ಬಿಜೆಪಿಗೆ ಅನಿವಾರ್ಯ । ಕಾಂಗ್ರೆಸ್ ಗೆದ್ದರೇ, 'ಜೋಡೋ'ಗೆ ಜೈಕಾರ ..!
ಮೂರು ಈಶಾನ್ಯ ರಾಜ್ಯಗಳ ವಿಧಾನ ಸಭಾ ಚುನಾವಣೆಯ ನಂತರ ಈಗ ಎಲ್ಲರ ಚಿತ್ತ ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ನೆಟ್ಟಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆದ/ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಕಾರಣದಿಂದಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ದೇಶ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ೫.೦೪ ರಷ್ಟಿರುವ ಕರ್ನಾಟಕವು ಲೋಕಸಭೆಗೆ ೨೮ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಅತಿ ಹೆಚ್ಚು ಲೋಕಸಭಾ ಸಂಸದರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯವು ಏಳನೇ ಸ್ಥಾನದಲ್ಲಿರುವುದರಿಂದ [(ಉತ್ತರ ಪ್ರದೇಶ (೮೦), ಮಹಾರಾಷ್ಟ್ರ (೪೮), ಪಶ್ಚಿಮ ಬಂಗಾಳ (೪೨), ಬಿಹಾರ (೪೦), ತಮಿಳು ನಾಡು (೩೯), ಮಧ್ಯ ಪ್ರದೇಶ (೨೯)] ಕೇಂದ್ರ ಸರ್ಕಾರಕ್ಕೆ ರಾಜ್ಯದ ವಿಧಾನ ಸಭಾ ಚುನಾವಣೆಯು ಅತ್ಯಂತ ಮುಖ್ಯವೂ ಕೂಡ ಹೌದು.
ಒಂದೆಡೆ ವಿವಿಧ ಯೋಜನೆಗಳ ಉದ್ಘಾಟನೆಯ ನೆಪದಲ್ಲಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರೋಧ ಪಕ್ಷಗಳ ವಿರುದ್ಧ ಮಾತನಾಡಿ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಚುನಾವಣೆಯ ಹಾದಿಯಲ್ಲಿ ರಾಜ್ಯ ಬಿಜೆಪಿ ಸಂಪೂರ್ಣವಾಗಿ ಕೇಂದ್ರ ನಾಯಕರ ಮೊರೆ ಹೋದಂತೆ ಕಾಣುತ್ತಿದೆ. ಇನ್ನೊಂದೆಡೆ, ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಇನ್ನೂ ತನ್ನ ರಾಷ್ಟ್ರೀಯ ನಾಯಕತ್ವವನ್ನು ವ್ಯಾಪಕವಾಗಿ ಟ್ಯಾಪ್ ಮಾಡಿದಂತೆ ಕಾಣುತ್ತಿಲ್ಲ. ಯಶಸ್ವಿ ಭಾರತ್ ಜೋಡೋ ಯಾತ್ರೆಯ ಹೊರತಾಗಿಯೂ, ರಾಹುಲ್ ಗಾಂಧಿ, ಒಂದೆರಡು ಪತ್ರಿಕಾ ಗೋಷ್ಠಿಗಳನ್ನು ಮಾಡಿದ್ದನ್ನು ಹೊರತಾಗಿ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿಲ್ಲ, ಚುನಾವಣೆಯ ಬಗ್ಗೆಯೂ ಮಾತನಾಡಿಲ್ಲ. ಪ್ರಿಯಾಂಕ ಗಾಂಧಿ ಬಂದು ಕಾಂಗ್ರೆಸ್ ನ ಈ ಬಾರಿಯ ಗ್ಯಾರಂಟಿಗಳಲ್ಲಿ ಒಂದಾದ ʼಗೃಹಲಕ್ಷ್ಮಿʼಯನ್ನು ಘೋಷಿಸಿಇ ಹೋಗಿದ್ದು ಬಿಟ್ಟರೇ, ರಾಷ್ಟ್ರ ನಾಯಕರ ಸಾರ್ವಜನಿಕ ಸಭೆ ಕಾಂಗ್ರೆಸ್ ನಿಂದ ಆಗಿಲ್ಲ. ಈಗ ರಾಹುಲ್ ಗಾಂಧಿ, ಖರ್ಗೆ ಅಲ್ಲೋ ಇಲ್ಲೋ ಎಲ್ಲೋ ಎಂಬಂತೆ ನಿಧಾನಕ್ಕೆ ರಾಜ್ಯಕ್ಕೆ ಚುನಾವಣಾ ಉದ್ದೇಶದಿಂದ ಕಾಲಿಟ್ಟಿದ್ದು, ಯಾವ ರೀತಿಯಲ್ಲಿ ಇವರು ರಾಜ್ಯದ ಜನರನ್ನು ಪ್ರಭಾವಿಸಲಿದ್ದಾರೆ ನೋಡಬೇಕು. ಮತ್ತೊಂದೆಡೆ ಜೆಡಿಎಸ್ ಎಂದಿನಂತೆ ತನ್ನ ಬಲ ಇರುವ ಕಡೆಯಲ್ಲಿ ಮಾತ್ರ ಚುನಾವಣಾ ಪ್ರಚಾರದ ಬಿರುಸಿನಲ್ಲಿದೆ. ಹೈಕಮಾಂಡ್ ಕೂಡ ಜೆಡಿಎಸ್ ಗೆ ಇಲ್ಲೇ ಇದೆ. ಹಿರಿಗೌಡರು ದೈಹಿಕವಾಗಿ ಸುಸ್ತಾಗಿದ್ದಾರೆ. ಕಿರಿಗೌಡ್ರು ದಂಪತಿಗಳು, ಮಗ ನಿಖಿಲ್ ಅಲ್ಲಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಾಗಿ ಒಕ್ಕಲಿಗ ಮತ ಕ್ಷೇತ್ರಗಳನ್ನು ಕೇಂದ್ರವಾಗಿಟ್ಟು ಕಾರ್ಯ ನಿರ್ವಹಿಸುತ್ತಿದೆ. ಇನ್ನು, ಜೆಡಿಎಸ್ ನಲ್ಲಿ ಈ ಬಾರಿ ಒಂದಿಷ್ಟು ಆಂತರಿಕ ಒಡಕುಗಳು ಕಾಣಿಸಿಕೊಂಡಂತಿರುವುದು ರಾಜಕೀಯದ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು, ಬಿಜೆಪಿ ಮೇಲೆ ಮತದಾರರ ಒಲವು ಕಡಿಮೆಯಾಗಿದೆ. ರಾಜ್ಯ ಬಿಜೆಪಿಯ ಕೆಲವು ನಾಯಕರ ಹರಕು ಬಾಯಿ, ಗಲಾಟೆ ಎಬ್ಬಿಸುವ ರಾಜಕಾರಣ, ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ರಾಜ್ಯ ಬಿಜೆಪಿಯ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಬೇಸರವಿದ್ದರೂ ತೋರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ರಾಜ್ಯದ ಕೆಲವು ನಾಯಕರ ಅಸಮಾಧಾನ, ಅಲ್ಲಲ್ಲಿ ರಾಜೀನಾಮೆ ಎಲ್ಲವೂ ಬಿಜೆಪಿಗೆ ಒಳಗೊಳಗೆ ಹತಾಶೆ ಮೂಡಿಸಿದೆ. ಇನ್ನು, ರಾಜ್ಯದಲ್ಲಿ ಬಿಜೆಪಿ ಎಂದಿಗೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಥವಾ ಬೇರೆ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದೆ. ಈ ಪ್ರವೃತ್ತಿಯನ್ನು ಮುರಿಯಬೇಕಾದರೆ ಒಕ್ಕಲಿಗ ಮತ ಕ್ಷೇತ್ರಗಳಲ್ಲಿ ಬಿಜೆಪಿ ಗಟ್ಟಿಯಾಗಿ ಹೆಜ್ಜೆ ಊರಬೇಕಿದೆ. ಒಕ್ಕಲಿಗ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಸೆಳೆಯುವ ಮೂಲಕ ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆಯಾದರೂ. ಎಸ್ ಎಂ ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದಲ್ಲಿ ಬಿಜೆಪಿಗೆ ಹಿತ ಕಾಣುತ್ತಿಲ್ಲ. ಇತ್ತೀಚೆಗೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಸೂಚಿಸಿದರಾದರೂ ಮಂಡ್ಯದಲ್ಲಿ ಬಿಜೆಪಿಗೆ ಧೈರ್ಯ ಮೂಡಿದಂತೆ ಕಾಣಿಸುತ್ತಿಲ್ಲ. ಮಂಡ್ಯದ ಜವಾಬ್ದಾರಿ ಹೊರುವುದಕ್ಕೆ ಯಾವ ರಾಜ್ಯ ಬಿಜೆಪಿ ನಾಯಕರು ಮನಸ್ಸು ಮಾಡುತ್ತಿಲ್ಲ ಎನ್ನುವುದು ಮತ್ತೊಂದು ತಲೆಬಿಸಿ.
ಪದೇ ಪದೇ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮೋದಿ, ಶಾ ಪ್ರತಿ ಕ್ಷೇತ್ರದಲ್ಲಿಯೂ ಹೊಸ ಮುಖಗಳನ್ನು ಗುರುತಿಸುವತ್ತ ಚಿತ್ತ ಹರಿಸಿದಂತೆ ಕಾಣುತ್ತಿದೆ. ಗುಜರಾತ್ ಚುನಾವಣೆಗಾಗಿ ಹೆಣೆದ ತಂತ್ರವನ್ನು ಇಲ್ಲಿ ಬಿಜೆಪಿ ಪ್ರಯೋಗಿಸಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ. ರಾಜ್ಯದಲ್ಲಿ ಹೊಸ ಮುಖಗಳನ್ನು, ಕೆಲಸ ಮಾಡುವ, ಹೊಸ ಚಾರ್ಮ್ ಇರುವ ನಾಯಕರನ್ನು ಗುರುತಿಸಿ ರಾಜ್ಯ ನಾಯಕರ ಅಡಿಯಲ್ಲಿ ತಂದು ಮುಂದಿನ ಚುನಾವಣೆಗೆ ಬಳಸಿಕೊಳ್ಳಬಹುದೆಂಬ ಉದ್ದೇಶ ಮೋದಿ, ಶಾ ಅವರದ್ದು ಎಂಬ ಚರ್ಚೆ ರಾಜಕೀಯದಲ್ಲಿ ನಡೆಯುತ್ತಿದೆ. ಗುಜರಾತ್ ಗೂ ಕರ್ನಾಟಕ ರಾಜಕೀಯಕ್ಕೂ ಹಲವು ವ್ಯತ್ಯಾಸಗಳಿವೆ. ಇಂದಿಗಲ್ಲದಿದ್ದರೂ ಮುಂದೆ ಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಸಣ್ಣದೊಂದು ದೃಷ್ಟಿ ಹಾಯಿಸಿದಂತಿದೆ. ರಾಜ್ಯದಲ್ಲಿ ಮೋದಿ, ಶಾ ಹೆಣೆಯುತ್ತಿರುವ ಈ ತಂತ್ರವು ಹೊಸದೇನಲ್ಲ. ಇಂದಿರಾಗಾಂಧಿಯವರು ಅಧಿಕಾರದ ಉತ್ತುಂಗದಲ್ಲಿದ್ದಾಗ ಯಾರನ್ನು ಬೇಕಾದರೂ ಕಣಕ್ಕಿಳಿಸಿ ಅವರನ್ನು ಗೆಲ್ಲಿಸಬಹುದಾಗಿತ್ತು ಎಂಬ ರಾಜಕೀಯ ವಾತಾವರಣ ಇದ್ದಾಗ ಈ ತಂತ್ರವನ್ನು ಮೊದಲು ಕಾಂಗ್ರೆಸ್ ಕಾರ್ಯರೂಪಕ್ಕೆ ತಂದು ಪ್ರಯೋಗಿಸಿ ಯಶಸ್ಸು ಕಂಡಿತ್ತು. ಆದರೇ, ರಾಜೀವ್ ಗಾಂಧಿ ರಾಜ್ಯ ನಾಯಕತ್ವವನ್ನು ಬೈಪಾಸ್ ಮಾಡದೆ, ಅವಮಾನಿಸುವ ಮೂಲಕ ಈ ಪ್ರಕ್ರಿಯಗೆ ಒಂದು ಹಂತದಲ್ಲಿ ಉಲ್ಟಾ ನಡೆದುಕೊಂಡರು. ಲಿಂಗಾಯತ ನಾಯಕ ವೀರೇಂದ್ರ ಪಾಟೀಲ್ ಅವರಿಗೆ ರಾಜೀವ್ ಗಾಂಧಿ ಮಾಡಿದ್ದರೆನ್ನಲಾದ ಅವಮಾನದಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಕಾಂಗ್ರೆಸ್ ಸ್ಥಳೀಯವಾಗಿ ನಾಯಕರನ್ನು ಅಷ್ಟಾಗಿ ಬೆಳೆಸಲೇ ಇಲ್ಲ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು. ಈಗ ಕಾಂಗ್ರೆಸ್ ಈ ಹಿಂದೆ ಎಲ್ಲಿ ಎಡವಿತ್ತೋ ಅಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ ಮತ್ತು ಸ್ಥಳೀಯ ನಾಯಕರನ್ನು ಗುರುತಿಸಿ ಯಶಸ್ವಿಯಾಗುತ್ತಿದೆ.
ರಾಜ್ಯದ ಜನತೆ ಎಂದೂ ಒಂದೇ ಪಕ್ಷವನ್ನು ಮತ್ತೆ ಮತ್ತೆ ಅಧಿಕಾರಕ್ಕಾಗಿ ಆರಿಸಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಅತಂತ್ರವೇ ಹೆಚ್ಚು. ಇನ್ನು, ಬಿಜೆಪಿ ಇದುವರೆಗೆ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿಲ್ಲ. ಬಿಜೆಪಿ ಅಧಿಕಾರ ಮಾಡಿದ್ದಿದ್ದರೇ ಅದು ಆಪರೇಷನ್ ಕಮಲದ ಪರಿಣಾಮದಿಂದಾಗಿ, ಇಲ್ಲವೇ ಮೈತ್ರಿಯಿಂದಾಗಿ. ಸದ್ಯ ಕೇಂದ್ರದಲ್ಲಿಯೂ ಬಿಜೆಪಿ, ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇ ಬೇಕು ಎಂಬ ಪಣ ತೊಟ್ಟಿದೆ ಬಿಜೆಪಿ. ಇತ್ತ ಕಾಂಗ್ರೆಸ್ ಹೈಕಮಾಂಡ್ ಗೆ ಹೊಸ ನೇತೃತ್ವ ಸಿಕ್ಕಿದೆ. ಎಐಸಿಸಿ ಅಧ್ಯಕ್ಷತೆ ಕರ್ನಾಟದ ಮಲ್ಲಿಕಾರ್ಜುನ ಖರ್ಗೆ ಅವರ ಕೈಯಲ್ಲಿದ್ದು, ಖರ್ಗೆ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ಹೇಗಾದರೂ ಮಾಡಿ ತರಲೇ ಬೇಕು ಎಂಬ ಒತ್ತಡವೂ ಕೂಡ ಇದೆ. ಹಾಗಾಗಿಯೇ ಸೀಟ್ ಹಂಚಿಕೆಯಲ್ಲಿ ಖರ್ಗೆ ಅಳೆದು ತೂಗಿದ್ದಾರೆ. ರಾಜ್ಯದಲ್ಲಿ ಇಂದಿಗೂ ಇರುವ ಮೋದಿ ಹವಾದ ಎದುರು ಖರ್ಗೆ ಯಾವ ರೀತಿಯ ರಣತಂತ್ರಕ್ಕೆ ರಾಜ್ಯ ನಾಯಕರಿಗೆ ನಿರ್ದೇಶಿಸಿದ್ದಾರೆ/ನಿರ್ದೇಶಿಸಲಿದ್ದಾರೆ ಎನ್ನುವುದು ಕುತೂಹಲ. ಇನ್ನೇನು ಕೆಲ ದಿನಗಳಲ್ಲಿ ಬರಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಗೆದ್ದರೇ, ನಿಸ್ಸಂಶಯವಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಜೈಕಾರ ಸಮರ್ಪತಗೊಳ್ಳುತ್ತದೆ. ಸೋತರೇ, ಅದರ ಸಂಪೂರ್ಣ ಹೊಣೆಗಾರಿಕೆ ಮಲ್ಲಿಕಾರ್ಜುನ್ ಖರ್ಗೆ ತಲೆಗೆ ಕಟ್ಟುವುದರಲ್ಲಿ ಅನುಮಾನವೇ ಇಲ್ಲ. ಇದು ಸ್ವತಃ ಖರ್ಗೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಆ ಅಸಹಾಯಕತೆಗೆ ಖರ್ಗೆ ಮುಖಾಮುಖಿಯಾಗಲೇ ಬೇಕಿದೆ. ಇತ್ತ ಜೆಡಿಎಸ್ ಅಂತೂ ಸ್ವಂತವಾಗಿ ಅಧಿಕಾರಕ್ಕೆ ಬರುವುದಕ್ಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ. ಅತಂತ್ರವಾದರೇ, ಮತ್ತೆ ಕುಮಾರಸ್ವಾಮಿಯವರಿಗೆ ಮತ್ತೊಂದು ಅವಕಾಶ ಸಿಗಬಹುದು ಹೊರತು ಮತ್ತೇನೂ ಜೆಡಿಎಸ್ ನಿಂದ ಆಗುವುದಕ್ಕೆ ಸಾಧ್ಯವಿಲ್ಲ. ಆದರೇ, ಜೆಡಿಎಸ್ ಪ್ರಾಬಲ್ಯವಿರುವ ಕಡೆ ಒಂದೆರಡು ಸೀಟ್ ಜಾಸ್ತಿ ಬರಬಹುದೇನೋ ಅಷ್ಟೇ. ಇದನ್ನೂ ಮೀರಿ ಆಶ್ಚರ್ಯಕರ ಬೆಳವಣಿಗೆ ಈ ಚುನಾವಣೆಯಲ್ಲಿ ಜೆಡಿಎಸ್ ನಿಂದ ಆಗುತ್ತದೆ ಎನ್ನುವುದು ದೂರದ ಮಾತು.
ಇನ್ನು, ಬಿಜೆಪಿ ಕಳೆದ ವಿಧಾನ ಸಭಾ ಚುನಾವಣೆಯನ್ನು ಸಿದ್ದರಾಮಯ್ಯ ವರ್ಸಸ್ ಮೋದಿ ಎಂಬಂತೆ ಬಿಂಬಿಸಿ ಕಣಕ್ಕಿಳಿದಿತ್ತು. ಈ ಬಾರಿಯ ಚುನಾವಣೆಯನ್ನು ಮೋದಿ ವರ್ಸಸ್ ರಾಹುಲ್ ಗಾಂಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿದೆ. ಇತ್ತ ಕಾಂಗ್ರೆಸ್ ಪದೇ ಪದೇ ಮೋದಿ, ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕಾರಣದಿಂದಾಗಿ ಈ ಬಾರಿಯ ಚುನಾವಣೆಯನ್ನು ಲೋಕಲ್ ವರ್ಸಸ್ ನ್ಯಾಷನಲ್ ಎಲೆಕ್ಷನ್ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ. ಈ ಎರಡೂ ಬದಿಗಳ ರಾಜಕೀಯ ತಂತ್ರಗಾರಿಕೆಗಳ ನಡುವೆ ಪ್ರಸ್ತುತ ಚುನಾವಣಾ ಕಣದಲ್ಲಿ ಯಾವ ನಿರೂಪಣೆ ಗೆಲ್ಲುತ್ತದೆ ಎನ್ನುವುದು ಕಾದು ನೋಡಬೇಕಿದೆ.
-ಶ್ರೀರಾಜ್ ವಕ್ವಾಡಿ





.jpeg)

