Saturday, September 19, 2026

ಮೋದಿಯ ಮತ್ತೊಂದು ಆಯಾಮವಾಗುತ್ತಿದ್ದಾರಾ ಡಿಕೆಶಿ?

ಮಂಗಳೂರಿನ ಯೂಥ್ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಡಿ.ಕೆ. ಶಿವಕುಮಾರ್ ನಡೆಸಿದ ಬೆಳಗಿನ ಉಪಾಹಾರ ಸಂವಾದವನ್ನು ಕೇವಲ ಸೌಜನ್ಯದ ಭೇಟಿಯಾಗಿ ನೋಡುವುದಕ್ಕಿಂತ, ಕರ್ನಾಟಕದ ರಾಜಕೀಯದಲ್ಲಿ ಬದಲಾಗುತ್ತಿರುವ ಸಂವಹನ ಶೈಲಿಯ ಭಾಗವಾಗಿ ನೋಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ, ನೇರ ಸಂವಹನ ಮತ್ತು ಸ್ಥಳೀಯ ಸಾಂಸ್ಕೃತಿಕ ಸಂಕೇತಗಳನ್ನು ರಾಜಕೀಯ ಸಂವಹನದ ಪ್ರಮುಖ ಸಾಧನಗಳನ್ನಾಗಿ ರೂಪಿಸಿರುವ ಸಂದರ್ಭದಲ್ಲಿ, ಅದೇ ಮಾದರಿಯ ಕೆಲವು ಅಂಶಗಳು ಡಿಕೆಶಿ ಅವರ ರಾಜಕೀಯ ಶೈಲಿಯಲ್ಲೂ ಕಾಣಿಸಿಕೊಳ್ಳುತ್ತಿವೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಒಂದು ಕಡೆ ಮೋದಿಯ ನಡೆ ನುಡಿಯ ಬಗ್ಗೆ ಕಾಂಗ್ರೆಸ್‌ ವರಿಷ್ಠ ನಾಯಕ ರಾಹುಲ್‌ ಗಾಂಧಿ ಟೀಕಿಸುತ್ತಿದ್ದರೇ, ಇನ್ನೊಂದು ಕಡೆ ಅದೇ ಪಕ್ಷದ ಮುಖ್ಯಮಂತ್ರಿ ಡಿಕೆಶಿ ಮೋದಿಯವರಂತೆಯೇ ಸೋಶಿಯಲ್‌ ಮೀಡಿಯಾ, ಯೂಥ್‌ ಕಂಟೆಂಟ್‌ ಕ್ರಿಯೇಟರ್ಸ್‌ ಜೊತೆ ಸಂವಾದ ನಡೆಸಿರುವದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. 

ಮೋದಿಯ ಮತ್ತೊಂದು ಆಯಾಮವಾಗುತ್ತಿದ್ದಾರಾ ಡಿಕೆಶಿ? ಪ್ರಯಾಗ್‌ ರಾಜ್‌ ಬಗ್ಗೆ ಕಾಂಗ್ರೆಸ್‌ ನಾಯಕರು ಭಿನ್ನಾಭಿಪ್ರಾಯ ಹೊಂದಿರುವಾಗ, ಡಿಕೆಶಿ ಅಲ್ಲಿಗೆ ಹೋಗಿ ಮುಳುಗೆದ್ದು ಬಂದರು, ಮೋದಿ ಫ್ರೆಂಡ್‌ ಅದಾನಿ ಎಂದು ರಾಹುಲ್‌ ಸೇರಿ ಕಾಂಗ್ರೆಸಿಗರು ಟೀಕಿಸುತ್ತಿರುವಾಗ ಅದಾನಿಯನ್ನು ತಮ್ಮ ಮನೆಯಲ್ಲೇ ಡಿಕೆಶಿ ಭೇಟಿ ಮಾಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು, ಬಿಜೆಪಿಯ ಹಿಂದುತ್ವ ರಾಜಕಾರಣವನ್ನು ಕಾಂಗ್ರೆಸಿಗರ ಟೀಕಿಸುತ್ತಿರುವಾಗ ಡಿಕೆಶಿ ಸಾಫ್ಟ್‌ ಹಿಂದುತ್ವವನ್ನು ಮತ್ತೆ ಮತ್ತೆ ಪಾಲಿಸುತ್ತಿದ್ದಾರೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ. ಇದು ಡಿಕೆಶಿ ಕಾಂಗ್ರೆಸ್‌ ಹೈಕಮಾಂಡ್‌ ಗೆ ಹಾಕುತ್ತಿರುವ ಸವಾಲೋ, ಅಥವಾ ಬಿಜೆಪಿ ಮತ್ತು ಮೋದಿಯ ನಡೆ ನುಡಿಯನ್ನೇ ತನ್ನ ರಾಜಕೀಯ ಹೆಜ್ಜೆಯ ಭಾಗವಾನ್ನಾಗಿಸಿಕೊಂಡು ಮಾಡುತ್ತಿರುವ ತಂತ್ರಗಾರಿಕೆಯೋ ?  ನೋಡಿ, ರಾಜಕೀಯವೆಂದರೆ ಕೇವಲ ವೇದಿಕೆ, ಭಾಷಣ, ಪತ್ರಿಕಾಗೋಷ್ಠಿ ಮತ್ತು ಪಕ್ಷದ ಕಾರ್ಯಕರ್ತರ ಸಭೆಗಳಲ್ಲ. ಮೊಬೈಲ್ ಪರದೆಗಳ ಮೂಲಕ ಜನರ ಮನೆ, ಕಚೇರಿ, ಅಡುಗೆಮನೆ ಹಾಗೂ ಯುವಕರ ದೈನಂದಿನ ಬದುಕಿನೊಳಗೆ ಪ್ರವೇಶಿಸುವ ರಾಜಕೀಯ ಸಂವಹನದ ಕಾಲ ಇದು. ಈ ಬದಲಾವಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡ ರಾಜಕಾರಣಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖರು. ಈಗ ಕರ್ನಾಟಕದಲ್ಲೂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿಯಲ್ಲಿ ಇದೇ ರೀತಿಯ ಹೊಸ ಸಂವಹನ ಪ್ರಯೋಗಗಳ ಸುಳಿವು ಕಾಣಿಸುತ್ತಿದೆಯೇ? ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಡಿಕೆಶಿ ಸ್ಥಳೀಯ ಯುವ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಬೆಳಗಿನ ಉಪಾಹಾರ ನಡೆಸಿದ್ದು, ಈ ಪ್ರಶ್ನೆಗೆ ಕಾರಣವಾಗಿದೆ.

ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ನಡೆದ ಸಂವಾದದಲ್ಲಿ ಮಂಗಳೂರಿನ ಪ್ರವಾಸೋದ್ಯಮ, ನಗರದ ಭವಿಷ್ಯ, ಯುವಕರ ಅವಕಾಶಗಳು ಮತ್ತು ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಚರ್ಚೆ ಮಾಡಿದರು. ಮಂಗಳೂರು ಬನ್ಸ್, ಗೋಲಿ ಬಜೆಯಂತಹ ಕುಡ್ಲದ ಫೇಮಸ್ ತಿನಿಸುಗಳ ಉಲ್ಲೇಖವೂ ಅವರ ಸಾಮಾಜಿಕ ಮಾಧ್ಯಮ ಸಂದೇಶದ ಭಾಗವಾಗಿದೆ.  ಇದರ ರಾಜಕೀಯ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕಾದರೆ ‘ಸ್ಥಳೀಯತೆಯನ್ನು ಅಥವಾ ಪ್ರಾದೇಶಿಕತೆಯನ್ನು ರಾಜಕೀಯ ಸಂವಹನದ ಭಾಷೆಯನ್ನಾಗಿ ಮಾಡುವುದು’ ಎಂಬ ಅಂಶವನ್ನು ಗಮನಿಸಬೇಕು. ಮಂಗಳೂರಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡುವುದು ಒಂದು ರೀತಿಯ ಆಡಳಿತಾತ್ಮಕ ಕ್ರಮ. ಆದರೆ ಅದೇ ವಿಚಾರವನ್ನು ಸ್ಥಳೀಯ ಡಿಜಿಟಲ್ ಕ್ರಿಯೇಟರ್ಸ್‌ ಗಳೊಂದಿಗೆ ಕುಳಿತು ಚರ್ಚಿಸುವುದು ಮತ್ತೊಂದು ರೀತಿಯ ಸಾರ್ವಜನಿಕ ಸಂಪರ್ಕ. ಸಾಮಾಜಿಕ ಮಾಧ್ಯಮದ ಮೂಲಕ ಆ ಸಂವಾದವನ್ನು ಸಾವಿರಾರು, ಲಕ್ಷಾಂತರ ಜನರಿಗೆ ತಲುಪಿಸುವ ಸಾಧ್ಯತೆಯೂ ಇದೆ. ಇಲ್ಲಿ ಡಿಕೆಶಿ ಅವರ ಪ್ರಯೋಗದ ಮತ್ತೊಂದು ಮುಖ ಕಾಣಿಸುತ್ತದೆ. ಮಂಗಳೂರಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪಾತ್ರವಹಿಸಬೇಕು ಎಂದು ಅವರು ಹೇಳಿದ್ದಾರೆ. ನಗರದ ಐಷಾರಾಮಿ ಹೋಟೆಲ್‌ಗಳ ಕೊರತೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯದ ಅಗತ್ಯವನ್ನೂ ಅವರು ಪ್ರಸ್ತಾಪಿಸಿದ್ದಾರೆ. ರಾತ್ರಿ 7 ಗಂಟೆಯ ನಂತರ ನಗರ ‘ಡೆಡ್ ಸಿಟಿ’ಯಂತಾಗುತ್ತದೆ ಎಂಬ ಅವರ ಟೀಕೆಯೂ ನಗರದ ಆರ್ಥಿಕ ಚಟುವಟಿಕೆಯ ಕುರಿತ ಪ್ರಶ್ನೆಯನ್ನು ಎತ್ತಿದೆ.  ಆದರೆ ಇದನ್ನು ನೇರವಾಗಿ ‘ಮೋದಿಯ ಮಾದರಿ’ ಎಂದು ಕರೆಯುವುದು ಅತಿರೇಕವಾಗಬಹುದು. ಮೋದಿ ಅವರ ಡಿಜಿಟಲ್ ಸಂವಹನ ವರ್ಷಗಳ ಕಾಲ ರೂಪುಗೊಂಡಿರುವ ರಾಷ್ಟ್ರಮಟ್ಟದ ರಾಜಕೀಯ ಬ್ರ್ಯಾಂಡಿಂಗ್ ವ್ಯವಸ್ಥೆಯ ಭಾಗವಾಗಿದೆ. ಡಿಕೆಶಿ ಅವರ ಮಂಗಳೂರಿನ ಭೇಟಿ ಮಾತ್ರ ಅಂತಹ ವ್ಯವಸ್ಥಿತ ಮಾದರಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಆದರೆ ಯುವ ಡಿಜಿಟಲ್ ಸಮುದಾಯ, ಸ್ಥಳೀಯ ಆಹಾರ, ಭಾಷೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ರಾಜಕೀಯ ಸಂವಹನದೊಂದಿಗೆ ಜೋಡಿಸುವ ಪ್ರಯತ್ನ ಮಾತ್ರ ಗಮನಾರ್ಹ. ಇದಕ್ಕಿಂತ ಮುಖ್ಯವಾದ ಪ್ರಶ್ನೆ ಬೇರೆ ಇದೆ. ಇಂತಹ ಭೇಟಿಗಳು ಕೇವಲ ‘ಇಮೇಜ್ ಮೇಕಿಂಗ್’ ಆಗಿ ಉಳಿಯುತ್ತವೆಯೇ ಅಥವಾ ಆಡಳಿತದ ನೀತಿಗಳಾಗಿ ಪರಿವರ್ತನೆಯಾಗುತ್ತವೆಯೇ? ಕಂಟೆಂಟ್ ಕ್ರಿಯೇಟರ್‌ಗಳ ಮಾತು ಕೇಳುವುದು ಒಂದು ಹೆಜ್ಜೆ. ಅವರು ಎತ್ತುವ ಪ್ರವಾಸೋದ್ಯಮ, ಉದ್ಯೋಗ, ನಗರ ಜೀವನ, ರಾತ್ರಿ ಆರ್ಥಿಕತೆ ಮತ್ತು ಮೂಲಸೌಕರ್ಯದ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡುವುದು ಅದರ ಮುಂದಿನ ಹೆಜ್ಜೆ.

ಹೀಗಾಗಿ ಮಂಗಳೂರಿನ ಉಪಾಹಾರ ಮೇಜಿನಲ್ಲಿದ್ದದ್ದು ಕೇವಲ ಬನ್ಸ್, ಗೋಲಿ ಬಜೆ ಅಲ್ಲ. ಕರ್ನಾಟಕದ ರಾಜಕೀಯ ಸಂವಹನದ ಹೊಸ ಪೀಳಿಗೆಯ ಪ್ರಯೋಗವೂ ಅಲ್ಲಿ ಕಾಣಿಸಿಕೊಂಡಿದೆ. ಮೋದಿ ಮಾದರಿಯ ಮತ್ತೊಂದು ಆವೃತ್ತಿಯೇ ಇದು, ಅಥವಾ ಡಿಕೆಶಿ ತಮ್ಮದೇ ಆದ ಡಿಜಿಟಲ್ ರಾಜಕೀಯ ಭಾಷೆಯನ್ನು ಕಟ್ಟಿಕೊಳ್ಳುತ್ತಿದ್ದಾರೆಯೇ? ಅದರ ಉತ್ತರ ಮುಂದಿನ ಇಂತಹ ಸಂವಾದಗಳು ಮತ್ತು ಅವುಗಳಿಂದ ಹೊರಬರುವ ಆಡಳಿತಾತ್ಮಕ ನಿರ್ಧಾರಗಳಿಂದಲೇ ಅರ್ಥವಾಗಬಹುದು ಎನ್ನುವುದರಲ್ಲಿ ಅನುಮಾನವಿಲ್ಲ. ಮೋದಿ ಮಾಡೆಲ್‌ ಪಾಲಿಸ್ತಿರೋದರಿಂದ ಡಿಕೆಶಿಗೆ ವರದಾನವಾಗುತ್ತಾ ಅಥವಾ ಉಲ್ಟಾ ಹೊಡೆಯುತ್ತಾ !? ಕಾದುನೋಡೋಣ.

-ಶ್ರೀರಾಜ್‌ ವಕ್ವಾಡಿ. 

No comments:

Post a Comment