Sunday, May 31, 2020

ಶಿಕ್ಷಣ ಇಲಾಖೆಯ ಯಡವಟ್ಟುಗಳು ಮತ್ತು ವಿದ್ಯಾರ್ಥಿಗಳು..!



ಕೊರೋನಾ ವೈರಸ್ ಇಡೀ ವಿಶ್ವಕ್ಕೆ ವಿಶ್ವವನ್ನೇ ಹೈರಾಣಾಗಿಸಿದೆ. ಶಾಲಾ, ಕಾಲೇಜು ಆರಂಭ ಮತ್ತು ಬಾಕಿ ಉಳಿದಿರುವ ಪರೀಕ್ಷೆಗಳ ಬಗ್ಗೆ ಶಿಕ್ಷಣ ಇಲಾಖೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅಕ್ಷರಶಃ ವಿದ್ಯಾರ್ಥಿಗಳ, ಉಪನ್ಯಾಸಕರ ಪಾಲಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಈಗಾಗಲೇ ಶೈಕ್ಷಣಿಕ ಪರಿವರ್ತನೆಯ ಬಗ್ಗೆ ಸರ್ಕಾರದ ಮತ್ತು ಶಿಕ್ಷಣ ಇಲಾಖೆಯ ಗಮನಕ್ಕೆ ಶಿಕ್ಷಣ ತಜ್ಞರು ಗಮನಕ್ಕೆ ತಂದಿದ್ದಾರೆ. ಆದರೂ ಶಿಕ್ಷಣ ಇಲಾಖೆ ತೆಗೆದುಕೊಳ್ಳುತ್ತಿರುವ ಧಾವಂತದ ನಿರ್ಧಾರಗಳು ವಿದ್ಯಾರ್ಥಿಗಳಿಗೆ ಒತ್ತಡ ಅನ್ನಿಸುತ್ತಿರುವುದಂತೂ ಅಪ್ಪಟ ಸತ್ಯ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗಳು ಗೊಂದಲದಿಂದ ಕಾರ್ಯ ನಿರ್ವಹಿಸುತ್ತಿದೆ ಅಂತನ್ನಿಸುತ್ತಿದೆ. ಶೈಕ್ಷಣಿಕ ವಲಯದಲ್ಲಿ ಇದು ಅತಿ ಸಹಜವಾದ ಚರ್ಚೆಗೆ ಒಳಗಾಗಿದೆ ಮತ್ತು ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

80% ಪಾಠ ಆಗಿದ್ದು ಮಾಧ್ಯಮಗಳ ಕ್ಯಾಮೆರಾಕ್ಕೆ ಮಾತ್ರ..!
ಮಾರ್ಚ್ ತಿಂಗಳ ಅಂತ್ಯದಲ್ಲೇ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ ಅಶ್ವಥ್ ನಾರಾಯಣ ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಸಿಲೇಬಸ್ ಈಗಾಗಲೇ ಶೇಕಡಾ 80 ರಷ್ಟು ಮುಗಿದಿದೆ ಎಂದು ಹೇಳುತ್ತಿದ್ದರು. ಆದರೇ, ವಾಸ್ತವ ಬೇರೆಯೇ ಆಗಿತ್ತು. ರಾಜ್ಯದ ಉನ್ನತ ಶಿಕ್ಷಣ ಸಚಿವರು ನೀಡುತ್ತಿರುವ ಹೇಳಿಕೆಗಳು ಮಾಧ್ಯಮಗಳ ಕ್ಯಾಮೆರಾಗಳಿಗಾಗಿ ಇತ್ತು ಎನ್ನುವುದು ಆಮೇಲೆ ಬೆಳಕಿಗೆ ಬಂತು. ‘ಯೂನಿವರ್ಸಿಟಿಗಳ ಒತ್ತಡದಿಂದ ಕಾಲೇಜಿನ ಆಡಳಿತ ಸಂಸ್ಥೆಗಳು 80% ಪಾಠ ಮುಗಿದಿದೆ ಅಂತ ಸುಳ್ಳು ಹೇಳುತ್ತಿದೆ. ಇನ್ನೂ ಕೂಡ 50% ಸಿಲೇಬಸ್ ಕಂಪ್ಲೀಟ್ ಆಗಬೇಕಿದೆ’ ಎಂದು ಟಿವಿ ಮಾಧ್ಯಮಗಳಲ್ಲಿ ರಾಜ್ಯಾ ವ್ಯಾಪಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿರುವ ಉದಾಹರಣೆ ನಮ್ಮ ಮುಂದಿದೆ.

ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ
ವಿದ್ಯಾಭ್ಯಾಸದಲ್ಲಿ  ಆಸಕ್ತಿ ಹೊಂದಿದ  ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಹಲವಾರು ವಿದ್ಯಾರ್ಥಿಗಳು ಉಪನ್ಯಾಸಕರ ಸಲಹೆಗಳನ್ನು ವೇದವಾಕ್ಯದಂತೆ ಪರಿಪಾಲಿಸುವ ಮನಸ್ಥಿತಿ ಹೊಂದಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರನ್ನೇ ಅವಲಂಭಿಸಿ ಇರುತ್ತಾರೆ. ಪ್ರತ್ಯಕ್ಷ ಸಲಹೆ, ಮಾರ್ಗದರ್ಶನಕ್ಕಾಗಿ ಹೊಂದಿಕೊಂಡವರಾಗಿರುತ್ತಾರೆ. ಹಾಗಿರುವ ಸಂದರ್ಭದಲ್ಲಿ, ಶಿಕ್ಷಣ ಇಲಾಖೆ ದಿನಕ್ಕೊಂದು ಹೇಳಿಕೆ ನೀಡುವುದು, ಕಾಲೇಜು ಆರಂಭದ ಮತ್ತು ಪರೀಕ್ಷೆಯ ಸಮಯ ನಿಗದಿ ಮಾಡುವುದು, ಮತ್ತೆ ಮುಂದೆ ದೂಡುವುದು, ಮತ್ತೆ ಅದರಲ್ಲಿ ಗೊಂದಲ ಸೃಷ್ಟಿ ಮಾಡುವುದು ನಿರಂತರವಾದಾಗ ವಿದ್ಯಾರ್ಥಿಗಳು ವಿಚಲಿತರಾಗುವುದು ಸಹಜ.



ಆನ್‌ಲೈನ್ ತರಗತಿಗಳು ಹರಕೆ ಬಲಿ ಸಂದಾಯ..!
ಆನ್‌ಲೈನ್ ತರಗತಿಗಳಿಗೆ ಇಂಟರ್‌ನೆಟ್ ಸೇವೆಯ ಲಭ್ಯತೆಯ ನಿಖರತೆ ಇಲ್ಲ. ಸಿಲೇಬಸ್ ಕಂಪ್ಲೀಟ್ ಮಾಡುವ ತರಾತುರಿಯಲ್ಲಿ ಕೆಲವು ಉಪನ್ಯಾಸಕರು ಶಾಸ್ತçಕ್ಕೆ ಹರಕೆ ಬಲಿ ಸಂದಾಯ ಮಾಡುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ತಲುಪಿದೆ..? ಅರ್ಥವಾಗಿದೆಯಾ..? ಎಂಬ ಪ್ರಶ್ನೆಗಳು ಗಾಳಿಗೆ ತೂರಿ ಬಿಟ್ಟಂತಾಗಿದೆ. ಬಹುತೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೀಡಲು ಬಯಸಿದ ಯಾವುದೇ ಸೌಲಭ್ಯಗಳನ್ನು ತಲುಪಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಪ್ರಾಯೋಗಿಕ ತರಗತಿಗಳು ಮತ್ತು ರಿಸರ್ಚ್, ಪ್ರಾಜೆಕ್ಟ್ ವರ್ಕ್ಗಳ ಸ್ಥಿತಿ..?
ವಿಜ್ಞಾನ ವಿಷಯಗಳ ಪ್ರಾಯೋಗಿಕ ತರಗತಿಗಳು ಕೆಲವಂಶ ನಿಂತುಹೋಗಿವೆ. ಶಿಕ್ಷಣ ಇಲಾಖೆ ಆನ್‌ಲೈನ್ ಅಲ್ಲಿ ಮಾಡಿ ಪೂರೈಸಿ ಎನ್ನುತ್ತಿದೆ. ತರಗತಿ ಕೋಣೆಯಲ್ಲಿ ಕುಳಿತು ಪಾಠ ಕೇಳುವಾಗಲೇ ಅರ್ಥೈಸಿಕೊಳ್ಳಲಾಗದ ವಿದ್ಯಾರ್ಥಿಗಳ ಸ್ಥಿತಿ ಏನ..?
ಇನ್ನು, ಅಂತಿಮ ವರ್ಷದ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಎಲ್ಲಾ ವಿಷಯಗಳ ವಿದ್ಯಾರ್ಥಿಗಳಿಗೆ ರಿಸರ್ಚ್, ಪ್ರಾಜೆಕ್ಟ್ ವರ್ಕ್ಗಳು ಅರ್ಧರ್ಧಕ್ಕೆ ನಿಂತು ಹೋಗಿವೆ. ಅವುಗಳ ಸ್ಥಿತಿಗತಿಗಳು ಏನು..? ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಶಿಕ್ಷಣ ಇಲಾಖೆಗೆ ಏನು ಸಾಧ್ಯ..?
ಅಂತಿಮ ಘಟ್ಟದಲ್ಲಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಭವಿಷ್ಯವನ್ನು ಖಾಲಿ ಖಾಲಿಯಾಗಿ ಕಾಣಿಸುವಂತೆ ಮಾಡಿದೆ ಎನ್ನುವುದು ಪದಶಃ ಹೌದು. ಈ ಹಂತದಲ್ಲಿರುವ ಎಷ್ಟೋ ವಿದ್ಯಾರ್ಥಿಗಳು ಈಗ ಉದ್ಯೋಗ ಕಂಡುಕೊಳ್ಳುವುದಕ್ಕೆ ತುದಿಗಾಲಲ್ಲಿ ಇದ್ದಾರೆ. ಏಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಜಾಬ್ ವೇಕನ್ಸಿಗಳನ್ನು ನೋಡಿಕೊಂಡು ಭವಿಷ್ಯ ಕಂಡುಕೊಳ್ಳುತ್ತಿದ್ದರು. ಆದರೇ, ಈ ಕೊರೋನಾ ವೈರಸ್‌ನ ಕಾರಣವಾಗಿ ಎಲ್ಲವೂ ಅಡಿಮೇಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇನ್ನೂ ಸಂಪೂರ್ಣವಾಗಿ ಲಾಕ್ಡೌನ್ ತೆರವು ಮಾಡುವುದಕ್ಕೆ ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿ, ದಿನೇ ದಿನೇ ಕೊರೋನಾ ಸೋಂಕು ದೃಢಗೊಂಡವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಅತಂತ್ರ ಸ್ಥಿತಿಯಲ್ಲಿಯೂ ಶಿಕ್ಷಣ ಇಲಾಖೆ, ಬರುವ ತಿಂಗಳಲ್ಲಿ ಪರೀಕ್ಷೆ ಮಾಡುತ್ತೇವೆ ಅಂತ ಹೇಳುತ್ತಾ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿರುವುದು ಕೊಲೆ ಮಾಡಿದಷ್ಟೇ ಅಪರಾಧ ಎನ್ನುವುದರಲ್ಲಿ ಏನೂ ತಪ್ಪಿಲ್ಲ.

ಒಂದೇ ಆ ಎಲ್ಲಾ ವಿದ್ಯಾರ್ಥಿಗಳ ಈ ಹಿಂದಿನ ಪರೀಕ್ಷೆಗಳಲ್ಲಿನ ಕಾರ್ಯಕ್ಷಮತೆ ನೋಡಿ ಉತ್ತೇಜಿಸಬಹುದು. ಅಥವಾ ಒಂದು ವೇಳೆ ಪರೀಕ್ಷೆ ನಡೆಸಲೇ ಬೇಕು ಅಂತಾದರೇ ಪರೀಕ್ಷೆಗಳ ಮಾದರಿಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ. ಅಥವಾ ಓಪನ್ ಬುಕ್ ಎಕ್ಸಾಂ ಮಾಡುವುದು ಉತ್ತಮ. ಇದು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಏನೋ ಒಂದು ರೀತಿಯಲ್ಲಿ ಉತ್ತೇಜಿಸಿದಂತಾಗುತ್ತದೆ.



 ಸದ್ಯಕ್ಕೆ ಜುಲೈ ತನಕ ಶಾಲಾ ಕಾಲೇಜು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಟ್ಟಿನಲ್ಲಿ ಭವಿಷ್ಯದ ಒತ್ತಡದಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಇಲಾಖೆ ಇನ್ನು ಮುಂದಾದರೂ ಯಡವಟ್ಟು ಸೃಷ್ಟಿಸದೇ, ಸಮಾಧಾನ ಉಂಟು ಮಾಡುವ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ.
-ಶ್ರೀರಾಜ್ ವಕ್ವಾಡಿ  

No comments:

Post a Comment