ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಶೈಲಿಯಲ್ಲಿ ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರೆನ್ನಿಸಿಕೊಂಡವರು ಇವರು. ವೈದೇಹಿ ಎಂಬ ಕಾವ್ಯನಾಮದಿಂದಲೇ ಸಾಹಿತ್ಯಲೋಕದಲ್ಲಿ ಹೆಸರಾದವರು. ಕುಂದಾಪುರ ಮೂಲದ ವೈದೇಹಿಯವರ ಬರಹಗಳು ಸಾಹಿತ್ಯ ವಲಯದಲ್ಲಿ, ಸಾಮಾಜಿಕ ವಲಯದಲ್ಲಿ ಪ್ರಭಾವಿಸಿದ ಪರಿ ವಿಭಿನ್ನ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವುದು ಇವರ ಹೆಚ್ಚುಗಾರಿಕೆ. ಕಥೆ, ಕಾವ್ಯ, ಕಾದಂಬರಿ, ಜೀವನ ಕಥನ, ಅನುವಾದ, ಮಕ್ಕಳ ನಾಟಕ, ಪ್ರಬಂಧಗಳು, ಸಂಪಾದಿತ ಕೃತಿ..ಹೀಗೆ ಹತ್ತು ಹಲವು. ವೈದೇಹಿಯವರ ಅನೇಕ ಕಥೆಗಳು ಇಂಗ್ಲೀಷ್, ಮರಾಠಿ, ಗುಜರಾತಿ, ತೆಲುಗು, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಿಗೆ ತರ್ಜುಮೆಗೊಂಡಿವೆ. ಇವರ ಕಥೆಗಳನ್ನಾಧರಿಸಿ 'ಗುಲಾಬಿ ಟಾಕೀಸ್', 'ಅಮ್ಮಚ್ಚಿಯೆಂಬ ನೆನಪು' ಎಂಬ ಎರಡು ಸಿನೆಮಾಗಳು ತೆರೆಕಂಡಿವೆ. ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೊಳಗೊಂಡು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವವೂ ಲಭಿಸಿವೆ ಎನ್ನುವುದು ವಿಶೇಷ. ನಾಡು ಕಂಡ ಅಗ್ರಮಾನ್ಯ ಲೇಖಕಿ ವೈದೇಹಿಯವರ ಅಂತರಾಳ ತೆರೆದಿಡುವ ಪ್ರಯತ್ನ ಈ ಸಂದರ್ಶದಿಂದ ನಿಮಗಾಗಿ..
ವಸಂತಿ ಜಾನಕಿಯಾಗಿ, ಜಾನಕಿ ವೈದೇಹಿಯಾಗಿ ಬದಲಾಗಿದ್ದು ಹೇಗೆ..?
ವಸಂತಿ ಅಮ್ಮನಿಂದ, ಜಾನಕಿ ಅಪ್ಪನಿಂದ, ವೈದೇಹಿಯಾಗಿದ್ದು ಸುಧಾ ಪತ್ರಿಕೆಯವರಿಂದ. ‘ವೈದೇಹಿ’ ನನಗೆ ಇಷ್ಟವಾಯ್ತು. ಹೀಗೆ ಈಗ ವೈದೇಹಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಇರುವೆ.
ನಿಮ್ಮ ಬಹುತೇಕ ಎಲ್ಲಾ ಸಾಹಿತ್ಯ ಕೃತಿಗಳಲ್ಲಿ ಕುಂದಾಪುರ ಕನ್ನಡ ಭಾಷೆಯೊಂದಿಗೆ ಕುಂದಾಪುರದ ಸ್ಥಿತಿಗತಿಯನ್ನೂ ತೋರ್ಪಡಿಸಿದ್ದೀರಿ. ಅಲ್ಲಿಯೇ ನೀವು ವಿಶೇಷವಾಗಿ ಕಾಣುವುದು...
ಹೌದು, ನನ್ನ ಸಾಹಿತ್ಯದಲ್ಲಿ ನಾನು ಕಂಡ ಬದುಕಿನ ವಿವಿಧ ಮಗ್ಗುಲುಗಳನ್ನು ನಾನು ಬೆಳೆದು ಬಂದ ನೆಲದ ಭಾಷೆಯಲ್ಲಿ (ಗಮನಿಸಿ: ಅದು ಅಗತ್ಯ ಕಂಡಲ್ಲಿ ಮಾತ್ರ) ಹೇಳಲು ಯತ್ನಿಸಿದ್ದೇನೆ. ಭಾಷೆ ಒಂದು ಕೃತಿರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ನಿಜ. ಆದರೆ ಕೇವಲ ಭಾಷೆ ಬಳಸಿದ್ದರಿಂದ ಮಾತ್ರ ಅಲ್ಲ, ಅಲ್ಲಿರುವ ಕಥಾವಸ್ತು ಏನು ಮತ್ತು ಅದು ಆ ಭಾಷೆಯ ಮೂಲಕ ಹೇಗೆ ಅಭಿವ್ಯಕ್ತಿಗೊಂಡಿದೆ ಎನ್ನುವುದು ಮುಖ್ಯ.
ಒಬ್ಬ ಬರಹಗಾರ/ಬರಹಗಾರ್ತಿಯರನ್ನು ಸಾಹಿತ್ಯದಲ್ಲಿ ಗುರುತಿಸುವಲ್ಲಿ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತದೆ..?
ಪ್ರಕಾರಗಳು ಒಬ್ಬ ಬರಹಗಾರನ ಬರಹದ ಆಕೃತಿಗಳು. ನನ್ನ ಪ್ರಕಾರ ಎಲ್ಲವೂ ಬರಹವೇ. ಮೂಲತಃ ನಾನೊಬ್ಬ ಕಥೆಗಾರ್ತಿ ಎನುವುದಕ್ಕಿಂತ, ಬರಹಗಾರ್ತಿ. ನಾನು ಬರೆದಿದ್ದರಲ್ಲಿ ಕೆಲವು ಕಥೆಗಳಾಗುತ್ತವೆ, ಕೆಲವು ಪ್ರಬಂಧಗಳಾಗುತ್ತವೆ, ಕಾವ್ಯಗಳಾಗುತ್ತವೆ. ನಾನು ಏನು ಹೇಳಲು ಹೊರಡುವೆನೋ ಅದರ ಆಕೃತಿಯನ್ನು ಅದೇ ನಿರ್ಧರಿಸುತ್ತದೆ ಎಂಬುದು ನನ್ನ ಅನುಭವ.
ನೀವು ಹೆಣ್ಣಿನ ನೋವು, ಸಂಕಟಗಳನ್ನೇ ಹೆಚ್ಚಾಗಿ ನಿಮ್ಮ ಕೃತಿಗಳಲ್ಲಿ ಬರೆದಿದ್ದೀರಿ. ಬರೆದಾದ ಮೇಲೆ ವಾಸ್ತವದಲ್ಲಿ ಇಷ್ಟೆಲ್ಲಾ ಉಂಟಾ ಅಂತ ನಿಮಗೆ ಅನ್ನಿಸಿದ್ದಿದೆಯಾ..?
ಅಯ್ಯೋ... ಅದರ ಎಷ್ಟೋ ಪಟ್ಟು ಹೆಚ್ಚಿಗೆ ಇವೆ. ಹೆಣ್ಣಿನ ಪಾತ್ರದ ಮೂಲಕ ಬದುಕಿನ ಬಗ್ಗೆ ಬರೆದರೆ ಯಾಕೆ ಹೆಣ್ಣಿನ ಬಗ್ಗೆಯೇ ಬರೆಯುತ್ತೀರಿ ಅಂತ ಕೇಳ್ತೀರಿ. ನಗೆ ಬರುತ್ತದೆ. ಲೇಖಕರು ಬರೆಯುವ ಅದೆಷ್ಟೋ ಕೃತಿಗಳು ಗಂಡಸರ ಬಗ್ಗೆಯೇ ಇವೆ. ಯಾರೂ ಕೂಡ ಗಂಡಸರಿಗೆ ಹೀಗೆ ಪ್ರಶ್ನೆ ಮಾಡುವುದಿಲ್ಲ. ವಾಸ್ತವವಾಗಿ ನಾನು ಬರೆಯುವುದು ಮನುಷ್ಯನ ಬದುಕನ್ನು, ಹೆಣ್ಣಿನ ಬದುಕನ್ನಲ್ಲ. ನಮ್ಮ ಅನುಭವಗಳನ್ನ ನಾವು ಬರೆಯುತ್ತೇವೆ. ನನ್ನ ಬದುಕಿನ ಮುಖ್ಯ ಕೇಂದ್ರದಲ್ಲಿರುವುದು ಮನುಷ್ಯಲೋಕದಲ್ಲೇ ಬೆಸೆದು ಹೋಗಿರುವ ಸ್ತ್ರೀ ಲೋಕ. ನಾನು ಕಂಡಿದ್ದು ಒಟ್ಟು ಬದುಕಿನಲ್ಲಿ ಒಳಗೊಂಡಿರುವ ಸ್ತ್ರೀಯರ ನೋವು ಸಂಕಟವನ್ನು. ನನ್ನ ಅನುಭವಕ್ಕೆ ತೀರಾ ಹೊರತಾದ ಪ್ರಪಂಚವನ್ನು ನಾನು ಹೇಗೆ ಬರೆಯುವುದಕ್ಕೆ ಸಾಧ್ಯ..? ಬರೀ ಕಲ್ಪನೆ ಮಾತ್ರದಿಂದ ಅಲ್ಲ, ವಾಸ್ತವಕ್ಕೆ ಕಲ್ಪನೆ ಸೇರಿಸಿದಾಗ ಅದು ಕಲಾಕೃತಿಯಾಗುತ್ತದೆ. ನಾನು ಬರೆದ, ಕಥೆಗಳು ಇಂದು ನನಗೇ ಗೊತ್ತಿಲ್ಲದ ಹಾಗೆ ದಾಖಲು ಮಾಡುತ್ತಿರುವುದು ನಾನು ಕಂಡ, ಅನುಭವಿಸಿದ ಮತ್ತು ಗ್ರಹಿಸಿದ ಹೆಣ್ಣಿನ ಜೀವನ ಗತಿಯನ್ನು ಅಂತ ಒಮ್ಮೊಮ್ಮೆ ಅನಿಸುತ್ತದೆ.
ಹೆಣ್ಣಿಗೆ ಧ್ವನಿಯಾಗಿ ಬರೆಯುವುದು ನಿಮಗೆ ಸುಲಭವಾಯ್ತಾ..?
ಹೋ! ‘ನಿಮ್ಮ ಸ್ವರದಲ್ಲಿ ಮಾತಾಡುವುದು ನಿಮಗೆ ಸುಲಭವಾಯ್ತಾ?’ ಅಂತ ಕೇಳಿದ ಹಾಗಿದು..! (ನಗೆ) ಎಲ್ಲರಿಗೂ ಅವರವರ ಧ್ವನಿ ಸಹಜ. ಇನ್ನೊಬ್ಬರ ಧ್ವನಿಯಲ್ಲಿ ನಾವು ಹೇಗೆ ಮಾತಾಡಲು ಸಾಧ್ಯ? ಪರಮ ಕಷ್ಟ ಅದು.
ನಿಮ್ಮ ಕಥೆಗಳನ್ನಾಧಾರವಾಗಿಟ್ಟುಕೊಂಡು ‘ಗುಲಾಬಿ ಟಾಕೀಸ್’, ‘ಅಮ್ಮಚ್ಚಿಯೆಂಬ ನೆನಪು’ ಎರಡು ಸಿನೆಮಾಗಳಾಗಿವೆ..
ಹ್ಞೂ, ಹೌದು. ನನ್ನ ಕಥೆಗಳನ್ನಿಟ್ಟುಕೊಂಡು ಸಿನೆಮಾ ಭಾಷೆಗೆ ತಕ್ಕಂತೆ ಅದರಲ್ಲಿರುವ ತಾತ್ವಿಕತೆಯನ್ನು ಬದಲಿಸದೆ ನಿರ್ದೇಶಕರುಗಳಾದ ಗಿರೀಶ್ ಕಾಸರವಳ್ಳಿ, ಚಂಪಾ ಶೆಟ್ಟಿಯವರು ಸಿನೆಮಾ ಮಾಡಿದ್ದಾರೆ, ಹಾಗಾಗಿ, ಸಿನೆಮಾಗಳಾಗಿಯೂ ಅವು ಜನರಿಗೆ ಹತ್ತಿರವಾದವು. ನನಗದು ಸಂತೋಷ.
ನೀವು ಅನುವಾದ ಸಾಹಿತ್ಯದಲ್ಲೂ ತೊಡಗಿಸಿಕೊಂಡವರು. ಮೂಲ ಕೃತಿಗೆ ಧಕ್ಕೆಯಾಗದೇ ಕೃತಿಯನ್ನು ಅನುವಾದಿಸುವ ಜವಾಬ್ದಾರಿ ಅನುವಾದಕರಿಗಿರುತ್ತದೆ. ಅನುವಾದಕ/ಅನುವಾದಕಿ ಎಷ್ಟು ಎಚ್ಚರಿಕೆಯ ಸೂಕ್ಷ್ಮ ಮನಸ್ಸಿನಿಂದಿರಬೇಕು..?
ಆ ಇಡೀ ಕೃತಿ ಏನು ಹೇಳುವುದಕ್ಕೆ ಹೊರಟಿದೆ ಎನ್ನುವುದನ್ನು ಅನುವಾದಕರಾದವರು ಮೊದಲು ನೋಡಿಕೊಳ್ಳಬೇಕು. ಆಮೇಲೆ ಅನುವಾದಿಸಬೇಕಾದ ಭಾಷೆಯಲ್ಲಿ ಹೇಗೆ ನಿರೂಪಿಸಲು ಸಾಧ್ಯ ಎನ್ನುವುದು ನೋಡಬೇಕು. ಅದು ಭಾವಾಂತರ ಅಲ್ಲ. ಮೂಲ ಲೇಖಕ/ಲೇಖಕಿ ಹೇಳುವುದನ್ನು ನಾವು ಅನುವಾದ ಮಾಡುತ್ತಿರುವ ಭಾಷೆಯಲ್ಲಿ ಹೇಗೆ ಹೇಳುತ್ತೇವೆ, ಹೇಗೆ ಸಂವಹನಕ್ಕೆ ಧಕ್ಕೆ ಆಗದಂತೆ ಹೇಳಬೇಕು ಎಂಬ ಚಿಂತನೆ ಮುಖ್ಯ. ಒಟ್ಟಿನಲ್ಲಿ ಅನುವಾದ ಮಾಡಬೇಕಾದ ಕೃತಿಯ ಜೀವಧ್ವನಿ ಅನುವಾದ ಮಾಡುವ ಭಾಷೆಯಲ್ಲಿ ಸ್ವಲ್ಪವೂ ಕುಂದದಂತೆ ಸೃಷ್ಟಿಸುವುದು ಅನುವಾದಕನ ಸವಾಲು.
ಕಾವ್ಯಕ್ಕೆ ಬಹಳ ದೊಡ್ಡ ತಾಕತ್ತಿದೆ. ಒಂದು ವಸ್ತುವನ್ನು ಸಂಕ್ಷಿಪ್ತವಾಗಿ ಕವಿ/ಕವಯತ್ರಿ ಹೇಳಬೇಕಾಗುತ್ತದೆ. ಓದುಗನಿಗೆ ಅರ್ಥವಾಗದೇ ಕಾವ್ಯ ಸೋಲುವುದು ಎಷ್ಟೋ ಸಂದರ್ಭಗಳಲ್ಲಿವೆ... ಕಾವ್ಯ ಹೇಗಿರಬೇಕು..?
ಕಾವ್ಯ ಎಲ್ಲರಿಗೂ ಸುಲಭದಲ್ಲಿ ತಲುಪುವಂತಹ ಮಾಧ್ಯಮವೇ ಅಲ್ಲ. ಕಾವ್ಯವನ್ನು ಓದುವವರಿಗೆ ಸೂಕ್ಷ್ಮ ಮನಸ್ಸೂ ಬೇಕು. ವಿಶೇಷ ಆಸಕ್ತಿಯೂ ಬೇಕು. ಕಾವ್ಯ ಒಂದು ಓದಿಗೆ ಓದುಗರಿಗೆ ತಲುಪುತ್ತದೆ ಎಂಬ ಭರವಸೆಯೂ ಇಲ್ಲ. ಕಾವ್ಯಮಾರ್ಗ ಎಂದರೆ ರೂಪಕದ ಮಾರ್ಗ. ಕವಿ ಕಾವ್ಯದ ಒಂದಲ್ಲ ಒಂದು ಸಾಲಿನಲ್ಲಿ ಓದುಗನಿಗೆ ಪ್ರವೇಶ ಕೊಟ್ಟಿರುತ್ತಾನೆ. ಆತ ಏನು ಹೇಳುವುದಕ್ಕೆ ಹೊರಟಿದ್ದಾನೆ ಎಂದು ಅರಿಯುವ ಶ್ರದ್ಧೆ ಇದ್ದಾಗ ಕವಿತೆಯೊಂದು ತೆರೆದುಕೊಳ್ಳುತ್ತದೆ. ನನಗೇನೋ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಕಾವ್ಯ ಪ್ರಕಾರವೇ ಅಂತಿಮವೆಂದು ಕಾಣುವುದು. ಭಾವ ಮತ್ತು ಭಾಷೆಗಳು ಲಯದಿಂದ ಕೂಡಿ ರೂಪಕದ ಮೂಲಕ ಸೃಷ್ಟಿಯಾದಾಗ ಅದರ ಚೆಲುವು ಬೇರೆಯೇ.
ಸ್ತ್ರೀ ಸಾಹಿತ್ಯ, ಪುರುಷ ಸಾಹಿತ್ಯ ಅಂತ ವಿಭಾಗಗಳಿವೆಯಾ..?
ಇಲ್ಲ. ಸಾಹಿತ್ಯದಲ್ಲಿ ಸ್ತ್ರೀ, ಪುರುಷ ಅಂತ ವಿಭಾಗಗಳಿಲ್ಲ. ಅದೆಲ್ಲ ಅಧ್ಯಯನಕ್ಕಾಗಿ ಮಾಡಿಕೊಂಡ ವಿಭಾಗಗಳು ಅಷ್ಟೆ. ಸ್ತ್ರೀ ಮತ್ತು ಪುರುಷ ಬರೆದ ಸಾಹಿತ್ಯದಲ್ಲಿ ಸ್ತ್ರೀ ವಿಶಿಷ್ಟ ಸಂವೇದನೆ ಮತ್ತು ಪುರುಷ ವಿಶಿಷ್ಟ ಸಂವೇದನೆ ಇರಬಹುದು. ಇರಬೇಕು. ಅದು ಸಹಜ.
ನಿಮ್ಮ ಸಾಹಿತ್ಯ ಕೃತಿಗಳಿಂದ ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಿದೆ ಅಂತ ಅನ್ನಿಸುತ್ತಿದೆಯಾ..?
ಬದಲಾಗಿದೆ ಅಂತ ಹೇಳುವುದಿಲ್ಲ. ಪ್ರಭಾವ ಬೀರಿರಲೂಬಹುದು. ಇದನ್ನೆಲ್ಲ ಖಂಡಿತವಾಗಿ ತೀರ್ಪಿನಂತೆ ಹೇಳಲು ಸಾಧ್ಯವಿಲ್ಲ. ಸಾಹಿತ್ಯ ಕೃತಿಗಳಿಂದ ದೀರ್ಘಕಾಲೀನ ಪರಿಣಾಮ ಸಾಧ್ಯ ಎಂಬ ನಂಬಿಕೆ ಮಾತ್ರ ಇದೆ.
ಇಂದಿಗೂ ‘ಹೆಣ್ಣು’ ಎರಡನೇ ದರ್ಜೆಯವಳು ಅಂತ ಅನ್ನಿಸುತ್ತಿದೆಯಾ..?
ಖಂಡಿತ. ಹಾಗೆ ಅನಿಸುವುದು ನಮಗಲ್ಲ. ಪುರುಷವರ್ಗಕ್ಕೆ. ಇವತ್ತಿಗೂ ಕೆಡುಗಣ್ಣಿನ ಗಂಡಿಗೆ ಒಬ್ಬ ಹೆಣ್ಣೆಂದರೆ ಹೆಣ್ಣೂ ಅಲ್ಲ, ಬರೀ ಅವಳ ಅಂಗಾಂಗ. ಇಂದಿಗೂ ಪ್ರಪಂಚ ಹೆಣ್ಣಿಗೂ ಒಂದು ಜೀವ ಅಂತ ನೋಡಿಲ್ಲ. ಎಲ್ಲೋ ಕೆಲಮಂದಿ ಮಹಿಳೆಯರು ವಿದ್ಯೆ, ಸ್ಥಾನ ಮಾನ ಗಳಿಸಿರಬಹುದು. ಆದರೆ ಇಂದಿಗೂ ಲಕ್ಷ ಲಕ್ಷ ಮಂದಿ ಮಹಿಳೆಯರು ದಿನ ನಿತ್ಯದ ಕಡು ಕಷ್ಟದ ಜೀವನದಲ್ಲಿದ್ದಾರೆ. ಅಲ್ಲಿನ ದೌರ್ಜನ್ಯ, ಹಿಂಸೆ ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೆಂಗಸರೂ ಪ್ರಜೆಗಳೇ ಎಂಬುದನ್ನೇ ಗ್ರಹಿಸದ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರ ನಮ್ಮದು. ಎಲ್ಲವನ್ನೂ ನಿಭಾಯಿಸುವ ಗುಣವಿರುವುದರಿಂದ ಹೆಣ್ಣು ಉಳಿದಿದ್ದಾಳೆ. ಮಾತ್ರವಲ್ಲ ಹೆಣ್ಣಿರುವ ಕಾರಣಕ್ಕೇ ಪ್ರಪಂಚವೂ ಉಳಿದಿದೆ.
ಪ್ರಶಸ್ತಿಗಳು ಒಬ್ಬ ಬರಹಗಾರ/ಬರಹಗಾರ್ತಿಯ ಮುಂದಿನ ಕೃತಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ..?
ಪ್ರಶಸ್ತಿ ಸಾರ್ವಜನಿಕವಾಗಿ ಒಬ್ಬರನ್ನು ಗುರುತಿಸುವ ಗೌರವಿಸುವ ಮಾರ್ಗ, ಅಷ್ಟೆ. ಸಮುದಾಯ ನಮ್ಮ ಕೆಲಸವನ್ನು ಮೆಚ್ಚುಗೆಯನ್ನು ಸೂಸುವ ಕ್ರಮವದು. ಜವಾಬ್ದಾರಿಯಿಂದಲೇ ಬರೆಯುವ ಬರಹಗಾರರಿಗೆ ಪ್ರಶಸ್ತಿ ಬಂದ ಮೇಲೆಯೇ ಜವಾಬ್ದಾರಿ ಹೆಚ್ಚಾಗಬೇಕೆಂದೇನಿಲ್ಲ. ನಿಜ, ಅದು ಸಂತೋಷ ಕೊಡಬಹುದು, ಆದರೆ ಅದರಲ್ಲಿ ಕೊಚ್ಚಿಹೋಗುವ ಪ್ರಮೇಯವೇ ಇಲ್ಲ.
ಸಾಹಿತ್ಯಕ್ಕೆ ಹೊಸದಾಗಿ ಪ್ರವೇಶ ಮಾಡುವವರಿಗೆ ನಿಮ್ಮ ಕಿವಿಮಾತು..?
ಏನಿಲ್ಲ. ಬರೆಯುವ ಆಸಕ್ತಿಯಿದ್ದಲ್ಲಿ ತುರ್ತಿದ್ದಲ್ಲಿ ಬರೆದು ಬಿಡುತ್ತಾರೆ. ಬರೆಯಬೇಕು. ನಾವು ‘ಹಾಗಲ್ಲ, ಹೀಗೆ’ ಎಂದು, ಕೇಳಿದಲ್ಲಿ ತಿಳಿಹೇಳಬಹುದು, ಅಷ್ಟೇ.
-ಶ್ರೀರಾಜ್ ವಕ್ವಾಡಿ