Tuesday, November 9, 2021

ಮತ್ತೊಂದು ಹೊಸ ಬದಲಾವಣೆಯತ್ತ ರಾಜ್ಯ ಬಿಜೆಪಿ..!?


 

ಹಾನಗಲ್ ಸೋಲು | ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ ಔಟ್..? | ಬಿಎಸ್.ವೈ ಪುತ್ರನಿಗೆ ಲಾಭ..?

“ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ” ಎಂಬ ಮಾತು ರಾಜ್ಯ ಬಿಜೆಪಿಯಲ್ಲಂತೂ ಒಂದು ರೀತಿಯಲ್ಲಿ ಅದು ಸಂಪ್ರದಾಯದ ಮಾತಿದ್ದಂತೆ. ನಾಯಕತ್ವದ ಬದಲಾವಣೆಯೇ ಇಲ್ಲ ಎಂದು ಹೇಳುತ್ತಿರುವಾಗಲೇ ರಾಜ್ಯ ಬಿಜೆಪಿಯಲ್ಲಾದ ಬದಲಾವಣೆಗಳು ಒಂದು ದೊಡ್ಡ ಇತಿಹಾಸವೇ ಸರಿ. “ನಾಯಕತ್ವ”ದ ವಿಚಾರದಲ್ಲಿ ಅತ್ಯಂತ ಗೊಂದಲ ಹಾಗೂ ವಿವಾದ ಸೃಷ್ಟಿ ಮಾಡಿಕೊಂಡ ರಾಜಕೀಯ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಈಗ ಮತ್ತೆ ರಾಜ್ಯ ಬಿಜೆಪಿಯ ಪಡಸಾಲೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರ ನಿಧಾನಕ್ಕೆ ಮುನ್ನೆಲೆಗೆ ಬಂದಿದೆ. 

ಹೌದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ಹೈಕಮಾಂಡ್ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ನಳೀನ್ ಕುಮಾರ್ ಕಟೀಲ್ ಅವರ ಹೆಗಲಿಗೆ ಹೊರಸಿದ್ದಾಗಲೇ ಯಡಿಯೂರಪ್ಪ ಒಳಗೊಳಗೆ ಮುನಿಸಿಕೊಂಡಿದ್ದ ವಿಚಾರ ನಿಮಗೆ ಗೊತ್ತಿರದೇ ಇಲ್ಲ ಬಿಡಿ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಮಗ ವಿಜಯೇಂದ್ರ ಅವರ ಪಾಲಿಗೆ ದೊರಕಿಸಿ ಕೊಡಬೇಕು ಎಂಬ ಬಯಕೆ ಮಾನ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರಲ್ಲಿತ್ತು, ಆದರೇ, ದುರಾದೃಷ್ಟವೋ ಎಂಬ0ತೆ ರಾಜಕೀಯದಲ್ಲಿ ಯುಡಿಯೂರಪ್ಪನವರ ಕನಸುಗಳೆಲ್ಲಾ ಅಲ್ಲಿಂದಾದಿಯಾಗಿ ಒಂದೊ0ದೇ ವಿಫಲವಾಗುತ್ತಲೇ ಬಂತು. ಅಷ್ಟಾಗಿಯೂ ವಿಜಯೇಂದ್ರ ಯಡಿಯೂರಪ್ಪ ರಾಜ್ಯದಲ್ಲಿ ಸೂಪರ್ ಸಿಎಂ ಎಂಬ ಹಾಗೇ ಕಾರ್ಯ ನಿರ್ವಹಿಸುತ್ತಿದ್ದರ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಒಳ ಬೇಗುದಿ ಆರಂಭವಾಗಿತ್ತು. ಯಡಿಯೂರಪ್ಪರಿಗಿಂತ ವಿಜಯೇಂದ್ರ ಅವರದ್ದೇ ಪ್ರಭಾವ ಜಾಸ್ತಿಯಿತ್ತು ಎಂಬ ವಿರೋಧದ ಮಾತು ರಾಜ್ಯ ಬಿಜೆಪಿಯಲ್ಲೇ ಕೇಳಿ ಬಂದಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆದರೂ, ಯಡಿಯೂರಪ್ಪ ತಮ್ಮ ಮಗನನ್ನು ಹೇಗಾದರೂ ಮಾಡಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ವಿಪರೀತ ಪ್ರಯತ್ನ ಪಟ್ಟಿದ್ದರು.  ಮಾಜಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಸಿ. ಎಂ ಉದಾಸಿ ನಿಧನದ ಕಾರಣದಿಂದಾಗಿ ತೆರವುಗೊಂಡಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಟಿಕೇಟ್ ನನ್ನು ತಮ್ಮ ಮಗನಿಗೆ ಕೊಡಿಸಬೇಕು ಎಂಬ ಪ್ರಯತ್ನವನ್ನು ಬಿಎಸ್ ವೈ ಪಟ್ಟಿದ್ದರೂ, ಅದು ಕೂಡ ಫಲಿಸಲಿಲ್ಲ. ವಿಜಯೇಂದ್ರ ಒದ್ದಾಡಿದ್ದರೂ ನಿರೀಕ್ಷೆ ಹುಸಿಯಾಯಿತು. ಹಾನಗಲ್ ವಿಧಾನಸಭಾ ಕ್ಷೇತ್ರದ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದರಾದರೂ ಎಲ್ಲವೂ ಅದಲು ಬದಲಾಯಿತು. ಮಂತ್ರಿ ಪಟ್ಟದ ಕನಸು ಭಗ್ನವಾಯಿತು. ಈಗ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡ ನಂತರವ0ತೂ ರಾಜ್ಯಾಧ್ಯಕ್ಷ ಬದಲಾವಣೆಯ ಚರ್ಚೆ ಹುಟ್ಟಿದ್ದು, ಆ ಸ್ಥಾನಕ್ಕೆ ವಿಜಯೇಂದ್ರ ಕಣ್ಣಿಟ್ಟಿದ್ದಾರೆ, ಮಾತ್ರವಲ್ಲದೇ, ಅಧಿಕಾರದಲ್ಲಿ ಇಲ್ಲದಿದ್ದರೂ ಯಡಿಯೂರಪ್ಪ ತಮ್ಮ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದಕ್ಕೆ ಪ್ರಭಾವ ಬೀರುತ್ತಿದ್ದಾರೆ ಎಂಬ ಗುಸುಗುಸು ಮಾತು ಕೇಳಿ ಬರುತ್ತಿದೆ. 

ಬಿಜೆಪಿ ಹೈಕಮಾಂಡ್ ಗೆ ಸಮುದಾಯವೇ ಸಮಸ್ಯೆ : ರಾಜ್ಯ ಬಿಜೆಪಿಯ ಜನಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಕೂಡ ಹೌದು ಯಡಿಯೂರಪ್ಪ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಸ್ವಾಮಿಜಿಗಳು ಯಡಿಯೂರಪ್ಪ ಪರವಾಗಿ ವಹಿಸಿಕೊಂಡು ಬೀದಿಗಿಳಿದು ಮುಖ್ಯಮಂತ್ರಿ ಬದಲಾವಣೆ ಸಲ್ಲ ಎಂದು ಪ್ರಭಾವ ತೋರಿಸಿದ್ದೆಲ್ಲಾ ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಗೂ ಕೂಡ ಬಿಸಿ ಮುಟ್ಟಿಸಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೇ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಮಣಿಯದೇ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಯಡಿಯೂರಪ್ಪ ತಮ್ಮ ಸಮುದಾಯವನ್ನು ಬೆಳೆಸಿದ ನಾಯಕ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮದೂಗುವ ಮತ್ತು ಪ್ರಭಾವ ಹೊಂದಿರುವ ಇನ್ನೊಬ್ಬ ಲಿಂಗಾಯತ ನಾಯಕ ರಾಜ್ಯದಲ್ಲಿ ಇಲ್ಲ ಎಂದರೇ ತಪ್ಪಿಲ್ಲ. ಹಾಗಾಗಿ ಈ ಸಮುದಾಯದ ವಿಚಾರ ಬಿಜೆಪಿ ಹೈಕಮಾಂಡ್ ಗೆ ಒಂದು ರೀತಿಯಲ್ಲಿ ಮುಗಿಯದ ಸಮಸ್ಯೆಯಂತಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಇಳಿಸಿದ್ದು ಲಿಂಗಾಯತ ಸಮುದಾಯಕ್ಕೆ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಯಡಿಯೂರಪ್ಪರ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಅದೇ ಸಮುದಾಯದ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೈಕಮಾಂಡ್ ನೇಮಕ ಮಾಡಿದೆಯಾದರೂ, ಲಿಂಗಾಯತ ಸಮುದಾಯಕ್ಕೆ ತೃಪ್ತಿಯಿಲ್ಲ. ಆ ರೀತಿಯಲ್ಲಿ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಓಲೈಸಿಕೊಂಡಿದ್ದಾರೆ. ಯಡಿಯೂರಪ್ಪ ಮಾತಿಗೆ ಇಲ್ಲ ಎಂದು ಲಿಂಗಾಯತ ಸಮುದಾಯ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ವಯಸ್ಸಿನ ಕಾರಣಕ್ಕೆ ಮತ್ತೆ ಯಡಿಯೂರಪ್ಪ ಅವರಿಗೆ ಅಧಿಕಾರ ದೊರಕದಿದ್ದರೂ, ಅವರ ಮಗನಿಗೆ ಸ್ಥಾನ ಸಿಗಬೇಕು ಎಂಬ ದೃಷ್ಟಿಯಿಂದ ಸಮುದಾಯದ ಬೆಂಬಲ ಪಡೆಯದೇ ಇರುವುದಿಲ್ಲ. ಆ ಎಲ್ಲಾ ಕಾರ್ಯಗಳಿಗೆ ಈಗಾಗಲೇ ನಾಂದಿ ಸಿಕ್ಕಿದೆ ಎಂಬ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮತ್ತು ತಂದೆಯವರ ಕಾಲವಾದ ಮೇಲೂ ಲಿಂಗಾಯತ ಸಮುದಾಯದ ಓಲೈಕೆ ರಾಜಕಾರಣವನ್ನು ಪುತ್ರ ವಿಜಯೇಂದ್ರ ಯಡಿಯೂರಪ್ಪ ಮುಂದುವರಿಸಿಕೊ0ಡು ಹೋಗುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ಬಿಜೆಪಿಗೆ ಕರ್ನಾಟಕದಲ್ಲಿ ಯಾವುದೇ ವಿಚಾರದಲ್ಲಿ ಮುನ್ನಡೆಯುವುದಕ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎಂದು ಕಾಣಿಸುತ್ತಿದೆ.    

ಹಾನಗಲ್ ಸೋಲು : ವಿಜಯೇಂದ್ರಗೆ ಲಾಭ ..?: ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಕಂಡ ಸೋಲಿಗೆ ರಾಜ್ಯದ ಬಿಜೆಪಿ ನಾಯಕತ್ವದ ಬಗ್ಗೆ ಹೈಕಮಾಂಡ್ ತುಸು ಮುನಿಸಿಕೊಂಡ0ತೆ ಕಾಣಿಸುತ್ತಿದೆ. ಮಧ್ಯ ಪ್ರದೇಶ, ತೆಲಂಗಾಣ, ಅಸ್ಸಾಂ ಇನ್ನಿತರ ಕಡೆಗಳಲ್ಲಿನ ಚುನಾವಣೆಗಳಲ್ಲಿನ ಗೆಲುವಿಗೆ ಕೇಂದ್ರ ಶುಭಾಶಯ ಹೇಳಿದೆ. ಆದರೇ, ಕರ್ನಾಟಕದ ವಿಚಾರಕ್ಕೆ ಶುಭಾಶಯಗಳು ಇಲ್ಲವೇ ಇಲ್ಲ. ಇದು ಕರ್ನಾಟಕದ ರಾಜ್ಯ ಬಿಜೆಪಿಯ ಬಗ್ಗೆ ಅಸಮಾದಾನವನ್ನು ಸೂಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಾದ ಸೋಲಿಗೆ ಮಾಧ್ಯಮಗಳೆದುರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಸಾಮೂಹಿಕ ನಾಯಕತ್ವ” ಇಲ್ಲಿದ್ದಿದ್ದು ಎಂದು ಹೇಳಿ ಜಾರಿಕೊಂಡರೂ, ಹೈಕಮಾಂಡ್ ಕೇಳಿದ ಪ್ರಶ್ನೆಗೆ ಸಿಎಂ ಹೈಕಮಾಂಡ್ ಗೆ ಸಲ್ಲಿಸಿರುವ ಉಪ ಚುನಾವಣೆಯ ಸಂಪೂರ್ಣ ಕಾರ್ಯವೈಖರಿಯ ವರದಿ ಕೆಲವರ ಪಾಲಿಗೆ ಮುಳುವಾಗಲಿದೆಯೇ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಹಾನಗಲ್ ವಿಧಾನಸಭಾ ಕ್ಷೇತ್ರ ಹೇಳಿಕೇಳಿ ಪಂಚಮಸಾಲಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶ. ಸುಮಾರು ೬೦,೦೦೦ಕ್ಕೂ ಅಧಿಕ ಮತದಾರರು ಪಂಚಮಸಾಲಿ ಸಮುದಾಯದವರೇ ಆಗಿದ್ದಾರೆ. ಆದರೇ, ರಾಜಕೀಯದ ಸಹಜ ಸಮುದಾಯದ ಓಲೈಕೆಗೆ ರಾಜ್ಯದ ಪ್ರಮುಖ ಆ ಸಮುದಾಯದ ನಾಯಕರೇ ಹಾನಗಲ್ ವಿಧಾನಸಭಾ ಉಪ ಚುನಾವಣೆಗೆ ಸಂಬ0ಧಿಸಿದ0ತೆ ಮೌನವಾಗಿರುವುದೇ ಸೋಲಿಗೆ ಕಾರಣವಾಗಿದೆಯಾ..? ಎಂಬ ಮತ್ತೊಂದು ಪ್ರಶ್ನೆಯನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದ ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ, ಜಗದೀಶ್ ಶೆಟ್ಟರ್ ಚುನಾವಣೆಯ ಪ್ರಚಾರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಡಿಸಿಕೊಳ್ಳಲಾಗದ ಚಕ್ರವ್ಯೂಹದೊಳಗೆ ಸಿಲುಕಿಸಿದ ಹಾಗಾಯ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇನ್ನು, ಹಾನಗಲ್ ವಿಚಾರಕ್ಕೆ ಸಂಬ0ಧಿಸಿದ0ತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಯಾವುದೇ ಲಾಭ ಆಗಿಲ್ಲ ಎಂಬ ಅತೃಪ್ತಿಯ ಮಾತುಗಳು ಕಟೀಲ್ ವಿರುದ್ಧ ಈಗ ಕೇಳಿ ಬರುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತಾಡಿದ್ದಾರೆ ಎಂಬ ಆಡಿಯೋ ಗೂ ಹಾಗೂ ಈ ಹಾನಗಲ್ ವಿಚಾರಕ್ಕೆ ಎಲ್ಲೋ ಒಂದು ಕಡೆಯಲ್ಲಿ ಲಿಂಕ್ ಆದ ಹಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿದೆ. ಈ ದೂರು ಯಡಿಯೂರಪ್ಪ ಅವರ ಪರ ಬಣದಿಂದಲೇ ಕೇಳಿಬರುತ್ತಿರುವುದರಿಂದ ಅಧಿಕಾರದಿಂದ ಹೊರಗೆ ಇದ್ದರೂ ಬಿಎಸ್ ವೈ ಪ್ರಭಾವ ಇನ್ನೂ ಬಿಜೆಪಿಯಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇತ್ತ, ಈ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪ ಅವರ ಋಣ ಬೊಮ್ಮಾಯಿ ಅವರಿಗೆ ಇರುವುದರಿಂದ ಯಡಿಯೂರಪ್ಪ ವಿರುದ್ಧವಾಗಿಯೂ ಬೊಮ್ಮಾಯಿ ನಡೆದುಕೊಳ್ಳುವ ಹಾಗಿಲ್ಲ. ಅತ್ತ, ರಾಜ್ಯಾಧ್ಯಕ್ಷರ ವಿರುದ್ಧದ ಧ್ವನಿಯನ್ನೂ ಹೊರಹಾಕುವಂತಿಲ್ಲ. ಈ ಎಲ್ಲಾ ಮೈನಸ್ ಪಾಯಿಂಟ್ ಗಳನ್ನು ವಿಜಯೇಂದ್ರ ಸಾಫ್ಟ್ ಆಗಿ ಲಾಭ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿಯೇ ಕೇಳಿಬರುತ್ತಿದೆ.

ಕಟೀಲ್ ಗೆ ಆಡಿಯೋ ತಂದ ಆಪತ್ತು..?! : ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು  ಮಾತಾಡಿದ್ದು ಎಂದು ಹೇಳಲಾಗಿದ್ದ ಆಡಿಯೋ ವೈರಲ್ ಆದದ್ದು, ರಾಜ್ಯ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದಿದ್ದ0ತೂ ಸುಳ್ಳಲ್ಲ. ಆ ಸಮಸ್ಯೆಯನ್ನು ಹೈಕಮಾಂಡ್ ಗೆ ಬಹಳ ಸಾಫ್ಟ್ ಆಗಿಯೇ ನಿಭಾಯಿಸಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಅನಿವಾರ್ಯತೆಯನ್ನು ತಂದೊಡ್ಡಿತು. ಆ ನಂತರ ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಅವರ ಕಾರ್ಯಚಟುವಟಿಕೆಗಳು ಹಾಗೂ ಹಾನಗಲ್ ಉಪ ಚುನಾವಣೆಯ ವಿಚಾರ ಎಲ್ಲವೂ ಸೇರಿ ಹೈಕಮಾಂಡ್ ಗೂ ಕೂಡ ಕಟೀಲ್ ಮೇಲೆ ಅಸಮಾಧಾನ ಇರುವುದು ನೇರವಾಗಿ ಕಾಣಿಸುತ್ತಿದೆ. ಇದು ಬಹುಶಃ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಆಪತ್ತು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. 

ಇನ್ನು, ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರದ ಬಗ್ಗೆ ಹೈಕಮಾಂಡ್ ಕೂಡ ಪ್ಲ್ಯಾನಿಂಗ್ ನಲ್ಲಿದ್ದು, ರಾಜ್ಯದ ವೈಬ್ರೆಂಟ್ ನಾಯಕನೋರ್ವನಿಗೆ ರಾಜ್ಯ ಬಿಜೆಪಿಯ ಹೊಣೆಗಾರಿಕೆಯನ್ನು ನೀಡಬೇಕು ಎಂಬ ಅಂದಾಜಿನಲ್ಲಿದೆ. ಏನೇ ಆದರೂ, ಲಿಂಗಾಯತ ಸಮುದಾಯವನ್ನು ತೊರೆದು ಹೈಕಮಾಂಡ್ ಮುಂದೆ ಹೋಗುವ ಹಾಗೆ ಖಂಡಿತ ಸಾಧ್ಯವಿಲ್ಲ. ಲಿಂಗಾಯತ ಸಮುದಾಯದೊಂದಿಗೆ ಹಿಂದುಳಿದ ಸಮುದಾಯಗಳ ಮತದಾರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಒಬ್ಬ ಪ್ರಭಾವಿ ನಾಯಕನಿಗೆ ರಾಜ್ಯಾಧ್ಯಕ್ಷ ಹೊಣೆಗಾರಿಕೆಯನ್ನು ಹೈಕಮಾಂಡ್ ಹೊರಿಸಬೇಕಾಗಿದೆ. ಇನ್ನು, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ವೈ ಅವರನ್ನು ಹೊರತಾಗಿ ಚುನಾವಣೆಯನ್ನು ಎದುರಿಸುವುದಕ್ಕೆ ಸದ್ಯಕ್ಕಂತೂ ಬಿಜೆಪಿಗೆ ಸಾಧ್ಯವಿಲ್ಲ ಎಂಬುವುದು ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ. ರಾಜ್ಯದಲ್ಲಿ ಯಾವುದೇ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಅಸಮಾಧಾನ ಉಂಟಾಗುವ ಯಾವುದೇ ಬೆಳವಣಿಗೆ ಆಗದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವುದು ಮುಖ್ಯಮಂತ್ರಿ ಬದಲಾವಣೆಯ ಸಂದರ್ಭದಲ್ಲೇ ಗೊತ್ತಾಗಿದೆ. ಇನ್ನು ಮುಂದೆಯೂ, ಯಡಿಯೂರಪ್ಪ ಅವರ ಕಾಲದವರೆಗೂ ಕೂಡ ಯಡಿಯೂರಪ್ಪರನ್ನು ನಿರ್ಲಕ್ಷಿಸಿ ಹೋಗುವುದಕ್ಕೆ ಸಾಧ್ಯವಿಲ್ಲ. ಶೀಘ್ರದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಈಗ ಮುನ್ನೆಲೆಯಲ್ಲಿದ್ದು, ಹೊಸ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಿಸಿದರೇ, ಅದು ಕೂಡ ಯಡಿಯೂರಪ್ಪರಿಗೆ ಸಮಾಧಾನ ತರುವ ಹಾಗೆಯೇ ಇರಲಿದೆ ಎಂಬ ವಿಶ್ಲೇಷಣೆ ಮಾಡಬಹುದಾಗಿದೆ. ಎನ್ನುವಲ್ಲಿಗೆ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ ಯಡಿಯೂರಪ್ಪ ಪ್ರಯತ್ನದಲ್ಲಿದ್ದಾರೆ ಎನ್ನುವುದಂತೂ ಸತ್ಯ. 

ಒಟ್ಟಿನಲ್ಲಿ, “ನಾಯಕತ್ವದ” ಅಸಮಾಧಾನ ಇನ್ನೂ ರಾಜ್ಯ ಬಿಜೆಪಿಯಲ್ಲಿದ್ದು, ರಾಜ್ಯದ ಬಿಜೆಪಿಯ ಹೊಸ ಸಾರಥಿ ಯಾರಾಗ್ತಾರೆ..? ಅವರ ತಂಡ ಹೇಗೆ ರಾಜ್ಯದಲ್ಲಿ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂಬುವುದರ ಬಗ್ಗೆ ಸದ್ಯದ ಕುತೂಹಲವಾಗಿದೆ. 

-ಶ್ರೀರಾಜ್ ವಕ್ವಾಡಿ        


No comments:

Post a Comment