(ಸಾಂಧರ್ಭಿಕ ಚಿತ್ರ)
ಪ್ರಚಾರದ ಆರಂಭಕ್ಕೂ ಮುನ್ನವೇ ಗೆಲುವಿನ ನಗೆ ಬೀರಿದ ರಾಜ್ಯದಲ್ಲೂ ಸೋತ ಕಾಂಗ್ರೆಸ್
ಲೋಕಸಭಾ ಚುನಾವಣೆಗೆ ಸೆಮಿಫೈನಲ್ ವಿಧಾನಸಭಾ ಚುನಾವಣೆ ಎಂದೇ ಹೇಳಲಾಗಿದ್ದ ಪಂಚರಾಜ್ಯ ಚುನಾವಣೆಗಳಲ್ಲಿ
ಮೂರು ಹಿಂದಿ ಭಾಷಿಕರ ರಾಜ್ಯಗಳಾದ ಮಧ್ಯಪ್ರದೇಶ,
ಛತ್ತೀಸ್ಗಢ ಮತ್ತು ರಾಜಸ್ಥಾನದ ಚುನಾವಣೆಯ ಫಲಿತಾಂಶಗಳು ಎಲ್ಲಾ ರಾಜಕೀಯ ಚಿಂತಕರು, ವಿಶ್ಲೇಷಕರು
ಮತ್ತು ಪತ್ರಕರ್ತರು ತಮ್ಮ ಚುನಾವಣೆಯ ಬಗ್ಗೆ ಅವರ ತಿಳುವಳಿಕೆಯನ್ನು ಪ್ರಶ್ನಿಸಿಕೊಳ್ಳುವಂತೆ
ಮಾಡಿದೆ. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಎರಡು ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ರಾಜಕೀಯ
ವಿಶ್ಲೇಷಣೆಗಳಾಗಿದ್ದವು, ಆದರೇ ಚುನಾವಣೆಯ ಫಲಿತಾಂಶ ಎಲ್ಲವನ್ನು ಅದಲು ಬದಲಾಗಿಸಿದೆ.
ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಮತ್ತು ರಾಜಸ್ಥಾನದಲ್ಲಿ ನೆಕ್
ಟು ನೆಕ್ ಚುನಾವಣಾ ಸಮರವಿರಲಿದೆ ಎಂದು ಭವಿಷ್ಯ ಹೇಳಲಾಗಿತ್ತು. ವಾಸ್ತವವಾಗಿ, ಒಂಬತ್ತು
ಎಕ್ಸಿಟ್ ಪೋಲ್ಗಳಲ್ಲಿ ಐದು, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಖಚಿತವಾದ ಗೆಲುವು
ಮತ್ತು ನಾಲ್ಕು ಕಾಂಗ್ರೆಸ್ಗೆ ಅನುಕೂಲಕರ ಗೆಲುವು ಸಿಗಲಿದೆ ಎಂದು ಹೇಳಲಾಗಿತ್ತು. ಛತ್ತೀಸ್ಗಢಕ್ಕೆ ಸಂಬಂಧಿಸಿದಂತೆ, ಬಹುತೇಕ ಎಲ್ಲಾ ಸಮೀಕ್ಷೆಗಳು ಭೂಪೇಶ್ ಬಘೇಲ್ ನೇತೃತ್ವದಲ್ಲಿ
ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದವು. ಕಾಂಗ್ರೆಸ್ ಸೋಲುತ್ತದೆ ಎಂದು ಯಾವ ಸಮೀಕ್ಷೆಯೂ ಊಹಿಸಿರಲಿಲ್ಲ. ಛತ್ತೀಸ್ಗಢದಲ್ಲಿ
ಮ್ಯಾಜಿಕ್ ನಂಬರ್ 46 ಇದ್ದಿದ್ದಾದರೂ ಕಾಂಗ್ರೆಸ್ಗೆ ಹತ್ತಿರಕ್ಕೂ ಸುಳಿಯುವುದಕ್ಕೆ ಆಗಿಲ್ಲ 35
ಕ್ಷೇತ್ರಗಳಲ್ಲಿ ಗೆಲ್ಲುವುದರ ಮೂಲಕ ತೃಪ್ತಿ ಪಟ್ಟುಕೊಂಡಿತು. ಇನ್ನು, ಬಹು ನಿರೀಕ್ಷಿತ ರಾಜಸ್ಥಾನ, ಕೆಲವು ಸಮೀಕ್ಷೆಗಳು ಬಿಜೆಪಿ ಗೆಲುವು ಸಾಧಿಸಲಿದೆ ಎಂದರೆ, ಇನ್ನು ಕೆಲವು ಸಮೀಕ್ಷೆಗಳು ಕಾಂಗ್ರೆಸ್ನಲ್ಲಿ ಆಂತರಿಕ ವೈಷಮ್ಯವಿದ್ದರೂ ಗೆಲುವು ಸಾಧಿಸಲಿದೆ ಎಂದು ಹೇಳಿದ್ದವು. ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸುಲಭ ಗೆಲುವು ಸಾಧಿಸುತ್ತದೆ ಎಂಬ
ಚರ್ಚೆ ಸುಳ್ಳಾಯಿತು ಮತ್ತು ರಾಜಸ್ಥಾನದಲ್ಲಿ
ಬಿಜೆಪಿಗೆ ಕಾಂಗ್ರೆಸ್ನನ್ನು ಮಣಿಸಲಿದೆ ಎಂಬ ಅಭಿಪ್ರಾಯ ಸತ್ಯವಾಯಿತು.
ಮಧ್ಯಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯವು ರಾಜ್ಯದಲ್ಲಿ
ಪಕ್ಷಕ್ಕೆ 230 ರಲ್ಲಿ
150 ಕ್ಕೂ
ಹೆಚ್ಚು ಕ್ಷೇತ್ರಗಳು ಗೆಲ್ಲಲಿದೆಯೆಂಬ ಭವಿಷ್ಯ ನುಡಿದ ಮೂರು ಎಕ್ಸಿಟ್ ಪೋಲ್ಗಳ
ಹೊರತುಪಡಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಕರ್ನಾಟಕದ
ವಿಧಾನಸಭಾ ಚುನಾವಣೆಯಂತೆಯೇ ನಡೆಯುತ್ತದೆ. ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳು, ಮದ್ಯಪ್ರದೇಶದಲ್ಲಿ
ಆರು ಕ್ಷೇತ್ರಗಳು ಹೆಚ್ಚು ಅಷ್ಟೇ. ಮ್ಯಾಜಿಕ್ ನಂಬರ್ ಕೂಡ ಹಾಗೆ, ರಾಜ್ಯಕ್ಕಿಂತ ಅಲ್ಲಿ ಮೂರು ಹೆಚ್ಚು
ಅಷ್ಟೇ. ಕರ್ನಾಟಕ ಚುನಾವಣೆಯಲ್ಲಿ ಯಾವ ಸ್ಟ್ರ್ಯಾಟೆಜಿ ಪಾಲಿಸಿ ಸೋತಿತ್ತೋ, ಅದನ್ನೇ ಮಧ್ಯಪ್ರದೇಶದಲ್ಲಿ
ಪ್ರಯೋಗಿಸಿ ಬಿಜೆಪಿ ಗೆದ್ದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ತನ್ನ ಫ್ರಂಟ್ಲೈನ್
ಲೀಡರ್ ಎಂದು ಬಿಂಬಿಸುವುದರಲ್ಲಿ ಬಿಜೆಪಿ ಹೈಕಮಾಂಡ್ ದೂರ ಸರಿದಿತ್ತಾದರೂ, ಕೊನೆಗೆ ಅವರನ್ನೇ ಮುಂದೆ
ಇಟ್ಟಿತು. ಬಹಳ ಪ್ರಮುಖವಾಗಿ, ಪ್ರಚಾರದ ಆರಂಭಕ್ಕೂ
ಮುನ್ನವೇ ಕಾಂಗ್ರೆಸ್ ಗೆಲುವಿನ ನಗೆ ಬೀರಿದ ರಾಜ್ಯವಿದು. ಬಿಜೆಪಿಯು ಸೋಲುವಂತಿದೆ ಮತ್ತು ರಾಜ್ಯದಲ್ಲಿ ಅವರ ಏಕೈಕ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ಸ್ಪರ್ಧಿಸುತ್ತಾರೆಯೇ
ಎಂದು ಖಚಿತವಾಗಿರಲಿಲ್ಲ. ಅವರನ್ನು ಕೇಂದ್ರಕ್ಕೆ ತೆಗೆದುಕೊಳ್ಳಬಹುದು ಮತ್ತು ಮಧ್ಯಪ್ರದೇಶದಲ್ಲಿ ಹೊಸ ನಾಯಕತ್ವ ಅಧಿಕಾರ ವಹಿಸಿಕೊಳ್ಳಬಹುದು ಎಂಬ
ಊಹಾಪೋಹವಿತ್ತು. ಆದರೇ, ಅದು ಯಾವುದೂ ಆಗಲಿಲ್ಲ. ಮಧ್ಯಪ್ರದೇಶದಲ್ಲಿ ಎಲ್ಲಾ ರಾಜಕೀಯ ಊಹಾಪೂಹಗಳನ್ನು
ಮೀರಿ ಫಲಿತಾಂಶ ಬಂತು. ಮಧ್ಯಪ್ರದೇಶದಲ್ಲಿನ ಬಿಜೆಪಿಯ ಐತಿಹಾಸಿಕ ಗೆಲುವಿನ
ಶ್ರೇಯಸ್ಸು ಈಗ ಅದೇ ದುರ್ಬಲ ಮುಖ್ಯಮಂತ್ರಿ ಎಂದು ಕರೆಸಿಕೊಂಡಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಲ್ಲುತ್ತದೆ.
ಗುಜರಾತ್ನಲ್ಲಿ ಭರ್ಜರಿ ಗೆಲುವಿನ ನಂತರ ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧದ ಅಲೆ
ಇದ್ದಿದ್ದರೂ ಬಿಜೆಪಿ ಐತಿಹಾಸಿಕ
ಗೆಲುವು ಸಾಧಿಸಿತು. ಗುಜರಾತ್ನಲ್ಲಿ
ಕಾಂಗ್ರೆಸ್ನ ಹೀನಾಯ ಸೋಲಿಗೆ ಆಮ್ ಆದ್ಮಿ ಪಕ್ಷದ(ಎಎಪಿ) ಸ್ಪರ್ಧೆಯನ್ನು
ದೂಷಿಸಬಹುದು, ಅಲ್ಲಿ ಆಪ್ ಬಿಜೆಪಿ ವಿರೋಧಿ ಮತಗಳನ್ನು ನಿರ್ದಯವಾಗಿ ವಿಭಜಿಸಿ ತನ್ನಡೆಗೆ ಸೆಳೆದುಕೊಂಡಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಅಂತಹ ಯಾವುದೇ ಕಾರಣವಿರಲಿಲ್ಲ. 18
ವರ್ಷಗಳ ಅಧಿಕಾರದ ನಂತರವೂ ಬಿಜೆಪಿ ಎರಡು ಅಥವಾ ಮೂರು ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು
ಸಾಧಿಸಲು ಸಾಧ್ಯವಾದರೆ, ಅದು
ಪವಾಡವಲ್ಲ ಆದರೇ, 2013ರ ಫಲಿತಾಂಶವನ್ನು ಈ ಫಲಿತಾಂಶದಲ್ಲಿ ನಾವು ಗಮನಿಸಬಹುದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ 114 ಸ್ಥಾನಗಳನ್ನು ಗೆದ್ದು ಸಿಂಗಲ್ ಲಾರ್ಜೆಸ್ಟ್ ಪಕ್ಷವಾಗಿ ಹೊರಹೊಮ್ಮಿತ್ತು. ಇಬ್ಬರು
ಸ್ವತಂತ್ರ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು. ಆದರೆ ಕಾಂಗ್ರೆಸ್ 2018ರ ಡಿಸೆಂಬರ್ 17ರಿಂದ 2020ರ ಮಾರ್ಚ್ 23ರವರೆಗೆ ಮಾತ್ರ ಅಧಿಕಾರದಲ್ಲಿತ್ತು.
ಅದಕ್ಕೆ ಕಾರಣ ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯ ಎದ್ದು
ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಶಿವರಾಜ್ ಸಿಂಗ್ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವಂತಾಗಿತ್ತು.
2023ರಲ್ಲಿ ಈಗ ಮತ್ತೆ ಹತ್ತು ವರ್ಷಗಳ ಹಿಂದಿನ ಫಲಿತಾಂಶ ಬಿಜೆಪಿಗೆ ಒಲಿದಿದೆ.(ಎರಡು ಕ್ಷೇತ್ರ ಕಡಿಮೆ,
2013ರಲ್ಲಿ ಬಿಜೆಪಿ 165 ಕ್ಷೇತ್ರಗಳನ್ನು ಗೆದ್ದಿತ್ತು)
ಇನ್ನು, ಛತ್ತೀಸ್ಗಢದಿಂದ ಕಾಂಗ್ರೆಸ್ಗೆ ದೊಡ್ಡ ಆಘಾತ ಅನುಭವಿಸಿತು. ಇಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿ
ಕಾಂಗ್ರೆಸ್ ಇದ್ದಿತ್ತು. ಸ್ಪರ್ಧೆಯಿಲ್ಲ ಮತ್ತು ಕಾಂಗ್ರೆಸ್ ಗೆಲುವು ಖಚಿತ
ಎನ್ನಲಾಗಿತ್ತು. ಛತ್ತೀಸ್ಗಢದ ಮಾದರಿಯ ಆಡಳಿತ ಮತ್ತು ರಾಜಕೀಯವನ್ನು ಇತರ
ರಾಜ್ಯಗಳಲ್ಲಿಯೂ ಪುನರಾವರ್ತಿಸಬೇಕು ಎಂಬ ಅಭಿಪ್ರಾಯ ಕಾಂಗ್ರೆಸ್ನಲ್ಲಿತ್ತು. ಆದರೇ, ನಂಬಿಕೆಯು ಬಹಳ ದುರ್ಬಲ ಅಡಿಪಾಯವನ್ನು ಹೊಂದಿದೆ
ಎಂದು ಫಲಿತಾಂಶಗಳು ತೋರಿಸುತ್ತವೆ.
ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಉತ್ತಮ ಸರ್ಕಾರ ನಡೆಸಿದ್ದು, ಮುಖ್ಯಮಂತ್ರಿ
ವಿರುದ್ಧ ಯಾವುದೇ ಅಸಮಾಧಾನ ಅಷ್ಟಾಗಿ ಇಲ್ಲ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೇ, ಕಾಂಗ್ರೆಸ್ ವಲಯದಲ್ಲಿ ಈ ಬಗ್ಗೆ ತುಸು ಸಂಶಯವಿದ್ದಿತ್ತು
ಎನ್ನುವುದು ಸತ್ಯ. ರಾಜಕೀಯ ವಲಯದ ನಿರೀಕ್ಷೆಯಂತೆ ಕಾಂಗ್ರೆಸ್ ಸೋತಿದೆ.
ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ರಾಜಸ್ಥಾನ ಕೇವಲ ಗೆಹ್ಲೋಟ್ ವರ್ಸಸ್ ಸಚಿನ್ ಪೈಲಟ್ ನಡುವಿನ ವೈಷಮ್ಯಗಳಲ್ಲೇ ಮುಳುಗಿತ್ತು, ಮಾದ್ಯಮಗಳಿಗೂ ಈ ವಿಚಾರ
ಗ್ರಾಸವಾಗಿತ್ತು. ರಾಜಸ್ಥಾನದ ಕಾಂಗ್ರೆಸ್ ನಾಯಕತ್ವಕ್ಕೆ ಹೇಗೆ ಪರಿಹಾರ
ಒದಗಿಸಬೇಕೆಂಬ ಮಾರ್ಗವೂ ಕಾಂಗ್ರೆಸ್ ಹೈಕಮಾಂಡ್ನಲ್ಲಿರಲಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಯೂ ಇರಲಿಲ್ಲ.
ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲಷ್ಟೇ ಗೆಲ್ಹೋಟ್ ಮತ್ತು
ಪೈಲೆಟ್ ನಡುವಿನ ವೈಷಮ್ಯಕ್ಕೆ ಪ್ಯಾಚ್-ಅಪ್ ಮಾಡಲಾಯಿತು. ಆದರೆ ಅದು ತುಂಬಾ
ತಡವಾಗಿತ್ತು. ರಾಜಸ್ಥಾನ ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಾಯಿಸುವ
ಇತಿಹಾಸವನ್ನು ಹೊಂದಿರುವುದರಿಂದ ಇಲ್ಲಿ ಕಾಂಗ್ರೆಸ್ ನಷ್ಟಕ್ಕೆ ಅನುಭವಿಸಿರುವುದಕ್ಕೆ ಗೆಹ್ಲೋಟ್ ಅವರನ್ನು ದೂಷಿಸಲು ಸಾಧ್ಯವಿಲ್ಲ. ವೈಯಕ್ತಿಕ ಪ್ರಭಾವ ಪಕ್ಷದ ಅವಕಾಶಗಳನ್ನು ಹಾಳುಮಾಡುತ್ತದೆ
ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಇಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಹಿಂದಿ ಮಾತನಾಡುವ ರಾಜ್ಯಗಳ
ಸೋಲು ಹೃದಯ ವಿದ್ರಾವಕವಾಗಿದ್ದರೆ, ತೆಲಂಗಾಣದಿಂದ ಕಾಂಗ್ರೆಸ್ ತುಸು
ಸಾಂತ್ವನ ಪಡೆಯಿತು. ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಪ್ರಾದೇಶಿಕ
ಪಕ್ಷ ಝಡ್ಪಿಎಂ ತನ್ನ ಪ್ರಾಬಲ್ಯವನ್ನು ತೋರಿಸಿದೆ. ಕಾಂಗ್ರೆಸ್ ಹಿಂದಿ ಮಾತನಾಡುವ ರಾಜ್ಯಗಳಲ್ಲಿ
ಸಂಪೂರ್ಣ ಪ್ರಾಬಲ್ಯ ಕಳೆದುಕೊಂಡಿದೆ ಎನ್ನುವುದಕ್ಕೆ ಖಂಡಿತ ಸಾಧ್ಯವಿಲ್ಲ. ಓಟ್ ಶೇರ್ ನಲ್ಲಿ ಬಿಜೆಪಿಗೆ
ಉತ್ತಮವಾದ ಫೈಟನ್ನೇ ನೀಡಿದೆ. ರಾಜ್ಯವಾರು ಓಟ್ ಶೇರ್ ಗಮನಿಸುವುದಾದರೇ, ರಾಜಸ್ಥಾನದಲ್ಲಿ ಶೇ 41.69ರಷ್ಟು
ಬಿಜೆಪಿ ಪಡೆದುಕೊಂಡರೇ, ಕಾಂಗ್ರೆಸ್ ಶೇ.39.53ರಷ್ಟು ಪಡೆದುಕೊಂಡಿದೆ. ಛತ್ತೀಸ್ಗಢದಲ್ಲಿ ಶೇ.46.27ರಷ್ಟು
ಬಿಜೆಪಿ, ಶೇ.42.23ರಷ್ಟು ಕಾಂಗ್ರೆಸ್ ಪಡೆದುಕೊಂಡಿದೆ, ಮಧ್ಯಪ್ರದೇಶದಲ್ಲಿ ಶೇ.48.55ರಷ್ಟು ಬಿಜೆಪಿ,
ಕಾಂಗ್ರೆಸ್ ಶೇ.40.40ರಷ್ಟು ಓಟ್ ಪಡೆದುಕೊಂಡಿದೆ. ತೆಲಂಗಾಣದಲ್ಲಿ ಶೇ.39.40ರಷ್ಟು ಕಾಂಗ್ರೆಸ್
ಪಡೆದುಕೊಂಡರೇ, ಬಿಜೆಪಿ ಶೇ.13.90ರಷ್ಟು ಪಡೆದುಕೊಂಡಿದೆ. ಇನ್ನು, ಮಿಜೋರಾಂನಲ್ಲಿ ಶೇ.20.82ರಷ್ಟು
ಕಾಂಗ್ರೆಸ್, ಶೇ. 5.06ರಷ್ಟು ಪಡೆದುಕೊಂಡಿದೆ. ಒಟ್ಟು ಗೆದ್ದ ಕ್ಷೇತ್ರಗಳ ಸಂಖ್ಯೆ ಹೆಚ್ಚು ಕಡಿಮೆಯಿರಬಹುದು,
ಆದರೇ, ಓಟ್ ಶೇರ್ ಬಹಳವೇನು ವ್ಯತ್ಯಾಸ ಕಾಣಿಸುತ್ತಿಲ್ಲ.
ಕಾಂಗ್ರೆಸ್ ಕಲಿಯಬೇಕಾದ ವಿಷಯಗಳು :
1. ಉತ್ತರ
ಭಾರತದಲ್ಲಿ ಬಿಜೆಪಿ ಅತ್ಯಂತ ಪ್ರಬಲವಾದ ಪಕ್ಷವೆಂದು ಸಾಬೀತಾಯ್ತು,
ಆದರೆ ಅದರ ಸಂಘಟನಾ ಶಕ್ತಿಯು ಅಸಂಬದ್ಧವಾಗಿದೆ. ಹಿಂದೆ ಜವಾಹರಲಾಲ್
ನೆಹರು-ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ಸಿನಂತೆಯೇ ಈಗ ಬಿಜೆಪಿ
ಹಿಂದುತ್ವದ ಬೆಂಬಲ ಮತ್ತು ಮೋದಿ ವರ್ಚಸ್ಸಿನ ನೇತೃತ್ವದ ಬಿಜೆಪಿ
ಉತ್ತರದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಮಾರ್ಪಟ್ಟಿದೆ.
2. ಬಿಜೆಪಿಯ
ಓಟವನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆ ಕಾಂಗ್ರೆಸ್ಗೆ ಇನ್ನೂ
ಸುಳಿವು ಸಿಕ್ಕಿಲ್ಲ. ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಗೆಲ್ಲುವ ಅವಕಾಶವಿದ್ದರೂ, ಎರಡೂ ರಾಜ್ಯಗಳನ್ನು ಕಳೆದುಕೊಂಡಿತ್ತು. ನರೇಂದ್ರ ಮೋದಿ ವರ್ಚಸ್ಸಿನ ಎದುರು ಏನೇ ತಂತ್ರಗಾರಿಕೆ ನಡೆಸಿದರೂ ವಿಫಲವಾಗುತ್ತಿರುವುದರ
ಬಗ್ಗೆ ಕಾಂಗ್ರೆಸ್ ಇನ್ನೂ ಹೆಣಗಾಡುತ್ತಿದೆ.
3. ಹಿಮಾಚಲ
ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ನ ಗ್ಯಾರೆಂಟಿ ಯೋಜನೆ ಕೆಲಸ ಮಾಡಿವೆ, ರಾಜಸ್ಥಾನ, ಛತ್ತೀಸ್ಗಢ
ಮತ್ತು ಮಧ್ಯಪ್ರದೇಶದಲ್ಲಿ ಏಕೆ ಕೆಲಸ ಮಾಡಲಿಲ್ಲ
? ಎನ್ನುವ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕಿದೆ. ನಾಯಕತ್ವ ಇಲ್ಲಿ ವಿಶ್ವಾಸ ಉಳಿಸಿಕೊಳ್ಳದೇ
ಇರುವುದೇ ಇಲ್ಲಿ ಕಾಂಗ್ರೆಸ್ಗೆ ಮುಳುವಾಯ್ತು.
4. ತಮ್ಮನ್ನು ಹಿಂದೂ ನಾಯಕರೆಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ನಾಯಕರು
ಮತದಾರರಲ್ಲಿ ನಂಬಿಕೆ ಗಳಿಸಲು ಸಾಧ್ಯವಾಗಿಲ್ಲ. ಹೆಚ್ಚೆಂದರೆ ಆ
ತಂತ್ರ ಮುಸ್ಲಿಂ ಪರ ಪಕ್ಷ ಎಂಬ ಗ್ರಹಿಕೆಯನ್ನು ಹೋಗಲಾಡಿಸಲು ಕಾಂಗ್ರೆಸ್ ಗೆ
ನೆರವಾಗುತ್ತದೆ ಅಷ್ಟೆ. ಬಿಜೆಪಿಯ ಅಸ್ತ್ರದ ಬಳಕೆ ಕಾಂಗ್ರೆಸ್ಗೆ ಪ್ರಯೋಜನಕ್ಕೆ ಬರುವುದಿಲ್ಲ
ಎಂಬುವುದನ್ನು ಅರಿತುಕೊಳ್ಳಬೇಕಿದೆ.
5. ಒಡೆದ ಮನೆಯಾಗಿ ಉಳಿದರೆ ಚುನಾವಣೆ ಗೆಲ್ಲುವುದನ್ನು ಮರೆಯಬೇಕು
ಎಂಬುದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಬೇಕಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ, ಪಕ್ಷದ ಹಿರಿಯ ನಾಯಕರು ಕಿರಿಯರಿಗೆ ಅವಕಾಶ ಕಲ್ಪಿಸಲು ನಿರಾಕರಿಸಿದರು.
ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್, ಭೂಪೇಶ್
ಬಾಘೇಲ್-ಟಿಎಸ್ ಸಿಂಗ್ ದೇವ್ ಮತ್ತು ಕಮಲ್ ನಾಥ್-ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ವೈಮಸ್ಸು
ಸಾರ್ವಜನಿಕ ವಲಯದಿಂದ ಅಳಿಸಿ ಹೋಗಿಲ್ಲ.
ಒಟ್ಟಿನಲ್ಲಿ, ಈ ಚುನಾವಣೆ ʼಇಂಡಿಯಾʼ ಮೈತ್ರಿಯ
ಕಣ್ಣು ತೆರೆಸುವಂತಿದೆ. ಒಗ್ಗಟ್ಟಿಲ್ಲದಿದ್ದರೆ ಮತ್ತು ಒಗ್ಗಟ್ಟಿನಿಂದ ಯಾವುದೇ ಪರ್ಯಾಯ ದೃಷ್ಟಿಕೋನದ ಬಗ್ಗೆ ಗಮನ
ಹರಿಸದಿದ್ದರೇ, 2024ರ ಲೋಕಸಭಾ ಚುನಾವಣೆಯನ್ನು ಮರೆತುಬಿಡುವುದು ಲೇಸು ಅಂತನ್ನಿಸ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ತುಂಬಾ ಶಕ್ತಿಶಾಲಿಯಾಗಿದೆ, ಒಗ್ಗಟ್ಟಾಗಿದೆ
ಎನ್ನುವುದನ್ನು ಕಾಂಗ್ರೆಸ್, ʼಇಂಡಿಯಾʼ ಮೈತ್ರಿ ಅಲ್ಲಗಳೆಯುವಂತಿಲ್ಲ. ʼಇಂಡಿಯಾʼ ತನ್ನ ಚೌಕಟ್ಟನ್ನು ಮೀರಿ ಯೋಚಿಸದಿದ್ದಲ್ಲಿ ಹೀನಾಯ ಸೋಲು
ಅನುಭವಿಸುವುದು ಖಚಿತ.
-ಶ್ರೀರಾಜ್ ವಕ್ವಾಡಿ






