Thursday, May 14, 2020

ನಡಿಗೆಯ ನಿಶ್ಯಬ್ದದ ಕೂಗು..!



ಎವೆಯಿಕ್ಕದೇ ಅದು ದಿಟ್ಟಿಸುತ್ತಿತ್ತು.

ನಾನೇನೂ ಪ್ರತಿಕ್ರಿಯಿಸಿಲ್ಲ. ಆಗ ರಾತ್ರಿಯ ಬಿಸಿಲಿನ ಝಳ ಹೆಚ್ಚಿತ್ತು. ಒಬ್ಬಾಕೆ ತಲೆಯ ಮೇಲೊಂದು ಬಿಳಿ ಚೀಲದ ದೊಡ್ಡದೊಂದು ಮೂಟೆ. ಕಂಕುಳಲ್ಲೊಂದು ಮಗು. ಮತ್ತಿಬ್ಬರು ಎಳೆಯ ಹುಡುಗಿಯರು ಆಕೆಯ ಜೊತೆಗೆ ಹೆಜ್ಜೆಯಿಡುತ್ತಿದ್ದಾರೆ. ಆ ಹೆಣ್ಮಕ್ಕಳಿಗೆ ಬಹುಶಃ ಹತ್ತು ಹನ್ನೆರಡು ವರ್ಷಗಳ ಆಸು ಪಾಸು ಇರಬೇಕು. ಈಕೆಗೊಂದು 38-4೦ ವರ್ಷಗಳಿರಬೇಕು.

ದೂರ ಹೊರಟಿದ್ದೀರಿ..?

ಊರಿಗೆ. ಆ ಧ್ವನಿಯಲ್ಲಿ ಆಯಾಸವಿತ್ತು.

ಯಾವ ಊರಿಗೆ..?

‘ಎಲ್ಲಿಂದ ಇಲ್ಲಿಗೆ ಬಂದಿದ್ದೇನೋ ಅಲ್ಲಿಗೆ..!’ ಇಲ್ಲಿ, ಆಕೆಯ ಧ್ವನಿ ನಿಶ್ಯಬ್ದದ ಕೂಗಿನಂತಿದ್ದಿತ್ತು. ಹೌದು, ಆಕೆ ಎಲ್ಲೋ ಆಕೆಯ ಊರಿಗೆ ಹೊರಟಿದ್ದಾಳೆ. ಜೊತೆಗೆ ಮೂರು ಹೆಣ್ಮಕ್ಕಳು. ಗಂಡ ಇಲ್ಲ. ಮೂರು ಹೆಣ್ಣು ಮಕ್ಕಳನ್ನು ಕೊಟ್ಟು ಸತ್ತು ಹೋಗಿದ್ದಾನೆ.  ಮುಂದೆ ಹೊರಟು ಹೋದಳು.

ಕಾಲಂಶದ ದಾರಿ ಕೂಡ ಮುಗಿದಿರಲಿಲ್ಲ.

ಅಷ್ಟೊತ್ತಿಗಾಗಲೇ, ಆಕೆ ಬೆಂದು ಕರಗಿದ್ದಳು. ರಸ್ತೆ ಪಕ್ಕಗಳಲ್ಲಿ ಬಾಯ್ತೆರೆದು ಮಲಗಿದ್ದ ಚರಂಡಿಗಳೂ ಕೂಡ ಮಾತಾಡಲಿಲ್ಲ. ಗಿಡ ಮರಗಳು ತಂಪೆರೆಯಲಿಲ್ಲ. ಆಕೆಯ ಪಾಲಿಗೆ ನಿಜಕ್ಕೂ ಭಾರವಾದದ್ದೇನನ್ನೋ ಮೇಲಿಂದ ಯಾರೋ ಜಾರಿಸಿ ಬಿಟ್ಟಂಗಾಗಿತ್ತು.

ಒಡೆದ ಪಾದ, ಒಣ ಹೊಟ್ಟೆ. ಬೆವರಲ್ಲಿ ಮಿಂದ ಮೈ.

ಮುಂದೆ ಸಾಗುತ್ತಿದ್ದಾಳೆ.

ಏನೇನೂ ಇದ್ದಿರಲಿಲ್ಲ ಆಕೆಯಲ್ಲಿ. ಊರು ಸೇರಬೇಕೆಂಬುವುದೊಂದೇ, ಅವಳ ಎದೆಯಲ್ಲಿ ಅವಿತಿತ್ತು. ಹಾಗಾಗಿಯೇ, ಅವಳ ಪಾದಗಳು ಸುಟ್ಟು ಗಾಯವಾಗಿದ್ದರೂ, ಚುರುಕು ಹೆಜ್ಜೆಗಳನ್ನಿಡುತ್ತಿದ್ದವು.

ಆಕೆಯದ್ದೋ, ಗಾಳಿ ನುಂಗಿದ ಹೊಟ್ಟೆ. ಅವಳ ಬದುಕೋ, ಏನಿಲ್ಲದ ಶೂನ್ಯ. ಹಗಲು, ರಾತ್ರಿಗಳೆನ್ನದೆ ನಡೆದಿದ್ದಳು. ಊರಿನ್ನೂ ಬರಲಿಲ್ಲ. ಮಣ್ಣಾದ ಬದುಕು, ಉಳಿದಿದ್ದು ದೇಹವೊಂದೆ..! ‘ಪ್ಯಾರ್ ದೇಶ್ ವಾಸಿಯೋ’ ಅಂತಂದವರು ಮುಖ ತೋರಿಸಲಿಲ್ಲ. ಭ್ರಮೆ ಹುಟ್ಟಿಸಿ ಹೋದರು. ಆಕೆ ಇನ್ನೂ ದಾರಿಯಲ್ಲೇ ಇದ್ದಾಳೆ.

ಮೇಲೆ ಕಾಣುವ ಪದರವನ್ನೇ ‘ವಾಸ್ತವ’ ಅಂದುಕೊಂಡಿರುವವರಿಗೆ ಬದುಕೆಂದರೇ, ಹೇಗೆ ಗೊತ್ತಿರುವುದಕ್ಕೆ ಸಾಧ್ಯ..?

ಅದೆಷ್ಟೋ ಕ್ಲಿಷ್ಟ ಬದುಕು ಇನ್ನೂ ಕೂಡ ‘ಗೋಡೆ’ಯಾಚೆಗಿದೆ. ಜೊಡ್ಡು ಪಾಚಿ ಕೊಳಚೆಯಲ್ಲೇ ಬದುಕು ಕಟ್ಟಿಕೊಳ್ಳುತ್ತಿರುವವರು, ಸಿಮೆಂಟ್ ನುಂಗಿ ನಡೆದು ಸಾಗುತ್ತಿರುವ ಲಕ್ಷ ಲಕ್ಷ ಪಾದಗಳ ಬದುಕುಗಳು ಎಂದಿಗೂ ನಿಕೃಷ್ಟ.

ಮತ್ತದೇ, ನೋಟದಲ್ಲಿ ಉರಿ ಸೂಸುತ್ತಿದೆ.

ಬದುಕುವುದೆಂದರೇ, ನಡೆದು ನಡೆದು ಒಣಗಿ ಮಣ್ಣಾಗುವುದು.
-ಶ್ರೀರಾಜ್ ವಕ್ವಾಡಿ 


Wednesday, May 13, 2020

ತಿಂಗಳ 300 ರೂ ಗೌರವಧನವನ್ನೂ ಜನರಿಗಾಗಿ ಮೀಸಲಿಟ್ಟರು ‘ಗುಲಾಬಿ ಅಮ್ಮ’..!



ದೇಶದ ಅಥವಾ ರಾಜ್ಯ ತನ್ನ ರಾಜಧಾನಿ ಸ್ಥಳದಿಂದ ಇಡೀ ದೇಶವನ್ನೋ ಅಥವಾ ರಾಜ್ಯವನ್ನು ನಿಭಾಯಿಸುವುದಕ್ಕೆ ಸಾಧ್ಯವಿಲ್ಲ. ದೇಶದ ಹಳ್ಳಿ ಹಳ್ಳಿ ಪ್ರದೇಶಗಳಲ್ಲಿರುವ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಖಂಡಿತ ಸುಲಭವಿಲ್ಲ. ಅದು ಕಷ್ಟಸಾಧ್ಯ. ಹಾಗಾಗಿಯೇ, ಜಿಲ್ಲೆ, ತಾಲ್ಲೂಕು, ಪಟ್ಟಣ  ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ನಡೆಸಲು ಚುನಾಯಿತ ಸ್ವರಾಜ್ಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಅಂತೆಯೇ, ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್ ರಾಜ್ಯವೆಂಬ ಚುನಾಯಿತ ಸಂಸ್ಥೆ ಆಡಳಿತಕ್ಕೆ ಬಂದವು. ಪಂಚಾಯತ್ ವ್ಯವಸ್ಥೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು ಇಂದಿಗೆ ಇತಿಹಾಸ.

ಇಂತಹ ಗ್ರಾಮ ಪಂಚಾಯತ್ ಒಂದರಲ್ಲಿ ಸುಮಾರು ಇಪತ್ತು ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿದ್ದುಕೊಂಡು ಇಂದಿಗೂ ಜನಪ್ರೀತಿ ಹೊಂದಿರುವ ಒಬ್ಬ ಮಹಿಳೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮ್ಮೊಂದಿಗಿದ್ದಾರೆ ಎನ್ನುವುದು ಹೆಮ್ಮೆ.

ರಾಜಕೀಯ ಅಂದಮೇಲೆ, ಅಲ್ಲಿನ ವ್ಯವಸ್ಥೆಯಲ್ಲಿ ಮೇಲಾಟಗಳಿರುತ್ತವೆ, ವೈಮನಸ್ಸಿರುತ್ತದೆ, ಪಟ್ಟಭದ್ರ ಹಿತಾಸಕ್ತಿಗಳಿರುತ್ತದೆ, ಹೊಗಳುವವರು, ತೆಗಳುವವರು ಸೇರಿ ಒಮ್ಮೊಮ್ಮೆ ಮಾಡದ ತಪ್ಪಿಗೆ ಕೆಸರು ಮೈಗಂಟಿಸಿಕೊಳ್ಳುವ ಸ್ಥಿತಿಯೂ ಎದುರಾಗುತ್ತದೆ. ಈ ಎಲ್ಲವನ್ನೂ ಎದುರಿಸಿ ಸಮಾಜದ ಪರವಾಗಿ, ಜನರ ಪರವಾಗಿ ನಿಂತು ಯಾವುದೇ ಲಾಭೋದ್ದೇಶಗಳಿಲ್ಲದೆ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ದುಡಿದು ಜನರಲ್ಲಿ ಬೆರೆತಿರುವವರನ್ನು ದುರ್ಬಿನ್ ಹಿಡಿದು ಹುಡುಕಿದರೇ, ಅಲ್ಲೆಲ್ಲೋ ಒಬ್ಬರೋ ಇಬ್ಬರೋ ಸಿಗುತ್ತಾರೆ. ಅಂತವರಲ್ಲಿ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮ ಪಂಚಾಯತ್‌ನ ಮೊದಲ ಮಹಿಳಾ ಅಧ್ಯಕ್ಷೆ ಗುಲಾಬಿ ಅಮ್ಮ ಕೂಡ ಒಬ್ಬರು.

ನನಗೆ ಬಡವರಿಗೆ ಏನಾದ್ರೂ ಸಹಾಯ ಮಾಡಬೇಕು ಅಂತ ನನ್ನ ಮನಸಲ್ಲಿದ್ದಿತ್ತು. ಸೇವಾ ಮನೋಭಾವ ಎಳವೆಯಿಂದಲೂ ನನ್ನಲ್ಲಿತ್ತು. ಜನರಿಗಾಗಿ, ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಕನಸೇ, ರಾಜಕೀಯಕ್ಕೆ ಪ್ರವೇಶ ಪಡೆದುಕೊಳ್ಳುವುದಕ್ಕೆ ಪ್ರೇರಣೆ ನೀಡಿತು. ಈಗ ರಾಜಕೀಯ ಅವಕಾಶವಾದ ಮತ್ತು ಪುರುಷಾತಿರೇಕದ ಧೋರಣೆಗಳು ಮಹಿಳಾ ಪ್ರಾತಿನಿಧ್ಯತೆಯನ್ನು ವಿಫಲಗೊಳಿಸುತ್ತಿದೆ ಎನ್ನುತ್ತಾರೆ ಗುಲಾಬಿ ಅಮ್ಮ.

‘ಗುಲಾಬಿ ಅಮ್ಮ, ಇಂದು ಬೀಜಾಡಿ ಗ್ರಾಮ ಪಂಚಾಯತ್‌ನ ಹಿರಿಯ ಸದಸ್ಯೆ. ಈ ಇಳಿವಯಸ್ಸಿನಲ್ಲೂ ತಮ್ಮ ವಾರ್ಡ್ನ ಹತ್ತಾರು ಸಮಸ್ಯೆಗಳ ಪಟ್ಟಿಯನ್ನು ಇವತ್ತಿಗೂ ಹಿಡಿದು ತಿರುಗುತ್ತಾರೆ. ಇಂದಿಗೂ ಜನಪರ ಕಾರ್ಯಗಳನ್ನು ಮಾಡುವಲ್ಲಿ ಪ್ರಾಮಾಣಿಕತೆ ಎಳ್ಳಷ್ಟೂ ಕಡಿಮೆಯಾಗಿಲ್ಲ. ಬಡವರಿಗೆ, ನಿರ್ಗತಿಕರಿಗೆ, ಅಮಾಯಕರಿಗೆ ತಮ್ಮ ಸ್ವಂತ ಹಣದಿಂದಲೇ ಸಹಾಯ ಮಾಡಿದ ತಾಯಿ ಅವರು. ಹಾಗಾಗಿಯೇ, ಪ್ರತಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ವಾರ್ಡ್ ನ ನಾಗರಿಕರು ಅವರನ್ನೇ ಗೆಲ್ಲಿಸುತ್ತಾರೆ. ಅದು ಅವರ ಪ್ರಾಮಾಣಿಕತೆಯನ್ನು ಹೇಳುತ್ತದೆ' ಅಂತ ಅಲ್ಲಿನ ಸ್ಥಳಿಯರಾದ ಸಂದೇಶ್ ಪೂಜಾರಿ ಮನಬಿಚ್ಚಿ ಹೇಳುತ್ತಾರೆ.

ಒಟ್ಟಿನಲ್ಲಿ, ಒಬ್ಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಆಡಳಿತ ಹೇಗಿರಬೇಕು..? ಜನರಿಗಾಗಿ ಯಾವ ರೀತಿಯಲ್ಲಿ ಗ್ರಾಮ ಪಂಚಾಯತ್ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಹೇಳಿಕೊಟ್ಟವರು ಗುಲಾಬಿ ಅಮ್ಮ.

 ಇನ್ನು ಉಳಿದದ್ದೆಲ್ಲಾ ಸ್ವತಃ ಅವರೇ ಹೇಳುತ್ತಾರೆ ಕೇಳಿ :
ನಾನೊಬ್ಬಳು ಗೃಹಿಣಿ. ಆ ಕಾಲದಲ್ಲಿ ರಾಜಕೀಯಕ್ಕೆ ಕಾಲಿಡುವುದೆಂದರೇ ಮಹಿಳೆಯರಿಗೆ ಅಳುಕಿದ್ದಿತ್ತು. ಮೊದಲಿನಿಂದಲೂ ಬಡವರ ಬಗ್ಗೆ ನನಗೆ ಸೇವೆ ಮಾಡುವ ಮನಸ್ಸಿದ್ದಿತ್ತು. ಆ ಕಾಲದಲ್ಲಿಯೇ, ನಮ್ಮ ಮನೆಯ ಹೆಬ್ಬಾಗಿಲಿನಲ್ಲಿ ನಿರ್ಗತಿಕ ಕೆಲವರಿಗೆ ಆಸರೆಕೊಟ್ಟಂತಹ ತೃಪ್ತಿ ಇದೆ ನನಗೆ. ಇದನ್ನೆಲ್ಲಾ ನೋಡಿ ತಾತ್ಸಾರದಿಂದ ನೋಡಿದವರು ಇದ್ದಾರೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನಲ್ಲಾಗುವ ಸಹಾಯ ಅಂತವರಿಗೆ ಮಾಡುತ್ತಿದ್ದೆ. ತೀರಾ ಬಡಸ್ಥಿಕೆಯಲ್ಲಿರುವವರಿಗೆ ಹಣ ಕೊಟ್ಟು ಸಹಾಯ ಮಾಡುವಷ್ಟು ಒಳ್ಳೆಯ ಸ್ಥಿತಿಯಲ್ಲಿರಲಿಲ್ಲ. ನಾಲ್ಕು ತೆಂಗಿನ ಕಾಯಿಯೋ ಅಥವಾ ಅವರು ಗಂಜಿಯಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲಿ ಅಂತ ಅಲ್ಪ ಸ್ವಲ್ಪ ಅಕ್ಕಿಯೋ ಕೊಟ್ಟು ಸಹಕರಿಸುತ್ತಿದ್ದೆ. ಬಡತನದಲ್ಲೇ ಹುಟ್ಟಿ ಬೆಳೆದಿರುವುದರಿಂದ ಆ ಕಷ್ಟಗಳೆಲ್ಲಾ ಗೊತ್ತಿತ್ತು ನನಗೆ. ಹೀಗೆ ಸಹಾಯ ಮಾಡುತ್ತಿದ್ದ ಸಂದರ್ಭದಲ್ಲಿ, ರಾಜಕೀಯಕ್ಕೆ ಬರುವ ಅವಕಾಶ ದೊರಕಿತು. ಮೊದಲ ಸಾಲಿನಲ್ಲೇ, ಬೀಜಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷತೆ ವಹಿಸಿಕೊಳ್ಳುವ ಜವಾಬ್ದಾರಿ ದೊರಕಿತು. 1999 ರಿಂದ 2001ರ ತನಕ ಅಧ್ಯಕ್ಷೆಯಾಗಿದ್ದೆ. ಸೇವಾ ಮನೋಭಾವ ಇದ್ದಿದ್ದರಿಂದ ರಾಜಕೀಯದಲ್ಲಿ ಪ್ರಾಮಾಣೀಕವಾಗಿ, ಜನಪರವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಯಿತು. ಗ್ರಾಮೀಣ ರಸ್ತೆಗಳಿಗೆ ಪ್ರಮುಖ ಆದ್ಯತೆ ಕೊಟ್ಟಿದ್ದೆ. ಸುಮಾರು 15-16 ಹೊಸ ರಸ್ತೆಗಳು ನನ್ನ ಅವಧಿಯಲ್ಲಾಗಿದೆ ಎನ್ನುವುದು ಹೆಮ್ಮೆ ನನಗೆ. ಕಾಲು ಸಂಕಗಳು, ಒಳಚರಂಡಿ, ನೀರಿನ ವ್ಯವಸ್ಥೆ, ಬೀದಿ ದೀಪ, ಸ್ವಚ್ಛ ಗ್ರಾಮ ಯೋಜನೆಯಡಿಯಲ್ಲಿ ಶೌಚಾಲಯಗಳು, ಗಿರಿಜನ ಸಮುದಾಯದವರಿಗೆ ಮನೆ ನಿರ್ಮಾಣ ನನ್ನ ಅವಧಿಯಲ್ಲಾಗಿದೆ. ಯಾವುದೇ ಯೋಜನೆಯಲ್ಲಿ ಒಂದು ರೂಪಾಯಿ ನಾನು ಇಟ್ಟುಕೊಂಡವಳಲ್ಲ, ಕೆಲಸಗಳಿಂದ ಲಾಭವಾಗಿಲ್ಲ ಎಂದು ಗುತ್ತಿಗೆದಾರರುಗಳೆಲ್ಲಾ ನನ್ನ ಬಗ್ಗೆ ಅಸಮಾಧಾನ ತೋರಿಸಿದ್ದು ಕೂಡ ಇದೆ. ಬಿಪಿಎಲ್ ಕಾರ್ಡ್, ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನಗಳನ್ನು ಬಡವರಿಗೆ ಮಾಡಿಸಿಕೊಟ್ಟಿದ್ದೇನೆ. ಜನ ಇಂದಿಗೂ ನನ್ನನ್ನು ‘ಗುಲಾಬಿ ಅಮ್ಮ’ ಅಂತ ಗೌರವದಿಂದ ನೋಡುತ್ತಾರೆ ಎನ್ನುವುದರ ಬಗ್ಗೆ ಆತ್ಮ ತೃಪ್ತಿಯಿದೆ. ನಾನು, ಕಾಂಗ್ರೇಸ್‌ನಿಂದ ಸ್ಪರ್ಧಿಸಿದ್ದರೂ ಕೂಡ ಜನ ನಿಸ್ಪಕ್ಷಪಾತವಾಗಿ ನನ್ನ ಸೇವೆ ನೋಡಿ ಮತ ಹಾಕಿ ಗೆಲ್ಲಿಸಿ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು. ವಿರೋಧ ಪಕ್ಷದವರೂ ಕೂಡ ನಾನು ಮಾಡಿದ ಕೆಲಸ ನೋಡಿ ಮತ ಹಾಕಿ ಬೆಂಬಲಿಸಿದ್ದಾರೆ.  ಪಂಚಾಯತ್‌ನ ಆಡಳಿತ ಮಟ್ಟದಲ್ಲಿ ಈಗ ನನ್ನ ಬಗ್ಗೆ ಕೆಲವರು ಭಿನ್ನ ಧ್ವನಿಯಲ್ಲಿ ಮಾತಾಡುತ್ತಾರೆ. ಆದರೇ, ನಾನೆಂದೂ ದ್ವೇಷ ಸಾಧಿಸಿದವಳಲ್ಲ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೂ ಕೂಡ ತಪ್ಪು ಮಾತಾಡುತ್ತಾರೆ ಎನ್ನುವುದರ ಬಗ್ಗೆ ಅಸಮಾಧಾನವಿದೆ. ಈಗಂತೂ ಸ್ವಾರ್ಥ ರಾಜಕಾರಣ ತುಂಬಿ ಹೋಗಿದೆ.

ಆಗಿನ ಕಾಲದಲ್ಲಿ ತಿಂಗಳಿಗೆ ಸರ್ಕಾರದಿಂದ ಬರುತ್ತಿದ್ದ 300 ರೂಪಾಯಿ ಗೌರವಧನವನ್ನೂ ಕೂಡ ಎಷ್ಟೋ ಸಂದರ್ಭಗಳಲ್ಲಿ ಸಮಾಜದ ಒಳಿತಿಗಾಗಿ ಕೊಟ್ಟಿದ್ದೇನೆ. ಜನರು ಸಹಕಾರ ನೀಡಿದ್ದಾರೆ, ಗೌರವ ಕೊಟ್ಟಿದ್ದಾರೆ ಆ ಬಗ್ಗೆ ತುಂಬಾ ಸಂತೋಷವಿದೆ. ಅಂತ ಅಪ್ಪಟ ಕುಂದಾಪುರದ ಗ್ರಾಮ್ಯ ಭಾಷೆಯಲ್ಲೇ ಹೇಳುತ್ತಾ ಮಾತಿಗೆ ಚುಕ್ಕಿ ಇಟ್ಟರು ಗುಲಾಬಿ ಅಮ್ಮ. 
-ಶ್ರೀರಾಜ್ ವಕ್ವಾಡಿ 

Tuesday, May 12, 2020

ರೈಲು ಅರ್ಧ ಊರು ತಲುಪಿತ್ತು..!



ರೈಲು ಹೊರಟು ನಿಂತಿತ್ತು.

ಸಿಮೆಂಟಿನಲ್ಲಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುವ, ದುಃಖ ಭಾರದ ಜೊತೆಗೆ ನೂರಾರು ಕೆ.ಜಿ ಮೂಟೆ ಹೊರುವವರೆಲ್ಲಾ ಒಂದೆಡೆ ಸೇರಿದ್ದರು.

ಅವರ ಮುಖದಲ್ಲಿ ಏನೋ ಸಣ್ಣ ಮಂದಹಾಸ.

ಇಡೀ ಪರಿವಾರವೇ, ಮೂಟೆ ಕಟ್ಟಿ ಹೊರಟಿತ್ತು. ಅವರ ಬಳಿಯೇ ಭೂತ, ವರ್ತಮಾನ, ಭವಿಷ್ಯ ಕಾಲಗಳೆಲ್ಲಾ ಇದ್ದವು. ತಲುಪುವುದಕ್ಕೆ ತುದಿ ಕಾಲಿಟ್ಟು ಮುಂದಿದ್ದರು.

ಅಕ್ಕ ಪಕ್ಕದಲ್ಲಿರುವವರಿಗೆ ಅವರೊಳಗೆ ದೊಡ್ಡ ಗುಡ್ಡೆಯಾದ ಕಹಿ ಯಾರಿಗೂ ಕಾಣಿಸಿರಲಿಲ್ಲ. ಪಾಪ...  ಸುಖ, ಸಂತೋಷಗಳೆಲ್ಲಾ ಇವರ ಪಾಲಿಗೆ ಇಂದಿಗೂ ಬೆನ್ನು ತೋರಿಸಿಯೇ ನಿಂತಿವೆ. ಮುಖ ತೋರಿಸಲೇ ಇಲ್ಲ.

ಚುಕುಬುಕು ಹೊರಟೇ ಬಿಟ್ಟಿತ್ತು.

ಅಲ್ಲದೆಷ್ಟೋ ಮಂದಿ, ಇನ್ನೂ ಬೋಗಿಗೆ ಕಾಲಿಡದೇ ಬಾಗಿಲ ಬಳಿಗೆ ಮುಖ ಮಾಡಿ ಓಡುತ್ತಿದ್ದಾರೆ. ಹೆಗಲಿಗೆ ವೇಷಗಳ ತೂಕದ ಚೀಲ. ಅಲ್ಲೊಬ್ಬಳು ತಾಯಿ, ಅವಳ ಸೊಂಟದ ಮೇಲೆ ಕೂಸೊಂದು ಅಳುತ್ತಿತ್ತು. ಮೈ ಸುಕ್ಕು ಕಟ್ಟಿದ ಅಜ್ಜ, ಅಜ್ಜಿ ತುಂಬಾ ದೂರದ ಹಿಂದೆ ಉಳಿದು ಬಿಟ್ಟಿದ್ದಾರೆ.

‘ಸಾಗಿದಷ್ಟು ದಾರಿ ಕಣಮ್ಮಾ’ ಅಂತ ವಯಸ್ಸಾದ ಧ್ವನಿಯೊಂದು ಆರ್ತದಲ್ಲಿ ಮುಳುಗೆದ್ದು ಹೇಳಿತು. ‘ಭೂತವನ್ನು ಹೇಗೋ ಕಳೆದು ಬಂದಿದ್ದೇವೆ. ಭವಿಷ್ಯವನ್ನೂ ಹಾಗೆಯೇ ಕಳೆಯಲು ಸಾಧ್ಯವಿಲ್ಲ’ ಎನ್ನುವುದು ಆ ಧ್ವನಿಯ ಅರ್ಥ.

ಆ ಧ್ವನಿಯ ಹಿಂದೆ ನಡೆದೆ. ಅಲ್ಲೊಬ್ಬರು ಕಟ್ಟಿಗೆ ಹೊತ್ತು ತರುತ್ತಿದ್ದರು, ಮತ್ತೊಬ್ಬರು ಮನೆಯ ಮುಂದೆ ರಾಶಿ ಊದುಬತ್ತಿ ಹಚ್ಚಿ ತಲೆಗೆ ಕೈಕೊಟ್ಟು ಕೂತಿದ್ದರು, ಒಂದಿಬ್ಬರು ಆಚೀಚೆ ಓಡಾಡುತ್ತಿದ್ದರು.

ಆಹುತಿಗೆ ಎಲ್ಲವೂ ತಯಾರಿಯಾಗಿದ್ದಿತ್ತು..! ಮನಸ್ಸಿನ ಶವ ಸಂಸ್ಕಾರಕ್ಕೆ ಕೊಳ್ಳಿಗೆ ಬೆಂಕಿ ಹಚ್ಚುವುದೊಂದೇ ಬಾಕಿ..!

ಇಷ್ಟೋತ್ತಿಗಾಗಲೇ ರೈಲು ಅರ್ಧ ಊರು ತಲುಪಿತ್ತು.

"ಇಲ್ಲಿ ಬದುಕುವುದೆಂದರೇ, ಕೊಳೆತ ಮೇಲೆ ಹನಿಯುವ ಮಳೆ..!"


-ಶ್ರೀರಾಜ್ ವಕ್ವಾಡಿ




Monday, May 11, 2020

ಅವರಿಗೊಂದು ‘ಥ್ಯಾಂಕ್ಸ್’ ಹೇಳಿ..!



ಈಗ ನಾನು ತುಂಬಾ ಪ್ರೀತಿಯಿಂದ ಹೇಳುತ್ತೇನೆ. ಮಾತ್ರವಲ್ಲ, ಅಪರಿಮಿತನಾಗಿ ಹೇಳುತ್ತೇನೆ.

‘ನನ್ನನ್ನು ಸವರಿದವುಗಳಿಗೆಲ್ಲಾ ತುಂಬು ಕೃತಜ್ಞತೆ’.

ಅವುಗಳ ಮುಖಗಳೆಲ್ಲಾ ಥಳಥಳಿಸುವ ಬೆಂಕಿ ಜ್ವಾಲೆಗಳಿಗಿಂತ ಪ್ರಖರವಾಗಿತ್ತು. ಬಹುಶಃ ನನಗೆ ಅಂದು ಸಹಿಸಿಕೊಳ್ಳಲಾಗಲಿಲ್ಲ. ಸಹಿಸಿಕೊಳ್ಳುವುದಕ್ಕೊಂದು ಮಿತಿಯಿದೆ ಅಲ್ವಾ..? ನನ್ನ ಮನಸ್ಸಿಗೆ ನಾನು ಕ್ಷಮೆ ಕೇಳಿ ಸುಟ್ಟು ಹೋದೆ. ಉಳಿದದ್ದು ಸದ್ದು ಮಾಡದೆ ನೆಲಕ್ಕೆ ಉದುರಿದ  ಬೂದಿ ಅಷ್ಟೇ.

‘ಮನಸ್ಸು’ ಈಗ ಗುಟ್ಟು ಹೇಳಿದಂತೆ ಕಿವಿಯ ಬಳಿಗೆ ಬಂದು ಕೇಳುತ್ತಿದೆ.

‘ನಾನು ಅಂದು ಹೋದಾಗ ನೀನು ಹೇಗಿದ್ದೆ..?’

ನಾನು ಉತ್ತರಿಸಿದೆ.

ಏನು..?

“ನೀನು ಮರಳಿ ಬರುವೆ ಎನ್ನುವುದು ಗೊತ್ತಿತ್ತು. ಹಾಗಾಗಿ, ನೀನು ನನ್ನಲ್ಲೇ ಇರುವೆ ಎಂದುಕೊಂಡೆ ನಡೆದೆ, ಕುಣಿದೆ, ದುಃಖಪಟ್ಟೆ, ಆರ್ತದಲ್ಲಿ ಮುಳುಗಿದೆ, ಸಮಾಧಾನ ಪಟ್ಟುಕೊಂಡೆ, ಆಗುವುದೆಲ್ಲಾ ಆಗಿಸಿಕೊಳ್ಳುತ್ತದೆ, ನಡೆಯುವುದೆಲ್ಲಾ ನಡೆಸಿಕೊಳ್ಳುತ್ತದೆ”. ಅಂತಂದೆ.

ತುಟಿ ಅಗಲಿಸಿತು.

ಯಾಕೆ..? ಕೇಳಿದೆ.

ತುಂಬು ಗಟ್ಟಿಯಿಂದ ನಾನಿಲ್ಲದಿದ್ದಲ್ಲೂ ಮುನ್ನುಗ್ಗಿ ನಡೆದದಕ್ಕೆ. ‘ನಾನು ಹೆಮ್ಮೆ ಪಡುತ್ತೇನೆ.’

‘ಭೇಷ್’ ಅಂತ ಹೇಳಿತು.

ಇಲ್ಲಾ, ಮೊದಮೊದಲು, ಎಲ್ಲವೂ ಉದುರಿ ಬೀಳುವಾಗ ದುಃಖವಾಯಿತು. ಉದುರಿದವುಗಳನ್ನೆಲ್ಲಾ ಬಾಚಿಕೊಳ್ಳುತ್ತಿದ್ದೆ. ಜಾಸ್ತಿ ಉದುರಿ ಹೋಗುವಾಗ ನಾನೇ ಒಣಗಿ ಹೋದೆ. ಒಣಗಿ ಬಿದ್ದ ಮರದ ಮೇಲೆ ಮಳೆ ಹನಿಯಲಾರಂಭಿಸಿತು. ಬೆಳಕಿನ ಬಾಣ ಎದೆಗೆ ಚುಚ್ಚಿತು. ಟಿಸಿಲು ಬಿಚ್ಚಿದೆ. ಬಿಚ್ಚಲಾರಂಭಿಸುವಾಗಲೇ, ಅಲ್ಲ್ಯಾರೋ ಬಂದು ಚಿವುಟಿ ಗಾಯ ಮಾಡಿ ಹೋದರು. ಮತ್ತೆ ಟಿಸಿಲೊಡೆದೆ. ಮತ್ತೆ ಚಿವುಟಿ ಒಗೆದರು. ಅವರು ಒಗೆದು ಬಿದ್ದಲ್ಲೇ ಎದ್ದೆ, ತುಳಿದು ಹೋದರು.

ಅದೊಂದು ಭೀಕರವಾದ ಅಭಾವ ರಿಕ್ತತೆ ಕಾಡಿ ಕೊರಗಿಸಿತು.

ವಿಚಿತ್ರವೆಂದರೇ, ಅದು ನನ್ನ ಕ್ರಿಯೆಗೆ ಅವರ ಪ್ರತಿಕ್ರಿಯೆಯೂ ಆಗಿತ್ತು. ಇದ್ದಕ್ಕಿದ್ದಂತೆ ಒಮ್ಮೆ ಗಟ್ಟಿಯಾಗಿ ನಿಂತು ಬಿಡುವ ಧೈರ್ಯದ ನಿರ್ಧಾರ ಮಾಡಿಬಿಟ್ಟೆ. ಆಗಿನ್ನೂ, ಕಾಲಂಶದ ಹಾದಿಯೂ ಕ್ರಮಿಸಿರಲಿಲ್ಲ.

ಆಗ ಮನಸ್ಸು ಮಾತಾಡಿತು.

‘ನಿನ್ನನ್ನು ತುಳಿದವರ‍್ಯಾರೂ ಪರರಲ್ಲ. ನಿನ್ನವರೇ.’

ಅವರಿಗೆ ಸೌಜನ್ಯಕ್ಕೊಂದು ‘ಥ್ಯಾಂಕ್ಸ್’ ಹೇಳಿ.

ಸೋಲುವುದೆಂದರೇ, ಸತ್ತು ಮಣ್ಣಾಗುವುದಲ್ಲ. ಬೆಳೆಯುವುದಕ್ಕೆ ಮೂಲ ಹುಡುಕುವುದು..!
-ಶ್ರೀರಾಜ್ ವಕ್ವಾಡಿ
(📱 8762723716)

Sunday, May 10, 2020

ನಿಶೆಯ ಬೆಳಕಲ್ಲಿ ತೀರ ಕಾಣದು..!



ಈ ಬಗ್ಗೆ ಏನೂ ಬರೆಯಬೇಕು ಅಂತ ಅನ್ನಿಸುತ್ತಿಲ್ಲ. ಬರೆಯಬಾರದು ಅಂತ ಕೂಡ ಅನ್ನಿಸುತ್ತಿಲ್ಲ..! ಬರೆದರೇ, ಹೇಗೆ ಬರೆಯಬೇಕು..? ಬರೆದಾದ ಮೇಲೆ ಹೇಗದನ್ನು ಅರಗಿಸಿಕೊಳ್ಳಬೇಕು..?

ಅಂದು ನಿಶೆಯ ಬೆಳಕು ಸುಡುತ್ತಿತ್ತು. ಅಯ್ಯೋ, ನೀವಂದುಕೊಂಡಿದ್ದು ಸುಳ್ಳು, ನಿಶೆಯ ಕಥೆ ಹೇಳಲು ಹೊರಟಿದ್ದಲ್ಲ ನಾನೀಗ. ಅಲ್ಲಿಂದಲೇ ಆರಂಭವೆನ್ನಲು ಹೊರಟೆ ಅಷ್ಟೇ. ಏನಪ್ಪಾ ಇವನದ್ದು...  ಯಾವುದೂ ಅರ್ಥವಾಗಲ್ಲ ಅಂತ ಅಂದ್ಕೊಳ್ಬೇಡಿ. ಅರ್ಥವಾಗದಿರುವಷ್ಟೇನು ಕ್ಲಿಷ್ಟವಿಲ್ಲ.

‘ನಿಶೆ’ ಅಷ್ಟೇ.

ಬಾಡಿದಷ್ಟು ಚಿಗುರುವ, ಬಿದ್ದರೇ ಏಳುವ, ಎದ್ದರೇ ಬೀಳುವ, ಎದ್ದು ಬೀಳುವ, ಬಿದ್ದು ಏಳುವ ಮತ್ತು ಆರಂಭದಲ್ಲೇ ‘ಸಾಕಪ್ಪಾ ಸಾಕು’ ಎನ್ನುವಷ್ಟು ಭ್ರಮನಿರಸನ ಹುಟ್ಟಿಸುವ ಛಾಳಿ ಯಾವುದಕ್ಕಾದರೂ ಇದ್ದರೇ, ಅದು ಬದುಕಿಗೆ ಮಾತ್ರ.

ಹೌದು, ಅದು ನಿಶೆಯೇ ಸರಿ. ನಿಶೆಯ ಬೆಳಕಿನಲ್ಲಿ ತೀರ ಕಾಣುವುದಿಲ್ಲ.

ಗೊತ್ತಿಲ್ಲದ ಹಾಗೆ...  ಕುಂಡೆಗೆ ಒದೆಯುತ್ತದೆ, ಫಟ್ ಎಂದು ಕೆನ್ನೆಗೆ ಹೊಡೆಯುತ್ತದೆ, ದೂಡಿ ಬೀಳಿಸುತ್ತದೆ, ಕೊರಳಿಗೆ ನೇಣು ಬಿಗಿಯುತ್ತದೆ, ವಿಷದ ಬಾಟಲಿಯ ಮುಚ್ಚುಳ ತೆಗೆಸುತ್ತದೆ, ಕತ್ತಿಯಿಂದ ಕಡಿದುಕೊಳ್ಳಲು ಪ್ರೇರೇಪಿಸುತ್ತದೆ..!

ಕೊನೆಗೆ ಕಿವಿಯಲ್ಲಿ ಮೆಲ್ಲ ಹೇಳುತ್ತದೆ. ‘ನಿನಗೊಂದಿಷ್ಟು ತಾಲೀಮು ಹೇಳಿಕೊಟ್ಟೆ ಅಷ್ಟೇ’ ಅಂತ..!
ಕಾರಿನ ವೇಗಕ್ಕೆ ತಡಬಡಿಸುತ್ತಾ ಹಿಂದೆ ಓಡಿ ಸೋಲುವ ಶ್ವಾನ ಕೊನೆಗೆ ಆಯಾಸದಲ್ಲಿ ಹೇಗೆ ಜೊಲ್ಲು ಸುರಿಸುತ್ತಾ ಕೂರುತ್ತದಲ್ವಾ..? ಹಾಗೆ ಈ ಜೀವನ..!

ಹೋಗುವ ದಾರಿಯ ಮಧ್ಯೆದಲ್ಲೇ, ಇದ್ದಕ್ಕಿದ್ದಂತೆ ಗೋಡೆ ಕಟ್ಟಿಕೊಳ್ಳುತ್ತದೆ.

ಪ್ಲೀಸ್...

ನಾನು ನನ್ನ ಹೆಜ್ಜೆಗಳನ್ನಾದರೂ ಊರುತ್ತೇನೆ. ಬೇರೆಯವರದ್ದಂತೂ ಆಗುವುದಿಲ್ಲ. ನಿಶೆಯಲ್ಲಿ ರಸ್ತೆ ಕಾಣುವುದು ಇಲ್ಲ. ತಿರುವುಗಳೂ ಕೂಡ.

ಬೆಳಕು ಹುಡುಕುವ ಖಯಾಲಿ

“ಬದುಕುವುದೆಂದರೇ, ಹೊಲಿಗೆಯ ಆರಂಭವನ್ನು ಹುಡುಕುವಲ್ಲಿ ಮೌನವಾಗುವ ಸೂಜಿ.”

-ಶ್ರೀರಾಜ್ ವಕ್ವಾಡಿ   
(📱 8762723716)

ಹುಣ್ಣಿಮೆ ಹೊಳಪು..!



ಅಮ್ಮ, ಅಡುಗೆ ಮನೆಯ 
ಹೊಗೆಯಲಿ ಬೆಂದು 
ಬಾಡಿದ ಸುಮ
ಅವಳ ಬೆವರ ಹನಿಗಳ 
ಕನಸುಗಳಲಿ ಹೊದ್ದು 
ಮಲಗುವಷ್ಟಿದೆ ಘಮ...!

ಅವಳ ಪ್ರೀತಿಯೆಂದರೇ, 
ಬೊಗಸೆ ಭರ್ತಿಯಾಗುವಷ್ಟು.
ಸುಕ್ಕೆದ್ದ ಅವಳ ಮೈ ಮೇಲೆ
ಮತ್ತೆ ಮಗುವಾಗಿ ಆಡಬೇಕು..! 

ನಗು ಕಾಯುವ ಜೀವಕ್ಕೆ 
ಎದೆ ತುಂಬಾ ದುಃಖ. 
ಧಗ್ಗೆಂದೆದ್ದ ಒಲೆಯ ಬೆಂಕಿಯ
ಹೊಗೆ ನುಂಗಿದವಳಿಗೆ 
ಎದೆಗೊದೆಯುವ ನೋವೆಲ್ಲಾ 
ಹಿರಿದೇನಲ್ಲ. 
'ಅಮ್ಮ'ನಲ್ಲವೇ, ಅವಳಿಗದು 
ಒಲಿದ ಸಿದ್ಧಿ...!

ಅವಳ ಕೈಗಪ್ಪಿದ 
ಬಳೆಗಳಾಡುವ ಧ್ವನಿ,
ತೂಗಲಾರಂಭಿಸಿದ 
ಕಿವಿಗಳೆರಡರಲ್ಲಿ ಮುಂದೆ ಬಾಗಿ 
ನಿಂತಿರುವ ಬೆಂಡೋಲೆಗಳನು
ನೂರ್ಕಾಲ ಕಂಡು 
ಅವಳ ಹಿಗ್ಗಿದ ಭಾವದಲೆಯ ನೇತ್ರಸಲಿಲದ 
ಒಂದೇ ಒಂದ್ಹನಿ ನಾನಾಗಬೇಕು..!

ಅಮ್ಮನೆಂದರೇ, ಪರ್ಯಾಯವಿಲ್ಲದ 
ಹುಣ್ಣಿಮೆ ಹೊಳಪು...!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)
📱 : 8762723716






ಅಮ್ಮ ಎಂದರೇ, ಧೀ ಶಕ್ತಿ..!



ನಮ್ಮ ಆಯಸ್ಸನ್ನು ಹೆಚ್ಚಿಸುವ ಶಕ್ತಿ ಇರುವುದೆಂದರೇ, ಅದು ಅಮ್ಮ ಎನ್ನುವ ಅಪೂರ್ವ ಭಾವಕ್ಕೆ ಮಾತ್ರ. ಅವಳ ಮಡಿಲಿನ ಅಪರಿಮಿತ ಸುಖದಾಚೆಗೆ ಬಂದಾಗ ಮಗು ಅಳಲಾರಂಭಿಸುತ್ತದೆ. ಅಮ್ಮ ಎದುರು ಬಂದಾಗಲೇ, ಅಳುವ ಮಗು ಒದ್ದೆಗಣ್ಣಿನ ಮಬ್ಬಿನಿಂದ ಹೊರಬಂದು ತುಟಿ ಅಗಲಿಸಲಾರಂಭಿಸುತ್ತದೆ. ವಾವ್ಹ್, ಮತ್ತೆ ಅಮ್ಮನ ಮಡಿಲಲ್ಲಿ ಮಗುವಾಗಬೇಕು.



‘ಅಮ್ಮ’ ನನ್ನ ಪಾಲಿಗೆ ಮಹತ್ತರ ಕ್ಷಮತೆ. ನನ್ನೆಲ್ಲಾ ನಡೆಗಳ ಹಿಂದಿನ ಎಲುಬು. ನನ್ನ ಅಮ್ಮ, ಅಂಗನವಾಡಿ ಟೀಚರ್. ಹಾಗಾಗಿ, ನನ್ನ ಅಮ್ಮನೇ ನನಗೆ ಮನೆಯ ಮೊದಲ ಗುರುವೂ ಹೌದು, ಶಾಲೆಯ ಮೊದಲ ಟೀಚರ್ ಕೂಡ ಹೌದು. ನನಗೆ ಅಮ್ಮನನ್ನು ಎರಡು ಪಾತ್ರಗಳಲ್ಲಿ ನೋಡಿದ ಅನುಭವವಿದೆ.

ನನ್ನ ಬೆಳವಣಿಗೆಯಲ್ಲಿ ಅಮ್ಮನ ಪ್ರಭಾವ ದೊಡ್ಡದಿದೆ. ನಾನು ಪತ್ರಿಕೋದ್ಯಮದಲ್ಲಿ ಬದುಕು ಕಂಡುಕೊಳ್ಳಲು ಕನಸು ಕಂಡು ಹೊರಟವ. ಬಾಲ್ಯದಲ್ಲಿರುವಾಗಲೇ ಓದುವುದಕ್ಕೆ ಆಸಕ್ತಿ ಹುಟ್ಟಿಸಿದ್ದು ಅಮ್ಮ. ದಿನನಿತ್ಯ ಅಮ್ಮ ಸುದ್ದಿ ಪತ್ರಿಗಳನ್ನು ಹಿಡಿದು ತಾಸುಗಟ್ಟಲೆ ಕೂರುತ್ತಿದ್ದದ್ದು, ವಾರಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಬರುತ್ತಿದ್ದ ಕಥೆ, ಕಾದಂಬರಿಗಳನ್ನು ಬಿಡದೇ ಓದುತ್ತಿದ್ದದ್ದನ್ನು ನನ್ನ ಬಾಲ್ಯದ ಕಣ್ಣುಗಳು ಕಂಡಿದ್ದು ನೆನಪಿದೆ. ಹಾಗಾಗಿ, ನನ್ನ ಶಾಲಾ ದಿನಗಳಿಂದಲೇ ಪತ್ರಿಕೆಗಳ ಓದುವ ಚಟಕ್ಕೆ, ಕಥೆ, ಕಾದಂಬರಿಗಳ ಪುಸ್ತಕಗಳ ಓದುವ ಹುಚ್ಚಿಗೆ ಅಮ್ಮನೇ ಮೂಲ ಸ್ಫೂರ್ತಿ. ಆದ್ದರಿಂದ, ನನ್ನಮ್ಮ ನನಗೆ ದೈತ್ಯ ಶಕ್ತಿ.

ಬಂದ ಕಷ್ಟಗಳನ್ನು, ಎದುರಾದ ಕಷ್ಟಗಳನ್ನು ಒಂದಿನಿತೂ ತೋರಿಸಿಲ್ಲ. ಎಷ್ಟಿದ್ದರೂ ಅದೇ ಅಮ್ಮನ ಮಗ ಅಲ್ಲವೇ..?! ಅವಳ ಒಳನೋವು ಗೊತ್ತಿದೆ. ಆ ಎಲ್ಲಾ ನೋವುಗಳನ್ನು ದೂರ ಮಾಡುವ ಪ್ರಯತ್ನದಲ್ಲಿದ್ದೇನೆ. ನನಗೋ, ಅಮ್ಮ ಅಂದರೇ, ನನ್ನೆದೆಯ ಶಕ್ತಿಯಾಗಿ, ಬದುಕಿನ ಉಕ್ತಿಯಾಗಿ ಜೊತೆಗಿರುವ ಧೀ ಶಕ್ತಿ.

  -ಶ್ರೀರಾಜ್ ವಕ್ವಾಡಿ

Saturday, May 9, 2020

ಉರಿ ಏಳುವ ದಾರಿಯಲ್ಲಿ ಗುಳೆ ಹೊರಟಿದೆ..!



ಅದೆಲ್ಲಿಗೋ ಗುಳೇ ಹೊರಟಿದೆ ಬದುಕು.

ಧಗ್ಗೆಂದು ಎದ್ದ ಬೆಂಕಿ ಕೆನ್ನಾಲಿಗೆಗಳಿಗೆ ಸಿಲುಕಿ ಕರಗಿಯಾದ ಮೇಲೆ ಹುಟ್ಟುವ ಜೀವನದ ಅಗತ್ಯಕ್ಕೆ ಧ್ವನಿಯಾಗಿ ಇರುವ ಭಾವವೊಂದರ ಕುರಿತಂಥದ್ದಿದು. ನೀವೇನೂ ಕಣ್ಣುಬಿಸಬೇಕಂತಿಲ್ಲ. ನಡೆಯುವುದೆಲ್ಲಾ ನಡೆದು ಹೋಗುತ್ತವೆ ಬಿಡಿ. ಆದರೇ, ಕಾಣಬೇಕಾದದ್ದೆಂದಿಗೂ ಕಾಣುವುದಿಲ್ಲವಲ್ಲಾ.. ಎನ್ನುವುದೊಂದೇ ದುಃಖದ ಅಗ್ರಸಾಲಿನ ಬಿಂದು.

ಕಥೆ, ಕಾದಂಬರಿ, ಕಾವ್ಯ, ಹಾಡು, ಚಿತ್ರ, ಸಿನೆಮಾಗಳ ಸಾಧ್ಯತೆಗಳಲ್ಲ ಬದುಕು. ಅದರಾಚೆಗೆ ಅದೇನೋ ಘನಗಂಭೀರ ದಿವ್ಯ ನೀರವತೆಗೆ ತಲೆಯಾನಿಸಿ ಕುಳಿತ ನಿಸ್ತೇಜ ಹೊಳಪು ಅಷ್ಟೇ.

ಇಲ್ಲಿ ಎಲ್ಲದಕ್ಕೂ ಅಲ್ಲಲ್ಲೇ ಮಣ್ಣಾಗುವ ಭಾಗ್ಯ...!

ಅದೆಷ್ಟು, ಬದುಕಿನ್ನೂ ರೈಲ್ವೆ ಸ್ಟೇಶನ್‌ನ ಅದ್ಯಾವುದೋ ಎಡ ಮೂಲೆಯನ್ನೋ, ಬಲ ಮೂಲೆಯನ್ನೋ ಆವರಿಸಿಕೊಂಡಿಲ್ಲ..? ಅದೆಷ್ಟು ಜೀವ ಬಸ್ ಸ್ಟ್ಯಾಂಡ್‌ಗಳ ಧೂಳು ಮಣ್ಣುಗಳಲ್ಲೇ ಹೊರಳಾಡಿಕೊಂಡಿಲ್ಲ..? ಅದೆಷ್ಟು ಭಾರಗಳನ್ನು ಹೊತ್ತ ಜೀವನ ಊಹಿಸಲಾರದ ತಿರುವುಗಳನ್ನು ನಿರೀಕ್ಷಿಸುತ್ತಲೇ ಸಾಗುತ್ತಿಲ್ಲ..?

ಹ್ಹು.. ಈಗ ನೀವು ಹೇಳಿ.

ಬದುಕೆಂದರೇ ಏನು..?!

ಗೊತ್ತಿಲ್ವಾ..?

‘ಹೊಲಿಯುವುದು, ಹರಿದುದ್ದಕ್ಕೂ ಮತ್ತೆ ಮತ್ತೆ ಹೊಲಿಯುವುದು. ಕಪ್ಪೋ, ಬಿಳುಪೋ ನೂಲು ಖಾಲಿಯಾಗುವವರೆಗೆ ಹೊಲಿಯುವುದು.’.

 “ಅಷ್ಟೇ.”

ಹೊಲಿಗೆ ಬಿಚ್ಚಿಕೊಳ್ಳುತ್ತಾ ಹೋದಂತೆ, ಅದು ಹೇಳಿಕೊಳ್ಳುವ ಕಥೆಗೆ ಕಿವಿಯಾಗುವುದಕ್ಕೂ ಜೀವನ ಮುಂದಾಗುವುದಿಲ್ಲ. ಘರ್ಷಣೆಗಳ ನಡುವೆ ಬೆಂದು ಕರಗಿಸಿ, ಕಲಕಿಸಿ ಅಲ್ಲೆಲ್ಲೋ ದಾರಿ ಮಧ್ಯದಲ್ಲೇ ಗೊತ್ತೇ ಆಗದಂತೆ ಜೋಳಿಗೆಯಲ್ಲಿದ್ದ ರೊಟ್ಟಿಗಳಿಗೆ ರಕ್ತ ಅಂಟಿಸಿ ಬಿಡುತ್ತದೆ ಬದುಕು.

ಕಾದು ನೋಡಬೇಕು. ಧ್ವನಿಯಾಗುವರೇ, ಹೆಣವಾದ ಮೇಲಾದರೂ ಎಂದು. ಆಗದಿದ್ದರೇ, ನನ್ನಂಥ, ನಿಮ್ಮಂಥವರೆಲ್ಲಾ ನಡೆವ ಹಾದಿಯಲ್ಲೇ, ಮತ್ತೆ ಮುಂದೆಲ್ಲೂ ಹೋಗಲಾರದಂತೆ ಮಲಗಿ ಬಿಡಬೇಕಷ್ಟೇ.

ನಾನು ನಡೆಯುತ್ತಿದ್ದೇನೆ. ನೀವೂ ಕೂಡ. ಇಲ್ಲ ಅಂತ ಹೇಳ್ಬೇಡಿ..! ಉರಿ ಏಳುವ ದಾರಿಯಲ್ಲಿ ಒಡೆದ ಪಾದಗಳಿಂದ ರಕ್ತದಚ್ಚುಗಳನ್ನು ಮೆತ್ತುತ್ತಾ ಬರಿಗಾಲಲ್ಲಿ ನಡೆಯುವುದು ಯಾರಿಗೆ ಕಾಣುತ್ತದೆ ಹೇಳಿ..?

ಅಲ್ಲಿಲ್ಲವೆಂದು ಇಲ್ಲಿಗೆ, ಇಲ್ಲಿಲ್ಲವೆಂದು ಅಲ್ಲಿಗೆ, ಎಲ್ಲೂ ಇಲ್ಲವೆಂದು ಅದೆಲ್ಲೋ ಕಣ್ಣಿಗೆ ಕಾಣದ ತುತ್ತ ತುದಿಗೆ.

ಬದುಕೆಂದರೇ... ಎಲ್ಲೆಲ್ಲಿಂದಲೋ ಎಲ್ಲೆಲ್ಲಿಗೋ..!




-ಶ್ರೀರಾಜ್ ವಕ್ವಾಡಿ 
(📱 : 8762723716)