Wednesday, February 22, 2023

ನೈತಿಕ ಸೈಬರ್ ಟೂಲ್ ಗಿರಿಯಲ್ಲಿ ಕೇಂದ್ರ ಸರ್ಕಾರ ಭಾಗಿ !?!


 (ಸಾಂದರ್ಭಿಕ ಚಿತ್ರ)

ಸುಳ್ಸುದ್ದಿಗಳನ್ನು ಹಬ್ಬುವ ಟೀಮ್ ಜಾರ್ಜ್ ಜತೆಗೆ ಕೇಂದ್ರ ಸರ್ಕಾರಕ್ಕೆ ಸಂಬಂಧ..? 

ಕೇಂದ್ರ ಸರ್ಕಾರದ ವಿರುದ್ಧ ಇಸ್ರೇಲ್ ಮೂಲದ ಪೆಗಾಸಸ್ ಬೇಹುಗಾರಿಕೆ ಉಪಕರಣಗಳನ್ನು ಬಳಸಿದ ಆರೋಪ ಮಾಡಿದ ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಈಗ ಮತ್ತೊಂದು ತನಿಖಾ ವರದಿಯೊಂದನ್ನು ಹೊರಗೆ ಹಾಕಿದ್ದು, ಇಸ್ರೇಲ್ ನ ಮಿಲಿಟರಿ ಏಜೆನ್ಸಿಗಳ ತಂಡ ಟೀಮ್ ಜಾರ್ಜ್ ಅಮೆರಿಕಾ, ಬ್ರಿಟನ್, ಕೆನಡಾ, ಜರ್ಮನಿ, ಸ್ವಿಜರ್ ಲ್ಯಾಂಡ್, ಮೆಕ್ಸಿಕೋ, ಸೆನೆಗಲ್ ಸೇರಿ ಭಾರತ ಹಾಗೂ ಯುಎಇಗಳಲ್ಲಿ ನಕಲಿ ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರಾಂದೋಲನಗಳಲ್ಲಿ ಭಾಗಿಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಮಾತ್ರವಲ್ಲದೇ ಜಗತ್ತಿನ ಸುಮಾರು ಮೂವತ್ತು ದೇಶಗಳಲ್ಲಿ ಚುನಾವಣಾ ಫಲಿತಾಂಶವನ್ನೇ ತಿರುಚುವಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಿದೆ ಎಂಬ ವಿಷಯ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆತಂಕಕ್ಕೆ ಒಳಪಡಿಸಿದೆ. 

ಚುನಾವಣೆಯನ್ನೇ ತಿರುಚುವಷ್ಟರ ಮಟ್ಟಿಗೆ ಫೆಸ್ ಬುಕ್ ಆದಿಯಾಗಿ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದ ನಕಲಿ ಸುದ್ಧಿಗಳನ್ನು ಪಾಪ್-ಅಪ್ ಮಾಡುವುದರ ಮೂಲಕ ಅದನ್ನೇ ಬಳಕೆದಾರ ನಂಬುವಂತೆ ಮಾಡಿ, ಸಾಮಾಜಿಕ ಬುದ್ದಿಯನ್ನು ನಿಷ್ಕ್ರಿಯಗೊಳಿಸುವ ಹಾಗೂ ಹಾದಿ ತಪ್ಪಿಸುವ ಸಾಲು ಸಾಲು ಸುಳ್ಳು ಮಾಹಿತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿ ಪ್ರತಿಪಕ್ಷಗಳ ವಿರುದ್ಧ ವಿರೋಧಾಭಿಪ್ರಾಯವನ್ನು ಹುಟ್ಟಿಸುವುದು ಈ ಏಜೆನ್ಸಿಗಳ ಕಾರ್ಯ ವೈಖರಿ. ಈ ಟೀಂ ಜಾರ್ಜ್ ಎಂಬ ಬೇಹುಗಾರಿಕೆ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಇಸ್ರೇಲ್ ನ ತಾಲ್ ಹನಾನ್ ಎಂಬ ೫೦ ವರ್ಷದ ಮಾಜಿ ಮಿಲಿಟರಿ ಅಧಿಕಾರಿ. ಜಾರ್ಜ್ ಎಂಬ ಸುಳ್ಳು ಹೆಸರಿನೊಂದಿಗೆ ಆತ ಈ ಬೇಹುಗಾರಿಕೆ ಕೆಲಸ ಮಾಡುತ್ತಾನೆ. ಇನ್ನು, ಈ ಜಾಗತಿಕ ಮಟ್ಟದಲ್ಲಿ ಹೊರಗೆ ಬಿದ್ದ ಆಘಾತಕಾರಿ ವರದಿಯೊಂದನ್ನು ಮುಂದಿಟ್ಟುಕೊಂಡು ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ಕಾಂಗ್ರೆಸ್ ಆರೋಪ ಮಾಡಿದ್ದು, ಇಂತಹ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತೀರಾ ಹಗುರವಾಗಿ ಅಲ್ಲಗಳೆಯುವಂತಿಲ್ಲ. ಕಳೆದೆರಡು ವರ್ಷಗಳ ಹಿಂದೆ ಇದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೋನ್ ಕದ್ದಾಲಿಕೆಯ ಪೆಗಾಸಸ್ ಸೈಬರ್ ಟೂಲ್ ನನ್ನು ವಿರೋಧ ಪಕ್ಷದ ಪ್ರಮುಖ ಪ್ರಭಾವಿ ನಾಯಕರನ್ನೂ ಒಳಗೊಂಡು, ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು, ಪತ್ರಕರ್ತರ ಮೇಲೆ ಪ್ರಯೋಗಿಸಿದ್ದು ಈ ದೇಶ ಕಂಡಿದೆ. ಅಷ್ಟಾಗಿಯೂ ಮೋದಿ ಇಸ್ರೇಲ್ ಸರ್ಕಾರದೊಂದಿಗೆ ಕೆಲವು ವರ್ಷಗಳಿಂದ ರಾಜತಾಂತ್ರಿಕ ಕಾರ್ಯತಂತ್ರಗಳಲ್ಲಿಯೂ ಒಳ್ಳೆಯ ಸಂಬಂಧ ಹೊಂದಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಕೂಡ ಇಲ್ಲಿ ಉಲ್ಲೇಖಾರ್ಹ. 

ಟೀಮ್ ಜಾರ್ಜ್ ನೀಡುವ ಸೇವೆಗಳು ಹೇಗಿವೆ ? :  ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಹಾರೆಟ್ಸ್ ನ್ಯೂಸ್ ವರದಿಯ ಪ್ರಕಾರ, ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗೆ ನೀಡುವ ಸೇವೆಗಳನ್ನು ಗಮನಿಸಿದರೇ ಆಶ್ಚರ್ಯವಾಗುತ್ತದೆ. ಮೆಸೆಜಿಂಗ್ ಅಪ್ಲಿಕೇಶನ್ ಗಳನ್ನು, ಈಮೇಲ್ ಖಾತೆಗಳನ್ನು ಹ್ಯಾಕ್ ಮಾಡುವುದು, ಕಾಂಪ್ರಮೈಸ್ಡ್ ಅಕೌಂಟ್ ಗಳಲ್ಲಿ ಮೆಟಿರಿಯಲ್ ಗಳನ್ನು ಪ್ಲ್ಯಾಂಟ್ ಮಾಡುವುದು, ಮಾಹಿತಿಗಳನ್ನು ಗೂಢಚರ್ಯೆಯ ಮೂಲಕ ಹ್ಯಾಕ್ ಮಾಡಿ ಸುಳ್ಳು ಮಾಹಿತಿಗಳನ್ನು ಲೀಕ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ಗಳನ್ನು ಮ್ಯಾನುಪಲೇಟ್ ಮಾಡುವುದು, ಮತದಾರರನ್ನು ನಿಗ್ರಹಿಸುವುದು ಹಾಗೂ ಚುನಾವಣೆಗೆ ಅಡ್ಡಿ ಮಾಡುವುದು ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗಾಗಿ ಮಾಡುತ್ತದೆ ಎಂದರೇ ನೀವು ನಂಬಲೇ ಬೇಕು. ಈ ಎಲ್ಲಾ ಟೂಲ್ ಗಳು ರಾಜಕೀಯ ಪ್ರತಿರೋಧವನ್ನು ಅಡ್ಡಿಪಡಿಸುವುದು ಅಥವಾ ರಾಜಕೀಯ ವೈರಿಯನ್ನು ಸೋಲಿಸಲು ಬಳಸುವ ಸಾಧನಗಳು.  

ಜಗತ್ತಿನ ಸುಮಾರು ೩೩ ದೇಶ ಮಟ್ಟದ ಚುನಾವಣೆಗಳಲ್ಲಿ ಮಧ್ಯಪ್ರವೇಶಿಸಿದ ಟೀಮ್ ಜಾರ್ಜ್ ರಾಜಕೀಯ ಕುತಂತ್ರದ ಪರವಾಗಿ ಕೆಲಸ ಮಾಡಿದೆ. ಅವುಗಳಲ್ಲಿ ಸುಮಾರು ೨೭ ಚುನಾವಣೆಗಳಲ್ಲಿ ಟೀಮ್ ಯಶಸ್ವಿಯಾಗಿದೆ ಎಂದು  ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ತನ್ನ ತನಿಖಾ ವರದಿಯಲ್ಲಿ ಹೇಳಿದೆ. ಮಾತ್ರವಲ್ಲದೇ, ತನ್ನ ಗ್ರಾಹಕರನ್ನು ಮೆಚ್ಚಿಸುವುದಕ್ಕೆ ಬೇಕಾಗಿ ಕೀನ್ಯಾ ಹಾಗೂ ಮೊಜಾಂಬಿಕ್ ನಲ್ಲಿನ ಕ್ಯಾಬಿನೇಟ್ ಮಿನಿಸ್ಟರ್ ಗಳ ಜೀಮೇಲ್ ಖಾತೆಗಳು, ಟೆಲಿಗ್ರಾಂ ಖಾತೆಗಳ ಸಂವಹನಗಳನ್ನು ಹ್ಯಾಕ್ ಮಾಡಿರುವ ಹಾಗೂ ಆಫ್ರಿಕನ್ ಮೂಲದ ಪ್ರಭಾವಿ ವ್ಯಕ್ತಿಯೊಬ್ಬರ ಪತ್ರವ್ಯವಹಾರಗಳನ್ನು ಹ್ಯಾಕ್ ಮಾಡಿರುವ ವಿಚಾರವನ್ನು ಒಳಗೊಂಡು ಹಲವು ವಿಚಾರಗಳು ತನ್ನ ಗ್ರಾಹಕರಿಗೆ ಹೇಳಿರುವುದು ಕೂಡ ವರದಿಯಲ್ಲಿ ಬಹಿರಂಗಗೊಳಿಸಲಾಗಿದೆ.  

ಜಗತ್ತು ಬೆಚ್ಚಿ ಬೀಳಿಸುವ ಸೈಬರ್ ಅಟ್ಯಾಕ್ ಗಳಲ್ಲಿ ಭಾಗಿ : ಹೌದು, ೨೦೧೪ರ ಕ್ಯಾಟಲಾನ್ ಸ್ವಾತಂತ್ರ್ಯದ ಕುರಿತಾದ ಜನಾಭಿಪ್ರಾಯವನ್ನು ಹಾಳುಗೆಡವಲು ಉದ್ದೇಶಿಸಿರುವ ಕುಖ್ಯಾತ ಸೈಬರ್ ಅಟ್ಯಾಕ್ ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಇದೇ ಟೀಮ್ ಜಾರ್ಜ್ ಸಂಸ್ಥೆ. ಲೈಂಗಿಕ ಅಪರಾಧದ ವಿಚಾರಕ್ಕೆ ಸಂಬಂಧಸಿದಂತೆ ಕೆನಡಾದ ಫ್ಯಾಶನ್ ಕ್ಷೇತ್ರದ ಉದ್ಯಮಿ ಪೀಟರ್ ನೈಗಾರ್ಡ್ ಅವರನ್ನು ಬಂಧಿಸುವಲ್ಲಿ ಕಾರ್ಯತಂತ್ರ ಮಾಡಿದ್ದಕ್ಕಾಗಿ ಗ್ರಾಹಕರು ಸಂಸ್ಥೆಗೆ ನೀಡಿದ ಮೊತ್ತದ ಬಗ್ಗೆ ಸಂಸ್ಥೆ ಹೆಮ್ಮೆ ಪಟ್ಟುಕೊಳ್ಳುತ್ತದೆ. ೨೦೧೫ರಲ್ಲಿ ನೈಜೀರಿಯಾದ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷದ ಫೋನ್ ಕರೆಗಳ ಕದ್ದಾಲಿಕೆ ಮಾಡಿ ಚುನಾವಣಾ ಪ್ರಚಾರಕ್ಕೆ ಅಲ್ಲಿನ ಆಡಳಿತ ಪಕ್ಷದ ಪರವಾಗಿ ಕಾರ್ಯತಂತ್ರ ಹೆಣೆದಿದ್ದು, ಕುಖ್ಯಾತ ಯುಕೆ ಪಾಲಿಟಿಕಲ್ ಕನ್ಸಲ್ಟಿಂಗ್ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕ್ ನೊಂದಿಗೆ ಕೆಲಸ ಮಾಡಿದ್ದು ತನಿಖೆಯಲ್ಲಿ ಹೊರಬಂತು. ೨೦೧೯ರ ಇಂಡೋನೇಷ್ಯಾದ ಕೇಂದ್ರ ಚುನಾವಣಾ ಸಮಿತಿಯ ವಿರುದ್ಧ ಸೈಬರ್ ಅಟ್ಯಾಕ್, ೨೦೨೨ರ ಕೀನ್ಯಾ ಚುನಾವಣೆಯಲ್ಲಿ ಪ್ರಭಾವಿ ಐವರು ರಾಜಕೀಯ ಮುಖಂಡರ ಖಾತೆಗಳನ್ನು ಹ್ಯಾಕ್ ಮಾಡಿ, ಚುನಾವಣಾ ಫಲಿತಾಂಶವನ್ನೇ ತಿರುಚಿದ್ದು, ಹೀಗೆ ಒಂದಲ್ಲ ಎರಡಲ್ಲ ೩೩ ದೇಶಗಳ ಹಲವು ರಾಜಕೀಯ ಅಭಿಯಾನಗಳಲ್ಲಿ ಈ ಸಂಸ್ಥೆ ತನ್ನ ಗೂಢಚರ್ಯೆಯನ್ನು ನಡೆಸಿದೆ. ಕ್ಲೈಂಟ್ ನ ಟಾರ್ಗೇಟ್ ವ್ಯಕ್ತಿಯ ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಅಟ್ಯಾಕ್ ಮಾಡುವುದರ ಮೂಲಕ ಈಮೇಲ್, ಡಾಕ್ಯುಮೆಂಟ್ ಗಳನ್ನು ಸೋರಿಕೆ ಮಾಡುವುದನ್ನು ಒಳಗೊಂಡಿರುವ ಹ್ಯಾಕ್ & ಲೀಕ್ ಕಾರ್ಯಾಚರಣೆಯಿಂದ ರಾಜಕೀಯ ವರ್ಚಸ್ಸನ್ನೇ ಹಾಳುಗೆಡುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ಇಲ್ಲಿ ಗಮನಾರ್ಹ.  

ಆರ್ಮಿ ಆಫ್ ಅವತಾರ್ : ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗಳಿಗೆ ನೀಡುವ ಸೇವೆಗಳಲ್ಲಿ ಪ್ರಮುಖವಾದದ್ದಿದು.  ತನ್ನ ಗ್ರಾಹಕರು ಹಿಂದೆಂದೂ ನೋಡಿರದ ತಂತ್ರಾಂಶದ ಪ್ರಸ್ತುತಿಯನ್ನು ಈ ಸೇವೆಯ ಮೂಲಕ ನೀಡುತ್ತದೆ. ಈ ಟೂಲ್ ನ ಮೂಲಕ ನಕಲಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ರಚಿಸಿ ಸುಳ್ಳು ವದಂತಿಗಳನ್ನು ಹಬ್ಬಿಸುವುದಲ್ಲದೇ, ವಿರೋಧಿಗಳ ಮಾನನಷ್ಟ ಮತ್ತು ಕ್ಲೈಂಟ್ ನ ಪರ ಪ್ರಚಾರ, ಗ್ರಾಹಕ ಏನು ಕೇಳುತ್ತಾನೋ  ಆ ಸೇವೆಯನ್ನು ಟೀಮ್ ಜಾರ್ಜ್ ಈ ಮೂಲಕ ಮಾಡಿಕೊಡುತ್ತದೆ. 

ಆಕ್ಟಿವ್ ಇಂಟೆಲಿಜೆನ್ಸ್ ಹೇಗೆ ಕೆಲಸ ಮಾಡುತ್ತದೆ ? : ಹ್ಯಾಕ್ ಮಾಡಲಾದ ಖಾತೆಯ ,ಮೂಲಕ ಸಂದೇಶಗಳನ್ನು ಕಳುಹಿಸುವುದರ ಮೂಲಕ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಜಿಮೇಲ್ ಖಾತೆಯ ಹ್ಯಾಕಿಂಗ್ ಲೋಕಲ್ ಸೆಲ್ಯುಲರ್ ಪ್ರೋವೈಡರ್ ನ ಸಹಕಾರದಿಂದ ಹಾಗೂ ಒಂದು ಸಣ್ಣ ಡಿವೈಸ್ ನನ್ನು ಇನ್ಸ್ಟಾಲ್ ಮಾಡುವುದರ ಮೂಲಕ ಟಾರ್ಗೇಟ್ ಖಾತೆಯನ್ನು ತಲುಪಲಾಗುತ್ತದೆ. ಗೂಗಲ್ ಸೇರಿದಂತೆ ಅನೇಕ ಆನ್ ಲೈನ್ ಸರ್ವರ್ ಗಳ ಪಾಸ್ ವರ್ಡ್ ಬದಲಾಯಿಸುವ ವಿಧಾನವು ಐಡೆಂಟಿಟಿ ವೆರಿಫಿಕೇಶನ್  ಟೆಕ್ಸ್ಟ್ ಮೆಸೇಜ್ ಮೂಲಕ ಕಳುಹಿಸುವುದರ ಮೂಲಕ ಮಾಡಲಾಗುತ್ತದೆ. ಆ ಮೆಸೇಜ್ ಗಳನ್ನು ಹೈಜಾಕ್ ಮಾಡುವುದರ ಮೂಲಕ ಹ್ಯಾಕರ್ ಗಳಿಗೆ ಟಾರ್ಗೇಟಡ್ ಖಾತೆಗಳಿಗೆ ಒಳ ನುಸುಲು ಅನುವು ಮಾಡಿಕೊಡುತ್ತದೆ.

ಇನ್ನು, ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಐಟಿ ಘಟಕಗಳ ಸಂಪರ್ಕದೊಂದಿಗೆ ಕಾರ್ಯ ನಿರ್ವಹಿಸುವ ಇಂತಹ ಬೇಹುಗಾರಿಕಾ ಸಂಸ್ಥೆಗಳು , ರಾಜಕೀಯ ಪ್ರೊಪಗಂಡಾಗಳನ್ನು ಮೆರೆಸುತ್ತದೆ. ಸುಳ್ಳನ್ನು ವೈಭವೀಕರಿಸಿ ಸತ್ಯವನ್ನು ಪಾತಾಳಕ್ಕೆ ನೂಕುತ್ತವೆ.  ರಾಜಕೀಯದ ಧ್ರುವೀಕರಣದ ವಿಷಯಗಳು ದೇಶದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸ್ಥಿತಿಗಳನ್ನು ಹದಗೆಡಿಸುತ್ತವೆ.

ಪೆಗಾಸಸ್ ಗೂಢಚರ್ಯಕ್ಕೆ ಛೀಮಾರಿ ಹಾಕಿತ್ತು ಸುಪ್ರೀಂ : ೨೦೨೧ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಬೆಂಬಿಡದೆ ಕಾಡಿದ ಸಮಸ್ಯೆಗಳಲ್ಲಿ ಪೆಗಾಸಸ್ ಕೂಡ ಒಂದು. ದೇಶದ ಪ್ರಮುಖ ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು, ನ್ಯಾಯಾಧೀಶರು ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಯ ದೂರವಾಣಿ ಕದ್ದಾಲಿಕೆಯ ಮೂಲಕ ಬೇಹುಗಾರಿಕೆ ನಡೆಸಿತ್ತು ಎಂಬ ಆರೋಪ ಕೇಂದ್ರ ಸರ್ಕಾರದ ಮೇಲೆ ಕೇಳಿ ಬಂದಿತ್ತು. ಸರ್ಕಾರೇತರ ಸಂಸ್ಥೆಗಳಿಗೆ ಪೆಗಾಸಸ್ ಸ್ಪೈವೇರ್ ಮಾರಾಟಕ್ಕೆ ಇಸ್ರೇಲ್ ಸರ್ಕಾರದ ಅನುಮತಿ ಇಲ್ಲ. ಇನ್ನು, ಸರ್ಕಾರದ ಅನುಮತಿ ಇಲ್ಲದೇ ಈ ಸ್ಪೈವೇರ್ ನನ್ನು ರಫ್ತು ಮಾಡುವುದಿಲ್ಲ. ಎನ್ನುವಲ್ಲಿಗೆ ಸರ್ಕಾರದ ಅನಮತಿಯ ಮೇಲೆಯೇ ಪೆಗಾಸಸ್ ಪ್ರಯೋಗ ಮಾಡಲಾಗಿತ್ತು ಎನ್ನುವುದು ಸ್ಪಷ್ಟ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗಿತ್ತು. ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಗೂಢಚರ್ಯೆಯಂತಹ ಬೇಹುಗಾರಿಕೆ ಮಾಡುವುದಕ್ಕೆ ಅವಕಾಶವಿಲ್ಲ. ವೈಯಕ್ತಿಕ ಗೌಪ್ಯತೆಯನ್ನು ಉಲ್ಲಂಘಿಸಿ ಒಬ್ಬ ವ್ಯಕ್ತಿಯ ಮೇಲೆ ಗೂಢಚರ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ. ಭದ್ರತೆಯ ನೆಪ ಹೇಳಿ ಸರ್ಕಾರ ಸುಮ್ಮನೆ ಕೂರುವುದಕ್ಕೆ ಸಾಧ್ಯವಿಲ್ಲ. ಎಂದು ಸರ್ಕಾರದ ವಿರುದ್ಧ  ಸುಪ್ರೀಂ ಕೋರ್ಟ್ (ಅಂದು ಎನ್. ವಿ ರಮಣ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು) ಛೀಮಾರಿ ಹಾಕಿದ್ದನ್ನು ಈ ದೇಶ ಕಂಡಿತ್ತು. ತನಿಖೆಗಾಗಿ ತಜ್ಞರ ಸಮಿತಿಯನ್ನೂ ರಚಿಸಲಾಗಿತ್ತು. ಆದರೇ, ಕಳೆದ ಆಗಸ್ಟ್ ೨೫ ೨೦೨೨ರಲ್ಲಿ ತನಿಖಾ ಸಮಿತಿ ನೀಡಿದ ವರಿದಿಯ ಅನ್ವಯ, ೨೯ ಫೋನ್ ಗಳನ್ನು ಪರಿಶೀಲಿಸಲಾಗಿದೆ ಮತ್ತು ಐದರಲ್ಲಿ ಒಂದರಲ್ಲಿ ಮಾಲ್ವೇರ್ ಕಂಡುಬಂದಿರುವುದು ಹೊರತಾಗಿ ಕೇಂದ್ರ ಸರ್ಕಾರ ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ಮಾಡಿದೆ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂಬ ತನಿಖಾ ತೀರ್ಪು ನೀಡಿತ್ತು.  

ಈಗ ವಿದೇಶಿ ಮಿಲಿಟರಿ ಏಜನ್ಸಿಗಳಿಂದ ನರೇಂದ್ರ  ಪ್ರಧಾನಿ ಮೋದಿ ಚುನಾವಣೆಗಳ ಮೇಲೆ ಪ್ರಭಾವ ಬೀರಿ ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಮತ್ತೆ ಕೇಂದ್ರ ಸರ್ಕಾರ  ನೈತಿಕ ಸೈಬರ್ ಟೂಲ್ ಗಿರಿಯಲ್ಲಿ ಭಾಗಿಯಾಗಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಇನ್ನು, ಎಂದಿನಂತೆ ಕೇಂದ್ರ ಬಿಜೆಪಿ ಸರ್ಕಾರ ಮೌನವಹಿಸಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕು. 

-ಶ್ರೀರಾಜ್ ವಕ್ವಾಡಿ 


Wednesday, February 15, 2023

ಸಿಟ್ಟಿಗೆ ತುಪ್ಪ ಸುರಿದು ಕೋಪಾಗ್ನಿ ಜ್ವಲಿಸಿಕೊಂಡಿದ್ರು ಬಿ ಎಸ್ ವೈ !


 ಚುನಾವಣಾ ಕಣದಿಂದ ದೂರಕ್ಕುಳಿಯುವ ಯಡಿಯೂರಪ್ಪ ಮತ್ತು ಬಿಜೆಪಿ !

ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು, ಆರ್ ಎಸ್ ಎಸ್ ನ ನಿಜ ಶಿಸ್ತು ಅವರಲ್ಲಿದೆ. ರಾಜ್ಯ ಬಿಜೆಪಿಯ ಪಾಲಿಗೆ ಜೀವ ತುಂಬಿಸಿದ ನಾಯಕ. ಸಿಟ್ಟು, ಅವಸರದ ನಿರ್ಧಾರ, ಏಕ್ ದಿನ್ ಕಾ ಮುಖ್ಯಮಂತ್ರಿ, ಭ್ರಷ್ಟಾಚಾರದ ಮೇಲೆ ಸೆರೆಮನೆ ವಾಸ ಹೊರತು ಪಡಿಸಿದರೇ, ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಮಹತ್ತರ ಪಾತ್ರ. ಸದ್ಯದ ರಾಜಕಾರಣಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಹಿರಿಯ ಹಾಗೂ ಅನುಭವಿ ರಾಜಕಾರಣಿ. ಸುಮಾರು ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಅನುಭವವಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಇದೇ ಮೊಟ್ಟಮೊದಲ ಬಾರಿಗೆ  ಚುನಾವಣಾ ಕಣಕ್ಕೆ ಇಳಿಯದಿರುವ ನಿರ್ಧಾರ ಮಾಡಿದ್ದಾರೆ. 

ಕಳೆದ ಎರಡು ವರ್ಷಗಳ ಹಿಂದೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಬಿಜೆಪಿ ಹೈಕಮಾಂಡ್ ಸೃಷ್ಟಿಸಿದ ರಾಜಕೀಯ ಹೈಡ್ರಾಮ ದೇಶದ ರಾಜಕಾರಣವನ್ನೇ ಕರ್ನಾಟಕ ರಾಜಕಾರಣದತ್ತ ತಿರುಗಿ ನೋಡುವಂತೆ ಮಾಡಿತ್ತು. ಅದಾದ ಮೇಲೆ ನಡೆದ ಬಿಜೆಪಿಯ ಸಾಲು ಸಾಲು ಬೃಹನ್ನಾಟಕವನ್ನು ಈ ರಾಜ್ಯದ ಜನ ಕಂಡು ಕಣ್ತುಂಬಿಸಿಕೊಂಡಿದ್ದಾರೆ.  ಯಡಿಯೂರಪ್ಪ ತುಂಬಾ ಭಾವುಕರಾಗಿಯೇ ಪದತ್ಯಾಗ ಮಾಡಿದರು. ಕರ್ನಾಟಕ ಬಿಜೆಪಿಯ ದೆಸೆ ಬದಲಾಯಿಸಿದ ಒಬ್ಬ ರಾಜಕಾರಣಿಯ ರಾಜಕೀಯ ಬದುಕಿನಲ್ಲಿ ಎಂದೂ, ಯಾರೂ ಊಹಿಸಿರದಂತೆ ನಡೆದ ಘಟನೆಯದು. ಯಡಿಯೂರಪ್ಪ  ರಾಜಕೀಯದ ಜೀವನದಲ್ಲಿ ಅಂತದ್ದೊಂದು ದಿನ ಎದುರಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ಆ ಒಂದು ಬೆಳವಣಿಗೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆಗೆ ಸಾಕ್ಷಿಯಾಯಿತು. 

ಮಂಡ್ಯ ಜಿಲ್ಲೆಯ ಬೂಕನಕೆರೆಯಿಂದ ಮಲೆನಾಡಿನ ಶಿಕಾರಿಪುರಕ್ಕೆ ಆರ್ಎಸ್ಎಸ್ ಭದ್ರ ಪಡಿಸಬೇಕು ಎಂಬ ಮಹದಾಸೆಯಿಂದ ಬಂದ ಯಡಿಯೂರಪ್ಪರ ನಡೆ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆ ತರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಯಡಿಯೂರಪ್ಪ ಬೂಕನಕೆರೆಯಿಂದ ಶಿಕಾರಿಪುರಕ್ಕೆ ಪಡೆದ ಪ್ರವೇಶ ರಾಜಕಾರಣಕ್ಕೆ ಮಹತ್ವದ ಬಾಗಿಲು ತೆರೆದುಕೊಟ್ಟಿತ್ತು. ಯಡಿಯೂರಪ್ಪ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕೆ ಮಲೆನಾಡು ಸೀಮೆ ಶಿಕಾರಿಪುರ ಮಹತ್ವದ ಬೆಂಬಲ ನೀಡಿತ್ತು ಎನ್ನುವುದು ಉಲ್ಲೇಖಾರ್ಹ. ಇಂತಹ ಒಬ್ಬ ರಾಜಕಾರಣಿ ಈಗ ಚುನಾವಣೆಯಿಂದ ದೂರ ಉಳಿಯುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕಳೆದ ವರ್ಷ ಶೀಕಾರಿಪುರದಿಂದ ನಾನು ಸ್ಪರ್ಧಿಸುವುದಿಲ್ಲ, ನನ್ನ ಮಗನಿಗೆ ಬೆಂಬಲಿಸಿ ಎಂದು ಕೇಳಿಕೊಂಡ ಯಡಿಯೂರಪ್ಪರ ಘೋಷಣೆ ರಾಜಕೀಐ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು. 

ಶಾಕ್ ಮೇಲೆ ಶಾಕ್ ಕೊಟ್ಟ ಬಿ ಎಸ್ ವೈ : ಸೇರೆಮನೆ ಪೂರೈಸಿ ಬಂದಾಗ ಸ್ವಪಕ್ಷದ ವರ್ತನೆ ಬಿಎಸ್ ವೈ ಶಾಕ್ ಆಗಿತ್ತು, ಮಾತ್ರವಲ್ಲದೇ, ಸಿಟ್ಟು, ಸೆಡವು, ಕೋಪ, ತಾಪ, ದ್ವೇಷ, ಅಸೂಯೆಗಳಿಗೆ ತುಪ್ಪ ಸುರಿದು ಪ್ರಜ್ವಲಿಸಿಕೊಂಡಂತಾಗಿತ್ತು.  ಸ್ವಲ್ಪ ಹಿಂದಕ್ಕೆ ಹೋಗಿ ಗಮನಿಸೋಣ,  ೨೦೧೧ರ ಜುಲೈ ತಿಂಗಳ ೩೧ನೇ ತಾರೀಕನ್ನು ನೆನಪಿಸಿಕೊಳ್ಳಬೇಕು (ಭ್ರಷ್ಟಾಚಾರದ ಆರೋಪದ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ), ೨೦೧೨ರ ಜನವರಿ ೩೧ನೇ ತಾರೀಕನ್ನು ಈ ರಾಜ್ಯ ನೆನಪಿಸಿಕೊಳ್ಳಬೇಕು (ಸ್ವಪಕ್ಷದಿಂದಲೇ ಅವಮಾನ, ಶಾಸಕ ಸ್ಥಾನ, ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ), ೨೦೧೨ರ ಡಿಸೆಂಬರ್ ೯ನೇ ತಾರೀಕನ್ನು ನೆನಪಿಸಿಕೊಳ್ಳಬೇಕು (ಕೆಜೆಪಿ ಎಂಬ ನೂತನ ರಾಜಕೀಯ ಪಕ್ಷ ಸ್ಥಾಪನೆ) ೨೦೧೩ರ ವಿಧಾನ ಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಬೇಕು. ಕೆಜೆಪಿ ಪಕ್ಷದಿಂದ ಶಿಕಾರಿಪುರದಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪರ ನಡೆಯಿಂದ ೧೧೦ ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿ ಕೇವಲ ೪೦ಕ್ಕೆ ಕುಸಿಯುವಂತೆ ಆಯ್ತು. ಕೆಜೆಪಿ ಶೇ. ೧೦ರಷ್ಟು ಮತಗಳಿಸಿ ೮ ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಇದರ ಪರಿಣಾಮವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ೧೨೨ ಶಾಸಕರ ಬಹುಮತಗಳೊಂದಿಗೆ ರಾಜ್ಯದ ಅಧಿಕಾಋ ಹಿಡಿಯುವುದಕ್ಕೆ ಕಾರಣವಾಯಿತು.  ಪರೋಕ್ಷವಾಗಿ ಬಿಜೆಪಿ ಸೋಲಿಗೆ ಬಿ ಎಸ್ ವೈ ಕಾರಣರಾದರು,  ಯಡಿಯೂರಪ್ಪರಿಲ್ಲದ ಬಿಜೆಪಿ ತೀವ್ರ ಮುಖಭಂಗಕ್ಕೊಳಗಾಯ್ತು. ಇದು ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಕೊಟ್ಟ ಶಾಕ್, ಇದು ಅಂದಿನ ಬಿಜೆಪಿಯ ಹೈಕಮಾಂಡ್ಗೂ ತಾನು ಏನೆಂಬುವುದನ್ನು ತೋರಿಸಿಕೊಟ್ಟಿದ್ದೂ ಹೌದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದು ಯಡಿಯೂರಪ್ಪ ರಾಜ್ಯ ರಾಜಕಾರಣಲ್ಲಿ ಕೊಟ್ಟ ಶಾಕ್. ಬಿ ಎಸ್ ವೈ ಬಿಜೆಪಿ ಕಣದಲ್ಲಿಲ್ಲದ ಪರಿಣಾಮ ಬಿಜೆಪಿ ನೆಲ ಮುಕ್ಕಿದ್ದು ಈ ರಾಜ್ಯ ಕಂಡಿದೆ.  ಆಮೇಲೆ ೨೦೧೩ರ ನವೆಂಬರ್ ನಲ್ಲಿ ಕೆಜೆಪಿಯಿಂದ ಮತ್ತೆ ಮರಳಿ ಬಿಜೆಪಿಗೆ ಬಂದಿದ್ದು, ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನ ಆಡಿದ್ದೆಲ್ಲವೂ ರಾಜಕೀಯ ಭವಿಷ್ಯಕ್ಕೆ ಬಿಡಿ, ಅದು ಎರಡನೇ ಹಂತದ ಚರ್ಚೆ. ಆದರೇ, ಇದು ಕೂಡ ಒಂದು ರೀತಿಯಲ್ಲಿ ಶಾಕ್ ಆಗಿತ್ತು. 

ಎಲ್ಲವೂ ಮಗ ವಿಜಯೇಂದ್ರನಿಗೋಸ್ಕರ ..! : ಈಗ ರಾಜ್ಯ ವಿಧಾನಸಭಾ ಕಣದಲ್ಲಿ ಬಿಎಸ್ವೈ ಇಲ್ಲ. ಇದು ಕೂಡ ಬಿಜೆಪಿಗೆ ಶಾಕ್. ವಂಶರಾಜಕಾರಣವನ್ನು ಮುಕ್ತಿಗೊಳಿಸಬೇಕು ಎಂಬ ನಿಲುವು ಹೊಂದಿರುವ ಹೈಕಮಾಂಡ್, ತಮ್ಮ ಮಗ ವಿಜಯೇಂದ್ರ ಅವರಿಗೆ ಸ್ಥಾನಮಾನ ಕೊಡಿಸುವ ದೃಷ್ಟಿಯಲ್ಲಿ ಒತ್ತಡ ಹೇರಿದ್ದರು, ತಮ್ಮ  ಜಾತಿ ಸ್ವಾಮೀಜಿಗಳ ಬೆಂಬಲದಿಂದ ಲಿಂಗಾಯತ ಸಮುದಾಯಲ್ಲಿ ತಾನು ಬಿಟ್ಟರೇ, ಮತ್ಯಾರೂ ಲಿಂಗಾಯತ ಸಮಾಜದಲ್ಲಿ ʼಸಮುದಾಯದ ನಾಯಕʼ ಎಂದು ಗುರುತಿಸಿಕೊಂಡವರಿಲ್ಲ ಎಂದು ತೋರಿಸಿದ್ದು, ಲಿಂಗಾಯತ ಸಮುದಾಯವೇ ಇಲ್ಲಿ ನಿರ್ಣಾಯಕ ಎಂಬಂತೆ ತೋರಿಸಿದ್ದೆಲ್ಲವೂ ಹೈಕಮಾಂಡ್ಗೆ ಒಳಗಿಂದೊಳಗೆ ಸಿಟ್ಟಿತ್ತು. ಅದಕ್ಕಾಗಿಯೇ ಬಲವಂತವಾಗಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಎನ್ನುವ ಮಾತುಗಳ್ಯಾವುವು ಸುಳ್ಳಲ್ಲ. ಆದರೂ ಯಡಿಯೂರಪ್ಪ ಇರುವವರೆಗೆ ಬಿಜೆಪಿಗೆ ಯಡಿಯೂರಪ್ಪರೇ ಆಧಾರ. ಹಾಗಾಗಿಯೇ, ಬಿಜೆಪಿಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಆಯ್ಕೆ ಮಾಡಿದ್ದು, ಬಿಎಸ್ ವೈಗೆ ಮನಸಾರೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡಿರುವುದು ಮಗನ ರಾಜಕೀಯ ಭವಿಷ್ಯಕ್ಕಾಗಿ ಮತ್ತು ತನ್ನ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರಮಟ್ಟದ ರಾಜಕಾರಣದ ಒಂದು ಪುಟವಿರಲಿ ಎಂಬುವುದಕ್ಕೆ ಅಷ್ಟೇ ಹೊರತು, ಯಡಿಯೂಪ್ಪರಿಗೆ ರಾಷ್ಟ್ರ ರಾಜಕಾರಣದಲ್ಲಿ ಅಷ್ಟಾಗಿ ಹೋಲ್ಡ್ ಇಲ್ಲ ಎನ್ನುವುದು ಸ್ವತಃ ಅವರಿಗೂ ಗೊತ್ತಿದೆ. ಮತ್ತೆ ಹೈಕಮಾಂಡ್ ಗೆ  ಯಡಿಯೂರಪ್ಪ ಮಾಧ್ಯಮಗಳ ಮುಂದೆ, ವೇದಿಕೆ ಮೇಲೆ ವಿಧಯತೆ ತೋರಿಸುವುದೆಲ್ಲಾ ಬರೀ ನಾಟಕವಷ್ಟೇ. ಇನ್ನು, ಬಿಎಸ್ವೈ ಅವರ ಇತ್ತೀಚೆಗಿನ ಎಲ್ಲಾ ನಡೆಯೂ  ಮಗ ವಿಜಯೇಂದ್ರರಿಗಾಗಿಯೇ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ. 

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಮಗನಿಗೆ ಏನಾದರೂ ರಾಜ್ಯದಲ್ಲಿ ಏನಾದರೂ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು, ೨೦೧೮ರಲ್ಲಿ ವಿಜಯೇಂದ್ರರಿಗೆ ವರುಣಾ ಕ್ಷೇತ್ರದ ಟಿಕೇಟ್ ಕೊಡಿಸುವ ಪ್ರಯತ್ನ ಬಿಎಸ್ ವೈ ಮಾಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ಪ್ರಯತ್ನಿಸಿದ್ದರು. ಅದು ಯಾವುದೂ ಸಾಕಾರಗೊಳ್ಳಲಿಲ್ಲ. ವಿಧಾನ ಪರಿಷತ್ ಚುನಾವಣೆಗೆ ಅಂತಿಮ ಹಂತದವರೆಗೂ ಸಂಭಾವ್ಯರ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿತ್ತು, ಆದಾಗ್ಯೂ ಕೊನೆಗೆ ಎಲ್ಲವೂ ಬದಲಾಯಿತು. ಸ್ವತಃ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡ್ತೇನೆ ಎಂಬ ಶಾಕಿಂಗ್ ನ್ಯೂಸ್ ಕೊಟ್ಟರು. ಸದ್ಯ, ಬಿಎಸ್ ವೈ ತಲೆಯಲ್ಲಿರುವುದು ಮಗನಿಗೊಂದು ಗಟ್ಟಿ ಅಡಿಪಾಯ ಹಾಕಿಕೊಡುವ ಪ್ರಯತ್ನದಲ್ಲಿದ್ದಾರೆ. ಇದೆ ಅವರ ಪರಮ ಗುರಿಯೂ ಕೂಡ ಹೌದು ಎನ್ನುವುದರಲ್ಲಿ ಅನುಮಾನವಿಲ್ಲ. 

ಶಿಕಾರಿಪುರದಲ್ಲಿ ವಿಜಯೇಂದ್ರಗೆ ವರ್ಚಸ್ಸಿದೆಯೇ ? : ೧೯೮೩ ರಲ್ಲಿ ಶಿಕಾರಿಪುರ ವಿಧಾನಸಭೆ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ನಿರ್ಧರಿಸಿತು. ಆರ್ ಎಸ್ ಎಸ್ ಹೋರಾಟದಿಂದ ಬಂದ ಯಡಿಯೂರಪ್ಪ ಅವರನ್ನು ನಿಲ್ಲಿಸಲಾಯಿತು. ಆಗ ಶಿಕಾರಿಪುರದಿಂದ ಕಾಂಗ್ರೆಸ್ ನ ಪರವಾಗಿ ನಿಲ್ಲುತ್ತಿದ್ದ ಯಂಕಟಪ್ಪ ಸತತವಾಗಿ ಗೆಲ್ಲುತ್ತಿದ್ದರು. ಯಂಕಟಪ್ಪ ಎದುರು ಯಡಿಯೂರಪ್ಪ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದೇ ಆ ಸಂದರ್ಭದಲ್ಲಿ ಚರ್ಚೆ ಆಗಿತ್ತು. ಆದರೇ, ಫಲಿತಾಂಶ ಎಲ್ಲಾ ರಾಜಕೀಯ ಚರ್ಚೆಯನ್ನು ಸುಳ್ಳಾಗಿಸಿತ್ತು. ರಾಜ್ಯದ ಗಮನ ಕೂಡ ಶಿಕಾರಿಪುರದತ್ತ ಗಮನ ಸೆಳೆಯಿತು. ಅಲ್ಲಿಂದ ಸತತವಾಗಿ ಗೆಲ್ಲುತ್ತಲೇ ಬಂದರು, ಯಡಿಯೂರಪ್ಪರ ಜೈತ್ರಯಾತ್ರೆ ಪ್ರಾರಂಭ ಕೊನೆ ಕಾಣದಂತಾಗುತ್ತದೆ ಎಂದು ಯಾರೂ ಊಹಿಸಿಕೊಂಡಿರಲಿಲ್ಲ. ಅಲ್ಲಿಂದ ರಾಜಕೀಯಕ್ಕೆ ಪ್ರವೇಶ ಪಡೆದ ಬಿಎಸ್ವೈ ಒಂದು ಬಾರಿ ಸೋತಿದ್ದು ಬಿಟ್ಟರೇ ಮತ್ತೆಲ್ಲವೂ ಜಯ. ಅಲ್ಲಿಂದ ರಾಜ್ಯ ಬಿಜೆಪಿ ಮೊಳಕೆಯೊಡೆಯುವುದಕ್ಕೆ ಆರಂಭವಾಗಿದ್ದು, ನಿಧಾನಕ್ಕೆ ಬಿಜೆಪಿ ರಾಜ್ಯಾದ್ಯಂತ ವಿಸ್ತರಣೆ ಆಗುವುದಕ್ಕೆ ಮೂಲ ಕಾರಣವೇ ಯಡಿಯೂರಪ್ಪ. ಆದರೇ, ಅದೇ ಪಕ್ಷ ಯಡಿಯೂಪ್ಪರನ್ನು ರಾಜ್ಯ ರಾಜಕಾರಣದಿಂದ ದೂರ ಇರುವ ಹಾಗೆ ಮಾಡಿದೆ. ಈ ಬಾರಿ ಚುನಾವಣೆಯಲ್ಲಿಯೂ ಯಡಿಯೂರಪ್ಪ ಸ್ಪರ್ಧಿಸುತ್ತಿಲ್ಲ. ಮಗ ವಿಜಯೇಂದ್ರ ಶಿಕಾರಿಪುರದಿಂದ ಹೊರಗೆ ಇದ್ದಿದ್ದೇ ಹೆಚ್ಚು. ಗೆದ್ದರೇ, ತಂದೆ ಉಳಿಸಿಕೊಂಡ ವಿಶ್ವಾಸದ ಮೇಲೆ ಗೆಲ್ಲಬೇಕಷ್ಟೇ. ಇಲ್ಲವಾದ್ರೇ, ಕಾಂಗ್ರೆಸ್ ವಶ ಆಗಬಹುದು ಎಂದೇ ಹೇಳಲಾಗುತ್ತಿದೆ. ಕಳೆದ ಬಾರಿ ಸುಮಾರು ೩೫,೦೦೦ ಮತಗಳ ಅಂತರದಿಂದ ಸೋತ ಕಾಂಗ್ರೆಸ್ ಗೆ, ಈ ಬಾರಿ ಯಡಿಯೂರಪ್ಪ ಕಣದಿಂದ ಹೊರಗುಳಿದಿರುವುದು ಲಾಭದ ನಿರೀಕ್ಷೆಯಲ್ಲಿ ಇದೆ. ಗೆಲ್ಲುವುದಕ್ಕೆ ಸಾಧ್ಯವಾಗದಿದ್ದರೇ, ಯಡಿಯೂರಪ್ಪ ಸ್ಥಾನಕ್ಕೆ ಮಗನೇ ಬರುವುದಾದರೇ, ಕಾಂಗ್ರೆಸ್ ಒಂದಿಷ್ಟು ಬಿಜೆಪಿ ಮತ ಸೆಳೆದುಕೊಳ್ಳಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.  

ಇನ್ನು, ಯಡಿಯೂರಪ್ಪರಿಗೆ ಸಮನಾಧ ಸಮುದಾಯದ ನಾಯಕ ಬಿಜೆಪಿಯಲ್ಲಿಯೂ ಇಲ್ಲ, ಕಾಂಗ್ರೆಸ್ ನಲ್ಲಿಯೂ ಇಲ್ಲ. ಯಡಿಯೂರಪ್ಪ ಈಗ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಚುಕ್ಕಾಣಿ ಹಿಡಿಯುವಂತೆ ಶ್ರಮಿಸುತ್ತೇನೆ ಎಂದು ಹೇಳ್ತಿದ್ದಾರೆ. ಆದರೇ, ಇವೆಲ್ಲವೂ ಮಗ ವಿಜಯೇಂದ್ರರ ಭವಿಷ್ಯಕ್ಕಾಗಿ ಎನ್ನುವುದು ಯಡಿಯೂರಪ್ಪ ರಾಜಕೀಯ ನಡೆ ಸತ್ಯ.  ಯಡಿಯೂರಪ್ಪ ತನ್ನ ಸಮುದಾಯವನ್ನು ಯಾವ ಕ್ಷಣದಲ್ಲಿ ಬೇಕಾದರೂ ಯಾವ ಕಡಗೆ ಬೇಕಾದರೂ ತಿರುಗಿಸಬಲ್ಲರು. ಅಂತಹ ಹೋಲ್ಡ್ ಯಡಿಯೂರಪ್ಪ ಸಮುದಾಯದ ಮೇಲೆ ಇಟ್ಟುಕೊಂಡಿದ್ದಾರೆ. ಮಗನಿಗೆ ಅವಕಾಶ ಸಿಗದೇ ಇದ್ದರೇ ಮತ್ತೆ ಯಡಿಯೂರಪ್ಪರಲ್ಲಿನ ಕೋಪಾಗ್ನಿ ಮತ್ತೆ ಬುಗ್ಗೆ ಏಳುವುದು ಪದಶಃ ಸತ್ಯ. 

ಒಟ್ಟಿನಲ್ಲಿ, ರಾಜಕೀಯ ಪ್ರವೇಶ ಪಡೆದ ಮೇಲೆ ಇದೆ ಮೋಟ್ಟ ಮೊದಲ ಬಾರಿಗೆ ಚುನಾವಣಾ ಕಣದಿಂದ ಹೊರಗುಳಿದಿರುವುದು ಬಿಜೆಪಿಗೂ ಒಂದು ಸಂಕಟದ ಸ್ಥಿತಿ. ಪರೋಕ್ಷ ಬೆಂಬಲವಿದ್ದರೂ ಇದು ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುವುದು ಸದ್ಯದ ಕುತೂಹಲ.  

-ಶ್ರೀರಾಜ್ ವಕ್ವಾಡಿ


Sunday, February 5, 2023

ರಾಜಕೀಯ ಸೈದ್ಧಾಂತಿಕ ಬಜೆಟ್ - 2023

ಸಾಮಾನ್ಯ ವರ್ಗದವರ ಕೊರಗನ್ನು ಸರ್ಕಾರದ ಅಂಕಿಅಂಶಗಳು ಹೇಳಿದ್ದುಂಟೆ..?

ಕೇಂದ್ರ ಸರ್ಕಾರ ಅತ್ಯಂತ ಜಾಣತನ ಈ ಬಜೆಟ್ ನಲ್ಲಿ ತೋರಿಸಿದೆ. ಅದು ಕೇಂದ್ರ ಸರ್ಕಾರಕ್ಕೆ ಈ ಚುನಾವಣೆಯ ಹೊಸ್ತಿನಲ್ಲಿ ತುರ್ತು ಕೂಡ ಇದ್ದಿತ್ತು. ಇದೊಂದು ಅಪ್ಪಟ ರಾಜಕೀಯ ಸೈದ್ಧಾಂತಿಕ ಬಜೆಟ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮುಂದಿನ ಚುನಾವಣಾ ನೀತಿಗೆ ಅನುಗುಣವಾಗಿ ಬಜೆಟ್ ಮಂಡಿಸಿದೆ. ನಿರೀಕ್ಷೆಯಂತೆ ಈ ಬಾರಿಯ ಬಜೆಟ್ ನಲ್ಲಿಯೂ ಕೇಂದ್ರ ಸರ್ಕಾರ ಕಾರ್ಪೋರೇಟಿಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಆರ್ಥಿಕ ಪ್ರಜ್ಞೆಯಿಲ್ಲದಂತೆ ಬಜೆಟ್ ಮಂಡಿಸಿದ ಸರ್ಕಾರ ಸಾಮಾನ್ಯ ಜನರಿಗೆ ಕೊನೆಗೂ ಏನನ್ನೂ ಕೊಡುವುದಿಲ್ಲ ಎನ್ನುವುದನ್ನು ಮತ್ತೆ ಸಾಬೀತು ಮಾಡಿದೆ. 

ಉದ್ಯೋಗ ಸೃಷ್ಟಿ ವಿಚಾರದಲ್ಲಿ ತನ್ನ ಹಳೆಯ ಧೋರಣೆಯನ್ನೇ ಬಿಜೆಪಿ ಈ ಬಾರಿಯೂ ತೋರಿಸಿದೆ. ಇಂದು ನಾವು ಎದುರಿಸುತ್ತಿರುವ ದೊಡ್ಡ ಆರ್ಥಿಕ ಸವಾಲೆಂದರೇ, ಕುಂಠಿತ ಆರ್ಥಿಕ ಅಭಿವೃದ್ಧಿ, ಹಣದುಬ್ಬರ, ನಿರುದ್ಯೋಗ, ಸಾಲದ ಹೊರೆ. ಆದರೇ, ಕೇಂದ್ರದ ಬಜೆಟ್ ಇವುಗಳಲ್ಲಿ ಯಾವುದಕ್ಕೂ ಗಮನ ನೀಡಿಲ್ಲ. ಸಾಮಾನ್ಯ ಜನರ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುವುದನ್ನು ಸರ್ಕಾರ ನೀಡುವ ಸೋ ಕಾಲ್ಡ್ ಅಂಕಿಅಂಶಗಳು ಹೇಳುವುದಿಲ್ಲ. ಎಲ್ಲಿಯವರೆಗೆಂದರೇ, ದೇಶದ ಸಾಮನ್ಯ ಜನರನ್ನು ಕೆಲವು ವರ್ಷಗಳಿಂದ ಹಿಂಡಿ ಹಿಪ್ಪೆ ಹಾಕುತ್ತಿರುವ ʼಹಣದುಬ್ಬರʼ ಹಾಗೂ ʼಬೆಲೆ ಏರಿಕೆʼ ಎಂಬ ಪದಗಳನ್ನು ಬಜೆಟ್ ನಲ್ಲಿ ವಿತ್ತ ಸಚಿವೆ ಒಮ್ಮೆಯೂ ಉಲ್ಲೇಖಿಸಿಲ್ಲ. 

ಜಿಡಿಪಿಯ ಶೇಕಡಾ ೫.೯ರಷ್ಟು ವಿತ್ತೀಯ ಕೊರತೆ ಇರುವ ಬಜೆಟ್ ಮಂಡಿಸುವಾಗ ೨೦೦೩ರ ಹಣಕಾಸಿನ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣಾ ಕಾಯ್ದೆಯಿಂದ ಕಡ್ಡಾಯಗೊಳಿಸಿದ ಶೇಕಡಾ ೩ರ ಮಿತಿಯನ್ನು ಸರ್ಕಾರ ಉಲ್ಲಂಘಿಸಿ, ಮತ್ತೆ ಸಾಲ ಮಾಡಿ ಈ ದೇಶದ ಮೇಲೆ ಹೊರೆ ಹೇರುವಂತಷ್ಟೇ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ.

ಕ್ಯಾಪಿಟಲ್ ಎಕ್ಸಪೆಂಡಿಚರ್ ಜಿಡಿಪಿಯ ಶೇಕಡಾ ೩.೩ರಷ್ಟು, ಅಂದರೇ, ಶೆಕಡಾ ೩೭ರಷ್ಟು ಹೆಚ್ಚು, ಸುಮಾರು ೧೦ ಲಕ್ಷ ಕೋಟಿಯಷ್ಟು. ಈ ಹೂಡಿಕೆಯ ಬಹುಪಾಲು ರೈಲ್ವೇಗೆ ಹೋಗುತ್ತದೆ ( ೨.೪೦ ಲಕ್ಷ ಕೋಟಿ ಬಂಡವಾಳದ ಬೆಂಬಲವನ್ನು ಪಡೆಯುತ್ತದೆ), ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು (೧.೬೨ ಲಕ್ಷ ಕೋಟಿ), ಫ್ರಧಾನ ಮಂತ್ರಿ ಆವಾಸ್ ಯೋಜನೆ (೭೯,೦೦೦ ಕೋಟಿ)ಗೆ ಸಲ್ಲುತ್ತವೆ. ಅಂದರೇ, ಕೇಂದ್ರ ಬಜೆಟ್ ನಲ್ಲಿ ಬಂಡವಾಳ ಹೂಡಿಕೆಗೆ ಇಪ್ಪತ್ತು ವರ್ಷಗಳಲ್ಲೇ ಇದೇ ಪ್ರಥಮ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಕೊಟ್ಟಿದೆ. ಇದು ಕಾರ್ಪೋರೇಟ್ ಸ್ನೇಹಿ ಅಲ್ಲದೇ ಮತ್ತೇನು..? ಈ ರೀತಿಯಲ್ಲಿ ಖಾಸಗಿಯರನ್ನು ಕರೆದು ಕೊಡುವುದಕ್ಕೆ ತಯಾರಾಗಿರುವ ರೈಲ್ವೇ, ಹೆದ್ದಾರಿ, ಕೃಷಿ, ಲಾಜೆಸ್ಟಿಕ್ ಗಳೀಘೇ ಸರ್ಕಾರ ಯಾಕೆ ಹೂಡಿಕೆ ಮಾಡಬೇಕು..? ಇದೇ ಸರ್ಕಾರ ಅಲ್ಲವೇ, ವ್ಯವಹಾರದ ನಿರ್ವಹಣೆ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಹೇಳಿದ್ದು..? 

ಇನ್ನು, ಈ ಹಣಕಾಸು ವರ್ಷದಲ್ಲಿ ಘೋಷಿಸಲಾದ ವೈಯಕ್ತಿಕ ತೆರಿಗೆ ದರ ಪರಿಷ್ಕರಣೆಗಳ (ಹೊಸ ತೆರಿಗೆ ಪದ್ಧತಿಯ ಪ್ರಕಾರ)  ಪರಿಣಾಮ ಹೇಗಿರಲಿದೆ ಎನ್ನುವುದು ಕುತೂಹಲವಾಗಿದೆ. ಮತ್ತು ಉದ್ಯೋಗ ಸೃಷ್ಟಿಯ ಬಿಕ್ಕಟ್ಟಿನ ಬಗ್ಗೆ ಅಸಡ್ಡೆ ಧೋರಣೆ ತೋರಿಸಿದ್ದು ಪ್ರಮುಖವಾಗಿ ಕಂಡು ಬಂದಿದೆ. 

ಹೊಸ ತೆರಿಗೆ ಪದ್ಧತಿಯಲ್ಲಿ ಮಾಡಿದ ಪರಿಷ್ಕರಣೆಗಳ ಆಧಾರದಲ್ಲಿ ಮಧ್ಯಮ ವರ್ಗಕ್ಕೆ ಇದು ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ. ಉದಾಹರಣೆಗೆ ವರ್ಷಕ್ಕೆ ೯,೦೦,೦೦೦ ರೂ. ತನಕ ದುಡಿಯುವವರಿಗೆ ತೆರಿಗೆ ಹೊರೆ ಇಳಿಕೆ ಮಾಡಲಾಗಿದೆ. ಈ ಹಿಂದಿನ ತೆರಿಗೆ ಸ್ಲ್ಯಾಬ್ ಗೆ ಹೋಲಿಸಿದರೇ, ಹೊಸ ತೆರಿಗೆ ಸ್ಲ್ಯಾಬ್ ನಲ್ಲಿ ೧೫,೦೦೦ ರೂ. ವರೆಗೆ ಉಳಿತಾಯ ಮಾಡಬಹುದಾಗಿದೆ. ವರ್ಷಕ್ಕೆ ಏಳು ಲಕ್ಷದವರೆಗೆ ದುಡಿಯುವವರಿಗೆ ತೆರಿಗೆ ವಿನಾಯತಿ ಮಾಡಲಾಗಿದೆ. ಈ ಹೊಸ ಕ್ರಮಗಳು ಎರಡು ಕಾರಣಗಳಿಗಾಗಿ ಅತ್ಯಂತ ಅಗತ್ಯವಾಗಿತ್ತು. ಹಣದುಬ್ಬರ (ಆಹಾರ, ದಿನ ಬಳಕೆಯ ವಸ್ತುಗಳು, ಇಂಧನಗಳ ಮೇಲೆ ಅವ್ಯಾಹತವಾಗಿ ಹೆಚ್ಚಾದ ಖರ್ಚು  ವೆಚ್ಚ) ಹಾಗೂ ಮಧ್ಯಮ ವರ್ಗದಲ್ಲಿ ಕೋವಿಡ್ ನಂತರದಲ್ಲಿ ಸೃಷ್ಟಿಯಾದ ಕಡಿಮೆ ಆದಾಯ.  ಕಡಿಮೆ ಗಳಿಕೆಯ ಮೇಲೆ ಹೆಚ್ಚಿನ ತೆರಿಗೆ ದರವನ್ನು ಪಾವತಿಸುವ ಸ್ಲ್ಯಾಬ್ ಬಗ್ಗೆ ಅಸಮಾಧನದಲ್ಲಿದ್ದ ಮಧ್ಯಮ ವರ್ಗವನ್ನು ಸಮಾಧಾನ ಪಡಿಸುವ ತಂತ್ರವೂ ಈ ವಿಷಯದಲ್ಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ತೆರಿಗೆ ವಿನಾಯತಿ ಎಲ್ಲವೂ ಕೂಡ ಒಂದು ಥರದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಮಾಡಲಾದ ಯೋಜನೆ ಎಂಬಂತೆ ಕಾಣಿಸುತ್ತಿರುವುದು ಅಷ್ಟೇ ಅಲ್ಲದೇ, ಕಾರ್ಪೋರೇಟ್ ಸ್ನೇಹಿ ಅಂತೆ ಕಾಣಿಸುತ್ತಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಇನ್ನು, ಕೋವಿಡ್ ಸೋಂಕಿನ ಹೊಡೆತ ಭಾಗಶಃ ಅಂತ್ಯಗೊಂಡ ಮೇಲೆ ಕೇಂದ್ರ ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆ ಇಲಾಖೆ ೬.೫ ಕೋಟಿ ರಿಟರ್ನ್ಸ್ ಸಂಸ್ಕರಿಸಿದೆ ಎಂದು ಉಲ್ಲೇಖಿಸಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ರಾಜ್ಯ ಸಭೆಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ೨೦೧೯-೨೦ ನೇ ಸಾಲಿನಲ್ಲಿ ೮.೨೨ಕೋಟಿ ಭಾರತೀಯರು ಆದಾಯ ತೆರಿಗೆ ಪಾವತಿದಾರರು ಎಂದು ಹೇಳಿದ್ದರು. ಅಂದು ಸಚಿವರು ಹೇಳಿರುವುದಕ್ಕೂ ಹಾಗೂ ಬಜೆಟ್ ನಲ್ಲಿ ಹೇಳಿರುವುದನ್ನು ಗಮನಿಸುವುದಾದರೇ, ಕೇವಲ ಎರಡು ವರ್ಷಗಳ ಅಂತರದಲ್ಲಿ ಸುಮಾರು ಎರಡು ಕೋಟಿಯಷ್ಟು  ಮಧ್ಯಮ ವರ್ಗದವರು ಬಡತನ ರೇಖೆಗೆ ಇಳಿದಿದ್ದಾರೆ ಎನ್ನುವುದನ್ನು ಸ್ವತಃ ಸರ್ಕಾರವೇ ದೇಶದ ಮುಂದೆ ಶರಣಾಗಿ ಒಪ್ಪಿಕೊಂಡಂತಾಯಿತು.  

ಉದ್ಯೋಗ ಸೃಷ್ಟಿ, ಭದ್ರತೆಯ ಬಗ್ಗೆ ನಿರ್ಲಕ್ಷಿಸಿದ ಬಜೆಟ್ :  ಸಾಮಾಜಿಕ ವಲಯದ ಅನೇಕ ಖರ್ಚು ವೆಚ್ಚಗಳನ್ನು ಹೊರತುಪಡಿಸಿ, ಕೇಂದ್ರದ ಈ  ಬಜೆಟ್ ಈ ಸಾರ್ವಜನಿಕ ವಲಯವನ್ನು ತೀವ್ರವಾಗಿ ನಿರಾಶೆಗೊಳಿಸಿದೆ. ದೇಶದಾದ್ಯಂತ ಆವರಿಸಿರುವ ನಿರುದ್ಯೋಗದ ಬಿಕ್ಕಟ್ಟಿನ ಬಗ್ಗೆ ಸ್ವಲ್ಪವೂ ಕಣ್ಣೆತ್ತಿ ನೋಡುವ ಪ್ರಯತ್ನವನ್ನು ಈ ಬಜೆಟ್ ಮಾಡಿಲ್ಲ. ಕಳೆದ ನಾಲ್ಕೈದು ಬಜೆಟ್ ನಲ್ಲಿ ಮಾಡಿದಂತೆಯೇ ಭಾರತದಾದ್ಯಂತ ಮುಗಿಯದ ಸಮಸ್ಯೆಯಂತೆ ಭಾದಿಸುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಈ ಬಾರಿಯೂ ಸಂಪೂರ್ಣ ವಿಫಲರಾದರು. ಅಂತರಾಷ್ಟ್ರೀಯ ಪ್ರಭಾವಕ್ಕಾಗಿ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವುದರ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು ಹೊರತಾಗಿ ಮತ್ತೇನಿಲ್ಲ. ನರೇಗಾ ಉದ್ಯೋಘ ಖಾತ್ರಿ ಯೋಜನೆಗೆ ಮೀಸಲಿಟ್ಟ ಅಥವಾ ಘೋಷಿಸಿದ ೬೦,೦೦೦ ಕೋಟಿಯನ್ನು ಹಿಂದಿನ ಬಜೆಟ್ ಗಳಿಗೆ ಹೋಲಿಸಿದರೇ ಈ ವರ್ಷ ಕಡಿಮೆಯಾಗಿದೆ. ಇದು ದೇಶದಲ್ಲಿ ಉದ್ಯೋಗವಕಾಶವನ್ನು ಸೃಷ್ಟಿಸುವಲ್ಲಿ ಮೋದಿ ಸರ್ಕಾರ ತೋರಿದ ಅಸಡ್ಡೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಡಿಸೆಂಬರ್ ನಲ್ಲಿ ಮುಂಬೈ ಮೂಲದ ಸಂಸ್ಥೆ ನೀಡಿದ ವರದಿಯ ಪ್ರಕಾರ, ನಗರ ನಿರುದ್ಯೋಗ ಪ್ರಮಾಣ ಶೇಕಡಾ ೮.೯ಕ್ಕೆ ಹೆಚ್ಚಳವಾಗಿತ್ತು. ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇಕಡಾ. ೭.೫೫ಕ್ಕೆ ತಲುಪಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಕೃಷಿ ಖಾಸಗೀಕರಣದತ್ತ ಪ್ಲ್ಯಾನ್ : ಆಹಾರ ಸಬ್ಸಿಡಿಯನ್ನು ೯೦,೦೦೦ ಕೋಟಿಗೆ ಕಡಿತಗೊಳಿಸಲಾಗಿದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ ಹೇಳುವ ಪ್ರಕಾರ ಭಾರತ ೧೨೧ ದೇಶಗಳ ಫೈಕಿ ೧೦೭ನೇ ಸ್ಥಾನದಲ್ಲಿದೆ. ದೇಶದ ಬಹುಪಾಲು ಜನರಿಗೆ ಪೌಷ್ಟಿಕ ಆಹಾರ ದೊರಕುತ್ತಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಪಿಎಂ ಫೋಷಣ್ ವೆಚ್ಚವನ್ನೂ ಕೂಡ ಕಡಿತಗೊಳಿಸಲಾಗಿದೆ. ಆಹಾರ ಸಬ್ಸಿಡಿಯ ಮೇಲಿನ ಕಡಿತವು ಇದು ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೇಂದ್ರದ ಬಜೆಟ್ ರೈತರನ್ನು ಚಿಂತೆಗೀಡು ಮಾಡಿದೆ. ರಸಗೊಬ್ಬರದ  ಮೇಲಿನ ಸಬ್ಸಿಡಿಯನ್ನೂ ಕೂಡ ಕಡಿತಗೊಳಿಸಲಾಗಿದೆ. 

ಕೃಷಿ ಕಾರ್ಪೋರೇಟಿಕರಣದತ್ತ ಸರ್ಕಾರ ಹಾದಿ ಸುಲಭ ಮಾಡಿಕೊಟ್ಟಂತೆ ಕಾಣುತ್ತದೆ. ಪಶುಸಂಗೋಪನೆ, ಕೃಷಿ, ಡೈರಿ, ಮೀನುಗಾರಿಕೆಗಳಿಗೆ ಸುಮಾರು ೨೦ ಲಕ್ಷ ಕೋಟಿ ರೂ.ಗಳಷ್ಟು ಸಾಲ ಸೌಲಭ್ಯ. ಸಹಕಾರಿ ಇಲಾಖೆಗಳ ಸಹಕಾರದಿಂದ ದಾಸ್ತಾನು ಮಾರಾಟ ಸವಲತ್ತು, ಕೃಷಿ ತಂತ್ರಜ್ಞಾನಗಳಿಗೆ ಬೆಂಬಲ ಇತ್ಯಾದಿಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೇಟಿಕರಣದತ್ತ ಕೊಂಡೊಯ್ಯುವ ಯೋಜನೆ ಎಂದು ಕಾಣಿಸುತ್ತದೆ. 

ರಾಷ್ಟ್ರೀಯ ಯೋಜನೆಯಾಗಿ ಬದಲಾದ ಭದ್ರ ಮೇಲ್ದಂಡೆ :  ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜ್ಯದಲ್ಲಿಯೇ ಮಹತ್ವ  ಪಡೆದಿರುವ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಬರೋಬ್ಬರಿ ೫,೩೦೦ ಕೋಟಿ ಮೀಸಲಿಟ್ಟು, ಚುನಾವಣಾ ಲೆಕ್ಕಾಚಾರ ಮಾಡಿದೆ ಎಂಬ ಚರ್ಚೆ ಹುಟ್ಟಿಕೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಮುಂದಿಟ್ಟುಕೊಂಡು ಮಧ್ಯ ಕರ್ನಾಟಕದ ಕ್ಷೇತ್ರಗಳನ್ನು ತನ್ನತ್ತ ಸೆಳೆದುಕೊಳ್ಳುವ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ಒಂದು ಸುತ್ತಿನ ಪ್ರವಾಸ ನಡೆಸಿದ್ದು, ಈ ಯೋಜನೆಯೊಂದಿಗೆ ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗಾ, ತುಮಕೂರು ಭಾಗಗಳಲ್ಲಿ ಕೊನೆಯ ಹಂತದ ಚುನಾವಣಾ ತಂತ್ರ ರೂಪಿಸುವುದು ಬಿಜೆಪಿಯ ಲೆಕ್ಕಾಚಾರ.

-ಶ್ರೀರಾಜ್ ವಕ್ವಾಡಿ