Wednesday, March 23, 2022

ಸನ್ ಆಫ್ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್


ವಿಶ್ವಾಸ ಕಳೆದುಕೊಂಡ ‘ರಾಗಾ’ | ಮತ್ತೆ ಮೇಲೆದ್ದ ‘ನಾಯಕತ್ವ’ದ ಕೂಗು

ಆಂತರಿಕ ವೈಷಮ್ಯ ರಾಜಕೀಯದಲ್ಲಿ ಒಂದು ರೀತಿ ‘ಇಂಪ್ರಿಂಟ್’ ಇದ್ದ ಹಾಗೆ. ರಾಜಕೀಯದಲ್ಲಿ ಯಾರೂ ಸನ್ಯಾಸತ್ವ ತೆಗೆದುಕೊಳ್ಳುವುದಕ್ಕೆ ಇಚ್ಛಿಸುವುದಿಲ್ಲ ಬಿಡಿ. ಇದು ಆಂತರಿಕ ವೈಷಮ್ಯ ಅಲ್ಲ ಎಂದು ಸಾಬೀತು ಮಾಡುವುದಕ್ಕೆ ರಾಜಕೀಯದಲ್ಲಿ ಸಾಧ್ಯವಿದ್ದರೂ, ಪ್ರತಿಷ್ಟೆಯ ಕಾರಣದಿಂದಾಗಿ ಈ ಎಲ್ಲಾ ವಿಚಾರಗಳು ಬದಿಗೆ ಸರಿದು ಹೋಗುತ್ತವೆ ಎನ್ನುವುದಷ್ಟೇ ವಾಸ್ತವ ಸತ್ಯ. “ಆಂತರಿಕ ಸುಧಾರಣೆ” ಮಾತುಗಳಂತೂ ಪಕ್ಷದ ಸಭೆಗಳಿಗೆ ಮಾತ್ರ ಸೀಮಿತವಾದಂತಿದೆ. 

ಕಾಂಗ್ರೆಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆಯನ್ನು ಸ್ವಲ್ಪ ತೇಲ್ನೋಟದಲ್ಲಿ ನೋಡುವುದಕ್ಕೆ ಪ್ರಯತ್ನಿಸೋಣ, ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ದೇಶದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ರಾಷ್ಟ್ರೀಯತವಾದಿ ಚಳುವಳಿಯ ಮುಖೇನ ಆರಂಭಗೊಂಡ ಪಕ್ಷ, ಈಗ ‘ಪಾಲಿಟಿಕಲ್ ಸೆಕ್ಯುಲರಿಸಂ’ ಜಪ ಮಾಡುತ್ತಾ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೋ ಅಂತನ್ನಿಸುತ್ತಿದೆ. ಕಾಂಗ್ರೆಸ್‌ನಂತಹ ದೊಡ್ಡ ರಾಜಕೀಯ ಪಕ್ಷ್ಕ ತನ್ನ ಅಜೆಂಡಾದ ಸ್ಪಷ್ಟ ರೂಪವನ್ನೇ ಮರೆತಂತಿದೆ. ಸಾಮಾಜಿಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಸಂಕಲ್ಪದೊಂದಿಗೆ ರಾಜಕೀಯ ಪ್ರವೇಶ ಮಾಡಿದ ಕಾಂಗ್ರೆಸ್‌ಗೆ ಮುಳುವಾಗಿರುವುದೇ ‘ನಾಯಕತ್ವ’. 

ಚುನಾವಣೆಗಳಲ್ಲಿ ಕಾಂಗ್ರೆಸ್ ಅತ್ಯಂತ ದುರ್ಬಲ ಪ್ರದರ್ಶನ ನೀಡುತ್ತಿರುವುದನ್ನು ಗಮನಿಸಿದರೇ, ಭವಿಷ್ಯ ಇನ್ನೇನು ಎಂಬ ಪ್ರಶ್ನೆ ಸಾಮಾನ್ಯವಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಸದ್ಯ, ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ನಂತರದ ಸ್ಥಾನ ಪಡೆದಿರುವ ಕಾಂಗ್ರೆಸ್‌ಗ್ಯಾಕೆ ಇಂತಹ ಶೋಚನೀಯ ಸ್ಥಿತಿ ಬಂದೊದಗಿದೆ..? ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಪರಮಾನುಭವ ಹೊಂದಿರುವ ಕಾಂಗ್ರೆಸ್ ನಿಜಕ್ಕೂ ಎಡವಿದ್ದೆಲ್ಲಿ..? 

ಇಂದಿರಾಗಾಂಧಿ ಕಾಲದ ನಂತರ ಸೃಷ್ಟಿಯಾದ ರಾಜಕೀಯ ವಾತಾವರಣ ಗೊತ್ತೇ ಇದೆ. ಇಂದಿರಾಗಾಂಧಿ ಮಗ ರಾಜೀವ್ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ಕೂರಿಸಿದಾಗ ಕಾಂಗ್ರೆಸ್ ರಾಜಕೀಯ ಪಡಸಾಲೆಯಲ್ಲಿ ರಾಜೀವ್ ಗಾಂಧಿ ಬಗ್ಗೆ ‘ಕಾರ್ಯಕ್ಕೆ ಬಾರದ ಪ್ರಧಾನಿ’ ಎಂಬ ಅಭಿಪ್ರಾಯ ಮೂಡಿತ್ತು. ಈಗ ಮತ್ತೆ ಅದೇ ರೀತಿಯ ವಾತಾವರಣ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಅದೇ ಇಂದಿರಾಗಾಂಧಿ ಅವರ ಮೊಮ್ಮಗ, ರಾಜೀವ್ ಗಾಂಧಿ ಅವರ ಮಗ ರಾಹುಲ್ ಗಾಂಧಿ ಅವರ ಬಗ್ಗೆಯೂ ಈಗ ಕೆಟ್ಟ ಅಭಿಪ್ರಾಯ ಪಕ್ಕದೊಳಗೆಯೇ ಸೃಷ್ಟಿಯಾಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ರಾಜಕೀಯದಲ್ಲಿ ಒಂದು ಹೊಸ ಭರವಸೆಯ ಅಲೆಯನ್ನು ಸೃಷ್ಟಿ ಮಾಡಿದ್ದ ಸನ್ ಆಫ್ ರಾಜೀವ್ ಗಾಂಧಿ ವಿರುದ್ಧ ಈಗ ಪಕ್ಷದ ಒಳಗೇ ಹುಟ್ಟಿರುವ ವಿರೋಧಿ ಅಲೆಗೆ ಮುಖ್ಯ ಕಾರಣವೆಂದರೇ, ಅದು ಒಂದೇ ಒಂದು ‘ಕುಟುಂಬ ರಾಜಕಾರಣ’. 

ರಾಜಕೀಯ ಅಂದರೇ, ಕೇವಲ ಅಧಿಕಾರ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲ. ಅಧಿಕಾರ ಹಿಡಿದ ಮೇಲೆ ಅದನ್ನು ಸೂಕ್ತ ನಾಯಕತ್ವದಡಿಯಲ್ಲಿ ಮುನ್ನಡೆಸಿಕೊಂಡು ಹೋಗುವುದು ಕೂಡ ಹೌದು. ಕಾಂಗ್ರೆಸ್‌ಗೆ ಅತ್ಯಂತ ಮುಳುವಾಗಿ ಪರಿಣಮಿಸಿದ್ದು ನಾಯಕತ್ವ ಮತ್ತು ಕುಟುಂಬ ರಾಜಕಾರಣ. 

ಕಾಂಗ್ರೆಸ್‌ಗೆ ಸದ್ಯಕ್ಕೆ ಸೋನಿಯಾ ಗಾಂಧಿ ಪರಮೋಚ್ಛ ನಾಯಕಿಯಾದರೂ ಅವರ ಬದಲಾಗಿ ಪಕ್ಷದ ಹೈಕಮಾಂಡ್‌ನಂತೆ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಗಾಂಧಿಗೆ ಈ ದೇಶದ ಸ್ವಾಸ್ಥ್ಯದ  ಬಗ್ಗೆ ಕನಸು ಇದ್ದಿರಬಹುದು, ಸಾಮಾಜಿಕ ಹಾಗೂ ರಾಜಕೀಯ ಸುಸ್ಥಿರ ಸ್ಥಿತಿ ಕಾಪಾಡಿಕೊಳ್ಳುವ ಆಸೆ ಇದ್ದರಿಬಹುದು. ಆದರೇ, ಅವೆಲ್ಲವನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಅವರಿಗಿದೆಯೇ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಅಗ್ರಸ್ಥಾನದಲ್ಲಿರುವ ಪ್ರಶ್ನೆ. 

ಕಳೆದ ಬಾರಿ ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆ ನಡೆದಾಗ ಕೂಡ ಜಿ೨೩ ಪಡೆ ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿತ್ತು. ಅಲ್ಲಿಂದ ರಾಹುಲ್ ಗಾಂಧಿ ಮೇಲೆ ಕಾಂಗೈ ಪಕ್ಷದ ಹಿರಿಯ ನಾಯಕರಲ್ಲಿದ್ದ ಭಿನ್ನಮತ ದೊಡ್ಡದಾಗುತ್ತಾ ಸಾಗಿತ್ತು. ೨೦೨೧ರ ಆಗಸ್ಟ್ನ ಎರಡನೇ ವಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಜಿ೨೩ ಪಡೆಯ ಮುಖ್ಯಸ್ಥರಲ್ಲೋರ್ವರಾದ ಕಪಿಲ್ ಸಿಬಲ್ ಕರೆದಿದ್ದ ಔತಣಕೂಟಕ್ಕೆ ಗಾಂಧಿ ಕುಟುಂಬಕ್ಕೆ ಆಹ್ವಾನ ಇದ್ದಿರಲಿಲ್ಲ. ಆ ಖಾಸಗಿ ಔತಣಕೂಟದಲ್ಲಿಯೂ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕೂಡ ಚರ್ಚೆಯಾಗಿತ್ತು. ಗಾಂಧಿ ಕುಟುಂಬದ ಹೊರತಾಗಿ ದೇಶದ ಪ್ರಮುಖ ಪ್ರಾದೇಶಿಕ ಪಕ್ಷದ ಪ್ರಮುಖ ನಾಯಕರು ಆ ಔತಣಕ್ಕೂ ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಕಪಿಲ್ ಔತಣಕೂಟದಲ್ಲಿ ಪಾಲ್ಪಡೆದಿದ್ದ ಇತರೆ ಪಕ್ಷದ ನಾಯಕರ ಹಾಗೂ ಜಿ೨೩ ನಾಯಕರ ಅಭಿಪ್ರಾಯವೂ ಒಂದೇ ಆಗಿತ್ತು. ಈಗ ಮತ್ತೆ ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಬಳಿಕ ಕಪಿಲ್ ಸಿಬಲ್ ‘ಸಮರ್ಥ ನಾಯಕತ್ವ’ ಬೇಕೆಂಬ ಕೂಗೆತ್ತಿದ್ದಾರೆ. ಜಿ೨೩ ಬಂಡಾಯ ನಾಯಕರು ಮತ್ತೆ ಗುಲಾಮ್ ನಬಿ ಅಜಾದ್ ಮನೆಯಲ್ಲಿ ಸಭೆ ಸೇರಿ ಪಕ್ಷದ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಜಿ೨೩ ಪಡೆಯ ಬಗ್ಗೆಯೂ ಕೂಡ ರಾಜಕೀಯ ವಲಯದಲ್ಲಿ ಒಂದು ಅಭಿಪ್ರಾಯ ಸೃಷ್ಟಿಯಾಗಿದೆ. ರೆಬಲ್ ನಾಯಕರು ತಮ್ಮ ಪಕ್ಷವನ್ನೇ ವಿಭಜಿಸುವುದಕ್ಕೆ ಹೊರಟಿದ್ದಾರೆಂಬ ಮಾತು ಕೂಡ ಕೇಳಿಬರುತ್ತಿದೆ. ಆದರೇ, ಕಾಂಗ್ರೆಸ್ ಬಂಡಾಯ ಪಡೆ ಪಕ್ಷ ವಿಭಜಿಸುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.         

ಪಂಚರಾಜ್ಯ ಚುನಾವಣೆ ಸೋಲಿನ ನಂತರ ನಡೆದ CWC ಸಭೆಯಲ್ಲಿ ಗಾಂಧಿ ಕುಟುಂಬ ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬ ಮಾತು ಕೇಳಿ ಬಂದಿದೆ. ಆದರೇ, ಸಾಂಸ್ಥಿಕ ಚುನಾವಣೆವರೆಗೆ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿರಲು ಅವರ ಆಪ್ತ ಬಳಗ ಮನವಿ ಮಾಡಿಕೊಂಡಿದ್ದಲ್ಲದೇ, ಪಕ್ಷದ ಎಲ್ಲಾ ಜವಾಬ್ದಾರಿಯಿಂದ ದೂರ ಸರಿಯುವ ಪ್ರಸ್ತಾಪ ಮುಂದಿಟ್ಟರೂ ಕೂಡ ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷ ಪಟ್ಟ ನೀಡಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. 

ಕಾಂಗ್ರೆಸ್ ಈಗ ಆಡಳಿತ ಪಕ್ಷಕ್ಕಿಂತಲೂ ಪ್ರಬಲವಾಗಿ ಇರಬೇಕಾಗಿತ್ತು. ಆಡಳಿತ ಪಕ್ಷದ ಅವ್ಯವಸ್ಥೆಯನ್ನು ವಿರೋಧ ಮಾಡುವುದು ಮಾತ್ರ ವಿರೋಧ ಪಕ್ಷದ ಕೆಲಸವಲ್ಲ. ಜನಾಭಿಮತ ಪಡೆಯುವ ಕೆಲಸವೂ ಮಾಡಬೇಕು. ಆದರೇ, ದುರಾದೃಷ್ಟವಷಾತ್ ಕಾಂಗ್ರೆಸ್‌ಗೆ ಸದ್ಯಕ್ಕೆ ಜನಮತ ತಂದುಕೊಡುವ ಸಾಮಾಜಿಕ ನ್ಯಾಯ ಸಂಕಲ್ಪದ ದೃಢತೆಯುಳ್ಳ ನಾಯಕತ್ವದ ಕೊರತೆಯೇ ದೊಡ್ಡದಾಗಿ ಕಾಣಿಸುತ್ತಿದೆ. ತುರ್ತಾಗಿ ಕೆಲವು ಕಾಂಗ್ರೆಸ್ ಹಿರಿಯ ನಾಯಕರ ‘ಕುಟುಂಬ ನಿಷ್ಠೆ’ ಧೋರಣೆಯೂ ಬದಲಾಗಬೇಕಿದೆ. 

ಇನ್ನು, ೨೦೧೪ಕ್ಕೂ ಮೊದಲು ಇಡೀ ದೇಶದಾದ್ಯಂತ ರಾಹುಲ್ ಗಾಂಧಿ ಅವರ ಹಿಂದೆ ದೊಡ್ಡ ಯುವ ಸಮೂಹವಿತ್ತು. ಯುವ ರಾಜಕೀಯ ನಾಯಕನೊಬ್ಬನ ಮೇಲೆ ಇಡೀ ದೇಶದ ಯುವ ಪಡೆ ಹೊಸ ಭರವಸೆಯನ್ನು ಇಟ್ಟುಕೊಂಡಿತ್ತು. ರಾಹುಲ್ ಗಾಂಧಿ ದೇಶದಲ್ಲಿ ಯುವ ಚಿಂತನೆಯ ರಾಜಕೀಯದ ಅಲೆಯನ್ನು ಹರಿಸುವ ಭರವಸೆಯನ್ನೂ ಮೂಡಿಸಿದ್ದರು. ದೇಶದ ಹಲವು ರಾಜ್ಯಗಳಲ್ಲಿ ಹೊಸ ಚಿಂತನೆಯ ಮಳೆ ಸುರಿಸಬಲ್ಲ ಯುವ ನಾಯಕರ ದೊಡ್ಡ ಸಮೂಹವೇ ರಾಹುಲ್ ಆಪ್ತ ಬಳಗದಲ್ಲಿತ್ತು. ಆದರೇ, ಆ ಸಮೂಹವನ್ನು ಉಳಿಸಿಕೊಳ್ಳುವುದಕ್ಕೆ ರಾಗಾ ವಿಫಲರಾದರೋ ಅಥವಾ ಆ ಯುವ ಪಡೆ ಯಾವುದೋ ಹೊಸ ಚಿಂತನೆಯ ಸೆಳೆತಕ್ಕೆ ಒಳಗಾಗಿ ಬಣ್ಣ ಬದಲಾಯಿಸಿಕೊಂಡರೋ ಗೊತ್ತಿಲ್ಲ. ಜ್ಯೋತಿರಾದಿತ್ಯ ಸಿಂದಿಯಾ ಅಂತಹ ಪ್ರತಿಭಾವಂತ, ಚೈತನ್ಯಶೀಲ ಯುವ ನಾಯಕರು ಪಕ್ಷಾಂತರ ಮಾಡಿ ಹೋದರು. ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ದೊಡ್ಡ ಭರವಸೆಯ ಅಲೆಯ ನಡುವೆ ರಾಹುಲ್ ಹಾಗೂ ಕಾಂಗ್ರೆಸ್ ಅಜೆಂಡಾ ವರ್ಕೌಟ್ ಆಗಿಲ್ಲ. 

ಹಾಗಾದರೇ, ರಾಹುಲ್ ಗಾಂಧಿ ಕಾಂಗ್ರೆಸ್‌ನಂತಹ ಶೋಚನೀಯ ಸ್ಥಿತಿಯಲ್ಲಿರುವ ಪಕ್ಷಕ್ಕೆ ಹೆಗಲು ನೀಡಬೇಕಾದರೇ, ಮತ್ತೆ ಹಿಂದಿನಂತೆಯೇ ಆಗಬೇಕು. ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೇಳಬೇಕು, ಜವಾಬ್ದಾರಿಯಿಂದ ದೂರ ಸರಿಯುತ್ತೇನೆ ಎಂದು ಹೇಳುವ ಬದಲಾಗಿ ಎಲ್ಲಾ ಚುನಾವಣೆಯನ್ನು ಗೆದ್ದು ತೋರಿಸುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಪಕ್ಷದೊಳಗೆ ಹಿರಿಯ ಕಿರಿಯ ನಾಯಕರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ. ಕಾಂಗ್ರೆಸ್ ಈಗಾಗಲೇ ದೇಶದಾದ್ಯಂತ ಮತ ತಂದು ಕೊಡುವ ಭರವಸೆಯ ಮುಖಗಳನ್ನು ಕಳೆದುಕೊಂಡಿದೆ. ಉಳಿದವರಿಗಾದರೂ ಸೂಕ್ತ ಜವಾಬ್ದಾರಿ ನೀಡಬೇಕಿದೆ. ರಾಜಕೀಯ ವರ್ಚಸ್ಸಿದ್ದರೂ, ರಾಜಕೀಯದ ಗಟ್ಟಿ ಅನುಭವಲ್ಲಿದ ಪ್ರಿಯಾಂಕ ಗಾಂಧಿ ಅವರಿಗೆ ಪಕ್ಷದ ಉಸ್ತುವಾರಿಯಂತಹ ದೊಡ್ಡ ಪಟ್ಟ ನೀಡುವ ಬದಲಾಗಿ, ಮಹಿಳಾ ಪಡೆಯನ್ನು ಕಟ್ಟುವ ಜವಾಬ್ದಾರಿಯನ್ನು ನೀಡಿದರೇ, ಪ್ರಿಯಾಂಕ ಅವರ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಮಂತ್ರಕ್ಕೆ ಮತ್ತಷ್ಟು ಶಕ್ತಿ ಹೆಚ್ಚಬಹುದು. ಮಾತ್ರವಲ್ಲದೇ, ಪಕ್ಷದಲ್ಲಿ ಕೊಂಚ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ.

ಬಹಳ ಪ್ರಮುಖವಾಗಿ ಕಾಂಗ್ರೆಸ್‌ಗೆ ತುರ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಪರ್ಯಾಯವಾಗಿ ತೃತೀಯ ರಂಗದಲ್ಲಿ ಅಂತಹದ್ದೇ, ವರ್ಚಸ್ಸಿರುವ ರಾಜಕೀಯ ಮುಖವನ್ನು ತರುವುದು. ಅದು ರಾಹುಲ್ ಗಾಂಧಿಯೇ ಆದರೂ, ಆಮುಖವಾಗಿ ಬೆಳೆದು ತೋರಿಸಬೇಕಿದೆ. ಆದರೇ, ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಅಂತಹ ರಾಜಕೀಯ ವರ್ಚಸ್ಸುಳ್ಳ ಮುಖ ಎಲ್ಲಿಯೂ ಕಾಣಿಸುತ್ತಿಲ್ಲ. ಇದಲ್ಲವಾದರೇ, ರಾಜಕೀಯಕ್ಕೆ ಗಾಂಧಿ ಕುಟುಂಬ ರಾಹುಲ್ ಗಾಂಧಿ ಹೇಳುವ ಹಾಗೆಯೇ ‘ಟಾಟಾ ಬೈ ಬೈ’ ಎಂದು ಹೇಳಬೇಕೆ..? ಆ ನಿರ್ಧಾರಕ್ಕೆ ಗಾಂಧಿ ಕುಟುಂಬ ತಯಾರಿದೆಯೇ..?

ಮತ್ತೆ ಚುನಾವಣೆ ಬರುತ್ತಿದೆ. ಈಗಾಗಲೇ ಬಿಜೆಪಿ ರಾಜಕೀಯ ತಂತ್ರ ಹೆಣೆಯುವುದಕ್ಕೆ ಆರಂಭಿಸಿದೆ. ಆದರೇ, ಕಾಂಗ್ರೆಸ್ ಮಾತ್ರ ಇನ್ನೂ ಆಂತರಿಕ ಭಿನ್ನಾಭಿಪ್ರಾಯದಲ್ಲೇ ಬ್ಯುಸಿಯಾಗಿದೆ. ಅದೇನೇ ಇರಲಿ, ಮೋದಿ ಅಸಮರ್ಥ ನಾಯಕ ಎಂದು ಪದೇ ಪದೇ ಹೇಳುವ ರಾಹುಲ್ ಗಾಂಧಿ, ಮೊದಲು ಪಕ್ಷದೊಳಗೆ ಕೇಳಿಬರುತ್ತಿರುವ ‘ಅಸಮರ್ಥ’ ಭಿನ್ನಾಭಿಪ್ರಾಯ ಧ್ವನಿಗೆ ತಾನು ಅಸಮರ್ಥ ಅಲ್ಲ ಎಂದು ಸಾಬೀತುಪಡಿಸಬೇಕಿದೆ.             

-ಶ್ರೀರಾಜ್ ವಕ್ವಾಡಿ 


Sunday, March 13, 2022

ಪಂಚರಾಜ್ಯ ಚುನಾವಣೆ : ಬಿಜೆಪಿಗೆ ಚತುರ್ ಬಲ




ಪಂಜಾಬ್‌ನಲ್ಲಿ ಕಾಂಗ್ರೆಸ್‌ಗ್ಯಾಕೆ ಹೀನಾಯ ಸೋಲು..? | ಮೋದಿ-ಯೋಗಿ ಜನಪ್ರಿಯತೆ ಏರಲಿಲ್ಲ..!

ಪಂಚರಾಜ್ಯ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂಬ ನಿರೀಕ್ಷೆಯಂತೆಯೇ ಫಲಿತಾಂಶ ಹೊರ ಬಿದ್ದಿದೆ. ‘ಎಲ್ಲಾ ಮಾಧ್ಯಮಗಳ ಚುನಾವಣಾ ಸಮಿಕ್ಷೆಗಳೂ ಅಭಿವೃದ್ಧಿಯ ಹೊರತಾಗಿ ಕೂಡ  ಆಡಳಿತ ಪಕ್ಷದ ಪರವಾಗಿಯೇ ಹೊರಬಂದಿತ್ತು’. ದೇಶ ಈಗಾಗಲೇ ಎರಡಾಗಿ ಒಡೆದು ಹೋಗಿದೆ. ‘ಹಿಂದು’ ಹಾಗೂ ‘ನಾನ್ ಹಿಂದು’ ಆಧಾರದಲ್ಲಿಯೇ ಚುನಾವಣಾ ಫಲಿತಾಂಶವನ್ನು ಊಹಿಸುವುದಕ್ಕೆ ಈಗ ಬಹಳ ಸುಲಭ. ಕೇಂದ್ರದಲ್ಲಿ ಹಿಂದು ಪರವಾದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಬಹುಸಂಖ್ಯಾತ ಹಿಂದು ಸಮುದಾಯದವರನ್ನು ಹೊಂದಿರುವ ದೇಶದಲ್ಲಿ ಹಿಂದು ಪರ ನಿಲುವಿರುವುದು ಸಾಮಾನ್ಯ. ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್ ಹೊರತಾಗಿ ಉತ್ತರಪ್ರದೇಶ, ಉತ್ತರಾಖಂಡ, ಮಣೀಪುರ, ಗೋವಾಗಳಲ್ಲಿ ಮತ್ತೆ ಬಿಜೆಪಿ ಮತ್ತೆ ಅಧಿಕಾರ ಹಿಡಿದಿರುವುದು ದೊಡ್ಡ ಅಚ್ಚರಿಯೇನಲ್ಲ. ಆಡಳಿತದ ದೊಡ್ಡ ವಿರೋಧಿ ಅಲೆ ಇದ್ದರೂ ಮತ್ತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಅಂದರೇ, ಅದು ಅಭಿವೃದ್ಧಿ ಕಾರ್ಯಗಳಿಂತ ಹೆಚ್ಚಾಗಿ ಬಿಜೆಪಿ ಅಂತಹ ರಾಷ್ಟ್ರೀರಾಷ್ಟ್ರದ ಪಕ್ಷ ಸೃಷ್ಟಿಸುವ ‘ಪಾಲಿಟಿಕಲ್ ಅಜೆಂಡಾ’ವೇ ಮುಖ್ಯ ಕಾರಣ. 

ತಳ ಮಟ್ಟದ ರಾಜಕೀಯದಿಂದಾದಿಯಾಗಿ ಮೇಲ್ಮಟ್ಟದ ರಾಜಕೀಯದ ತನಕವೂ ಬಿಜೆಪಿ ಹೂಡುವ ರಾಜಕೀಯ ತಂತ್ರಗಾರಿಕೆಯ ಎದುರು ಯಾವ ಪಕ್ಷಕ್ಕೂ ನಿಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುವುದನ್ನು ಮತ್ತೆ ಬಿಜೆಪಿ ತೋರಿಸಿಕೊಟ್ಟಿದೆ. ಅದರಲ್ಲೂ ದೇಶದ ಉತ್ತರ ಭಾಗದಲ್ಲಿ ಬಿಜೆಪಿ ತನ್ನ ಪಾಲಿಟಿಕಲ್ ಅಜೆಂಡಾದಲ್ಲಿ ಉಳಿದೆಲ್ಲಾ ಪಕ್ಷಗಳಿಗಿಂತ ತುಸು ಹೆಚ್ಚೆ ಗಟ್ಟಿಯಾಗಿದೆ ಎಂದರೇ ತಪ್ಪಿಲ್ಲ. ಕೋವಿಡ್ ಸೋಂಕಿನ ಸಂದರ್ಭದಲ್ಲಿ ದೇಶದಲ್ಲಿನ ಅವ್ಯವಸ್ಥೆ, ರೈತರ ಹೋರಾಟ, ಇಂಧನ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದಂತಹ ಜೀವಂತ ಸಮಸ್ಯೆಗಳ ಮಹಾ ಮೂಟೆಯೇ ಇರುವಾಗಲೂ ಆಡಳಿತ ಪಕ್ಷದ ಪರವಾಗಿ ಮತ್ತೆ ಎರಡನೇ ಬಾರಿಗೆ ಅಧಿಕಾರ ಹಿಡಿಯುವುದಕ್ಕೆ ಮತದಾರರು ಕೃಪಾಶೀರ್ವಾದ ಮಾಡಿದ್ದಾರೆಂದರೇ, ಅದು ಕೇವಲ ಭರವಸೆಯ ಆಮಿಷದಿಂದ ಹೊರತು ಮತ್ತೇನಲ್ಲ. 

ಪಂಚರಾಜ್ಯಗಳ ಪೈಕಿಯಲ್ಲಿ ಉತ್ತರಖಂಡದ ಬಗ್ಗೆ ಗಮನಿಸುವುದಾದರೇ, ಅಲ್ಲಿ ಸ್ವತಃ ಮುಖ್ಯಮಂತ್ರಿ ತಮ್ಮ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ, ಎನ್ನುವಲ್ಲಿಗೆ ಆಡಳಿತದ ಪರವಾಗಿ ಜನ ಇಲ್ಲ ಎನ್ನುವುದಕ್ಕೆ ಇದೊಂದೇ ಉದಾಹರಣೆ ಸಾಕು. ಆದರೇ, ಉತ್ತರಖಂಡದಲ್ಲಿ ಬಿಜೆಪಿಗೆ ಲಾಭವಾದದ್ದು ಹಿಂದು ಅಲೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಉತ್ತರಾಖಂಡವನ್ನು ವಶ ಪಡಿಸಿಕೊಳ್ಳಬೇಕೆಂಬ ತವಕದಲ್ಲಿದ್ದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ, ಸ್ವತಃ ಹರೀಶ್ ರಾವತ್ ಕೂಡ ಅಲ್ಲಿ ಸೋಲನುಭವಿಸಬೇಕಾಯಿತು ಎಂದರೇ, ಅದು ‘ದೇವಭೂಮಿ’ಯಲ್ಲಿ ಬಿಜೆಪಿ ರಾಜಕೀಯವಾಗಿ ಸೃಷ್ಟಿಸಿದ ಹಿಂದು ಅಲೆಯೇ ಕಾರಣ. ಆದಾಗ್ಯೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಂದರೇ, ೨೦೧೭ರಲ್ಲಿ ೫೭ ಕ್ಷೇತ್ರಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ೧೦ ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂದರೇ, ಜನರಿಗೆ ಆಡಳಿತದಲ್ಲಿದ್ದ ನಂಬಿಕೆ ಕುಸಿದಿದೆ ಎಂದೇ ಅರ್ಥ. 

ಗೋವಾದಲ್ಲಿ ಈವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿಯಾಗುತ್ತಿತ್ತು. ಆದರೇ, ಈ ಬಾರಿ ಚುನಾವಣಾ ಕಣದಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷ ಕಾಂಗ್ರೆಸ್‌ಗೆ ಆಮ್ ಆದ್ಮಿ, ತೃಣಮೂಲ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನೀಡಿದ್ದವು, ಹಾಗಾಗಿ ಕಾಂಗ್ರೆಸ್ ಅಧೀನದಲ್ಲಿದ್ದ ೮ ಸ್ಥಾನ ಕಳೆದುಕೊಳ್ಳಬೇಕಾಯಿತು. ಇನ್ನು, ೨೦೧೭ ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸುಮಾರು ೧೨ ರಿಂದ ೧೫ ಶಾಸಕರು ಬಣ್ಣ ಬದಲಾಯಿಸಿಕೊಂಡು ಸೇರಿದ್ದರು. ಹಾಗಾಗಿ ಕಾಂಗ್ರೆಸ್‌ಗೆ ಕಳೆದ ಬಾರಿಯೂ ಗೋವಾದಲ್ಲಿ ಅಧಿಕಾರ ಹಿಡಿಯುವುದಕ್ಕೆ ಆಗಿರಲಿಲ್ಲ. ಈ ಬಾರಿ ಚುನಾವಣಾ ಫಲಿತಾಂಶ ಪೂರ್ವದಲ್ಲಿಯೇ ತನ್ನ ಶಾಸಕರು ಕುದುರೆ ವ್ಯಾಪಾರಕ್ಕೊಳಗಾಗಬಹುದೆಂಬ ಭಯದಿಂದ ರೆಸಾರ್ಟ್ನಲ್ಲಿ ಕೂಡಿ ಹಾಕಿದ ವರದಿಯೂ ಆಗಿದೆ. ಪಕ್ಷೇತರ ಮೂವರು ಅಭ್ಯರ್ಥಿಗಳು ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಪರವಾಗಿದ್ದ ಎಂಜಿಪಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು ಅಧಿಕಾರದ ಹಾದಿ ಸುಲಭವಾಗಿದೆ. 

ಕಳೆದ ಬಾರಿ ಅತಂತ್ರ ಸ್ಥಿತಿಯಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ ಮಣಿಪುರದಲ್ಲಿ ಈ ಬಾರಿ ಸ್ಪಷ್ಟ ಬಹುಮತ ದೊರಕಿದೆ. ಮಣಿಪುರದಂತಹ ರಾಜ್ಯದಲ್ಲಿಯೂ ಕಾಂಗ್ರೆಸ್‌ಗೆ ತನ್ನ ಅಡಿಪಾಯವನ್ನು ಭದ್ರ ಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೬೦ ವಿಧಾನಸಭಾ ಕ್ಷೇತ್ರಗಳಲ್ಲಿ ೨೮ ಕ್ಷೇತ್ರಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಕೇವಲ ೫ ಕ್ಷೇತ್ರದಲ್ಲಷ್ಟೇ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಕಾಂಗ್ರೆಸ್‌ನ ವಿಫಲ ನಾಯಕತ್ವ ಹಾಗೂ ಟೊಳ್ಳು ತಂತ್ರಗಾರಿಕೆಯೇ ಇದಕ್ಕೆಲ್ಲಾ ಕಾರಣ ಎನ್ನುವುದನ್ನು ನಿಸ್ಸಂಶಯವಾಗಿ ಹೇಳಬಹುದಾಗಿದೆ. 

ಇನ್ನು, ಪಂಚರಾಜ್ಯ ಚುನಾವಣೆಯಲ್ಲಿ ನಿಜಕ್ಕೂ ಹೀರೋ ಆಗಿದ್ದು ಅರವಿಂದ ಕೇಜ್ರಿವಾಲ್. ಮೋದಿ ಹವಾ ಎಲ್ಲಾ ಕಡೆಯಲ್ಲಿ ಇಲ್ಲ ಎನ್ನುವುದಕ್ಕೆ ಪಂಜಾಬ್ ಫಲಿತಾಂಶ ಕೂಡ ಒಂದು ಸಾಕ್ಷಿ. ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತು ಪಡಿಸಿದರೇ, ಬೇರೆಲ್ಲೂ ಮೋದಿ ಹೆಸರು ಏನು ಕೆಲಸ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇನೇ ಇರಲಿ, ಇದುವರೆಗೆ ಕಾಂಗ್ರೆಸ್ ಹಾಗೂ ಅಕಾಲಿದಳಗಳ ನಡುವೆ ಮಾತ್ರ ನಡೆಯುತ್ತಿದ್ದ ಹಣಾಹಣಿಯ ಕಾರಣದಿಂದಾಗಿ ಪಂಜಾಬ್‌ನಲ್ಲಿ ಹೊಸದೊಂದು ಪಕ್ಷ ಅಧಿಕಾರ ಹಿಡಿಯುತ್ತದೆ ಎಂದು ಯಾರೂ ಬಲವಾಗಿ ನಂಬಿದ್ದಿರಲಿಲ್ಲ. ಸಮೀಕ್ಷೆಗಳು ಆಪ್ ಅಧಿಕಾರಕ್ಕೆ ಬರುವ ವರದಿ ನೀಡಿದ್ದರೂ ರಾಜಕೀಯ ವಲಯದಲ್ಲಿ ಅನುಮಾನವಿತ್ತು. ಆದರೇ, ನಿಜಕ್ಕೂ ಅಚ್ಚರಿಯ ವಿಚಾರ, ಪಂಜಾಬ್‌ನಲ್ಲಿ ಆಪ್ ಅಧಿಕಾರ ಹಿಡಿದಿದ್ದು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳ ನಿರಂತರ ಒಂದು ವರ್ಷದ ಹೋರಾಟ ಮತ್ತು ಪಂಜಾಬ್ ರೈತರ ಮೋದಿ ವಿರುದ್ಧದ ನಿಲುವು, ಆಮ್ ಆದ್ಮಿ ಪಕ್ಷ ರೈತ ಹೋರಾಟ ಸಂದರ್ಭದಲ್ಲಿ ದೆಹಲಿಯಲ್ಲಿ ರೈತ ಸಂಘಟನೆಗಳಿಗೆ ಬೆಂಬಲವಾಗಿ ನಿಂತದ್ದು, ಪಂಜಾಬ್ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಆಪ್‌ಗೆ ಮತ ತಂದುಕೊಟ್ಟಿದೆ. ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದ ಅಭಿವೃದ್ಧಿ ಪರ ಕಾರ್ಯಗಳು ಮಾತ್ರವಲ್ಲದೇ, ರೈತರ ಪರವಾದ ಪಾಲಿಟಿಕಲ್ ಸ್ಟ್ರ್ಯಾಟಜಿ ಇಲ್ಲಿ ವರ್ಕೌಟ್ ಆಗಿದೆ. 

೨೦೧೪ ರಲ್ಲಿ ಪಂಜಾಬ್‌ನ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಆಪ್ ಕಾಲಿಡುವ ಮೂಲಕ ಒಟ್ಟು ೧೩ ಕ್ಷೇತ್ರಗಳ ಪೈಕಿ ೪ ಕ್ಷೇತ್ರಗಳಲ್ಲಿ ಸ್ಥಾನ ಪಡೆದಿತ್ತು. ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೨೦ ಕ್ಷೇತ್ರಗಳನ್ನು, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೧೩ ಕ್ಷೇತ್ರಗಳಲ್ಲಿ ೧ ಕ್ಷೇತ್ರವನ್ನು ಹಾಗೂ ಈ ಬಾರಿ ಅಂದರೇ, ೨೦೨೨ ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೯೨ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಆಪ್ ಪಂಜಾಬ್‌ನನ್ನು ವಶಪಡಿಸಿಕೊಂಡಿದೆ. ಒಂದು ಪ್ರಾದೇಶಿಕ ಪಕ್ಷವಾಗಿ ದೆಹಲಿಯಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೇ, ಇಡೀ ದೇಶಕ್ಕೆ ಅಚ್ಚರಿ ಮೂಡಿಸಿತ್ತು. ಈಗ ಹೊರ ರಾಜ್ಯವೊಂದರಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಅಕಾಲಿದಳಕ್ಕೆ ಮಣ್ಣು ಮುಕ್ಕಿಸಿದೆ.  

ಪಂಜಾಬ್‌ನಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವೇನು..? :  ಪದೇ ಪದೇ ಸ್ವಾತಂತ್ರö್ಯ ತಂದು ಕೊಟ್ಟ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಈಗ ಅಧಿಕಾರ ಇದ್ದ ರಾಜ್ಯದಲ್ಲಿಯೂ ಹೀನಾಯವಾಗಿ ಸೋಲನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಪಂಜಾಬ್ ಕಾಂಗ್ರೆಸ್‌ನಲ್ಲಿದ್ದ ಆಂತರಿಕ ಒಳಜಗಳವೇ ಹೀನಾಯ ಸೋಲಿಗೆ ಮೊದಲ ಕಾರಣ. ಇನ್ನು, ಕಾಂಗ್ರೆಸ್ ಎರಡನೇ ಹಂತದ ಅಥವಾ ಅಲ್ಟರ್‌ನೇಟಿವ್ ನಾಯಕತ್ವವನ್ನು ಇದುವರೆಗೂ ಎಲ್ಲಿಯೂ ಬೆಳೆಸಲಿಲ್ಲ. ಪ್ರಭಾವಿ ನಾಯಕರನ್ನೇ ನಂಬಿಕೊಂಡು ಬಂದ ಪಕ್ಷ ಈವರೆಗೆ ಪ್ರಭಾವಿ ತಲೆ ಹೇಳಿದಕ್ಕೆ ‘ಇದಂ ಮಿತ್ಥಂ’ ಎಂದು ಹೇಳಿಕೊಂಡೇ ಬಂದಿದೆ. ಹಾಗಾಗಿ ದೇಶದ ಉದ್ದಗಲಕ್ಕೂ ಪ್ರಭಾವಿ ನಾಯಕರನ್ನು ಬಿಟ್ಟರೇ, ಅವರಿಗೆ ಸರಿದೂಗುವಂತಹ ಅಥವಾ ಅವರಿಲ್ಲದಿದ್ದರೂ ನಾಯಕತ್ವ ನಡೆಸಬಲ್ಲ ಅಭ್ಯರ್ಥಿಗಳನ್ನು ಕಾಂಗ್ರೆಸ್ ತಯಾರು ಮಾಡಲೇ ಇಲ್ಲ. ಪಂಜಾಬ್‌ನಲ್ಲಿ ಆದದ್ದೂ ಇದೇ ಪರಿಸ್ಥಿತಿ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಒಬ್ಬ ಹಿರಿಯ ಅನುಭವಿ ನಾಯಕ. ಆದರೇ, ಪಂಜಾಬ್ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವೋಜಿತ್ ಸಿಂಗ್ ಸಿಧು ಹಾಗೂ ಕ್ಯಾಪ್ಟನ್ ನಡುವಿನ ಆಂತರಿಕ ಪ್ರತಿಷ್ಠೆಯ ವೈಮನಸ್ಸು ಕಾಂಗ್ರೆಸ್‌ನನ್ನು ಈ ಸ್ಥಿತಿಗೆ ತಂದು ತಲುಪಿಸಿದೆ. ಅಮರಿಂದರ್ ಸಿಂಗ್ ಬಿಟ್ಟರೇ, ಪಂಜಾಬ್‌ನಲ್ಲಿ ಅವರಿಗೆ ಸರಿದೂಗುವಂತಹ ನಾಯಕ  ಕಾಂಗ್ರೆಸ್‌ನಲ್ಲಿ ಯಾರೂ ಇರಲಿಲ್ಲ. ನವೋಜಿತ್ ಸಿಂಗ್ ಸಿಧು ಪ್ರತಿಷ್ಟೆಯ ಹುಚ್ಚು ಹಿಡಿಸಿಕೊಂಡ ರಾಜಕಾರಣಿ. ಇವರೀರ್ವರ ಜಗಳವನ್ನು ತಣ್ಣಗಾಗಿಸುವ ಸಾಮಾನ್ಯ ಪಾಲಿಟಿಕಲ್ ಐಡಿಯಾಲಜಿ ಕಾಂಗ್ರೆಸ್‌ಗೆ ಇದ್ದಿರಲಿಲ್ಲ. ಕ್ಯಾಪ್ಟನ್ ಸಿಂಗ್ ಕಾಂಗ್ರೆಸ್‌ಗೆ ಇದ್ದಕ್ಕಿದಂತೆ  ರಾಜಿನಾಮೆ ಎಸೆದು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಂತರು, ಇತ್ತ ಕಾಂಗ್ರೆಸ್ ಪಂಜಾಬ್‌ನಲ್ಲಿ ಸುಮಾರು ಶೇ. ೩೧ರಷ್ಟು ದಲಿತರಿದ್ದಾರೆ ಎಂಬ ಕಾರಣಕ್ಕೆ ಅಥವಾ ದಲಿತರ ಮತ ಓಲೈಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೋ ಎಂಬ ತಂತ್ರಗಾರಿಕೆ ಹೂಡಿ ಕೊನೆಯ ಹಂತದಲ್ಲಿ ಚರಣಜಿತ್ ಸಿಂಗ್ ಚನ್ನಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಆದರೇ, ಅದು ಕಾಂಗ್ರೆಸ್‌ಗೆ ಯಶಸ್ಸು ತಂದುಕೊಟ್ಟಿಲ್ಲ. ಪಂಜಾಬ್ ನಲ್ಲಿ ಬಿಜೆಪಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಲಾಭ ಮಾಡಿಕೊಳ್ಳುವುದಕ್ಕೆ ಬೇಕಾದ ಬುದ್ಧಿಯೂ ಕಾಂಗ್ರೆಸ್‌ಗೆ ಇರಲಿಲ್ಲ. ೨೦೧೭ರ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೭೭ ಕ್ಷೇತ್ರಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿ ಕೇವಲ ೧೮ ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಳ್ಳುವಷ್ಟು ಬಡತನ ಬಂದಿದೆ. 

ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚನ್ನಿ ಸ್ಪರ್ಧಿಸಿದ್ದ ಚಮಕೌರ್ ಸಾಹೀಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಎರಡರಲ್ಲೂ ಸೋಲನುಭವಿಸಿದ್ದಾರೆ. ಇತ್ತ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ತಾನೇ ಹೀರೋ ಆಗಬೇಕು ಎಂಬ ಭ್ರಮೆಯಲ್ಲಿದ್ದ ಸಿಧು ಅಮೃತ್‌ಸರ ಪೂರ್ವ ಕ್ಷೇತ್ರದಲ್ಲಿ ಸೋಲನುಭಿಸಿದ್ದಾರೆ. ಬಂಡಾಯದ ಬಾವುಟ ಹಾರಿಸುತ್ತಲೇ, ತಮ್ಮನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದು ಕೂತು ೫ ವರ್ಷ ಕಳೆದ ಸಿಧುಗೆ ಇದೀಗ ಪಂಜಾಬ್‌ನಲ್ಲಿ ತೀವ್ರ ಮುಖಭಂಗವಾಗಿದೆ. 

ಇನ್ನು, ಪಂಜಾಬ್‌ನಲ್ಲಿ ಹೋರಾಟ ಮುಂದಿಟ್ಟುಕೊಂಡು ಬಿಜೆಪಿ ಮೈತ್ರಿ ತೊರೆದ ಅಕಾಲಿದಳದ ಸ್ಟ್ರ್ಯಾಟಜಿ ಕೂಡ ವರ್ಕೌಟ್ ಆಗಿಲ್ಲ. ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಮತ ಒಡೆಯುವ ಅಮಿತ್ ಶಾ ಪ್ಲಾö್ಯನ್ ಒಂದು ಹಂತದಲ್ಲಿ ಸಕ್ಸಸ್ ಕಂಡರೇ, ಇನ್ನೊಂದು ಥರದಲ್ಲಿ ವಿಫಲವಾಯಿತು. ಸ್ವತಃ ಅಮರಿಂದರ್ ಸಿಂಗ್ ಪಟಿಯಾಲ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ೧೯,೮೭೩ ಮತಗಳ ಅಂತರದಿಂದ ಹೀನಾಯ ಸೋಲುಂಡರು. ಒಟ್ಟಿನಲ್ಲಿ, ಅಮರಿಂದರ್ ಸಿಂಗ್ ರಾಜಕೀಯ ಯುಗಾಂತ್ಯಕ್ಕೆ ಬಿಜೆಪಿ ನಾಂದಿ ಹಾಡಿದರೇ, ಇತ್ತ ಪಂಜಾಬ್‌ನಲ್ಲಿ ಕಾಂಗ್ರೆಸ್ ರಾಜಕೀಯ ಯುಗಾಂತ್ಯಕ್ಕೆ ಆಪ್ ನಾಂದಿ ಹಾಡಿದೆ ಎನ್ನಬಹುದೇನೋ.                

ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯ | ಮೋದಿ-ಯೋಗಿ ಜನಪ್ರಿಯತೆ ಏರಲಿಲ್ಲ..! : ರಾಜಕೀಯ ವಲಯದಲ್ಲಿ ಉತ್ತರ ಪ್ರದೇಶದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆಯೋ, ಅವರೇ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬರುತ್ತಾರೆ ಎಂಬ ಮಾತಿದೆ. ಪಂಚರಾಜ್ಯ ಚುನಾವಣೆಗಳ ಪೈಕಿಯಲ್ಲೇ ಹೈ ವೋಲ್ಟೇಜ್ ಚುನಾವಣಾ ಕಣ ಎಂದು ಕರೆಸಿಕೊಂಡಿದ್ದ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದಿದೆ. ಹೇಗಿದು..? ಕಳೆದ ಐದು ವರ್ಷದಲ್ಲಿ ಯೋಗಿ ಆಡಳಿತಕ್ಕೆ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೇ, ದೇಶದ ಹಲವು ಭಾಗಗಳಲ್ಲಿ ವಿರೋಧ ಅಲೆಯಿತ್ತು. ಉತ್ತರ ಪ್ರದೇಶದಲ್ಲಿ ಕೋವಿಡ್ ನಿರ್ವಹಣೆ ವೈಫಲ್ಯದ ಕಾರಣ ಮುಖ್ಯಮಂತ್ರಿ ಹಾಗೂ ಇಬ್ಬರು ಡೆಪ್ಯುಟಿಗಳ ಬದಲಾವಣೆಯಾಗಲಿದೆ ಎಂಬ ವದಂತಿಯೂ ಎದ್ದಿತ್ತು. ಗಂಗಾ ನದಿಯಲ್ಲಿ ಕೋವಿಡ್  ಸೋಂಕಿತರ ಶವಗಳು ತೇಲಿದ ಬಳಿಕ ರಾಜ್ಯದ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಜನಾಕ್ರೋಶ ಸ್ಫೋಟಗೊಂಡಿತ್ತು. ಏತನ್ಮಧ್ಯೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಆಡಲಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸಿತ್ತು. 

ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಮೇಲ್ಜಾತಿಯ ಯುವಕರು ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಹತ್ಯೆಯ ನಂತರ ಜಿಲ್ಲಾಡಳಿತ ಯುವತಿಯ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ನೀಡದೇ ಅಮಾನವೀಯವಾಗಿ ರಾತ್ರೋರಾತ್ರಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು. ದಿನನಿತ್ಯ ಬಡವರ ಮನೆಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವಾಗಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದು ಯೋಗಿ ಸರ್ಕಾರ ಯಾವ ಮುಖ ಹೊತ್ತುಕೊಂಡು ಹೇಳುತ್ತದೆ..? ಪ್ರಕರಣದ ವರದಿ ಮಾಡುವುದಕ್ಕೆ ಹೋದ ಪತ್ರಕರ್ತರನ್ನು ತಡೆದ ಘಟನೆ ಇದೇ ಉತ್ತರ ಪ್ರದೇಶದಲ್ಲೇ ಆಗಿದ್ದು..! ವರದಿ ಮಾಡುವುದಕ್ಕೆ ತೆರಳುತ್ತಿದ್ದ ಪತ್ರಕರ್ತರನ್ನು ಬಂಧಿಸಿದ್ದು ಇದೇ ಉತ್ತರ ಪ್ರದೇಶ ಸರ್ಕಾರ ಅಲ್ಲವೇ..? ಇದೆನಾ ಯೋಗಿ ಹೇಳುವ ರಾಜಧರ್ಮ..? ಮುಖ್ಯಮಂತ್ರಿ ಯೋಗಿ ವಿರುದ್ಧ ಆಕ್ಷೇಪಾರ್ಹ ವರದಿಗಳನ್ನು ಹಂಚಿದ ಆರೋಪದ ಮೇಲೆ ನಿಯಮಬಾಹೀರವಾಗಿ ಪತ್ರಕರ್ತರನ್ನು ಬಂಧಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ಇದೇ ಉತ್ತರ ಪ್ರದೇಶದ ಯೋಗಿ ಸಕಾರಕ್ಕೆ ಹೊರತು ಬೇರೆ ಯಾವುದಕ್ಕೂ ಅಲ್ಲ. ಖಂಡಿತ ಅಲ್ಲ. ಅಭಿವೃದ್ಧಿ ಕಾರ್ಯ, ಕಾನೂನು ಸುವ್ಯವಸ್ಥೆ ತಂದಿದ್ದಕ್ಕಾಗಿ ಅಂತೂ ಖಂಡಿತ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದಲ್ಲ. ಅಧಿಕಾರಕ್ಕೆ ಮತ್ತೆ ಬಹುಮತದೊಂದಿಗೆ ಆಯ್ಕೆ ಆಗುವುದಕ್ಕೆ ಕಾರಣವೇ ಹಿಂದುತ್ವ ಹಾಗೂ ಶ್ರೀರಾಮ ಮಂದಿರ ಹೊರತು ಬೇರೇನಲ್ಲ. 

ಉತ್ತರ ಪ್ರದೇಶದ ಜನರಿಗೆ ಬಿಜೆಪಿ ಆಡಳಿತದ ಮೇಲೆ ವಿಶ್ವಾಸ ಕುಸಿದಿದೆ ಎನ್ನುವುದಕ್ಕೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ೧೨೫ ಕ್ಷೇತ್ರಗಳನ್ನು ಪಡೆದಿರುವುದೇ ಸಾಕ್ಷಿ. ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೪೦೩ ಕ್ಷೇತ್ರಗಳಲ್ಲಿ ೩೨೫ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಾನ ಪಡೆದಿತ್ತು. ಈ ಬಾರಿ ೨೭೩ಕ್ಕೆ ತೃಪ್ತಿ ಪಟ್ಟುಕೊಂಡಿದೆ ಎಂದರೇ, ಇದನ್ನು ಮೋದಿ ಹಾಗೂ ಯೋಗಿ ಜನಪ್ರಿಯತೆ ಏರಿದೆ ಎಂದು ಹೇಗೆ ಹೇಳುವುದಕ್ಕೆ ಸಾಧ್ಯ..? ನಿಜಕ್ಕೂ ಉತ್ತರ ಪ್ರದೇಶದಲ್ಲಿ ಮತ್ತೆ ಜನಪ್ರಿತಿ ಹೆಚ್ಚಿಸಿಕೊಂಡಿದ್ದು ಅಖಿಲೇಶ್ ಯಾದವ್. ಇನ್ನು, ಕಳೆದ ಒಂದೆರಡು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಕಾರ್ಯನಿರ್ವಹಿಸಿದ ಪ್ರಿಯಾಂಕ ಗಾಂಧಿ ತಂತ್ರಗಾರಿಕೆ ಏನೂ ಪ್ರಯೋಜನಕ್ಕೆ ಬಂದಿಲ್ಲ. ಕೇವಲ ೨ ಕ್ಷೇತ್ರಗಳಿಗಷ್ಟೇ ತೃಪ್ತಿ ಪಟ್ಟುಕೊಳ್ಳುವ ಸ್ಥಿತಿ ಕಾಂಗ್ರೆಸ್ ಗೆ ಬಂದೊದಗಿದೆ. 

ಕಾಂಗ್ರೆಸ್ ಬಗ್ಗೆ ಏನು ಹೇಳುವುದಕ್ಕಿದೆ..? ಅದರ ಭವಿಷ್ಯ ಈ ಫಲಿತಾಂಶ ಹೇಳುತ್ತಿದೆ. ದಿನನಿತ್ಯ ಕಾಂಗ್ರೆಸ್ ವರ್ಚಸ್ಸು ಕುಸಿಯುತ್ತಿದೆ. ದೇಶದೆಲ್ಲಡೆ ಕಾಂಗ್ರೆಸ್ ನಿರಂತರವಾಗಿ ಅಧಿಕಾರ ಕಳೆದುಕೊಳ್ಳುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಪಕ್ಷದಲ್ಲಿ ಮರಳಿ ಶಕ್ತಿ ತುಂಬಿಸುತ್ತಾರೆ ಎಂಬ ನಂಬಿಕೆ ಸ್ವತಃ ಕಾಂಗ್ರೆಸ್‌ನವರಿಗೂ ಬಹುಶಃ ಇರಲಿಕ್ಕಿಲ್ಲ. ಅಸ್ತಿತ್ವ ಉಳಿಸಿಕೊಳ್ಳಬೇಕಾದರೇ, ಮೋದಿ ವಿರುದ್ಧ ಪ್ರಬಲ ನಾಯಕತ್ವ ಕಾಂಗ್ರೆಸ್‌ಗೆ ತುರ್ತು ಅಗತ್ಯವಿದೆ ಅಷ್ಟೇ.

-ಶ್ರೀರಾಜ್ ವಕ್ವಾಡಿ        


ನಿರುದ್ಯೋಗದಂತಹ ಜೀವಂತ ಸಮಸ್ಯೆಗಳಿಗೆ ಪ್ರಧಾನಿ ಮೌನವೇಕೆ..?


ಆಘಾತಕಾರಿ ವರದಿ ನೀಡಿದ ಸಿಎಂಐಇ | ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತೆ ಹೆಚ್ಚಳ   

ಸತ್ಯವನ್ನು ಸುಳ್ಳು ಮಾಡುವುದಕ್ಕೆ ಹಾಗೂ ಸುಳ್ಳನ್ನು ಸತ್ಯ ಮಾಡುವುದಕ್ಕೆ ಸಾಧ್ಯವಾಗುವ ಮಾಧ್ಯಮವೊಂದಿದ್ದರೇ, ಅದು ರಾಜಕೀಯ ಮಾತ್ರ. ಈವರೆಗೆ ಈ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಒಂದು ಸರ್ಕಾರವಿದ್ದರೇ, ಅದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಒಂದೆ. ಈವರೆಗೆ ದೇಶದಲ್ಲಿ ಅಧಿಕಾರ ನಡೆಸಿದ ಯಾವ ಸರ್ಕಾರಕ್ಕೂ ಇಷ್ಟರಮಟ್ಟಿಗೆ ಸುಳ್ಳನ್ನು ಸತ್ಯ ಎಂದು ತೋರಿಸುವುದಕ್ಕೆ ಖಂಡಿತ ಸಾಧ್ಯವಾಗಿಲ್ಲ. ಆ ಮಟ್ಟಿಗೆ ಈ ವಿಷಯದಲ್ಲಿ ನರೇಂದ್ರ ಮೋದಿ ಯಶಸ್ವಿ ಪ್ರಧಾನಿ ಎಂದರೇ ತಪ್ಪಿಲ್ಲ. 

ರಾಜಕೀಯದಲ್ಲಿ ನುಡಿದಂತೆ ನಡೆಯುವುದೆಂದರೇ, ಕನಸಿನ ಮಾತೇ ಸರಿ. ಆದರೇ, ನುಡಿದಂತೆ ಅದರ ಹತ್ತಿರ ಹತ್ತಿರಕ್ಕೆ ಹೋಗುವುದಕ್ಕೆ ಪ್ರಯತ್ನ ಪಟ್ಟ ಸರ್ಕಾರ ಈ ಹಿಂದೆ ದೇಶದಲ್ಲಿ ಅಧಿಕಾರ ಮಾಡಿವೆ ಎನ್ನುವುದು ಸತ್ಯ. ಮೋದಿ ಸರ್ಕಾರ ಭರವಸೆ ಕೊಟ್ಟಿದ್ದೇನು..? ಮಾಡಿದ್ದೇನು..? ನೋ ಡೌಟ್.. ‘ಮೋದಿ ಒಬ್ಬ ಮಾತಿನ ಮೂಲಕವೇ ಭವ್ಯ ಅರಮನೆ ಕಟ್ಟಬಲ್ಲ ಮೋಡಿಗಾರ’ ಎನ್ನುವುದು ಇಡೀ ಜಗತ್ತಿಗೆ ತಿಳಿದಿರುವ ಸತ್ಯ. ತನ್ನ ಆಡಳಿತಾವಧಿಯಲ್ಲಿ ದೇಶದ ಜನರನ್ನು ಪದೇ ಪದೇ ಮಾತಿನ ಮೂಲಕ ತನ್ನ ವಶಕ್ಕೆ ಪಡೆದುಕೊಂಡು ನಂಬಿಸಿ ಮೋಸ ಮಾಡಿದ ರಾಜಕೀಯ ನಾಯಕರ ಅಗ್ರಪಂಕ್ತಿಯ ಸಾಲಿನಲ್ಲಿ ಮೋದಿ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ. 

ರಾಜಕೀಯ ವಲಯದಲ್ಲಿ ಮೋದಿ ಬಗ್ಗೆ ಪರ ವಿರೋಧ ನಿಲುವಿದೆ. ಅದು ಇರಲೇ ಬೇಕಾದದ್ದೂ ಕೂಡ. ಏನೂ ಮಾಡಿದರೂ ಸರಿ ಎಂದು ಬೊಬ್ಬೆ ಹಾಕಿ ಅಟ್ಟಕ್ಕೇರಿಸಿ ಕೂರಿಸುವ ವರ್ಗ ಒಂದಾದರೇ, ಇನ್ನೊಂದು ಮಾಡಿದ್ದೆಲ್ಲಾ ತಪ್ಪು ಎಂದು ರೇಗುವ ವರ್ಗ. ಎಲ್ಲವನ್ನೂ ಸರಿ ಎನ್ನುವ ವರ್ಗದವರದ್ದು ಇವತ್ತು ಸತ್ತು ನಾಳೆ ಬದುಕಿದರೇ ಸಾಕು ಎನ್ನುವ ಧೋರಣೆ. ಏನೇ ಮಾಡಿದರೂ ತಪ್ಪು ಎನ್ನುವವರದ್ದು ವಾಸ್ತವವೆಂದರೇ, ಹೊರಗೆ ಕಾಣುವ ಪರಿಧಿ ಮಾತ್ರವಲ್ಲ, ಅದರೊಳಗಿನದ್ದೂ ಕೂಡ ಹೌದು ಎನ್ನುವ ಧೋರಣೆ. ಇವುಗಳಲ್ಲಿ ಯಾವುದು ಯೋಗ್ಯವಾದ್ದು ಎಂದು ನೀವೇ ನಿರ್ಧರಿಸಿ. ಮೋದಿ ಮಾತ್ರ ಈ ಎರಡು ವರ್ಗದವರ ಧೋರಣೆಗಳಿಂದಲೇ ಎರಡನೇ ಅವಧಿಯ ಅಧಿಕಾರವನ್ನು ಪೂರ್ಣತೆಯೆಡೆಗೆ ಕೊಂಡೊಯ್ಯುತ್ತಾ ದೇಶದಲ್ಲಿನ ಸಮಸ್ಯೆಗಳು ತನ್ನದಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ದುರಂತವೇ ಸರಿ. 

ದೇಶದಲ್ಲಿ ಬಡತನ, ಭ್ರಷ್ಟಾಚಾರ, ಹಸಿವು, ನಿರುದ್ಯೋಗವನ್ನು ಒಳಗೊಂಡು ಜಗತ್ತಿನ ಕಣ್ಣಿಗೆ ರಾಚುವ ಅನೇಕ ಜೀವಂತ ಸಮಸ್ಯೆಗಳಿವೆ. ಆದರೂ, ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಭ್ರಮೆ ಅಲ್ಲ ಭ್ರಾಂತಿಯಲ್ಲಿ ಜನಸಾಮಾನ್ಯರಿದ್ದಾರೆ ಎನ್ನುವುದು ವಿಷಾದನೀಯ. ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಕೇಂದ್ರಿತ ಸೇವೆಗಳನ್ನು ನಿರ್ಲಕ್ಷಿಸಿದಷ್ಟು ಈ ಹಿಂದಿನ ಬೇರೆ ಯಾವ ಸರ್ಕಾರವೂ ನಿರ್ಲಕ್ಷಿಸಿಲ್ಲ. ಉದ್ಯಮ ಒದಗಿಸಿ ಕೊಡುವವರಿಗೆ ತಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿಕೊಳ್ಳುತ್ತಾ ಬಂದ ಸರ್ಕಾರ ಮಾಡಿದ್ದು ಉದ್ಯಮಪತಿಗಳ ಜೇಬು ತುಂಬಿಸುವ ಕೆಲಸವಷ್ಟೇ ಹೊರತು ಬೇರೇನಿಲ್ಲ. ಆಗಲಿ, ಉದ್ಯಮ ಸಂಸ್ಥೆಗಳಿಗೆ ಬೆಂಬಲವಾಗಿ ಸರ್ಕಾರ ನಿಲ್ಲಲಿ. ಆದರೇ, ನವೋದ್ಯಮ ಸಂಸ್ಥೆಗಳ ಮೇಲೆ ಹೇರಲಾಗಿರುವ ಕ್ಲಿಷ್ಟಕರವಾದ ಅನುಸರಣಾ ನಿಯಮಗಳ ಕಾರಣದಿಂದಾಗಿ ಅವುಗಳು ಏಳುಗತಿಯಲ್ಲಿದಂತಾಗಿವೆ. ಮಾರುಕಟ್ಟೆಯ ಆಧಾರಿತ ಆರ್ಥಿಕ ಸ್ಥಿತಿಗತಿಗಳ ಮೇಲೆ ಉದ್ಯಮ ಕ್ಷೇತ್ರಗಳಲ್ಲಿ ಉದ್ಯೊಗಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಸಿಕೊಡಬೇಕೆನ್ನುವ ಸಾಮಾನ್ಯ ಜ್ಞಾನವೂ ಈ ಸರ್ಕಾರಕ್ಕಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲೇಬೇಕಿದೆ. 

ಮೋದಿ ಸರ್ಕಾರ ನೀಡಿರುವ ಭರವಸೆಯನ್ನು ಜನ ಎಂದಿಗೂ ಮರೆಯಲಾರರು. ಮೋದಿ ಸರ್ಕಾರದಿಂದ ಸೃಷ್ಟಿಯಾದ ಸಮಸ್ಯೆಗಳಿಂದ ಬಳಲಿದ್ದನ್ನೂ ಕೂಡ ದೇಶದ ಜನರು ಮರೆಯಲಾರರು. ಬೆಲೆ ಏರಿಕೆಯಿಂದ ತತ್ತರಿಸಿದ್ದನ್ನ ಜನ ಖಂಡಿತವಾಗಿಯೂ ಮರೆಯಲಾರರು. ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳಶಾಯಿಗಳ ಮಧ್ಯವರ್ತಿಯಾಗಿ ನಿಂತಿದ್ದನ್ನು ಜನ ಎಂದೂ ಮರೆಯಲಾರರು. ಒಂದು ವೇಳೆ ಇವೆಲ್ಲವನ್ನು ಕಾಲದ ವೇಗದಲ್ಲಿ ಜನ ಮರೆತರೂ ಕೂಡ, ಉದ್ಯೋಗ ಸೃಷ್ಟಿಯ ವಿಚಾರಕ್ಕೆ ಸಂಬಂದಿಸಿದಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಧಾನಿ ಹುದ್ದೆಯಲ್ಲಿ ಕುಳಿತು ‘ಪಕೋಡವನ್ನು ಮಾರಾಟ ಮಾಡಿದರೂ ಅದೊಂದು ಉದ್ಯೋಗವೆ’ ಎಂದು ಉಡಾಫೆಯ ಉತ್ತರ ನೀಡಿದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬುದ್ಧಿವಂತ ಯುವಕರಂತೂ ಖಂಡಿತ ಮರೆಯುವುದಕ್ಕೆ ಸಾಧ್ಯವಿಲ್ಲ. 

ಹೌದು, ಭಾರತದಲ್ಲಿ ನಿರುದ್ಯೋಗ ಸಮಸೈ ಗಂಭೀರವಾಗಿ ಮುಂದುವರಿದಿದೆ. ಪದವೀಧರ ವಿದ್ಯಾರ್ಥಿಗಳ ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ದೇಶದಲ್ಲಿ ಜನಸಂಖ್ಯೆ ಏರಿಕೆ ಇಳಿಮುಖವಾಗುತ್ತಿರುವ ಹೊರತಾಗಿಯೂ ಉದ್ಯೋಗಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಹಾಲಿ ಸರ್ಕಾರ ತಂದಿಟ್ಟ ಸಮಸ್ಯೆ ಅಲ್ಲದೇ ಮತ್ತೇನು..? ಇದನ್ನು ವಿರೋಧಿಸುವುದಕ್ಕೆ ಬೇಕಾಗಿ ಒಂದು ಸದೃಢ ವಿರೋಧ ಪಕ್ಷವೂ ಈಗ ದೇಶದಲ್ಲಿ ಇಲ್ಲದಂತಾಗಿದೆ. ಇದೇ ಮೋದಿ ಸರ್ಕಾರದ ‘ಸಾಫ್ಟ್ ಸರ್ವಾಧಿಕಾರ’ ಧೋರಣೆಗೆ ಮುಖ್ಯ ಕಾರಣ. 

ಭಾರತದ ಭವ್ಯ ಭವಿಷ್ಯ ಮಹಾ ಯುವ ಸಮುಧಾಯವವನ್ನೇ ನಿರುದ್ಯೋಗ ಸಮಸ್ಯೆಯಲ್ಲಿ ಬಳಲುವಂತೆ ಮಾಡಿದ ಸರ್ಕಾರಕ್ಕೆ ಏನು ಹೇಳಬೇಕು..? ನಿರುದ್ಯೋಗ ಸಮಸ್ಯೆಯ ಬಗೆಗಿನ ಮೋದಿ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಧ್ವನಿ ಎತ್ತಬೇಕಾದವರು ಯಾರು..? ಜನರು ಈಗಲಾದರೂ ಎಚ್ಚೆತ್ತುಕೊಳ್ಳಲೇಬೇಕಿದೆ. 

ವಿಪರ್ಯಾಸವೆಂದರೇ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ನೀಡಿದ ದತ್ತಾಂಶಗಳನ್ನು ಆಧರಿಸಿ ೨೦೧೮ ರಿಂದ ೨೦೨೦ ರ ನಡುವೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ಸಾಲದ ಸಮಸ್ಯೆಯ ಕಾರಣದಿಂದಾಗಿ ೨೫ ಸಾವಿರಕ್ಕಿಂತಲೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ೯೧೪೦ ಮಂದಿ ನಿರುದ್ಯೋಗದಿಂದ ಹಾಗೂ ೧೬,೦೯೧ ಮಂದಿ ಆರ್ಥಿಕ ದಿವಾಳಿತನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸ್ವತಃ ಕೇಂದ್ರ ಸರ್ಕಾರ ಮೇಲ್ಮನೆಗೆ ಮಾಹಿತಿ ನೀಡಿದೆ. 

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ನೀಡಿರುವ ಮಾಹಿತಿಯ ಪ್ರಕಾರ, ೨೦೨೧ ರ ಡಿಸೆಂಬರ್ ನಲ್ಲಿ ನಿರುದ್ಯೋಗ ಪ್ರಮಾಣ ಶೇ. ೭.೯ ಕ್ಕೆ ಏರಿಕೆಯಾಗಿದೆ. ದೇಶದ ಸರಾಸರಿ ನಿರುದ್ಯೋಗದ ಪ್ರಮಾಣ ಕಳೆದ ನವೆಂಬರ್ ನಲ್ಲಿ ಶೇ. ೭ರಷ್ಟಿತ್ತು. ಕಳೆದ ಆಗಸ್ಟ್ ನಲ್ಲಿ ಶೇ. ೮.೨ಕ್ಕೆ ಜಿಗಿದಿತ್ತು. ಕಳೆದ ನವೆಂಬರ್ ನಲ್ಲಿ ಶೇ. ೮.೨ರಷ್ಟಿದ್ದ ನಗರ ನಿರುದ್ಯೋಗ ದರವು ಡಿಸೆಂಬರ್ ನಲ್ಲಿ ಶೇ. ೯.೩ ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಗ್ರಾಮೀಣ ನಿರುದ್ಯೋಗ ದರವು ಶೇ. ೬.೪ ರಿಂದ ಶೇ. ೭.೩ಕ್ಕೆ ಹೆಚ್ಚಳವಾಗಿದೆ ಅಂತಾದರೇ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉದ್ಯೋಗ ಉತ್ಪಾದನ ಕಾರ್ಯಕ್ರಮ (ಪಿಎಂಇಜಿಪಿ), ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ ಆರ್ ಇಜಿಎಸ್), ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ), ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳು ಜೀವಂತವಾಗಿವೆಯೇ ಅಥವಾ ಸತ್ತಿವೆಯೇ..? ಹಾಗೂ ಇದೇ ಮೋದಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಇದೇ ಪ್ರಧಾನಿ ಮೋದಿ ಸರ್ಕಾರ ಘೋಷಿಸಿದ ೨೦ ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಯಿತು..? ಇವೆಲ್ಲದಕ್ಕೂ ಉತ್ತರವನ್ನು ಕೇಂದ್ರ ಸರ್ಕಾರಿಂದ ನಿರೀಕ್ಷಿಸದೇ, ಮತ್ತೆ ಯಾರಿಂದ ನಿರೀಕ್ಷಿಸಬೇಕು..? ಇವೆಲ್ಲಾ ಸಮಸ್ಯೆಗಳನ್ನು ಮೋದಿ ಸರ್ಕಾರವನ್ನು ದೂಷಿಸಬಾರದು ಎಂದಾದರೇ, ಮೋದಿ ಸರ್ಕಾರ ಹೇಳಿದ್ದೇನು..? ಮಾಡಿದ್ದೇನು..?

ದೇಶದ ಯುವ ಸಮೂಹವನ್ನು ಮಾತ್ರವಲ್ಲದೇ ಎಲ್ಲಾ ವರ್ಗದವರನ್ನು ಅತೀವ ಸಂಕಷ್ಟಕ್ಕೆ ತಳ್ಳಿರುವ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಈಗಾಗಲೇ ಒಂದು ಸಣ್ಣ ಕಿಡಿ ಹೊತ್ತಿದೆ. ಕಳೆದ ಬಾರಿ ಪ್ರಧಾನಿ ಮೋದಿ ಜನ್ಮ ದಿನದಂದು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ‘ರಾಷ್ಟ್ರೀಯ ನಿರುದ್ಯೋಗ ದಿನ’ ಟ್ರೆಂಡಿಂಗ್ ಕಂಡಿದ್ದು ಗೊತ್ತೇ ಇದೆ. ಇಷ್ಟೆಲ್ಲಾ ಆದ ಮೇಲೂ, ಇಷ್ಟೆಲ್ಲಾ ಸಮಸ್ಯೆಗಳ ನಡುವೆ ‘ತಮ್ಮದೇ ದೊಡ್ಡದು’ ಎನ್ನುವ ಕೇಂದ್ರ ಸರ್ಕಾರದ ಧೋರಣೆ ಹಾಸ್ಯಾಸ್ಪದವಲ್ಲದೇ ಮತ್ತೇನು..? ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಮೋದಿಯನ್ನು ಯಾಕೆ ಯಶಸ್ವಿ ಪ್ರಧಾಇಯೆಂದು ಒಪ್ಪಬೇಕು..? ‘ಹೇಳುವವನು ಮಾಡಲಾರ, ಮಾಡುವವನು ಹೇಳಲಾರ’ ಎಂಬ ಮಾತು ಮೋದಿ ಸರ್ಕಾರದ ವಿಷಯದಲ್ಲಿ ಅಕ್ಷರಶಃ ದಿಟವಾಗಿದೆ.

-ಶ್ರೀರಾಜ್ ವಕ್ವಾಡಿ 

        


Tuesday, March 1, 2022

ರಾಜ್ಯ ಕಾಂಗ್ರೆಸ್‌ನ ಆಂತರಿಕ ಬಿರುಕಿಗೆ ರಾಹುಲ್ ‘ಪ್ಯಾಚ್ ವರ್ಕ್’


ರಾಹುಲ್ ಕರೆದ ಸಭೆಯ ಹಿಂದಿನ ಗುಟ್ಟೇನು? | ‘ಸಾಮೂಹಿಕ ನಾಯಕತ್ವ’ ಎಲ್ಲಿಯವರೆಗೆ..?

ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಆಂತರಿಕ ಒಡಕಿಗೆ ರಾಹುಲ್ ಗಾಂಧಿ ಒಂದು ಹಂತದಲ್ಲಿ ಪ್ಯಾಚ್ ವರ್ಕ್ ಮಾಡಿದ್ದಾರೆ ಎಂದು ಸದ್ಯದ ಮಟ್ಟಿಗೆ ನೇರಾನೇರವಾಗಿ ಕಾಣಿಸುತ್ತಿದೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕೈ ಪಡೆಯಲ್ಲಿನ ಆಂತರಿಕ ವೈಮನಸ್ಸನ್ನು ತೆಗೆದು ಹಾಕುವ ಪ್ರಯತ್ನದಲ್ಲಿದೆ. 

ರಾಜ್ಯದಲ್ಲಿ ತನ್ನದೇ ಆದಂತಹ ಛಾಪನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕಾಂಗ್ರೆಸ್‌ನಲ್ಲಿ ಇಂದಿಗೂ ಒಂದು ದೊಡ್ಡ ಬಳಗ ಅವರ ಹಿಂದೆ ಇರುವುದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೂ ಕೂಡ ಗೊತ್ತಿದೆಯಾದ್ದರಿಂದಲೇ, ಡಿಕೆಶಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕೆಂಬ ಕಾರಣದಿಂದಾಗಿ ಪಾದಯಾತ್ರೆಯಂತಹ ರಾಜಕೀಯ ತಂತ್ರಗಾರಿಕೆಯನ್ನು ಹೂಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿನ ಎಲ್ಲರಿಗೂ ಗೊತ್ತಿರುವ ವಿಚಾರ. ಬಳ್ಳಾರಿ ಪಾದಯಾತ್ರೆ ಮಾಡಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು, ಅದೇ ರೀತಿ ಮೇಕೆದಾಟು ಪಾದಯಾತ್ರೆ ಮಾಡುವುದರ ಮುಖೇನ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಏರುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಒಂದಿಷ್ಟು ಚರ್ಚೆಗಳು ಕೇಳಿ ಬರುತ್ತಿದ್ದರೂ ಕೂಡ, ಹಾಗೆ ಆಗುವ ಸಾಧ್ಯತೆ ಇನ್ನೂ ಅಸ್ಪಷ್ಟ ಸ್ಥಿತಿಯಲ್ಲಿದೆ ಎನ್ನುವುದು ರಾಜ್ಯ ಕಾಂಗ್ರೆಸ್‌ನ ಸದ್ಯದ ವಾತಾವರಣವನ್ನು ಗಮನಿಸಿದರೇ, ತಿಳಿಯುತ್ತದೆ. ಅದೇನೇ ಇರಲಿ, ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೋ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೋ ಅಥವಾ ಕಾಂಗ್ರೆಸ್ ಬಿಜೆಪಿ ಎದುರು ಸೋಲುತ್ತದೋ, ಗೆಲ್ಲುತ್ತದೋ ಎನ್ನುವುದು ಚುನಾವಣೆಯ ನಂತರದ ವಿಷಯ. ಆದರೇ, ‘ಕೈ ಪಾಳಯ’ ಈಗಾಗಲೇ ಚುನಾವಣಾ ಕಸರತ್ತು ಆರಂಭಿಸಿದೆ ಎನ್ನುವುದು ಸುಸ್ಪಷ್ಟ. 

ಹೈಕಮಾಂಡ್‌ಗೆ ನಾಯಕತ್ವಕ್ಕಿಂತ ಪಕ್ಷದ ಅಧಿಕಾರವೇ ಮುಖ್ಯ : ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಗೆ ಪ್ರತಿಪಕ್ಷ ಬಿಜೆಪಿ ಎದುರು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಸಾಧ್ಯವಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಶತಪ್ರಯತ್ನದಲ್ಲಿ ಕೇಂದ್ರ ಕಾಂಗ್ರೆಸ್ ಇದೆ. ಪಂಜಾಬ್ ಕಾಂಗ್ರೆಸ್ ನಲ್ಲಿ ಸೃಷ್ಟಿಯಾದ ಗೊಂದಲಗಳು ರಾಜ್ಯ ಕಾಂಗ್ರೆಸ್ ನಲ್ಲಿಯೂ ಕೂಡ ಆಗುವ ಸಾಧ್ಯತೆ ಇದೆ ಎಂಬ ಒಂದು ಸಣ್ಣ ಭಯ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮುಸುಕಿನ ವೈಮನಸ್ಸಿನಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಉಂಟಾಗಿದೆ ಎಂಬುವುದನ್ನು ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ರಾಜ್ಯದ ಪ್ರಮುಖ ಹದಿನಾಲ್ಕು ನಾಯಕರನ್ನು ದೆಹಲಿಗೆ ಬರುವುದದಕ್ಕೆ ಭುಲಾವ್ ನಿಡಿದ್ದರಿಂದಲೇ ತಿಳಿಯಬಹುದಾಗಿದೆ. ಪಂಜಾಬ್ ನಲ್ಲಿ ‘ಸಿಂಗ್ ದ್ವಯರ’ (ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಪಂಜಾಬ್ ಪ್ರದೇಶ್ ಕಾಂಗ್ರೆಸ್ ನ ಅಧ್ಯಕ್ಷ ನವಜಿತ್ ಸಿಂಗ್ ಸಿಧು) ನಡುವಿನ ಗುದ್ದಾಟ ಅಂತಿಮವಾಗಿ ಪಂಜಾಬ್ ನ ಅಚ್ಚರಿಯ ಮುಖ್ಯಮಂತ್ರಿ ಆಯ್ಕೆಯ ತನಕ ತಂದು ತಲುಪಿಸಿರುವ ವಿಚಾರ ಗೊತ್ತೇ ಇದೆ. ಆದರೇ, ಪಂಜಾಬ್ ಪರಿಸ್ಥಿತಿಯನ್ನು ರಾಜ್ಯಕ್ಕೆ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ, ರಾಜ್ಯದಲ್ಲಿಯೂ ಹಾಗೆಯೇ ಆಗಬಹುದು ಎನ್ನುವ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿಯೇ, ರಾಹುಲ್ ಗಾಂಧಿ ಇತ್ತೀಚೆಗೆ ಕರೆದ ಸಭೆಯತ್ತ ಭಾರಿ ದೊಡ್ಡ ಕುತೂಹಲ ಮೂಡಿಸಿದೆ. ರಾಜ್ಯದ ಪ್ರಮುಖ ನಾಯಕರನ್ನೆಲ್ಲರನ್ನೂ ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನುವುದು ಸ್ಪಷ್ಟವಾಗಿದೆ. ಕರ್ನಾಟಕವನ್ನು ಹೊರತು ಪಡಿಸಿದರೇ, ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಗೆ ಮೈತ್ರಿಯಿಲ್ಲದೇ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿರುವ ಕೆಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಹೈಕಮಾಂಡ್ ಇದ್ದ ಹಾಗೆ ಕಾಣಿಸುತ್ತಿದೆ. ಹಾಗಾಗಿ ಸಭೆಯಲ್ಲಿ ರಾಹುಲ್ ಗಾಂಧಿ ‘ಸಾಮೂಹಿಕ ನಾಯಕತ್ವದ’ ಬಗ್ಗೆ ಒತ್ತಿ ಹೇಳಿದ್ದಾರೆ. ‘ಅಧಿಕಾರವೇ ಮುಖ್ಯ’ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಪಡೆಯುವುದೇ ನಮ್ಮ ಪರಮ ಗುರಿಯಾಗಬೇಕು ಎಂಬ ಧ್ಯೇಯದಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಪಕ್ಷದಲ್ಲಿನ ವೈಮನಸ್ಸನ್ನು ಶಮನಗೊಳಿಸುವ ಬಗ್ಗೆ ರಾಹುಲ್ ಮಾತನಾಡಿದ್ದು ನೋಡಿದರೇ, ಅಧಿಕಾರಕ್ಕೆ ಬರುವವರೆಗೆ ನಾಯಕತ್ವದ ಬಗ್ಗೆ ಚಿಂತನೆಯಲ್ಲಿ ಹೈಕಮಾಂಡ್ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. 

ಹದಿನಾಲ್ಕು ನಾಯಕರಿಗೆ ದೆಹಲಿಗೆ ಬರಲು ಭುಲಾವ್ ನೀಡಿದ ಗುಟ್ಟೇನು? :  ಈವರೆಗೆ ರಾಜ್ಯದ ಪಕ್ಷದ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವುದಕ್ಕಿದ್ದರೂ ಕೇವಲ ವಿಧಾನ ಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈರ್ವರನ್ನು ಮಾತ್ರ ಸಭೆಗೆ ಕರೆಯುತ್ತಿದ್ದ ರಾಹುಲ್ ಗಾಂಧಿ, ಈ ಬಾರಿ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಆಂತರಿಕ ಸಭೆಗೆ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಕೊಂಚ ಕುತೂಹಲವನ್ನು ಹೆಚ್ಚಿಸಿದೆ. ರಾಹುಲ್ ಕರೆದ ಸಭೆಯಲ್ಲಿ ಡಿ. ಕೆ ಶಿವಕುಮಾರ್, ಸಿದ್ದರಾಮಯ್ಯ ಮಾತ್ರವಲ್ಲದೇ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು. ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ನಡುವಿನ ಪ್ರತಿಷ್ಠೆಯ ವೈಮನಸ್ಸು ಇದ್ದರೇ, ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸುವ ಆಡಳಿತ ಪಕ್ಷ ಬಿಜೆಪಿಯ ವಿರುದ್ಧ ನಿಲ್ಲುವುದಕ್ಕೆ ಸಾಧ್ಯವಿಲ್ಲ ಹಾಗೂ ಯಾವುದೇ ಭಿನ್ನಾಭಿಪ್ರಾಯಗಳು ರಾಜ್ಯ ಕಾಂಗ್ರೆಸ್ ನಲ್ಲಿ ಕಾಣಿಸಿಕೊಂಡರೂ ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ಅರಿವು ರಾಹುಲ್ ಗೆ ತಡವಾಗಿಯಾದರೂ ಆಗಿದೆ ಎಂದು ಈಗ ಕಾಣಿಸುತ್ತಿದೆ. ಆದ್ದರಿಂದಲೇ, ಚುನಾವಣೆಯ ನಾಯಕತ್ವದ ಬಗ್ಗೆ ರಾಹುಲ್ ಸದ್ಯಕ್ಕೆ ‘ನೋ’ ಎಂದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನು, ರಾಹುಲ್ ಗಾಂಧಿಯ ಬಗ್ಗೆ ಕೇಂದ್ರದ ಕಾಂಗ್ರೆಸ್ ಹಿರಿಯ ನಾಯಕರಲ್ಲಿಯೂ ಒಳ್ಳೆಯ ಅಭಿಪ್ರಾಯವಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವದ ಬಗ್ಗೆ ‘ಜಿ೨೩ ಪಡೆ’ ಅತೃಪ್ತಿ ವ್ಯಕ್ತಪಡಿಸಿರುವುದು ಕೊಂಚ ಮಟ್ಟಿಗೆ ರಾಹುಲ್ ನಾಯಕತ್ವದ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವ ವಿಚಾರ ಸ್ವತಃ ರಾಹುಲ್ ಗಾಂಧಿಗೆ ಗೊತ್ತಿದೆ. ಹಾಗಾಗಿ ಪಕ್ಷವನ್ನು ತಳಮಟ್ಟದಿಂದಲೇ ಭದ್ರಗೊಳಿಸುವವ ಸಲುವಾಗಿ ರಾಜ್ಯದ ಎಲ್ಲಾ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಅಂತನ್ನಿಸುತ್ತಿದೆ.  

ರಾಹುಲ್ ನಡೆಯಿಂದ ಡಿಕೆಶಿಗೆ ಲಾಭ.? : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹೆಸರಿನ ಮೂಲಕವೇ ಗುರುತಿಸಿಕೊಳ್ಳಬೇಕೆಂಬ ಪ್ರಚಾರದ ಹುಚ್ಚು ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಇದೆ. ಆದರೇ, ಆ ಎಲ್ಲದಕ್ಕೂ ಈಗ ಕೊಂಚ ಬ್ರೇಕ್ ಬಿದ್ದ ಹಾಗೆ ಕಾಣಿಸುತ್ತಿದೆ. ರಾಹುಲ್ ಗಾಂಧಿಯವರ ‘ಸಾಮೂಹಿಕ ನಾಯಕತ್ವ’ದ ಜಪದಿಂದ ಡಿಕೆಶಿಗೆ ಏನು ಲಾಭ..? ಹೌದು, ಖಂಡಿತ ಡಿಕೆಶಿಗೆ ಇದರಿಂದ ಲಾಭ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಣಿಸುತ್ತಿದೆ. ರಾಜಕೀಯ ವಲಯದಲ್ಲಿ “ಕರ್ನಾಟಕದಲ್ಲಿ ಕಾಂಗ್ರೆಸ್ ಅಂದರೇ, ಸಿದ್ದರಾಮಯ್ಯ ಎಂಬ ಅಭಿಪ್ರಾಯ” ಇನ್ನೂ ಇದೆ. ಆ ಅಭಿಪ್ರಾಯವನ್ನು ಬದಲಾಯಿಸಬೇಕೆಂದು ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಹರಸಾಹಸ ಪಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿರುವವರಿಗೆ ಮಾತ್ರವಲ್ಲದೇ ಜನ ಸಾಮಾನ್ಯರಿಗೂ ಗೊತ್ತಿರುವ ವಿಷಯ. ಡಿಕೆಶಿಯವರ ಆ ಪ್ರಯತ್ನಕ್ಕೆ ಹೈಕಮಾಂಡ್‌ನ ಅಭಿಪ್ರಾಯ ‘ಡಿಕೆಶಿ ರಾಜಕೀಯ ತಂತ್ರಗಾರಿಕೆ’ಗೆ ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಲಿದೆ ಎಂದು ಕಾಣಿಸುತ್ತಿದೆ. ಆದರೇ, ಡಿಕೆಶಿ ಈ ಸ್ಥಿತಿಯನ್ನು ಅಂದರೇ, ಈ “ಸಾಮೂಹಿಕ ನಾಯಕತ್ವ”ದ ಯೋಜನೆಯಡಿಲ್ಲಿ ಹೇಗೆ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. 

ರಾಹುಲ್ ಸಭೆಯ ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಗ್ಗಟ್ಟಿನ ಪ್ರದರ್ಶನ ತೋರಿಸಿದ್ದರೂ ಅದು ಬೂದಿ ಮುಚ್ಚಿದ ಕೆಂಡ ಎನ್ನುವುದು ಗೊತ್ತಿರುವ ವಿಷಯ. ಒಂದೆಡೆ ಸಿದ್ದರಾಮಯ್ಯರಂತೂ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ದೊಡ್ಡ ಮಾತನ್ನಾಡಿದರೇ, ಇನ್ನೊಂದೆಡೆ ಡಿಕೆಶಿ, ಒಗ್ಗಟ್ಟಿನಿಂದ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ರಾಹುಲ್ ಗೆ ಭರವಸೆ ನೀಡಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಹೌದು. ಆದರೇ, ಈ ಒಗ್ಗಟ್ಟು ಎಲ್ಲಿಯವರಗೆ ಎನ್ನುವುದು ಸದ್ಯದ ಪ್ರಶ್ನೆ. 

ಇನ್ನು, ಚುನಾವಣೆ ತಂತ್ರಗಾರಿಕೆಗೆ ಕೇಂದ್ರದ ತಂಡವನ್ನೇ ರಾಜ್ಯಕ್ಕೆ ಕಳುಹಿಸುವುದಾಗಿ ರಾಹುಲ್ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ. ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಎಷ್ಟೇ ಅನುಭವವಿದ್ದರೂ ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಹೂಡುವ ರಾಜಕೀಯ ತಂತ್ರಗಾರಿಕೆಯ ಎದುರು ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆಯ ತೂಕ ಕೊಂಚ ಕಡಿಮೆಯೇ ಇರಲಿದೆ ಎನ್ನುವುದು ಸತ್ಯ. ಅದು ಏನೇ ಇರಲಿ, ಕೇಂದ್ರದಿಂದ ರಾಜ್ಯಕ್ಕೆ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕಾ ತಂಡ ಬಂದು ಹೇಗೆ ತಂತ್ರಗಾರಿಕೆ ಹೂಡುತ್ತದೆ..? ರಾಹುಲ್ ಗಾಂಧಿ ಕಳುಹಿಸುವ ತಂಡ ಹೂಡುವ ರಾಜಕೀಯ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯತ್ತದೆಯೇ..? ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಮುಖ್ಯಮಂತ್ರಿ ಯಾರಾಗಲಿದ್ದಾರೆ..? ಎಂಬ ಪುಂಖಾನುಪುಂಖವಾದ ಪ್ರಶ್ನೆಗಳು ಸದ್ಯದ ಕುತೂಹಲವನ್ನು ಕೆರಳಿಸುತ್ತಿವೆ. 

-ಶ್ರೀರಾಜ್ ವಕ್ವಾಡಿ     


Sunday, February 13, 2022

ಫ್ರಂ ಪುಲ್ವಾಮ ವಿಷಾದನೀಯ ನೆನಪುಗಳು..!


 

ಹೌದು, ಅದು ರಣಭೀಕರ ದೃಶ್ಯ. ಇಡೀ ಭಾರತ ವಿಷಾದಗೀತೆ ಹಾಡುವಂತೆ ಮಾಡಿದ ವಿಧಿ ಬರೆದ ಕರಾಳ ದಿನ. ರಕ್ತವೆಂಬುವುದು ಹೊಳೆಯಾಗಿ ಹರಿಯುತ್ತಿತ್ತು. ಸೈನಿಕರ ಶವ ಛೀಧ್ರ ಛಿಧ್ರವಾಗಿ ರಸ್ತೆಗಳಲ್ಲಿ ಬಿದ್ದಿದ್ದವು. ಆವಂತಿ ಪುರದ ಬಳಿಯ ಲೇತ್ ಪೊರಾದ ಹತ್ತಿರದಲ್ಲಿ ಎದೆ ತೆರೆದುಕೊಳ್ಳುತ್ತದೆ ಹಿಂದೆಂದೂ ಕಾಣದ ಹೃದಯ ವಿದ್ರಾವಕ ದೃಶ್ಯ.

ಅದು 1989ರಿಂದೀಚೆಗೆ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿ.

ಸರಿಯಾಗಿ ಮೂರು ವರ್ಷಗಳ ಹಿಂದೆ ಅಂದರೇ, 2019 ರ ಫೆಬ್ರವರಿ 14 ರಂದು, ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿ ಆರ್ ಪಿ ಎಫ್) ಸಿಬ್ಬಂದಿಗಳು ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಮಧ್ಯಾಹ್ನ 3:15 ಸುಮಾರಿಗೆ  ಅವಾಂತಿಪುರ ಬಳಿಯ ಲೆತ್ ಪೊರಾದಲ್ಲಿ , ಭದ್ರತಾ ಸಿಬ್ಬಂದಿಯನ್ನು ಹೊತ್ತು ಸಾಗಿಸುತಿದ್ದ ಬಸ್ ಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿದ ಪರಿಣಾಮವಾಗಿ ಅಲ್ಲಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿ ಹೋಯಿತು. ರಕ್ತ ಸಿಕ್ತವಾಗಿ ಬದಲಾಯಿತು ಪುಲ್ವಾಮ. ಭೀಕರ ದೃಶ್ಯ. ಎಲ್ಲವೂ ಛಿಧ್ರ ಛಿಧ್ರ. ಅದು ಅಸಾಧ್ಯ ನೋಟ.

ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕ, ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಪಡೆ ಜೈಷ್–ಎ–ಮೊಹಮದ್ ನ ನಿರ್ದೇಶನದಂತೆ  ಬಾಂಬ್ ಸ್ಪೋಟಗೊಳಿಸಿದ. ಇದರಿಂದಾಗಿ 40 ಮೀಸಲು ಪಡೆಯ ಯೋಧರು ಹುತಾತ್ಮರಾದರು.

ಇದು ಜಮ್ಮುವಿನ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ನಡೆದ ಮೊದಲ ಉಗ್ರರ ದಾಳಿಯಲ್ಲ..!

2015 ರ ಆರಂಭದಲ್ಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೆಚ್ಚು ಆತ್ಮಹತ್ಯೆ ದಾಳಿ ನಡೆಸಿದ್ದರು. ಜುಲೈ 2015 ರಲ್ಲಿ, ಗುರದಾಸ್ ಪುರದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಗೆ ಮೂರು ಬಂದೂಕು ದಾರಿಗಳು ದಾಳಿ ಮಾಡಿ ಧ್ವಂಸಗೊಳಿಸಿದ್ದರು. 2016 ರ ಆರಂಭದಲ್ಲಿ ನಾಲ್ಕರಿಂದ ಆರು ಬಂದೂಕುದಾರಿಗಳು ಪಠಾನ್ಕೋಟ್ ಏರ್ ಫೋರ್ಸ್ ಸ್ಟೇಷನ್ ಗೆ ದಾಳಿ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಉಗ್ರ ದಾಳಿಕೋರರು ಯುರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದರು. 31 ಡಿಸೆಂಬರ್ 2017 ರಂದು, ಲೆತ್ ಪೊರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು ಐದು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದರು. ಈ ಎಲ್ಲಾ ದಾಳಿಯು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೆ ಘಟಿಸಿದ್ದು ಎನ್ನುವುದು ಆಶ್ಚರ್ಯಕರ ಸಂಗತಿ. ಎನ್ನುವಲ್ಲಿಗೆ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಿ ಉಗ್ರ ಕ್ರಿಮಿಗಳ ಟಾರ್ಗೆಟ್ ಪ್ಲೇಸ್ ಎನ್ನುವುದನ್ನು ವಿವರಿಸಿ ಹೇಳಬೇಕೆಂದಿಲ್ಲ. 

ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಈ ದಾಳಿ ನಂತರ ನನ್ನ ಹೃದಯದೊಳಗೆ ಸಹ ಅದೇ ರೀತಿ ದಾಳಿ ಮಾಡಬೇಕೆಂಬ ಆಕ್ರೋಶ ಕುದಿಯುತ್ತಿದೆ ಎಂದು ಹೇಳಿದ್ದರು.ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರ ಖಂಡಿತಾ ತೀರಿಸುತ್ತೇವೆ. ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದ್ದರು.

ಪುಲ್ವಾಮಾ ದಾಳಿಯನ್ನು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನಾದ್ಯಂತ ದೇಶಗಳು ಖಂಡಿಸಿ ಭಾರತಕ್ಕೆ ಉಗ್ರರ ವಿರುದ್ಧ ದಾಳಿಯಲ್ಲಿ ಬೆಂಬಲ ಸೂಚಿಸಿದ್ದವು. ಪಾಕಿಸ್ತಾನದ ಮಿತ್ರರಾಷ್ಟ್ರ ಕಮ್ಯುನಿಷ್ಟ್ ಚೀನಾ ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಬೆಂಬಲ ಸೂಚಿಸಿ ಇದೊಂದು ಹೇಡಿ ಕೃತ್ಯ ಎಂದು ಟೀಕಿಸಿತ್ತು.

ಮತ್ತು ಭಾರತ ಹೇಳಿದಂತೆಯೇ ನಡೆದುಕೊಂಡಿತು.  ಪುಲ್ವಾಮ ದಾಳಿಗೆ ಪ್ರತಿಕ್ರಿಯೆಯಾಗಿ, 26/02/2019ರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿ ಅಡಗಿದ್ದ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ಭಾರತದ ವಾಯುಪಡೆಯ ಜೆಟ್‍ ಗಳು ದಾಳಿನೆಡಸಿದವು. ಬಾಲ್ ಕೋಟ್‍ ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ ನ ಬುಡ ಅಲ್ಲಾಡಿಸಿತು ಭಾರತ. ಕುತಂತ್ರಿ ಬುದ್ಧಿಯನ್ನು ಬಿಡದ  ಪಾಕಿಸ್ತಾನ 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್‌ ಗಳನ್ನು ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಹೇಳಿಕೊಂಡಿತು.

ಬಾಲಕೋಟ್ ದಾಳಿ

ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ ಹನ್ನೆರಡು ಮಿರಾಜ್ 2000 ಜೆಟ್ಗಳು,ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್ ನಲ್ಲಿ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು ೨೫೦ ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಬಂದಿದೆ ಎಂದು ಉಪ ಸಚಿವ ವಿ.ಕೆ ಸಿಂಗ್‍ ಹೇಳುತ್ತಿದ್ದಂತೆ ಇಡೀ ಭಾರತಕ್ಕೆ ಭಾರತ ಆ ಸುದ್ಧಿಯನ್ನು ಸಂಭ್ರಮಿಸಿತು. ಹೌದು, ಅದು ಸಹಸ್ರ ಸಹಸ್ರ ಭಾರತೀಯರಿಗೆ ರೋಮಾಂಚಕ ಕ್ಷಣವಾಗಿದ್ದಿದ್ದಂತೂ ಅಪ್ಪಟ ಸತ್ಯ.

ಈ ಭೀಕರ ದಾಳಿಯ ನಂತರ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಬೇಕೆಂಬ ಭಾರತದ ರಾಜತಾಂತ್ರಿಕ ಪ್ರಯತ್ನ ಕೊನೆಗೂ ಕಳೆದ ವರ್ಷ ಮೇ 1ರಂದು ಫಲಿಸಿತು.

ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ

#PulwamaAttack 








Saturday, November 20, 2021

ಈ ಕಾಯ್ದೆಗಳಿಂದ ಅನುಕೂಲಗಳೇ ಆಗುತ್ತವೆ ಎಂದವರೇ...




ಪಂಚರಾಜ್ಯ ಚುನಾವಣೆಗೆ ಮೋದಿ ಗಿಮಿಕ್ | ಪಂಜಾಬ್ ನಲ್ಲಿ ಸಿಂಗ್ ಕಿಂಗ್ ಮೇಕರ್ 

ಈ ‘ರೇ’ ಎನ್ನುವ ಶಬ್ದ ಅಥವಾ ಅಕ್ಷರ ಕನ್ನಡ ಶಬ್ದಕೋಶದಲ್ಲಿರುವ ಅತ್ಯಂತ ಅಸಹನೀಯ ಮತ್ತು ಅಸಹ್ಯ ಅಂತನ್ನಿಸುತ್ತಿದೆ. ಹೌದು, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಹೊರತಾಗಿ ಏನೂ ಸಮಸ್ಯೆಯಾಗುವುದಿಲ್ಲ. ಕೃಷಿ ಕಾಯ್ದೆಗಳಲ್ಲಿ ಸುಧಾರಣೆ ತಂದಿರುವುದಕ್ಕಾಗಿ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಪದೇ ಪದೇ ಹೇಳುತ್ತಿದ್ದ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವ‘ರೇ’ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಘೋಷಿಸಿ, ಕಳೆದೊಂದು ವರ್ಷದಿಂದ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಹೋರಾಟ ನಡೆಸಿದ ರೈತರ ಮುಂದೆ ಕೊನೆಗೂ ಸೋಲೊಪ್ಪಿಕೊಂಡಿದ್ದಾರೆ.

ಒಂದೊಮ್ಮೆಯೂ ಈ ಹಿಂದೆ ಈ ವಿಚಾರವಾಗಿ ಪ್ರತ್ಯಕ್ಷವಾಗಿ ರೈತರ ಮುಂದೆ ಬಂದು ಒಂದು ಸೊಲ್ಲೆತ್ತದ ಮಾನ್ಯ ಪ್ರಧಾನಿಗಳು “ನಮ್ಮಿಂದ ತಪ್ಪಾಗಿದೆ, ದೇಶದ ರೈತರ ಕ್ಷಮೆ ಕೇಳುತ್ತೇನೆ” ಎಂದು ಕಾಯ್ದೆಗಳನ್ನು ವಾಪಾಸ್ ಪಡೆಯುತ್ತೇವೆ ಎಂದು ಹೇಳುವ ಸ್ಥಿತಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಬರಬಾರದಿತ್ತು. ಮೋದಿ ಸುಳಿವೇ ಇಲ್ಲದಂತೆ ಏಕಾಏಕಿ ಬಂದು ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಹೇಳಿರುವುದರಿಂದ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ದೇಶ ಮಟ್ಟದಲ್ಲಿ ಚರ್ಚೆಯಾಗುವುದನ್ನು ನೋಡುವುದೇ ಪ್ರಧಾನಿಯವರಿಗೆ ವಿಪರೀತ ಸಂತಸ ನೀಡುವ ಸಂಗತಿ ಎಂದು ಕಾಣಿಸುತ್ತಿದೆ. ರಾಷ್ಟ್ರದ ರಾಜಧಾನಿ ದೆಹಲಿಯ ಗಡಿ ಭಾಗಗಳಲ್ಲಿ ಹಾಗೂ ಇತರೆ ರಾಜ್ಯಗಳಲ್ಲಿ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದ ರೈತರ ವಿರುದ್ಧ ಕಡೆಗೂ ಮಣಿದು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿರುವುದರ ಹಿಂದೆ ಪ್ರಧಾನಿ ಹಾಗೂ ಬಿಜೆಪಿಯ ‘ಮೆಘಾ ಪ್ಲ್ಯಾನ್’ ಇದೆ ಎನ್ನುವುದು ಅಕ್ಷರಶಃ ಸತ್ಯ. ೨೦೧೪ ರಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಜೆಪಿಯ ಜೊತೆಗೆ ನಿಂತು ದೇಶ ಗೆಲ್ಲಲು ತಂತ್ರ ಹೆಣೆದಿದ್ದರು. ಅಲ್ಲಿಂದೀಚೆಗೆ ಬಿಜೆಪಿ ಪಕ್ಷವೇ ತಂತ್ರ ಹೆಣೆಯುವಷ್ಟು ಬೆಳೆದು ನಿಂತಿದೆ ಎನ್ನುವುದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳೇ ಸೂಚಿಸುತ್ತವೆ. ಒಂದು ರೀತಿಯಲ್ಲಿ ಚುನಾವಣೆಯ ಒಂದೇ ಒಂದು ಉದ್ದೇಶಕ್ಕಾಗಿ ಬಿಜೆಪಿ ಯಾವುದಕ್ಕೂ ಬೇಕಾದರೂ ಸಿದ್ಧ ಎಂಬುವುದು ಈಗೀಗ ಸ್ಪಷ್ಟವಾಗುತ್ತಿದೆ. ಪ್ರಧಾನಿಗಳು ಹೇಳಿರುವ ಹಾಗೆಯೇ, “ರೈತರಿಗಾಗಿ ಕೃಷಿ ಕಾಯ್ದೆಗಳನ್ನು ತಂದೆವು, ದೇಶಕ್ಕಾಗಿ ವಾಪಾಸ್ ಪಡೆಯುತ್ತಿದ್ದೇವೆ” ಎಂಬ ಮಾತಿನಲ್ಲೇ ತಮ್ಮ ಆಡಳಿತ ವರ್ಚಸ್ಸಿಗೆ ಧಕ್ಕೆ ಆಗಬಾರದೆಂಬ ಕಾಳಜಿ ಇದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಕಾಯ್ದೆ ‘ಪರ’ರ ಉಲ್ಟಾ ನಿಲುವು : ಕೇಂದ್ರ ಸರ್ಕಾರ ಅಂಗೀಕಾರ ಮಾಡಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಿದ ರೈತ ಪ್ರತಿಭಟನಾಕಾರರನ್ನು ಖಲಿಸ್ತಾನಿಗಳು, ದೇಶ ದ್ರೋಹಿಗಳು, ಭಯೋತ್ಪಾದಕರು ಎಂದು ಕರೆದ ಪ್ರದಾನಿ ಮೋದಿ ಅವರ ಅನುಯಾಯಿಗಳು ಏಕಾಏಕಿ ಈಗ ತಮ್ಮ ನಾಲಿಗೆ ಬದಲಾಯಿಸಿಕೊಂಡಿರುವುದನ್ನು ನೋಡಿದರೇ, ವಿಚಿತ್ರ ಅನ್ನಿಸುತ್ತಿದೆ. ಯಾರು ರೈತರ ಪ್ರತಿಭಟನೆಯನ್ನು ದೇಶ ದ್ರೋಹ ಚಟುವಟಿಕೆ ಎಂದು ಜರೆದಿದ್ದರೋ, ಅವರು ಈಗ ‘ಪ್ರತಿಭಟನೆ, ವಿರೋಧ ಮಾಡುವುದು ಪ್ರಜಾಪ್ರಭುತ್ವದ ಬ್ಯೂಟಿ’ ಎಂದು ಸಾಫ್ಟ್ ಧೋರಣೆ ತೋರಿಸುತ್ತಿರುವುದನ್ನು ನೋಡಿದರೇ, ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಅಷ್ಟಕ್ಕೂ ೨೦೧೪ ರಿಂದ ಕೆಲವರಿಗಂತೂ ಅನುಕೂಲಕ್ಕೆ ತಕ್ಕ ಹಾಗೆ ನಾಲಿಗೆ ಬದಲಾಯಿಸಿಕೊಳ್ಳುವ ಅಭ್ಯಾಸ ರೂಢಿಯಾಗಿ ಬಿಟ್ಟಿದೆ.       

ಮುಂದಿನ ವರ್ಷ ಬರಲಿರುವ ಪಂಚರಾಜ್ಯ ಚುನಾವಣೆಯನ್ನು ಉದ್ದೇಶಿಸಿಕೊಂಡೇ ಕೇಂದ್ರ ಸರ್ಕಾರ ಈ ಕಾಯ್ದೆಗಳ ಹಿಂಪಡೆಯುವ ನಿರ್ಧಾರಕ್ಕೆ ಮುಂದಾಗಿದ್ದು ಎನ್ನುವುದು ಎಳೆ ಕೂಸಿಗೂ ಗೊತ್ತಿರುವ ವಿಚಾರ. ಆದರೇ, ಬಿಜೆಪಿ ಹಾಗಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುರದ ಮೂಲಕ ಜನರ ಕಿವಿಯ ಮೇಲೆ ಹೂವಿಡೋದಲ್ಲ, ಲಾಲ್ ಬಾಗ್ ನನ್ನೇ ಇಡುತ್ತಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸ್ಪಷ್ಟ. ಆದರೇ, ಅದನ್ನು ತೋರಿಸಿಕೊಳ್ಳಲಾಗದ ಇರಿಸು ಮುರಿಸಿನ ಸ್ಥಿತಿಯಲ್ಲಿದೆ ಬಿಜೆಪಿ. 

ವಾಪಾಸ್ ಪಡೆಯುವ ಉದ್ದೇಶ ಪಂಚರಾಜ್ಯ ಚುನಾವಣೆ : ಈ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಆಗುತ್ತವೆ ಎಂದವರೇ, ದಿಢೀರ್ ಆಗಿ ವಾಪಾಸ್ ಪಡೆಯುವುದಾಗಿ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೇ, ಬಿಜೆಪಿ ಬಲವಾದ ರಾಜಕೀಯ ಲೆಕ್ಕಾಚಾರವನ್ನೇ ಹಾಕಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬರುವ ವರ್ಷ, ಅಂದರೇ ೨೦೨೨ ರಲ್ಲಿ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಈ ವಾಪಾಸಾತಿ ನಿರ್ಧಾರಕ್ಕೆ ಮುಂದಾಗಿದೆ. ಹೌದು, ೨೦೧೪ ರಲ್ಲಿ ಭೂಸ್ವಾಧೀನ ಸುಗ್ರಿವಾಜ್ಞೆಯ ವಿರುದ್ಧವೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಬಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಪ್ರತಿ ಪಕ್ಷ ಕಾಂಗ್ರೆಸ್ ಕೂಡ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರ ಹಾಕಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಇದು ಸೂಟ್ ಬೂಟ್ ಸರ್ಕಾರ’ ಎಂದು ನೇರಾನೇರವಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಜರೆದಿದ್ದರು. ದೊಡ್ಡ ಮಟ್ಟದಲ್ಲಿ ವಿರೋಧ ಬಂದ ಕಾರಣದಿಂದಾಗಿ ೨೦೧೫ ರಲ್ಲಿ ಬಿಹಾರ ವಿಧಾನ ಸಭಾ ಚುನಾವಣೆಯ ಮುಂಚಿತವಾಗಿ ಇದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭೂಸ್ವಾಧೀನ ಸುಗ್ರಿವಾಜ್ಞೆಯನ್ನು ಹಿಂಪಡೆದಿತ್ತು. ಅದಾದ ಮೇಲೆ ಈಗ ಮತ್ತೊಮ್ಮೆ ಕೇಂದ್ರ ಹಿಂದ್ಹೆಜ್ಜೆ ಇಟ್ಟು ತೀವ್ರ ಮುಖಭಂಗ ಅನುಭವಿಸಿದೆ. 

ಪಂಚರಾಜ್ಯ ಚುನಾವಣೆಯ ಲೆಕ್ಕಾಚಾರ ಖಂಡಿತ ಇದ್ದೇ ಇದೆ. ಬರುವ ವರ್ಷ ಬರಲಿರುವ ವಿಧಾನ ಸಭಾ ಚುನಾವಣೆಯ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಪಂಜಾಬ್ ನಲ್ಲಿ ಬಿಜೆಪಿ ಶೂನ್ಯ ಗಳಿಕೆಯ ಸಾಧನೆ ಮಾಡಲಿದೆ ಎಂಬ ಸಮೀಕ್ಷೆಯ ಭವಿಷ್ಯಕ್ಕೆ ಹೆದರಿ, ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಹೌದು, ಬಿಜೆಪಿಗೂ ಗೊತ್ತು, ಪಂಜಾಬ್ ನಲ್ಲಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಸಾಧ್ಯವಿಲ್ಲವೆಂದು, ಆದರೂ ಪ್ರತಿಪಕ್ಷ ಕಾಂಗ್ರೆಸ್ ನ ಎದುರು ಮರ್ಯಾದೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಮಾತ್ರವಲ್ಲದೇ, ಪಂಜಾಬ್ ನಲ್ಲಿ ಸಿಖ್ ಧರ್ಮದ ಮತದಾರರೇ ನಿರ್ಣಾಯಕವಾಗಿ ಪರಿಣಮಿಸುವ ಕಾರಣದಿಂದಾಗಿ ಸಿಖ್ ರನ್ನು ಎದುರು ಹಾಕಿಕೊಂಡು ಬಿಜೆಪಿ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಿಲ್ಲ. ಅದೇ ಕಾರಣದಿಂದಾಗಿ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮ ದಿನದಂದು ಈ ನಿರ್ಧಾರ ಬಿಜೆಪಿ ಕೈಗೊಂಡಿದೆ ಎನ್ನಲಾಗುತ್ತಿದೆ. 

ಪಂಜಾಬ್ ನಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ : ಹೌದು, ಪಂಜಾಬ್ ನಲ್ಲಿ ಕಾಂಗ್ರೆಸ್ ಒಡೆದು ಇಬ್ಭಾಗವಾದ ಬಳಿಕ ಅಲ್ಲಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಿರುವುದರಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪಂಜಾಬ್ ನಲ್ಲಿ ಅಮರಿಂದರ್ ಪ್ರಭಾವಿ ನಾಯಕ. ಅವರೆದುರಿಗೆ ಸರಿಯಾಗಿ ನಿಲ್ಲುವ ಬೇರೊಬ್ಬ ನಾಯಕ ಸದ್ಯಕ್ಕೆ ಪಂಜಾಬ್ ನಲ್ಲಿ ಇಲ್ಲ ಎಂದೇ ಹೇಳಬಹುದು. ಪಂಜಾಬ್ ನಲ್ಲಿ ಬಿಜೆಪಿ ಮರ್ಯಾದೆ ಉಳಿಸಿಕೊಳ್ಳಬೇಕೆಂದರೇ, ಅಮರಿಂದರ್ ಮನವೊಲಿಸಲೇಬೇಕು. ಅದರ ಮೊದಲ ಹಂತ ಈಗಾಗಲೇ ಆಗಿದೆ ಎಂದು ಕಾಣಿಸುತ್ತದೆ. ಕಾಂಗ್ರೆಸ್ ನಿಂದ ಹೊರಬಂದ ಬಳಿಕ ಅಮರಿಂದರ್ ಸಿಂಗ್ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಜೊತೆಗೆ ಒಂದು ಸುತ್ತಿನ ಮಾತು ಕತೆ ನಡೆಸಿದ್ದಾರೆ. ಆ ಬಳಿಕ ಅಮರಿಂದರ್ ಸಿಂಗ್ ಹೊಸ ಪಕ್ಷದ ಮುಖೇನ ಸ್ಪಧಿಸುವುದಾಗಿ ಘೋಷಿಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಕ್ಷ, ಬಿಜೆಪಿ ಪ್ರಾಯೋಜಿತ ಪಕ್ಷ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇನ್ನು, ಚುನಾವಣೆಗೆ ಬಿಜೆಪಿಯೊಂದಿಗೆ ಅಮರಿಂದರ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಮರಿಂದರ್ ಮೈತ್ರಿಗೆ ಒಪ್ಪಿದರೇ, ಕಾಂಗ್ರೆಸ್ ನನ್ನು ಸುಲಭವಾಗಿ ಮಣಿಸಬಹುದು ಎಂಬ ದೃಷ್ಟಿ ಬಿಜೆಪಿಗಿದೆ. ಮಾತ್ರವಲ್ಲದೇ, ಮೈತ್ರಿಗೆ ಒಪ್ಪಬೇಕಾದರೇ, ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಅಮರಿಂದರ್ ಡಿಮ್ಯಾಂಡ್ ಮಾಡಿದ್ದರಂತೆ, ಅದೇ ಕಾರಣಕ್ಕೇ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದರೂ, ಬಿಜೆಪಿ ಅದೊಂದೇ ಉದ್ದೇಶಕ್ಕೆ ಮಾತ್ರ ಹಿಂಪಡೆದದ್ದಲ್ಲ ಎಂಬಂತೆ ಕಾಣಿಸುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಕೂಡ ಕೆಲವು ಭಾಗಗಳಲ್ಲಿ ಸಿಖ್ ಮತದಾರರೇ ನಿರ್ಣಾಯಕ. ಉತ್ತರ ಪ್ರದೇಶದಲ್ಲಿಯೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ವ್ಯತ್ಯಾಸ ಕಾಣಬಹುದು ಎಂಬ ಸಮೀಕ್ಷೆ ಹೊರಬಂದಿದೆ. ಮತ್ತು ತನ್ನ ಆಡಳಿತದ ವರ್ಚಸ್ಸಿಗೆ ಬಹುವಾಗಿ ಇದು ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಕಾರಣದಿಂದಲೇ ಕೇಂದ್ರ ಈ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ ಎನ್ನುವುದು ಸ್ಪಷ್ಟ.   

ವಿರೋಧ ಎಲ್ಲಿಂದ ಆರಂಭ..?  : ಹಾಗೆ ಹೇಳುವುದಕ್ಕೆ ಹೋದರೇ, ರೈತರ ಉತ್ಪಾದನೆ ವ್ಯಾಪಾರ ಹಾಗೂ ವಾಣಿಜ್ಯ ಕಾಯ್ದೆ, ರೈತರ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ ಗಳ ವಿರುದ್ಧ ೨೦೧೭ರಲ್ಲೇ ಹೋರಾಟದ ಕಿಚ್ಚು ಹೊತ್ತಿತ್ತು. ಹೌದು, ೨೦೧೭ ರಲ್ಲಿ ಕೇಂದ್ರ ಸರ್ಕಾರ ಮಾದರಿ ಕೃಷಿ ಕಾಯ್ದೆಗಳ ಬಿಡುಗಡೆ ಮಾಡಿತ್ತು. ಆದಾಗ್ಯೂ ಒಂದು ನಿರ್ದಿಷ್ಟ ಅವಧಿಯ ನಂತರ ಈ ಕಾಯ್ದೆಗಳಲ್ಲಿ ಸೂಚಿಸಲಾದ ಹಲವಾರು ಸುಧಾರಣೆಗಳನ್ನು ರಾಜ್ಯಗಳು ಜಾರಿಗೆ ತಂದಿಲ್ಲ ಎಂಬ ಕಾರಣದಿಂದಾಗಿ ಅನುಷ್ಠಾನದ ಕುರಿತಾಗಿ ಚರ್ಚೆ ಮಾಡುವ ಉದ್ದೇಶದಿಂದ ಏಳು ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಜುಲೈ ೨೦೧೯ ರಲ್ಲಿ ರಚಿಸಲಾಯಿತು. ಅದಾಗಲೇ ಸಣ್ಣ ಮಟ್ಟದಲ್ಲಿ ಪಂಜಾಬ್, ಉತ್ತರ ಪ್ರದೇಶ ಹಾಗೂ ಹರಿಯಾಣ ಸೇರಿ ಕೆಲವೆಡೆ ವಿರೋಧ ಎದ್ದಿತ್ತು. 

ಇನ್ನು, ಕೃಷಿ ಉತ್ಪನ್ನಗಳು, ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಕೃಷಿ ಮಾರುಕಟ್ಟೆ ಹಾಗೂ ಗುತ್ತಿಗೆ ಕೃಷಿ ಸುಧಾರಣೆ ಸೇರಿ ಇತರೆ ವಿಷಯಗಳ ಬಗ್ಗೆ ಜೂನ್ ೨೦೨೦ ರ ಮೊದಲ ವಾರದಲ್ಲಿ ಮೂರು ಸುಗ್ರಿವಾಜ್ಞೆ ಅಥವಾ ತಾತ್ಕಾಲಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ತಾತ್ಕಾಲಿಕ ಕಾನೂನುಗಳನ್ನು ಮಸೂದೆಗಳಾಗಿ ಮಂಡಿಸಲಾಯಿತು ಹಾಗೂ ಸಪ್ಟೆಂಬರ್ ೧೫, ೧೮ರ ೨೦೨೦ ರಂದು ಕೇಂದ್ರ ಅಂಗೀಕರಿಸಿತ್ತು. ಸಪ್ಟೆಂಬರ್ ೨೨ ರೊಳಗೆ ರಾಜ್ಯಸಭೆಯು ಮೂರು ಮಸೂದೆಗಳನ್ನು ಅಂಗೀಕರಿಸಿತು. ಆದರೇ, ಪೂರ್ಣ ಮತವನ್ನು ಗಳಿಸುವುದಕ್ಕೆ ಕೇಂದ್ರಕ್ಕೆ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಪೂರ್ಣ ಮತದಾನಕ್ಕಾಗಿ ವಿಪಕ್ಷಗಳ ಮನವಿಯನ್ನು ಕಡೆಗಣಿಸಿ ಧ್ವನಿಮತದ ಮೂಲಕ ಅಂಗೀಕರಿಸಿತು. ೨೦೨೦ ಸಪ್ಟೆಂಬರ್ ೨೮ ರಂದು ಮಸೂದೆಗಳಿಗೆ ರಾಷ್ಟ್ರಪತಿಗಳು ಸಹಿ ಹಾಕುವ ಮೂಲಕ ತಮ್ಮ ಒಪ್ಪಿಗೆಯನ್ನು ನೀಡಿದ್ದರು, ಈ ಕಾರಣದಿಂದಾಗಿ ಅವುಗಳನ್ನು ಕಾಯ್ದೆಗಳಾಗಿ ಪರಿವರ್ತಿಸಲಾಯಿತು. 

ಸಪ್ಟೆಂಬರ್ ೨೦೨೦ ರಲ್ಲಿ ಪಂಜಾಬ್, ಹರಿಯಾಣ , ರಾಜಸ್ಥಾನಗಳಲ್ಲಿ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಆರಂಭವಾಗಿತ್ತಾದರೂ, ಎರಡು ತಿಂಗಳುಗಳ ನಂತರ ತೀವ್ರ ಸ್ವರೂಪಕ್ಕೆ ಪಡೆದುಕೊಂಡು ದೇಶವ್ಯಾಪಿ ಈ ಪ್ರತಿಭಟನೆ ನಡೆಯಿತು. ಉಳಿದಂತೆ ಪ್ರತಿಭಟನೆ, ಪ್ರತಿಭಟನೆಯನ್ನು ಹಿಂಸಾಚಾರವೆಂದು ಬಿಂಬಿಸಿದ್ದು, ನೂರಾರು ಮಂದಿ ರೈತರ ಸಾವು, ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ದೇಶ ದ್ರೋಹಿಗಳೆಂದು ಕರೆದಿದ್ದು, ರೈತರ ಮೇಲೆ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದು, ಪ್ರಾಯೋಜಿತ ಪ್ರತಿಭಟನೆ ಎಂದು ಬಿಂಬಿಸಿದ್ದು ಎಲ್ಲವೂ ಒಂದು ದೊಡ್ಡ ಇತಿಹಾಸ. ಕಳೆದೊಂದು ವರ್ಷದಿಂದ ನಡೆಯುತ್ತಿರುವ ಈ ಪ್ರತಿಭಟನೆಗೆ ಕಡೆಗೂ ರಾಷ್ಟ್ರಪತಿ ಅಂಕಿತ ಬಿದ್ದ ಮೇಲೂ ವಾಪಸ್ ಪಡೆದುಕೊಂಡು ರೈತರ ವಿರುದ್ಧ ತನ್ನ ಸೋಲನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಒಪ್ಪಿಕೊಂಡಿದೆ.  

ಇನ್ನು, ಕೃಷಿ ಕಾಯ್ದೆಯನ್ನು ವಿಪಕ್ಷಗಳು ಚುನಾವಣಾ ಅಸ್ತ್ರ ವನ್ನಾಗಿ ಬಳಸುವುದನ್ನು ತಪ್ಪಿಸುವುದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಆದರೇ, ಪ್ರತಿಪಕ್ಷಗಳಿಗೆ ಇದೊಂದೇ ಅಸ್ತ್ರ ಅಲ್ಲ. ಆದರೇ, ಈ ವಿವಾದಿತ ಕೃಷಿ ಕಾಯ್ದೆಗಳು ದೊಡ್ಡ ಅಸ್ತ್ರವಾಗಿತ್ತು ಎನ್ನುವುದು ಸತ್ಯ. ಒಟ್ಟಿನಲ್ಲಿ, ಕೇಂದ್ರ ಸರ್ಕಾರ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಲಾಗುತ್ತದೆ ಎಂದು ಹೇಳಿದ್ದು, ಪೂರ್ಣವಾಗಿ ಹಿಂಪಡೆಯುತ್ತದೆಯೇ ಅಥವಾ ತಿದ್ದುಪಡಿಯನ್ನು ಮಾತ್ರ ವಾಪಾಸ್ ಪಡೆಯುತ್ತದೆಯೇ ಎನ್ನುವುದರ ಬಗ್ಗೆ ಕುತೂಹಲ ಸೃಷ್ಟಿಸಿದೆ. 

-ಶ್ರೀರಾಜ್ ವಕ್ವಾಡಿ  


Tuesday, November 9, 2021

ಮತ್ತೊಂದು ಹೊಸ ಬದಲಾವಣೆಯತ್ತ ರಾಜ್ಯ ಬಿಜೆಪಿ..!?


 

ಹಾನಗಲ್ ಸೋಲು | ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ ಔಟ್..? | ಬಿಎಸ್.ವೈ ಪುತ್ರನಿಗೆ ಲಾಭ..?

“ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ” ಎಂಬ ಮಾತು ರಾಜ್ಯ ಬಿಜೆಪಿಯಲ್ಲಂತೂ ಒಂದು ರೀತಿಯಲ್ಲಿ ಅದು ಸಂಪ್ರದಾಯದ ಮಾತಿದ್ದಂತೆ. ನಾಯಕತ್ವದ ಬದಲಾವಣೆಯೇ ಇಲ್ಲ ಎಂದು ಹೇಳುತ್ತಿರುವಾಗಲೇ ರಾಜ್ಯ ಬಿಜೆಪಿಯಲ್ಲಾದ ಬದಲಾವಣೆಗಳು ಒಂದು ದೊಡ್ಡ ಇತಿಹಾಸವೇ ಸರಿ. “ನಾಯಕತ್ವ”ದ ವಿಚಾರದಲ್ಲಿ ಅತ್ಯಂತ ಗೊಂದಲ ಹಾಗೂ ವಿವಾದ ಸೃಷ್ಟಿ ಮಾಡಿಕೊಂಡ ರಾಜಕೀಯ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಈಗ ಮತ್ತೆ ರಾಜ್ಯ ಬಿಜೆಪಿಯ ಪಡಸಾಲೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರ ನಿಧಾನಕ್ಕೆ ಮುನ್ನೆಲೆಗೆ ಬಂದಿದೆ. 

ಹೌದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ಹೈಕಮಾಂಡ್ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ನಳೀನ್ ಕುಮಾರ್ ಕಟೀಲ್ ಅವರ ಹೆಗಲಿಗೆ ಹೊರಸಿದ್ದಾಗಲೇ ಯಡಿಯೂರಪ್ಪ ಒಳಗೊಳಗೆ ಮುನಿಸಿಕೊಂಡಿದ್ದ ವಿಚಾರ ನಿಮಗೆ ಗೊತ್ತಿರದೇ ಇಲ್ಲ ಬಿಡಿ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಮಗ ವಿಜಯೇಂದ್ರ ಅವರ ಪಾಲಿಗೆ ದೊರಕಿಸಿ ಕೊಡಬೇಕು ಎಂಬ ಬಯಕೆ ಮಾನ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರಲ್ಲಿತ್ತು, ಆದರೇ, ದುರಾದೃಷ್ಟವೋ ಎಂಬ0ತೆ ರಾಜಕೀಯದಲ್ಲಿ ಯುಡಿಯೂರಪ್ಪನವರ ಕನಸುಗಳೆಲ್ಲಾ ಅಲ್ಲಿಂದಾದಿಯಾಗಿ ಒಂದೊ0ದೇ ವಿಫಲವಾಗುತ್ತಲೇ ಬಂತು. ಅಷ್ಟಾಗಿಯೂ ವಿಜಯೇಂದ್ರ ಯಡಿಯೂರಪ್ಪ ರಾಜ್ಯದಲ್ಲಿ ಸೂಪರ್ ಸಿಎಂ ಎಂಬ ಹಾಗೇ ಕಾರ್ಯ ನಿರ್ವಹಿಸುತ್ತಿದ್ದರ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಒಳ ಬೇಗುದಿ ಆರಂಭವಾಗಿತ್ತು. ಯಡಿಯೂರಪ್ಪರಿಗಿಂತ ವಿಜಯೇಂದ್ರ ಅವರದ್ದೇ ಪ್ರಭಾವ ಜಾಸ್ತಿಯಿತ್ತು ಎಂಬ ವಿರೋಧದ ಮಾತು ರಾಜ್ಯ ಬಿಜೆಪಿಯಲ್ಲೇ ಕೇಳಿ ಬಂದಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆದರೂ, ಯಡಿಯೂರಪ್ಪ ತಮ್ಮ ಮಗನನ್ನು ಹೇಗಾದರೂ ಮಾಡಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ವಿಪರೀತ ಪ್ರಯತ್ನ ಪಟ್ಟಿದ್ದರು.  ಮಾಜಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಸಿ. ಎಂ ಉದಾಸಿ ನಿಧನದ ಕಾರಣದಿಂದಾಗಿ ತೆರವುಗೊಂಡಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಟಿಕೇಟ್ ನನ್ನು ತಮ್ಮ ಮಗನಿಗೆ ಕೊಡಿಸಬೇಕು ಎಂಬ ಪ್ರಯತ್ನವನ್ನು ಬಿಎಸ್ ವೈ ಪಟ್ಟಿದ್ದರೂ, ಅದು ಕೂಡ ಫಲಿಸಲಿಲ್ಲ. ವಿಜಯೇಂದ್ರ ಒದ್ದಾಡಿದ್ದರೂ ನಿರೀಕ್ಷೆ ಹುಸಿಯಾಯಿತು. ಹಾನಗಲ್ ವಿಧಾನಸಭಾ ಕ್ಷೇತ್ರದ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದರಾದರೂ ಎಲ್ಲವೂ ಅದಲು ಬದಲಾಯಿತು. ಮಂತ್ರಿ ಪಟ್ಟದ ಕನಸು ಭಗ್ನವಾಯಿತು. ಈಗ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡ ನಂತರವ0ತೂ ರಾಜ್ಯಾಧ್ಯಕ್ಷ ಬದಲಾವಣೆಯ ಚರ್ಚೆ ಹುಟ್ಟಿದ್ದು, ಆ ಸ್ಥಾನಕ್ಕೆ ವಿಜಯೇಂದ್ರ ಕಣ್ಣಿಟ್ಟಿದ್ದಾರೆ, ಮಾತ್ರವಲ್ಲದೇ, ಅಧಿಕಾರದಲ್ಲಿ ಇಲ್ಲದಿದ್ದರೂ ಯಡಿಯೂರಪ್ಪ ತಮ್ಮ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದಕ್ಕೆ ಪ್ರಭಾವ ಬೀರುತ್ತಿದ್ದಾರೆ ಎಂಬ ಗುಸುಗುಸು ಮಾತು ಕೇಳಿ ಬರುತ್ತಿದೆ. 

ಬಿಜೆಪಿ ಹೈಕಮಾಂಡ್ ಗೆ ಸಮುದಾಯವೇ ಸಮಸ್ಯೆ : ರಾಜ್ಯ ಬಿಜೆಪಿಯ ಜನಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಕೂಡ ಹೌದು ಯಡಿಯೂರಪ್ಪ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಸ್ವಾಮಿಜಿಗಳು ಯಡಿಯೂರಪ್ಪ ಪರವಾಗಿ ವಹಿಸಿಕೊಂಡು ಬೀದಿಗಿಳಿದು ಮುಖ್ಯಮಂತ್ರಿ ಬದಲಾವಣೆ ಸಲ್ಲ ಎಂದು ಪ್ರಭಾವ ತೋರಿಸಿದ್ದೆಲ್ಲಾ ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಗೂ ಕೂಡ ಬಿಸಿ ಮುಟ್ಟಿಸಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೇ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಮಣಿಯದೇ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಯಡಿಯೂರಪ್ಪ ತಮ್ಮ ಸಮುದಾಯವನ್ನು ಬೆಳೆಸಿದ ನಾಯಕ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮದೂಗುವ ಮತ್ತು ಪ್ರಭಾವ ಹೊಂದಿರುವ ಇನ್ನೊಬ್ಬ ಲಿಂಗಾಯತ ನಾಯಕ ರಾಜ್ಯದಲ್ಲಿ ಇಲ್ಲ ಎಂದರೇ ತಪ್ಪಿಲ್ಲ. ಹಾಗಾಗಿ ಈ ಸಮುದಾಯದ ವಿಚಾರ ಬಿಜೆಪಿ ಹೈಕಮಾಂಡ್ ಗೆ ಒಂದು ರೀತಿಯಲ್ಲಿ ಮುಗಿಯದ ಸಮಸ್ಯೆಯಂತಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಇಳಿಸಿದ್ದು ಲಿಂಗಾಯತ ಸಮುದಾಯಕ್ಕೆ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಯಡಿಯೂರಪ್ಪರ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಅದೇ ಸಮುದಾಯದ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೈಕಮಾಂಡ್ ನೇಮಕ ಮಾಡಿದೆಯಾದರೂ, ಲಿಂಗಾಯತ ಸಮುದಾಯಕ್ಕೆ ತೃಪ್ತಿಯಿಲ್ಲ. ಆ ರೀತಿಯಲ್ಲಿ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಓಲೈಸಿಕೊಂಡಿದ್ದಾರೆ. ಯಡಿಯೂರಪ್ಪ ಮಾತಿಗೆ ಇಲ್ಲ ಎಂದು ಲಿಂಗಾಯತ ಸಮುದಾಯ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ವಯಸ್ಸಿನ ಕಾರಣಕ್ಕೆ ಮತ್ತೆ ಯಡಿಯೂರಪ್ಪ ಅವರಿಗೆ ಅಧಿಕಾರ ದೊರಕದಿದ್ದರೂ, ಅವರ ಮಗನಿಗೆ ಸ್ಥಾನ ಸಿಗಬೇಕು ಎಂಬ ದೃಷ್ಟಿಯಿಂದ ಸಮುದಾಯದ ಬೆಂಬಲ ಪಡೆಯದೇ ಇರುವುದಿಲ್ಲ. ಆ ಎಲ್ಲಾ ಕಾರ್ಯಗಳಿಗೆ ಈಗಾಗಲೇ ನಾಂದಿ ಸಿಕ್ಕಿದೆ ಎಂಬ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮತ್ತು ತಂದೆಯವರ ಕಾಲವಾದ ಮೇಲೂ ಲಿಂಗಾಯತ ಸಮುದಾಯದ ಓಲೈಕೆ ರಾಜಕಾರಣವನ್ನು ಪುತ್ರ ವಿಜಯೇಂದ್ರ ಯಡಿಯೂರಪ್ಪ ಮುಂದುವರಿಸಿಕೊ0ಡು ಹೋಗುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ಬಿಜೆಪಿಗೆ ಕರ್ನಾಟಕದಲ್ಲಿ ಯಾವುದೇ ವಿಚಾರದಲ್ಲಿ ಮುನ್ನಡೆಯುವುದಕ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎಂದು ಕಾಣಿಸುತ್ತಿದೆ.    

ಹಾನಗಲ್ ಸೋಲು : ವಿಜಯೇಂದ್ರಗೆ ಲಾಭ ..?: ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಕಂಡ ಸೋಲಿಗೆ ರಾಜ್ಯದ ಬಿಜೆಪಿ ನಾಯಕತ್ವದ ಬಗ್ಗೆ ಹೈಕಮಾಂಡ್ ತುಸು ಮುನಿಸಿಕೊಂಡ0ತೆ ಕಾಣಿಸುತ್ತಿದೆ. ಮಧ್ಯ ಪ್ರದೇಶ, ತೆಲಂಗಾಣ, ಅಸ್ಸಾಂ ಇನ್ನಿತರ ಕಡೆಗಳಲ್ಲಿನ ಚುನಾವಣೆಗಳಲ್ಲಿನ ಗೆಲುವಿಗೆ ಕೇಂದ್ರ ಶುಭಾಶಯ ಹೇಳಿದೆ. ಆದರೇ, ಕರ್ನಾಟಕದ ವಿಚಾರಕ್ಕೆ ಶುಭಾಶಯಗಳು ಇಲ್ಲವೇ ಇಲ್ಲ. ಇದು ಕರ್ನಾಟಕದ ರಾಜ್ಯ ಬಿಜೆಪಿಯ ಬಗ್ಗೆ ಅಸಮಾದಾನವನ್ನು ಸೂಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಾದ ಸೋಲಿಗೆ ಮಾಧ್ಯಮಗಳೆದುರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಸಾಮೂಹಿಕ ನಾಯಕತ್ವ” ಇಲ್ಲಿದ್ದಿದ್ದು ಎಂದು ಹೇಳಿ ಜಾರಿಕೊಂಡರೂ, ಹೈಕಮಾಂಡ್ ಕೇಳಿದ ಪ್ರಶ್ನೆಗೆ ಸಿಎಂ ಹೈಕಮಾಂಡ್ ಗೆ ಸಲ್ಲಿಸಿರುವ ಉಪ ಚುನಾವಣೆಯ ಸಂಪೂರ್ಣ ಕಾರ್ಯವೈಖರಿಯ ವರದಿ ಕೆಲವರ ಪಾಲಿಗೆ ಮುಳುವಾಗಲಿದೆಯೇ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಹಾನಗಲ್ ವಿಧಾನಸಭಾ ಕ್ಷೇತ್ರ ಹೇಳಿಕೇಳಿ ಪಂಚಮಸಾಲಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶ. ಸುಮಾರು ೬೦,೦೦೦ಕ್ಕೂ ಅಧಿಕ ಮತದಾರರು ಪಂಚಮಸಾಲಿ ಸಮುದಾಯದವರೇ ಆಗಿದ್ದಾರೆ. ಆದರೇ, ರಾಜಕೀಯದ ಸಹಜ ಸಮುದಾಯದ ಓಲೈಕೆಗೆ ರಾಜ್ಯದ ಪ್ರಮುಖ ಆ ಸಮುದಾಯದ ನಾಯಕರೇ ಹಾನಗಲ್ ವಿಧಾನಸಭಾ ಉಪ ಚುನಾವಣೆಗೆ ಸಂಬ0ಧಿಸಿದ0ತೆ ಮೌನವಾಗಿರುವುದೇ ಸೋಲಿಗೆ ಕಾರಣವಾಗಿದೆಯಾ..? ಎಂಬ ಮತ್ತೊಂದು ಪ್ರಶ್ನೆಯನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದ ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ, ಜಗದೀಶ್ ಶೆಟ್ಟರ್ ಚುನಾವಣೆಯ ಪ್ರಚಾರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಡಿಸಿಕೊಳ್ಳಲಾಗದ ಚಕ್ರವ್ಯೂಹದೊಳಗೆ ಸಿಲುಕಿಸಿದ ಹಾಗಾಯ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇನ್ನು, ಹಾನಗಲ್ ವಿಚಾರಕ್ಕೆ ಸಂಬ0ಧಿಸಿದ0ತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಯಾವುದೇ ಲಾಭ ಆಗಿಲ್ಲ ಎಂಬ ಅತೃಪ್ತಿಯ ಮಾತುಗಳು ಕಟೀಲ್ ವಿರುದ್ಧ ಈಗ ಕೇಳಿ ಬರುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತಾಡಿದ್ದಾರೆ ಎಂಬ ಆಡಿಯೋ ಗೂ ಹಾಗೂ ಈ ಹಾನಗಲ್ ವಿಚಾರಕ್ಕೆ ಎಲ್ಲೋ ಒಂದು ಕಡೆಯಲ್ಲಿ ಲಿಂಕ್ ಆದ ಹಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿದೆ. ಈ ದೂರು ಯಡಿಯೂರಪ್ಪ ಅವರ ಪರ ಬಣದಿಂದಲೇ ಕೇಳಿಬರುತ್ತಿರುವುದರಿಂದ ಅಧಿಕಾರದಿಂದ ಹೊರಗೆ ಇದ್ದರೂ ಬಿಎಸ್ ವೈ ಪ್ರಭಾವ ಇನ್ನೂ ಬಿಜೆಪಿಯಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇತ್ತ, ಈ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪ ಅವರ ಋಣ ಬೊಮ್ಮಾಯಿ ಅವರಿಗೆ ಇರುವುದರಿಂದ ಯಡಿಯೂರಪ್ಪ ವಿರುದ್ಧವಾಗಿಯೂ ಬೊಮ್ಮಾಯಿ ನಡೆದುಕೊಳ್ಳುವ ಹಾಗಿಲ್ಲ. ಅತ್ತ, ರಾಜ್ಯಾಧ್ಯಕ್ಷರ ವಿರುದ್ಧದ ಧ್ವನಿಯನ್ನೂ ಹೊರಹಾಕುವಂತಿಲ್ಲ. ಈ ಎಲ್ಲಾ ಮೈನಸ್ ಪಾಯಿಂಟ್ ಗಳನ್ನು ವಿಜಯೇಂದ್ರ ಸಾಫ್ಟ್ ಆಗಿ ಲಾಭ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿಯೇ ಕೇಳಿಬರುತ್ತಿದೆ.

ಕಟೀಲ್ ಗೆ ಆಡಿಯೋ ತಂದ ಆಪತ್ತು..?! : ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು  ಮಾತಾಡಿದ್ದು ಎಂದು ಹೇಳಲಾಗಿದ್ದ ಆಡಿಯೋ ವೈರಲ್ ಆದದ್ದು, ರಾಜ್ಯ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದಿದ್ದ0ತೂ ಸುಳ್ಳಲ್ಲ. ಆ ಸಮಸ್ಯೆಯನ್ನು ಹೈಕಮಾಂಡ್ ಗೆ ಬಹಳ ಸಾಫ್ಟ್ ಆಗಿಯೇ ನಿಭಾಯಿಸಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಅನಿವಾರ್ಯತೆಯನ್ನು ತಂದೊಡ್ಡಿತು. ಆ ನಂತರ ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಅವರ ಕಾರ್ಯಚಟುವಟಿಕೆಗಳು ಹಾಗೂ ಹಾನಗಲ್ ಉಪ ಚುನಾವಣೆಯ ವಿಚಾರ ಎಲ್ಲವೂ ಸೇರಿ ಹೈಕಮಾಂಡ್ ಗೂ ಕೂಡ ಕಟೀಲ್ ಮೇಲೆ ಅಸಮಾಧಾನ ಇರುವುದು ನೇರವಾಗಿ ಕಾಣಿಸುತ್ತಿದೆ. ಇದು ಬಹುಶಃ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಆಪತ್ತು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. 

ಇನ್ನು, ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರದ ಬಗ್ಗೆ ಹೈಕಮಾಂಡ್ ಕೂಡ ಪ್ಲ್ಯಾನಿಂಗ್ ನಲ್ಲಿದ್ದು, ರಾಜ್ಯದ ವೈಬ್ರೆಂಟ್ ನಾಯಕನೋರ್ವನಿಗೆ ರಾಜ್ಯ ಬಿಜೆಪಿಯ ಹೊಣೆಗಾರಿಕೆಯನ್ನು ನೀಡಬೇಕು ಎಂಬ ಅಂದಾಜಿನಲ್ಲಿದೆ. ಏನೇ ಆದರೂ, ಲಿಂಗಾಯತ ಸಮುದಾಯವನ್ನು ತೊರೆದು ಹೈಕಮಾಂಡ್ ಮುಂದೆ ಹೋಗುವ ಹಾಗೆ ಖಂಡಿತ ಸಾಧ್ಯವಿಲ್ಲ. ಲಿಂಗಾಯತ ಸಮುದಾಯದೊಂದಿಗೆ ಹಿಂದುಳಿದ ಸಮುದಾಯಗಳ ಮತದಾರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಒಬ್ಬ ಪ್ರಭಾವಿ ನಾಯಕನಿಗೆ ರಾಜ್ಯಾಧ್ಯಕ್ಷ ಹೊಣೆಗಾರಿಕೆಯನ್ನು ಹೈಕಮಾಂಡ್ ಹೊರಿಸಬೇಕಾಗಿದೆ. ಇನ್ನು, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ವೈ ಅವರನ್ನು ಹೊರತಾಗಿ ಚುನಾವಣೆಯನ್ನು ಎದುರಿಸುವುದಕ್ಕೆ ಸದ್ಯಕ್ಕಂತೂ ಬಿಜೆಪಿಗೆ ಸಾಧ್ಯವಿಲ್ಲ ಎಂಬುವುದು ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ. ರಾಜ್ಯದಲ್ಲಿ ಯಾವುದೇ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಅಸಮಾಧಾನ ಉಂಟಾಗುವ ಯಾವುದೇ ಬೆಳವಣಿಗೆ ಆಗದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವುದು ಮುಖ್ಯಮಂತ್ರಿ ಬದಲಾವಣೆಯ ಸಂದರ್ಭದಲ್ಲೇ ಗೊತ್ತಾಗಿದೆ. ಇನ್ನು ಮುಂದೆಯೂ, ಯಡಿಯೂರಪ್ಪ ಅವರ ಕಾಲದವರೆಗೂ ಕೂಡ ಯಡಿಯೂರಪ್ಪರನ್ನು ನಿರ್ಲಕ್ಷಿಸಿ ಹೋಗುವುದಕ್ಕೆ ಸಾಧ್ಯವಿಲ್ಲ. ಶೀಘ್ರದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಈಗ ಮುನ್ನೆಲೆಯಲ್ಲಿದ್ದು, ಹೊಸ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಿಸಿದರೇ, ಅದು ಕೂಡ ಯಡಿಯೂರಪ್ಪರಿಗೆ ಸಮಾಧಾನ ತರುವ ಹಾಗೆಯೇ ಇರಲಿದೆ ಎಂಬ ವಿಶ್ಲೇಷಣೆ ಮಾಡಬಹುದಾಗಿದೆ. ಎನ್ನುವಲ್ಲಿಗೆ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ ಯಡಿಯೂರಪ್ಪ ಪ್ರಯತ್ನದಲ್ಲಿದ್ದಾರೆ ಎನ್ನುವುದಂತೂ ಸತ್ಯ. 

ಒಟ್ಟಿನಲ್ಲಿ, “ನಾಯಕತ್ವದ” ಅಸಮಾಧಾನ ಇನ್ನೂ ರಾಜ್ಯ ಬಿಜೆಪಿಯಲ್ಲಿದ್ದು, ರಾಜ್ಯದ ಬಿಜೆಪಿಯ ಹೊಸ ಸಾರಥಿ ಯಾರಾಗ್ತಾರೆ..? ಅವರ ತಂಡ ಹೇಗೆ ರಾಜ್ಯದಲ್ಲಿ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂಬುವುದರ ಬಗ್ಗೆ ಸದ್ಯದ ಕುತೂಹಲವಾಗಿದೆ. 

-ಶ್ರೀರಾಜ್ ವಕ್ವಾಡಿ        


Saturday, November 6, 2021

ಸಮಾಜದ ರಾಕ್ಷಸೀಯತೆಯನ್ನು ತೆರೆದಿಟ್ಟ “ಜೈ ಭೀಮ್”



ಸಮಾಜವನ್ನು ಇಂದಿಗೂ ಅತಂತ್ಯ ಭೀಕರವಾಗಿ ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಶೋಷಿತರ, ಸಮಾಜದ ಅತ್ಯಂತ ಕೆಳ ಅಂಚಿನಲ್ಲಿರುವವರ ಧ್ವನಿ ಅಡಗಿಸಿ ಮೆರೆದಾಡುವ ಉಳ್ಳವರ, ಅಧಿಕಾರಿಗಳ ದರ್ಪವೂ ಒಂದು. ಮಾತ್ರವಲ್ಲದೇ, ಅದು ಸಮಾಜಕ್ಕೆ ಘಾತುಕವೂ ಹೌದು. ನಾವೆಲ್ಲರೂ ಇಂದಿಗೂ ಆಧುನೀಕತೆ, ಶತಮಾನಗಳಿಂದ ಬಳುವಳಿಯಂತೆ ಬಂದ ಅಭಿವೃದ್ಧಿ, ಸ್ವಾತಂತ್ರದ ಸ್ವೀಕಾರದ ದೊಡ್ಡ ಭ್ರಮೆಯಲ್ಲಿಯೇ ಇದ್ದೇವೆ ಅಂತನ್ನಿಸುತ್ತಿದೆ. ಸಮಾಜಕ್ಕೆ ಎರಡು ಮುಖ ಎನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತಿದೆ. ಒಂದು ಅಭಿವೃದ್ಧಿಯಲ್ಲದ “ಅಭಿವೃದ್ಧಿ ”, ಇನ್ನೊಂದು ಅಭಿವೃದ್ಧಿಯಾಗಲೇಬೇಕಾಗಿರುವವುಗಳ ವಿನಾಶ. ಅಧಿಕಾರದ ಧೋರಣೆ, ದುಃಸ್ಥಿತಿ, ಅಸ್ವಸ್ಥತೆ, ವ್ಯವಸ್ಥೆಯ ಭಂಜನೆ, ವಾಸ್ತವದ ರಾಕ್ಷಸೀಯತೆ, ಅವ್ಯಕ್ತ ಆತಂಕ, ನ್ಯಾಯ, ಅನ್ಯಾಯ, ನೈರಾಶ್ಯದ ನಡುವಿನ ಆಶಾವಾದ, ನೆತ್ತರು, ಮೌನ, ಸಾವು, ಗದ್ಗದಿತ ಧ್ವನಿಗಳ ದೃಶ್ಯ ರೂಪವೇ “ಜೈ ಭೀಮ್”.

ಶೋಷಿತ ಸಮುದಾಯದ ಕಣ್ಣೀರಿನ ಕಥೆ ಒಂದೆಡೆಯಾದರೇ, ಆ ನೋವಿನ ಕಥೆಗೆ ಧ್ವನಿಯಾಗುವ ನ್ಯಾಯವಾದಿ ಚಂದ್ರುವಿನ ವೃತ್ತಿಪರತೆಯ ಜೊತೆಜೊತೆಗೆ ಸಾಗುವ ಸಿನೆಮಾ ನೋಡುಗನನ್ನು ಗಂಭೀರ ಚಿಂತನೆಗೆ ದೂಡುತ್ತದೆ. ಪೊಲೀಸರ ಉಗ್ರ ಕಪಿಮುಷ್ಟಿಯೊಳಗೆ ಸಿಲುಕಿ ನರಳುವ ಇರುಳರು ಎಂಬ ಬುಡಕಟ್ಟು ಜನಾಂಗದ ನತದೃಷ್ಟ ಬದುಕಿನ ಸಂಕಷ್ಟ ಇತಿಹಾಸಕ್ಕೆ ಈ ಸಿನೆಮಾ ಕನ್ನಡಿ ಹಿಡಿದಿದೆ. ಇಂತಹ ನತದೃಷ್ಟ ಸಮುದಾಯಗಳ ಧ್ವನಿಗಳು ಉಸಿರಾಡುವ ಬಿಸಿ ಗಾಳಿಯಿಂದಲೇ ಈ ದೇಶ ಇಂದು ಅಭಿವೃದ್ಧಿಯ ಜಪ-ನೆಪದಲ್ಲಿಯೇ ಬದುಕುತ್ತಿದೆ ಎನ್ನುವುದು ದೊಡ್ಡ ದುರಂತವೇ ಸರಿ. 

ಬುಡಕಟ್ಟು ಜನಾಂಗಗಳ ಅಥವಾ ಇಂತಹ ದಮನಿತ ಸಮುದಾಯಗಳ ನಿಟ್ಟುಸಿರಿನ ಕನಸುಗಳನ್ನು ಹೊಸಕಿ ಹಾಕುವ ಉಗ್ರ ಸ್ವರೂಪವೇ ಈ ಸೋ ಕಾಲ್ಡ್ ನಾಗರೀಕತೆಯೋ ಏನೋ ಎಂಬಷ್ಟರ ಮಟ್ಟಿಗೆ ಅಸಹ್ಯ ಹುಟ್ಟಿಸುತ್ತಿದೆ. ದಮನಿತ ವ್ಯಕ್ತಿಯೋರ್ವನ ಅಮಾನುಷ ಹತ್ಯೆಯ ಪ್ರಕರಣದೊಂದಿಗೆ ಸಾಗುವ ನ್ಯಾಯವಾದಿ ಚಂದ್ರುವಿನ ಇಂಟ್ರೆಸ್ಟಿಂಗ್ ಹೋರಾಟ, ತನಿಖೆ, ಸತ್ಯವನ್ನು ಸುಳ್ಳು ಮಾಡುವ, ಸುಳ್ಳನ್ನು ಸತ್ಯ ಮಾಡುವ ಹಣ, ಅಧಿಕಾರ, ದರ್ಪಗಳ ನಡುವೆ ಗೆಲ್ಲುವ ಕಥೆ ನಿಜಕ್ಕೂ ರೋಮಾಂಚನಕಾರಿಯಾಗಿದೆ.

ಸಮಾಜಕ್ಕೆ ಇದು ನಿನ್ನದೇ ಪ್ರತಿ ರೂಪ ಎಂದು ತೋರಿಸುವ ಹಾಗೆ ಚಿತ್ರ ಮೂಡಿ ಬಂದಿದೆ. ಸಿನೆಮಾ ತಂಡ ಕಥೆಯ ಒಂದಿಷ್ಟು ದೃಶ್ಯಗಳನ್ನು ತುಸು ಹೆಚ್ಚೇ ವೈಭವೀಕರಿಸಿರಬಹುದು ಎಂದು ತಿಳಿದುಕೊಂಡರೂ ಕೂಡ ಸಮಾಜ ಇಂದು ಅಂತಹ ತಗ್ಗಿದ(ತಗ್ಗಿಸಿದ) ಧ್ವನಿಗಳ ಶೋಷಣೆಯಲ್ಲಿಯೇ ನಿರತವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಂವಿಧಾನ, ಹಕ್ಕು, ಅಭಿವ್ಯಕ್ತಿ, ನ್ಯಾಯ ಇವೆಲ್ಲವೂ ಸತ್ತಿವೆಯೇ, ಬದುಕಿವೆಯೇ ಎಂಬ ಗಂಭೀರ ಪ್ರಶ್ನೆಯೊಂದನ್ನು ಈ ಸಿನೆಮಾ ಪ್ರತಿಯೊಬ್ಬ ನೋಡುಗನ ಮನಸ್ಸಿಗೆ ಒಮ್ಮೆ ಕೇಳಿ ಬೀಡುತ್ತದೆ. 

ಟೀಕೆಗೆ ಬಹುಶಃ ಈ ಸಿನೆಮಾ ಅವಕಾಶ ಮಾಡಿಕೊಟ್ಟಿಲ್ಲ. ಆದರೇ, ಈ ಸಿನೆಮಾ ಆಗಲೇ ಬೇಕಾದ ಒಂದು ಆತ್ಮಾವಲೋಕನಕ್ಕೆ ದೊಡ್ಡ ಅವಕಾಶವನ್ನು ಮಾಡಿಕೊಟ್ಟಿದೆ. ಸಿನೆಮಾದ ಎರಡನೇ ಭಾಗವಂತೂ ಒಂದು ದೀರ್ಘ ಮೌನ ಹಾಗೂ ಸೂಕ್ಷ್ಮ ಸಂವೇದನೆಗೆ ಒಳಪಡಿಸುತ್ತದೆ ಎಂದರೇ ತಪ್ಪಿಲ್ಲ. ಸಮಾಜದ ಕೆಳಸ್ತರದಲ್ಲಿರುವ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಟ್ಟಿತೇ..? ಎಂಬ ನಮ್ಮ ನಿಮ್ಮೆಲ್ಲರ ಸಹಜ ಪ್ರಶ್ನೆಗೆ ಉತ್ತರ.. ಖಂಡಿತ ಇಲ್ಲ. ಆದರೇ, ಅಂತಹ ಅದೆಷ್ಟೋ ಸಮುದಾಯಗಳ ಆರ್ದ್ರ ಸ್ಥಿತಿಯ ಬಗ್ಗೆ ಮತ್ತೆ ಸಮಾಜಕ್ಕೆ ನೆನಪಿಸಿಕೊಟ್ಟಿದ್ದಂತೂ ನಿಜ. ಸಮಾಜ ತನ್ನನ್ನು ತಾನು ಗಂಭೀರವಾಗಿ ಪ್ರಶ್ನಿಸಿಕೊಳ್ಳುವಂತೆ ಮಾಡಿದ್ದಂತೂ ಸತ್ಯ. 

ಸಿನೆಮಾ ತಮಿಳಿನ ಮೂಲವಾದರೂ ಹಾಗನ್ನಿಸುವುದಿಲ್ಲ. ಕಥೆಯ ನಿರೂಪಣಾ ಶೈಲಿ ತುಂಬಾ ಇಷ್ಟವಾಗುವುದರಲ್ಲಿ ಎರಡನೇ ಮಾತಿಲ್ಲ. ಒಂದಿನಿತೂ ಕುತೂಹಲಕ್ಕೆ ಧಕ್ಕೆ ತಾರದ ರೀತಿಯಲ್ಲಿ ನಿರ್ದೇಶಕ ಟಿ. ಜೆ ಜ್ಞಾನವೇಲ್ ಯಶಸ್ವಿಯಾಗಿದ್ದಾರೆ. ಎಸ್ ಆರ್ ಕಥೀರ್ ಅವರ ಸಿನೆಮಾಟೋಗ್ರಾಫಿ ಅದ್ಭುತ. ಚಂದ್ರುವಿನ ಪಾತ್ರ ನಿರ್ವಹಿಸಿದ ತಮಿಳಿನ ಸ್ಟಾರ್ ನಟ ಸೂರ್ಯ, ತನಿಖಾಧಿಕಾರಿ ಐಜಿಪಿ ಪೆರುಮಾಳ್ ಪಾತ್ರದಲ್ಲಿ ಕಾಣಿಸಿಕೊಂಡ ಬಹುಭಾಷಾ ನಟ ಪ್ರಕಾಶ್ ರೈ, ಕೆಂಚರಾಜು ಪಾತ್ರ ನಿಭಾಯಿಸಿದ ಕೆ. ಮಣಿಕಂಡನ್ ಅವರ ಮನೋಜ್ಞ ಅಭಿನಯಕ್ಕೆ ಭೇಷ್ ಹೇಳಲೇ ಬೇಕು. ಸಿನೆಮಾ ಎಲ್ಲಿಯೂ ಕುತೂಹಲವನ್ನು ಕಿತ್ತುಕೊಳ್ಳದೇ, ನೋಡುಗನ ಮನಸ್ಸನ್ನು ಹಿಡಿದಿಟುಕೊಳ್ಳುತ್ತದೆ. ಮಾತ್ರವಲ್ಲದೇ, ಈ ಸಿನೆಮಾ ಕಥಾವಸ್ತು ಆಯ್ಕೆಯ ಗಂಭೀರ ಮನಸ್ಥಿತಿಯ ಪ್ರತಿರೂಪವಾಗಿ ಮೂಡಿಬಂದಿದೆ ಎನ್ನುವುದು ಗರಿಷ್ಠೀಕರಣವಲ್ಲ. ಥ್ಯಾಂಕ್ಯೂ.  

-ಶ್ರೀರಾಜ್ ವಕ್ವಾಡಿ