Saturday, November 20, 2021

ಈ ಕಾಯ್ದೆಗಳಿಂದ ಅನುಕೂಲಗಳೇ ಆಗುತ್ತವೆ ಎಂದವರೇ...




ಪಂಚರಾಜ್ಯ ಚುನಾವಣೆಗೆ ಮೋದಿ ಗಿಮಿಕ್ | ಪಂಜಾಬ್ ನಲ್ಲಿ ಸಿಂಗ್ ಕಿಂಗ್ ಮೇಕರ್ 

ಈ ‘ರೇ’ ಎನ್ನುವ ಶಬ್ದ ಅಥವಾ ಅಕ್ಷರ ಕನ್ನಡ ಶಬ್ದಕೋಶದಲ್ಲಿರುವ ಅತ್ಯಂತ ಅಸಹನೀಯ ಮತ್ತು ಅಸಹ್ಯ ಅಂತನ್ನಿಸುತ್ತಿದೆ. ಹೌದು, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಹೊರತಾಗಿ ಏನೂ ಸಮಸ್ಯೆಯಾಗುವುದಿಲ್ಲ. ಕೃಷಿ ಕಾಯ್ದೆಗಳಲ್ಲಿ ಸುಧಾರಣೆ ತಂದಿರುವುದಕ್ಕಾಗಿ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಪದೇ ಪದೇ ಹೇಳುತ್ತಿದ್ದ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವ‘ರೇ’ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಘೋಷಿಸಿ, ಕಳೆದೊಂದು ವರ್ಷದಿಂದ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಹೋರಾಟ ನಡೆಸಿದ ರೈತರ ಮುಂದೆ ಕೊನೆಗೂ ಸೋಲೊಪ್ಪಿಕೊಂಡಿದ್ದಾರೆ.

ಒಂದೊಮ್ಮೆಯೂ ಈ ಹಿಂದೆ ಈ ವಿಚಾರವಾಗಿ ಪ್ರತ್ಯಕ್ಷವಾಗಿ ರೈತರ ಮುಂದೆ ಬಂದು ಒಂದು ಸೊಲ್ಲೆತ್ತದ ಮಾನ್ಯ ಪ್ರಧಾನಿಗಳು “ನಮ್ಮಿಂದ ತಪ್ಪಾಗಿದೆ, ದೇಶದ ರೈತರ ಕ್ಷಮೆ ಕೇಳುತ್ತೇನೆ” ಎಂದು ಕಾಯ್ದೆಗಳನ್ನು ವಾಪಾಸ್ ಪಡೆಯುತ್ತೇವೆ ಎಂದು ಹೇಳುವ ಸ್ಥಿತಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಬರಬಾರದಿತ್ತು. ಮೋದಿ ಸುಳಿವೇ ಇಲ್ಲದಂತೆ ಏಕಾಏಕಿ ಬಂದು ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಹೇಳಿರುವುದರಿಂದ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ದೇಶ ಮಟ್ಟದಲ್ಲಿ ಚರ್ಚೆಯಾಗುವುದನ್ನು ನೋಡುವುದೇ ಪ್ರಧಾನಿಯವರಿಗೆ ವಿಪರೀತ ಸಂತಸ ನೀಡುವ ಸಂಗತಿ ಎಂದು ಕಾಣಿಸುತ್ತಿದೆ. ರಾಷ್ಟ್ರದ ರಾಜಧಾನಿ ದೆಹಲಿಯ ಗಡಿ ಭಾಗಗಳಲ್ಲಿ ಹಾಗೂ ಇತರೆ ರಾಜ್ಯಗಳಲ್ಲಿ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದ ರೈತರ ವಿರುದ್ಧ ಕಡೆಗೂ ಮಣಿದು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿರುವುದರ ಹಿಂದೆ ಪ್ರಧಾನಿ ಹಾಗೂ ಬಿಜೆಪಿಯ ‘ಮೆಘಾ ಪ್ಲ್ಯಾನ್’ ಇದೆ ಎನ್ನುವುದು ಅಕ್ಷರಶಃ ಸತ್ಯ. ೨೦೧೪ ರಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಜೆಪಿಯ ಜೊತೆಗೆ ನಿಂತು ದೇಶ ಗೆಲ್ಲಲು ತಂತ್ರ ಹೆಣೆದಿದ್ದರು. ಅಲ್ಲಿಂದೀಚೆಗೆ ಬಿಜೆಪಿ ಪಕ್ಷವೇ ತಂತ್ರ ಹೆಣೆಯುವಷ್ಟು ಬೆಳೆದು ನಿಂತಿದೆ ಎನ್ನುವುದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳೇ ಸೂಚಿಸುತ್ತವೆ. ಒಂದು ರೀತಿಯಲ್ಲಿ ಚುನಾವಣೆಯ ಒಂದೇ ಒಂದು ಉದ್ದೇಶಕ್ಕಾಗಿ ಬಿಜೆಪಿ ಯಾವುದಕ್ಕೂ ಬೇಕಾದರೂ ಸಿದ್ಧ ಎಂಬುವುದು ಈಗೀಗ ಸ್ಪಷ್ಟವಾಗುತ್ತಿದೆ. ಪ್ರಧಾನಿಗಳು ಹೇಳಿರುವ ಹಾಗೆಯೇ, “ರೈತರಿಗಾಗಿ ಕೃಷಿ ಕಾಯ್ದೆಗಳನ್ನು ತಂದೆವು, ದೇಶಕ್ಕಾಗಿ ವಾಪಾಸ್ ಪಡೆಯುತ್ತಿದ್ದೇವೆ” ಎಂಬ ಮಾತಿನಲ್ಲೇ ತಮ್ಮ ಆಡಳಿತ ವರ್ಚಸ್ಸಿಗೆ ಧಕ್ಕೆ ಆಗಬಾರದೆಂಬ ಕಾಳಜಿ ಇದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಕಾಯ್ದೆ ‘ಪರ’ರ ಉಲ್ಟಾ ನಿಲುವು : ಕೇಂದ್ರ ಸರ್ಕಾರ ಅಂಗೀಕಾರ ಮಾಡಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಿದ ರೈತ ಪ್ರತಿಭಟನಾಕಾರರನ್ನು ಖಲಿಸ್ತಾನಿಗಳು, ದೇಶ ದ್ರೋಹಿಗಳು, ಭಯೋತ್ಪಾದಕರು ಎಂದು ಕರೆದ ಪ್ರದಾನಿ ಮೋದಿ ಅವರ ಅನುಯಾಯಿಗಳು ಏಕಾಏಕಿ ಈಗ ತಮ್ಮ ನಾಲಿಗೆ ಬದಲಾಯಿಸಿಕೊಂಡಿರುವುದನ್ನು ನೋಡಿದರೇ, ವಿಚಿತ್ರ ಅನ್ನಿಸುತ್ತಿದೆ. ಯಾರು ರೈತರ ಪ್ರತಿಭಟನೆಯನ್ನು ದೇಶ ದ್ರೋಹ ಚಟುವಟಿಕೆ ಎಂದು ಜರೆದಿದ್ದರೋ, ಅವರು ಈಗ ‘ಪ್ರತಿಭಟನೆ, ವಿರೋಧ ಮಾಡುವುದು ಪ್ರಜಾಪ್ರಭುತ್ವದ ಬ್ಯೂಟಿ’ ಎಂದು ಸಾಫ್ಟ್ ಧೋರಣೆ ತೋರಿಸುತ್ತಿರುವುದನ್ನು ನೋಡಿದರೇ, ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಅಷ್ಟಕ್ಕೂ ೨೦೧೪ ರಿಂದ ಕೆಲವರಿಗಂತೂ ಅನುಕೂಲಕ್ಕೆ ತಕ್ಕ ಹಾಗೆ ನಾಲಿಗೆ ಬದಲಾಯಿಸಿಕೊಳ್ಳುವ ಅಭ್ಯಾಸ ರೂಢಿಯಾಗಿ ಬಿಟ್ಟಿದೆ.       

ಮುಂದಿನ ವರ್ಷ ಬರಲಿರುವ ಪಂಚರಾಜ್ಯ ಚುನಾವಣೆಯನ್ನು ಉದ್ದೇಶಿಸಿಕೊಂಡೇ ಕೇಂದ್ರ ಸರ್ಕಾರ ಈ ಕಾಯ್ದೆಗಳ ಹಿಂಪಡೆಯುವ ನಿರ್ಧಾರಕ್ಕೆ ಮುಂದಾಗಿದ್ದು ಎನ್ನುವುದು ಎಳೆ ಕೂಸಿಗೂ ಗೊತ್ತಿರುವ ವಿಚಾರ. ಆದರೇ, ಬಿಜೆಪಿ ಹಾಗಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುರದ ಮೂಲಕ ಜನರ ಕಿವಿಯ ಮೇಲೆ ಹೂವಿಡೋದಲ್ಲ, ಲಾಲ್ ಬಾಗ್ ನನ್ನೇ ಇಡುತ್ತಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸ್ಪಷ್ಟ. ಆದರೇ, ಅದನ್ನು ತೋರಿಸಿಕೊಳ್ಳಲಾಗದ ಇರಿಸು ಮುರಿಸಿನ ಸ್ಥಿತಿಯಲ್ಲಿದೆ ಬಿಜೆಪಿ. 

ವಾಪಾಸ್ ಪಡೆಯುವ ಉದ್ದೇಶ ಪಂಚರಾಜ್ಯ ಚುನಾವಣೆ : ಈ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಆಗುತ್ತವೆ ಎಂದವರೇ, ದಿಢೀರ್ ಆಗಿ ವಾಪಾಸ್ ಪಡೆಯುವುದಾಗಿ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೇ, ಬಿಜೆಪಿ ಬಲವಾದ ರಾಜಕೀಯ ಲೆಕ್ಕಾಚಾರವನ್ನೇ ಹಾಕಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬರುವ ವರ್ಷ, ಅಂದರೇ ೨೦೨೨ ರಲ್ಲಿ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಈ ವಾಪಾಸಾತಿ ನಿರ್ಧಾರಕ್ಕೆ ಮುಂದಾಗಿದೆ. ಹೌದು, ೨೦೧೪ ರಲ್ಲಿ ಭೂಸ್ವಾಧೀನ ಸುಗ್ರಿವಾಜ್ಞೆಯ ವಿರುದ್ಧವೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಬಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಪ್ರತಿ ಪಕ್ಷ ಕಾಂಗ್ರೆಸ್ ಕೂಡ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರ ಹಾಕಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಇದು ಸೂಟ್ ಬೂಟ್ ಸರ್ಕಾರ’ ಎಂದು ನೇರಾನೇರವಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಜರೆದಿದ್ದರು. ದೊಡ್ಡ ಮಟ್ಟದಲ್ಲಿ ವಿರೋಧ ಬಂದ ಕಾರಣದಿಂದಾಗಿ ೨೦೧೫ ರಲ್ಲಿ ಬಿಹಾರ ವಿಧಾನ ಸಭಾ ಚುನಾವಣೆಯ ಮುಂಚಿತವಾಗಿ ಇದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭೂಸ್ವಾಧೀನ ಸುಗ್ರಿವಾಜ್ಞೆಯನ್ನು ಹಿಂಪಡೆದಿತ್ತು. ಅದಾದ ಮೇಲೆ ಈಗ ಮತ್ತೊಮ್ಮೆ ಕೇಂದ್ರ ಹಿಂದ್ಹೆಜ್ಜೆ ಇಟ್ಟು ತೀವ್ರ ಮುಖಭಂಗ ಅನುಭವಿಸಿದೆ. 

ಪಂಚರಾಜ್ಯ ಚುನಾವಣೆಯ ಲೆಕ್ಕಾಚಾರ ಖಂಡಿತ ಇದ್ದೇ ಇದೆ. ಬರುವ ವರ್ಷ ಬರಲಿರುವ ವಿಧಾನ ಸಭಾ ಚುನಾವಣೆಯ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಪಂಜಾಬ್ ನಲ್ಲಿ ಬಿಜೆಪಿ ಶೂನ್ಯ ಗಳಿಕೆಯ ಸಾಧನೆ ಮಾಡಲಿದೆ ಎಂಬ ಸಮೀಕ್ಷೆಯ ಭವಿಷ್ಯಕ್ಕೆ ಹೆದರಿ, ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಹೌದು, ಬಿಜೆಪಿಗೂ ಗೊತ್ತು, ಪಂಜಾಬ್ ನಲ್ಲಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಸಾಧ್ಯವಿಲ್ಲವೆಂದು, ಆದರೂ ಪ್ರತಿಪಕ್ಷ ಕಾಂಗ್ರೆಸ್ ನ ಎದುರು ಮರ್ಯಾದೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಮಾತ್ರವಲ್ಲದೇ, ಪಂಜಾಬ್ ನಲ್ಲಿ ಸಿಖ್ ಧರ್ಮದ ಮತದಾರರೇ ನಿರ್ಣಾಯಕವಾಗಿ ಪರಿಣಮಿಸುವ ಕಾರಣದಿಂದಾಗಿ ಸಿಖ್ ರನ್ನು ಎದುರು ಹಾಕಿಕೊಂಡು ಬಿಜೆಪಿ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಿಲ್ಲ. ಅದೇ ಕಾರಣದಿಂದಾಗಿ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮ ದಿನದಂದು ಈ ನಿರ್ಧಾರ ಬಿಜೆಪಿ ಕೈಗೊಂಡಿದೆ ಎನ್ನಲಾಗುತ್ತಿದೆ. 

ಪಂಜಾಬ್ ನಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ : ಹೌದು, ಪಂಜಾಬ್ ನಲ್ಲಿ ಕಾಂಗ್ರೆಸ್ ಒಡೆದು ಇಬ್ಭಾಗವಾದ ಬಳಿಕ ಅಲ್ಲಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಿರುವುದರಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪಂಜಾಬ್ ನಲ್ಲಿ ಅಮರಿಂದರ್ ಪ್ರಭಾವಿ ನಾಯಕ. ಅವರೆದುರಿಗೆ ಸರಿಯಾಗಿ ನಿಲ್ಲುವ ಬೇರೊಬ್ಬ ನಾಯಕ ಸದ್ಯಕ್ಕೆ ಪಂಜಾಬ್ ನಲ್ಲಿ ಇಲ್ಲ ಎಂದೇ ಹೇಳಬಹುದು. ಪಂಜಾಬ್ ನಲ್ಲಿ ಬಿಜೆಪಿ ಮರ್ಯಾದೆ ಉಳಿಸಿಕೊಳ್ಳಬೇಕೆಂದರೇ, ಅಮರಿಂದರ್ ಮನವೊಲಿಸಲೇಬೇಕು. ಅದರ ಮೊದಲ ಹಂತ ಈಗಾಗಲೇ ಆಗಿದೆ ಎಂದು ಕಾಣಿಸುತ್ತದೆ. ಕಾಂಗ್ರೆಸ್ ನಿಂದ ಹೊರಬಂದ ಬಳಿಕ ಅಮರಿಂದರ್ ಸಿಂಗ್ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಜೊತೆಗೆ ಒಂದು ಸುತ್ತಿನ ಮಾತು ಕತೆ ನಡೆಸಿದ್ದಾರೆ. ಆ ಬಳಿಕ ಅಮರಿಂದರ್ ಸಿಂಗ್ ಹೊಸ ಪಕ್ಷದ ಮುಖೇನ ಸ್ಪಧಿಸುವುದಾಗಿ ಘೋಷಿಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಕ್ಷ, ಬಿಜೆಪಿ ಪ್ರಾಯೋಜಿತ ಪಕ್ಷ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇನ್ನು, ಚುನಾವಣೆಗೆ ಬಿಜೆಪಿಯೊಂದಿಗೆ ಅಮರಿಂದರ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಮರಿಂದರ್ ಮೈತ್ರಿಗೆ ಒಪ್ಪಿದರೇ, ಕಾಂಗ್ರೆಸ್ ನನ್ನು ಸುಲಭವಾಗಿ ಮಣಿಸಬಹುದು ಎಂಬ ದೃಷ್ಟಿ ಬಿಜೆಪಿಗಿದೆ. ಮಾತ್ರವಲ್ಲದೇ, ಮೈತ್ರಿಗೆ ಒಪ್ಪಬೇಕಾದರೇ, ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಅಮರಿಂದರ್ ಡಿಮ್ಯಾಂಡ್ ಮಾಡಿದ್ದರಂತೆ, ಅದೇ ಕಾರಣಕ್ಕೇ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದರೂ, ಬಿಜೆಪಿ ಅದೊಂದೇ ಉದ್ದೇಶಕ್ಕೆ ಮಾತ್ರ ಹಿಂಪಡೆದದ್ದಲ್ಲ ಎಂಬಂತೆ ಕಾಣಿಸುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಕೂಡ ಕೆಲವು ಭಾಗಗಳಲ್ಲಿ ಸಿಖ್ ಮತದಾರರೇ ನಿರ್ಣಾಯಕ. ಉತ್ತರ ಪ್ರದೇಶದಲ್ಲಿಯೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ವ್ಯತ್ಯಾಸ ಕಾಣಬಹುದು ಎಂಬ ಸಮೀಕ್ಷೆ ಹೊರಬಂದಿದೆ. ಮತ್ತು ತನ್ನ ಆಡಳಿತದ ವರ್ಚಸ್ಸಿಗೆ ಬಹುವಾಗಿ ಇದು ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಕಾರಣದಿಂದಲೇ ಕೇಂದ್ರ ಈ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ ಎನ್ನುವುದು ಸ್ಪಷ್ಟ.   

ವಿರೋಧ ಎಲ್ಲಿಂದ ಆರಂಭ..?  : ಹಾಗೆ ಹೇಳುವುದಕ್ಕೆ ಹೋದರೇ, ರೈತರ ಉತ್ಪಾದನೆ ವ್ಯಾಪಾರ ಹಾಗೂ ವಾಣಿಜ್ಯ ಕಾಯ್ದೆ, ರೈತರ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ ಗಳ ವಿರುದ್ಧ ೨೦೧೭ರಲ್ಲೇ ಹೋರಾಟದ ಕಿಚ್ಚು ಹೊತ್ತಿತ್ತು. ಹೌದು, ೨೦೧೭ ರಲ್ಲಿ ಕೇಂದ್ರ ಸರ್ಕಾರ ಮಾದರಿ ಕೃಷಿ ಕಾಯ್ದೆಗಳ ಬಿಡುಗಡೆ ಮಾಡಿತ್ತು. ಆದಾಗ್ಯೂ ಒಂದು ನಿರ್ದಿಷ್ಟ ಅವಧಿಯ ನಂತರ ಈ ಕಾಯ್ದೆಗಳಲ್ಲಿ ಸೂಚಿಸಲಾದ ಹಲವಾರು ಸುಧಾರಣೆಗಳನ್ನು ರಾಜ್ಯಗಳು ಜಾರಿಗೆ ತಂದಿಲ್ಲ ಎಂಬ ಕಾರಣದಿಂದಾಗಿ ಅನುಷ್ಠಾನದ ಕುರಿತಾಗಿ ಚರ್ಚೆ ಮಾಡುವ ಉದ್ದೇಶದಿಂದ ಏಳು ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಜುಲೈ ೨೦೧೯ ರಲ್ಲಿ ರಚಿಸಲಾಯಿತು. ಅದಾಗಲೇ ಸಣ್ಣ ಮಟ್ಟದಲ್ಲಿ ಪಂಜಾಬ್, ಉತ್ತರ ಪ್ರದೇಶ ಹಾಗೂ ಹರಿಯಾಣ ಸೇರಿ ಕೆಲವೆಡೆ ವಿರೋಧ ಎದ್ದಿತ್ತು. 

ಇನ್ನು, ಕೃಷಿ ಉತ್ಪನ್ನಗಳು, ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಕೃಷಿ ಮಾರುಕಟ್ಟೆ ಹಾಗೂ ಗುತ್ತಿಗೆ ಕೃಷಿ ಸುಧಾರಣೆ ಸೇರಿ ಇತರೆ ವಿಷಯಗಳ ಬಗ್ಗೆ ಜೂನ್ ೨೦೨೦ ರ ಮೊದಲ ವಾರದಲ್ಲಿ ಮೂರು ಸುಗ್ರಿವಾಜ್ಞೆ ಅಥವಾ ತಾತ್ಕಾಲಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ತಾತ್ಕಾಲಿಕ ಕಾನೂನುಗಳನ್ನು ಮಸೂದೆಗಳಾಗಿ ಮಂಡಿಸಲಾಯಿತು ಹಾಗೂ ಸಪ್ಟೆಂಬರ್ ೧೫, ೧೮ರ ೨೦೨೦ ರಂದು ಕೇಂದ್ರ ಅಂಗೀಕರಿಸಿತ್ತು. ಸಪ್ಟೆಂಬರ್ ೨೨ ರೊಳಗೆ ರಾಜ್ಯಸಭೆಯು ಮೂರು ಮಸೂದೆಗಳನ್ನು ಅಂಗೀಕರಿಸಿತು. ಆದರೇ, ಪೂರ್ಣ ಮತವನ್ನು ಗಳಿಸುವುದಕ್ಕೆ ಕೇಂದ್ರಕ್ಕೆ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಪೂರ್ಣ ಮತದಾನಕ್ಕಾಗಿ ವಿಪಕ್ಷಗಳ ಮನವಿಯನ್ನು ಕಡೆಗಣಿಸಿ ಧ್ವನಿಮತದ ಮೂಲಕ ಅಂಗೀಕರಿಸಿತು. ೨೦೨೦ ಸಪ್ಟೆಂಬರ್ ೨೮ ರಂದು ಮಸೂದೆಗಳಿಗೆ ರಾಷ್ಟ್ರಪತಿಗಳು ಸಹಿ ಹಾಕುವ ಮೂಲಕ ತಮ್ಮ ಒಪ್ಪಿಗೆಯನ್ನು ನೀಡಿದ್ದರು, ಈ ಕಾರಣದಿಂದಾಗಿ ಅವುಗಳನ್ನು ಕಾಯ್ದೆಗಳಾಗಿ ಪರಿವರ್ತಿಸಲಾಯಿತು. 

ಸಪ್ಟೆಂಬರ್ ೨೦೨೦ ರಲ್ಲಿ ಪಂಜಾಬ್, ಹರಿಯಾಣ , ರಾಜಸ್ಥಾನಗಳಲ್ಲಿ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಆರಂಭವಾಗಿತ್ತಾದರೂ, ಎರಡು ತಿಂಗಳುಗಳ ನಂತರ ತೀವ್ರ ಸ್ವರೂಪಕ್ಕೆ ಪಡೆದುಕೊಂಡು ದೇಶವ್ಯಾಪಿ ಈ ಪ್ರತಿಭಟನೆ ನಡೆಯಿತು. ಉಳಿದಂತೆ ಪ್ರತಿಭಟನೆ, ಪ್ರತಿಭಟನೆಯನ್ನು ಹಿಂಸಾಚಾರವೆಂದು ಬಿಂಬಿಸಿದ್ದು, ನೂರಾರು ಮಂದಿ ರೈತರ ಸಾವು, ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ದೇಶ ದ್ರೋಹಿಗಳೆಂದು ಕರೆದಿದ್ದು, ರೈತರ ಮೇಲೆ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದು, ಪ್ರಾಯೋಜಿತ ಪ್ರತಿಭಟನೆ ಎಂದು ಬಿಂಬಿಸಿದ್ದು ಎಲ್ಲವೂ ಒಂದು ದೊಡ್ಡ ಇತಿಹಾಸ. ಕಳೆದೊಂದು ವರ್ಷದಿಂದ ನಡೆಯುತ್ತಿರುವ ಈ ಪ್ರತಿಭಟನೆಗೆ ಕಡೆಗೂ ರಾಷ್ಟ್ರಪತಿ ಅಂಕಿತ ಬಿದ್ದ ಮೇಲೂ ವಾಪಸ್ ಪಡೆದುಕೊಂಡು ರೈತರ ವಿರುದ್ಧ ತನ್ನ ಸೋಲನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಒಪ್ಪಿಕೊಂಡಿದೆ.  

ಇನ್ನು, ಕೃಷಿ ಕಾಯ್ದೆಯನ್ನು ವಿಪಕ್ಷಗಳು ಚುನಾವಣಾ ಅಸ್ತ್ರ ವನ್ನಾಗಿ ಬಳಸುವುದನ್ನು ತಪ್ಪಿಸುವುದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಆದರೇ, ಪ್ರತಿಪಕ್ಷಗಳಿಗೆ ಇದೊಂದೇ ಅಸ್ತ್ರ ಅಲ್ಲ. ಆದರೇ, ಈ ವಿವಾದಿತ ಕೃಷಿ ಕಾಯ್ದೆಗಳು ದೊಡ್ಡ ಅಸ್ತ್ರವಾಗಿತ್ತು ಎನ್ನುವುದು ಸತ್ಯ. ಒಟ್ಟಿನಲ್ಲಿ, ಕೇಂದ್ರ ಸರ್ಕಾರ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಲಾಗುತ್ತದೆ ಎಂದು ಹೇಳಿದ್ದು, ಪೂರ್ಣವಾಗಿ ಹಿಂಪಡೆಯುತ್ತದೆಯೇ ಅಥವಾ ತಿದ್ದುಪಡಿಯನ್ನು ಮಾತ್ರ ವಾಪಾಸ್ ಪಡೆಯುತ್ತದೆಯೇ ಎನ್ನುವುದರ ಬಗ್ಗೆ ಕುತೂಹಲ ಸೃಷ್ಟಿಸಿದೆ. 

-ಶ್ರೀರಾಜ್ ವಕ್ವಾಡಿ  


Tuesday, November 9, 2021

ಮತ್ತೊಂದು ಹೊಸ ಬದಲಾವಣೆಯತ್ತ ರಾಜ್ಯ ಬಿಜೆಪಿ..!?


 

ಹಾನಗಲ್ ಸೋಲು | ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ ಔಟ್..? | ಬಿಎಸ್.ವೈ ಪುತ್ರನಿಗೆ ಲಾಭ..?

“ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ” ಎಂಬ ಮಾತು ರಾಜ್ಯ ಬಿಜೆಪಿಯಲ್ಲಂತೂ ಒಂದು ರೀತಿಯಲ್ಲಿ ಅದು ಸಂಪ್ರದಾಯದ ಮಾತಿದ್ದಂತೆ. ನಾಯಕತ್ವದ ಬದಲಾವಣೆಯೇ ಇಲ್ಲ ಎಂದು ಹೇಳುತ್ತಿರುವಾಗಲೇ ರಾಜ್ಯ ಬಿಜೆಪಿಯಲ್ಲಾದ ಬದಲಾವಣೆಗಳು ಒಂದು ದೊಡ್ಡ ಇತಿಹಾಸವೇ ಸರಿ. “ನಾಯಕತ್ವ”ದ ವಿಚಾರದಲ್ಲಿ ಅತ್ಯಂತ ಗೊಂದಲ ಹಾಗೂ ವಿವಾದ ಸೃಷ್ಟಿ ಮಾಡಿಕೊಂಡ ರಾಜಕೀಯ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಈಗ ಮತ್ತೆ ರಾಜ್ಯ ಬಿಜೆಪಿಯ ಪಡಸಾಲೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರ ನಿಧಾನಕ್ಕೆ ಮುನ್ನೆಲೆಗೆ ಬಂದಿದೆ. 

ಹೌದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ಹೈಕಮಾಂಡ್ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ನಳೀನ್ ಕುಮಾರ್ ಕಟೀಲ್ ಅವರ ಹೆಗಲಿಗೆ ಹೊರಸಿದ್ದಾಗಲೇ ಯಡಿಯೂರಪ್ಪ ಒಳಗೊಳಗೆ ಮುನಿಸಿಕೊಂಡಿದ್ದ ವಿಚಾರ ನಿಮಗೆ ಗೊತ್ತಿರದೇ ಇಲ್ಲ ಬಿಡಿ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಮಗ ವಿಜಯೇಂದ್ರ ಅವರ ಪಾಲಿಗೆ ದೊರಕಿಸಿ ಕೊಡಬೇಕು ಎಂಬ ಬಯಕೆ ಮಾನ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರಲ್ಲಿತ್ತು, ಆದರೇ, ದುರಾದೃಷ್ಟವೋ ಎಂಬ0ತೆ ರಾಜಕೀಯದಲ್ಲಿ ಯುಡಿಯೂರಪ್ಪನವರ ಕನಸುಗಳೆಲ್ಲಾ ಅಲ್ಲಿಂದಾದಿಯಾಗಿ ಒಂದೊ0ದೇ ವಿಫಲವಾಗುತ್ತಲೇ ಬಂತು. ಅಷ್ಟಾಗಿಯೂ ವಿಜಯೇಂದ್ರ ಯಡಿಯೂರಪ್ಪ ರಾಜ್ಯದಲ್ಲಿ ಸೂಪರ್ ಸಿಎಂ ಎಂಬ ಹಾಗೇ ಕಾರ್ಯ ನಿರ್ವಹಿಸುತ್ತಿದ್ದರ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಒಳ ಬೇಗುದಿ ಆರಂಭವಾಗಿತ್ತು. ಯಡಿಯೂರಪ್ಪರಿಗಿಂತ ವಿಜಯೇಂದ್ರ ಅವರದ್ದೇ ಪ್ರಭಾವ ಜಾಸ್ತಿಯಿತ್ತು ಎಂಬ ವಿರೋಧದ ಮಾತು ರಾಜ್ಯ ಬಿಜೆಪಿಯಲ್ಲೇ ಕೇಳಿ ಬಂದಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆದರೂ, ಯಡಿಯೂರಪ್ಪ ತಮ್ಮ ಮಗನನ್ನು ಹೇಗಾದರೂ ಮಾಡಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ವಿಪರೀತ ಪ್ರಯತ್ನ ಪಟ್ಟಿದ್ದರು.  ಮಾಜಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಸಿ. ಎಂ ಉದಾಸಿ ನಿಧನದ ಕಾರಣದಿಂದಾಗಿ ತೆರವುಗೊಂಡಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಟಿಕೇಟ್ ನನ್ನು ತಮ್ಮ ಮಗನಿಗೆ ಕೊಡಿಸಬೇಕು ಎಂಬ ಪ್ರಯತ್ನವನ್ನು ಬಿಎಸ್ ವೈ ಪಟ್ಟಿದ್ದರೂ, ಅದು ಕೂಡ ಫಲಿಸಲಿಲ್ಲ. ವಿಜಯೇಂದ್ರ ಒದ್ದಾಡಿದ್ದರೂ ನಿರೀಕ್ಷೆ ಹುಸಿಯಾಯಿತು. ಹಾನಗಲ್ ವಿಧಾನಸಭಾ ಕ್ಷೇತ್ರದ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದರಾದರೂ ಎಲ್ಲವೂ ಅದಲು ಬದಲಾಯಿತು. ಮಂತ್ರಿ ಪಟ್ಟದ ಕನಸು ಭಗ್ನವಾಯಿತು. ಈಗ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡ ನಂತರವ0ತೂ ರಾಜ್ಯಾಧ್ಯಕ್ಷ ಬದಲಾವಣೆಯ ಚರ್ಚೆ ಹುಟ್ಟಿದ್ದು, ಆ ಸ್ಥಾನಕ್ಕೆ ವಿಜಯೇಂದ್ರ ಕಣ್ಣಿಟ್ಟಿದ್ದಾರೆ, ಮಾತ್ರವಲ್ಲದೇ, ಅಧಿಕಾರದಲ್ಲಿ ಇಲ್ಲದಿದ್ದರೂ ಯಡಿಯೂರಪ್ಪ ತಮ್ಮ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದಕ್ಕೆ ಪ್ರಭಾವ ಬೀರುತ್ತಿದ್ದಾರೆ ಎಂಬ ಗುಸುಗುಸು ಮಾತು ಕೇಳಿ ಬರುತ್ತಿದೆ. 

ಬಿಜೆಪಿ ಹೈಕಮಾಂಡ್ ಗೆ ಸಮುದಾಯವೇ ಸಮಸ್ಯೆ : ರಾಜ್ಯ ಬಿಜೆಪಿಯ ಜನಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಕೂಡ ಹೌದು ಯಡಿಯೂರಪ್ಪ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಸ್ವಾಮಿಜಿಗಳು ಯಡಿಯೂರಪ್ಪ ಪರವಾಗಿ ವಹಿಸಿಕೊಂಡು ಬೀದಿಗಿಳಿದು ಮುಖ್ಯಮಂತ್ರಿ ಬದಲಾವಣೆ ಸಲ್ಲ ಎಂದು ಪ್ರಭಾವ ತೋರಿಸಿದ್ದೆಲ್ಲಾ ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಗೂ ಕೂಡ ಬಿಸಿ ಮುಟ್ಟಿಸಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೇ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಮಣಿಯದೇ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಯಡಿಯೂರಪ್ಪ ತಮ್ಮ ಸಮುದಾಯವನ್ನು ಬೆಳೆಸಿದ ನಾಯಕ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮದೂಗುವ ಮತ್ತು ಪ್ರಭಾವ ಹೊಂದಿರುವ ಇನ್ನೊಬ್ಬ ಲಿಂಗಾಯತ ನಾಯಕ ರಾಜ್ಯದಲ್ಲಿ ಇಲ್ಲ ಎಂದರೇ ತಪ್ಪಿಲ್ಲ. ಹಾಗಾಗಿ ಈ ಸಮುದಾಯದ ವಿಚಾರ ಬಿಜೆಪಿ ಹೈಕಮಾಂಡ್ ಗೆ ಒಂದು ರೀತಿಯಲ್ಲಿ ಮುಗಿಯದ ಸಮಸ್ಯೆಯಂತಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಇಳಿಸಿದ್ದು ಲಿಂಗಾಯತ ಸಮುದಾಯಕ್ಕೆ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಯಡಿಯೂರಪ್ಪರ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಅದೇ ಸಮುದಾಯದ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೈಕಮಾಂಡ್ ನೇಮಕ ಮಾಡಿದೆಯಾದರೂ, ಲಿಂಗಾಯತ ಸಮುದಾಯಕ್ಕೆ ತೃಪ್ತಿಯಿಲ್ಲ. ಆ ರೀತಿಯಲ್ಲಿ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಓಲೈಸಿಕೊಂಡಿದ್ದಾರೆ. ಯಡಿಯೂರಪ್ಪ ಮಾತಿಗೆ ಇಲ್ಲ ಎಂದು ಲಿಂಗಾಯತ ಸಮುದಾಯ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ವಯಸ್ಸಿನ ಕಾರಣಕ್ಕೆ ಮತ್ತೆ ಯಡಿಯೂರಪ್ಪ ಅವರಿಗೆ ಅಧಿಕಾರ ದೊರಕದಿದ್ದರೂ, ಅವರ ಮಗನಿಗೆ ಸ್ಥಾನ ಸಿಗಬೇಕು ಎಂಬ ದೃಷ್ಟಿಯಿಂದ ಸಮುದಾಯದ ಬೆಂಬಲ ಪಡೆಯದೇ ಇರುವುದಿಲ್ಲ. ಆ ಎಲ್ಲಾ ಕಾರ್ಯಗಳಿಗೆ ಈಗಾಗಲೇ ನಾಂದಿ ಸಿಕ್ಕಿದೆ ಎಂಬ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮತ್ತು ತಂದೆಯವರ ಕಾಲವಾದ ಮೇಲೂ ಲಿಂಗಾಯತ ಸಮುದಾಯದ ಓಲೈಕೆ ರಾಜಕಾರಣವನ್ನು ಪುತ್ರ ವಿಜಯೇಂದ್ರ ಯಡಿಯೂರಪ್ಪ ಮುಂದುವರಿಸಿಕೊ0ಡು ಹೋಗುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ಬಿಜೆಪಿಗೆ ಕರ್ನಾಟಕದಲ್ಲಿ ಯಾವುದೇ ವಿಚಾರದಲ್ಲಿ ಮುನ್ನಡೆಯುವುದಕ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎಂದು ಕಾಣಿಸುತ್ತಿದೆ.    

ಹಾನಗಲ್ ಸೋಲು : ವಿಜಯೇಂದ್ರಗೆ ಲಾಭ ..?: ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಕಂಡ ಸೋಲಿಗೆ ರಾಜ್ಯದ ಬಿಜೆಪಿ ನಾಯಕತ್ವದ ಬಗ್ಗೆ ಹೈಕಮಾಂಡ್ ತುಸು ಮುನಿಸಿಕೊಂಡ0ತೆ ಕಾಣಿಸುತ್ತಿದೆ. ಮಧ್ಯ ಪ್ರದೇಶ, ತೆಲಂಗಾಣ, ಅಸ್ಸಾಂ ಇನ್ನಿತರ ಕಡೆಗಳಲ್ಲಿನ ಚುನಾವಣೆಗಳಲ್ಲಿನ ಗೆಲುವಿಗೆ ಕೇಂದ್ರ ಶುಭಾಶಯ ಹೇಳಿದೆ. ಆದರೇ, ಕರ್ನಾಟಕದ ವಿಚಾರಕ್ಕೆ ಶುಭಾಶಯಗಳು ಇಲ್ಲವೇ ಇಲ್ಲ. ಇದು ಕರ್ನಾಟಕದ ರಾಜ್ಯ ಬಿಜೆಪಿಯ ಬಗ್ಗೆ ಅಸಮಾದಾನವನ್ನು ಸೂಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಾದ ಸೋಲಿಗೆ ಮಾಧ್ಯಮಗಳೆದುರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಸಾಮೂಹಿಕ ನಾಯಕತ್ವ” ಇಲ್ಲಿದ್ದಿದ್ದು ಎಂದು ಹೇಳಿ ಜಾರಿಕೊಂಡರೂ, ಹೈಕಮಾಂಡ್ ಕೇಳಿದ ಪ್ರಶ್ನೆಗೆ ಸಿಎಂ ಹೈಕಮಾಂಡ್ ಗೆ ಸಲ್ಲಿಸಿರುವ ಉಪ ಚುನಾವಣೆಯ ಸಂಪೂರ್ಣ ಕಾರ್ಯವೈಖರಿಯ ವರದಿ ಕೆಲವರ ಪಾಲಿಗೆ ಮುಳುವಾಗಲಿದೆಯೇ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಹಾನಗಲ್ ವಿಧಾನಸಭಾ ಕ್ಷೇತ್ರ ಹೇಳಿಕೇಳಿ ಪಂಚಮಸಾಲಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶ. ಸುಮಾರು ೬೦,೦೦೦ಕ್ಕೂ ಅಧಿಕ ಮತದಾರರು ಪಂಚಮಸಾಲಿ ಸಮುದಾಯದವರೇ ಆಗಿದ್ದಾರೆ. ಆದರೇ, ರಾಜಕೀಯದ ಸಹಜ ಸಮುದಾಯದ ಓಲೈಕೆಗೆ ರಾಜ್ಯದ ಪ್ರಮುಖ ಆ ಸಮುದಾಯದ ನಾಯಕರೇ ಹಾನಗಲ್ ವಿಧಾನಸಭಾ ಉಪ ಚುನಾವಣೆಗೆ ಸಂಬ0ಧಿಸಿದ0ತೆ ಮೌನವಾಗಿರುವುದೇ ಸೋಲಿಗೆ ಕಾರಣವಾಗಿದೆಯಾ..? ಎಂಬ ಮತ್ತೊಂದು ಪ್ರಶ್ನೆಯನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದ ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ, ಜಗದೀಶ್ ಶೆಟ್ಟರ್ ಚುನಾವಣೆಯ ಪ್ರಚಾರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಡಿಸಿಕೊಳ್ಳಲಾಗದ ಚಕ್ರವ್ಯೂಹದೊಳಗೆ ಸಿಲುಕಿಸಿದ ಹಾಗಾಯ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇನ್ನು, ಹಾನಗಲ್ ವಿಚಾರಕ್ಕೆ ಸಂಬ0ಧಿಸಿದ0ತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಯಾವುದೇ ಲಾಭ ಆಗಿಲ್ಲ ಎಂಬ ಅತೃಪ್ತಿಯ ಮಾತುಗಳು ಕಟೀಲ್ ವಿರುದ್ಧ ಈಗ ಕೇಳಿ ಬರುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತಾಡಿದ್ದಾರೆ ಎಂಬ ಆಡಿಯೋ ಗೂ ಹಾಗೂ ಈ ಹಾನಗಲ್ ವಿಚಾರಕ್ಕೆ ಎಲ್ಲೋ ಒಂದು ಕಡೆಯಲ್ಲಿ ಲಿಂಕ್ ಆದ ಹಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿದೆ. ಈ ದೂರು ಯಡಿಯೂರಪ್ಪ ಅವರ ಪರ ಬಣದಿಂದಲೇ ಕೇಳಿಬರುತ್ತಿರುವುದರಿಂದ ಅಧಿಕಾರದಿಂದ ಹೊರಗೆ ಇದ್ದರೂ ಬಿಎಸ್ ವೈ ಪ್ರಭಾವ ಇನ್ನೂ ಬಿಜೆಪಿಯಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇತ್ತ, ಈ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪ ಅವರ ಋಣ ಬೊಮ್ಮಾಯಿ ಅವರಿಗೆ ಇರುವುದರಿಂದ ಯಡಿಯೂರಪ್ಪ ವಿರುದ್ಧವಾಗಿಯೂ ಬೊಮ್ಮಾಯಿ ನಡೆದುಕೊಳ್ಳುವ ಹಾಗಿಲ್ಲ. ಅತ್ತ, ರಾಜ್ಯಾಧ್ಯಕ್ಷರ ವಿರುದ್ಧದ ಧ್ವನಿಯನ್ನೂ ಹೊರಹಾಕುವಂತಿಲ್ಲ. ಈ ಎಲ್ಲಾ ಮೈನಸ್ ಪಾಯಿಂಟ್ ಗಳನ್ನು ವಿಜಯೇಂದ್ರ ಸಾಫ್ಟ್ ಆಗಿ ಲಾಭ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿಯೇ ಕೇಳಿಬರುತ್ತಿದೆ.

ಕಟೀಲ್ ಗೆ ಆಡಿಯೋ ತಂದ ಆಪತ್ತು..?! : ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು  ಮಾತಾಡಿದ್ದು ಎಂದು ಹೇಳಲಾಗಿದ್ದ ಆಡಿಯೋ ವೈರಲ್ ಆದದ್ದು, ರಾಜ್ಯ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದಿದ್ದ0ತೂ ಸುಳ್ಳಲ್ಲ. ಆ ಸಮಸ್ಯೆಯನ್ನು ಹೈಕಮಾಂಡ್ ಗೆ ಬಹಳ ಸಾಫ್ಟ್ ಆಗಿಯೇ ನಿಭಾಯಿಸಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಅನಿವಾರ್ಯತೆಯನ್ನು ತಂದೊಡ್ಡಿತು. ಆ ನಂತರ ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಅವರ ಕಾರ್ಯಚಟುವಟಿಕೆಗಳು ಹಾಗೂ ಹಾನಗಲ್ ಉಪ ಚುನಾವಣೆಯ ವಿಚಾರ ಎಲ್ಲವೂ ಸೇರಿ ಹೈಕಮಾಂಡ್ ಗೂ ಕೂಡ ಕಟೀಲ್ ಮೇಲೆ ಅಸಮಾಧಾನ ಇರುವುದು ನೇರವಾಗಿ ಕಾಣಿಸುತ್ತಿದೆ. ಇದು ಬಹುಶಃ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಆಪತ್ತು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. 

ಇನ್ನು, ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರದ ಬಗ್ಗೆ ಹೈಕಮಾಂಡ್ ಕೂಡ ಪ್ಲ್ಯಾನಿಂಗ್ ನಲ್ಲಿದ್ದು, ರಾಜ್ಯದ ವೈಬ್ರೆಂಟ್ ನಾಯಕನೋರ್ವನಿಗೆ ರಾಜ್ಯ ಬಿಜೆಪಿಯ ಹೊಣೆಗಾರಿಕೆಯನ್ನು ನೀಡಬೇಕು ಎಂಬ ಅಂದಾಜಿನಲ್ಲಿದೆ. ಏನೇ ಆದರೂ, ಲಿಂಗಾಯತ ಸಮುದಾಯವನ್ನು ತೊರೆದು ಹೈಕಮಾಂಡ್ ಮುಂದೆ ಹೋಗುವ ಹಾಗೆ ಖಂಡಿತ ಸಾಧ್ಯವಿಲ್ಲ. ಲಿಂಗಾಯತ ಸಮುದಾಯದೊಂದಿಗೆ ಹಿಂದುಳಿದ ಸಮುದಾಯಗಳ ಮತದಾರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಒಬ್ಬ ಪ್ರಭಾವಿ ನಾಯಕನಿಗೆ ರಾಜ್ಯಾಧ್ಯಕ್ಷ ಹೊಣೆಗಾರಿಕೆಯನ್ನು ಹೈಕಮಾಂಡ್ ಹೊರಿಸಬೇಕಾಗಿದೆ. ಇನ್ನು, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ವೈ ಅವರನ್ನು ಹೊರತಾಗಿ ಚುನಾವಣೆಯನ್ನು ಎದುರಿಸುವುದಕ್ಕೆ ಸದ್ಯಕ್ಕಂತೂ ಬಿಜೆಪಿಗೆ ಸಾಧ್ಯವಿಲ್ಲ ಎಂಬುವುದು ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ. ರಾಜ್ಯದಲ್ಲಿ ಯಾವುದೇ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಅಸಮಾಧಾನ ಉಂಟಾಗುವ ಯಾವುದೇ ಬೆಳವಣಿಗೆ ಆಗದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವುದು ಮುಖ್ಯಮಂತ್ರಿ ಬದಲಾವಣೆಯ ಸಂದರ್ಭದಲ್ಲೇ ಗೊತ್ತಾಗಿದೆ. ಇನ್ನು ಮುಂದೆಯೂ, ಯಡಿಯೂರಪ್ಪ ಅವರ ಕಾಲದವರೆಗೂ ಕೂಡ ಯಡಿಯೂರಪ್ಪರನ್ನು ನಿರ್ಲಕ್ಷಿಸಿ ಹೋಗುವುದಕ್ಕೆ ಸಾಧ್ಯವಿಲ್ಲ. ಶೀಘ್ರದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಈಗ ಮುನ್ನೆಲೆಯಲ್ಲಿದ್ದು, ಹೊಸ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಿಸಿದರೇ, ಅದು ಕೂಡ ಯಡಿಯೂರಪ್ಪರಿಗೆ ಸಮಾಧಾನ ತರುವ ಹಾಗೆಯೇ ಇರಲಿದೆ ಎಂಬ ವಿಶ್ಲೇಷಣೆ ಮಾಡಬಹುದಾಗಿದೆ. ಎನ್ನುವಲ್ಲಿಗೆ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ ಯಡಿಯೂರಪ್ಪ ಪ್ರಯತ್ನದಲ್ಲಿದ್ದಾರೆ ಎನ್ನುವುದಂತೂ ಸತ್ಯ. 

ಒಟ್ಟಿನಲ್ಲಿ, “ನಾಯಕತ್ವದ” ಅಸಮಾಧಾನ ಇನ್ನೂ ರಾಜ್ಯ ಬಿಜೆಪಿಯಲ್ಲಿದ್ದು, ರಾಜ್ಯದ ಬಿಜೆಪಿಯ ಹೊಸ ಸಾರಥಿ ಯಾರಾಗ್ತಾರೆ..? ಅವರ ತಂಡ ಹೇಗೆ ರಾಜ್ಯದಲ್ಲಿ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂಬುವುದರ ಬಗ್ಗೆ ಸದ್ಯದ ಕುತೂಹಲವಾಗಿದೆ. 

-ಶ್ರೀರಾಜ್ ವಕ್ವಾಡಿ        


Saturday, November 6, 2021

ಸಮಾಜದ ರಾಕ್ಷಸೀಯತೆಯನ್ನು ತೆರೆದಿಟ್ಟ “ಜೈ ಭೀಮ್”



ಸಮಾಜವನ್ನು ಇಂದಿಗೂ ಅತಂತ್ಯ ಭೀಕರವಾಗಿ ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಶೋಷಿತರ, ಸಮಾಜದ ಅತ್ಯಂತ ಕೆಳ ಅಂಚಿನಲ್ಲಿರುವವರ ಧ್ವನಿ ಅಡಗಿಸಿ ಮೆರೆದಾಡುವ ಉಳ್ಳವರ, ಅಧಿಕಾರಿಗಳ ದರ್ಪವೂ ಒಂದು. ಮಾತ್ರವಲ್ಲದೇ, ಅದು ಸಮಾಜಕ್ಕೆ ಘಾತುಕವೂ ಹೌದು. ನಾವೆಲ್ಲರೂ ಇಂದಿಗೂ ಆಧುನೀಕತೆ, ಶತಮಾನಗಳಿಂದ ಬಳುವಳಿಯಂತೆ ಬಂದ ಅಭಿವೃದ್ಧಿ, ಸ್ವಾತಂತ್ರದ ಸ್ವೀಕಾರದ ದೊಡ್ಡ ಭ್ರಮೆಯಲ್ಲಿಯೇ ಇದ್ದೇವೆ ಅಂತನ್ನಿಸುತ್ತಿದೆ. ಸಮಾಜಕ್ಕೆ ಎರಡು ಮುಖ ಎನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತಿದೆ. ಒಂದು ಅಭಿವೃದ್ಧಿಯಲ್ಲದ “ಅಭಿವೃದ್ಧಿ ”, ಇನ್ನೊಂದು ಅಭಿವೃದ್ಧಿಯಾಗಲೇಬೇಕಾಗಿರುವವುಗಳ ವಿನಾಶ. ಅಧಿಕಾರದ ಧೋರಣೆ, ದುಃಸ್ಥಿತಿ, ಅಸ್ವಸ್ಥತೆ, ವ್ಯವಸ್ಥೆಯ ಭಂಜನೆ, ವಾಸ್ತವದ ರಾಕ್ಷಸೀಯತೆ, ಅವ್ಯಕ್ತ ಆತಂಕ, ನ್ಯಾಯ, ಅನ್ಯಾಯ, ನೈರಾಶ್ಯದ ನಡುವಿನ ಆಶಾವಾದ, ನೆತ್ತರು, ಮೌನ, ಸಾವು, ಗದ್ಗದಿತ ಧ್ವನಿಗಳ ದೃಶ್ಯ ರೂಪವೇ “ಜೈ ಭೀಮ್”.

ಶೋಷಿತ ಸಮುದಾಯದ ಕಣ್ಣೀರಿನ ಕಥೆ ಒಂದೆಡೆಯಾದರೇ, ಆ ನೋವಿನ ಕಥೆಗೆ ಧ್ವನಿಯಾಗುವ ನ್ಯಾಯವಾದಿ ಚಂದ್ರುವಿನ ವೃತ್ತಿಪರತೆಯ ಜೊತೆಜೊತೆಗೆ ಸಾಗುವ ಸಿನೆಮಾ ನೋಡುಗನನ್ನು ಗಂಭೀರ ಚಿಂತನೆಗೆ ದೂಡುತ್ತದೆ. ಪೊಲೀಸರ ಉಗ್ರ ಕಪಿಮುಷ್ಟಿಯೊಳಗೆ ಸಿಲುಕಿ ನರಳುವ ಇರುಳರು ಎಂಬ ಬುಡಕಟ್ಟು ಜನಾಂಗದ ನತದೃಷ್ಟ ಬದುಕಿನ ಸಂಕಷ್ಟ ಇತಿಹಾಸಕ್ಕೆ ಈ ಸಿನೆಮಾ ಕನ್ನಡಿ ಹಿಡಿದಿದೆ. ಇಂತಹ ನತದೃಷ್ಟ ಸಮುದಾಯಗಳ ಧ್ವನಿಗಳು ಉಸಿರಾಡುವ ಬಿಸಿ ಗಾಳಿಯಿಂದಲೇ ಈ ದೇಶ ಇಂದು ಅಭಿವೃದ್ಧಿಯ ಜಪ-ನೆಪದಲ್ಲಿಯೇ ಬದುಕುತ್ತಿದೆ ಎನ್ನುವುದು ದೊಡ್ಡ ದುರಂತವೇ ಸರಿ. 

ಬುಡಕಟ್ಟು ಜನಾಂಗಗಳ ಅಥವಾ ಇಂತಹ ದಮನಿತ ಸಮುದಾಯಗಳ ನಿಟ್ಟುಸಿರಿನ ಕನಸುಗಳನ್ನು ಹೊಸಕಿ ಹಾಕುವ ಉಗ್ರ ಸ್ವರೂಪವೇ ಈ ಸೋ ಕಾಲ್ಡ್ ನಾಗರೀಕತೆಯೋ ಏನೋ ಎಂಬಷ್ಟರ ಮಟ್ಟಿಗೆ ಅಸಹ್ಯ ಹುಟ್ಟಿಸುತ್ತಿದೆ. ದಮನಿತ ವ್ಯಕ್ತಿಯೋರ್ವನ ಅಮಾನುಷ ಹತ್ಯೆಯ ಪ್ರಕರಣದೊಂದಿಗೆ ಸಾಗುವ ನ್ಯಾಯವಾದಿ ಚಂದ್ರುವಿನ ಇಂಟ್ರೆಸ್ಟಿಂಗ್ ಹೋರಾಟ, ತನಿಖೆ, ಸತ್ಯವನ್ನು ಸುಳ್ಳು ಮಾಡುವ, ಸುಳ್ಳನ್ನು ಸತ್ಯ ಮಾಡುವ ಹಣ, ಅಧಿಕಾರ, ದರ್ಪಗಳ ನಡುವೆ ಗೆಲ್ಲುವ ಕಥೆ ನಿಜಕ್ಕೂ ರೋಮಾಂಚನಕಾರಿಯಾಗಿದೆ.

ಸಮಾಜಕ್ಕೆ ಇದು ನಿನ್ನದೇ ಪ್ರತಿ ರೂಪ ಎಂದು ತೋರಿಸುವ ಹಾಗೆ ಚಿತ್ರ ಮೂಡಿ ಬಂದಿದೆ. ಸಿನೆಮಾ ತಂಡ ಕಥೆಯ ಒಂದಿಷ್ಟು ದೃಶ್ಯಗಳನ್ನು ತುಸು ಹೆಚ್ಚೇ ವೈಭವೀಕರಿಸಿರಬಹುದು ಎಂದು ತಿಳಿದುಕೊಂಡರೂ ಕೂಡ ಸಮಾಜ ಇಂದು ಅಂತಹ ತಗ್ಗಿದ(ತಗ್ಗಿಸಿದ) ಧ್ವನಿಗಳ ಶೋಷಣೆಯಲ್ಲಿಯೇ ನಿರತವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಂವಿಧಾನ, ಹಕ್ಕು, ಅಭಿವ್ಯಕ್ತಿ, ನ್ಯಾಯ ಇವೆಲ್ಲವೂ ಸತ್ತಿವೆಯೇ, ಬದುಕಿವೆಯೇ ಎಂಬ ಗಂಭೀರ ಪ್ರಶ್ನೆಯೊಂದನ್ನು ಈ ಸಿನೆಮಾ ಪ್ರತಿಯೊಬ್ಬ ನೋಡುಗನ ಮನಸ್ಸಿಗೆ ಒಮ್ಮೆ ಕೇಳಿ ಬೀಡುತ್ತದೆ. 

ಟೀಕೆಗೆ ಬಹುಶಃ ಈ ಸಿನೆಮಾ ಅವಕಾಶ ಮಾಡಿಕೊಟ್ಟಿಲ್ಲ. ಆದರೇ, ಈ ಸಿನೆಮಾ ಆಗಲೇ ಬೇಕಾದ ಒಂದು ಆತ್ಮಾವಲೋಕನಕ್ಕೆ ದೊಡ್ಡ ಅವಕಾಶವನ್ನು ಮಾಡಿಕೊಟ್ಟಿದೆ. ಸಿನೆಮಾದ ಎರಡನೇ ಭಾಗವಂತೂ ಒಂದು ದೀರ್ಘ ಮೌನ ಹಾಗೂ ಸೂಕ್ಷ್ಮ ಸಂವೇದನೆಗೆ ಒಳಪಡಿಸುತ್ತದೆ ಎಂದರೇ ತಪ್ಪಿಲ್ಲ. ಸಮಾಜದ ಕೆಳಸ್ತರದಲ್ಲಿರುವ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಟ್ಟಿತೇ..? ಎಂಬ ನಮ್ಮ ನಿಮ್ಮೆಲ್ಲರ ಸಹಜ ಪ್ರಶ್ನೆಗೆ ಉತ್ತರ.. ಖಂಡಿತ ಇಲ್ಲ. ಆದರೇ, ಅಂತಹ ಅದೆಷ್ಟೋ ಸಮುದಾಯಗಳ ಆರ್ದ್ರ ಸ್ಥಿತಿಯ ಬಗ್ಗೆ ಮತ್ತೆ ಸಮಾಜಕ್ಕೆ ನೆನಪಿಸಿಕೊಟ್ಟಿದ್ದಂತೂ ನಿಜ. ಸಮಾಜ ತನ್ನನ್ನು ತಾನು ಗಂಭೀರವಾಗಿ ಪ್ರಶ್ನಿಸಿಕೊಳ್ಳುವಂತೆ ಮಾಡಿದ್ದಂತೂ ಸತ್ಯ. 

ಸಿನೆಮಾ ತಮಿಳಿನ ಮೂಲವಾದರೂ ಹಾಗನ್ನಿಸುವುದಿಲ್ಲ. ಕಥೆಯ ನಿರೂಪಣಾ ಶೈಲಿ ತುಂಬಾ ಇಷ್ಟವಾಗುವುದರಲ್ಲಿ ಎರಡನೇ ಮಾತಿಲ್ಲ. ಒಂದಿನಿತೂ ಕುತೂಹಲಕ್ಕೆ ಧಕ್ಕೆ ತಾರದ ರೀತಿಯಲ್ಲಿ ನಿರ್ದೇಶಕ ಟಿ. ಜೆ ಜ್ಞಾನವೇಲ್ ಯಶಸ್ವಿಯಾಗಿದ್ದಾರೆ. ಎಸ್ ಆರ್ ಕಥೀರ್ ಅವರ ಸಿನೆಮಾಟೋಗ್ರಾಫಿ ಅದ್ಭುತ. ಚಂದ್ರುವಿನ ಪಾತ್ರ ನಿರ್ವಹಿಸಿದ ತಮಿಳಿನ ಸ್ಟಾರ್ ನಟ ಸೂರ್ಯ, ತನಿಖಾಧಿಕಾರಿ ಐಜಿಪಿ ಪೆರುಮಾಳ್ ಪಾತ್ರದಲ್ಲಿ ಕಾಣಿಸಿಕೊಂಡ ಬಹುಭಾಷಾ ನಟ ಪ್ರಕಾಶ್ ರೈ, ಕೆಂಚರಾಜು ಪಾತ್ರ ನಿಭಾಯಿಸಿದ ಕೆ. ಮಣಿಕಂಡನ್ ಅವರ ಮನೋಜ್ಞ ಅಭಿನಯಕ್ಕೆ ಭೇಷ್ ಹೇಳಲೇ ಬೇಕು. ಸಿನೆಮಾ ಎಲ್ಲಿಯೂ ಕುತೂಹಲವನ್ನು ಕಿತ್ತುಕೊಳ್ಳದೇ, ನೋಡುಗನ ಮನಸ್ಸನ್ನು ಹಿಡಿದಿಟುಕೊಳ್ಳುತ್ತದೆ. ಮಾತ್ರವಲ್ಲದೇ, ಈ ಸಿನೆಮಾ ಕಥಾವಸ್ತು ಆಯ್ಕೆಯ ಗಂಭೀರ ಮನಸ್ಥಿತಿಯ ಪ್ರತಿರೂಪವಾಗಿ ಮೂಡಿಬಂದಿದೆ ಎನ್ನುವುದು ಗರಿಷ್ಠೀಕರಣವಲ್ಲ. ಥ್ಯಾಂಕ್ಯೂ.  

-ಶ್ರೀರಾಜ್ ವಕ್ವಾಡಿ