Sunday, February 5, 2023

ರಾಜಕೀಯ ಸೈದ್ಧಾಂತಿಕ ಬಜೆಟ್ - 2023

ಸಾಮಾನ್ಯ ವರ್ಗದವರ ಕೊರಗನ್ನು ಸರ್ಕಾರದ ಅಂಕಿಅಂಶಗಳು ಹೇಳಿದ್ದುಂಟೆ..?

ಕೇಂದ್ರ ಸರ್ಕಾರ ಅತ್ಯಂತ ಜಾಣತನ ಈ ಬಜೆಟ್ ನಲ್ಲಿ ತೋರಿಸಿದೆ. ಅದು ಕೇಂದ್ರ ಸರ್ಕಾರಕ್ಕೆ ಈ ಚುನಾವಣೆಯ ಹೊಸ್ತಿನಲ್ಲಿ ತುರ್ತು ಕೂಡ ಇದ್ದಿತ್ತು. ಇದೊಂದು ಅಪ್ಪಟ ರಾಜಕೀಯ ಸೈದ್ಧಾಂತಿಕ ಬಜೆಟ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮುಂದಿನ ಚುನಾವಣಾ ನೀತಿಗೆ ಅನುಗುಣವಾಗಿ ಬಜೆಟ್ ಮಂಡಿಸಿದೆ. ನಿರೀಕ್ಷೆಯಂತೆ ಈ ಬಾರಿಯ ಬಜೆಟ್ ನಲ್ಲಿಯೂ ಕೇಂದ್ರ ಸರ್ಕಾರ ಕಾರ್ಪೋರೇಟಿಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಆರ್ಥಿಕ ಪ್ರಜ್ಞೆಯಿಲ್ಲದಂತೆ ಬಜೆಟ್ ಮಂಡಿಸಿದ ಸರ್ಕಾರ ಸಾಮಾನ್ಯ ಜನರಿಗೆ ಕೊನೆಗೂ ಏನನ್ನೂ ಕೊಡುವುದಿಲ್ಲ ಎನ್ನುವುದನ್ನು ಮತ್ತೆ ಸಾಬೀತು ಮಾಡಿದೆ. 

ಉದ್ಯೋಗ ಸೃಷ್ಟಿ ವಿಚಾರದಲ್ಲಿ ತನ್ನ ಹಳೆಯ ಧೋರಣೆಯನ್ನೇ ಬಿಜೆಪಿ ಈ ಬಾರಿಯೂ ತೋರಿಸಿದೆ. ಇಂದು ನಾವು ಎದುರಿಸುತ್ತಿರುವ ದೊಡ್ಡ ಆರ್ಥಿಕ ಸವಾಲೆಂದರೇ, ಕುಂಠಿತ ಆರ್ಥಿಕ ಅಭಿವೃದ್ಧಿ, ಹಣದುಬ್ಬರ, ನಿರುದ್ಯೋಗ, ಸಾಲದ ಹೊರೆ. ಆದರೇ, ಕೇಂದ್ರದ ಬಜೆಟ್ ಇವುಗಳಲ್ಲಿ ಯಾವುದಕ್ಕೂ ಗಮನ ನೀಡಿಲ್ಲ. ಸಾಮಾನ್ಯ ಜನರ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುವುದನ್ನು ಸರ್ಕಾರ ನೀಡುವ ಸೋ ಕಾಲ್ಡ್ ಅಂಕಿಅಂಶಗಳು ಹೇಳುವುದಿಲ್ಲ. ಎಲ್ಲಿಯವರೆಗೆಂದರೇ, ದೇಶದ ಸಾಮನ್ಯ ಜನರನ್ನು ಕೆಲವು ವರ್ಷಗಳಿಂದ ಹಿಂಡಿ ಹಿಪ್ಪೆ ಹಾಕುತ್ತಿರುವ ʼಹಣದುಬ್ಬರʼ ಹಾಗೂ ʼಬೆಲೆ ಏರಿಕೆʼ ಎಂಬ ಪದಗಳನ್ನು ಬಜೆಟ್ ನಲ್ಲಿ ವಿತ್ತ ಸಚಿವೆ ಒಮ್ಮೆಯೂ ಉಲ್ಲೇಖಿಸಿಲ್ಲ. 

ಜಿಡಿಪಿಯ ಶೇಕಡಾ ೫.೯ರಷ್ಟು ವಿತ್ತೀಯ ಕೊರತೆ ಇರುವ ಬಜೆಟ್ ಮಂಡಿಸುವಾಗ ೨೦೦೩ರ ಹಣಕಾಸಿನ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣಾ ಕಾಯ್ದೆಯಿಂದ ಕಡ್ಡಾಯಗೊಳಿಸಿದ ಶೇಕಡಾ ೩ರ ಮಿತಿಯನ್ನು ಸರ್ಕಾರ ಉಲ್ಲಂಘಿಸಿ, ಮತ್ತೆ ಸಾಲ ಮಾಡಿ ಈ ದೇಶದ ಮೇಲೆ ಹೊರೆ ಹೇರುವಂತಷ್ಟೇ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ.

ಕ್ಯಾಪಿಟಲ್ ಎಕ್ಸಪೆಂಡಿಚರ್ ಜಿಡಿಪಿಯ ಶೇಕಡಾ ೩.೩ರಷ್ಟು, ಅಂದರೇ, ಶೆಕಡಾ ೩೭ರಷ್ಟು ಹೆಚ್ಚು, ಸುಮಾರು ೧೦ ಲಕ್ಷ ಕೋಟಿಯಷ್ಟು. ಈ ಹೂಡಿಕೆಯ ಬಹುಪಾಲು ರೈಲ್ವೇಗೆ ಹೋಗುತ್ತದೆ ( ೨.೪೦ ಲಕ್ಷ ಕೋಟಿ ಬಂಡವಾಳದ ಬೆಂಬಲವನ್ನು ಪಡೆಯುತ್ತದೆ), ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು (೧.೬೨ ಲಕ್ಷ ಕೋಟಿ), ಫ್ರಧಾನ ಮಂತ್ರಿ ಆವಾಸ್ ಯೋಜನೆ (೭೯,೦೦೦ ಕೋಟಿ)ಗೆ ಸಲ್ಲುತ್ತವೆ. ಅಂದರೇ, ಕೇಂದ್ರ ಬಜೆಟ್ ನಲ್ಲಿ ಬಂಡವಾಳ ಹೂಡಿಕೆಗೆ ಇಪ್ಪತ್ತು ವರ್ಷಗಳಲ್ಲೇ ಇದೇ ಪ್ರಥಮ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಕೊಟ್ಟಿದೆ. ಇದು ಕಾರ್ಪೋರೇಟ್ ಸ್ನೇಹಿ ಅಲ್ಲದೇ ಮತ್ತೇನು..? ಈ ರೀತಿಯಲ್ಲಿ ಖಾಸಗಿಯರನ್ನು ಕರೆದು ಕೊಡುವುದಕ್ಕೆ ತಯಾರಾಗಿರುವ ರೈಲ್ವೇ, ಹೆದ್ದಾರಿ, ಕೃಷಿ, ಲಾಜೆಸ್ಟಿಕ್ ಗಳೀಘೇ ಸರ್ಕಾರ ಯಾಕೆ ಹೂಡಿಕೆ ಮಾಡಬೇಕು..? ಇದೇ ಸರ್ಕಾರ ಅಲ್ಲವೇ, ವ್ಯವಹಾರದ ನಿರ್ವಹಣೆ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಹೇಳಿದ್ದು..? 

ಇನ್ನು, ಈ ಹಣಕಾಸು ವರ್ಷದಲ್ಲಿ ಘೋಷಿಸಲಾದ ವೈಯಕ್ತಿಕ ತೆರಿಗೆ ದರ ಪರಿಷ್ಕರಣೆಗಳ (ಹೊಸ ತೆರಿಗೆ ಪದ್ಧತಿಯ ಪ್ರಕಾರ)  ಪರಿಣಾಮ ಹೇಗಿರಲಿದೆ ಎನ್ನುವುದು ಕುತೂಹಲವಾಗಿದೆ. ಮತ್ತು ಉದ್ಯೋಗ ಸೃಷ್ಟಿಯ ಬಿಕ್ಕಟ್ಟಿನ ಬಗ್ಗೆ ಅಸಡ್ಡೆ ಧೋರಣೆ ತೋರಿಸಿದ್ದು ಪ್ರಮುಖವಾಗಿ ಕಂಡು ಬಂದಿದೆ. 

ಹೊಸ ತೆರಿಗೆ ಪದ್ಧತಿಯಲ್ಲಿ ಮಾಡಿದ ಪರಿಷ್ಕರಣೆಗಳ ಆಧಾರದಲ್ಲಿ ಮಧ್ಯಮ ವರ್ಗಕ್ಕೆ ಇದು ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ. ಉದಾಹರಣೆಗೆ ವರ್ಷಕ್ಕೆ ೯,೦೦,೦೦೦ ರೂ. ತನಕ ದುಡಿಯುವವರಿಗೆ ತೆರಿಗೆ ಹೊರೆ ಇಳಿಕೆ ಮಾಡಲಾಗಿದೆ. ಈ ಹಿಂದಿನ ತೆರಿಗೆ ಸ್ಲ್ಯಾಬ್ ಗೆ ಹೋಲಿಸಿದರೇ, ಹೊಸ ತೆರಿಗೆ ಸ್ಲ್ಯಾಬ್ ನಲ್ಲಿ ೧೫,೦೦೦ ರೂ. ವರೆಗೆ ಉಳಿತಾಯ ಮಾಡಬಹುದಾಗಿದೆ. ವರ್ಷಕ್ಕೆ ಏಳು ಲಕ್ಷದವರೆಗೆ ದುಡಿಯುವವರಿಗೆ ತೆರಿಗೆ ವಿನಾಯತಿ ಮಾಡಲಾಗಿದೆ. ಈ ಹೊಸ ಕ್ರಮಗಳು ಎರಡು ಕಾರಣಗಳಿಗಾಗಿ ಅತ್ಯಂತ ಅಗತ್ಯವಾಗಿತ್ತು. ಹಣದುಬ್ಬರ (ಆಹಾರ, ದಿನ ಬಳಕೆಯ ವಸ್ತುಗಳು, ಇಂಧನಗಳ ಮೇಲೆ ಅವ್ಯಾಹತವಾಗಿ ಹೆಚ್ಚಾದ ಖರ್ಚು  ವೆಚ್ಚ) ಹಾಗೂ ಮಧ್ಯಮ ವರ್ಗದಲ್ಲಿ ಕೋವಿಡ್ ನಂತರದಲ್ಲಿ ಸೃಷ್ಟಿಯಾದ ಕಡಿಮೆ ಆದಾಯ.  ಕಡಿಮೆ ಗಳಿಕೆಯ ಮೇಲೆ ಹೆಚ್ಚಿನ ತೆರಿಗೆ ದರವನ್ನು ಪಾವತಿಸುವ ಸ್ಲ್ಯಾಬ್ ಬಗ್ಗೆ ಅಸಮಾಧನದಲ್ಲಿದ್ದ ಮಧ್ಯಮ ವರ್ಗವನ್ನು ಸಮಾಧಾನ ಪಡಿಸುವ ತಂತ್ರವೂ ಈ ವಿಷಯದಲ್ಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ತೆರಿಗೆ ವಿನಾಯತಿ ಎಲ್ಲವೂ ಕೂಡ ಒಂದು ಥರದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಮಾಡಲಾದ ಯೋಜನೆ ಎಂಬಂತೆ ಕಾಣಿಸುತ್ತಿರುವುದು ಅಷ್ಟೇ ಅಲ್ಲದೇ, ಕಾರ್ಪೋರೇಟ್ ಸ್ನೇಹಿ ಅಂತೆ ಕಾಣಿಸುತ್ತಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಇನ್ನು, ಕೋವಿಡ್ ಸೋಂಕಿನ ಹೊಡೆತ ಭಾಗಶಃ ಅಂತ್ಯಗೊಂಡ ಮೇಲೆ ಕೇಂದ್ರ ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆ ಇಲಾಖೆ ೬.೫ ಕೋಟಿ ರಿಟರ್ನ್ಸ್ ಸಂಸ್ಕರಿಸಿದೆ ಎಂದು ಉಲ್ಲೇಖಿಸಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ರಾಜ್ಯ ಸಭೆಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ೨೦೧೯-೨೦ ನೇ ಸಾಲಿನಲ್ಲಿ ೮.೨೨ಕೋಟಿ ಭಾರತೀಯರು ಆದಾಯ ತೆರಿಗೆ ಪಾವತಿದಾರರು ಎಂದು ಹೇಳಿದ್ದರು. ಅಂದು ಸಚಿವರು ಹೇಳಿರುವುದಕ್ಕೂ ಹಾಗೂ ಬಜೆಟ್ ನಲ್ಲಿ ಹೇಳಿರುವುದನ್ನು ಗಮನಿಸುವುದಾದರೇ, ಕೇವಲ ಎರಡು ವರ್ಷಗಳ ಅಂತರದಲ್ಲಿ ಸುಮಾರು ಎರಡು ಕೋಟಿಯಷ್ಟು  ಮಧ್ಯಮ ವರ್ಗದವರು ಬಡತನ ರೇಖೆಗೆ ಇಳಿದಿದ್ದಾರೆ ಎನ್ನುವುದನ್ನು ಸ್ವತಃ ಸರ್ಕಾರವೇ ದೇಶದ ಮುಂದೆ ಶರಣಾಗಿ ಒಪ್ಪಿಕೊಂಡಂತಾಯಿತು.  

ಉದ್ಯೋಗ ಸೃಷ್ಟಿ, ಭದ್ರತೆಯ ಬಗ್ಗೆ ನಿರ್ಲಕ್ಷಿಸಿದ ಬಜೆಟ್ :  ಸಾಮಾಜಿಕ ವಲಯದ ಅನೇಕ ಖರ್ಚು ವೆಚ್ಚಗಳನ್ನು ಹೊರತುಪಡಿಸಿ, ಕೇಂದ್ರದ ಈ  ಬಜೆಟ್ ಈ ಸಾರ್ವಜನಿಕ ವಲಯವನ್ನು ತೀವ್ರವಾಗಿ ನಿರಾಶೆಗೊಳಿಸಿದೆ. ದೇಶದಾದ್ಯಂತ ಆವರಿಸಿರುವ ನಿರುದ್ಯೋಗದ ಬಿಕ್ಕಟ್ಟಿನ ಬಗ್ಗೆ ಸ್ವಲ್ಪವೂ ಕಣ್ಣೆತ್ತಿ ನೋಡುವ ಪ್ರಯತ್ನವನ್ನು ಈ ಬಜೆಟ್ ಮಾಡಿಲ್ಲ. ಕಳೆದ ನಾಲ್ಕೈದು ಬಜೆಟ್ ನಲ್ಲಿ ಮಾಡಿದಂತೆಯೇ ಭಾರತದಾದ್ಯಂತ ಮುಗಿಯದ ಸಮಸ್ಯೆಯಂತೆ ಭಾದಿಸುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಈ ಬಾರಿಯೂ ಸಂಪೂರ್ಣ ವಿಫಲರಾದರು. ಅಂತರಾಷ್ಟ್ರೀಯ ಪ್ರಭಾವಕ್ಕಾಗಿ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವುದರ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು ಹೊರತಾಗಿ ಮತ್ತೇನಿಲ್ಲ. ನರೇಗಾ ಉದ್ಯೋಘ ಖಾತ್ರಿ ಯೋಜನೆಗೆ ಮೀಸಲಿಟ್ಟ ಅಥವಾ ಘೋಷಿಸಿದ ೬೦,೦೦೦ ಕೋಟಿಯನ್ನು ಹಿಂದಿನ ಬಜೆಟ್ ಗಳಿಗೆ ಹೋಲಿಸಿದರೇ ಈ ವರ್ಷ ಕಡಿಮೆಯಾಗಿದೆ. ಇದು ದೇಶದಲ್ಲಿ ಉದ್ಯೋಗವಕಾಶವನ್ನು ಸೃಷ್ಟಿಸುವಲ್ಲಿ ಮೋದಿ ಸರ್ಕಾರ ತೋರಿದ ಅಸಡ್ಡೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಡಿಸೆಂಬರ್ ನಲ್ಲಿ ಮುಂಬೈ ಮೂಲದ ಸಂಸ್ಥೆ ನೀಡಿದ ವರದಿಯ ಪ್ರಕಾರ, ನಗರ ನಿರುದ್ಯೋಗ ಪ್ರಮಾಣ ಶೇಕಡಾ ೮.೯ಕ್ಕೆ ಹೆಚ್ಚಳವಾಗಿತ್ತು. ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇಕಡಾ. ೭.೫೫ಕ್ಕೆ ತಲುಪಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಕೃಷಿ ಖಾಸಗೀಕರಣದತ್ತ ಪ್ಲ್ಯಾನ್ : ಆಹಾರ ಸಬ್ಸಿಡಿಯನ್ನು ೯೦,೦೦೦ ಕೋಟಿಗೆ ಕಡಿತಗೊಳಿಸಲಾಗಿದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ ಹೇಳುವ ಪ್ರಕಾರ ಭಾರತ ೧೨೧ ದೇಶಗಳ ಫೈಕಿ ೧೦೭ನೇ ಸ್ಥಾನದಲ್ಲಿದೆ. ದೇಶದ ಬಹುಪಾಲು ಜನರಿಗೆ ಪೌಷ್ಟಿಕ ಆಹಾರ ದೊರಕುತ್ತಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಪಿಎಂ ಫೋಷಣ್ ವೆಚ್ಚವನ್ನೂ ಕೂಡ ಕಡಿತಗೊಳಿಸಲಾಗಿದೆ. ಆಹಾರ ಸಬ್ಸಿಡಿಯ ಮೇಲಿನ ಕಡಿತವು ಇದು ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೇಂದ್ರದ ಬಜೆಟ್ ರೈತರನ್ನು ಚಿಂತೆಗೀಡು ಮಾಡಿದೆ. ರಸಗೊಬ್ಬರದ  ಮೇಲಿನ ಸಬ್ಸಿಡಿಯನ್ನೂ ಕೂಡ ಕಡಿತಗೊಳಿಸಲಾಗಿದೆ. 

ಕೃಷಿ ಕಾರ್ಪೋರೇಟಿಕರಣದತ್ತ ಸರ್ಕಾರ ಹಾದಿ ಸುಲಭ ಮಾಡಿಕೊಟ್ಟಂತೆ ಕಾಣುತ್ತದೆ. ಪಶುಸಂಗೋಪನೆ, ಕೃಷಿ, ಡೈರಿ, ಮೀನುಗಾರಿಕೆಗಳಿಗೆ ಸುಮಾರು ೨೦ ಲಕ್ಷ ಕೋಟಿ ರೂ.ಗಳಷ್ಟು ಸಾಲ ಸೌಲಭ್ಯ. ಸಹಕಾರಿ ಇಲಾಖೆಗಳ ಸಹಕಾರದಿಂದ ದಾಸ್ತಾನು ಮಾರಾಟ ಸವಲತ್ತು, ಕೃಷಿ ತಂತ್ರಜ್ಞಾನಗಳಿಗೆ ಬೆಂಬಲ ಇತ್ಯಾದಿಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೇಟಿಕರಣದತ್ತ ಕೊಂಡೊಯ್ಯುವ ಯೋಜನೆ ಎಂದು ಕಾಣಿಸುತ್ತದೆ. 

ರಾಷ್ಟ್ರೀಯ ಯೋಜನೆಯಾಗಿ ಬದಲಾದ ಭದ್ರ ಮೇಲ್ದಂಡೆ :  ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜ್ಯದಲ್ಲಿಯೇ ಮಹತ್ವ  ಪಡೆದಿರುವ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಬರೋಬ್ಬರಿ ೫,೩೦೦ ಕೋಟಿ ಮೀಸಲಿಟ್ಟು, ಚುನಾವಣಾ ಲೆಕ್ಕಾಚಾರ ಮಾಡಿದೆ ಎಂಬ ಚರ್ಚೆ ಹುಟ್ಟಿಕೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಮುಂದಿಟ್ಟುಕೊಂಡು ಮಧ್ಯ ಕರ್ನಾಟಕದ ಕ್ಷೇತ್ರಗಳನ್ನು ತನ್ನತ್ತ ಸೆಳೆದುಕೊಳ್ಳುವ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ಒಂದು ಸುತ್ತಿನ ಪ್ರವಾಸ ನಡೆಸಿದ್ದು, ಈ ಯೋಜನೆಯೊಂದಿಗೆ ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗಾ, ತುಮಕೂರು ಭಾಗಗಳಲ್ಲಿ ಕೊನೆಯ ಹಂತದ ಚುನಾವಣಾ ತಂತ್ರ ರೂಪಿಸುವುದು ಬಿಜೆಪಿಯ ಲೆಕ್ಕಾಚಾರ.

-ಶ್ರೀರಾಜ್ ವಕ್ವಾಡಿ  


No comments:

Post a Comment