Saturday, May 9, 2020

ಉರಿ ಏಳುವ ದಾರಿಯಲ್ಲಿ ಗುಳೆ ಹೊರಟಿದೆ..!



ಅದೆಲ್ಲಿಗೋ ಗುಳೇ ಹೊರಟಿದೆ ಬದುಕು.

ಧಗ್ಗೆಂದು ಎದ್ದ ಬೆಂಕಿ ಕೆನ್ನಾಲಿಗೆಗಳಿಗೆ ಸಿಲುಕಿ ಕರಗಿಯಾದ ಮೇಲೆ ಹುಟ್ಟುವ ಜೀವನದ ಅಗತ್ಯಕ್ಕೆ ಧ್ವನಿಯಾಗಿ ಇರುವ ಭಾವವೊಂದರ ಕುರಿತಂಥದ್ದಿದು. ನೀವೇನೂ ಕಣ್ಣುಬಿಸಬೇಕಂತಿಲ್ಲ. ನಡೆಯುವುದೆಲ್ಲಾ ನಡೆದು ಹೋಗುತ್ತವೆ ಬಿಡಿ. ಆದರೇ, ಕಾಣಬೇಕಾದದ್ದೆಂದಿಗೂ ಕಾಣುವುದಿಲ್ಲವಲ್ಲಾ.. ಎನ್ನುವುದೊಂದೇ ದುಃಖದ ಅಗ್ರಸಾಲಿನ ಬಿಂದು.

ಕಥೆ, ಕಾದಂಬರಿ, ಕಾವ್ಯ, ಹಾಡು, ಚಿತ್ರ, ಸಿನೆಮಾಗಳ ಸಾಧ್ಯತೆಗಳಲ್ಲ ಬದುಕು. ಅದರಾಚೆಗೆ ಅದೇನೋ ಘನಗಂಭೀರ ದಿವ್ಯ ನೀರವತೆಗೆ ತಲೆಯಾನಿಸಿ ಕುಳಿತ ನಿಸ್ತೇಜ ಹೊಳಪು ಅಷ್ಟೇ.

ಇಲ್ಲಿ ಎಲ್ಲದಕ್ಕೂ ಅಲ್ಲಲ್ಲೇ ಮಣ್ಣಾಗುವ ಭಾಗ್ಯ...!

ಅದೆಷ್ಟು, ಬದುಕಿನ್ನೂ ರೈಲ್ವೆ ಸ್ಟೇಶನ್‌ನ ಅದ್ಯಾವುದೋ ಎಡ ಮೂಲೆಯನ್ನೋ, ಬಲ ಮೂಲೆಯನ್ನೋ ಆವರಿಸಿಕೊಂಡಿಲ್ಲ..? ಅದೆಷ್ಟು ಜೀವ ಬಸ್ ಸ್ಟ್ಯಾಂಡ್‌ಗಳ ಧೂಳು ಮಣ್ಣುಗಳಲ್ಲೇ ಹೊರಳಾಡಿಕೊಂಡಿಲ್ಲ..? ಅದೆಷ್ಟು ಭಾರಗಳನ್ನು ಹೊತ್ತ ಜೀವನ ಊಹಿಸಲಾರದ ತಿರುವುಗಳನ್ನು ನಿರೀಕ್ಷಿಸುತ್ತಲೇ ಸಾಗುತ್ತಿಲ್ಲ..?

ಹ್ಹು.. ಈಗ ನೀವು ಹೇಳಿ.

ಬದುಕೆಂದರೇ ಏನು..?!

ಗೊತ್ತಿಲ್ವಾ..?

‘ಹೊಲಿಯುವುದು, ಹರಿದುದ್ದಕ್ಕೂ ಮತ್ತೆ ಮತ್ತೆ ಹೊಲಿಯುವುದು. ಕಪ್ಪೋ, ಬಿಳುಪೋ ನೂಲು ಖಾಲಿಯಾಗುವವರೆಗೆ ಹೊಲಿಯುವುದು.’.

 “ಅಷ್ಟೇ.”

ಹೊಲಿಗೆ ಬಿಚ್ಚಿಕೊಳ್ಳುತ್ತಾ ಹೋದಂತೆ, ಅದು ಹೇಳಿಕೊಳ್ಳುವ ಕಥೆಗೆ ಕಿವಿಯಾಗುವುದಕ್ಕೂ ಜೀವನ ಮುಂದಾಗುವುದಿಲ್ಲ. ಘರ್ಷಣೆಗಳ ನಡುವೆ ಬೆಂದು ಕರಗಿಸಿ, ಕಲಕಿಸಿ ಅಲ್ಲೆಲ್ಲೋ ದಾರಿ ಮಧ್ಯದಲ್ಲೇ ಗೊತ್ತೇ ಆಗದಂತೆ ಜೋಳಿಗೆಯಲ್ಲಿದ್ದ ರೊಟ್ಟಿಗಳಿಗೆ ರಕ್ತ ಅಂಟಿಸಿ ಬಿಡುತ್ತದೆ ಬದುಕು.

ಕಾದು ನೋಡಬೇಕು. ಧ್ವನಿಯಾಗುವರೇ, ಹೆಣವಾದ ಮೇಲಾದರೂ ಎಂದು. ಆಗದಿದ್ದರೇ, ನನ್ನಂಥ, ನಿಮ್ಮಂಥವರೆಲ್ಲಾ ನಡೆವ ಹಾದಿಯಲ್ಲೇ, ಮತ್ತೆ ಮುಂದೆಲ್ಲೂ ಹೋಗಲಾರದಂತೆ ಮಲಗಿ ಬಿಡಬೇಕಷ್ಟೇ.

ನಾನು ನಡೆಯುತ್ತಿದ್ದೇನೆ. ನೀವೂ ಕೂಡ. ಇಲ್ಲ ಅಂತ ಹೇಳ್ಬೇಡಿ..! ಉರಿ ಏಳುವ ದಾರಿಯಲ್ಲಿ ಒಡೆದ ಪಾದಗಳಿಂದ ರಕ್ತದಚ್ಚುಗಳನ್ನು ಮೆತ್ತುತ್ತಾ ಬರಿಗಾಲಲ್ಲಿ ನಡೆಯುವುದು ಯಾರಿಗೆ ಕಾಣುತ್ತದೆ ಹೇಳಿ..?

ಅಲ್ಲಿಲ್ಲವೆಂದು ಇಲ್ಲಿಗೆ, ಇಲ್ಲಿಲ್ಲವೆಂದು ಅಲ್ಲಿಗೆ, ಎಲ್ಲೂ ಇಲ್ಲವೆಂದು ಅದೆಲ್ಲೋ ಕಣ್ಣಿಗೆ ಕಾಣದ ತುತ್ತ ತುದಿಗೆ.

ಬದುಕೆಂದರೇ... ಎಲ್ಲೆಲ್ಲಿಂದಲೋ ಎಲ್ಲೆಲ್ಲಿಗೋ..!




-ಶ್ರೀರಾಜ್ ವಕ್ವಾಡಿ 
(📱 : 8762723716)


Friday, May 8, 2020

ನಿಗಿ ಮೌನ..!



ಎಲ್ಲವೂ ಬಲವಂತವಾಗಿ ಕಾಡುತ್ತಿತ್ತು. ಹೊರಟೆ. ಅದೇ ಏಕಾಂತದಲ್ಲಿ. ಬದುಕಿಗೋ, ಏಕಾಂತದಲ್ಲಿ ನೆನಪುಗಳನ್ನು ಹೊತ್ತು ಸಾಗುವುದು ಖಯಾಲಿ.

ಅದೊಂದು ಸಣ್ಣ ಇಂಟರ್‌ವಲ್..!

ಗಾಡಿಯ ಗಾಲಿ ತಿರುಗುತ್ತಲೇ ಇತ್ತು. ನಾನೋ ಮೌನವನ್ನು ಅತ್ಯಂತ ಖುಷಿಯಿಂದ ಗ್ರಹಿಸಿ ಸವಿಯುವ ರಾತ್ರಿ ಬೆಳಕಿನ ಬೀದಿ ದೀಪ. ಹೊರಟಿದ್ದು ಎಲ್ಲಿಗಂತ ಇನ್ನೂ ಅಸ್ಪಷ್ಟ. ದಾರಿಯೂ ಅದರದ್ದೇ, ಬಯಕೆಯೂ ಅದರದ್ದೇ. ನನ್ನನ್ನು ಇದುವರೆಗೆ ಉಳಿಸಿಕೊಂಡು ಬಂದ ಕಣ್ಣಿನಾಚೆಗಿರುವ ಭರವಸೆಯೊಂದು ಈಗ ಅದೇನೋ ವಿಚಿತ್ರ ಧ್ವನಿ ಮಾಡಿ ಹೇಳುತ್ತಿದೆ...

ಏನು ಗೊತ್ತಾ..?

‘ಎಲ್ಲವೂ ಮುಳುಗಿ ಹೋಗುತ್ತದೆ.’ ‘ಎಲ್ಲವೂ ಇಲ್ಲದಾಗುತ್ತದೆ.’ ‘ನೀನೇ ಮುರಿದು ಹೋಗುವ ವಿಸ್ಮಯ ದೃಶ್ಯವನ್ನು ನೀನೇ ನಿನ್ನ ಸ್ವಂತ ಕಣ್ಣುಗಳಿಂದ ಕಾಣುವೆ.’

…!

ಮನಸ್ಸಿಗೆ ಮೆಲ್ಲ ಹೇಳಿದೆ. ‘ಅಂತಹದ್ದೊಂದು ಸೌಭಾಗ್ಯ ನನಗೊಲಿಯುವುದಾದರೆ ಒಲಿದು ಬಿಡಲಿ..!’ ಅಂತ. ಬದುಕೆಂದರೇ, ಎಷ್ಟು ಮುಗಿದರೂ ಹೊಳೆದು ಹೊಳೆದು  ಉಳಿದು ಬಿಡುವ ಭಾವ.

ಚಕ್ರ ಹುಗಿದು ಮಣ್ಣಿನೊಳಗಿಳಿದಿದ್ದರೂ ಮುಂದೆ ಸಾಗುವ ಧೈರ್ಯ ಕುಂದಲಿಲ್ಲ. ಮತ್ತೆ ಹೊರಟಿದ್ದು ಅದೇ ಗೊತ್ತಿಲ್ಲದ ಅಂತ್ಯಕ್ಕೆ. ಹಾಗೆ ನೋಡುವುದಾದರೇ, ಮುಕ್ತವಾಗಿ ತೀರಕ್ಕೆ ಬಿಟ್ಟು ಬಿಡುವ ಸೋಜಿಗವೇ ಬದುಕು.

ಮತ್ತೆ ಬಂದಿದೆ ಇಂಟರ್‌ವಲ್..!

ನೀವು ಏನನ್ನೂ ಇಲ್ಲ ಎನ್ನಬಾರದು. ಏನೋ ಗೊತ್ತಿಲ್ಲ ಮುಂದೆ ಹೋಗುತ್ತಿದ್ದೇನೆ. ನಿಮಗೆ ತೊಂದರೆ ಕೊಡಲಾರೆ. ನಿಮ್ಮೆದುರಿಗೆ ನಿಲ್ಲುವ ಸ್ಥಿತಿ ಬಂದರೇ, ಇಲ್ಲ ಎನ್ನಬೇಡಿ..! ಮಾತಾಡಿಸಿಯಾದರೂ ಕಳುಹಿಸಿ. ಮತ್ತೊಂದು ಇಂಟರ್‌ವಲ್ ಬರುವ ತನಕ ಈ ಅಧ್ಯಾಯ ಮುಂದುವರಿಯುತ್ತದೋ ಇಲ್ಲವೋ...

ಮತ್ತೆ ಹೊರಟಿದೆ. ಹಿಂದೆಷ್ಟು ಭಾರವಿತ್ತೋ, ಅಷ್ಟೇ ಭಾರ ಹೊತ್ತು, ಕಾಣದೂರಿಗೆ. ಜೊತೆಗೆ ಕಾಲವೊಂದಿದೆ. ಅದು ನನ್ನ ಪಾಲಿಗೊಲಿಯುತ್ತದೆಂಬ ನಂಬಿಕೆಯಿಲ್ಲ. ಅದು ನಿಷ್ಕರುಣಿ ಧಣಿವಾರಿಸಿಕೊಳ್ಳುವುದಕ್ಕೂ ಬಿಡುವುದಿಲ್ಲ..!

ಬದುಕೆಂದರೇ, ನಿಗಿ ಮೌನ..!
-ಶ್ರೀರಾಜ್ ವಕ್ವಾಡಿ

Thursday, May 7, 2020

ಭೋಪಾಲ್ ಅನಿಲ ದುರಂತ ನೆನಪಿಸಿದ ‘ವಿಷಾ’ಖಪಟ್ಟಣ..!


( ಎಲ್ ಜಿ ಪಾಲಿಮಾರ್ ಇಂಡಸ್ಟ್ರಿ )

ಎಲ್ಲವೂ ಸರಿಯಾಗಿಯೇ ಇತ್ತು. ಇದ್ದಕ್ಕಿಂದ್ದಂತೆ ಮಾರಣ ಯಜ್ಙ ಆರಂಭವಾಗಿ ಬಿಟ್ಟಿತ್ತು. 1984ರ ಡಿಸೆಂಬರ್ 2 ರ ರಾತ್ರಿ ‘ಸೆವಿನ್’ ಎಂದು ಹೇಳಲಾಗುವ ಪೆಸ್ಟಿಸೈಡ್ ಕಾರ್ಬಾರಿಲ್ ತಯಾರು ಮಾಡುವ ಯೂನಿಯನ್ ಕಾರ್ಬೈಡ್  ಕಾರ್ಖಾನೆಯ ಹೊಗೆ ವಾತಕ ಚಿಮುಣಿಯ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಪರಿಣಾಮವಾಗಿ  ಅಪಾರ ಪ್ರಮಾಣದಲ್ಲಿ ಮಿಥೈಲ್ ಶೇಕರಣಾ ತೊಟ್ಟಿಯ ಒಳಗಡೆ ನೀರು ಸೇರಿಕೊಂಡಿದ್ದೇ ತಡ, ವಿಷವಾತಕ ವಾತಾವರಣ ತನ್ನ ಕದ ತೆರೆದುಕೊಂಡಿತು. ಕಾರ್ಖಾನೆಯೊಳಗಿನ ಅಪಾಯ ಸೂಚಿಸುವ ಸೈರನ್ ಕೂಗಿಕೊಂಡಿತು. ಅಷ್ಟೊತ್ತಿಗಾಗಲೇ, ಜೀವ ರಕ್ಷಣೆಗಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲಾ ಹೊರಗಡೆ ಓಡೋಡಿ ಬಂದರು.

ಹೌದು, ನೀವಂದುಕೊಂಡತೆ ಇದು ಭೋಪಾಲ್ ನ ಕಥೆಯೇ. ಡಿಸೆಂಬರ್ 2ರ ತಡರಾತ್ರಿಯೇ, ವಿಷವಾಯು ಸೇವನೆಯ ಆರಂಭದ ಲಕ್ಷಣಗಳಾದ ಕೆಮ್ಮು, ಜ್ವರ, ವಾಕರಿಕೆ, ಉಸಿರಾಟದ ತೊಂದರೆ, ಕಣ್ಣುರಿ ಎಲ್ಲವೂ ಅಲ್ಲಿನ ಸುತ್ತಮುತ್ತಲಿನ ಜನರಲ್ಲಿ ಪ್ರಾರಂಭವಾಯಿತು.



ಅನಿಲ ದುರಂತ ನಡೆದ ಸುತ್ತಮುತ್ತಲಿನ 6 ಕಿಲೋಮೀಟರ್‌ನ ತನಕ ಭಾರಿ ಪ್ರಮಾಣದಲ್ಲಿ ಈ ವಿಷವಾಯು ಹಬ್ಬಿ ಬಿಟ್ಟಿತ್ತು. ನಿಮಗೆ ಆಶ್ಚರ್ಯ ಅನ್ನಿಸಬಹುದು.  ನಂತರದಲ್ಲಿ ಇದು ಘಟನೆ ನಡೆದ ಸ್ಥಳದಿಂದ 50 ಕಿಲೋ ಮೀಟರ್ ದೂರದಲ್ಲಿದ್ದ ಜನರಿಗೂ ಪರಿಣಾಮ ಬೀರಿತು.

ದುರಂತ ನಡೆದ ತಕ್ಷಣ ಸುಮಾರು 2259 ಮಂದಿ ಅಲ್ಲಲ್ಲೇ ಅಸ್ವಸ್ಥರಾಗಿ ಶವವಾದರು. ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು. ಶ್ವಾಸನಾಳದ ಉರಿಯಿಂದಾಗಿ ಹೇಳದೇ ಕೇಳದೇ ಅದೆಷ್ಟೋ ಜನರು ಪ್ರಾಣತೆತ್ತರು, ಸಾವಿರಾರು ಜಾನುವಾರುಗಳನ್ನೊಳಗೊಂಡು ಸಾಕು ಪ್ರಾಣಿಗಳು, ಬೀಡಾಡಿ ಪ್ರಾಣಿಗಳು ಒದ್ದಾಡಿ ಪ್ರಾಣ ಬಿಟ್ಟವು. ಇನ್ನು, ದುರಂತ ನಡೆದ ಎರಡು ವಾರದೊಳಗೆ ಬರೋಬ್ಬರಿ ಎಂಟು ಸಾವಿರ ಮಂದಿ ಜೀವ ಬಿಟ್ಟರು ಎಂದು ಭೋಪಾಲ್ ಅನಿಲ ದುರಂತದ ಇತಿಹಾಸ ಹೇಳುತ್ತದೆ.


( ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದ ಚಿತ್ರ )

ಇಂತಹದ್ದೊಂದು ದೊಡ್ಡ ದುರಂತಕ್ಕೆ ಕಾರಣವಾದ ಕಂಪೆನಿಯ ಮಾಲೀಕ ಅಮೇರಿಕಾ ಮೂಲದ ವಾರೆನ್ ಆ್ಯಂಡರ್‌ಸನ್ ಎಂಬಾತನನ್ನು ಅಂದಿನ ಸರ್ಕಾರವೇ ಬಚಾವಾಗಲು ಸಹಕರಿಸಿತು.

ಮಧ್ಯಪ್ರದೇಶದ ಪೋಲಿಸರು ಈತನನ್ನು ಬಂಧಿಸಿದ್ದರೂ ಕೂಡ ಆತ ತನ್ನ ಪ್ರಭಾವದಲ್ಲಿ ಜಾಮೀನಿನೊಂದಿಗೆ ಹೊರಬಂದ. ಕಾರ್ಪೋರೇಟ್ ಉದ್ಯಮಿಗಳು ಸರಕಾರದ ಮೇಲೆ ಯಾವ ರೀತಿಯ ಹಿಡಿತ ಹೊಂದಿದ್ದಾರೆ ಎನ್ನುವುದಕ್ಕೆ ಇದೊಂದೆ ಉದಾಹರಣೆ ಸಾಕು.

ಮತ್ತೆ ನಡೆದಿದ್ದೆಲ್ಲವೂ ಕೋರ್ಟು, ಕಚೇರಿ, ಬಂಧನ, ರಾಜಕೀಯಗಳೆಂಬ ಬೃಹನ್ನಾಟಕ..!

ಇಂದಿಗೂ, ಬೋಪಾಲ್‌ನ ಅನಿಲ ದುರಂತದ ದುರಂತ ಹೆಜ್ಜೆಗಳ ಅಚ್ಚಿವೆ. ಈ ದುರಂತಕ್ಕೆ ಒಳಗಾದ ಸುಮಾರು ಐದು ಮುಕ್ಕಾಲು ಲಕ್ಷಕ್ಕಿಂತಲೂ ಹೆಚ್ಚು ಸಂತ್ರಸ್ತರು ಇದುವರೆಗೂ ಪೂರ್ಣ ಪ್ರಮಾಣದ ಪರಿಹಾರ ಪಡೆಯದೇ ಬಲಿಪಶುಗಳಾಗಿದ್ದಾರೆ ಎನ್ನುವುದು ವಿಷಾದನೀಯ.

ಅಂತಹ ದುರಂತದ ಆಳವನ್ನು ನೆನಪಿಸುವ ಘಟನೆಯೊಂದು ಆಂಧ್ರದ ವಿಶಾಖಪಟ್ಟಣಂ ನಲ್ಲಿ ನಡೆದುಹೋಗಿದೆ. ಎಲ್‌ಜಿ ಪಾಲಿಮಾರ್ ಇಂಡಸ್ಟ್ರಿಯಿಂದ ಹೊರ ಉಗುಳಿದ ಸ್ಟೆರೇನ್ ಗ್ಯಾಸ್‌ನ ಪರಿಣಾಮದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಸುಮಾರು 5000 ಮಂದಿ ಈ ಪರಿಣಾಮಕ್ಕೆ ಒಳಗಾಗಿದ್ದಾರೆ. 10 ಮಂದಿ ಮೃತರಾಗಿದ್ದಾರೆ. ಸುಮಾರು 800 ಜನರು ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ಹೋರಾಟದಲ್ಲಿದ್ದಾರೆ. ಆಸ್ಪತ್ರೆಗೆ ಸಾಗುವ ದಾರಿಯಲ್ಲಿ ಅಸ್ವಸ್ಥರಾಗುತ್ತಿರು ದೃಶ್ಯಗಳು ಕಣ್ಣಿಗೊತ್ತಿಕೊಂಡಿವೆ.


(ವಿಶಾಖಪಟ್ಟಣಂ)


ಇನ್ನು, ಜಾನುವಾರುಗಳು ಸೇರಿದಂತೆ ಬೀಡಾಡಿ ಪ್ರಾಣಿಗಳು ರಸ್ತೆಗಳ ಬದಿಗಳಲ್ಲಿ ನೊರೆ ಕಾರಿ ವಿಲವಿಲ ಸಾಯುತ್ತಿರುವ ದೃಶ್ಯ ಎದೆಗೆ ಚೂರಿ ಇರಿದಂತಾಗುತ್ತಿದೆ. ಎಲ್ಲವೂ ಎಂದಿನಂತೆ ಸರಿಯಾಗಿತ್ತು. ಆ ಸ್ಟೆರೇನ್ ಟ್ಯಾಂಕ್ ಗ್ಯಾಸ್ ವಾಕರಿಕೆ ಮಾಡಬಾರದಿತ್ತು. ಕೋವೀಡ್ 19  ನಿಂದಾಗಿ ತತ್ತರಿಸಿ ಹೋಗಿದ್ದ ಆಂಧ್ರಕ್ಕೆ ಈಗ ಗಾಯದ ಮೇಲೆ ಬಿಸಿ ಕೆಂಡದಲ್ಲಿ ಕಾಯಿಸಿದ ಕಬ್ಬಿಣದಿಂದ ಬರೆ ಎಳೆದಂತಾಗಿದೆ.


(ವಿಷಾನಿಲಕ್ಕೆ ನೊರೆಕಾರಿ ಅಸುನೀಗಿದ ಜಾನುವಾರು)



‘ನಮಗೇನು ಗೊತ್ತಿಲ್ಲ, ಇದ್ದಕ್ಕಿಂದಂತೆ ಕೆಟ್ಟ ವಾಸನೆ ನಿಧಾನವಾಗಿ ಬರಲಾರಂಭಿಸಿತು. ಅಡುಗೆ ಗ್ಯಾಸ್ ಲೀಕ್ ಆಗಿರಬಹುದೆಂದು ಪರೀಕ್ಷಿಸಿ ನೋಡಿದೆವು. ಆದರೇ, ಅದಲ್ಲ. ಸ್ವಲ್ಪ ಹೊತ್ತಿನಲ್ಲಿ ವಿಷಾನಿಲ ಎಂದು ತಿಳಿಯಿತು. ನಮ್ಮ ರಕ್ಷಣೆ ನಾವು ಮಾಡಿಕೊಂಡೆವು. ಜಾನುವಾರುಗಳು, ಸಾಕು ನಾಯಿಗಳು ಇದ್ದಲ್ಲೇ ಬಾಯಿಯಿಂದ ನೋರೆಕಾರಿ ಸಾಯುತ್ತಿವೆ. ಮಕ್ಕಳು, ವಯಸ್ಸಿಗೆ ಬಂದವರೆಲ್ಲಾ ಕಷ್ಟಪಡುತ್ತಿದ್ದಾರೆ’ ಎಂದು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ದುಃಖದ ಧ್ವನಿಯಲ್ಲೇ ತಮ್ಮ ಅನುಭವ ವ್ಯಕ್ತಪಡಿಸುತ್ತಾರೆ ವಿಶಾಖಪಟ್ಟಣದ ಘೋರ ಅನಿಲ ದುರಂತ ನಡೆದ ಸ್ಥಳದಿಂದ ಕೇವಲ 3 ಕೀಲೋಮೀಟರ್ ದೂರದಲ್ಲಿ ವಾಸವಿರುವ ಅಕ್ರಮ್. 



(ವಿಷಾನಿಲದಿಂದ ಅಸ್ವಸ್ಥಗೊಂಡ ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು)


ಕಾಣದ ವಿಷಾನಿಲ ಮಾನವರನ್ನು ಬಲಿ ತೆಹೆದುಕೊಳ್ಳಲಾರಂಭಿಸದೆ. ಇದು ಆರಂಭವಷ್ಟೇ. ಇದ್ದ ಸ್ಥಳದಲ್ಲೇ ಬಿದ್ದು ಸಾಯುವ ಘೋರ ದೃಶ್ಯ ಸಾಮಾನ್ಯವಾಗಿದೆ. ವಿಶಾಖಪಟ್ಟಣ ‘ವಿಷಾ’ಖಪಟ್ಟಣವಾಗಿ ಸಂಪೂರ್ಣವಾಗಿ ಬದಲಾಗಿದೆ. ಭೋಪಾಲ್ ದುರಂತದಿಂದ ಪಾಠ ಕಲಿಯಲಿಲ್ಲ. ಚರಿತ್ರೆಯ ಪಾಠ ಭಾರತಕ್ಕೆ ಬಲು ದೂರವೇ ಅನ್ನಿಸುತ್ತಿದೆ. ಚರಿತ್ರೆಯಿಂದ ಭಾರತ ಪಾಠ ಕಲಿತಿದ್ದು ತುಂಬಾ ವಿರಳ. ಇಲ್ಲಿ ಎಲ್ಲವೂ ಉಚಿತ. ಸಾಯುವುದು ಕೂಡ.

 ‘ವಿಜ್ಞಾನ ವಿಶೇಷವಾದ ಜ್ಙಾನವೇ ಇರಬಹುದು, ಆದರೇ, ಹಿತ ನೀಡುವ ಜ್ಙಾನವಲ್ಲ...!’

ಇಲ್ಲಿ, ಎಂದಿಗೂ ಕೂಡ ದಾರಿಯಲ್ಲೇ ಸಾವು..!
-ಶ್ರೀರಾಜ್ ವಕ್ವಾಡಿ

Wednesday, May 6, 2020

ನೀನಂದರೇ, ಕ್ಷಮತೆ..!



ಏನಾದ್ರು ಮಾತಾಡು, ಅಲ್ಪ ಸ್ವಲ್ಪ ನಿರಾಳವಾದೀತು. ಸುಮ್ಮನೆ ಆರ್ತಕ್ಕೆ ಪಾಲಾಗಬೇಡ. ಏರುವುದು, ಗೆಲ್ಲುವುದು, ಸೋಲುವುದು, ಬಾಗುವುದು, ಇಳಿಯುವುದು, ಕುಗ್ಗುವುದು, ಕರಗುವುದು, ಬದುಕು ಅಂದ ಮೇಲೆ ಸಹಜ.

ಪ್ರೀತಿ ದೂರವಾಗುವುದಿಲ್ಲ. ಕಾಣದಿರುವಷ್ಟಂತೂ ಆಗೋದೇ ಇಲ್ಲ. ಅಷ್ಟು ಸಂದೇಹವಿದೆಯಾ..? ಕೇಳಿಕೋ ನಿನ್ನನ್ನೇ ನೀನು. ಉತ್ತರ ಸಿಗಲ್ಲ ಅಂದ್ರೇ, ಏನೋ ತಪ್ಪು ನಿನ್ನಲ್ಲೇ ಆಗಿದೆ ಅಂತರ್ಥ, ಗೊಂದಲ ಉಂಟಾಗುತ್ತಿದ್ದರೇ, ಸರಿಪಡಿಸಿಕೊಳ್ಳಬಹುದು ಅಂತರ್ಥ. ಉತ್ತರ ಸಿಕ್ಕೀತು ಅಂದರೇ ಪ್ರೀತಿ ಇನ್ನೂ ಇದೆ ಅಂತರ್ಥ. ನೋವು ಅತ್ಯಲ್ಪ ಕ್ಷಣಗಳಿಗಷ್ಟೇ. ಪ್ರತಿಕೂಲ ಪರಿಸ್ಥಿತಿಗಳನ್ನು ಅನುಕೂಲ ಪರಿಸ್ಥಿತಿಗಳಾಗಿ ಬದಲಾಯಿಸಿಕೊಳ್ಳುವುದೆಂದರೇ, ಮೊದಲು ನಿನ್ನನ್ನೇ ನೀನು ಪ್ರೀತಿಸುವುದು.

ಕ್ರೋಧಕ್ಕೆ, ಆಕ್ರೋಶಕ್ಕೆ, ದುಃಖಗಳಿಗೆ ಸಹೃದ್ಭಾವಗಳು ಬಲಿಯಾಗದಿರಲಿ.

‘ಆಲ್ ದಿ ವೆರಿ ಬೆಸ್ಟ್’

ನೀನು ಮತ್ತೆ ಸರಿಹೊಂದುತ್ತಿರುವ ವಿಷಯ ತಿಳಿಯಿತು. ಇದು ನಿನ್ನೊಲವಿನ ಪುಟಗಳ ಮುಂದಿನ ಅಧ್ಯಾಯ. ಅತ್ಯಂತ ಆತ್ಮಬಲ, ಪರಿಶುದ್ಧ ಆಲೋಚನೆ, ಧೈರ್ಯಗಳಿಂದ ಆರಂಭಿಸು. ಆರಂಭಕ್ಕೊಂದು ಯಶಸ್ಸಿನ ಸಂಕಲ್ಪವಿರಲಿ. ವೇಗಕ್ಕೆ ತುಡಿತವಿರಲಿ, ಅಂತ್ಯಕ್ಕೆ ಇನ್ನೂ ಚಿಗುರುವ ಉತ್ಸಾಹವಿರಲಿ.

‘ಎಸ್, ದಿಸ್ ಈಸ್ ಯುವರ್ ಟೈಮ್’

ಒಂದಿಷ್ಟು ನೆನಪುಗಳನ್ನು ಅಳಿಸಿಹಾಕಲೇ ಬೇಕು. ನಿನ್ನೊಳಗಿನ ದೈತ್ಯ ಶಕ್ತಿಯನ್ನು ಹೊರತರಲೇ ಬೇಕು.

ಪ್ಲೀಸ್. ‘ಕಾಲಕ್ಕೆ ಕಾಯುವಷ್ಟು ಕಾಲವಿಲ್ಲವಂತೆ.’

ನೀನು, ನಿನ್ನೊಂದಿಗಾದರೂ ಮಾತಾಡು. ನಿನ್ನೊಳಗಿನ ಸಂವಾದಕ್ಕೆ ನಿಗೂಹನ ಬೇಡ. ಇನ್ನೆಲ್ಲವೂ ನಿನ್ನದೇ.

ನನ್ನ ಆನಂದ ನಯನಸಲಿಲಕ್ಕೆ ಅವಕಾಶ ಮಾಡಿಕೊಡು.

ಹೌದು, ನಾನೀಗ ನಿನ್ನ ಪಾಲಿನವನಲ್ಲ. ಆದರೇ, ನನ್ನ ಪಾಲು ನಿನ್ನಲ್ಲಿಲ್ಲ ಅಂತ ನಿನಗೂ ಹೇಳುವುದಕ್ಕೆ ಸಾಧ್ಯವಿಲ್ಲ...!

‘ಕಾಲಾತೀತ’ ಅಷ್ಟೇ.

ಅದೇನೇ ಇರಲಿ, ನಿನ್ನ ಹೊಸ ಅಧ್ಯಾಯದಲ್ಲಿ ಸಂತಸಗಳೇ ಬಹುಪಾಲು ಪಡೆಯಲಿ.
‘ನೀನೆಂದರೇ, ಎಲ್ಲವನ್ನು ಎದುರಿಸುವ ಕ್ಷಮತೆ’

ಸ್ವಾರಿ... ಒನ್ಸ್ ಅಗೈನ್ ‘ಆಲ್ ದಿ ವೆರಿ ಬೆಸ್ಟ್.’
-ಶ್ರೀರಾಜ್ ವಕ್ವಾಡಿ

Tuesday, May 5, 2020

ಅಮರ್ತ..!




ದೇವರೇ,
ನನ್ನನ್ನು ಕಷ್ಟದಲ್ಲಿ ಸಿಲುಕಿಸುವುದಾದರೇ, ಸಿಲುಕಿಸಿ ಬಿಡು,
ದುಃಖದಲ್ಲಿ ಮುಳುಗಿಸುವುದಾದರೇ, ಮುಳುಗಿಸಿ ಬಿಡು,
ಹಿಂಸೆಗೆ ನೂಕುವುದಾದರೇ, ನೂಕಿ ಬಿಡು,
ಜೊತೆಗೆ, ಅವನ್ನೆಲ್ಲಾ ಎದುರಿಸುವ ಶಕ್ತಿಯನ್ನೂ ಕೊಟ್ಟು ಬಿಡು..!
ನಾನಿನ್ನಲ್ಲಿ ಮತ್ತೇನನ್ನೂ ಕೇಳಲಾರೆ.

ಮರೆತು ಬಿಡುವುದು, ಕಳೆದು ಬಿಡುವುದು ಹೇಳಿದಷ್ಟು ಸುಲಭವಲ್ಲ. ‘ಬದಲಾವಣೆಯಾಗಬಲ್ಲ, ಬದಲಾಗುವ ಎಲ್ಲಾ ಬದಲಾವಣೆಗಳನ್ನು ಒಮ್ಮೊಮ್ಮೆ ಬದಲಾವಣೆ ಮಾಡಲು ಸಾಧ್ಯವಾಗದೇ ಇರಬಹುದು. ಕ್ರಿಯೆಗೆ, ಪ್ರತಿಕ್ರಿಯೆ ನೀಡುವ ನಿರ್ಧಾರ ನಿನ್ನಲ್ಲಿದೆ’ ಎನ್ನುವ ಧೈರ್ಯ ತುಂಬುವ ನುಡಿಗಳೆಲ್ಲಾ ಪುಟಗಳಿಗೆ, ಮಾತುಗಳಿಗೆ ಮಾತ್ರ ಸೀಮಿತ. ನೆರವಿಲ್ಲದ ಬದುಕು ಏನಿಲ್ಲದ ಶೂನ್ಯವಷ್ಟೇ.

ಮನಸ್ಸಿನೊಳಗೊಂದಿಷ್ಟು ಮನಸ್ಸುಗಳು ... ಅವುಗಳೊಳಗೊಂದಿಷ್ಟು ಆಸೆಗಳು.. ಒಂದರಂತೆ ಒಂದಿಲ್ಲ... ಎಲ್ಲವೂ ನನ್ನದಲ್ಲಾ..! ಎಲ್ಲದಕ್ಕೂ ಅದರದ್ದೇ ಭಾವ, ಭಾರ..!

ದುಃಖಕ್ಕೆ ದುಃಖಕ್ಕಿಂತ ದುಃಖವಾಗುವುದು ಇಷ್ಟದವುಗಳು ಕಣ್ಣಿನ ಆಳ, ಅಗಲಕ್ಕೆ ಕಾಣದಷ್ಟು ಆದಾಗ ಮಾತ್ರ. ತೊರೆದು ಬಿಟ್ಟಿದೆ. ಆರ್ತ ಮಾದಕ ಒಳಧ್ವನಿಯೊಂದು ಕೇಳುತ್ತಿದೆ ಈಗ. ಅದಕ್ಕೆ ಹೆಗಲಾಗಿ ಭಾರವೂ ಇದೆ. ಇನ್ನೇನಿಲ್ಲ ಮುಗಿಯುವುದೊಂದೇ ಬಾಕಿ.

ಅದನ್ನೂ ಕೂಡ ಸ್ವೀಕರಿಸಿ, ಆನಂದಿಸಬಲ್ಲೆ. ಆದರೇ, ಸಹಿಸುವಿಕೆಯ ಮಿತಿಯ ಎಲ್ಲೆ ದಾಟಿಯಾದ ಮೇಲೆ ‘ಅಪೂರ್ಣ’ ಎನ್ನದೇ ‘ಪೂರ್ಣ’ ಎಂದು ಎದೆ ಸುಳ್ಳು ಹೇಳುತ್ತದಾ..? ಖಂಡಿತವಿಲ್ಲ.

ಸಂವೇದನೆಯ ಬಿಕ್ಕಿನ ಸ್ವರಕ್ಕೆ ಅನುಭಾವದಲ್ಲಿ ನನಗಿಂದು ಭಾಗಿಯಿಲ್ಲ, ಒಂದೊಂದೇ ಕ್ಷಣ ಸವೆಸಿಕೊಳ್ಳುತ್ತಾ ಎಲ್ಲವನ್ನೂ ಒಪ್ಪಿಕೊಳ್ಳಲಾದರೂ ಕಲಿತುಕೊಳ್ಳುವುದಕ್ಕೆ ಪಾಠ ಹೇಳಿಕೊಡು.

ಕರೆದಾಗ ಬಾರದಿರುವ, ಕೇಳಿದಾಗ ಕೊಡದಿರುವ, ಬಾಗಿದಾಗ ಕರುಣಿಸದ ಅಮರ್ತ ಶಕ್ತಿಯೇ ದೇವರು.

‘ಗುಡಿಯೆಂದರೇ, ಏನಿಲ್ಲದ ಸಮಾಧಿ..!’
-ಶ್ರೀರಾಜ್ ವಕ್ವಾಡಿ

Monday, May 4, 2020

'ನೀನು ನೀನಾಗಿಲ್ಲ..!'



ನಾನೇನು ನಿನ್ನನ್ನು ಪೂರ್ತಿಯಾಗಿ ಬಯಸುತ್ತಿರಲಿಲ್ಲ. ನನಗೆ ಬೇಕಾಗಿದ್ದದ್ದು ಒಂದು ಸೆಕ್ಯುರ್ ಫೀಲ್ ಮಾತ್ರ. ಅದು ಕೂಡ ನಿನ್ನಿಂದ ಸಿಗಲಿಲ್ಲ.

‘ನನಗೆ ನೀನು ಬೇಕು’ ಎನ್ನುವ ಪ್ರೀತಿ, ಹೆಮ್ಮೆ ಪಡುವಷ್ಟೇ ಶ್ರೇಷ್ಠವಾದ ಭಾವ ಅಂತಂದುಕೊಂಡಿದ್ದಿದ್ದೆ. ಆದರೇ, ಅದು ಹಾಗಿರಲಿಲ್ಲ. ಆತ್ಮ ಸಂವೇದನೆ ಇಲ್ಲದ ಮನಸ್ಸಿಗೆ ನನ್ನ ಆತ್ಮ ಸಂವೇದನೆ ಕೊಡಲಾರೆ. ಇದನ್ನು ಬಹಳ ‘ಕಡಿಮೆ ಮಾಡಿ’ ಹೇಳುತ್ತಿರುವೆ ಅಂತ ಅಂದುಕೊಳ್ಳಬೇಡ. ‘ಹೆಚ್ಚಾಗಿಯೇ’ ಹೇಳುತ್ತಿದ್ದೇನೆ.

ಅಪರಾಧಿ ಭಾವ, ಸೋತು ಕರಗಿ ಹೋದ ಪ್ರಜ್ಞೆ, ಆತಂಕ ಎಲ್ಲವೂ ಈಗ ನನ್ನನ್ನು ಸುತ್ತುವರಿದಿವೆ. ಯಾಕಿದನ್ನು ಹೇಳಿಕೊಳ್ಳುತ್ತಿದ್ದೇನೆ ಅಂದರೇ, ಈ ಅನುಭವ ನಿನ್ನನ್ನೂ ಆವರಿಸಿಕೊಳ್ಳಲಿ ಎಂದು.

‘ನಾನು ಪ್ರೇಮ ವ್ಯಸನಿಯಾಗಬಾರದಿತ್ತು’.

‘ಪ್ರೇಮ ಅಂದರೇ, ಭಾವಕ್ಕೆ ಬೆಲೆ ಕೊಟ್ಟವರನ್ನು ದೂರ ಮಾಡುವುದು’ ಎನ್ನುವುದು ಗೊತ್ತಿರಲಿಲ್ಲ. ಹಾಗಾಗಿ ಪ್ರೀತಿಸಿದೆ.

ಸೇಡಿಲ್ಲ ನನ್ನಲ್ಲಿ. ಇನ್ನೂ ಕೂಡ ಪ್ರೀತಿಯೇ ಇದೆ. ದೂರವಾದ ಮೇಲೆ ನೀ ನನ್ನವನಲ್ಲ.
ನೋವಿಗೆ ನೋವು ಕೊಟ್ಟು ಪ್ರತಿಕಾರ ತೀರಿಸಿಕೊಳ್ಳುವಷ್ಟು ನಾನು ನಿಕೃಷ್ಟಳಾಗಲಾರೆ. ಎದೆ ತುಂಬಾ ನೋವಿದೆ. ದುಃಖ, ದುಮ್ಮಾನಗಳ ರಾಶಿಯಿದೆ. ಜೊತೆಗೆ ಅಷ್ಟೇ ಪ್ರೀತಿಯೂ ಇದೆ.

ಕಳೆದುಕೊಳ್ಳುತ್ತೇನೆ. ಒಂದೊಂದನ್ನೇ ಕಳೆದುಕೊಳ್ಳುತ್ತೇನೆ. ಜೊತೆಗೆ ನಿನ್ನ ಅಪರಿಮಿತ ಪ್ರೀತಿಯನ್ನೂ ಕೂಡ.

ಹೊರಟು ಹೋಗುವಾಗ ‘ಹ್ಯಾವ್ ಅ ಬ್ಲೆಸ್ಡ್ ಫ್ಯೂಚರ್’ ಅಂತ ಹೇಳಿದ್ಯಲ್ಲಾ..? ಆಗ ಒಂದು ಕ್ಷಣವಾದರೂ.. ‘ನಿನ್ನವಳು, ನೀನಲ್ಲದೇ ಹೇಗೆ ‘ಬ್ಲೆಸ್ಡ್’ ಆಗಿರ‍್ತಾಳೆ..?’ ಅಂತ ಸಣ್ಣ ಯೋಚನೆಯಾದ್ರೂ ಮಾಡಿದ್ದೀಯಾ ನೀನು..?

‘ಥ್ಯಾಂಕ್ಯೂ’

ಗೊತ್ತಿದೆ ನನಗೆ. ಎಲ್ಲವನ್ನೂ ಸ್ವೀಕರಿಸಿದ ಮೇಲೆ ‘ಟೈಮ್ ರೂಲ್ಸ್ ಎವರಿಥಿಂಗ್’ ಅಂತ. ಇನ್ಮುಂದೆ ಒಳಿತನ್ನಷ್ಟೇ ಜೊತಗೆ ಸೇರಿಸಿಕೊಂಡು ಬದುಕು ಸಾಗಿಸುತ್ತೇನೆ. ನಿನ್ನ ನೆನಪುಗಳನ್ನಲ್ಲಾ..!

‘ಬಿ ಹ್ಯಾಪಿ’ ಆ್ಯಂಡ್ 'ಬಿ ಯೂ'

ಗೊತ್ತು. ನೀನೀಗ ಹೇಗಿದ್ದರೂ ‘ನೀನು ನೀನಾಗಿಲ್ಲ...!’
-ಶ್ರೀರಾಜ್ ವಕ್ವಾಡಿ

Sunday, May 3, 2020

ದೂರವಾದಷ್ಟು ಹತ್ತಿರ ..!



ಬಹುಶಃ ಎಲ್ಲರ ಪಾಲಿಗೆ ಒಂಟಿತನ ಎನ್ನುವುದು ಭರಿಸಲಾಗದ ಶಿಕ್ಷೆ. ಆಂತರ್ಯವನ್ನು ಪ್ರೀತಿಸಿದ ಪ್ರೇಮಕ್ಕೆ ಪರ್ಯಾಯ ಅನ್ನುವುದೇ ಇಲ್ಲ. ಹಾಗಾಗಿ ಅಂತಹ ಪ್ರೀತಿ ದೂರವಾದರೂ ಹತ್ತಿರವಾಗುತ್ತದೆ. ಮತ್ತೆ ಮತ್ತೆ ಚಿಗುರಲೆತ್ನಿಸುತ್ತದೆ. ಆದರೇ, ಕೊನೆಯಲ್ಲಿ ಯಾವುದೋ ಅಮೂರ್ತ ಕಾರಣಕ್ಕೆ ಮತ್ತೆ ಸೋಲೊಪ್ಪುತ್ತದೆ.

ಅದು ನಮ್ಮೊಳಗಿನ ಮನೋಧೋರಣೆಯನ್ನು ಬಹಿರಂಗಪಡಿಸುತ್ತದೆ. ಎಲ್ಲವನ್ನೂ ಸ್ವೀಕರಿಸಿ ಸಹಿಸಿಕೊಳ್ಳುತ್ತದೆ. ನೋವು ಎಷ್ಟು ಅಗಾಧತೆಯನ್ನು ಕಂಡುಕೊಂಡಿರುತ್ತದೋ ಅಷ್ಟೇ ಮಮತೆ ದಟ್ಟವಾಗಿರುತ್ತದೆ.

ದೂರವಾದ ಪ್ರೀತಿ ಮತ್ತಷ್ಟು ವ್ಯಕ್ತಿತ್ವಕ್ಕೆ ಮತ್ತಷ್ಟು ಗಟ್ಟಿತನವನ್ನುಂಟು ಮಾಡುತ್ತದೆ. ನಿಜವಾಗಿಯೂ ಅದು ಅನೇಕ ಕೋನಗಳ ಆಳದಲ್ಲಿ ಬೇರೂರಿ ನಿಲ್ಲುತ್ತದೆ. ಎಲ್ಲವೂ ನಿಜ. ಆದರೇ,

ಕೆಲವೊಂದಿಷ್ಟು ಕಾಲ ಹಿತವುಣಿಸುತ್ತದೆ. ಕೆಲವೊಂದಿಷ್ಟು ಕಾಲ ದುಃಖವನ್ನು ಮೊಗೆಮೊಗೆದು ಕೊಡುತ್ತದೆ. ಇದು ಲೋಕ ನೀತಿ ಹಿತಕ್ಕೆ ಹಿಗ್ಗದೆ, ದುಃಖಕ್ಕೆ ಕುಗ್ಗದೇ ಬಾಳ್ವೆ ಕಂಡುಕೊಳ್ಳಬೇಕು ಅಷ್ಟೇ.
ಆದರೇ, ‘ಪ್ರೀತಿ’ ಬೇಡವೆಂದರೂ ಹಿಗ್ಗಿಸುತ್ತದೆ, ಕುಗ್ಗಿಸುತ್ತದೆ.

ಅದೆಷ್ಟು ಅಹಿತಕರ  ನೆನಪು ಎನ್ನುವುದು ನನಗೆ ಮಾತ್ರವಲ್ಲ, ಆತನಿಗೂ ಗೊತ್ತು. ಜೋರಾದ ಒಂದು ಮಳೆ ಬಂದು ಬಿಡಲಿ. ಆತನ ಸ್ಪರ್ಶವಿರುವ ನೆನಪುಗಳೆಲ್ಲಾ ಕೊಚ್ಚಿಹೋಗಲಿ ಅಂತನ್ನಿಸುತ್ತದೆ. ಮತ್ತೊಮ್ಮೊಮ್ಮೆ, ಅದೇ ನೆನಪುಗಳು ಯಾಕೋ ಏನೋ ಸೋಜಿಗ ಅನ್ನಿಸುತ್ತೆ. ಹ್ಹು, ನೆನಪಿಗೆ ಸಾವಿಲ್ಲ ಎನ್ನುವುದು ಆತ ಎದೆಯೊಳಗೆ ಕಾಲಿಟ್ಟ ಮೇಲೆಯೇ ಗೊತ್ತಾಗಿದ್ದು. ದೂರವಿದ್ದಾನೆ. ತೋರಿಸಿಕೊಳ್ಳಲಾಗದ ಅದೇ ಉತ್ಕಟ ಪ್ರೀತಿಯೊಂದಿಗೆ. ನಾನೂ ಕೂಡ.

ಹ್ಹೇ... ಹೋಗೋ ದೂರ. ದೂರವಾದ ಮೇಲೆ ಮತ್ಯಾಕೆ ಹತ್ತಿರಕ್ಕೆ..? !

‘ಥ್ಯಾಂಕ್ಸ್’

ನೀನಂದರೇ, ದೂರವಾದಷ್ಟು ಹತ್ತಿರ..!
---------------------
-ಶ್ರೀರಾಜ್ ವಕ್ವಾಡಿ

Saturday, May 2, 2020

ಆನ್‌ಲೈನ್ ತಾಳಮದ್ದಲೆ | ಯಕ್ಷಗಾನದ ರೂಪಕಕ್ಕೆ ತಾಂತ್ರಿಕ ಸ್ಪರ್ಶ ನೀಡಿದ 'ಯಕ್ಷ ನುಡಿಸಿರಿ ಬಳಗ ಸಿದ್ದಾಪುರ'..!



ಲಾಕ್ಡೌನ್‌ಯಿಂದಾಗಿ ಸಾಮಾಜಿಕ ವ್ಯವಸ್ಥೆಯೇ ಡೋಲಾಯಮಾನವಾಗಿದೆ. ಜನರ ಮಾನಸಿಕ ಸ್ವಾಸ್ಥ್ಯ ಕಳೆದುಹೋಗುತ್ತಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಮಂದಿ ಮನರಂಜನೆಯತ್ತ ಮುಖ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಪುಸ್ತಕಗಳನ್ನು ಓದುವುದು, ನೃತ್ಯ ಮಾಡುವುದು, ಹಾಡುವುದು, ಸಿನೆಮಾ ನೋಡುವುದು ಹೀಗೆ ಮುಂತಾದ ಅನೇಕ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಇನ್ನೊಂದಿಷ್ಟು ಮಂದಿ ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳ ಪುನರಾವಲೋಕನ ಹೀಗೆ ಹಲವರು ಹಲವಾರು ರೀತಿಯಲ್ಲಿ ಲಾಕ್ಡೌನ್‌ನ್ನು ಕಳೆಯುತ್ತಿದ್ದಾರೆ. ಆದರೇ ಇಲ್ಲೊಂದು ಬಳಗವಿದೆ. ಲಾಕ್ಡೌನ್‌ನ್ನು ಬಹಳ ಅರ್ಥಗರ್ಭಿತವಾಗಿ ಕಳೆಯುತ್ತಿದೆ ಎಂದರೇ ತಪ್ಪಿಲ್ಲ.

ತಾಳಮದ್ದಲೆ ನಿಮಗೆ ಗೊತ್ತಿದೆ. ಅದು ಯಕ್ಷಗಾನದ ಒಂದು ರೂಪಕ. ಯಕ್ಷಗಾನದ ಈ ಪ್ರಸ್ತುತಿಗೆ ‘ಬೈಟಾಕು’, ‘ಯಕ್ಷಗಾನ ಕೂಟ’ ಎಂದು ಕೂಡ ಹೇಳಲಾಗುತ್ತದೆ. ಮೂಲತಃ ತಾಳಮದ್ದಲೆ ಹವ್ಯಾಸಿ ಕಲೆ. ಇಲ್ಲಿ ವಿಶೇಷವಾದ ಯಾವ ರಂಗ ಸಜ್ಜಿಕೆಯೂ ಇರುವುದಿಲ್ಲ. ಭಾಗವತ ಪ್ರಸಂಗದ ಪದ್ಯಗಳನ್ನು ಹಾಡುತ್ತಾನೆ. ಅದಕ್ಕೆ ತಕ್ಕಂತೆ ಅರ್ಥಧಾರಿ ವಿವರಿಸುತ್ತಾನೆ. ಹೀಗೆ ಪಾತ್ರಗಳ ನಡುವೆ ಅರ್ಥ ಹೇಳುವುದರೊಂದಿಗೆ ವಾದ ವಿವಾದಗಳು ನಡೆಯುತ್ತದೆ. ತಾಳಮದ್ದಲೆಯಲ್ಲಿ ಅರ್ಥಧಾರಿಯ ಭಾಷಾ ಪಾಂಡಿತ್ಯವೂ ಕೂಡ ಮುಖ್ಯ ಪಾತ್ರ ಕಂಡುಕೊಳ್ಳುತ್ತದೆ. ಹೀಗೆ ತಾಳಮದ್ದಲೆಯ ಪ್ರಸ್ತುತಿ ಪ್ರಸಂಗದುದ್ದಕ್ಕೂ ಮಾತಿಗೆ ಮಾತು, ಸವಾಲ್‌ಗೆ ಜವಾಬ್ ಎಂಬಂತೆ ನಡೆಯುತ್ತದೆ.

ಹೌದು, ಅಂತಹದ್ದೊಂದು ಮಜಬೂತಾದ ಯಕ್ಷಗಾನದ ಸಹೋದರ ಪ್ರಸ್ತುತಿ ತಾಳಮದ್ದಲೆಗೆ ಇಲ್ಲೊಂದು ಬಳಗ ತಾಂತ್ರಿಕ ಸ್ಪರ್ಶವನ್ನು ನೀಡಿದೆ. ಆನ್‌ಲೈನ್‌ನಲ್ಲಿ ತಾಳಮದ್ದಲೆ ಮಾಡುವ ಮೂಲಕ ಮನರಂಜನೆಯ ಜೊತೆಗೆ ಯಕ್ಷಗಾನದ ಪರಂಪರೆಯನ್ನು ಉಳಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಕುಂದಾಪುರ ತಾಲೂಕಿನ ಸಿದ್ದಾಪುರದ ಯಕ್ಷ ನುಡಿಸಿರಿ ಬಳಗ ಎಂಬ ವಾಟ್ಸ್ಯಾಪ್ ಗ್ರೂಪ್ ಮಾಡುತ್ತಿದೆ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಮಾಡುವ ಯಕ್ಷಗಾನ ತಾಳಮದ್ದಲೆಯ ನೂತನ ಪ್ರಯೋಗವೊಂದಕ್ಕೆ ಈಗ ಜನಪ್ರೀತಿಯೂ ದೊರಕುತ್ತಿದೆ.

ಈ ಯಕ್ಷ ನುಡಿಸಿರಿ ಬಳಗದ ಮತ್ತೊಂದು ವಿಶೇಷ ಅಂದರೇ, ಇಲ್ಲಿನ ಯಾವೊಬ್ಬ ಸದಸ್ಯನು ಕೂಡ ವೃತ್ತಿಪರ ಯಕ್ಷಗಾನ ಕಲಾವಿದನಲ್ಲ, ಅರ್ಥಧಾರಿಯೂ ಅಲ್ಲ. ಯಕ್ಷಗಾನದ ಬಗ್ಗೆ ಅಪರಿಮಿತ ಆಸಕ್ತಿ ಮತ್ತು ಗೌರವವನ್ನಿಟ್ಟುಕೊಂಡು ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹವ್ಯಾಸಿ ಯಕ್ಷಗಾನ ಕಲಾವಿದರು. ಹೆಚ್ಚಾಗಿ ವೈದ್ಯಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರೇ ಈ ಬಳಗದಲ್ಲಿ ಪಾಲ್ಪಡೆದವರು. ಸುಮಾರು 70 ಮಂದಿ ಈ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಇದ್ದಾರೆ. 15 ಮಂದಿ ಅರ್ಥಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ನಿತ್ಯ ಬೇರೆ ಬೇರೆ ಯಕ್ಷಗಾನದ ಪ್ರಸಂಗಗಳ ಆಯ್ದ ಭಾಗಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಒಟ್ಟಿನಲ್ಲಿ, ಸಾಂಪ್ರದಾಯಿಕ ಯಕ್ಷಗಾನದ ರೂಪಕ ತಾಳಮದ್ದಲೆಗೆ ಆನ್‌ಲೈನ್ ಸ್ಪರ್ಶ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಸಿದ್ದಾಪುರದ ಯಕ್ಷ ನುಡಿಸಿರಿ ಬಳಗ ಕೈ ಹಾಕಿ ಯಶಸ್ವಿಯಾಗಿದೆ.



ಹೇಗೆ ಆನ್‌ಲೈನ್ ತಾಳಮದ್ದಲೆ..?
ರಾಮಾಯಣ ಮತ್ತು ಮಹಾಭಾರತದ ಯಕ್ಷಗಾನ ಪ್ರಸಂಗಗಳ ಒಂದೊಂದು ಪಾತ್ರವನ್ನು ಮತ್ತು ಅದಕ್ಕೆ ಸಂಬಂಧಿಸಿದ ಪದ್ಯವನ್ನು ಬಳಗದ ಹವ್ಯಾಸಿ ಅರ್ಥಧಾರಿಗಳಿಗೆ ಹಿಂದಿನ ದಿನವೇ ಯಕ್ಷ ನುಡಿಸಿರಿ ಬಳಗ ಗ್ರೂಪ್ ಮೂಲಕವೇ ಸೂಚಿಸಿ ಕಳುಹಿಸಲಾಗುತ್ತದೆ. ಪಾತ್ರಧಾರಿ ಅರ್ಥವನ್ನು ಎಂಟರಿಂದ ಹತ್ತು ನಿಮಿಷಗಳಲ್ಲಿ ವಾಯ್ಸ್ ರೆಕಾರ್ಡಿಂಗ್ ಮಾಡಿ ಯಕ್ಷ ನುಡಿಸಿರ ಬಳಗ ವಾಟ್ಸ್ಯಾಪ್ ಗ್ರೂಪ್‌ನ ಅಡ್ಮಿನ್ ನಂಬರ್‌ಗೆ ಕಳುಹಿಸಬೇಕು. ಅಡ್ಮಿನ್ ಅದನ್ನು ಯಾವ ಪಾತ್ರ, ಸಂದರ್ಭಗಳ ಸಂಕ್ಷಿಪ್ತ ವಿವರಗಳನ್ನು ಮತ್ತು ಅರ್ಥಧಾರಿಗಳ ಕಿರುಪರಿಚಯದೊಂದಿಗೆ ಗ್ರೂಪ್‌ಗೆ ಶೇರ್ ಮಾಡುವುದಕ್ಕೆ ಒಂದು ಸಮಯ ಸೂಚಿಸಿರುತ್ತಾರೆ. ಆ ಸಂದರ್ಭದಲ್ಲಿ ಗ್ರೂಪಿನ ಯಾವ ಸದಸ್ಯರ ಇತರೆ ಮೆಸೆಜ್ ಬಾರದಿರುವಂತೆ ನೋಡಿಕೊಂಡು ಆ ಅರ್ಥಗಾರಿಕೆಯನ್ನು ಶೇರ್ ಮಾಡಲಾಗುತ್ತದೆ. ಎಲ್ಲವೂ ಸೇರುವಾಗ ನೇರವಾಗಿ ತಾಳಮದ್ದಲೆ ನೋಡಿದ ಹಾಗೆಯೇ ಅನುಭಕ್ಕೆ ಬರುತ್ತದೆ.

ಬರಲಿದೆ ಆನ್‌ಲೈನ್ ತಾಳಮದ್ದಲೆ ಅರ್ಥಗಾರಿಕೆಗಳ ಫುಲ್ ವರ್ಶನ್..!
ತಾಳಮದ್ದಲೆಯನ್ನೂ ಹೀಗೂ ಕೂಡ ಮಾಡಬಹುದು ಎಂಬುದನ್ನು ಯಕ್ಷ ನುಡಿಸಿರಿ ಬಳಗ ಮಾಡಿ ತೋರಿಸಿದೆ. ಈಗಾಗಲೇ ‘ವಾಲಿ ಮೋಕ್ಷ’, ‘ರಾಮ ನಿರ್ಯಾಣ’ದಂತಹ ಪ್ರಸಂಗಗಳ ಕೆಲವು ಭಾಗಗಳನ್ನು ಆನ್‌ಲೈನ್‌ನಲ್ಲಿ ಇತಿಮಿತಿಯೊಳಗೆ ಪ್ರಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಾಯ್ಸ್ ರೇಕಾರ್ಡ್ ರೂಪದಲ್ಲಿರುವ ಅರ್ಥಗಾರಿಕೆಗಳನ್ನು ಕ್ರೋಢಿಕರಿಸಿ ಸಂಪೂರ್ಣ ಪ್ರಸಂಗವನ್ನಾಗಿ ದಾಖಲೀಕರಣ ಮಾಡುವ ಯೋಜನೆಯಿದೆ ಎನ್ನುತ್ತಾರೆ ಯಕ್ಷ ನುಡಿಸಿರಿ ಬಳಗ ಸಿದ್ದಾಪುರದ ಸಂಚಾಲಕರಾದ ಡಾ. ಜಗದೀಶ್.

ಗಾನ ವೈಭವವೂ ಉಂಟು..!
ಬಡಗು ತಿಟ್ಟಿನ ಯಕ್ಷಗಾನದ ಭಾಗವತುರುಗಳಾದ ಪ್ರಸಾದ್ ಮೊಗೆಬೆಟ್ಟು, ಗಣೇಶ್ ಹೆಬ್ರಿಯವರನ್ನೊಳಗೊಂಡು ತಂಡದ ಕೆಲವು ಹವ್ಯಾಸಿ ಭಾಗವತರುಗಳೊಡಗೂಡಿ ಭಾಮಿನಿ ಯಕ್ಷಗಾನ ಪದ್ಯಗಳ ಹಾಡುಗಾರಿಕೆಯ ಪ್ರಯೋಗವನ್ನು ಈ ಹಿಂದೆ ಇದೇ ವಾಟ್ಸ್ಯಾಪ್ ಗ್ರೂಪ್‌ನ ಮೂಲಕ ಆನ್‌ಲೈನ್‌ನಲ್ಲಿಯೇ ಮಾಡಿ ತೋರಿಸಿದೆ.



ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ..!
ಸಿದ್ಧಾಪುರ ವ್ಯಾಪ್ತಿಗೆ ಒಳಗೊಳ್ಳುವ 4ನೇ ತರಗತಿಯಿಂದ 9ನೇ ತರಗತಿಯೊಳಗಿನ ಮಕ್ಕಳಿಗೆ 5 ವರ್ಷಗಳಿಂದ, ವರ್ಷವೊಂದಕ್ಕೆ ಸುಮಾರು ನೂರು ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದೆ. ಮಾತ್ರವಲ್ಲದೇ, ತರಬೇತಿಯಾದ ಮೇಲೆ ಮಕ್ಕಳಿಂದಲೇ ಯಕ್ಷಗಾನ ಪ್ರದರ್ಶನ ಮಾಡಿಸುತ್ತಾ, ಮಕ್ಕಳಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಹುಟ್ಟಿಸುತ್ತಿದೆ ಯಕ್ಷ ನುಡಿಸಿರಿ ಬಳಗ ಸಿದ್ದಾಪುರ.



ಪ್ರತಿ ವರ್ಷ ರಾಜ್ಯೋತ್ಸವದ ದಿನ ತಾಳಮದ್ದಲೆಯ ಪ್ರಸ್ತುತಿ..!
ಯಕ್ಷಗಾನದ ತಾಳಮದ್ದಲೆಯ ರೂಪಕ ಎನ್ನುವುದು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡುತ್ತಿರುವ ಕಲೆ. ಹಾಗಾಗಿ ಪ್ರತಿ ಕನ್ನಡ ರಾಜ್ಯೋತ್ಸವದ ದಿನದಂದು ತಾಳಮದ್ದಲೆಯ ಪ್ರದರ್ಶನ ನಡೆಸತ್ತೇವೆ ಎನ್ನುತ್ತದೆ ಈ ಬಳಗ. ಸುಮಾರು ಎಂಟು ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ದಿನದಂದು ಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯೊಂದಿಗೆ ಯಕ್ಷ ನುಡಿಸಿರಿ ಬಳಗ ತಾಳ ಮದ್ದಲೆಯ ಪ್ರದರ್ಶನ ನೀಡುತ್ತಿದೆ.

ಸಂಕಷ್ಟದಲ್ಲಿರುವವರಿಗೆ ಸಹಾಯ..!
ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಯಕ್ಷಗಾನ ಕಲಾವಿದರಿಗೆ ಆರ್ಥಿಕ ನೆರವು ನೀಡುವುದನ್ನೂ ಕೂಡ ಈ ಬಳಗ ಮಾಡಿಕೊಂಡು ಬಂದಿದೆ. ಕಮಲಶಿಲೆ ಮೇಳದ ರವೀಂದ್ರ ಶೃಂಗೇರಿ ಎಂಬ ಕಲಾವಿದರು ಮೃತರಾದಾಗ, ಅವರ ಕುಟುಂಬಕ್ಕೆ ಇದೇ ಯಕ್ಷ ನುಡಿಸಿರಿ ಬಳಗ ಸಿದ್ದಾಪುರದ ನೇತೃತ್ವದಲ್ಲಿ ಸುಮಾರು ಮೂರು ಲಕ್ಷದ ಎಪ್ಪತ್ತು ಸಾವಿರದ ದೊಡ್ಡ ಮೊತ್ತದ ಧನ ಸಹಾಯ ನೀಡಿದೆ ಎನ್ನುವುದು ಈ ಬಳಗದ ಹೆಚ್ಚುಗಾರಿಕೆ.
-------------------------

-ಶ್ರೀರಾಜ್ ವಕ್ವಾಡಿ