Monday, July 13, 2026

ಬಿಡದಿ ಬಿಡಲ್ಲ! : ಸದ್ಯದಲ್ಲೇ ಕಾಂಗ್ರೆಸ್ ಗೂ ಪೊರಕೆ ಸೇವೆ!?



ಬಿಡದಿಯಲ್ಲಿ  ಉದ್ದೇಶಿತ ಸ್ಮಾರ್ಟ್ ಸಿಟಿ/ಟೌನ್‌ಶಿಪ್ ಯೋಜನೆಗಾಗಿ ಕೃಷಿ ಭೂಮಿ ಸಮೀಕ್ಷೆ ನಡೆಸಲು ಬಂದ ಅಧಿಕಾರಿಗಳಿಗೆ ಸ್ಥಳೀಯ ರೈತ ಮಹಿಳೆಯರು ಪೊರಕೆ ಹಿಡಿದು ಪ್ರತಿರೋಧ ಒಡ್ಡಿರುವ ಘಟನೆ, ಕೇವಲ ಒಂದು ಪ್ರಾದೇಶಿಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ. ಇದು ಸದ್ಯದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಪೊರೇಟ್ ಪರ ಒಲವು ಮತ್ತು ಪ್ರಭುತ್ವ ರಾಜಕಾರಣದ ದಮನಕಾರಿ ನೀತಿಗಳಿಗೆ ಹಿಡಿದ ಕನ್ನಡಿ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ‌. 

ಚುನಾವಣಾ ಸಂದರ್ಭದಲ್ಲಿ ‘ಗ್ಯಾರಂಟಿ’ಗಳ ಮೂಲಕ ಶೋಷಿತರು, ರೈತರು ಮತ್ತು ಮಹಿಳೆಯರ ಪರ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಅಧಿಕಾರ ಹಿಡಿದ ಬಳಿಕ ಜಾಗತಿಕ ಬಂಡವಾಳಶಾಹಿ ಮತ್ತು ರಿಯಲ್ ಎಸ್ಟೇಟ್ ಲಾಬಿಗೆ ಮಣಿಯುತ್ತಿರುವುದು ಇಲ್ಲಿ ಸ್ಪಷ್ಟ. ರೈತರ ಇಚ್ಛೆಗೆ ವಿರುದ್ಧವಾಗಿ, ಅವರ ಜೀವನೋಪಾಯವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಂಡು ಟೌನ್‌ಶಿಪ್‌ಗಳನ್ನು ನಿರ್ಮಿಸಲು ಹೊರಟಿರುವುದು ಸರ್ಕಾರದ ಒಳಗಿರುವ ನವ-ಉದಾರೀಕರಣದ ಅಜೆಂಡಾವನ್ನು ಬಹಿರಂಗಪಡಿಸಿದೆ. ಭೂಮಿ ಎಂಬುದು ರೈತನಿಗೆ ಕೇವಲ ಆಸ್ತಿಯಲ್ಲ, ಅದು ಅವನ ಅಸ್ತಿತ್ವ ಮತ್ತು ಸ್ವಾಭಿಮಾನದ ಸಂಕೇತ. ಪ್ರಭುತ್ವವು ತನ್ನ ಪೊಲೀಸ್ ಬಲ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಬಳಸಿ ರೈತರ ಧ್ವನಿಯನ್ನು ಅಮುಕಲು ನೋಡಿದಾಗ, ಶ್ರಮಜೀವಿ ವರ್ಗವು ತನ್ನದೇ ಆದ ಶೈಲಿಯಲ್ಲಿ ಪ್ರತಿರೋಧ ಒಡ್ಡುತ್ತದೆ ಎಂಬುದಕ್ಕೆ ಈ ‘ಪೊರಕೆ ಏಟಿನ’ ಎಚ್ಚರಿಕೆ ಸಾಕ್ಷಿ. ಇದು ಪ್ರಭುತ್ವದ ದರ್ಪದ ವಿರುದ್ಧ ಕೆಳವರ್ಗದ ಜನರ ಆಕ್ರೋಶದ ಸ್ಫೋಟ.

ಯಾವುದೇ ಒಂದು ಬೃಹತ್ ಯೋಜನೆ ಜಾರಿಗೆ ಬರುವ ಮುನ್ನ ಅಲ್ಲಿನ ಸ್ಥಳೀಯ ಗ್ರಾಮ ಸಭೆಗಳ, ರೈತರ ಮುಕ್ತ ಸಮ್ಮತಿ ಪಡೆಯುವುದು ಪ್ರಜಾಪ್ರಭುತ್ವದ ಕನಿಷ್ಠ ಸೌಜನ್ಯ. ಆದರೆ, ಸರ್ಕಾರವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸರ್ವೇ ಕಾರ್ಯಕ್ಕೆ ಮುಂದಾಗಿರುವುದು ಅದರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಸಮಾಜವಾದಿ ಮತ್ತು ಜನಪರ ತತ್ವಗಳ ಮಾತಾಡುವ ನಾಯಕರು ಅಧಿಕಾರದಲ್ಲಿದ್ದೂ ಈ ರೀತಿಯ ಶೋಷಣೆ ನಡೆಯುತ್ತಿರುವುದು ದುರಂತ. 

ಬಿಡದಿಯ ರೈತ ಮಹಿಳೆಯರ ಈ ಪ್ರತಿಭಟನೆ ಕೇವಲ ಭೂಮಿ ಉಳಿಸಿಕೊಳ್ಳುವ ಹೋರಾಟವಲ್ಲ; ಇದು ಪ್ರಭುತ್ವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಅಪವಿತ್ರ ಮೈತ್ರಿಯ ವಿರುದ್ಧದ ಜನಸಾಮಾನ್ಯರ ದಂಗೆ. ರಾಜ್ಯ ಸರ್ಕಾರ ಈಗಲಾದರೂ ತನ್ನ ಪ್ರಭುತ್ವ ರಾಜಕಾರಣದ ಹಠಮಾರಿ ಧೋರಣೆಯನ್ನು ಬಿಟ್ಟು, ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕಿದೆ. ಇಲ್ಲದಿದ್ದರೆ, ಈ ಪ್ರತಿರೋಧದ ಕಿಡಿ ಇಡೀ ರಾಜ್ಯದಾದ್ಯಂತ ವಿಸ್ತರಿಸುವುದರಲ್ಲಿ ಸಂಶಯವಿಲ್ಲ. 

ಗಮನಿಸಿ, ಅಧಿಕಾರಿಗಳು  ಸರ್ಕಾರದ ಆದೇಶವನ್ನು ಪಾಲಿಸುತ್ತಾರೆ. ಸರ್ವೇ ಮಾಡುವುದಕ್ಕೆ ಬಂದ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆ ಎತ್ತಿರುವುದು ಕೇವಲ ಅಲ್ಲಿಗೆ ಬಂದ ಅಧಿಕಾರಿಗಳ ಮೇಲಿನ ಸಿಟ್ಟಲ್ಲ, ಬದಲಿಗೆ ಆ ಅಧಿಕಾರಿಗಳನ್ನು ನಿಯಂತ್ರಿಸುವ, ಯೋಜನೆಗೆ ಹಸಿರು ನಿಶಾನೆ ತೋರಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ಧೋರಣೆಯ ವಿರುದ್ಧದ ಆಕ್ರೋಶ. ಅಧಿಕಾರ ಕೇಂದ್ರದಿಂದ ಹೊರಬೀಳುವ ಬಲವಂತದ ತೀರ್ಮಾನಗಳಿಗೆ ಕೆಳಮಟ್ಟದಲ್ಲಿ ಜನಸಾಮಾನ್ಯರು ನೀಡಿದ ನೇರ ಪ್ರತ್ಯುತ್ತರ ಇದಾಗಿದೆ.

ಮುಖ್ಯಮಂತ್ರಿ ಡಿಕೆಶಿ ನೇತೃತ್ವದ ಸರ್ಕಾರ ನಗರೀಕರಣವನ್ನೇ ನೈಜ ಅಭಿವೃದ್ಧಿ ಎಂದು ನಂಬಿರುವುದು ಈ ಬಿಕ್ಕಟ್ಟಿಗೆ ಮೂಲ ಕಾರಣ. ಕೃಷಿ ಭೂಮಿಯನ್ನು ನಾಶಪಡಿಸಿ ನಿರ್ಮಿಸುವ ಟೌನ್‌ಶಿಪ್‌ಗಳು ಶ್ರೀಮಂತ ವರ್ಗದ ರಿಯಲ್ ಎಸ್ಟೇಟ್ ದಂಧೆಗೆ ಆಸರೆಯಾಗುತ್ತವೆಯೇ ಹೊರತು, ಅನ್ನ ಕೊಡುವ ರೈತನ ಬದುಕನ್ನು ಹಸನು ಮಾಡುವುದಿಲ್ಲ ಎಂಬ ಸತ್ಯವನ್ನು ಸರ್ಕಾರ ಗ್ರಹಿಸುತ್ತಿಲ್ಲ. ಪ್ರಭುತ್ವದ ಈ ಹಠಮಾರಿ ಧೋರಣೆಯೇ ಜನರ ದಂಗೆಗೆ ಪ್ರೇರಣೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿರುವಾಗ ರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಯ ರಾಜಕಾರಣವನ್ನು ಬದಿಗಿಟ್ಟು, ಇನ್ನಾದರೂ ರೈತರ ಪರವಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ ಕಾಂಗ್ರೆಸ್ ಅವರೆ... ಪೊರಕೆ ಏಟಿನ ಪಾಠ ನಿಮಗೂ ಆಗುವುದರಲ್ಲಿ ಸಂಶಯವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

No comments:

Post a Comment