Thursday, April 24, 2025

ಕಾಶ್ಮೀರ ಘನ ಘೋರ : ಆತ್ಮಾವಲೋಕನಕ್ಕೆ ಇದು ಸೂಕ್ತ ಸಮಯ


ಧಾರ್ಮಿಕ ಸಂಘರ್ಷವನ್ನು ಪ್ರಚೋದಿಸುವ ಬೇರು ನಿರ್ಮೂಲನೆಯಾಗಲಿ !

ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ನರಮೇಧ ಅತ್ಯಂತ ಆಘಾತಕಾರಿ. ಇದೊಂದು ಹೃದಯ ವಿದ್ರಾವಕ ಘಟನೆ. ಪ್ರಕ್ಷುಬ್ಧ ರಾಜ್ಯದಲ್ಲಿ ಇದುವರೆಗೆ ನಡೆದ ಎಲ್ಲಾ ದಾಳಿಗಳಲ್ಲಿ ಇದು ಅತ್ಯಂತ ಭೀಕರವಾಗಿದೆ. ಇದು ಆತ್ಮಾವಲೋಕನಕ್ಕೆ ಅತ್ಯಂತ ಸೂಕ್ತ ಸಮಯವಾಗಿದೆ. ಈ ಬರ್ಬರ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಕ್ಕಷ್ಟೇ ಅಲ್ಲ, ನಮಗೆ ನಾವೇ ಸಂತಾಪ ಸೂಚಿಸಿಕೊಳ್ಳುವಂತ ಸ್ಥಿತಿ ಇದು. ನಮ್ಮ ಮೌನ ಮತ್ತು ಸೌಜನ್ಯ ಉಗ್ರರ ದರ್ಪಕ್ಕೆ ಅನುವು ಮಾಡಿಕೊಡಬಹುದು ಎಂಬುವುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿ ಎಂದರೇ ತಪ್ಪಿಲ್ಲ.

ಭಯೋತ್ಪಾದಕ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ. ʼಹೇಯ ಕೃತ್ಯ ಎಸಗಿದವರನ್ನು ಬಿಡದೆ ಸಾಯಿಸಬೇಕು ಎಂಬ ಮನಸ್ಥಿತಿ ದೇಶದ ನಾಗರಿಕರಲ್ಲಿ ಹುಟ್ಟಿದೆʼ. ಇಂತಹದ್ದೊಂದು ಭಯೋತ್ಪಾದಕ ದಾಳಿಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯಲ್ಲಿ ಅಭಿಪ್ರಾಯಗಳು ಮೇಲೆದ್ದಿವೆ. ಆದಾಗ್ಯೂ, ಪ್ರಬುದ್ಧ ಭಾರತೀಯರಾಗಿ ನಾವು ದ್ವೇಷ ಪ್ರಚೋದಕರ ಬಲೆಗೆ ಬೀಳುವ ಮೊದಲು ಆಳ-ಅಗಲ ಅರ್ಥೈಸಿಕೊಳ್ಳಬೇಕಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ದೇಶದದಲ್ಲಿ ಧಾರ್ಮಿಕ ಸಂಘರ್ಷಕ್ಕೆ ಕಾರಣಾಗದಂತೆ ನೋಡಿಕೊಳ್ಳುವುದು ಕೂಡ ಸರ್ಕಾರದ ಜವಾಬ್ದಾರಿ. ಉಗ್ರರು ಯಾರೇ ಆದರೂ ಉಗ್ರರೇ ಹೊರತು ಬೇರೆ ಏನಲ್ಲ. ಒಂದು ಧರ್ಮ ಮತ್ತು ಸಿದ್ಧಾಂತದ ಉಳಿವಿಗಾಗಿ ಇನ್ನೊಂದು ಧರ್ಮ ಮತ್ತು ಸಿದ್ಧಾಂತದವರ ವಿರುದ್ಧ ದ್ವೇಷ ಬೆಳೆಸಿಕೊಳ್ಳುವಂತೆ ಮಾಡುವ ಮನಸ್ಥಿತಿಯೇ ಇಂತಹ ದಾಳಿಗೆ ಮೂಲ ಕಾರಣವಾಗುತ್ತಿದೆ. ಭಾರತೀಯರ ಮೇಲೆ ಉಗ್ರರಲ್ಲಿ ಇಂತಹ ದ್ವೇಷ ಹುಟ್ಟುವುದಕ್ಕೆ ಏನು ಕಾರಣ ಎನ್ನುವ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಂಡಾಗ ಬಹುಶಃ ಉತ್ತರ ಸಿಗುತ್ತದೆ ಅನ್ನಿಸುತ್ತದೆ !  

ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವುದೇ ಈ ಘಟನೆಯ ಬಳಿಕ ನಮ್ಮ ಮುಂದೆ ಇರುವ ಮೊದಲ ಆಲೋಚನೆ. ಯುದ್ಧ ನಾವು ಸಿದ್ಧವಿಲ್ಲದೆ ಸಾರಲು ಸಾಧ್ಯವಾಗುವಂತಹ ಪಿಕ್ನಿಕ್ ಅಲ್ಲ. ಅದು ಅಂದುಕೊಂಡಷ್ಟು ಸುಲಭವಲ್ಲ. ಅದರ ಮುಂದಿನ ಪರಿಣಾಮವೂ ಬಹಳ ಗಂಭೀರ. 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆದಿತ್ತು. ಡಿಸೆಂಬರ್‌ ೧೩, ೨೦೦೧ರಂದು ಲಷ್ಕರ್‌ ಎ ತೊಯ್ಬಾ ಮತ್ತು ಜೈಶ್‌ ಎ ಮೊಹಮ್ಮದ್‌ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ದೆಹಲಿ ಪೊಲೀಸ್‌ ಸಿಬ್ಬಂದಿ, ಕೇಂದ್ರ ಮೀಸಲು ಪೊಲೀಸ್‌ ಪಡೆಯ ಮಹಿಳಾ ಉದ್ಯೋಗಿ ಹಾಗೂ ಇಬ್ಬರು ಸಂಸತ್‌ ಸಿಬ್ಬಂದಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ಓರ್ವ ನೌಕರ ಹಾಗೂ ಫೋಟೋ ಜರ್ನಲಿಸ್ಟ್‌ ಕೂಡ ಸಾವನ್ನಪ್ಪಿದ್ದರು. ಪ್ರತಿಕಾರದ ಭಾಗವಾಗಿ ಭಾರತ 'ಪ್ರಕರ್ಮ್' ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪಾಕಿಸ್ತಾನದ ಉಗ್ರರ ಮೇಲೆ ಸಂಪೂರ್ಣ ಯುದ್ಧ ಸಾರುವ ಸಂಕಲ್ಪದೊಂದಿಗೆ ಭಾರತೀಯ ಸೇನೆ ಹಲವು ದಿನಗಳವರೆಗೆ ಹೋರಾಡಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕ ದಾಳಿ ಹೆಚ್ಚಾಗಿದೆ ಎಂಬ ವರದಿಗಳಿವೆ. ಆದಾಗ್ಯೂ ಉಗ್ರರ ಭಯೋತ್ಪಾದಕ ದಾಳಿ ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಕೇಂದ್ರ ಸರ್ಕಾರ ಸುಖಾಸುಮ್ಮನೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ೩೭೦ನೇ ವಿಧಿ ರದ್ದು ಹಾಗೂ ಪುಲ್ವಾಮ ದಾಳಿ ನಂತರ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರವಾದ ಭಯೋತ್ಪಾದಕ ದಾಳಿ ಇದು. ಇದರ  ಹಿಂದೆ ʼಭದ್ರತಾ ಲೋಪʼ ಎಂಬ ವಿಚಾರ ಇದ್ದೇ ಇದೆ. ಇದು ಮುಗಿಯದ ಸಮಸ್ಯೆಯಂತೆಯೇ ನಮ್ಮ ನಡುವೆ ಉಳಿದು ಹೋಗುತ್ತಿದೆ ಎಂದು ಅನ್ನಿಸುತ್ತಿದೆ.

ಹೀಗೆ ಭದ್ರತಾ ಲೋಪದ ಕಾರಣದಿಂದ ಅನೇಕ ನೋವನ್ನು ಈಗಾಗಲೇ ಭಾರತ ಕಂಡಿದೆ. ಇವೆಲ್ಲದಕ್ಕೂ ಸರ್ಕಾರವೇ ಮೂಲ ಕಾರಣ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವತಃ ಭದ್ರತಾ ಲೋಪಕ್ಕೆ ಬಲಿಯಾದರು. ನರಸಿಂಹ ರಾವ್‌ ಪ್ರಧಾನಿಯಾಗಿದ್ದ ಆಡಳಿತಾವಧಿಯಲ್ಲಿ ಭದ್ರತಾ ವೈಫಲ್ಯದಿಂದ ಬಾಬರಿ ಮಸೀದಿ ಧ್ವಂಸವಾಯಿತು, ವಾಜಪೇಯಿ ಅವರು ಪ್ರಧಾನಿಯಾಗಿದ್ದ ಆಡಳಿತಾವಧಿಯಲ್ಲಿ ಭದ್ರತಾ ವೈಫಲ್ಯದಿಂದ ಲಷ್ಕರ್‌ ಎ ತೊಯ್ಬಾ ಮತ್ತು ಜೈಶ್‌ ಎ ಮೊಹಮ್ಮದ್‌ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು, ಮನಮೋಹನ್‌ ಸಿಂಗ್‌  ಪ್ರಧಾನಿಯಾಗಿದ್ದ ಆಡಳಿತಾವಧಿಯಲ್ಲಿ ಮುಂಬಯಿ ಮೇಲೆ ಉಗ್ರರ ದಾಳಿ ಆಯಿತು(ತಾಜ್‌ ಹೋಟೇಲ್‌ ಮೇಲೆ ದಾಳಿ), ಪ್ರಸ್ತುತ ನರೇಂದ್ರ ಮೋದಿ ಪ್ರಧಾನಿಯಾಗಿರುವಾಗ ಪುಲ್ವಾಮ ದಾಳಿ, ಈಗ ಮತ್ತೆ ಪ್ರವಾಸಿಗರ ಸ್ವರ್ಗ ಪಹಲ್ಗಾಮ್‌ ಜಿಲ್ಲೆಯ ಬೈಸರನ್‌ ಎಂಬಲ್ಲಿ ʼಪ್ರವಾಸಿಗರ ಮೇಲೆ ದಾಳಿʼ ನಡೆದಿದೆ. ಹೀಗೆ ಇನ್ನು ಎಷ್ಟೋ ಉಗ್ರರ ದಾಳಿ ಪ್ರಕರಣಗಳು ನಿರಂತರ ನಡೆಯುತ್ತಲೇ ಬಂದಿವೆ. ಭಯೋತ್ಪಾದಕ ಉಗ್ರರ ನೆಲೆಯನ್ನು ಬುಡ ಸಮೇತ ಕಿತ್ತೆಸುವುದಕ್ಕೆ ಸಾಧ್ಯವಾಗದೇ ಇದ್ದರೇ ಇನ್ನು ಮುಂದೆಯೂ ಭದ್ರತಾ ವೈಫಲ್ಯದಿಂದ ಸಾವು ನೋವು ನಡೆಯುತ್ತಲೇ ಸಾಗುತ್ತದೆ ಅನ್ನಿಸುತ್ತದೆ. ಎಲ್ಲಿಯವರೆಗೆ ಧಾರ್ಮಿಕ ಅಸಹಿಷ್ಣತೆ, ಸಾಮಾಜಿಕ ಅಸಮಾನತೆ ಇರಲಿದೆಯೋ ಅಲ್ಲಿಯವರೆಗೆ ಭದ್ರತಾ ವೈಫಲ್ಯ ಒಂದಲ್ಲಾ ಒಂದು ರೀತಿಯಲ್ಲಿ ದೇಶವನ್ನು ಕಾಡುತ್ತಲೇ ಇರುತ್ತದೆ.

ʼಹಿಂದೂ ವರ್ಸಸ್ ಮುಸ್ಲಿಂ ಕಾರ್ಡ್ʼ. ಕಾಶ್ಮೀರದಲ್ಲಿ ಇಂತಹ ಭಯೋತ್ಪಾದಕ ದಾಳಿಗೆ ಹಿಂದೂ ಸಮುದಾಯದ ಮೇಲೆ ಮುಸ್ಲೀಂ ಯುವಕರಲ್ಲಿ ದ್ವೇಷ ಹುಟ್ಟಿಸಿ ಪ್ರಚೋದಿಸಲಾಗುತ್ತಿದೆ. ಪಾಕ್‌ ಉಗ್ರರಿಂದ ಇಂತಹ ದಾಳಿ ನಡೆದಾಗ ಮುಸ್ಲಿಂ ಸಮುದಾಯವನ್ನು ದೂಷಿಸಲು ಹಿಂದೂ ಸಮುದಾಯವನ್ನೂ ಪ್ರಚೋದಿಸಲಾಗುತ್ತಿದೆ. ಪರಸ್ಪರ ಧಾರ್ಮಿಕ ಸಂಘರ್ಷ ಚಾಲ್ತಿಯಲ್ಲಿಡುವುದಕ್ಕೆ ಒಂದು ವ್ಯವಸ್ಥೆಯೇ ಬೃಹದಾಕಾರವಾಗಿ ಬೆಳೆದು ನಿಂತಿದೆ. ಮೊದಲು ಹೀಗೆ ಧಾರ್ಮಿಕವಾಗಿ ಪ್ರಚೋದಿಸುವ ಕೇಂದ್ರಗಳನ್ನು, ಮೂಲ ಸ್ಥಾನಗಳನ್ನು ನಿರ್ಮೂಲನೆ ಮಾಡುವುದಕ್ಕೆ ಸರ್ಕಾರ ಮುಂದಾಗಬೇಕಿದೆ.    

ಪ್ರಚೋದನೆ ಮಾಡುವಂತಹ ಹೇಯವಾದ ಕಲ್ಪನೆಯಲ್ಲಿ ವಾದಿಸುವವರು ವಾಸ್ತವವಾಗಿ ದೇಶದ್ರೋಹಿಗಳು. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಎರಡೂ ಅಂತಹ ಹೇಯವಾದ ಕಲ್ಪನೆಯನ್ನು ಪೋಷಿಸುವ ಮೂಲಭೂತವಾದವನ್ನು ತಿರಸ್ಕರಿಸಬೇಕಿದೆ. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಎನ್ನುವ ಪ್ರಬುದ್ಧತೆಯನ್ನು ತೋರಿಸಬೇಕಿದೆ. ಮುಖ್ಯವಾಗಿ ಬೈಸರನ್‌ ನಲ್ಲಿ ನಡೆದ ಹಿಂದೂಗಳನ್ನು ಗುರಿಯಾಗಿಸಿಟ್ಟುಕೊಂಡು ದಾಳಿ ಮಾಡಲಾಗಿದೆ ಎಂದಾದರೇ ಅದಕ್ಕೆ ಮೂಲ ಕಾರಣ ಏನೆನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಉಗ್ರರು ಕೆಲವರನ್ನು ಕೊಲೆ ಮಾಡಿ, ಕೆಲವರನ್ನು ಉಳಿಸಿ ʼಮೋದಿಗೆ ಹೋಗಿ ಹೇಳಿʼ ಎಂದಿದ್ದರೇ ಅದಕ್ಕೆ ಏನು ಕಾರಣ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಜಮ್ಮು ಮತ್ತು ಕಾಶ್ಮೀರದಂತಹ ಪ್ರಕ್ಷುಬ್ದ ರಾಜ್ಯದಲ್ಲಿ ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಸುಖಾಸುಮ್ಮನೆ ಹೇಳುವುದಕ್ಕೆ ಮೊದಲು ಸರ್ಕಾರ ತನ್ನ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡು ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿ. ಪಕ್ಷಾತೀತವಾಗಿ ಈ ಹೇಯ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿಯೂ ರಾಜಕೀಯ ಮಾಡುವ ಅಗತ್ಯವಿಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಸಲ್ಲದು. ಗಡಿಯ ಕಾರಣಕ್ಕೆ, ಸೈದ್ಧಾಂತಿಕ ಕಾರಣಕ್ಕೆ, ಅಂತರಾಷ್ಟ್ರೀಯ ನೀತಿಯ ಕಾರಣಕ್ಕೆ, ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಈವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ನೀತಿಯ ಕಾರಣಕ್ಕೆ ಭಾರತದ ಮೇಲೆ ಈಗಾಗಲೇ ಅನೇಕ ಬಾರಿ ಪಾಕ್ ಉಗ್ರರು ದಾಳಿ ಮಾಡಿದ್ದಾರೆ. ಈಗ ಆತ್ಮಾವಲೋಕನ ಅಗತ್ಯವಾಗಿ ಮಾಡಿಕೊಳ್ಳಬೇಕಿದೆ.   

ಷ್ಟು ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗೆ ಕಾರಣವಾದ ಭದ್ರತಾ ಲೋಪಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಜವಾಬ್ದಾರಿಯುತ ಸರ್ಕಾರ ತನ್ನ ಲೋಪಗಳನ್ನು ಒಪ್ಪಿಕೊಳ್ಳಬೇಕಿದೆ. ಇನ್ನು ಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿದೆ. ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳು ಮತ್ತು ಚಿಂತಕರ ಚಾವಡಿಗಳು ಒಟ್ಟಾಗಿ ಇಂತಹ ಗಂಭೀರ ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ವಿಧಾನಗಳನ್ನು ಸರ್ಕಾರಕ್ಕೆ ಸೂಚಿಸಬೇಕಿದೆ. ಧರ್ಮ, ಜಾತಿ ಲೆಕ್ಕಿಸದೆ ಇಂತಹ ಹೇಯ ಕೃತ್ಯವನ್ನು ಖಂಡಿಸಬೇಕಿದೆ. ಬಹುಶಃ ಇದರಿಂದಲೇ ಭವಿಷ್ಯದಲ್ಲಿ ಇಂತಹ ಪರಿಸ್ಥಿತಿಗಳು ಎದುರಾಗುವುದನ್ನು ತಡೆಗಟ್ಟಬಹುದಾಗಿದೆ.

-ಶ್ರೀರಾಜ್‌ ವಕ್ವಾಡಿ

Friday, April 18, 2025

film review : ಭಿನ್ನ ಪ್ರಯೋಗದಲ್ಲಿ ಜಸ್ಟ್‌ ಪಾಸ್‌ ಆದ ʼವೀರ ಚಂದ್ರಹಾಸʼ | ಸಿನೆಮಾದ ಪ್ಲಸ್‌ & ಮೈನಸ್‌ ಏನು ?

 

ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಇಂದು ರಾಜ್ಯದಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರಾವಳಿ ಕರ್ನಾಟಕದವರನ್ನು ಹೊರತು ಪಡಿಸಿದರೇ, ಉಳಿದ ಕಡೆಗಳ ಪ್ರೇಕ್ಷಕರಿಗೆ ಇದು ಹೊಸತನ ಎಂದು ಕಾಣಿಸಬಹುದು. ಕರಾವಳಿಗರೂ ಹೊಸತನದ ನಿರೀಕ್ಷೆಯಲ್ಲಿದ್ದರು. ಆದರೇ, ಕರಾವಳಿಗರ ನಿರೀಕ್ಷೆ ಅಷ್ಟಾಗಿ ಮುಟ್ಟಿಲ್ಲ ಎಂದೇ ಕಾಣಿಸುತ್ತದೆ. ʼವೀರ ಚಂದ್ರಹಾಸʼ ಸೆಟ್ಟೇರುತ್ತಿದೆ ಎಂಬ ಸುದ್ದಿ ಹೊರಗೆ ಬಂದಾಗ, ಯಕ್ಷಗಾನ ವಲಯದ ಒಂದು ವರ್ಗದಿಂದ ವಿರೋಧ ಕೇಳಿಬಂದಿತ್ತು, ಜೊತೆಗೆ ಯಕ್ಷಗಾನವನ್ನು ತೆರೆ ಮೇಲೆ ಇದೇ ಮೊದಲ ಬಾರಿಗೆ ತೋರಿಸುತ್ತಿರುವುದರಿಂದ ಇನ್ನೊಂದು ವರ್ಗದದವರಲ್ಲಿ ಹೊಸ ನಿರೀಕ್ಷೆಯೂ ಹುಟ್ಟಿತ್ತು. ಆದರೇ, ಈಗ ವಿರೋಧಿಸಿದ ವರ್ಗಕ್ಕೆ ಈ ಯಕ್ಷ ಸಿನೆಮಾ ಸುಲಭವಾಗಿ ಸಿಕ್ಕ ಗ್ರಾಸವಾಗಿ, ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದ ವರ್ಗಕ್ಕೆ ಸಣ್ಣ ನಿರಾಸೆ ಮೂಡಿಸಿ, ಸಣ್ಣ ಅಸಮಾಧಾನವನ್ನೂ ತರಿಸಿದೆ.

ʼವೀರ ಚಂದ್ರಹಾಸʼ ಹೇಗಿದೆ ?  

ಅನಾಥನಾದ ಬಾಲಕನೊಬ್ಬ ತನಗಿರುವ ಯೋಗಾನುಯೋಗದಿಂದ ಮುಂದೆ ಚಂದ್ರಹಾಸನಾಗಿ ಭವಿಷ್ಯದಲ್ಲಿ ರಾಜನಾಗುತ್ತಾನೆ ಎಂಬ ವಿಚಾರ ಮಂತ್ರಿ ದುಷ್ಟಬುದ್ಧಿಗೆ ತಿಳಿಯುತ್ತದೆ. ಕುಂತಲ ಸಾಮ್ರಾಜ್ಯದ ಯುವರಾಣಿಯನ್ನು ವರಿಸಿ, ಬಳಿಕ ಆ ಸಾಮ್ರಾಜ್ಯಕ್ಕೆ ಚಂದ್ರಹಾಸ ರಾಜನಾಗುತ್ತಾನೆ ಎಂಬ ಬ್ರಾಹ್ಮಣೋತ್ತಮನ ಭವಿಷ್ಯವಾಣಿಯನ್ನು ಕೇಳಿ ಕ್ರೋಧಗೊಳ್ಳುವ ಮಂತ್ರಿ ದುಷ್ಟಬುದ್ಧಿ, ಕಟುಕರಿಗೆ ಚಂದ್ರಹಾಸನನ್ನು ಕೊಲ್ಲಲು ಹೇಳುತ್ತಾನೆ. ಆ ಕಟುಕರಿಗೂ ಆ ಪುಟ್ಟ ಬಾಲಕನ ಮೇಲೆ ಕರುಣೆ ಬಂದು, ಸಾಯಿಸದೇ ಕಾಡಿನಲ್ಲಿ ಬಿಟ್ಟುಬರುತ್ತಾರೆ. ಮುಂದೆ ಕುಳಿಂದ ಎಂಬ ಕಾಡಿನ ಅರಸನಿಗೆ ಸಿಕ್ಕಿ ಆ ರಾಜಕುಟುಂಬದಲ್ಲಿ ಬೆಳೆದು, ಅಲ್ಲಿನ ಯುವರಾಜನಾಗುತ್ತಾನೆ, ಮುಂದೆ 20 ವರ್ಷಗಳ ಬಳಿಕ ಮತ್ತೆ ದುಷ್ಟಬುದ್ಧಿಗೆ ಎದುರಾಗುತ್ತಾನೆ. ಇದು ದುಷ್ಟಬುದ್ಧಿಗೆ ಮತ್ತೆ ತಳಮಳ ಉಂಟು ಮಾಡುತ್ತದೆ. ತನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದ್ದನ್ನು ಅರಿಯುತ್ತಾನೆ. ದುಷ್ಟಬುದ್ಧಿ ಮುಂದೇನು ಕುತಂತ್ರ ಹೆಣೆಯುತ್ತಾನೆ ? ಮುಂದೆ ಆತನ ಭವಿಷ್ಯದಲ್ಲಿ ಏನೆಲ್ಲಾ ಎದುರಾಗುತ್ತವೆ ಎನ್ನುವ ಮೂಲ ಯಕ್ಷಗಾನ ಪ್ರಸಂಗದ ಕಥೆಯನ್ನೇ ತೆಗೆದುಕೊಂಡು ಜೈಮಿನಿ ಭಾರತದಲ್ಲಿ ಇರುವಂತೆ ಚಂದ್ರಹಾಸನ ಹಿನ್ನೆಲೆ, ಮತ್ತೆ ಮುಂದೆ ಎದುರಾಗುವ ರಾಜ ವೈಷಮ್ಯ ಎಲ್ಲವನ್ನು ಇಲ್ಲಿ ಸ್ವಲ್ಪ ಸೇರಿಸಿಕೊಳ್ಳಲಾಗಿದೆ.

ಯಕ್ಷಗಾನಕ್ಕೆ ಚೂರು ಧಕ್ಕೆ ಆಗದೆ ಇರುವಂತೆ ತೆರೆ ಮೇಲೆ ಸಿನೆಮಾದಲ್ಲಿ ತೋರಿಸಲಾಗಿದೆ ಎಂದು ನಿರ್ದೇಶಕ ರವಿ ಬಸ್ರೂರು ಅವರು ಸಿನೆಮಾ ಪ್ರಚಾರಗಳಲ್ಲಿ ಹೇಳಿದ್ದರು. ಈ ಯಕ್ಷ ಸಿನೆಮಾದಲ್ಲಿ ಇರುವ ಫೈಟಿಂಗ್ಸ್‌ ಗಳನ್ನು ನಿರ್ದೇಶಕರು ಹೇಗೆ ಬೇಕಾದರೂ ಸಮಜಾಯಿಸಿ ತೆಗೆದುಕೊಳ್ಳಬಹುದು. ಆದರೇ, ಈ ಯಕ್ಷ ಸಿನೆಮಾದಲ್ಲಿ ಫೈಟಿಂಗ್ಸ್‌ ಸೀಕ್ವೆನ್ಸ್ (ಸ್ಟಂಟ್ಸ್‌)‌ ಶೂಟಿಂಗ್‌ ಮಾಡುವ ಮುನ್ನಾ ʼಹೀಗೆ ಮಾಡಿದರೇ, ಇದು ಯಕ್ಷಗಾನಕ್ಕೆ ಧಕ್ಕೆ ತಂದ ಹಾಗೆ ಆಗುತ್ತದೆಯೇ ?ʼ ಎಂಬ ಸಣ್ಣ ಪ್ರಶ್ನೆ ಅವರಲ್ಲಿ ಮೂಡದೇ ಹೋಗಿರುವುದು ನಿಜಕ್ಕೂ ವಿಷಾದನೀಯ. ಬಹುಶಃ ಆ ಸಣ್ಣ ಪ್ರಶ್ನೆ ಅವರಲ್ಲಿ ಮೂಡಿದ್ದಿದ್ದರೆ, ಯಕ್ಷಗಾನದ ವೃತ್ತಿಪರ ಕಲಾವಿದರೇ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಈ ಸಿನೆಮಾದಲ್ಲಿ ಯಕ್ಷಗಾನದ ಯುದ್ಧ ಕುಣಿತ, ಪ್ರಯಾಣ ಕುಣಿತ ಯಾವುದಾದರೂ ಒಂದನ್ನು ಸ್ವಲ್ಪ ಆದರೂ ತೆರೆ ಮೇಲೆ ತರುವ ಪ್ರಯತ್ನ ಮಾಡಬಹುದಿತ್ತು. ಆದರೇ, ಒಂದೇ ಒಂದು ಯಕ್ಷಗಾನದ ಸಣ್ಣ ಕುಣಿತವನ್ನೂ ಪೂರ್ಣವಾಗಿ ಇಲ್ಲಿ ಬಳಸಿಕೊಳ್ಳದೇ ಇರುವುದರಿಂದ ಯಕ್ಷಗಾನದ ಸಮಷ್ಠಿ ಸೌಂದರ್ಯವನ್ನು ಕಡಿಮೆಗೊಳಿಸಿದಂತೆಯೇ ಆಯಿತು ಹೊರತು, ಜಗತ್ತಿಗೆ ಮೂಲ ಯಕ್ಷಗಾನವನ್ನು ತೋರಿಸಿದಂತೆ ಖಂಡಿತ ಆಗಲಿಲ್ಲ. ಯಕ್ಷಗಾನದ ವೇಷಭೂಷಣಗಳನ್ನು ತೋರಿಸಿದಂತಾಯ್ತು ಅಷ್ಟೆ. ಯಕ್ಷಗಾನದಲ್ಲಿ ತಮ್ಮನ್ನು ತಾವು ದುಡಿಸಿಕೊಂಡಿರುವ ಹೆಸರಾಂತ ಕಲಾವಿದರೂ ಈ ಸಿನೆಮಾದ ಭಾಗವಾಗಿದ್ದರು, ಅವರೂ ಕೂಡ ಈ ಬಗ್ಗೆ ನಿರ್ದೇಶಕರಿಗೆ ಮನದಟ್ಟು ಮಾಡಬಹುದಿತ್ತು. ಅದ್ಯಾವುದೂ ಇಲ್ಲಿ ಆದಂತೆ ಕಾಣಿಸುತ್ತಿಲ್ಲ.

ಬಹುಶಃ ರವಿ ಬಸ್ರೂರು ಅವರು ಸಿನೆಮಾ ಪ್ರಚಾರಗಳಲ್ಲಿ ʼಇದೊಂದು ಪುರಾಣ ಕಥೆ, ಅದನ್ನು ಸಿನೆಮಾ ಆಗಿಸಿದ್ದೇವೆ. ಯಕ್ಷಗಾನ ಪದ್ಯಗಳನ್ನು, ಯಕ್ಷಗಾನ ವೇಷಭೂಷಣಗಳನ್ನು, ಯಕ್ಷಗಾನದ ಹಿಮ್ಮೇಳವನ್ನು ಇಲ್ಲಿ ಬಳಸಿಕೊಂಡಿದ್ದೇವೆʼ ಎಂದೇ ಹೇಳಬಹುದಿತ್ತು. ʼಯಕ್ಷಗಾನವನ್ನು ವಿಶ್ವಗಾನವನ್ನಾಗಿʼ ಮಾಡುವ ಪ್ರಯತ್ನ ಎಂದು ಅವರು ಹೋದಲ್ಲೆಲ್ಲಾ ಹೇಳಿದ್ದು ತಪ್ಪಾಯ್ತು ಎಂದು ಈಗ ಅನ್ನಿಸುತ್ತಿದೆ. ಈ ಪ್ರಸಂಗಕ್ಕೆ ತೆರೆ ಮೇಲೆ ದೃಶ್ಯೀಕರಣ ಹೆಣೆದಿದ್ದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೇ, ಯಕ್ಷಗಾನಕ್ಕೆ ಚೂರು ಧಕ್ಕೆ ಬಾರದಿರುವಂತೆ ಸಿನೆಮಾ ಮಾಡಿದ್ದೇವೆ ಎಂಬ ನಿರ್ದೇಶಕರು ಮತ್ತು ಅವರ ತಂಡದ ಸಮರ್ಥನೆಯನ್ನು ಸುತಾರಾಂ ಒಪ್ಪುವುದಕ್ಕೆ ಖಂಡಿತ ಸಾಧ್ಯವಿಲ್ಲ.

ಸಂಸ್ಥಾನಗಳು ಹಾಗೂ ರಾಜಮನೆತನಗಳ ಇತಿಹಾಸವನ್ನು ಸಿಜಿ (ಕಂಪ್ಯೂಟರ್‌ ಗ್ರಾಫಿಕ್ಸ್‌) ಮೂಲಕ ಚೆನ್ನಾಗಿ ತೋರಿಸಲಾಗಿದೆ. ಅರಮನೆಗಳನ್ನು ಎಐ ಮತ್ತು ಗ್ರಾಫಿಕ್ಸ್‌ ಗಳ ಮೂಲಕವೇ ಹೆಚ್ಚಾಗಿ ತೋರಿಸಲಾಗಿದೆ. ಅವು ಅಷ್ಟೇನೂ ಆಕರ್ಷಣೀಯ ಎಂಬಂತ್ತಿಲ್ಲ. ಕರಾವಳಿ ಭಾಗದವರಿಗೆ ಈ ಯಕ್ಷಗಾನ ಪ್ರಸಂಗ ಹೊಸದೇನಲ್ಲ. ಸಿನೆಮಾದಲ್ಲಿ ಬಳಸಿಕೊಳ್ಳಲಾದ ಹಾಸ್ಯ ಸನ್ನಿವೇಶಗಳೂ ಕೂಡ ಯಕ್ಷಗಾನದಲ್ಲಿ ದಿನನಿತ್ಯ ಎಂಬಂತೆ ಬಳಸಿಕೊಂಡವೇ ಆಗಿರುವುದರಿಂದ ಯಕ್ಷಗಾನ ಪ್ರೇಕ್ಷಕರಿಗೆ ಇದು ತೀರಾ ಸಾಮಾನ್ಯ. ಉಳಿದ ಪಾತ್ರಗಳಿಗೆ ಕೆಲವು ಸನ್ನಿವೇಶಗಳಲ್ಲಿ ಬಳಸಿಕೊಂಡ ಸಂಭಾಷಣೆಗಳು ಮೆಚ್ಚುವಂತವು. ಇನ್ನು ಯಕ್ಷಗಾನದ ಹಿಮ್ಮೇಳ ವಾದ್ಯಗಳೊಂದಿಗೆ ರವಿ ಬಸ್ರೂರು ಕೈಚಳಕವನ್ನು ಶರಣಾಗಿ ಒಪ್ಪಬೇಕು. ಇಡೀ ಥಿಯೇಟರ್‌ ವೈಬ್ರೇಟ್‌ ಮಾಡುವ ರವಿ ಅವರ ಹಿನ್ನೆಲೆ ಸಂಗೀತಕ್ಕೆ ಮನಸೋಲದೆ ಯಾರೂ ಹೊರಗೆ ಬರಲಾರರು.  

ಯಕ್ಷಗಾನದ ಪ್ರೇಕ್ಷಕರಿಗೆ ಈ ಸಿನೆಮಾ ಬಹಳ ದೊಡ್ಡ ಪ್ರಯೋಗ ಅಂತೇನು ಅನ್ನಿಸದೇ ಇರಬಹುದು. ಯಕ್ಷಗಾನದ ಬಗ್ಗೆ ಏನೂ ಗೊತ್ತಿಲ್ಲದೇ ಇರುವವರಿಗೆ ವಿಭಿನ್ನ ಅನ್ನಿಸಬಹುದು, ಅಸಮಾಧಾನವನ್ನೂ ಹುಟ್ಟಿಸಬಹುದು.

ಯಕ್ಷಗಾನ ಕಲಾವಿದರ ಹೆಚ್ಚುಗಾರಿಕೆ :

ಈ ಸಿನೆಮಾದಲ್ಲಿ ಇರುವ ಎಪ್ಪತ್ತು ಯಕ್ಷ ಪದ್ಯಗಳನ್ನು ಬರೆದಿರುವ ಪ್ರಸಂಗಕರ್ತ, ಯಕ್ಷಕವಿ ಪ್ರಸಾದ್‌ ಮೊಗೆಬೆಟ್ಟು ಅವರ ಸಾಹಿತ್ಯಕ್ಕೆ ಮೆಚ್ಚಲೇ ಬೇಕು. ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಸತೀಶ್‌ ಶೆಟ್ಟಿ ಪಟ್ಲ, ಗಣೇಶ್‌ ಆಚಾರ್ಯ ಬಿಲ್ಲಾಡಿ, ಚಿನ್ಮಯ್‌ ಭಟ್‌ ಕಲ್ಲಡ್ಕ ಅವರ ಸುಸ್ವರದ ಭಾಗವತಿಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಚಂಡೆ, ಮದ್ದಲೆಯಲ್ಲಿ ಶ್ರಮಿಸಿದ ಹಿಮ್ಮೆಳ ಕಲಾವಿದರೂ ಶ್ಲಾಘನೀಯ. ಚಂದ್ರಹಾಸನ ಪಾತ್ರ ನಿರ್ವಹಿಸಿ ಶಿಥಿಲ್‌ ಶೆಟ್ಟಿ ಐರ್ಬೈಲ್‌, ದುಷ್ಟಬುದ್ಧಿ ಪಾತ್ರ ನಿರ್ವಹಿಸಿರುವ ಪ್ರಸನ್ನ ಶೆಟ್ಟಿಗಾರ್‌ ಮಂದಾರ್ತಿ ಅವರ ನಟನೆ ಮನೋಜ್ಞ. ವಿಷಯೆ ಪಾತ್ರ ನಿರ್ವಹಿಸಿದ ನಾಗಶ್ರೀ, ವಿರಸಿಂಹನ ಪಾತ್ರ ನಿರ್ವಹಿಸಿದ ನವೀನ್‌ ಶೆಟ್ಟಿ ಐರ್ಬೈಲ್‌, ಮದನನ ಪಾತ್ರ ನಿರ್ವಹಿಸಿದ ಉದಯ್‌ ಹೆಗಡೆ ಕಡಬಾಳ, ಹಾಸ್ಯ ಕಲಾವಿದರಾದ ರವೀಂದ್ರ ದೇವಾಡಿಗ ಕಮಲಶಿಲೆ, ಶ್ರೀಧರ್‌ ಭಟ್‌ ಕಾಸರಕೋಡ್, ಶೇಖರ್‌ ಶೆಟ್ಟಿ ಯಳಬೇರು ಹಾಗೂ ಮತ್ತಿತರರ ನಟನೆ ಸ್ತುತ್ಯಾರ್ಹ.

ಡಾ. ಶಿವರಾಜ್‌ ಕುಮಾರ್‌, ಗರುಡ ರಾಮ್‌, ಚಂದನ್‌ ಶೆಟ್ಟಿ, ಪುನೀತ್‌ ರುದ್ರನಾಗ್‌ ಅವರೆಲ್ಲಾ ಸಿನೆಮಾದ ಪ್ರಚಾರಕರಾಗಿ ಅಷ್ಟೇ ಕಾಣಿಸಿಕೊಳ್ಳುತ್ತಾರೆ ಹೊರತು ಅವರಿಗೆ ಸಿನೆಮಾದಲ್ಲಿ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಕೂಡ ಇಲ್ಲ, ಕಥೆಗೂ ಅವರು ಬೇಕೆಂದಿರಲಿಲ್ಲ.

ತಾಂತ್ರಿಕವಾಗಿ ಸಿನೆಮಾ ಹೇಗಿದೆ ? ‌

ಕೆಲವು ಸನ್ನಿವೇಶಗಳಲ್ಲಿ ಫೂಟೇಜ್‌ ಟು ಫೂಟೇಜ್‌ ಕಲರ್‌ ಮ್ಯಾಚ್‌ ಇಲ್ಲ. ಎಡಿಟಿಂಗ್‌ (ಸಂಕಲನ) ಕಟ್ಟಿಂಗ್‌ ಹೆಚ್ಚಾದಂತೆ ಕಾಣಿಸುತ್ತದೆ, ಮೂಮೆಂಟ್ ಫ್ರೇಮಿಂಗ್‌ ಗಳನ್ನೇ ಹೆಚ್ಚಿನ ಸನ್ನಿವೇಶಗಳಲ್ಲಿ ಬಳಸಿಕೊಂಡಿರುವುದರಿಂದ ಪ್ರೇಕ್ಷಕರ ಕಣ್ಣಿಗೆ ತ್ರಾಸಾಗುವಂತಿದೆ. ಡೈಲಾಗ್‌ ಡೆಲಿವರಿ ಸಂದರ್ಭಗಳಲ್ಲಿ ಪ್ರೇಕ್ಷಕರು ನಟರ ಭಾವನೆಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಮುನ್ನವೇ  ಫ್ರೇಮ್‌ ಬದಲಾಗುವುದು ಹೆಚ್ಚಿನ ಕಡಗಳಲ್ಲಿವೆ. ಲಿಪ್‌ ಲಿಂಕಿಂಗ್‌ ಆಗದೆ ಇರುವುದು ಸುಮಾರು ಕಡೆಗಳಲ್ಲಿ ಸಾಮಾನ್ಯನೂ ಗ್ರಹಿಸುವಂತೆ ಇದೆ. ಹೀಗೆ ಒಂದಿಷ್ಟು ತಾಂತ್ರಿಕ ವಿಷಯಗಳಲ್ಲಿ ಸಿನೆಮಾ ಪ್ರೇಕ್ಷಕರಿಗೆ ಅಸಮಧಾನ ಹುಟ್ಟಿಸುತ್ತದೆ.

ಒಂದು ವಿಭಿನ್ನ ಪ್ರಯತ್ನಕ್ಕೆ ಜನರಂತೂ ತಲೆಬಾಗಿದ್ದಾರೆ. ಸಿನೆಮಾದಲ್ಲಿ ರಿಚ್ನೆಸ್‌ ಇದೆ. ಆದರೇ, ಯಕ್ಷಗಾನದ ದೃಷ್ಟಿಯಲ್ಲಿ ನೋಡುವುದಾದರೇ ಈ ಸಿನೆಮಾ ʼಮಾದರಿʼ ಆಗದೆ ಇರುವುದೆ ಒಳ್ಳೆಯದು. ಸಿನೆಮಾ ಖಂಡಿತ ಮನರಂಜನೆ ನೀಡುತ್ತದೆ. ನೋಡಿ ಆನಂದಿಸಬಹುದು. ಸಿನೆಮಾ ತಂಡಕ್ಕೆ ಯಶಸ್ಸು ಸಿಗಲಿ.  

-ಶ್ರೀರಾಜ್‌ ವಕ್ವಾಡಿ

ತಾಂತ್ರಿಕ ಅಭಿಪ್ರಾಯ : ರಕ್ಷಿತ್‌ ಕುಮಾರ್‌ ಕೊಟೇಶ್ವರ

Wednesday, April 16, 2025

ʼವೀರ ಚಂದ್ರಹಾಸʼ ಎಂಬ ಪ್ರಯೋಗಶೀಲತೆ ಗೆಲ್ಲಲಿ

 

ಮೊದಲ ಬಾರಿಗೆ ಕಲೆಯೊಂದರ ಮೂಲ ಸರಕು ಸಿನೆಮಾವಾಗಿ ಬೆಳ್ಳಿ ತೆರೆಗೆ !

 

ಭವ್ಯ ಪುರಾಣದ ವೀರ ಚರಿತೆಯ ಸುಂದರ ಇತಿಹಾಸ

ನವ್ಯ ಸೊಬಗಿನಲಿ ಕಣ್ಣಿಗೆ ಕಾಣುವ ವೀರ ಚಂದ್ರಹಾಸ

ಇದು ಸುಂದರ ಇತಿಹಾಸ, ಇವ ವೀರ ಚಂದ್ರಹಾಸ ||

ಯಕ್ಷಕವಿ ಪ್ರಸಾದ್‌ ಮೊಗೆಬೆಟ್ಟು ಅವರ ಚೆಂದದ ಸಾಹಿತ್ಯವಿರುವ ಶೀರ್ಷಿಕೆ ಗೀತೆಯ ಮೂಲಕ ಪ್ರೇಕ್ಷಕರನ್ನು, ಭಾರತೀಯ ಸಿನೆಮಾ ರಂಗ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ʼವೀರ ಚಂದ್ರಹಾಸʼ ಎನ್ನುವ ಜಗತ್ತಿನ ಮೊಟ್ಟಮೊದಲ ಯಕ್ಷ ಸಿನೆಮಾ ಸೆಳೆಯುತ್ತಿದೆ. ಚಂದನವನದಲ್ಲಿ ಈಗ ಒಂದೇ ಒಂದು ಸದ್ದು, ಅದು ʼವೀರ ಚಂದ್ರಹಾಸʼನದ್ದು ಎಂದರೇ ತಪ್ಪಿಲ್ಲ. ಈ ಸಿನೆಮಾ ಸೆಟ್ಟೇರುತ್ತಿದೆ ಎನ್ನುವ ಸುದ್ದಿ ಹೊರಗೆ ಬಂದಾಗ, ಯಕ್ಷಗಾನವನ್ನು ಪಕ್ಕಾ ಸಂಪ್ರದಾಯದಂತೆಯೇ ಕಾಣುವುದಕ್ಕೆ ಬಯಸುವ ವರ್ಗದಿಂದ ಅಪಸ್ವರ ಕೇಳಿಬಂದಿತ್ತು. ರವಿ ಬಸ್ರೂರು  ಯಕ್ಷಗಾನವನ್ನು ವಿಶ್ವಗಾನವನ್ನಾಗಿ ಮಾಡುವುದಕ್ಕೇನಿದೆ ? ಯಕ್ಷಗಾನ ಅದಾಗಲೇ ವಿಶ್ವಗಾನ ಆಗಿದೆ. ಯಕ್ಷಗಾನವನ್ನೆಲ್ಲಾ ಹಾಳು ಮಾಡುವುದಕ್ಕೆ ಇದೊಂದು ದಾರಿ ಎಂಬೆಲ್ಲಾ ಮಾತು ಕೇಳಿ ಬಂದಿತ್ತು. ಆದರೇ, ಬಹುತೇಕ ಎಲ್ಲರೂ ಯಕ್ಷಗಾನವನ್ನೇ ತಮ್ಮ ಬದುಕಿನ ಆಧಾರವನ್ನಾಗಿಸಿಕೊಂಡವರೇ ಈ ಸಿನೆಮಾದಲ್ಲಿ  ಪಾತ್ರವಾಗಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ʼಯಕ್ಷಗಾನವನ್ನೇ ವೈಭವೀಕರಿಸಿ ತೆರೆ ಮೇಲೆ ತೋರಿಸುವ ಪ್ರಯತ್ನವಿದು. ಎಲ್ಲಿಯೂ ಯಕ್ಷಗಾನಕ್ಕೆ ಧಕ್ಕೆ ತರುವಂತೆ ಮಾಡಿಲ್ಲ. ಯಕ್ಷಗಾನದ ಸಂಪ್ರದಾಯವನ್ನು ಸಿನೆಮಾ ನಿರ್ಮಾಣ ಮಾಡುವಾಗ ಪಾಲಿಸಿದ್ದೇವೆ. ಜಗತ್ತಿಗೆ ಯಕ್ಷಗಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವುದೇ ನಮ್ಮ ಉದ್ದೇಶʼ ಎಂದು ರವಿ ಬಸ್ರೂರು ಹೇಳುತ್ತಲೇ ಬಂದಿದ್ದಾರೆ. ಆದರೂ ಇನ್ನೂ ಪೂರ್ವಾಗ್ರಹಪೀಡಿತ ಮನೋಭಾವನೆಯಿಂದ ಈ ಸಿನೆಮಾದ ಬಗ್ಗೆ ನೋಡುವವರು ಇದ್ದಾರೆ. ರವಿ ಬಸ್ರೂರು ಹಾಗೂ ಅವರ ತಂಡ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಯಕ್ಷಗಾನ ಆರಾಧಕರಲ್ಲಿಯೂ ಈ ಸಿನೆಮಾದ ಬಗ್ಗೆ ವಿಶೇಷ ಕುತೂಹಲ ಮೂಡಿದೆ.

ಅದಾಗಲೇ ಯಕ್ಷಗಾನದ ಚೌಕಟ್ಟು ಸಾಮಾಜಿಕ ಪ್ರಸಂಗಗಳಿಗೆ ತೆರೆದುಕೊಂಡು ಕೆಲವು ದಶಕಗಳೇ ಕಳೆದಿವೆ. ಯಕ್ಷಗಾನದ ಚೌಕಟ್ಟಿಗೆ ಸಾಮಾಜಿಕ ಪ್ರಸಂಗಗಳು ಬಂದಾಗ ಅದನ್ನು ವಿರೋಧಿಸಿದ ಒಂದು ದೊಡ್ಡ ವರ್ಗವೇ ಇದ್ದಿತ್ತು, ಈಗಲೂ ಇದೆ. ಯಕ್ಷಗಾನ, ಸಂಪ್ರದಾಯ, ಯಕ್ಷಗಾನದ ಶೈಲೀಕೃತ ಪರಿವರ್ತನೆಯ ಬಗ್ಗೆ ಚರ್ಚೆ ಬಹುಶಃ ಸದ್ಯಕ್ಕಂತೂ ಮುಗಿಯುವುದಿಲ್ಲ ಎಂದೇ ಕಾಣಿಸುತ್ತದೆ. ಯಕ್ಷಗಾನದಲ್ಲಿ ಪ್ರಯೋಗಶೀಲತೆಯನ್ನು ವಿರೋಧಿಸುವ ಮನಸ್ಥಿತಿ ಎಷ್ಟಿದೆಯೋ, ಅದಕ್ಕಿಂತ ದುಪ್ಪಟ್ಟಷ್ಟು ಅದನ್ನು ಒಪ್ಪಿಕೊಂಡ ಮನಸ್ಥಿತಿಗಳೂ ಇವೆ ಎನ್ನುವುದು ಉಲ್ಲೇಖಾರ್ಹ. ಯಕ್ಷಗಾನದ ಪುರಾಣ ಕಥೆಯೊಂದನ್ನು ಆಧರಿಸಿಕೊಂಡು ಸಿನೆಮಾವೊಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದೆ.   

ಕಾಲ ಬದಲಾದಂತೆ ಯಕ್ಷಗಾನದಲ್ಲಿ ಪ್ರಯೋಗಶೀಲತೆ ತುಸು ಹೆಚ್ಚೇ ಕಾಣುವುದಕ್ಕೆ ಆರಂಭವಾದಾಗ ಅದರ ಔಚಿತ್ಯದ ಬಗ್ಗೆ ಅನೇಕ ಪ್ರಶ್ನೆಗಳು ಮೇಲೆದ್ದಿದ್ದವು. ಸಾಂಪ್ರದಾಯಿಕ ಚೌಕಟ್ಟಿನೊಳಗೆ ಹೊಸತನದ ಪ್ರಯೋಗಶೀಲತೆಯ ಬಗ್ಗೆ ಹೀಯಾಳಿಕೆಯೇ ಹೆಚ್ಚು ಕೇಳಿಬಂದಿತ್ತು. ಬಹುಶಃ ಈ ರೀತಿಯ ಮನೋಧೋರಣೆ ಯಕ್ಷಗಾನ, ಸಿನೆಮಾ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಆದಾಗ್ಯೂ, ಯಕ್ಷಗಾನ, ಸಿನೆಮಾ ಸೇರಿ ಎಲ್ಲಾ ಕ್ಷೇತ್ರಗಳು ಕಾಲದ ಪರೀಕ್ಷೆಯನ್ನು ಸಮರ್ಥವಾಗಿ ಗೆದ್ದು ಬಂದಿವೆ. ಜಾಗತಿಕವಾಗಿ ಮಾನ್ಯತೆಯನ್ನೂ ಪಡೆದುಕೊಂಡಿವೆ. ಈಗ ಅದು ವಿಸ್ತೃತ ರೂಪಾಂತರವಾಗಿಯೂ ಬದಲಾಗಿ ಅನೇಕರನ್ನು ಯಶಸ್ವಿಯಾಗಿ ಸೆಳೆಯುತ್ತಿವೆ.   

ಸಿನೆಮಾ ಮಾಡುವ ನಿರ್ದೇಶಕನಿಗೆ ಪ್ರೇಕ್ಷಕರ ಬೇಕು ಬೇಡಗಳನ್ನು ಅರಿಯುವ ಮನಸ್ಥಿತಿ ಬಹಳ ಮುಖ್ಯ. ಕಥೆಯ ಆಯ್ಕೆಯ ಮಾನದಂಡಗಳಲ್ಲಿ ಸಿನೆಮಾಗಳು ಆಯಾ ಪ್ರದೇಶಗಳ ಪ್ರಾತಿನಿಧಿಕ ಬಿಂಬವೇ ಆಗಿರುತ್ತವೆ. ಆದರೇ, ಕಥೆ ಮತ್ತು ಕಲೆ ಎಲ್ಲವೂ ಚೆನ್ನಾಗಿಯೇ ಇದ್ದರೂ ಸಿನೆಮಾಗಳೆಲ್ಲಾ ಗುಣಮಟ್ಟದ್ದೇ ಆಗಿರಬೇಕೆಂದಿಲ್ಲ. ಉತ್ತಮ ಮತ್ತು ಉತ್ತಮವಲ್ಲದ ಸಿನೆಮಾಗಳೂ ಬೇಕಾದಷ್ಟಿವೆ. ಪ್ರಾದೇಶಿಕತೆಯನ್ನೇ ಜೀವಾಳವಾಗಿಟ್ಟುಕೊಂಡು ತೆರೆ ಕಾಣುವ ಸಿನೆಮಾಗಳು ಮೇಕಿಂಗ್‌ ನಲ್ಲಿ ಸೋತು ಮೆಚ್ಚುಗೆಗೆ ಪಾತ್ರವಾಗದೇ ಇರಬಹುದು. ಇಷ್ಟಾಗಿಯೂ ಸಿನೆಮಾ ಒಂದು ಪರಿಣಾಮಕಾರಿ ಮಾಧ್ಯಮವಾಗಿರುವುದರಿಂದ ವಿವಿಧ ಭಾಗದ, ವಿವಿಧ ಪ್ರದೇಶಗಳ ಮಾದರಿಯನ್ನು ಜಗತ್ತಿಗೆ ಪರಿಚಯಿಸುತ್ತವೆ. ಹೀಗೆನ್ನುವ ಕಾರಣಕ್ಕೆ ಪ್ರಾದೇಶಿಕತೆಯ ವಿಷಯವೊಂದನ್ನು ಜಗತ್ತಿಗೆ ಪರಿಚಯ ಮಾಡಿಕೊಡುವುದೇ ನಿರ್ದೇಶಕರ ಅಥವಾ ಸಿನೆಮಾ ತಂಡದ ಪ್ರತಿಷ್ಠೆಯ ವಿಷಯವಾಗಬಾರದು. ಒಂದು ಭಾಗದ ಹಿರಿಮೆಯನ್ನು ಜಗತ್ತಿಗೆ ಕಾಣಿಸಿಕೊಡುವುದೇ ಬಹಳ ಮುಖ್ಯವಾಗಬೇಕು. ಬಹುಶಃ ಈ ವೀರ ಚಂದ್ರಹಾಸ ಸಿನೆಮಾ ತಯಾರಿಸುವಲ್ಲಿ ರವಿ ಬಸ್ರೂರು ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬಂತೆ ಕಾಣಿಸುತ್ತದೆ. ಸಿನೆಮಾದ ಪ್ರಚಾರಗಳಲ್ಲಿ ಅವರು ಸಿನೆಮಾದ ಬಗ್ಗೆ ಎಲ್ಲಿಯೂ ವೈಭವೀಕರಿಸಿಕೊಂಡು ಮಾತಾಡಿದ್ದು ಕಾಣುವುದಕ್ಕೆ ಸಿಗುವುದಿಲ್ಲ. ಯಕ್ಷಗಾನ ಮತ್ತು ಯಕ್ಷಗಾನ ಕಲಾವಿದರ ಹೆಚ್ಚುಗಾರಿಕೆಯನ್ನೇ ಅವರು ಹೇಳುತ್ತಾ ಬಂದಿದ್ದಾರೆ. ಬಹುಶಃ ಈ ಯಕ್ಷ ಸಿನೆಮಾದಲ್ಲಿಯೂ ಅದನ್ನೇ ಪ್ರಾಮಾಣಿಕವಾಗಿ ತೋರಿಸುವುದೇ ಅವರ ಪ್ರಧಾನ ಉದ್ದೇಶವಿತ್ತೆಂದು ಕಾಣಿಸುತ್ತಿದೆ.

ʼವೀರ ಚಂದ್ರಹಾಸʼ ಸಿನೆಮಾ ತೆರೆ ಮೇಲೆ ಬರುತ್ತಿರುವ ಶೈಲಿ ವಿಭಿನ್ನ. ಆದರೇ, ಒಂದು ಪುರಾಣ ಕಥೆಯನ್ನೋ, ಐತಿಹಾಸಿಕ ಕಥೆಯನ್ನೋ, ಕಲೆಯನ್ನೋ, ಆಚರಣೆಯನ್ನೋ ಸಿನೆಮಾವಾಗಿ ತೋರಿಸುತ್ತಿರುವುದು ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ಹೀಗೆ ಬಂದ ಎಷ್ಟೋ ಸಿನೆಮಾಗಳು ಪ್ರೇಕ್ಷಕರಿಂದ, ವಿಮರ್ಶಕರಿಂದ ಅತ್ಯಂತ ಟೀಕೆಗೂ ಒಳಗಾಗಿವೆ.    ಆದರೇ ಈ ಸಿನೆಮಾದಲ್ಲಿ ಯಕ್ಷಗಾನವನ್ನು ಸಿನೆಮಾದ ಯಾವುದೋ ಒಂದು ದೃಶ್ಯಕ್ಕೋ, ಹಾಡಿಗೋ ಬಳಸಿಕೊಳ್ಳದೇ, ಇಡಿ ಸಿನೆಮಾವೇ ʼಯಕ್ಷ ಸಿನೆಮಾʼವಾಗಿ ತೆರೆ ಕಾಣಿಸುತ್ತಿರವುದರಿಂದ ರಂಗಸ್ಥಳದ ಪರಿಕಲ್ಪನೆಯ ಆಚೆಗೆ ಕಥೆಯನ್ನು, ಸನ್ನಿವೇಶಗಳನ್ನು ದೃಶ್ಯೀಕರಣಗೊಳಿಸಿರುವ ಶೈಲಿಯ ಬಗ್ಗೆ ಅತ್ಯಂತ ಕುತೂಹಲ ಸೃಷ್ಟಿಯಾಗಿದೆ. 

ಹಾಗಾಗಿ ನೋಡುಗನೊಬ್ಬ ಹೊಸತನದ ಪ್ರಯೋಗಶೀಲತೆಯನ್ನು ಆಸ್ವಾದಿಸುವ ಮನಸ್ಥಿತಿಯಿಂದಲೇ ಈ ʼವೀರ ಚಂದ್ರಹಾಸʼ ಸಿನೆಮಾವನ್ನು ಒಪ್ಪಿಕೊಳ್ಳಬೇಕಿದೆ. ಇಲ್ಲಿ ಶ್ರಮ ಮತ್ತು ಸೃಜನಶೀಲತೆ, ಪ್ರಯೋಗಶೀಲತೆ ಒಟ್ಟಾಗಿರುವುದು ಯಕ್ಷ ಸಿನೆಮಾ ಸೃಷ್ಟಿಯ ಒಂದು ವಿಶೇಷ. ಆದರೇ, ಒಂದು ಕಲಾ ಕ್ಷೇತ್ರದಲ್ಲಿ ʼಸಾಬೀತಾಗಿರುವ ಮೂಲ ಸರಕುʼ ಸಿನೆಮಾವಾಗಿ ತೆರೆ ಕಾಣುತ್ತಿರುವುದು ವಿಶೇಷ. ಯಕ್ಷಗಾನದ ಮೂಲಕ ಈಗಾಗಲೇ ಜನ ಮಾನಸದಲ್ಲಿ ಅಚ್ಚೊತ್ತಿದ ಪುರಾಣ ಕಥೆಯೊಂದು ಸಿನೆಮಾವಾಗಿ ಜನಪ್ರಿಯವಾಗಿ, ಲಾಭದಾಯಕವೂ ಆಗಲಿದೆ ಎನ್ನುವ ಭರವಸೆ ನಿರ್ದೇಶಕರು ಹಾಗೂ ನಿರ್ಮಾಪಕರಲ್ಲಿ ಬಹಳವಾಗಿ ಮೂಡಿರುವ ಕಾರಣಕ್ಕೆ ಸಿನೆಮಾ ಸೃಷ್ಟಿಯಾಗಿದೆ ಅಂತನ್ನಿಸುತ್ತದೆ.

ಚಂದನವನದಲ್ಲಿ ಕಳೆದ ಕೆಲವು ದಶಕಗಳಿಂದ ಬಹುಪಾಲು ಸಿನೆಮಾಗಳಲ್ಲಿ ಬಹುತೇಕ ಎಲ್ಲಾ ಸಿನೆಮಾಗಳು ಪ್ರೇಮ ಕಥೆ, ಆಕ್ಶನ್‌ ಓರಿಯೆಂಟೆಡ್‌ ಸಿನೆಮಾಗಳೇ ಹೆಚ್ಚು ತೆರೆ ಕಂಡಿವೆ. ಪ್ರಯೋಗಶೀಲ, ಸೃಷ್ಟಿಶೀಲ ಸಿನೆಮಾಗಳು ತೆರೆಗೆ ಬಂದಿರುವುದು ಕೂಡ ತೀರಾ ಕಡಿಮೆ. ಬಂದ ಪ್ರಯೋಗಶೀಲ, ಸೃಷ್ಟಿಶೀಲ ಸಿನೆಮಾಗಳಲ್ಲಿ ಕೆಲವಷ್ಟು ಯಶಸ್ಸು ಕಂಡರೆ, ಕೆಲವಷ್ಟು ಬಂದು ಹೋಗಿದ್ದೇ ಗೊತ್ತಾಗಿಲ್ಲ ಎಂಬಂತಾಗಿವೆ. ಕನ್ನಡದಲ್ಲಿ ಪ್ರಯೋಗಶೀಲತೆ, ಸೃಷ್ಟಿಶೀಲತೆಯನ್ನು ಒಪ್ಪುವ ಮನಸ್ಥಿತಿ ಸ್ವಲ್ಪ ಕಡಿಮೆಯೇ ಇದೆ. ಪ್ರಯೋಗಶೀಲತೆ ಹಾಗೂ ಸೃಜನಶೀಲ ಕಥೆಗಳು ತೆರೆಗೆ ಬಂದಾಗ, ಅವನ್ನು ಸಹಜ ಸ್ವಭಾವದಿಂದ ನೋಡದೆ ʼಪೂರ್ವಗ್ರಹ ಪ್ರತಿಷ್ಠೆʼಯ ಮನಸ್ಥಿತಿಯಲ್ಲೇ ಸಿನೆಮಾವನ್ನು ನೋಡಿ ತೆಗಳಿದವರೇ ಹೆಚ್ಚು. ಹಾಗಾಗಿ ಚಂದನವನದಲ್ಲಿ ತೆರೆ ಕಾಣುವ ಪ್ರಯೋಗಶೀಲ ಸಿನೆಮಾಗಳನ್ನು ನೋಡುವ ದೃಷ್ಟಿ ಅಗತ್ಯವಾಗಿ ಬದಲಾಗಬೇಕಿದೆ. ಯಕ್ಷಗಾನವನ್ನು ಯಕ್ಷಗಾನದ ಶೈಲಿಯಲ್ಲೇ ತೋರಿಸುತ್ತಿರುವ ಈ ಸಿನೆಮಾದ ಬಗ್ಗೆ ಟೀಕಿಸುವ ಮೊದಲು ಸಿನೆಮಾ ನೋಡಬೇಕಿದೆ. ಯಕ್ಷಗಾನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಸಿನೆಮಾ ಇದೆ ಎಂದಾದರೇ, ಅದನ್ನು ಜವಾಬ್ದಾರಿಯಿಂದ ವಿಮರ್ಶಿಸುವ ಮನಸ್ಸು ಚಿತ್ರ ನೋಡಿದವರು ಎಲ್ಲರೂ ಮಾಡಬೇಕಿದೆ.    

ಜನಪ್ರತಿನಿಧಿ ಪತ್ರಿಕೆಯ ಯೂಟ್ಯೂಬ್‌ ವಾಹಿನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಈ ಸಿನೆಮಾಕ್ಕೆ ಎಪ್ಪತ್ತು ಯಕ್ಷಗಾನ ಪದ್ಯ ರಚನೆ ಮಾಡಿರುವ ಪ್ರಸಾದ್‌ ಮೊಗೆಬೆಟ್ಟು ಅವರು ಮಾತನಾಡುತ್ತಾ, ʼಯಶಸ್ವಿ ಸಿನೆಮಾ ಕಥೆಯೊಂದು ಯಕ್ಷಗಾನಕ್ಕೆ ಬಂದರೆ ಜನ ಒಪ್ಪಿ ನೋಡುತ್ತಾರೆ, ಆದರೆ, ಯಕ್ಷಗಾನವೇ ಸಿನೆಮಾವಾದರೇ ಒಪ್ಪುವ ಮನಸ್ಥಿತಿ ಯಾಕಿಲ್ಲ ? ಎಂದು ಕೇಳಿದ್ದರು. ಬಹುಶಃ ಸುಖಾಸುಮ್ಮನೆ ʼವೀರ ಚಂದ್ರಹಾಸʼದ ಬಗ್ಗೆ ಟೀಕಿಸುವವರು ಹೀಗೆ ಯೋಚಿಸಬೇಕಿದೆ ಎನ್ನಿಸುತ್ತದೆ. ಈ ಬಗ್ಗೆ ಚರ್ಚೆಗಳು ಏನೇ ಇರಲಿ, ರವಿ ಬಸ್ರೂರು ಮತ್ತವರ ತಂಡದ ಶ್ರಮ ʼವೀರ ಚಂದ್ರಹಾಸʼ ಗೆಲ್ಲಲಿ. ಜಗತ್ತಿಗೆ ಯಕ್ಷಗಾನ ಇನ್ನಷ್ಟು ಹೆಚ್ಚು ಪರಿಚಯವಾಗಲಿ. ಸರ್ಕಾರವೂ ಯಕ್ಷಗಾನವನ್ನು ಪ್ರೋತ್ಸಾಹಿಸುವಲ್ಲಿ ಕಾರ್ಯೋನ್ಮುಖವಾಗಲಿ.  

-ಶ್ರೀರಾಜ್‌ ವಕ್ವಾಡಿ       

 

Friday, April 11, 2025

ʼಅಂತರಂಗದ ಸ್ವಗತʼ ಬರಿ ಆತ್ಮಕಥನವಲ್ಲ ಸ್ಪೂರ್ತಿ ಸುಧೆ !

 

ಆತ್ಮಕಥೆ ಓದುವ ಬಗ್ಗೆ ನನಗೆ ಮೊದಲು ಅಷ್ಟೊಂದು ಆಸಕ್ತಿ ಇರಲಿಲ್ಲ. ಯಾರದ್ದೋ ಬದುಕಿನ ಕಥೆಯನ್ನು ನಾನ್ಯಾಕೆ ಓದಬೇಕು ಎಂಬ ಮನಸ್ಥಿತಿ ಕೆಲವು ವರ್ಷಗಳ ಹಿಂದಿತ್ತು. ಆದರೇ, ಕ್ರಮೇಣ ಆ ಮನಸ್ಥಿತಿ ಬದಲಾಗಿದ್ದು ಗೊತ್ತಾಗಲಿಲ್ಲ. ಕೆಲವೊಬ್ಬರ ಆತ್ಮಕಥೆಯನ್ನು ಓದಿದ್ದೇನೆ. ಪ್ರೀತಿಯ, ಗೌರವಾನ್ವಿತ ಡಾ. ಪಾರ್ವತಿ ಜಿ‌. ಐತಾಳ್ ಮೇಡಂ ಅವರಲ್ಲಿ, ಬಹುಶಃ ಅವರು ನಿವೃತ್ತಿ ಹೊಂದಿದಾಗಲಿಂದ ಆತ್ಮಕಥೆ ಬರೆಯಿರಿ ಮೇಡಂ ಎಂದು ನಾನು ಒತ್ತಾಯಿಸಿದ್ದೆ. ಮೊದಮೊದಲು 'ಆತ್ಮಕಥೆ ಬರೆಯುವುದೆಂದರೇ ಪೂರ್ತಿ ಬರೆಯುವುದಕ್ಕೆ ಸಾಧ್ಯವಿಲ್ಲ, ಒಂದಿಷ್ಟು ವಿಷಯಗಳನ್ನು ಮುಚ್ಚಿಡಬೇಕಾಗುತ್ತದೆ. ಈಗ ನನಗೆ ಆ ಆಸಕ್ತಿ ಇಲ್ಲ. ಮುಂದೆ ನೋಡುವ' ಅಂತ ಹೇಳಿದ್ದರು. ಆದರೂ ನಾನು ಸಿಕ್ಕಾಗೆಲ್ಲಾ ಅದೇನೋ ಗೊತ್ತಿಲ್ಲ ಅವರಲ್ಲಿ ಆತ್ಮಕಥೆಯನ್ನು ಬರೆಯುವುದಕ್ಕೆ ಒತ್ತಾಯಿಸುತ್ತಲೇ ಇದ್ದೆ. ಕಳೆದ ಎರಡು ಮೂರು ವರ್ಷಗಳ ಹಿಂದೆ 'ಬರೆಯುತ್ತಿದ್ದೇನೆ' ಎಂದು ಮೇಡಂ ಹೇಳಿದ್ದರು. ಅಂದಿನಿಂದ ಅವರ ಆತ್ಮಕಥೆ ಓದುವುದಕ್ಕೆ ಕಾಯುತ್ತಿದ್ದೆ. ಕೊನೆಗೂ ಈಗ ಅವರ ಆತ್ಮಕಥನ 'ಅಂತರಂಗದ ಸ್ವಗತ' ಓದಿದ್ದೇನೆ. ಓದಿ ಖುಷಿ ಪಟ್ಟಿದ್ದೇನೆ, ದುಃಖ ಪಟ್ಟಿದ್ದೇನೆ. 

ಬಹುಶಃ ಆತ್ಮಕಥನವನ್ನು ಸಾಮಾನ್ಯವಾಗಿ ವೈಭವೀಕರಿಸಿಕೊಂಡು ಬರೆಯುವುದನ್ನು ನಾನು ನೋಡಿದ್ದೇನೆ. ಆದರೇ, ಅದಕ್ಕೆ ಅವಕಾಶವೇ ಕೊಡದೆ ಬದುಕು ಬಂದದ್ದನ್ನು, ಬದುಕು ಕೊಟ್ಟಿದ್ದನ್ನು ನೇರವಾಗಿ ಪಾರ್ವತಿ ಮೇಡಂ ಇಲ್ಲಿ ಬರೆದ್ದಾರೆ. ಬಹುಶಃ ಅದೇ ಈ ಆತ್ಮಕಥನದಿಂದ ದೊರಕುವ ಮಹತ್ವದ ಪ್ರೇರಣೆ. 

ಕಾಸರಗೋಡು ಭಾಗದ ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಬದುಕಿಗೆ ಬೇಕಾದಷ್ಟಿದ್ದರೂ ಮನೆತನದ ಕಟ್ಟುಪಾಡು, ಆಚರಣೆ, ಪದ್ಧತಿ, ಕೌಟುಂಬಿಕ ವೈಷಮ್ಯ, ತಂದೆಯ ಒಂದು ರೀತಿಯ ದರ್ಪದ ಸ್ವಭಾವಗಳ ನಡುವೆ ಬೆಳೆದ ಸಮಾಜಮುಖಿ ಚಿಂತನೆ ಇಂದು ಪಂಚಭಾಷಾ ಅನುವಾದಕಿ ಡಾ. ಪಾರ್ವತಿ ಜಿ. ಐತಾಳರನ್ನಾಗಿ ರೂಪಿಸುವಲ್ಲಿ ಮೂಲ ಕಾರಣ ಇರಬಹುದು. ಬಾಲ್ಯ, ಯೌವನ, ಕಾಲೇಜು ದಿನಗಳು, ಉದ್ಯೋಗ, ಮದುವೆ, ಮಕ್ಕಳು, ಬರವಣಿಗೆ, ವೃತ್ತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅನುಭವಿಸಿದ ಬಹುತೇಕ ಅಷ್ಟೂ ಸಂಗತಿಗಳನ್ನು ಸೋಸದೆ ತೆರೆದಿಟ್ಟಿದ್ದಾರೆ. 

ಹೆಣ್ಣಿಗೆ ಪುರುಷ ಪ್ರಧಾನ ಸಮಾಜ ಒಂದಿಷ್ಟು ನಿರ್ದಿಷ್ಟ ಮಾನದಂಡಗಳನ್ನು ವಿಧಿಸಿದೆ. ಹೆಣ್ಣಾದವಳು ಆ ಮಾನದಂಡಗಳನ್ನು ಒಪ್ಪಿ ಅಪ್ಪಿ ನಡೆದುಕೊಳ್ಳುವಂತಹ ವಾತಾವರಣವನ್ನು ಈ ಸಮಾಜ ನಿರ್ಮಿಸಿದೆ. ಹೆಣ್ಣನ್ನು ಮಾನಸಿಕವಾಗಿಯೋ, ದೈಹಿಕವಾಗಿಯೋ ಹಿಂಸಿಸುವುದು ಪುರುಷತ್ವದ ಲಕ್ಷಣ ಎಂಬಂತೆ ಈ ಸಮಾಜ ನಂಬಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಬಾಲ್ಯದಿಂದಲೂ ಅನುಭವಿಸುತ್ತಲೇ ಅದನ್ನು ಮೀರಿಹಂತಹಂತವಾಗಿ ಸಾತ್ವಿಕ ಮನಸ್ಥಿತಿಯಿಂದಲೇ ವಿರೋಧಿಸುತ್ತಲೇ ಬಂದಿರುವುದು ಪಾರ್ವತಿ ಅವರ ಬದುಕಿನುದ್ದಕ್ಕೂ ಕಾಣ ಸಿಗುತ್ತದೆ. 

ಹೆಣ್ಣನ್ನು ಮನಸ್ಸಿನಿಂದ ನೋಡುವ ಪಕ್ವತೆಯನ್ನು, ವಿವೇಕವನ್ನು ನಮ್ಮ ಸಮಾಜ ಇನ್ನೂ ಸಿದ್ಧಿಸಿಕೊಂಡಿಲ್ಲ. ಪಾರ್ವತಿ ಮೇಡಂ ಅವರು ತಮ್ಮ ಬಾಲ್ಯದಲ್ಲೇ ತಮ್ಮ ಅಮ್ಮನಿಗಾದ ಕಷ್ಟಗಳನ್ನು ಕಂಡು ಮರುಗಿದವರು. ತಮ್ಮ ʼತಂದೆಯವರು ಹೆಂಡತಿ ಮಕ್ಕಳ ವಿಚಾರದಲ್ಲಿ ದರ್ಪ ಕೋಪಗಳ ಪ್ರತಿಮೂರ್ತಿಯಂತಿದ್ದರು. ಹೆಂಡತಿಯನ್ನು, ಹೆಂಡತಿಯ ತೌರು ಮನೆಯವರನ್ನು ವಿನಾಕಾರಣ ಏನೇನೋ ನೆಪ ಹೇಳಿ ನಿಂದಿಸುವುದು, ತಾತ್ಸಾರ ಮಾಡುವುದು, ಚುಚ್ಚು ಮಾತಾಡಿ ನೋವಿಸುವುದು ಪುರು ಲಕ್ಷಣ ಎಂದು ಅವರು ತಿಳಿದಂತಿತ್ತು ಎನ್ನುವುದನ್ನು ನೇರವಾಗಿ ಈ ಆತ್ಮಕಥೆಯಲ್ಲಿ ಬರೆಯುತ್ತಾರೆ. ಸಮಾಜದ ಈ ಧೋರಣೆಗೆ ದುರದೃಷ್ಟವಂತ ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದರ ಬಗ್ಗೆ ಅಂದೇ ಅವರಲ್ಲಿ ಅಸಹನೆ ಇದ್ದಿದ್ದು. ಹೆಣ್ಣು ದೊಡ್ಡವಳಾದ ವಿಚಾರವನ್ನು ಸಮಾಜಕ್ಕೆ ಅಂಜಿ ಗುಟ್ಟಾಗಿ ಇಡುವ ಅಂದಿನ ಕಾಲದ ಪದ್ಧತಿ, ಶಾಲಾ, ಕಾಲೇಜು ದಿನಗಳಲ್ಲಿ ಅನುಭವಿಸಿದ ನೋವುಗಳು, ಮದುವೆ ಮತ್ತು ಉದ್ಯೋಗ ಕ್ಷೇತ್ರದ ವಿಚಾರಗಳಲ್ಲಿ ಅನುಭವಿಸಿದ ಸಂಕಷ್ಟ ಅಪಮಾನಗಳೆಲ್ಲಾ ಅವರನ್ನು ಇನ್ನಷ್ಟು ಗಟ್ಟಿಯಾಗಿ ಬದುಕುವಂತೆ ಮಾಡಿತ್ತು ಎನ್ನುವುದನ್ನು ನಾವಿಲ್ಲಿ ಗುರುತಿಸಬಹುದು. ಕಾಲಾಂತರದಲ್ಲಿ ಈ ಎಲ್ಲಾ ಅನುಭವ ಅವರಲ್ಲಿ ಒಂದು ಸದೃಢ ಚಿಂತನೆಯಾಗಿ ಬೆಳೆಯಿತು. ಆ ಚಿಂತನೆ ಇಲ್ಲಿ ವ್ಯಕ್ತವಾಗುತ್ತಲೇ ಹೋಗುತ್ತದೆ.

ವಯೋಸಹಜ ಮನೋ ಬದಲಾವಣೆಗಳನ್ನು ಅವರು ಇಲ್ಲಿ ಪ್ರಸ್ತುತ ಪಡಿಸಿದ ರೀತಿಯೂ ಕೂಡ ಓದುಗರಲ್ಲಿ ಪ್ರೇರಕ ಶಕ್ತಿಯಾಗಿ ಮೂಡಬಹುದು‌. ಸಹಪಾಠಿ ಪ್ರಸಾದನ ಬಗ್ಗೆ ಮೂಡಿದ ಆಕರ್ಷಣೆ, ಕೊನೆಗೆ ಇದೇ ವಿಷಯದಲ್ಲಿ ಆದ ಸಣ್ಣ ನಿರಾಸೆ. ಎಂ.ಎ ವ್ಯಾಸಂಗ ಮಾಡುತ್ತಿದ್ದಾಗ ಪೊಲಂಕಿ ಸರ್, ಶೆಕ್ಸ್ ಪಿಯರ್ ನಾಟಕ 'ಮೆಶರ್ ಫಾರ್ ಮೆಶರ್' ಅಲ್ಲಿ ಲೈಂಗಿಕ ಅತ್ಯಾಚಾರದ ಸಂದರ್ಭವನ್ನು ವಿವರಿಸುವಾಗ ಫ್ರಾಯ್ಡ್ ಹೇಳಿದ 'ಒಬ್ಬ ಹೆಣ್ಣು ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಎಷ್ಟೇ ದ್ವೇಷಿಸಿದರೂ ಸಂಭೋಗದ ಯಾವುದೇ ಒಂದು ಕ್ಷಣವನ್ನು ಎಂಜಾಯ್ ಮಾಡುತ್ತಾಳೆ' ಎಂಬುವುದನ್ನು ಪ್ರಸ್ತಾಪಿಸಿದಾಗ 'ಇಲ್ಲ ಸರ್, ಅದು ಸಾಧ್ಯವೇ ಇಲ್ಲ. ತಾನು ಪ್ರೀತಿಸದಿರುವ ಒಬ್ಬ ವ್ಯಕ್ತಿಯ ಜೊತೆಗೆ ಒಬ್ಬ ಹೆಣ್ಣು ಸೆಕ್ಸ್ ಎಂಜಾಯ್ ಮಾಡುತ್ತಾಳೆ ಎನ್ನುವುದು ನಾನ್ ಸೆನ್ಸ್ʼ ಎಂದು ಹುಡುಗಿಯರು ಎಲ್ಲರೂ ಕಿರುಚಿದ್ದು, 'ಮಾನಸಿಕವಾದ ಪ್ರೀತಿಯಿಲ್ಲದ ದೈಹಿಕ ಸಂಬಂಧವನ್ನು ಯಾವ ಹೆಣ್ಣೂ ಇಷ್ಟಪಡಲಾರಳು' ಎಂಬ ಅಭಿಪ್ರಾಯವನ್ನು ಅಂದೇ ಹೊಂದಿರುವುದೆಲ್ಲಾ ಅವರಲ್ಲಿ ಸ್ತ್ರೀವಾದದ ಬಗೆಗಿನ ಸರಿಯಾದ ಕಲ್ಪನೆಯನ್ನು ತೋರಿಸುತ್ತವೆ. ಗೆಳತಿ ಗಿರಿಜಾ ಅನುಭವಿಸಿದ ನೋವಿಗೆ ಸ್ಪಂದಿಸಿದ ರೀತಿ, ವಿಮಲೆ, ವೇಲಾಯುಧನ್ ಅವರ ನಡುವೆ ಸೇತುವೆಯಾಗಿ ಇದ್ದಿದ್ದು ಹೀಗೆ ಎಲ್ಲವನ್ನೂ ನೇರ ನೇರವಾಗಿ ಹೇಳುವ ಮನಸ್ಥಿತಿ ಎಳವೆಯಿಂದಲೇ ಅವರಲ್ಲಿದೆ ಎನ್ನುವುದು ಕೂಡ ಇಲ್ಲಿ ವ್ಯಕ್ತವಾಗುತ್ತಲೇ ಹೋಗುತ್ತದೆ. ಮದುವೆಯ ವಿಚಾರದರಲ್ಲಿ ಸಹೋದ್ಯೋಗಿಯೊಬ್ಬರು ಅಸಹನೀಯವಾಗಿ ವರ್ತಿಸಿರುವುದನ್ನು ಮೇಡಂ ಮೊದಲೇ ಒಮ್ಮೆ ನನ್ನೊಂದಿಗೆ ಪ್ರಸ್ತಾಪಿಸಿದ್ದರು. ಪುಸ್ತಕದಲ್ಲಿ ಹೇಳಿರುವುದನ್ನು ನೋಡಿ ಇನ್ನೂ ಆಘಾತವಾಯಿತು. 

ಮದುವೆ, ಎರಡನೇ ಮದುವೆಗೆ ಬಂದ ಪ್ರಸ್ತಾಪ ಮತ್ತದಕ್ಕೆ ಪಾರ್ವತಿ ಮೇಡಂ ವ್ಯವದಾನದಿಂದ ಸ್ಪಂದಿಸಿದ ರೀತಿ ನಿಜಕ್ಕೂ ಅಚ್ಚರಿ ಅನ್ನಿಸುತ್ತದೆ. ಮದುವೆಯಾಗದೆ ಇರುವ ಹೆಣ್ಣು ಮಕ್ಕಳನ್ನು ಸಮಾಜ ನೋಡುವ ರೀತಿಯ ಬಗ್ಗೆ ಅವರಲ್ಲಿ ಅಂದೇ ಅಪಾರ ಸಿಟ್ಟಿತ್ತು. ಮುಂದೆ ಬದುಕಿಗೆ ಹಿಂದಿನ ಎಲುಬಿನಂತೆ ಬಂದ ಗಂಗಾಧರ ಐತಾಳರು, ಅವರೊಂದಿಗಿನ ಸಂಸಾರ, ಮೊದಲು ಅವರಿಂದ ಪಡೆದ ಅವಳಿ ಗಂಡು ಮಕ್ಕಳನ್ನು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಕಳೆದುಕೊಂಡದ್ದನ್ನು ಇಲ್ಲಿ ವಿವರಿಸಿದ್ದನ್ನು ಓದುವಾಗ ನಿಜಕ್ಕೂ ಕಣ್ಣೀರು ಇಳಿಯುತ್ತದೆ. ಮತ್ತೆ ಮುಂದೆ ಮಕ್ಕಳಾದ ರಮ್ಯತಾ, ಸುಸ್ಮಿತಾ ಅವರ ತಾಯಿಯಾಗಿ, ವೃತ್ತಿ, ಪ್ರವೃತ್ತಿ  ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದು ಮಾದರಿಯೇ ಸರಿ‌. 

ಜಾತಿ ವ್ಯವಸ್ಥೆಯ ಬಗ್ಗೆಯೂ ಅಪಾರ ಸರಿಚಿಂತನೆ ಹೊಂದಿದ್ದ ಮೇಡಂ, ಅಂತರ್ಜಾತಿ ವಿವಾಹ, ಅಂತರ್ಜಾತಿ ಪ್ರೀತಿ, ಪ್ರೇಮ, ಪುರಾಣಗಳ ನಡುವೆ ಇರುವ ಚರ್ಚೆಗಳ ಬಗ್ಗೆಯೂ ತಮ್ಮದೇ ಚಿಂತನೆಯನ್ನು ಇಲ್ಲಿ ಪ್ರಸ್ತಾಪಿಸುತ್ತಾರೆ. ಅದು ಈ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ‌. 

ತಾವೊಬ್ಬ ಉತ್ತಮ ಬರಹಗಾರ್ತಿಯಾಗಿದ್ದರೂ, ಪಂಚಭಾಷಾ ಅನುವಾದಕಿಯಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ಸರೂ, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವೃತ್ತಿಯಲ್ಲಿರುವಾಗ ಕಾಲೇಜಿನ ಸಾಹಿತ್ಯ ವೇದಿಕೆಗಳಲ್ಲಿ ಅವಕಾಶ ವಂಚಿತರಾಗಿರುವುದನ್ನು ಸಾತ್ವಿಕ ಮನಸ್ಥಿತಿಯಲ್ಲೇ ಎದುರಿಸಿ, ಈಗ ಎಲ್ಲರೂ ಗುರುತಿಸುವ, ಎಲ್ಲಾ ದೊಡ್ಡ ದೊಡ್ಡ ಸಾಹಿತ್ಯದ ವೇದಿಕೆಗಳಲ್ಲಿ ಅವಕಾಶ ಪಡೆದವರಾಗಿ ಬೆಳೆದು, ಕಾಲೇಜಿನ ಸಾಹಿತ್ಯ ವೇದಿಕೆಗಳಲ್ಲಿ ಅವಕಾಶ ಸಿಗದೆ ಇರುವ ಹಾಗೆ ಮಾಡಿದವರಿಗೆ ತಾವು ಏರಿದ ಎತ್ತರವನ್ನು ತೋರಿಸಿದ ರೀತಿ ನಿಜಕ್ಕೂ ಸ್ಫೂರ್ತಿ.  

ಇನ್ನು, ಮಹಿಳೆಯನ್ನು ಸುಖಾಸುಮ್ಮನೆ ಹಿಂಸಿಸುವ ಪುರುಷ ಪ್ರಧಾನ ಸಮಾಜದ ಬಗ್ಗೆ ತಮ್ಮ ಒಳಗೊಳಗೆ ಆಕ್ರೋಶದ ಬೆಂಕಿಯನ್ನು ಅವರು  ಇಟ್ಟುಕೊಂಡಿದ್ದು ಅವರ ಬಹುತೇಕ ಎಲ್ಲಾ ಕೃತಿಗಳಲ್ಲಿ ಕಾಣಬಹುದು. ಈ ನಡುವೆ ತಮ್ಮ ಪ್ರೀತಿಯ ಸಂಗಾತಿ ಗಂಗಾಧರ ಐತಾಳರು ತಮ್ಮ ಬೆನ್ನಿನ ಎಲುಬಿನಂತೆಯೇ ಇದ್ದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಗಂಡ- ಹೆಂಡತಿಯರ ಪ್ರವಾಸಗಳು, ಪರಸ್ಪರ ಅರಿತು ಬಾಳಿದ ಸಂಸಾರ ಎಲ್ಲವೂ ಖುಷಿ ಕೊಡುತ್ತವೆ. ಬಳಿಕ ಎದುರಾದ ಸಂಗಾತಿ ಗಂಗಾಧರ ಐತಾಳರ ಅನಾರೋಗ್ಯ, ಆ ಕಾಲಘಟ್ಟದ ಯಾತನೆ, ಪತಿಯ ಅಗಲುವಿಕೆ ಎಲ್ಲವೂ ತುಂಬಾ ನೋವು ಕೊಡುತ್ತವೆ. 

ಒಂದು ಹಂತದಲ್ಲಿ ಬರೆಯುವುದನ್ನು ನಿಲ್ಲಿಸಿ ಬಿಟ್ಟಿದ್ದ ಮೇಡಂ ಗೆ, ನಾನೇ ಅನೇಕ ಬಾರಿ ಬರೆಯಿರಿ ಮೇಡಂ ಎಂದು ಒತ್ತಾಯಿಸಿದ್ದೆ‌. ಹಾಗೆ ಒತ್ತಾಯಿಸಿದಾಗೆಲ್ಲಾ 'ಸಾಕಷ್ಟು ಬರೆದಿದ್ದೇನೆ ಶ್ರೀರಾಜ್, ಸಾಕಾಯ್ತು, ಈಗ ಸ್ವಲ್ಪ ವಿಶ್ರಾಂತಿ ಬೇಕು' ಅಂತ ಹೇಳುತ್ತಿದ್ದರು. ಹಾಗೆ ಯಾಕೆ ಹೇಳುತ್ತಿದ್ದರು ಎನ್ನುವುದು ಈ ಆತ್ಮಕಥನ ಓದಿ ಅರ್ಥೈಸಿಕೊಂಡಿದ್ದೇನೆ. ಆದರೇ, ಪಾರ್ವತಿ ಮೇಡಂ ಮರಳಿ ಲೇಖನಿ ಹಿಡಿದು ಬರೆಯುವುದಕ್ಕೆ ಆರಂಭಿಸಿದ್ದು, ವರ್ಷಕ್ಕೆ ಅವರ ಐದಾರು ಪುಸ್ತಕಗಳು ಪ್ರಕಟಗೊಂಡಿದ್ದು, ಸಾಹಿತ್ಯ ಮತ್ತು ಇನ್ನಿತರೆ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮೇಲಿಂದ ಮೇಲೆ ಪ್ರವಾಸಗಳಿಗೆ ತೆರಳಿದ್ದು ನಿಜಕ್ಕೂ ಆಶ್ಚರ್ಯ. ಬದುಕಿನಲ್ಲಿ ಎದುರಾದ ಏಕಾಂತ ಎನ್ನಿಸುವ ಜೀವನದಲ್ಲಿ ತಮ್ಮನ್ನು ತಾವು ಇನ್ನೆಲ್ಲೂ ಇಲ್ಲವೆಂಬಂತೆ ತೊಡಗಿಸಿಕೊಂಡಿದ್ದು ಪದಶಃ ಸ್ಪೂರ್ತಿ ಸುಧೆ. ಹಾಗಾಗಿ ಈ ಆತ್ಮಕಥೆ ನಮ್ಮ ನಿಮ್ಮ ಬದುಕನ್ನು ಪ್ರೇರೆಪಿಸುವ ಕೃತಿಯೂ ಹೌದು‌.

 -ಶ್ರೀರಾಜ್ ವಕ್ವಾಡಿ

ಬೆಲೆ ಏರಿಕೆ ಎಂಬ ಕೈ ಸುಡುವ ಸರ್ಕಾರಿ ಬೆಂಕಿ

 


ಜನಹಿತ ಕಾಯುವುದು ಸರ್ಕಾರಗಳ ಜವಾಬ್ದಾರಿ | ಬಿಜೆಪಿಯಂತೆ ಕಾಂಗ್ರೆಸ್‌ ಆಯ್ತೇ !?

 ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಅಧಿಕಾರ ಹಿಡಿದಾಗ, ಜನರಲ್ಲಿ ಒಂದು ಹೊಸ ನಿರೀಕ್ಷೆ ಇದ್ದಿತ್ತು. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಸಿದ್ದರಾಮಯ್ಯ ಅವರ ಮೇಲಿದ್ದ ವಿಶ್ವಾಸದಿಂದ, ರಾಜ್ಯದಲ್ಲಿ ಅಭಿವೃದ್ಧಿಯ ಕಾರ್ಯಗಳು ಹೇರಳವಾಗಿ ನಡೆಯುತ್ತವೆ ಎನ್ನುವ ನಂಬಿಕೆ ಅಪಾರವಿತ್ತು. ಆದರೇ, ಈಗ ರಾಜ್ಯ ಕಾಂಗ್ರೆಸ್‌ ಸರ್ಕಾರ ಏನು ಮಾಡಿದೆ ಎನ್ನುವುದು ರಾಜ್ಯದ ಜನರ ಮುಂದಿದೆ.

ಜನರ ಹಿತದೃಷ್ಟಿಗಾಗಿ ಕೆಲಸ ಮಾಡಬೇಕಾದ ರಾಜ್ಯ ಸರ್ಕಾರ ಬೆಲೆ ಏರಿಕೆಯಂತಹ ಸಮಸ್ಯೆಯ ದೊಡ್ಡ ಮೂಟೆಯನ್ನೇ ಜನರ ತಲೆಯ ಮೇಲೆ ಅವ್ಯಾಹತವಾಗಿ ಹೇರುತ್ತಿದೆ. ಒಂದೆಡೆ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಬಿಜೆಪಿ ಪಕ್ಷ ಜನಾಕ್ರೋಶ ಪ್ರತಿಭಟನೆ ನಡೆಸುತ್ತಿದೆ. ಇನ್ನೊಂದೆಡೆ ʼಬೆಲೆ ಏರಿಕೆ ರಾಜ್ಯ ಸರ್ಕಾರದಿಂದ ಆಗುತ್ತಿಲ್ಲʼ ಎಂದು ಹೇಳಿ ತನ್ನ ಸರ್ಕಾರದ ನೀತಿಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವಷ್ಟು ಬೌದ್ಧಿಕ ದಾರಿದ್ರ್ಯದಿಂದ ರಾಜ್ಯ ಕಾಂಗ್ರೆಸ್‌ ಬಳಲುತ್ತಿದೆ.

ಯಾವುದೇ ವಸ್ತುವಿನ ಬೆಲೆ ನಿಗದಿತವಾಗಿ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕಾಲ ಬದಲಾದಂತೆ, ಬೇಡಿಕೆಗಳು ಹೆಚ್ಚಾದಂತೆ ಬೆಲೆ ಏರಿಕೆ ಆಗುವುದು ಸಹಜ. ಆದರೇ, ಬೆಲೆ ಏರಿಕೆ ಕತ್ತು ಹಿಸುಕುವಂತಿರಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ತಂದುಕೊಡುವ ಸಾಮಾನ್ಯ ಜ್ಞಾನ ಸರ್ಕಾರಗಳಿಗೆ ಇರಬೇಕು.

ಹಾಲು, ವಿದ್ಯುತ್‌, ಬಸ್‌‍ ಪ್ರಯಾಣ, ವಿದ್ಯುತ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ 16 ದಿನಗಳ ಜನಾಕ್ರೋಶ ಯಾತ್ರೆ ಆಯೋಜಿಸಿದೆ. ರಾಜ್ಯದಲ್ಲಿ ಕಳೆದ ಇಪ್ಪತ್ತು ತಿಂಗಳಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಸಾಮಾನ್ಯ ಜನರಿಗೆ ಬರೆ ಎಳೆಯುವ ಕೆಲಸವಾಗುತ್ತಿದೆ. ದುಬಾರಿ ಜೀವನವನ್ನು ನಾಡಿನ ಜನ ನಡೆಸುವ ದುಸ್ಥಿತಿ ಕಾಂಗ್ರೆಸ್‌‍ ಸರ್ಕಾರ ನಿರ್ಮಾಣ ಮಾಡಿದೆ. ಉಸಿರಾಡುವ ಗಾಳಿ ಬಿಟ್ಟರೆ, ಉಳಿದ ಎಲ್ಲದರ ಬೆಲೆ ಏರಿಕೆ ನಿರಂತರವಾಗಿದೆ. ಮತದಾರರಿಗೆ ವರದಾನ ಆಗುವ ಬದಲು ಸರ್ಕಾರ ಶಾಪಗ್ರಸ್ಥವಾಗಿದೆ ಎಂದು ಬಿಜೆಪಿ ಆರೋಪಿಸಿದಾಗ್ಯೂ, ಬೆಲೆ ಏರಿಕೆ ಕೇಂದ್ರ ಸರ್ಕಾರದ ಕಾರಣದಿಂದ ಆಗುತ್ತಿರುವುದು ಎಂದು ಹೇಳುವುದಕ್ಕೂ ಸಾಮರ್ಥ್ಯ ಇಲ್ಲವೆಂಬಂತೆ ಕಾಂಗ್ರೆಸ್‌ ವರ್ತಿಸಿದಂತಿದೆ.

ವಿದ್ಯುತ್‌ ದರ ಏಪ್ರಿಲ್‌ 1ರಿಂದ ಪ್ರತಿ ಯೂನಿಟ್‌ ಗೆ 36 ಪೈಸೆ ಜಾಸ್ತಿ ಮಾಡಿದ್ದಾರೆ. ಹಾಲಿನ ದರ ಏರಿಕೆಯಾಗಿದೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆ ದರ ಜಾಸ್ತಿ ಮಾಡಲಾಗಿದೆ. ಬಡವರು, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಜನರಿಗೂ ಬರೆ ಎಳೆಯಲಾಗುತ್ತಿದೆ. ಅಫಿಡವಿಟ್‌, ಮುದ್ರಾಂಕ ಶುಲ್ಕ, ವೃತ್ತಿಪರ ತೆರಿಗೆ, ಬಸ್‌‍ ದರ ಜಾಸ್ತಿ ಮಾಡಲಾಗಿದೆ. ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್‌‍ ಸರ್ಕಾರದ ಜನವಿರೋಧಿ ನೀತಿ ನಿಜಕ್ಕೂ ಖಂಡನೀಯ. ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾ, ನಾವು ಜನರಿಗೆ ಬೇಕಾದದ್ದನ್ನು ಕೊಟ್ಟಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ.

ಬೆಲೆ ಏರಿಕೆ ಎನ್ನುವುದು ಎಲ್ಲಾ ಕಾಲದ ಸಾಮಾನ್ಯ ಸಂಗತಿ. ಆದರೇ, ಅದು ಜನರ ಮೇಲೆ ಹೇರಿಕೆಯಾಗುವಂತೆ ಆಗಬಾರದು. ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಪ್ರಗತಿಗೆ ಶಕ್ತಿ ತುಂಬುವಂತಾಗಿದ್ದರೂ, ಬೆಲೆ ಏರಿಕೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಒಂದು ಕಡೆಯಿಂದ ಕೊಟ್ಟು, ಇನ್ನೊಂದು ಕಡೆಯಿಂದ ಕಿತ್ತುಕೊಳ್ಳುತ್ತಿರುವ ರಾಜ್ಯ ಸರ್ಕಾರದ ಈ ಮನೋಧೋರಣೆ ಮತದಾರರಲ್ಲಿ ಭ್ರಮನಿರಸನ ಮೂಡಿಸಿದೆ.

ಇನ್ನು, ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಅಷ್ಟೇ ಅಲ್ಲದೇ, ದಕ್ಷ ಆಡಳಿತ ನೀಡುವಲ್ಲಿಯೂ ಮುಗ್ಗರಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ, ಸಂಪನ್ಮೂಲ ಹೊಂದಿಸಿಕೊಳ್ಳುವುದಕ್ಕೆ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಸಿ ಕತ್ತು ಹಿಸುಕುತ್ತಿದೆ. ಯಾವುದೇ ಸರ್ಕಾರಗಳಿಗೂ ಈ ಬೆಲೆ ಏರಿಕೆ ಎನ್ನುವುದು ಅನುಕೂಲಕರವಾದ ಅಸ್ತ್ರ ಎಂಬಂತಾಗಿದೆ. ಸರ್ಕಾರ ಮುನ್ನಡೆಸಲು ಆರ್ಥಿಕ ಮೂಲ ಕ್ರೋಢಿಕರಿಸುವುದಕ್ಕೆ ಜನರ ನಿತ್ಯ ಬಳಕೆಯ ವಸ್ತುಗಳ ಮೇಲೆ ಅತ್ಯಂತ ತೀವ್ರವಾಗಿ ಪ್ರಯೋಗಕ್ಕೊಡ್ಡುವ ಮನಸ್ಥಿತಿ ಎಲ್ಲಾ ಸರ್ಕಾರಗಳಿಗೂ ಇವೆ.

ರಾಜ್ಯ ಬಿಜೆಪಿ ಅವರು ಅಸಲಿಗೆ ಜನಾಕ್ರೋಶ ಯಾತ್ರೆ ನಡೆಸಬೇಕಿರುವುದು ತಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ. ಅಧಿಕಾರದಲ್ಲಿದ್ದಾಗ ತಮ್ಮದೇ ಕೇಂದ್ರ ಸರ್ಕಾರ ಅವ್ಯಾಹತವಾಗಿ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದಾಗ ತುಟಿ ಪಿಟಿಕ್‌ ಎನ್ನದ ರಾಜ್ಯ ಬಿಜೆಪಿ ನಾಯಕರು, ಈಗ ಬೀದಿಗಳಿದು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಬಿಜೆಪಿಯವರದ್ದು ನಿಜವಾದ ಜನಪರ ನಿಲುವಾಗಿದ್ದರೇ, ತಮ್ಮದೇ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಧೋರಣೆಯ ವಿರುದ್ಧ ಪ್ರತಿಭಟನೆಗೆ ಇಳಿಯಲಿ. 

ತರಕಾರಿ ಹಾಗೂ ಬೇಳೆ ಕಾಳುಗಳು ಸೇರಿದಂತೆ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆಗಳು ಒಂದೂವರೆ ಪಟ್ಟು ಹೆಚ್ಚಾಗಿವೆ. ಪ್ರಸ್ತುತ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ, ಆದರೆ ದೇಶದ ನಾಗರಿಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ದುಬಾರಿ ಸುಂಕ, ತೆರಿಗೆಗಳನ್ನು ವಿಧಿಸಿ 36.58 ಲಕ್ಷ ಕೋಟಿ ಸಂಗ್ರಹಿಸಿದೆ ಕೇಂದ್ರ ಸರ್ಕಾರ. ಕಳೆದ ಹತ್ತು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿತಗೊಂಡಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌ ಹಾಗೂ ಸಿಲಿಂಡರ್‌ ಗ್ಯಾಸ್‌ ಬೆಲೆಯನ್ನು ಇಳಿಕೆ ಮಾಡುತ್ತಿಲ್ಲ.

ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸುವ ಬಿಜೆಪಿ, ಕೇಂದ್ರ ಸರ್ಕಾರದ ಈ ಬೆಲೆ ಏರಿಕೆಗಳ ಬಗ್ಗೆ ಮೊದಲು ಸ್ಪಷ್ಟನೆ ನೀಡಬೇಕಿದೆ. ತಾಕತ್ತಿದ್ದರೇ ರಾಜ್ಯದ ಬಿಜೆಪಿ ಸಂಸದರು, ಪೆಟ್ರೋಲ್‌ ಹಾಗೂ ಡಿಸೆಲ್‌ ಬೆಲೆಗಳಲ್ಲಿ ಕನಿಷ್ಟ 20-25 ರೂ. ಕಡಿಮೆಗೊಳಿಸುವಂತೆ ತಮ್ಮ ಪ್ರಧಾನಿಗಳಿಗೆ ಒತ್ತಡ ತರಲಿ. ಅಗತ್ಯ ವಸ್ತುಗಳ ಏರಿಕೆಯ ನಡುವೆಯ ದೇಶದ ಜನರಿಗೆ ಮತ್ತೊಂದು ಆಘಾತ ನೀಡಿದ್ದು ಅಡುಗೆ ಅನಿಲದ ದರವನ್ನು 50 ರೂ. ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿರುವುದು. ಸಾಮಾನ್ಯ ಸಿಲಿಂಡರ್‌ ಜೊತೆಗೆ ಉಜ್ವಲಾ ಯೋಜನೆಗೂ ಇದು ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯ ಬಿಜೆಪಿ ನಾಯಕರು ಈ ಬೆಲೆ ಏರಿಕೆಗೆ ಏನನ್ನುತ್ತಾರೆ ?

ಜೀವ ವಿಮೆ, ಆರೋಗ್ಯ ವಿಮೆಗಳ ಮೇಲೂ ಶೇ.18 ರಷ್ಟು ಜಿಎಸ್ಟಿ ಹೇರಲಾಗಿದೆ, ಮೊದಲ ಬಾರಿಗೆ ಕೃಷಿ ಉತ್ಪನ್ನಗಳಿಗೂ ಜಿಎಸ್ಟಿ ಹಾಕಲಾಗಿದೆ. ಎಟಿಎಂ ಶುಲ್ಕಗಳೂ ಏರಿಕೆ ಆಗುತ್ತಿವೆ. ಅಕ್ಕಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಶೇ. 70 ರಿಂದ 80ರಷ್ಟು ದುಪ್ಪಟಾಗಿವೆ. ಶೇ. 4-5ರಷ್ಟು ಟೋಲ್‌ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ. ಆಳು ಸರ್ಕಾರಗಳ ಅಸಮರ್ಥ ಆರ್ಥಿಕ ನೀತಿಯಿಂದಾಗಿ ಹಣದುಬ್ಬರ ಗಣನೀಯ ಏರಿಕೆಯಾಗಿದೆ. ಇದು ಜನ ಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಇನ್ನು, ಬೆಲೆ ಏರಿಕೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಾಯಕರು, ʼಬೇರೆ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯದಲ್ಲಿ ಬೆಲೆ ಏರಿಕೆ ಮಿತಿಯಲ್ಲಿದೆʼ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ. ಅವರು ಅಷ್ಟು ಮಾಡಿದ್ದಾರೆ, ನಾವು ಇಷ್ಟೇ ಮಾಡಿದ್ದೇವೆ ಎಂದು ಪಟ್ಟಿ ಬಿಡುಗಡೆ ಮಾಡಿ ತೋರಿಸುವುದು ಒಂದು ಸರ್ಕಾರದ ಆಡಳಿತಕ್ಕೆ ಶೋಭೆಯಲ್ಲ ಎನ್ನುವುದನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಅರ್ಥೈಸಿಕೊಳ್ಳಲಿ. ಆರೋಪಗಳನ್ನು ಪರಸ್ಪರ ಮಾಡಿಕೊಳ್ಳುವ ಬದಲು ರಾಜ್ಯ ಸರ್ಕಾರ ಎಲ್ಲಿ ಎಡವಿದೆ ಎನ್ನುವುದನ್ನು ತಿಳಿದು ಸರಿಪಡಿಸಿಕೊಳ್ಳಬೇಕಿದೆ. ಬಿಜೆಪಿ ಅವರು ಜನಪರ ಜವಾಬ್ದಾರಿ ಇರುವವರು ಹೌದಾದರೇ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವ ಮೊದಲು, ತಮ್ಮದೇ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ಧೋರಣೆಯ ವಿರುದ್ಧ ಹೋರಾಟ ನಡೆಸಿ, ಜನಸಾಮಾನ್ಯರಿಗೆ ಅನುಕೂಲ ಆಗುವಂತೆ ಮಾಡಲಿ. ಉಳಿದದ್ದು ಮತ್ತೆ ನೋಡೋಣ.  

-ಶ್ರೀರಾಜ್‌ ವಕ್ವಾಡಿ

Thursday, April 3, 2025

ಬ್ರಹ್ಮಾವರ ಆಕಾಶವಾಣಿ ಮರುಪ್ರಸರಣ ಕೇಂದ್ರದ ನಿರುಪಯುಕ್ತ ಜಾಗ ಸದ್ಬಳಕೆಯಾಗಲಿ



-ಶ್ರೀರಾಜ್‌ ವಕ್ವಾಡಿ

ನಿರುಪಯುಕ್ತ ಜಾಗವನ್ನು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಆಗ್ರಹ

 ಬ್ರಹ್ಮಾವರದಲ್ಲಿ 1976ರಲ್ಲಿ ಮಂಗಳೂರು ಆಕಾಶವಾಣಿಯ ಮರು ಪ್ರಸರಣ ಕೇಂದ್ರ ಸ್ಥಾಪನೆಯಾಗಿತ್ತು. ಆಕಾಶವಾಣಿ ಮರುಪ್ರಸರಣ ಕೇಂದ್ರಕ್ಕಾಗಿ ಬಿಟ್ಟುಕೊಡಲಾಗಿದ್ದ ವಾರಂಬಳ್ಳಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಸುಮಾರು  22.96 ಎಕರೆ ಜಾಗದಲ್ಲಿ ಈಗ ಸುಮಾರು 20 ಎಕರೆ ಅಷ್ಟು ಪ್ರದೇಶವೀಗ ನಿರುಪಯುಕ್ತವಾಗಿ ಸಂಪೂರ್ಣ ಗಿಡಗಂಟಿಗಳು ಬೆಳೆದುಕೊಂಡಿವೆ. ಹಾಳು ಬಿದ್ದ ಈ ಜಾಗವನ್ನು ಸರಿಪಡಿಸಿ ಬ್ರಹ್ಮಾವರದಲ್ಲಿ ಅಗತ್ಯ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಿಟ್ಟುಕೊಡಬೇಕೆಂಬ ಆಗ್ರಹ ಈಗ ಮತ್ತೆ ಕೇಳಿಬಂದಿದೆ.

ಕಳೆದ ಎರಡು ಮೂರು ವರ್ಷಗಳ ಹಿಂದೆ ಬ್ರಹ್ಮಾವರ ಫೌಂಡೆಶನ್‌ ನ ಮ್ಯಾನೇಜಿಂಗ್‌ ಟ್ರಸ್ಟಿ ಬಿ. ಗೋವಿಂದರಾಜ್‌ ಹೆಗ್ಡೆ ಅವರು, ರಾಜ್ಯ ಸರ್ಕಾರದ ಮೇಲೆ  ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ಹಾಳುಬಿದ್ದ 20 ಎಕರೆಯಷ್ಟು ಜಾಗವನ್ನು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಿಟ್ಟುಕೊಟ್ಟು ಜನರಿಗೆ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಹತ್ತಿರ ತರುವಂತೆ ಮಾಡಬೇಕೆಂದು ಆಗ್ರಹಿಸಿದ್ದರು. ಅಂದಿನ ರಾಜ್ಯ ಸರ್ಕಾರದ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಗೂ ಇಂದಿನ ವಿಧಾನ ಪರಿಷತ್‌ ನ ಸದಸ್ಯರಾಗಿರುವ ಮಂಜುನಾಥ ಭಂಡಾರಿ ಅವರು ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಿದ್ದರು ಹೊರತಾಗಿ ಮತ್ತೇನೂ ಪ್ರಯೋಜನವಾಗಿಲ್ಲ.

ಸ್ವತಃ ಗೋವಿಂದರಾಜ್‌ ಹೆಗ್ಡೆ ಅವರೇ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಕೇಂದ್ರ ವಾರ್ತಾ ಮತ್ತು ಪ್ರಸರಣ ಸಚಿವರು, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಸಚಿವರಿಗೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರು, ಶಾಸಕರು, ಉಡುಪಿ ಜಿಲ್ಲಾಧಿಕಾರಿ, ಕುಂದಾಪುರ ತಾಲೂಕು ಉಪ ವಿಭಾಗಾಧಿಕಾರಿ ಸೇರಿ ಸಂಬಂಧಿಸಿದ ಎಲ್ಲಾ ಇಲಾಖೆಗೆ ಮತ್ತು ಸಚಿವರಿಗೆ, ಅಧಿಕಾರಿಗಳಿಗೆ ಈ ಸಂಬಂಧಿಸಿದಂತೆ ಮನವಿ ಪತ್ರ ನೀಡಿದ್ದಾರೆ. ಆದರೇ, ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಯರು, ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಉಡುಪಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮಾತ್ರ ಪತ್ರದ ಮೂಲಕ ಸ್ಪಂದಿಸಿದ್ದನ್ನು ಬಿಟ್ಟರೇ, ಯಾವುದೇ ಅಗತ್ಯ ಕ್ರಮ ವಹಿಸುವುದಕ್ಕೆ ಈವರೆಗೆ ಮುಂದಾಗಿಲ್ಲ ಎನ್ನುವುದು ದುರಂತ.

ಹೆಚ್ಚಿನ ಸರ್ಕಾರಿ ಕಚೇರಿಗಳಿಗೆ ಜಾಗ ಅಲಭ್ಯ :

ಬ್ರಹ್ಮಾವರ ತಾಲೂಕು ರಚನೆಯಾಗಿದ್ದು 2014ರಲ್ಲಿ, ಆದರೂ, ಹೆಚ್ಚಿನ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಜಾಗ ಲಭ್ಯವಾಗಿಲ್ಲ. ತಾಲೂಕು ಪಂಚಾಯತ್‌ ಕಚೇರಿ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ, ಸಹಾಯಕ ನಿರ್ದೇಶಕರು ಮೀನುಗಾರಿಕಾ ಇಲಾಖೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ  ಲೋಕೋಪಯೋಗಿ ಇಲಾಖೆ, ಕಾರ್ಮಿಕ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ರೇಷ್ಮೆ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ಇಲಾಖೆ, ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಸೇರಿ ಇನ್ನೂ ಕೆಲವು ಇಲಾಖೆಗಳ ಕಚೇರಿ ನಿರ್ಮಾಣಕ್ಕಾಗಿ ಸೂಕ್ತ ಜಾಗ ಲಭ್ಯವಿಲ್ಲ.

ಸರ್ಕಾರಿ ಕಚೇರಿಗಳಲ್ಲದೇ ಸುಸಜ್ಜಿತ ಬಸ್ಸು ತಂಗುದಾಣ, ಇನ್ನಿತರ ಬಾಡಿಗೆ ವಾಹನಗಳ ನಿಲ್ದಾಣ, ಸಂತೆ ಮಾರ್ಕೇಟ್‌ ಗಳ ನಿರ್ಮಾಣಕ್ಕೆ ವ್ಯವಸ್ಥಿತ ಸ್ಥಳಾವಕಾಶದ ಕೊರತೆಯಿದೆ. ಬ್ರಹ್ಮಾವರದ ಕೇಂದ್ರ ಭಾಗದಲ್ಲೇ ಇರುವ ಆಕಾಶವಾಣಿ ಮರುಪ್ರಸರಣ ಕೇಂದ್ರದಲ್ಲಿ ಸದ್ಯ ಸುಮಾರು 21.72 ಎಕರೆ ನಿರುಪಯುಕ್ತ ಜಾಗವಿದೆ. ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಬೇಕಿರುವುದು ಅನಿವಾರ್ಯವಿದೆ. 

ರಸ್ತೆ ಅಗಲೀಕರಣಕ್ಕೆ ಜಾಗ ಸ್ವಾದೀನ :

ಆಕಾಶವಾಣಿ ಬ್ರಹ್ಮಾವರದ 22.96 ಎಕರೆ ಪ್ರದೇಶದಲ್ಲಿ, ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಗಲೀಕರಣಕ್ಕಾಗಿ ಜಾಗ ಸ್ವಾದೀನಪಡಿಸಿಕೊಂಡಿದ್ದರು. ಒಟ್ಟು ಜಮೀನಿನಲ್ಲಿ ರಸ್ತೆಗೆ ವಿಂಗಡಿಸಿದ 0.32 ಎಕರೆ ಜಮೀನು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸ್ವಾಧೀನಪಡಿಸಿಕೊಂಡ 0.61.75 ಎಕರೆ ಜಮೀನು ಹೊರತು ಪಡಿಸಿದರೇ, 21.72 ಎಕರೆ ಜಮೀನು ಈಗ ಆಕಾಶವಾಣಿ ಸ್ವಾಧೀನದಲ್ಲಿದೆ. ಈ ಅನುಪಯುಕ್ತ ಜಮೀನನ್ನು ಬ್ರಹ್ಮಾವರ ತಾಲೂಕು ಕೇಂದ್ರದ ಅಗತ್ಯ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯವಿದೆ.

ಸಾರ್ವಜನಿಕ ಉದ್ದೇಶಕ್ಕೆ ಜಮೀನು ಬಳಕೆ :

ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಕ್ಯಾತಮಾರನಹಳ್ಳಿಯ 100 ಎಕರೆ ಜಮೀನು ಮೈಸೂರಿನಲ್ಲಿರುವ ಭಾರತ ಸರ್ಕಾರದ ಪಠ್ಯ ಪುಸ್ತಕ ಮುದ್ರಣಾಲಯಕ್ಕೆ ಮಂಜೂರಾಗಿತ್ತು. ಈ ಪೈಕಿ 15 ಎಕರೆ ಹೆಚ್ಚುವರಿ ಜಮೀನನ್ನು ಮೈಸೂರು ಜಿಲ್ಲೆಯ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಆದೇಶದ ಅನ್ವಯ ಜಿಲ್ಲಾಧಿಕಾರಿಯವರ ವಶಕ್ಕೆ ನೀಡಿ ಜಿಲ್ಲಾಧಿಕಾರಿಯವರ ಕಚೇರಿಯನ್ನು ನಿರ್ಮಿಸಲಾಗಿರುವ ಉದಾಹರಣೆ ಇದೆ.

ಬ್ರಹ್ಮಾವರ ಆಕಾಶವಾಣಿಗೆ ಮಂಜೂರಾದ ಸ್ಥಳದ ಪೈಕಿ ನಿರುಪಯುಕ್ತವಾಗಿ ಬಿದ್ದಿರುವ ಈ ಜಾಗ ಮಂಜೂರಾತಿಯಾಗಿ 55 ವರ್ಷಗಳು ಕಳೆದಿವೆ. ಬ್ರಹ್ಮಾವರದಲ್ಲಿ ವಿಶೇಷ ತಹಶೀಲ್ದಾರರ ಕಚೇರಿ ತೆರೆದಿರುವುದು 2003ರಲ್ಲಿ. ತಾಲೂಕು ರಚನೆಗೆ ಇದು ಅಂದು ಮುನ್ಸೂಚನೆಯಾಗಿತ್ತು. ತಾಲೂಕು ರಚನೆಯಾಗಿ ಈಗಾಗಲೇ ದಶಕ ಕಳೆದಿದೆ. ಎರಡರಿಂದ ಮೂರು ಎಕರೆ ಜಾಗ ಆಕಾಶವಾಣಿಗೆ ಬಿಟ್ಟು ಕಂದಾಯ ಇಲಾಖೆ ಸುಪರ್ದಿಗೆ ಪಡೆದರೆ ಬ್ರಹ್ಮಾವರ ತಾಲೂಕಿನ ಅಬಿವೃದ್ಧಿಗೆ ಪೂರಕವಾಗಲಿದೆ.

2015ರಲ್ಲೇ ಬಿದ್ದುಹೋದ ಆಂಟೇನಾ :  

ಬ್ರಹ್ಮಾವರ ಆಕಾಶವಾಣಿಯ ಮರುಪ್ರಸರಣ ಕೇಂದ್ರದ ಪ್ರಸರಣ ಸಾಮರ್ಥ್ಯ 20ಕೆಡಬ್ಲ್ಯೂ ಆಗಿದ್ದು 28.04.2015ರಲ್ಲೇ 108ಎಮ್.ಟಿ ಸಾಮರ್ಥ್ಯದ ಎರಡು ಆಂಟೇನಾ ಬಿದ್ದು ಹೋಗಿವೆ. ಈಗ ಪ್ರಸರಣ ಸಾಮರ್ಥ್ಯ 4ಕೆಡಬ್ಲ್ಯೂ ಗೆ ಇಳಿಕೆಯಾಗಿರುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಹತ್ತು ವರ್ಷಗಳ ಹಿಂದೆಯೇ ಬಿದ್ದು ಹೋದ ಆಂಟೆನಾಗಳನ್ನು ರಿಪೇರಿ ಮಾಡುವುದು ಕೂಡ ಅಸಾಧ್ಯ ಎಂದು ಹೇಳಲಾಗುತ್ತಿದೆ. ಆದ್ದರಿಂದ ಮಂಗಳೂರಿನಲ್ಲಿ ಇರುವಂತೆ ಬ್ರಹ್ಮಾವರದಲ್ಲಿ 1.72 ಎಕರೆ ಜಾಗದಲ್ಲಿ ಎಫ್.ಎಂ ಪ್ರಾರಂಭಿಸಿ ಉಳಿದ 20 ಎಕರೆ ಜಾಗವನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟು, ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿರುವ 52 ಗ್ರಾಮಗಳು ಹಾಗೂ 27 ಗ್ರಾಮ ಪಂಚಾಯತ್‌ ಗಳ ಜನರಿಗೆ ಸರ್ಕಾರಿ ಕಚೇರಿಗಳನ್ನು ಹತ್ತಿರದಲ್ಲೇ ಲಭ್ಯವಾಗುವಂತೆ ಮಾಡುವುದು ಸೂಕ್ತ.

ಸದ್ಯ ಸ್ಥಳ ಲಭ್ಯವಿರದೇ ಇರುವ ಸರ್ಕಾರಿ ಕಚೇರಿಗಳನ್ನು ಮತ್ತು ಇನ್ನಿತರ ಅವಶ್ಯಕ ವ್ಯವಸ್ಥೆಗಳನ್ನು ಬ್ರಹ್ಮಾವರದ ಕೇಂದ್ರ ಭಾಗದಲ್ಲಿ ಒಂದೇ ಕಡೆ ರಚಿಸಿದರೇ ಬ್ರಹ್ಮಾವರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವುದಲ್ಲದೇ, ತಾಲೂಕಿನ 52 ಗ್ರಾಮಗಳ ಸಾರ್ವಜನಿಕರಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದೆ.

ಬ್ರಹ್ಮಾವರ ಆಕಾಶವಾಣಿ ಮರುಪ್ರಸರಣ ಕೇಂದ್ರದಲ್ಲಿರುವ ಹೆಚ್ಚುವರಿ ಜಾಗವನ್ನು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಬಳಸಿಕೊಳ್ಳುವುದಕ್ಕೆ ಬೇಕಾಗಿ ಸ್ವಾದೀನ ಪಡಿಸಿಕೊಳ್ಳುವ ಪ್ರಕ್ರಿಯೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಆಗಬೇಕಿದೆ. ಅಲ್ಲಿರುವ ಜಾಗವನ್ನು ಸ್ವಾದೀನ ಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಇನ್ನಷ್ಟು ತಿಳಿದುಕೊಂಡು ಮುಂದಿನ ಕ್ರಮ ವಹಿಸುವೆ.  

ಡಾ. ಕೆ. ವಿದ್ಯಾಕುಮಾರಿ

ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ.           

 

ಈ ಸಂಬಂಧಿಸಿದಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇನೆ. ಸಂಬಂಧಪಟ್ಟವರು ಯಾರೂ ಇಲ್ಲಿಯವರೆಗೆ ಕ್ರಮ ತೆಗೆದುಕೊಂಡಿಲ್ಲ. ಸೂಕ್ತ ಸಮಯದಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳುತ್ತೇನೆ.

-ಬಿ. ಗೋವಿಂದರಾಜ್‌ ಹೆಗ್ಡೆ

ಮ್ಯಾನೇಜಿಂಗ್‌ ಟ್ರಸ್ಟಿ, ಬ್ರಹ್ಮಾವರ ಫೌಂಡೇಶನ್‌.  

ಯತ್ನಾಳ್‌ ಉಚ್ಛಾಟನಾ ಪ್ರಸಂಗ ಮತ್ತು ಹಿಂದೂ ಪಕ್ಷ

 


ಬಯಲಾಗಲಿದೆಯೇ 40 ಸಾವಿರ ಕೋ.ರೂ. ಕೋವಿಡ್‌ ಹಗರಣದ ದಾಖಲೆ !?

ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಯಡಿಯೂರಪ್ಪ ಅವರ ವಿರುದ್ಧ ಮುಲಾಜಿಲ್ಲದೇ ಟೀಕಿಸುತ್ತಿದ್ದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಉಚ್ಛಾಟನೆ ರಾಜಕೀಯ ವಲಯಕ್ಕೆ ಬಹಳ ದೊಡ್ಡ ಆಶ್ಚರ್ಯವನ್ನೇನೂ ಉಂಟು ಮಾಡಿಲ್ಲ. ಆದರೇ, ಸದ್ಯದ ಪರಿಸ್ಥಿತಿಯಲ್ಲಿ ಉಚ್ಛಾಟನೆ ಮಾಡುವ ಮನಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್‌ ಇದ್ದಿರಲಿಲ್ಲ ಎಂಬ ಅಭಿಪ್ರಾಯವಿದ್ದಿತ್ತು. ಹೈಕಮಾಂಡ್‌ ಮಟ್ಟದಲ್ಲಿ ಒಮ್ಮಿಂದೊಮ್ಮೆಲೆ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ ಈ ʼಉಚ್ಛಾಟನಾ ಪ್ರಸಂಗʼವೊಂದು ನಡೆದು ಹೋಗಿರುವುರು ಹುಬ್ಬೇರಿಸಿದೆ.

ರಾಜ್ಯ ಬಿಜೆಪಿ ರಾಜಕೀಯಟ್ಟಿಗೆ ಇದೊಂದು ಸುದೀರ್ಘ ಕಾಲದ ಹಾಸ್ಯ ಪ್ರಸಂಗ ಎಂಬಂತೆಯೇ ಕಾಣಿಸಿತ್ತು. ಪಕ್ಷದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎನ್ನುವಾಗ ಉಚ್ಛಾಟನೆ ಮತ್ತು ಪಕ್ಷಕ್ಕೆ ಅಗತ್ಯವಿದೆ ಎನ್ನುವಾಗ ಉಚ್ಛಾಟನೆಯ ನಿರ್ಧಾರಗಳು ಅವಧಿ ಪೂರ್ಣ ಆಗುವ ಮೊದಲೇ ಅರ್ಧದಲ್ಲೇ ವಾಪಾಸು ಪಡೆಯುವ ಸಂಪ್ರದಾಯ ಬಿಜೆಪಿಯಲ್ಲಿ ಸಾಮಾನ್ಯ. ಉಚ್ಛಾಟನೆಗೊಂಡವರು ಪಕ್ಷಕ್ಕೆ ರಾಜಕೀಯವಾಗಿ ನೈತ್ಯಾತ್ಮಕ ಪರಿಣಾಮ ಬೀರಬಹುದು ಎಂಬಂತಹ ವಾತಾವರಣ ಕಾಣಿಸಿಕೊಂಡರೆ, ಅವರನ್ನು ಕರೆಸಿಕೊಂಡು ವ್ಯವಸ್ಥೆ ಮಾಡಿ, ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳುವ ಪದ್ಧತಿ ಬಿಜೆಪಿಯಲ್ಲಂತೂ ಸಾಮಾನ್ಯ ಎಂಬಂತಿದೆ. ಇರಲಿ.

ಯತ್ನಾಳ್‌ ಉಚ್ಛಾಟನೆಯ ಬೆನ್ನಲ್ಲೇ ಪಂಚಮಸಾಲಿ ಸಮುದಾಯದ ಬಸವ ಮೃತ್ಯುಂಜಯ ಸ್ವಾಮೀಜಿ ಅವರು ಪರ ವಹಿಸಿ ಬೆಂಬಲ ಸೂಚಿಸಿದ್ದು ಮಾತ್ರವಲ್ಲದೇ, ರಾಜ್ಯವ್ಯಾಪಿ ಪ್ರತಿಭಟನೆಗೂ ಕರೆಕೊಟ್ಟಿದ್ದಾರೆ. ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಬಸವ ಮೃತ್ಯುಂಜಯ ಸ್ವಾಮೀಜಿ ಅಂದಿನ ಸರ್ಕಾರಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದ್ದರು. ಹಾಗಾಗಿ ಸ್ವಾಮೀಜಿ ಮತ್ತು ಪಂಚಮಸಾಲಿ ಸಮುದಾಯ ಯತ್ನಾಳರ ಉಚ್ಛಾಟನೆಯನ್ನು ವಿರೋಧಿಸಿ ಬಿಜೆಪಿ ಹೈಕಮಾಂಡ್‌ ವಿರುದ್ಧ ನಿಂತರೇ ಬಿಜೆಪಿಗೆ ಮತ್ತಷ್ಟು ನಷ್ಟವಾಗಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೇ, ಈ ವಿಚಾರವಾಗಿ ಪಂಚಮಸಾಲಿ ಸಮುದಾಯ ಮುಂದೆ ಬರುವ ಸಾಧ್ಯತೆ ಕಡಿಮೆಯಿದೆ ಎನ್ನುವ ಮಾತುಗಳೂ ಇವೆ.

ಯಡಿಯೂರಪ್ಪ ಅವರ ಮೇಲೆ ಕೋವಿಡ್‌ ಹೆಸರಿನಲ್ಲಿ ನಲವತ್ತು ಸಾವಿರ ಕೋಟಿ ರೂ. ಅಕ್ರಮವೆಸಗಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದರು. ಮಾತ್ರವಲ್ಲದೇ, ಪಕ್ಷದಿಂದ ಹೊರಹಾಕಿದರೇ, ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್‌ ಸಂದರ್ಭದಲ್ಲಿ ನಡೆದಿದ್ದ ಈ ನಲವತ್ತು ಸಾವಿರ ಕೋಟಿ ಹಗರಣದ ಬಗ್ಗೆ ದಾಖಲೆ ಬಯಲುಗೊಳಿಸುತ್ತೇನೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದರು. ಈಗ ಹೈಕಮಾಂಡ್‌ ಯತ್ನಾಳ್‌ ಅವರನ್ನು ಉಚ್ಛಾಟಿಸಿದೆ. ಯತ್ನಾಳ್‌ ಅವರಿಗೆ ತಾವು ಆಡಿರುವ ಮಾತಿನ ನೆನಪಿದೆಯೇ ? ಯಡಿಯೂರಪ್ಪ ಅವರದ್ದು ಹೊಂದಾಣಿಕೆ ರಾಜಕೀಯ ಎಂದು ಆರೋಪಿಸುವ ಯತ್ನಾಳ್‌, ತಮ್ಮ ಪ್ರಾಮಾಣಿಕತೆಯನ್ನು ತಾವು ಹೇಳಿದ ಮಾತಿನಂತೆಯೇ ಉಳಿಸಿಕೊಳ್ಳಬೇಕಿದೆ. ಯಡಿಯೂರಪ್ಪ ಅವರ ವಿರುದ್ಧ ಮಾಡಿರುವ ಕೋವಿಡ್‌ ಹಗರಣದ ಆರೋಪಕ್ಕೆ ದಾಖಲೆ ಬಿಡುಗಡೆಗೊಳಿಸಲಿ. ಇಲ್ಲವಾದರೇ, ಯತ್ನಾಳ್‌ ಅವರದ್ದೂ ಕೂಡ ಹೊಂದಾಣಿಕೆ ರಾಜಕಾರಣವೇ ಆಗುತ್ತದೆ.  

ಯತ್ನಾಳ್‌ ತಾವು ಅತ್ಯಂತ ನೇರವಂತಿಕೆಯವರು, ಪ್ರಾಮಾಣಿಕರು ಎಂದು ಹೇಳಿಕೊಳ್ಳುವುದಾದರೇ, ಬಿಜೆಪಿ ಉಚ್ಛಾಟನೆ ಮಾಡಿರುವುದಕ್ಕೆ, ಬಿಜೆಪಿಗೆ ಪರ್ಯಾಯವಾಗಿ ʼಹಿಂದೂ ಪಕ್ಷʼವೊಂದನ್ನು ಕಟ್ಟುವುದು ಬೇಕಾಗಿಲ್ಲ. ಯಡಿಯೂರಪ್ಪ ಮೇಲೆ ಅವರು ಮಾಡಿರುವ ಆರೋಪಕ್ಕೆ ದಾಖಲೆ ಬಿಡುಗಡೆಗೊಳಿಸಿದರಷ್ಟೇ ಸಾಕು, ಅವರ ನಿರೀಕ್ಷೆಯಂತೆ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರ ರಾಜಕೀಯ ಭವಿಷ್ಯ ತಲೆಕೆಳಗಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೇ, ಯತ್ನಾಳ್‌ ಈಗ ಬಿಜೆಪಿಗೆ ಪರ್ಯಾಯವಾಗಿ ʼಹಿಂದೂ ರಾಜಕೀಯ ಪಕ್ಷʼವನ್ನು ಕಟ್ಟುವುದಕ್ಕಿಂತ ಮೊದಲು ಬಿಜೆಪಿ ಪಕ್ಷದ ಅಧಿಕಾರವಧಿಯಲ್ಲಿ ಆಗಿದೆ ಎಂದು ಅವರೇ ಹೊರಿಸಿರುವ ಆರೋಪಕ್ಕೆ ದಾಖಲೆ ಬಿಡುಗಡೆ ಮಾಡುವ ಧೈರ್ಯ ತೋರಬೇಕಿದೆ.    

ಇನ್ನು, ಯತ್ನಾಳ್‌ ಉಚ್ಛಾಟನೆಯಿಂದ ಬಿಜೆಪಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಪಕ್ಷದ ಕೆಲವು ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೇ, ಯತ್ನಾಳ್‌ ಉಚ್ಛಾಟನೆ ಬಿಜೆಪಿಗೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ತಿಳಿಯಬೇಕಾದರೇ, ಚುನಾವಣೆಯೇ ಆಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಬದಲಾಯಿಸುವ ಯಾವುದೇ ಸಾರ್ವತ್ರಿಕ ಚುನಾವಣೆ ಇಲ್ಲ.

ಬರುವ ವಿಧಾನಸಭಾ ಚುನಾವಣೆಯವರೆಗೂ ಉಚ್ಛಾಟನೆ ಆದೇಶವನ್ನು ಹಿಂಪಡೆಯದಿದ್ದಲ್ಲಿ, ಯತ್ನಾಳ್ ಚುನಾವಣೆಗೆ ಪಕ್ಷಾಂತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇಬೇಕು. ಅಥವಾ ಅವರ ಉದ್ದೇಶಿತ ಪ್ರಾದೇಶಿಕ ಪಕ್ಷವನ್ನು ಕಟ್ಟುವುದಕ್ಕೆ ಬಹಳಷ್ಟು ಶ್ರಮವಹಿಸಬೇಕಿದೆ. ಈ ನಡುವೆ, ಈವರೆಗೆ ಯತ್ನಾಳ್ ಅವರನ್ನು ಬೆಂಬಲಿಸಿಕೊಂಡು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿ, ಹರೀಶ್, ಮಾಜಿ ಸಚಿವ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರ ಮುಂದಿನ ನಿಲುವು ಏನು? ಎನ್ನುವುದೇ ಸದ್ಯದ ರಾಜಕೀಯ ಕುತೂಹಲ. ಈ ನಡುವೆಯೇ ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಬಹಿರಂಗವಾಗಿಯೇ ಸಹಾನುಭೂತಿ ತೋರುತ್ತಿರುವ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಅವರಿಗೆ ಹಾಗೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಬೆಂಬಲಿಸಿ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಮತ್ತು ವಿಜಯೇಂದ್ರ ವಿರೋಧಿ ಗುಂಪಿನಲ್ಲಿದ್ದ ಶಾಸಕ ಹರೀಶ್ ಅವರಿಗೂ ಕಾರಣ ಕೇಳಿ ಹೈಕಮಾಂಡ್ ನೋಟಿಸ್ ನೀಡಿದೆ. ಈ ಎಲ್ಲಾ ಬೆಳವಣಿಗೆಗಳು ಹೇಗೆ ಮುಂದೆ ತೆರೆದುಕೊಳ್ಳುತ್ತವೆ ಎನ್ನುವುದು ರಾಜಕೀಯ ಕುತೂಹಲ. ರಾಜ್ಯ ಬಿಜೆಪಿ ಮಟ್ಟಿಗೆ ಯತ್ನಾಳ್‌ ಅವರ ಉಚ್ಛಾಟನೆ ಮತ್ತು ಅದರ ಸುತ್ತ ಬೆಳೆದ ರಾಜಕೀಯ ಪ್ರಸಂಗ ಸದ್ಯದ ಸ್ಥಿತಿಯಲ್ಲಿ ರಾಜ್ಯ ರಾಜಕಾರಣದ ಮೇಲೆ ಮಹತ್ವದ ವಿದ್ಯಾಮಾನವಾಗಿ ಪರಿಣಾಮವನ್ನೇನೂ ಬೀರದು ಎಂದೇ ಕಾಣಿಸುತ್ತದೆ.

ಈ ಮೇಲೆ ಉಲ್ಲೇಖಿಸಿದ ಹಾಗೆ ಯತ್ನಾಳ್‌ ಮುಂದಿನ ದಿನಗಳಲ್ಲಿ ʼಹಿಂದೂ ಪಕ್ಷʼವೊಂದನ್ನು ಕಟ್ಟುವುದಕ್ಕೆ ಮುಂದಾದರೇ, ಜನರಿಂದ ಯಾವ ಸ್ಪಂದನೆ ದೊರಕಲಿದೆ ಎನ್ನುವುದು ಪ್ರಶ್ನೆ. ಯತ್ನಾಳ್‌ ನೇರವಂತಿಕೆಯನ್ನು ಅಥವಾ ಮುಲಾಜಿಲ್ಲದೇ ಮಾತನಾಡುವುದನ್ನು ರಾಜಕೀಯವಾಗಿ ಬಹುಶಃ ಎಲ್ಲರೂ ಒಪ್ಪಬಹುದೇನೋ, ಆದರೆ, ಯತ್ನಾಳ್‌ ಅವರನ್ನು ಒಬ್ಬ ರಾಜಕೀಯ ಸಮರ್ಥ ನಾಯಕರನ್ನಾಗಿ ಇಡೀ ರಾಜ್ಯ ಒಪ್ಪಲಾರದು ಎಂದೇ ಕಾಣಿಸುತ್ತಿದೆ. ಯತ್ನಾಳ್‌ ಕೂಡ ಆ ಮುಖವಾಗಿ ತಮ್ಮ ರಾಜಕೀಯ ಜೀವನದಲ್ಲಿ ಬೆಳೆಯಲಿಲ್ಲ. ಬೆಳೆಯುವುದಕ್ಕೆ ಬಿಜೆಪಿ ಬಿಡಲೂ ಇಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ಮುಂಪಂಕ್ತಿಯ ರಾಜಕೀಯದಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕೂಡ ಮಾಧ್ಯಮಗಳ ಹೇಳಿಕೆಯ ಮೂಲಕ ಅಷ್ಟೆ ಹೊರತು ಮತ್ತೇನಿಲ್ಲ.

ರಾಜ್ಯ ರಾಜಕಾರಣದ ಮಟ್ಟಿಗೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಸೆಣಸಾಡಿದವರ ಪೈಕಿ ಯಡಿಯೂರಪ್ಪ ಕೂಡ ಒಬ್ಬರು. ರಾಷ್ಟ್ರೀಯ ಪಕ್ಷಗಳಿಗೆ ಹೋಗುವ ಮತಗಳನ್ನು ಡಿವೈಡ್‌ ಮಾಡುವುದರಲ್ಲಷ್ಟೇ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಬೆಳೆದಿವೆ ಬಿಟ್ಟರೆ, ತಮಿಳುನಾಡು ಅಥವಾ ಕೇರಳದ ರಾಜಕಾರಣದಲ್ಲಿ ಇರುವ ಹಾಗೆ, ಅಥವಾ ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಬಿಹಾರ, ಜಾರ್ಖಾಂಡ್‌ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳಿಗಿರುವಷ್ಟು ಬಲ ಕರ್ನಾಟಕದ ಪ್ರಾದೇಶಿಕ ಪಕ್ಷಗಳಿಗಿಲ್ಲ. ಇಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದ ನಾಯಕರೆಲ್ಲಾ ಅಧಿಕಾರಕ್ಕೆ ಬರಲು ಸಾಧ್ಯವಾಗದೇ ಮತ್ತೆ ರಾಜಕೀಯದಲ್ಲಿ ಮುಂಪಂಕ್ತಿಗೆ ಬರುವುದಕ್ಕಾಗಿ ರಾಷ್ಟ್ರೀಯ ಪಕ್ಷಗಳನ್ನೇ ಒಂದಲ್ಲಾ ಒಂದು ರೀತಿಯಲ್ಲಿ ಸೇರಿಕೊಂಡ ಉದಾಹರಣೆಗಳ ಪಟ್ಟಿ ದೊಡ್ಡದಿದೆ. ಯತ್ನಾಳ್‌ ಪ್ರಾದೇಶಿಕ ಪಕ್ಷವನ್ನು ಕಟ್ಟುವುದಕ್ಕೆ ಪ್ರಯತ್ನ ಮಾಡಿದರೇ, ಇದೇ ಪಟ್ಟಿಗೆ ಸೇರುತ್ತಾರೆ ಹೊರತು ಮತ್ತೇನೂ ಆಗುವುದಿಲ್ಲ. 

ಪಂಚಮಸಾಲಿ ಲಿಂಗಾಯಿತ ಸಮುದಾಯವನ್ನೇ ತಮ್ಮ ಮತ ಬ್ಯಾಂಕ್ ಆಗಿ ಯತ್ನಾಳ್‌ ನೆಚ್ಚಿಕೊಂಡಿದ್ದಾರೆ. ಯತ್ನಾಳ್‌ ʼಸಮುದಾಯದ ನಾಯಕʼರಾಗಿ ಪ್ರಭಾವವನ್ನೂ ಬೆಳೆಸಿಕೊಂಡಿಲ್ಲ. ಹಿಂದೂ ಫೈರ್‌ ಬ್ರ್ಯಾಂಡ್‌ ಎಂಬ ರಾಜಕೀಯ ಪ್ರೇರಿತ ಬಿರುದು ಹಿಂದೂ ಮತಗಳಿರುವ ಕ್ಷೇತ್ರಗಳಲ್ಲಿ ಒಂದಿಷ್ಟು ಒಲವು ತೋರಬಹುದು ವಿನಃ ಮಹತ್ವದ ಪರಿಣಾಮ ಬಿಜೆಪಿಗೆ ಬೀರುವುದಿಲ್ಲ. ಇನ್ನು, ಬಿಜೆಪಿ ಅಥವಾ ಕಾಂಗ್ರೆಸ್‌, ಜೆಡಿಎಸ್ ಗೆ ಬದಲಾಗಿ ಯತ್ನಾಳ್‌ ಅವರೇ ಅನಿವಾರ್ಯ ಎಂಬಂತಹ ಯಾವ ವಾತಾವರಣವೂ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ. ಹಾಗಾಗಿ ಯತ್ನಾಳ್‌ ಅವರ ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆಗೆ ಬಹಳ ದೊಡ್ಡ ಮಟ್ಟದಲ್ಲಿ ಬೆಂಬಲ ದೊರಕಲಿದೆ ಎಂದು ಖಂಡಿತ ಹೇಳುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಈಗಂತೂ ಯತ್ನಾಳ್ ಮತ್ತು ಅವರನ್ನು ಬೆಂಬಲಿಸಿದವರ ಮುಂದಿನ ನಿರ್ಧಾರದ ಮೇಲೆ ಕುತೂಹಲವಂತೂ ಬೆಟ್ಟದಷ್ಟಿದೆ. ಕಾದು ನೋಡೋಣ.  

-ಶ್ರೀರಾಜ್‌ ವಕ್ವಾಡಿ