ಬಂಡಾಯದ ಬಾವುಟ ಹಿಡಿದು ಸಂಭ್ರಮಿಸಿದವರು ಮುಂದೆ ಅರ್ಧದಾರಿಯ ಬಡತನ ಎದುರಿಸಲು ತಯಾರಿದ್ದಾರೆಯೇ..?!
ಶಿವಸೇನೆ ಅತೃಪ್ತ ನಾಯಕರ ಬಂಡೆದ್ದಿರುವ ಕಾರಣದಿಂದಾಗಿ ‘ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡಿದೆ. ಕೇವಲ ಎರಡುವರೆ ವರ್ಷಗಳಲ್ಲೇ ಸರ್ಕಾರ ಉರುಳಿದೆ. ಯಾವ ರಾಜ್ಯವನ್ನು ಬೇಕಾದರೂ ಗಮನಿಸಿ, ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದವರು ಎಲ್ಲೂ ಯಶಸ್ವಿ ಆಡಳಿತವನ್ನು ನಡೆಸಿಲ್ಲ (ಕೇರಳವನ್ನು ಹೊರತಾಗಿ). ಮಹಾರಾಷ್ಟ್ರ ಬಹುತೇಕ ಈವರೆಗೆ ಕಂಡುಕೊಂಡುಬಂದಿದ್ದು ಮೈತ್ರಿ ಆಡಳಿತವನ್ನು. ಮೈತ್ರಿ ಜಗಳದಿಂದ, ಪೂರ್ಣ ಬಹುಮತದ ಕೊರತೆಯಿಂದಾಗಿ ಮಹಾರಾಷ್ಟ್ರ ಒಂದೆರಡು ಬಾರಿ ರಾಷ್ಟ್ರಪತಿ ಆಡಳಿತವನ್ನೂ ಕಂಡಿದೆ ಎನ್ನುವುದು ಇಲ್ಲಿ ಗಮನಾರ್ಹ. ಪಕ್ಕಾ ಉಗ್ರ ಹಿಂದುತ್ವದ ಸಿದ್ಧಾಂತದೊಂದಿಗೆ ರಾಜಕೀಯ ಪ್ರವೇಶ ಮಾಡಿದ ಶಿವಸೇನೆ, ಕಳೆದ ವಿಧಾನಸಭಾ ಚುನಾವಣೆವರೆಗೂ ತನ್ನ ಸಿದ್ಧಾಂತವನ್ನು ಬಿಟ್ಟುಕೊಟ್ಟಿಲ್ಲ. ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ತನ್ನ ಪಟ್ಟು ಮುಂದೆ ಇಟ್ಟೇ ಮುಂದಿನ ಯೋಚನೆ ಮಾಡುತ್ತಿತ್ತು. ಆದರೇ, 2018ರ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅಧಿಕಾರದ ದಾಹದಿಂದಾಗಿ ಎನ್ಡಿಎಯೇತರ ರಾಜಕೀಯ ಪಕ್ಷಗಳು ಮೈತ್ರಿಯನ್ನು ರಚಿಸಿದವು. 106 ಕ್ಷೇತ್ರಗಳಲ್ಲಿ ಜಯಗಳಿಸಿದ ಬಿಜೆಪಿ ಎದುರು ಉದ್ಧವ್ ಠಾಕ್ರೆ, ಮುಂಖ್ಯಮಂತ್ರಿ ಹುದ್ದೆ ಕೊಡುವುದಿಲ್ಲ ಎಂಬ ಕಾರಣಕ್ಕೆ ತೊಡೆ ತಟ್ಟಿ ನಿಂತರು, ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಮೂಲಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಕಳೆದೆರಡು ವರ್ಷಗಳಿಂದ ಎಲ್ಲವೂ ಸರಿಯೇ ಇತ್ತು, ಎಲ್ಲವೂ ಸಸೂತ್ರವಾಗಿಯೇ ನಡೆಯುತ್ತಿದೆ ಎನ್ನುವಷ್ಟರಲ್ಲಿ ಸರ್ಕಾರ ಉರುಳಿದೆ. ಉದ್ಧವ್ಗೆ ಈಗ ತಟ್ಟಿದ ತೊಡೆ ಕೊಯ್ದುಕೊಂಡಂತಾಗಿದೆ.
ಅಧಿಕಾರದ ದಾಹದಿಂದಾಗಿ ಮೈತ್ರಿ ಮಾಡಿಕೊಂಡ ಸರ್ಕಾರಗಳೆಲ್ಲದರ ಸ್ಥಿತಿ ಹೀಗೆ ಆಗಿ ಹೋಗಿವೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಗೆ ಈ ಸ್ಥಿತಿ ಬಂದಿರುವುದು ಹಿಂದುತ್ವದೊಂದಿಗೆ ಮಾಡಿಕೊಂಡ ರಾಜಿಯಿಂದಾಗಿ. ಈ ಮೂಲಕ ತಂದೆ ಹಾಕಿಕೊಟ್ಟ ದಾರಿಯಲ್ಲಿ ನಡೆಯದೇ, ‘ದಾರಿ ತಪ್ಪಿದ ಮಗ’ನಾಗಿ ಬಿಟ್ಟರು ಉದ್ಧವ್. ತಂದೆ ಬಾಳ ಸಾಹೇಬ್ ಠಾಕ್ರೆ ಎಂದೂ ರಾಜಕೀಯದ ಮುಖ್ಯ ಹುದ್ದೆಯಲ್ಲಿ ಇರಬೇಕೆಂದು ಬಯಕೆ ಹೊಂದಿದವರಲ್ಲವಂತೆ. ಅವರದ್ದು ಹಿಂದುತ್ವವೇ ಉಸಿರಾಗಿತ್ತಂತೆ. ಅಪ್ಪಟ ಹಿಂದುತ್ವವಾದಿ. ಹಿಂದುತ್ವದ ವಿಚಾರದಲ್ಲಿ ತೋರು ಬೆರಳ ತುದಿಯಲ್ಲೇ ಎಲ್ಲವನ್ನು ನಿಭಾಯಿಸಬಲ್ಲ ಎಲ್ಲಾ ಠೀವಿ, ಗತ್ತು ಅವರಿಗಿತ್ತಂತೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದಕ ದಾಳಿ ನಡೆಸಿದಾಗೆಲ್ಲಾ ಠಾಕ್ರೆ ಹುಲಿಯಂತೆ ಘರ್ಜಿಸುತ್ತಿದ್ದರಂತೆ. ಅಗಲ ಹಣೆ, ಕೊರಳಲ್ಲಿ ರುದ್ರಾಕ್ಷಿ ಹಾರ, ಬೆಳ್ಳಿ ಕೂದಲುಗಳ ಗಡ್ಡ, ಶುಭ್ರ ಬಿಳಿ ವಸ್ತ್ರ, ಕಪ್ಪು ಕಣ್ಣಡಕ, ಕೇಸರಿ ಹೆಗಲುವಲ್ಲಿ, ಮುಖದಲ್ಲಿ ಹಿಂದುತ್ವದ ಗಂಭೀರ ಛಾಯೆಯ ಠಾಕ್ರೆ ಬರುತ್ತಾರೆ, ಮಾತನಾಡುತ್ತಾರೆ ಎಂದರೇ ಶಿವಾಜಿ ಪಾರ್ಕ್ ಕಿಕ್ಕಿರಿದು ತುಂಬುತ್ತಿತ್ತಂತೆ, ಠಾಕ್ರೆ ಒಂದು ಆದೇಶ ನೀಡಿದರೇ ಇಡಿ ಮುಂಬೈ ಮಹಾನಗರ ಸ್ತಭ್ದವಾಗುತ್ತಿತ್ತಂತೆ. ಮುಂಬೈನ ಇತಿಹಾಸ ಇಂತಹ ಪ್ರಭಾವಶಾಲಿ ಜನನಾಯಕನನ್ನು ನೋಡಿಯೇ ಇಲ್ಲವಂತೆ, ಈ ಗತ್ತು ಗಾಂಭರ್ಯ ಬಾಳ ಸಾಹೇಬ್ ಠಾಕ್ರೆ ಕೊನೆ ಉಸಿರೆಳೆದ ನವೆಂಬರ್ 17 2012ರ ತನಕವೂ ಎಳ್ಳಷ್ಟು ಮಾಸದೆ ಇತ್ತೆನ್ನುವುದು ಸಾಹೇಬ್ ಅವರ ರಾಜಿ ಇಲ್ಲದ ಸಿದ್ಧಾಂತವನ್ನು ಒಪ್ಪುವವರು ಆಡುವ ಮಾತುಗಳು. ಬಾಳ ಸಾಹೇಬ್ ಠಾಕ್ರೆ ಕಾಲದ ನಂತರ ಶಿವಸೇನೆಯ ಉತ್ತರಾಧಿಕಾರಿಯಾಗಿ ಉದ್ಧವ್ ಠಾಕ್ರೆ ಮುಂದಾಳತ್ವವನ್ನು ವಹಿಸಿಕೊಂಡರು, ಶಿವಸೇನೆಯ ಮುಖವಾಣಿ ಸಾಮ್ನಾದ ಪ್ರಧಾನ ಸಂಪಾದಕರಾದರು. ಎಲ್ಲವೂ ಸರಿಯೇ ಇತ್ತು, ಈ ನಡುವೆ ಮುಖ್ಯಮಂತ್ರಿಯಾಗುವ ಮೋಹ ಉದ್ಧವ್ ಠಾಕ್ರೆಗೆ ಅಂಟಿಕೊಂಡಿತು. ಮರಾಠ ಹಿತರಕ್ಷಣೆಯ ಜೊತೆಗೆ ಹಿಂದುತ್ವದ ಖಡಕ್ ಸಿದ್ಧಾಂತದೊಂದಿಗೆ ಶಿವಸೇನೆಯನ್ನು ಕಟ್ಟಿದ ಬಾಳಠಾಕ್ರೆ, ಆಗಿನ ಪ್ರಭಾವಿ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಜಿನ್ನಾ ಸಮಾಧಿಗೆ ಹೋಗಿ ಬಂದರು ಎಂಬ ಒಂದೇ ಒಂದು ಕಾರಣದಿಂದಾಗಿ ಬಿಜೆಪಿ ಮೇಲಿನ ವಿಶ್ವಾಸವನ್ನು ಕಳೆದುಕೊಂಡರು. ಅಂತಹ ಬಾಳಠಾಕ್ರೆ ಕಟ್ಟಿದ ಶಿವಸೇನೆಯನ್ನು ಉದ್ಧವ್ ಠಾಕ್ರೆ ಅಧಿಕಾರದ ಆಸೆಗೆ ನಿಜಕ್ಕೂ ಬಲಿ ಕೊಟ್ಟರೇ..? ಎನ್ನುವ ಪ್ರಶ್ನೆ ಕಾಡುತ್ತಿದೆ.
ಕರ್ನಾಟಕದ 2018ರ ಸ್ಥಿತಿ ನೆನಪಿಸುತ್ತದೆ : ಮಹಾರಾಷ್ಟದಲ್ಲಿ 2019ರಲ್ಲಿ 106 ಸೀಟುಗಳನ್ನು ಬಿಜೆಪಿ ಪಡೆದುಕೊಂಡರೂ ಸ್ಪಷ್ಟ ಬಹುಮತವಿಲ್ಲದೇ, ಅಧಿಕಾರ ಮಾಡುವುದಕ್ಕೆ ಸಾಧ್ಯವಾಗದೇ ಉಳಿಯಿತು. ಕರ್ನಾಟಕದಲ್ಲಿಯೂ 2018ರಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿತ್ತು, ಆದರೇ, ಸರ್ಕಾರ ರಚನೆಗೆ 113 ಸ್ಥಾನಗಳು ಬೇಕಾಗಿತ್ತು. ಬಹುಮತವಿಲ್ಲದೇ ಇದ್ದರೂ, ಆಗ ವಿಶ್ವಾಸಮತವನ್ನೂ ಯಾಚಿಸದೇ ಬಿ. ಎಸ್ ಯಡಿಯೂರಪ್ಪ ನಾವು ಸರ್ಕಾರ ರಚಿಸಿಯೇ ರಚಿಸುತ್ತೇವೆ ಎಂದು ‘ಏಕ್ ದಿನ್ ಕಾ ಸಿಎಂ’ ಆಗಿ ಬೆಂಬಲವಿಲ್ಲದೆ ರಾಜಿನಾಮೆ ಬಿಸಾಕಿ ಹೊರನಡೆದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿತ್ತು. ಕೇವಲ 13 ತಿಂಗಳ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸುವಲ್ಲಿ ಪಕ್ಷದ ಅತೃಪ್ತ ಶಾಸಕರು ಯಶಸ್ವಿಯಾದರು. ಅನರ್ಹತೆಯ ಅಸ್ತç ಬಿಟ್ಟರೂ ಏನೂ ಪ್ರಯೋಜನವಾಗಿಲ್ಲ. ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪಥನಗೊಳಿಸಿ ಬಿಜೆಪಿಗೆ ಸೇರುವ ಉದ್ದೇಶದಿಂದ 15 ಶಾಸಕರು ರಾಜೀನಾಮೆ ನೀಡಲು ಹೊರಟಾಗ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸದೇ ಪಕ್ಷಾಂತರ ಮಾಡಿದಕ್ಕೆ ಅನರ್ಹರೆಂದು ಘೋಷಿಸಿದರು. ಸುಪ್ರೀಂ ಕೋರ್ಟ್ ನ ಮೆಟ್ಟಿಲ ತನಕವೂ ಈ ಪ್ರಕರಣ ಹೋಯಿತು. ಸುಪ್ರೀಂ ಕೋರ್ಟ್ ನ ತೀರ್ಪಿನ ವಿರುದ್ಧವಾಗಿ ಒಂದಿಷ್ಟು ಚರ್ಚೆಗಳೂ ಆಯಿತು. ಬಂಡಾಯ ಎದ್ದು ತನ್ನೆಡೆಗೆ ಬಂದ ಶಾಸಕರನ್ನು ಕಡೆಗಣಿಸಿದೆ ಎಂದು ಕೂಡ 15 ಶಾಸಕರು ಒಟ್ಟಾಗಿ ಬಿಜೆಪಿ ವಿರುದ್ಧ ತಿರುಗಿಬಿದ್ದರು, ಉಪಚುನಾವಣೆಯಲ್ಲಿ 15 ಶಾಸಕರಿಗೆ ಬಿಜೆಪಿ ಮಣೆ ಹಾಕಿತು. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳುವಲ್ಲಿ ಶಕ್ತವಾಯಿತು, ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ಸೋತು ಸುಣ್ಣವಾಗಿ ಕಾಂಗ್ರೆಸ್ನೊಂದಿಗಿನ ಮೈತ್ರಿ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡಿತು. ಈ ಫಲಿತಾಂಶದ ಪರಿಣಾಮ ಬಿಜೆಪಿಯ ಯಡಿಯೂರಪ್ಪ ನೇತೃತ್ವದ ಸರ್ಕಾರದ ಉಳಿವಿನ ಬಗ್ಗೆ ಇದ್ದ ಆತಂಕ ದೂರವಾಯಿತು. 105 ಇದ್ದ ಬಿಜೆಪಿ ಸಂಖ್ಯಾ ಬಲ 117ಕ್ಕೆ ಏರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಆಪರೇಷನ್ ಕಮಲ ಸಕ್ಸಸ್ ಆಗಿತ್ತು. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಬಂಡೆದ್ದ ಶಾಸಕರ ವಿರುದ್ಧ ‘ಅನರ್ಹತೆ’ ಅಸ್ತ್ರ ಬಳಸುವುದಕ್ಕೆ ಮುಂದಾಗಿದೆಯಾದರೂ ಸುಪ್ರೀಂ ತಡೆಹಿಡಿಯಿತು, ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಸೂಚಿಸಿದರು, ಶಿಂಧೆ ಸೇನೆಗೆ ಬಲ ಬಂದಂತಾಯಿತು. ಇನ್ನು, ಕರ್ನಾಟಕದ ಪರಿಸ್ಥಿತಿ ಮಹಾರಾಷ್ಟ್ರದಲ್ಲಿಯೂ ಆಗಲಿದೆಯೇ ಎಂಬ ಒಂದು ಕುತೂಹಲದ ಪ್ರಶ್ನೆ ಎಳುವ ಮುನ್ನವೇ, ವಿಶ್ವಾಸಮತ ಯಾಚನೆಗೂ ಮುನ್ನವೇ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ನೇತೃತ್ವದ ಹೊಸ ಸರ್ಕಾರ ರಚನೆಗೆ ಸುಲಭ ದಾರಿ ಮಾಡಿಕೊಟ್ಟಿದ್ದಾರೆ.
‘ಸೂಪರ್ ಸಿಎಂ’ ತಂದಿಟ್ಟ ಬಿಕ್ಕಟ್ಟು : ‘ನೆಪೋಟಿಸಂ’ನನ್ನು ರಾಜಕೀಯದಲ್ಲಿ ತರುವುದಕ್ಕೆ ಹೋರಟವರು ಅನುಭವಿಸಿದ್ದು ಉದ್ಧವ್ ಠಾಕ್ರೆ ರಾಜಕೀಯದಲ್ಲಿ ಎದುರಿಸಿದ್ದನ್ನೆ ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಅದು ಕಾಂಗ್ರೆಸ್ ಗಾಂಧಿ ಕುಟುಂಬದ ಆದಿಯಾಗಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ಈ ‘ಪ್ರಿತ್ರಾರ್ಜಿತ’ ಸಮಸ್ಯೆಯನ್ನು ಎದುರಿಸಿ ಹೊರಗೆ ನಡೆದವರು. ಒಂದು ಸಿದ್ಧಾಂತದ ಆಧಾರದಲ್ಲಿ ರಾಜಕೀಯದ ಪ್ರವೇಶ ಮಾಡಿದ ಕಾಂಗ್ರೆಸ್ ಅಂತೂ ಈ ವಿಷಯದಲ್ಲಿ ದೊಡ್ಡ ಮಟ್ಟದ ವಿರೋಧವನ್ನೇ ಅನುಭವಿಸಿತ್ತು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿಯ ಅತೃಪ್ತ ನಾಯಕರು ಬಂಡೆದ್ದಿದ್ದು ಸಿದ್ಧಾಂತಕ್ಕಿಂತ ಮಿಗಿಲಾಗಿ ಉದ್ಧವ್ ಠಾಕ್ರೆ ಮಗ ಮಹಾರಾಷ್ಟ್ರದಲ್ಲಿ ‘ಸೂಪರ್ ಸಿಎಂ’ ಆಗುತ್ತಿದ್ದಾರೆ ಎಂಬ ಕಾರಣಕ್ಕೆ. ಒಂದು ಸಿದ್ಧಾಂತವನ್ನು ಒಪ್ಪಿಕೊಂಡು ಬಂದ ನಾಯಕರು ಯಾರೂ ಈ ಬೆಳವಣಿಗೆಯನ್ನು ಒಪ್ಪಿದವರಲ್ಲ. ಅಧಿಕಾರವನ್ನೇ ನೋಡುವವರು ಬಾಯಿ ಮುಚ್ಚಿ ಕುಳಿತುಕೊಂಡು ಪ್ರಧಾನ ಹುದ್ದೆಯಲ್ಲಿರುವವರಿಗೆ ವಿದೇಯರಾಗಿರುತ್ತಾರಷ್ಟೇ. ಇದು ಕಾಂಗ್ರೆಸ್ನಲ್ಲಿಯೂ ಅಷ್ಟೇ, ಕರ್ನಾಟಕ ಬಿಜೆಪಿಯಲ್ಲಿಯೂ ಹೌದು. ಕಾಂಗ್ರೆಸ್ ಇದೇ ಕಾರಣಕ್ಕೆ ಜಿ23 ಬಣದ ವಿರೋಧವನ್ನು ಎದುರಿಸಬೇಕಾಯಿತು. ಇದೇ ಕಾರಣಕ್ಕೆ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಸೇರಿ ಹಲವು ಹಿರಿಯ, ಕಿರಿಯ ಪ್ರಭಾವಿ ಮುಖಗಳು ಪರೋಕ್ಷವಾಗಿ ಬಂಡೆದ್ದು ರಾಜೀನಾಮೆ ಬಿಸಾಕಿ ಹೊರನಡೆದರು. ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಆಡಳಿತದಲ್ಲಿ ಕೂಡ ಅವರ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ, ವೈ ವಿಜಯೇಂದ್ರ ಅವರಿಗೆ ‘ಸೂಪರ್ ಸಿಎಂ’ ಎಂಬ ಆರೋಪವನ್ನು ಪಕ್ಷದ ಅತೃಪ್ತ ಗುಂಪು ಹೊರಿಸಿತ್ತು, ಕಳೆದ ವರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ನಡೆಯುವುದಕ್ಕೆ ಈ ‘ಸೂಪರ್ ಸಿಎಂ’ ಕೂಡ ಒಂದು ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಗ ಮಹಾರಾಷ್ಟದಲ್ಲಿಯೂ ಉದ್ಧವ್ ಠಾಕ್ರೆ ಎದುರಿಸಿದ್ದು ಇದೇ ಆರೋಪ. ತಮ್ಮ ಮಗ ಆದಿತ್ಯ ಠಾಕ್ರೆ ಸಚಿವರಾದರೂ, ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಬೇಕೆಂಬ ಪ್ರಯತ್ನದಲ್ಲಿದ್ದರು ಮತ್ತು ಪಕ್ಷದ ಹಿರಿಯರು ಏನಾದರು ಕೆಲಸವಿದ್ದರೇ ಆದಿತ್ಯ ಠಾಕ್ರೆ ಎದುರು ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇತ್ತಂತೆ. ಸರ್ಕಾರದ ಎಲ್ಲಾ ಸಚಿವಾಲಯಗಳ ಫೈಲ್ ಮುಖ್ಯಮಂತ್ರಿಯವರೆಗೆ ಹೋಗುತ್ತಿದ್ದದ್ದು, ಆದಿತ್ಯ ಠಾಕ್ರೆ ಟೀಮ್ ಪರಿಶೀಲಿಸಿದ ನಂತರವೇ ಎಂಬ ಗಂಭೀರ ಆರೋಪವೂ ಇತ್ತು. ಹಾಗಾಗಿ ಈ ಅತೃಪ್ತ ಬಳಗ ಬಿಜೆಪಿಯೊಂದಿಗೆ ಕೈ ಜೋಡಿಸುವುದಕ್ಕೆ ಮುಂದಾಗಿದ್ದು ಎಂದೇ ಹೇಳಲಾಗುತ್ತಿದೆ. ಉದ್ಧವ್ ಠಾಕ್ರೆಯವರ ರಾಜಕೀಯದ ವರ್ಚಸ್ಸಿಗೆ ಧಕ್ಕೆ ತಂದಿದ್ದು ಮಹಾ ವಿಕಾಸ್ ಅಘಾಡಿ ಒಂದಾದರೇ, ಮತ್ತೊಂದು ಈ ‘ಸೂಪರ್ ಸಿಎಂ’ ಎನ್ನುವುದು ಸ್ಪಷ್ಟ.
ಒಟ್ಟಿನಲ್ಲಿ, ಬಿಜೆಪಿ ತನ್ನ ಸೋ ಕಾಲ್ಡ್ ‘ಆಪರೇಷನ್ ಕಮಲ’ದ ಹೆಸರಿನಲ್ಲಿ ಒಡೆದು ಆಳುವ ಪರಂಪರೆಯನ್ನು ಮುಂದುವರಿಸಿದೆ. ಬಿಜೆಪಿಗೆ 2024ರ ಚುನಾವಣೆ ಮುಖ್ಯ. ಈಗ ಏಕನಾಥ್ ಶಿಂಧೆ ಏನೋ ‘ಹು ಸರಿ’ ಎಂದಿರಬಹುದು. ಆದರೇ, ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿರುವ, ಬಂಡಾಯದ ಬಾವುಟ ಹಿಡಿ ಹಿಡಿದು ಮೈತ್ರಿ ಸರ್ಕಾರವನ್ನು ಉರುಳಿಸಿ ಸಂಭ್ರಮಿಸಿರುವ ಶಿಂಧೆ ಪಡೆ ಮುಂದೆ ಅರ್ಧದಾರಿಯ ಬಡತನ ಎದರಿಸಲು ತಯಾರಾಗಿದೆಯೇ ಎನ್ನುವುದು ಇಲ್ಲಿ ಮುಖ್ಯ.
-ಶ್ರೀರಾಜ್ ವಕ್ವಾಡಿ
.jpeg)



