ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೇ, 2028ರ ವಿಧಾನಸಭಾ ಚುನಾವಣೆಗೆ ಒಕ್ಕಲಿಗ ವರ್ಸಸ್ ಲಿಂಗಾಯತ ರಾಜಕಾರಣಕ್ಕೆ ಮುನ್ನುಡಿ ಬರೆದ ಹಾಗಿದೆ. ಬಿಡದಿ ಟೌನ್ ಶಿಪ್ ವಿಚಾರವನ್ನು ಹೆಚ್ ಡಿ ದೇವೇಗೌಡ ಕುಟುಂಬ ಮತ್ತು ಸಿಎಂ ಡಿ.ಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡರೆ, ಇತ್ತ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಗೊಂದಲ ಇನ್ನೂ ಮುಗಿದಿಲ್ಲ. ಬಿ ವೈ ವಿಜಯೇಂದ್ರ ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು, ಹೈಕಮಾಂಡ್ ಗೆ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯಲ್ಲೂ ಒಕ್ಕಲಿಗ, ಲಿಂಗಾಯಯ ಸಂಘರ್ಷ ಇದೆ.
ಕರ್ನಾಟಕದ ರಾಜಕಾರಣ ಯಾವಾಗಲೂ ಸಾಮಾಜಿಕ ನ್ಯಾಯದ ಮುಖವಾಡದ ಅಡಿಯಲ್ಲಿ ಪ್ರಬಲ ಸಮುದಾಯಗಳ ಹಿತಾಸಕ್ತಿ ಕಾಯುವ ನೆಲೆಯಾಗಿಯೇ ಗುರುತಿಸಿಕೊಂಡಿದೆ. ಈ ಹಿಂದಿನಿಂದಲೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳೇ ಚುನಾವಣೆಯಲ್ಲಿ ನಿರ್ಣಾಯಕ ಎನ್ನಿಸಿವೆ. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದವರ ಪಟ್ಟಿಯನ್ನು ಗಮನಿಸಿದರೆ, ಅಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರೇ ಹೆಚ್ಚಿನ ಪಾಲು ಪಡೆದಿದ್ದಾರೆ. ಹಿಂದುಳಿದ ವರ್ಗವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಮುಖ್ಯಮಂತ್ರಿಗಳಾಗಿದ್ದಾರೆ. ಕೆಲವು ಅವಧಿಗಳಿಗೆ ಮಾತ್ರ ಕರ್ನಾಟಕದಲ್ಲಿ ಅಹಿಂದ ವರ್ಗದ ಮತಗಳು ನಿರ್ಣಾಯಕ ಎನ್ನಿಸಿವೆ.
ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, 2028ರ ವಿಧಾನಸಭಾ ಚುನಾವಣೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬಂಡವಾಳಶಾಹಿ ಮತ್ತು ಪ್ರಬಲ ಜಾತಿಗಳ ಹಿತಾಸಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಬಿಡದಿ ಟೌನ್ಶಿಪ್ ವಿವಾದ ಮತ್ತು ಬಿಜೆಪಿಯ ಆಂತರಿಕ ನಾಯಕತ್ವದ ಸಂಘರ್ಷಗಳು ಕೇವಲ ಅಭಿವೃದ್ಧಿ ಅಥವಾ ಆಡಳಿತದ ಪ್ರಶ್ನೆಗಳಲ್ಲ; ಅವು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಸಾಂಪ್ರದಾಯಿಕ 'ಹೆಜೆಮನಿ' ಅಥವಾ ಅಧಿಪತ್ಯ ಸಾಧಿಸುವ ಹೊಸ ರಾಜಕೀಯ ಸಂಘರ್ಷವಾಗಿದೆ.
ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಹೆಸರಿನಲ್ಲಿ ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನಡೆ, ನವ ಉದಾರೀಕರಣದ ನೀತಿಗಳ ಮುಂದುವರಿದ ಭಾಗ. ಆದರೆ, ಇದರ ಹಿಂದಿರುವ ರಾಜಕೀಯ ಆಯಾಮ ಒಕ್ಕಲಿಗ ಸಮುದಾಯದ ಮೇಲಿನ ಹಿಡಿತಕ್ಕೆ ಸಂಬಂಧಿಸಿದ್ದು ಎನ್ನುವುದು ಇಲ್ಲಿ ಮುಖ್ಯಾಂಶ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸಲು ಮತ್ತು ಒಕ್ಕಲಿಗ ಸಮುದಾಯದ ಏಕೈಕ ನಾಯಕರಾಗಿ ಹೊರಹೊಮ್ಮಲು ಡಿಕೆಶಿ ಇಟ್ಟಿರುವ ದಾಳ ಇದು. ಅದಕ್ಕೆ ಪ್ರತಿತಂತ್ರವಾಗಿ ದಶಕಗಳಿಂದ ಈ ಭಾಗದ ಒಕ್ಕಲಿಗ ಮತಬ್ಯಾಂಕ್ ಅನ್ನು ತನ್ನ ಆಸ್ತಿಯನ್ನಾಗಿ ಮಾಡಿಕೊಂಡಿರುವ ಹೆಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಇದು ಅಸ್ತಿತ್ವದ ಪ್ರಶ್ನೆ. ರೈತರ ಭೂಮಿ ಉಳಿಸುವ 'ಸತ್ಯಾಗ್ರಹ'ದ ಹೆಸರಿನಲ್ಲಿ ಗೌಡರ ಕುಟುಂಬ ಬೀದಿಗಿಳಿಯುತ್ತಿರುವುದು ಕೇವಲ ರೈತಪರ ಕಾಳಜಿಯಿಂದಲ್ಲ; ಬದಲಿಗೆ ತಮ್ಮ ಒಕ್ಕಲಿಗ ಕೋಟೆಯನ್ನು ಡಿ.ಕೆ. ಶಿವಕುಮಾರ್ ಧೂಳೀಪಟ ಮಾಡದಂತೆ ತಡೆಯುವ ಅನಿವಾರ್ಯತೆಯಿಂದ. ಈ ಮುಖಾಮುಖಿ 2028ರ ಒಕ್ಕಲಿಗ ನಾಯಕತ್ವದ ಅಂತಿಮ ಸಮರಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆ.
ಇನ್ನು, ಬಿಜೆಪಿಯಲ್ಲಿ ಲಿಂಗಾಯತ ವರ್ಸಸ್ ಒಕ್ಕಲಿಗ ಸಂಘರ್ಷ ಮತ್ತು ವಿಜಯೇಂದ್ರ ಅಸ್ತಿತ್ವದ ಹೋರಾಟವೂ ಕಡಿಮೆ ಏನಿಲ್ಲ. ಹಿಂದುತ್ವದ ಕಾರ್ಡ್ ಬಳಸಿದರೂ ಕರ್ನಾಟಕದಲ್ಲಿ ಜಾತಿ ಸಮೀಕರಣವನ್ನು ಮೀರಿ ಬೆಳೆಯಲು ಸಾಧ್ಯವಾಗದ ಬಿಜೆಪಿ ಆಂತರಿಕ ಕಚ್ಚಾಟದ ತುತ್ತತುದಿಯಲ್ಲಿದೆ. ಬಿ.ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ. ವಿಜಯೇಂದ್ರ ಅವರಿಗೆ ತಂದೆಯ ಕಾಲದ ನಂತರ, ಲಿಂಗಾಯತ ಸಮುದಾಯದಲ್ಲಿ ರಾಜಕೀಯ ರಂಗದಲ್ಲಿ ಸರ್ವೋಚ್ಚ ನಾಯಕನಾಗಿ ಬೆಳೆಯಬೇಕು ಎನ್ನುವುದು ದೊಡ್ಡ ಕನಸು.
ಬಿಜೆಪಿಯ ಒಳಗೇ ಇರುವ ಒಂದು ಬಣ ವಿಜಯೇಂದ್ರ ಅವರ ಲಿಂಗಾಯತ ನಾಯಕತ್ವದ ವಿರುದ್ಧ ಮತ್ತು ಮತ್ತೊಂದು ಒಕ್ಕಲಿಗ ಮೂಲದ ನಾಯಕರ ಬಣ ತನ್ನದೇ ಆದ ಪ್ರಭಾವ ಬೀರಲು ಆಂತರಿಕ ಕದನ ನಡೆಸುತ್ತಿವೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಲಿಂಗಾಯತ ನಾಯಕರ ಬಂಡಾಯ ಮತ್ತು ಆರ್. ಅಶೋಕ್, ಸಿ.ಟಿ ರವಿ ಅವರಂತಹ ಒಕ್ಕಲಿಗ ನಾಯಕರ ಪಕ್ಷದೊಳಗಿನ ಪ್ರಬಲ ಜಾತಿಗಳ ಹಗ್ಗಜಗ್ಗಾಟವೇನೂ ಕಡಿಮೆ ಇಲ್ಲ. ವಿಜಯೇಂದ್ರ ಅವರು ಹೈಕಮಾಂಡ್ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಒದ್ದಾಡುತ್ತಿದ್ದರೆ, ಪಕ್ಷದೊಳಗಿನ ಒಕ್ಕಲಿಗ-ಲಿಂಗಾಯತ ಸಂಘರ್ಷವು 2028ರ ಹೊತ್ತಿಗೆ ಬಿಜೆಪಿಯನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಬಿ.ವೈ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದರೂ, ಪಕ್ಷದೊಳಗೇ ಅವರಿಗೆ ನಾಯಕತ್ವದ ಮಾನ್ಯತೆ ಸಿಗುತ್ತಿಲ್ಲ. ಬಿಜೆಪಿಯ ಒಕ್ಕಲಿಗ ನಾಯಕರಾದ ಆರ್. ಅಶೋಕ್ ಮತ್ತು ಇತರರು ವಿಜಯೇಂದ್ರ ಅವರ ಹಿಡಿತವನ್ನು ಸಡಿಲಗೊಳಿಸಲು ಕಾಯುತ್ತಿದ್ದಾರೆ. ಹೈಕಮಾಂಡ್ ಎದುರು ವಿಜಯೇಂದ್ರ ತಮ್ಮ ಶಕ್ತಿ ಪ್ರದರ್ಶಿಸಲು ಮಾಡುತ್ತಿರುವ ಪ್ರಯತ್ನಗಳು ಲಿಂಗಾಯತ ವರ್ಸಸ್ ಒಕ್ಕಲಿಗ ಆಂತರಿಕ ಧ್ರುವೀಕರಣವನ್ನು ಇನ್ನಷ್ಟು ತೀವ್ರಗೊಳಿಸಿದೆ. ಹಿಂದುತ್ವದ ಸಿದ್ಧಾಂತದ ಅಡಿಯಲ್ಲಿ ಮುಚ್ಚಿಹೋಗಿದ್ದ ಜಾತಿ ಹಿತಾಸಕ್ತಿಗಳು ಈಗ ನಾಯಕತ್ವದ ಪ್ರಶ್ನೆ ಬಂದಾಗ ತಲೆಯೆತ್ತಿ ನಿಂತಿವೆ.
ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಿ, ಹಿಂದುತ್ವದ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಶರಣಾಗುವ ಹೊಸ ನಾಯಕತ್ವವನ್ನು ತರಲು ಬಿಜೆಪಿ ಹೈಕಮಾಂಡ್ನ ಒಂದು ಬಣ ಬಯಸುತ್ತಿದೆ. ಆದರೆ, ಕರ್ನಾಟಕದಲ್ಲಿ 'ಲಿಂಗಾಯತ ನಾಯಕತ್ವ'ವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ವಿಜಯೇಂದ್ರ ಅವರಿಗೆ ಗೊತ್ತು. ಮತ್ತು ಈ ಕಟು ಸತ್ಯ ಬಿಜೆಪಿಯ ಹೈಕಮಾಂಡ್ ಗೂ ಗೊತ್ತು. ಹಾಗಾಗಿ ಗೊಂದಲದಲ್ಲೇ ಬಿಜೆಪಿ ಹೈಕಮಾಂಡ್ ಇದೆ.
2028ರ ಹೊತ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಾಮಾಜಿಕ ನ್ಯಾಯದ 'ಅಹಿಂದ' ಚೌಕಟ್ಟನ್ನು ಬದಿಗೊತ್ತಿ, ಕೇವಲ ಒಕ್ಕಲಿಗ-ಲಿಂಗಾಯತ ಸಮುದಾಯಗಳ ಬಲಪ್ರದರ್ಶನದ ವೇದಿಕೆಯನ್ನಾಗಿ ರಾಜ್ಯವನ್ನು ಬಳಸಿಕೊಳ್ಳಲು ಮುಂದಾಗಿವೆ. ಇಬ್ಬರು ಪ್ರಬಲ ಸಮುದಾಯಗಳ ನಾಯಕರ ನಡುವಿನ ಈ ಪ್ರತಿಷ್ಠೆಯ ಜಗಳದಲ್ಲಿ, ದಲಿತರು, ಹಿಂದುಳಿದ ವರ್ಗಗಳು ಮತ್ತು ಶ್ರಮಿಕರ ನೈಜ ಸಾಮಾಜಿಕ-ಆರ್ಥಿಕ ಉನ್ನತಿಯ ಚರ್ಚೆಗಳು ಸಂಪೂರ್ಣವಾಗಿ ಹಳ್ಳ ಹಿಡಿಯುತ್ತಿವೆ.
ಇನ್ನು, ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ನೇತೃತ್ವದ 'ಅಹಿಂದ' (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ರಾಜಕಾರಣವು ಪ್ರಬಲ ಜಾತಿಗಳಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ದಶಕಗಳಿಂದ ಪರ್ಯಾಯ ಸವಾಲನ್ನು ಒಡ್ಡುತ್ತಾ ಬಂದಿದೆ. ಆದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪ್ರಬಲ ಜಾತಿಗಳ ಓಲೈಕೆಗೆ ಹೆಚ್ಚು ಒತ್ತು ನೀಡುತ್ತಿರುವುದು ಕಳವಳಕಾರಿ ಸಂಗತಿ. ಅಧಿಕಾರವನ್ನು ಕೇವಲ ಎರಡು ಪ್ರಬಲ ಜಾತಿಗಳ ನಡುವೆ ಹಂಚಿಕೊಳ್ಳುವ ಈ ಶಕ್ತಿ ರಾಜಕಾರಣದಲ್ಲಿ ಶೋಷಿತ ಸಮುದಾಯಗಳ ನೈಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳು ಗೌಣವಾಗುತ್ತಿವೆ.
ಒಟ್ಟಾರೆಯಾಗಿ, 2028ರ ವಿಧಾನಸಭಾ ಚುನಾವಣೆಯು ಅಭಿವೃದ್ಧಿ, ಉದ್ಯೋಗ ಅಥವಾ ಸಾಮಾಜಿಕ ಸಮಾನತೆಯ ಆಧಾರದ ಮೇಲೆ ನಡೆಯುವ ಸಾಧ್ಯತೆಗಳಿಗಿಂತ, ಒಕ್ಕಲಿಗ ವರ್ಸಸ್ ಲಿಂಗಾಯತ ನಾಯಕತ್ವದ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಡುತ್ತಿದೆ. ಬಿಡದಿ ಟೌನ್ಶಿಪ್ ವಿವಾದ ಇರಲಿ ಅಥವಾ ಬಿಜೆಪಿಯ ನಾಯಕತ್ವದ ಗೊಂದಲವಿರಲಿ, ಎಲ್ಲವೂ ಕೇವಲ ಜಾತಿ ಕೋಟೆಗಳನ್ನು ಭದ್ರಪಡಿಸಿಕೊಳ್ಳುವ ರಾಜಕೀಯ ಮೇಲಾಟದ ದಾಳಗಳಷ್ಟೇ. ರಾಜಕೀಯ ಪಕ್ಷಗಳು ತಮ್ಮ ಪ್ರಭಾವ ವಿಸ್ತರಿಸಲು ಜಾತಿ ಕಾರ್ಡ್ ಬಳಸುತ್ತಿರುವ ಈ ಹೊತ್ತಿನಲ್ಲಿ, ಜನಸಾಮಾನ್ಯರ ಮತ್ತು ದುಡಿಯುವ ವರ್ಗದ ನೈಜ ಪ್ರಶ್ನೆಗಳು ಮೂಲೆಗುಂಪಾಗುತ್ತಿರುವುದು ಇಂದಿನ ಕರ್ನಾಟಕ ರಾಜಕಾರಣದ ವಿಷಾದನೀಯ ವಾಸ್ತವ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ.
- ಶ್ರೀರಾಜ್ ವಕ್ವಾಡಿ







