Thursday, November 9, 2023

ದೇಶದ ಪ್ರಗತಿ 70 ಗಂಟೆಗಳ ಕೆಲಸದಲ್ಲಿಲ್ಲ…

 

ಅವಧಿಯೆ ಮುಖ್ಯವಾದರೇ, ಅವಧಿಗೆ ಸರಿಯಾದ ಸಂಬಳವೂ ಮುಖ್ಯ !

ಯುವಕರು ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂಬ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಈಗ ಸಾಮಾಜಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕತೆಗೆ ಹೋಲಿಸಿದರೇ, ದೇಶದ ಉತ್ಪಾದಕತೆ ಪ್ರಮಾಣ ಕಡಿಮೆ ಇದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ದೇಶದ ಯುವಕರು ಪ್ರತಿವಾರ   70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಮೂರ್ತಿ ಅವರ ಹೇಳಿಕೆಗೆ ಬೆಂಬಲ ಮತ್ತು ಟೀಕೆಗಳು ವ್ಯಕ್ತವಾಗಿವೆ. ಈ ಬೆಂಬಲ ಮತ್ತು ಟೀಕೆಗಳು ವ್ಯಕ್ತವಾಗಿರುವುದು ನಾರಾಯಣ ಮೂರ್ತಿ ಹೇಳಿರುವ ಕಾರಣಕ್ಕೆ ವ್ಯಕ್ತವಾಗಿದೆಯೇ ಅಥವಾ ಬೇರೆಯ ಕಾರಣಕ್ಕೇ ಎನ್ನುವ ಚರ್ಚೆ ಅಥವಾ ವಾದ ಇಲ್ಲಿ ಅಗತ್ಯವಿಲ್ಲ. ಆದರೇ, ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಿಸುವುದಕ್ಕೆ ಬೇಕಾಗಿ ಇಲ್ಲಿನ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆ ? ಅಥವಾ ಅದಕ್ಕೆ ಸರ್ಕಾರದಿಂದ ಏನನ್ನು ಮಾಡುವುದಕ್ಕೂ ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಸಹಜವಾಗಿ ಎಂಬಂತೆ ಮೂಡುತ್ತದೆ. ಭಾರತವನ್ನು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಕರೆಯಲಾಗುತ್ತಿದೆ. ಈವರೆಗೆ ದೇಶವನ್ನು ಆಳಿದ ಯಾವುದೇ ಸರ್ಕಾರಕ್ಕೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಭಾರತವನ್ನು ಸೇರಿಸುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ವಿಷಾದನೀಯ. ಈಗ ಮೂರ್ತಿ ಅವರು ಹೇಳಿದಂತೆ ಇಲ್ಲಿನ ಯುವ ಜನಾಂಗ ದುಡಿಮೆಯ ಅವಧಿಯನ್ನು ಹೆಚ್ಚಿಸಿದರೇ ಇದ್ದಕ್ಕಿದ್ಧಂತೆ ದೇಶ ಆರ್ಥಿಕ ಅಭಿವೃದ್ಧಿ ಹೊಂದಿದ ದೇಶ ಎಂದು ಬದಲಾಗುತ್ತದೆಯೇ ?

ಚೀನಾದಂತಹ ದೇಶಗಳೊಂದಿಗೆ ಅಭಿವೃದ್ಧಿ ಹಾಗೂ ಆರ್ಥಿಕತೆಯೊಂದಿಗೆ ಸ್ಪರ್ಧಿಸಲು, ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಮಾಡಿದಂತೆ ದೇಶದ ಯುವಕರು ಹೆಚ್ಚುವರಿ ಗಂಟೆಗಳ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಮೂರ್ತಿ ಹೇಳಿದ್ದರು. ಕೆಲಸ ಮಾತ್ರವಲ್ಲ ವೈಯಕ್ತಿಕ ಜೀವನ ಸಮತೋಲನದ ಪ್ರಾಮುಖ್ಯತೆಯ ಬಗ್ಗೆ ಜನರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆಗಳು ಬಂದವು. ಮೂರ್ತಿಯವರ ಕಲ್ಪನೆಯನ್ನು ಜೆ ಎಸ್‌ ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್ ಮತ್ತು ಓಲಾ ಸಿಇಒ ಭವಿಶ್ ಅಗರ್‌ ವಾಲ್‌ ರಂತಹ ಪ್ರಮುಖ ವ್ಯಕ್ತಿಗಳು ಬೆಂಬಲಿಸಿದರು. ಮಾರಿಕೊ ಗ್ರೂಪ್‌ ನ ಅಧ್ಯಕ್ಷ ಹರ್ಷ್ ಮಾರಿವಾಲಾ, "ಇದು ಗಡಿಯಾರದ ಗಂಟೆಗಳ ಬಗ್ಗೆ ಅಲ್ಲ. ಅದು ಆ ಗಂಟೆಗಳಿಗೆ ಒಬ್ಬರು ತರುವ ಗುಣಮಟ್ಟದ ಕೆಲಸಗಳ ಮೇಲೆ ಇದನ್ನು ಪರಿಗಣಿಸಬೇಕಾಗುತ್ತದೆ ಎಂದರು. 

ಭಾರತವು ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿದೆ ಮತ್ತು ಎಸ್‌ ಅಂಡ್‌ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ ನ ಇತ್ತೀಚಿನ ಒಂದು ಕಮೆಂಟ್‌ ನ ಪ್ರಕಾರ 2030 ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನು ಮೀರಿಸಲಿದೆ ಎಂದು ಹೇಳಿದೆ. ಪ್ರಸ್ತುತ, ಅಂದರೇ 2023-24ರ ಭಾರತವು ತನ್ನ ಆರ್ಥಿಕತೆಯಲ್ಲಿ 3.7 ಟ್ರಿಲಿಯನ್‌ ನೊಂದಿಗೆ ಐದನೇ ಸ್ಥಾನದಲ್ಲಿದೆ. "3.5 ಟ್ರಿಲಿಯನ್‌ ಇದ್ದ 2022 ರ ಜಿಡಿಪಿ ಮೌಲ್ಯ, 2030 ರ ವೇಳೆಗೆ 7.3 ಟ್ರಿಲಿಯನ್‌ಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಆರ್ಥಿಕ ವಿಸ್ತರಣೆಯ ಈ ಕ್ಷಿಪ್ರ ಗತಿಯು 2030ರ ವೇಳೆಗೆ ಜಪಾನಿನ ಜಿಡಿಪಿಯನ್ನು ಭಾರತ  ಮೀರುತ್ತದೆ ಎಂದು ಹೇಳಲಾಗಿದೆ. ಎಸ್‌ ಅಂಡ್‌ ಪಿ ವರದಿ ಹೇಳುವ ಪ್ರಕಾರ, ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಇದು ಭಾರತವನ್ನು ಎರಡನೇ ಅತಿದೊಡ್ಡ ಆರ್ಥಿಕತೆ ಪ್ರಗತಿ ಹೊಂದಿದ ದೇಶವನ್ನಾಗಿ ಮಾಡುತ್ತದೆ ಎಂಬ ಒಂದು ಲೆಕ್ಕಚಾರವಿದೆ. 

ಯುನೈಟೆಡ್‌ ಸ್ಟೇಟ್ ಪ್ರಸ್ತುತ 25.5 ಟ್ರಿಲಿಯನ್ ಜಿಡಿಪಿ ದರದೊಂದಿಗೆ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿದೆ. ಇದು ವಿಶ್ವದ ಜಿಡಿಪಿಯ ಕಾಲು ಭಾಗ. ಚೀನಾವು ಸುಮಾರು 18 ಟ್ರಿಲಿಯನ್ ಜಿಡಿಪಿಯೊಂದಿಗೆ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶ. ಇದು ವಿಶ್ವದ ಜಿಡಿಪಿಯ ಸುಮಾರು 17.9 ಪ್ರತಿಶತವಾಗಿದೆ. 4.2 ಟ್ರಿಲಿಯನ್ ಜಿಡಿಪಿಯೊಂದಿಗೆ ಜಪಾನ್ ಮೂರನೇ ಸ್ಥಾನದಲ್ಲಿದೆ, 4 ಟ್ರಿಲಿಯನ್ ಜಿಡಿಪಿಯೊಂದಿಗೆ ಜರ್ಮನಿ ನಂತರದ ಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2023-24ರ ಆರ್ಥಿಕ ವರ್ಷದಲ್ಲಿ ಭಾರತವು 5.9 ಪ್ರತಿಶತದಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ, ಜಾಗತಿಕ ಆರ್ಥಿಕ ಬೆಳವಣಿಗೆಯು ಶೇಕಡಾ 2.8ರ ವಿರುದ್ಧ ಮತ್ತು ಮುಂದಿನ ಐದು ವರ್ಷಗಳಲ್ಲಿ ಸರಾಸರಿ ಶೇಕಡಾ 6.1 ರ ದರವನ್ನು ನಿರೀಕ್ಷಿಸಲಾಗಿದೆ.

ಈ ಮೇಲೆ ಹೇಳಿರುವುದು ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಒಂದು ಹಂತದ ತಾಂತ್ರಿಕ ಸಂಕೀರ್ಣ ಅಂಶ ಎಂದಿಟ್ಟುಕೊಳ್ಳೋಣ ಬಿಡಿ. ಅದನ್ನು ಹೊರತಾಗಿ ಚಿಂತಿಸುವುದಾದರೇ, ಇಲ್ಲಿ ಒಂದು ಪ್ರಶ್ನೆ ಇದೆ, ಮೂರ್ತಿಯವರ "ವಾರಕ್ಕೆ 70-ಗಂಟೆಗಳ ಕೆಲಸ"ದ ಬಗ್ಗೆ ಪ್ರಸ್ತಾಪ ಮಾಡದೇ ಇದ್ದಿದ್ದರೇ, ನಾವು ಉತ್ಪಾದಕತೆಯ ಬಗ್ಗೆ ಅವರು ಎತ್ತಿದ ಸಮಸ್ಯೆಯನ್ನು ಚರ್ಚಿಸುತ್ತಿದ್ದೇವಾ ?

ಆ ಹೇಳಿಕೆಕೊಟ್ಟ ಸಂದರ್ಶನದಲ್ಲಿ, ಮೂರ್ತಿ ಅವರು ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಸ್ವಯಂಪ್ರೇರಣೆಯಿಂದ ಆ ನಿಟ್ಟಿನಲ್ಲಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ದೇಶದ ಯುವಕರನ್ನು ಕೇಳಿಕೊಂಡಿದ್ದರು. ಅದನ್ನು ಜಾರಿಗೊಳಿಸಬೇಕು ಎಂದು ಅವರು ಎಲ್ಲಿಯೂ ಹೇಳಿಲ್ಲ, ಅದು ಯಶಸ್ಸಿಗೆ ಬೇಕಾಗಿ ಸಲಹೆಯಷ್ಟೇ ಆಗಿತ್ತು. ಆದರೇ, ಅದು ಇಲ್ಲಿ ತಪ್ಪಾಗಿ ಅರ್ಥ ಪಡೆಯಿತು. ಅದಕ್ಕೂ ಕಾರಣವಿದೆ. ಮೂರ್ತಿ ಅವರ ಹೇಳಿಕೆಯನ್ನು ಹಲವು ಉದ್ಯಮಪತಿಗಳು ಬೆಂಬಲಿಸಿದ್ದರು. ಇನ್ನೂ ಬೆಂಬಲಿಸುತ್ತಿದ್ದಾರೆ ಕೂಡ.  ಆದರೇ, ಇದು ದುಡಿಯುವ ವರ್ಗಕ್ಕೆ ಆತಂಕ ಹುಟ್ಟಿಸಿದೆ.

ಕೇಂದ್ರ ಸರ್ಕಾರ 2022ರಲ್ಲಿ ಜಾರಿಗೆ ತಂದ ಕಾರ್ಮಿಕ ಸಂಹಿತೆಯ ಪ್ರಕಾರ ವಾರವೊಂದರಲ್ಲಿ ಒಬ್ಬ ಉದ್ಯೋಗಿ ದುಡಿಯುವ ಅವಧಿ 48 ಗಂಟೆಗಳನ್ನು ಮೀರಬಾರದು ಎಂದು ಹೇಳಿದೆ. ದಿನವೊಂದಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುವುದಾದರೇ ವಾರಕ್ಕೆ ನಾಲ್ಕು ದಿನ, ದಿನವೊಂದಕ್ಕೆ 9.6 ಗಂಟೆಯಷ್ಟು ಕೆಲಸ ಮಾಡುವುದಾದರೇ ವಾರಕ್ಕೆ ಐದು ದಿನ ಕೆಲಸ, ದಿನಕ್ಕೆ ಎಂಟು ಗಂಟೆ ಕೆಲಸ ಮಾಡುವುದಾದರೇ, ವಾರಕ್ಕೆ ಆರು ದಿನ ಕೆಲಸ ಮಾಡಬಹುದು ಎಂದು ಕಾರ್ಮಿಕ ಸಂಹಿತೆ ಹೇಳುತ್ತದೆ. ಓವರ್‌ ಟೈಮ್‌ ಪಾವತಿ ಇಲ್ಲದ ಅವಧಿ ಮೀರಿದ ದುಡಿಮೆ ಶಿಕ್ಷಾರ್ಹ ಅಪರಾಧ. ಅಂದರೆ ಕಾರ್ಮಿಕ ಸಂಹಿತೆಯ ಪ್ರಕಾರ ಓವರ್‌ ಟೈಮ್‌ ಪಾವತಿ ಇಲ್ಲದ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚಿನ ಸಮಯದ ದುಡಿಮೆ ದಂಡಾರ್ಹ. ವಾರಕ್ಕೆ 70 ಗಂಟೆ ದುಡಿಯಬೇಕೆಂದರೇ ದಿನವೊಂದಕ್ಕೆ 14 ಗಂಟೆಗಳಂತೆ ದುಡಿಯಬೇಕು(ವಾರಕ್ಕೆ 5 ದಿನಗಳಂತೆ) . ಕಾರ್ಮಿಕ ಸಂಹಿತೆಯ ಪ್ರಕಾರ ಓವರ್‌ ಟೈಮ್‌ ಪಾವತಿ ಇದ್ದರೂ ದಿನವೊಂದಕ್ಕೆ ಗರಿಷ್ಠ 12 ಗಂಟೆಗಳ ಕೆಲಸ ಮಾಡಿಸಿಕೊಳ್ಳಬಹುದು. ಅದಕ್ಕಿಂತ ಮೀರಬಾರದು ಎಂಬುವುದಿದೆ. ಹಾಗಾದರೇ, ಮೂರ್ತಿಯವರದ್ದು ಯಾವ ಲೆಕ್ಕಚಾರ ?

ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಇಂದಿಗೂ ಲಕ್ಷಾಂತರ ಮಂದಿ ಅವಧಿಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರು, ಸಣ್ಣ ಸಣ್ಣ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಪೊಲೀಸರು, ವೈದ್ಯರು, ರಾಜಕಾರಣಿಗಳು, ಪತ್ರಕರ್ತರು ಸಹ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ.  ದೇಶ ಪ್ರಗತಿ ಹೊಂದುವುದಕ್ಕೆ ಬೇಕಾಗಿ ಯುವಕರು ವಾರದಲ್ಲಿ  70 ಗಂಟೆಗಳ ಕಾಲ ದುಡಿಯಬೇಕು ಎಂಬ ಸಲಹೆಯನ್ನು ದೇಶದ ಹಲವು ಉದ್ಯಮಿಗಳು ಬೆಂಬಲಿಸಿದ್ದಾರೆ. ಆದರೇ, ದುಡಿಯುವ ವರ್ಗವು ಇದು ದುಡಿಯು ವರ್ಗದ ಮೇಲೆ ಉದ್ಯಮಪತಿಗಳ ಶೋಷಣೆ ಎಂದು ಹೇಳುತ್ತಿದೆ. ವರ್ಕರ್ಸ್‌ ವೆಲ್‌ಫೇರ್‌ ಆಕ್ಟ್‌ ಪ್ರಕಾರ ಒಂದು ವಾರದಲ್ಲಿ 70 ಗಂಟೆಗಳ ಕಾಲ ದುಡಿಯುವುದು ಕಾನೂನುಬಾಹೀರ ಎಂದು ಪರಿಗಣಿಸಲಾಗುತ್ತದೆ. ಆದರೇ, ಇಂದಿಗೂ ಸಂಘಟಿತ ಹಾಗೂ ಅಸಂಘಟಿತ ವಲಯ ಅವಧಿಗೂ ಮೀರಿ ಕಾರ್ಯನಿರ್ವಹಿಸುತ್ತಿದೆ. ವಾರದಲ್ಲಿ 70 ಗಂಟೆ ದುಡಿದರೇ ಒಬ್ಬ ಉದ್ಯೋಗಿಯ ಮಾನಸಿಕ ಆರೋಗ್ಯದ ಸ್ಥಿತಿ ಹೇಗಾಗಬಹುದು ? ಆತನ ಕೌಟುಂಬಿಕ ಜೀವನ ಏನಾಗಬಹುದು?

ನಾರಾಯಣ ಮೂರ್ತಿ ಅವರ ವೈಯಕ್ತಿಕ ಅಭಿಪ್ರಾಯ ಹೇಳಿಕೊಂಡಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೇ, ಇಲ್ಲಿ ಆರೋಗ್ಯ ಮುಖ್ಯ, ಕುಟುಂಬ ಮುಖ್ಯ, ವೃತ್ತಿ ಮುಖ್ಯ ಮತ್ತು ಮನಸ್ಸಿನ ಶಾಂತಿಯೂ ಮುಖ್ಯ. ಯಾವ ಆದ್ಯತೆಯ ಅನುಕ್ರಮಣಿಕೆಯಲ್ಲಿ ಯಾವುದು ಪ್ರಮುಖ ಎಂಬುದನ್ನು ಜನರು ತಿಳಿದುಕೊಳ್ಳಬೇಕಾಗಿರುವುದು ಇಲ್ಲಿನ ಈ ಕ್ಷಣದ ತುರ್ತು. ಹಣದ ಅನಿವಾರ್ಯಕ್ಕೆ ದುಡಿಯುವವರು ಅದೆಷ್ಟೋ ಮಂದಿ ಇದ್ದಾರೆ, ಆದರೇ ಅದು ಅವರ ವೈಯಕ್ತಿಕ ಬದುಕಿಗೆ, ಆರೋಗ್ಯಕ್ಕೆ, ಕೌಟುಂಬಿಕ ಜೀವನಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಸತ್ಯ. ಎಷ್ಟೋ ಕಂಪೆನಿಗಳಲ್ಲಿ ದುಡಿಯುವ ಅವಧಿಗೆ ಸಮನಾದ ಪ್ರಮಾಣಾನುಗುಣವಾದ ವೇತನವೇ ಇಲ್ಲ.  40 ಗಂಟೆಗಳ ಸಂಬಳದಲ್ಲಿ 70 ಗಂಟೆಗಳ ಕೆಲಸವನ್ನು ಕೇಳುವುದು ಎಷ್ಟು ಸಮಂಜಸ ? ಅದು ಯಾವುದೇ ಕಾರಣಕ್ಕೂ ನ್ಯಾಯೋಚಿತವಲ್ಲ. 

ಇವತ್ತಿನ ಶ್ರಮ ನಾಳೆಯ ಪ್ರಗತಿಗೆ ಸಹಾಯ ಮಾಡುತ್ತದೆ ಎನ್ನುವುದೆಲ್ಲಾ ಹಳೆಯ ಮಾತು. ಹಾಗಲ್ಲದಿದ್ದರೂ, ಉದ್ಯಮ ಕ್ಷೇತ್ರದಲ್ಲಿ ಅದು ಸತ್ಯಕ್ಕೆ ಹತ್ತಿರದ ಮಾತಲ್ಲ. ಉದ್ಯಮ ಕ್ಷೇತ್ರ ಮತ್ತು ಆರ್ಥಿಕ ಅಭಿವೃದ್ಧಿ ಬಯಸುವುದು ಕೌಶಲ್ಯಗಳನ್ನಷ್ಟೆ ಹೊರತು ಶ್ರಮವನ್ನಲ್ಲ. ಪ್ರಗತಿಗೆ ಕೌಶಲ್ಯಗಳು ಪ್ರಮುಖವಾಗುತ್ತದೆ. ವಾರಕ್ಕೆ ಯುವಕರು 70 ಗಂಟೆ ದುಡಿದರಷ್ಟೇ ದೇಶ ಪ್ರಗತಿ ಹೊಂದಲು ಸಾಧ್ಯ ಎಂಬ ಅರ್ಥದಲ್ಲಿ ನಾರಾಯಣ ಮೂರ್ತಿಯವರು ಹೇಳಿದ್ದಾದರೇ, ಅದರಲ್ಲಿ ಅರ್ಥವೇ ಇಲ್ಲ. ದೇಶದ ಪ್ರಗತಿ 70 ಗಂಟೆಗಳ ಕೆಲಸದಲ್ಲಿಲ್ಲ. ಯುವಕರ ಕೌಶಲ್ಯಗಳಲ್ಲಿದೆ. ಉದ್ಯಮ ಕ್ಷೇತ್ರ ಯುವಕರ ಕೌಶಲಗಳನ್ನು ಎಷ್ಟರ ಮಟ್ಟಿಗೆ ಸರಿಯಾಗಿ ಬಳಸಿಕೊಂಡಿದೆ ಎನ್ನುವ ಪ್ರಶ್ನೆವೊಂದು ಕೂಡ ಇಲ್ಲಿ ಮುನ್ನೆಲೆಗೆ ಬರುತ್ತದೆ. ದುಡಿಮೆ ಗಂಟೆಗಳ ಲೆಕ್ಕದಲ್ಲಿ ಆಗಬಾರದು. ಕೌಶಲ್ಯಗಳಿಂದ ಕೂಡಿರಬೇಕು. ಆಗ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಕೆಲಸ ಏಕಮುಖವೂ ಅಲ್ಲ. ಅವಧಿಯೂ ಮುಖ್ಯವಾದರೇ, ಅವಧಿಗೆ ಸರಿಯಾದ ಸಂಬಳವೂ ಮುಖ್ಯ.

-ಶ್ರೀರಾಜ್‌ ವಕ್ವಾಡಿ

No comments:

Post a Comment