Tuesday, April 14, 2020

ಸರ್ಕಾರದ ಕಣ್ಣಿಗೆ ಕಾಣದವರು ಬೀದಿಗೆ ಬಿದ್ದರು..!!!


ಕೋವಿಡ್ 19ನಂತಹ ಕಠಿಣ ಪರಿಸ್ಥಿತಿಯಲ್ಲೂ ಕಾಣಿಸಿಕೊಳ್ಳದ ದೇಶದ ಗೃಹಮಂತ್ರಿ ಅಮಿತ್ ಶಾ, ನಿನ್ನೆ ಅದು ಯಾವ ದಿಕ್ಕಿನಲ್ಲಿ ಸೂರ್ಯ ಉದಯಿಸಿದ್ದಾನೋ ಎನೋ ಗೊತ್ತಿಲ್ಲ, ಟ್ವೀಟ್ ಮಾಡಿ, ದೇಶದಲ್ಲಿ ಆಹಾರ, ಔಷಧಿ ಮತ್ತು ಇತರೆ ಅಗತ್ಯ ವಸ್ತುಗಳು ಬೇಕಾದಷ್ಟಿವೆ. ದೇಶದ ಯಾವೊಬ್ಬ ಪ್ರಜೆಯೂ ಆತಂಕ ಪಡುವ ಅಗತ್ಯವಿಲ್ಲ. ಶಕ್ತರು ಅಶಕ್ತರಿಗೆ ನೆರವಾಗಬೇಕು, ಯಾವುದೇ ಜನರಿಗೆ ಅಗತ್ಯದ ವಸ್ತುಗಳು ಸಿಗದ ಪರಿಸ್ಥಿತಿ  ಸೃಷ್ಟಿಯಾಗಬಾರದು ಎಂದು ಕೇಳಿಕೊಳ್ಳುವಾಗ, ಯಾವ ವಲಸೆ ಕಾರ್ಮಿಕರು ಯೋಚನೆಗೆ ಬರಲೇ ಇಲ್ಲ. ಪ್ರಧಾನಿಗಳೂ ಕೂಡ ತಮ್ಮ ನಾಲ್ಕನೇ ಭಾಷಣದಲ್ಲಿ ಆ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ದಿಕ್ಕು ದೆಸೆಯಿಲ್ಲದೇ, ಮಹಾರಾಷ್ಟ್ರದ  ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಾವಿರ ಸಾವಿರ ಮಂದಿ ವಲಸೆ ಕಾರ್ಮಿಕರು ಬೀದಿಗೆ ಬಂದರು.




ಅವರೆಲ್ಲರ ಒಕ್ಕೊರಲ ಕೂಗು, ನಮ್ಮನ್ನು ನಮ್ಮೂರಿಗೆ ಹೋಗುವುದಕ್ಕೆ ಅವಕಾಶ ಮಾಡಿ ಕೊಡಿ ಎಂಬುವುದೊಂದೇ ಹೊರತು ಮತ್ತೇನಲ್ಲ. ಮಾರ್ಚ್ 24ರಂದು ಮೋದಿ ಕೈಗೊಂಡ 21 ದಿನಗಳ ಲಾಕ್ಡೌನ್ ಘೋಷಣೆಯಿಂದಾಗಿ ದೆಹಲಿಯನ್ನು ಒಳಗೊಂಡು ದೇಶದ ಹಲವು ಕಡೆಗಳಲ್ಲಿ, ಲಕ್ಷ ಲಕ್ಷ ಮಂದಿ ವಲಸೆ ಕಾರ್ಮಿಕರು ಕೆಲಸವಿಲ್ಲದೇ, ತಿನ್ನಲು ಕೂಳಿಲ್ಲದೇ ತಮ್ಮೂರಿಗೆ ಗುಳೆ ಹೊರಟರು. ಅಲ್ಲೊಬ್ಬ ಮಧ್ಯಪ್ರದೇಶದಲ್ಲಿನ ಮೊರೋನಾ ಜಿಲ್ಲೆಯ ಹುಟ್ಟೂರಿಗೆ ಹೊರಟ ರಣವೀರ್ ಸಿಂಗ್ ಎಂಬಾತ ಅದೆಷ್ಟೋ ಕೀಲೋ ಮೀಟರ್ ನಡೆದು ಅಸುನೀಗಿದ. ಇತ್ತ ಲಾಕ್ಡೌನ್ ಪರಿಣಾಮದಿಂದಾಗಿ ಗಂಗಮ್ಮ ಎಂಬಾಕೆ ಕೆಲಸಕ್ಕೆಂದು ಬೆಂಗಳೂರಿಗೆ ಹೋದವಳು ಸಿಂಧನೂರಿಗೆ ವಾಪಾಸಾಗುವಾಗ ಶವವಾದಳು. ಗುಂಪು ಗುಂಪಾಗಿ ಹೊರಟ ಅದೆಷ್ಟೋ ವಲಸೆ ಕಾರ್ಮಿಕರೊಂದಿಗೆ ಹಸುಗೂಸುಗಳು, ಗರ್ಭೀಣಿ ಸ್ರ್ತೀಯರ ಪಾಡು ಹೇಳತೀರದ್ದು. ಇವುಗಳು ಹೇಳಲೇ ಬೇಕಾದ ಉದಾಹರಣೆಗಳು. ಇನ್ನೂ ಬೇಕಾದಷ್ಟು ವರದಿಯಾದವುಗಳು ನಿಮ್ಮ ಮುಂದಿವೆ. ಲಕ್ಷಾಂತರ ಮಂದಿ ಗಡಿ ಬಂದ್ ಮಾಡಿದ ದ್ವಾರಗಳಲ್ಲಿ ಜಮಾಯಿಸಿ ದಿನಗಟ್ಟಲೆ ಲಾಕ್ ಆದರು. ಅಂತಹುಗಳಾವುದೂ ಸರ್ಕಾರದ ಕಣ್ಣಿಗೆ ಇದುವರೆಗೂ ಕಾಣಿಸಲಿಲ್ಲ. ಗೃಹ ಮಂತ್ರಿ ಅಮಿತ್ ಶಾ, ರಾಜ್ಯ ವಿಪತ್ತು ನಿರ್ವಹಣಾ ಹಣವನ್ನು ಬಳಸಿಕೊಳ್ಳಲೇನೋ ಹೇಳಿದರು. ಅದು ಎಷ್ಟರ ಮಟ್ಟಿಗೆ ಪಾಲನೆಗೆ ಬಂದಿದೆ..? ಮಾಧ್ಯಮಗಳಲ್ಲಿ ಸುದ್ದಿಯಾದಾಗ ಸಾಫ್ಟ್  ಮನೋಧೋರಣೆ ತೋರಿಸಿ ತಣ್ಣಗಾಗಿಸಿದ್ದನ್ನು ಬಿಟ್ಟರೇ ಬೇರೇನೂ ಮಾಡಿಲ್ಲ.
ಇಂತಹ ಎಲ್ಲಾ ವಿಚಾರಗಳು ನಿಝಾಮುದ್ಧಿನ್ ಮರ್ಕಝ್ ವಿಚಾರದಲ್ಲಿ ಮುಚ್ಚಿ ಹೋದವು. ಇದು ಸಾಕ್ಷಿಯೋ, ಪ್ರಶ್ನೆಯೋ, ಭಿನ್ನಧ್ವನಿಯೋ ನೀವೇ ನಿರ್ಧರಿಸಿ.
ದೇಶದಲ್ಲಿ ಉದ್ಯೋಗ ಸೃಷ್ಟಿಯಿಲ್ಲ, ಸಂಬಳ ಸರಿಯಾಗಿಲ್ಲ ಎಂದು ಎಂತದೋ ಕೆಲಸಕ್ಕೆಂದು ದೇಶಬಿಟ್ಟು ಪರದೇಶಕ್ಕೆ ಹೋದವರನ್ನು ವಾಪಾಸ್ ಕರೆಸಿಕೊಳ್ಳಲು ತೋರಿಸಿದ ಮುತುವರ್ಜಿ.. ದೇಶದ ಅದೆಷ್ಟೋ ನಗರ ಪ್ರದೇಶಗಳಲ್ಲಿ ಎಲ್ಲೆಲ್ಲಿಂದಲೋ ಹಳ್ಳಿ ಪ್ರದೇಶಗಳಿಂದ ಬಂದು ಬಿಡುಗಾಸಿಗೆ ದುಡಿಯುತ್ತಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳಹಿಸಿಕೊಡುವುದರಲ್ಲಿ ಯಾಕೆ ತೋರಿಸುತ್ತಿಲ್ಲ ಸರ್ಕಾರ..? ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.


ಈ ಹಿಂದೆ ಗಾಜಿಯಾಬಾದ್‌ನಲ್ಲಿ ಬೀದಿಪಾಲಾದ ಎಷ್ಟೋ ವಲಸೆ ಕಾರ್ಮಿಕರು ನಮ್ಮಲ್ಲಿ ದೇಶದ ‘ಆಧಾರ್ ಕಾರ್ಡ್’ಗಳೇ ಇಲ್ಲ ಎಂದಿದ್ದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಯಿತು. ಮಾತ್ರವಲ್ಲ, ಹಾಗೆಯೇ ಮುಚ್ಚಿ ಹೋಯಿತು. ನಿನ್ನೆಯೂ ಅಷ್ಟೇ, “ನಮ್ಮಲ್ಲಿ ಏನೂ ಇಲ್ಲ ಲಾಕ್ಡೌನ್ ಪರಿಣಾಮವಾಗಿ ನಮ್ಮ ಬದುಕು ದುಸ್ತರವಾಗಿದೆ. ಸರ್ಕಾರ ಮತ್ತೆ ಲಾಕ್ಡೌನ್ ಮುಂದುವರಿಸುತ್ತದೆ ಎಂಬ ನಿರೀಕ್ಷೆಯಿದ್ದಿರಲಿಲ್ಲ, ನಮಗೆ ಈಗ ಬೇಕಾಗಿರುವುದು ಆಹಾರವಲ್ಲ, ನಾವು ಊರಿಗೆ ಹೋಗಬೇಕು, ಅವಕಾಶ ಮಾಡಿಕೊಡಿ” ಎಂದು ಕೇಳಿಕೊಂಡಿದ್ದು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ವರದಿಯಾದವು. ಲಾಕ್ಡೌನ್ ಸಡಿಲಗೊಳ್ಳಬಹುದು, ತಮ್ಮ ತಮ್ಮ ಊರಿಗೆ ತೆರಳಬಹುದೆಂದುಕೊಂಡು ಮಹಾರಾಷ್ಟ್ರದ ಮುಂಬೈನ ಪಟೇಲ್ ನಗರಿ ಎಂಬ ಕೊಳಗೇರಿಗಳಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರೆಲ್ಲಾ ಬಾಂದ್ರಾದ ರೈಲ್ವೇ ನಿಲ್ದಾಣದ ಸಮೀಪದ ಪಶ್ಚಿಮ ಬಸ್ ಡೀಪೋ ಬಳಿ ಜಮಾಯಿಸಿದರು. ಇದು ಪ್ರಧಾನಿ ಮೋದಿಯವರು ಕೊರೋನಾ ಸಂಬಂಧಿಸಿ ಮಾತಾಡಿದ ಎರಡನೇ ಭಾಷಣದ ಪರಿಣಾಮವಾಗಿ ರಾಷ್ಟ್ರದ ರಾಜಧಾನಿ ದೆಹಲಿ, ಯುಪಿ ಗಡಿಭಾಗಗಳಲ್ಲಿ ಬಸ್‌ಗಾಗಿ ಕಾಯುತ್ತಿರುವ ದೃಶ್ಯ ಮತ್ತೆ ಕಣ್ಮುಂದೆ ತರಿಸಿದ್ದು ಸುಳ್ಳಲ್ಲ. 
 ಜನ ಸಾಮಾನ್ಯರು ಸಂಕಷ್ಟಕ್ಕೀಡಾದಾಗ ಅವರ ನೆರವಿಗೆ ಬರಬೇಕಾದದ್ದು ಸರ್ಕಾರದ ಕೆಲಸ. ಆದರೇ, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎನ್ನುವುದು ಇಂತಹ ಉದಾಹರಣೆಗಳು ಮೇಲಿಂದ ಮೇಲೆ ಕಾಣ ಸಿಗುವಾಗ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತದೆ. ಹೊರ ರಾಜ್ಯಗಳಿಗೆ ವಲಸೆ ಹೋಗಿ ಕಷ್ಟಪಡುತ್ತಿರುವವರ ಸ್ಥಿತಿ ಇನ್ನೂ ಶೋಚನೀಯ. ಸರ್ಕಾರ ಅಂತವರಿಗೆ ಅಗತ್ಯವಾಗಿ ಏನು ಬೇಕೋ ಅದಕ್ಕೆ ಸ್ಪಂದಿಸುತ್ತಿಲ್ಲ ಎನ್ನುವುದೇ ವಿಷಾದನೀಯ.
ಕಾರ್ಮಿಕರ ಇಲಾಖೆಯಲ್ಲಿ ಗುಡ್ಡೆ ಬಿದ್ದು ಕೊಳೆಯುತ್ತಿರುವ ಸಾವಿರಾರು ಲಕ್ಷ ಕೋಟಿಗಳು ಇಂತಹ ಪರಿಸ್ಥಿತಿಯಲ್ಲೂ ಬೀದಿಗೆ ಬಿದ್ದ ಕಾರ್ಮಿಕರ ಪಾಲಿಗೆ ಯಾಕೆ ಬರುತ್ತಿಲ್ಲ..? ಇಂತಹ ಸಂದರ್ಭಗಳಲ್ಲಿಯೂ ‘ರಿಜಿಸ್ಟ್ರೇಶನ್ ’ ಎಂಬ ವಿಷಯ ಅಡ್ಡ ಬರುತ್ತದೆಯೇ..? ಅಯ್ಯೋ ಪಾಪ, ‘ಏನೂ ಇಲ್ಲ' ಎಂದವರು.. ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದೇವೆ ಎಂದು ಯಾವುದನ್ನು ತೋರಿಸಬೇಕು..?
ಕೆಲವೊಂದಕ್ಕೆ ಮೌನ ಬಿಟ್ಟರೇ, ಬೊಬ್ಬೆ ಮಾತ್ರ ಉತ್ತರ.
--------------------------------
-ಶ್ರೀರಾಜ್ ವಕ್ವಾಡಿ


ಲಾಕ್ಡೌನ್ ಮೇ 3ರ ತನಕ ವಿಸ್ತರಣೆ | ಮಾನವ ಕಲ್ಯಾಣಕ್ಕಾಗಿ ಮುಂದೆ ಬನ್ನಿ | ಪ್ರಧಾನಿ ಕರೆ..!


ಎಲ್ಲವೂ ನಿರೀಕ್ಷಿಸಿದಂತೆ ಆಗಿದ್ದರೇ, ಇಂದಿಗೆ ದೇಶದಾದ್ಯಂತ ಲಾಕ್ಡೌನ್ ತೆರವುಗೊಳ್ಳಬೇಕಿತ್ತು. ಆದರೇ ಈಗ ಐತಿಹಾಸಿಕ 21 ದಿನಗಳ ಲಾಕ್ಡೌನ್ ವಿಸ್ತರಣೆಗೊಂಡು ಎರಡನೇ ಹಂತದ ಲಾಕ್ಡೌನ್ ಹೇಗಿರಲಿದೆ ಎಂಬುವುದಕ್ಕೆ ಉತ್ತರ ಸಿಕ್ಕಿದೆ. ಈ ಹಿಂದೆಯೇ ಏಪ್ರಿಲ್ ಅಂತ್ಯದೊರೆಗೂ ಲಾಕ್ಡೌನ್ ಮುಂದುವರಿಯುತ್ತದೆ ಎಂಬುವುದು ಬಹುತೇಕ ಖಚಿತಗೊಂಡಿತ್ತು. ಆದರೇ, ಈಗ ಮೇ 3ರ ತನಕ ಲಾಕ್ಡೌನ್ ವಿಸ್ತರಣೆಗೊಂಡಿದೆ.
‘ಜಾನ್ ಭೀ ಜಹನ್ ಭೀ’(ಜನರೂ ಮುಖ್ಯ, ಆರ್ಥಿಕತೆಯೂ ಮುಖ್ಯ) ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾಡಿದ ವಿಡೀಯೋ ಕಾನ್ಫರೆನ್ಸ್ನಲ್ಲಿ ಪ್ರಧಾನ ಮಂತ್ರಿ ಹೇಳಿದ್ದರು. ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಯಮ ಸಡಲಿಕೆ ಮಾಡಬಹುದು, ವಲಯಗಳನ್ನಾಗಿ ಮಾಡಿ ನಿಯಮ ಸಡಲಿಕೆ ನೀಡಬಹುದು, ಉತ್ಪಾದನಾ ಕ್ಷೇತ್ರಗಳಿಗೆ ವಿನಾಯಿತಿ ದೊರಕಬಹುದೆಂಬ ನಿರೀಕ್ಷೆಗಳಿದ್ದವು, ಎರಡನೇ ಹಂತದ ಲಾಕ್ಡೌನ್‌ಲ್ಲಿ ಕಟ್ಟುನಿಟ್ಟಿನ ಸುರಕ್ಷಾ ನಿಯಮಗಳೊಂದಿಗೆ ಎಲೆಕ್ಟ್ರಾನಿಕ್, ಆಟೋಮೊಬೈಲ್ ಕ್ಷೇತ್ರಗಳನ್ನು ಒಳಗೊಂಡು ಕೆಲವು ಕ್ಷೇತ್ರಗಳಿಗೆ ಸಡಲಿಕೆ ನೀಡಬಹುದೆಂಬ ನಿರೀಕ್ಷೆಗಳಿದ್ದವು. ಆದರೇ, ಈಗ ಅವೆಲ್ಲದಕ್ಕೂ ಭ್ರಮನಿರಸನವುಂಟಾಗಿದೆ.
ಏಪ್ರಿಲ್ 20ರ ನಂತರ ಪರಿಸ್ಥಿತಿ ಗಮನಿಸಿ ಸರ್ಕಾರ ಸೂಕ್ತ ನಿಯಮಗಳನ್ನು ಕೈಗೊಳ್ಳಲಿದೆ. ಕೆಲವು ವಲಯಗಳಿಗೆ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ. ಬಡವರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮಕೈಗೊಳ್ಳುತ್ತದೆ. ಮತ್ತು ಈ ಎರಡನೇ ಹಂತದ ಲಾಕ್ಡೌನ್ ಹೇಗೆ ಇರಬೇಕು ಎಂಬುವುದಕ್ಕೆ ಸರ್ಕಾರ ಮಾರ್ಗಸೂಚಿಯನ್ನು ನಾಳೆ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ಮೋದಿ ಭಾಷಣದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಎನ್ನುವಲ್ಲಿಗೆ, ಆರೋಗ್ಯದ ಸ್ಥಿತಿಗಿಂತ, ಆರ್ಥಿಕ ಸ್ಥಿತಿ ಮುಖ್ಯವಲ್ಲ ಎನ್ನುವ ದೃಷ್ಟಿಯಲ್ಲಿ ದೇಶದ ಆರೋಗ್ಯದ ಸುಧಾರಣೆಗೆ ಪ್ರಧಾನಿ ಹೆಚ್ಚು ಒತ್ತು ನೀಡಿದಂತೆ ಕಾಣುತ್ತಿದೆ.

ಕೋವಿಡ್ 19ಗೆ ಸಂಬಂಧಿಸಿ ಪ್ರಧಾನಿ ಮಾಡಿದ 4ನೇ ಭಾಷಣದ ಮುಖ್ಯಾಂಶಗಳು
ಕೊರೊನಾ ವಿರುದ್ಧ ಭಾರತದ ಹೋರಾಟ ಅದ್ಭುತವಾಗಿ ನಡೆದಿದೆ.
ಜನರ ತ್ಯಾಗದಿಂದಾಗಿ ದೇಶ ಸುರಕ್ಷಿತವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಎಲ್ಲರ ತಾಳ್ಮೆ ಮೆಚ್ಚುವಂತದ್ದು.
ಇಂದು ಅಂಬೆಡ್ಕರ್ ಜಯಂತಿ. ದೇಶದ ಬಗ್ಗೆ ನಾವು ಮಾಡುವ ಸಂಕಲ್ಪವೇ ನಿಜಕ್ಕೂ ಅಂಬೆಡ್ಕರ್ ಅವರಿಗೆ ಸಲ್ಲುವ ಶ್ರದ್ಧಾಂಜಲಿ.
ಜನ ನಿಯಮ ಪಾಲಿಸಿದ ರೀತಿ ಅನನ್ಯ.
ಈಗ ವಿಶ್ವವೇ ಸಂಕಷ್ಟದಲ್ಲಿದೆ.  ಸಂಕಷ್ಟದ ಸ್ಥಿತಿಯಲ್ಲಿ ಯಾವ ದೇಶಗಳಿಗೂ ಭಾರತವನ್ನು ಹೋಲಿಸಬಾರದು.
ಬಲಿಷ್ಠ ರಾಷ್ಟ್ರಗಳ ಹೋಲಿಕೆಯಲ್ಲಿ ಭಾರತ ಒಳ್ಳೆಯ ಸ್ಥಾನದಲ್ಲಿದೆ. ಯಾವುದೇ ಹೋಲಿಕೆ ಮಾಡಬಾರದು. ಮತ್ತು ಸತ್ಯಗಳನ್ನು ತಳ್ಳಿ ಹಾಕಬಾರದು.
ಕೊರೊನಾ ಪೀಡಿತ ದೇಶಗಳಿಂದ ಬಂದವರನ್ನು ಮುತುವರ್ಜಿಯಿಂದ ಪರೀಕ್ಷಿಸಿದ್ದೇವೆ.
ಕ್ವಾರೆಂಟೈನ್‌ಲ್ಲಿ ಉಳಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ.
ತ್ವರಿತ ನಿರ್ಣಯಗಳನ್ನು ಕೈಗೊಳ್ಳದಿದ್ದರೇ, ಭಾರತದ ಇಂದಿನ ಸ್ಥಿತಿಯನ್ನು ಊಹಿಸಿಕೊಳ್ಳಲಾಗುತ್ತಿರಲಿಲ್ಲ.
ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಒಳಿತಿಗಾಗಿ, ಮೇ 3ರ ತನಕ ಲಾಕ್ಡೌನ್ ವಿಸ್ತರಿಸುತ್ತಿದ್ದೇವೆ.
ಈ ಸಂದರ್ಭ ಸಾಮಾಜಿಕ ಅಂತರ ಅತ್ಯಂತ ಮುಖ್ಯ.
ಬಹುತೇಕ ಎಲ್ಲಾ ರಾಜ್ಯಗಳಿಂದಲೂ ಲಾಕ್ಡೌನ್ ಮುಂದುವರಿಕೆಗೆ ಬೆಂಬಲ ದೊರಕಿದೆ.
ಮೇ 3ರ ತನಕ ಕಠೀಣ ಕ್ರಮ ಕೈಗೊಳ್ಳಲಾಗುತ್ತದೆ.
ಹಾಟ್‌ಸ್ಪಾಟ್‌ಗಳಲ್ಲಿ ಎಚ್ಚರಿಕೆಯ ಕಣ್ಣು ಅಗತ್ಯ.
ಕೊರೊನಾದಿಂದಾಗುತ್ತಿರುವ ಪ್ರತಿ ಸಾವು ಸರ್ಕಾರವನ್ನು ಮತ್ತಷ್ಟು ಚಿಂತೆಗೊಳಪಡಿಸುತ್ತಿದೆ.
ಪ್ರತಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಎಚ್ಚರಿಕೆ ವಹಿಸಲಾಗುತ್ತದೆ.
ಸರ್ಕಾರದಿಂದ ಈ ಬಗ್ಗೆ ಸಂಪೂರ್ಣ ಮಾರ್ಗಸೂಚಿಗಳನ್ನು ನಾಳೆ ನೀಡುತ್ತದೆ.
ಬಡವರ ತೊಂದರೆಗಳನ್ನು ನಿವಾರಿಸುವುದೇ ನನ್ನ ಆಧ್ಯತೆ.
ಏಪ್ರಿಲ್ 20ರ ತನಕ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುತ್ತೇವೆ. ನಂತರ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮಕೈಗೊಳ್ಳಗಾಗುತ್ತದೆ.
ಬಡವರ ಜೀವನವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶೀಘ್ರವಾಗಿ ಮುಂದಿನ ಕ್ರಮಕೈಗೊಳ್ಳುತ್ತದೆ.
ನಮ್ಮಲ್ಲಿ ಮೂಲ ಸೌಕರ್ಯ ಕಡಿಮೆಯಿರಬಹುದು. ಮಾನವ ಕಲ್ಯಾಣಕ್ಕಾಗಿ, ವಿಶ್ವ ಕಲ್ಯಾಣಕ್ಕಾಗಿ ಮುಂದೆ ಬನ್ನಿ.
ದೇಶದಲ್ಲಿ ಸದ್ಯಕ್ಕೆ 600ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗಾಗಿ ಸಿದ್ಧಗೊಳಿಸಲಾಗಿದೆ.
ಆರೋಗ್ಯ ಸೇತು ಮೊಬೈಲ್ ಆ್ಯಪ್ ಅಳವಡಿಸಿಕೊಳ್ಳಿ.
ಹಿರಿಯರ ಬಗ್ಗೆ, ಅನಾರೋಗ್ಯದಿಂದ ಬಳಲುತ್ತಿರುವವರ ಬಗ್ಗೆ ಕಾಳಜಿ ವಹಿಸಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
• ಕಡ್ಡಾಯವಾಗಿ ಮಾಸ್ಕ್ ಧರಿಸಿ.
ವೈದ್ಯರು, ನರ್ಸ್, ಪೋಲೀಸರಿಗೆ ಗೌರವ ನೀಡಿ.
ಬಡವರಿಗೆ ನೆರವಾಗಿ.


ಒಟ್ಟಿನಲ್ಲಿ, ನಿರೀಕ್ಷೆಗಳನ್ನು ಮೀರಿ ದೇಶದಲ್ಲಿ ಈಗ ಲಾಕ್ಡೌನ್ ಮುಂದುವರಿದಿದೆ. ದೇಶದಲ್ಲಿ ದಿನನಿತ್ಯ ಲಾಕ್ಡೌನ್‌ನ ಪರಿಣಾಮದಿಂದಾಗಿ ಸುಮಾರು 35000 ಕೋಟಿ ನಷ್ಟವಾಗುತ್ತಿದೆ ಎಂದು ಅಕ್ಯುಟ್ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆ ಅಂದಾಜಿಸಿದೆ. ಎನ್ನುವಲ್ಲಿಗೆ 21 ದಿನಗಳಲ್ಲಿ ಬರೋಬ್ಬರಿ 7.35 ಲಕ್ಷ ಕೋಟಿ ರೂಪಾಯಿನಷ್ಟು ನಷ್ಟವಾಗಿದೆ. ಈಗ ಮತ್ತೆ ದೇಶದಾದ್ಯಂತ ಲಾಕ್ಡೌನ್ ಮುಂದುವರಿದಿದೆ. ದೇಶ ಇನ್ನಷ್ಟು ಆರ್ಥಿಕ ಸ್ಥಿತಿಯಲ್ಲಿ ಕುಗ್ಗುವುದು ಖಚಿತ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

--------------------------------
-ಶ್ರೀರಾಜ್ ವಕ್ವಾಡಿ

Monday, April 13, 2020

ದಿ ಬೆಸ್ಟ್ “ದಿ ಬೆಸ್ಟ್ ಆ್ಯಕ್ಟರ್”


ಸಾಮಾನ್ಯ ಒಂದು ಗ್ರಾಮೀಣ ಪ್ರತಿಭೆಗೂ ಒಬ್ಬ ನಿರ್ದೇಶಕನಾಗುವುದಕ್ಕೆ, ನಟನಾಗುವುದಕ್ಕೆ ಅವಕಾಶ ಕೊಟ್ಟಿದ್ದು ಕಿರುಚಿತ್ರ ಅಂತ ಹೇಳಿದರೆ ತಪ್ಪಿಲ್ಲ. ಇದು, ಕೆಲವು ಪ್ರಚಾರದ ಗೀಳಿಗೆ ಬಿದ್ದವರಿಗೂ ಅವಕಾಶ ಒದಗಿಸಿಕೊಟ್ಟಿದ್ದರಿಂದ, ಏನೇನೋ ತಲೆಬುಡವಿಲ್ಲದ್ದು, ಅರ್ಥವಿಲ್ಲದ್ದು ಕಿರುಚಿತ್ರಗಳೆನ್ನಿಸಿಕೊಂಡದ್ದು ಬೇಕಾದಷ್ಟು ಉದಾಹರಣೆಗಳಿವೆ. ‘ಕಿರುಚಿತ್ರ’ ಎಂದುಕೊಂಡು ಸಾವಿರ ಸಾವಿರ ಚಿತ್ರಗಳು ಬಂದಿವೆ. ಆದರೇ, ನಿಜಕ್ಕೂ ಕಿರುಚಿತ್ರವಾಗಿ, ಗಟ್ಟಿ ಕಥೆಯೊಂದಿಗೆ ಉಳಿದಿದ್ದು ಕೆಲವೇ ಕೆಲವುಗಳು ಮಾತ್ರ. ಅಂತಹುಗಳಲ್ಲಿ ರಂಗಕರ್ಮಿ ನಾಗರಾಜ್ ಸೋಮಯಾಜಿ ನಿರ್ದೇಶನದ “ದಿ ಬೆಸ್ಟ್ ಆ್ಯಕ್ಟರ್” ಕೂಡ ಒಂದು.


ಫೋನ್ ಸಂಭಾಷಣೆಯ ಮೂಲಕ ಕಥೆ ಆರಂಭವಾಗುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಸಂದರ್ಶನದೊಂದಿಗೆ ಕಥೆ ಮುಂದೆ ಸಾಗುತ್ತದೆ. ಸಂದರ್ಶಕ ಕೇಳುವ “ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ ನಟ ಯಾರು..? ಹಾಗೂ ನಿಮ್ಮ ಪಾಲಿನ ‘ದಿ ಬೆಸ್ಟ್ ಆ್ಯಕ್ಟರ್’ ಯಾರು..?” ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವುದೊರೊಂದಿಗೆ ಚಿತ್ರ ಕರಾವಳಿ ಕರ್ನಾಟಕದ 90ರ ದಶಕದ ಜೀವನ ಶೈಲಿಯನ್ನು ತೆರೆದಿಡಲಾರಂಭಿಸುತ್ತದೆ.
ಕಥೆಯ ಮುಖ್ಯಪಾತ್ರಧಾರಿ ಮಹಾಬಲ, ಸೈಕಲ್ ಸವಾರಿ ಮಾಡುತ್ತಾ ಆ ಕಾಲದಲ್ಲಿನ ಹಾಗೂ ಇನ್ನೂ ಕರಾವಳಿಯ ಕೆಲವೆಡೆಯಿರುವ ಹಳ್ಳಿಯ ಚಹಾದ ಹೋಟೇಲು, ಬಯಲು, ಆಟ ಇತ್ಯಾದಿಗಳನ್ನೊಳಗೊಂಡು ಜೀವನ ಪದ್ಧತಿ.. ಹೀಗೆ ಒಂದೊಂದಾಗಿ ಎಲ್ಲವನ್ನೂ ಪರಿಚಯ ಮಾಡಿಕೊಡುವ ಹಾಗೆ ದೃಶ್ಯ ವೇಗ ಕಂಡುಕೊಳ್ಳುತ್ತದೆ.
ಮಹಾಬಲ ಸಾಮಾನ್ಯ ಬಡ ಕುಟುಂಬದವ. ಹೆಂಡತಿ, ಮಗನೊಂದಿಗೆ ಜೀವನ ನೂಕುತ್ತಿರುವ ಮಹಾಬಲನಿಗೆ ಯಕ್ಷಗಾನದ ಮೇಲೆ ಅಪಾರ ಆಸಕ್ತಿ. ತಾನು ಯಕ್ಷಗಾನದಲ್ಲಿ ಬಣ್ಣ ಹಚ್ಚಬೇಕು ಎಂಬ ತವಕದೊಂದಿಗೆ ಸಾಗುವ ಮಹಾಬಲ ಎದುರುಗಾಣುವ ಅನುಭವವನ್ನು, ಭರವಸೆಯನ್ನು ಹಾಗೂ ಕೊನೆಗೆ ಕಾಣುವ  ನೋವನ್ನು ನಿರ್ದೇಶಕರು ಮನೋಜ್ಙವಾಗಿ ತೋರಿಸಿದ್ದಾರೆ. ಆಸೆ, ಹಂಬಲ, ಎಲ್ಲವೂ ನಿರ್ಲಕ್ಷಿಸುವವರೆದುರು, ಈ ಹಿಂದೆ ಇದ್ದಷ್ಟೇ ಆಸಕ್ತಿಯೊಂದಿಗೆ ಸೋತು ಹೋಗುವ ಕಥೆಯನ್ನು ನಿರ್ದೇಶಕರು ತೆರೆ ಮೇಲೆ ಮನಸ್ಸಿಗೆ ನಾಟುವಂತೆ ತೋರಿಸಿದ್ದಾರೆ.


ತನ್ನ ಅಪ್ಪನ ಅಪರಿಮಿತ ಕಲಾಸಕ್ತಿಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮಗ ರಾಷ್ಟ್ರ ಪ್ರಶಸ್ತಿ ವಿಜೇತ ನಟನಾಗಿ ಬೆಳೆದು ಸಂದರ್ಶನವೊಂದರಲ್ಲಿ ತನ್ನ ಅಪ್ಪನನ್ನು ನೆನಪಿಸಿಕೊಳ್ಳುವುದರ ಮೂಲಕ.. ಅಪ್ಪನ ಜೀವನಾಸಕ್ತಿ, ಕಲಾಸಕ್ತಿ, ಅವನಲ್ಲಿನ ನಿಷ್ಠೆ, ಬಡತನ... ಹೀಗೆ, ಎಲ್ಲವನ್ನೂ ಸಹಿಸಿಯಾದ ಮೇಲೆ ದಕ್ಕದ ಅವಕಾಶವನ್ನು ಎಳೆಎಳೆಯಾಗಿ ತೋರಿಸಿಕೊಡುವ ಕಥೆ ಇದು.
ಕಥೆಯ ಮುಖ್ಯಪಾತ್ರ ಮಹಾಬಲ, ತನ್ನಲ್ಲಿ ಪ್ರತಿಭೇಯಿದ್ದರೂ.. ಬೇರೆ ಬೇರೆ ಕಾರಣಗಳಿಂದಾಗಿ ಅವಕಾಶ ವಂಚಿತನಾಗುವುದನ್ನು ಅದೆಷ್ಟೋ ಇಂತಹ ವಂಚನೆಗೊಳಗಾದ ಕಲಾಸಕ್ತಿ ಹೊಂದಿದವರ ಬದುಕಿಗೆ ಉದಾಹರಣೆಯಾಗಿ ನಿರ್ದೇಶಕರು ಹೆಣೆದಿದ್ದಾರೆ.


ಚಿತ್ರದಲ್ಲಿ ಸಾಮಾನ್ಯದ್ದೊಂದು ಬಡ ಸಂಸಾರ, ಆ ಸೂರಿನಡಿಯಲ್ಲಿನ ಜೀವನವನ್ನು ತೋರಿಸುವ ಪ್ರಯತ್ನ ಮಾರ್ಮಿಕವಾಗಿ ಮೂಡಿಬಂದಿದೆ. ಚಿತ್ರದುದ್ದಕ್ಕೂ ಉಳಿದುಕೊಳ್ಳುವುದು ಪ್ರಾದೇಶಿಕತೆ. ಚಿತ್ರ, ಕುಂದಾಪುರ ಹಾಗೂ ಸಾಲಿಗ್ರಾಮ ಸುತ್ತಮುತ್ತ ಚಿತ್ರಿಕರಣಗೊಂಡಿದ್ದು ಅಲ್ಲಿನ ಪ್ರಾದೇಶಿಕ ಭಾಷೆಯನ್ನೇ ಕಥೆಗೆ ಬಳಸಿಕೊಂಡಿದ್ದಾರೆ. ಅಲ್ಲಲ್ಲಿ ಕೆಲವು ಕಡೆ ಕುಂದಾಪುರ ಕನ್ನಡದೊಂದಿಗೆ ಶುದ್ಧ ಕನ್ನಡ ಬಂದದ್ದನ್ನು ಹೊರತಾಗಿ, ಮತ್ತೆಲ್ಲವೂ ಚೆನ್ನಾಗಿ ಬಂದಿವೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್,  ರಂಗಭೂಮಿ ಹಾಗೂ ಸಿನೆಮಾ ನಟ ಮಾಧವ ಕಾರ್ಕಡ, ಪ್ರತಿಮಾ ನಾಯಕ್, ಶಿಶಿರ್ ಕುಮಾರ್, ಮಾಸ್ಟರ್ ಉಲ್ಲಾಸ್ ಸಾಲಿಗ್ರಾಮ.. ಚಿತ್ರ ನೋಡಿಯಾದ ಮೇಲೂ ಕೆಲ ಹೊತ್ತು ಕಣ್ಮುಂದೆ ಬಂದು ಹೋಗುತ್ತಿರುತ್ತಾರೆ ಎನ್ನುವುದು ಅವರೆಲ್ಲರೂ ಅವರವರ ಪಾತ್ರಕ್ಕೆ ಜೀವ ತುಂಬಿಸಿದ್ದಾರೆ  ಎನ್ನುವ ಅರ್ಥ.


ಈ ಚಿತ್ರಕ್ಕೆ, ಕಥೆಗಾರ ಶ್ರೀಧರ ಬನವಾಸಿಯವರ ಸಣ್ಣ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕರು ಚಿತ್ರಕತೆ ರೂಪಿಸಿ ಯಶಸ್ವಿಯಾಗಿದ್ದಾರೆ. ಭಾಸ್ಕರ ಬಂಗೇರ ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿನ ಕೆಲವು ಸಂಭಾಷಣೆಗಳು ಬದುಕಿಗೆ ಸಾಕ್ಷಿಪ್ರಜ್ಙೆಯಾಗಿ ನಿಲ್ಲುತ್ತದೆ. ಎಸ್ ಕೆ. ರಾವ್ ಅವರ ಛಾಯಾಗ್ರಹಣ, ಬಿ. ಎಸ್ ಸಂಕೇತ್ ಅವರ ಸಂಕಲನ, ಹಾಗೂ ಅರ್ಜುನ್ ರಾಮ್ ಅವರ ಹಿನ್ನೆಲೆ ಸಂಗೀತ ಕಥೆಯನ್ನು ಮತ್ತಷ್ಟು ಗಟ್ಟಿಯಾಗಿಸಿವೆ.
ಒಟ್ಟಿನಲ್ಲಿ, ತುಡಿತ, ನಿಷ್ಠೆ, ಆಸೆ, ಕನಸು, ಶ್ರಮಕ್ಕೆ ಈ ಚಿತ್ರ ಕನ್ನಡಿಯಾಗಿ ತೆರೆತೆರೆದಿದೆ ಎನ್ನುವುದು ಪದಶಃ ಸತ್ಯ.
-ಶ್ರೀರಾಜ್ ವಕ್ವಾಡಿ   

Sunday, April 12, 2020

ಹೇಳದೆ ಕೇಳದೆ ಉಳಿದು ಬಿಡುತ್ತದೆ “ಲವ್ ಮಾಕ್ಟೇಲ್”..!


ಚಿತ್ರದ ಕಥೆ ತುಸು ಸಾಮಾನ್ಯವಾಗಿ ಕಂಡರೂ, ಸ್ಕ್ರೀನ್ ಮೇಲೆ ತೋರ್ಪಡಿಸಿದ ರೀತಿ ಸಕತ್ ಆಗಿದೆ ಎನ್ನುವುದನ್ನು ನಾನಿಲ್ಲಿ ವರ್ಣನೆ ಮಾಡಿ ಹೇಳಬೇಕೆಂಬ ಅಗತ್ಯವಿಲ್ಲ. ಚಿತ್ರ ಕಂಡ ವೀಕ್ಷಕರು ಹೇಳುವ ಮಾತುಗಳೇ ಸಾಕು. ಪ್ರೀತಿಯ ಎಲ್ಲಾ ಮಜಲುಗಳ ಚಿತ್ರಣವನ್ನು ತೋರಿಸಿ, ದುಃಖಾಂತ್ಯ ಕಾಣುವ ಸಿನೆಮಾ, ನೋಡುಗರ ಹಾರ್ಟ್‌ನ್ನು ಟಚ್ ಮಾಡಿದ್ದಂತೂ ಸುಳ್ಳಲ್ಲ.
ಒಂದು ಸಂಸಾರ, ಒಂದು ಬ್ರೇಕಪ್, ಒಂದು ಒನ್ ಸೈಡ್ ಲವ್ ಸ್ಟೋರಿ, ಕೊನೆಯಲ್ಲಿ ಕಣ್ಣೀರು ತರಿಸುವ ಟ್ರ್ಯಾಜಿಡಿಯ ಒಟ್ಟು ಸಂಗಮವೇ ‘ಲವ್ ಮಾಕ್ಟೇಲ್’.


ಆದಿ (ಕಥಾನಾಯಕ) ಬೆಂಗಳೂರಿನಿಂದ ಉಡುಪಿಗೆ ಪ್ರಯಾಣ ಬೆಳೆಸುವ ದಾರಿ ಮಧ್ಯೆದಲ್ಲಿ ಎದುರಾಗುವ ಅದಿತಿಯೆಂಬ ಹುಡುಗಿ ನಯನಾಜೂಕಾಗಿ ಕೆದುಕುವ ಪ್ರಶ್ನೆಗಳಿಗೆ ಅಷ್ಟೇ ನಯವಾಗಿ ಉತ್ತರ ನೀಡುತ್ತಾ, ತನ್ನ ಬದುಕಿನ ಅಮಿತ ಸುಂದರ ಪ್ರೀತಿಯನ್ನು ಬಿಚ್ಚಿಡುವುದರ ಮೂಲಕ ಚಿತ್ರ ತೆರೆ ಮೇಲೆ ಹಂತ ಹಂತವಾಗಿ ಸಾಗುತ್ತದೆ. ತನ್ನ ಪ್ರೌಢಶಾಲೆಯ ತುಂಟಾಟದ ದಿನಗಳಲ್ಲಿ ಹುಟ್ಟಿದ ಎಳೆಯ ವಯಸ್ಸಿನ ಪ್ರೀತಿ, ಪ್ರೇಮ, ಪುರಾಣಗಳಿಂದ ಆರಂಭವಾಗುತ್ತದೆ. ಕೈಗೆ ದಕ್ಕದ ಪ್ರೀತಿ, ಮತ್ತೆ ಕಾಲೇಜು ದಿನಗಳಲ್ಲಿ ಹೇಗೆ ಜೀವ ಪಡೆಯುತ್ತದೆ ಹಾಗೂ ಇಲ್ಲಿ ಹೊಸತನದ ಅನುರಾಗ, ಉನ್ಮಾದ, ರಮ್ಯತೆ ಎಲ್ಲವನ್ನೂ ಒಳಗೊಂಡಿರುತ್ತದೆ ಎನ್ನುವುದನ್ನು ಚಿತ್ರಿಸುತ್ತದೆ. ಆದರೇ, ಆ ಪ್ರೀತಿಯೂ ಕೂಡ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ಮತ್ತೆ ತಿರುವು ಕಂಡುಕೊಳ್ಳುವುದರ ಮೂಲಕ ಮುಂದೆ ಮತ್ತೊಂದು ಪ್ರೇಮದ ಅನುಬಂಧಕ್ಕೆ ಕಾರಣವಾಗುತ್ತದೆ. ಆಮೇಲೆ ಏನಾಗುತ್ತದೆ..? ಕಥಾನಾಯಕ ಹೇಗೆ ಗೊಂದಲಕ್ಕೀಡಾಗುತ್ತಾನೆ..? ಯಾರನ್ನು ಮದುವೆಯಾಗುತ್ತಾನೆ..? ಆ ದಾಂಪತ್ಯದಲ್ಲಿ ಎದುರಾಗುವ ದುಃಖ, ದುಮ್ಮಾನ, ಸಂಕಷ್ಟಗಳಿಗೆ ಹೇಗೆ ಆದಿ ಎದುರುಗೊಳ್ಳುತ್ತಾನೆ..? ವಾಸ್ತವಕ್ಕೆ ಬಹಳ ಆಪ್ತವಾಗಿದೆ ಎನ್ನುವಷ್ಟರಲ್ಲೇ ಆ ಹಂತದಲ್ಲಿ ಹೊಸ ರೀತಿಯ ತಿರುವು ಕಂಡುಕೊಳ್ಳುವುದು, ಅವೆಲ್ಲವೂ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುವ ಸಂದರ್ಭಗಳಿಗೆ ಹೇಗೆ ಭಾವುಕತೆಯ ಸ್ಪರ್ಶ ಉಂಟು ಮಾಡುತ್ತದೆ..? ಎನ್ನುವುದನ್ನು ತುಂಬಾ ಮನೋಜ್ಙವಾಗಿ ತೆರೆ ಮೇಲೆ ಹೆಣೆಯುವುದರ ಮೂಲಕ ಭಾರವಾದ ದುಃಖವೊಂದನ್ನು ಪ್ರೇಕ್ಷಕನ ಮನಸ್ಸಿಗೆ ಬಿಟ್ಟು ಬಿಡುತ್ತದೆ ಈ ಕಥೆ.


ಪ್ರೀತಿ, ಪ್ರೇಮಗಳಲ್ಲಿ ಕಾಣುವ ಸಹಜ ಸುಂದರ ವಾಸ್ತವ ಅನುಭೂತಿಯನ್ನು ‘ಲವ್ ಮಾಕ್ಟೇಲ್’ ತುಂಬಾ ನೈಜವಾಗಿ ಕಟ್ಟಿಕೊಡುತ್ತದೆ. ಚಿತ್ರ ನೋಡುತ್ತಿದ್ದವನಿಗೆ ಇಂತಹದ್ದೊಂದು ಕಥೆ ‘ನನ್ನ ಬದುಕಿನಲ್ಲೂ ಆಗಿ ಹೋಗಿದೆ’ ಎನ್ನುವ ತೆಳುವಾದ ಭಾವವೊಂದನ್ನು ಹುಟ್ಟಿಸುತ್ತದೆ. ಅದೇ ಚಿತ್ರದ ಹೆಚ್ಚುಗಾರಿಕೆ. ಕಥೆಯ ಆರಂಭ, ಅದನ್ನು ಹೆಣೆದ ರೀತಿ, ವಿಸ್ತೃತ ರೂಪ ನೀಡಿದ ಬಗೆ.. ಹಲವಾರು ವರ್ಷಗಳ ಪ್ರೀತಿಯನ್ನು ಅಚ್ಚುಕಟ್ಟಾಗಿ ಬಿಂಬಿಸಿದಂತೆ ಚಿತ್ರ ಮೂಡಿಬಂದಿದೆ. ಚಿತ್ರದ ಮೊದಲ ಹಂತವನ್ನು ನಿರೂಪಿಸುವುದರಲ್ಲಿ  ನಿರ್ದೇಶಕರು ಸ್ವಲ್ಪ ಎಳೆದಿದ್ದಾರೆ ಅಂತನ್ನಿಸಿದರೂ, ಎರಡನೇ ಹಂತದಲ್ಲಿ ಎಲ್ಲಿಯೂ ಹಾಗನ್ನಿಸುವುದಿಲ್ಲ. ಚಿತ್ರ ನಿಜಕ್ಕೂ ಹತ್ತಿರವಾಗುತ್ತದೆ.
ಇನ್ನು, ನಾಯಕ ನಟನಾಗಿ ಕಾಣಿಸಿಕೊಳ್ಳುವುದರೊಂದಿಗೆ ನಿರ್ದೇಶನದಲ್ಲಿಯೂ ಡಾರ್ಲಿಂಗ್ ಕೃಷ್ಣ ಯಶಸ್ಸು ಕಂಡಿದ್ದಾರೆ. ಚಿತ್ರಕ್ಕೆ ರಘು ದೀಕ್ಷಿತ್ ಅವರ ಸಂಗೀತ ಮತ್ತಷ್ಟು ಪುಷ್ಟಿ ಕೊಟ್ಟಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.  ನಟಿಯರಾದ ಮಿಲನ ನಾಗರಾಜ್, ಅಮೃತಾ ಅಯ್ಯಂಗಾರ್, ಹಾಗೂ ರಚನಾ ಪ್ರೇಕ್ಷಕರ ಹೃದಯದಲ್ಲಿ ಗೊತ್ತಿಲ್ಲದೆ ಭಾಗ ಪಡೆಯುತ್ತಾರೆ ಎಂಬುವುದು ಸ್ಪಷ್ಟ.
ಒಟ್ಟಿನಲ್ಲಿ, ನೋಡುಗರ ಮನದಲ್ಲಿ, ಸುಂದರ ಹಿತಕರ ಅನುಭೂತಿಯೊಂದಿಗೆ ಸಿಹಿ, ಕಹಿ, ಖಾರ ಸ್ವಾದವನ್ನು ಉಣಬಡಿಸುವ ಚಿತ್ರ, ಆಪ್ತವಾಗಿ ರಂಜಿಸಿ, ಕಾಡಿಸಿ ಹೇಳದೆ ಕೇಳದೆ  ಉಳಿದು ಬಿಡುತ್ತದೆ.
-ಶ್ರೀರಾಜ್ ವಕ್ವಾಡಿ 

Friday, April 10, 2020

ಕೊರೋನಾದ ದವಡೆಯಲ್ಲಿ ಭಾರತ | ನಿರುದ್ಯೋಗ ಶೇ. 23ರಷ್ಟು ಏರಿಕೆ..!


ಇಡೀ ವಿಶ್ವಕ್ಕೆ ವಿಶ್ವವೇ ಕೊರೋನಾ ವೈರಸ್‌ನ ದವಡೆಗೆ ಸಿಲುಕಿ ತತ್ತರಿಸಿ ಹೋಗಿದೆ. ಆರ್ಥಿಕತೆಯಂತೂ ನೆಲಕಚ್ಚಿದೆ. ಈ ನಡುವೆ ದೇಶದಲ್ಲಿ ಕೊರೋನಾ ವೈರಸ್ಸನ್ನು ಹೊಡೆದೋಡಿಸಲು ಸದ್ಯಕ್ಕೆ ಏಪ್ರಿಲ್ 14ರ ತನಕ ದೇಶಕ್ಕೆ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ದೇಶದಾದ್ಯಂತ ಜನ ಆರ್ಥಿಕ ಮುಗ್ಗಟ್ಟಿನಿಂದ ಕೊರಗಿದ್ದಾರೆ. ಇನ್ನು ನಿರುದ್ಯೋಗದ ಸಮಸ್ಯೆಯ ಬಗ್ಗೆ ವಿವರವಾಗಿ ಹೇಳುವ ಅಗತ್ಯವಿಲ್ಲ. ಭಾರತದಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಗಳಲ್ಲಿವೊಂದು. ಇದರಿಂದ ಎಷ್ಟೋ ಮಂದಿ ಬಳಲುತ್ತಿರುವ ಪ್ರತ್ಯಕ್ಷ ಸಾಕ್ಷಿ ನಮ್ಮ ಮುಂದಿದೆ.
ಕೊರೋನಾ ಬಿಕ್ಕಟ್ಟಿನ ಪರಿಣಾಮದಿಂದಾಗಿ ಹೂಡಿದ ಲಾಕ್ಡೌನ್ ಕಾರಣದಿಂದಾಗಿ ದೇಶದ ನಿರುದ್ಯೋಗ ಸಮಸ್ಯೆ ಗಣನೀಯ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಿಗಾವಹಿಸುವ ಮುಂಬೈ ಮೂಲದ ಖಾಸಗಿ ಸಂಸ್ಥೆ ಸಿಎಮ್‌ಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಅಚ್ಚರಿ ಹುಟ್ಟಿಸುವ ಮಾಹಿತಿಯೊಂದನ್ನು ಹೊರಹಾಕಿದೆ.
ಮಹಾಮಾರಿ ವೈರಸ್ಸನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ ಮಾಡಿದ್ದೆಂದು ಎಲ್ಲರಿಗೂ ತಿಳಿದಿರುವ ವಿಷಯ. ಬಹುತೇಕ ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಈ ನಡುವೆ ಸಿಎಮ್‌ಐಇ ನೀಡಿದ ಈ ಮಾಹಿತಿ ಕೇಂದ್ರ ಸರ್ಕಾರವನ್ನು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಸಿದೆ ಎಂಬುವುದರಲ್ಲಿ ಸಂಶಯವಿಲ್ಲ. ಮಾರ್ಚ್ ತಿಂಗಳಲ್ಲಿ ನಿರುದ್ಯೋಗದ ಪ್ರಮಾಣ ಐತಿಹಾಸಿಕವಾಗಿ ಏರಿಕೆ ಕಂಡಿದೆ ಎಂದು ಸಿಎಮ್‌ಐಇ ಹೇಳಿದೆ. ದೇಶದಲ್ಲಿ, ನಿರುದ್ಯೋಗ ಪ್ರಮಾಣ ಶೇಕಡಾ 23.4 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದೆ.


ನಿರುದ್ಯೋಗ ಸಮಸ್ಯೆ ಭಾರತ ದೇಶದ ಸಮಸ್ಯೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ಬಾಧೆಯಾಗಿ ಕಾಡಿದೆ ನಿರುದ್ಯೋಗ. ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಏರಿಕೆಯಾಗುತ್ತಲೇ ಇದೆ. ಈ ನಡುವೆ, ಭಾರತದಲ್ಲಿ ಸುಮಾರು 40 ಕೋಟಿಯಷ್ಟು ಮಂದಿ ಬಡತನಕ್ಕೊಳಗಾಗಲಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿರುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಾತ್ರವಲ್ಲದೇ ದೇಶದಲ್ಲಿ, ಕೊರೋನಾ ಸೋಂಕಿತರ ಪಟ್ಟಿ ಕ್ಷಣಕ್ಷಣಕ್ಕೆ ವಿಸ್ತಾರಗೊಳ್ಳುತ್ತಲೇ ಇದೆ. ಸರ್ಕಾರದ ಮಟ್ಟದಲ್ಲಿ ವೈರಸ್ಸನ್ನು ನಿಯಂತ್ರಣಕ್ಕೆ ತರುವ  ಬಗೆಗಿನ ಹೊಸ ಯೋಜನೆಗಳನ್ನು ಮತ್ತು ಲಾಕ್ಡೌನ್ ಮುಂದುವರಿಸುವುದರ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ವೇಳೆ ಲಾಕ್ಡೌನ್ ಮುಂದುವರಿದರೇ ಈ ಸಮಸ್ಯೆಗಳೆಲ್ಲಾ ದುಪ್ಪಟ್ಟಾಗುವುದರಲ್ಲಿ ಏನೂ ಸಂದೇಹವಿಲ್ಲ ಎನ್ನುವುದನ್ನು ಸ್ವತಃ ತಜ್ಞರೇ ವಿಶ್ಲೇಷಿಸುತ್ತಿದ್ದಾರೆ.


ಈಗಾಗಲೇ ಕೋಟಿ ಕೋಟಿ ಮಂದಿ ದಿನಗೂಲಿ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿ ಹೇಳತೀರದ ಪರಿಸ್ಥಿತಿ ಬಂದೊದಗಿದೆ. ಬಡತನದ ನಿವಾರಣೆ ಹೇಗೆ..? ಆರ್ಥಿಕ ಸ್ಥಿತಿಗತಿಗಳೇನು..? ನಿರುದ್ಯೋಗದ ಸಮಸ್ಯೆ ಬಗೆಹರಿಸುವುದು ಹೇಗೆ..? ಜೊತೆಗೆ, ಕಳೆದ ಜನವರಿ ಹಾಗು ಮಾರ್ಚ್ ತಿಂಗಳುಗಳ ನಡುವೆ ದೇಶಕ್ಕೆ ಪರದೇಶದಿಂದ ಬಂದಿಳಿದವರ ಸಂಖ್ಯೆ ಬರೋಬ್ಬರಿ 15 ಲಕ್ಷ. ಅವರ ಪಾಡೇನು..? ಎಂಬ ಪ್ರಶ್ನೆಗಳು ಸರ್ಕಾರದೆದುರಿಗಿದೆ. ಈ ಎಲ್ಲಾ ಸಮಸ್ಯೆಯನ್ನು, ಬಾಧೆಗಳನ್ನು ನಿವಾರಿಸುವುದಕ್ಕೆ ಶಿಘ್ರವಾಗಿ ಸರ್ಕಾರ ಕಾರ್ಯತಂತ್ರ ರೂಪಿಸಬೇಕಾಗಿದೆ. ಈ ಸಮಸ್ಯೆ ಅಷ್ಟು ಸುಲಭವಾಗಿ ಎದುರಿಸುವ ಸಮಸ್ಯೆಯಂತೂ ಅಲ್ಲ. ಇದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿದೆ.  ಬಡವರ, ನಿರುದ್ಯೋಗಿಗಳ ಹಾಗೂ ಮಧ್ಯಮ ವರ್ಗದವರ ಬದುಕು ಕತ್ತಿ ಅಲಗಿನ ಮೇಲೆ ನಿಂತದ್ದಂತೂ ಅಪ್ಪಟ ಸತ್ಯ. ಒಟ್ಟಿನಲ್ಲಿ  ಸರ್ಕಾರ ಹೇಗೆ ಈ ಬಾಧೆಗಳನ್ನೆಲ್ಲಾ ನಿಭಾಯಿಸುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.


-----------------------------------------------
-ಶ್ರೀರಾಜ್ ವಕ್ವಾಡಿ.

Thursday, April 9, 2020

ಮಕ್ಕಳಿಗೆ ಕೋರೋನಾ ನೀಡಿದೆ ಬಂಪರ್ ಕೊಡುಗೆ | ಮಕ್ಕಳ ದನಿಯಾಗಿ ಇದೆ ‘ಮಕ್ಕಳ ಸಾಹಿತ್ಯ’ | ಓದಿಗೆ ಇದು ಪ್ರೈಮ್ ಟೈಮ್..!


ಒಂದು ಸಾಹಿತ್ಯ ಕೃತಿಯಾಗಿ ಮಾತ್ರವಲ್ಲದೇ ಅತ್ಯಂತ ಪ್ರಭಾವಶಾಲಿಯಾಗಿ ಮನೋರಂಜನೆಯನ್ನು ಮತ್ತು ಸಾಮಾಜಿಕ ಪರಿವರ್ತನೆಗಳೆರಡನ್ನೂ ಏಕಕಾಲದಲ್ಲಿ ಸಾಧಿಸಬಲ್ಲ ಅದ್ಭುತ ಶಕ್ತಿಯನ್ನು ಮಕ್ಕಳ ಸಾಹಿತ್ಯ ಹೊಂದಿದೆಯೆಂಬ ಸತ್ಯವನ್ನು ನಾವೀಗಾಗಲೇ ಮನಗಂಡಿದ್ದೇವೆ. ಉಗಮದಿಂದ ತೊಡಗಿ ಇಲ್ಲಿಯ ತನಕವೂ ಹಲವು ರೀತಿಯ ಬದಲಾವಣೆಗಳಿಗೆ ಒಳಗಾಗಿ, ಹಲವು ಪ್ರಕಾರಗಳಿಗೆ ಹೊಂದಿ ಬೆಳೆಯುತ್ತಾ ಬಂದಿರುವ ಸಾಹಿತ್ಯವೇ ಮಕ್ಕಳ ಸಾಹಿತ್ಯ.
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಹಾಗೂ ಸಹಜ ಪ್ರತಿಭೆಗಳು ಸುಪ್ತವಾಗಿ ಅಡಗಿರುತ್ತವೆ. ಹೊಸದನ್ನು ಅರಿತುಕೊಳ್ಳುವ ಹುಮ್ಮಸ್ಸು, ರಹಸ್ಯಗಳನ್ನು ಪ್ರಶ್ನೆಗಳ ಮೂಲಕ ಕೆದುಕುವ ಕುತೂಹಲ ಹಾಗೂ ಕಲಿಯುವ ಅದಮ್ಯ ತುಡಿತಗಳು ಮಕ್ಕಳಲ್ಲಿ ಇರುತ್ತದೆ. ಈ ಪ್ರಕಾರದ ಸಾಹಿತ್ಯಗಳ ಮೂಲಕ ಸೂಕ್ತ ಅವಕಾಶಗಳನ್ನು, ಹೊಸತನಗಳನ್ನು ಮಕ್ಕಳಿಗೆ ನೀಡಿದಾಗ ಸಾಹಿತ್ಯಾಸಕ್ತಿ ತಾನಾಗಿಯೇ ಹೊರಬರುತ್ತದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ಮಕ್ಕಳಿಗೆ ಸಾಹಿತ್ಯದ ಪಾತ್ರವೇನೆಂಬುವುದು ತಿಳಿಯುತ್ತದೆ.
ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಬಹಳ ಕಾಲದಿಂದಲೂ ಇದ್ದಿತ್ತಾದರೂ ಅದಕ್ಕೆ ಸ್ಪಷ್ಟ ರೂಪ ಕಂಡುಕೊಂಡಿದ್ದು ಆಧುನಿಕ ಶಿಕ್ಷಣದಲ್ಲಿ ಮತ್ತು ನವೋದಯ ಸಾಹಿತ್ಯ ಪ್ರಕಾರ ಆರಂಭವಾದ ಸಂದರ್ಭದಲ್ಲಿ ಎನ್ನಬಹುದು. ಜಾನಪದ ಸಾಹಿತ್ಯದಿಂದಲೇ ಮಕ್ಕಳ ಸಾಹಿತ್ಯಗಳು ಬೆಳಕಿಗೆ ಬಂದವು ಎನ್ನುವುದನ್ನು ಅಜ್ಜಿ ಹೇಳುತ್ತಿದ್ದ ಆಶುಕಥೆಗಳು, ಅಮ್ಮಂದಿರ ಲಾಲಿ ಹಾಡುಗಳು, ಒಗಟುಗಳು, ಗಾದೆಮಾತುಗಳು, ಪಂಚತಂತ್ರ ಕಥೆಗಳ ಮೂಲಕ ಕಾಣಬಹುದು. ಆಧುನಿಕ ದಿನಮಾನಗಳಲ್ಲಿ ಮುದ್ರಣ ಸಾಮರ್ಥ್ಯ ಮತ್ತು ಅಡಕ ಮುದ್ರಣಗಳ ಮೂಲಕ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯುವುದಕ್ಕೆ ಸಾಧ್ಯವಾಯಿತು. ಹಾಗಾಗಿ ಕವಿತೆಗಳು, ಸಣ್ಣ ಕಥೆಗಳು, ನಾಟಕ, ವಿಜ್ಞಾನ ಬರಹಗಳು ಹೀಗೆ ಅನೇಕ ಪ್ರಕಾರಗಳು ಮಕ್ಕಳ ಸಾಹಿತ್ಯದಲ್ಲಿ ಬಂದವು.
ಜಾನಪದ ಪರಂಪರೆಯ ‘ಗೋವಿನ ಹಾಡು’, ಹದಿನೈದನೇ ಶತಮಾನದಲ್ಲಿ ಷಡಕ್ಷರಿಯ ‘ತಿರುಕನ ಕನಸು’, ಹದಿನಾರನೇ ಶತಮಾನದ ಸಂದರ್ಭದಲ್ಲಿ ಆಂಗ್ಲ ಸಾಹಿತ್ಯಗಳ ತರ್ಜುಮೆಗಳು ಮಕ್ಕಳ ಸಾಹಿತ್ಯವನ್ನು ಬೆಳೆಸಿದವು ಎಂದರೆ ತಪ್ಪಾಗಲಾರದು. ಹೀಗೆ ಹಂತಹಂತವಾಗಿ ಮಕ್ಕಳ ಸಾಹಿತ್ಯ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಸಾಹಿತ್ಯದಲ್ಲಿ ಅದರಲ್ಲೂ ಕಾವ್ಯ ಸಾಹಿತ್ಯದಲ್ಲಿ ಬಹಳ ಪ್ರಯೋಗವನ್ನು ಮಾಡಲಾಯಿತು. ಅವುಗಳು ಮಕ್ಕಳ ಅಭಿರುಚಿಗಳನ್ನು ಇಮ್ಮಡಿಗೊಳಿಸಿದವು.

‘ಇಟ್ಟರೆ ಸಗಣಿಯಾದೆ
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವ
ಹರಿ ಹರಿ ಗೋವು ನಾನು’

 ಇಂತಹ ಸುಲಭ ಗ್ರಾಹ್ಯ ಆದರ್ಶ ಮೌಲ್ಯಗಳನ್ನು ಹೊಂದಿರುವ ಸಾಹಿತ್ಯ ಪ್ರಕಾರಗಳನ್ನು ಎಮ್. ಎಸ್. ಪುಟ್ಟಣ್ಣನವರು, ಎಸ್. ಜಿ ನರಸಿಂಹಾಚಾರ್ಯರು ಶಾಂತಕವಿಗಳು ಮುಂತಾದವರು ಪಠ್ಯ ಪುಸ್ತಕಗಳಾಗಿ ರಚಿಸಿ ಸಾಹಿತ್ಯದ ಕಡೆ ಮಕ್ಕಳಿಗೆ ಒಲವು ಮೂಡಿಸುವಂತೆ ಮಾಡಿದರು. ಅನಂತರದಲ್ಲಿ ಪಂಜೆ ಮಂಗೇಶರಾಯರು ಮಕ್ಕಳ ಸೂಕ್ಷ್ಮ ಮನಸ್ಸಿನ ಸಂವೇದನೆಯನ್ನು ಅರ್ಥೈಸಿಕೊಂಡು ಸರಳ ಸುಂದರವಾದ ಮಕ್ಕಳನ್ನು ಕುಣಿಸಿ, ತಣಿಸಬಲ್ಲ ಗೀತೆಗಳನ್ನು ರಚಿಸಿದರು. ಸಾಹಿತ್ಯ ಕ್ಷೇತ್ರ ಅವರನ್ನು ‘ಶಿಶು ಸಾಹಿತ್ಯದ ಜನಕ’ರೆಂದೇ ಗುರುತಿಸಿತು.

ಮೂಡುವನು ರವಿ ಮೂಡುವನು
ಕತ್ತಲೊಳಗೆ ಜಗಳಾಡುವನು
ಮೂಡಣ ರಂಗಸ್ಥಳದಲ್ಲಿ ನೆತ್ತರು ಮಾಡುವನು
ಕುಣಿದಾಡುವನು’...

ಇಂತಹ ಕವಿತೆಗಳಲ್ಲಿನ ಲಯ, ಶ್ರಾವ್ಯ ಗುಣಗಳಿಂದ ಮಕ್ಕಳನ್ನು ಮತ್ತಷ್ಟು ಸಾಹಿತ್ಯಾಸಕ್ತಿಯತ್ತ ಬೆಳೆಸುವುದಕ್ಕೆ ಉತ್ತೇಜನ ನೀಡಿತು.
ಜಿ ಪಿ ರಾಜರತ್ನಂ ರವರ ‘ಬಣ್ಣದ ತಗಡಿನ ತುತ್ತೂರಿ’, ಡಾ, ಕೋಟ ಶಿವರಾಮ ಕಾರಂತರು ‘ಬಾಲವನ’ದ ಮೂಲಕ ಮಕ್ಕಳ ಸಾಹಿತ್ಯಕ್ಕೆ ಮಾಡಿದ ಪ್ರಯೋಗಗಳು, ಕುವೆಂಪುರವರ ‘ಕಿಂದರ ಜೋಗಿ’ ನಾಟಕದಲ್ಲಿನ ಶಿಶುಗೀತೆಗಳು, ಹೀಗೆ ಇದೇ ಸಾಲಿನಲ್ಲಿ ಸಿದ್ದಯ್ಯ ಪುರಾಣಿಕರ ‘ ಅಜ್ಜನ ಕೋಲಿದು ನನ್ನಯ ಕುದುರೆ’, ಎನ್. ಶ್ರೀನಿವಾಸ ಉಡುಪರ ‘ಕುಂಬಕರ್ಣನ ನಿದ್ರೆ’, ಡಾ. ಎನ್. ಎಸ್ ಲಕ್ಷ್ಮಿನಾರಾಯಣ ಭಟ್ಟರ, ಎಚ್. ಎಸ್ ವೆಂಕಟೇಶ ಮೂರ್ತಿಯವರ ಕವಿತೆಗಳು ‘ಬಾಳ ಒಳ್ಳೇವ್ರು ನಮ್ಮಿಸ್ಸು, ಏನ್ ಹೇಳಿದ್ರೂ ಎಸ್ ಎಸ್ಸೂ’, ‘ಗೇರ್ ಗೇರ್ ಮಂಗಣ್ಣ’ ಇಂತಹುಗಳು ಮಕ್ಕಳ ಸಾಹಿತ್ಯದ ಉನ್ನತಿಗೆ ಹೊಸ ಶಕ್ತಿಯನ್ನು ನೀಡಿದವು ಎಂದರೆ ತಪ್ಪಿಲ್ಲಾ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯದಲ್ಲಿ ಮಕ್ಕಳೇ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಿರುವ ಹೊಸ ವಿದ್ಯಮಾನವನ್ನು ನೋಡುತ್ತಿದ್ದೇವೆ. ಅವರ ಕಲ್ಪನೆಗಳ ಹರಿವಿನ ಮೂಲಕ ಕಥೆ, ಕಾವ್ಯ ಕಟ್ಟುವ ಸರಳ, ಮುಗ್ಧತೆಯ ಸಾಹಿತ್ಯಾಸಕ್ತಿ ಬೆರಗು ಹುಟ್ಟಿಸುವಂತಹದ್ದು. ಆದರೇ, ಇಂದು ಬೆರಳುಗಳಂಚಿನಲ್ಲೇ ಭಾವನೆಗಳನ್ನು ವ್ಯಕ್ತ ಪಡಿಸುವ ಕಾಲಮಾನದಲ್ಲಿ ಈ ಓದು, ಬರಹ, ಸಾಹಿತ್ಯ ಎಲ್ಲೋ ಒಂದು ಕಡೆ ಮರೆಯಾಗುತ್ತಿವೆ ಎಂದೆನ್ನಿಸುತ್ತಿದೆ. ಅಂತಹುಗಳೇ ಉತ್ಕೃಷ್ಟವಾದ ಮನೋರಂಜನೆಗಳನ್ನು ಕೊಡುವ ಮಾಧ್ಯಮಗಳೆಂದು ತಿಳಿದಿರುವ ಕೆಲವು ಎಳೆಯರ ಚಿತ್ತವನ್ನು ಸಾಹಿತ್ಯದತ್ತ ಸೆಳೆಯುವ  ಕಾರ್ಯ ತುರ್ತು ಎಂದೆನ್ನಿಸುತ್ತದೆ.


ಮಕ್ಕಳ ಸಾಹಿತ್ಯಕ್ಕೆ ಪತ್ರಿಕಾ ಮಾಧ್ಯಮಗಳು, ಬೇಸಿಗೆ ರಜೆಗಳ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಸಾಹಿತ್ಯ, ಕಲೆಗಳ ಶಿಬಿರಗಳನ್ನು ಏರ್ಪಡಿಸುತ್ತಿದ್ದರೂ ಅಲ್ಲಿ ಭಾಗವಹಿಸುವ ಸಂಖ್ಯೆ ಇಳಿಮುಖವಾಗುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ.

ಈ ಭಾರಿಯಂತೂ ಮಕ್ಕಳ ಕೊರೋನಾ ವೈರಸ್ ಬಂಪರ್ ಕೊಡುಗೆಯನ್ನೇ ನೀಡಿದೆ. ಪರೀಕ್ಷೆಗಳಿಲ್ಲದೇ ಒಂದರಿಂದ ಒಂಬತ್ತನೇ ತರಗತಿಯವೊರೆಗಿನ ವಿದ್ಯಾರ್ಥಿಗಳನ್ನು ಸರ್ಕಾ ತೇರ್ಗಡೆ ಮಾಡಿದೆ. ಈ ರಜೆಯಲ್ಲಿ ಮಕ್ಕಳನ್ನು ಒಂದಿಷ್ಟು ಸಮಯ ಸಾಹಿತ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಸೂಕ್ತ. ಆ ಬಗ್ಗೆ ಮನೆಯವರೂ ಆಸಕ್ತಿ ತೋರುವುದರ ಮೂಲಕ ಮಕ್ಕಳಲ್ಲಿ ಒಂದಿಷ್ಟು ಸಾಹಿತ್ಯದ ಓದಿನಲ್ಲಿ ಪಾಲ್ಪಡೆಯುವುದಕ್ಕೆ ಸಹಕರಿಸಿದರೇ ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ನೂರಕ್ಕೆ ನೂರು ಸತ್ಯ.
-ಶ್ರೀರಾಜ್ ವಕ್ವಾಡಿ.   




Wednesday, April 8, 2020

ಚೀನಾದ ಕೊರೋನಾ ಟೆಸ್ಟಿಂಗ್ ಕಿಟ್‌ಗಳು ಅಪ್ಪಟ ನಕಲಿ..!


ಚೀನಾ, ಇಡೀ ಪ್ರಪಂಚಕ್ಕೆ ಮಹಾಮಾರಿ ಕೊರೋನಾ ವೈರಸನ್ನು ಹಬ್ಬಿಸುವುದರ ಮೂಲಕ ತನ್ನ ಕುಂತಂತ್ರಿ ಮುಖ ತೋರಿಸಿದ್ದಲ್ಲದೇ, ಈಗ ಮತ್ತೆ ನರಿ ಬುದ್ಧಿಯ ಚಾಳಿಯನ್ನು ಮುಂದುವರಿಸಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ನಕಲಿ ಕೊರೋನಾ ಟೆಸ್ಟಿಂಗ್ ಕಿಟ್‌ಗಳನ್ನು ಪ್ರಪಂಚಕ್ಕೆ ರವಾನೆ ಮಾಡುತ್ತಿದೆ. ಮತ್ತೊಂದೇನೆಂದರೇ, ಅದೆಷ್ಟೋ ಪರವಾನಿಗೆ ಇಲ್ಲದೇ ಇರುವ ಕಂಪೆನಿಗಳಿಂದ ಚೀನಾ ಕೊರೋನಾ ಟೆಸ್ಟಿಂಗ್ ಕಿಟ್ ಸಪ್ಲೈ ಮಾಡುತ್ತಿದೆ ಎನ್ನುವ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ.
ಕೆಲವು ದಿನಗಳ ಹಿಂದೆ ಯೂರೋಪ್ ದೇಶ ಸ್ಪೇನ್, ಬರೋಬ್ಬರಿ ಆರು ಲಕ್ಷದ ನಲವತ್ತು ಸಾವಿರ ಕೊರೋನಾ ಟೆಸ್ಟಿಂಗ್ ಕಿಟ್‌ಗಳನ್ನು ಚೀನಾದ ಶಂಜನ್ ಬಯೋಈಸಿ ಬಯೋ ಟೆಕ್ನಾಲಜಿ ಎಂಬ ಕಂಪೆನಿಯಿಂದ ತರಿಸಿಕೊಂಡು ಮೋಸ ಹೋಗಿದ್ದು ವಿಶ್ವದಾದ್ಯಂತ ಸುದ್ದಿಯಾಗಿತ್ತು. ಅಚ್ಚರಿಯ ವಿಷಯವೇನೆಂದರೇ, ಸ್ಪೇನ್‌ನಲ್ಲಿರುವ ಚೀನಾದ ರಾಯಭಾರಿಯೇ ಹೇಳಿರುವ ಪ್ರಕಾರ, ಚೀನಾದ ಶಂಜನ್ ಬಯೋಈಸಿ, ಬಯೋ ಟೆಕ್ನಾಲಜಿ ಕಂಪೆನಿಗೆ ವೈದ್ಯಕೀಯ ಸಲಕರಣೆಗಳನ್ನು ಮಾರಾಟ ಮಾಡುವುದಕ್ಕೆ ಚೀನಾ ಇನ್ನೂ ಅಧಿಕೃತವಾಗಿ ಪರವಾನಿಗೆ ಕೊಟ್ಟಿಲ್ಲವಂತೆ. ಚೀನಾ ತನ್ನ ಕಮ್ಯೂನಿಷ್ಟ್ ಬುದ್ಧಿಯನ್ನು ಇಂತಹ ಪರಿಸ್ಥಿತಿಯಲ್ಲೂ ಬಿಟ್ಟಿಲ್ಲ ಎಂಬುವುದು ಇದರಲ್ಲೇ ತಿಳಿಯುತ್ತದೆ. ಚೀನಾ ಕಳುಹಿಸಿದ ಬಹುತೇಕ ಎಲ್ಲಾ ಕೋರೋನಾ ಟೆಸ್ಟಿಂಗ್ ಕಿಟ್ ಸೋಂಕು ಪತ್ತೆ ಮಾಡುತ್ತಿಲ್ಲ ಎಂಬ ಆರೋಪವನ್ನು ಸ್ಪೇನ್ ಮಾಡಿತ್ತು. ಹತ್ತು ಕೋರೋನಾ ಟೆಸ್ಟ್ಗಳನ್ನು ಮಾಡಿದರೇ, ಅದರಲ್ಲಿ ಏಳು ಟೆಸ್ಟ್ಗಳು ತಪ್ಪಾಗಿ ಫಲಿತಾಂಶ ನೀಡುತ್ತಿದೆ ಎಂಬ ವಿಷಯವನ್ನು ಬಯಲಿಗೆಳೆದಿತ್ತು ಸ್ಪೇನ್. ಎನ್ನುವಲ್ಲಿಗೆ, ನಕಲಿ ಟೆಸ್ಟಿಂಗ್ ಕಿಟ್‌ಗಳನ್ನು ಇಡೀ ಜಗತ್ತಿಗೆ ಸಪ್ಲೈ ಮಾಡುವುದರ ಮೂಲಕ ಚೀನಾ ‘ಬಯೋ ವಾರ್’ ಯಶಸ್ವಿಯಾಗಿ ನಡೆಸುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆಯೊಂದು ಕಾಡುತ್ತಿದೆ.


ಈ ಸಾಲಿಗೆ ಟರ್ಕಿ, ನೆದರ್ಲ್ಯಾಂಡ್ ಸೇರಿ ಹಲವು ದೇಶಗಳು ಚೀನಾದಿಂದ ತರಿಸಿಕೊಂಡ ಕೊರೋನಾ ಟೆಸ್ಟಿಂಗ್ ಕಿಟ್‌ಗಳು, ಹಾಗೂ ಮಾಸ್ಕ್ಗಳು ಬಳಕೆಯಾದವುಗಳು, ಉಪಯೋಗಿಸುವುದಕ್ಕೆ ಆಗುತ್ತಿಲ್ಲ ಎಂಬ ಆರೋಪವನ್ನು ಚೀನಾದ ಮೇಲೆ ಹಾಕಿವೆ. ರಿಪಬ್ಲಿಕ್ ಜೆಕ್ ದೇಶವೂ ಕೂಡ ಒಂದು ಲಕ್ಷದ ಐವತ್ತು ಸಾವಿರ ಕೊರೋನಾ ಟೆಸ್ಟಿಂಗ್ ಕಿಟ್‌ಗಳನ್ನು ಚೀನಾದಿಂದ ಖರೀದಿಸಿತ್ತು, ಅದರಲ್ಲಿ ಶೇಕಡಾ 80ರಷ್ಟು ಕೊರೋನಾ ಟೆಸ್ಟಿಂಗ್ ಕಿಟ್‌ಗಳು ದೋಷಪೂರಿತ ಎಂದು ಹೇಳಿತ್ತು ರಿಪಬ್ಲಿಕ್ ಜೆಕ್.


ಕೊರೋನಾ ಟೆಸ್ಟಿಂಗ್ ಕಿಟ್‌ಗಳಲ್ಲಿ ದೋಷವಿದೆ, ಅದು ನಕಲಿ ಎಂದು ಹೇಳಿದ ದೇಶಗಳ ಪಟ್ಟಿಗೆ ಈಗ ಬ್ರಿಟನ್ ಕೂಡ ಸೇರಿದೆ. ಚೀನಾ ಕಳುಹಿಸಿದ ಕೊರೋನಾ ಟೆಸ್ಟಿಂಗ್ ಕಿಟ್‌ಗಳು ಸಮರ್ಪಕವಾಗಿಲ್ಲ, ನೂರಕ್ಕೆ ಶೇಕಡಾ 90ರಷ್ಟು ಕಿಟ್‌ಗಳು ದೋಷಪೂರಿತವಾಗಿದೆ, ಈ ಕಿಟ್‌ಗಳು ಹಲವಾರು ತಪ್ಪು ಫಲಿತಾಂಶವನ್ನು ನೀಡಿವೆ ಎಂದು ಹೇಳಿದೆ.
ಈ ನಡುವೆ ಮತ್ತೊಂದು ಭೀತಿ ಹುಟ್ಟಿಸುತ್ತಿರುವ ವಿಷಯವೇನೆಂದರೇ, ಇದೇ ನರಿ ಬುದ್ಧಿಯ ಚೀನಾ ದೇಶದ ಏಳು ಕಂಪೆನಿಗಳಿಗೆ ಕೊರೋನಾ ಕಿಟ್ ಕಳುಹಿಸಿಕೊಡಲು ಭಾರತವೂ ಒಪ್ಪಿಗೆ ನೀಡಿದೆ ಎನ್ನುವುದು.  ಈಗಾಗಲೇ, ಕೆಲವು ರಾಜ್ಯಗಳಲ್ಲಿ ಚೀನಾದಿಂದ ಕಿಟ್‌ಗಳನ್ನು ತರಿಸಿಕೊಂಡಿವೆ ಹಾಗೂ ತಮಿಳುನಾಡು ಸೇರಿ ಹಲವು ರಾಜ್ಯಗಳು ಕೊರೋನಾ ಟೆಸ್ಟಿಂಗ್ ಕಿಟ್‌ಗಳಿಗಾಗಿ ಚೀನಾಗೆ ಬೇಡಿಕೆ ಇಟ್ಟಿದ್ದು, ಇಂದೋ ನಾಳೆಯೋ ಆ ಕಿಟ್‌ಗಳು ತಲುಪಲಿವೆಯಂತೆ.
ಇಷ್ಟಾದ ಮೇಲೆ, ಚೀನಾ ಉಳಿದ ದೇಶಗಳಿಗೆ ಮೋಸ ಮಾಡಿದಂತೆ ನಮ್ಮ ದೇಶಕ್ಕೂ ಮಾಡುತ್ತಿದೆಯಾ..? ಕಿಟ್‌ಗಳ ಮೂಲಕ ಸೋಂಕು ಹರಡಿಸುವ ಕುತಂತ್ರಿ ಬುದ್ಧಿಯನ್ನು ಮಾಡುತ್ತಿದೆಯಾ..? ಕಳಪೆ ಕಿಟ್‌ಗಳನ್ನು ನೀಡುತ್ತಿವೆಯಾ..? ದೇಶಕ್ಕೆ ಚೀನಾ ಸಂಚಕಾರ ಹೂಡುತ್ತಿದೆಯಾ..? ಎಂಬ ಭಯಾನಕ ಪ್ರಶ್ನೆಗಳು ಕಾಡುತ್ತಿವೆ. ಸಮಾಧಾನಕರ ವಿಷಯವೇನೆಂದರೇ, ಸದ್ಯಕ್ಕೆ ಅಂತಹ ಸುದ್ದಿಗಳು ದೇಶದಲ್ಲಿ ಕಂಡು ಬಂದಿಲ್ಲ. ಆ ಬಗ್ಗೆ ದೇಶ ಮುತುವರ್ಜಿ ವಹಿಸುತ್ತಿದೆ, ಮತ್ತು ದೇಶದಲ್ಲೇ ತಯಾರಾದ ಕಿಟ್‌ಗಳನ್ನು ಪೂರೈಸುವುದಕ್ಕೆ ನಿಧಾನವಾಗಿ ಪ್ರಯತ್ನಿಸುತ್ತಿದೆ ಹಾಗೂ ಯಶಸ್ವಿಯೂ ಆಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
ಆದರೇ, ದೇಶ ಯಾವ ಕಾಲದಲ್ಲಿಯೂ ಎಚ್ಚರ ತಪ್ಪುವಂತಿಲ್ಲ ಎನ್ನುವುದಕ್ಕೆ ಬೇರೆ ದೇಶಗಳು ಚೀನಾದಿಂದ ಮೋಸ ಹೋದ ಘಟನೆಗಳು ಎಚ್ಚರಿಕೆ ನೀಡುತ್ತಿವೆ. ಹಾಗಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಕೊರೋನಾ ಟೆಸ್ಟಿಂಗ್ ಕಿಟ್‌ಗಳನ್ನು ಸೊಂಕು ಪತ್ತೆಗೆ ಬಳಸುವ ಮುಂಚಿತವಾಗಿ ಕಿಟ್‌ಗಳನ್ನೇ ಟೆಸ್ಟ್ ಮಾಡುವ ಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ, ಚೀನಾ ಇಂತಹ ಸಂದರ್ಭವನ್ನೂ ಲಾಭಕ್ಕಾಗಿ ಬಳಸಿಕೊಳ್ಳುವ ಹೇಸಿಗೆ ತಿನ್ನುವ ಬುದ್ಧಿಯನ್ನು ತೋರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
-------------------------------------
-ಶ್ರೀರಾಜ್ ವಕ್ವಾಡಿ

Tuesday, April 7, 2020

ಧರ್ಮದ ಅಪಪ್ರಚಾರ ಸಲ್ಲದು | ಸರ್ಕಾರದ ಖಡಕ್ ವಾರ್ನಿಂಗ್ | ತಪ್ಪಿತಸ್ಥರಿಗೆ ಶಿಕ್ಷೆ | ಸರ್ಕಾರದ ಕ್ರಮಕ್ಕೆ ಬೆದರಿದ ಅಪಪ್ರಚಾರಕರು..!


ಕೋಮುವಾದಿ ಧೋರಣೆ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಕಾಲಾಂತರದ ಬೆಳವಣಿಗೆಯಲ್ಲಿ ಹೊಸ ಹೊಸ ಆಯಾಮಗಳಲ್ಲಿ, ರೂಪಗಳಲ್ಲಿ ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಲೇ ಇದೆ. ಕಳೆದ ಕೆಲವು ವರ್ಷಗಳಿಂದ ಕೋಮುವಾದದಿಂದ ದೇಶ ತತ್ತರಿಸಿ ಹೋಗಿದೆ. ಇವತ್ತಿಗೂ ಆ ಸಮಸ್ಯೆಯನ್ನು ದೇಶಕ್ಕೆ ಕಿತ್ತೆಸೆಯಲಾಗಿಲ್ಲ ಎನ್ನುವುದೇ ದೊಡ್ಡ ದುರಂತ. ಹಾಗಾಗಿ ಅದು ಇಂದಿಗೂ ದೊಡ್ಡ ಜ್ವಲಂತ ಸಮಸ್ಯೆಯಾಗಿ ನಮ್ಮೆದುರಿಗಿದೆ. ಕೆಲವು ವರ್ಗಗಳು ದೇವರು, ಸಿದ್ಧಾಂತಗಳ ಹೆಸರಿನಲ್ಲಿ ತಮ್ಮ ಹಿತಕ್ಕೆ ತಕ್ಕಂತೆ ಆಸಕ್ತಿ ಕಾಯ್ದುಕೊಳ್ಳುವುದರಲ್ಲಿ ಕಾರ್ಯೋನ್ಮುಖವಾಗಿವೆ ಎನ್ನುವುದು ಅಪ್ಪಟ ಸತ್ಯ.
ದೇಶದಲ್ಲಿ ಭೇದಭಾವನೆಗಳು ಮನೆ ಮಾತಾಗಿ, ಪರಸ್ಪರ ಒಬ್ಬರನ್ನೊಬ್ಬರು ಒಪ್ಪಿಕೊಂಡು ಬದುಕದ ವಿಷಾಧನೀಯ ಸ್ಥಿತಿ ಸೃಷ್ಟಿಯಾಗಿ ಅದೆಷ್ಟೋ ವರ್ಷಗಳೇ ಕಳೆದಿವೆ. ಹಾಗೆ ಮಾಡುವುದಕ್ಕಾಗಿಯೇ ದುಡಿಯುವ ವರ್ಗವೊಂದಿದೆ ಬಿಡಿ. ಅದೂ ಕೂಡ ಸಂವಿಧಾನದ ‘ಅಭಿವ್ಯಕ್ತಿ’ ಎಂದು ಒಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಧರ್ಮ ಧರ್ಮಗಳ ನಡುವಿರುವ ಅಪನಂಬಿಕೆ, ಅಸಹನೆ, ಅವಿಶ್ವಾಸ ಎಲ್ಲವೂ ಅಪಾರ ಜೀವ ಬಲಿತೆಗೆದುಕೊಂಡಿದೆ ಎನ್ನುವುದಕ್ಕೆ ದೊಡ್ಡ ಪಟ್ಟಿಯ ಉದಾಹಣೆಯಿದೆ.
ಈ ಧರ್ಮ, ಜಾತಿ ವ್ಯವಸ್ಥೆಗಳು ಸಾಮಾಜಿಕ ಅನಿವಾರ್ಯತೆಯನ್ನು ಹುಟ್ಟು ಹಾಕಿತು. ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲೇಬೇಕು. ಅವರವರ ಧರ್ಮ, ಆಚಾರ ಅವರವರಿಗೆ ಆಕಾರ. ಆದರೇ, ಇನ್ನೊಂದು ಧರ್ಮವನ್ನು ದ್ವೇಷಿಸುವ ಮನೋಭಾವನೆ ಇಡೀ ದೇಶಕ್ಕೆ ಅಪಾಯ ಮಾಡಬಲ್ಲ, ನೆಮ್ಮದಿ ಕೆಡಸಬಲ್ಲ ಸಮಸ್ಯೆಯೆನ್ನುವುದರಲ್ಲಿ ಎರಡನೇ ಮಾತಿಲ್ಲ.



ಅದಿರಲಿ, ಇನ್ನೇನೂ ಹೆಚ್ಚು ವಿವರಿಸುವುದಕ್ಕೆ ಹೋಗಲಾರೆ,
ಇಡೀ ಪ್ರಪಂಚಕ್ಕೆ ಪ್ರಪಂಚವೇ ಕೋವಿಡ್-19 ಡೆಡ್ಲಿ ವೈರಸ್ ನಿಂದಾಗಿ ಬೆಚ್ಚಿಬಿದ್ದಿದೆ. ದೇಶದಲ್ಲಿಯೂ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂತಹ ಸ್ಥಿತಿಯಲ್ಲಿಯೂ ವೈಷಮ್ಯ ಸಾರುವವರ ಸಂಖ್ಯೆ, ಜಾತಿ, ಧರ್ಮಗಳ ವಿಷ ಬೀಜ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವವರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಅದಕ್ಕೆ ಮಾಧ್ಯಮಗಳು ಹೊರತಾಗಿಲ್ಲ. ಕೊರೋನಾ ವೈರಸ್, ಈ ಯಾವುದೇ ಜಾತಿ, ಧರ್ಮ, ಮೇಲ್ವರ್ಗ, ಕೆಳವರ್ಗ ಯಾವುದನ್ನೂ ಲೆಕ್ಕಿಸಲಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮೇಲ್ಮುಖವಾಯಿತು ಬಿಟ್ಟರೇ ಇಳಿಮುಖವಾಗಿಲ್ಲ. ಈ ಬಿಕ್ಕಟ್ಟು ನಿವಾರಣೆಗೆ ರಾಜ್ಯ, ಕೇಂದ್ರ ಸಕಾರಗಳು ಹರಸಾಹಸ ಪಡುತ್ತಿದೆ. ವಿಪಕ್ಷಗಳು ಆಡಳಿತ ಪಕ್ಷವನ್ನು ವಿರೋಧಿಸದೇ, ಸಲಹೆ ಸೂಚನೆಗಳನ್ನು ನೀಡುತ್ತಾ ಆಡಳಿತ ಪಕ್ಷದ ಪರವಾಗಿ, ಬೆಂಬಲವಾಗಿ ಈ ಕೋವಿಡ್ 19 ಹೊರಗೋಡಿಸಲು ಸಾಥ್ ನೀಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿ. ಆದರೇ, ಕೆಲವು ಸೋ ಕಾಲ್ಡ್ ಧರ್ಮ ಆರಾಧಕರು ತಮ್ಮ ಧೋರಣೆ ಬಿಡುತ್ತಿಲ್ಲ ಎನ್ನುವುದೇ ವಿಷಾಧನೀಯ.
ನಿಯಮ ಉಲ್ಲಂಘನೆ ಮಾಡಿದವರಿಗೆ ಸರ್ಕಾರ... ಜಾತಿ, ಧರ್ಮ ನೋಡದೇ ಕಾನೂನಿನಾತ್ಮಕವಾಗಿ ಶಿಕ್ಷೆ ವಿಧಿಸಿದೆ.  ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಇಡೀ ದೇಶಕ್ಕೆ ದೇಶವನ್ನೇ ಲಾಕ್ಡೌನ್ ಮಾಡಿದ್ದಾದರೂ ಕೆಲವೆಡೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು, ಅಷ್ಟಲ್ಲದೇ ಪೋಲಿಸರ ಮೇಲೆ ಹಲ್ಲೆ ಮಾಡಿದರು, ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರು, ದೇಶ ಕೊರೋನಾ ಭೀತಿಯಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿತ್ತು, ಗುಡಿ, ಚರ್ಚು, ಮಸೀದಿಗಳೆಲ್ಲದಕ್ಕೂ ಬೀಗ ಹಾಕಿದ ಸಂದರ್ಭದಲ್ಲಿಯೂ ಅಯೋಧ್ಯೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ಮಾರ್ಚ್ 25 ಬುಧವಾರ ಬೆಳಗ್ಗಿನ ಜಾವ ರಾಮ್‌ಲಲ್ಲಾ ವಿಗ್ರಹವನ್ನು ರಾಮ ಮಂದಿರ ಸಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣವಾಗಿ ಸ್ಥಳಾಂತರ ಮಾಡಲಾಯಿತು. ರಾಮ ಮಂದಿರ ಕಾರ್ಯ ಈ ಲಾಕ್ಡೌನ್ ಸಂದರ್ಭದಲ್ಲಿಯೂ ಸಾಂಗವಾಗಿ ಸಾಗುತ್ತಿದೆ, ಇದು ನಿಯಮ ಉಲ್ಲಂಘನೆಯಲ್ಲವೇ ..? ಎಂದು ದೊಡ್ಡ ಮಟ್ಟದ ಚರ್ಚೆಯಾಯಿತು. ನಿಜಾಮುದ್ದೀನ್ ಮರ್ಕಝ್ ಸಮಾವೇಶ ಸರ್ಕಾರದ ಆದೇಶವನ್ನೂ ಮೀರಿ ನಡೆಸಲಾಯಿತು. ದೇಶದೆಲ್ಲೆಡೆ ಆ ಪ್ರಕರಣ ಕೊರೋನಾ ಭೀತಿಯ ನಡುವೆ ದೊಡ್ಡ ತಿರುವನ್ನು ತಂದು ಕೊಟ್ಟಿತು. ಕೆಲವು ಘಟನೆಗಳು ತೀವ್ರ ಚರ್ಚೆಗೆ, ಟೀಕೆಗೆ, ವಿಮರ್ಶೆಗೆ ಒಳಗಾದವು, ಕೆಲವು ಘಟನೆಗಳು ಹೆಚ್ಚು ಸುದ್ದಿಗೆ ಬರದೇ ಮರೆಯಾಗಿ ಹೋದವು. ಇದು ವಿರೋಧವೋ, ಸಾಕ್ಷಿಯೋ, ಪ್ರಶ್ನೆಯೋ, ನಿಮ್ಮ ನಿಮ್ಮ ಅಭಿಪ್ರಾಯಕ್ಕೆ ಬಿಟ್ಟಿದ್ದು.



ಇವೆಲ್ಲಾ ಕಾರಣದಿಂದಾಗಿ ರಾಜ್ಯದಾದ್ಯಂತ, ದೇಶದಾದ್ಯಂತ ಜಾತಿ, ಧರ್ಮಗಳ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪರ, ವಿರೋಧ ತಾರಕ್ಕೇರಿತು. ಜಾತಿ, ಧರ್ಮ ವಿಚಾರಗಳಿಂದ ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ವ್ಯಕ್ತಿತ್ವಕ್ಕೆ ಧಕ್ಕೆಯನ್ನುಂಟು ಮಾಡುವ ಪ್ರಯತ್ನವೂ ಆಯ್ತು. ಇಷ್ಟೆಲಾ ಆದಮೇಲೆ ಕೇಂದ್ರ ಸರ್ಕಾರ ಇಂತಹ ಪರಿಸ್ಥಿತಿಯಲ್ಲೂ ಜಾತಿ, ಧರ್ಮಗಳ ಬಗ್ಗೆ ಇಲ್ಲದೇ ಹೋದ ಅಪಪ್ರಚಾರ ಮಾಡುತ್ತಿರುವವರಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸಂದೇಶ ನೀಡಿತು. ರಾಜ್ಯದಲ್ಲಿಯೂ ನಿನ್ನೆ ಮುಖ್ಯಮಂತ್ರಿ ಯಡಿಯೂಪ್ಪನವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ‘ಒಂದೆರಡು ಘಟನೆಗಳನ್ನಿಟ್ಟುಕೊಂಡು ಆ ಇಡೀ ಸಮುದಾಯಕ್ಕೆ ಧಕ್ಕೆ ತರುವ ಅಪಪ್ರಚಾರ ಮಾಡುವುದನ್ನು ಮಾಡಿದರೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಸರ್ಕಾರ ಅದನ್ನು ಬಳಕೆಗೂ ತಂದಿತು. ಈ ಕೋವಿಡ್19 ಬಿಕ್ಕಟ್ಟಿನ ಸಂದರ್ಭವನ್ನು ಬಳಸಿಕೊಂಡು ದೇಶದೆಲ್ಲೆಡೆ ವೈರಸ್ ಹರಡುವುದಕ್ಕೆ ಕುತಂತ್ರ ಹೂಡುತ್ತಿದ್ದ ಮತ್ತು ಅಪಪ್ರಚಾರ ಮಾಡುತ್ತಿದ್ದ ಕೆಲವು ಮುಸಲ್ಮಾನ್ ಧರ್ಮದ ಪಾತಕಿಗಳನ್ನು ಕಾನೂನು ಬೆಂಡೆತ್ತಿದ ಉದಾಹರಣೆ ನಮ್ಮ ಮುಂದಿದೆ. ಹಾಗೂ ನಿನ್ನೆ, ತಬ್ಲೀಘಿ ಎ ಜಮಾತ್ ಸಂಘಟನೆಯ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಾರಣಕ್ಕಾಗಿ ಅಲಿಗಢದ ಸಮಾಜವಾದಿ ಪಕ್ಷದ ಶಾಸಕ ಹಾಜಿ ಜಮೀರ್ ಉಲ್ಲಾಖಾನ್ ಅವರು ನೀಡಿದ ದೂರಿನ ಆಧಾರದ ಮೇಲೆ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ(ರಾಷ್ಟಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪಿಸ್ತೂಲಿನಿಂದ ಶೂಟ್ ಮಾಡುವ ಮೂಲಕ ಗೋಡ್ಸೆ ಹುತಾತ್ಮ ದಿನ ಆಚರಿಸಿದ್ದಕ್ಕೆ ಈ ಹಿಂದೆ ಭಾರಿ ಚರ್ಚೆಗೆ ಒಳಗಾಗಿದ್ದರು) ವಿರುದ್ಧ ಪ್ರಕರಣ ದಾಖಲಾಯಿತು. ಇದು ಧರ್ಮದ ಬಗ್ಗೆ ಅಪಪ್ರಚಾರ ಮಾಡುವವರಿಗೆ, ಧರ್ಮದ ಬಗ್ಗೆ ಮಾತಾಡುವುದರ ಮೂಲಕ ತಮ್ಮ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವವರಿಗೆ ಪಾಠವಾದಂತಿದೆ. ಈ ಪ್ರಕರಣದ ನಂತರ ಮತ್ತು ಸರ್ಕಾರದ ಖಡಕ್ ವಾರ್ನಿಂಗ್‌ನ ನಂತರ ಯಾವುದೋ ಒಂದು ಧರ್ಮ, ಜಾತಿಯನ್ನು ಓಲೈಸಿಕೊಂಡು ಮಾತಾಡುವ ಅಥವಾ ಅದನ್ನು ವಿರೋಧಿಸಿ ಮಾತಾಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾದಂತಿದೆ. ಮಾಧ್ಯಮಗಳಲ್ಲಿಯೂ ಕೂಡ.
ಸರ್ಕಾರದ ಕೈಗೊಂಡಿರುವುದು ದಿಟ್ಟ ಕ್ರಮ ಎನ್ನುವುದರಲ್ಲಿ ಸಂದೇಹವಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಧರ್ಮ, ಜಾತಿ ಅಂತ ಬೊಗಳುವವರು ಅದು ಯಾರೇ ಆದರೂ ಅವರನ್ನು ಸರ್ಕಾರ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕಾಗಿದೆ. ಮಾತ್ರವಲ್ಲದೇ, ಹೇಳಿದಂತೆ ಅದನ್ನು ಸರ್ಕಾರ ಪಾಲಿಸುತ್ತಿದೆ ಎನ್ನುವುದು ಸಮಾಧಾನಕರ ಸಂಗತಿ. ಧಾರ್ಮಿಕ ವಿಚಾರಗಳ ಚರ್ಚೆಗಳೂ ಕೂಡ ಹೆಚ್ಚಿನಂಶ ಕಡಿಮೆಯಾಗಿದೆ ಎನ್ನುವುದು ಪದಶಃ ಸತ್ಯವಾಗಿ ಕಾಣಿಸುತ್ತಿದೆ. ಒಟ್ಟಿನಲ್ಲಿ, ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ.. ಕಟ್ಟುನಿಟ್ಟಿನ ಕ್ರಮ ಆಡಳಿತದಿಂದ ಬಂದರೇ ಅದಕ್ಕೆ ಜನ ಬದ್ಧರಾಗಿರುತ್ತಾರೆ ಎನ್ನುವುದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ.


----------------------------------------------
-ಶ್ರೀರಾಜ್ ವಕ್ವಾಡಿ