ರೈಲು ಹೊರಟು ನಿಂತಿತ್ತು.
ಸಿಮೆಂಟಿನಲ್ಲಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುವ, ದುಃಖ ಭಾರದ ಜೊತೆಗೆ ನೂರಾರು ಕೆ.ಜಿ ಮೂಟೆ ಹೊರುವವರೆಲ್ಲಾ ಒಂದೆಡೆ ಸೇರಿದ್ದರು.
ಅವರ ಮುಖದಲ್ಲಿ ಏನೋ ಸಣ್ಣ ಮಂದಹಾಸ.
ಇಡೀ ಪರಿವಾರವೇ, ಮೂಟೆ ಕಟ್ಟಿ ಹೊರಟಿತ್ತು. ಅವರ ಬಳಿಯೇ ಭೂತ, ವರ್ತಮಾನ, ಭವಿಷ್ಯ ಕಾಲಗಳೆಲ್ಲಾ ಇದ್ದವು. ತಲುಪುವುದಕ್ಕೆ ತುದಿ ಕಾಲಿಟ್ಟು ಮುಂದಿದ್ದರು.
ಅಕ್ಕ ಪಕ್ಕದಲ್ಲಿರುವವರಿಗೆ ಅವರೊಳಗೆ ದೊಡ್ಡ ಗುಡ್ಡೆಯಾದ ಕಹಿ ಯಾರಿಗೂ ಕಾಣಿಸಿರಲಿಲ್ಲ. ಪಾಪ... ಸುಖ, ಸಂತೋಷಗಳೆಲ್ಲಾ ಇವರ ಪಾಲಿಗೆ ಇಂದಿಗೂ ಬೆನ್ನು ತೋರಿಸಿಯೇ ನಿಂತಿವೆ. ಮುಖ ತೋರಿಸಲೇ ಇಲ್ಲ.
ಚುಕುಬುಕು ಹೊರಟೇ ಬಿಟ್ಟಿತ್ತು.
ಅಲ್ಲದೆಷ್ಟೋ ಮಂದಿ, ಇನ್ನೂ ಬೋಗಿಗೆ ಕಾಲಿಡದೇ ಬಾಗಿಲ ಬಳಿಗೆ ಮುಖ ಮಾಡಿ ಓಡುತ್ತಿದ್ದಾರೆ. ಹೆಗಲಿಗೆ ವೇಷಗಳ ತೂಕದ ಚೀಲ. ಅಲ್ಲೊಬ್ಬಳು ತಾಯಿ, ಅವಳ ಸೊಂಟದ ಮೇಲೆ ಕೂಸೊಂದು ಅಳುತ್ತಿತ್ತು. ಮೈ ಸುಕ್ಕು ಕಟ್ಟಿದ ಅಜ್ಜ, ಅಜ್ಜಿ ತುಂಬಾ ದೂರದ ಹಿಂದೆ ಉಳಿದು ಬಿಟ್ಟಿದ್ದಾರೆ.
‘ಸಾಗಿದಷ್ಟು ದಾರಿ ಕಣಮ್ಮಾ’ ಅಂತ ವಯಸ್ಸಾದ ಧ್ವನಿಯೊಂದು ಆರ್ತದಲ್ಲಿ ಮುಳುಗೆದ್ದು ಹೇಳಿತು. ‘ಭೂತವನ್ನು ಹೇಗೋ ಕಳೆದು ಬಂದಿದ್ದೇವೆ. ಭವಿಷ್ಯವನ್ನೂ ಹಾಗೆಯೇ ಕಳೆಯಲು ಸಾಧ್ಯವಿಲ್ಲ’ ಎನ್ನುವುದು ಆ ಧ್ವನಿಯ ಅರ್ಥ.
ಆ ಧ್ವನಿಯ ಹಿಂದೆ ನಡೆದೆ. ಅಲ್ಲೊಬ್ಬರು ಕಟ್ಟಿಗೆ ಹೊತ್ತು ತರುತ್ತಿದ್ದರು, ಮತ್ತೊಬ್ಬರು ಮನೆಯ ಮುಂದೆ ರಾಶಿ ಊದುಬತ್ತಿ ಹಚ್ಚಿ ತಲೆಗೆ ಕೈಕೊಟ್ಟು ಕೂತಿದ್ದರು, ಒಂದಿಬ್ಬರು ಆಚೀಚೆ ಓಡಾಡುತ್ತಿದ್ದರು.
ಆಹುತಿಗೆ ಎಲ್ಲವೂ ತಯಾರಿಯಾಗಿದ್ದಿತ್ತು..! ಮನಸ್ಸಿನ ಶವ ಸಂಸ್ಕಾರಕ್ಕೆ ಕೊಳ್ಳಿಗೆ ಬೆಂಕಿ ಹಚ್ಚುವುದೊಂದೇ ಬಾಕಿ..!
ಇಷ್ಟೋತ್ತಿಗಾಗಲೇ ರೈಲು ಅರ್ಧ ಊರು ತಲುಪಿತ್ತು.
"ಇಲ್ಲಿ ಬದುಕುವುದೆಂದರೇ, ಕೊಳೆತ ಮೇಲೆ ಹನಿಯುವ ಮಳೆ..!"
-ಶ್ರೀರಾಜ್ ವಕ್ವಾಡಿ


No comments:
Post a Comment