Friday, May 29, 2020

‘ಹೆಸರು’ ಎಲ್ಲವನ್ನೂ ನಿರ್ಧರಿಸುವುದೆಂದರೇ...



 ಸಾಧನೆಗಿಲ್ಲದ ಮಾನ್ಯತೆ ಇಂದು, ಒಂದು ಹೆಸರು, ಸರ‍್ನೇಮ್, ಜಾತಿ, ಧರ್ಮ ತಂದುಕೊಡುತ್ತದೆ. ಅದೇ ಹೆಸರು, ಸರ‍್ನೇಮ್, ಜಾತಿ, ಧರ್ಮ ಎನ್ನುವುದು ಆ ವ್ಯಕ್ತಿಯನ್ನು ವಿನಾಕಾರಣ ದ್ವೇಷಿಸುವಂತೆ ಅಥವಾ ದೂರವಿಡುವಂತೆ ಮಾಡುತ್ತದೆ ಅಂದರೇ ಅದಕ್ಕಿಂತ ದೊಡ್ಡ ದುರಂತ ಈ ಪ್ರಪಂಚದಲ್ಲಿಲ್ಲ. ಅದಕ್ಕಿಂತ ಹೆಚ್ಚು ಈ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಜಾತಿಗೆ, ಧರ್ಮಕ್ಕೆ ಸೇರಿದವರಿಗೆ, ಇವರು ಈ ಪಕ್ಷಕ್ಕೆ ಸೇರಿದವರು, ಈ ಸಿದ್ಧಾಂತಕ್ಕೆ ಸೇರಿದವರು ಅಂತ ಹಣೆಗೆ ಲೇಬಲ್ ಅಂಟಿಸುವ ಮನೋಧೋರಣೆ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾಗಿದೆ ಎನ್ನುವುದು ಇನ್ನೂ ಭಯ ಹುಟ್ಟಿಸುತ್ತದೆ. ದ್ವೇಷಕ್ಕೆ ಜಾತಿ, ಧರ್ಮಗಳು ಈ ಸಮಾಜದಲ್ಲಿ ಹೀಗೊಂದು ಮುಖ ಮಾಡಿಕೊಡುತ್ತದೆ ಅಂತ ನಾನಂತೂ ಅಂದುಕೊಂಡಿರಲಿಲ್ಲ.

ಒಂದು ಹೆಸರು, ಜಾತಿ, ಧರ್ಮ, ಸರ‍್ನೇಮ್ ಒಬ್ಬ ವ್ಯಕ್ತಿಗೆ ಕಳಂಕ ಹುಟ್ಟಿಸುತ್ತದೆ ಅಂತಾದರೇ, ಅವುಗಳಿದ್ದು ಏನಾಗಬೇಕಿದೆ..? ಒಂದು ಹೆಸರು, ಅದು ಇನ್ನೊಬ್ಬನಿಗೆ ಕತ್ತಿ, ಚೂರಿ, ಪಿಸ್ತೂಲು, ತಲ್ವಾರು ಹಿಡಿಯುವಂತೆ ಪ್ರೇರಣೆ ನೀಡುತ್ತದೆ ಅಂತಾದರೇ, ಈ ಸಮಾಜ ಎಂತಹ ಸ್ಥಿತಿಯಲ್ಲಿದೆ ಎನ್ನುವುದನ್ನು ನಾವೊಂದಿಷ್ಟು ಚಿಂತೆ ಮಾಡಬೇಕಿದೆ.

ಕವಿಗಳು, ಸಂತರು, ಜ್ಞಾನಿಗಳು, ವಿದ್ವಾಂಸರೆಲ್ಲರೂ ‘ಮಾನವ ಧರ್ಮ’ವೇ ಶ್ರೇಷ್ಟವೆಂದು ಹೇಳಿಯಾಯಿತು. ಮಾನವನ ಉದ್ಧಾರಕ್ಕೆ, ವಿಕಾಸಕ್ಕೆ ಧರ್ಮ, ಜಾತಿಯ ಚೌಕಟ್ಟು ಬೇಕು. ಆದರೇ, ಅದು ರಾಜಕೀಯ, ಸಿದ್ಧಾಂತಗಳಲ್ಲಿ ನಲುಗಿ ಹೋಗಿ ದ್ವೇಷ ಬೇಳೆಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತಿರುವುದು ವಿಷಾದನೀಯ. ಈಗಿನ ಸಮಾಜ ಜಾತಿ, ಧರ್ಮಗಳು ಹಿಂಸಾಚಾರಕ್ಕೆ ಇಳಿದು ಮಾನವ ಧರ್ಮವನ್ನು ಹಾಳು ಮಾಡಿ ಮಾನವೀಯತೆಯನ್ನೇ ಧಿಕ್ಕರಿಸುವ ಮಟ್ಟಿಗೆ ಬಂದಿದೆ ಎಂದರೂ ತಪ್ಪಿಲ್ಲ.

ಜಾತಿ, ಧರ್ಮ ಕರ್ಮಗಳ ಪಂಥವಾದಗಳು, ಸಿದ್ಧಾಂತವಾದಗಳು ಸಾಮಾಜಿಕ ಸಮಸ್ಥಿತಿಯನ್ನು ಕಳೆದು ಹಾಕುವುದರಲ್ಲಿ ಪ್ರಧಾನ ಕಾರ್ಯ ನಿರ್ವಹಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮದ ಸಾರವನ್ನು ಅಳವಡಿಸಿಕೊಳ್ಳುವುದು ಧರ್ಮ. ಸತ್ಯ, ಅಹಿಂಸೆ, ನೀತಿ, ನ್ಯಾಯ ಧಾರಣೆ ಮಾಡಿಕೊಳ್ಳುವುದು ಎಲ್ಲಾ ಧರ್ಮಗಳ ಸಾರ. ನೀನು ಬದುಕು, ಎಲ್ಲರನ್ನೂ ಬದುಕಿಸು ಎನ್ನುವುದೇ ನಿಜ ಧರ್ಮ ಹೊರತು, ಜಾತಿ, ಹೆಸರುಗಳ ಆಧಾರದಲ್ಲಿ ಆತನನ್ನು ನಿರ್ಧರಿಸುವುದು ಧರ್ಮವಲ್ಲ. ಬದುಕುವುದೇ ಒಂದು ಧ್ಯಾನ. ಜೀವಿಸುವುದು, ಜೀವನ ಶೈಲಿ ಅದರ ಒಂದು ಮಗ್ಗಲು.

ಒಂದು ಜಾತಿಯ ವಿಚಾರದಿಂದ, ಹೆಸರಿನಿಂದ, ಧರ್ಮದ ಸಿದ್ಧಾಂತಗಳಿಂದ ಜನ ಗಲಭೆ ಎಬ್ಬಿಸುತ್ತಾರೆಂದರೇ, ಇನ್ನು ಹೆಚ್ಚು ಕಾಲ ಈ ವ್ಯವಸ್ಥೆಗೆ ಉಳಿಗಾಲವಿಲ್ಲ ಎನ್ನುವುದು ಸ್ಪಷ್ಟ. ಮಹಾತ್ಮರ ಧರ್ಮದ ವಿವರಣೆಯನ್ನು ಕಸದ ತೊಟ್ಟಿಗೆ ತಳ್ಳಿ ಧರ್ಮಾಂಧತೆಯನ್ನು ಬೆಳೆಸುವುದೇ ಕೆಲವರ ಕಾಯಕವಾಗಿ ಹೋಗಿದೆ. ರಾಜಕೀಯ ಸ್ವಾರ್ಥದ ದುರುದ್ದೇಶಕ್ಕಾಗಿ ಈ ಜಾತಿ, ಧರ್ಮಗಳು ಗಲಭೆ, ಕೋಮು ದಳ್ಳುರಿಯ ಹೆಸರಿನಲ್ಲಿ ಬೆಂದು ಹೋಗುತ್ತಿವೆ. ಆ ಕಳಂಕವನ್ನೇ ಅಪ್ಪಿಕೊಂಡು ಇಂದು ಮಾನವ ಧರ್ಮವನ್ನು ಬಿಟ್ಟು ಸೃಷ್ಟಿಸಿಕೊಂಡ ಯಾವುದೋ ಜಾತಿಯಲ್ಲಿ, ಧರ್ಮದಲ್ಲಿ ಹುಟ್ಟುವ ಮಗುವೊಂದು ಬೆಳೆಯುತ್ತದೆ. ಒಂದು ಮಗು ತನಗಿಟ್ಟ ಹೆಸರಿನಿಂದ, ಆ ಹೆಸರಿನ ಜೊತೆಗಿರುವ ಜಾತಿಯಿಂದ, ಆ ಜಾತಿ ಗುರುತಿಸಲ್ಪಡುವ ಧರ್ಮದಿಂದ ಈ ಸಮಾಜದಲ್ಲಿ ಇಂದು ಭಯದಿಂದ ಬದುಕುತ್ತದೆ ಅಂತಾದರೇ, ಸಮಾಜ ಎಂತಹ ದುಸ್ಥಿತಿಯಲ್ಲಿದೆ ಎನ್ನುವುದನ್ನು ನೀವೆ ಊಹಿಸಿಕೊಳ್ಳಿ.

ಒಂದು ಜಾತಿ ಅಥವಾ ಧರ್ಮ ಪ್ರೀತಿಸಿದವರನ್ನು ದೂರ ಮಾಡುವುದಾದರೇ, ಒಂದು ಜಾತಿ ಅಥವಾ ಧರ್ಮ ಇಬ್ಬರ ನಡುವಿನ ಸ್ನೇಹಕ್ಕೆ ಧಕ್ಕೆ ಉಂಟು ಮಾಡುವುದಾದರೇ, ಒಂದು ಜಾತಿ ಅಥವಾ ಧರ್ಮ ಸಮಾಜದೊಳಗೆ ವಿಷಮ ಸ್ಥಿತಿ ಉಂಟು ಮಾಡುವುದಾದರೇ, ಆ ಜಾತಿ ಧರ್ಮ ಯಾಕೆ ಬೇಕು..? ಅಥವಾ ಇದು ನಿಜಕ್ಕೂ ನಾವಿವತ್ತು ಪಾಲಿಸುತ್ತಿರುವ ಜಾತಿ, ಧರ್ಮಗಳೇ ಹೇಳಿಕೊಟ್ಟಿದ್ದಾ..? ಅಥವಾ ಬದಲಾಗಬಾರದ ರೀತಿಯಲ್ಲಿ ಬದಲಾದ ನಮ್ಮ ಮನಸ್ಥಿತಿಯೋ..? ಉಳಿಯಬೇಕಾದ ಸಮಾಜ ಇಂತಹ ಗಂಭೀರವಾದ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ.

ಹೆಸರೇ ಎಲ್ಲವನ್ನೂ ನಿರ್ಧರಿಸುವುದಾದರೇ...

ನಾಳೆ ಅಮ್ಮನ ಬಸಿರಿನಿಂದ ಹೊರಬರುವ ಮಗುವಿಗೆ ಆಯುಧಗಳ ಮೇಲೆ ನಿಂತಿರುವ ಜಾತಿ, ಧರ್ಮಗಳ ನೆರಳು ಬೀಳದಿರಲಿ. ಆ ಮಗು, ತನಗಿಟ್ಟ ಹೆಸರು ಮತ್ತು ಸರ‍್ನೇಮ್, ಜಾತಿಯ ಭಯವಿಲ್ಲದೆ ಬಾಳಿ ಬದುಕಲಿ.
-ಶ್ರೀರಾಜ್ ವಕ್ವಾಡಿ

4 comments: