ಆಘಾತಕಾರಿ ವರದಿ ನೀಡಿದ ಸಿಎಂಐಇ | ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತೆ ಹೆಚ್ಚಳ
ಸತ್ಯವನ್ನು ಸುಳ್ಳು ಮಾಡುವುದಕ್ಕೆ ಹಾಗೂ ಸುಳ್ಳನ್ನು ಸತ್ಯ ಮಾಡುವುದಕ್ಕೆ ಸಾಧ್ಯವಾಗುವ ಮಾಧ್ಯಮವೊಂದಿದ್ದರೇ, ಅದು ರಾಜಕೀಯ ಮಾತ್ರ. ಈವರೆಗೆ ಈ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಒಂದು ಸರ್ಕಾರವಿದ್ದರೇ, ಅದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಒಂದೆ. ಈವರೆಗೆ ದೇಶದಲ್ಲಿ ಅಧಿಕಾರ ನಡೆಸಿದ ಯಾವ ಸರ್ಕಾರಕ್ಕೂ ಇಷ್ಟರಮಟ್ಟಿಗೆ ಸುಳ್ಳನ್ನು ಸತ್ಯ ಎಂದು ತೋರಿಸುವುದಕ್ಕೆ ಖಂಡಿತ ಸಾಧ್ಯವಾಗಿಲ್ಲ. ಆ ಮಟ್ಟಿಗೆ ಈ ವಿಷಯದಲ್ಲಿ ನರೇಂದ್ರ ಮೋದಿ ಯಶಸ್ವಿ ಪ್ರಧಾನಿ ಎಂದರೇ ತಪ್ಪಿಲ್ಲ.
ರಾಜಕೀಯದಲ್ಲಿ ನುಡಿದಂತೆ ನಡೆಯುವುದೆಂದರೇ, ಕನಸಿನ ಮಾತೇ ಸರಿ. ಆದರೇ, ನುಡಿದಂತೆ ಅದರ ಹತ್ತಿರ ಹತ್ತಿರಕ್ಕೆ ಹೋಗುವುದಕ್ಕೆ ಪ್ರಯತ್ನ ಪಟ್ಟ ಸರ್ಕಾರ ಈ ಹಿಂದೆ ದೇಶದಲ್ಲಿ ಅಧಿಕಾರ ಮಾಡಿವೆ ಎನ್ನುವುದು ಸತ್ಯ. ಮೋದಿ ಸರ್ಕಾರ ಭರವಸೆ ಕೊಟ್ಟಿದ್ದೇನು..? ಮಾಡಿದ್ದೇನು..? ನೋ ಡೌಟ್.. ‘ಮೋದಿ ಒಬ್ಬ ಮಾತಿನ ಮೂಲಕವೇ ಭವ್ಯ ಅರಮನೆ ಕಟ್ಟಬಲ್ಲ ಮೋಡಿಗಾರ’ ಎನ್ನುವುದು ಇಡೀ ಜಗತ್ತಿಗೆ ತಿಳಿದಿರುವ ಸತ್ಯ. ತನ್ನ ಆಡಳಿತಾವಧಿಯಲ್ಲಿ ದೇಶದ ಜನರನ್ನು ಪದೇ ಪದೇ ಮಾತಿನ ಮೂಲಕ ತನ್ನ ವಶಕ್ಕೆ ಪಡೆದುಕೊಂಡು ನಂಬಿಸಿ ಮೋಸ ಮಾಡಿದ ರಾಜಕೀಯ ನಾಯಕರ ಅಗ್ರಪಂಕ್ತಿಯ ಸಾಲಿನಲ್ಲಿ ಮೋದಿ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ.
ರಾಜಕೀಯ ವಲಯದಲ್ಲಿ ಮೋದಿ ಬಗ್ಗೆ ಪರ ವಿರೋಧ ನಿಲುವಿದೆ. ಅದು ಇರಲೇ ಬೇಕಾದದ್ದೂ ಕೂಡ. ಏನೂ ಮಾಡಿದರೂ ಸರಿ ಎಂದು ಬೊಬ್ಬೆ ಹಾಕಿ ಅಟ್ಟಕ್ಕೇರಿಸಿ ಕೂರಿಸುವ ವರ್ಗ ಒಂದಾದರೇ, ಇನ್ನೊಂದು ಮಾಡಿದ್ದೆಲ್ಲಾ ತಪ್ಪು ಎಂದು ರೇಗುವ ವರ್ಗ. ಎಲ್ಲವನ್ನೂ ಸರಿ ಎನ್ನುವ ವರ್ಗದವರದ್ದು ಇವತ್ತು ಸತ್ತು ನಾಳೆ ಬದುಕಿದರೇ ಸಾಕು ಎನ್ನುವ ಧೋರಣೆ. ಏನೇ ಮಾಡಿದರೂ ತಪ್ಪು ಎನ್ನುವವರದ್ದು ವಾಸ್ತವವೆಂದರೇ, ಹೊರಗೆ ಕಾಣುವ ಪರಿಧಿ ಮಾತ್ರವಲ್ಲ, ಅದರೊಳಗಿನದ್ದೂ ಕೂಡ ಹೌದು ಎನ್ನುವ ಧೋರಣೆ. ಇವುಗಳಲ್ಲಿ ಯಾವುದು ಯೋಗ್ಯವಾದ್ದು ಎಂದು ನೀವೇ ನಿರ್ಧರಿಸಿ. ಮೋದಿ ಮಾತ್ರ ಈ ಎರಡು ವರ್ಗದವರ ಧೋರಣೆಗಳಿಂದಲೇ ಎರಡನೇ ಅವಧಿಯ ಅಧಿಕಾರವನ್ನು ಪೂರ್ಣತೆಯೆಡೆಗೆ ಕೊಂಡೊಯ್ಯುತ್ತಾ ದೇಶದಲ್ಲಿನ ಸಮಸ್ಯೆಗಳು ತನ್ನದಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ದುರಂತವೇ ಸರಿ.
ದೇಶದಲ್ಲಿ ಬಡತನ, ಭ್ರಷ್ಟಾಚಾರ, ಹಸಿವು, ನಿರುದ್ಯೋಗವನ್ನು ಒಳಗೊಂಡು ಜಗತ್ತಿನ ಕಣ್ಣಿಗೆ ರಾಚುವ ಅನೇಕ ಜೀವಂತ ಸಮಸ್ಯೆಗಳಿವೆ. ಆದರೂ, ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಭ್ರಮೆ ಅಲ್ಲ ಭ್ರಾಂತಿಯಲ್ಲಿ ಜನಸಾಮಾನ್ಯರಿದ್ದಾರೆ ಎನ್ನುವುದು ವಿಷಾದನೀಯ. ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಕೇಂದ್ರಿತ ಸೇವೆಗಳನ್ನು ನಿರ್ಲಕ್ಷಿಸಿದಷ್ಟು ಈ ಹಿಂದಿನ ಬೇರೆ ಯಾವ ಸರ್ಕಾರವೂ ನಿರ್ಲಕ್ಷಿಸಿಲ್ಲ. ಉದ್ಯಮ ಒದಗಿಸಿ ಕೊಡುವವರಿಗೆ ತಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿಕೊಳ್ಳುತ್ತಾ ಬಂದ ಸರ್ಕಾರ ಮಾಡಿದ್ದು ಉದ್ಯಮಪತಿಗಳ ಜೇಬು ತುಂಬಿಸುವ ಕೆಲಸವಷ್ಟೇ ಹೊರತು ಬೇರೇನಿಲ್ಲ. ಆಗಲಿ, ಉದ್ಯಮ ಸಂಸ್ಥೆಗಳಿಗೆ ಬೆಂಬಲವಾಗಿ ಸರ್ಕಾರ ನಿಲ್ಲಲಿ. ಆದರೇ, ನವೋದ್ಯಮ ಸಂಸ್ಥೆಗಳ ಮೇಲೆ ಹೇರಲಾಗಿರುವ ಕ್ಲಿಷ್ಟಕರವಾದ ಅನುಸರಣಾ ನಿಯಮಗಳ ಕಾರಣದಿಂದಾಗಿ ಅವುಗಳು ಏಳುಗತಿಯಲ್ಲಿದಂತಾಗಿವೆ. ಮಾರುಕಟ್ಟೆಯ ಆಧಾರಿತ ಆರ್ಥಿಕ ಸ್ಥಿತಿಗತಿಗಳ ಮೇಲೆ ಉದ್ಯಮ ಕ್ಷೇತ್ರಗಳಲ್ಲಿ ಉದ್ಯೊಗಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಸಿಕೊಡಬೇಕೆನ್ನುವ ಸಾಮಾನ್ಯ ಜ್ಞಾನವೂ ಈ ಸರ್ಕಾರಕ್ಕಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲೇಬೇಕಿದೆ.
ಮೋದಿ ಸರ್ಕಾರ ನೀಡಿರುವ ಭರವಸೆಯನ್ನು ಜನ ಎಂದಿಗೂ ಮರೆಯಲಾರರು. ಮೋದಿ ಸರ್ಕಾರದಿಂದ ಸೃಷ್ಟಿಯಾದ ಸಮಸ್ಯೆಗಳಿಂದ ಬಳಲಿದ್ದನ್ನೂ ಕೂಡ ದೇಶದ ಜನರು ಮರೆಯಲಾರರು. ಬೆಲೆ ಏರಿಕೆಯಿಂದ ತತ್ತರಿಸಿದ್ದನ್ನ ಜನ ಖಂಡಿತವಾಗಿಯೂ ಮರೆಯಲಾರರು. ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳಶಾಯಿಗಳ ಮಧ್ಯವರ್ತಿಯಾಗಿ ನಿಂತಿದ್ದನ್ನು ಜನ ಎಂದೂ ಮರೆಯಲಾರರು. ಒಂದು ವೇಳೆ ಇವೆಲ್ಲವನ್ನು ಕಾಲದ ವೇಗದಲ್ಲಿ ಜನ ಮರೆತರೂ ಕೂಡ, ಉದ್ಯೋಗ ಸೃಷ್ಟಿಯ ವಿಚಾರಕ್ಕೆ ಸಂಬಂದಿಸಿದಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಧಾನಿ ಹುದ್ದೆಯಲ್ಲಿ ಕುಳಿತು ‘ಪಕೋಡವನ್ನು ಮಾರಾಟ ಮಾಡಿದರೂ ಅದೊಂದು ಉದ್ಯೋಗವೆ’ ಎಂದು ಉಡಾಫೆಯ ಉತ್ತರ ನೀಡಿದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬುದ್ಧಿವಂತ ಯುವಕರಂತೂ ಖಂಡಿತ ಮರೆಯುವುದಕ್ಕೆ ಸಾಧ್ಯವಿಲ್ಲ.
ಹೌದು, ಭಾರತದಲ್ಲಿ ನಿರುದ್ಯೋಗ ಸಮಸೈ ಗಂಭೀರವಾಗಿ ಮುಂದುವರಿದಿದೆ. ಪದವೀಧರ ವಿದ್ಯಾರ್ಥಿಗಳ ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ದೇಶದಲ್ಲಿ ಜನಸಂಖ್ಯೆ ಏರಿಕೆ ಇಳಿಮುಖವಾಗುತ್ತಿರುವ ಹೊರತಾಗಿಯೂ ಉದ್ಯೋಗಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಹಾಲಿ ಸರ್ಕಾರ ತಂದಿಟ್ಟ ಸಮಸ್ಯೆ ಅಲ್ಲದೇ ಮತ್ತೇನು..? ಇದನ್ನು ವಿರೋಧಿಸುವುದಕ್ಕೆ ಬೇಕಾಗಿ ಒಂದು ಸದೃಢ ವಿರೋಧ ಪಕ್ಷವೂ ಈಗ ದೇಶದಲ್ಲಿ ಇಲ್ಲದಂತಾಗಿದೆ. ಇದೇ ಮೋದಿ ಸರ್ಕಾರದ ‘ಸಾಫ್ಟ್ ಸರ್ವಾಧಿಕಾರ’ ಧೋರಣೆಗೆ ಮುಖ್ಯ ಕಾರಣ.
ಭಾರತದ ಭವ್ಯ ಭವಿಷ್ಯ ಮಹಾ ಯುವ ಸಮುಧಾಯವವನ್ನೇ ನಿರುದ್ಯೋಗ ಸಮಸ್ಯೆಯಲ್ಲಿ ಬಳಲುವಂತೆ ಮಾಡಿದ ಸರ್ಕಾರಕ್ಕೆ ಏನು ಹೇಳಬೇಕು..? ನಿರುದ್ಯೋಗ ಸಮಸ್ಯೆಯ ಬಗೆಗಿನ ಮೋದಿ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಧ್ವನಿ ಎತ್ತಬೇಕಾದವರು ಯಾರು..? ಜನರು ಈಗಲಾದರೂ ಎಚ್ಚೆತ್ತುಕೊಳ್ಳಲೇಬೇಕಿದೆ.
ವಿಪರ್ಯಾಸವೆಂದರೇ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ನೀಡಿದ ದತ್ತಾಂಶಗಳನ್ನು ಆಧರಿಸಿ ೨೦೧೮ ರಿಂದ ೨೦೨೦ ರ ನಡುವೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ಸಾಲದ ಸಮಸ್ಯೆಯ ಕಾರಣದಿಂದಾಗಿ ೨೫ ಸಾವಿರಕ್ಕಿಂತಲೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ೯೧೪೦ ಮಂದಿ ನಿರುದ್ಯೋಗದಿಂದ ಹಾಗೂ ೧೬,೦೯೧ ಮಂದಿ ಆರ್ಥಿಕ ದಿವಾಳಿತನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸ್ವತಃ ಕೇಂದ್ರ ಸರ್ಕಾರ ಮೇಲ್ಮನೆಗೆ ಮಾಹಿತಿ ನೀಡಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ನೀಡಿರುವ ಮಾಹಿತಿಯ ಪ್ರಕಾರ, ೨೦೨೧ ರ ಡಿಸೆಂಬರ್ ನಲ್ಲಿ ನಿರುದ್ಯೋಗ ಪ್ರಮಾಣ ಶೇ. ೭.೯ ಕ್ಕೆ ಏರಿಕೆಯಾಗಿದೆ. ದೇಶದ ಸರಾಸರಿ ನಿರುದ್ಯೋಗದ ಪ್ರಮಾಣ ಕಳೆದ ನವೆಂಬರ್ ನಲ್ಲಿ ಶೇ. ೭ರಷ್ಟಿತ್ತು. ಕಳೆದ ಆಗಸ್ಟ್ ನಲ್ಲಿ ಶೇ. ೮.೨ಕ್ಕೆ ಜಿಗಿದಿತ್ತು. ಕಳೆದ ನವೆಂಬರ್ ನಲ್ಲಿ ಶೇ. ೮.೨ರಷ್ಟಿದ್ದ ನಗರ ನಿರುದ್ಯೋಗ ದರವು ಡಿಸೆಂಬರ್ ನಲ್ಲಿ ಶೇ. ೯.೩ ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಗ್ರಾಮೀಣ ನಿರುದ್ಯೋಗ ದರವು ಶೇ. ೬.೪ ರಿಂದ ಶೇ. ೭.೩ಕ್ಕೆ ಹೆಚ್ಚಳವಾಗಿದೆ ಅಂತಾದರೇ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉದ್ಯೋಗ ಉತ್ಪಾದನ ಕಾರ್ಯಕ್ರಮ (ಪಿಎಂಇಜಿಪಿ), ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ ಆರ್ ಇಜಿಎಸ್), ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ), ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳು ಜೀವಂತವಾಗಿವೆಯೇ ಅಥವಾ ಸತ್ತಿವೆಯೇ..? ಹಾಗೂ ಇದೇ ಮೋದಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಇದೇ ಪ್ರಧಾನಿ ಮೋದಿ ಸರ್ಕಾರ ಘೋಷಿಸಿದ ೨೦ ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಯಿತು..? ಇವೆಲ್ಲದಕ್ಕೂ ಉತ್ತರವನ್ನು ಕೇಂದ್ರ ಸರ್ಕಾರಿಂದ ನಿರೀಕ್ಷಿಸದೇ, ಮತ್ತೆ ಯಾರಿಂದ ನಿರೀಕ್ಷಿಸಬೇಕು..? ಇವೆಲ್ಲಾ ಸಮಸ್ಯೆಗಳನ್ನು ಮೋದಿ ಸರ್ಕಾರವನ್ನು ದೂಷಿಸಬಾರದು ಎಂದಾದರೇ, ಮೋದಿ ಸರ್ಕಾರ ಹೇಳಿದ್ದೇನು..? ಮಾಡಿದ್ದೇನು..?
ದೇಶದ ಯುವ ಸಮೂಹವನ್ನು ಮಾತ್ರವಲ್ಲದೇ ಎಲ್ಲಾ ವರ್ಗದವರನ್ನು ಅತೀವ ಸಂಕಷ್ಟಕ್ಕೆ ತಳ್ಳಿರುವ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಈಗಾಗಲೇ ಒಂದು ಸಣ್ಣ ಕಿಡಿ ಹೊತ್ತಿದೆ. ಕಳೆದ ಬಾರಿ ಪ್ರಧಾನಿ ಮೋದಿ ಜನ್ಮ ದಿನದಂದು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ‘ರಾಷ್ಟ್ರೀಯ ನಿರುದ್ಯೋಗ ದಿನ’ ಟ್ರೆಂಡಿಂಗ್ ಕಂಡಿದ್ದು ಗೊತ್ತೇ ಇದೆ. ಇಷ್ಟೆಲ್ಲಾ ಆದ ಮೇಲೂ, ಇಷ್ಟೆಲ್ಲಾ ಸಮಸ್ಯೆಗಳ ನಡುವೆ ‘ತಮ್ಮದೇ ದೊಡ್ಡದು’ ಎನ್ನುವ ಕೇಂದ್ರ ಸರ್ಕಾರದ ಧೋರಣೆ ಹಾಸ್ಯಾಸ್ಪದವಲ್ಲದೇ ಮತ್ತೇನು..? ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಮೋದಿಯನ್ನು ಯಾಕೆ ಯಶಸ್ವಿ ಪ್ರಧಾಇಯೆಂದು ಒಪ್ಪಬೇಕು..? ‘ಹೇಳುವವನು ಮಾಡಲಾರ, ಮಾಡುವವನು ಹೇಳಲಾರ’ ಎಂಬ ಮಾತು ಮೋದಿ ಸರ್ಕಾರದ ವಿಷಯದಲ್ಲಿ ಅಕ್ಷರಶಃ ದಿಟವಾಗಿದೆ.
-ಶ್ರೀರಾಜ್ ವಕ್ವಾಡಿ
No comments:
Post a Comment