ಬಲಪಂಥೀಯರ 'ಕೋಮು ಧ್ರುವೀಕರಣ'ದ ರಾಜಕಾರಣಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯನವರ 'ಆರ್ಥಿಕ ಮತ್ತು ಸಾಮಾಜಿಕ ನ್ಯಾಯ'ದ ಮಾದರಿಯನ್ನು ದೇಶಾದ್ಯಂತ ಚರ್ಚಿಸುವಂತೆ ಮಾಡುವ ಇಂಗಿತವನ್ನು ಯಥೇಚ್ಛವಾಗಿ ಕಾಂಗ್ರೆಸ್ ತೋರಿಸಬೇಕಿದೆ. ಈ ಹಿಂದೆ ತಮಿಳುನಾಡಿನ ಕುಮಾರಸ್ವಾಮಿ ಕಾಮರಾಜ್ ಅವರನ್ನು, ಅವರ ಕಾರ್ಯತಂತ್ರವನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಹೇಗೆ ಬಳಸಿಕೊಂಡಿದ್ದರೋ, ಹಾಗೇ ಇಂದು ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯರ ಅಹಿಂದ ಸಿದ್ಧಾಂತವನ್ನು ಕಾಂಗ್ರೆಸ್ ಹೈಕಮಾಂಡ್ ಬಳಸಿಕೊಳ್ಳಬೇಕಿದೆ. ರಾಹುಲ್ ಗಾಂಧಿ ದೇಶಾದ್ಯಂತ ಮಾಡುತ್ತಿರುವ ಸಾಮಾಜಿಕ ನ್ಯಾಯದ ಹೋರಾಟವನ್ನು ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಗೆ ತಂದು ತೋರಿಸಿದವರು ಸಿದ್ದರಾಮಯ್ಯ. ಆದರೇ, ಸಿದ್ದರಾಮಯ್ಯನವರು ಶುದ್ಧ ಪ್ರಾದೇಶಿಕ ರಾಜಕಾರಣದಲ್ಲಿ ಬೆಳೆದವರು. ಉತ್ತರ ಭಾರತದ ಹಿಂದಿ ಪಟ್ಟಿಯ ರಾಜಕಾರಣಕ್ಕೆ ಅವರ ಭಾಷೆಯ ಮಿತಿ ಮತ್ತು ಪ್ರಾದೇಶಿಕ ಶೈಲಿ ಎಷ್ಟು ಒಗ್ಗಿಕೊಳ್ಳುತ್ತದೆ ಎಂಬ ಪ್ರಶ್ನೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಮತ್ತು ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸ್ಪಂದಿಸಿದ ರೀತಿ, ಕೇವಲ ಒಂದು ಪಕ್ಷದ ಆಂತರಿಕ ನಿರ್ಧಾರವಲ್ಲ. ಇದು ಭಾರತೀಯ ರಾಜಕೀಯದ ಸದ್ಯದ ಸನ್ನಿವೇಶದಲ್ಲಿ ವೈಚಾರಿಕ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ತಿರುವು. ಯಾವುದೇ ರೀತಿಯ ರಾಜಕೀಯ ಒತ್ತಡಕ್ಕೆ ಮಣಿಯದೇ, ಸಿದ್ದರಾಮಯ್ಯ ಅವರನ್ನು ಮತ್ತು ಸಿದ್ದರಾಮಯ್ಯ ಅವರ ಸೈದ್ಧಾಂತಿಕ ನಿಲುವನ್ನು ಕಾಂಗ್ರೆಸ್ ನಡೆಸಿಕೊಂಡಿದೆ.
ಸಿದ್ದರಾಮಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಕರ್ನಾಟಕದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ (ಅಹಿಂದ) ವರ್ಗಗಳ ಧ್ವನಿಯಾಗಿದ್ದವರು. ದಶಕಗಳ ಕಾಲ ಸಮಾಜವಾದಿ ಮತ್ತು ಪ್ರಗತಿಪರ ಚಳವಳಿಗಳ ಹಿನ್ನೆಲೆಯಿಂದ ಬಂದ ಅವರು, ಬದಲಾದ ರಾಜಕೀಯ ಸಮೀಕರಣಗಳ ಕಾಲಘಟ್ಟದಲ್ಲೂ ಜನಕಲ್ಯಾಣ (Welfare) ಯೋಜನೆಗಳ ಮೂಲಕ ಬಡವರ ಪರ ನಿಲುವು ತಳೆದವರು. ಸಾಮಾನ್ಯವಾಗಿ ಅಧಿಕಾರ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಗಳು ಕಹಿ ಮತ್ತು ಸಂಘರ್ಷದಿಂದ ಕೂಡಿರುತ್ತವೆ. ಆದರೆ, ಕಾಂಗ್ರೆಸ್ ಸಿದ್ದರಾಮಯ್ಯನವರನ್ನು ಮತ್ತು ಅವರ 'ಅಹಿಂದ' ಸಿದ್ಧಾಂತವನ್ನು ಗೌರವಯುತವಾಗಿ ನಡೆಸಿಕೊಂಡಿರುವುದು ಶ್ಲಾಘನೀಯ. ಇದು ಬಲಪಂಥೀಯ ಶಕ್ತಿಗಳು ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದ ಹೊತ್ತಿನಲ್ಲಿ, ಅವರ ಸಿದ್ಧಾಂತವನ್ನು ಪಕ್ಷ ಕೈಬಿಟ್ಟಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದಂತಿದೆ.
'ಅಹಿಂದ' ಚಳವಳಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ನಾಯಕತ್ವ :
ಸಿದ್ದರಾಮಯ್ಯನವರ ಶಕ್ತಿ ಇರುವುದು ಅಧಿಕಾರದಲ್ಲಲ್ಲ, ಬದಲಿಗೆ ತಳಸಮುದಾಯಗಳೊಂದಿಗಿನ ಅವರ ನೇರ ಒಡನಾಟದಲ್ಲಿ. ಅಧಿಕಾರದ ಮಿತಿಯನ್ನು ಮೀರಿ ಈ ಸಂದರ್ಭದಲ್ಲಿ, ಅವರು ಮತ್ತೊಮ್ಮೆ ಜನಸಾಮಾನ್ಯರ ಧ್ವನಿಯಾಗಿ ನಿಲ್ಲಬಹುದು. ರಾಜಕಾರಣದಲ್ಲಿ ನಿರತನಾಗಿರಲಿದ್ದೇನೆ ಎನ್ನುವುದನ್ನು ಖುದ್ದಾಗಿ ಅವರೇ ಹೇಳಿದ್ದಾರೆ. 2028ರ ಹೊತ್ತಿಗೆ ರಾಜಕೀಯಕ್ಕೆ ಬಂದು 50 ವರ್ಷಗಳನ್ನು ಪೂರೈಸುವ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕಾಂಗ್ರೆಸ್ ಗೆ ಗೆಲ್ಲುವ ಶಕ್ತಿಯಾಗಿಯೇ ಉಳಿಯಬಹುದು. ಸದ್ಯಕ್ಕಂತೂ ರಾಜ್ಯಸಭೆಗೆ ಹೋಗುವ ಮನಸ್ಸಿಲ್ಲ ಅನ್ನುವುದನ್ನು ಸ್ವತಃ ಅವರೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪರೋಕ್ಷವಾಗಿ 2028ರ ಚುನಾವಣೆಗೂ ತಾವು ಕೆಲಸ ಮಾಡುವುದಾಗಿ ಅವರು ಹೇಳಿದಂತಿದೆ. ಮತ್ತು ಅವರನ್ನು ಮುಂದಿನ ಚುನಾವಣೆಗೂ ಬಳಸಿಕೊಳ್ಳುವ ಇರಾದೆಯನ್ನು ಕಾಂಗ್ರೆಸ್ ಹೊಂದಿದಂತಿದೆ.
ಅಧಿಕಾರದಲ್ಲಿ ಇಲ್ಲದಿದ್ದರೂ ತಳವರ್ಗದ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುವ ಸಾಂಸ್ಕೃತಿಕ ಮತ್ತು ನೈತಿಕ ನಾಯಕರಾಗಿ (Ideological Mentor) ಅವರ ವರ್ಚಸ್ಸನ್ನು ಕಾಂಗ್ರೆಸ್ ಬೆಳೆಸಬಹುದು. ಅಥವಾ ಬೆಳೆಸಬೇಕಿದೆ.
ವೈಚಾರಿಕ ಅಸ್ತ್ರವಾಗಿ 'ಕರ್ನಾಟಕ ಮಾದರಿ' ಮತ್ತು ಸಿದ್ದರಾಮಯ್ಯ ಸೈದ್ಧಾಂತಿಕ ನಿಲುವು :
ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಜನಕಲ್ಯಾಣ ಯೋಜನೆಗಳು (ಗ್ಯಾರಂಟಿಗಳು) ಮತ್ತು ಸಾಮಾಜಿಕ ನ್ಯಾಯದ ನೀತಿಗಳನ್ನು ಒಂದು ಸಿದ್ಧಾಂತವಾಗಿ ಕಾಂಗ್ರೆಸ್ ಚೆನ್ನಾಗಿ ಬಳಸಿಕೊಳ್ಳಬೇಕಿದೆ.
ಬಲಪಂಥೀಯರ 'ಕೋಮು ಧ್ರುವೀಕರಣ'ದ ರಾಜಕಾರಣಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯನವರ 'ಆರ್ಥಿಕ ಮತ್ತು ಸಾಮಾಜಿಕ ನ್ಯಾಯ'ದ ಮಾದರಿಯನ್ನು ದೇಶಾದ್ಯಂತ ಚರ್ಚಿಸುವಂತೆ ಮಾಡುವ ಇಂಗಿತವನ್ನು ಯಥೇಚ್ಛವಾಗಿ ಕಾಂಗ್ರೆಸ್ ತೋರಿಸಬೇಕಿದೆ. ಸಿದ್ದರಾಮಯ್ಯನವರ ವರ್ಚಸ್ಸು ಕೇವಲ ಅವರ ವ್ಯಕ್ತಿತ್ವಕ್ಕೆ ಸೀಮಿತವಾಗದೆ, ಅವರ ನಂತರದ ತಲೆಮಾರಿನ ಪ್ರಗತಿಪರ ನಾಯಕರನ್ನು ಬೆಳೆಸುವಲ್ಲಿ ಕಾಂಗ್ರೆಸ್ ಬಳಸಿಕೊಳ್ಳಬೇಕು. ಈ ಹಿಂದೆ ತಮಿಳುನಾಡಿನ ಕುಮಾರಸ್ವಾಮಿ ಕಾಮರಾಜ್ ಅವರನ್ನು, ಅವರ ಕಾರ್ಯತಂತ್ರವನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಹೇಗೆ ಬಳಸಿಕೊಂಡಿದ್ದರೋ, ಹಾಗೇ ಇಂದು ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯರ ಅಹಿಂದ ಸಿದ್ಧಾಂತವನ್ನು ಕಾಂಗ್ರೆಸ್ ಹೈಕಮಾಂಡ್ ಬಳಸಿಕೊಳ್ಳಬೇಕು. ಅದು ಇಡೀ ದೇಶದಾದ್ಯಂತ ರಾಹುಲ್ ಗಾಂಧಿ ಮಾಡಲು ಹೊರಟಿರುವ ಅಹಿಂದ ಚಳವಳಿಗೂ ಪೂರಕವಾಗಿರಲಿದೆ ಮತ್ತು ಪಕ್ಷದ ಬಲವರ್ಧನೆಗೂ ಸಹಕಾರಿಯಾಗಿರಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇನ್ನು, ಕಾಂಗ್ರೆಸ್ ಪಕ್ಷದ ಒಳಗಿರುವ ಮತ್ತು ಹೊರಗಿರುವ ಯುವ, ಸಮಾಜವಾದಿ ಮತ್ತು ಪ್ರಗತಿಪರ ಆಲೋಚನೆಗಳುಳ್ಳ ನಾಯಕರಿಗೆ ಸಿದ್ದರಾಮಯ್ಯನವರು ಬೆಂಬಲವಾಗಿ ನಿಲ್ಲಬೇಕು/ಕಾಂಗ್ರೆಸ್ ಸಿದ್ದರಾಮಯ್ಯರನ್ನು ಆ ರೀತಿಯಾಗಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಇದು ಅವರ ಸಿದ್ಧಾಂತಕ್ಕೆ ಸಾಂಸ್ಥಿಕ ರೂಪ ನೀಡುತ್ತದೆ ಮತ್ತು ಡಿಕೆಶಿ ರಾಜಕೀಯ ಚಾಣಾಕ್ಷತನದ ಜೊತೆಗೆ ಸಿದ್ದರಾಮಯ್ಯ ಸೈದ್ಧಾಂತಿಕ ಗಟ್ಟಿತನ ಒಂದಾದಾಗ ಕಾಂಗ್ರೆಸ್ ಪಕ್ಷದ ಸಂಘಟನೆಗೂ ಬಲ ಬರಲಿದೆ.
ಒಕ್ಕೂಟ ವ್ಯವಸ್ಥೆಯ ಹೋರಾಟದ ಮುಂಚೂಣಿ ಮುಖವಾಗಿ ಸಿದ್ದರಾಮಯ್ಯ !?
ನರೇಂದ್ರ ಮೋದಿ ಅವರ ರಾಜಕಾರಣ ಬಂಡವಾಳಶಾಹಿ ಸ್ನೇಹಿ ನೀತಿಗಳು ಮತ್ತು ಕಾರ್ಪೊರೇಟ್ ಕೇಂದ್ರೀಕೃತ ಬೆಳವಣಿಗೆಯನ್ನು (Neo-liberalism) ಆಧರಿಸಿದೆ. ಇದಕ್ಕೆ ತದ್ವಿರುದ್ಧವಾಗಿ ಸಿದ್ದರಾಮಯ್ಯನವರ ರಾಜಕಾರಣ ಸಮಾಜವಾದಿ ಹಿನ್ನೆಲೆಯುಳ್ಳದ್ದು. ಪ್ರಧಾನಿ ಮೋದಿಯನ್ನು ಅತ್ಯಂತ ಕಟುವಾಗಿ ಟೀಕಿಸಿದ ನಾಯಕರಲ್ಲಿ ಓರ್ವರು ಸಿದ್ದರಾಮಯ್ಯ. ಇಲ್ಲಿನ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಪ್ರಧಾನಿ ಮೋದಿ ಸಿದ್ದರಾಮಯ್ಯ ರಾಜಕೀಯ ವರ್ಚಸ್ಸಿನ ಎದುರು ನಿಂತು ಚುನಾವಣೆಗಾಗಿ ಪ್ರಚಾರ ಮಾಡಬೇಕಾದ ಪರಿಸ್ಥಿತಿ ಮೋದಿಗೆ ಬಂದಿತ್ತು. ಅದು ಸಿದ್ದರಾಮಯ್ಯ ಮತ್ತು ಅವರ ಸೈದ್ಧಾಂತಿಕ ಶಕ್ತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯನವರನ್ನು ವೈಯಕ್ತಿಕವಾಗಿ ಮತ್ತು ತೀವ್ರವಾಗಿ ವಿರೋಧಿಸಿದ್ದಕ್ಕೆ ಕಾರಣ, ಸಿದ್ದರಾಮಯ್ಯ ಕೇವಲ ಸೀಟು ಗೆಲ್ಲುವ ರಾಜಕಾರಣಿಯಾಗಿರಲಿಲ್ಲ, ಬದಲಿಗೆ ಬಲಪಂಥೀಯ ಸಿದ್ಧಾಂತದ ಹೆಡ್ಲೈಟ್ಗಳಿಗೆ ನೇರವಾಗಿ ಕಣ್ಣು ನೆಟ್ಟು ನಿಲ್ಲಬಲ್ಲ ವೈಚಾರಿಕ ಗಟ್ಟಿತನ ಹೊಂದಿದ್ದ ಪ್ರಬಲ ನಾಯಕರಾಗಿದ್ದರು. ಸಿದ್ದರಾಮಯ್ಯನವರ ನಿರ್ಗಮನದ ನಂತರವೂ ಅವರು ಬಿತ್ತಿದ ಈ ವೈಚಾರಿಕ ಹೋರಾಟವನ್ನು ಮುಂದುವರಿಸುವುದು ಕಾಂಗ್ರೆಸ್ ಮುಂದಿನ ಸವಾಲಾಗಿದೆ. ರಾಹುಲ್ ಗಾಂಧಿ ದೇಶ ಮಟ್ಟದಲ್ಲಿ ಆ ಪ್ರಯತ್ನವನ್ನು ಯಶಸ್ವಿಯಾಗಿ ಮಾಡುತ್ತಿದ್ದರೂ, ರಾಜ್ಯದಲ್ಲಿ ಸಿದ್ದರಾಮಯ್ಯರ ರಾಜೀನಾಮೆಯಿಂದ ಆ ಬಲ ಕುಂದಿದೆ. ಡಿಕೆಶಿ ಅಷ್ಟು ಬಲವಾಗಿ ಹೋರಾಡಬಲ್ಲರೇ ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ.
ಇನ್ನು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಏಕಪಕ್ಷೀಯ ನೀತಿಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತಬಲ್ಲ ಪ್ರಾದೇಶಿಕ ನಾಯಕರ ಕೊರತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಸಿದ್ದರಾಮಯ್ಯನವರು ಈಗ ಯಾವುದೇ ಸಾಂವಿಧಾನಿಕ ಹುದ್ದೆಯ ಹಂಗಿಲ್ಲದೆ, ಮುಕ್ತವಾಗಿ ಒಕ್ಕೂಟ ವ್ಯವಸ್ಥೆಯ ರಕ್ಷಣೆಗಾಗಿ ಮತ್ತು ರಾಜ್ಯಗಳ ಸ್ವಾಯತ್ತತೆಗಾಗಿ ರಾಷ್ಟ್ರಮಟ್ಟದಲ್ಲಿ 'ಇಂಡಿಯಾ' (I.N.D.I.A) ಮೈತ್ರಿಕೂಟದ ಪ್ರಮುಖ ಪ್ರಭಾವಿ ಮುಖವಾಗಿ ಕೆಲಸ ಮಾಡಬಹುದು. ಅಥವಾ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮನವೊಲಿಸಿ ಬಿಜೆಪಿ ವಿರುದ್ಧದ ಹೋರಾಟದ ಮುಂಚೂಣಿ ಸಲಹೆಗಾರ ಮುಖವಾಗಿ ಮಾಡಬಹುದು. ಇದು ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯರ ಸೈದ್ಧಾಂತಿಕ ನಿಲುವನ್ನು ಕಾಂಗ್ರೆಸ್ ಗೆ ಬೇಕಾಗುವ ಹಾಗೆ ರಾಷ್ಟ್ರಮಟ್ಟದಲ್ಲಿ ವಿಸ್ತರಿಸಿದಂತೆಯೂ ಆಗುತ್ತದೆ. ಕಾಂಗ್ರೆಸ್ ರಾಜಕೀಯ ಹೋರಾಟಕ್ಕೆ ಬಲವೂ ತುಂಬಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ರಾಹುಲ್ ಗೆ ಸಿದ್ದರಾಮಯ್ಯ ಆನೆಬಲ !?
ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ನಡುವಿನ ಸಂಬಂಧ ಕೇವಲ ಹೈಕಮಾಂಡ್ ಮತ್ತು ಪ್ರಾದೇಶಿಕ ನಾಯಕನ ನಡುವಿನದ್ದಲ್ಲ. ಅದು ಪರಸ್ಪರ ವೈಚಾರಿಕ ಗೌರವದ ಸಂಕೇತವೂ ಹೌದು. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ತರಲು ಬಯಸುವುದರ ಹಿಂದೆ ದೊಡ್ಡದೊಂದು ಸಿದ್ಧಾಂತದ ಕಾರ್ಯತಂತ್ರವಿದೆ.
ರಾಹುಲ್ ಗಾಂಧಿ ದೇಶಾದ್ಯಂತ ಮಾಡುತ್ತಿರುವ ಸೈದ್ಧಾಂತಿಕ ಹೋರಾಟವನ್ನು ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಗೆ ತಂದು ತೋರಿಸಿದವರು ಸಿದ್ದರಾಮಯ್ಯ.
ರಾಹುಲ್ ಗಾಂಧಿಯವರಿಗೆ ತಮ್ಮ 'ಸಾಮಾಜಿಕ ನ್ಯಾಯ'ದ ಹೋರಾಟಕ್ಕೆ ರಾಷ್ಟ್ರಮಟ್ಟದಲ್ಲಿ ಒಬ್ಬ ಸಮರ್ಥ, ಅನುಭವಿ ಮತ್ತು ತಳಮಟ್ಟದ ಜನಬೆಂಬಲವಿರುವ ನಾಯಕನ ಅಗತ್ಯವಿದೆ. ಅದಕ್ಕೆ ಸಿದ್ದರಾಮಯ್ಯನವರಿಗಿಂತ ಸೂಕ್ತ ನಾಯಕ ಮತ್ತೊಬ್ಬರಿಲ್ಲ. ಹೀಗಾಗಿ, ರಾಹುಲ್ ಗಾಂಧಿ ಖಂಡಿತವಾಗಿಯೂ ಸಿದ್ದರಾಮಯ್ಯನವರನ್ನು ರಾಷ್ಟ್ರಮಟ್ಟದಲ್ಲಿ ಬಳಸಿಕೊಳ್ಳಬಹುದು. ಸಿದ್ದರಾಮಯ್ಯ ಅವರೂ ಕೂಡ ರಾಹುಲ್ ಗಾಂಧಿ ನಡೆಯನ್ನು ಮೆಚ್ಚಿಕೊಂಡವರು. ಹಾಗಾಗಿ ರಾಹುಲ್ ಖುದ್ದಾಗಿ ಸಿದ್ದರಾಮಯ್ಯರನ್ನು ಮನವೊಲಿಸಿದರೇ, ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದಲ್ಲಿ ಸಿದ್ದರಾಮಯ್ಯ ಪ್ರಬಲ ಮುಖವಾಗಿ ಬೆಳೆಯಬಹುದು ಎನ್ನುವುದರಲ್ಲಿ ಸಂಶಯವೇ ಇಲ್ಲ.
ಸಿದ್ದರಾಮಯ್ಯನವರು ದಿಲ್ಲಿಗೆ ಹೋಗಿ ಸಂಸದೀಯ ರಾಜಕಾರಣ ಮಾಡುವುದು ಅಥವಾ ಕೇಂದ್ರ ಮಂತ್ರಿಯಾಗುವುದು ಸದ್ಯದ ಪರಿಸ್ಥಿತಿಯಲ್ಲಿ ದೂರದ ಮಾತು ಎನಿಸಬಹುದು. ಆದರೆ, ಅದಕ್ಕಿಂತ ಪ್ರಮುಖವಾದ ಪಾತ್ರಗಳು ಅವರಿಗಾಗಿ ಕಾಯುತ್ತಿವೆ ಎನ್ನಿಸುತ್ತಿದೆ. ಇಂಡಿಯಾ ಮೈತ್ರಿಕೂಟದ ಸಮಾಜವಾದಿ ಮುಖವಾಗಿ, ರಾಷ್ಟ್ರೀಯ ನೀತಿ ನಿರೂಪಕನಾಗಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬೆಳೆಸಬಹುದು.
ಆದರೇ, ಸಿದ್ದರಾಮಯ್ಯನವರು ಶುದ್ಧ ಪ್ರಾದೇಶಿಕ ರಾಜಕಾರಣದಲ್ಲಿ ಬೆಳೆದವರು. ಉತ್ತರ ಭಾರತದ ಹಿಂದಿ ಪಟ್ಟಿಯ ರಾಜಕಾರಣಕ್ಕೆ ಅವರ ಭಾಷೆಯ ಮಿತಿ ಮತ್ತು ಪ್ರಾದೇಶಿಕ ಶೈಲಿ ಎಷ್ಟು ಒಗ್ಗಿಕೊಳ್ಳುತ್ತದೆ ಎಂಬ ಪ್ರಶ್ನೆಯಿದೆ. ಇನ್ನು, ಸಿದ್ದರಾಮಯ್ಯನವರು ದಿಲ್ಲಿಗೆ ತೆರಳಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ನ ಒಳರಾಜಕಾರಣ ಮತ್ತು 'ಅಹಿಂದ' ಮತಬ್ಯಾಂಕ್ ಚದುರಿಹೋಗುವ ಆತಂಕ ಹೈಕಮಾಂಡ್ಗೆ ಸಹಜವಾಗಿಯೇ ಇರಲಿದೆ.
ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರನ್ನು ದಿಲ್ಲಿಯ ಅಧಿಕಾರ ರಾಜಕಾರಣಕ್ಕೆ ತರುತ್ತಾರೋ ಇಲ್ಲವೋ, ಆದರೆ ರಾಷ್ಟ್ರೀಯ ವೈಚಾರಿಕ ರಾಜಕಾರಣದ ಮುಂಚೂಣಿಗೆ ತರುವ ಕೆಲಸವನ್ನು ಮಾಡಲೇಬೇಕಿದೆ. ಬಹುಶಃ ಅದನ್ನು ರಾಹುಲ್ ಮುಂದಿನ ದಿನಗಳಲ್ಲಿ ಮಾಡಬಹುದು ಎನ್ನುವ ನಿರೀಕ್ಷೆ ಅನೇಕ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.
ಒಟ್ಟಿನಲ್ಲಿ, ಇತಿಹಾಸದಲ್ಲಿ ಜನಪ್ರಿಯ ನಾಯಕರು ಅಧಿಕಾರ ಕಳೆದುಕೊಂಡಾಗ ಮತ್ತಷ್ಟು ಶಕ್ತಿಶಾಲಿಯಾಗಿದ್ದಾರೆ. ಸಿದ್ದರಾಮಯ್ಯನವರ ವರ್ಚಸ್ಸು ಕೇವಲ 'ಮುಖ್ಯಮಂತ್ರಿ' ಎಂಬ ಹುದ್ದೆಗೆ ಸೀಮಿತವಾಗಿರಲಿಲ್ಲ. ಅದು ಅಹಿಂದ ಪರವಾದ ಆಲೋಚನೆಗೆ ಸಿಕ್ಕ ಗೌರವವಾಗಿತ್ತು. ಹಾಗಾಗಿ, ಅಧಿಕಾರದಿಂದ ಹೊರಬಂದ ನಂತರ ಅವರು ಜನಪರ ಚಳವಳಿಗಳ ಭಾಗವಾಗಿ ಉಳಿದರೆ/ಕಾಂಗ್ರೆಸ್ ಉಳಿಸುವಂತೆ ಮಾಡಿದರೆ ಅವರ ವರ್ಚಸ್ಸು ಕುಗ್ಗುವ ಬದಲು ಮತ್ತಷ್ಟು ಪ್ರಖರವಾಗುತ್ತದೆ. ಬಲಪಂಥೀಯ ವಿರೋಧಿ ರಾಜಕಾರಣಕ್ಕೆ ಇದುವೇ ದೊಡ್ಡ ಶಕ್ತಿಯಾಗಬಲ್ಲದು ಎನ್ನುವುದರಲ್ಲಿ ಅನುಮಾನವೇ ಇಲ್ಲ.
-ಶ್ರೀರಾಜ್ ವಕ್ವಾಡಿ













