ಏಕಪಕ್ಷೀಯ ಡಬಲ್ ಎಂಜಿನ್ ಗಳು ಎಷ್ಟು ಗೆದ್ದಿವೆ ? | ನಿಜಕ್ಕೂ ಡಬಲ್ ಎಂಜಿನ್ ಅಂದ್ರೇನು ?
ʼಡಬಲ್ ಇಂಜಿನ್ ಸರ್ಕಾರ್ʼ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸೃಷ್ಟಿಸಿದ ಪದ. ಕೇಸರಿ ಪಕ್ಷವು ರಾಜ್ಯ ಮತ್ತು ಕೇಂದ್ರದಲ್ಲಿಯೂ ಆಡಳಿತ ಹೊಂದಿದ್ದರೆ ಅಭಿವೃದ್ಧಿಗೆ ಟರ್ಬೋಚಾರ್ಜ್ ಆಗುತ್ತದೆ ಎಂಬ ಕಲ್ಪನೆಯಲ್ಲಿ ಮತದಾರರ ತಲೆಗೆ ತುಂಬಿಸಿದ ಯೋಜಿತ ಅಂಶವಿದು.
ಹಾಗಾದರೇ, ಇದು ಎಷ್ಟು ನಿಜ? ದೇಶದ ಈಶಾನ್ಯ ರಾಜ್ಯ ಮಣಿಪುರ ಸಂಘರ್ಷದ ಹೊಗೆಯಲ್ಲಿ ಮುಳುಗುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಆಡಳಿತ ಕಾಣುತ್ತಿರುವ ಒಂದು ರಾಜ್ಯದ ಕಟು ಉದಾಹರಣೆ. ಕಳೆದ ಹಲವು ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಸ್ತುತ ಹಿಂಸಾಚಾರದ ಅಂತರ್ಯುದ್ಧದ ಸ್ಥಿತಿಯಲ್ಲಿದೆ. ಹಲವು ಕಾರಣಗಳಿಂದ ಮಣಿಪುರ ಗುಡ್ಡಗಾಡಿನ ಸಮುದಾಯಗಳಲ್ಲಿ ಅಸಮಾಧಾನ ಕುದಿಯೊಡೆದಿದೆ. ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ವಿಚಾರಕ್ಕೆ ಆರಂಭವಾದ ವಿರೋಧ, ಹಿಂಸಾಚಾರ ಇಡೀ ದೇಶ ಮಣಿಪುರದ ವಾಸ್ತವ ಸ್ಥಿತಿಯತ್ತ ನೋಡುವ ಹಾಗೆ ಮಾಡಿದೆ. ಮಣಿಪುರದ ಎಸ್ ಟಿ ಸಮುದಾಯಗಳು ಈ ಮೈತಿ ಸಮುದಾಯವನ್ನು ಮೊದಲಿನಿಂದಲೂ ಎಸ್ ಟಿ ಸಮುದಾಯಗಳಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸುತ್ತಾ ಬಂದಿವೆ. ಮಣಿಪುರದಲ್ಲಿ ಹೆಚ್ಚಿನ ಸಂಖೈಯಲ್ಲಿರುವ ಮೈತಿ ಸಮುದಾಯ ಎಸ್ ಟಿ ಪಂಗಡಕ್ಕೆ ಸೇರ್ಪಡೆಯಾದರೇ ಸರ್ಕಾರದ ಅನೂಕೂಲಗಳೆಲ್ಲಾ ಮೈತಿ ಸಮುದಾಯದ ಪಾಲಾಗಲಿವೆ ಎಂಬ ಆತಂಕವೇ ಈ ಹಿಂಸಾಚಾರಕ್ಕೆ ಕಾರಣ. ಮಣಿಪುರದ ೬೦ ವಿಧಾನಸಭಾ ಕ್ಷೇತ್ರಗಳ ಪೈಕಿ ೪೦ ಕ್ಷೇತ್ರಗಳು ಮೈತಿ ಸಮುದಾಯದ ಪ್ರಾಬಲ್ಯದಲ್ಲಿವೆ. ಹೀಗೆ ರಾಜಕೀಯ, ಸಾಮಾಜಿಕವಾಗಿ, ಆರ್ಥಿಕವಾಗಿ ಮೈತಿ ಸಮುದಾಯ ಮತ್ತಷ್ಟು ಅನುಕೂಲಗಳನ್ನು ಪಡೆಯುವ ಆತಂಕದಲ್ಲಿ ಈ ಹಿಂಸಾಚಾರ ತಾರರಕ್ಕೆ ಏರಿದೆ. ರಾಜ್ಯ ಸರ್ಕಾರವು ತನ್ನ ಪ್ರಮುಖ ಕೆಲಸವಾದ ಶಾಂತಿಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಮೋದಿ ಹೇಳುವ ಡಬಲ್ ಎಂಜಿನ್ ಸರ್ಕಾರ ಇಲ್ಲಿ ಕೆಲಸಕ್ಕೆ ಬಾರದಂತಾಗಿದೆ.
ರಾಷ್ಟ್ರ ರಾಜಧಾನಿಯಲ್ಲೇ ಬಿಜೆಪಿಯ ಮಹತ್ವದ ಕಲ್ಪನೆ ಈ ʼಡಬಲ್ ಇಂಜಿನ್ ಸರ್ಕಾರ್ʼ ಇಲ್ಲ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು ಗೊತ್ತೇ ಇರುವ ವಿಷಯ. ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿಗಳನ್ನು ರಾಜಧಾನಿಯಲ್ಲಿಯೇ ಕಟ್ಟಿ ಹಾಕಿದ ಕೀರ್ತಿ ಕೇಜ್ರಿವಾಲ್ ಗೆ ಸಲ್ಲುತ್ತದೆ. ಕೇಜ್ರಿವಾಲ್ ಮೇಲೆ ಬಿಜೆಪಿಗೆ ದೊಡ್ಡ ಕಣ್ಣಿದೆ. ಕೇಜ್ರಿವಾಲ್ ವಿರುದ್ಧ ದೆಹಲಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿಸುವಂತೆ ಕೈಗೊಂಡ ಕಾರ್ಯತಂತ್ರಗಳೆಲ್ಲಾ ವಿಫಲವಾಗಿವೆ. ಆಮ್ ಆದ್ಮಿ ಕೊಟ್ಟ ಯೋಜನೆಗೆ ದೆಹಲಿಯ ಜನ ಒಪ್ಪಿ ಮತ್ತೆ ಕೇಜ್ರಿವಾಲ್ ಅವರನ್ನೇ ಆಯ್ಕೆ ಮಾಡಿದ್ದು ಗೊತ್ತಿರುವ ವಿಷಯ. ಡಬಲ್ ಎಂಜಿನ್ ಸರ್ಕಾರ ಇರುವ ಎಲ್ಲಾ ಕಡೆ ಇಂತಹ ಜನಸ್ನೇಹಿ ಸರ್ಕಾರವಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗಿ ಹೇಳಲು ಹೊರಟಿರುವ ವಿಷಯ. ಕೇಂದ್ರದಲ್ಲೊಂದು ರಾಜ್ಯದಲ್ಲೊಂದು ಸರ್ಕಾರವಿದ್ದೂ ಅಲ್ಲಿನ ಜನ ಒಂದು ಪಕ್ಷಕ್ಕೆ ನಿರಂತರವಾಗಿ ಆಯ್ಕೆ ಮಾಡಿ ಅಧಿಕಾರದಲ್ಲಿ ಕೂರಿಸುತ್ತಿದ್ದಾರೆ ಎಂದರೇ ಅದಕ್ಕೆ ಉತ್ತಮ ಉದಾಹರಣೆ ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರ. ಮಣಿಪುರಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಕೇಂದ್ರಲ್ಲಿಯೂ ಬಿಜೆಪಿ. ಮಣಿಪುರದಲ್ಲಿ ಮೋದಿ ಹೇಳುವ ಡಬಲ್ ಎಂಜಿನ್ ನಿಷ್ಕ್ರಿಯಗೊಂಡಿದೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಕಥೆ ಏನಾಗಿದೆ ಎನ್ನುವುದು ಗೊತ್ತಿರುವ ವಿಷಯ. ಒಟ್ಟಿನಲ್ಲಿ ಹಿಂದಿನಿಂದ ಈವರೆಗೆ ಈ ಡಬಲ್ ಎಂಜಿನ್ ಸರ್ಕಾರದ ಕಲ್ಪನೆ ತನ್ನ ಇಮೇಜ್ ಕಳೆದುಕೊಳ್ಳುತ್ತಲೆ ಬಂದಿದೆ.
ಸ್ಕ್ರಾಲ್ ಡಾಟ್ ಇನ್ ಸುದ್ದಿ ಸಂಸ್ಥೆಯ ವರದಿ ಹೇಳುವ ಪ್ರಕಾರ ಕೇವಲ ಸದ್ಯ ೪೫ ಶೇಕಡಾದಷ್ಟು ಭಾರತೀಯರು ಡಬಲ್ ಇಂಜಿನ್ ಸರ್ಕಾರದ ಆಳ್ವಿಕೆಯ ಅಡಿಯಲ್ಲಿದ್ದಾರೆ. ಕೆಲವೆಡೆ ಬಿಜೆಪಿ ರಾಜ್ಯ ಸರ್ಕಾರಗಳು ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣದ ಮೂಲಕ ಅಧಿಕ್ಕಾರಕ್ಕೇರಿವೆ. ಇಂತಹ ರಾಜ್ಯಗಳನ್ನು ಬಿಟ್ಟು ನೋಡುವುದಾದರೇ, ಡಬಲ್ ಇಂಜಿನ್ ಸರ್ಕಾರ್ ಆಡಳಿತದಲ್ಲಿ ಇರಲು ಮತ ಚಲಾಯಿಸಿದ ಭಾರತೀಯರ ಸಂಖ್ಯೆ ಕೇವಲ ೩೦ ಶೇಕಡಾ ಮಂದಿ ಅಷ್ಟೇ ಎನ್ನವುದು ಕಟು ಸತ್ಯ.
ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಡಬಲ್ ಇಂಜಿನ್ ಸರ್ಕಾರಗಳು ವಾಸ್ತವವಾಗಿ ಪ್ರಬಲ ರಾಜಕೀಯ ಮಾದರಿಯಾಗಿತ್ತು. ೧೯೪೭ರಲ್ಲಿ ಬ್ರಿಟಿಷ್ ಸರ್ಕಾರ ಅಧಿಕಾರವನ್ನು ಹಸ್ತಾಂತರಿಸುವ ಸಮಯದಲ್ಲಿ, ಎಲ್ಲಾ ಪ್ರಾಂತ್ಯಗಳನ್ನು ಆಗ ರಾಜ್ಯಗಳು ಎಂದು ಕರೆಯಲಾಗುತ್ತಿತ್ತು. ಕೇಂದ್ರದಲ್ಲಿಯೂ ಸಹ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ರಾಜ್ಯದಲ್ಲಿಯೂ ಆಡಳಿತ ನಡೆಸಿತ್ತು. ಆದ್ದರಿಂದ ನೆಹರೂವಿಯನ್ ಅವಧಿಯು ʼಡಬಲ್-ಎಂಜಿನ್ ಸರ್ಕಾರ್ʼ ದ ಉಚ್ಛ್ರಾಯ ಸಮಯ. ಅದು ಪ್ರಾಬಲ್ಯ ಹೊಂದಿರುವ ಸರ್ಕಾರವಾಗಿದ್ದರಿಂದ ಅದಕ್ಕೆ ಹೆಸರೇ ಅಗತ್ಯವಿರಲಿಲ್ಲ. ಅದು ಸರಳ ಭಾರತೀಯ ರಾಜಕೀಯಕ್ಕೆ ಮಾದರಿಯಾಗಿತ್ತು. ವಿಪರ್ಯಾಸವೆಂದರೇ. ಈ ಡಬಲ್ ಎಂಜಿನ್ ಕೂಡ ಕೆಲವು ರಾಜ್ಯಗಳಲ್ಲಿ ತನ್ನ ವರ್ಚಸ್ಸು ಕಳೆದುಕೊಂಡಿತ್ತು.
ಪಶ್ಚಿಮ ಬಂಗಾಳದ ಪ್ರಕರಣವನ್ನೇ ತೆಗೆದುಕೊಳ್ಳಿ. ಬಂಗಾಳವು ೧೯೪೭ರವರೆಗೆ ಮುಸ್ಲಿಂ ಲೀಗ್ ಸರ್ಕಾರವನ್ನು ಹೊಂದಿದ್ದರೆ, ದೇಶ ವಿಭಜನೆಯ ನಂತರ, ಹೊಸದಾಗಿ ರಚಿಸಲಾದ ಪ್ರಾಂತ್ಯದ ಪಶ್ಚಿಮ ಅರ್ಧದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಂಡಿತು. ಈ ಹಂತದಿಂದ ನೆಹರೂ ಅವರ ಸಾವಿನವರೆಗೂ ರಾಜ್ಯವನ್ನು ಕಾಂಗ್ರೆಸ್ ಆಡಳಿತ ನಡೆಸಿತು. ೧೯೭೧ ಅಗೊನಿ ಆಫ್ ವೆಸ್ಟ್ ಬೆಂಗಾಲ್ ಎಂಬ ಪುಸ್ತಕದಲ್ಲಿ ೧೯೪೭ರಿಂದ ದೇಶದ ಆರ್ಥಿಕ ಕುಸಿತದ ಸಂಪೂರ್ಣ ಪರಿಶೀಲನೆಯಲ್ಲಿ, ಆನಂದ ಬಜಾರ್ ಪತ್ರಿಕೆಯ ಪತ್ರಕರ್ತ, ರಣಜಿತ್ ರಾಯ್, ೧೯೪೭ರಿಂದ ೧೯೬೧ರ ಅವಧಿಯಲ್ಲಿ ಪಶ್ಚಿಮ ಬಂಗಾಳದ ಒಟ್ಟು ಕೈಗಾರಿಕಾ ಉತ್ಪಾದನೆಯು ಭಾರತದ ೨೭ಶೇಕಡಾದಿಂದ ೧೭ಶೇಕಡಾಕ್ಕೆ ಹೇಗೆ ಕುಸಿಯಿತು ಎಂಬುದನ್ನು ವಿವರಿಸಿದ್ದಾರೆ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ರಾಜ್ಯದ ಹೆಚ್ಚಿನ ಕೈಗಾರಿಕಾ ಅವನತಿಯು ಕಾಂಗ್ರೆಸ್ ನ "ಡಬಲ್-ಎಂಜಿನ್ ಸರ್ಕಾರ್" ಅವಧಿಯಲ್ಲಿ ನಡೆಯಿತು ಎನ್ನುವುದು ಇಲ್ಲಿ ಗಮನಾರ್ಹ. ಕೈಗಾರಿಕಾ ಉತ್ಪಾದನಾ ಕುಸಿತವು ಅದರ ಪ್ರಾಥಮಿಕ ಕಾರಣಕ್ಕಿಂತ ಹೆಚ್ಚಾಗಿ ಕಾರ್ಮಿಕರ ಅಶಾಂತಿಗೆ ಕಾರಣವಾಯಿತು. ಮತ್ತೆ ಕಾಂಗ್ರೆಸ್ ಪತನ. ರಾಜ್ಯದಲ್ಲಿ ಎಡಪಕ್ಷಗಳ ಉದಯಕ್ಕೆ ಕಾಂಗ್ರೆಸ್ ಪತನ ಕಾರಣವಾಯಿತು. ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಮೋದಿ ನೇತೃತ್ವದ ಸರ್ಕಾರ ಇಲ್ಲಿ ಡಬಲ್ ಎಂಜಿನ್ ಸರ್ಕಾರದ ಕಲ್ಪನೆಯನ್ನು ಸ್ಥಾಪಿಸುವ ಪ್ರಯತ್ನದ ಹೊರತಾಗಿಯೂ ಅಲ್ಲಿನ ಜನ ಪ್ರಾದೇಶಿಕತೆಗೆ ಒತ್ತು ನೀಡಿದರು.
ವಿಪರ್ಯಾಸವೆಂದರೆ, ಈ ಸಮಯದಲ್ಲಿ ಕೇಂದ್ರ ನೀತಿಗಳ ಮುಖ್ಯ ಫಲಾನುಭವಿಗಳಲ್ಲಿ ಒಂದಾದ ತಮಿಳುನಾಡು, ೧೯೬೦ರ ಹೊತ್ತಿಗೆ ಹಿಂದಿ ಹೇರಿಕೆಯ ವಿರುದ್ಧ ಹಿಂಸಾತ್ಮಕ ಆಂದೋಲನಗಳೊಂದಿಗೆ ರಾಜ್ಯವು ಎದ್ದು ನಿಂತಿತ್ತು. ೧೯೬೭ರ ವೇಳೆಗೆ ಇಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಿಲ್ಲ. ಮಾತ್ರವಲ್ಲ, ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತಿವೆ. ಇದು ಕೂಡ ಡಬಲ್ ಎಂಜಿನ್ ಸರ್ಕಾರ ತನ್ನ ವರ್ಚಸ್ಸು ಕಳೆದುಕೊಂಡಿದ್ದಕ್ಕೊಂದು ಉದಾಹರಣೆ. ಇಡೀ ತಮಿಳುನಾಡಿನ ರಾಜಕೀಯವನ್ನು ಪ್ರಾದೇಶಿಕ ಪಕ್ಷಗಳು ಆಕ್ರಮಿಸಿಕೊಂಡವು. ಆದಾಗ್ಯೂ, ತಮಿಳುನಾಡು ಸ್ವಾತಂತ್ರ್ಯದ ಸಮಯದಲ್ಲಿ ಹಿಂದುಳಿದಿದ್ದರೂ ಸಹ ಇಂದು ಭಾರತದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ. ಇಂದು ತಮಿಳುನಾಡು ಉತ್ತರ ಪ್ರದೇಶಕ್ಕಿಂತ ದೊಡ್ಡ ಆರ್ಥಿಕತೆಯನ್ನು ಹೊಂದಿದೆ ಎನ್ನುವುದು ಗಮನಾರ್ಹ.
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷವನ್ನು ಹೊಂದುವುದು, ಸಿದ್ಧಾಂತದಲ್ಲಿ ಅರ್ಥಾಥ್ ʼಡಬಲ್ ಎಂಜಿನ್ ಸರ್ಕಾರ್ʼ ಬಿಜೆಪಿ ಹೇಳಿಕೊಳ್ಳುವಂತೆ, ಸುಗಮ ಆಡಳಿತಕ್ಕೆ ಕಾರಣವಾಗಬೇಕು. ಪ್ರಾಮಾಣಿಕವಾಗಿ ರಾಜ್ಯದ ನಡುವೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಪ್ರಾಯೋಗಿಕವಾಗಿ, ಇದು ಇನ್ನೊಂದು ರೀತಿಯಲ್ಲಿ ಕೆಲಸ ಮಾಡಬಹುದು, ಒಂದು ಪಕ್ಷದ ಹೈಕಮಾಂಡ್ ರಾಜಕೀಯ ಕಾರಣಗಳಿಗಾಗಿ, ರಾಜ್ಯದಿಂದ ನಿಜವಾದ ಬೇಡಿಕೆಗಳನ್ನು ನಿಗ್ರಹಿಸಲು ಬಯಸಬಹುದು. ಕೇಂದ್ರದಲ್ಲಿರುವ ಸರ್ಕಾರದ ವಿರೋಧ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೇ, ಆ ರಾಜ್ಯಕ್ಕೆ ಕೊಡಬೇಕಾದ ಸವಲತ್ತುಗಳನ್ನು ರಾಜಕೀಯ ಕಾರಣಕ್ಕಾಗಿ ತಡೆಹಿಡಿಯುವಂತಹದ್ದನ್ನೂ ಮಾಡಬಹುದು. ʼಡಬಲ್ ಎಂಜಿನ್ ಸರ್ಕಾರ್ʼ ಅಂದರೆ ದೆಹಲಿಯಲ್ಲಿ ತಾನು ಪ್ರಧಾನಮಂತ್ರಿಯಾಗಿದ್ದೇನೆ ರಾಜ್ಯದಲ್ಲಿ ತನ್ನ ಕೈಗೊಂಬೆಯಂತಿರುವ ಮುಖ್ಯಮಂತ್ರಿ ಬೇಕು ಎಂದರ್ಥವಲ್ಲ. ಇದು ನಮ್ಮ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಿರಬಾರದು. ಈ ಡಬಲ್ ಇಂಜಿನ್ ಸರ್ಕಾರ ಎಂದರೆ ಯಾವ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆದಾಯ ಬರುತ್ತದೆಯೋ ಅದು ನಿಜವಾದ ಡಬಲ್ ಇಂಜಿನ್ ಸರ್ಕಾರವಾಗುತ್ತದೆ.
ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ೧೯೮೪ರಲ್ಲಿ ಇಲ್ಲಿನ ಲೋಕಸಭೆ ಚುನಾವಣೆಯಲ್ಲಿ ೨೮ ವಿಧಾನಸಭಾ ಕ್ಷೇತ್ರಗಳ ಪೈಕಿ ೨೭ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿತ್ತು. ನಂತರ ೪ ತಿಂಗಳ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ೧೩೪ ಕ್ಷೇತ್ರಗಳಲ್ಲಿ ರಾಮಕೃಷ್ಣ ಹೆಗಡೆ ಅವರ ಜನತಾ ದಳಕ್ಕೆ ಅಧಿಕಾರ ಸಿಕ್ಕಿತು. ಮೊದಲ ಬಾರಿಗೆ ರಾಜ್ಯದಲ್ಲಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಬೇರೆ ಬೇರೆ ಪಕ್ಷಗಳಿಗೆ ಬಹುಮತ ಸಿಕ್ಕಿತು. ಅದೇ ನಿಜವಾದ ಡಬಲ್ ಎಂಜಿನ್. ನಿಜವಾದ ಡಬಲ್ ಎಂಜಿನ್ ಎಂದರೆ ಒಂದು ಎಂಜಿನ್ ಆರ್ಥಿಕ ವಿಕಾಸಕ್ಕೆ ಇರಬೇಕು ಆಗ ಅದಕ್ಕೆ ಡಬಲ್ ಎಂಜಿನ್ ಸರ್ಕಾರ ಎಂದು ಹೇಳಬಹುದು. ಆದರೇ, ಈ ʼಡಬಲ್ ಎಂಜಿನ್" ಹೊಸ ರೂಪಕವು ಬಹು ಪಕ್ಷದ ಪ್ರಜಾಪ್ರಭುತ್ವದ ತತ್ವವನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ ಮತ್ತು ಏಕಪಕ್ಷೀಯ ನಿರಂಕುಶ ಆಡಳಿತವನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ.
-ಶ್ರೀರಾಜ್ ವಕ್ವಾಡಿ
.jpeg)



.jpeg)
.jpeg)

