Thursday, March 5, 2020

‘ನೇಣು’ ಇನ್ನೂ ತಯಾರಾಗಿಲ್ಲ..!


ಗಲ್ಲು ಶಿಕ್ಷೆ ಜಾರಿಗೊಳಿಸಲು ಇಷ್ಟೊಂದು ವಿಳಂಬ ಮಾಡುತ್ತಿರುವುದಾದರೂ ಯಾಕೆ..? ರೇಪಿಸ್ಟ್ ಗಳ ಪರವಾಗಿಯೇ ಕೋರ್ಟ್ ನಿಲ್ಲುತ್ತಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲೂ ಹುಟ್ಟುತ್ತಿವೆ ಅಂತಾದರೇ, ಅದಕ್ಕೆ ಆಶ್ಚರ್ಯವೇನಿಲ್ಲ..!. ೨೦೧೨ರ ಡಿಸೆಂಬರ್ ೨೬ರಂದು ನಡೆದ ಅಮಾನುಷ ‘ನಿರ್ಭಯಾ’ ಪ್ರಕರಣವನ್ನು ಮತ್ತೆ ವಿವರಿಸುವ ಅಗತ್ಯವಿಲ್ಲ. ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದ ಘಟನೆಯದು. ಘಟನೆ ನಡೆದು ಬರೋಬ್ಬರಿ ೮ ವರ್ಷಗಳು ಕಳೆದು ಹೋದರೂ ತಪ್ಪಿತಸ್ಥರಿಗೆ ಇನ್ನೂ ಗಲ್ಲು ಶಿಕ್ಷೆ ನೀಡುವುದಕ್ಕೆ ಕೋರ್ಟ್ ಹಿಂದೇಟು ಹಾಕುವುದರ ಮೂಲಕ ಕ್ರಿಮಿನಲ್‌ಗಳ ಪರವಾಗಿ ನಿಲ್ಲುತ್ತಿದೆ ಎಂಬಂತೆ ಕಾಣುತ್ತಿದೆ. ದೆಹಲಿಯ ನಿರ್ಭಯಾ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಕೀಚಕರ ಮರಣ ದಂಡನೆ ಮೂರನೇ ಭಾರಿ ಮುಂದಕ್ಕೆ ದೂಡಲಾಗಿದೆ. ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ ೬ ಗಂಟೆಗೆ ನೇಣಿಗೆ ಕೊರಳೊಡ್ಡಬೇಕಿದ್ದ ನಾಲ್ವರ ಪೈಕಿಯಲ್ಲೊಬ್ಬ ಪವನ್ ಗುಪ್ತ, ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಸೋಮವಾರ ವಜಾ ಗೊಳಿಸಿತು, ಇದರ ಹಿಂದಿಗೆ ಆತ ರಾಷ್ಟ್ರಪತಿಗೆ ಕ್ಷಮದಾನ ಪತ್ರ ಸಲ್ಲಿಸಿದ ಕಾರಣವಾಗಿ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗಲ್ಲುಶಿಕ್ಷೆಯನ್ನು ಮುಂದಿನ ಆದೇಶದವರೆಗೆ ಮತ್ತೆ ಮುಂದೂಡಿದೆ.
ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದಕ್ಕೆ ಇಷ್ಟೊಂದು ಹಿಂದಡಿಯಿಡುತ್ತಿರುವುದು ಕಾನೂನಿನ ಅದ್ಯಾವ ಸಾಫ್ಟ್ ಕಾರ್ನರ್  ಧೋರಣೆಯೋ ಗೊತ್ತಿಲ್ಲ. ನಾಯಿ, ನರಿಗಳಿಗೆ ಹಾಕಬೇಕಾದ ಕೀಚಕರ ಅಂಗಾಗಳನ್ನು.. ಅಲ್ಲೊಬ್ಬ, ಮೈಕಲ್ ಎಫ್. ಸಲ್ಡಾನ್ಹಾ ಎನ್ನುವ ನಿವೃತ್ತ ನ್ಯಾಯಮೂರ್ತಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ‘ಗಲ್ಲು ಶಿಕ್ಷೆಯಾದರೇ’ ಅವರ ದೇಹಗಳ ಅಂಗಾಂಗವನ್ನು ದಾನ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುತ್ತಾನೆ.. ಎಂತಾದರೆ ಅಪಹಾಸ್ಯ ಅಲ್ಲದೇ ಮತ್ತೇನು..?
ಕಳೆದ ನವೆಂಬರ್ ೨೭ರಂದು ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರನ್ನು ಅತ್ಯಾಚಾರಕ್ಕೊಳಗಾದ ಯುವತಿಯ ಮೃತದೇಹ ಪತ್ತೆಯಾದ ಸ್ಥಳಕ್ಕೆ ತನಿಖೆಗೆ ಕೊಂಡೊಯ್ದಾಗ, ನಾಲ್ವರೂ ಕೂಡ ಪೋಲಿಸರ ವಿರುದ್ಧ ದಾಳಿ ನಡೆಸಿ, ಪರಾರಿಯಾಗಲು ಮುಂದಾದರು ಎಂಬ ಕಾರಣಕ್ಕೆ ವಿಶ್ವನಾಥ್ ಸಜ್ಜನರ್ ಮತ್ತವರ ಪೋಲಿಸ್ ತಂಡ ಎನ್‌ಕೌಂಟರ್ ನಡೆಸಿದ್ದನ್ನು ಇಡೀ ದೇಶಕ್ಕೆ ದೇಶವೇ ಹರ್ಷ ವ್ಯಕ್ತಪಡಿಸಿತು. ಅದಾದ ಬಳಿಕ, ಎಷ್ಟೋ ಸೋ ಕಾಲ್ಡ್ ಚಿಂತಕರು ಬೊಬ್ಬೆ ಹಾಕಿ ವಿರೋಧಿಸಿದರು. ಪರ, ವಿರೋಧ ಚರ್ಚೆಗಳಾದವು. ಮತ್ತೆ ನಿರ್ಭಯಾ ಪ್ರಕರಣ ಇದರೊಂದಿಗೆ ತೂಗು ಹಾಕಿಕೊಂಡಿತು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯನ್ನು ಕೊನೆಗೂ ಘೋಷಿಸಲಾಯ್ತು, ಕೋರ್ಟ್ ಗಲ್ಲಿಗೆ ದಿನಾಂಕ ನಿಗಧಿ ಮಾಡಿತಾದರೂ, ಮುಂದೂಡುವಿಕೆಯಲ್ಲೇ ಕಾಲ ಕಳೆಯಿತು. ಹೈದರಾಬಾದ್‌ನ ದಿಶಾ(ಹೆಸರು ಬದಲಾಯಿಸಲಾಗಿದೆ) ಅತ್ಯಾಚಾರ ಪ್ರಕರಣದ ತಪ್ಪಿತಸ್ಥರನ್ನು ಎನ್‌ಕೌಂಟರ್ ಮಾಡಿದಾಗ ತಪ್ಪು ಎಂದು ಬೊಬ್ಬೆಹಾಕಿದವರು, ಇಂದು ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ನಿಗಧಿಸಿದ ಗಲ್ಲು ಶಿಕ್ಷೆಯನ್ನು ಪದೇ ಪದೇ ಮುಂದೂಡುತ್ತಿರುವಾಗ ಎಲ್ಲಿ ಕಾಣೆಯಾಗಿದ್ದಾರೆ..? ಅತ್ಯಂತ ಅಮಾನವೀಯವಾಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಅಪರಾಧಿಗಳಿಗೆ ಗಲ್ಲಿಗೇರಿಸಲು ಇಷ್ಟೊಂದು ವಿಳಂಬವೇಕೆ..? ನೇಣಿಗೆ ಹಗ್ಗ ತಯಾರಿಸುತ್ತಿದ್ದಾರಾ..? ಆಕ್ರೋಶಭರಿತ ಪ್ರಶ್ನೆಗಳು ಮುಗಿದ ಮೇಲೆ ಉಳಿದ ಪ್ರಶ್ನೆ... ಗಲ್ಲು ಶಿಕ್ಷೆ ವಿಧಿಸಿದ ಮೇಲೆ ಅಪರಾಧಿಗಳಿಂದ ಕ್ಷಮಾದಾನ ಪತ್ರ ಸ್ವೀಕರಿಸುವುದು ಯಾವ ಸೀಮೆಯ ದೊಣ್ಣೆ ನಾಯಕನ ಕಾನೂನು..? 
-ಶ್ರೀರಾಜ್ ವಕ್ವಾಡಿ

No comments:

Post a Comment