ನಾನು, ಸುಮ್ಮನೆ ನೋಡಿ
ಕನಿಕರ ಪಡುತ್ತಿದ್ದೇನಷ್ಟೇ
ಅವರು ಮೈಲು ಮೈಲು
ನಡೆದಿದ್ದಾರೆ...
ದೂರ ದೂರ ದೂರ
ನೆಲದಲ್ಲೇ ನೆಲೆ ಕಳೆದುಕೊಂಡು
ಜಗದ ಕಣ್ಣಿಗೆ ಬೀಳದಂತೆ
ಬಿಸಿಲಾಯಿತೆಂದು ಕೂರದೆ,
ಇರುಳಾಯಿತೆಂದು ವಿರಮಿಸದೆ
ಗುಳೇ ಹೋಗುತ್ತಿದ್ದಾರೆ..!
ಬೇರೆ ಎಲ್ಲಾ ಏತಕೆ...?
ಸುಟ್ಟ ಮೈ, ಹರಿದ ರಕ್ತ ಸಾಲದೆ..!?
ಇವರ ನೆತ್ತರು ಸುರಿಸಿ
ಮಹಲು ಕಟ್ಟಿಸಿಕೊಂಡವರೆಲ್ಲಾ
ಹವಾನಿಯಂತ್ರಿತ ಕೋಣೆಯೊಳಗೆ
ವಿರಾಜಮಾನರಾಗಿದ್ದಾರೆ.
ಇವರಿನ್ನೂ
ವಿಚಿತ್ರ ಮೌನದ ದಾರಿಯಲ್ಲಿ
ಬೆಂದ ಕಾಯವನ್ನು ಕಥಿಸುತ್ತಿದ್ದಾರೆ...!
ಬದುಕೆಂದರೇ, ಕೊನೆ
ಬರೆಯುವ ಕಾವ್ಯ
ತನುವೆಂದರೇ, ಕೃಶವಾಗಿ
ಕರಗುವ ಭಾವ್ಯ..!
ಏನೂ ಇಲ್ಲವಾಗಿ
ಹೋದದ್ದಕ್ಕೆ
ಎಲ್ಲವನ್ನೂ ಸೃಷ್ಟಿಸುವ
ತಾಕತ್ತಿದೆ..!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)

Nice
ReplyDeleteThank You
Delete