Sunday, March 13, 2022

ಪಂಚರಾಜ್ಯ ಚುನಾವಣೆ : ಬಿಜೆಪಿಗೆ ಚತುರ್ ಬಲ




ಪಂಜಾಬ್‌ನಲ್ಲಿ ಕಾಂಗ್ರೆಸ್‌ಗ್ಯಾಕೆ ಹೀನಾಯ ಸೋಲು..? | ಮೋದಿ-ಯೋಗಿ ಜನಪ್ರಿಯತೆ ಏರಲಿಲ್ಲ..!

ಪಂಚರಾಜ್ಯ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂಬ ನಿರೀಕ್ಷೆಯಂತೆಯೇ ಫಲಿತಾಂಶ ಹೊರ ಬಿದ್ದಿದೆ. ‘ಎಲ್ಲಾ ಮಾಧ್ಯಮಗಳ ಚುನಾವಣಾ ಸಮಿಕ್ಷೆಗಳೂ ಅಭಿವೃದ್ಧಿಯ ಹೊರತಾಗಿ ಕೂಡ  ಆಡಳಿತ ಪಕ್ಷದ ಪರವಾಗಿಯೇ ಹೊರಬಂದಿತ್ತು’. ದೇಶ ಈಗಾಗಲೇ ಎರಡಾಗಿ ಒಡೆದು ಹೋಗಿದೆ. ‘ಹಿಂದು’ ಹಾಗೂ ‘ನಾನ್ ಹಿಂದು’ ಆಧಾರದಲ್ಲಿಯೇ ಚುನಾವಣಾ ಫಲಿತಾಂಶವನ್ನು ಊಹಿಸುವುದಕ್ಕೆ ಈಗ ಬಹಳ ಸುಲಭ. ಕೇಂದ್ರದಲ್ಲಿ ಹಿಂದು ಪರವಾದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಬಹುಸಂಖ್ಯಾತ ಹಿಂದು ಸಮುದಾಯದವರನ್ನು ಹೊಂದಿರುವ ದೇಶದಲ್ಲಿ ಹಿಂದು ಪರ ನಿಲುವಿರುವುದು ಸಾಮಾನ್ಯ. ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್ ಹೊರತಾಗಿ ಉತ್ತರಪ್ರದೇಶ, ಉತ್ತರಾಖಂಡ, ಮಣೀಪುರ, ಗೋವಾಗಳಲ್ಲಿ ಮತ್ತೆ ಬಿಜೆಪಿ ಮತ್ತೆ ಅಧಿಕಾರ ಹಿಡಿದಿರುವುದು ದೊಡ್ಡ ಅಚ್ಚರಿಯೇನಲ್ಲ. ಆಡಳಿತದ ದೊಡ್ಡ ವಿರೋಧಿ ಅಲೆ ಇದ್ದರೂ ಮತ್ತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಅಂದರೇ, ಅದು ಅಭಿವೃದ್ಧಿ ಕಾರ್ಯಗಳಿಂತ ಹೆಚ್ಚಾಗಿ ಬಿಜೆಪಿ ಅಂತಹ ರಾಷ್ಟ್ರೀರಾಷ್ಟ್ರದ ಪಕ್ಷ ಸೃಷ್ಟಿಸುವ ‘ಪಾಲಿಟಿಕಲ್ ಅಜೆಂಡಾ’ವೇ ಮುಖ್ಯ ಕಾರಣ. 

ತಳ ಮಟ್ಟದ ರಾಜಕೀಯದಿಂದಾದಿಯಾಗಿ ಮೇಲ್ಮಟ್ಟದ ರಾಜಕೀಯದ ತನಕವೂ ಬಿಜೆಪಿ ಹೂಡುವ ರಾಜಕೀಯ ತಂತ್ರಗಾರಿಕೆಯ ಎದುರು ಯಾವ ಪಕ್ಷಕ್ಕೂ ನಿಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುವುದನ್ನು ಮತ್ತೆ ಬಿಜೆಪಿ ತೋರಿಸಿಕೊಟ್ಟಿದೆ. ಅದರಲ್ಲೂ ದೇಶದ ಉತ್ತರ ಭಾಗದಲ್ಲಿ ಬಿಜೆಪಿ ತನ್ನ ಪಾಲಿಟಿಕಲ್ ಅಜೆಂಡಾದಲ್ಲಿ ಉಳಿದೆಲ್ಲಾ ಪಕ್ಷಗಳಿಗಿಂತ ತುಸು ಹೆಚ್ಚೆ ಗಟ್ಟಿಯಾಗಿದೆ ಎಂದರೇ ತಪ್ಪಿಲ್ಲ. ಕೋವಿಡ್ ಸೋಂಕಿನ ಸಂದರ್ಭದಲ್ಲಿ ದೇಶದಲ್ಲಿನ ಅವ್ಯವಸ್ಥೆ, ರೈತರ ಹೋರಾಟ, ಇಂಧನ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದಂತಹ ಜೀವಂತ ಸಮಸ್ಯೆಗಳ ಮಹಾ ಮೂಟೆಯೇ ಇರುವಾಗಲೂ ಆಡಳಿತ ಪಕ್ಷದ ಪರವಾಗಿ ಮತ್ತೆ ಎರಡನೇ ಬಾರಿಗೆ ಅಧಿಕಾರ ಹಿಡಿಯುವುದಕ್ಕೆ ಮತದಾರರು ಕೃಪಾಶೀರ್ವಾದ ಮಾಡಿದ್ದಾರೆಂದರೇ, ಅದು ಕೇವಲ ಭರವಸೆಯ ಆಮಿಷದಿಂದ ಹೊರತು ಮತ್ತೇನಲ್ಲ. 

ಪಂಚರಾಜ್ಯಗಳ ಪೈಕಿಯಲ್ಲಿ ಉತ್ತರಖಂಡದ ಬಗ್ಗೆ ಗಮನಿಸುವುದಾದರೇ, ಅಲ್ಲಿ ಸ್ವತಃ ಮುಖ್ಯಮಂತ್ರಿ ತಮ್ಮ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ, ಎನ್ನುವಲ್ಲಿಗೆ ಆಡಳಿತದ ಪರವಾಗಿ ಜನ ಇಲ್ಲ ಎನ್ನುವುದಕ್ಕೆ ಇದೊಂದೇ ಉದಾಹರಣೆ ಸಾಕು. ಆದರೇ, ಉತ್ತರಖಂಡದಲ್ಲಿ ಬಿಜೆಪಿಗೆ ಲಾಭವಾದದ್ದು ಹಿಂದು ಅಲೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಉತ್ತರಾಖಂಡವನ್ನು ವಶ ಪಡಿಸಿಕೊಳ್ಳಬೇಕೆಂಬ ತವಕದಲ್ಲಿದ್ದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ, ಸ್ವತಃ ಹರೀಶ್ ರಾವತ್ ಕೂಡ ಅಲ್ಲಿ ಸೋಲನುಭವಿಸಬೇಕಾಯಿತು ಎಂದರೇ, ಅದು ‘ದೇವಭೂಮಿ’ಯಲ್ಲಿ ಬಿಜೆಪಿ ರಾಜಕೀಯವಾಗಿ ಸೃಷ್ಟಿಸಿದ ಹಿಂದು ಅಲೆಯೇ ಕಾರಣ. ಆದಾಗ್ಯೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಂದರೇ, ೨೦೧೭ರಲ್ಲಿ ೫೭ ಕ್ಷೇತ್ರಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ೧೦ ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂದರೇ, ಜನರಿಗೆ ಆಡಳಿತದಲ್ಲಿದ್ದ ನಂಬಿಕೆ ಕುಸಿದಿದೆ ಎಂದೇ ಅರ್ಥ. 

ಗೋವಾದಲ್ಲಿ ಈವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿಯಾಗುತ್ತಿತ್ತು. ಆದರೇ, ಈ ಬಾರಿ ಚುನಾವಣಾ ಕಣದಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷ ಕಾಂಗ್ರೆಸ್‌ಗೆ ಆಮ್ ಆದ್ಮಿ, ತೃಣಮೂಲ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನೀಡಿದ್ದವು, ಹಾಗಾಗಿ ಕಾಂಗ್ರೆಸ್ ಅಧೀನದಲ್ಲಿದ್ದ ೮ ಸ್ಥಾನ ಕಳೆದುಕೊಳ್ಳಬೇಕಾಯಿತು. ಇನ್ನು, ೨೦೧೭ ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸುಮಾರು ೧೨ ರಿಂದ ೧೫ ಶಾಸಕರು ಬಣ್ಣ ಬದಲಾಯಿಸಿಕೊಂಡು ಸೇರಿದ್ದರು. ಹಾಗಾಗಿ ಕಾಂಗ್ರೆಸ್‌ಗೆ ಕಳೆದ ಬಾರಿಯೂ ಗೋವಾದಲ್ಲಿ ಅಧಿಕಾರ ಹಿಡಿಯುವುದಕ್ಕೆ ಆಗಿರಲಿಲ್ಲ. ಈ ಬಾರಿ ಚುನಾವಣಾ ಫಲಿತಾಂಶ ಪೂರ್ವದಲ್ಲಿಯೇ ತನ್ನ ಶಾಸಕರು ಕುದುರೆ ವ್ಯಾಪಾರಕ್ಕೊಳಗಾಗಬಹುದೆಂಬ ಭಯದಿಂದ ರೆಸಾರ್ಟ್ನಲ್ಲಿ ಕೂಡಿ ಹಾಕಿದ ವರದಿಯೂ ಆಗಿದೆ. ಪಕ್ಷೇತರ ಮೂವರು ಅಭ್ಯರ್ಥಿಗಳು ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಪರವಾಗಿದ್ದ ಎಂಜಿಪಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು ಅಧಿಕಾರದ ಹಾದಿ ಸುಲಭವಾಗಿದೆ. 

ಕಳೆದ ಬಾರಿ ಅತಂತ್ರ ಸ್ಥಿತಿಯಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ ಮಣಿಪುರದಲ್ಲಿ ಈ ಬಾರಿ ಸ್ಪಷ್ಟ ಬಹುಮತ ದೊರಕಿದೆ. ಮಣಿಪುರದಂತಹ ರಾಜ್ಯದಲ್ಲಿಯೂ ಕಾಂಗ್ರೆಸ್‌ಗೆ ತನ್ನ ಅಡಿಪಾಯವನ್ನು ಭದ್ರ ಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೬೦ ವಿಧಾನಸಭಾ ಕ್ಷೇತ್ರಗಳಲ್ಲಿ ೨೮ ಕ್ಷೇತ್ರಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಕೇವಲ ೫ ಕ್ಷೇತ್ರದಲ್ಲಷ್ಟೇ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಕಾಂಗ್ರೆಸ್‌ನ ವಿಫಲ ನಾಯಕತ್ವ ಹಾಗೂ ಟೊಳ್ಳು ತಂತ್ರಗಾರಿಕೆಯೇ ಇದಕ್ಕೆಲ್ಲಾ ಕಾರಣ ಎನ್ನುವುದನ್ನು ನಿಸ್ಸಂಶಯವಾಗಿ ಹೇಳಬಹುದಾಗಿದೆ. 

ಇನ್ನು, ಪಂಚರಾಜ್ಯ ಚುನಾವಣೆಯಲ್ಲಿ ನಿಜಕ್ಕೂ ಹೀರೋ ಆಗಿದ್ದು ಅರವಿಂದ ಕೇಜ್ರಿವಾಲ್. ಮೋದಿ ಹವಾ ಎಲ್ಲಾ ಕಡೆಯಲ್ಲಿ ಇಲ್ಲ ಎನ್ನುವುದಕ್ಕೆ ಪಂಜಾಬ್ ಫಲಿತಾಂಶ ಕೂಡ ಒಂದು ಸಾಕ್ಷಿ. ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತು ಪಡಿಸಿದರೇ, ಬೇರೆಲ್ಲೂ ಮೋದಿ ಹೆಸರು ಏನು ಕೆಲಸ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇನೇ ಇರಲಿ, ಇದುವರೆಗೆ ಕಾಂಗ್ರೆಸ್ ಹಾಗೂ ಅಕಾಲಿದಳಗಳ ನಡುವೆ ಮಾತ್ರ ನಡೆಯುತ್ತಿದ್ದ ಹಣಾಹಣಿಯ ಕಾರಣದಿಂದಾಗಿ ಪಂಜಾಬ್‌ನಲ್ಲಿ ಹೊಸದೊಂದು ಪಕ್ಷ ಅಧಿಕಾರ ಹಿಡಿಯುತ್ತದೆ ಎಂದು ಯಾರೂ ಬಲವಾಗಿ ನಂಬಿದ್ದಿರಲಿಲ್ಲ. ಸಮೀಕ್ಷೆಗಳು ಆಪ್ ಅಧಿಕಾರಕ್ಕೆ ಬರುವ ವರದಿ ನೀಡಿದ್ದರೂ ರಾಜಕೀಯ ವಲಯದಲ್ಲಿ ಅನುಮಾನವಿತ್ತು. ಆದರೇ, ನಿಜಕ್ಕೂ ಅಚ್ಚರಿಯ ವಿಚಾರ, ಪಂಜಾಬ್‌ನಲ್ಲಿ ಆಪ್ ಅಧಿಕಾರ ಹಿಡಿದಿದ್ದು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳ ನಿರಂತರ ಒಂದು ವರ್ಷದ ಹೋರಾಟ ಮತ್ತು ಪಂಜಾಬ್ ರೈತರ ಮೋದಿ ವಿರುದ್ಧದ ನಿಲುವು, ಆಮ್ ಆದ್ಮಿ ಪಕ್ಷ ರೈತ ಹೋರಾಟ ಸಂದರ್ಭದಲ್ಲಿ ದೆಹಲಿಯಲ್ಲಿ ರೈತ ಸಂಘಟನೆಗಳಿಗೆ ಬೆಂಬಲವಾಗಿ ನಿಂತದ್ದು, ಪಂಜಾಬ್ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಆಪ್‌ಗೆ ಮತ ತಂದುಕೊಟ್ಟಿದೆ. ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದ ಅಭಿವೃದ್ಧಿ ಪರ ಕಾರ್ಯಗಳು ಮಾತ್ರವಲ್ಲದೇ, ರೈತರ ಪರವಾದ ಪಾಲಿಟಿಕಲ್ ಸ್ಟ್ರ್ಯಾಟಜಿ ಇಲ್ಲಿ ವರ್ಕೌಟ್ ಆಗಿದೆ. 

೨೦೧೪ ರಲ್ಲಿ ಪಂಜಾಬ್‌ನ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಆಪ್ ಕಾಲಿಡುವ ಮೂಲಕ ಒಟ್ಟು ೧೩ ಕ್ಷೇತ್ರಗಳ ಪೈಕಿ ೪ ಕ್ಷೇತ್ರಗಳಲ್ಲಿ ಸ್ಥಾನ ಪಡೆದಿತ್ತು. ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೨೦ ಕ್ಷೇತ್ರಗಳನ್ನು, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೧೩ ಕ್ಷೇತ್ರಗಳಲ್ಲಿ ೧ ಕ್ಷೇತ್ರವನ್ನು ಹಾಗೂ ಈ ಬಾರಿ ಅಂದರೇ, ೨೦೨೨ ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೯೨ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಆಪ್ ಪಂಜಾಬ್‌ನನ್ನು ವಶಪಡಿಸಿಕೊಂಡಿದೆ. ಒಂದು ಪ್ರಾದೇಶಿಕ ಪಕ್ಷವಾಗಿ ದೆಹಲಿಯಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೇ, ಇಡೀ ದೇಶಕ್ಕೆ ಅಚ್ಚರಿ ಮೂಡಿಸಿತ್ತು. ಈಗ ಹೊರ ರಾಜ್ಯವೊಂದರಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಅಕಾಲಿದಳಕ್ಕೆ ಮಣ್ಣು ಮುಕ್ಕಿಸಿದೆ.  

ಪಂಜಾಬ್‌ನಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವೇನು..? :  ಪದೇ ಪದೇ ಸ್ವಾತಂತ್ರö್ಯ ತಂದು ಕೊಟ್ಟ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಈಗ ಅಧಿಕಾರ ಇದ್ದ ರಾಜ್ಯದಲ್ಲಿಯೂ ಹೀನಾಯವಾಗಿ ಸೋಲನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಪಂಜಾಬ್ ಕಾಂಗ್ರೆಸ್‌ನಲ್ಲಿದ್ದ ಆಂತರಿಕ ಒಳಜಗಳವೇ ಹೀನಾಯ ಸೋಲಿಗೆ ಮೊದಲ ಕಾರಣ. ಇನ್ನು, ಕಾಂಗ್ರೆಸ್ ಎರಡನೇ ಹಂತದ ಅಥವಾ ಅಲ್ಟರ್‌ನೇಟಿವ್ ನಾಯಕತ್ವವನ್ನು ಇದುವರೆಗೂ ಎಲ್ಲಿಯೂ ಬೆಳೆಸಲಿಲ್ಲ. ಪ್ರಭಾವಿ ನಾಯಕರನ್ನೇ ನಂಬಿಕೊಂಡು ಬಂದ ಪಕ್ಷ ಈವರೆಗೆ ಪ್ರಭಾವಿ ತಲೆ ಹೇಳಿದಕ್ಕೆ ‘ಇದಂ ಮಿತ್ಥಂ’ ಎಂದು ಹೇಳಿಕೊಂಡೇ ಬಂದಿದೆ. ಹಾಗಾಗಿ ದೇಶದ ಉದ್ದಗಲಕ್ಕೂ ಪ್ರಭಾವಿ ನಾಯಕರನ್ನು ಬಿಟ್ಟರೇ, ಅವರಿಗೆ ಸರಿದೂಗುವಂತಹ ಅಥವಾ ಅವರಿಲ್ಲದಿದ್ದರೂ ನಾಯಕತ್ವ ನಡೆಸಬಲ್ಲ ಅಭ್ಯರ್ಥಿಗಳನ್ನು ಕಾಂಗ್ರೆಸ್ ತಯಾರು ಮಾಡಲೇ ಇಲ್ಲ. ಪಂಜಾಬ್‌ನಲ್ಲಿ ಆದದ್ದೂ ಇದೇ ಪರಿಸ್ಥಿತಿ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಒಬ್ಬ ಹಿರಿಯ ಅನುಭವಿ ನಾಯಕ. ಆದರೇ, ಪಂಜಾಬ್ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವೋಜಿತ್ ಸಿಂಗ್ ಸಿಧು ಹಾಗೂ ಕ್ಯಾಪ್ಟನ್ ನಡುವಿನ ಆಂತರಿಕ ಪ್ರತಿಷ್ಠೆಯ ವೈಮನಸ್ಸು ಕಾಂಗ್ರೆಸ್‌ನನ್ನು ಈ ಸ್ಥಿತಿಗೆ ತಂದು ತಲುಪಿಸಿದೆ. ಅಮರಿಂದರ್ ಸಿಂಗ್ ಬಿಟ್ಟರೇ, ಪಂಜಾಬ್‌ನಲ್ಲಿ ಅವರಿಗೆ ಸರಿದೂಗುವಂತಹ ನಾಯಕ  ಕಾಂಗ್ರೆಸ್‌ನಲ್ಲಿ ಯಾರೂ ಇರಲಿಲ್ಲ. ನವೋಜಿತ್ ಸಿಂಗ್ ಸಿಧು ಪ್ರತಿಷ್ಟೆಯ ಹುಚ್ಚು ಹಿಡಿಸಿಕೊಂಡ ರಾಜಕಾರಣಿ. ಇವರೀರ್ವರ ಜಗಳವನ್ನು ತಣ್ಣಗಾಗಿಸುವ ಸಾಮಾನ್ಯ ಪಾಲಿಟಿಕಲ್ ಐಡಿಯಾಲಜಿ ಕಾಂಗ್ರೆಸ್‌ಗೆ ಇದ್ದಿರಲಿಲ್ಲ. ಕ್ಯಾಪ್ಟನ್ ಸಿಂಗ್ ಕಾಂಗ್ರೆಸ್‌ಗೆ ಇದ್ದಕ್ಕಿದಂತೆ  ರಾಜಿನಾಮೆ ಎಸೆದು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಂತರು, ಇತ್ತ ಕಾಂಗ್ರೆಸ್ ಪಂಜಾಬ್‌ನಲ್ಲಿ ಸುಮಾರು ಶೇ. ೩೧ರಷ್ಟು ದಲಿತರಿದ್ದಾರೆ ಎಂಬ ಕಾರಣಕ್ಕೆ ಅಥವಾ ದಲಿತರ ಮತ ಓಲೈಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೋ ಎಂಬ ತಂತ್ರಗಾರಿಕೆ ಹೂಡಿ ಕೊನೆಯ ಹಂತದಲ್ಲಿ ಚರಣಜಿತ್ ಸಿಂಗ್ ಚನ್ನಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಆದರೇ, ಅದು ಕಾಂಗ್ರೆಸ್‌ಗೆ ಯಶಸ್ಸು ತಂದುಕೊಟ್ಟಿಲ್ಲ. ಪಂಜಾಬ್ ನಲ್ಲಿ ಬಿಜೆಪಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಲಾಭ ಮಾಡಿಕೊಳ್ಳುವುದಕ್ಕೆ ಬೇಕಾದ ಬುದ್ಧಿಯೂ ಕಾಂಗ್ರೆಸ್‌ಗೆ ಇರಲಿಲ್ಲ. ೨೦೧೭ರ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೭೭ ಕ್ಷೇತ್ರಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿ ಕೇವಲ ೧೮ ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಳ್ಳುವಷ್ಟು ಬಡತನ ಬಂದಿದೆ. 

ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚನ್ನಿ ಸ್ಪರ್ಧಿಸಿದ್ದ ಚಮಕೌರ್ ಸಾಹೀಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಎರಡರಲ್ಲೂ ಸೋಲನುಭವಿಸಿದ್ದಾರೆ. ಇತ್ತ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ತಾನೇ ಹೀರೋ ಆಗಬೇಕು ಎಂಬ ಭ್ರಮೆಯಲ್ಲಿದ್ದ ಸಿಧು ಅಮೃತ್‌ಸರ ಪೂರ್ವ ಕ್ಷೇತ್ರದಲ್ಲಿ ಸೋಲನುಭಿಸಿದ್ದಾರೆ. ಬಂಡಾಯದ ಬಾವುಟ ಹಾರಿಸುತ್ತಲೇ, ತಮ್ಮನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದು ಕೂತು ೫ ವರ್ಷ ಕಳೆದ ಸಿಧುಗೆ ಇದೀಗ ಪಂಜಾಬ್‌ನಲ್ಲಿ ತೀವ್ರ ಮುಖಭಂಗವಾಗಿದೆ. 

ಇನ್ನು, ಪಂಜಾಬ್‌ನಲ್ಲಿ ಹೋರಾಟ ಮುಂದಿಟ್ಟುಕೊಂಡು ಬಿಜೆಪಿ ಮೈತ್ರಿ ತೊರೆದ ಅಕಾಲಿದಳದ ಸ್ಟ್ರ್ಯಾಟಜಿ ಕೂಡ ವರ್ಕೌಟ್ ಆಗಿಲ್ಲ. ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಮತ ಒಡೆಯುವ ಅಮಿತ್ ಶಾ ಪ್ಲಾö್ಯನ್ ಒಂದು ಹಂತದಲ್ಲಿ ಸಕ್ಸಸ್ ಕಂಡರೇ, ಇನ್ನೊಂದು ಥರದಲ್ಲಿ ವಿಫಲವಾಯಿತು. ಸ್ವತಃ ಅಮರಿಂದರ್ ಸಿಂಗ್ ಪಟಿಯಾಲ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ೧೯,೮೭೩ ಮತಗಳ ಅಂತರದಿಂದ ಹೀನಾಯ ಸೋಲುಂಡರು. ಒಟ್ಟಿನಲ್ಲಿ, ಅಮರಿಂದರ್ ಸಿಂಗ್ ರಾಜಕೀಯ ಯುಗಾಂತ್ಯಕ್ಕೆ ಬಿಜೆಪಿ ನಾಂದಿ ಹಾಡಿದರೇ, ಇತ್ತ ಪಂಜಾಬ್‌ನಲ್ಲಿ ಕಾಂಗ್ರೆಸ್ ರಾಜಕೀಯ ಯುಗಾಂತ್ಯಕ್ಕೆ ಆಪ್ ನಾಂದಿ ಹಾಡಿದೆ ಎನ್ನಬಹುದೇನೋ.                

ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯ | ಮೋದಿ-ಯೋಗಿ ಜನಪ್ರಿಯತೆ ಏರಲಿಲ್ಲ..! : ರಾಜಕೀಯ ವಲಯದಲ್ಲಿ ಉತ್ತರ ಪ್ರದೇಶದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆಯೋ, ಅವರೇ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬರುತ್ತಾರೆ ಎಂಬ ಮಾತಿದೆ. ಪಂಚರಾಜ್ಯ ಚುನಾವಣೆಗಳ ಪೈಕಿಯಲ್ಲೇ ಹೈ ವೋಲ್ಟೇಜ್ ಚುನಾವಣಾ ಕಣ ಎಂದು ಕರೆಸಿಕೊಂಡಿದ್ದ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದಿದೆ. ಹೇಗಿದು..? ಕಳೆದ ಐದು ವರ್ಷದಲ್ಲಿ ಯೋಗಿ ಆಡಳಿತಕ್ಕೆ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೇ, ದೇಶದ ಹಲವು ಭಾಗಗಳಲ್ಲಿ ವಿರೋಧ ಅಲೆಯಿತ್ತು. ಉತ್ತರ ಪ್ರದೇಶದಲ್ಲಿ ಕೋವಿಡ್ ನಿರ್ವಹಣೆ ವೈಫಲ್ಯದ ಕಾರಣ ಮುಖ್ಯಮಂತ್ರಿ ಹಾಗೂ ಇಬ್ಬರು ಡೆಪ್ಯುಟಿಗಳ ಬದಲಾವಣೆಯಾಗಲಿದೆ ಎಂಬ ವದಂತಿಯೂ ಎದ್ದಿತ್ತು. ಗಂಗಾ ನದಿಯಲ್ಲಿ ಕೋವಿಡ್  ಸೋಂಕಿತರ ಶವಗಳು ತೇಲಿದ ಬಳಿಕ ರಾಜ್ಯದ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಜನಾಕ್ರೋಶ ಸ್ಫೋಟಗೊಂಡಿತ್ತು. ಏತನ್ಮಧ್ಯೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಆಡಲಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸಿತ್ತು. 

ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಮೇಲ್ಜಾತಿಯ ಯುವಕರು ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಹತ್ಯೆಯ ನಂತರ ಜಿಲ್ಲಾಡಳಿತ ಯುವತಿಯ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ನೀಡದೇ ಅಮಾನವೀಯವಾಗಿ ರಾತ್ರೋರಾತ್ರಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು. ದಿನನಿತ್ಯ ಬಡವರ ಮನೆಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವಾಗಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದು ಯೋಗಿ ಸರ್ಕಾರ ಯಾವ ಮುಖ ಹೊತ್ತುಕೊಂಡು ಹೇಳುತ್ತದೆ..? ಪ್ರಕರಣದ ವರದಿ ಮಾಡುವುದಕ್ಕೆ ಹೋದ ಪತ್ರಕರ್ತರನ್ನು ತಡೆದ ಘಟನೆ ಇದೇ ಉತ್ತರ ಪ್ರದೇಶದಲ್ಲೇ ಆಗಿದ್ದು..! ವರದಿ ಮಾಡುವುದಕ್ಕೆ ತೆರಳುತ್ತಿದ್ದ ಪತ್ರಕರ್ತರನ್ನು ಬಂಧಿಸಿದ್ದು ಇದೇ ಉತ್ತರ ಪ್ರದೇಶ ಸರ್ಕಾರ ಅಲ್ಲವೇ..? ಇದೆನಾ ಯೋಗಿ ಹೇಳುವ ರಾಜಧರ್ಮ..? ಮುಖ್ಯಮಂತ್ರಿ ಯೋಗಿ ವಿರುದ್ಧ ಆಕ್ಷೇಪಾರ್ಹ ವರದಿಗಳನ್ನು ಹಂಚಿದ ಆರೋಪದ ಮೇಲೆ ನಿಯಮಬಾಹೀರವಾಗಿ ಪತ್ರಕರ್ತರನ್ನು ಬಂಧಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ಇದೇ ಉತ್ತರ ಪ್ರದೇಶದ ಯೋಗಿ ಸಕಾರಕ್ಕೆ ಹೊರತು ಬೇರೆ ಯಾವುದಕ್ಕೂ ಅಲ್ಲ. ಖಂಡಿತ ಅಲ್ಲ. ಅಭಿವೃದ್ಧಿ ಕಾರ್ಯ, ಕಾನೂನು ಸುವ್ಯವಸ್ಥೆ ತಂದಿದ್ದಕ್ಕಾಗಿ ಅಂತೂ ಖಂಡಿತ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದಲ್ಲ. ಅಧಿಕಾರಕ್ಕೆ ಮತ್ತೆ ಬಹುಮತದೊಂದಿಗೆ ಆಯ್ಕೆ ಆಗುವುದಕ್ಕೆ ಕಾರಣವೇ ಹಿಂದುತ್ವ ಹಾಗೂ ಶ್ರೀರಾಮ ಮಂದಿರ ಹೊರತು ಬೇರೇನಲ್ಲ. 

ಉತ್ತರ ಪ್ರದೇಶದ ಜನರಿಗೆ ಬಿಜೆಪಿ ಆಡಳಿತದ ಮೇಲೆ ವಿಶ್ವಾಸ ಕುಸಿದಿದೆ ಎನ್ನುವುದಕ್ಕೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ೧೨೫ ಕ್ಷೇತ್ರಗಳನ್ನು ಪಡೆದಿರುವುದೇ ಸಾಕ್ಷಿ. ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೪೦೩ ಕ್ಷೇತ್ರಗಳಲ್ಲಿ ೩೨೫ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಾನ ಪಡೆದಿತ್ತು. ಈ ಬಾರಿ ೨೭೩ಕ್ಕೆ ತೃಪ್ತಿ ಪಟ್ಟುಕೊಂಡಿದೆ ಎಂದರೇ, ಇದನ್ನು ಮೋದಿ ಹಾಗೂ ಯೋಗಿ ಜನಪ್ರಿಯತೆ ಏರಿದೆ ಎಂದು ಹೇಗೆ ಹೇಳುವುದಕ್ಕೆ ಸಾಧ್ಯ..? ನಿಜಕ್ಕೂ ಉತ್ತರ ಪ್ರದೇಶದಲ್ಲಿ ಮತ್ತೆ ಜನಪ್ರಿತಿ ಹೆಚ್ಚಿಸಿಕೊಂಡಿದ್ದು ಅಖಿಲೇಶ್ ಯಾದವ್. ಇನ್ನು, ಕಳೆದ ಒಂದೆರಡು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಕಾರ್ಯನಿರ್ವಹಿಸಿದ ಪ್ರಿಯಾಂಕ ಗಾಂಧಿ ತಂತ್ರಗಾರಿಕೆ ಏನೂ ಪ್ರಯೋಜನಕ್ಕೆ ಬಂದಿಲ್ಲ. ಕೇವಲ ೨ ಕ್ಷೇತ್ರಗಳಿಗಷ್ಟೇ ತೃಪ್ತಿ ಪಟ್ಟುಕೊಳ್ಳುವ ಸ್ಥಿತಿ ಕಾಂಗ್ರೆಸ್ ಗೆ ಬಂದೊದಗಿದೆ. 

ಕಾಂಗ್ರೆಸ್ ಬಗ್ಗೆ ಏನು ಹೇಳುವುದಕ್ಕಿದೆ..? ಅದರ ಭವಿಷ್ಯ ಈ ಫಲಿತಾಂಶ ಹೇಳುತ್ತಿದೆ. ದಿನನಿತ್ಯ ಕಾಂಗ್ರೆಸ್ ವರ್ಚಸ್ಸು ಕುಸಿಯುತ್ತಿದೆ. ದೇಶದೆಲ್ಲಡೆ ಕಾಂಗ್ರೆಸ್ ನಿರಂತರವಾಗಿ ಅಧಿಕಾರ ಕಳೆದುಕೊಳ್ಳುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಪಕ್ಷದಲ್ಲಿ ಮರಳಿ ಶಕ್ತಿ ತುಂಬಿಸುತ್ತಾರೆ ಎಂಬ ನಂಬಿಕೆ ಸ್ವತಃ ಕಾಂಗ್ರೆಸ್‌ನವರಿಗೂ ಬಹುಶಃ ಇರಲಿಕ್ಕಿಲ್ಲ. ಅಸ್ತಿತ್ವ ಉಳಿಸಿಕೊಳ್ಳಬೇಕಾದರೇ, ಮೋದಿ ವಿರುದ್ಧ ಪ್ರಬಲ ನಾಯಕತ್ವ ಕಾಂಗ್ರೆಸ್‌ಗೆ ತುರ್ತು ಅಗತ್ಯವಿದೆ ಅಷ್ಟೇ.

-ಶ್ರೀರಾಜ್ ವಕ್ವಾಡಿ        


No comments:

Post a Comment