೀಗ ವಿಜ್ಞಾನ ಮತ್ತು ವಸ್ತುನಿಷ್ಠ ಸಾಕ್ಷ್ಯಗಳ ಬೆಂಬಲದೊಂದಿಗೆ ಮತ್ತೆ ಚುರುಕುಗೊಂಡಿದೆ. ಎಫ್‌ಎಸ್‌ಎಲ್ (ವಿಧಿವಿಜ್ಞಾನ ಪ್ರಯೋಗಾಲಯ) ಮತ್ತು ಸೋಕೋ ತಂಡಗಳೊಂದಿಗೆ ಬಂದು ತನಿಖೆಯನ್ನು ಮುಂದುವರಿಸಿದ್ದು   ಸೌಜನ್ಯ ಪ್ರಕರಣ, ಪದ್ಮಲತಾ, ವೇದವಲ್ಲಿ, ಆನೆ ಮಾವುತ ಪ್ರಕರಣ ಸೇರಿ ಅಲ್ಲಿ ನಡೆದಿದೆ ಎನ್ನಲಾದ ಅಷ್ಟೂ ಕೊ*ಲೆ, ಅತ್ಯಾಚಾರ ಪ್ರಕರಣಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ಯತ್ನಿಸಿದವರ ಬುಡಕ್ಕೆ ಈಗ ಬಿಸಿ ನೀರು ಬಂದು ತಲುಪಿದೆ. 

'ಷಡ್ಯಂತ್ರ'ದ ಕಥೆ ಸೃಷ್ಟಿಗೆ ಸದ್ಯದಲ್ಲೇ ಉತ್ತರ !? 

ಈ ಪ್ರಕರಣದ ಆರಂಭದಿಂದಲೂ ಸಾರ್ವಜನಿಕರ ಗಮನದ ದಿಕ್ಕು ತಪ್ಪಿಸಲು ತೀವ್ರ ಯತ್ನಗಳು ನಡೆದಿದ್ದವು. ಕಾರ್ಪೊರೇಟ್ ಮಾಲೀಕತ್ವದ ಮಾಧ್ಯಮಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಇದನ್ನು "ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ" ಎಂದೂ, ಪತ್ತೆಯಾದ ಬುರುಡೆಗಳನ್ನು "ಲ್ಯಾಬ್‌ಗಳಿಂದ/ ಸ್ಮಶಾನಗಳಿಂದ ತಂದು ಹಾಕಲಾದ ಕೃತಕ ಸಾಕ್ಷ್ಯಗಳು" ಎಂದೂ ಬಿಂಬಿಸಲು ಯತ್ನಿಸಿದ್ದವು. ಈ ಮೂಲಕ ತನಿಖೆಯನ್ನು ಹಳ್ಳಹಿಡಿಸಲು ಒಂದು ವ್ಯವಸ್ಥಿತ ಸುಳ್ಳಿನ ಜಾಲವನ್ನು ಹೆಣೆಯಲಾಗಿತ್ತು. 

ಆದರೆ, ವಿಜ್ಞಾನಕ್ಕೆ ಯಾವುದೇ ಪೂರ್ವಾಗ್ರಹಗಳಿರುವುದಿಲ್ಲ. ಎಫ್‌ಎಸ್‌ಎಲ್ ನೀಡಿರುವ ವರದಿಯ ವೈಜ್ಞಾನಿಕ ಮಾಹಿತಿ ಬಂಗ್ಲೆಗುಡ್ಡೆಯಲ್ಲಿ ಅಪರಾಧಿಕ ಕೃತ್ಯಗಳು ನಡೆದಿರುವುದನ್ನು ಖಚಿತಪಡಿಸಿದೆ. ಈ ವೈಜ್ಞಾನಿಕ ಸತ್ಯದ ಹಿನ್ನೆಲೆಯಲ್ಲೇ ತನಿಖಾ ತಂಡಗಳು ಮತ್ತೆ ಅದೇ ಬಂಗ್ಲೆಗುಡ್ಡೆಯನ್ನು ಶೋಧಿಸಲು ಮುಂದಾಗಿವೆ.

ಸತ್ಯವನ್ನು ಮುಚ್ಚಿಡುವ ಪ್ರಯತ್ನಗಳು ಬಹಳ ಕಾಲ ನಡೆಯಲಾರವು ಎಂಬುದನ್ನು ಈ ತನಿಖೆ ನಿರೂಪಿಸುತ್ತಿದೆ. ಸ್ಯಾಟಲೈಟ್ ಚಾನೆಲ್‌ಗಳು ಮತ್ತು ಡೋಂಗಿ ಹಿತಾಸಕ್ತಿಗಳು ಸೃಷ್ಟಿಸಿದ್ದ ಹಾರಾಟ-ಕಿರುಚಾಟಗಳು ಈಗ ವಿಜ್ಞಾನ ಮತ್ತು ತನಿಖೆಯ ಎದುರು ಮೌನವಾಗಿವೆ. 

ಸತ್ಯವನ್ನು ಹಳ್ಳ ಹಿಡಿಸಲು ವ್ಯವಸ್ಥಿತ ಜಾಲ : 

ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳನ್ನು 'ನಾಲ್ಕನೇ ಸ್ತಂಭ' ಎಂದು ಕರೆಯಲಾಗುತ್ತದೆ. ಆದರೆ, ಸೌಜನ್ಯಳ ಭೀಕರ ಅತ್ಯಾಚರ ಮತ್ತು ಕೊಲೆ ಪ್ರಕರಣ, ಮತ್ತು ಧರ್ಮಸ್ಥಳ ಪ್ರಕರಣದ ಸುತ್ತ ನಡೆದ ಬೆಳವಣಿಗೆಯನ್ನು ಗಮನಿಸಿದರೆ, ಈ ನಾಲ್ಕನೇ ಸ್ತಂಭ ಶೋಷಿತರ ಪರವಾಗಿ ನಿಲ್ಲುವ ಬದಲು, ಶಕ್ತಿಶಾಲಿ ಆಧಿಪತ್ಯದ ರಕ್ಷಣಾ ಕವಚವಾಗಿ ಹೇಗೆ ಬದಲಾಯಿತು ಎಂಬ ಕರಾಳ ಸತ್ಯ ಬಿಚ್ಚಿಕೊಳ್ಳುತ್ತದೆ. ಅಧಿಕಾರ, ಸಂಪತ್ತು ಮತ್ತು ಧಾರ್ಮಿಕ ಮುಖವಾಡಗಳ ಮುಂದೆ ಮಂಡಿಯೂರಿದ ಮುಖ್ಯವಾಹಿನಿ ಮಾಧ್ಯಮಗಳು ನ್ಯಾಯದ ಧ್ವನಿಯನ್ನು ಹತ್ತಿಕ್ಕಲು ನಡೆಸಿದ ಪ್ರಯತ್ನಗಳು ಮಾಧ್ಯಮ ರಂಗದ ದೊಡ್ಡ ನೈತಿಕ ಕುಸಿತಕ್ಕೆ ಸಾಕ್ಷಿ. ಹಣಕ್ಕೆ ಮಾರಿಕೊಂಡು ಸತ್ಯವನ್ನು ಹವಣಿಸಲು ಯತ್ನಿಸಿದ ರೀತಿಗೆ 'ನೋಡುಗ ವರ್ಗ'ವೂ ಛೀಮಾರಿ ಹಾಕಿತ್ತು. 

ಪ್ರಕರಣದ ಆರಂಭದಲ್ಲಿ ನೈಜ ಆರೋಪಿಗಳನ್ನು ಪತ್ತೆಹಚ್ಚುವಂತೆ ಒತ್ತಾಯಿಸಿ ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕಿದ್ದ ಮಾಧ್ಯಮಗಳು, ಪ್ರಭಾವಿ ವ್ಯಕ್ತಿಗಳ ರಕ್ಷಣೆಗೆ ನಿಂತವು. ಆರೋಪಿಗಳ ಪರವಾಗಿ ಇಡೀ ದಿನ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ, ಅವರ ಪವಿತ್ರತೆ ಮತ್ತು ದಾನ-ಧರ್ಮಗಳ ಗುಣಗಾನ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಸಹಾನುಭೂತಿ ಸೃಷ್ಟಿಸಲು ಯತ್ನಿಸಿದವು. ಇದು ತನಿಖೆಯ ದಿಕ್ಕನ್ನು ಆರಂಭದಲ್ಲೇ ತಪ್ಪು ದಾರಿಗೆಳೆಯಲು ಪ್ರೇರೇಪಿಸಿತು. 

ಇನ್ನು, ಬಂಗ್ಲೆಗುಡ್ಡೆಯಲ್ಲಿ ಶವಗಳು ಮತ್ತು ಬುರುಡೆಗಳು ಪತ್ತೆಯಾದಾಗ ಸ್ಯಾಟಲೈಟ್ ಮಾಧ್ಯಮಗಳು ತನಿಖೆಯನ್ನು ಬೆಂಬಲಿಸುವ ಬದಲು, ತನಿಖೆ ಕೋರಿದವರನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಿದವು. "ಇದು ಬೇರೆಡೆಯಿಂದ ಬುರುಡೆ ತಂದು ಹೂತಿಟ್ಟ ಷಡ್ಯಂತ್ರ", "ಇದು ಧರ್ಮಸ್ಥಳದ ಹೆಸರನ್ನು ಕೆಡಿಸುವ ವಿದೇಶಿ ಫಂಡಿಂಗ್ ಜಾಲ" ಎಂದೆಲ್ಲಾ ಕಟ್ಟುಕಥೆಗಳನ್ನು ಹೆಣೆದು ಕಿರುಚಾಡಿದವು. ಹೆಣ್ಣುಮಗಳೊಬ್ಬಳಿಗೆ ನ್ಯಾಯ ಕೊಡಿಸುವುದಕ್ಕಿಂತ, ವ್ಯವಸ್ಥೆಯ ಉನ್ನತ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವುದೇ ಈ ಮಾಧ್ಯಮಗಳ ಆದ್ಯತೆಯಾಗಿತ್ತು. ಸೌಜನ್ಯ ಪ್ರಕರಣ ಮತ್ತು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರದ ಗದ್ದುಗೆಯ ಮೇಲೆ ಕುಳಿತು ಕಾನೂನನ್ನು ಆಟವಾಡಿಸಿದವರು ಈಗ ನ್ಯಾಯಾಲಯದ ಕಟಕಟೆಯ ಮುಂದೆ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ. 

ಇನ್ನು, ಈ ಪ್ರಕರಣದಲ್ಲಿ ಕಾನೂನು ಮತ್ತು ಸಂವಿಧಾನದ ಆಶಯಗಳಿಗಿಂತ ಧಾರ್ಮಿಕ ನಂಬಿಕೆಗಳೇ ಮಿಗಿಲು ಎಂಬಂತೆ ಬಿಂಬಿಸಿ, ತನಿಖೆಗೆ ಒತ್ತಾಯಿಸುವರನ್ನು "ಧರ್ಮ ವಿರೋಧಿಗಳು" ಎಂದು ಚಿತ್ರಿಸುವ ಮೂಲಕ ಜನಸಾಮಾನ್ಯರ ತಾರ್ಕಿಕ ಚಿಂತನೆಯನ್ನು ಹಣಕ್ಕೆ ಮಾರಿಕೊಂಡ ಮಾಧ್ಯಮಗಳು ಮರಗಟ್ಟಿಸಿದ್ದವು. 

ಒಟ್ಟಿನಲ್ಲಿ, ಹಣಕ್ಕೆ ಮಾರಿಕೊಂಡು ತನ್ನ ಮೈತುಂಬಾ ಹೆಣದ ವಾಸನೆಯನ್ನೇ ಮೆತ್ತಿಕೊಂಡ ಮಾಧ್ಯಮಗಳು ಎಷ್ಟೇ ಪ್ರಯತ್ನಿಸಿದರೂ ಸತ್ಯವನ್ನು ಶಾಶ್ವತವಾಗಿ ಹೂತುಹಾಕಲು ಸಾಧ್ಯವಿಲ್ಲ ಎಂಬುದಕ್ಕೆ ಈಗ ತನಿಖೆ ಚುರುಕುಗೊಂಡಿರುವುದೇ ಸಾಕ್ಷಿ. ಕಾರ್ಪೊರೇಟ್ ಮಾಧ್ಯಮಗಳ ಸುಳ್ಳಿನ ಕೋಟೆಗಳು ವಿಜ್ಞಾನ, ತನಿಖಾ ವರದಿಗಳ ಮುಂದೆ ಕುಸಿಯುತ್ತಿವೆ. ಸೌಜನ್ಯ ಪರ ಹೋರಾಟಗಾರರು, ಜನಸಾಮಾನ್ಯರು, ಪ್ರಗತಿಪರ ಹೋರಾಟಗಾರರು ನಡೆಸಿದ ನಿರಂತರ ಹೋರಾಟದ ಫಲವಾಗಿ ನ್ಯಾಯ ದೊರಕುವ ಭರವಸೆಯನ್ನು ತನಿಖೆ ಮೂಡಿಸುತ್ತಿದೆ‌. ಈ ತನಿಖೆ ತಾರ್ಕಿಕ ಅಂತ್ಯ ಕಾಣುವ ಮೂಲಕ, ಅಪರಾಧಿಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಕಾನೂನು ಮತ್ತು ಸತ್ಯಕ್ಕಿಂತ ಯಾರೂ ಮಿಗಿಲಲ್ಲ ಎಂಬ ಸಂದೇಶ ರವಾನೆಯಾಗಬೇಕಿರುವ ತುರ್ತಿದೆ. 

-ಶ್ರೀರಾಜ್ ವಕ್ವಾಡಿ

ಕಾಕ್ರೋಚ್ ಜನತಾ ಪಾರ್ಟಿ : ವ್ಯವಸ್ಥಿತ ಕಡೆಗಣನೆಗೆ ಬಲವಾದ ತಪರಾಕಿ!

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮೀರಿ ಫಾಲೋವರ್ಸ್ ಅನ್ನು ಈ ಹೊಸ ರಾಜಕೀಯ ಚಳವಳಿ ಪ್ರೇರಿತ ಪಕ್ಷ ಹೊಂದಿದೆ ಎನ್ನುವುದು ದೊಡ್ಡ ವಿಷಯವಲ್ಲ. ಆ ಸೃಜನಶೀಲ ಚಳವಳಿಯ ಹಿಂದೆ ಈ ವ್ಯವಸ್ಥೆಯಿಂದ ಕಡೆಗಣಿಸಲ್ಪಟ್ಟ, ಪ್ರಭುತ್ವ ರಾಜಕಾರಣದಿಂದ ಬದಿಗೆ ತಳ್ಳಲ್ಪಟ್ಟ ಯುವಕರ ದೊಡ್ಡ ಆಕ್ರೋಶವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ದೇಶದ ಆಡಳಿತಾರೂಢ ಸರ್ಕಾರದ ದಮನಕಾರಿ ನಡೆಯ ವಿರುದ್ಧ ಒಂದು ಧ್ವನಿ ಹುಟ್ಟುವ ಲಕ್ಷಣ ಕಳೆದ ಕೆಲವು ವರ್ಷಗಳಿಂದಲೇ ಕಾಣಿಸುತ್ತಿತ್ತು. ಅದೀಗ ಅಧೀಕೃತವಾಗಿ ಹುಟ್ಟಿದೆ. 'ಯುವಕರು ಪಕೋಡ ಮಾರಿಯೂ ಜೀವನ ನಡೆಸಬಹುದು, ಚರಂಡಿಯಿಂದಲೂ ಗ್ಯಾಸ್ ಉತ್ಪಾದಿಸಬಹುದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಡಿಜಿಟಲ್‌ ಚಳವಳಿ ಬಲವಾದ ತಪರಾಕಿ ಕೊಟ್ಟಂತಿದೆ."

ರಾಜಕೀಯ ಸಮಾನ ಚಿಂತನೆ ಇರುವ ನನ್ನ ಆತ್ಮೀಯರೊಬ್ಬರು ಇಂದು ಕಾಕ್ರೋಚ್ ಜನತಾ ಪಾರ್ಟಿಗೆ ಸೇರಿದ್ದೀರಾ? ಅಂತ ಕೇಳಿದರು. ವ್ಯವಸ್ಥೆಯ ದಬ್ಬಾಳಿಕೆಯ ಧೋರಣೆಯಿಂದ ಕಡೆಗಣಿಸಲ್ಪಟ್ಟ ನಾನು ಅಧಿಕೃತವಾಗಿ ಸೇರುವುದೊಂದು ಬಾಕಿ ಇದೆ ಎಂದು ಉತ್ತರಿಸಿದೆ. ಅವರು ನಕ್ಕರು. ಹೌದು, ನೀವು ಅಂದುಕೊಂಡಿರುವುದು ಸತ್ಯ. ಕಾರ್ಕೋಚ್ ಜನತಾ ಪಾರ್ಟಿ ಬಹಳ ಸದ್ದು ಮಾಡುತ್ತಿದೆ. ವ್ಯವಸ್ಥೆಯ ಪ್ರಭುತ್ವ ಧೋರಣೆಯ ವಿರುದ್ಧ ಒಂದು ಬಲವಾದ ಧ್ವನಿಯಾಗಿ ಕಾಣಿಸುತ್ತಿದೆ. 

 'ಕಾಕ್ರೋಚ್ ಜನತಾ ಪಾರ್ಟಿ' (Cockroach Janta Party - CJP) ಹುಟ್ಟಿಕೊಳ್ಳಲು ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಇತ್ತೀಚೆಗೆ (ಮೇ 15, 2026) ನ್ಯಾಯಾಲಯದ ವಿಚಾರಣೆಯೊಂದರ ಸಂದರ್ಭದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯೇ ನೇರ ಕಾರಣ. 

"ಉದ್ಯೋಗ ಸಿಗದ ಅಥವಾ ವೃತ್ತಿಯಲ್ಲಿ ಯಾವುದೇ ಸ್ಥಾನ ಕಂಡುಕೊಳ್ಳದ ಜಿರಳೆಗಳಂತಹ (Cockroaches) ಯುವಕರು ಸಮಾಜದಲ್ಲಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮ, ಇನ್ನು ಕೆಲವರು ಸೋಶಿಯಲ್ ಮೀಡಿಯಾ, ಆರ್‌ಟಿಐ (RTI) ಕಾರ್ಯಕರ್ತರು ಮತ್ತು ಆಕ್ಟಿವಿಸ್ಟ್‌ಗಳಾಗಿ ವ್ಯವಸ್ಥೆಯ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸುತ್ತಾರೆ." ಎಂದು ಹೇಳಿದ್ದರು. 

ದೇಶದಲ್ಲಿ ತೀವ್ರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ನಡುವೆ, ಯುವಕರನ್ನು 'ಜಿರಳೆ' ಮತ್ತು 'ಪರಾವಲಂಬಿ' ಎಂದು ಕರೆದ ನ್ಯಾಯಮೂರ್ತಿಗಳ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಈ ಆಕ್ರೋಶವನ್ನು ವಿಭಿನ್ನವಾಗಿ ದಾಖಲಿಸಲು ಅಭಿಜೀತ್ ದಿಪ್ಕೆ ಎಂಬ ಯುವ ರಾಜಕೀಯ ಸಂವಹನ ತಜ್ಞ ಮೇ 16, 2026 ರಂದು 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವಿಡಂಬನಾತ್ಮಕ (Satirical) ಡಿಜಿಟಲ್ ವೇದಿಕೆಯನ್ನು ಸ್ಥಾಪಿಸಿದರು. Voice of the Lazy & Unemployed ಎಂಬ ಧ್ಯೇಯವಾಕ್ಯವನ್ನೂ ನೀಡಿದರು.  'ಯುವಕರು ಪಕೋಡ ಮಾರಿಯೂ ಜೀವನ ನಡೆಸಬಹುದು, ಚರಂಡಿಯಿಂದಲೂ ಗ್ಯಾಸ್ ಉತ್ಪಾದಿಸಬಹುದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಡಿಜಿಟಲ್‌ ಚಳವಳಿ ಬಲವಾದ ತಪರಾಕಿ ಕೊಟ್ಟಂತಿತ್ತು.'

ವ್ಯವಸ್ಥಿತ ಕಡೆಗಣನೆಗೆ ವಿಡಂಬನಾತ್ಮಕ ಪ್ರತಿಕ್ರಿಯೆ : 

ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಚಳವಳಿಗಳು ಮತ್ತು ಹೊಸ ರಾಜಕೀಯ ಪಕ್ಷಗಳು ಕೇವಲ ಸದ್ದಿಲ್ಲದೆ ಹುಟ್ಟಿಕೊಳ್ಳುವುದಿಲ್ಲ, ಅವು ಸಮಾಜದಲ್ಲಿ ಧಗಧಗಿಸುತ್ತಿರುವ ಅಸಮಾಧಾನದ ಜ್ವಾಲೆಯಿಂದ ಹೊರಹೊಮ್ಮುತ್ತವೆ. ಕಳೆದ ಕೆಲವೇ ಕೆಲವು ದಿನಗಳಿಂದ ಯುವ ಸಮೂಹದ ಗಮನ ಸೆಳೆಯುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' ಕೂಡ ಇಂತಹದ್ದೇ ಒಂದು ವಿಶಿಷ್ಟ, ಆದರೆ ಆಳವಾದ ಸಾಮಾಜಿಕ ಆತಂಕದಿಂದ ಹುಟ್ಟಿಕೊಂಡ ಧ್ವನಿಯಾಗಿದೆ. ಇದು ಕೇವಲ ಒಂದು ಸಾಂಕೇತಿಕ ಹೆಸರಲ್ಲ, ಬದಲಿಗೆ ದೇಶವನ್ನು ಕಾಡುತ್ತಿರುವ ತೀವ್ರ ನಿರುದ್ಯೋಗ ಮತ್ತು ಯುವಕರ ಹತಾಶೆಯ ವಿರುದ್ಧದ ಒಂದು ಕಟು ವಿಡಂಬನೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮೀರಿ ಫಾಲೋವರ್ಸ್ ಅನ್ನು ಈ ಹೊಸ ರಾಜಕೀಯ ಚಳವಳಿ ಪಕ್ಷ ಹೊಂದಿದೆ ಎನ್ನುವುದು ದೊಡ್ಡ ವಿಷಯವಲ್ಲ. ಆ ಸೃಜನಶೀಲ ಚಳವಳಿಯ ಹಿಂದೆ ಈ ವ್ಯವಸ್ಥೆಯಿಂದ ಕಡೆಗಣಿಸಲ್ಪಟ್ಟ, ಪ್ರಭುತ್ವ ರಾಜಕಾರಣದಿಂದ ಬದಿಗೆ ತಳ್ಳಲ್ಪಟ್ಟ ಯುವಕರ ದೊಡ್ಡ ಆಕ್ರೋಶವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ದೇಶದ ಆಡಳಿತಾರೂಢ ಸರ್ಕಾರದ ದಮನಕಾರಿ ನಡೆಯ ವಿರುದ್ಧ ಒಂದು ಧ್ವನಿ ಹುಟ್ಟುವ ಲಕ್ಷಣ ಕಳೆದ ಕೆಲವು ವರ್ಷಗಳಿಂದಲೇ ಕಾಣಿಸುತ್ತಿತ್ತು. ಅದೀಗ ಅಧೀಕೃತವಾಗಿ ಹುಟ್ಟಿದೆ. 

ಬಂಡವಾಳಶಾಹಿ ಮತ್ತು ದೇಶದ ಅತ್ಯಂತ ಅಪಾಯಕಾರಿ ಆರ್ಥಿಕ ನೀತಿಗಳು ಯುವಕರ ಬದುಕನ್ನು ಹಾಳುಗೆಡವಿದೆ. ಉದ್ಯೋಗ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪದವಿ ಪಡೆದ ಯುವಕರು ಇಂದು ಬೀದಿಗಿಳಿದಿದ್ದಾರೆ. 'ಕಾಕ್ರೋಚ್' (ಜಿರಳೆ) ಎಂಬ ಕೀಟ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ, ಯಾವುದೇ ಸೌಲಭ್ಯವಿಲ್ಲದಿದ್ದರೂ ಬದುಕಿ ಉಳಿಯುವ ಜೀವಿಯಾಗಿದೆ. ಪ್ರಸ್ತುತ ಯುವ ಪೀಳಿಗೆ ತಮಗೆ ಉದ್ಯೋಗ, ಭದ್ರತೆ ಅಥವಾ ಸಾಮಾಜಿಕ ನ್ಯಾಯ ಸಿಗದಿದ್ದರೂ, ವ್ಯವಸ್ಥೆಯ ಕಡೆಗಣನೆಯ ನಡುವೆಯೂ "ನಾವು ಬದುಕಿ ಉಳಿಯುತ್ತೇವೆ" ಎಂದು ತೋರಿಸಲು ಈ ಹೆಸರನ್ನು ಬಳಸಿಕೊಂಡಿರುವುದು ಪ್ರಭುತ್ವಕ್ಕೆ ನೀಡಿದ ಚಾಟಿಯೇಟಾಗಿದೆ.

ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಯುವಕರ ಆಕ್ರೋಶ : 

ದಶಕಗಳಿಂದ ಆಳುವ ಸರ್ಕಾರಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಮತ್ತು ಸವಲತ್ತುಗಳನ್ನು ನೀಡುತ್ತಾ ಬಂದಿವೆಯೇ ಹೊರತು, ಸಾರ್ವಜನಿಕ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿಲ್ಲ. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದಿರುವುದು ಮತ್ತು ಗುತ್ತಿಗೆ ಆಧಾರಿತ ದುಡಿಮೆಯನ್ನು ಪ್ರೋತ್ಸಾಹಿಸುತ್ತಿರುವುದು ಯುವಕರನ್ನು ಶೋಷಣೆಗೆ ತಳ್ಳಿದೆ. 'ಕಾಕ್ರೋಚ್ ಜನತಾ ಪಾರ್ಟಿ' ಈ ಕಾರ್ಪೊರೇಟ್-ರಾಜಕಾರಣಿಗಳ ಅಪವಿತ್ರ ಮೈತ್ರಿಯ ವಿರುದ್ಧ ಶ್ರಮಿಕ ಮತ್ತು ಸುಶಿಕ್ಷಿತ ನಿರುದ್ಯೋಗಿ ಯುವಕರ ಒಕ್ಕೂಟವಾಗಿ ಬಿಂಬಿತವಾಗುತ್ತಿದೆ. 

ಈ ಚಳವಳಿ ಪ್ರೇರಿತ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಮೇಲ್ನೋಟಕ್ಕೆ ಇವು ಹಾಸ್ಯದಂತೆ ಕಂಡರೂ, ಪ್ರತಿ ಭರವಸೆಯ ಹಿಂದೆ ದೇಶದ ನಿರುದ್ಯೋಗಿ ಯುವ ಸಮೂಹದ ಆಳವಾದ ಹತಾಶೆ ಮತ್ತು ಆಕ್ರೋಶ ಅಡಗಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ. 

ಶಿಕ್ಷಣ ಇಲಾಖೆಯ ವೈಫಲ್ಯ ಮತ್ತು ಖಾಸಗಿ ಕೋಚಿಂಗ್ ಮಾಫಿಯಾವನ್ನು ಇದು ನೇರವಾಗಿ ಪ್ರಶ್ನಿಸುತ್ತಿದೆ. ಐಐಟಿ, ನೀಟ್, ಯುಪಿಎಸ್‌ಸಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿರುವ ಕೋಚಿಂಗ್ ಸೆಂಟರ್‌ಗಳು ಯುವಕರ ಕನಸುಗಳ ಮೇಲೆ ಪ್ರಹಾರ  ಮಾಡುತ್ತಿರುವುದರ ವಿರುದ್ಧದ ಆಕ್ರೋಶವಿದು.

ಇತಿಹಾಸದಲ್ಲಿ ಯಾವುದೇ ಸರ್ವಾಧಿಕಾರಿ ಅಥವಾ ನಿರಂಕುಶ ವ್ಯವಸ್ಥೆಗೆ ಅತ್ಯಂತ ಭಯ ಹುಟ್ಟಿಸುವುದು ಆ ವ್ಯವಸ್ಥೆಯ ಮೇಲಾಗುವ "ವಿಡಂಬನೆ". ಬೀದಿಗಿಳಿದು ಮಾಡುವ ಗಂಭೀರ ಹೋರಾಟಗಳನ್ನು ಪೊಲೀಸರ ಲಾಠಿ, ಜೈಲುಗಳ ಮೂಲಕ ಹತ್ತಿಕ್ಕಬಹುದು. ಆದರೆ, ಯುವಕರು ವಿಡಂಬನೆ ಮಾಡುತ್ತಾ ವ್ಯವಸ್ಥೆಯ ತಪ್ಪುಗಳನ್ನು ಜಗತ್ತಿನೆದುರು ಬೆತ್ತಲೆಗೊಳಿಸಿದಾಗ ಅದಕ್ಕೆ ಪ್ರಭುತ್ವದ ಬಳಿ ಉತ್ತರವಿರುವುದಿಲ್ಲ. 

ಹೊಸ ಮಾದರಿಯ ಪ್ರತಿರೋಧ : 

ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ನಿರುದ್ಯೋಗವನ್ನು ಕೇವಲ ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳುತ್ತವೆಯೇ ಹೊರತು ಪ್ರಾಮಾಣಿಕ ಪರಿಹಾರ ಹುಡುಕುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ, ಯುವ ಸಮೂಹ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರತಿರೋಧ ದಾಖಲಿಸುತ್ತಿದೆ. ಗಂಭೀರವಾದ ರಾಜಕೀಯ ಚರ್ಚೆಗಳ ನಡುವೆ ವಿಡಂಬನೆಯನ್ನು (Satire) ಅಸ್ತ್ರವನ್ನಾಗಿ ಬಳಸಿ ವ್ಯವಸ್ಥೆಯನ್ನು ಬೆತ್ತಲೆಗೊಳಿಸುತ್ತಿದೆ. 

ಧಾರ್ಮಿಕ ಧ್ರುವೀಕರಣದ ರಾಜಕಾರಣಕ್ಕೆ ಬ್ರೇಕ್ !

ಇಂದಿನ ರಾಜಕೀಯ ವ್ಯವಸ್ಥೆ ಯುವಕರನ್ನು ಧರ್ಮ, ಜಾತಿ ಮತ್ತು ಭಾವನಾತ್ಮಕ ವಿಷಯಗಳ ಹೆಸರಿನಲ್ಲಿ ದಾರಿ ತಪ್ಪಿಸಲು ಯತ್ನಿಸುತ್ತಿದೆ. ಆದರೆ, 'ಕಾಕ್ರೋಚ್ ಜನತಾ ಪಾರ್ಟಿ'ಯಂತಹ ಧ್ವನಿಗಳು ಯುವಕರ ಅಸಲಿ ಸಮಸ್ಯೆಗಳಾದ "ಶಿಕ್ಷಣ, ಉದ್ಯೋಗ"ದಂತಹ ಸಮಸ್ಯೆಯನ್ನು ಮುಂಚೂಣಿಗೆ ತರುತ್ತಿವೆ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ರಾಜಕಾರಣಕ್ಕೆ ಯುವಕರು ಬಲಿಯಾಗದೆ, ತಮ್ಮ ಹಕ್ಕುಗಳಿಗಾಗಿ ಒಂದಾಗುತ್ತಿದ್ದಾರೆ ಎಂಬುದಕ್ಕೆ ಇದು ಆಶಾದಾಯಕ ಮುನ್ಸೂಚನೆಯಂತಿದೆ. 

ಒಟ್ಟಿನಲ್ಲಿ, 'ಕಾಕ್ರೋಚ್ ಜನತಾ ಪಾರ್ಟಿ' ಎನ್ನುವುದು ಕೇವಲ ಒಂದು ವಿಡಂಬನೆಯಲ್ಲ,  ವ್ಯವಸ್ಥೆಯ ವಿರುದ್ಧ ಯುವಕರು ಸಾರಿದ ಬಂಡಾಯ. ಹಸಿದ ಮನಸ್ಸುಗಳು ಮತ್ತು ನಿರುದ್ಯೋಗಿ ಕೈಗಳು ಒಂದಾದಾಗ ಎಂತಹ ಬಲಿಷ್ಠ ಸಾಮ್ರಾಜ್ಯವೂ ನಡುಗುತ್ತದೆ ಎಂಬುದಕ್ಕೆ ಈ ಡಿಜಿಟಲ್ ಚಳವಳಿಯೇ ಸಾಕ್ಷಿ. ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಂಡು ಯುವಕರಿಗೆ ಉದ್ಯೋಗ ಭದ್ರತೆ ನೀಡದಿದ್ದರೆ, ಈ 'ಜಿರಳೆಗಳ ಸೈನ್ಯ' ವ್ಯವಸ್ಥೆಯ ಕೊಳಕನ್ನು ತೊಳೆದುಹಾಕಲು ಬೀದಿಗಿಳಿಯುವುದು ಖಚಿತ ಎಂಬಂತಹ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿದೆ. 

-ಶ್ರೀರಾಜ್ ವಕ್ವಾಡಿ

Wednesday, May 20, 2026

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ : ಭಾರತದ ಕುಸಿತಕ್ಕೆ ದಮನಕಾರಿ ಪ್ರಭುತ್ವವೇ ಕಾರಣ!?


ಭಾರತೀಯ ಪತ್ರಿಕೋದ್ಯಮ ನಾರ್ವೆಯ ಪತ್ರಿಕೋದ್ಯಮದ ಎದುರು ಇಷ್ಟೊಂದು ಕುಸಿತವಾಗಿರುವುದು ಯಾಕೆ!? ಅಲ್ಲಿ ಮುಖ್ಯವಾಗಿ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಕರೆಯುವುದಿಲ್ಲ. ವ್ಯವಸ್ಥೆ ಮತ್ತು ಸರ್ಕಾರದ ತಪ್ಪನ್ನು ಪ್ರಶ್ನಿಸುವುದನ್ನು ಅಲ್ಲಿನ ಮಾಧ್ಯಮ ಸಂಸ್ಥೆ ಮತ್ತು ಆಡಳಿತರೂಢ ಸರ್ಕಾರ ದೇಶದ್ರೋಹದ ಕೆಲಸ ಎಂದು ಬಿಂಬಿಸಿ ಲೇಬಲ್ ಮಾಡುವುದಿಲ್ಲ. ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳುವುದು ಪತ್ರಕರ್ತರ ಕರ್ತವ್ಯ ಎಂದು ಅಲ್ಲಿನ ಸರ್ಕಾರ ಮತ್ತು ಸಾರ್ವಜನಿಕರು ಗೌರವಿಸುತ್ತಾರೆ. 

ಭಾರತದಲ್ಲಿ ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿರುವ ಮಾಧ್ಯಮ ಸಂಸ್ಥೆಗಳ ಒಳಗಿರುವ "ಆಂತರಿಕ ಪತ್ರಿಕಾ ಸ್ವಾತಂತ್ರ್ಯದ" (Internal Press Freedom) ಕುಸಿತವೂ ಮುಖ್ಯಾಂಶ. ಸಂಸ್ಥೆಯ ನಿಲುವಿಗೆ ವಿರುದ್ಧವಾಗಿ ಅಥವಾ ಆಡಳಿತ ಮಂಡಳಿಗೆ ಇಷ್ಟವಿಲ್ಲದ ಸತ್ಯವನ್ನು ವರದಿ ಮಾಡಲು ಪತ್ರಕರ್ತ ಧೈರ್ಯ ತೋರಿದರೆ, ಆತನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಗುತ್ತದೆ. 

ಜಗತ್ತಿನ ಯಾವುದೇ ಸರ್ವಾಧಿಕಾರಿ ಅಥವಾ ದಮನಕಾರಿ ಪ್ರಭುತ್ವ ಅಧಿಕಾರಕ್ಕೆ ಬಂದಾಗ ಮೊದಲು ಮಾಡುವುದೇ ಪತ್ರಕರ್ತರ, ಬರಹಗಾರರ ಮತ್ತು ಬುದ್ಧಿಜೀವಿಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ. ಆದರೆ, ಧ್ವನಿಯನ್ನು ಅಡಗಿಸುವುದರಿಂದ ಸತ್ಯ ಸಾಯುವುದಿಲ್ಲ, ಬದಲಿಗೆ ತಾತ್ಕಾಲಿಕವಾಗಿ ಅದು ಸಾರ್ವಜನಿಕ ವಲಯದಿಂದ ಮರೆಯಾಗಬಹುದು.

ನಾರ್ವೆ ಪ್ರಧಾನಿ ಜೋನಸ್ ಗಹರ್ ಸ್ಟೋರ್ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆ (Joint Press Statement) ನೀಡಿದ ನಂತರ ಪ್ರಧಾನಿ ಮೋದಿ ಅವರು ವೇದಿಕೆಯಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ನಾರ್ವೆಯ 'ಡಾಗ್ಸ್‌ವಿಸೆನ್' (Dagsavisen) ಪತ್ರಿಕೆಯ ಯುವ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ (Helle Lyng Svendsen) ಅವರು ಜೋರಾಗಿ, "ಪ್ರಧಾನಿ ಮೋದಿಯವರೇ, ಜಗತ್ತಿನ ಅತ್ಯಂತ ಮುಕ್ತ ಮಾಧ್ಯಮದಿಂದ ಕೆಲವು ಪ್ರಶ್ನೆಗಳನ್ನು ನೀವು ಏಕೆ ಸ್ವೀಕರಿಸಬಾರದು?" ಎಂದು ಪ್ರಶ್ನಿಸಿದರು. ಆದರೆ, ಪ್ರಧಾನಿ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದರು. 

ಇದನ್ನು ವಿಡಿಯೋ ಸಮೇತ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಹೆಲ್ಲೆ ಲಿಂಗ್, "ಭಾರತದ ಪ್ರಧಾನಿ ನನ್ನ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ನನಗೆ ಗೊತ್ತಿತ್ತು. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ 1ನೇ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ" ಎಂದು ಬರೆದುಕೊಂಡರು. ಇದು ತೀವ್ರ ಚರ್ಚೆಗೆ ಕಾರಣವಾಯಿತು. ಜಾಗತಿಕ ಅವಮಾನವನ್ನೂ ಪ್ರಧಾನಿ ಮೋದಿ ಅವರ ನಿರುತ್ತರದಿಂದ ಭಾರತ ಅನುಭವಿಸುವಂತಾಯಿತು. ದೇಶದಲ್ಲಿ ಪ್ರಧಾನಿ ಮೋದಿ ಅವರ ನಡೆಗೆ ಕಾಂಗ್ರೆಸ್ ಸೇರಿ ಇತರೆ ಪ್ರತಿಪಕ್ಷಗಳು ಖಂಡಿಸಿದವು. 

ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ಆ ಯುವ ಪತ್ರಕರ್ತೆಯನ್ನು ಪ್ರೆಸ್ ಬ್ರೀಫಿಂಗ್‌ಗೆ ಆಹ್ವಾನಿಸಿತು. ಅಲ್ಲಿ ಹೆಲ್ಲೆ ಲಿಂಗ್ ನೇರವಾಗಿ, "ನಾವು ನಿಮ್ಮನ್ನು ಏಕೆ ನಂಬಬೇಕು? ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸುತ್ತೀರಾ ಮತ್ತು ಪ್ರಧಾನಿ ಮೋದಿ ಎಂದಾದರೂ ಪತ್ರಕರ್ತರ ಕಠಿಣ ಪ್ರಶ್ನೆಗಳನ್ನು ಎದುರಿಸುತ್ತಾರಾ?" ಎಂದು ಪ್ರಶ್ನಿಸಿದರು.

ಇದಕ್ಕೆ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಸಿಬಿ ಜಾರ್ಜ್ ಅವರು ತೀಕ್ಷ್ಣವಾಗಿ ಉತ್ತರಿಸಿ, "ಭಾರತ 5000 ವರ್ಷಗಳ ಇತಿಹಾಸವಿರುವ, ಜಗತ್ತಿನ 1/6 ಭಾಗದಷ್ಟು ಜನಸಂಖ್ಯೆ ಹೊಂದಿರುವ ಬೃಹತ್ ಪ್ರಜಾಪ್ರಭುತ್ವ. ನಮ್ಮಲ್ಲಿ ಪ್ರಬಲ ಸಂವಿಧಾನ ಮತ್ತು ನ್ಯಾಯಾಲಯಗಳಿವೆ. ಕೆಲವು ಎನ್‌ಜಿಒಗಳ (NGO) ವರದಿಗಳನ್ನು ನೋಡಿ ಭಾರತವನ್ನು ನಿರ್ಣಯಿಸಬೇಡಿ" ಎಂದು ತಿರುಗೇಟು ನೀಡಿದರು. 

ಈ ಘಟನೆಯ ಬೆನ್ನಲ್ಲೇ ನಾರ್ವೆಯ ಪ್ರಮುಖ ಪತ್ರಿಕೆ 'ಆಫ್ಟೆನ್‌ಪೋಸ್ಟನ್' (Aftenposten) ಪ್ರಧಾನಿ ಮೋದಿಯವರನ್ನು ಹಾವಾಡಿಗನಂತೆ (Snake Charmer) ಚಿತ್ರಿಸುವ ಕಾರ್ಟೂನ್ ಒಂದನ್ನು ಪ್ರಕಟಿಸಿತು. ಇದರಲ್ಲಿ ಮೋದಿಯವರು ಪುಂಗಿ ಊದಿದಾಗ ಹಾವಿನ ಆಕಾರದ ಇಂಧನ ಪೈಪ್ ಏರಿಕೆ ಆಗುತ್ತಿರುವುದನ್ನು (ಬೆಲೆ ಏರಿಕೆಯ ವ್ಯಂಗ್ಯ ಚಿತ್ರ) ತೋರಿಸಲಾಗಿತ್ತು. ಇದು ಜಾಗತಿಕ ಮಟ್ಟದಲ್ಲಿ ಭಾರತೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಪಾಶ್ಚಿಮಾತ್ಯ ಮಾಧ್ಯಮಗಳ ಹಳೆಯ "ವಸಾಹತುಶಾಹಿ ಮತ್ತು ಜನಾಂಗೀಯ ನಿಂದನೆ" (Racist/Colonial Mindset) ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ವಿವಾದದ ಬೆನ್ನಲ್ಲೇ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಗಳನ್ನು ಮೆಟಾ (Meta) ಸಂಸ್ಥೆ ಸಸ್ಪೆಂಡ್ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿದ ಆಕೆ, "ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಾನು ತೆತ್ತ ಸಣ್ಣ ಇನಾಮು ಇದು" ಎಂದು ವ್ಯಂಗ್ಯವಾಡಿದ್ದಾರೆ.

ಇಷ್ಟೆಲ್ಲಾ ಚರ್ಚೆ, ವಾದ, ವಿವಾದಗಳ ನಡುವೆ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್' (RSF) ಬಿಡುಗಡೆ ಮಾಡಿರುವ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (World Press Freedom Index) ಒಟ್ಟು 180 ದೇಶಗಳ ಪಟ್ಟಿಯಲ್ಲಿ ನಾರ್ವೇ 1ನೇ ಸ್ಥಾನದಲ್ಲಿದ್ದರೆ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ 157ನೇ ಸ್ಥಾನಕ್ಕೆ ಕುಸಿದಿದೆ.

ಭಾರತ ತನ್ನ ನೆರೆಹೊರೆಯ ದೇಶಗಳಾದ ನೇಪಾಳ (87), ಶ್ರೀಲಂಕಾ (134) ಮತ್ತು ಪಾಕಿಸ್ತಾನ (153) ದೇಶಗಳಿಗಿಂತಲೂ ಕೆಳಗಿನ ಸ್ಥಾನದಲ್ಲಿದೆ. 

ನಾರ್ವೆಯಲ್ಲಿ ಪತ್ರಿಕೋದ್ಯಮಕ್ಕೆ ಬಲವೇ ಸಾಂವಿಧಾನಿಕ ರಕ್ಷಣೆ :

ನಾರ್ವೇ ಸಂವಿಧಾನದ 100ನೇ ವಿಧಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ಹಕ್ಕನ್ನು ಸಂಪೂರ್ಣವಾಗಿ ಖಾತರಿಪಡಿಸುತ್ತದೆ. ಅಲ್ಲಿ ಯಾರಿಗೇ ಆದರೂ ಮಾಹಿತಿ ನೀಡಲು ಸರ್ಕಾರ ನಿರಾಕರಿಸುವಂತಿಲ್ಲ. ನಾರ್ವೇಯಲ್ಲಿ ಮಾಧ್ಯಮ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷದ ಅಥವಾ ದೈತ್ಯ ಕಾರ್ಪೊರೇಟ್ ಕಂಪನಿಗಳ ಮುಷ್ಠಿಯಲ್ಲಿಲ್ಲ. ಅಲ್ಲಿನ ಸರ್ಕಾರ ಮಾಧ್ಯಮಗಳಿಗೆ ಧನಸಹಾಯ ನೀಡುತ್ತದೆಯಾದರೂ, ಅದರ ಸಂಪಾದಕೀಯ ವಿಷಯ (Editorial content) ನಿರ್ಧಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಮುಖ್ಯವಾಗಿ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಕರೆಯುವುದಿಲ್ಲ. ಪ್ರಶ್ನಿಸಿದ ಪತ್ರಕರ್ತರನ್ನು ಮಾಧ್ಯಮ ಸಂಸ್ಥೆಯೂ ಸಕಾರಣವಿಲ್ಲದೆ ಹೊರಗೆ ಹಾಕುವುದಿಲ್ಲ. ವ್ಯವಸ್ಥೆ ಮತ್ತು ಸರ್ಕಾರದ ತಪ್ಪನ್ನು ಪ್ರಶ್ನಿಸುವುದನ್ನು ಅಲ್ಲಿನ ಮಾಧ್ಯಮ ಸಂಸ್ಥೆ ಮತ್ತು ಆಡಳಿತರೂಢ ಸರ್ಕಾರ ದೇಶದ್ರೋಹದ ಕೆಲಸ ಎಂದು ಬಿಂಬಿಸಿ ಲೇಬಲ್ ಮಾಡುವುದಿಲ್ಲ. ಪತ್ರಕರ್ತರನ್ನು ದೇಶದ್ರೋಹಿಗಳಂತೆ ನೋಡುವುದಿಲ್ಲ ಅಥವಾ ಅವರ ಮೇಲೆ ದೈಹಿಕ ಹಲ್ಲೆ, ಕಾನೂನು ಕ್ರಮಗಳ ಭಯ ಇರುವುದಿಲ್ಲ. ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳುವುದು ಪತ್ರಕರ್ತರ ಕರ್ತವ್ಯ ಎಂದು ಅಲ್ಲಿನ ಸರ್ಕಾರ ಮತ್ತು ಸಾರ್ವಜನಿಕರು ಗೌರವಿಸುತ್ತಾರೆ. ಮತ್ತು ಮಾಧ್ಯಮ ಸಂಸ್ಥೆಯೂ ಆ ರೀತಿಯಾಗಿ ನೇರ ನಿಷ್ಠುರವಾಗಿ, ಪಕ್ಷಾತೀತವಾಗಿ ಇರುವ ಪತ್ರಕರ್ತರನ್ನು ಇನ್ನಷ್ಟು ಉತ್ತುಂಗಕ್ಕೆ ಬೆಳೆಸುತ್ತದೆ ವಿನಃ ಕಾಲೆಳೆಯುವುದಿಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ. 

ಭಾರತ 157ನೇ ಸ್ಥಾನಕ್ಕೆ ಕುಸಿಯಲು ಕಾರಣಗಳೇನು?

ಸ್ವತಂತ್ರ ಪತ್ರಕರ್ತರು ಮತ್ತು ಸರ್ಕಾರದ ನೀತಿಗಳನ್ನು ವಿಶ್ಲೇಷಣೆ ಮಾಡುವ ಮಾಧ್ಯಮ ಸಂಸ್ಥೆಗಳ ಧ್ವನಿಯನ್ನು ಅಡಗಿಸಲು ಗಂಭೀರ ಕಾನೂನುಗಳನ್ನು ಬಳಸಲಾಗುತ್ತಿದೆ. ರಾಷ್ಟ್ರೀಯ ಭದ್ರತೆ, ದೇಶದ್ರೋಹದ ಕಾಯ್ದೆ ಮತ್ತು UAPA (Unlawful Activities Prevention Act) ಅಡಿಯಲ್ಲಿ ಪತ್ರಕರ್ತರನ್ನು ಬಂಧಿಸುತ್ತಿರುವುದು ಈ ಭಾರಿ ಕುಸಿತಕ್ಕೆ ಮೂಲ ಕಾರಣ. 

ಭಾರತದ ಪ್ರಮುಖ ಮುಖ್ಯವಾಹಿನಿಯ ಮಾಧ್ಯಮಗಳು (Mainstream Media) ಕೆಲವೇ ಕೆಲವು ಪ್ರಭಾವಿ ಉದ್ಯಮಿಗಳ ಒಡೆತನದಲ್ಲಿವೆ. ಇವು ಪ್ರಭುತ್ವದೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ, ಜನಸಾಮಾನ್ಯರ ನೈಜ ಸಮಸ್ಯೆಗಳಾದ ನಿರುದ್ಯೋಗ, ಆರ್ಥಿಕ ಕುಸಿತ, ಭ್ರಷ್ಟಾಚಾರಗಳ ಬಗ್ಗೆ ವರದಿ ಮಾಡುವ ಬದಲಿಗೆ, ಕೇವಲ ಸರ್ಕಾರದ ಪ್ರಚಾರದ ಸಾಧನಗಳಾಗಿ ಮಾರ್ಪಟ್ಟಿವೆ. ಸರ್ಕಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಎಂತಹ ಕೆಳಮಟ್ಟಕ್ಕೆ ಇಳಿಯಲೂ ಹೇಸುವುದಿಲ್ಲ. ಇನ್ನು, ಗ್ರಾಮೀಣ ಭಾಗಗಳಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪತ್ರಕರ್ತರಿಗೆ ಭಾರತದಲ್ಲಿ ಸೂಕ್ತ ರಕ್ಷಣೆ ಇಲ್ಲ. ದೈಹಿಕ ಹಲ್ಲೆಗಳು, ಕೊಲೆ ಬೆದರಿಕೆಗಳು ಮತ್ತು ಆನ್‌ಲೈನ್‌ನಲ್ಲಿ (ವಿಶೇಷವಾಗಿ ಮಹಿಳಾ ಪತ್ರಕರ್ತೆಯರ ವಿರುದ್ಧ) ನಡೆಯುವ ವ್ಯವಸ್ಥಿತ ಟ್ರೋಲಿಂಗ್‌ಗಳು ಪತ್ರಕರ್ತರಲ್ಲಿ ಒಂದು ರೀತಿಯ ಸ್ವಯಂ-ಸೆನ್ಸಾರ್‌ಶಿಪ್ (Self-censorship) ಅಂದರೆ, ತಾವಾಗಿಯೇ ಸತ್ಯವನ್ನು ಬರೆಯಲು ಹೆದರುವ ವಾತಾವರಣವನ್ನು ಸೃಷ್ಟಿಸಿದೆ. 

ಭಾರತದ ದೃಶ್ಯ ಮಾಧ್ಯಮಗಳು (TV Channels) ಇಂದು ಕೇವಲ ರಾಜಕೀಯ ಧ್ರುವೀಕರಣ ಮತ್ತು ಧಾರ್ಮಿಕ ವಿವಾದಗಳನ್ನೇ ಪ್ರಮುಖ ವಿಷಯಗಳನ್ನಾಗಿ ಚರ್ಚಿಸುತ್ತಿವೆ. ಇದು ಸಮಾಜದಲ್ಲಿ ದ್ವೇಷವನ್ನು ಬಿತ್ತುವುದರ ಜೊತೆಗೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಪತ್ರಕರ್ತರ ಧ್ವನಿ ಅಡಗಿಸುವುದು ಸತ್ಯವನ್ನು ಸಾಯಿಸಿದ ಹಾಗೆ : 

ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ನಿರಂತರವಾಗಿ ಕಾವಲು ಕಾಯುವ ನಾಲ್ಕನೇ ಅಂಗವೇ ಮಾಧ್ಯಮ (Fourth Estate). ಪತ್ರಕರ್ತರ ಧ್ವನಿಯನ್ನು ಅಡಗಿಸಿದಾಗ, ಆಡಳಿತಗಾರರ ತಪ್ಪುಗಳನ್ನು, ಭ್ರಷ್ಟಾಚಾರವನ್ನು ಮತ್ತು ವೈಫಲ್ಯಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗುತ್ತದೆ. ಆಗ ಜನಸಾಮಾನ್ಯರಿಗೆ ತಲುಪಬೇಕಾದ 'ನಿಜವಾದ ಸತ್ಯ' ಮರೆಯಾಗಿ, ಕೇವಲ ಪ್ರಭುತ್ವ ಬಯಸುವ 'ಅರ್ಧಸತ್ಯ' ಅಥವಾ 'ಪ್ರಚಾರ' (Propaganda) ಮಾತ್ರ ಸತ್ಯದಂತೆ ಬಿಂಬಿತವಾಗುತ್ತದೆ.

ಜಗತ್ತಿನ ಯಾವುದೇ ಸರ್ವಾಧಿಕಾರಿ ಅಥವಾ ದಮನಕಾರಿ ಪ್ರಭುತ್ವ ಅಧಿಕಾರಕ್ಕೆ ಬಂದಾಗ ಮೊದಲು ಮಾಡುವುದೇ ಪತ್ರಕರ್ತರ, ಬರಹಗಾರರ ಮತ್ತು ಬುದ್ಧಿಜೀವಿಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ. ಆದರೆ, ಧ್ವನಿಯನ್ನು ಅಡಗಿಸುವುದರಿಂದ ಸತ್ಯ ಸಾಯುವುದಿಲ್ಲ, ಬದಲಿಗೆ ತಾತ್ಕಾಲಿಕವಾಗಿ ಅದು ಸಾರ್ವಜನಿಕ ವಲಯದಿಂದ ಮರೆಯಾಗಬಹುದು. ಸತ್ಯ ಒಂದಲ್ಲಾ ಒಂದು ರೀತಿಯಲ್ಲಿ ಹೊರಬಂದೇ ಬರುತ್ತದೆ. 

ಎಷ್ಟು ಕಠಿಣವಾಗಿ ಸತ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೋ, ಅಷ್ಟು ತೀವ್ರವಾಗಿ ಅದು ಮತ್ತೊಂದು ರೂಪದಲ್ಲಿ (ಪರ್ಯಾಯ ಮಾಧ್ಯಮಗಳು, ಅಥವಾ ಇಂದಿನ ಡಿಜಿಟಲ್ ಮಾಧ್ಯಮಗಳ ಮೂಲಕ) ಹೊರಬಂದೇ ತೀರುತ್ತದೆ. 

'ಯಾವುದೋ ಒಂದು 'ಪ್ರಭಾವಿ ಶಕ್ತಿ' ಪ್ರಕಟಿಸಲು, ಧ್ವನಿಸಲು ಅಡ್ಡಗಾಲು ಹಾಕಿ ಮುಚ್ಚಿಡಲು ಯತ್ನಿಸುವುದೇ ನಿಜವಾದ ಸುದ್ದಿ, ಉಳಿದುದೆಲ್ಲವೂ ಕೇವಲ ಹಣ ಕೊಟ್ಟು ಮಾಡುವ ಪ್ರಚಾರ' ಎನ್ನುವುದು ಅಕ್ಷರಶಃ ಸತ್ಯ.‌ ಆದ್ದರಿಂದ, ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವುದು ಎಂದರೆ ಕೇವಲ ವ್ಯಕ್ತಿಯೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದಲ್ಲ, ಅದು ಇಡೀ ಸಮಾಜವನ್ನು ಕತ್ತಲಿನಲ್ಲಿಟ್ಟು ಸತ್ಯದ ಕೊಲೆ ಮಾಡಿದಂತೆ. 

ಇನ್ನು, ಪತ್ರಿಕಾ ಸ್ವಾತಂತ್ರ್ಯದ ಕುರಿತಂತೆ ನಾವು ಕೇವಲ "ಬಾಹ್ಯ ಒತ್ತಡಗಳನ್ನು" (ಅಂದರೆ ಸರ್ಕಾರ, ರಾಜಕಾರಣಿಗಳು ಅಥವಾ ತನಿಖಾ ಸಂಸ್ಥೆಗಳ ದಬ್ಬಾಳಿಕೆಯನ್ನು) ಮಾತ್ರ ನೋಡುತ್ತೇವೆ. ಆದರೆ, ಇಂದಿನ ದಿನಗಳಲ್ಲಿ ಅದಕ್ಕಿಂತಲೂ ಅಪಾಯಕಾರಿಯಾಗಿ ಬೆಳೆಯುತ್ತಿರುವ ಮಾಧ್ಯಮ ಸಂಸ್ಥೆಗಳ ಒಳಗಿರುವ "ಆಂತರಿಕ ಪತ್ರಿಕಾ ಸ್ವಾತಂತ್ರ್ಯದ" (Internal Press Freedom) ಕುಸಿತವೂ ಮುಖ್ಯಾಂಶ. ಇದೇ ಕಾರಣಕ್ಕೆ  ಪತ್ರಕರ್ತರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಪ್ರಾಮಾಣಿಕತೆಯನ್ನು ಬದಿಗಿಟ್ಟು, ಸಂಸ್ಥೆಯ "ಅಜೆಂಡಾ"ಕ್ಕೆ ತಕ್ಕಂತೆ ವರದಿಗಳನ್ನು ಸೃಷ್ಟಿಸುವ ಯಂತ್ರಗಳಾಗಿ ಬದಲಾಗುತ್ತಿದ್ದಾರೆ.   

ಸಂಸ್ಥೆಯ ನಿಲುವಿಗೆ ವಿರುದ್ಧವಾಗಿ ಅಥವಾ ಆಡಳಿತ ಮಂಡಳಿಗೆ ಇಷ್ಟವಿಲ್ಲದ ಸತ್ಯವನ್ನು ವರದಿ ಮಾಡಲು ಪತ್ರಕರ್ತ ಧೈರ್ಯ ತೋರಿದರೆ, ಆತನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಗುತ್ತದೆ. ಈ ಆರ್ಥಿಕ ಅಭದ್ರತೆಯು ಪತ್ರಕರ್ತರನ್ನು ಆಂತರಿಕವಾಗಿ ಗುಲಾಮರನ್ನಾಗಿಸುತ್ತಿದೆ. ಅವರು ಸತ್ಯ ಗೊತ್ತಿದ್ದರೂ ಹೊಟ್ಟೆಪಾಡಿಗಾಗಿ ಮೌನಕ್ಕೆ ಶರಣಾಗುತ್ತಿದ್ದಾರೆ.

ಒಟ್ಟಿನಲ್ಲಿ, ಪತ್ರಿಕಾ ಸ್ವಾತಂತ್ರ್ಯ ಎಂಬುದು ಕೇವಲ ಪತ್ರಕರ್ತರ ಹಕ್ಕಲ್ಲ, ಅದು ನಾಗರಿಕರ ಹಕ್ಕು. ಮಾಧ್ಯಮಗಳು ಸ್ವತಂತ್ರವಾಗಿದ್ದಾಗ ಮಾತ್ರ ದೇಶದ ಜನರಿಗೆ ಸರಿಯಾದ ಮಾಹಿತಿ ಸಿಗಲು ಸಾಧ್ಯ. ನಾರ್ವೇ ದೇಶವು ಪ್ರಭುತ್ವವನ್ನು ನಿರ್ಭೀತಿಯಿಂದ ಪ್ರಶ್ನಿಸುವ ವಾತಾವರಣವನ್ನು ಮಾಧ್ಯಮಗಳಿಗೆ ನೀಡಿದ್ದರೆ, ಭಾರತದಲ್ಲಿ ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಭಾರತ ಜಾಗತಿಕ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತವು ಮಾಧ್ಯಮಗಳ ಸ್ವಾತಂತ್ರ್ಯವನ್ನು ಮರುಸ್ಥಾಪಿಸಬೇಕಾದ ತುರ್ತು ಅಗತ್ಯವಿದೆ. 

-ಶ್ರೀರಾಜ್ ವಕ್ವಾಡಿ

Tuesday, May 19, 2026

ಗ್ರೇಟ್ ನಿಕೋಬಾರ್ : ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರದ ವಿನಾಶಕಾರಿ ಯೋಜನೆ!


ಏನೇ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಅರಣ್ಯ ಹಕ್ಕುಗಳ ಕಾಯ್ದೆ (FRA 2006) ಪ್ರಕಾರ ಸ್ಥಳೀಯ ಆದಿವಾಸಿಗಳ ಒಪ್ಪಿಗೆ ಕಡ್ಡಾಯ. ಆದರೆ, ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ಧಾರೆ ಎರೆಯಲು ಕೇಂದ್ರ ಸರ್ಕಾರ ನಕಲಿ ಒಪ್ಪಿಗೆಗಳ ನಾಟಕವಾಡಿತ್ತು.  ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ಹಠಕ್ಕೆ ಬಿದ್ದಿದ್ದ ಕೇಂದ್ರ ಸರ್ಕಾರ, ಮಾಜಿ ಅರಣ್ಯ ಅಧಿಕಾರಿ ಮೀನಾ ಗುಪ್ತಾ ಸಲ್ಲಿಸಿದ್ದ ಅರ್ಜಿಯ ಸಿಂಧುತ್ವವನ್ನೇ ಪ್ರಶ್ನಿಸಿತ್ತು. ಅರ್ಜಿದಾರರು ಹೈದರಾಬಾದ್‌ನವರಾಗಿದ್ದು, ದ್ವೀಪದ ನಿವಾಸಿಯಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಲು ಸರ್ಕಾರ ಕೋರಿತ್ತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯ ಹಿಂದೆ ದೇಶದ ಬೃಹತ್ ಕಾರ್ಪೊರೇಟ್ ಶಕ್ತಿಗಳ ಕೃಪಾಪೋಷಣೆ ಎದ್ದು ಕಾಣುತ್ತಿದೆ.

ಅದು ಸಾವಿರಾರು ವರ್ಷಗಳಿಂದ ಪ್ರಕೃತಿ ತಾನಾಗಿಯೇ ರೂಪಿಸಿಕೊಂಡ ಜಾಗತಿಕ ಜೀವವೈವಿಧ್ಯದ ಅತ್ಯಂತ ಅಪರೂಪದ ಶಕ್ತಿ.  ನಿಕೋಬಾರ್, ದಟ್ಟವಾದ ಅಮೆಜಾನ್ ಮಾದರಿಯ ಉಷ್ಣವಲಯದ ಮಳೆಕಾಡುಗಳಿಂದ (Tropical Rainforests) ಆವೃತವಾಗಿದೆ. ಸೂರ್ಯನ ಬೆಳಕು ಕೂಡ ನೆಲ ಮುಟ್ಟಲು ಹೆಣಗಾಡುವಂತೆ ಇಲ್ಲಿ ದಟ್ಟ ಅರಣ್ಯ ವ್ಯಾಪಿಸಿದೆ. 

ಇಂತಹ ಒಂದು ನೈಸರ್ಗಿಕ ಅದ್ಭುತವನ್ನು ಇಂದು ಕಾರ್ಪೊರೇಟ್ ಕಾಂಕ್ರೀಟ್ ಕಾಡನ್ನಾಗಿ ಪರಿವರ್ತಿಸಲು ಸರ್ಕಾರ ಹೊರಟಿದೆ. ಬಂದರುಗಳು, ಐಷಾರಾಮಿ ಹೋಟೆಲ್‌ಗಳು ಮತ್ತು ವಿಮಾನ ನಿಲ್ದಾಣಗಳ ಹೆಸರಿನಲ್ಲಿ ಈ ದ್ವೀಪದ ಕಡಲತೀರಗಳನ್ನು ವಾಣಿಜ್ಯೀಕರಣಗೊಳಿಸಿದರೆ, ಇಲ್ಲಿನ ಶಾಂತಿ, ಹಸಿರು ಮತ್ತು ಆದಿವಾಸಿಗಳ ಅಸ್ತಿತ್ವ ಶಾಶ್ವತವಾಗಿ ಇತಿಹಾಸದ ಪುಟಗಳನ್ನು ಸೇರಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಗ್ರೇಟ್ ನಿಕೋಬಾರ್ ಎನ್ನುವುದು ಬಂಡವಾಳಶಾಹಿಗಳು ಹಣ ಮಾಡುವ ರಿಯಲ್ ಎಸ್ಟೇಟ್ ಭೂಮಿಯಲ್ಲ ಎನ್ನುವುದನ್ನು ನೆನಪಿಸಿಕೊಡಬೇಕಿದೆ‌. 

ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ನಿಕೋಬಾರ್ : 

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯ ಹಿಂದೆ ದೇಶದ ಬೃಹತ್ ಕಾರ್ಪೊರೇಟ್ ಶಕ್ತಿಗಳ ಕೃಪಾಪೋಷಣೆ ಎದ್ದು ಕಾಣುತ್ತಿದ್ದು, ಇದು ಕೇವಲ ಬಂಡವಾಳಶಾಹಿಗಳ ಲಾಭಕ್ಕಾಗಿ ನಡೆಯುತ್ತಿರುವ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟವಾಗುತ್ತಿದೆ.ಈ ಬೃಹತ್ ವಿನಾಶಕಾರಿ ಯೋಜನೆಯ ಹಿಂದೆ ಕಾರ್ಪೊರೇಟ್ ಹಿತಾಸಕ್ತಿಗಳು ಮತ್ತು ಜನವಿರೋಧಿ ಧೋರಣೆ ಅಡಗಿದೆ.  

ಬರೋಬ್ಬರಿ 81,000 ಕೋಟಿಗೂ ಅಧಿಕ ವೆಚ್ಚದ ಈ ಯೋಜನೆಯಲ್ಲಿ ಅಂತರರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ (ICTT), ಸೇನಾ ನೆಲೆ, ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಮತ್ತು ಪ್ರವಾಸಿ ತಾಣಗಳ ನಿರ್ಮಾಣ ಸೇರಿವೆ. ಆದರೆ, ಇದರ ನಿಜವಾದ ಲಾಭ ಯಾರಿಗೆ? ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ. 

ಹಿಂದೂ ಮಹಾಸಾಗರದ ಪ್ರಮುಖ ವ್ಯಾಪಾರ ಮಾರ್ಗದಲ್ಲಿರುವ ಈ ದ್ವೀಪವನ್ನು ಕಾರ್ಪೊರೇಟ್ ದಿಗ್ಗಜರಿಗೆ ಒಪ್ಪಿಸುವ ಮೂಲಕ, ಜಾಗತಿಕ ಸಾಗರ ವ್ಯಾಪಾರದ ಮೇಲೆ ಖಾಸಗಿ ಏಕಸ್ವಾಮ್ಯವನ್ನು ಸ್ಥಾಪಿಸಲು ಸರ್ಕಾರ ದಾರಿ ಮಾಡಿಕೊಡುತ್ತಿದೆ.

ಸೂಕ್ಷ್ಮ ಪರಿಸರ ವಲಯದಲ್ಲಿ ಮೆಗಾ ಸಿಟಿ ಮತ್ತು ರೆಸಾರ್ಟ್‌ಗಳನ್ನು ನಿರ್ಮಿಸುವ ಮೂಲಕ ಕಾರ್ಪೊರೇಟ್ ರಿಯಲ್ ಎಸ್ಟೇಟ್ ಮತ್ತು ಪ್ರವಾಸೋದ್ಯಮ ಮಾಫಿಯಾಗೆ ಮುಕ್ತ ಪರವಾನಗಿಯನ್ನು ಕಾರ್ಪೊರೇಟ್ ಕುಳಗಳಿಗೆ ಕೇಂದ್ರ ಸರ್ಕಾರವೇ ಧಾರೆ ಎರೆಯುತ್ತಿದೆ. 

ಇನ್ನು, ಈ ಯೋಜನೆಗಾಗಿ ಸುಮಾರು 130 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ನಿತ್ಯಹರಿದ್ವರ್ಣ ಕಾಡುಗಳನ್ನು ನಾಶಪಡಿಸಲಾಗುತ್ತಿದೆ. ಅಂದರೆ, ಅಂದಾಜು 8.5 ಲಕ್ಷಕ್ಕೂ ಅಧಿಕ ಮರಗಳನ್ನು ಕಡಿಯಲಾಗುತ್ತಿದೆ. ಇದರ ಅರ್ಥ ಇಲ್ಲಿ, ಅಕ್ಷರಶಃ ಪರಿಸರದ ಮಾರಣಹೋಮ ನಡೆಯುತ್ತಿದೆ. ಅದಕ್ಕೆ ಮುಹೂರ್ತವನ್ನೂ ಕೇಂದ್ರ ಸರ್ಕಾರವೇ ಇಟ್ಟಿದೆ. 

ಆದಿವಾಸಿಗಳ ಹಕ್ಕುಗಳ ವ್ಯವಸ್ಥಿತ ಹರಣ : 

ಈ ದ್ವೀಪ ಶತಮಾನಗಳಿಂದ ಅಲ್ಲಿನ ಮೂಲ ನಿವಾಸಿಗಳಾದ ‘ಶೋಂಪೆನ್’ (Shompen) ಮತ್ತು ‘ನಿಕೋಬಾರೀಸ್’ (Nicobarese) ಸಮುದಾಯಗಳ ತಾಯ್ನಾಡು. 

 ಕಾರ್ಪೊರೇಟ್ ಕಂಪನಿಗಳ ಜೆಸಿಬಿ ಯಂತ್ರಗಳು ದ್ವೀಪಕ್ಕೆ ಲಗ್ಗೆ ಇಡುವುದರಿಂದ ಅತ್ಯಂತ ಕನಿಷ್ಠ ಜನಸಂಖ್ಯೆ ಹೊಂದಿರುವ, ಬಾಹ್ಯ ಪ್ರಪಂಚದಿಂದ ದೂರವಿರುವ ಶೋಂಪೆನ್ ಆದಿವಾಸಿಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ. ಇದರಿಂದ ಸಾಂಸ್ಕೃತಿಕ ನರಮೇಧವೇ ಆಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದಿವಾಸಿಗಳ ಹಕ್ಕುಗಳ ಕಾಯ್ದೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅವರ ಒಪ್ಪಿಗೆಯಿಲ್ಲದೆಯೇ ಈ ಭೂಮಿಯನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಧಾರೆ ಎರೆಯಲಾಗುತ್ತಿದೆ. ಇದು ಬಂಡವಾಳಶಾಹಿ ಹಿತಾಸಕ್ತಿಗಾಗಿ ದುರ್ಬಲ ಜನಸಮುದಾಯದ ಮೇಲೆ ನಡೆಸುತ್ತಿರುವ ದೌರ್ಜನ್ಯವಲ್ಲದೇ ಮತ್ತೇನಲ್ಲ. 

ಅಭಿವೃದ್ಧಿಯ ಮುಖವಾಡ, ಕೋರ್ಟ್ ತಪರಾಕಿ : 

ಕಾರ್ಪೊರೇಟ್ ಒಲವಿನ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಭದ್ರತೆ’ ಮತ್ತು ‘ಅಭಿವೃದ್ಧಿ’ಯ ಮುಖವಾಡ ತೊಟ್ಟು, ಗ್ರೇಟ್ ನಿಕೋಬರ್ ದ್ವೀಪವನ್ನು ಬಂಡವಾಳಶಾಹಿ ದಣಿಗಳ ಲೂಟಿಗೆ ಒಪ್ಪಿಸಲು ನಡೆಸಿದ್ದ ವ್ಯವಸ್ಥಿತ ಸಂಚಿಗೆ ಕೊಲ್ಕತ್ತಾ ಹೈಕೋರ್ಟ್‌ನ ಪೋರ್ಟ್ ಬ್ಲೇರ್ ಪೀಠ ಪ್ರಬಲ ತಪರಾಕಿ ನೀಡಿದೆ.

ಈ ಬೃಹತ್ ವಿನಾಶಕಾರಿ ಯೋಜನೆಗೆ ವಿರುದ್ಧವಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ವಜಾಗೊಳಿಸಲು ಕೇಂದ್ರ ಸರ್ಕಾರ ಹೂಡಿದ್ದ ಎಲ್ಲಾ ತಾಂತ್ರಿಕ ಕುತಂತ್ರಗಳನ್ನು ಹೈಕೋರ್ಟ್ ಧೂಳೀಪಟ ಮಾಡಿತ್ತು. ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ಹಠಕ್ಕೆ ಬಿದ್ದಿದ್ದ ಕೇಂದ್ರ ಸರ್ಕಾರ, ಮಾಜಿ ಅರಣ್ಯ ಅಧಿಕಾರಿ ಮೀನಾ ಗುಪ್ತಾ ಸಲ್ಲಿಸಿದ್ದ ಅರ್ಜಿಯ ಸಿಂಧುತ್ವವನ್ನೇ ಪ್ರಶ್ನಿಸಿತ್ತು. ಅರ್ಜಿದಾರರು ಹೈದರಾಬಾದ್‌ನವರಾಗಿದ್ದು, ದ್ವೀಪದ ನಿವಾಸಿಯಲ್ಲ ಎಂಬ ನೆಪ ನೀಡಿ ಅರ್ಜಿಯನ್ನು ವಜಾಗೊಳಿಸಲು ಸರ್ಕಾರ ಕೋರಿತ್ತು. ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರಿದ್ದ ಪೀಠ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿತು. 

"ಅತ್ಯಂತ ದುರ್ಬಲ ಮತ್ತು ಬಾಹ್ಯ ಪ್ರಪಂಚಕ್ಕೆ ಸುಲಭವಾಗಿ ಸಿಗದ ಆದಿವಾಸಿ ಸಮುದಾಯಗಳ ಪರವಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಧ್ವನಿ ಎತ್ತುವ ಹಕ್ಕು ದೇಶದ ನಾಗರಿಕರಿಗಿದೆ" ಎಂದು ನ್ಯಾಯಾಲಯ ಸಾರಿದೆ. ಬಂಡವಾಳಶಾಹಿಗಳ ಹಾದಿ ಸುಗಮಗೊಳಿಸಲು ದುರ್ಬಲರನ್ನು ಮೂಲೆಗುಂಪು ಮಾಡುವ ಸರ್ಕಾರದ ತಂತ್ರ ಇಲ್ಲಿ ವಿಫಲವಾಗಿದೆ. 

ಅರಣ್ಯ ಹಕ್ಕುಗಳ ಕಾಯ್ದೆ (FRA 2006) ಪ್ರಕಾರ ಸ್ಥಳೀಯ ಆದಿವಾಸಿಗಳ ಒಪ್ಪಿಗೆ ಕಡ್ಡಾಯ. ಆದರೆ, ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ಧಾರೆ ಎರೆಯಲು ಕೇಂದ್ರ ಸರ್ಕಾರ ನಕಲಿ ಒಪ್ಪಿಗೆಗಳ ನಾಟಕವಾಡಿತ್ತು. ದ್ವೀಪದ ಹೊರಗಿನಿಂದ ಬಂದು ನೆಲೆಸಿದ ಸಮುದಾಯಗಳಿರುವ ಗ್ರಾಮ ಸಭೆಗಳಿಂದ ಸರ್ಕಾರ ಒಪ್ಪಿಗೆ ಪಡೆದಿದೆಯೇ ಹೊರತು, ನಿಜವಾದ ಅರಣ್ಯವಾಸಿಗಳಾದ ಶೋಂಪೆನ್ ಮತ್ತು ನಿಕೋಬಾರೀಸ್ ಬುಡಕಟ್ಟುಗಳ ಒಪ್ಪಿಗೆ ಪಡೆದಿಲ್ಲ ಎಂಬುದು ಅರ್ಜಿಯಲ್ಲಿ ಸಾಬೀತಾಯಿತು. ಅಲ್ಲಿನ ಬುಡಕಟ್ಟು ಕೌನ್ಸಿಲ್ ಈಗಾಗಲೇ ಈ ಯೋಜನೆಗೆ ನೀಡಿದ್ದ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದೆ. ತಮ್ಮ ಪೂರ್ವಜರ ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ಬಿಟ್ಟುಕೊಡಲು ಸ್ಥಳೀಯ ಅಧಿಕಾರಿಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಒತ್ತಡ ತರುತ್ತಿದ್ದಾರೆ ಎಂದು ಆದಿವಾಸಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಆದಿವಾಸಿಗಳ ಹೆಸರಿನಲ್ಲಿ ಸರ್ಕಾರಿ ಸಂಸ್ಥೆಯೊಂದೇ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರುವುದು ಪ್ರಜಾಪ್ರಭುತ್ವದ ಅಣಕ ಎನ್ನುವುದು ಇಲ್ಲಿ ಗಮನಾರ್ಹ. 

ಕಳೆದ ಕೆಲವು ತಿಂಗಳುಗಳ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಈ ಯೋಜನೆಗೆ ಪರಿಸರ ಅನುಮತಿ ನೀಡಿತ್ತು. ಅದನ್ನೇ ಎತ್ತಿ ಹಿಡಿದ ಸರ್ಕಾರ, "ಈಗಾಗಲೇ ಎನ್‌ಜಿಟಿ ಹಸಿರು ನಿಶಾನೆ ತೋರಿದೆ, ಹಾಗಾಗಿ ಹೈಕೋರ್ಟ್ ಇದರಲ್ಲಿ ಹಸ್ತಕ್ಷೇಪ ಮಾಡಬಾರದು" ಎಂದು ವಾದಿಸಿತ್ತು. ಆದರೆ, ಹೈಕೋರ್ಟ್ ಎನ್‌ಜಿಟಿ ಪ್ರಕರಣಕ್ಕೂ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೂ ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದೆ. ಈ ಅರ್ಜಿಗಳು ನೇರವಾಗಿ ಆದಿವಾಸಿಗಳ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರ ಸೂಕ್ಷ್ಮ ವಲಯದ ರಕ್ಷಣೆಗೆ ಸಂಬಂಧಿಸಿವೆ ಎಂದು ಕೋರ್ಟ್ ಹೇಳಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ. 

ಒಟ್ಟಿನಲ್ಲಿ, ಖಾಸಗಿ ಒಡೆತನದ ಬಂದರುಗಳು, ಐಷಾರಾಮಿ ರೆಸಾರ್ಟ್‌ಗಳು ಮತ್ತು ವಾಣಿಜ್ಯ ನಗರಿಗಳು ದೇಶದ ನಿಜವಾದ ಆಸ್ತಿಯಲ್ಲ. ದೇಶ ಎಂದರೆ ಕೇವಲ ನಕ್ಷೆಯಲ್ಲ, ಅಲ್ಲಿನ ಕಾಡು, ನದಿಗಳು, ಪ್ರಾಣಿ-ಪಕ್ಷಿಗಳು ಮತ್ತು ದುರ್ಬಲ ಜನಸಮುದಾಯಗಳು. ಕಾರ್ಪೊರೇಟ್ ಕೃಪಾಪೋಷಿತ ಈ ವಿನಾಶಕಾರಿ ಮಾದರಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಿದೆ‌. ಪ್ರಕೃತಿಯನ್ನು ಶೋಷಿಸುವ ಬಂಡವಾಳಶಾಹಿ ಅಭಿವೃದ್ಧಿಯ ಬದಲಿಗೆ, ಪರಿಸರ ಮತ್ತು ಸ್ಥಳೀಯ ಜನರ ಹಕ್ಕುಗಳನ್ನು ಗೌರವಿಸುವ ಜನಪರ ಪರ್ಯಾಯ ಅಭಿವೃದ್ಧಿ ಮಾದರಿ ಇಂದಿನ ತುರ್ತು ಅಗತ್ಯವಾಗಿದೆ. ಗ್ರೇಟ್ ನಿಕೋಬರ್ ಅನ್ನು ಬಂಡವಾಳಶಾಹಿಗಳ ಲಾಭದ ಆಟದ ಮೈದಾನವಾಗಲು ಬಿಡದೆ ಇರುವುದೇ ದೇಶಭಕ್ತಿಯಾಗಬೇಕಿದೆ. 

-ಶ್ರೀರಾಜ್ ವಕ್ವಾಡಿ

Friday, May 15, 2026

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನೆಪದಲ್ಲಿ ಕೇಂದ್ರದ ಲೂಟಿಕೋರ ನೀತಿ!

ತನ್ನದೇ ತಪ್ಪು ನಿರ್ಧಾರಗಳಿಂದ ಸೃಷ್ಟಿಯಾದ ಇಂಧನ ಬಿಕ್ಕಟ್ಟಿನ ಹೊರೆಯನ್ನು ಸರ್ಕಾರ ಈಗ ಭಾರತದ ಬಡ ಮತ್ತು ದುಡಿಯುವ ವರ್ಗದ ಹೆಗಲಿಗೆ ಯಶಸ್ವಿಯಾಗಿ ವರ್ಗಾಯಿಸಿದೆ. ಮೂಲಭೂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತರಲು ಸರ್ಕಾರ ಒಪ್ಪುತ್ತಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗರಿಷ್ಠ ಶೇ. 28ರಷ್ಟು ಮಾತ್ರ ತೆರಿಗೆ ಹಾಕಬಹುದು, ಆಗ ಬೆಲೆ ತಾನಾಗಿಯೇ ರೂ.60-70ಕ್ಕೆ ಇಳಿಯುತ್ತದೆ. ಆದರೆ ಸರ್ಕಾರಕ್ಕೆ ಜನರಿಂದ ಲೂಟಿ ಮಾಡುವುದನ್ನು ನಿಲ್ಲಿಸಲು ಮನಸ್ಸಿಲ್ಲ.

'ಸಬ್ ಚಂಗಾ ಸಿ'(ಎಲ್ಲವೂ ಚೆನ್ನಾಗಿದೆ) ಎಂದು ಹೇಳಿದ ಮೋದಿ ದಿಢೀರ್ ಆಗಿ ಬಂದು 'ಹಿತಮಿತ'ದ ಪಾಠ ಮಾಡಿದ್ದಾರೆ. ಅವರ ಅನುಯಾಯಿಗಳೆಲ್ಲಾ ಪರಮ ಪಾಮರ ಹೇಳಿರುವುದು ಎಂದು ಪಾಲಿಸುವ ಹೈಡ್ರಾಮ ಮಾಡಿದರು. ಅದರ ಹಿಂದಿನ ಸತ್ಯ ಗೊತ್ತಿದ್ದರೂ ಸಮರ್ಥನೆಗೆ ಇಳಿದರು. ಕೇವಲ ಫಾಯ್ದೆಗಾಗಿ ಕೆಲಸ ಮಾಡುವ ಮಾಧ್ಯಮಗಳು, ಪತ್ರಕರ್ತರು ಅತಿರೇಕದ ಭಟ್ಟಂಗಿತನಕ್ಕೆ ಇಳಿದರು. ಕಣ್ಣ ಮುಂದೆ ಕಾಣಿಸುವ ತಪ್ಪುಗಳನ್ನು ಪ್ರಶ್ನಿಸದೇ ಇರುವಷ್ಟರ ಮಟ್ಟಿಗೆ ಮಾಧ್ಯಮ, ಮತ್ತು ಅಲ್ಲಿ ಕೆಲಸ ಮಾಡುವ ಪತ್ರಕರ್ತರು ಬದಲಾಗಿದೆ/ದ್ದಾರೆ. 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಸಲಿ ಮುಖವನ್ನು ಮತ್ತೊಮ್ಮೆ ತೋರಿಸಿದೆ. 

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿ ಲೀಟರ್‌ಗೆ 3 ರೂ. ರಷ್ಟು ಹಾಗೂ ಸಿಎನ್‌ಜಿ ದರವನ್ನು 2 ರೂ. ರಷ್ಟು ದಿಢೀರ್ ಹೆಚ್ಚಳ ಮಾಡುವ ಮೂಲಕ ಶ್ರಮಿಕ ವರ್ಗ, ರೈತರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಆರ್ಥಿಕ ಸುಲಿಗೆಯ ಪ್ರಹಾರ ನಡೆಸಲಾಗಿದೆ.

ಇದು ಕೇವಲ ಕಚ್ಚಾ ತೈಲದ ಬೆಲೆ ಏರಿಕೆಯ ಕಥೆಯಲ್ಲ, ಬದಲಿಗೆ ಇದು ಮೋದಿ ಸರ್ಕಾರದ ಅತ್ಯಂತ  ಕೆಟ್ಟ ಅಂತರರಾಷ್ಟ್ರೀಯ ರಾಜತಾಂತ್ರಿಕ ನೀತಿ ಮತ್ತು ಬಂಡವಾಳಶಾಹಿ ಹಿತರಕ್ಷಣೆಗಾಗಿ ಜನಸಾಮಾನ್ಯರನ್ನು ಬಲಿಕೊಡುತ್ತಿರುವ ಜ್ವಲಂತ ಸಾಕ್ಷಿ. ಇಂತಹ ಸಂದರ್ಭದಲ್ಲೂ, ಮಧ್ಯಪ್ರಾಚ್ಯ ಬಿಕಟ್ಟಿನ ಕಾರಣಕ್ಕೆ ಆರ್ಥಿಕ ಸಂಕಷ್ಟ ಸರಿದೂಗಿಸಲು ತೆಗೆದುಕೊಂಡ ಕ್ರಮ ಎಂದು ಬಿಂಬಿಸಿ ಸುದ್ದಿಗಳನ್ನು ಮಾಡಿ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಕ್ತಾರಿಕೆ ಮಾಡುವಷ್ಟು ಕೆಲವು/ಹಲವು ಮಾಧ್ಯಮಗಳು, ಪತ್ರಕರ್ತರು ಕೆಳಮಟ್ಟಕ್ಕೆ ಇಳಿದಿರುವುದು ಪ್ರಜಾಪ್ರಭುತ್ವದ ದುರಂತಗಳಲ್ಲೊಂದು. 

ಚುನಾವಣೆ ಮುಗಿಯುತ್ತಿದ್ದಂತೆ ವಸೂಲಿ! 

ಬಂಡವಾಳಶಾಹಿ ಪ್ರಭುತ್ವದ ಅತಿ ದೊಡ್ಡ ಲಕ್ಷಣವೆಂದರೆ ಜನರನ್ನು ಕೇವಲ ಮತಬ್ಯಾಂಕ್ ಆಗಿ ನೋಡುವುದೇ ಆಗಿದೆ. ಚುನಾವಣೆಗಳು ನಡೆಯುತ್ತಿರುವಾಗ ‘ಸಬ್ ಚಂಗಾ ಸಿ’(ಎಲ್ಲವೂ ಚೆನ್ನಾಗಿದೆ) ಎಂದು ಬಿಂಬಿಸುತ್ತಾ ತೈಲ ಬೆಲೆಗಳನ್ನು ಯಥಾಸ್ಥಿತಿಯಲ್ಲಿಟ್ಟಿದ್ದ ಸರ್ಕಾರ, ಚುನಾವಣೆ ಮುಗಿಯುತ್ತಿದ್ದಂತೆ ಇಂಧನ ಕಂಪನಿಗಳಿಗೆ ದರ ಏರಿಸಲು ಹಸಿರು ನಿಶಾನೆ ತೋರಿದೆ. ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನತೆಗೆ ಮಾಡುತ್ತಿರುವ ದ್ರೋಹವಲ್ಲದೆ ಬೇರೇನೂ ಅಲ್ಲ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಲಿಪ್ತ ನೀತಿ ಪಾಲಿಸದೇ ಟ್ರಂಪ್ ಹೇಳಿದಂತೆ ಮೋದಿ ಕುಣಿದಾಡಿದರು. ಟ್ರಂಪ್ ತಾಳಕ್ಕೆ ಕುಣಿದು ಇಡೀ ದೇಶದ ಶ್ರಮಿಕ, ಬಡ ವರ್ಗವನ್ನೇ ಬಲಿಕೊಟ್ಟರು. ಈಗ 'ದೇಶಭಕ್ತಿ' ಹೆಸರಿನಲ್ಲಿ ಬೃಹನ್ನಾಟಕ ಮಾಡುತ್ತಿದ್ದಾರೆ. 

ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಯುದ್ಧದ ವಾತಾವರಣದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರುಪೇರಾಗಿದೆ ಎನ್ನುವುದು ಸರ್ಕಾರದ ನೆಪ. ಆದರೆ, ಭಾರತದ ಇಂದಿನ ಈ ದುಸ್ಥಿತಿಗೆ ಪ್ರಧಾನಿ ಮೋದಿಯವರ ಏಕಪಕ್ಷೀಯ ವಿದೇಶಾಂಗ ನೀತಿಯೇ ಕಾರಣ. ಸಾಂಪ್ರದಾಯಿಕವಾಗಿ ಭಾರತ ಅಲಿಪ್ತ ನೀತಿಯನ್ನು (Non-Aligned Movement) ಅನುಸರಿಸುತ್ತಾ, ತೈಲ ಸಮೃದ್ಧ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಆದರೆ ಪ್ರಸ್ತುತ ಸರ್ಕಾರ ಅಮೆರಿಕ ಮತ್ತು ಇಸ್ರೇಲ್ ಸಾಮ್ರಾಜ್ಯಶಾಹಿ ಕೂಟದ ಪರವಾಗಿ ನಿಲ್ಲುವ ಮೂಲಕ, ಇರಾನ್ ಸೇರಿದಂತೆ ಪ್ರಮುಖ ಇಂಧನ ಸರಬರಾಜು ದೇಶಗಳ ವಿಶ್ವಾಸವನ್ನು ಕಳೆದುಕೊಂಡಿದೆ. ಈ ರಾಜತಾಂತ್ರಿಕ ದಿವಾಳಿತನದ ಪರಿಣಾಮವಾಗಿ ಇಂದು ಸ್ಟ್ರೈಟ್ ಆಫ್ ಹಾರ್ಮುಜ್‌ನಂತಹ ಪ್ರಮುಖ ಜಲಮಾರ್ಗಗಳಲ್ಲಿ ಭಾರತೀಯ ಸರಕು ಸಾಗಣೆಗೆ ಭದ್ರತೆಯ ಕೊರತೆ ಎದುರಾಗಿದೆ. ತನ್ನದೇ ತಪ್ಪು ನಿರ್ಧಾರಗಳಿಂದ ಸೃಷ್ಟಿಯಾದ ಇಂಧನ ಬಿಕ್ಕಟ್ಟಿನ ಹೊರೆಯನ್ನು ಸರ್ಕಾರ ಈಗ ಭಾರತದ ಬಡ ಮತ್ತು ದುಡಿಯುವ ವರ್ಗದ ಹೆಗಲಿಗೆ ಯಶಸ್ವಿಯಾಗಿ ವರ್ಗಾಯಿಸಿದೆ. 

ಲೂಟಿಕೋರ ನೀತಿ ಮತ್ತು ಲಾಭಕೋರತನ : 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಸಾಮಾನ್ಯವಾಗಿ ಪ್ರತಿ ಬ್ಯಾರೆಲ್‌ಗೆ (1 ಬ್ಯಾರೆಲ್ = ಸುಮಾರು 159 ಲೀಟರ್) ಅಮೆರಿಕನ್ ಡಾಲರ್ ($) ಲೆಕ್ಕದಲ್ಲಿ ಅಳೆಯಲಾಗುತ್ತದೆ. ಭಾರತ ಆಮದು ಮಾಡಿಕೊಳ್ಳುವ ತೈಲದ ಸರಾಸರಿ ಬೆಲೆಯನ್ನು ‘ಇಂಡಿಯನ್ ಬಾಸ್ಕೆಟ್’ (Indian Basket) ಎನ್ನಲಾಗುತ್ತದೆ.

2014 ರಿಂದ 2026 ರವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ವಾರ್ಷಿಕ ಸರಾಸರಿ ಬೆಲೆಗಳ ಅಂಕಿಅಂಶಗಳನ್ನು ಗಮನಿಸುವುದಾದರೆ, 2014ರಲ್ಲಿ ಜಾಗತಿಕ ಕಚ್ಚಾ ತೈಲದ ಸರಾಸರಿ ಬೆಲೆ (ಪ್ರತಿ ಬ್ಯಾರೆಲ್‌ಗೆ USD ನಲ್ಲಿ) $99, 2015ರಲ್ಲಿ $52, 2016ರಲ್ಲಿ $43, 2017ರಲ್ಲಿ $54, 2018ರಲ್ಲಿ $71, 2019ರಲ್ಲಿ $64, 2020ರಲ್ಲಿ $41,‌ 2021ರಲ್ಲಿ $70, 2022ರಲ್ಲಿ $100, 2023ರಲ್ಲಿ $82, 2024ರಲ್ಲಿ $75, 2025ರಲ್ಲಿ $65, 2026ರ ಫೆಬ್ರವರಿಯಲ್ಲಿ $65 ರಿಂದ $72, 2026ರಲ್ಲಿ (ಪ್ರಸಕ್ತ) $105 - $120ರಷ್ಟಿದೆ. 

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ (2011-2014) ಕಚ್ಚಾ ತೈಲದ ಬೆಲೆ ಸತತವಾಗಿ $105 ರಿಂದ $114 ರಷ್ಟಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ, 2014 ರಿಂದ 2020 ರವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ (ಶೇ. 50 ಕ್ಕಿಂತ ಹೆಚ್ಚು) ಕುಸಿದಿತ್ತು. ಆದಾಗ್ಯೂ, ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು (Excise Duty) ನಿರಂತರವಾಗಿ ಹೆಚ್ಚಿಸುತ್ತಾ ಹೋದ ಕಾರಣ, ಜಾಗತಿಕ ಮಾರುಕಟ್ಟೆಯ ಬೆಲೆ ಇಳಿಕೆಯ ಲಾಭ ಭಾರತದ ಜನಸಾಮಾನ್ಯರಿಗೆ ಸಿಗಲೇ ಇಲ್ಲ. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿದ್ದಂತೆ, ಅದರ ಸಂಪೂರ್ಣ ಹೊರೆಯನ್ನು ಜನರ ಮೇಲೆ ಹೇರಲಾಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಇಂಧನದ ಮೇಲಿನ ಅತಿಯಾದ ಅಬಕಾರಿ ಸುಂಕದ (Excise Duty) ಮೂಲಕ ಕೇಂದ್ರ ಸರ್ಕಾರ ಬರೋಬ್ಬರಿ 43 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಜನರ ಜೇಬಿನಿಂದ ಲೂಟಿ ಮಾಡಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪನಿಗಳು (OMCs) ದಿನಕ್ಕೆ 1,000 ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂಬ ಕಾರ್ಪೊರೇಟ್ ಪರ ಮಾಧ್ಯಮಗಳ ರೋದನೆ ಕೇವಲ ಕಣಣೊರೆಸುವ ತಂತ್ರ ಎನ್ನುವುದು ಸ್ಪಷ್ಟ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಕೇವಲ ಲಾಭ ಗಳಿಸುವ ಯಂತ್ರಗಳನ್ನಾಗಿ ನೋಡುವುದು ಮತ್ತು ನಷ್ಟ ಬಂದಾಗ ಅದನ್ನು ಜನರ ಮೇಲೆ ಹೇರುವುದು ಶುದ್ಧ ಬಂಡವಾಳಶಾಹಿ ಶೋಷಣೆ. ಅದನ್ನು ಯಶಸ್ವಿಯಾಗಿ ಮೋದಿ ಸರ್ಕಾರ ಮಾಡುತ್ತಲೇ ಬಂದಿದೆ.

ಬೆಲೆ ಏರಿಕೆಯ ಬಿಸಿ ಮತ್ತು ಶ್ರಮಿಕ, ಬಡ ವರ್ಗದ ನೆಮ್ಮದಿಗೆ ಕೊಳ್ಳಿ : 

ಪೆಟ್ರೋಲ್-ಡೀಸೆಲ್ ಕೇವಲ ವಾಹನ ಸವಾರರ ಮೇಲಿನ ಹೊರೆಯಲ್ಲ. ಡೀಸೆಲ್ ಬೆಲೆ ಏರಿಕೆ ಸರಕು ಸಾಗಣೆ ವೆಚ್ಚವನ್ನು (Freight Charges) ದುಪ್ಪಟ್ಟಾಗಿಸಲಿದೆ. ಕರ್ನಾಟಕ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಖಾಸಗಿ ಬಸ್ ಕಂಪೆನಿಗಳು ಶೇ. 20 ರಿಂದ 30ರಷ್ಟು ಟಿಕೇಟ್ ದರ ಹೆಚ್ಚಳ ಮಾಡಲು ಮುಂದಾಗಿವೆ.

ಇದು ದಿನಬಳಕೆಯ ತರಕಾರಿ, ಧಾನ್ಯಗಳು, ಹಾಲು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ (Inflation) ಶೇ. 6 ಕ್ಕೆ ತಲುಪುವ ಮುನ್ಸೂಚನೆ ಇದೆ. ಇತ್ತೀಚೆಗಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಸಿದ್ದ ಸರ್ಕಾರ, ಈಗ ಇಂಧನ ದರ ಏರಿಸಿ ಗಾಯದ ಮೇಲೆ ಉಪ್ಪು ಸವರಿದೆ. 

ರೈತರು ಕೃಷಿ ಉತ್ಪಾದನೆಗೆ ಟ್ರ್ಯಾಕ್ಟರ್, ಪಂಪ್‌ಸೆಟ್‌ಗಳಿಗೆ ಡೀಸೆಲ್ ಅನ್ನೇ ಅವಲಂಬಿಸಿದ್ದಾರೆ. ಸರ್ಕಾರ ಭತ್ತ ಮುಂತಾದ ಬೆಳೆಗಳಿಗೆ ಕೇವಲ 72 ರೂ. ರಷ್ಟು ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಿ, ಮರುದಿನವೇ ಡೀಸೆಲ್ ದರವನ್ನು ₹3 ಹೆಚ್ಚಿಸಿರುವುದು ರೈತರನ್ನು ವಂಚಿಸಿದಂತಾಗಿದೆ. 

ಮೋದಿ ನೇತೃತ್ವದ ಸರ್ಕಾರ ದೇಶದ ಜನರಿಗೆ ಸಾರ್ವಜನಿಕ ಸಾರಿಗೆ ಬಳಸಿ, ಕಾರ್-ಪೂಲಿಂಗ್ ಮಾಡಿ, ಚಿನ್ನ ಖರೀದಿಸಬೇಡಿ, ವಿದೇಶಿ ಪ್ರಯಾಣ ಬೇಳೆಸಬೇಡಿ, ಖರ್ಚು ಕಡಿಮೆ ಮಾಡಿ ಎಂದು ಉಚಿತ ಸಲಹೆಗಳನ್ನು ನೀಡಿದೆ. ಕಾರ್ಪೊರೇಟ್ ಕುಳಗಳ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡುವ ಸರ್ಕಾರಕ್ಕೆ, ಬಡವರಿಗೆ ಇಂಧನ ಸಬ್ಸಿಡಿ ನೀಡಲು ಹಣವಿಲ್ಲದಿರುವುದು ಆಡಳಿತದ ಆದ್ಯತೆ ಯಾವ ಕಡೆ ಇದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. 

ಅಸಲಿ ಸಮಸ್ಯೆ ಇರುವುದು ಸರ್ಕಾರದ ತೆರಿಗೆ ನೀತಿಯಲ್ಲಿ! 

ಯುಎಇ (ಯುನಿಟೆಡ್ ಅರಬ್ ಎಮಿರೇಟ್ಸ್) ಜೊತೆ ತೈಲ ಒಪ್ಪಂದ ಮಾಡಿಕೊಂಡ ತಕ್ಷಣ ಭಾರತದ ಇಂಧನ ಬಿಕ್ಕಟ್ಟು ಮತ್ತು ದೇಶೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲು ಸಾಧ್ಯವಿಲ್ಲ. 

ಎಲ್‌ಪಿಜಿ ಪೂರೈಕೆ ಮತ್ತು 'ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್' (ಭಾರತದ ತುರ್ತು ತೈಲ ಸಂಗ್ರಹಾಗಾರ) ಸಾಮರ್ಥ್ಯ ಹೆಚ್ಚಿಸಲು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ರೂಪಾಯಿ-ದಿರ್ಹಾಮ್ (Local Currency Settlement) ಮೂಲಕ ವ್ಯಾಪಾರ ಮಾಡುವ ಪ್ರಯತ್ನಗಳೂ ನಡೆದಿವೆ. 

ಈ ಒಪ್ಪಂದಗಳು ಕೇವಲ "ತಾತ್ಕಾಲಿಕ ಮುಲಾಮು" ಅಷ್ಟೆ. ಮೂಲಭೂತ ಸಮಸ್ಯೆಗಳು ಬಗೆಹರಿಯಬೇಕಾದರೆ ಈ ಕೆಳಗಿನ ಆಡಳಿತಾತ್ಮಕ ಮತ್ತು ನೀತಿ ಬದಲಾಗಬೇಕಿದೆ. 

ಇನ್ನು, ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಮಾರ್ಗವನ್ನು ಬಂದ್ ಮಾಡಲಾಗಿದೆ. ಜಾಗತಿಕ ತೈಲ ಸಾಗಣೆಯ ಶೇ. 20 ಕ್ಕೂ ಅಧಿಕ ಭಾಗ ಇದೇ ಮಾರ್ಗವಾಗಿ ಬರುತ್ತದೆ. ಭಾರತ ಯುಎಇನಿಂದ ತೈಲ ಖರೀದಿಸಿದರೂ, ಹಾರ್ಮುಜ್ ಜಲಮಾರ್ಗ ಸುರಕ್ಷಿತವಾಗಿರದಿದ್ದರೆ ತೈಲ ಹೊತ್ತ ಹಡಗುಗಳು ಭಾರತಕ್ಕೆ ಬರುವುದು ಕಷ್ಟವಾಗುತ್ತದೆ. ಹಾಗಾಗಿ, ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಭಾರತ ತಟಸ್ಥ ಮತ್ತು ಬಲವಾದ ರಾಜತಾಂತ್ರಿಕ ಪಾತ್ರ ವಹಿಸಬೇಕಿದೆ. 

ಯುಎಇನಿಂದ ಭಾರತ ಅತ್ಯಂತ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಂಡರೂ, ಅದರ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ (Excise Duty) ಮತ್ತು ಸೆಸ್ (Cess) ಅನ್ನು ಕಡಿಮೆ ಮಾಡದಿದ್ದರೆ ದೇಶದ ಗ್ರಾಹಕರಿಗೆ ಒಂದು ಪೈಸೆ ಲಾಭವೂ ಸಿಗುವುದಿಲ್ಲ ಎನ್ನುವುದು ಇಲ್ಲಿ ಉಲ್ಲೇಖನೀಯ. 

ಇನ್ನು, ಮೂಲಭೂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ(GST) ವ್ಯಾಪ್ತಿಗೆ ತರಲು ಸರ್ಕಾರ ಒಪ್ಪುತ್ತಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗರಿಷ್ಠ ಶೇ. 28 ರಷ್ಟು ಮಾತ್ರ ತೆರಿಗೆ ಹಾಕಬಹುದು, ಆಗ ಬೆಲೆ ತಾನಾಗಿಯೇ ₹60-70 ಕ್ಕೆ ಇಳಿಯುತ್ತದೆ. ಆದರೆ ಸರ್ಕಾರಕ್ಕೆ ಜನರಿಂದ ಲೂಟಿ ಮಾಡುವುದನ್ನು ನಿಲ್ಲಿಸಲು ಮನಸ್ಸಿಲ್ಲ. 

ಇದರ ವಿರುದ್ಧ ಹೋರಾಡುವವರು ಯಾರು !? 

ಇಂತೆಲ್ಲಾ ಕೆಟ್ಟ ನೀತಿಯ ವಿರುದ್ಧ ಪ್ರತಿಪಕ್ಷಗಳು ಇನ್ನಷ್ಟು ಗಟ್ಟಿಯಾಗಿ ಧ್ವನಿಸಬೇಕಿದೆ. ಪ್ರತಿಪಕ್ಷಗಳ ನಾಯಕನಾಗಿರುವ ಕಾಂಗ್ರೆಸ್ ಈ ಹೋರಾಟವನ್ನು ಮುನ್ನಡೆಸಬೇಕಿದೆ. ಜನರನ್ನು ಒಟ್ಟುಗೂಡಿಸಿಬೇಕಿದೆ. ತನ್ನ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಕಾಂಗ್ರೆಸ್ ಇಂತಹ ಸಂದರ್ಭಗಳಲ್ಲಿಯೂ ಸುಮ್ಮನಿದ್ದರೆ, ಅದು ಈ ದೇಶಕ್ಕೆ ಮಾಡುವ ದ್ರೋಹ ಎಂದು ಪರಿಗಣಿಸಲ್ಪಡುತ್ತದೆ.

ಕೇವಲ ಸದನದ ಒಳಗೆ ಭಾಷಣ ಮಾಡುವುದರಿಂದ ಬಂಡವಾಳಶಾಹಿ ಸರ್ಕಾರದ ದಪ್ಪ ಚರ್ಮಕ್ಕೆ ಚುಚ್ಚಲು ಸಾಧ್ಯವಿಲ್ಲ ಎನ್ನುವುದನ್ನು ಇನ್ನಷ್ಟು ಅರಿತುಕೊಳ್ಳಬೇಕಿದೆ. 

ಅಂತರರಾಷ್ಟ್ರೀಯ ಮಾರುಕಟ್ಟೆ ಅಥವಾ ಅಬಕಾರಿ ಸುಂಕದ ತಾಂತ್ರಿಕ ಅಂಶಗಳ ಬಗ್ಗೆ ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಿಳಿ ಹೇಳುವ ಕೆಲಸಕ್ಕೆ ಮುಂದಾಗಬೇಕಿದೆ. 

ಜನರ ದೈನಂದಿನ ಸಂಕಷ್ಟಗಳನ್ನೇ ಹೋರಾಟದ ಅಸ್ತ್ರವಾಗಿ ಮಾಡಿಕೊಳ್ಳಬೇಕಿದೆ. ಹಕ್ಕೊತ್ತಾಯದ ಹೋರಾಟಗಳು ಹೆಚ್ಚಾದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯುವುದಕ್ಕೆ ಕಾರಣವಾಗುತ್ತದೆ. 

ಒಟ್ಟಿನಲ್ಲಿ, ಜನರ ಸಂಕಷ್ಟಗಳಿಗೆ ಸ್ಪಂದಿಸದ, ವಿದೇಶಾಂಗ ನೀತಿಯಲ್ಲಿ ವಿಫಲವಾಗಿ ದೇಶದ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳುತ್ತಿರುವ ಈ ಮೋದಿ ನೇತೃತ್ವದ ಸರ್ಕಾರದ ಪ್ರಭುತ್ವ ರಾಜಕಾರಣದ ವಿರುದ್ಧ ಪ್ರತಿಪಕ್ಷಗಳು, ದುಡಿಯುವ ವರ್ಗ, ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ಹೋರಾಡಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಆಗ ಮಾತ್ರ ತಾನಾಗಿಯೇ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ, ಇಂತಹ ಲೂಟಿಕೋರ ಸಂಸ್ಕೃತಿಗಳಿಗೆ ಅಂತಿಮ‌ ಚುಕ್ಕಿ ಬೀಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. 

-ಶ್ರೀರಾಜ್ ವಕ್ವಾಡಿ

ಧರ್ಮ, ಮೂಲಭೂತವಾದ, ತೀವ್ರವಾದಗಳು ಶಾಲೆ-ಕಾಲೇಜುಗಳಾಚೆಗಿರಲಿ!

(ಸಾಂದರ್ಭಿಕ ಚಿತ್ರ) 

ಹಿಜಾಬ್, ಕೇಸರಿ ಶಾಲು ಎಂದು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಅರ್ಥಶೂನ್ಯ ಚರ್ಚೆ ಮಾಡುತ್ತಿವೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ,‌ ಇದು 'ವಿಭಜಕ ರಾಜಕಾರಣ' ಎಂದು ಹೇಳಿ ಆ ಆದೇಶವನ್ನು ಹಿಂಪಡೆದಿದೆ. ಆ ಮೂಲಕ ವಿಪಕ್ಷ ಬಿಜೆಪಿಗೆ ಮತ್ತೊಂದು ರಾಜಕೀಯ ಅಸ್ತ್ರವನ್ನು ತನ್ನೆದುರಿಗೆ ಹೋರಾಡುವುದಕ್ಕೆ ಕೊಟ್ಟು ತನ್ನ ಶತಮೂರ್ಖತನವನ್ನು ಮತ್ತೆ ತೋರಿಸಿದೆ ಕಾಂಗ್ರೆಸ್. 

ಶಿಕ್ಷಣ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಈ ಹಿಂದೆ ಹೇರಲಾಗಿದ್ದ ಹಿಜಾಬ್ ನಿರ್ಬಂಧ ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಯಿಂದ ಹೊರದಬ್ಬುವ ವ್ಯವಸ್ಥಿತ ಸಂಚು ಎಂದು ಕಾಂಗ್ರೆಸ್ ಆರೋಪಿಸಿತ್ತು. ಶಾಲಾ ಕಾಲೇಜುಗಳಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಒಂದೇ ವಸ್ತ್ರ ಸಂಹಿತೆ ಇರಬೇಕು ಎಂದು ಬಿಜೆಪಿ ವಾದಿಸಿತ್ತು. ಈ ವಿಷಯ ಶಾಲಾ ಕಾಲೇಜುಗಳ ಆವರಣದಲ್ಲಿ ರಾಜಕೀಯ ಸೈದ್ಧಾಂತಿಕ ಚರ್ಚೆ, ಪ್ರತಿಭಟನೆಗಳಿಗೂ ಸಾಕ್ಷಿಯಾಗಿತ್ತು. 

ರಾಜಕೀಯ ಪ್ರೇರಿತವಾಗಿ ಎರಡು ಕಡೆಗಳಿಂದಲೂ ಏಟಿಗೆ ತಿರುಗೇಟು ಎನ್ನುವಂತೆ ವಾಗ್ಯುದ್ಧವೇ ನಡೆದಿತ್ತು. ಸಹಜವಾಗಿ ರಾಜಕೀಯ ಪಕ್ಷ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಂಡಿತ್ತು. 

ಅಷ್ಟಾಗ್ಯೂ, 2022 ರಲ್ಲಿ ಕರ್ನಾಟಕ ಹೈಕೋರ್ಟ್ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ಮೇಲೆ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠ ಅಕ್ಟೋಬರ್ 2022 ರಲ್ಲಿ split verdict ನೀಡಿತ್ತು. ಒಬ್ಬ ನ್ಯಾಯಾಧೀಶರು ನಿಷೇಧವನ್ನು ಬೆಂಬಲಿಸಿದರೆ, ಇನ್ನೊಬ್ಬರು ವಿರೋಧಿಸಿದ್ದರು. ಈಗ ಈ ಪ್ರಕರಣ ಸುಪ್ರೀಂ ಕೋರ್ಟ್‌ನ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ ಎನ್ನುವುದು ಇಲ್ಲಿ ಉಲ್ಲೇಖನೀಯ. 

ಇನ್ನು, ಈ ಹಿಜಾಬ್ ಮತ್ತು ಕೇಸರಿ ಶಾಲನ್ನು ಒಂದು ಧಾರ್ಮಿಕ ನಂಬಿಕೆಯ ಭಾಗವೆಂದು ಹೇಳಿ ಶಾಲಾ ಕಾಲೇಜುಗಳ ಆವರಣದಲ್ಲಿ ದುರುದ್ದೇಶ ಪ್ರೇರಿತ ಪ್ರತಿಭಟನೆಗೆ ಬಳಸಿಕೊಳ್ಳುವವರೆಗೆ ಕೀಳುಮಟ್ಟಕ್ಕೆ ರಾಜಕೀಯ ಪಕ್ಷಗಳು ಇಳಿದವು. 

ಭಾರತದ ಸಂವಿಧಾನ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಯ ಹಕ್ಕನ್ನು ನೀಡಿದೆ (Article 25). ಭಾರತ ವೈವಿಧ್ಯತೆಗಳ ದೇಶ. ಸಮಾನತೆಯ (Uniformity) ಹೆಸರಿನಲ್ಲಿ ವೈವಿಧ್ಯತೆಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ವಿರೋಧಿ ನಡೆ. 

ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ 'ಕೋಮು ಪ್ರಯೋಗಶಾಲೆ'ಯಾಗಿ ಬದಲಾಗುತ್ತಿದೆ ಎಂಬ ಟೀಕೆಗಳಿದ್ದವು. ಹಿಜಾಬ್, ಹಲಾಲ್, ಮತ್ತು ಅಜಾನ್ ವಿವಾದಗಳು ಅಭಿವೃದ್ಧಿ ಅಜೆಂಡಾವನ್ನು ಹಳಿ ತಪ್ಪಿಸಿದ್ದವು. ಈಗ ಈ ಸರ್ಕಾರವೂ ತನ್ನ ಆಡಳಿತ ಯಂತ್ರ ಹಳಿ ತಪ್ಪಿರುವ ಬೆನ್ನಲ್ಲೇ ಇಂತಹ ವಿವಾದಾತ್ಮಕ ವಿಷಯಗಳನ್ನೆಲ್ಲಾ ಮೇಲೆ ತಂದು ವಿಷಯಾಂತರ ಮಾಡುತ್ತಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ. 

ಧರ್ಮ ಮತ್ತು ತೀವ್ರವಾದ : 

ಧರ್ಮ ಕೇವಲ ವೈಯಕ್ತಿಕ ನಂಬಿಕೆಯಾಗಿ ಉಳಿದಿಲ್ಲ, ಅದು ರಾಜಕೀಯ ಅಧಿಕಾರ ಹಿಡಿಯುವ ಅಸ್ತ್ರವಾಗಿ ಮಾರ್ಪಟ್ಟಿದೆ. ಅದಕ್ಕೆ ಮೂಲ ಸಾಕ್ಷಿ ಎನ್ನುವಂತೆ ಹಿಜಾಬ್, ಕೇಸರಿ ಶಾಲುಗಳೆಲ್ಲಾ ಶಾಲಾ-ಕಾಲೇಜುಗಳ ಆವರಣದೊಳಗೆ ಬಂದು ಶಾಂತಿ ಕದಡುತ್ತಿವೆ. 

"ಕಟ್ಟುನಿಟ್ಟಿನ ನಿಯಮಗಳೇ ಶ್ರೇಷ್ಠ" ಎಂದು ವಾದಿಸುವ ಮೂಲಭೂತವಾದ ಮತ್ತು ತೀವ್ರವಾದ ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ಹರಿತವಾದ ಹತಾರಿನ ಸಹಾಯದಿಂದ ಕಡಿದು ಹಾಕುತ್ತಿದೆ. 

ಎಲ್ಲಾ ಧರ್ಮಾಚರಣೆಯ ಆಧಾರದಲ್ಲಿ ತೀವ್ರವಾದ ಹುಟ್ಟಿಕೊಂಡಿದೆ ಎನ್ನುವುದು ಇಲ್ಲಿ ಸತ್ಯ. ಧರ್ಮ ರಾಜಕಾರಣ ಎಷ್ಟು ಒಗ್ಗಟ್ಟನ್ನು ‌ಸೃಷ್ಟಿಸಿದೆಯೋ, ಅಷ್ಟೇ ವಿಭಜನೆಯನ್ನೂ ಮಾಡಿದೆ. ಈ ಧರ್ಮ ರಾಜಕಾರಣದ ಅಫೀಮು ಈ ಸಮಾಜದ ಸಂಪೂರ್ಣ ಸ್ವಾಸ್ಥ್ಯ ಹಾಳು ಮಾಡಿದೆ. 

ಯಾವುದೇ ಒಂದು ಆಚರಣೆ ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅಡ್ಡಿಯಾಗಬಾರದು ಎಂಬುದು ಪ್ರಜಾಪ್ರಭುತ್ವದ ಆಶಯ. ಹಿಜಾಬ್, ಕೇಸರಿ ಶಾಲು ಒಂದು ಪ್ರಭುತ್ವ ವ್ಯವಸ್ಥೆಯ ಹೇರಿಕೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಮಾನತೆಯ ಮುಖವಾಡದ ಅಡಿ ರಾಜಕಾರಣ ಮಾಡಿ, ಎಳೆ ಮನಸ್ಸುಗಳಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಹುನ್ನಾರ ಈ ಸಮಾಜವನ್ನು ಇನ್ನಷ್ಟು ಹಾಳು ಮಾಡುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಗ ಹಿಜಾಬ್, ಕೇಸರಿ ಶಾಲುಗಳ ಹೆಸರಿನಲ್ಲಿ ಗಲಾಟೆ ಮಾಡುವವರು ವಿಭನೆಯ ಪಾಪ ಹೊರಲು ಎಂದಿಗೂ ತಯಾರಿಲ್ಲ. 

ಎಲ್ಲಾ ಧರ್ಮ, ಆಚರಣೆಗಳ ಮೂಲಭೂತವಾದ, ತೀವ್ರವಾದ ಸಮಾಜದ ಸಮತೆ, ಮಮತೆಯನ್ನು ಹಾಳುಗೆಡವುತ್ತಿವೆ. ಹಿಜಾಬ್ ಅನ್ನು ಹೇಗೆ ಇಸ್ಲಾಂನ ಮೂಲಭೂತವಾದ ಎಂದು ಪರಿಗಣಿಸಲಾಗುತ್ತದೆಯೋ ಹಾಗೆಯೇ ಕೇಸರಿ ಶಾಲುಗಳು ಕೂಡ ಮೂಲಭೂತವಾದ ಸಂಕೇತ. ಈ ಧಾರ್ಮಿಕ ಕಟ್ಟುಪಾಡುಗಳು ಪ್ರಗತಿಗೆ ಅಡ್ಡಿಮಾಡಬಾರದು. ಆದರೇ, ಅದನ್ನು ಬಲವಂತವಾಗಿ ನಿಷೇಧಿಸುವುದು ಅಥವಾ ಹೇರುವುದು ಎರಡೂ ಕೂಡ ಅಕ್ಷಮ್ಯ. 

ಸಮವಸ್ತ್ರ ಶಿಸ್ತನ್ನು ತರುತ್ತದೆ ಎಂಬ ವಾದದ ಹಿಂದೆ ಸಾಂಸ್ಕೃತಿಕ ಭಿನ್ನತೆಗಳನ್ನು ಅಳಿಸಿಹಾಕುವ ಉದ್ದೇಶವಿರಬಾರದು. ಕೇಸರಿ ಶಾಲು ಮತ್ತು ಹಿಜಾಬ್ ನಡುವಿನ ಸಂಘರ್ಷ ಕೃತಕವಾಗಿ ಸೃಷ್ಟಿಸಲಾದದ್ದು. ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಯೋಗ ಶಾಲೆಗಳಾಗುವ ಬದಲು ಸಮಾನತೆಯ ನೆಲೆಗಟ್ಟಿನಲ್ಲಿ ಎಲ್ಲ ಧರ್ಮದ ಆಚಾರ-ವಿಚಾರಗಳನ್ನು ಗೌರವಿಸುತ್ತಲೇ ಅರಿವು ಮೂಡಿಸುವ ಕೇಂದ್ರಗಳಾಗಬೇಕಾದ ತುರ್ತಿದೆ. 

ಹಿಜಾಬ್ ಧರಿಸುವುದು ಬಿಡುವುದು ಆ ಹೆಣ್ಣುಮಗುವಿನ ಆಯ್ಕೆಯಾಗಬೇಕು. ಕೇಸರಿ ಶಾಲು ಕೂಡ ಅದು ಆಯ್ಕೆಯಾಗಬೇಕೆ ಹೊರತು, ಇಸ್ಲಾಂ ಧರ್ಮಕ್ಕೆ ಸೇರಿದಾಕೆಯೊಬ್ಬಳು ಹಿಜಾಬ್ ಧರಿಸಿ ಬಂದಿದ್ದಾಳೆ ಎನ್ನುವ ಕಾರಣಕ್ಕೆ ಪ್ರತಿಯಾಗಿ ಧರಿಸುವ ದುರುದ್ದೇಶ ಪ್ರೇರಿತ ನಡೆಯಾಗಬಾರದು. ಒಂದು ವೇಳೆ ಒತ್ತಡಕ್ಕೋ, ಹೇರಿಕೆಗೋ ಇವೆಲ್ಲಾ ಆದಲ್ಲಿ ಅದು ಬಂಡಾಯಕ್ಕೆ ನಾಂದಿ ಆಗುತ್ತದೆ. ಆ ಬಂಡಾಯದ ಬಿಸಿ ಎರಡೂ ವಿಷಯಗಳಲ್ಲಿ ಅದಾಗಲೇ ಎದ್ದಿದೆ. 

ಧರ್ಮ ರಾಜಕಾರಣ, ಮೂಲಭೂತವಾದ, ತೀವ್ರವಾದ ಶತಮಾನಗಳಿಂದ ಒಟ್ಟಿಗೆ ಬಾಳಿದ ಜನರ ನಡುವೆ ಗೋಡೆಗಳು ನಿರ್ಮಾಣವಾಗುತ್ತವೆ. ಸಹೋದರತ್ವದ ಜಾಗದಲ್ಲಿ ಪರಸ್ಪರ ಅಪನಂಬಿಕೆ, ಶಂಕೆ ಮತ್ತು ದ್ವೇಷ ಮನೆಮಾಡುತ್ತವೆ. 

ಮೂಲಭೂತವಾದ, ಧರ್ಮ ರಾಜಕಾರಣ, ತೀವ್ರವಾದ ಯಾವಾಗಲೂ ಕಟ್ಟುಪಾಡುಗಳನ್ನು ಹೇರಲು ಬಯಸುತ್ತದೆ. ವಿಶೇಷವಾಗಿ ಮಹಿಳೆಯರ, ಯುವಜನರ ಮತ್ತು ಪ್ರಗತಿಪರ ಚಿಂತಕರ ವೈಯಕ್ತಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ನಿರ್ಬಂಧಿಸುತ್ತವೆ. ತೀವ್ರಗಾಮಿ ಚಿಂತನೆಗಳು ಸಮಾಜದಲ್ಲಿ ಸೌಹಾರ್ದತೆಯನ್ನು ಕೆಡಿಸಿ, ಸಣ್ಣಪುಟ್ಟ ವಿಷಯಗಳಿಗೂ ಹಿಂಸಾಚಾರ ಭುಗಿಲೇಳುವಂತೆ ಮಾಡುತ್ತವೆ. ಧಾರ್ಮಿಕ ಅಂಧಾಭಿಮಾನ ಹೆಚ್ಚಾದಾಗ, ಮನುಷ್ಯ ಮನುಷ್ಯನನ್ನು ಧರ್ಮದ ಕನ್ನಡಕದಿಂದ ಮಾತ್ರ ನೋಡಲು ಆರಂಭಿಸುತ್ತಾನೆ. ಅಲ್ಲಿ ಕರುಣೆ, ಸಹನೆ ಮತ್ತು ಮಾನವೀಯ ಮೌಲ್ಯಗಳು ನಗಣ್ಯವಾಗುತ್ತವೆ.

ಒಂದು ದೇಶ ಅಥವಾ ಸಮಾಜ ಸುಸ್ಥಿರವಾಗಿ ಬೆಳೆಯಬೇಕಾದರೆ ವೈವಿಧ್ಯತೆಯನ್ನು ಗೌರವಿಸುವ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಬುದ್ಧ ಆಲೋಚನೆಗಳ ಅಗತ್ಯವಿರುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಮತ್ತು ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಸರ್ಕಾರವೂ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಎಚ್ಚರಿಕ ವಹಿಸಬೇಕು. ಎಲ್ಲವನ್ನೂ ರಾಜಕೀಯಕ್ಕಾಗಿಯೇ ಮಾಡಿದರೆ, ಸಂಘರ್ಷಕ್ಕೆ ನಾಂದಿಯಾಗುತ್ತದೆ. ಇದು ಕೂಡ ಹಾಗೆಯೇ ಆಗಿದೆ. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಯಾವುದೇ ಧರ್ಮದ ಪರವಾಗಿ ಅಥವಾ ವಿರುದ್ಧವಾಗಿ ನಿಲ್ಲದೆ, ಕೇವಲ 'ವಿದ್ಯಾರ್ಥಿಯ ಹಿತದೃಷ್ಟಿ'ಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ರೂಪಿಸಬೇಕು. ಯಾರನ್ನೋ ಓಲೈಸುವುದಕ್ಕೆ ಆದೇಶಗಳು, ಸುತ್ತೋಲೆಗಳನ್ನು ಹೊರಡಿಸುವುದು, ಅದಕ್ಕೆ ಪ್ರತಿಯಾಗಿ ರಾಜಕೀಯಕ್ಕಾಗಿ ವಿಪಕ್ಷಗಳು ಇನ್ನ್ಯಾರನ್ನೋ ಓಲೈಸಲು ಪ್ರತಿಭಟನೆ, ಧರ್ಮ, ಮತ್ತೊಂದು ಮಗದೊಂದು ಎಂದು ವಿಷದ ಗಾಳಿ ಹಬ್ಬಿಸದೇ ಇರಬೇಕು ಎನ್ನುವುದು ಇಲ್ಲಿ ಮುಖ್ಯಾಂಶ. 

ಶಾಲಾ ಕಾಲೇಜುಗಳು ಧರ್ಮ ರಾಜಕಾರಣಕ್ಕೆ ಬಲಿ !?

ಜ್ಞಾನದ ದೇಗುಲಗಳಾಗಬೇಕಿದ್ದ ಶಾಲಾ-ಕಾಲೇಜುಗಳು ಇಂದು ಸೈದ್ಧಾಂತಿಕ ಸಂಘರ್ಷದ ಅಖಾಡಗಳಾಗುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಸಂಗತಿ. ಧರ್ಮ ಮತ್ತು ರಾಜಕಾರಣದ ಬೇಲಿಗಳನ್ನು ಮೀರಿ ವಿದ್ಯಾ ಮಂದಿರಗಳು ಹೇಗೆ ಕಾರ್ಯನಿರ್ವಹಿಸಬೇಕು. 

ಧಾರ್ಮಿಕ ಕಟ್ಟಳೆಗಳಿಗಿಂತ ಹೆಚ್ಚಾಗಿ ಪ್ರಶ್ನಿಸುವ, ತರ್ಕಿಸುವ ಮತ್ತು ವಿಜ್ಞಾನದ ಆಧಾರದ ಮೇಲೆ ಸತ್ಯವನ್ನು ಅನ್ವೇಷಿಸುವ ಮನೋಭಾವವನ್ನು ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು. ಸಮವಸ್ತ್ರದ ಉದ್ದೇಶವೇ ಜಾತಿ, ಧರ್ಮ ಮತ್ತು ಆರ್ಥಿಕ ಸ್ಥಿತಿಗತಿಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವುದು. ಈ ಭಾವನೆಗೆ ಧಾರ್ಮಿಕ ಸಂಕೇತಗಳು ಅಡ್ಡಿಯಾದಾಗ ಅಲ್ಲಿ ಕಲಿಕೆಗಿಂತ ಹೆಚ್ಚಾಗಿ ಭೇದಭಾವವೇ ಎದ್ದು ಕಾಣುತ್ತದೆ. 

ಹಿಜಾಬ್ ಅಥವಾ ಕೇಸರಿ ಶಾಲಿನಂತಹ ವಿವಾದಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಂದಕ ಸೃಷ್ಟಿಸಿವೆ. ಅನೇಕ ಬಾರಿ ಈ ವಿವಾದಗಳು ವಿದ್ಯಾರ್ಥಿಗಳಿಂದ ಸ್ವಯಂಪ್ರೇರಿತವಾಗಿ ಬರುವುದಿಲ್ಲ. ಬದಲಿಗೆ ಹೊರಗಿನ ರಾಜಕೀಯ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಎಳೆಯ ಮನಸ್ಸುಗಳನ್ನು ಬಳಸಿಕೊಳ್ಳುತ್ತವೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕಿದೆ. 'ಧರ್ಮ ಮತ್ತು ಧರ್ಮದ ಹೆಸರಿನಲ್ಲಿ ನಡೆಸುವ ತೀವ್ರವಾದ'ದ ಬಗ್ಗೆ ವಿದ್ಯಾರ್ಥಿಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ. 

ಎರಡೂ ಕಡೆಯ ಅಂತ್ಯ ಬಿಂದು ಅಥವಾ ಅತಿರೇಕ ಈ ಸಮಾಜವನ್ನು ಮತ್ತಷ್ಟು ಹಾಳು ಮಾಡುತ್ತವೆ ಎನ್ನುವುದನ್ನು ಅರಿಯಬೇಕಿರುವ ತುರ್ತಿದೆ. 

"ವಿದ್ಯೆಯೇ ಸರ್ವಸ್ವ, ಮನುಷ್ಯತ್ವವೇ ಧರ್ಮ."

-ಶ್ರೀರಾಜ್ ವಕ್ವಾಡಿ

Tuesday, May 12, 2026

ಅಲಿಪ್ತ ನೀತಿಯ ಬಲಿ : ಮೋದಿ ಆಡಳಿತದಲ್ಲಿ ಮೂರನೇ ಅಘೋಷಿತ ತುರ್ತುಪರಿಸ್ಥಿತಿ!

(ಸಾಂದರ್ಭಿಕ ಚಿತ್ರ)

ಭಾರತದ ವಿದೇಶಾಂಗ ನೀತಿಯ ಮೂಲಾಧಾರವಾಗಿದ್ದ ಅಲಿಪ್ತ ನೀತಿಯನ್ನು ಮೋದಿ ಸರ್ಕಾರ ಸಂಪೂರ್ಣವಾಗಿ ಬಲಿಕೊಟ್ಟಿರುವುದು ಮಧ್ಯಪ್ರಾಚ್ಯ  ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ನೋಟ್ ಬ್ಯಾನ್ ನ ಆರ್ಥಿಕ ಹೊಡೆತ, ‌ಕೋವಿಡ್ ಅವಧಿಯ ಆಡಳಿತಾತ್ಮಕ ವೈಫಲ್ಯ ಮತ್ತು ಈಗಿನ ಅಮೇರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದ ಎದುರಾದ ಜಾಗತಿಕ ಬಿಕ್ಕಟ್ಟಿನ ಹೆಸರಿನಲ್ಲಿ ಹೇರಲಾಗುತ್ತಿರುವ ಆರ್ಥಿಕ ಹೊರೆಗಳೆಲ್ಲವೂ ಈ ದೇಶವನ್ನು ಅಘೋಷಿತ ತುರ್ತುಪರಿಸ್ಥಿತಿಯ ಕತ್ತಲೆಗೆ ತಳ್ಳುತ್ತಿವೆ.

ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ (21 ತಿಂಗಳು) ಭಾರತದಲ್ಲಿ ಆಂತರಿಕ ಅಶಾಂತಿಯ ನೆಪದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿತ್ತು. ಇದಕ್ಕೆ‌ ಮೂಲ ಕಾರಣ, ಅಲಹಾಬಾದ್ ಹೈಕೋರ್ಟ್ 1971ರ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆಂದು ಇಂದಿರಾ ಗಾಂಧಿ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದ್ದು. ಅಂದು ಇಂದಿರಾ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಜೂನ್ 25, 1975ರ ಮಧ್ಯರಾತ್ರಿ ತುರ್ತು ಪರಿಸ್ಥಿತಿಗೆ ಅಂಕಿತ ಹಾಕಿದರು. ಜನರ ಮೂಲಭೂತ ಹಕ್ಕುಗಳನ್ನು ರದ್ದುಗೊಳಿಸಲಾಯಿತು. ಜಯಪ್ರಕಾಶ್ ನಾರಾಯಣ್(ಜೆಪಿ), ಮೊರಾರ್ಜಿ ದೇಸಾಯಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರನ್ನು ಬಂಧಿಸಲಾಯಿತು. ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಯಿತು. ಇದು ಪ್ರಜಾಪ್ರಭುತ್ವದ ದೇಶದಲ್ಲಿ ಇಂದಿಗೂ 'ಕರಾಳ ಅಧ್ಯಾಯ' ಎಂದೇ ಕರೆಯಲ್ಪಡುತ್ತದೆ. 

ಇಂದಿರಾಗಾಂಧಿ ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಮತ್ತು ಭದ್ರತೆಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಕೃಷಿ, ಬಾಹ್ಯಾಕಾಶ, ಮಿಲಿಟರಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದವು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ 'ತುರ್ತುಪರಿಸ್ಥಿತಿ' ಅವರ ಆಡಳಿತಕ್ಕೆ ಹಿಡಿದ ಕಪ್ಪು ಮಸಿಯಾಗಿಯೇ ಇಂದಿಗೂ ಉಳಿದಿದೆ ಎನ್ನುವುದು ಇಲ್ಲಿ ಮುಖ್ಯಾಂಶ. 

ದುರಂತವೆಂದರೇ, ಅಂದು ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಲಾಯಿತು. ಇಂದು ಅಘೋಷಿತ ತುರ್ತುಪರಿಸ್ಥಿತಿ ದೇಶದಲ್ಲಿ ಜಾರಿಯಲ್ಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಇದು 'ಮೂರನೇ ಅಘೋಷಿತ ತುರ್ತು ಪರಿಸ್ಥಿತಿ' ಎನ್ನುವುದು ಇಲ್ಲಿ ಉಲ್ಲೇಖನೀಯ. 

ಪ್ರಧಾನಿ ನರೇಂದ್ರ ಮೋದಿ ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ತಮ್ಮ ಹೊಣೆಗೇಡಿತನವನ್ನು ಅತ್ಯಂತ ನಾಜೂಕಾಗಿಯೇ ಜನರ ಮೇಲೆ ಹೊರಿಸಿದ್ದಾರೆ. ವಿದೇಶಿ ವಿನಿಮಯ ಉಳಿಸಲು ನಾಗರಿಕರಿಗೆ ಸಹಕರಿಸಬೇಕು ಎಂದು  ಒಬ್ಬ ಪ್ರಧಾನಿ ಈ ರೀತಿಯಾಗಿ 'ಮನವಿ' ಮಾಡಿಕೊಂಡಿರುವುದು, ಅದಕ್ಕೆ ಅವರು ಮತ್ತು ಅವರ ಅನುಯಾಯಿಗಳು ದೇಶಿಯ ವಸ್ತುಗಳ ಬಳಕೆಗೆ ಹೆಚ್ಚು ಒತ್ತು ನೀಡುವ ನಿರ್ಧಾರ ಎಂದು ಬಿಂಬಿಸುತ್ತಿರುವುದು, 'ಕೆಲವು/ಹಲವು ಮಾಧ್ಯಮಗಳ ಸುದ್ದಿಕೋಣೆಯ ಸೋ ಕಾಲ್ಡ್ ಜರ್ನಲಿಸ್ಟ್ ಗಳು ಇಂತಹ ವಿಷಯವನ್ನೂ ಮೋದಿ ಮಾಡಿದ ಮಹತ್ವದ ಕಾರ್ಯ' ಎಂದು ಬಿಂಬಿಸುತ್ತಿರುವುದು, ಟಿವಿ ಪರದೆಯ ಮೇಲೇ ಇದ್ದು, ಇಡೀ ವಿಶ್ವವೇ ಬಿಕ್ಕಟ್ಟಿನಲ್ಲಿದೆ, 'ಯುದ್ಧದ ಸಂಕಷ್ಟವನ್ನು ನಾವು ಅನುಭವಿಸದೇ ಇದ್ದರೆ ಯುದ್ಧಕ್ಕೆ ಅರ್ಥವೇ ಇಲ್ಲ' ಎಂದು ಗುಲಾಮಗಿರಿ ತೋರಿಸುತ್ತಿರುವುದು ನಿಜಕ್ಕೂ ಈ ದೇಶದ ದುರಂತಗಳಲ್ಲಿ ಒಂದು. 

ಅಘೋಷಿತ ತುರ್ತುಪರಿಸ್ಥಿತಿ : 

ಭಾರತ ಇಂದು ಅಧಿಕೃತವಾಗಿ ಯಾವುದೇ ತುರ್ತುಪರಿಸ್ಥಿತಿಯನ್ನು ಘೋಷಿಸಿಲ್ಲವಾದರೂ, ಸಾಮಾನ್ಯ ಜನರ ಬದುಕು ಮಾತ್ರ ಸಂಕಷ್ಟದ ಸರಮಾಲೆಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಾ, ಸಾಂಸ್ಥಿಕ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ನರೇಂದ್ರ ಮೋದಿಯವರ ಒಡೆದು ಆಳುವ ನೀತಿ, ವೈಫಲ್ಯಗಳನ್ನು ಮುಚ್ಚಲು ಯತ್ನಿಸುತ್ತಿರುವ ಬಗೆಯನ್ನು 'ಅಘೋಷಿತ ತುರ್ತುಪರಿಸ್ಥಿತಿ' ಎಂದೇ ವ್ಯಾಖ್ಯಾನಿಸಬೇಕಿದೆ. 2016ರ ನೋಟ್ ಬ್ಯಾನ್‌ನಿಂದ ಹಿಡಿದು ಇಂದಿನ ಮಧ್ಯಪ್ರಾಚ್ಯ ಬಿಕ್ಕಟ್ಟಿನ ನೆಪದಲ್ಲಿ ಹೇರಲಾಗುತ್ತಿರುವ ನಿರ್ಬಂಧಗಳವರೆಗೆ ಎಲ್ಲವೂ ಜನಸಾಮಾನ್ಯರ ಮೇಲಿನ ದಾಳಿಯಲ್ಲದೇ ಮತ್ತೇನಲ್ಲ. ಜನರು ಹೇಗೆ ಬದುಕಬೇಕು ಎನ್ನುವುದನ್ನು ಸರ್ಕಾರ ನಿರ್ಧರಿಸುವ ಇದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವುದೇ ಆಗಿದೆ. ಈ ಮಧ್ಯಪ್ರಾಚ್ಯದ ಬಿಕ್ಕಟ್ಟಿನಲ್ಲಿ ನರೇಂದ್ರ ಮೋದಿ ತೋರಿದ ಎಡಬಿಡಂಗಿತನ ಕೂಲಿ ಮಾಡಿ ದುಡಿಯುವ ಕುಟುಂಬದ ತುತ್ತಿನವರೆಗೆ ಬಂದು ತಲುಪಲಿದೆ/ತಲುಪಿದೆ. 

ಇನ್ನು, ಆರ್ಥಿಕ ಸುಧಾರಣೆಯ ಹೆಸರಿನಲ್ಲಿ 2016ರಲ್ಲಿ ಏಕಾಏಕಿ ಹೇರಲಾದ ನೋಟ್ ಬ್ಯಾನ್ (Demonetization), ಅದು ಜನಸಾಮಾನ್ಯರ ಆರ್ಥಿಕ ಸ್ಥಿತಿಯ  ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್. 'ಕಪ್ಪುಹಣ'ದ ಹೆಸರಿನಲ್ಲಿ ನಡೆದ ಈ ಪ್ರಯೋಗ ಸಣ್ಣ ವ್ಯಾಪಾರಿಗಳು, ರೈತರು ಮತ್ತು ಅಸಂಘಟಿತ ಕಾರ್ಮಿಕರ ಬೆನ್ನುಮೂಳೆ ಮುರಿಯಿತು. ಬಂಡವಾಳಶಾಹಿ ಮಿತ್ರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ, ನಗದು ಆಧಾರಿತ ಆರ್ಥಿಕತೆಯನ್ನು ಬಲವಂತವಾಗಿ ಡಿಜಿಟಲ್ ರೂಪಕ್ಕೆ ತಳ್ಳಿದ್ದು ಒಂದು ರೀತಿಯ ಆರ್ಥಿಕ ಸರ್ವಾಧಿಕಾರವೇ ಆಗಿತ್ತು. ಇದು ಮೋದಿ ಸರ್ಕಾರದ ಮೊದಲನೆಯ ಅಘೋಷಿತ ತುರ್ತುಪರಿಸ್ಥಿತಿ. 

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಸರ್ಕಾರ ಅನುಸರಿಸಿದ ನೀತಿಗಳು 'ಆಘಾತಕಾರಿ'ಯಾಗಿದ್ದವು. ಪೂರ್ವಸಿದ್ಧತೆ ಇಲ್ಲದ ಲಾಕ್‌ ಡೌನ್ ಲಕ್ಷಾಂತರ ವಲಸೆ ಕಾರ್ಮಿಕರನ್ನು ಬೀದಿಗೆ ತಳ್ಳಿತು. ಆಮ್ಲಜನಕ ಮತ್ತು ಲಸಿಕೆಗಳಿಗಾಗಿ ಜನರು ಹಾಹಾಕಾರ ಪಡುತ್ತಿದ್ದಾಗ, ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಅಂಕಿಅಂಶಗಳೊಂದಿಗೆ ಸುಳ್ಳಿನ ಆಟವಾಡಿ ಜನರನ್ನು ಅಪಾಯದ ತಿರುಗಣಿಗೆ ತಳ್ಳಿತ್ತು. ಈ ಬಿಕ್ಕಟ್ಟನ್ನು ಬಳಸಿಕೊಂಡು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದದ್ದು ಮತ್ತು ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸಿದ್ದು  ಜನವಿರೋಧಿ ನೀತಿಯ ಪರಮಾವಧಿಯಲ್ಲದೇ ಮತ್ತೇನೂ ಅಲ್ಲ. ಇದು, ಮೋದಿ ಸರ್ಕಾರದ ಎರಡನೇ ಅಘೋಷಿತ ತುರ್ತುಪರಿಸ್ಥಿತಿ. 

ಅಮೇರಿಕ, ಇಸ್ರೇಲ್, ಇರಾನ್ ಯುದ್ಧ/ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆದರೆ, ಈ ಜಾಗತಿಕ ವಿದ್ಯಮಾನವನ್ನು ನೆಪವಾಗಿಟ್ಟುಕೊಂಡು ದೇಶದ ಆಂತರಿಕ ಆರ್ಥಿಕ ವೈಫಲ್ಯಗಳನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ವಿದೇಶಿ ಪ್ರವಾಸ ಮಾಡಬೇಡಿ, ಚಿನ್ನ ಕೊಳ್ಳಬೇಡಿ ಎಂದು ಜನರಿಗೆ ಸೋ ಕಾಲ್ಡ್ 'ಸಲಹೆ' ನೀಡುತ್ತಿರುವುದು, ವಾಸ್ತವದಲ್ಲಿ ಸರ್ಕಾರದ ಅಸಮರ್ಥತೆಯನ್ನು ಮುಚ್ಚಿಡುವ ತಂತ್ರ ಎನ್ನುವುದರಲ್ಲಿ ಸಂಶಯವಿಲ್ಲ. ಜನಸಾಮಾನ್ಯರ ಮೇಲೆ ಮಿತವ್ಯಯದ ಹೊರೆ ಹೇರುತ್ತಾ, ಇನ್ನೊಂದೆಡೆ ಕಾರ್ಪೊರೇಟ್ ತೆರಿಗೆ ವಿನಾಯಿತಿ ನೀಡುತ್ತಿರುವುದು ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. ಇದು ಮೋದಿ ಸರ್ಕಾರದ ಮೂರನೇ ಆಘೋಷಿತ ತುರ್ತುಪರಿಸ್ಥಿತಿ. 

ಇನ್ನು, ಕೆಲವು/ಹಲವು ಮಾಧ್ಯಮಗಳು ಮೋದಿ ಸರ್ಕಾರದ ಕಹಳೆಯಂತೆ ಧ್ವನಿಸುತ್ತಿವೆ. ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ತನಿಖಾ ಸಂಸ್ಥೆಗಳನ್ನು (ED, CBI) ಅಸ್ತ್ರಗಳಾಗಿ ಬಳಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊಸ ಕಾನೂನುಗಳನ್ನು ಪ್ರಯೋಗಿಸಲಾಗುತ್ತಿದೆ. 1975ರ ತುರ್ತುಪರಿಸ್ಥಿತಿಗೂ ಇಂದಿನ ಸ್ಥಿತಿಗೂ ಇರುವ ವ್ಯತ್ಯಾಸವೆಂದರೆ, ಅಂದು ಕಾನೂನುಬದ್ಧವಾಗಿ ಘೋಷಿಸಲಾಗಿತ್ತು, ಇಂದು ಸಂವಿಧಾನದ ಹೆಸರಿನಲ್ಲೇ ಸಂವಿಧಾನದ ಆಶಯಗಳನ್ನು ಬಲಿ ನೀಡಲಾಗುತ್ತಿದೆ. 

ಅಲಿಪ್ತ ನೀತಿ ಪಾಲಿಸದೇ ಮೋದಿ ಮಾಡಿದ ಎಡವಟ್ಟು! 

ಭಾರತದ ವಿದೇಶಾಂಗ ನೀತಿಯ ಮೂಲಾಧಾರವಾಗಿದ್ದ ಅಲಿಪ್ತ ನೀತಿಯನ್ನು (Non-Alignment) ಮೋದಿ ಸರ್ಕಾರ ಸಂಪೂರ್ಣವಾಗಿ ಬಲಿಕೊಟ್ಟಿರುವುದು ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ನೆಹರೂ ಕಾಲದಿಂದಲೂ ಭಾರತ ಯಾವುದೇ ದೇಶದ ಪರವಾಗಿ ಇಲ್ಲದೆ, ಸಂಘರ್ಷದ ಸಂದರ್ಭಗಳಲ್ಲಿ ನ್ಯಾಯದ ಪರವಾಗಿ ಮತ್ತು ಮಾನವೀಯತೆಯ ಪರವಾಗಿ ಧ್ವನಿ ಎತ್ತುತ್ತಿತ್ತು. ಆದರೆ, ಪ್ರಸ್ತುತ ಮೋದಿ ನೇತೃತ್ವದ ಸರ್ಕಾರ ಅಮೇರಿಕದ ಒತ್ತಡಕ್ಕೆ ಮಣಿದು ಅಥವಾ ಸೈದ್ಧಾಂತಿಕ ಒಲವಿನಿಂದಾಗಿ ಟ್ರಂಪ್ ತಾಳಕ್ಕೆ ಕುಣಿಯುತ್ತಿರುವುದು ದೇಶದ ಹಿತಾಸಕ್ತಿಗೆ ಮಾರಕ. 

ಮಧ್ಯಪ್ರಾಚ್ಯ ಭಾರತದ ಇಂಧನ ಭದ್ರತೆ ಮತ್ತು ಲಕ್ಷಾಂತರ ವಲಸಿಗರ ಬದುಕಿನ ಆಧಾರವಾಗಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಸಂಘರ್ಷ ಉಂಟಾದಾಗ ಅಲಿಪ್ತ ನೀತಿಯನ್ನು ಅನುಸರಿಸುವ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಬೇಕಿದ್ದ ಭಾರತ, ಈಗ ಮೋದಿಯ ಕಾರಣಕ್ಕೆ ಏಕಪಕ್ಷೀಯ ನಿಲುವು ತಳೆದು ತನ್ನ ರಾಜತಾಂತ್ರಿಕ ತೂಕವನ್ನು ಕಳೆದುಕೊಳ್ಳುವಂತಾಗಿದೆ. ಇವೆಲ್ಲಾ ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿಯವರ ಭಾರತದ 'ವಿಶ್ವಗುರು' ಎಂಬ ಪೊಳ್ಳು ಪ್ರತಿಷ್ಠೆಯ ಹಿಂದೆ ಅಡಗಿರುವ 'ಸಾಮ್ರಾಜ್ಯಶಾಹಿ ಅನುಯಾಯಿ' ಮುಖವನ್ನು ಬಟಾಬಯಲುಗೊಳಿಸಿದೆ.  

ಅಲಿಪ್ತ ನೀತಿಯಿಂದ ದೂರ ಸರಿದ ಕಾರಣ, ತೈಲ ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ನಿಯಂತ್ರಿಸಲು ಅಥವಾ ರಿಯಾಯಿತಿ ದರದಲ್ಲಿ ಇಂಧನ ಪಡೆಯಲು ಚೌಕಾಶಿ ಮಾಡುವ ಶಕ್ತಿಯನ್ನು ಭಾರತ ಕಳೆದುಕೊಂಡಿದೆ. ಟ್ರಂಪ್ ಮಾತು ಕೇಳಿ ಬ್ರಿಕ್ಸ್ ಒಕ್ಕೂಟದ ವಿಶ್ವಾಸವನ್ನೂ ಕಳೆದುಕೊಂಡು, ಇರಾನ್ ಜೊತೆಗಿನ ಒಪ್ಪಂದವನ್ನೂ ಮರೆತು ಈಗ ತನ್ನ ತಪ್ಪನ್ನು ಜನರ ಮೇಲೆ ಹೇರಿದ್ದಾರೆ ಮೋದಿ. ಈ ವಿದೇಶಾಂಗ ನೀತಿಯ ಎಡವಟ್ಟಿನ ನೇರ ಹೊರೆ ಬೀಳುತ್ತಿರುವುದು ದೇಶದ ಸಾಮಾನ್ಯರ ಮೇಲೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಪ್ರತಿಪಕ್ಷಗಳ ಜವಾಬ್ದಾರಿ ಏನು!? 

ಪ್ರತಿಪಕ್ಷಗಳು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಪತ್ರಿಕಾಗೋಷ್ಠಿಗಳಲ್ಲಿ ಸೀಮಿತವಾಗಬಾರದು. ನೋಟ್ ಬ್ಯಾನ್‌ನಿಂದಾದ ಆರ್ಥಿಕ ನಷ್ಟ, ಕೋವಿಡ್ ವೈಫಲ್ಯ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟು, ಬೆಲೆ ಏರಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರೈತ ಚಳವಳಿಯ ಮಾದರಿಯಲ್ಲಿ, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರನ್ನು ಒಗ್ಗೂಡಿಸಿ ಬೃಹತ್ ಜನಾಂದೋಲನಗಳನ್ನು ಸಂಘಟಿಸಬೇಕು. ಚಳವಳಿ ರೂಪದಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿ, ದುರಾಡಳಿತದ ವಿರುದ್ಧ ನಿಲ್ಲಬೇಕಿದೆ‌.

"ಚಳವಳಿಗಳೇ ಪ್ರಜಾಪ್ರಭುತ್ವದ ಜೀವಾಳ. ಅಘೋಷಿತ ತುರ್ತುಪರಿಸ್ಥಿತಿಯ ಈ ಕಾಲಘಟ್ಟದಲ್ಲಿ, ಪ್ರತಿಪಕ್ಷಗಳು ಚುನಾವಣಾ ರಾಜಕಾರಣದಿಂದ ಆಚೆ ಬಂದು, ಜನರ ನೋವಿಗೆ ಧ್ವನಿಯಾಗುವ 'ಜನರ ಚಳವಳಿ'ಯಾಗಿ ರೂಪಾಂತರಗೊಳ್ಳಬೇಕಿರುವ ತುರ್ತಿದೆ. ಆಗ ಮಾತ್ರ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ." ಎನ್ನುವುದನ್ನು ಅರಿತುಕೊಳ್ಳಬೇಕಿದೆ. 

ಒಟ್ಟಿನಲ್ಲಿ, ನೋಟ್ ಬ್ಯಾನ್‌ನ ಆರ್ಥಿಕ ಹೊಡೆತ, ಕೋವಿಡ್ ಅವಧಿಯ ಆಡಳಿತಾತ್ಮಕ ವೈಫಲ್ಯ ಮತ್ತು ಈಗಿನ ಅಮೇರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದ ಎದುರಾದ ಜಾಗತಿಕ ಬಿಕ್ಕಟ್ಟಿನ ಹೆಸರಿನಲ್ಲಿ ಹೇರಲಾಗುತ್ತಿರುವ ಆರ್ಥಿಕ ಹೊರೆಗಳೆಲ್ಲವೂ ಈ ದೇಶವನ್ನು ಅಘೋಷಿತ ತುರ್ತುಪರಿಸ್ಥಿತಿಯ ಕತ್ತಲೆಗೆ ತಳ್ಳುತ್ತಿವೆ. ಕಾರ್ಪೊರೇಟ್ ಶಕ್ತಿಗಳ ಪರವಾಗಿರುವ ಈ ಆಡಳಿತದ ವಿರುದ್ಧ ಜನಸಾಮಾನ್ಯರು ಮತ್ತು ಪ್ರಜಾಪ್ರಭುತ್ವವಾದಿಗಳು ಒಂದಾಗಬೇಕಾದ ಅನಿವಾರ್ಯತೆ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದು ಇಲ್ಲಿ ಮುಖ್ಯಾಂಶ. 

-ಶ್ರೀರಾಜ್ ವಕ್ವಾಡಿ

Sunday, May 10, 2026

ತಮಿಳುನಾಡಿನಲ್ಲಿ 'ಕಾಮರಾಜ್ ಸೂತ್ರ' ಹೆಣೆದರೇ ರಾಹುಲ್ !? | ನವ ದ್ರಾವಿಡ ರಾಜಕಾರಣಕ್ಕೆ ನಾಂದಿ?


(ತಮಿಳುನಾಡಿನ ಸಿಎಂ ಸಿ. ಜೋಸೆಫ್ ವಿಜಯ್ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ)

ತಮಿಳುನಾಡಿನ ಈ ರಾಜಕೀಯ ಸಮೀಕರಣವನ್ನು ಗಮನಿಸಿದರೆ, ರಾಹುಲ್ ಗಾಂಧಿ, ಡಿಎಂಕೆಯ ಹಳೆಯ ದ್ರಾವಿಡ ಸಿದ್ಧಾಂತವನ್ನು ಬಿಟ್ಟು ಬಹಳ ದೊಡ್ಡ ಸವಾಲನ್ನು ಎದುರು ಹಾಕಿಕೊಂಡು 'ನವ ದ್ರಾವಿಡ ರಾಜಕಾರಣ'ದ ಭರವಸೆಯಾಗಿ ಕಾಣಿಸುತ್ತಿರುವ ಟಿವಿಕೆ ಜೊತೆಗೆ ಸೇರಿ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ, ಪರೋಕ್ಷವಾಗಿ 'ಕಾಮರಾಜ್ ಸೂತ್ರ' ಅಳವಡಿಸಲು ನಾಂದಿ ಹಾಡಿದ್ದಾರೆ ಎಂಬಂತೆ ಕಾಣಿಸುತ್ತಿದೆ. ಇದು, ಪ್ರವೀಣ್ ಚಕ್ರವರ್ತಿ ತೆರೆಮರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಜೀವ ಸಂಜೀವಿನಿಯಂತೆ ಕಾಣಿಸುತ್ತಿದೆ.

ತಮಿಳುನಾಡು ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಕುರಿತಾದ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ. ಈ ಮೈತ್ರಿಯ ತಂತ್ರಗಾರಿಕೆಯ ಹಿಂದೆ ಕಾಂಗ್ರೆಸ್‌ನ ಡೇಟಾ ಅನಾಲಿಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಅವರ ಪಾತ್ರ ನಿರ್ಣಾಯಕವಾಗಿದೆ ಎನ್ನುವುದು ಈಗ ಸ್ಪಾಟ್ ಲೈಟ್ ಆಗುತ್ತಿದೆ. 

ಚುನಾವಣೆಗಾಗಿ ಕೆಲವು ತಿಂಗಳುಗಳ ಕಾಲ ತಮಿಳುನಾಡಿನಾದ್ಯಂತ ಪಕ್ಷದ ಪರವಾಗಿ ಕೆಲಸ ಮಾಡಿದ್ದ ಪ್ರವೀಣ್ ಚಕ್ರವರ್ತಿ ಟಿವಿಕೆ ಮತ್ತು ವಿಜಯ್ ಪರ ತಮಿಳಿಗರಲ್ಲಿ ಇದ್ದ ಒಲವನ್ನು ಅರ್ಥ ಮಾಡಿಕೊಂಡು, ಚುನಾವಣಾ ಪೂರ್ವದಲ್ಲೇ ಟಿವಿಕೆ  ಜೊತೆಗೆ ಕೈ ಜೋಡಿಸುವುದರ ಬಗ್ಗೆ  ಪ್ರಸ್ತಾಪಿಸಿದ್ದರು. ಆದರೆ, ಅದು ಚುನಾವಣಾ ಪೂರ್ವದಲ್ಲಿ ಆಗಿರಲಿಲ್ಲ. ಚುನಾವಣೋತ್ತರದಲ್ಲಿ ಮೈತ್ರಿಯಾಯಿತು. ಅದಕ್ಕೆ ಇದೇ ಪ್ರವೀಣ್ ಚಕ್ರವರ್ತಿ ಕಾರಣ. ಅದೇ ಕಾರಣಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ತಮಿಳಿಗರನ್ನು ಉದ್ದೇಶಿಸಿ ಮಾತನಾಡುವಾಗ, ಪ್ರವೀಣ್ ಚಕ್ರವರ್ತಿ ಅವರಿಗೆ ವಿಜಯ್ ವಿಶೇಷ ಧನ್ಯವಾದ ಸಮರ್ಪಿಸಿದ್ದರು ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ. 

ಪ್ರವೀಣ್ ಚಕ್ರವರ್ತಿ ಅವರು ಕೇವಲ ಚುನಾವಣಾ ಅಂಕಿಅಂಶಗಳ ತಜ್ಞರಲ್ಲ, ಬದಲಿಗೆ ದಕ್ಷಿಣ ಭಾರತದ ರಾಜಕೀಯ ಸಂರಚನೆಯನ್ನು ಆಳವಾಗಿ ಬಲ್ಲವರು. ಡಿಎಂಕೆ (DMK) ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿತ್ತು. ಡಿಎಂಕೆಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾದಾಗ ಪರ್ಯಾಯ ಶಕ್ತಿಯ ಅಗತ್ಯವಿದೆ ಎಂದು ಚಕ್ರವರ್ತಿ ಅವರ ಅಂಕಿಅಂಶಗಳು ಕಾಂಗ್ರೆಸ್ ಗೆ ಸೂಚಿಸಿತ್ತು. ಕಾಂಗ್ರೆಸ್ ನ ಹಿರಿತಲೆಗಳು ಇದನ್ನು ನಿರಾಕರಿಸಿತ್ತು. ಫಲಿತಾಂಶ ಬಂದ ಮೇಲೆ ಟಿವಿಕೆಯೊಂದಿಗಿನ ಮೈತ್ರಿಗೆ ರಾಹುಲ್ ಗಾಂಧಿ ಮತ್ತು ದಳಪತಿ ವಿಜಯ್ ಅವರಿಗೆ ಸೇತುವೆ ಆಗಿದ್ದೇ ಪ್ರವೀಣ್ ಚಕ್ರವರ್ತಿ. 

'ವಿಜಯ್ ಅವರ ಟಿವಿಕೆ ಪಕ್ಷ ಯುವಜನತೆ ಮತ್ತು ದಲಿತ/ಹಿಂದುಳಿದ ವರ್ಗಗಳ ಮತಗಳನ್ನು ಸೆಳೆದಿದೆ, ಈ ಮತಬ್ಯಾಂಕ್ ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಪೂರಕವಾಗಬಲ್ಲದು ಎಂಬುದು ಪ್ರವೀಣ್ ಲೆಕ್ಕಾಚಾರ. ಇದು ಮುಂದಿನ ರಾಜಕೀಯ ಸಮೀಕರಣಕ್ಕೂ ಬಿಜೆಪಿಯ ಎದುರು ರಾಜಕೀಯ ಹೋರಾಟಕ್ಕೆ ಟಿವಿಕೆಗೂ ಸಹಾಯವಾಗುತ್ತದೆ, ಕಾಂಗ್ರೆಸ್ ಪಕ್ಷಕ್ಕೂ ಊರುಗೋಲಾಗಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

'ಇಂಡಿಯಾ' ಮೈತ್ರಿಗೆ ಲಾಭ !?

ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಮತ್ತು ಕಾಂಗ್ರೆಸ್ ಮೈತ್ರಿಯಾಗಿದೆ. ಅದು ಕೇವಲ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದ ಇಂಡಿಯಾ (INDIA) ಮೈತ್ರಿಕೂಟಕ್ಕೆ ದೊಡ್ಡ ಬಲ ತುಂಬಿಸಲಿದೆ. 

ಮಾತ್ರವಲ್ಲದೆ, ವಿಜಯ್ ಅವರ ಅಭಿಮಾನಿ ಬಳಗ ಮತ್ತು ಯುವ ಮತದಾರರು ಇಂಡಿಯಾ ಮೈತ್ರಿಕೂಟದತ್ತ ವಾಲಬಹುದು. ಇದು ಇಂಡಿಯಾ ಮೈತ್ರಿಕೂಟದ ಮತ ಹಂಚಿಕೆಯನ್ನು ಶೇ. 50ರಷ್ಟು ಹೆಚ್ಚಿಗೆ ಕೊಂಡೊಯ್ಯಬಲ್ಲದು.

ಕರ್ನಾಟಕ, ತೆಲಂಗಾಣ ಮತ್ತು ಕೇರಳದ ನಂತರ ತಮಿಳುನಾಡಿನಲ್ಲೂ ಟಿವಿಕೆ ಜೊತೆಗೂಡಿ ಕಾಂಗ್ರೆಸ್ ಹೆಚ್ಚು ಪ್ರಬಲವಾದರೆ, ದಕ್ಷಿಣದ 130ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ 'ಇಂಡಿಯಾ' ಮೈತ್ರಿಕೂಟ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿದೆ.

ವಿಜಯ್ ಮತ್ತು ಅವರ ಪಕ್ಷ ಈಗ ಪಾಲಿಸುತ್ತಿರುವ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯ ತತ್ವ, ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದಲ್ಲಿ ಈ ಮೈತ್ರಿ ಕೇವಲ ಚುನಾವಣಾ ಮೈತ್ರಿಯಾಗದೆ, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ "ಪ್ರಗತಿಪರ ಪರ್ಯಾಯ ಶಕ್ತಿ"ಯಾಗಿ ಕನಿಷ್ಟವೆಂದರೂ ಒಂದೆರಡು ದಶಕಗಳ ಕಾಲ ರಾಜಕೀಯದಲ್ಲಿ ಪ್ರಸ್ತುತವಾಗಿರಲಿರುವುದು ನಿಶ್ಚಿತ.

ನವ ದ್ರಾವಿಡ ರಾಜಕಾರಣಕ್ಕೆ ನಾಂದಿ!?  

ತಮಿಳುನಾಡಿನ ಇಂದಿನ ರಾಜಕೀಯ ಸನ್ನಿವೇಶದಲ್ಲಿ ವಿಜಯ್ ಮತ್ತು ರಾಹುಲ್ ಗಾಂಧಿ ಅವರ ಪಾತ್ರಗಳು ದ್ರಾವಿಡ ರಾಜಕಾರಣದ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹೊಸ ಸಂಚಲನ ಮೂಡಿಸುತ್ತಿರುವುದು ನಿಜ. ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ನಡುವಿನ ದಶಕಗಳ ಪೈಪೋಟಿ ರಾಜಕಾರಣದಿಂದ ಬೇಸತ್ತಿರುವ ಯುವ ಮತದಾರರಿಗೆ ವಿಜಯ್ ಒಂದು ಪರ್ಯಾಯ ಶಕ್ತಿಯಾಗಿ ಕಾಣುತ್ತಿದ್ದಾರೆ. ಅದೇ ಕಾರಣಕ್ಕೆ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಮನಸ್ಸು ಪೂರ್ತಿ ಬೆಂಬಲಿಸಿದ್ದಾರೆ. 

ರಾಹುಲ್ ಗಾಂಧಿ ಅವರು ತಮಿಳು ಸಂಸ್ಕೃತಿ, ಭಾಷೆ ಮತ್ತು ತಮಿಳು ಅಸ್ಮಿತೆ ಬಗ್ಗೆ ತೋರುತ್ತಿರುವ ಆಸಕ್ತಿ ಮತ್ತು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಿಜೆಪಿಯ ಹಿಂದಿ ಹೇರಿಕೆ, ಕ್ಷೇತ್ರ ಮರುವಿಂಗಡಣೆಯಂತಹ ವಿಷಯಗಳಿಗೆ ಪ್ರಬಲವಾಗಿ ವಿರೋಧಿಸುತ್ತಿರುವುದು ತಮಿಳು ಜನರ ಮನಗೆದ್ದಿದೆ. ಇದು ಉತ್ತರ ಭಾರತದ ಪಕ್ಷ ಎಂಬ ಕಾಂಗ್ರೆಸ್ ಮೇಲಿದ್ದ ಲೇಬಲ್ ಅನ್ನು ಅಳಿಸಲು ಸಹಕಾರಿಯಾಗುವ ಲಕ್ಷಣ ಕಾಣಿಸುತ್ತಿದೆ. 

ವಿಜಯ್ ಅವರು ಪ್ರಾದೇಶಿಕವಾಗಿ ಹೊಸ ಮತಬ್ಯಾಂಕ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ, ರಾಹುಲ್ ಗಾಂಧಿ ಅವರ ಜಾತ್ಯತೀತ, ಅಹಿಂದ, ಸಾಮಾಜಿಕ ನ್ಯಾಯದಂತಹ ತತ್ವಗಳು, ದ್ರಾವಿಡ ರಾಜಕಾರಣಕ್ಕೆ ನೀಡುತ್ತಿರುವ ಮಾನ್ಯತೆ ತಮಿಳುನಾಡಿನಲ್ಲಿ "ನವ ದ್ರಾವಿಡ ರಾಜಕಾರಣ"ಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣಿಸುತ್ತಿವೆ. ಇದು ತಮಿಳಿಗರಲ್ಲಿ ವಿಶ್ವಾಸ ಮೂಡಿಸುವಂತೆ ತೋರುತ್ತಿದೆ. 

ತಮಿಳುನಾಡಿನ ಜಾತ್ಯತೀತ ಹೋರಾಟ, ಪೆರಿಯಾರ್ ಸಿದ್ಧಾಂತ, ಬ್ರಾಹ್ಮಣ್ಯ‌ ವಿರೋಧಿ ಆಂದೋಲನಗಳ ಬಗ್ಗೆ ಅರಿವಿಲ್ಲದ ಯುವ ಜನಾಂಗಕ್ಕೆ ವಿಜಯ್ ಮತ್ತು ರಾಹುಲ್ ಜೋಡಿ ಹೊಸ ಭರವಸೆಯಾಗಿ ಕಾಣುತ್ತಿರುವುದಲ್ಲದೇ, ಈ ಜೋಡಿಯೇ ದ್ರಾವಿಡ ಪರಂಪರೆಯನ್ನು ಮುನ್ನಡೆಸುವ ಜೋಡೆತ್ತುಗಳಂತೆ ಕಾಣುತ್ತಿರಬಹುದು. ಹಾಗಾಗಿ ತಮಿಳುನಾಡಿನ ರಾಜಕೀಯಕ್ಕೆ ಹೊಸ ಶಕ್ತಿಯಾಗಿ ಬದಲಾಗುವ ಲಕ್ಷಣ ಹೆಚ್ಚುತ್ತಿದೆ. 

ತಮಿಳುನಾಡಿನಲ್ಲಿ 'ಕಾಮರಾಜ್ ಸೂತ್ರ' ಜಾರಿಗೆ ತಂದರೇ ರಾಹುಲ್ !? 

'ಕಾಮರಾಜ್ ಸೂತ್ರ' ಎನ್ನುವುದು 1963 ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಲು ರೂಪಿಸಿದ ಒಂದು ರಾಜಕೀಯ ತಂತ್ರವಾಗಿದೆ. 

1962ರಲ್ಲಿ ಚೀನಾದ ವಿರುದ್ಧ ಭಾರತ ಯುದ್ಧದಲ್ಲಿ ಸೋತಿತ್ತು. ಜವಹರಲಾಲ್ ನೆಹರೂ ಪ್ರಧಾನಿಯಾಗಿ ದೇಶದಲ್ಲಿ ಪ್ರತಿಪಕ್ಷಗಳಿಂದ ಟೀಕೆಗಳನ್ನು ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ಕಾಮರಾಜ್ ನೆಹರೂ ಅವರ ನೆರವಿಗೆ ಬಂದರು. ತಮ್ಮ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನೆಹರು ಅವರನ್ನು ಮನವೊಲಿಸಿದ್ದರು. 

1963ರಲ್ಲಿ, ಕಾಂಗ್ರೆಸ್ ಪಕ್ಷದ ಜನಪ್ರಿಯತೆ ತಗ್ಗುತ್ತಿರುವ ಸಂದರ್ಭದಲ್ಲಿ, ನೆಹರೂ ಆಪ್ತರಾಗಿರುವ ಕೆ. ಕಾಮರಾಜ್ ಅವರು ಅಧಿಕಾರಕ್ಕಿಂತ ಪಕ್ಷದ ಸಂಘಟನೆ ಮುಖ್ಯ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ(ನೆಹರೂ ಅವರೇ ರಾಷ್ಟ್ರೀಯ ರಾಜಕಾರಣಕ್ಕೆ ಕರೆಸಿಕೊಂಡರು), ಈ ಸೂತ್ರವನ್ನು ಜಾರಿಗೊಳಿಸಿದ್ದರು. ಲಾಲ ಬಹದ್ದೂರ್ ಶಾಸ್ತ್ರಿ, ಜಗಜೀವನ್ ರಾಮ್, ಮೊರಾರ್ಜಿ ದೇಸಾಯಿ ಮುಂತಾದ ಹಿರಿಯ ನಾಯಕರು ಈ ಸೂತ್ರದಡಿ ರಾಜೀನಾಮೆ ನೀಡಿದ್ದರು ಎನ್ನುವುದು ಉಲ್ಲೇಖನೀಯ. 

ಈಗ ರಾಹುಲ್, ಡಿಎಂಕೆಯ ಹಳೆಯ ದ್ರಾವಿಡ ಸಿದ್ಧಾಂತವನ್ನು ಬಿಟ್ಟು ಬಹಳ ದೊಡ್ಡ ಸವಾಲನ್ನು ಎದುರು ಹಾಕಿಕೊಂಡು ನವ ದ್ರಾವಿಡ ರಾಜಕಾರಣದ ಭರವಸೆಯಾಗಿ ಕಾಣಿಸುತ್ತಿರುವ  ಟಿವಿಕೆ ಜೊತೆಗೆ ಸೇರಿ ತಮಿಳುನಾಡಿನಲ್ಲಿ ಮಾತ್ರವಲ್ಲದೇ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ, ಪರೋಕ್ಷವಾಗಿ 'ಕಾಮರಾಜ್ ಸೂತ್ರ' ಅಳವಡಿಸಲು ನಾಂದಿ ಹಾಡಿದ್ದಾರೆ ಎಂಬಂತೆ ಕಾಣಿಸುತ್ತಿದೆ. 

ತಮಿಳುನಾಡಿನಲ್ಲಿ ಇಂದಿಗೂ ಕಾಮರಾಜ್ ಅವರ ಆಡಳಿತವನ್ನು (ಶಿಕ್ಷಣ, ಅಣೆಕಟ್ಟು ನಿರ್ಮಾಣ, ಭ್ರಷ್ಟಾಚಾರ ರಹಿತ ಆಡಳಿತ) 'ಸುವರ್ಣ ಯುಗ' ಎಂದು ಜನ ನೆನಪಿಸಿಕೊಳ್ಳುತ್ತಾರೆ. ವಿಜಯ್ ಕೂಡ ಕೆ.ಕಾಮರಾಜ್ ಅವರ ಆಡಳಿತವನ್ನು ತಮ್ಮ ಸಿದ್ಧಾಂತಗಳಲ್ಲೊಂದನ್ನಾಗಿ ಇಟ್ಟುಕೊಂಡಿದ್ದಾರೆ. 

ವಿಜಯ್ ಅವರ ಮೇಲಿರುವ ಯುವ ಸಮೂಹದ ಬೆಂಬಲ ಮತ್ತು ಕಾಂಗ್ರೆಸ್‌ನ ಹಳೆಯ ಮತಬ್ಯಾಂಕ್ (ಓಲ್ಡ್ ಗಾರ್ಡ್) ಸೇರಿದರೆ, ಕಾಮರಾಜ್ ಕಾಲದ ಆಡಳಿತವನ್ನು ಮತ್ತೆ ತಮಿಳುನಾಡಿನಲ್ಲಿ  ಮರು ಸ್ಥಾಪಿಸಬಹುದು ಎನ್ನುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ.

ಈ 'ಸೂತ್ರ' ಯಶಸ್ವಿಯಾದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತೆ ಶೂನ್ಯದಿಂದ ಪುಟಿದೇಳಬಹುದು. ಆದರೆ ಇದು ಪೂರ್ಣಪ್ರಮಾಣದ 'ಕಾಮರಾಜ್ ಆಡಳಿತ'ವಾಗಬೇಕೆಂದರೆ, ಕೇವಲ ಮೈತ್ರಿ ಸರ್ಕಾರದ ಆಡಳಿತ ಸಾಲದು, ಆ ಕಾಲದ ಆಡಳಿತ ವೈಖರಿಯನ್ನು ಜನರಿಗೆ ಅಕ್ಷರಶಃ ತೋರಿಸಬೇಕಿದೆ ಎನ್ನುವುದರಲ್ಲಿ ಸಂಶಯವಿಲ್ಲ. 

ಒಟ್ಟಿನಲ್ಲಿ, ಪ್ರವೀಣ್ ಚಕ್ರವರ್ತಿ ಅವರ ಲೆಕ್ಕಾಚಾರ ಕಾಂಗ್ರೆಸ್ ಗೆ ತೆರೆಮರೆಯ ಜೀವ ಸಂಜೀವಿನಿ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಹೇಗೆ ಇದರಿಂದ ಪುಟಿದೇಳುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲವಾಗಿದೆ. 

-ಶ್ರೀರಾಜ್ ವಕ್ವಾಡಿ

Friday, May 8, 2026

ಡಿಎಂಕೆಯನ್ನು ಕಾಂಗ್ರೆಸ್ ಕ್ಷಮಿಸಿದ್ದೇ ದೊಡ್ಡದು! | 'ಇಂಡಿಯಾ' ಮೈತ್ರಿಕೂಟ ದುರ್ಬಲ?


ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡಿರುವುದು ಸಿದ್ಧಾಂತಗಳ ನಡುವಿನ ಸಮನ್ವಯದ ಕೊರತೆ ಎಂದು ಎದ್ದು ಕಾಣಿಸುತ್ತಿದೆ. ಇದು ಖಂಡಿತವಾಗಿಯೂ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಪೆಟ್ಟು. ಒಂದು ವೇಳೆ ಕಾಂಗ್ರೆಸ್ ಇದನ್ನು 'ಜಾಣ ನಡೆ' ಎಂದು ಭಾವಿಸಿದ್ದರೆ, ಅದು ರಾಜಕೀಯ ವಾಸ್ತವಕ್ಕಿಂತ ಭಿನ್ನವಾದ ಭ್ರಮೆಯಾಗುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ನಿಲುವು ಮತ್ತು ಒಲವಾಗಿರುವ ಕೋಮುವಾದಿ ಶಕ್ತಿಗಳನ್ನು ಹಣಿಯಲು ಬೇಕಾದ ಐಕ್ಯತೆಯನ್ನು ಈ ನಿರ್ಧಾರ ದುರ್ಬಲಗೊಳಿಸಿದೆ.


ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ದಶಕಗಳ ಕಾಲದ ಮೈತ್ರಿಯಲ್ಲಿ ಬಿರುಕು ಮೂಡಿರುವುದು ಭಾರತೀಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿರುವುದು ನಿಜ. ಇದು ಕೇವಲ ಒಂದು ಚುನಾವಣಾ ಮೈತ್ರಿಯ ಅಂತ್ಯವಲ್ಲ; ಬದಲಾಗಿ ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಕೋಮುವಾದಿ ವಿರೋಧಿ ಹೋರಾಟದ ಮುಂದಿರುವ ಸವಾಲುಗಳ ಮುನ್ಸೂಚನೆಯಾಗಿದೆ.

ಬಿಜೆಪಿಯ ಕೇಂದ್ರೀಕೃತ ಅಧಿಕಾರವನ್ನು ಎದುರಿಸಲು ಪ್ರಾದೇಶಿಕ ಅಸ್ಮಿತೆ ಮತ್ತು ರಾಷ್ಟ್ರೀಯ ಹೋರಾಟ ಒಂದಾಗಬೇಕು ಎಂಬುದು ಇಂಡಿಯಾ ಮೈತ್ರಿಕೂಟದ ಆಶಯವಾಗಿತ್ತು. ತಮಿಳುನಾಡಿನಲ್ಲಿ ಡಿಎಂಕೆ ಈ ಮೈತ್ರಿಕೂಟದ ಭದ್ರಕೋಟೆಯಾಗಿತ್ತು. ದಕ್ಷಿಣ ಭಾರತದಲ್ಲಿ ಸಂಘ ಪರಿವಾರದ ಸಿದ್ಧಾಂತವನ್ನು ತಡೆಯಲು ಡಿಎಂಕೆ-ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿತ್ತು. ಈಗ ಈ ಮೈತ್ರಿ ಮುರಿದುಬಿದ್ದರೆ, ಅದು ವಿರೋಧ ಪಕ್ಷಗಳ ಒಗ್ಗಟ್ಟನ್ನು ಅಸ್ಥಿರಗೊಳಿಸಿ, ಶತ್ರುಗಳಿಗೆ ಹಾದಿ ಸುಗಮ ಮಾಡಿಕೊಡಬಹುದು ಎನ್ನುವ ರಾಜಕೀಯ ವಿಶ್ಲೇಷಣೆ ಕೇಳಿ ಬರುತ್ತಿದೆ. ಕಾಂಗ್ರೆಸ್ ಅತಿಯಾದ ಆತ್ಮವಿಶ್ವಾಸದಿಂದ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸುವುದು ಐತಿಹಾಸಿಕ ತಪ್ಪಾಗಬಹುದು. ಇದು ಮೈತ್ರಿಕೂಟದ ಇತರ ಸದಸ್ಯರಲ್ಲೂ ಅನಿಶ್ಚಿತತೆಯನ್ನು ಮೂಡಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. 

ಇಂಡಿಯಾ ಮೈತ್ರಿಕೂಟದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಗಟ್ಟಿಯಾಗಿ ಹೇಳುತ್ತಿದ್ದವರಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟ್ಯಾಲಿನ್ ಮೊದಲಿಗರು. ರಾಹುಲ್ ಗಾಂಧಿ ಅವರ ರಾಜಕೀಯ ನಡೆಗೆ ಸ್ಟ್ಯಾಲಿನ್ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ತಮಿಳುನಾಡಿನ ರಾಜಕೀಯ ಸಮೀಕರಣವೇ ಬದಲಾಯಿಸಿದ 2026ರ ವಿಧಾನಸಭೆಯ ಚುನಾವಣೆಯ ಫಲಿತಾಂಶದ ಬಳಿಕ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ ತೊರೆದು ಕಾಂಗ್ರೆಸ್ ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ಮಾಡುವುದಕ್ಕೆ ಷರತ್ತು ಬದ್ಧ ಊರುಗೋಲಾಗಿರುವುದು ಈಗ ರಾಷ್ಟ್ರೀಯ ರಾಜಕಾರಣದಲ್ಲಿ 'ಸ್ಪಾಟ್ ಲೈಟ್' ಆಗುತ್ತಿದೆ. 

'ಡಿಎಂಕೆಯನ್ನು ಕಾಂಗ್ರೆಸ್ ಕ್ಷಮಿಸಿದ್ದೇ ದೊಡ್ಡದು!'

ಹಾಗೆ ನೋಡುವುದಕ್ಕೆ ಹೋದರೇ, ಡಿಎಂಕೆ ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು, ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE - Liberation Tigers of Tamil Eelam) ಜೊತೆಗೆ ಡಿಎಂಕೆ ಶಾಮೀಲು ಇತ್ತು ಎನ್ನುವ ರಾಜಕೀಯ ಚರ್ಚೆಗಳಾಗಿತ್ತು. ಅವೆಲ್ಲವನ್ನೂ ಮರೆತು ಡಿಎಂಕೆ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡದು ಎನ್ನುವುದು ಇಲ್ಲಿ ಉಲ್ಲೇಖನೀಯ.

ಡಿಎಂಕೆಯ ಇತಿಹಾಸ ಗಮನಿಸಿದರೆ, ಈಗ ಕುಸ್ತಿ, ಆಗ ದೋಸ್ತಿ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಡಿಎಂಕೆ ಮತ್ತು ಬಿಜೆಪಿ ಪರಸ್ಪರ ವಿರೋಧಿಗಳಾಗಿದ್ದರೂ, 2001ರ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಕೈಜೋಡಿಸಿದ್ದವು ಎನ್ನುವುದು ಕುತೂಹಲಕಾರಿ ಸಂಗತಿ. ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಡಿಎಂಕೆ ಮತ್ತು ಬಿಜೆಪಿ ಒಂದಾಗಿ ಸ್ಪರ್ಧಿಸಿದ ಮೊದಲ ಮತ್ತು ಏಕೈಕ ಚುನಾವಣೆ ಅದಾಗಿತ್ತು. ಆದರೆ ಈ ಪ್ರಯೋಗವು ಮತದಾರರ ಮನಗೆಲ್ಲುವಲ್ಲಿ ವಿಫಲವಾಗಿತ್ತು.

ಆ ಚುನಾವಣೆಯಲ್ಲಿ ಡಿಎಂಕೆ ಕೇವಲ 31 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈ ಸೋಲಿನ ಬಳಿಕ ಎರಡೂ ಪಕ್ಷಗಳು ತಮ್ಮ ರಾಜಕೀಯ ಹಾದಿಯನ್ನು ಬದಲಿಸಿಕೊಂಡವು. ಡಿಎಂಕೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ನಿಲುವನ್ನು ಪ್ರಶ್ನಿಸುವ ಡಿಎಂಕೆ, ತನ್ನ ಇತಿಹಾಸವನ್ನು ಗಮನಿಸಿದರೆ, ಸೈಲೆಂಟ್ ಆಗಬಹುದು. ಕಾಂಗ್ರೆಸ್ ಟಿವಿಕೆ ಜೊತೆಗೆ ಮೈತ್ರಿಯಾಗುವಾಗ ಮುಂದಿಟ್ಟ ಷರತ್ತು(ಕೋಮುವಾದಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾದರೇ ನಾವು ನಿಮಗೆ ಸರ್ಕಾರ ರಚನೆಗೆ ಸಹಾಯ ಮಾಡುವುದಿಲ್ಲ) ಕಾಂಗ್ರೆಸ್ ನ ನಿಲುವನ್ನು ಸ್ಪಷ್ಟವಾಗಿ ಹೇಳಿತ್ತು ಇಲ್ಲಿ ಮುಖ್ಯಾಂಶ‌. 

ಸ್ವಾವಲಂಬನೆಯ ಕನಸು ಮತ್ತು ಡಿಎಂಕೆಯ ಮೇಲಿನ ಅವಲಂಬನೆ ಮುಕ್ತ

ಕಾಂಗ್ರೆಸ್ ಒಂದು ವೇಳೆ ಈ ನಿರ್ಧಾರವನ್ನು ಸ್ವತಂತ್ರವಾಗಿ ಬೆಳೆಯುವ ಉದ್ದೇಶದಿಂದ ಮಾಡಿದ್ದರೆ, ಅದನ್ನು 'ಜಾಣ ನಡೆ' ಎನ್ನುವುದಕ್ಕಿಂತ 'ಜುಗಾರಿ' ಎನ್ನಬಹುದು. ತಮಿಳುನಾಡಿನಲ್ಲಿ ಕಾಂಗ್ರೆಸ್ ಕೇವಲ ಡಿಎಂಕೆಯ ನೆರಳಾಗಿ ಉಳಿದಿದೆ ಎಂಬ ಆತಂಕ ಪಕ್ಷದ ಒಳಗಿದೆ. ತನ್ನ ಅಸ್ತಿತ್ವವನ್ನು ಮರುಸ್ಥಾಪಿಸಲು ಕಾಂಗ್ರೆಸ್ ಈ ಹಾದಿ ತುಳಿಯುತ್ತಿರಬಹುದು. ಆದರೆ, ಕೆಳಮಟ್ಟದಲ್ಲಿ ಸಂಘಟನಾ ಶಕ್ತಿ ಇಲ್ಲದೆ ಇಂತಹ ಸಾಹಸಕ್ಕೆ ಕೈ ಹಾಕುವುದು ಎಷ್ಟು ಪ್ರಾಯೋಗಿಕ ಎನ್ನುವುದು ಪ್ರಶ್ನೆ. ಕೆಲವು ಕ್ಷೇತ್ರಗಳಲ್ಲಿ ಡಿಎಂಕೆಯ ಆಡಳಿತ ವಿರೋಧಿ ಅಲೆಯ ಹೊಡೆತ ತನಗೂ ಬೀಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿಗಿತ್ತು. ಆದರೆ, ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಾದ್ದು ಇಂದಿನ ತುರ್ತು ಅಗತ್ಯ. ವಿಜಯ್ ಕೂಡ ಈಗ ಬಿಜೆಪಿಯ ಸೈದ್ಧಾಂತಿಕ ನಿಲುವನ್ನು ಟೀಕಿಸುತ್ತಿದ್ದ ಕಾರಣಕ್ಕೆ ಸರ್ಕಾರ ರಚನೆಗೆ ಕಾಂಗ್ರೆಸ್ ಕೈ ಜೋಡಿಸಿದೆ. ಮುಂದೆ ಇಂಡಿಯಾ ಮೈತ್ರಿಕೂಟಕ್ಕೆ ವಿಜಯ್ ಕೂಡ ಆನೆಬಲ ಆಗಬಹುದು ಎನ್ನುವುದು ಕಾಂಗ್ರೆಸ್ ನ ಲೆಕ್ಕಾಚಾರ ಇರಬಹುದು. 

ಒಕ್ಕೂಟ ವ್ಯವಸ್ಥೆಗೆ ಸೋಲೆ !? 

ಬಿಜೆಪಿ ಪ್ರೇರಿತ ಕೇಂದ್ರೀಕರಣದ ವಿರುದ್ಧ ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಒಟ್ಟಾಗಬೇಕಿತ್ತು. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿ ಮುರಿದುಕೊಂಡಿರುವುದು ಜನಸಾಮಾನ್ಯರ ಹೋರಾಟಕ್ಕೆ ಹಿನ್ನಡೆಯೇ ಹೊರತು ಲಾಭವಲ್ಲ. ಇದು ಇಂಡಿಯಾ ಮೈತ್ರಿಕೂಟದ ಮುಂದಿನ ಹೆಜ್ಜೆಗೂ ಸವಾಲಾಗಿ ಪರಿಣಮಿಸಬಹುದು. 2027ರಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಜೊತೆಗೂಡಿ ಹೋರಾಡುತ್ತದೆ ಎಂದು ಆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇತ್ತೀಚಿಗಷ್ಟೇ ಹೇಳಿದ್ದರು. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ತೊರೆದ ಕಾಂಗ್ರೆಸ್ ಬಗ್ಗೆ ಸಣ್ಣ ಅಸಮಾಧಾನವನ್ನು ಈಗ ಅಖಿಲೇಶ್ ಯಾದವ್ ವ್ಯಕ್ತಪಡಿಸಿದ್ದಾರೆ. ಇದು ಇಂಡಿಯಾ ಮೈತ್ರಿಕೂಟದ ಪಕ್ಷದ ಆಂತರಿಕ ಭಿನ್ನಮತಕ್ಕೆ ನಾಂದಿ ಹಾಡಬಹುದು ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 

ಕಾಂಗ್ರೆಸ್ ತನ್ನ 'ದೊಡ್ಡಣ್ಣ'ನ ಮನಸ್ಥಿತಿಯನ್ನು ಬಿಟ್ಟು, ಡಿಎಂಕೆಯಂತಹ ಜಾತ್ಯತೀತ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋಲುತ್ತಿರುವುದು ಮೈತ್ರಿಕೂಟದ ಭವಿಷ್ಯಕ್ಕೆ ಕಪ್ಪು ಚುಕ್ಕೆಯಾಗಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿರುವ ತುರ್ತಿದೆ. 

ಒಟ್ಟಿನಲ್ಲಿ, ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡಿರುವುದು ಸಿದ್ಧಾಂತಗಳ ನಡುವಿನ ಸಮನ್ವಯದ ಕೊರತೆ ಎಂದು ಎದ್ದು ಕಾಣಿಸುತ್ತಿದೆ. ಇದು ಖಂಡಿತವಾಗಿಯೂ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಪೆಟ್ಟು. ಒಂದು ವೇಳೆ ಕಾಂಗ್ರೆಸ್ ಇದನ್ನು 'ಜಾಣ ನಡೆ' ಎಂದು ಭಾವಿಸಿದ್ದರೆ, ಅದು ರಾಜಕೀಯ ವಾಸ್ತವಕ್ಕಿಂತ ಭಿನ್ನವಾದ ಭ್ರಮೆಯಾಗುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ನಿಲುವು ಮತ್ತು ಒಲವಾಗಿರುವ ಕೋಮುವಾದಿ ಶಕ್ತಿಗಳನ್ನು ಹಣಿಯಲು ಬೇಕಾದ ಐಕ್ಯತೆಯನ್ನು ಈ ನಿರ್ಧಾರ ದುರ್ಬಲಗೊಳಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

-ಶ್ರೀರಾಜ್ ವಕ್ವಾಡಿ

Thursday, May 7, 2026

ರಾಜ್ಯಪಾಲರು ಕೇಂದ್ರದ ಏಜೆಂಟರೆ!? ಸರ್ಕಾರಿಯಾ ಆಯೋಗ ಹೇಳುವುದೇನು?

 

(ಆರ್.ಎಸ್. ಸರ್ಕಾರಿಯಾ)

ಚುನಾವಣೆಯ ನಂತರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದಿದ್ದಾಗ (ಅಸ್ಥಿರ ವಿಧಾನಸಭೆ), ರಾಜ್ಯಪಾಲರು ಯಾರನ್ನು ಕರೆಯಬೇಕು ಎಂಬುದಕ್ಕೆ ಸುಪ್ರೀಂ ಕೋರ್ಟ್ ಮತ್ತು ಸರ್ಕಾರಿಯಾ ಆಯೋಗವು ಕೆಲವು ಮಾರ್ಗಸೂಚಿಗಳನ್ನು ನೀಡಿವೆ. 

ಚುನಾವಣೆಗೆ ಮುನ್ನವೇ ಮೈತ್ರಿ ಮಾಡಿಕೊಂಡ ಪಕ್ಷಗಳು ಬಹುಮತ ಪಡೆದರೆ ಆ ಮೈತ್ರಿಗೆ ಮೊದಲು ಅವಕಾಶ ನೀಡಬೇಕು. ಅಥವಾ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷವನ್ನು(Single Largest Party) ಸರ್ಕಾರ ರಚನೆಗೆ ಆಹ್ವಾನಿಸಬೇಕು. ಚುನಾವಣೆಯ ನಂತರ ಒಂದಾದ ಪಕ್ಷಗಳು ಬಹುಮತ ಸಾಬೀತುಪಡಿಸುವ ವಿಶ್ವಾಸ ನೀಡಿದರೆ ಅವರಿಗೆ ಅವಕಾಶ ನೀಡುವುದು. ಬಹುಮತದೊಂದಿಗೆ ಬನ್ನಿ ಎಂದು ಹೇಳುವ ಯಾವ ಅಧಿಕಾರವೂ ರಾಜ್ಯಪಾಲರಿಗೆ ಇಲ್ಲ. 

ಸಂವಿಧಾನದ ವಿಧಿ 163 ಮತ್ತು 164ರ ಪ್ರಕಾರ, ರಾಜ್ಯಪಾಲರು ಕೆಲವು ಸಂದರ್ಭಗಳಲ್ಲಿ ತಮ್ಮ ಸ್ವಂತ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಇದು "ಸೈಬರ್ ಪವರ್" ಅಲ್ಲ, ಅಂದರೆ ಅವರು ಇಷ್ಟಬಂದಂತೆ ಮಾಡುವಂತಿಲ್ಲ.

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದಿದ್ದಾಗ, ಯಾರಿಗೆ ಸರ್ಕಾರ ರಚಿಸಲು ಅವಕಾಶ ನೀಡಿದರೆ ಸ್ಥಿರ ಸರ್ಕಾರ ನೀಡಲು ಸಾಧ್ಯವಿದೆಯೋ ಅವರನ್ನು ಆರಿಸುವ ವಿವೇಚನೆ ಅವರಿಗಿದೆ.

ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂದು ಅನಿಸಿದಾಗ 'ವಿಶ್ವಾಸಮತ' ಸಾಬೀತುಪಡಿಸಲು ಸಮಯಾವಕಾಶ ನೀಡಬೇಕು ವಿನಃ ಬಹುಮತದೊಂದಿಗೆ ಬನ್ನಿ ಎನ್ನುವ ಹಾಗಿಲ್ಲ. ಒಂದು ವೇಳೆ ಹಾಗೆ ನಡೆದುಕೊಂಡರೆ ಸಂವಿಧಾನದ ವಿರೋಧಿ ನಡೆ ಎಂದು ಪರಿಗಣಿಸಲ್ಪಡುತ್ತದೆ. 

ರಾಜ್ಯಪಾಲರು ಸರ್ಕಾರ ರಚನೆ ಮಾಡುವುದಕ್ಕೆ "ಸತಾಯಿಸುವಂತಿಲ್ಲ". 

ಎಸ್.ಆರ್. ಬೊಮ್ಮಾಯಿ ಪ್ರಕರಣ (1994): ಬಹುಮತದ ನಿರ್ಧಾರವು ರಾಜಭವನದಲ್ಲಿ ಆಗಬಾರದು, ಅದು ವಿಧಾನಸಭೆಯಲ್ಲಿ (Floor Test) ಆಗಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ರಾಜಕೀಯ ತಟಸ್ಥತೆ: ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ಆಗಿ ವರ್ತಿಸದೆ, ಸಂವಿಧಾನದ ರಕ್ಷಕರಾಗಿ ತಟಸ್ಥವಾಗಿರಬೇಕು.

ಸಮಯ ಮಿತಿ: ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ವಿಳಂಬ ಮಾಡದಂತೆ ಮತ್ತು ಆದಷ್ಟು ಬೇಗ (ಸಾಮಾನ್ಯವಾಗಿ 24-48 ಗಂಟೆಗಳಲ್ಲಿ) ವಿಶ್ವಾಸಮತ ಯಾಚನೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.

ಸಮಾಲೋಚನೆ: ಅತಂತ್ರ ಸ್ಥಿತಿ ನಿರ್ಮಾಣವಾದಾಗ ಎಲ್ಲಾ ಪ್ರಮುಖ ಪಕ್ಷಗಳ ನಾಯಕರನ್ನು ಕರೆದು ಚರ್ಚಿಸುವುದು ಅವರ ಕರ್ತವ್ಯ.

ದಾಖಲೆಗಳ ಪರಿಶೀಲನೆ: ಬೆಂಬಲ ನೀಡುವ ಶಾಸಕರ ಸಹಿ ಇರುವ ಪತ್ರಗಳನ್ನು (Letter of Support) ಸರಿಯಾಗಿ ಪರಿಶೀಲಿಸಬೇಕು.

ರಾಜ್ಯಪಾಲರಿಗೆ ವಿವೇಚನಾ ಅಧಿಕಾರವಿದ್ದರೂ, ಅದು ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿರಬೇಕು. ಬಹುಮತವಿರುವ ಪಕ್ಷವನ್ನು ಕಡೆಗಣಿಸುವುದು ಅಥವಾ ಸರ್ಕಾರ ರಚನೆಗೆ ಅನಗತ್ಯ ವಿಳಂಬ ಮಾಡುವುದು ಸಾಂವಿಧಾನಿಕ ವಿರೋಧಿ ನಡೆ ಎನಿಸಿಕೊಳ್ಳುತ್ತದೆ. "ಸಂಖ್ಯಾಬಲ"ವೇ ಪ್ರಜಾಪ್ರಭುತ್ವದ ಅಂತಿಮ ತೀರ್ಪು.

ಸರ್ಕಾರಿಯಾ ಆಯೋಗ ಹೇಳಿದ್ದೇನು !?

ಸರ್ಕಾರಿಯಾ ಆಯೋಗ (Sarkaria Commission) 1983 ರಲ್ಲಿ ಭಾರತ ಸರ್ಕಾರ ಕೇಂದ್ರ-ರಾಜ್ಯ ಸಂಬಂಧಗಳು  ಮತ್ತು ಅಧಿಕಾರ ಹಂಚಿಕೆಯನ್ನು ಸುಧಾರಿಸಲು ಸ್ಥಾಪಿಸಿದ ಪ್ರಮುಖ ಆಯೋಗವಾಗಿದೆ. 

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಆರ್.ಎಸ್. ಸರ್ಕಾರಿಯಾ ನೇತೃತ್ವದ ಈ ಆಯೋಗ 1988 ರಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ. 

ಪ್ರಮುಖ ಶಿಫಾರಸ್ಸುಗಳೇನು !?

ಅಂತರ-ರಾಜ್ಯ ಮಂಡಳಿ: ಸಂವಿಧಾನದ 263 ನೇ ವಿಧಿಯ ಅಡಿಯಲ್ಲಿ ಶಾಶ್ವತ ಅಂತರ-ರಾಜ್ಯ ಮಂಡಳಿ (Inter-State Council) ಸ್ಥಾಪನೆ. 

ರಾಜ್ಯಪಾಲರ ಪಾತ್ರ: ರಾಜ್ಯಪಾಲರನ್ನು ರಾಜಕೀಯೇತರ ವ್ಯಕ್ತಿಯನ್ನಾಗಿ ನೇಮಿಸಬೇಕು ಮತ್ತು ಅವರನ್ನು ಕೇಂದ್ರದ ಏಜೆಂಟ್ ಎಂದು ಪರಿಗಣಿಸಬಾರದು.

356 ನೇ ವಿಧಿ: ರಾಷ್ಟ್ರಪತಿ ಆಳ್ವಿಕೆಯನ್ನು (Article 356) ವಿರಳವಾಗಿ, ಅಂತಿಮ ಸೂತ್ರವಾಗಿ ಮಾತ್ರ ಬಳಸಬೇಕು.

1988 ರಲ್ಲಿ ಸಲ್ಲಿಸಿದ 1600 ಪುಟಗಳ ವರದಿಯು 247 ಶಿಫಾರಸುಗಳನ್ನು ಒಳಗೊಂಡಿತ್ತು. ಈ ಆಯೋಗದ ಶಿಫಾರಸುಗಳು ಭಾರತದ ಫೆಡರಲ್ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕೇಂದ್ರ-ರಾಜ್ಯಗಳ ನಡುವಿನ ಸಂಘರ್ಷಗಳನ್ನು ಕಡಿಮೆ ಮಾಡಲು ಮಹತ್ವದ ಮಾರ್ಗದರ್ಶನ ನೀಡಿವೆ.

ರಾಜ್ಯಪಾಲರ ನೇಮಕಾತಿ ಮತ್ತು ಪಾತ್ರ

ಅರ್ಹತೆ: ರಾಜ್ಯಪಾಲರು ಆಯಾ ರಾಜ್ಯದ ಹೊರಗಿನವರಾಗಿರಬೇಕು ಮತ್ತು ಸ್ಥಳೀಯ ರಾಜಕೀಯದಲ್ಲಿ ಸಕ್ರಿಯವಾಗಿರಬಾರದು.

ಸಮಾಲೋಚನೆ: ರಾಜ್ಯಪಾಲರನ್ನು ನೇಮಿಸುವ ಮೊದಲು ಸಂಬಂಧಪಟ್ಟ ರಾಜ್ಯದ ಮುಖ್ಯಮಂತ್ರಿಯನ್ನು ಕಡ್ಡಾಯವಾಗಿ ಸಂಪರ್ಕಿಸಬೇಕು.

ಅಧಿಕಾರಾವಧಿ: ಐದು ವರ್ಷಗಳ ಕಾಲಾವಧಿಯನ್ನು ಪೂರ್ಣಗೊಳಿಸಲು ಬಿಡಬೇಕು; ರಾಜಕೀಯ ಕಾರಣಗಳಿಗಾಗಿ ಅವರನ್ನು ತೆಗೆದುಹಾಕಬಾರದು.

ತ್ರಿಭಾಷಾ ಸೂತ್ರ: ರಾಷ್ಟ್ರೀಯ ಏಕತೆಗಾಗಿ ಎಲ್ಲಾ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಅಧಿಕಾರ ಹಂಚಿಕೆ : ಸಮವರ್ತಿ ಪಟ್ಟಿಯಲ್ಲಿರುವ (Concurrent List) ವಿಷಯಗಳ ಮೇಲೆ ಕಾನೂನು ಮಾಡುವ ಮೊದಲು ಕೇಂದ್ರವು ರಾಜ್ಯಗಳನ್ನು ಸಂಪರ್ಕಿಸಬೇಕು.

ತೆರಿಗೆ: ಕಾರ್ಪೊರೇಷನ್ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು.

ಅನುದಾನ: ರಾಜ್ಯಗಳಿಗೆ ನೀಡುವ ಹಣಕಾಸಿನ ನೆರವು ಕೇವಲ ಕೇಂದ್ರದ ವಿವೇಚನೆಗೆ ಬಿಡದೆ, ವ್ಯವಸ್ಥಿತವಾಗಿರಬೇಕು.

ಅಂತಿಮ ಆಯ್ಕೆ: ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರ ಕುಸಿದಿದೆ ಎಂದು ಖಚಿತವಾದಾಗ ಮಾತ್ರ ರಾಷ್ಟ್ರಪತಿ ಆಳ್ವಿಕೆ ಹೇರಬೇಕು.

ವಿವರಣೆ: ರಾಷ್ಟ್ರಪತಿ ಆಳ್ವಿಕೆ ಹೇರುವ ಮೊದಲು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಮತ್ತು ಪರಿಸ್ಥಿತಿ ಸುಧಾರಿಸಲು ಅವಕಾಶ ನೀಡಬೇಕು.

ವಿಧಾನಸಭೆ ವಿಸರ್ಜನೆ: ಸಂಸತ್ತು ರಾಷ್ಟ್ರಪತಿ ಆಳ್ವಿಕೆಯನ್ನು ಅನುಮೋದಿಸುವವರೆಗೆ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಬಾರದು.

ರಾಜ್ಯ ಬಿಲ್‌ಗಳು: ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸುವ ರಾಜ್ಯ ಸರ್ಕಾರಗಳ ಮಸೂದೆಗಳನ್ನು (Bills) ಕೇಂದ್ರವು ನಾಲ್ಕು ತಿಂಗಳ ಒಳಗಾಗಿ ಇತ್ಯರ್ಥಪಡಿಸಬೇಕು. ಅನಗತ್ಯವಾಗಿ ವಿಳಂಬ ಮಾಡಬಾರದು.

ಕೇಂದ್ರ ಸಶಸ್ತ್ರ ಪಡೆಗಳು: ರಾಜ್ಯದ ಒಪ್ಪಿಗೆಯಿಲ್ಲದೆಯೇ ಕೇಂದ್ರವು ತನ್ನ ಸಶಸ್ತ್ರ ಪಡೆಗಳನ್ನು (CRPF/BSF) ರಾಜ್ಯಗಳಿಗೆ ಕಳುಹಿಸುವ ಅಧಿಕಾರವನ್ನು ಹೊಂದಿರಬೇಕು, ಆದರೆ ಸಾಧ್ಯವಾದಷ್ಟು ರಾಜ್ಯಗಳ ಜೊತೆ ಸಮಾಲೋಚನೆ ನಡೆಸುವುದು ಸೂಕ್ತ.

ವಿಕೇಂದ್ರೀಕರಣ: ಆಕಾಶವಾಣಿ ಮತ್ತು ದೂರದರ್ಶನಗಳು ಕೇವಲ ಕೇಂದ್ರದ ಅಧೀನದಲ್ಲಿರದೆ, ಅವುಗಳ ಕಾರ್ಯನಿರ್ವಹಣೆಯಲ್ಲಿ ರಾಜ್ಯಗಳಿಗೂ ಹೆಚ್ಚಿನ ಸ್ವಾತಂತ್ರ್ಯ ಮತ್ತು ಪ್ರಾತಿನಿಧ್ಯ ಇರಬೇಕು.

ನ್ಯಾಯಾಧಿಕರಣ (Tribunal): ಅಂತರ-ರಾಜ್ಯ ನದಿ ನೀರು ವಿವಾದ ಉಂಟಾದಾಗ, ಒಂದು ವರ್ಷದೊಳಗೆ ನ್ಯಾಯಾಧಿಕರಣವನ್ನು ಸ್ಥಾಪಿಸಬೇಕು.

ತೀರ್ಪು: ನ್ಯಾಯಾಧಿಕರಣ ನೀಡುವ ತೀರ್ಪು ಐದು ವರ್ಷಗಳ ಒಳಗಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು ಮತ್ತು ಆ ತೀರ್ಪು ಸುಪ್ರೀಂ ಕೋರ್ಟ್ ತೀರ್ಪಿನಷ್ಟೇ ಪ್ರಬಲವಾಗಿರಬೇಕು.

ಯೋಜನಾ ಆಯೋಗ: ಯೋಜನಾ ಆಯೋಗ (ಈಗಿನ ನೀತಿ ಆಯೋಗದ ಹಳೆಯ ರೂಪ) ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಗಳು (NDC) ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಕಾರರಾಗಿ ಕೆಲಸ ಮಾಡಬೇಕೇ ಹೊರತು ಕೇವಲ ಆದೇಶ ನೀಡುವಂತಿರಬಾರದು.

 ಮಾಹಿತಿ ಸಂಗ್ರಹ : ಶ್ರೀರಾಜ್ ವಕ್ವಾಡಿ 

Wednesday, May 6, 2026

ಅಹಿಂದ ಅಸಮಾಧಾನ ಕಾಂಗ್ರೆಸ್ ಗೆ ಮರಣಶಾಸನ ?


ಕರ್ನಾಟಕ ರಾಜಕಾರಣದಲ್ಲಿ 'ಅಹಿಂದ' (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ಎನ್ನುವುದು ಕೇವಲ ಒಂದು ರಾಜಕೀಯ  ಸಮೀಕರಣವಲ್ಲ, ಅದು ಕಾಂಗ್ರೆಸ್ ಪಾಲಿಗೆ ಭದ್ರಕೋಟೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಅಧಿಕಾರದ ಅಡಿಪಾಯವೇ ʼಅಹಿಂದʼ. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಡಿ.ಕೆ. ಶಿವಕುಮಾರ್ ತಮ್ಮ ʼಅಧಿಕಾರದ ಪರಮಾವಧಿʼಯನ್ನು ಬಳಸುತ್ತಿರುವುದನ್ನು ಗಮನಿಸಿದರೆ, ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಅವರು ಈ ಅಹಿಂದ ಮತಬ್ಯಾಂಕ್ ಅನ್ನು ಚದುರಿಸುತ್ತಿದ್ದಾರೆಯೇ ಎನ್ನುವ ಚರ್ಚೆ ಮುನ್ನೆಲೆಗೆ ತರುತ್ತದೆ. 

ಕರ್ನಾಟಕ ಕಾಂಗ್ರೆಸ್ನಲ್ಲಿ 'ಸಿದ್ದರಾಮಯ್ಯ ವರ್ಸಸ್ ಡಿ.ಕೆ. ಶಿವಕುಮಾರ್' ನಡುವಿನ ಶೀತಲ ಸಮರ ಹೊಸದೇನಲ್ಲ. ಆದರೆ, ಈ ʼಅಧಿಕಾರದ ಹೋರಾಟʼ ಈಗ ವ್ಯಕ್ತಿಗತ ಮಟ್ಟದಿಂದ ಸಮುದಾಯಗಳ ಮಟ್ಟಕ್ಕೆ ವಿಸ್ತರಿಸಿದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರ ಅಹಿಂದ ಬಲವನ್ನು ದುರ್ಬಲಗೊಳಿಸದೆ ತಾನು ಮುಖ್ಯಮಂತ್ರಿಯಾಗುವುದು ಅಸಾಧ್ಯ ಎನ್ನುವುದು ಶಿವಕುಮಾರ್ ಅವರಿಗೆ ಚೆನ್ನಾಗಿ ತಿಳಿದಿದಂತಿದೆ. 

ಡಿಕೆಶಿ ಮಾಡುತ್ತಿರುವ ಈ ಯತ್ನಗಳೆಲ್ಲಾ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಏಕೈಕ ಮತ್ತು ಪ್ರಶ್ನಾತೀತ ನಾಯಕ ಎಂಬ ಬಿಂಬಿತ ಚಿತ್ರಣವನ್ನು ಬದಲಿಸಲು ಮಾಡುತ್ತಿರುವಂತೆಯೂ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಹತಾಶರಾಗಿ ಈ ರೀತಿಯಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಡಿಕೆಶಿ ಇತ್ತೀಚೆಗೆ ನಡೆದುಕೊಂಡ ರೀತಿ ಅಹಿಂದ ವರ್ಗಗಳ ಇತರ ಪ್ರಭಾವಿ ನಾಯಕರನ್ನು (ಉದಾಹರಣೆಗೆ ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ) ವಿಶ್ವಾಸಕ್ಕೆ ಪಡೆಯುವ ಮೂಲಕ, ಅಹಿಂದ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಸ್ವತ್ತಲ್ಲ ಎನ್ನುವುದನ್ನು ಸಾಬೀತುಪಡಿಸಲು ಹೊರಟಂತೆಯೂ ಕಾಣಿಸುತ್ತಿಲ್ಲ. ಬದಲಾಗಿ, ಅಹಿಂದವನ್ನು ಚದುರಿಸಿ ಪಕ್ಷದಿಂದ ವಿಮುಖರಾಗುವ ಹಾಗೆ ಮಾಡುತ್ತಿದ್ದಾರಾ? ಬಹುಶಃ ಕಾಂಗ್ರೆಸ್ ಮುಂದೊಂದು ದಿನ ಇದೇ ಕಾರಣದಿಂದ ಪಕ್ಷ ಅಧಿಕಾರದಿಂದ ಹೊರಗುಳಿಯುವಂತೆ ಮಾಡಬಹುದು, ಮತ್ತದಕ್ಕೆ ನೇರವಾಗಿ ಡಿಕೆಶಿ ಹೊಣೆಯಾಗುತ್ತಾರೆಯಲ್ಲವೇ? ಆಗ ʼಪಕ್ಷದ್ರೋಹʼದ ಹೆಸರಿನಲ್ಲಿ ಡಿಕೆಶಿ ಮೇಲೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವ ಎದೆಗಾರಿಕೆ ತೋರಿಸುತ್ತದೆಯೇ ಎಂಬ ಪ್ರಶ್ನಗೆ ಉತ್ತರ ಅಸ್ಪಷ್ಟವಾಗಿಯೇ ಗೋಚರಿಸುತ್ತಿದೆ. 

ಡಿ.ಕೆ. ಶಿವಕುಮಾರ್ ಅವರು ಪ್ರಬಲ ಒಕ್ಕಲಿಗ ಸಮುದಾಯದ ನಾಯಕ. ಅಹಿಂದ ವರ್ಗಗಳು ಮತ್ತು ಪ್ರಬಲ ಸಮುದಾಯಗಳ (ಲಿಂಗಾಯತ/ಒಕ್ಕಲಿಗ) ನಡುವೆ ಒಂದು ಸಣ್ಣ ರಾಜಕೀಯ ಸಂಘರ್ಷ ಇದೆ. ಶಿವಕುಮಾರ್ ಅವರು ತಮಗೆ ಒಕ್ಕಲಿಗ ಬೆಂಬಲವಿದೆ ಎಂಬುದನ್ನು ಪದೇ ಪದೇ ತೋರಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯನವರ 'ಅಹಿಂದ ಸಿದ್ಧಾಂತ'ಕ್ಕೆ ಸವಾಲು ಹಾಕುತ್ತಿದ್ದಾರೆ. ಅಲ್ಪ ಸಂಖ್ಯಾತ ನಾಯಕರ ಮೇಲೆ ಡಿಕೆಶಿ ಪಕ್ಷದ ಪಿಸಿಸಿ ಅಧ್ಯಕ್ಷರಾಗಿ ತೆಗೆದುಕೊಂಡ ಕ್ರಮಗಳು ಅದರ ಮುಂದುವರಿದ ಭಾಗ ಎನ್ನುವಂತೆ ಕಾಣಿಸುತ್ತಿದೆ. 

ಇನ್ನು, ಮೇ ತಿಂಗಳಿನಲ್ಲಿ ಆಗಲಿದೆ ಎಂದು ಹೇಳಲಾಗುತ್ತಿರುವ ಸಚಿವ ಸಂಪುಟ ವಿಸ್ತರಣೆ/ಬದಲಾವಣೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅಹಿಂದ ವರ್ಗದ ನಾಯಕರನ್ನು ಬಿಟ್ಟು, ಉಳಿದ ಕೆಲವು ಅಹಿಂದ ರಾಜಕೀಯ ಮುಖಗಳಿಗೆ ಪ್ರೋತ್ಸಾಹಿಸುವ ಮೂಲಕ ಸಿದ್ದರಾಮಯ್ಯನವರ ಹಿಡಿತವನ್ನು ಸಡಿಲಗೊಳಿಸಿ, ಹೈಕಮಾಂಡ್ ಮಟ್ಟದಲ್ಲಿ ಅಹಿಂದ ವರ್ಗದ ಮತಗಳು ಕೇವಲ ಸಿದ್ದರಾಮಯ್ಯನವರಿಂದಲೇ ಬಂದಿದ್ದಲ್ಲ, ಸಂಘಟನಾತ್ಮಕವಾಗಿ ಬಂದಿದ್ದು ಎಂದು ಬಿಂಬಿಸುವುದು ಡಿಕೆಶಿ ಅವರ ಮೊದಲ ತಂತ್ರ. ಅಹಿಂದ ವರ್ಗದ ಜನರಿಗೆ ನೇರವಾಗಿ ತಲುಪಿರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳು. ಈ ಯೋಜನೆಗಳ ಯಶಸ್ಸಿನ ಪಾಲನ್ನು ಪಡೆಯಲು ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನಿರಂತರ ಶ್ರಮಿಸುತ್ತಿದ್ದಾರೆ. "ಸಿದ್ದರಾಮಯ್ಯನವರ ಸಿದ್ಧಾಂತಕ್ಕಿಂತ ಪಕ್ಷದ ಸಂಘಟನೆ ಮುಖ್ಯ" ಎಂಬ ಸಂದೇಶವನ್ನು ಅಹಿಂದ ಮತದಾರರಿಗೆ ತಲುಪಿಸಲು ಅವರು ಪ್ರಯತ್ನಿಸುತ್ತಿರುವುದು ಎರಡನೇ ತಂತ್ರ ಎಂಬಂತೆ ಭಾಸವಾಗುತ್ತಿದೆ. ಆದರೆ, ʼಅಹಿಂದʼ ಮತದಾರರು ಭಾವನಾತ್ಮಕವಾಗಿ ಸಿದ್ದರಾಮಯ್ಯನವರಿಗೆ ಹತ್ತಿರವಾಗಿದ್ದಾರೆ. ಈ ಭಾವನಾತ್ಮಕ ಬೆಸುಗೆಯನ್ನು ಶಿವಕುಮಾರ್ ಅವರು ಕೇವಲ ರಾಜಕೀಯ ತಂತ್ರಗಾರಿಕೆಯಿಂದ ಭೇದಿಸಲು ಸಾಧ್ಯವೇ? ಅಥವಾ ಈಗ ಡಿಕೆಶಿ ಪಕ್ಷದ ಅಧ್ಯಕ್ಷರಾಗಿ ತೆಗೆದುಕೊಂಡ ಕ್ರಮಗಳನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೆ?

ಡಿ.ಕೆ. ಶಿವಕುಮಾರ್ ಅವರು ಅಹಿಂದ ಬಲವನ್ನು 'ಧ್ವಂಸ' ಮಾಡದೆ, ಆ ಬಲದ 'ದಿಕ್ಕು' ಬದಲಿಸಲು ಮಾಡುತ್ತಿರುವ ಯತ್ನದ ಆರಂಭದಲ್ಲೇ ಸೋತಿರುವುದು ಕಾಣಿಸುತ್ತಿದೆ. ಅಹಿಂದವನ್ನು ಪೂರ್ಣವಾಗಿ ಕಳೆದುಕೊಂಡರೆ ಕಾಂಗ್ರೆಸ್ ಅಸ್ತಿತ್ವಕ್ಕೇ ಧಕ್ಕೆಯಾಗುತ್ತದೆ. ಹೀಗಾಗಿ, ಅವರು ಸಿದ್ದರಾಮಯ್ಯನವರ ಹಿಡಿತದಿಂದ ಅಹಿಂದವನ್ನು ಬಿಡಿಸಿ, ಅದನ್ನು ಪಕ್ಷದ ಅಡಿಯಲ್ಲಿ ಅಥವಾ ತಮ್ಮ ನಾಯಕತ್ವದ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನದ ಭಾಗವಾಗಿಯೇ ಸಿದ್ದರಾಮಯ್ಯ ಅವರ ಎಡ-ಬಲದಲ್ಲಿರುವ ಎಲ್ಲಾ ನಾಯಕರನ್ನು(ಕೆ.ಎನ್ ರಾಜಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ.ಗೋವಿಂದರಾಜ್, ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್) ಹಂತಹಂತವಾಗಿ ಪಕ್ಷದ ಅಧಿಕಾರದಿಂದ ದೂರ ಮಾಡುತ್ತಿದ್ದಾರೆ. ಬಹುಶಃ ಇದು ಅವರ ವಿಧಾನಸೌಧದ ಮೂರನೇ ಮಹಡಿಯ ಸಿಎಂ ಕುರ್ಚಿಯ ಮೇಲೆ ಭದ್ರವಾಗಿ ಕೂರುವ ಕನಸನ್ನು ಕನಸಾಗಿಯೇ ಉಳಿಯುವಂತೆ ಮಾಡಿದರೂ ಅಚ್ಚರಿಯೇನಿಲ್ಲ. 

ಶಿಸ್ತು ಕ್ರಮದ ಹಿಂದೆ ಡಿಕೆಶಿ ಅವರ ಯೋಜನೆ ಏನು ?

ಕಾಂಗ್ರೆಸ್ ಪಕ್ಷದ ಇತ್ತೀಚಿನ ಶಿಸ್ತು ಕ್ರಮಗಳು, ವಿಶೇಷವಾಗಿ ಮುಸ್ಲಿಂ ನಾಯಕರಾದ ಎಂಎಲ್ಸಿ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮದ್ ಅವರ ವಿರುದ್ಧ ಕೈಗೊಂಡಿರುವ ನಿರ್ಧಾರಗಳ ಹಿಂದೆ ಡಿ.ಕೆ. ಶಿವಕುಮಾರ್ (DKS) ಅವರ ದೂರಗಾಮಿ ರಾಜಕೀಯ ಲೆಕ್ಕಾಚಾರಗಳು ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು "ಪಕ್ಷ ಮೊದಲು, ವ್ಯಕ್ತಿ ನಂತರ" ಎಂಬ ಸಂದೇಶವನ್ನು ರವಾನಿಸಲು ಯತ್ನಿಸುತ್ತಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ನಾಯಕರು ಬಂಡಾಯವೆದ್ದಾಗ ಅಥವಾ ಅಧಿಕೃತ ಅಭ್ಯರ್ಥಿ (ಸಮರ್ಥ್ ಶಾಮನೂರು) ಪರವಾಗಿ ಕೆಲಸ ಮಾಡದಿದ್ದಾಗ, ಅದನ್ನು 'ಅಶಿಸ್ತು' ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಇದು ಕೇವಲ ಮುಸ್ಲಿಂ ನಾಯಕರಿಗಷ್ಟೇ ಅಲ್ಲ, ಪಕ್ಷದ ಯಾರೇ ಆದರೂ ಬಂಡಾಯವೆದ್ದರೆ ಅಥವಾ ಒಳಗೊಳಗೆ ಸಂಚು ನಡೆಸಿದರೆ ಅಂತಹವರಿಗೆ ಜಾಗವಿಲ್ಲ ಎಂಬ ಎಚ್ಚರಿಕೆಯನ್ನು ಇಡೀ ಪಕ್ಷಕ್ಕೆ ನೀಡುವುದೆಂದು ಅವರು ಸಮರ್ಥಿಸಿಕೊಂಡರೂ, ಕಾಂಗ್ರೆಸ್ ನಂಬಿಕೊಂಡು ಬಂದಿರುವ ʼಅಹಿಂದʼಕ್ಕೆ ಡಿಕೆಶಿ ನೀಡಿದ ಹೊಡೆತ ಅಲ್ಲವೇ? 

ಶಿಸ್ತು ಕ್ರಮಕ್ಕೆ ಒಳಗಾದ ನಸೀರ್ ಅಹಮದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಹಾಗೆಯೇ ಅಬ್ದುಲ್ ಜಬ್ಬಾರ್ ಕೂಡ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇವರ ಮೇಲೆ ಕ್ರಮ ಕೈಗೊಳ್ಳುವ ಮೂಲಕ, ಸಿದ್ದರಾಮಯ್ಯನವರ ಪ್ರಭಾವದ ವಲಯದಲ್ಲಿದ್ದ ಅಹಿಂದ ನಾಯಕರ ಬಲವನ್ನು ಡಿ.ಕೆ. ಶಿವಕುಮಾರ್ ಕುಗ್ಗಿಸುತ್ತಿದ್ದಾರೆ ಎಂಬ ವಿಶ್ಲೇಷಣೆ ಇದೆ. ಇದು ಅವರ 'ಸಿಎಂ' ಗಾದಿಯ ಹಾದಿಯಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಒಂದು ತಂತ್ರವೂ ಆಗಿರಬಹುದು. ಮುಸ್ಲಿಂ ಸಮುದಾಯದ ಪ್ರಬಲ ನಾಯಕರನ್ನು ನಿಯಂತ್ರಿಸುವ ಮೂಲಕ, ಆ ಜಾಗಕ್ಕೆ ತಮಗೆ ನಿಷ್ಠರಾಗಿರುವ ಅಥವಾ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವ ಹೊಸ ತಲೆಮಾರಿನ ನಾಯಕರನ್ನು ತಂದು ಕೂರಿಸಲು ಡಿಕೆಶಿ ಯೋಜಿಸುತ್ತಿರಬಹುದು. 

ಈ ಇಡೀ ಬೆಳವಣಿಗೆಯ ಕೇಂದ್ರಬಿಂದು ಸಚಿವ ಜಮೀರ್ ಅಹಮದ್ ಖಾನ್ ಎನ್ನಲಾಗುತ್ತಿದೆ. ಈಗಾಗಲೇ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮದ್ ಅವರ ಮೇಲೆ ಕ್ರಮವಾಗಿರುವುದರಿಂದ, ಮುಂದಿನ ಗುರಿ ಜಮೀರ್ ಅವರೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದು ಜಮೀರ್ ಅವರ ಪ್ರಭಾವವನ್ನು ತಗ್ಗಿಸಲು ಡಿಕೆಶಿ ಹೂಡಿರುವ ವ್ಯೂಹವಾಗಿದೆ.

ಡಿ.ಕೆ. ಶಿವಕುಮಾರ್ ಅವರ ಈ 'ಶಿಸ್ತು ಕ್ರಮ'ಗಳು ಕೇವಲ ಒಂದು ಸಮುದಾಯದ ವಿರುದ್ಧದ್ದಲ್ಲ, ಬದಲಿಗೆ ಪಕ್ಷದಲ್ಲಿ ಸಿದ್ದರಾಮಯ್ಯನವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ತಮ್ಮ ನಾಯಕತ್ವವನ್ನು ಅಬಾಧಿತಗೊಳಿಸಲು ಮಾಡುತ್ತಿರುವ 'ಪವರ್ ಗೇಮ್'. ಅಹಿಂದ ಮತಬ್ಯಾಂಕ್ ಕಾಂಗ್ರೆಸ್ ಜೊತೆಗೇ ಇರಬೇಕು, ಆದರೆ ಅದರ ನಾಯಕತ್ವ ಮಾತ್ರ ಸಿದ್ದರಾಮಯ್ಯನವರೊಬ್ಬರ ಕೈಯ್ಯಲ್ಲಿ ಇರಬಾರದು ಎನ್ನುವುದು ಡಿಕೆಶಿ ಅವರ ಅಘೋಷಿತ ನೀತಿಯಂತಿದೆ.

ʼಅಹಿಂದʼ ಅಸಮಾಧಾನ ಕಾಂಗ್ರೆಸ್ ಗೆ ಮರಣಶಾಸನ?

ಕಾಂಗ್ರೆಸ್ ಪಕ್ಷಕ್ಕೆ 'ಅಹಿಂದ' (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ಎನ್ನುವುದು ಕೇವಲ ಮತಬ್ಯಾಂಕ್ ಅಲ್ಲ, ಅದು ಪಕ್ಷದ ಅಸ್ತಿತ್ವದ ಬೆನ್ನೆಲುಬು. ಒಂದು ವೇಳೆ ಈ ಅಹಿಂದ ಬಲವನ್ನು ಕಾಂಗ್ರೆಸ್ ಕಳೆದುಕೊಂಡರೆ, ಪಕ್ಷದ ಭವಿಷ್ಯ ಗಂಭೀರ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ.


ಕರ್ನಾಟಕದಲ್ಲಿ ಅಹಿಂದ ವರ್ಗದ ಜನಸಂಖ್ಯೆ ಶೇ. 60ಕ್ಕಿಂತ ಹೆಚ್ಚಿದೆ ಎಂದು ಹೇಳಲಾಗುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಪ್ರಮುಖ ಕಾರಣ ಈ ವರ್ಗದ ಏಕಪಕ್ಷೀಯ ಬೆಂಬಲ. ದಲಿತರ ಪೈಕಿ ಸುಮಾರು ಶೇ. 66 ರಷ್ಟು ಮತ್ತು ಮುಸ್ಲಿಂ ಸಮುದಾಯದ ಶೇ. 92 ರಷ್ಟು ಮತಗಳು ಕಾಂಗ್ರೆಸ್ಗೆ ಲಭಿಸಿದ್ದವು. ಒಂದು ವೇಳೆ ಈ ಮತಗಳಲ್ಲಿ ಶೇ. 10-15ರಷ್ಟು ಕುಸಿತ ಕಂಡರೂ ಕಾಂಗ್ರೆಸ್ ಗೆ ಕುತ್ತು ಖಂಡಿತ. 

ಬಿಜೆಪಿ ಈಗಾಗಲೇ ಹಿಂದುಳಿದ ವರ್ಗಗಳ (OBC) ಸಣ್ಣ ಸಣ್ಣ ಸಮುದಾಯಗಳನ್ನು ಒಡೆದು ಆಳುವ ತಂತ್ರಗಾರಿಕೆಯ ಮೂಲಕ ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಕಾಂಗ್ರೆಸ್ ಅಹಿಂದ ಬಲವನ್ನು ಕಳೆದುಕೊಂಡರೆ, ಆ ಮತಗಳು ಸಹಜವಾಗಿಯೇ ಬಿಜೆಪಿ ಅಥವಾ ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್ನತ್ತ ವಾಲಬಹುದು. ಇದು ಕಾಂಗ್ರೆಸ್ಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಬಹುದು ಎನ್ನುವುದರಲ್ಲಿ ಸಂಶಯವಿಲ್ಲ. 

ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಪ್ರಶ್ನಾತೀತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಮುಸ್ಲಿಂ ನಾಯಕರ ವಿರುದ್ಧದ ಶಿಸ್ತು ಕ್ರಮಗಳು ಅಥವಾ ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ಕೇಂದ್ರಿತ ರಾಜಕಾರಣ ಅಹಿಂದ ವರ್ಗದಲ್ಲಿ "ನಮಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ" ಎಂಬ ಭಾವನೆ ಮೂಡಿಸಿದರೆ, ಆ ವರ್ಗಗಳು ಕಾಂಗ್ರೆಸ್ನಿಂದ ದೂರ ಸರಿಯುತ್ತವೆ. ಅಹಿಂದವನ್ನು ಕಳೆದುಕೊಂಡ ಕಾಂಗ್ರೆಸ್ ಕೇವಲ ಒಂದು ಸಮುದಾಯದ (ಒಕ್ಕಲಿಗ) ಪಕ್ಷವಾಗಿ ಉಳಿಯುವ ಅಪಾಯವಿದೆ. ಅಹಿಂದ ಬಲವಿಲ್ಲದ ಕಾಂಗ್ರೆಸ್, ಇಂಧನವಿಲ್ಲದ ವಾಹನದಂತಾಗುತ್ತದೆ.

ಇನ್ನು, ಒಕ್ಕಲಿಗ ಮತ್ತು ಲಿಂಗಾಯತ ಮತಗಳು ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಂಚಿಹೋಗುತ್ತಿರುತ್ತವೆ. ಕಾಂಗ್ರೆಸ್ಗೆ ಉಳಿದಿರುವ ಏಕೈಕ ಭದ್ರಕೋಟೆ ಅಹಿಂದ. ಹಾಗಾಗಿ, ಅಹಿಂದ ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳದೆ ಹೋದರೆ ಕಾಂಗ್ರೆಸ್ಗೆ ಕರ್ನಾಟಕದಲ್ಲಿ ಭವಿಷ್ಯ ಬಹಳ ಕಠಿಣವಾಗಲಿದೆ.

ಈ ನಡುವೆ ಸಿದ್ದರಾಮಯ್ಯರನ್ನು ಕೆಣಕಲು ಹೋಗಿ ಪಕ್ಷವನ್ನು ಅಧಿಕಾರಕ್ಕೇರದೇ ಇರುವ ಹಾಗೆ ಮಾಡಿದರೇ ಡಿಕೆ ಶಿವಕುಮಾರ್ ಎನ್ನುವ ಪ್ರಶ್ನೆ ಮೂಡುತ್ತದೆ. ಸಿದ್ದರಾಮಯ್ಯನವರನ್ನು ಕೆಣಕುವ ಮೂಲಕ ಡಿ.ಕೆ. ಶಿವಕುಮಾರ್ ಅವರು ಅರಿವಿಲ್ಲದೆಯೇ ಪಕ್ಷದ ಅಡಿಪಾಯಕ್ಕೆ (ಅಹಿಂದ) ಪೆಟ್ಟು ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಇದೆ. 

ಸಿದ್ದರಾಮಯ್ಯ ಅವರ ರಾಜಕೀಯ ಅಸ್ತಿತ್ವವಿರುವುದೇ ಅಹಿಂದ ವರ್ಗದ ಬೆಂಬಲದ ಮೇಲೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಸ್ಥಾನಕ್ಕಾಗಿ ಒಕ್ಕಲಿಗ ಮಠಾಧೀಶರನ್ನು ಮುಂದಿಟ್ಟುಕೊಂಡು ಒತ್ತಡ ಹೇರುತ್ತಿರುವುದು ಅಹಿಂದ ವರ್ಗಗಳಲ್ಲಿ ಅಸಮಾಧಾನ ಮೂಡಿಸಿದೆ. "ನಾವು ಮತ ಹಾಕಿ ಗೆಲ್ಲಿಸಿದ ಸರ್ಕಾರದಲ್ಲಿ ನಮ್ಮ ನಾಯಕ(ಸಿದ್ದರಾಮಯ್ಯ)ನನ್ನು ಕಡೆಗಣಿಸಲಾಗುತ್ತಿದೆ" ಎಂಬ ಭಾವನೆ ಅಹಿಂದ ವರ್ಗಗಳಲ್ಲಿ ಮೂಡಿದರೆ, ಅದು 2028ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮರಣಶಾಸನವಾಗಬಹುದು ಎನ್ನುವುದರಲ್ಲಿ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ